ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಬೆಳಗುವ ಬಾಳಿಗೆ ಕರಗುವ ಮನಸ್ಸು ಪ್ರತಿದಿನದ ಓಟದಲ್ಲಿ ನಮ್ಮಲ್ಲಿ ಬಹುತೇಕರು ಇತರರ ಭಾವನೆಗಳನ್ನು ಕಷ್ಟಗಳನ್ನು ತಿಳಿಯುವ ಗೋಜಿಗೆ ಹೋಗುವುದೇ ಇಲ್ಲ. ಏಕೆಂದರೆ ಎಲ್ಲರಿಗೂ ತಮ್ಮತಮ್ಮ ಹಿತಾಸಕ್ತಿ ಮಾತ್ರ ಮುಖ್ಯ. ದಾವಂತದ ಈ ದಿನಗಳಲ್ಲಿ ಎಲ್ಲದಕ್ಕೂ ಅವಸರ ಬೇರೆ. ಹೀಗಾಗಿ ಬೇರೆಯವರಿಗೆ ಮಿಡಿಯುವುದನ್ನು ಮರೆಯುತ್ತಿದ್ದೇವೆ. ಈಗಿನ ಸಮಯದಲ್ಲಿ ಸಂಬoಧಗಳು ಹಳಸಿ ಹೋಗುವುದಕ್ಕೆ ಪ್ರಮುಖ ಕಾರಣಗಳಲ್ಲಿ ಒಂದು: ನಮ್ಮಲ್ಲಿ ದಯೆ ಅಥವಾ ಕರುಣೆಯ ಕೊರತೆ ಎದ್ದು ಕಾಣುತ್ತಿರುವುದು. ಇದರೊಂದಿಗೆ ಇನ್ನೊಂದು ವಿಷಯವೆಂದರೆ ನಾವು ಬಾಹ್ಯ ಸೌಂದರ್ಯಕ್ಕೆ ಜೋತು ಬಿದ್ದಿದ್ದೇವೆ. ಬ್ರಾಂಡೆಡ್ ಉಡುಪುಗಳು ಉನ್ನತ ಪದವಿಗಳು ನಮ್ಮನ್ನು ಗುರುತಿಸುವಂತೆ ಮಾಡಬಹುದು ಆದರೆ ನಮ್ಮನ್ನು ಜನರ ಹೃದಯದಲ್ಲಿ ಶಾಶ್ವತವಾಗಿ ಉಳಿಸುವುದು ನಮ್ಮಲ್ಲಿರುವ ದಯಾಗುಣ ಒಂದೇ. ಬೆಳಗುವ ಬಾಳಿಗೆ ದಯೆಯನ್ನು ಬೆಳೆಸಿಕೊಳ್ಳುವುದು ಇಂದಿನ ತುರ್ತಾಗಿದೆ. ದಯೆ ಎಂದರೇನು? ದಯೆ ಎನ್ನುವುದು ಕೇವಲ ಯಾರಿಗಾದರೂ ಹಣ ಇಲ್ಲವೇ ವಸ್ತುಗಳನ್ನು ದಾನ ಮಾಡುವುದು ಎಂದು ಸಾಮಾನ್ಯವಾಗಿ ವ್ಯಾಖ್ಯಾನಿಸಲಾಗುತ್ತದೆ. ಆದರೆ, ನಿಜವಾದ ದಯೆಯು ಮುಂದಿನವರ ಕಷ್ಟವನ್ನು ತನ್ನದೇ ಕಷ್ಟ ಎಂದು ಭಾವಿಸುವುದಾಗಿದೆ. ನಮ್ಮ ಸಹಜೀವಿಗಳಿಗೆ ಅಂದರೆ ಪ್ರಾಣಿ ಪಕ್ಷಿಗಳಿಗೆ ಪ್ರೀತಿ ತೋರುವುದು. ಬೇರೆಯವರ ನೋವಿಗೆ ಸ್ಪಂದಿಸುವುದು ಮತ್ತು ಮುಂದಿನವರು ಹೇಳುವ ಮುನ್ನವೇ ಸ್ವಯಂಪ್ರೇರಿತವಾಗಿ ಒಳ್ಳೆಯದನ್ನು ಮಾಡುವುದೇ ದಯೆ ಆಗಿದೆ. ‘ದಯೆಯ ಯಾವುದೇ ಕೆಲಸವು ಎಷ್ಟೇ ಚಿಕ್ಕದಾಗಿದ್ದರೂ, ಅದು ಎಂದಿಗೂ ವ್ಯರ್ಥವಾಗುವುದಿಲ್ಲ.’ ಅಷ್ಟಕ್ಕೂ ದಯಾಗುಣದಲ್ಲಿ ನಿಸ್ವಾರ್ಥ ಭಾವ ಇರುತ್ತದೆ. ಅಂದರೆ ಇಲ್ಲಿ ಪ್ರತಿಯಾಗಿ ಏನನ್ನೂ ಅಪೇಕ್ಷಿಸದೇ ಒಳ್ಳೆಯದನ್ನು ಮಾಡುವುದು ಒಳಗೊಂಡಿದೆ. ಮನಷ್ಯನನ್ನು ಮನುಷ್ಯನನ್ನಾಗಿಸುವ ದಿವ್ಯ ಶಕ್ತಿಯೂ ಇದಕ್ಕಿದೆ. ಅಷ್ಟೇ ಅಲ್ಲ ಅದು ಸಮಾಜವನ್ನು ಒಂದುಗೂಡಿಸುವ ಅತ್ಯದ್ಭುತ ಶಕ್ತಿಯೂ ಆಗಿದೆ.ನಮ್ಮ ಕಷ್ಟ ಕಾಲದಲ್ಲಿ ದಯಾಳುಗಳು ಸ್ಪಂದಿಸಿದಾಗ ನಮಗೂ ಅವರ ಹಾಗೆ ಬೇರೆಯವರ ನೋವಿಗೆ ಮಿಡಿಯಬೇಕೆಂದು ಅನ್ನಿಸದೇ ಇರದು. ಆದರೆ ದಯೆಯನ್ನು ಹೇಗೆ ಬೆಳೆಸಿಕೊಳ್ಳುವುದೆಂದು ತಿಳಿಯುವುದೇ ಇಲ್ಲ. ನಿತ್ಯ ಬದುಕಿನಲ್ಲಿ ಕೆಲ ಬದಲಾವಣೆಗಳನ್ನು ತಂದುಕೊಳ್ಳುವ ಮೂಲಕ ನೀವೂ ದಯಾಳುಗಳಾಗಬಹುದು. ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬಹುದು. ಅದಕ್ಕೆ ಇಲ್ಲಿವೆ ಕೆಲವು ಸರಳ ತಂತ್ರಗಳು. ಸಹಾನುಭೂತಿ ನಮಗೆ ಗೊತ್ತಿಲ್ಲದಂತೆ ಬೇರೆಯವರನ್ನು ಟೀಕಿಸದಿದ್ದರೆ ನಿಂದಿಸದಿದ್ದರೆ ಉಂಡ ಅನ್ನ ಕರಗುವುದೇ ಇಲ್ಲವೆಂಬ ಕೆಟ್ಟ ಸ್ವಭಾವವನ್ನು ಅಂಟಿಸಿಕೊoಡಿರುತ್ತೇವೆ. ಇದು ಸಾಲದೆಂಬoತೆ ಕೋಪದಿಂದ ಪರಿಸ್ಥಿತಿಯನ್ನು ನಮಗೆ ಪೂರಕವಾಗುವಂತೆ ಮಾಡಿಕೊಳ್ಳಲು ನೋಡುವುದು. ಹಾಗೆ ಟೀಕಿಸುವ ಸ್ವಭಾವ ಬೇರೆಯವರಿಗೆ ಅದೆಷ್ಟು ನೋವನ್ನು ಉಂಟು ಮಾಡುತ್ತದೆಂಬುದು ನಮಗೆ ಗೊತ್ತಾಗುವುದೇ ಇಲ್ಲ. ದಯಾಳುಗಳಾಗಬೇಕೆಂದರೆ, ಯಾರನ್ನಾದರೂ ಟೀಕಿಸುವ ಮುನ್ನ ಅವರ ಪರಿಸ್ಥಿತಿಯಲ್ಲಿ ನಾನು ಇದ್ದಿದ್ದರೆ ಎಂದು ಯೋಚಿಸಬೇಕು. ಬೇರೆಯವರ ಪರಿಸ್ಥಿತಿಯನ್ನು ಅವರ ಸ್ಥಾನದಲ್ಲಿ ನಿಂತು ನೋಡುವುದೇ ಸಹಾನುಭೂತಿ. ಈ ರೀತಿಯ ಸಹಾನುಭೂತಿ ದಯೆಯನ್ನು ಹೆಚ್ಚಿಸುತ್ತದೆ. ದ್ವೇಷದ ಬದಲು ಪ್ರೀತಿಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಇದು ಕಲಿಸುತ್ತದೆ. ದಲೈ ಲಾಮಾ ಉಲ್ಲೇಖದಂತೆ ‘ಸಾಧ್ಯವಾದಾಗಲೆಲ್ಲ ದಯೆ ಉಳ್ಳವರಾಗಿರಿ ಮತ್ತು ದಯೆ ತೋರಿಸುವುದು ಯಾವಾಗಲು ಸಾಧ್ಯವಿರುತ್ತದೆ.’ ಆಲಿಸಿ ಇತ್ತೀಚಿಗೆ ನಾವೆಲ್ಲ ಬೇರೆಯವರ ಮಾತುಗಳನ್ನು ಸರಿಯಾಗಿ ಕೇಳಿಸಿಕೊಳ್ಳುವುದನ್ನು ಬಿಟ್ಟು ಬಿಟ್ಟಿದ್ದೇವೆ. ಎದುರಿಗಿನವರು ಏನೋ ಹೇಳುತ್ತಿದ್ದರೆ ನಾವು ಮೊಬೈಲ್‌ನಲ್ಲಿ ಬ್ಯುಸಿ ಇರುತ್ತೇವೆ. ಇಲ್ಲವೇ ಏನೂ ಸಂಬoಧವಿಲ್ಲದoತೆ ಕುಳಿತು ಬಿಡುತ್ತೇವೆ. ಉತ್ತಮ ಸಂವಹನವೆoದರೆ ಕೇವಲ ಮಾತನಾಡುವುದಲ್ಲ, ಎದುರಿಗಿನವರ ಮಾತನ್ನು ತಾಳ್ಮೆಯಿಂದ ಕೇಳುವುದು. ಬೇರೆಯವರು ತಮ್ಮ ನೋವನ್ನು ಹೇಳಿಕೊಳ್ಳುತ್ತಿರುವಾಗ ಅವರ ಮಾತನ್ನು ಮಧ್ಯದಲ್ಲೇ ಕತ್ತರಿಸದೇ ಪೂರ್ಣವಾಗಿ ಕೇಳಿಸಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ನಾನು ಹೇಳಿದ್ದನ್ನು ಎಲ್ಲರೂ ಕೇಳಿಸಿಕೊಳ್ಳಬೇಕು. ಆದರೆ ಬೇರೆಯವರು ಹೇಳಿದ್ದನ್ನು ಕೇಳಿಸಿಕೊಳ್ಳುವ ವ್ಯವಧಾನವಿಲ್ಲ ಎಂದರೆ ಸ್ವಾರ್ಥವಾಗಿ ಬಿಡುತ್ತದೆ. ಆದ್ದರಿಂದ ಇತರರನ್ನು ಸಾವಧಾನದಿಂದ ಆಲಿಸುವುದನ್ನು ಬೆಳೆಸಿಕೊಳ್ಳಬೇಕು.ಸಕಾರಾತ್ಮಕತೆಸಾಮಾಜಿಕ ಜಾಲತಾಣದಲ್ಲಿ ಯಾರನ್ನೋ ಟ್ರೋಲ್ ಮಾಡುವುದು ಕೀಳುಮಟ್ಟದ ಕಾಮೆಂಟ್ ಮಾಡುವುದು ಹೆಚ್ಚಾಗಿದೆ. ಇದರ ಬದಲು ಸಕಾರಾತ್ಮಕ ಕಾಮೆಂಟ್‌ಗಳನ್ನು ಹಾಕುವ ಮೂಲಕ ಡಿಜಿಟಲ್ ಲೋಕದಲ್ಲಿ ದಯಾಗುಣವನ್ನು ಮೆರೆಯಬಹುದು. ಮಾಯಾ ಎಂಜಿಲೋ ಅವರ ಉಲ್ಲೇಖವು ಇಲ್ಲಿ ಸೂಕ್ತವೆನಿಸುತ್ತದೆ. ‘ಜನರು ನೀವು ಹೇಳಿದ್ದನ್ನು ಮರೆಯಬಹುದು, ನೀವು ಮಾಡಿದ್ದನ್ನು ಮರೆಯಬಹುದು, ಆದರೆ ನೀವು ಅವರಿಗೆ ಹೇಗೆ ಅನಿಸುವಂತೆ ಮಾಡಿದ್ದೀರಿ ಎಂಬುದನ್ನು ಅವರು ಎಂದಿಗೂ ಮರೆಯುವುದಿಲ್ಲ. ಎಂದು ನಾನು ಕಲಿತಿದ್ದೇನೆ.’ ಪ್ರಕೃತಿ ಪ್ರಕೃತಿ ಸುಂದರ ಬದುಕಿಗೆ ಬೇಕಾಗಿದ್ದನ್ನೆಲ್ಲ ನಮಗೆ ನೀಡಿದೆ. ಹೀಗಾಗಿ ನಾವೂ ಸಹ ಪ್ರಕೃತಿಯ ಮೇಲೆ ಕರುಣೆ ತೋರಬೇಕು. ಅನಗತ್ಯವನ್ನು ಗಿಡ-ಮರಗಳನ್ನು ಕತ್ತರಿಸದಿರುವುದು. ಹಸಿದ ಮೂಕ ಪ್ರಾಣಿಗಳಿಗೆ ಆಹಾರ ನೀಡುವುದು. ಹಸಿದವರಿಗೆ ಅನ್ನ ನೀಡುವುದು, ಕಷ್ಟದಲ್ಲಿರುವವರಿಗೆ ಧೈರ್ಯ ತುಂಬುವುದು. ಹಿರಿಯರನ್ನು ಗೌರವಿಸುವುದು. ಬೇಸಿಗೆಯಲ್ಲಿ ಪಕ್ಷಿಗಳಿಗೆ ನೀರಿಡುವುದನ್ನು ಮರೆಯಬಾರದು. ಕ್ಷಮಾ ಗುಣ ಮಾರ್ಕ್ ಟ್ವೆನ್ ಹೇಳಿದ ಉಲ್ಲೇಖವು ಅತ್ಯದ್ಭುತವಾಗಿದೆ.’ ದಯೆ ಎನ್ನುವುದು ಕಿವುಡರು ಕೇಳಬಲ್ಲ, ಕುರುಡರು ನೋಡಬಲ್ಲ ಒಂದು ಅದ್ಭುತ ಭಾಷೆ.’ ಬೇರೆಯವರು ಮಾಡಿದ ತಪ್ಪುಗಳನ್ನು ಮನಸ್ಸಿನಲ್ಲಿಟ್ಟುಕೊಂಡು ದ್ವೇಷ ಸಾಧಿಸುವುದಾಗಲಿ, ಇಲ್ಲವೇ ಕೊರಗುವುದರಿಂದ ಏನೂ ಪ್ರಯೋಜನವಿಲ್ಲ. ಸಾದ್ಯವಾದಷ್ಟು ಬೇಗನೆ ಮರೆತು ಕ್ಷಮಿಸಬೇಕು. ಬೇರೆಯವರ ತಪ್ಪುಗಳನ್ನು ಸಾರ್ವಜನಿಕವಾಗಿ ನಿಂದಿಸದೆ ಖಾಸಗಿಯಾಗಿ ಮೃದುವಾಗಿ ತಿದ್ದಿ ಹೇಳಬೇಕು. ಅಂತೆಯೆ ನಿಮ್ಮ ಮೇಲೆ ನಿಮಗೆ ಪ್ರೀತಿ ದಯೆ ಇರುವುದು ಮುಖ್ಯವಾಗುತ್ತದೆ. ಎಂದೋ ಮಾಡಿದ ತಪ್ಪಿಗೆ ಇವತ್ತಿಗೂ ಕೂಡ ನಮ್ಮನ್ನು ನಾವು ದೂಷಿಸಿಕೊಳ್ಳುವುದು ಸರಿಯಲ್ಲ. ಭೂತಕಾಲದ ತಪ್ಪುಗಳಿಗಾಗಿ ದೂಷಿಸಿಕೊಳ್ಳುತ್ತಿದ್ದರೆ ಮನಸ್ಸು ಕಲುಷಿತಗೊಳ್ಳುತ್ತದೆ. ಆದ್ದರಿಂದ ಕ್ಷಮಾ ಗುಣವನ್ನು ಅಳವಡಿಸಿಕೊಳ್ಳಬೇಕು. ಅದು ಶಾಂತಿಯನ್ನು ನೀಡುತ್ತದೆ.ಭಾವನಾತ್ಮಕತೆಎದುರಿಗಿದ್ದವರು ತಪ್ಪು ಮಾಡಿದಾಗ ಅವರನ್ನು ಬೈಯುವ ಬದಲು ಅವರಿಗೆ ಸಮಾಧಾನದಿಂದ ಮಾತನಾಡಿಸಿ ಏನಾದರೂ ತೊಂದರೆ ಇರಬಹುದೇ ಎಂದು ಯೋಚಿಸಬೇಕು. ಅವರ ಭಾವನೆಗಳನ್ನು ಅರ್ಥೈಸಿಕೊಳ್ಳಲು ಮುಂದಾಗಬೇಕು. ನಿಮ್ಮ ಮಾತು ನಿಮ್ಮ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತದೆ. ಆದ್ದರಿಂದ ಮಾತು ಮೃದುವಾದಷ್ಟು ಒಳಿತು.  ‘ನುಡಿದರೆ ಮುತ್ತಿನ ಹಾರದಂತಿರಬೇಕು. ಎಂಬ ನುಡಿಯಂತೆ ನಮ್ಮ ಮಾತುಗಳು ಇತರರನ್ನು ಪ್ರೋತಾಹಿಸುವಂತಿರಬೇಕು. ಮಾತು ಮುಂದಿನವರಿಗೆ ಚೂರಿ ಇರಿಯುವಂತಿದ್ದರೆ ಅವರು ಎಂದೂ ನಿಮ್ಮನ್ನು ಕ್ಷಮಿಸುವುದಿಲ್ಲ. ನಿಮ್ಮ ಮಾತು ಮುಂದಿನವರಿಗೆ ನೋವುಂಟು ಮಾಡದಿದ್ದರೆ ನಿಮ್ಮ ವ್ಯಕ್ತಿತ್ವವನ್ನು ಎಲ್ಲರೂ ಗೌರವಿಸುತ್ತಾರೆ.  ಗೌತಮಬುದ್ಧ ಹೇಳಿದಂತೆ ‘ಕೋಪವನ್ನು ಪ್ರೀತಿಯಿಂದ ಗೆಲ್ಲಿ, ಕೆಡುಕನ್ನು ಒಳಿತಿನಿಂದ ಗೆಲ್ಲಿ, ಜಿಪುಣತನವನ್ನು ದಾನದಿಂದ ಗೆಲ್ಲಿ, ಸುಳ್ಳನ್ನು ಸತ್ಯದಿಂದ ಗೆಲ್ಲಿ.’ ಬದುಕಲು ಬಿಡೋಣ ವಿಜ್ಞಾನ ತಂತ್ರಜ್ಞಾನ ಎಷ್ಟೇ ಮುಂದುವರೆದಿದ್ದರೂ ಮನುಷ್ಯನಲ್ಲಿ ದಯೆ ಇಲ್ಲದಿದ್ದರೆ ಆತ ಜೀವಂತ ಶವಕ್ಕೆ ಸಮಾನ. ಅಂಥ ಸಮಾಜಕ್ಕೆ ಬೆಲೆಯೂ ಇರುವುದಿಲ್ಲ. ಮಹಾತ್ಮಾ ಗಾಂಧೀಜಿ ಹೇಳಿದಂತೆ ‘ಎಲ್ಲಿ ದಯೆ ಮತ್ತು ಪ್ರೀತಿ ಇರುತ್ತದೆಯೋ, ಅಲ್ಲಿ ದೇವರು ಇರುತ್ತಾನೆ.’ ದಯೆ ಹಣಕ್ಕಿಂತಲೂ ಮುಖ್ಯ ಹೀಗಾಗಿ ದಯೆ ತೋರಲು ಶ್ರೀಮಂತ ಇರಬೇಕೆಂದೇನೂ ಇಲ್ಲ. ಒಳ್ಳೆಯ ಮನಸ್ಸಿದ್ದರೆ ಸಾಕು. ಅಗತ್ಯವಿದ್ದವರಿಗೆ  ಸಣ್ಣ ಪುಟ್ಟ ಸಹಾಯದಿಂದಲೂ ದಯೆ ತೋರಬಹುದು. ದಾರಿ ತಪ್ಪಿದವರಿಗೆ ದಾರಿ ತೋರಿಸಬಹುದು. ಪ್ರಕೃತಿ ಮೇಲೆ ಪವಿತ್ರ ಭಾವ ಹೊಂದಬೇಕು. ಪರರ ಕಷ್ಟಗಳನ್ನು ಕಂಡು ಕರಗುವ ಮತ್ತು ಫಲಾಪೇಕ್ಷೆಯಿಲ್ಲದೇ ಸಹಾಯ ಮಾಡಲು ಮುಂದಾಗುವ ಮನಸ್ಸನ್ನು ಬೆಳಸಿಕೊಳ್ಳಬೇಕು. ‘ಬದುಕೋಣ ಬದುಕಲು ಬಿಡೋಣ.’ ಎಂಬ ತತ್ವವನ್ನು ಪಾಲಿಸಿದರೆ ಜೀವನ ನಂದನವನವಾಗುವುದು ಜಯಶ್ರೀ.ಜೆ. ಅಬ್ಬಿಗೇರಿ

“ಬೆಳಗುವ ಬಾಳಿಗೆ ಕರಗುವ ಮನಸ್ಸು” ಜಯಶ್ರಿ ಜೆ ಅಬ್ಬಿಗೇರಿ Read Post »

ಇತರೆ, ಶಿಕ್ಷಣ

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು.

ಶಿಕ್ಷಣ ಸಂಗಾತಿ ಅಮು ಭಾವಜೀವಿ ಮುಸ್ಟೂರು “ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ಅಂಕ ಆಧಾರಿತ ಶಿಕ್ಷಣಕ್ಕಿಂತ ಕೌಶಲ್ಯ ಮತ್ತು ವೃತ್ತಿಪರತೆ ಆಧಾರಿತ ಮೂಲ ಶಿಕ್ಷಣವನ್ನು ಕೊಟ್ಟಾಗ ಮಾತ್ರ ಈ ಶಿಕ್ಷಣ ವ್ಯವಸ್ಥೆ ಸುಧಾರಿಸಬಹುದೇನೋ. ಅಂಕ ಮಾಡಲು ಯೋಗ್ಯತೆ ಇಲ್ಲದವನು ಅದನ್ನು ಕೊಂಡುಕೊಂಡು ಅದೆಷ್ಟೋ ಪ್ರತಿಭಾವಂತರಿಗೆ ತೊಂದರೆ ಮಾಡುವ ಬದಲು ವೃತ್ತಿ ಕೌಶಲ್ಯ ಆಧಾರಿತ ಕಲಿಕೆ ಪ್ರತಿಭಾವಂತರನ್ನು ಸೃಷ್ಟಿಸುತ್ತದೆ. ಕೌಶಲ್ಯ ಮತ್ತು ಪ್ರತಿಭೆಯನ್ನು ಕೊಂಡುಕೊಳ್ಳಲು ಸಾಧ್ಯವಿಲ್ಲ ಅದನ್ನು ಸ್ವತಃ ರೂಡಿಸಿಕೊಳ್ಳುವಂತದ್ದು. ಕೆಲಸಕ್ಕೆ ತಕ್ಕ ಕೌಶಲ್ಯ ಕೌಶಲ್ಯಕ್ಕೆ ತಕ್ಕ ಅನುಭವ ಅನುಭವಕ್ಕೆ ತಕ್ಕ ಪರಿಶ್ರಮ ಸಿಕ್ಕಾಗ ಸಮಾಜದಲ್ಲಿ ದುಡಿಯುವ ವರ್ಗಕ್ಕೆ ಬಲ ತುಂಬಿದಂತಾಗುತ್ತದೆ.    ಬರೀ ಅಂಕ ಗಳಿಕೆಯ ಹಿಂದೆ ಓಡುತ್ತಿರುವ ಇಂದಿನ ಯುವ ಸಮುದಾಯ ಅತ್ತ ಅಂಕ ಗಳಿಸಲು ಬರದಾಡುತ್ತಿದ್ದರೆ ಇತ್ತ ಪಟ್ಟಭದ್ರರು ತಮ್ಮವರ ಹಿತಕ್ಕಾಗಿ ಕೋಟ್ಯಂತರ ಮಕ್ಕಳ ಭವಿಷ್ಯಕ್ಕೆ ಕೊಡಲಿ ಪೆಟ್ಟು ನೀಡಿ ತಾವು ಮಾತ್ರ ತಮ್ಮ ಹಣ ಅಧಿಕಾರ ಪ್ರಭಾವ ಬಳಸಿ ಎಲ್ಲಾ ಅವಕಾಶಗಳನ್ನು ತಮ್ಮದಾಗಿಸಿಕೊಂಡು ಮೆರೆಯುತ್ತಿದ್ದಾರೆ. ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಅವಕಾಶ ವಂಚಿತರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಯಂತಹ ಕೆಟ್ಟ ನಿರ್ಧಾರಕ್ಕೆ ಕೈಹಾಕಿ ಹೆತ್ತವರಿಗೆ ಇನ್ನಿಲ್ಲದ ನೋವು ಕೊಡುವ ಪರಿಸ್ಥಿತಿಗೆ ತಂದು ಬಿಟ್ಟಿದೆ ಈ ವ್ಯವಸ್ಥೆ. ಶಿಕ್ಷಣ ಸ್ವಉದ್ಯೋಗಿಗಳನ್ನು ಸೃಷ್ಟಿ ಮಾಡಬೇಕೆ ವಿನಹ ಸರ್ಕಾರ ಸಂಘ ಸಂಸ್ಥೆಗಳ ಬಾಗಿಲಲ್ಲಿ ನಿಂತು ಕೆಲಸಕ್ಕಾಗಿ ಅಂಗಲಾಚುವ ದೈನಿಶಿ ಸ್ಥಿತಿಯಲ್ಲಿ ಮಕ್ಕಳನ್ನು ತಂದು ನಿಲ್ಲಿಸಿದೆ.    ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಸೃಜನಶೀಲರನ್ನಾಗಿ ಮಾಡುವ ಬದಲು ಪುಸ್ತಕದ ಹುಳುಗಳನ್ನಾಗಿಸಿ ಸ್ವಂತಿಕೆಯನ್ನೇ ಮರೆಸಿ ಕೇವಲ ಅಂಕ ್ರ್ಯಾಂಕ್ಗಳ ಹಿಂದೆ ಓಡುವಂತೆ ಮಾಡಿದೆ. ಇಲ್ಲಿ ವಿಫಲನಾದನವನಿಗೆ ಮತ್ತೊಂದು ಅವಕಾಶವನ್ನು ಸೃಷ್ಟಿಸಿಕೊಳ್ಳುವ ಬದಲು ಕೈ ತಪ್ಪಿದ ಅವಕಾಶದ ಚಿಂತೆಯಲ್ಲಿಯೇ ಬದುಕು ಭವಿಷ್ಯಗಳ ಎರಡನ್ನು ಕತ್ತಲೆ ಮಾಡಿಕೊಂಡು ಹೆತ್ತವರಿಗೆ ಸರಿಯಾಗಿ ಜನ್ಮಕ್ಕಾಗುವಷ್ಟು ನೋವನ್ನು ನೀಡಿ ಸೊರಗಿ ಹೋಗುತ್ತಿದೆ. ತಂತ್ರಜ್ಞಾನ ಮುಂದುವರೆದಂತೆಲ್ಲ ಸತ್ಯತೆ ಮತ್ತು ಪ್ರಾಮಾಣಿಕತೆಗೆ ಅವಕಾಶ ಇರುವುದಿಲ್ಲ. ಅಲ್ಲಿ ಏನಿದ್ದರೂ ತಾಂತ್ರಿಕತೆಗೆ ನಾವೆಷ್ಟು ಸಮರ್ಥರು ಎಂಬುದನ್ನು ಸಾಬೀತುಪಡಿಸಬೇಕಷ್ಟೆ. ತಾಂತ್ರಿಕತೆಯಲ್ಲಿ ಪ್ರಾವೀಣ್ಯತೆ ಇಲ್ಲದವನು ಹಣ ಅಧಿಕಾರಗಳ ಪ್ರಭಾವ ಬಳಸಿ ಅದನ್ನು ಕೊಂಡುಕೊಳ್ಳಲು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುವುದು ಇಂದಿನ ದುರಂತ. ಅದರ ಜೊತೆಗೆ ನೂರಾರು ಕನಸುಗಳನ್ನು ಕಟ್ಟಿಕೊಂಡ ಮಧ್ಯಮ ವರ್ಗದ ಪೋಷಕರು ಮತ್ತು ವಿದ್ಯಾರ್ಥಿಗಳ ಪಾಲಿಗೆ ಭವಿಷ್ಯವನ್ನು ಕತ್ತಲಾಗಿಸಿಬಿಡುತ್ತದೆ.     ಶಿಕ್ಷಣ ಜ್ಞಾನವನ್ನು ಕೊಡಬೇಕು ಅಂಕಗಳನ್ನಲ್ಲ. ಜ್ಞಾನ ಬದುಕನ್ನು ಅನ್ವೇಶಿಸಿ ಸರಿ ತಪ್ಪುಗಳ ವಿಶ್ಲೇಷಿಸಿ ಜೀವನದ ಮಟ್ಟವನ್ನು ಸುಧಾರಿಸಿಕೊಳ್ಳಲು ಅನುವು ಮಾಡಿಕೊಡಬೇಕು. ಓದಿನಲ್ಲಿ ಮುಂದಿರುವವರಿಗೆ ಬದುಕಿನ ಪರ್ಯಾಯ ಹಾದಿಗಳು ಗೊತ್ತೇ ಇರುವುದಿಲ್ಲ. ಕುದುರೆಗೆ ಕಣ್ಣು ಕಟ್ಟಿದಂತೆ ಓಡುವುದಷ್ಟೇ ಅವನ ಗುರಿಯಾಗಿರುತ್ತದೆ. ಕೈಗೆಟುಕದ ಉನ್ನತ ಗುರಿಗಿಂತಲೂ ಅಂಗೈಯಲ್ಲಿರುವ ಬೆಣ್ಣೆಯನ್ನೇ ತುಪ್ಪವಾಗಿಸುವ ಕೌಶಲ್ಯವನ್ನು ಇಂದಿನ ಶಿಕ್ಷಣ ಮಕ್ಕಳಿಗೆ ಕಲಿಸಿ ಕೊಡಬೇಕಾಗಿದೆ. ತಂತ್ರಜ್ಞಾನದ ಆವಿಷ್ಕಾರ ಮನುಷ್ಯನನ್ನು ಸೋಮಾರಿಯಾಗಿಸಿದೆ. ಅವನ ಶ್ರಮದ ಕೆಲಸಗಳನ್ನೆಲ್ಲ ನುಂಗಿ ಹಾಕಿ ಗುಂಡಿ ಬತ್ತಿದರೆ ಸಾಕು ಆಗಬೇಕಾದ ಕೆಲಸಗಳೆಲ್ಲ ನಿರ್ದಿಷ್ಟ ಸಮಯದಲ್ಲಿ ಮುಗಿಸಿ ಕೊಡುತ್ತಿರುವಾಗ ಮನುಷ್ಯನ ದೈಹಿಕ ಶ್ರಮ ಕೌಶಲ್ಯ ಎಲ್ಲವೂ ಮೂಲೆಗುಂಪಾಗಿ ನಿರುದ್ಯೋಗಿಗಳು ಉತ್ಪಾದನೆಯಾಗುತ್ತಿದ್ದಾರೆ. ಇದರಿಂದ ಭವಿಷ್ಯದಲ್ಲಿ ದೇಶದ ಪ್ರಗತಿಯ ಮೇಲೆ ಬಹುದೊಡ್ಡ ಹೊಡೆತವನ್ನು ನೀಡಲಿದೆ.      ಶಿಕ್ಷಣ ವ್ಯವಸ್ಥೆ ವ್ಯಾಪಾರಿಕರಣವಾದ ಈ ಕಾಲಘಟ್ಟದಲ್ಲಿ ಪ್ರತಿಭೆಗಳು ಹುಟ್ಟುವುದು ಅಷ್ಟು ಸುಲಭವಲ್ಲ. ಉಳ್ಳವರ ಎದೆಗೊದ್ದು ಪ್ರತಿಭಾವಂತ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವುದು ಅಸಾಧ್ಯವಾದ ಮಾತು. ಅದರಲ್ಲೂ ಇಂದಿನ ರಾಜಕೀಯ ವ್ಯವಸ್ಥೆ ಕೇವಲ ಗುಲಾಮರನ್ನು ಸೃಷ್ಟಿಸುವ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಳಸಿಕೊಳ್ಳುವ ಸಾಧನಗಳನ್ನಾಗಿ ಬಳಸಿಕೊಳ್ಳುತಿದೆ ವಿನಹ ಕೌಶಲ್ಯ ಪೂರ್ಣ ಸಮಾಜ ನಿರ್ಮಾಣ ಮಾಡುವುದು ಅವರರಿಗೂ ಬೇಕಿಲ್ಲ. ಎಷ್ಟು ಸಾಧ್ಯವೋ ಅಷ್ಟು ಬೇಗ ಹಣ ಗಳಿಸಿಕೊಂಡು ತಾನು ಮಾತ್ರ ಉದ್ದಾರವಾಗುವ ಮನಸ್ಥಿತಿಯಲ್ಲಿ ಇಂದಿನ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ. ಹೀಗಿರುವಾಗ ಓದಿದ ಎಲ್ಲರಿಗೂ ಕೆಲಸ ಸಿಗುವುದು ಅಸಾಧ್ಯ. ಇಂದಿನ ಶಿಕ್ಷಣ ವ್ಯವಸ್ಥೆ ಸೃಷ್ಟಿಕರ್ತನನ್ನಾಗಿಸುವ ಬದಲು ಕೇವಲ ಅನುಯಾಯಿಯಾಗಿ ಅನುಸರಿಸುವ ಅಮಾಯಕರನ್ನು ತಯಾರಿಸುವ ಕಾರ್ಖಾನೆಗಳಾಗಿವೆ.     ಯುವ ಸಮುದಾಯ ಒಂದು ಮಹಾನ್ ಶಕ್ತಿ. ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು. ಆದರೆ ಇಂದು ಅದನ್ನು ಮಾರ್ಗದರ್ಶಿಸುವ ಹಾಗೂ ಅದಕ್ಕೆ ಸರಿಯಾದ ಗುರಿ ನಿಗದಿಪಡಿಸುವ ಗುರುವಿನ ಕೊರತೆ ಎದ್ದು ಕಾಣುತ್ತದೆ. ಯುವಶಕ್ತಿಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧ್ಯವಾಗಿಸುವ ನಿಟ್ಟಿನಲ್ಲಿ ಅದನ್ನು ಒಗ್ಗೂಡಿಸಿಕೊಂಡು ಮುನ್ನಡೆಯ ಬೇಕಾದ ಅನಿವಾರ್ಯತೆ ಹಿಂದೆಂದಿಗಿಂತಲೂ ಇಂದು ತುಂಬಾ ಅನಿವಾರ್ಯವಾಗಿದೆ. ಇಲ್ಲಿ ಆಡಿಸುವವರ ಯೋಗ್ಯತೆ ಒಟ್ಟುಗೂಡಿಸುವಲ್ಲಿನ ವಿಫಲತೆಯನ್ನು ಎತ್ತಿ ತೋರಿಸುತ್ತದೆ. ವ್ಯವಸ್ಥೆಯ ಮೇಲೆ ಅತಿಕ್ರಮಣ ಮಾಡುವ ಬದಲು, ಸಂಘರ್ಷಕ್ಕೆ ಎಡೆ ಮಾಡಿ ಕೊಡುವ ಬದಲು ವ್ಯವಸ್ಥೆಯೊಳಗಿರುವ ಹುಳುಕುಗಳನ್ನು ಸರಿಪಡಿಸಲು ಬೇಕಾದ ಚಾಕಚಕ್ಯತೆಯನ್ನು ಹೊಂದಿದಾಗ ಮಾತ್ರ ಸಮಾಜದ ಸ್ವಾಸ್ಥ್ಯ ಉಳಿಸಿಕೊಂಡು ವ್ಯವಸ್ಥೆಯ ಓರೆ ಕೋರೆಗಳನ್ನು ತಿದ್ದಿ ಅರ್ಹರಿಗೆ ಅವಕಾಶಗಳ ಬಾಗಿಲನ್ನು ತೆರೆಸುವ ಶಿಕ್ಷಣ ವ್ಯವಸ್ಥೆ ಅದನ್ನು ಮುನ್ನಡೆಸುವ ಗುರುವಿನ ಮಾರ್ಗದರ್ಶನ ಅತಿ ಅವಶ್ಯಕವಾಗಿ ಬೇಕಾಗಿದೆ. ಅಮು ಭಾವಜೀವಿ ಮುಸ್ಟೂರು.

“ಶಿಕ್ಷಣದ ದೃಷ್ಟಿಕೋನ ಬದಲಾಗಲಿ” ವಿಶೇಷ ಲೇಖನ ಅಮು ಭಾವಜೀವಿ ಮುಸ್ಟೂರು. Read Post »

ಆರೋಗ್ಯ, ಇತರೆ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ

ಆರೋಗ್ಯ ಸಂಗಾತಿ ಗಾಯತ್ರಿ ಸುಂಕದ “ವಿಶ್ವ ಆರೋಗ್ಯ ದಿನಾಚರಣೆ” ನಮ್ಮ ಆರೋಗ್ಯದ ಬಗ್ಗೆ  ಅರಿವು ಮೂಡಿಸಲು ಪ್ರತಿ ವರ್ಷ ಜುಲೈ 22ರಂದು ವಿಶ್ವ ಆರೋಗ್ಯ ದಿನಾರಣೆ ಆಚರಿಸಲಾಗುತ್ತಿದೆ.Sound mind in sound body. ಅನ್ನುವ ಹಾಗೆ ಆರೋಗ್ಯಕರ ಶರೀರದಲ್ಲಿ ಮಾತ್ರ ಆರೋಗ್ಯಕರ  ಮನಸ್ಸು ಇರಲು ಸಾಧ್ಯ. ಇದರ ಬಗ್ಗೆ ಜಾಗೃತಿ. ಮೂಡಿಸಲು ವಿಶ್ವ ಆರೋಗ್ಯ ದಿನಾಚಣೆ  ಆಚರಿಸಲಾಗುತ್ತಿದೆ.ದೈಹಿಕ ಆರೋಗ್ಯ ;- ಯೋಗ,ಧ್ಯಾನ ಪ್ರಾಣಾಯಾಮ, ಉತ್ತಮ ಮತ್ತು ಮಿತವಾದ. ಆಹಾರ ನಮ್ಮ ದೈಹಿಕ ಆರೋಗ್ಯವನ್ನು ಸುಸ್ಥಿತಿ ಯಲ್ಲಿ ಇಡುತ್ತದೆ.ಮಾನಸಿಕ ಆರೋಗ್ಯ;- ವಿನಾ ಕಾರಣ ಇನ್ನೊಬ್ಬರ ಮೇಲೆ ದ್ವೇಷ ಇಟ್ಟು ಕೊಂಡರೆ ಅದು ನಮ್ಮ ಮಾನಸಿಕ ನೆಮ್ಮದಿ ಹಾಳು ಮಾಡುತ್ತದೆ. ಉತ್ತಮ ಸಂಗೀತ,ಓದು,ಬರವಣಿಗೆ, ನಮ್ಮ ಮಾನಸಿಕ ಒತ್ತಡ ಕಡಿಮೆ ಮಾಡುತ್ತವೆ. ಸಾಮಾಜಿಕ ಆರೋಗ್ಯ ;- ಮನುಷ್ಯನು ಮೂಲತಃ  ಸಂಘ ಜೀವಿ.  ಇಲ್ಲಿ ಮನುಷ್ಯನು ಸಂಭಂಧಗಳೊಡನೆ ಬದುಕುತ್ತಾನೆ.ಉತ್ತಮ ತಿಳುವಳಿಕೆ,ಸಹಕಾರ, ನಮ್ಮನ್ನು  ಉತ್ತಮ ಪ್ರಜೆಗಳನ್ನಾಗಿ ಮಾಡುತ್ತವೆ. ಸಾಮಾಜಿಕ ಜಾಲತಾಣ ಗಳಲ್ಲಿ ಬರೆಯುವುದು, ಓದುವುದು, ಪರಸ್ಪರ ಚರ್ಚಿಸುವುದು ನಮ್ಮಲ್ಲಿ ಹೊಸತನ ತುಂಬುತ್ತವೆ. ನಮ್ಮಲ್ಲಿದ್ದ ಒಂಟಿತನ ಹೋಗಲಾಡಿಸಲು ಸಹಾಯ ಮಾಡುತ್ತದೆ.ಎಷ್ಟೋ ಜನರು ತಮ್ಮ ಒಂಟಿತನ ಹೋಗಲಾಡಿಸಲು ಸಾಮಾಜಿಕ ಜಾಲ ತಾಣಗಳಲ್ಲಿ ಖುಷಿ ಕಂಡು ಕೊಳ್ಳುತ್ತ್ತಾರೆ.ಸಾಂಸ್ಕೃತಿಕ ಆರೋಗ್ಯ ;-  ಉತ್ತಮ ಸಂಗೀತ, ಸಾಂಸ್ಕೃತಿಕ  ಕಾರ್ಯಕ್ರಮಗಳು, ಸಭೆ ಸಮಾರಂಭಗಳಲ್ಲಿ ಭಾಗ ವಹಿಸುವುದು ನಮ್ಮಲ್ಲಿ ಕ್ರಿಯಾ ಶೀಲತೆ ತುಂಬುತ್ತವೆ.ಬನ್ನಿ, ಉತ್ತಮ ಆರೋಗ್ಯ ಅಳವಡಿಸಿ ಕೊಳ್ಳೋಣ. ಗಾಯತ್ರಿ ಸುಂಕದ

“ವಿಶ್ವ ಆರೋಗ್ಯ ದಿನಾಚರಣೆ” ಗಾಯತ್ರಿ ಸುಂಕದ Read Post »

ಇತರೆ

ಊಸರವಳ್ಳಿ ವಿಶೇಷ ಲೇಖನ ಕವಿತಾ ಶ್ರೀನಿವಾಸ್ ನಾಯಕ್

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ ಊಸರವಳ್ಳಿ ಊಸರವಳ್ಳಿ ತನ್ನ ರಕ್ಷಣೆಗೆ ಬಣ್ಣ ಬದಲಾಯಿಸುತ್ತದೆ. ಅದು ಪ್ರಕೃತಿಯ ಕೊಟ್ಟ ಗುಣ. ಆದರೆ ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಬಣ್ಣ ಬದಲಾಯಿಸಲು ಆರಂಭಿಸಿದಾಗ, ಸಂಬಂಧಗಳು, ನಂಬಿಕೆ ಮತ್ತು ಮಾನವೀಯತೆ ಗಾಯಗೊಳ್ಳುತ್ತವೆ. ಕೆಲವರು ನಮ್ಮ ಎದುರು ತುಂಬಾ ಸಿಹಿಯಾಗಿ ಮಾತನಾಡುತ್ತಾರೆ. “ನೀವು ಇಲ್ಲದಿದ್ದರೆ ನಾವು ಏನೂ ಅಲ್ಲ” ಎಂದು ಹೊಗಳುತ್ತಾರೆ. ಆದರೆ ನಾವು ಬೆನ್ನು ತಿರುಗಿಸಿದ ಕ್ಷಣದಲ್ಲೇ ಅದೇ ನಾಲಿಗೆ ನಮ್ಮ ಬಗ್ಗೆ ವಿಷ ಉಗುಳುತ್ತದೆ. ಸಂದರ್ಭ ಬದಲಾದರೆ ಮಾತು ಬದಲಾಗುತ್ತದೆ, ಲಾಭ ಕಂಡರೆ ನಿಲುವು ಬದಲಾಗುತ್ತದೆ, ಅಧಿಕಾರ ಕಂಡರೆ ಮುಖವೇ ಬದಲಾಗುತ್ತದೆ. ಇಂತಹವರನ್ನು ನೋಡಿದಾಗ ನೆನಪಾಗುವುದು ಊಸರವಳ್ಳಿಯೇ. ಆದರೆ ಒಂದು ವ್ಯತ್ಯಾಸ ಇದೆ. ಊಸರವಳ್ಳಿ ಬದುಕಲು ಬಣ್ಣ ಬದಲಾಯಿಸುತ್ತದೆ; ಕೆಲವು ಮನುಷ್ಯರು ಮತ್ತೊಬ್ಬರನ್ನು ಬಳಸಿಕೊಳ್ಳಲು ಬಣ್ಣ ಬದಲಾಯಿಸುತ್ತಾರೆ. ಇಂದು ಸಾಮಾಜಿಕ ಜಾಲತಾಣಗಳಲ್ಲಿಯೂ ಇದೇ ದೃಶ್ಯ. ಮುಂದೆ ಹೊಗಳಿಕೆ, ಹಿಂದೆ ಟೀಕೆ. ಕೆಲಸ ಇದ್ದಾಗ ಆತ್ಮೀಯತೆ, ಕೆಲಸ ಮುಗಿದ ನಂತರ ಅಪರಿಚಿತನಂತೆ ವರ್ತನೆ. ನಿಜವಾದ ಸ್ನೇಹಕ್ಕಿಂತ ಸ್ವಾರ್ಥದ ಸಂಬಂಧಗಳು ಹೆಚ್ಚಾಗುತ್ತಿರುವುದು ವಿಷಾದದ ಸಂಗತಿ. ಆದರೆ ಬಣ್ಣ ಬದಲಾಯಿಸುವವರಿಗಿಂತ, ಯಾವ ಪರಿಸ್ಥಿತಿಯಲ್ಲೂ ತಮ್ಮ ಮೌಲ್ಯ ಮತ್ತು ವ್ಯಕ್ತಿತ್ವವನ್ನು ಬದಲಿಸದವರು ಸಮಾಜದ ನಿಜವಾದ ಸಂಪತ್ತು. ಅವರು ಕಡಿಮೆ ಇರಬಹುದು, ಆದರೆ ಅವರ ಮೇಲಿನ ನಂಬಿಕೆ ಎಂದಿಗೂ ಕಡಿಮೆಯಾಗುವುದಿಲ್ಲ. ಜೀವನದಲ್ಲಿ ಎಲ್ಲರನ್ನೂ ಸಂತೋಷಪಡಿಸಲು ಸಾಧ್ಯವಿಲ್ಲ. ಆದರೆ ನಮ್ಮ ವ್ಯಕ್ತಿತ್ವವನ್ನು ಕಾಪಾಡಿಕೊಳ್ಳುವುದು ಮಾತ್ರ ನಮ್ಮ ಕೈಯಲ್ಲಿದೆ. ಸಂದರ್ಭಕ್ಕೆ ತಕ್ಕಂತೆ ಅಭಿಪ್ರಾಯ ಬದಲಾಗಬಹುದು, ಆದರೆ ಸ್ವಾರ್ಥಕ್ಕಾಗಿ ಗುಣ ಬದಲಾದರೆ ಅದು ವ್ಯಕ್ತಿತ್ವದ ಸೋಲು. ಆದ್ದರಿಂದ ಊಸರವಳ್ಳಿಯಂತೆ ಬಣ್ಣ ಬದಲಾಯಿಸುವುದಕ್ಕಿಂತ, ಮರದಂತೆ ಗಟ್ಟಿಯಾಗಿ ನಿಂತು ನೆರಳು ಕೊಡುವ ವ್ಯಕ್ತಿಯಾಗೋಣ. ಬಣ್ಣ ಬದಲಾಯಿಸುವ ಬದುಕಿಗಿಂತ, ನಂಬಿಕೆಗೆ ಪಾತ್ರವಾಗುವ ಬದುಕು ಹೆಚ್ಚು ಮೌಲ್ಯಯುತ.ವಂದನೆಗಳೊಂದಿಗೆ…ಕವಿತಾ ಶ್ರೀನಿವಾಸ್ ನಾಯಕ್ಕಾರ್ಕಳ, ಉಡುಪಿ ಜಿಲ್ಲೆ.

ಊಸರವಳ್ಳಿ ವಿಶೇಷ ಲೇಖನ ಕವಿತಾ ಶ್ರೀನಿವಾಸ್ ನಾಯಕ್ Read Post »

ಇತರೆ, ಲಹರಿ

“ಪ್ರೇಮ ವೈಫಲ್ಯ” ಕಾವ್ಯ ಸುಧೆ ಅವರ ಲಹರಿ

ಲಹರಿ ಸಂಗಾತಿ ಕಾವ್ಯ ಸುಧೆ “ಪ್ರೇಮ ವೈಫಲ್ಯ” ಹೀಗೆ ಒಮ್ಮೆ ಏನೋ ಕೆಲಸದ ನಿಮಿತ್ತ ಪರ ಊರಿಗೆ ಪ್ರಯಾಣ ಬೆಳೆಸಿದ್ದೆ. ಮನೆಯಿಂದ ರೈಲ್ವೆ ಸ್ಟೇಷನ್ ಗ್ ತಲುಪಿ ಟ್ರೈನ್ ಹಿಡಿದು ಒಂದು ಸೀಟ್ ಗಿಟ್ಟಿಸಿ ಕೊಳ್ಳುವುದೇ ಒಂದು ಸಾಧನೆ ಈಗಿನ ಕಾಲದಲ್ಲಿ ಎಲ್ಲಿಂದ ಎಲ್ಲಿಗೆ ಹೋಗಿ ಜನವೋ ಜನ, ನನಗೆ ಒಮ್ಮೊಮ್ಮೆ ಮನೆಯಲ್ಲಿ ಯಾರೂ ಇರುವುದಿಲ್ಲವೇ ಎಲ್ಲರೂ ಎಲ್ಲಿಗೆ ಹೀಗೆ ಹೋಗುತ್ತಾರೆ ಎಲ್ಲಿ ನೋಡಿದರು ಜನಗಳ ಜಾತ್ರೆ ಎಂದನಿಸುವುದುಂಟು.ಹಾಗೆಯೇ ಯೋಚಿಸುತ್ತ ಕುಳಿತಿರಲು ಯಾರದೋ ಮೊಬೈಲ್ ನಿಂದ ಹಾಡೊಂದು ಕೇಳಿಸಿತು ಅದು ನನ್ನ ಗಮನ ಸೆಳೆಯಿತು ಅದೊಂದು ಭಾವಗೀತೆ ಮೌನದಲ್ಲಿ ಅಳು ಮಾತಿನಲ್ಲಿ ನಗುಎಂಬ ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅವರ ಸಾಹಿತ್ಯದ ಅರ್ಥಗರ್ಭಿತ ಹಾಡು ನೀವೂ ಒಮ್ಮೆ ಕೇಳಬೇಕಸಾಹಿತ್ಯ :   ಮೌನದಲ್ಲಿ ಅಳು ಮಾತಿನಲ್ಲಿ ನಗುನಿನಗೆ ನಿನ್ನ ಹೆಗಲುಜಗದ ಎದುರಿಗೆ ಹರಡಿ ಕುಳಿತರೆನೋವಿಗಿಲ್ಲ ಮಡಿಲು ತಬ್ಬಿದ ನೆಲವೆ ಕುಸಿದು ಬಿದ್ದರೆದೂರುವೆ ಯಾರನು ಕರೆದು?ನಡೆಯಲೆ ಬೇಕು ಒಬ್ಬರೆ ಇಲ್ಲಿಬುತ್ತಿಯ ಹಂಗನು ತೊರೆದು ಕಣ್ಣಿಗೆ ಕಾಣದ ಮರೆಗಿನ ಅಲಗೆನಿನ್ನ ಗುರಿಯು ಯಾರಿಲ್ಲಿ?ಎಲ್ಲವ ಕಳಚಿ ಕುಳಿತಿಹ ಜೀವಕೆಹೆದರಿಕೆ ಏನಿಹುದಿಲ್ಲಿ? ಹೇಗೋ ಏನೋ ಮುಗಿವುದು ಸಮಯಯಾವುದು ಇಲ್ಲಿ ಅನಂತ?ವೇಷವ ಕಳಚಿ ನಡೆಯುವ ಬದುಕುಪಾತ್ರದೊಳಗೆ ಜೀವಂತ!! ಹೌದಲ್ಲವೇ ನಿಜ ಇದರೊಂದಿಗೆ ಯೋಚಿಸಿದಾಗ ಎಷ್ಟೋ ಜನ ಪ್ರೇಮ ವೈಫಲ್ಯದಿಂದ ಆತ್ಮಹತ್ಯೆಗೆ ಶರಣಾಗುವುದು, ಎಲ್ಲವನ್ನು ಕಳೆದುಕೊಂಡವರ ಹಾಗೆ ಜೀವನದಲ್ಲಿ ಇನ್ನೇನು ಇಲ್ಲ ಎಂದು ನೋವನನುಭವಿಸುವುದನ್ನು ಕಂಡಿದ್ದೇವೆ. ಅದರ ಬಗ್ಗೆ ಹೀಗೊಂದು ಚಿಂತನೆ.ಮಾನವ ಸಂಬಂಧಗಳು ತೀರಾ ಸಂಕೀರ್ಣ ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು.ರಾಧೆಕೃಷ್ಣ ರ ಪ್ರೇಮದ ಬಗ್ಗೆ ಎಲ್ಲರಿಗೂ ತಿಳಿದಿರುವುದೇ ಅವರು ಮೋಹದ ಪರಾಕಾಷ್ಠೆ, ಪ್ರೀತಿಯ ವೈಭೋಗದಲ್ಲಿ ಅನುಭಾವಿಕ ದೈವಿಕ ಪ್ರೇಮದ ಪ್ರತಿಮೆಗಳು. ಅವರು ವಿದ್ವಂಸಕ ಪ್ರೀತಿಗೆ ಉಪಕ್ರಮ ಪ್ರತ್ಯೌಷಧ. ಆಕಾಂಕ್ಷೆಗಳಿಲ್ಲದ ದೈಹಿಕ ಬಯಕೆಯ ವಾಂಛೆಯಿಂದ ಹೊರತಾದ ಸಮರ್ಪಣಾ ಪ್ರೇಮಭಾವ.ಆದರೆ ಇಂದು ಅದನ್ನು ಹುಡುಕುತ್ತ ಭ್ರಮ ನಿರಸನದ ದಾರಿ ಹಿಡಿದವರೇ ಬಹಳ. ಅಪರೂಪದಲ್ಲೊಂದು ಅಂತಹ ಶ್ರೀಮಂತ ಪ್ರೇಮ ದಕ್ಕಿಸಿಕೊಂಡವನ ಜೀವನ ಪಾವನ. ಸ್ವಚ್ಛ ಸರಳ ಶುಧ್ಧ ಮನಸ್ಸು ತನ್ನದೆನ್ನುವ ಅಪರಿಮಿತ ಆನಂದವೇ ಸಾಕ್ಷಾತ್ಕಾರದ ನೆಲೆ. ಗಂಡು ಹೆಣ್ಣುಗಳ ಬದುಕಿನ ಸವಾರಿಯಲ್ಲಿ ಕೈಗೆಟುಕಿದ್ದೆಲ್ಲ ಸಿಹಿಯಲ್ಲ. ನಮ್ಮ ಸುತ್ತಲಿನ ಪ್ರೀತಿ ಪಾತ್ರರೊಡನೆ ಅನುಭವಿಸಿದ ಕಳೆದ ಕ್ಷಣಗಳೆಲ್ಲ ಎಲ್ಲವೂ ಸಂತಸವನ್ನು ನೀಡುವುದಿಲ್ಲ. ಕೆಲವೇ ಕೆಲವು ಬದುಕಿನುದ್ದಕ್ಕೂ ಖುಷಿ ನೀಡುತ್ತ ಸಂಬಂಧಗಳ ಇನ್ನಷ್ಟು ಗಾಢವಾಗಿಸುತ್ತ ಹೋಗುತ್ತವೆ. ಪ್ರೇಮ ವೈಫಲ್ಯವು ತೀವ್ರವಾದ ನೋವನ್ನು ಉಂಟುಮಾಡುತ್ತದೆ, ಆದರೆ ಅದು ನಿಮ್ಮ ಜೀವನದ ಅಂತ್ಯವಲ್ಲ. ಇದನ್ನು ಐಸ್‌ಕ್ರೀಮ್ ಕೋನ್ ಕೈಯಿಂದ ಜಾರಿ ಬಿದ್ದಂತೆ ಎಂದು ಭಾವಿಸಿ; ಅದು ಬೇಸರದ ಸಂಗತಿಯಾದರೂ, ಜಾರಿ ಹೋದದ್ದು ನಮ್ಮದಲ್ಲ ಅಲ್ಲವೇ….. ಪ್ರೀತಿ ಎಂದರೆ ನಿಮ್ಮ ಪಾಲಿಗೆ ಏನು? ಯಾರ ಬಗ್ಗೆಯಾದರೂ ವಿಶೇಷ ಕಾಳಜಿ ವಹಿಸುವುದು, ವಿಶೇಷ ವ್ಯಕ್ತಿಯೊಬ್ಬರಿಗಾಗಿ ಸಾಮಾನ್ಯಕ್ಕಿಂತ ಹೆಚ್ಚಿನದನ್ನು ಮಾಡುವುದು ಅಥವಾ ಪ್ರತಿಯಾಗಿ ಏನನ್ನೂ ನಿರೀಕ್ಷಿಸದೆ ಯಾರ ಮೇಲಾದರೂ ಅಪಾರ ಪ್ರೀತಿಯನ್ನು ಹೊಂದುವ ಭಾವನೆಯನ್ನು ನೀವು ಖಂಡಿತವಾಗಿಯೂ ಅನುಭವಿಸಿರುತ್ತೀರಿ. ಪ್ರೀತಿಯ ಕುರಿತಾದ ನಿಮ್ಮ ವ್ಯಾಖ್ಯಾನ ಬೇರೆಯಾಗಿರಬಹುದು, ಆದರೆ ಪ್ರೀತಿ ಎಂಬುದು ಎಲ್ಲೆಡೆ ವ್ಯಾಪಿಸಿದೆ ಮತ್ತು ನೀವು ಅದರೊಂದಿಗೆ ಖಂಡಿತವಾಗಿಯೂ ಪರಿಚಯ ಮಾಡಿಕೊಂಡಿರುತ್ತೀರಿ. ಪ್ರೇಮದಲ್ಲಿರುವುದೇ ಜಗತ್ತಿನ ಅತ್ಯಂತ ಅದ್ಭುತವಾದ ಅನುಭವ; ಆದರೆ ಆ ಪ್ರೀತಿ ಪರಸ್ಪರ ವಿನಿಮಯವಾಗದಿದ್ದಾಗ, ಅದಕ್ಕೆ ತಕ್ಕುದಾದ ತೀವ್ರ ವೇದನೆ ಉಂಟಾಗುತ್ತದೆ ಮತ್ತು ನಿಮ್ಮ ಪ್ರಪಂಚವೇ ಕೊನೆಗೊಳ್ಳುತ್ತಿದೆ ಎಂಬ ಭಾವನೆ ಮೂಡಬಹುದು. ಆದಾಗ್ಯೂ, ಪ್ರೇಮ ಸಂಬಂಧವೊಂದು ವಿಫಲವಾದ ನಂತರವೂ ಜೀವನ ಮುಂದುವರಿಯುತ್ತದೆ. ಸಂಬಂಧವೊಂದು ಮುರಿದುಬಿದ್ದಾಗ ಉಂಟಾಗುವ ನೋವು ಅತ್ಯಂತ ಕಠಿಣವೆನಿಸಿದರೂ, ಪ್ರೀತಿಯೊಂದಿಗೆ ನೋವಿನ ಸಾಧ್ಯತೆಯೂ ಇದ್ದೇ ಇರುತ್ತದೆ. ನೋವನ್ನು ಅನುಭವಿಸಲು ಇಷ್ಟಪಡದಿದ್ದರೆ ಪ್ರೀತಿಸಲು ಸಾಧ್ಯವಿಲ್ಲ. ನಿಮ್ಮ ಸಂಗಾತಿಯು ನಿಮ್ಮ ಪ್ರೀತಿಗೆ ಪ್ರತಿಯಾಗಿ ಪ್ರೀತಿಯನ್ನು ನೀಡದಿದ್ದಾಗ ಅದನ್ನು ಒಪ್ಪಿಕೊಳ್ಳುವುದು ನಿಮಗೆ ಕಷ್ಟವಾಗಬಹುದು, ಆದರೆ ಜೀವನವನ್ನು ಮುಂದುವರಿಸಲು ನೀವು ಅದನ್ನು ಎದುರಿಸಿ ಮುಂದುವರೆಯಲೇ ಬೇಕು. ಪ್ರೇಮದಲ್ಲಿನ ವೈಫಲ್ಯವು ಜೀವನದ ಅಂತ್ಯವಲ್ಲ; ಬದಲಿಗೆ, ನಿಮ್ಮ ಜೀವನದ ಪಯಣದಲ್ಲಿ ನಿಮ್ಮ ಸಂಗಾತಿಯ ಸ್ಥಾನವನ್ನು ಮುಂದೆಂದಾದರೂ ಇನ್ನೊಬ್ಬರು ತುಂಬಲಿದ್ದಾರೆ ಎಂಬುದನ್ನು ಮಾತ್ರ ಅದು ಸೂಚಿಸುತ್ತದೆ. ಆದ್ದರಿಂದ, ಆ ವಿಫಲ ಸಂಬಂಧವನ್ನು ಹಿಂದಕ್ಕೆ ಹಾಕಿ ಮುಂದೆ ಸಾಗಿರಿ; ಆಗ ಮಾತ್ರ ಭವಿಷ್ಯವನ್ನೂ ಮತ್ತು ಅದು ನಿಮಗಾಗಿ ಕಾದಿರಿಸಿರುವ ವಿಷಯಗಳನ್ನೂ ನೀವು ಅಪ್ಪಿಕೊಳ್ಳಲು ಸಾಧ್ಯವಾಗುತ್ತದೆ. ಅತ್ಯಂತ ಸೂಕ್ತವಾದ ಸಂಬಂಧವು ಯಾವಾಗ ನಿಮ್ಮ ಜೀವನಕ್ಕೆ ಬಂದು ನಿಮ್ಮ ಗಮನ ಸೆಳೆಯುತ್ತದೆ ಎಂಬುದು ನಿಮಗೆ ತಿಳಿದಿರುವುದಿಲ್ಲ. ವಿಫಲವಾದ ಪ್ರೇಮ ಸಂಬಂಧವನ್ನು ತಕ್ಷಣವೇ ಮರೆಯಲು ಸಾಧ್ಯವಾಗದಿದ್ದರೂ, ನೀವು ತಾಳ್ಮೆಯಿಂದಿರಬೇಕು ಮತ್ತು ಚೇತರಿಸಿಕೊಳ್ಳಲು ನಿಮಗೆ ನೀವೇ ಸ್ವಲ್ಪ ಸಮಯವನ್ನು ನೀಡಬೇಕು. ನಮ್ಮ ತಪ್ಪುಗಳನ್ನು ಗುರುತಿಸುವುದರಲ್ಲಿ ಮತ್ತು ಅವು ಇನ್ನು ಮುಂದೆ ತಪ್ಪುಗಳಾಗದೇ ಇರುವವರೆಗೂ ಅವುಗಳೊಳಗೆ ಆಳವಾಗಿ ಮುಳುಗುವುದರಲ್ಲಿ ಅನುಗ್ರಹವಿದೆ. ವೈಫಲ್ಯದೊಳಗೆ ಜೀವನ ಪಾಠಗಳಿವೆ. ವೈಫಲ್ಯವು ಮನುಷ್ಯನಾಗಿ ನಮ್ಮ ಮೌಲ್ಯದ ಬಗ್ಗೆ ಅಲ್ಲ, ಆದರೆ ಸ್ವತಂತ್ರ ಮತ್ತು ಅವಲಂಬಿತ ಕ್ಷಣಗಳು ಮತ್ತು ಅವುಗಳಿಂದ ನಾವು ಕಲಿಯಬಹುದಾದ ಸಣ್ಣ ಅಥವಾ ದೊಡ್ಡ ಪಾಠಗಳ ಬಗ್ಗೆ. ವೈಫಲ್ಯದಲ್ಲಿರುವ ಸಾಧ್ಯತೆಗಳನ್ನು – ಅಂದರೆ ಅದರಲ್ಲಿರುವ ನಗು, ಸಂತೋಷ ಮತ್ತು ಹಾಸ್ಯವನ್ನು – ಕಾಣಲು ಕಲಿಯುವುದರಿಂದ ತಿರಸ್ಕಾರ, ಅವಮಾನ ಅಥವಾ ಸ್ವಯಂ-ಮೌಲ್ಯದ ಬಗೆಗಿನ ಸಂಶಯದಿಂದ ಉಂಟಾಗುವ ನೋವು ಮಾಯವಾಗುವುದಿಲ್ಲ. ವೈಫಲ್ಯವು ಈಗಲೂ ನೋವುಂಟುಮಾಡುತ್ತದೆ ಮತ್ತು ಅಹಿತಕರವಾಗಿಯೇ ಇರುತ್ತದೆ. ಆದರೆ, ವೈಫಲ್ಯದ ಕುರಿತಾದ ನಮ್ಮ ಹೊಸ ದೃಷ್ಟಿಕೋನವು, ಯಾವುದೇ ಅವಕಾಶವಿಲ್ಲ ಎಂದು ನಮಗೆ ಅನ್ನಿಸಿದಾಗಲೂ ಅದರಲ್ಲಿರುವ ಅವಕಾಶ ಮತ್ತು ಸಹಜತೆಯನ್ನು ಅಪ್ಪಿಕೊಳ್ಳಲು ನಮಗೆ ಕಲಿಸುತ್ತದೆ.ಆದ್ದರಿಂದ ಸಹಜವಾಗಿ ವಾಸ್ತವವನ್ನು ಒಪ್ಪಿಕೊಂಡು ಅಪ್ಪಿಕೊಂಡು ಜೀವನವನ್ನು ಸಂತೋಷದಿಂದ ಕಳೆಯಬೇಕು ಅಲ್ಲವೇ ನೀವೆಂನಂತೀರಿ…….. ಕಾವ್ಯ ಸುಧೆ.

“ಪ್ರೇಮ ವೈಫಲ್ಯ” ಕಾವ್ಯ ಸುಧೆ ಅವರ ಲಹರಿ Read Post »

ಇತರೆ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ

ವಿಶೇಷ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ “ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?-ಬಸವಣ್ಣನವರ ದೃಷ್ಟಿಯಲ್ಲಿ “”ನೈಜ ಶೃಂಗಾರ””“ನೀರಿಂಗೆ ನೈದಿಲೆಯೆ ಶೃಂಗಾರಸಮುದ್ರಕ್ಕೆ ತೆರೆಯೆ ಶೃಂಗಾರನಾರಿಗೆ ಗುಣವೆ ಶೃಂಗಾರಗಗನಕ್ಕೆ ಚಂದ್ರಮನೆ ಶೃಂಗಾರನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಬಾಹ್ಯ ಸೌಂದರ್ಯಕ್ಕೆ ಮಾರುಹೋಗುವ ಇಂದಿನ ಜಗತ್ತಿನಲ್ಲಿ ‘ನೈಜ ಶೃಂಗಾರ’ ಅಥವಾ ನೈಜ ಸೌಂದರ್ಯ ಎಂದರೇನು ಎಂಬುದನ್ನು ವಿಶ್ವಗುರು ಬಸವಣ್ಣನವರು ಅತ್ಯಂತ ಸರಳ ಉದಾಹರಣೆಗಳ ಮೂಲಕ ಈ ವಚನದಲ್ಲಿ ಬಿಡಿಸಿಟ್ಟಿದ್ದಾರೆ. ಪ್ರಕೃತಿಯ ಸಹಜ ಗುಣಗಳನ್ನು ಲೌಕಿಕ ಬದುಕಿಗೆ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಸಮೀಕರಿಸುವ ಅವರ ದೃಷ್ಟಿಕೋನ ಸಾರ್ವಕಾಲಿಕವಾದುದು.ಲೌಕಿಕ ಜಗತ್ತಿಗೆ ಪೂರಕವಾದ ಅರ್ಥವನ್ನು ನೋಡುವುದಾದರೆ,ಲೌಕಿಕ ಅಥವಾ ಭೌತಿಕ ಜಗತ್ತಿನಲ್ಲಿ ನಾವು ದಿನನಿತ್ಯ ನೋಡುವುದೆಲ್ಲವೂ ಬಾಹ್ಯ ಆಕರ್ಷಣೆಗಳನ್ನೇ. ಆದರೆ ಅಪ್ಪ ಬಸವಣ್ಣನವರು ನೈಜ ಶೃಂಗಾರವು ಅದರ ಅಂತರ್ಗತ ಗುಣದಲ್ಲಿದೆ ಎನ್ನುತ್ತಾರೆ. ಕೇವಲ ನೀರಿದ್ದರೆ ಸಾಲದು, ಅದರಲ್ಲಿ ಅರಳುವ ನೈದಿಲೆ  ಆ ನೀರಿಗೆ ದೈವಿಕ ಸೌಂದರ್ಯವನ್ನು ನೀಡುತ್ತದೆ. ಅದೇ ರೀತಿಸಮುದ್ರಕ್ಕೆ ಅಲೆಯು ಸೌಂದರ್ಯವನ್ನು ನೀಡುತ್ತದೆ.ನಿಶ್ಚಲವಾಗಿ ನಿಂತ ನೀರು ಸಮುದ್ರವೆನಿಸದು. ನಿರಂತರವಾಗಿ ಏರಿಳಿಯುವ ಅಲೆಗಳೇ ಸಮುದ್ರದ ಜೀವಂತಿಕೆ ಮತ್ತು ಶೃಂಗಾರ. ನಮ್ಮ ಬದುಕಿನ ಏಳುಬೀಳುಗಳೂ ಸಹ ಬದುಕಿನ ಜೀವಂತಿಕೆಯನ್ನು ತೋರ್ಪಡಿಸುತ್ತವೆ.ಹಾಗೆಯೇ ..ನಾರಿಗೆ ಗುಣವೇ ಶೃಂಗಾರ: ಸಮಾಜದಲ್ಲಿ ಹೆಣ್ಣನ್ನು ಕೇವಲ ದೈಹಿಕ ಸೌಂದರ್ಯದ ತಕ್ಕಡಿಯಲ್ಲಿ ಅಳೆಯುವ ಕಾಲದಲ್ಲಿ, ಬಸವಣ್ಣನವರು ಹೆಣ್ಣಿಗೆ ಆಕೆಯ ‘ಸದ್ಗುಣ, ವಿವೇಕ ಮತ್ತು ನಡತೆಯೇ’ ನಿಜವಾದ ಶೃಂಗಾರ ಎಂದರು. ಬಾಹ್ಯ ಆಭರಣಗಳು ಕ್ಷಣಿಕ, ಆದರೆ ಆಕೆಯ ಉದಾತ್ತ ಗುಣಗಳು ಇಡೀ ಕುಟುಂಬ ಮತ್ತು ಸಮಾಜವನ್ನು ಬೆಳಗುತ್ತವೆ. ಇದು ಇಂದಿನ ಆಧುನಿಕ ಜಗತ್ತಿನ ಸ್ತ್ರೀ ಸಬಲೀಕರಣಕ್ಕೂ ಅತ್ಯಂತ ಪ್ರಸ್ತುತವಾದ ವಿಚಾರವಾಗಿದೆ.ಗಗನಕ್ಕೆ ಚಂದ್ರಮನೇ ಶೃಂಗಾರ ಅಂತ ನೋಡಿದಾಗ ..ವಿಶಾಲವಾದ ಕತ್ತಲ ಆಕಾಶಕ್ಕೆ ಕೇವಲ ನಕ್ಷತ್ರಗಳಿಗಿಂತ ಏಕಾಂಗಿಯಾಗಿ ನಿಂತು ತಂಪು ಬೆಳಕನ್ನು ನೀಡುವ ಚಂದ್ರನೇ ನಿಜವಾದ ಆಭರಣ.ಆಧ್ಯಾತ್ಮಿಕವಾದ  ಅರ್ಥಾನುಸಂಧಾನವನ್ನು  ನೋಡುವುದಾದರೆ,ವಚನದ ಕೊನೆಯ ಸಾಲಿನಲ್ಲಿ ಬಸವಣ್ಣನವರು ಲೌಕಿಕತೆಯಿಂದ ಆಧ್ಯಾತ್ಮದ ಅತ್ಯುನ್ನತ ಶಿಖರಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. “ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಎನ್ನುವ ಮೂಲಕ ಶರಣರ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸುತ್ತಾರೆ.ನೊಸಲ ವಿಭೂತಿ ಎಂದು… ಆಧ್ಯಾತ್ಮಿಕವಾಗಿ ವಿಭೂತಿ ಎಂದರೆ ಕೇವಲ ಬೂದಿಯಲ್ಲ. ಅದು ‘ಅಹಂಕಾರದ ಭಸ್ಮ’. ದೇಹವು ಒಂದು ದಿನ ಬೂದಿಯಾಗಿಯೇ ತೀರುತ್ತದೆ ಎಂಬ ನಶ್ವರತೆಯ ಅರಿವು.ಶರಣನಾದವನಿಗೆ ಐಹಿಕ ಭೋಗಗಳು, ಅಧಿಕಾರ, ಸಂಪತ್ತು ಯಾವುದೂ ಆಭರಣಗಳಲ್ಲ. ತನುವನ್ನು ದಂಡಿಸಿ, ಮನದ ಕಲ್ಮಷವನ್ನು ಸುಟ್ಟು, ಅಹಂ ಭಾವವನ್ನು ಭಸ್ಮ ಮಾಡಿ ಹಣೆಯ ಮೇಲೆ ಧರಿಸುವ ವಿಭೂತಿಯೇ ಆತನ ಜ್ಞಾನದ ಸಂಕೇತ.ಅಹಂಕಾರ ಅಳಿದು, ದೈವತ್ವವನ್ನು ಮೈಗೂಡಿಸಿಕೊಂಡ ಶರಣನ ಮುಖದಲ್ಲಿ ಮೂಡುವ ಶಾಂತಿ ಮತ್ತು ಜ್ಞಾನದ ತೇಜಸ್ಸೇ ಆತನ ನಿಜವಾದ ಶೃಂಗಾರವೆಂದು ಅರುಹಿದ್ದಾರೆ.ಬಸವಣ್ಣನವರ ಈ ವಚನವು ನಮಗೆ ಬದುಕಿನ ದಾರಿದೀಪವಾಗಿದೆ. ಕೇವಲ ತೋರ್ಪಡಿಕೆಯ, ಕೃತಕವಾದ ಅಲಂಕಾರಗಳ ಬೆನ್ನತ್ತಿ ಹೋಗುತ್ತಿರುವ ಇಂದಿನ ಸಮಾಜಕ್ಕೆ, ತನು-ಮನಗಳ ಶುದ್ಧತೆ ಹಾಗೂ ಸದ್ಗುಣಗಳೇ ನಿಜವಾದ ಆಸ್ತಿ ಎಂಬುದನ್ನು ಇದು ನೆನಪಿಸುತ್ತದೆ. ಪ್ರಕೃತಿಯಲ್ಲಿ ಹೇಗೆ ಸಹಜತೆ ಸೌಂದರ್ಯವೋ, ಹಾಗೆಯೇ ಮನುಷ್ಯನ ಬದುಕಿನಲ್ಲಿ ಸದ್ಗುಣ ಮತ್ತು ದೈವಿಕ ಭಕ್ತಿಯೇ ನಿಜವಾದ ಶೃಂಗಾರ ಎಂಬುದನ್ನು ಅರಿತು ಬಾಳಬೇಕಿದೆ.ಅದೇ ರೀತಿ ಇಂದಿನ ‘ಇನ್‌ಸ್ಟಾಗ್ರಾಮ್’ ಮತ್ತು ‘ಫಿಲ್ಟರ್’ಗಳ ಜಗತ್ತಿನಲ್ಲಿ ಯುವ ಪೀಳಿಗೆಗೆ ಸೌಂದರ್ಯ ಎಂದರೆ ಕೇವಲ ಬಾಹ್ಯ ರೂಪ, ಬ್ರಾಂಡೆಡ್ ಬಟ್ಟೆಗಳು ಮತ್ತು ಫೋಟೋಗಳಿಗೆ ಸಿಗುವ ಲೈಕ್ಸ್‌ಗಳಷ್ಟೇ ಆಗಿಬಿಟ್ಟಿದೆ. ಕೃತಕ ಸೌಂದರ್ಯದ ಬೆನ್ನತ್ತಿ ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಉತ್ಸಾಹದಲ್ಲಿ, ನಾವು ನಮ್ಮ ಮನಸ್ಸನ್ನು ಸಜ್ಜುಗೊಳಿಸಲು ಮರೆಯುತ್ತಿದ್ದೇವೆ.ಈ ಹೊತ್ತಿನಲ್ಲಿ ಬಸವಣ್ಣನವರ ಈ ವಚನ ಯುವಜನತೆಗೆ ಒಂದು ದಿವ್ಯೌಷಧವೆಂದು ಹೇಳಬಹುದು.ಪ್ರೊಫೈಲ್ ಅಂದಕ್ಕಿಂತ ಕ್ಯಾರೆಕ್ಟರ್ ಮುಖ್ಯವಾದುದು… ಸಾಮಾಜಿಕ ಜಾಲತಾಣದ ಪ್ರೊಫೈಲ್ ಸುಂದರವಾಗಿ ಕಾಣಿಸುವುದಕ್ಕಿಂತ, ನಮ್ಮ ವ್ಯಕ್ತಿತ್ವ  ಸುಂದರವಾಗಿರಬೇಕು. ಹೆಣ್ಣಾಗಲಿ, ಗಂಡಾಗಲಿ ಅವರ ನಡತೆ ಮತ್ತು ಸದ್ಗುಣಗಳೇ ನಿಜವಾದ ಆಕರ್ಷಣೆಯಾಗಿರುತ್ತವೆ.ಸವಾಲುಗಳೇ ನಮ್ಮ ಶಕ್ತಿಯಾಗಬೇಕು. ಸಮುದ್ರದ ಅಲೆಗಳು ಅದಕ್ಕೆ ಸೌಂದರ್ಯ ತರುವಂತೆ,  ಬದುಕಿನಲ್ಲಿ ಎದುರಾಗುವ ಸೋಲು, ಗೆಲುವು ಹಾಗೂ ಸವಾಲುಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ. ಸವಾಲುಗಳಿಗೆ ಹೆದರಿ ಓಡುವ ಬದಲು, ಅವುಗಳನ್ನು ಬದುಕಿನ ಸಹಜ ಏರಿಳಿತಗಳೆಂದು ಸ್ವೀಕರಿಸಬೇಕು.ಅಹಂಕಾರ ಬಿಟ್ಟು ವಿನಯಶೀಲರಾಗಿ ಬಾಳಬೇಕು. ಶರಣರಿಗೆ ಹಣೆಯ ಮೇಲಿನ ವಿಭೂತಿ ಹೇಗೆ ಅಹಂಕಾರದ ನಾಶವನ್ನು ನೆನಪಿಸುತ್ತದೆಯೋ, ಹಾಗೆಯೇ ಇಂದಿನ ಯುವಜನತೆ ತಮಗಿರುವ ಶಿಕ್ಷಣ, ಉದ್ಯೋಗ ಅಥವಾ ಜ್ಞಾನದ ಬಗ್ಗೆ ಅಹಂ ಪಡದೆ, ವಿನಯವಂತರಾಗಿ ಬಾಳುವುದನ್ನು ಕಲಿಯಬೇಕಿದೆ.ಬಾಹ್ಯ ಶೃಂಗಾರವು ವಯಸ್ಸಿನೊಂದಿಗೆ ಕರಗಿಹೋಗುತ್ತದೆ, ಆದರೆ ಅಂತರಂಗದ ಶೃಂಗಾರವಾದ ‘ಮಾನವೀಯತೆ’ ಮತ್ತು ‘ಸತ್ ಚಿಂತನೆ’ ನಮ್ಮನ್ನು ಸಾವಿನ ನಂತರವೂ ಜೀವಂತವಾಗಿರಿಸುತ್ತದೆ. ಬನ್ನಿ, ಕೃತಕ ಮುಖವಾಡಗಳನ್ನು ಕಳಚಿಟ್ಟು, ಬಸವಣ್ಣನವರು ತೋರಿದ ಸಹಜ ಮತ್ತು ಸಾತ್ವಿಕ ಸೌಂದರ್ಯದ ಹಾದಿಯಲ್ಲಿ ಸಾಗೋಣ.ಒಂದು ಶ್ಲೋಕದ ಪ್ರಕಾರ ನೋಡಿದಾಗ…ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾಃ |ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ||ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ |ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ .ಮನುಷ್ಯನಿಗೆ ತೋಳುಬಂದಿ  ಆಭರಣವಲ್ಲ, ಚಂದ್ರನಂತೆ ಹೊಳೆಯುವ ಮುತ್ತಿನ ಹಾರಗಳಾಗಲಿ, ಸುಗಂಧ ದ್ರವ್ಯಗಳ ಲೇಪನವಾಗಲಿ, ಸ್ನಾನವಾಗಲಿ, ತಲೆಗೆ ಮುಡಿಯುವ ಹೂವುಗಳಾಗಲಿ ನಿಜವಾದ ಸೌಂದರ್ಯವನ್ನು ನೀಡುವುದಿಲ್ಲ. ಬದಲಿಗೆ ಸಂಸ್ಕಾರಯುತವಾದ ಮತ್ತು ವಿನಯದಿಂದ ಕೂಡಿ ಆಡುವ ‘ಒಳ್ಳೆಯ ಮಾತು’ ಒಂದೇ ಮನುಷ್ಯನಿಗೆ ಶಾಶ್ವತವಾದ ಆಭರಣ. ಲೋಕದ ಉಳಿದೆಲ್ಲಾ ಭೌತಿಕ ಆಭರಣಗಳು ಕಾಲಕ್ರಮೇಣ ಸವಿದು ಹೋಗುತ್ತವೆ, ಆದರೆ ಒಳ್ಳೆಯ ನಡತೆ ಹಾಗೂ ಮೃದುವಾದ ವಾಗ್ಭೂಷಣ ಮಾತ್ರ ಎಂದಿಗೂ  ಕ್ಷಯಿಸದ ನೈಜ ಶೃಂಗಾರವಾಗಿದೆಹೀಗೆ, ಅಂದಿನಿಂದ ಇಂದಿನವರೆಗೆ ಭಾರತೀಯ ತತ್ವಚಿಂತನೆಯು ಬಾಹ್ಯ ತೋರ್ಪಡಿಕೆಯ ಸೌಂದರ್ಯಕ್ಕಿಂತ ಅಂತರಂಗದ ಗುಣ ಸೌಂದರ್ಯಕ್ಕೇ ಅಗ್ರಸ್ಥಾನ ನೀಡುತ್ತಾ ಬಂದಿದೆ ಎಂಬುದಕ್ಕೆ ಬಸವಣ್ಣನವರ ಈ ವಚನ ಮತ್ತು ಈ ಶ್ಲೋಕವೇ ಅತ್ಯುತ್ತಮ ಸಾಕ್ಷಿ. ಪೂರ್ಣಿಮಾ ಮಹೇಶ ಮುತ್ನಾಳ.ಅಳ್ನಾವರ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ Read Post »

ಇತರೆ, ಜೀವನ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ.

ವಿಶೇಷ ಸಂಗಾತಿ ಡಾ.ಯಲ್ಲಮ್ಮ ಕೆ. “ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಇನ್ನೂ ಗಟ್ಟಿ ಇದ್ಲು ಏನಿಲ್ಲಾಂದ್ರೂ ಎಂಟ್ಹತ್ತು ವರುಷ ಬಾಳು ಸವೆಸಬಹುದಿತ್ತು, ಮೊಮ್ಮಕ್ಕಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸು ಹೊತ್ತಿದ್ದ ಶಿವಮ್ಮ; ಎದ್ದು ಓಡಾಡುವ ತ್ರಾಣ ಇಲ್ಲದಿದ್ದರೂ ಹಣ್ಣ ಹಣ್ಣ ಮುದೇಕಿಯೇನೂ ಆಗಿರಲಿಲ್ಲ, ದೇವರು ತನ್ಮೇಲೆ ಯಾಕೆ ಹಾಕೋತ್ತಾನೆ? ಏನಾದರೂ ಒಂದು ಕುಂಟುನೆಪ ಹೇಳಿ ತನ್ನೆಡೆಗೆ ಕರಕೋತ್ತಾನೆ ಅಷ್ಟೇ ಎಂದು ಅಮ್ಮನ ವಾರಿಗೆಯವ್ರು ಕಣ್ಣೀರು ಹಾಕ್ತಾ ಪಾರ್ಥಿವ ಶರೀರದ ಮುಂದೆ ಕೂತು ಕಣ್ಣೀರ ಮಳೆಗಾರೆಯುತ್ತಿದ್ದರು! ಕಳೆದ ಐದಾರು ವರುಷಗಳ ಹಿಂದೆ ಕಣ್ ಆಪರೇಷನ್ ಮಾಡಿಸಬೇಕು ಅಂತ ಮನೆ ಮಂದಿಯೆಲ್ಲ ಯೋಚಿಸಿದಾಗ ಡಾಕ್ಟರ್ ಸಾರಾಸಗಟಾಗಿ ನಿರಾಕರಿಸಿದ್ದ ಆಪರೇಷನ್ ಮಾಡಿದರೂ ಕಣ್ ಬರೋ ಚಾನ್ಸಸ್ ಬಾಳ ಕಮ್ಮಿ ಅಂತ್ಹೇಳಿ,  ಆಗಲೇ ಆ ವಿಚಾರಕ್ಕೆ ಎಳ್ಳು-ನೀರು ಬಿಟ್ಟಾಗಿತ್ತು. ಕಣ್ಣು ಪುಟ್ಟ ಪೂರಾ ಕಾಣತ್ತಿದ್ದಿಲ್ಲ ಅಂತೇನಿಲ್ಲ ಮಸಗು ಮಸಗು ಆಗಿ ಕಾಣತ್ತಿದ್ದವು ಅಂತಿದ್ಲು. ಅದ್ಯಾವ ವಿಷಗಳಿಯೋ ನಾನರಿಯೆ? ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ ತಪಾಸಣಾ ಶಿಬಿರಕ್ಕೆ ಅದ್ಯಾರೋ ಮಾತು ಕೇಳಿ, ಮತ್ಯಾರನ್ನೋ ಕರಕೊಂಡು ಹೋಗಿ ಬಂದ್ಮೇಲಿಂದ ಒಂದೇ ಹಠ! ಕಣ್ ಬರುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ, ನನಗೆ ಕಣ್ ಆಪರೇಷನ್ ಮಾಡಿಸಿ ಎಂದು; ಅದೂ ಇದೂ ಅಂತ್ಹೇಳಿ ಒಂದು ಮೂರೂ ತಿಂಗಳು ಮುಂದಕ್ಕೆ ತಳ್ಳಿಕೊಂಡು ಹೊಂಟಿದ್ವೀ.., ಅವರಿವರು ಏನಂತಾರೆ? *ಮನೆಯಲ್ಲಿ ದುಡಿದು ತಿನ್ನುವ ಮಕ್ಕಳ್ನಾ ಬಿಡು, ಮಗಳು ನೌಕರಿ ಮಾಡ್ತಾಳ, ಮೊಮ್ಮಗಳು ನೌಕರಿ ಮಾಡ್ತಾಳೆ ಅಷ್ಟೇ ಅಲ್ಲದೇ ಮೊಮ್ಮಗಳ ಗಂಡನೂ ನೌಕರಿ ಮಾಡ್ತಾನೆ ಕಣ್ ಆಪರೇಶನ್ ಮಾಡಿಸೋಕೆ ಏನು? ದುಡ್ಡಿನ ಮಕ ನೋಡ್ತಾರೆ* ಅನ್ನೋ ತಿರಸ್ಕಾರದ ಮಾತುಗಳನ್ನು ಕೇಳಿದ ಮೇಲೂ ಸುಮ್ನೆ ಇರೋದು ಹೇಗೆ ಹೇಳಿ? *ಜೀವ ಮತ್ತು ಜೀವನ ಕೊಟ್ಟ ಅಮ್ಮನಿಗೆ ಕಣ್ ಬಂದ್ರೆ ಎಲ್ಲರಿಗೂ ಖುಷಿ ತಾನೇ* , ಅಮ್ಮನ ಆಸೆ ಮತ್ತು ಹಠಕ್ಕೆ ಸೋತು ಆಪರೇಷನ್ ಸಜ್ಜಾಗೆ, ಪೇಟೆಯ ಮೈಲಾರ ಆಸ್ಪತ್ರೆಗೆ ಹೋಗಿ ಇಡೀ ದಿನ ಕಾದು ತಪಾಸಣೆ ಮುಗಿದಮೇಲೆ ಫಿಟ್ ಇದ್ದಾರೆ, ಬಿ.ಪಿ ನಾರ್ಮಲ್ ಇದೆ, ಆಪರೇಷನ್ ಮಾಡಿ ಲೆನ್ಸ್ ಹಾಕಿದ್ರಾಯ್ತು.., *ನಾಳೆ ಬನ್ನಿ ಎಂದು ಡಾಕ್ಟರ್ ಹೇಳಿ ಕಳಿಸಿದ್ಮೇಲೆ ಲವಲವಿಕೆಯಿಂದ ಇದ್ದ ಅಮ್ಮನ ಮುಖದಲ್ಲಿ ಹೊಸ ಕಳೆ ಬಂದಂತಿತ್ತು!* ಮಾರನೇ ದಿನ ದುಡ್ಡು ಹೊಂದಿಸಿ ಕೊಟ್ಟು ನಾನು ಕೆಲಸಕ್ಕೆ ಹೋದೆ, ಮಗನನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಆದ್ರು, ಹನ್ನೆರೆಡುಗಂಟೆ ಹೊತ್ತಿಗಾಗಲೇ ಆಪರೇಷನ್ ಮುಗಿತು, ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ ಅಂತ ಅಣ್ಣ ಕಾಲ್ ಮಾಡಿ ಹೇಳಿದ್ದ, ಸಾಯಂಕಾಲ ಆರರೊಳಗೆ ಮೂರು- ನಾಲ್ಕು ಬಾರಿ ಕಾಲ್ ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ, ಕೆಲಸ ಮುಗಿಸಿಕೊಂಡು ಬಂದು ಅಮ್ಮನನ್ನು ಕಂಡು ಮಾತನಾಡಿಸಿ ಇಡ್ಲಿ-ಸಾಂಬಾರ್ ತಿನಿಸಿ, ಚಹಾ ಕುಡಿಸಿದೆ, *ಮಸಗು ಕಣ್ಣಿಗ್ಹಾಕಿದ ಲೆನ್ಸ್ ನೊಂದಿಗೆ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಹೆಬ್ಬಯಕೆ ಅಮ್ಮನ ಮೊಗದಿ ಎದ್ದು ಕಾಣುತ್ತಿತ್ತು!* ಅದೇ ಭರವಸೆಯಲ್ಲಿ ಮನೆಗೆ ಬಂದೆ, ಅಮ್ಮನಿಗೆ ತಾನು ಕಣ್ಣಾದ ಬಗೆಗೆ ನೆನೆದು ನೆಮ್ಮದಿಯ ನಿದ್ದೆಗೈದೆ. ಮರುದಿನ ಪರೀಕ್ಷಾ ಕಾರ್ಯ ನಿಮಿತ್ತ ಅಮ್ಮನನ್ನು ಕಾಣದೇ ಕಾಲೇಜಿಗೆ ಹೋದೆ.., ಸಾಂಕಾಲದೊತ್ತಿಗೆ ರಾಘಣ್ಣ ಅಮ್ಮನ ಕಣ್ಪಟ್ಟಿ ತೆಗೆಸಿ, ಕರಿಕನ್ನಡಕ ಹಾಕಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದ, ಮನೆ ತುಂಬೆಲ್ಲಾ ಹೂನಗೆ ಚೆಲ್ಲಿತ್ತು. *ಕಪ್ಪು ಕನ್ನಡಕ ಅಮ್ಮನಿಗೆ ಚಂದವಾಗಿ ಒಪ್ಪಿತ್ತು,* ರಾತ್ರಿ ಗಂಜಿ ಕುಡಿದು, ಗುಳುಗಿ ನುಂಗಿ ಅಮ್ಮ ಮಲಗಿದ್ದಳು. ನಿತ್ಯದ ದಿನಚರಿಯಂತೆ ನಾನೆದ್ದು ರೆಡಿಯಾಗಿ ಕಾಲೇಜಿಗೆ ಹೊರಟು ನಿಂತಿದ್ದೆ, ಇನ್ನೂ ಹಾಸಿಗೆಯಲ್ಲಿ ಮಗ್ಗಲು ಹೊರಳಿಸಿದ್ದ ಅಮ್ಮನನ್ನ ಕಂಡು ಯಾಕೆ ಅಮ್ಮ ಸಪ್ಗಿದ್ದೀಯಾ? ನಿದ್ದೆ ಆಗಿಲ್ವಾ? ಎಂದಿದ್ದಕ್ಕೆ; ಕಣ್ಣು ಸ್ವಲ್ಪ ನೋವಾಗಿದೆ, ಎರಡು ಮೂರು ಬಾರಿ ಭೇದಿ ಆಯ್ತು, ಎದ್ದು ಹೋಗಿ ಬಂದು, ಹೋಗಿ ಬಂದು ಕೈ-ಕಾಲು ಸೋತಂಗಾಗಿದೆ ಅಂದ್ಲು, ಮಗನಿಗೆ ಮೆಡಿಕಲ್ ಶಾಪ್ ನಿಂದ ಒಂದೆರಡು ಭೇದಿ ಗುಳಿಗೆ ತಂದು ಕೊಡು ಅಮ್ಮ ನುಂಗ್ತಾಳೆ, ಆರಾಮ್ ಅನಿಸಿಲ್ಲ ಅಂದ್ರೆ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ಹೇಳಿ ನಾನು ಕಾಲೇಜಿಗೆ ಹೊರಟೆ, ನಾನಿನ್ನೂ ಕಾಲೇಜ್ ಮುಟ್ಟಿದ್ದಿಲ್ಲ.., ನಂತರದ ಬೆಳವಣಿಗೆ ಆಘಾತವನ್ನುಂಟು ಮಾಡಿತ್ತು. ಅಮ್ಮನಿಗೆ ಮತ್ತೆರಡು ಬಾರಿ ಭೇದಿ ಆಯ್ತಂತೆ, ಸುಸ್ತು, ಡಾಕ್ಟರನ್ನು ಕರೆಸಿ ಸೂಜಿ ಹಾಕ್ಸರಿ ಅಂತ ಕೇಳಿದ್ದಾಳೆ, ಮನೆಯಲ್ಲಿ ಅತ್ತಿಗೆ, ರಶ್ಮಿ, ದೀಪಾ, ಶಶಿ, ಮೊಮ್ಮಕ್ಕಳು ಮರಿ ಮೊಮ್ಮಕ್ಕಳಿದ್ದರು, ಅಪ್ಪ, ಅಣ್ಣ ಎಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದರು. ದೈವಿಕ್ [ಮರಿ ಮೊಮ್ಮಗ] ಎದ್ದು ಕೂಡಲೇ ಮನೆಯ ಮುಂದಿನ ಮೆಟ್ಟಿಲ ಮೇಲೆ ಆತನನ್ನು ತೊಡೆಯಮೇಲೆ ಕೂಡಿಸಿಕೊಂಡು ಮುದ್ದು ಮಾಡುತ್ತಾ.., ದಾರಿಗುಂಟ ಹೋಗಿ ಬರೋರನ್ನು ಎದ್ರಾ, ಉಂಡ್ರಾ- ತಿಂದ್ರಾ ಎಂದು ಲೋಕಾಭಿರಾಮವಾಗಿ ಮಾತನಾಡಿಸುತ್ತಾ, ಆಗ್ತಾನೇ ಗೂಡಿನಿಂದ ಹೊರಬಿದ್ದ ಕೋಳಿ-ಮರಿಗಳಿಗೆ ಕಾಳು ಹಾಕುತ್ತಾ ಆಡಿಸುತ್ತಾ ಕೂಡುವುದು ಅಮ್ಮನದು  ನಿತ್ಯದ ದಿನಚರಿ. ಎಂದಿನಂತೆ ಇಂದು ಮೊಮ್ಮಗ ಬಂದು ಅವ್ವ ಅವ್ವ ಎಂದು ಕರೆದಾಗ ದೈವಿಕ್ ಇವತ್ತು ನನ್ನ ಕರಿಬೇಡಪ್ಪಾ..,   ನನ ಹತ್ತಿರ ಬರಬೇಡಪ್ಪಾ.., ಹೋಗು ಎಂದು ತನ್ನೊಳಗಿನ ಚಡಪಡಿಕೆ, ದುಃಖದಿಂದ ಗದರಿಸಿದಳೋ ಏನೋ? ಅವನು ಅಳುತ್ತಾ ಬಂದವನು ಮತ್ತೆ ಅವ್ವ ಎನ್ನಲಿಲ್ಲ. ಪಕ್ಕದ ಮನೆಯವರು ಎದುರಿನ ಮನೆಯ ಕುಮಾರಸ್ವಾಮಿ ಅಣ್ಣ, ಆತನ ಮಗ ಕಾರ್ತಿಕ್ ಓಡಿ ಬಂದಿದ್ದಾರೆ, ಲೋಕಲ್ [ಆರ್.ಎಮ್.ಪಿ] ಡಾಕ್ಟರ್ ನ ಕರೆಸಿ ಒಂದು ಇಂಜೆಕ್ಷನ್ ಮಾಡಿಸಿದ್ದಾರೆ, ಅಮ್ಮ ಸುಸ್ತಾಗಿ ಮಲಗ್ಬಿಟ್ಟಿದ್ದಾಳೆ, *ಮೈ-ಕೈ ಎಲ್ಲಾ ತಣ್ಣಗಾಗಿದ್ದನ್ನು ಕಂಡು ಅತ್ತಿಗೆ ಒಲಿಬೂದಿ ತಂದು ಕೈಕಾಲಿಗೆ ತಿಕ್ಕಿದ್ದಾಳೆ,*  ತಡಮಾಡದೆ.., ಕೂಡಲೇ ಆಟೋ ಬಾಡಿಗೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ, *ಆಸ್ಪತ್ರೆಯ ಆವರಣದಲ್ಲಿ ಡಾಕ್ಟರ್ ಓಡಿ ಬಂದು ಚೆಕ್ ಮಾಡಿ ಅಮ್ಮ ಇನ್ನಿಲ್ಲ* ಎಂದು ದೃಢೀಕರಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಕಾಲೇಜಿಂದ ಹೊರಬಿದ್ದೆ ಮನೆಗೆ ಬಂದು ಸೇರುವಷ್ಟರಲ್ಲಿ ಒಂದು ಗಂಟೆ ಆಗಿತ್ತು, ಮನೆಯ ಮುಂದೆ ಪೆಂಡಾಲ್ ಹಾಕಿ, ಚಪ್ಪರದಡಿಯಲ್ಲಿ ಮಂಚದ ಮೇಲೆ ಹೊಸ ಸೀರೆ ತೊಟ್ಟು ಮಂದಹಾಸದಿ ಮಲಗಿದ್ದ ಅಮ್ಮನ ಮುಖದಲ್ಲಿ ಚೆಲುವಿತ್ತು!  ಅಮ್ಮನ ಬಳಗ ಅಪ್ಪನ ಬಳಗ, ಬಂಧು-ಬಳಗ ಆಗಲೇ ನೆರದಿತ್ತು, ಅವರುಗಳು ತಂದ ಹೂಮಾಲೆಗಳು ರಾಶಿ ರಾಶಿ ಅಮ್ಮನ ಮೇಲೆ ಬಿದ್ದಿತ್ತು, ಅಮ್ಮನ ಜಾತ್ರೆಗೆ ತೇರು ಸಿದ್ದಗೊಂಡಿತ್ತು.., ಮಂತ್ರ ಘೋಷ, ಸನಾಯಿ ನಾಧಾ ಮೊಳಗುತ್ತಲೇ  ಅಮ್ಮನ ತೇರು ಮುಂದೆ ಮುಂದೆ ಸಾಗಿದರೆ ನಾವು ಅವರತ್ತ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ಹಿಂದೆ ಹಿಂದೆ ಸಾಗಿದೆವು ಮಸಣದ ಕಡೆಗೆ.., *ಅಮ್ಮನ ಸಿದಿಗೆ ಹೊತ್ತವರು ಹೆಗಲು ಬದಲಿಸುತ್ತಾ.., ಅಮ್ಮನಿಗೆ ನೋವಾಗದಿರಲೆಂದು ನಿಧಾನ ಹೆಜ್ಜೆ ಹಾಕುತ್ತಾ ಸಾಗಿ* ಕುಣಿಯ ತಲುಪಿ ಅಲ್ಲಿ ಅಮ್ಮನಿಗೆ ಕಡೆಯದಾಗಿ ಬಾಯಿಗೆ ನೀರು ಬಿಟ್ಟು, ಅಂತಿಮ ಪೂಜೆ-ಪುನಸ್ಕಾರ ಮಾಡಿ ಕೈ ಮುಗಿದು ನಿಂತೆವು..,  *”ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿ ತಿಳಿನೀರು, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಕಂದಮ್ನ ಪಾದದ ಧೂಳ ತೊಳದೇನ”* ಎಂಬ ಅಮ್ಮನ ಜೋಗುಳ ಕೇಳಿ ಮಲಗಿದ *ಮಕ್ಕಳೆಲ್ಲರೂ ಸೇರಿ ಅಮ್ಮನನ್ನು ಗುಂಡಿಯಲಿಟ್ಟು ಮಣ್ಣುಗೂಡಿಸಿ ಬರುವಾಗ ಕರುಳು ಕಿತ್ತು ಬಾಯ್ಗೆ ಬಂದಂತಾಯ್ತು,* ಅಮ್ಮ ಪಾಪ ಅದೆಷ್ಟು ನೊಂದುಕೊಂಡಳೋ..? ಒಬ್ಬಂಟಿಯಾಗಿ ಹೋದಳು, ಕುಣಿ ಮುಂದೆ ನಿಂತುಕೊಂಡು ಮಾದಿಗರ ಚಂದಪ್ಪ.., ಮಸಣದಿ ನೆರೆದ ಜನಸ್ತೋಮದೆದಿರು ಸಲಿಕೆಗೆ ಒಂದು ನಾಣ್ಯದಿಂದ ಗಂಟೆಯಂತೆ ಭಾರಿಸುತ್ತ – *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* ಎಂದು ಮೂರೂ ಬಾರಿ ಸಾರಿದ ಮೇಲೆ; ಅಮ್ಮನ ಅಗಲಿಕೆಯು ಕಣ್ಣು ಕಳೆದುಕೊಂಡ ಕುರುಡರಾದಂತಹ ಅನುಭವ, ಅಕ್ಷರಶಃ ನನ್ನನ್ನು ಅನಾಥಳನ್ನಾಗಿಸಿ ಹೊರಟೆ ಬಿಟ್ಟಳು ಬಾರದ ಲೋಕಕ್ಕೆ, *ಸಗ್ಗದ ಸಿರಿ-ಸೀಮೆಯ, ಸೊಬಗ ಸವಿಯಲು ತನ್ನೆರೆಡು ಕಣ್ಗಳು ಸಾಲದೆಂದು ಲೆನ್ಸ್ ಹಾಕಿಸಿಕೊಂಡು ಹೋದ ಅಮ್ಮ ಮತ್ತೆ ಎಂದಿಗೂ ಬಾರಳು, ಆದರೆ ಅಲ್ಲಿ ಕಂಡುಂಡ ಅನುಭವಗಳನ್ನು ಅಮ್ಮ ಚಿತ್ತದಿ ದಾಖಲಿಸಿಕೊಂಡು ಮರೆಯದೆ ನನಗೆ ಟಪಾಲು ಬರೆದು ಕಳುಹಿಸಬಹುದು* ಎಂದು ಆಸೆಗಣ್ಣಲಿ ಅಂಚೆಯಣ್ಣನ ದಾರಿ ಕಾಯುತ್ತಿರುವೆ. ನನ್ನ ತಂಗಿ, ಮಗ, ಮಗಳು ಆಡ್ಯಾಡಿಕೊಂಡು ಅತ್ತು ಹಗುರಾದರು, ನೆರೆದವರು ಏನೆಂದುಕೊಂಡರೋ ಏನೋ? ನನ್ನ ಬಗ್ಗೆ ನನಗೆ ಅಳಲು ಬಾರದು, ಕಣ್ಣೀರು ತನ್ತಾನೇ ಸುಮ್ಮನೆ ತಣ್ಣಗೆ ಸುರಿವ ಜಿಟಿ ಜಿಟಿ ಮಳೆಯಂತೆ ಜಿನುಗುಟ್ಟುತ್ತಿತ್ತಿ.., *ಅವ್ಯಕ್ತ ಭಾವನೆಗಳನ್ನು ಹತ್ತಿಕ್ಕಲಾಗದೆ.., ಬರೆದು ಹಗುರ ಆಗೋಣವೆಂದುಕೊಂಡು.., ಒಂದೇ ಉಸಿರಿನಲ್ಲಿ ಬರೆದೆ..,* ನನ್ನ ಬರಹವನ್ನು ಮತ್ತೆ ಮತ್ತೆ ನಾನೇ ಮನಸಿನಲ್ಲಿ ಓದಿಕೊಂಡಂತೆಲ್ಲ; ನನ್ನ ಮನ‌ಸಿನ ನೋವೇ ಅಕ್ಷರ ರೂಪು ಪಡೆದಿವೆಅನ್ನುವಷ್ಟರ ಮಟ್ಟಿಗೆ ಮೂಡಿಬಂದಿದೆ ಎನಿಸಿ *ಅಳು ಜುಳು-ಜುಳು ದಳಿ-ದಳಿ  ಹರಿಯುತ್ತಿತ್ತು.*  *ಅಮ್ಮ ಕನಸಿನಲ್ಲಿ ಬರಬಹುದೂ, ತನ್ನ ಸಾವಿಗೂ ಮುನ್ನ ಅನುಭವಿಸಿದ ಚಡಪಡಿಕೆಯನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು  ಎನ್ನುವ ನಿರೀಕ್ಷೆಯಲ್ಲಿ ಮಲಗಿದ್ದೇ,* ಅಮ್ಮ ತನ್ನ ಏನೊಂದೂ ಕಷ್ಟ ಹೇಳಿಕೊಳ್ಳದೆ ಪಕ್ಕದಿ ಕೂತು ತಲೆ ನೇವರಿಸುತ್ತಾ ಜೋಗುಳ ಹಾಡುತ್ತಿದ್ದಳು ನಾನು ಹಸುಗಂದಮ್ಮನಂತೆ ನಿದ್ದೆಗೆ ಜಾರಿದೆ. ಡಾ. ಯಲ್ಲಮ್ಮ ಕೆ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ. Read Post »

ಜೀವನ

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್

ಸಂಬಂಧಗಳ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಸಂಬಂಧಗಳನ್ನು ಕಟ್ಟುವುದು ಪ್ರೀತಿಯಿಂದ, ಆದರೆ ಅವನ್ನು ಉಳಿಸುವುದು ನಂಬಿಕೆಯಿಂದ. ಪ್ರೀತಿ ಎಷ್ಟೇ ಆಳವಾಗಿದ್ದರೂ, ಒಂದು ಕ್ಷಣದ ಅನುಮಾನ ಅದರ ಬೇರುಗಳನ್ನು ಅಲ್ಲಾಡಿಸಬಲ್ಲದು. ಕೆಲವೊಮ್ಮೆ ತಪ್ಪು ನಡೆದಿರಲೂಬಹುದು, ಕೆಲವೊಮ್ಮೆ ತಪ್ಪೇ ಇರದೇ ಇರಬಹುದು. ಆದರೆ ಒಮ್ಮೆ ಮನಸ್ಸಿನಲ್ಲಿ ಅನುಮಾನದ ಬೀಜ ಬಿದ್ದರೆ, ಅದು ನಿಧಾನವಾಗಿ ಸಂಬಂಧದ ಪ್ರತಿಯೊಂದು ಕೊಂಬೆಯನ್ನೂ ಒಣಗಿಸಲು ಆರಂಭಿಸುತ್ತದೆ. ಜೀವಂತವಾಗಿರುವ ಮನುಷ್ಯನನ್ನು ಸತ್ತವನಂತೆ ಮಾಡುವ ಶಕ್ತಿ ಕತ್ತಿಗೆ ಇಲ್ಲ; ಅನುಮಾನಕ್ಕೆ ಇದೆ. ದೇಹ ಉಸಿರಾಡುತ್ತಿರಬಹುದು, ಆದರೆ ಮನಸ್ಸು ಪ್ರತಿದಿನ ಸಾಯುತ್ತಿರುತ್ತದೆ. ಒಮ್ಮೆ ಕಳೆದುಹೋದ ನಂಬಿಕೆಯನ್ನು ಮರಳಿ ಕಟ್ಟುವುದು ಮನೆ ಕಟ್ಟುವುದಕ್ಕಿಂತ ಕಷ್ಟ. ಒಡೆದ ಗಾಜನ್ನು ಅಂಟಿಸಬಹುದು, ಆದರೆ ಅದರ ಬಿರುಕು ಎಂದಿಗೂ ಕಾಣದಂತೆ ಮಾಡಲಾಗುವುದಿಲ್ಲ. ಅದೇ ರೀತಿ ಒಡೆದ ವಿಶ್ವಾಸ ಮತ್ತೆ ಹುಟ್ಟಿದರೂ, ಅದರ ಗಾಯದ ಗುರುತು ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿಯೊಬ್ಬ ಮನುಷ್ಯನೂ ತಪ್ಪು ಮಾಡಬಹುದು. ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಒಮ್ಮೆ ನಡೆದ ತಪ್ಪನ್ನು ಜೀವಮಾನವಿಡೀ ಹಿಡಿದುಕೊಂಡು ಪ್ರತಿದಿನ ಅವಮಾನಿಸುವುದು, ಮಾತಿನ ಮೂಲಕ ಕಿರುಕುಳ ಕೊಡುವುದು, ಕುಟುಂಬದವರನ್ನೂ ಕೀಳಾಗಿ ಕಾಣುವುದು ನ್ಯಾಯವಲ್ಲ. ಕ್ಷಮೆ ಎನ್ನುವುದು ತಪ್ಪನ್ನು ಮರೆತಂತೆ ಅಲ್ಲ; ಮತ್ತೊಬ್ಬರ ಮಾನವೀಯತೆಯನ್ನು ಗೌರವಿಸಿದಂತೆ. ಮಾತುಗಳಿಗೆ ಗಾಯಗೊಳಿಸುವ ಶಕ್ತಿ ಇದೆ. ಕತ್ತಿಯಿಂದ ಆದ ಗಾಯಕ್ಕೆ ಔಷಧ ಸಿಗುತ್ತದೆ. ಆದರೆ ಮಾತಿನಿಂದ ಆದ ಗಾಯಕ್ಕೆ ಔಷಧವೇ ಇರುವುದಿಲ್ಲ. ಕೆಲವರು ಒಂದು ದಿನ ಅತ್ತು ಮರೆತುಬಿಡುತ್ತಾರೆ. ಆದರೆ ಇನ್ನೂ ಕೆಲವರು ಪ್ರತಿದಿನ ನಗುವ ಮುಖವಾಡ ಧರಿಸಿ ಬದುಕುತ್ತಾರೆ. ಹೊರಗೆ ನಗುವರು, ಒಳಗೆ ಮಾತ್ರ ಸಾವಿರ ಬಾರಿ ಮುರಿಯುತ್ತಾರೆ. ಆ ನಗುವಿನ ಹಿಂದೆ ಎಷ್ಟು ಕಣ್ಣೀರು, ಎಷ್ಟು ಮೌನ, ಎಷ್ಟು ನೋವು ಅಡಗಿದೆ ಎಂಬುದು ಯಾರಿಗೂ ಕಾಣುವುದಿಲ್ಲ. ಸಂಸಾರವೆಂದರೆ ಇಬ್ಬರು ಮನುಷ್ಯರ ಒಪ್ಪಂದವಲ್ಲ; ಅದು ಎರಡು ಹೃದಯಗಳ ಜವಾಬ್ದಾರಿ. ಅಲ್ಲಿ ಗಂಡನಿಗೂ ಗೌರವ ಬೇಕು, ಹೆಂಡತಿಗೂ ಗೌರವ ಬೇಕು. ಇಬ್ಬರಿಗೂ ತಮ್ಮ ಭಾವನೆ ಹೇಳುವ ಹಕ್ಕು ಇದೆ. ಇಬ್ಬರಿಗೂ ಸ್ವಾತಂತ್ರ್ಯ ಇದೆ. ಯಾರನ್ನೂ ಸದಾ ಅನುಮಾನದಿಂದ ನೋಡುತ್ತಾ, ಅವರ ವ್ಯಕ್ತಿತ್ವವನ್ನು ಕುಗ್ಗಿಸುತ್ತಾ ಬದುಕಿಸುವುದು ಸಂಬಂಧವಲ್ಲ; ಅದು ಮನಸ್ಸಿನ ಬಂಧನ. ಒಮ್ಮೆ ಕಳೆದುಕೊಂಡ ನಂಬಿಕೆ ಮರಳಿ ಬರಬಹುದು. ಆದರೆ ಅದಕ್ಕೆ ಸಮಯ, ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ನಿಜವಾದ ಬದಲಾವಣೆ ಬೇಕು. ಪ್ರತಿದಿನ ಹಳೆಯ ಗಾಯವನ್ನು ಕೆದಕುತ್ತಾ ಹೋದರೆ ಅದು ಎಂದಿಗೂ ಮಾಯವಾಗುವುದಿಲ್ಲ. ಗಾಯ ಗುಣವಾಗಬೇಕಾದರೆ ಅದನ್ನು ಮರುಮರು ಹರಿಯಬಿಡಬಾರದು. ಮಕ್ಕಳು ಮನೆಯ ಗೋಡೆಗಳನ್ನು ಮಾತ್ರ ನೋಡುವುದಿಲ್ಲ; ತಂದೆ-ತಾಯಿಯ ಮಾತುಗಳನ್ನು, ವರ್ತನೆಯನ್ನು, ಪರಸ್ಪರ ಗೌರವವನ್ನು ನೋಡಿ ಬದುಕು ಕಲಿಯುತ್ತಾರೆ. ಪ್ರೀತಿಗಿಂತ ಹೆಚ್ಚು ಅವರಿಗೆ ಬೇಕಾಗಿರುವುದು ಸುರಕ್ಷಿತವಾದ ವಾತಾವರಣ. ಪ್ರತಿದಿನ ಜಗಳ, ಅನುಮಾನ, ಅವಮಾನ ಇರುವ ಮನೆಯಲ್ಲಿ ಬೆಳೆದ ಮನಸ್ಸು ನಿಧಾನವಾಗಿ ತನ್ನ ನಗುವನ್ನೇ ಕಳೆದುಕೊಳ್ಳುತ್ತದೆ. ಕೆಲವು ನೋವುಗಳು ಕಾಲದೊಂದಿಗೆ ಮಾಸುತ್ತವೆ. ಆದರೆ ಕೆಲವು ನೋವುಗಳು ಪ್ರತಿದಿನ ಜೀವಂತವಾಗಿಯೇ ಉಳಿಯುತ್ತವೆ. ಅವು ಕಣ್ಣಿಗೆ ಕಾಣುವುದಿಲ್ಲ, ಆದರೆ ಹೃದಯವನ್ನು ನಿಧಾನವಾಗಿ ಕರಗಿಸುತ್ತವೆ. ಅದಕ್ಕಾಗಿಯೇ ಸಂಬಂಧದಲ್ಲಿ ಗೆಲ್ಲುವುದು ಮುಖ್ಯವಲ್ಲ; ಒಬ್ಬರ ಮನಸ್ಸನ್ನು ಮತ್ತೊಬ್ಬರು ಕಾಪಾಡುವುದು ಮುಖ್ಯ. ಒಳ್ಳೆಯ ವ್ಯಕ್ತಿ ಎಂದರೆ ಎಂದಿಗೂ ತಪ್ಪು ಮಾಡದವನು ಅಲ್ಲ. ತನ್ನ ತಪ್ಪನ್ನು ಅರಿತು ತಿದ್ದಿಕೊಳ್ಳುವವನು, ಎದುರಾಳಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವವನು, ಕ್ಷಮೆ ಕೇಳಬೇಕಾದಲ್ಲಿ ಕೇಳುವವನು, ಕ್ಷಮಿಸಬೇಕಾದಲ್ಲಿ ಕ್ಷಮಿಸುವವನು. ಜೀವನದ ಕೊನೆಯಲ್ಲಿ ಜನರು ನೆನಪಿಡುವುದು ಯಾರು ಗೆದ್ದರು ಎಂಬುದಲ್ಲ. ಯಾರು ಪ್ರೀತಿಸಿದರು, ಯಾರು ಕಾಪಾಡಿದರು, ಯಾರು ಕಣ್ಣೀರನ್ನು ಒರೆಸಿದರು ಎಂಬುದನ್ನು. ನಂಬಿಕೆ ಇದ್ದರೆ ಸಂಬಂಧಗಳು ಅರಳುತ್ತವೆ.ಗೌರವ ಇದ್ದರೆ ಸಂಸಾರ ಉಳಿಯುತ್ತದೆ.ಕ್ಷಮೆ ಇದ್ದರೆ ಗಾಯಗಳು ಗುಣವಾಗುತ್ತವೆ.ಪ್ರೀತಿ ಇದ್ದರೆ ಜೀವನ ಸುಂದರವಾಗುತ್ತದೆ.*ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಭಾವನೆಗಳಿವೆ, ತನ್ನ ಕನಸುಗಳಿವೆ, ತನ್ನ ಗೌರವವಿದೆ, ತನ್ನ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆ ಗೌರವವನ್ನು ಕಾಪಾಡಿದಾಗ ಮಾತ್ರ ಯಾವುದೇ ಸಂಬಂಧ ನಿಜವಾದ “ಸರಿಯಾದ ವ್ಯಕ್ತಿ”ಯ ಸಂಬಂಧವಾಗುತ್ತದೆ.* ಕೆ.ಎಂ. ಕಾವ್ಯ ಪ್ರಸಾದ್

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್ Read Post »

ಇತರೆ

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು

ಗ್ರಂಥಾಲಯ ಸಂಗಾತಿ ಗೊರೂರು ಅನಂತರಾಜು “ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗ್ರಂಥಾಲಯ ಪರಿಕಲ್ಪನೆ ರಾಜಕೇಂದ್ರಿತವಾಗಿತ್ತು ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್: ಡಾ. ಕುಶಾಲ್ ಬರಗೂರು ಗ್ರಂಥಾಲಯದ ಚಾರಿತ್ರಿಕ ಪರಿಕಲ್ಪನೆ ನಗರ ಕೇಂದ್ರಿತವಾದದ್ದು, ರಾಜ ಪ್ರಣೀತವಾದದ್ದಾಗಿತ್ತು. ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಕನ್ನಡ ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ತಿಳಿಸಿದರು. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ, ಹಾಸನ ಜಿಲ್ಲೆ  ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಡಾ.ಬಿ.ಡಿ.ಕುಮಾರ್, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬಾಗೇಶಪುರ ಗುಡ್ಡದಮನೆ ಇಲ್ಲಿ ಏರ್ಪಡಿಸಿ ಪ್ರಾಸ್ತವಿಕವಾಗಿ ಅವರು ಮಾತನಾಡುತ್ತಿದ್ದರು.  ನಗರದಲ್ಲಿ ಇದ್ದದ್ದನ್ನು ತಮ್ಮ ಮನೆಯಲ್ಲೆ ಗ್ರಂಥಾಲಯ ಮಾಡಿ, ಮನೆಯನ್ನೆ ಜ್ಞಾನಕೇಂದ್ರ ಮಾಡಿ, ರಾಜಗೃಹ ಎಂದು ಹೆಸರಿಟ್ಟ ಪ್ರಥಮ ಜ್ಞಾನಿ. ಆ ದಾರಿಯ ಹಾದಿ ಹಿಡಿದವರು ಡಾ. ಬಿ.ಡಿ.ಕುಮಾರ್  ತಮ್ಮ ಮನೆಯನ್ನು ಹಳ್ಳಿಗಾಡಿನಲ್ಲಿ ಮಾಡಿ ಅದನ್ನು ಸಾಹಿತ್ಯ ಚರ್ಚಾ ಕ್ಷೇತ್ರವನ್ನಾಗಿ ಮಾಡಿರುವರು. ಕ್ಷೇತ್ರಕಾರ್ಯ ಸಂಶೋಧಕರಾಗಿ ನಾನಾ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಸಂಗ್ರಹಿಸಿಟ್ಟಿದ್ದಾರೆ.  ಇದು ಕನ್ನಡ ಸಾಹಿತ್ಯ ಸಂಶೋಧಕರಿಗೆ ಆಧಾರ ಮಾಹಿತಿ ಕೇಂದ್ರವಾಗಿದೆ. ಅಂದು ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಪಾದಿಸಿದಂತೆ, ಹಲಸಂಗಿ ಗೆಳೆಯರು, ಜೀ.ಶಂ.ಪ, ಕ್ಯಾತನಹಳ್ಳಿ ರಾಮಣ್ಣ, ಪಿ.ಕೆ.ರಾಜಶೇಖರ್ ಮುಂತಾದವರು  ಜಾನಪದ ಕ್ಷೇತ್ರ ಕಾರ್ಯ ಮಾಡಿದಂತೆ   ಕುಮಾರ್ ತಮ್ಮ ಮನೆಯನ್ನು ಮಾಹಿತಿ ಕಣಜ ಮಾಡಿದ್ದಾರೆ. ಇದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮಾದರಿ  ಪ್ರೇರಣಿಯೂ ಹೌದು.  ಇಲ್ಲಿ 18,000 ಪುಸ್ತಕ, ಪತ್ರಿಕೆ, ಸಂಚಿಕೆ, ಹಸ್ತಪ್ರತಿ ಇನ್ನಿತರೆ ಸಾಹಿತ್ಯ ಗ್ರಂಥಗಳಿವೆ ಎನ್ನುತ್ತಾರೆ.  ಇಂತಹ ಶೋಧನಾ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ಮಾನಸ ಮತ್ತು ಅವರ ಜೊತೆಗೂಡಿ  ಪ್ರಾಧಿಕಾರ ಸದಸ್ಯರು   ಮಾಡುತ್ತಿರುವರು.  ಈ ಕಾರ್ಯಕ್ರಮ ಈಗ  ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ, ಪಾಶ್ಚಿಮಾತ್ಯ ರಾಷ್ಟ್ರಗಳ ಗಮನವನ್ನು  ಸೆಳೆದಿದೆ ಎಂದರು.ಡಾ.ಬಿ.ಡಿ.ಕುಮಾರ್ ಅವರು ಸಂಗ್ರಹಿಸಿ ಕಾಪಾಡಿಟ್ಟಿರುವ ತಾಳೆಗರಿ ಗ್ರಂಥ ರಾಮಾಯಣ ಕಟ್ಟುಗಳ ಕಟ್ಟು ಬಿಚ್ಚಿ  ಉದ್ಘಾಟನಾ ಭಾಷಣ  ಮಾಡಿದ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ತಾವು ಕನ್ನಡ ಪುಸ್ತಕ ಪ್ರಾಧಿಕಾರದ 10ನೇ ಅಧ್ಯಕ್ಷರು. ಮೊದಲನೇ ಅಧ್ಯಕ್ಷರು   ಎಲ್.ಎನ್. ಶೇಷಗಿರಿರಾವ್ ಅವರು.  ಅಂದಿನಿಂದ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಪುಸ್ತಕ ಪ್ರಕಾಶಕರು, ಮುದ್ರಕರನ್ನುಪ್ರೋತ್ಸಾಹಿಸಲು ಪುಸ್ತಕ ಸೊಗಸು ಪ್ರಶಸ್ತಿ, ನಗದು ಬಹುಮಾನ ಯೋಜನೆ ಇದೆ.  ಪುಸ್ತಕ ಓದುಗರನ್ನು ಗುರುತಿಸಿ ಪ್ರೋತ್ಸಾಹಿಸಲು ವಲಯವಾರು    ನಾಲ್ಕು ಪ್ರಶಸ್ತಿಗಳನ್ನು 25000 ನಗದು ಬಹುಮಾನ ನೀಡಲಾಗುವುದು ಎಂದರು.  ಡಾ. ಬಿ ಡಿ. ಕುಮಾರ್ ಅವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಪುಸ್ತಕದ ಸಂಪಾದಕರು ಹಾಗೂ ಕನ್ನಡ ಪ್ರಾಧ್ಯಾಪಕರು ಡಾ. ಹರೀಶ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಸೀಕೆರೆ ಕೃತಿ ಪರಿಚಯಿಸಿ ಮಾತನಾಡಿ ಕುಮಾರ್  ಅವರು ಅರಸೀಕೆರೆಯಲ್ಲಿ ಬಹು ಧೀರ್ಘಕಾಲ  ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ, ಕಲಾವಿದರಾಗಿ ದೆಹಲಿಯಲ್ಲಿ ಜನಪದ ಕಾರ್ಯಕ್ರಮ ನೀಡಿ ಬಂದಿದ್ದಾರೆ. ಪ್ರಗತಿಪರ  ಕೃಷಿಕರಾಗಿ ಹಳ್ಳಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ,  ಇವರ ಜೀವನಶೈಲಿ ಇಂದಿನ ಸಮಾಜಕ್ಕೆ ಮಾದರಿ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಅನಂತರಾಜು     ಬಾರೆ ನೆಲದಲ್ಲಿ ಗುಡ್ಡದ ಮನೆ  ಮಾಡಿ, ಉತ್ತು ಭಿತ್ತಿ ಹಸನಾದ, ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿರುವ ಪ್ರಗತಿಶೀಲ ಕುಮಾರ್ ಅವರ ತೋಟದ ಮನೆ, ಪ್ರಾಚೀನ ತಾಳೆಗರಿ, ಹಳೆಯ ಬೆಲೆ ಬಾಳುವ ಮೌಲ್ಯಯುತ ಪುಸ್ತಕಗಳ ಸಂಗ್ರಹ ಸಂರಕ್ಷಣೆ ನೋಡುತ್ತಿದ್ದರೆ ಬಂಗಾರದ ಮನುಷ್ಯ ಚಿತ್ರ ನನಗೆ ನೆನಪಾಗುತ್ತದೆ. ಈ ಗ್ರಂಥಾಲಯವನ್ನು ಸಂರಕ್ಷಿಸುವುದು ಅಗತ್ಯವಾಗಿದೆ.  ಇದು ಕನ್ನಡ ಸಂಶೋಧಕ ವಿದ್ಯಾರ್ಥಿಗಳಿಗೆ,  ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಬೇಕಿದೆ. ಈ ದಿಶೆಯಲ್ಲಿ, ಸಂಘ ಸಂಸ್ಥೆಗಳು ಅವರಿಗೆ ಸಹಕರಿಸಿ ನೆರವಾಗಬೇಕಿದೆ ಎಂದರು.  ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಡಾ. ಬರಾಳು ಶಿವರಾಮ ಚನ್ನರಾಯಪಟ್ಟಣ,  ಸುಂದರೇಶ್ ಡಿ ಉಡುವಾರೆ, ರೈತ ಹೋರಾಟಗಾರರು ಮನೋಹರ್ ಪಾಟೀಲ್, ತಿಪಟೂರು, ಕವಿ ಎನ್.ಎಲ್. ಚನ್ನೇಗೌಡ, ಕೊಬ್ಬರಿ ಕೆತ್ತನೆ  ಕಲಾವಿದರು ಅರಸೀಕೆರೆ ಹರೀಶ್ ಕುಮಾರ್, ಹರ್ಷ ಇದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ  ಕುಮಾರ್  ದಂಪತಿಗಳನ್ನು  ಶಾಲು ಓದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಡಾ.ಬಿ.ಡಿ..ಕುಮಾರ್ ಜನಪದ ಗೀತೆ ಹಾಡಿ ಪ್ರಾರ್ಥಿಸಿದರು. ಗೊರೂರು ಅನಂತರಾಜು

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು Read Post »

ಇತರೆ

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ  “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ  ಗೃಹಿಣಿ…. ಅಯ್ಯೋ ಈ ಮನೆ ಕೆಲಸ ಮುಗಿಯೋದೇ ಇಲ್ಲ ಇದರ ಮೇಲೆ ಮಕ್ಕಳು ಗಂಡ ಹೇಳಿದ್ದನ್ನೆಲ್ಲ ಮಾಡಿ ಹಾಕಬೇಕು. ಅತ್ತೆ ಮಾವನ ಕಾಳಜಿ ಮಾಡಬೇಕು. ನನ್ನ ಬದುಕು ಪೂರ್ತಿ ಗಂಡ ಮನೆ ಮಕ್ಕಳು ಅಂತ ಅವರ ಸುತ್ತಲೇ ಸುತ್ತುತ್ತದೆ ಅಂತ ಅನಿಸುತ್ತದೆ ನನಗೋಸ್ಕರ ಒಂದಷ್ಟು ಟೈಮ್ ಮಾಡ್ಕೋಬೇಕು  ನಾನು ಕೂಡ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನೋ ಆಸೆ ನನಗೂ ಇದೆ ಆದರೆ ಏನು ಮಾಡೋದು ? ಯಾವುದೂ ಆಗ್ತಾ ಇಲ್ಲ…. ಪಕ್ಕದ ಮನೆಯ ಲೀಲಾ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಾಳೆ ದೊಡ್ಡ ಸಂಬಳ ಬರದೇ ಇರಬಹುದು, ನಿಜ ಆದರೆ ಆಕೆ ಪ್ರತಿದಿನ ಸಮಯಕ್ಕೆ ಸರಿಯಾಗಿ ತಯಾರಾಗಿ ಶಾಲೆಗೆ ಹೋಗುವಾಗ ಆಕೆಯ ಮುಖದಲ್ಲಿರುವ ಸಂತಸ ಹೆಮ್ಮೆ ನೋಡಿದರೆ ನನಗೆ ಖುಷಿಯಾಗುತ್ತೆ. ಕೆಲಸ ಜೊತೆ ಕೆಲಸ ಆಯ್ತು ಶಾಲೆಯಲ್ಲಿ ನಡೆಯೋ ಎಲ್ಲಾ ಆಕ್ಟಿವಿಟೀಸ್ ಗಳಲ್ಲಿ ಅವರು ಪಾರ್ಟಿಸಿಪೇಟ್ ಮಾಡ್ತಾರೆ ಜನರ ಜೊತೆ ಸಂಪರ್ಕ ಇರುತ್ತೆ. ಮಕ್ಕಳ ಜೊತೆ ನಕ್ಕು ನಲೀತಾರೆ ಜೊತೆಗೆ ಒಂದಷ್ಟು ಪಾಕೆಟ್ ಮನಿ ರೀತಿಯಲ್ಲಿ ಹಣ ಕೂಡ ಸಂಪಾದಿಸುತ್ತಾರೆ.ತಾವು ಖರೀದಿಸಿದ ಬಟ್ಟೆಗಳನ್ನ, ಒಡವೆಗಳನ್ನ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋತಾರೆ. ಶಾಲೆಯಲ್ಲಿ ಮಕ್ಕಳೊಟ್ಟಿಗೆ, ನಂತರ ಸಹೋದ್ಯೋಗಿಗಳೊಂದಿಗೆ ವಿವಿಧ ಬಗೆಯ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ತಾರೆ ಪ್ರವಾಸ ಹೋಗ್ತಾರೆ, ಬದುಕನ್ನ ಪರಿಪೂರ್ಣವಾಗಿ ಎಂಜಾಯ್ ಮಾಡ್ತಾರೆ….  ಒಟ್ಟಿನಲ್ಲಿ ನೆಮ್ಮದಿಯ ಬದುಕು ಅವರದು.ಲೀಲಾ ಟೀಚರ್…. ಅಯ್ಯೋ ನಮ್ಮನೆಯವರು ಚೆನ್ನಾಗಿ ದುಡಿತಾ ಇದ್ರೆ, ನಾನ್ ಯಾಕ್ರೀ ಈ ಚಾಕರಿಗೆ ಬರ್ತಾ ಇದ್ದೆ. ಮನೆಯಲ್ಲಿ ಒಂದು ಇದ್ದರೆ ಒಂದು ಇರಲ್ಲ… ಆರ್ಥಿಕವಾಗಿ ಅನುಕೂಲ ಇದ್ರೆ ಎಲ್ಲವೂ ಚೆನ್ನ. ಅದಕ್ಕೆ ಅದೆಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ಈ ಕೆಲಸಕ್ಕೆ ಸೇರಿಕೊಂಡಿದೀನಿ. ತಕ್ಕಮಟ್ಟಿಗೆ ಸಂಬಳಾನು ಸಿಗುತ್ತೆ ಅನ್ನಿ.ಆದರೆ ಏನು ಮಾಡೋದು….ಕೆಲಸಕ್ಕೆ ಹೋಗೋ ಅವಸರದಲ್ಲಿ ಗಡಿಬಿಡಿಯಿಂದ ಮನೆಯ ಎಲ್ಲಾ ಕೆಲಸ ಮುಗಿಸಿ ಸ್ನಾನ ಮಾಡಿ ತಿಂಡಿ ತಿಂದು ಶಾಲೆಗೆ ಓಡಿ ಹೋಗುವಷ್ಟರಲ್ಲಿ ಅಬ್ಬಾ! ಸಾಕು ಈ ಧಾವಂತದ ಬದುಕು ಅನ್ಸುತ್ತೆ. ಇನ್ನು ಇಡೀ ದಿನ ಎಲ್ಲಾ ಶಾಲೆಯಲ್ಲಿ ಕಳೆದು ಹೋಗುತ್ತೆ. ಖಾಸಗಿ ಶಾಲೆ ಆಗಿರೋದ್ರಿಂದ ಎಲ್ಲರ ಮರ್ಜಿ ಕಾಯಬೇಕು. ಆಡಳಿತ ಮಂಡಳಿಯವರ ಕಣ್ಣಿಗೆ ಕಿಸುರಾಾಗಬಾರದು. ಪ್ರಿನ್ಸಿಪಾಲ್ ಹೇಳಿದ ರೀತಿಯಲ್ಲಿ ಕ್ಲಾಸ್ಗಳನ್ನ ತಗೋಬೇಕು. ಚೋಟುದ್ದ ಮಕ್ಕಳ ಧಿಮಾಕು ತುಸು ಹೆಚ್ಚೇ ಇರುತ್ತೆ ಅವರನ್ನು ಸರಿದಾರಿಗೆ ತರೋದಕ್ಕೆ ನಮ್ಮೆಲ್ಲಾ ಶ್ರಮವನ್ನ ಹಾಕಬೇಕು. ಇನ್ನು ಅವರ ಪಾಲಕರ ಮಾತನ್ನು ಕೂಡ ಕೇಳಬೇಕು… ಅವರು ಹೇಳ್ತಾರೆ ತಮ್ಮ ಮಕ್ಕಳು ಮನೆಯಲ್ಲಿ ಮಾತ್ರ ಗಲಾಟೆ ಮಾಡುತ್ತಾರೆ ಅವರನ್ನು ಹಿಡಿಯೋಕಾಗಲ್ಲ ಅಂತ. ಆದ್ರೆ ಶಾಲೆಯಲ್ಲಿ ಅವರಂತಹ ಒಳ್ಳೆಯವರೇ ಇಲ್ಲ ಅನ್ನೋ ರೀತಿ ಅವರ ವರ್ತನೆ ಇರುತ್ತದೆ.ಇನ್ನು ಈ ಮಕ್ಕಳು ತಮ್ಮ ಹೆತ್ತವರ ಮುಂದೆ ತುಂಬಾ ಮುಗ್ಧರು ಅನ್ನೋ ರೀತಿ ವರ್ತಿಸ್ತಾರೆ ಆದರೆ ಅವರದು ಪ್ರಳಯಾಂತಕ ಬುದ್ಧಿ.ಮನೆಯಿಂದ ಹೊರಗೆ ನಾಲ್ಕು ಜನರ ಮಧ್ಯದಲ್ಲಿ ಓಡಾಡೋದ್ರಿಂದ ಸಮಾಜದಲ್ಲಿ ಒಂದಷ್ಟು ಗೌರವ, ನಮ್ಮ ಮಕ್ಕಳ ಶಿಕ್ಷಕರು ಎಂಬ ಪ್ರೀತಿ,ವಿಶ್ವಾಸ ಇರುತ್ತದೆ. ಆದರೆ ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ಎಂಬುದು ಕನಸಿನ ಮಾತು. ಇದಕ್ಕಿಂತ ಸರ್ಕಾರಿ ಶಾಲೆ, ಟೀಚರ್ ಆದ್ರೆ ಒಳ್ಳೆ ಸಂಬಳನೂ ಬರುತ್ತೆ ಯಾವುದೇ ಅಭದ್ರತೆ ಕಾಡೋದಿಲ್ಲ… ಏನು ಮಾಡೋದು ಎಲ್ಲಾನು ಪಡ್ಕೊಂಡು ಬಂದಿರಬೇಕಲ್ವೇ ?ಸರ್ಕಾರಿ ಶಾಲೆ ಶಿಕ್ಷಕಿ….. ಹೌದು ರೀ ಹೇಳೋದಕ್ಕೆ ಸರ್ಕಾರಿ ನೌಕರಿ, ಸರ್ಕಾರಿ ಸಂಬಳ ಎಲ್ಲವೂ ಚೆನ್ನಾಗಿ ಕಾಣಿಸುತ್ತೆ. ಆದರೆ ಸರ್ಕಾರಿ ಕೆಲಸ ಒಂದು ರೀತಿ ಕತ್ತೆ ಚಾಕರಿ ಇದ್ದಹಾಗೆ ಅನ್ನೋದು ಜನರಿಗೆ ಗೊತ್ತಾಗಲ್ಲ. ಏನು ಕೆಲಸ ಮಾಡ್ತೀರಿ ? ಅಂತ ಕೇಳಿದ ಜನ ನಮ್ಮ ಉತ್ತರ ಕೇಳಿ ಗೌರ್ಮೆಂಟ್ ಸ್ಕೂಲ್ ಟೀಚರ್ರಾ, ಬಿಡಿ ಕೆಲಸ ಮಾಡಿದ್ರೂ ಸಂಬಳ ಬರುತ್ತೆ, ಮಾಡದೆ ಇದ್ರೂ ಬರುತ್ತೆ ಎಂದು ಮೂಗು ಮುರಿದಾಗ ಅದೆಷ್ಟು ನೋವಾಗುತ್ತೆ ಗೊತ್ತಾ ? ನಾವು ಶಾಲೆಗಳಲ್ಲಿ ಓದಿಸುವ ಮಕ್ಕಳು ಸಂಪೂರ್ಣ ಶಿಕ್ಷಿತರಲ್ಲದವರ ಮಕ್ಕಳು. ಮಕ್ಕಳಿಗೆ ಶಾಲೆಯಲ್ಲಿ ಪಾಠ ಹೇಳಿಕೊಡುವುದರ ಜೊತೆಗೆ ಮನೆಯಲ್ಲಿ ಮನೆ ಪಾಠವನ್ನು ನಾವು ಕೊಡುತ್ತೇವೆ, ನಿಜ….ಆದರೆ ಅದನ್ನು ಮಾಡಿಸೋರು ಯಾರು ? ಯಾಕೆಂದರೆ ಪಾಲಕರಿಗೆ ಅಯ್ಯೋ! ಅದೆಲ್ಲ ನಮಗೆ ಗೊತ್ತಾಗೋದಿಲ್ಲ ಅಂತ ಕೈ ಒದರೋದು ಮಾತ್ರ ಗೊತ್ತು. ಮಕ್ಕಳಿಗೆ ಒಂಚೂರು ಕಟ್ಟುನಿಟ್ಟು  ಮಾಡಿದಾಗ  ಓಡೋಡಿ ಬಂದು ನಾವೇ ನಮ್ಮ ಮಕ್ಕಳಿಗೆ ಏನೂ ಹೇಳೊಲ್ಲ, ಒಂದೇಟು ಹೊಡೆಯಲ್ಲ… ಅದು ಹೇಗೆ ರೀ ನೀವು ನಮ್ಮ ಮಕ್ಕಳಿಗೆ ಬಯ್ಯೋದು ಅಂತ ನಮ್ಮನ್ನ  ದಬಾಯಿಸ್ತಾರೆ.ತೆಗೆದುಕೊಟ್ಟುಬಿಡಿ ನಮ್ಮ ಮಕ್ಕಳ ಟಿ ಸಿ ನ ಅಂತ ಗುರುಗುಟ್ಟತಾರೆ.ಇನ್ನು ನಮ್ಮ ಸರ್ಕಾರಗಳು ಜನಗಣತಿಯಿಂದ ಹಿಡಿದು ದನಗಣತಿಯವರೆಗೆ ಎಲ್ಲ ಕೆಲಸಕ್ಕೂ ನಮ್ಮನ್ನೇ ಬಳಸಿಕೊಳ್ಳುತ್ತಾರೆ. ರಜಾ ದಿನಗಳಲ್ಲಂತೂ ಸರಿ… ಶಾಲೆ ಇದ್ದಾಗಲೂ ಈ ಕಾರ್ಯ ಮಾಡೋದು ಅಂದ್ರೆ ಮಕ್ಕಳ ಸಿಲಬಸ್ ಹೇಗೆ ಪೂರ್ಣಗೊಳಿಸಬೇಕು ಹೇಳಿ ?ಇದರ ಮೇಲೆ ಬಿಸಿಊಟದ ವ್ಯವಸ್ಥೆ ನಮ್ಮ ನಮ್ಮ ತರಗತಿಯಲ್ಲಿ ಆ ದಿನ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ ಹೇಳಬೇಕು, ಹುಡುಗರು ಎಷ್ಟು ಹುಡುಗಿಯರು ಎಷ್ಟು ಯಾರು ಮೊಟ್ಟೆ ತಿಂತಾರೆ ? ಯಾರು ಬಾಳೆಹಣ್ಣು ತಿಂತಾರೆ ಎಂದೆಲ್ಲ ಲೆಕ್ಕ ಕೊಡಬೇಕು. ಅವರಿಗೆ ಮಾಡುವ ಅಡುಗೆ ಪೌಷ್ಟಿಕವಾಗಿದೆಯೇ? ತರಕಾರಿಗಳನ್ನು ಹಾಕಿ ಮಾಡಿದ್ದಾರೆಯೇ? ಹಾಲು ಚೆನ್ನಾಗಿ ಕಾಯಿಸಿದ್ದಾರೆಯೇ ಅನ್ನೋದನ್ನ ನೋಡ್ಕೋಬೇಕು. ಯಾರಿಗೆ ಬೇಕಪ್ಪ ಈ ಸರ್ಕಾರಿ ಶಿಕ್ಷಕರ ಕೆಲಸ. ಚೆನ್ನಾಗಿ ಓದಿ ಇಂಜಿನಿಯರಿಂಗ್ ಮಾಡಿದ್ರೆ ಎಸಿ ರೂಮಲ್ಲಿ ಕುತ್ಕೊಂಡು ಲ್ಯಾಪ್ಟಾಪ್ ಅಲ್ಲಿ ಕುಟ್ತಾ ಜುಮ್ ಅಂತ ನೌಕರಿ ಮಾಡ್ಕೊಂಡು ವೀಕೆಂಡ್ ಗಳಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ, ಪಿಕ್ನಿಕ್ ಅಂತ ಹೋಗಬಹುದಿತ್ತು…. ಎಲ್ಲಾನು ಪಡ್ಕೊಂಡು ಬರೋಕೆ ಹಣೆಲಿ ಬರ್ದಿರ್ಬೇಕಲ್ಲ.ಸಾಫ್ಟ್ ವೇರ್ ಇಂಜಿನಿಯರ್…. ನಿಜ ನಮ್ಮ ಬದುಕು ನೋಡಲು ಅತ್ಯಂತ ಆಕರ್ಷಕ. ಎಸಿ ರೂಮುಗಳಲ್ಲಿ ಬೋರ್ಡ್ ಮೀಟಿಂಗ್ ಗಳಲ್ಲಿ, ಆಕರ್ಷಕವಾದ ವಾತಾವರಣದಲ್ಲಿ ಠಾಕು ಠೀಕಾದ ಬಟ್ಟೆ ಧರಿಸಿ ಅದಕ್ಕೆ ತಕ್ಕಂತೆ ಶೂ ಇಲ್ಲವೇ ಚಪ್ಪಲಿ ಹಾಕಿಕೊಂಡು ಆತ್ಮವಿಶ್ವಾಸದಿಂದ ಎದೆ ಉಬ್ಬಿಸಿ ನಡೆಯುತ್ತಾ ಇದ್ದರೆ ಎಲ್ಲರೂ ನಮ್ಮನ್ನೇ ನೋಡಿ ಬೆಕ್ಕಸ ಬರಗಾಗುವಂತಹ ಬದುಕು ನಮ್ಮದು. ಆದರೆ ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಒಂದೇ ಸಮನೆ ಲ್ಯಾಪ್ಟಾಪ್ ನೋಡಿ ಕೆಲಸ ಮಾಡುವ ನಮಗೆ ವಿಪರೀತ ದೈಹಿಕ ತೊಂದರೆಗಳು ಕಾಡುತ್ತವೆ. ಎಲ್ಲರಿಗೂ ನಲವತ್ತಕ್ಕೆ ಕನ್ನಡಕ ಬಂದರೆ ನಮಗೆ ನೌಕರಿ ಸೇರಿದ ಕೆಲವೇ ತಿಂಗಳುಗಳಲ್ಲಿ ಕಣ್ಣಿಗೆ ಕನ್ನಡಕ ಕಡ್ಡಾಯ. ಸದಾ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳು ಡ್ರೈ ಆಗುವ, ಕುತ್ತಿಗೆ ಬೆನ್ನುಗಳಲ್ಲಿ ವಿಪರೀತ ನೋವು ಸಹಜ. ನಮ್ಮ ಒಡನಾಟ ಹೈ ಲೆವೆಲ್ ಕಾರ್ಪೊರೇಟ್ ಜನರೊಂದಿಗೆ ಇರುವುದರಿಂದ ಅಲ್ಲಿಯ ಊಟ ತಿಂಡಿಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಕಾರಣ ದೇಹದಲ್ಲಿ ಅನವಶ್ಯಕ ಬೊಜ್ಜು ಸೇರಿಕೊಳ್ಳುತ್ತದೆ. ಪರಿಣಾಮವಾಗಿ 60ರ ನನ್ನ ಅಮ್ಮ ಇನ್ನೂ ಚಿರ ಯುವತಿಯಂತೆ ಓಡಾಡಿಕೊಂಡಿದ್ದರೆ ಅವರ ಮುಂದೆ ನಾನು ಸದಾ ಬಂದಿಲ್ಲೊಂದು ನೋವುಗಳನ್ನು ಹೇಳಿಕೊಂಡು ತಿರುಗುತ್ತೇನೆ. ಪ್ರಾರಂಭದ ಒಂದೆರಡು ವರ್ಷ ಜನ ಎಲ್ಲ ನೋಡೋ ಹಾಗೆ ಒಳ್ಳೆ ಕೆಲಸ, ಫ್ರೆಂಡ್ಸು, ವೀಕೆಂಡ್ ಮೋಜು ಮಜಾ ಅಂತ ಕಾಲ ಕಳೆಯಿತು…. ನಂತರ ಅಪ್ಪ-ಅಮ್ಮನ ವರಾತ ಶುರುವಾಗಿ ನನ್ನದೇ ಸಾಫ್ಟ ವೇರ್ ಫೀಲ್ಡಿನ ಯುವಕನೊಂದಿಗೆ ನನ್ನ ಮದುವೆಯೂ ಆಯಿತು. ಯವ್ವನದ ಹಸಿ ಬಿಸಿ ಆಸೆ ಆಕಾಂಕ್ಷೆಗಳ, ಕನಸುಗಳ ಹಂಚಿಕೆಯೂ ಆಗಿ, ಮದುವೆಯ ಹನಿಮೂನ್ ಅವಧಿ ಮುಗಿದು ಕೆಲಸಕ್ಕೆ ಮತ್ತೆ ಜಾಯಿನ್ ಆದದ್ದೇ ಬಂತು. ನಾವು ಪರಸ್ಪರ ಜೊತೆಯಾಗಿ ಇರಲು ಮಾತನಾಡಲು ಕೂಡ ವೀಕೆಂಡ್ಗಳಿಗಾಗಿ ಕಾಯಬೇಕು. ಇನ್ನು ವಿಪರೀತ ಒತ್ತಡದ ಕೆಲಸದ ನಂತರ ಬರುವ ವೀಕೆಂಡ್ ಗಳಲ್ಲಿ ಮನೆಯ ರಾಶಿ ಕೆಲಸಗಳು ಕಾಯುತ್ತಿರುತ್ತವೆ… ಅದೆಲ್ಲವನ್ನು ಹೇಗೋ ಮ್ಯಾನೇಜ್ ಮಾಡಿ ಉಸ್ತಪ್ಪ ಅಂತ ಸೋಫಾದಲ್ಲಿ ಕುಳಿತುಕೊಂಡರೆ ಅರಿವಿಲ್ಲದೆ ನಿದ್ರೆ ಆವರಿಸಿಕೊಳ್ಳುತ್ತದೆ. ನಾವಿಬ್ಬರೂ ಬದುಕಿನ ಪಯಣದಲ್ಲಿ ಕಂಪನಿಯಲ್ಲಿ ನೀಡುವ ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಲು ಒಂದೇ ಸಮನೆ ಓಡುತ್ತಿದ್ದೇವೆ… ನನಗೆ ಕೊಂಚ ಬಿಡುವ ದೊರೆತಾಗ ನನ್ನವನಿಗೆ ವಿಪರೀತ ಕೆಲಸದ ಒತ್ತಡ, ಮಾತಾಡಿದರೆ ಸಿಡಾರ್ ಎಂದು ಸಿಡುಕಬಹುದು ಎಂಬ ಅಳುಕು… ಕಾರಣ ಕೆಲಸದ ಒತ್ತಡ, ಭದ್ರತೆ ಅವನಂತೆ ನನಗೂ ಇದೆ ಅಲ್ಲವೇ ? ಇದರ ಮಧ್ಯದಲ್ಲಿ ಮಗುವಾದರೆ ಅದರೊಂದಿಗೆ ಎಂಜಾಯ್ ಮಾಡಲು ಕೂಡ ಆಗದೇ ಇರುವಷ್ಟು ಮುಂದಿನ ಬದುಕಿನ ಕುರಿತ ಕಾಳಜಿ. ಐದಾರು ತಿಂಗಳ ಮೆಟರ್ನಿಟಿ ಲೀವ್ ದೊರೆಯುತ್ತದೆ ನಿಜ… ಆದರೆ ನಾಗಾಲೋಟದಲ್ಲಿ ಬದಲಾಗುತ್ತಿರುವ ಐ ಟಿ ಕ್ಷೇತ್ರದ ಅಭಿವೃದ್ಧಿ ಪಥಕ್ಕೆ ನಾನು ಸರಿ ಹೊಂದದೆ ಎಲ್ಲಿ ಹಿಂದೆ ಉಳಿದುಬಿಡುವೆನೋ ಎಂಬ ಆತಂಕ, ಭಯ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಒಂದು ವೇಳೆ ಹಾಗಾದಾಗ ನನಗೆ ನನ್ನ ಯೋಗ್ಯತೆಗೆ ತಕ್ಕ ಕೆಲಸ ದೊರೆಯದೆ ಹಿಂದುಳಿದು ಬಿಟ್ಟರೆ? ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಎಂಬ ಆತಂಕ…. ಇದರ ಜೊತೆಗೆ ಸಹಜವಾಗಿಯೇ ನನ್ನಮ್ಮ, ಅತ್ತೆಯಂತೆ ನಾನು ಕುಟುಂಬಕ್ಕೆ ನನ್ನ ಸಮಯವನ್ನು ನೀಡುತ್ತಿಲ್ಲ, ಮಕ್ಕಳಿಗೆ ನೀಡಬೇಕಾದ ಅಗತ್ಯ ಕಾಳಜಿಯನ್ನು ವಹಿಸಲಾಗುತ್ತಿಲ್ಲ ಎಂಬ ಭಾವ ನನ್ನನ್ನು ಸದಾ ಹಿಂಡಿ ಹಿಪ್ಪೆ ಮಾಡುತ್ತದೆ. ಅತ್ತ ಕೌಟುಂಬಿಕವಾಗಿ ಎಲ್ಲರನ್ನೂ ಮೆಚ್ಚಿಸಲಾಗದೆ, ಔದ್ಯೋಗಿಕವಾಗಿಯೂ ಎಲ್ಲವನ್ನು ನಿರ್ವಹಿಸಲಾಗದೆ ಎಲ್ಲಿಯೂ ಸಲ್ಲದವರಾಗಿ ಬಿಡುತ್ತೇವೆ ಎಂಬ ಭಯ. ಹೋಗಲಿ ಬಿಡು…, ಇಬ್ಬರಲ್ಲಿ ಒಬ್ಬರು ದುಡಿಯುತ್ತೇವಲ್ಲ ನೌಕರಿ ಬಿಟ್ಟರೆ ಆಯ್ತು ಅಂದುಕೊಳ್ಳಲು ಕಂತಿನಲ್ಲಿ ಖರೀದಿಸಿದ ಕಾರು, ಮನೆಗಳ ಸಾಲಗಳು… ಇನ್ನೂ ನಮ್ಮ ಬಾಕಿ ಇದೆ ಎಂದು ತಟ್ಟಿ ನಮ್ಮನ್ನು ಎಚ್ಚರಿಸುತ್ತವೆ. ಇದೆಲ್ಲಾ ನೋಡಿದರೆ ಹಳ್ಳಿಯಲ್ಲಿ ಆರಾಮಾಗಿ ಇರುವ ನನ್ನಮ್ಮನ ಹಾಗೆ ಬದುಕನ್ನು ಅದು ಇರುವಂತೆ ಸಾಗಿಸಿಕೊಂಡು ಹೋಗುವುದರಲ್ಲಿ ಅದೆಷ್ಟು ಸುಖವಿದೆ ಅಂತ ಅನ್ಸುತ್ತೆ… ಏನು ಮಾಡೋದು ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ. ಪರಿಸ್ಥಿತಿ ಬಂದ ಹಾಗೆ ನಮ್ಮನ್ನು ನಾವು ಹೊಂದಿಸಿಕೊಂಡು ಹೋಗಬೇಕು ಇಲ್ಲದೆ ಹೋದರೆ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ. ಹಳ್ಳಿಯಲ್ಲಿರುವ ಅಮ್ಮ…. ಅಯ್ಯೋ ನಮ್ಮದು ಒಂದು ಬದುಕೇ?  ನಾನು ಅಂತ ಇಷ್ಟು ದಿನ ಹೊಂದಿಕೊಂಡು ಹೋದೆ. ನಮ್ಮ ಹಳ್ಳಿಯ ಮನೆಗಳು ಕತ್ತಲ ಗೂಡುಗಳು ಕಣ್ಣು ಮುಚ್ಚಾಲೆ ಆಡೋ ಕರೆಂಟು, ಬಾವಿಯ ನೀರು ಸೇದಿ ಬಳಸಬೇಕು ಇಲ್ಲವೇ ಹಳ್ಳಕ್ಕೆ ಹೋಗಬೇಕು… ಇನ್ನು ಮನೆ ಮನೆಗೆ ನೀರಿನ ವ್ಯವಸ್ಥೆ ನಮ್ಮ ಹಳ್ಳಿಗೆ  ಬಂದಿಲ್ಲ. ಹೊಲದಲ್ಲಿ ಸಾಕಷ್ಟು ಕಟ್ಟಿಗೆ ಇರುತ್ತೆ ಅದನ್ನೇ ಬಳಸುವ ಅಂತ ಯಜಮಾನ್ರು ಹೇಳ್ತಾರೆ ಅದು ನಿಜಾನೆ ಹೌದು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ, ಅದರ ಹೊಗೆ ಕುಡಿದು ಅಸ್ತಮಾ, ಕೆಮ್ಮು ದಮ್ಮು ಎಂದು ಒದ್ದಾಡೋದು ನನ್ನ ಹಣೆಯಲ್ಲಿ ಬರೆದಿದೆ. ಈಗೀಗ ಎಲ್ಲದಕ್ಕೂ ಗ್ಯಾಸ್ ಒಲೆಯನ್ನೇ ಬಳಸ್ತೀನಿ… ನಾನಾದ್ರೂ ಎಷ್ಟು ಅಂತ ಮಾಡ್ಲಿ.ಈ ಹಿಂದೆ ಮನೆಯಲ್ಲಿ ದನ ಕರು ಅಂತ ಸಾಕಷ್ಟು ಹಾಲು ಹಯಿನಿನ ಸಮೃದ್ಧಿ ಇತ್ತು ನಿಜ… ಆದರೆ ಈಗ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಈ ಮುಂಚಿನಂತೆ ಆಳುಗಳು ಸಿಗೋದಿಲ್ಲ, ಅವರು ಕೇಳೋವಷ್ಟು ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳೋದಕ್ಕೆ ನಮಗೆ ಆಗೋದಿಲ್ಲ. ಅದಕ್ಕೆ ನಾವು ತಿನ್ನುವುದಾದರೂ ಎಷ್ಟು ಎಂದು

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

You cannot copy content of this page

Scroll to Top