ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಗಜಲ್

ಮೊಗ್ಗು ಬಿರಿಯದೆ ಧ್ಯಾನಿಸುತಿದೆ ದುಂಬಿಯ ಬರುವಿಗಾಗಿ
ಕನಸು ಮೂಡದೇ ಕನವರಿಸುತಿದೆ ಶಶಿಯ ಬರುವಿಗಾಗಿ

ಹುಚ್ಚು ಮನ ಬಯಸಿದೆ ಅವನ ಪ್ರೀತಿಯ ಮದಿರೆ ಹೀರಲು
ಮಧು ಕುಡಿಯದೆ ತನು ತೂರಾಡಿದೆ ಸಾಕಿಯ ಬರುವಿಗಾಗಿ

ಸಂಗಾತಿಗಾಗಿ ಹಂಬಲಿಸುತ್ತಿದೆ ಏಕಾಂಗಿ ಉಸುರು
ಹೃದಯ ವಿರಹದಲಿ ಮೌನವಾಗಿದೆ ಇನಿಯ ಬರುವಿಗಾಗಿ

ಅಲೆಯುವ ಜಂಗಮ ಯೋಗಿ ಕಾಣಲು ಕಾತರಿಸಿದೆ ನಯನ
ಎದೆಯ ಗುಡಿ ಬಾಗಿಲು ತೆರೆಯುತಿದೆ ಜೋಗಿಯ ಬರುವಿಗಾಗಿ

ಒಡಲ ಒಲವ ಸಿಂಪಿ ಬಾಯಿ ಬಿಚ್ಚಿದೆ ಮುತ್ತಿನ ಹನಿಗಾಗಿ
ಚುಂಬನಕೆ ಕಡಲ ದಡ ಕಾಯುತಿದೆ ಅಲೆಯ ಬರುವಿಗಾಗಿ

ಅವನ ಮುನಿಸಿಗೆ ಅನುರಾಗದ ಬೆಳೆ ನೆಲಕಚ್ಚಿದೆ ಬಾಡಿ
ಬಿರಿದ ಎದೆ ಹೊಲವು ಪರಿತಪಿಸುತಿದೆ ಮಳೆಯ ಬರುವಿಗಾಗಿ

ಇರುಳಲಿ ಮಿಂಚುಹುಳು ಮೆರೆಯುತಿದೆ ತನ್ನದೇ ಬೆಳಕೆಂದು
ಪ್ರಕೃತಿ ತಾಮಸ ಕಳಚುತಿದೆ ರವಿ “ಪ್ರಭೆ”ಯ ಬರುವಿಗಾಗಿ


ಪ್ರಭಾವತಿ ಎಸ್ ದೇಸಾಯಿ

About The Author

Leave a Reply

You cannot copy content of this page

Scroll to Top