ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬೆಳದಿಂಗಳ ಬಳುಕು

ಅಭಿಜ್ಞಾ ಪಿ ಎಮ್ ಗೌಡ

ಬಾಂದಳದ ತುಂಬೆಲ್ಲ ಹಬ್ಬಿದೆ
ಶಶಿಯ ಪ್ರದೀಪದ ಕೀರ್ತಿ
ರಂಜಿಸುತ ನಗಿಸುತಿರುವ
ರಜನಿಗೆ ಬೆಳದಿಂಗಳೆ ಸ್ಫೂರ್ತಿ!

ಜೊನ್ನನಂಗಳ ನೋಡು
ಬಳುಕುತಿದೆ ವೈಯ್ಯಾರದ ನೀರೆಯಂತೆ
ದೀವಟಿಕೆಯ ರಾಶಿಯಲಿ
ಜೀಕುತಿಹ ಜೇನ್ಮಳೆಯು ಸೂಸಿದಂತೆ…

ಆವಾರ ತುಂಬೆಲ್ಲ ಕೌಮುದಿಯ
ಸವಿ ತೋಮ್ ತನನನಾನ
ನೋಡಿಲ್ಲಿ! ಒಸರುತಿದೆ ಕೊಸರುತಿದೆ
ಅಂತರಂಗದ ನೋವಯಾನ…

ಅವನಿಯ ಮುತ್ತಿಗೆಯಲಿ
ಮತ್ತೇರಿದೆ ಕತ್ತಲ ಮೇನೆ
ಅವನಿಲ್ಲದ ಕಸಿವಿಸಿಯ ಸಂತೆಯಲಿ
ಸುತ್ತರಿದು ನಿಂತಿದೆ ಭಾವಬೇನೆ..

ಮನವೆಂಬ ಕೇತನದಿ
ಆವರಿಸಿದ ಅಜ್ಞಾನದ ಕೊಳೆಯನು
ತೊಳೆಯಲು ಬೆಳಗಿಸಬೇಕಿದೆ ಸುಜ್ಞಾನ
ಜ್ಯೋತಿಯೆಂಬ ಸ್ವರ್ದೀಪವನು….

ಹೃದಯದ ಗಲ್ಲಿಗಲ್ಲಿಯಲು
ಮಂದಬೆಳಕಿನ ಹೊಳಪು ಕುಂದುತಿದೆ
ಇಗೋ.!ಅವನಿರದೆ ಈ ಬಾಳು
ಜಡತುಂಬಿದ ಕೃದರವಾಗುತಿದೆ…

ಮೇಣದ ಬತ್ತಿಯಂತಾಗಿ ಈ ಬದುಕು
ತನ್ನೆಲ್ಲ ನೋವ ಬಚ್ಚಿಟ್ಟು
ಮೆರೆಯುತಿದೆ ಮೆರೆಸುತಿದೆ
ಬಂಜರಾದ ಒಡಲೆಲ್ಲಾ ಸುಟ್ಟು…


About The Author

Leave a Reply

You cannot copy content of this page

Scroll to Top