ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಜೀವನ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್ “ಬೂದಿ ಮುಚ್ಚಿದ ಕೆಂಡ” ನಿಮ್ಮೊಳಗಿನ ಸುಪ್ತ ಚೈತನ್ಯದ ಅನ್ವೇಷಣೆ​”ಬೂದಿ ಮುಚ್ಚಿದ ಕೆಂಡ” ಎಂಬುದು ಕೇವಲ ಒಂದು ಗಾದೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವದ ಆಳವನ್ನು ಅಳೆಯುವ ಒಂದು ಸುಂದರ ರೂಪಕ.​ಕೆಂಡವು ಬೂದಿಯ ಅಡಿಯಲ್ಲಿ ಅಡಗಿದ್ದರೂ ತನ್ನ ಶಾಖವನ್ನು ಕಳೆದುಕೊಂಡಿರುವುದಿಲ್ಲ. ಹಾಗೆಯೇ, ಪ್ರತಿಯೊಬ್ಬ ಮನುಷ್ಯನಲ್ಲೂ ಜನ್ಮಜಾತವಾದ ಒಂದು ಪ್ರತಿಭೆ ಅಥವಾ ಕೌಶಲ ಇರುತ್ತದೆ. ಕೆಲಸದ ಒತ್ತಡ, ಕೌಟುಂಬಿಕ ಜವಾಬ್ದಾರಿ ಅಥವಾ ಆತ್ಮವಿಶ್ವಾಸದ ಕೊರತೆಯಿಂದಾಗಿ ಆ ಪ್ರತಿಭೆಯ ಮೇಲೆ ‘ಬೂದಿ’ ಮುಚ್ಚಿರುತ್ತದೆ. ನಮ್ಮನ್ನು ನಾವು ಅರಿತುಕೊಂಡಾಗ ಮಾತ್ರ ಆ ಕೆಂಡವನ್ನು ಮತ್ತೆ ಪ್ರಜ್ವಲಿಸಲು ಸಾಧ್ಯ.​ವ್ಯಕ್ತಿತ್ವ ವಿಕಸನದಲ್ಲಿ ‘ಮೌನ’ಕ್ಕೆ ದೊಡ್ಡ ಸ್ಥಾನವಿದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ವ್ಯಕ್ತಿ ಅತಿ ಹೆಚ್ಚು ಪ್ರಚಾರ ಬಯಸುವುದಿಲ್ಲ.ಅವರು ಸದ್ದಿಲ್ಲದೆ ತಮ್ಮ ಗುರಿಯತ್ತ ಕೆಲಸ ಮಾಡುತ್ತಾರೆ.ಅತಿಯಾಗಿ ಮಾತನಾಡಿ ಶಕ್ತಿಯನ್ನು ವ್ಯರ್ಥ ಮಾಡುವ ಬದಲು, ಆ ಶಕ್ತಿಯನ್ನು ಒಳಗಡೆ ಶೇಖರಿಸಿಟ್ಟುಕೊಂಡು ಸರಿಯಾದ ಸಮಯ ಬಂದಾಗ ತಮ್ಮ ಸಾಧನೆಯ ಮೂಲಕ ಉತ್ತರ ನೀಡುತ್ತಾರೆ.​ಪರಿಸ್ಥಿತಿಗಳೇ ಬೂದಿಯಿದ್ದಂತೆ​ಜೀವನದಲ್ಲಿ ಬರುವ ಸೋಲುಗಳು, ಅವಮಾನಗಳು ಅಥವಾ ಟೀಕೆಗಳು ನಮ್ಮ ವ್ಯಕ್ತಿತ್ವದ ಮೇಲೆ ಬೂದಿಯಂತೆ ಬಂದು ಬೀಳುತ್ತವೆ. ಆಗ ನಾವು ನಿಸ್ತೇಜರಾದಂತೆ ಕಾಣಬಹುದು.ಆದರೆ ನೆನಪಿಡಿ, ಬೂದಿ ಕೆಂಡವನ್ನು ತಾತ್ಕಾಲಿಕವಾಗಿ ಮುಚ್ಚಬಹುದೇ ಹೊರತು ಆರಿಸಲು ಸಾಧ್ಯವಿಲ್ಲ. ಒಳಗೆ ಹಂಬಲದ ಕಿಚ್ಚು ಜೀವಂತವಾಗಿದ್ದರೆ,ಎಂತಹ ಕಠಿಣ ಪರಿಸ್ಥಿತಿಯನ್ನೂ ಮೆಟ್ಟಿ ನಿಂತು ಮತ್ತೆ ಪುಟಿದೇಳಬಹುದು.​ಕೆಂಡ ಹೊರಬರಬೇಕಾದರೆ ಗಾಳಿಯ ಅವಶ್ಯಕತೆ ಇದೆ.ವ್ಯಕ್ತಿತ್ವ ವಿಕಸನದಲ್ಲಿ ಆ ಗಾಳಿಯೇ ‘ನಿರಂತರ ಪ್ರಯತ್ನ’.​ನಿಮ್ಮ ಒಳಗೆ ಸಾಧನೆಯ ಕಿಚ್ಚಿದೆ. ಸಂದರ್ಭಗಳು ಅದನ್ನು ಮುಚ್ಚಿರಬಹುದು.ಆದರೆ ನಿಮ್ಮ ಪ್ರತಿಭೆಯನ್ನು ನೀವು ನಂಬಿ,ಶ್ರಮದ ಗಾಳಿಯನ್ನು ಬೀಸಿದರೆ ಖಂಡಿತವಾಗಿಯೂ ನೀವು ಜಗತ್ತು ಬೆರಗಾಗುವಂತೆ ಪ್ರಕಾಶಿಸುತ್ತೀರಿ. ನಿಮ್ಮ ಅಸ್ತಿತ್ವ ಬೂದಿಯಂತಿರಲಿ, ಆದರೆ ನಿಮ್ಮ ವ್ಯಕ್ತಿತ್ವ ಕೆಂಡದಂತೆ ಪ್ರಖರವಾಗಿರಲಿಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ,ಉಡುಪಿ ಜಿಲ್ಲೆ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್ Read Post »

ಇತರೆ

ಕವಿತಾ ಶ್ರೀನಿವಾಸ್ ನಾಯಕ್ ಅವರ “ನಿರ್ಗಮಿಸುವ ಮುನ್ನ….”

ಲಹರಿ ಸಂಗಾತಿ ಕವಿತಾ ಶ್ರೀನಿವಾಸ್ ನಾಯಕ್ “ನಿರ್ಗಮಿಸುವ ಮುನ್ನ….” ​ನಾನು ಮಲಗುವ ಕೋಣೆಯಲ್ಲಿ ವಿಶಾಲವಾದ ಗಾಜಿನ ಬಾಲ್ಕನಿ ಇದೆ. ಬಾಲ್ಕನಿಯಿಂದ ಪ್ರತಿದಿನ ಉದಯಿಸುವ ಸೂರ್ಯನನ್ನು ನೋಡಲು ಸಾಧ್ಯವಾಗದಿದ್ದರೂ, ದಿನದ ಕೊನೆಯಲ್ಲಿ ಮೌನವಾಗಿ ನಿರ್ಗಮಿಸುವ ಸೂರ್ಯ ಮಾತ್ರ ಅದ್ಭುತವಾಗಿ ಕಾಣುತ್ತಾನೆ.​ಆದರೆ, ಆ ಸುಂದರ ಸಂಜೆಯ ಕೆಂದಾವರೆ ಬಣ್ಣವನ್ನು ಕಣ್ತುಂಬಿಕೊಳ್ಳುವ ಮೊದಲು, ಸೂರ್ಯನ ತೀಕ್ಷ್ಣವಾದ ಕಿರಣಗಳ ಶಾಖವನ್ನು ಸಹಿಸಿಕೊಳ್ಳಲೇಬೇಕು. ಆ ತಾಪ ಮೈಗೆ ತಾಗಿದಾಗ ದೇಹಕ್ಕೆ ಕೊಂಚ ಘಾಸಿಯಾದ್ದದಂತು ನಿಜ. ಆದರೆ ಆ ಸುಡುವ ಹೊತ್ತನ್ನು ತಾಳ್ಮೆಯಿಂದ ಕಳೆದರೆ ಮಾತ್ರ, ಆನಂತರ ಬರುವ ತಂಪಾದ, ಪ್ರಶಾಂತವಾದ ಸೂರ್ಯಾಸ್ತದ ಕ್ಷಣಗಳನ್ನು ಅನುಭವಿಸಲು ಸಾಧ್ಯ.​ನಮ್ಮ ಬದುಕು ಕೂಡ ಹೀಗೆಯೇ ಅಲ್ಲವೇ? ನೆಮ್ಮದಿಯ ನಾಳೆಗಳಿಗಾಗಿ ಇಂದಿನ ಸುಡುವ ಕಷ್ಟಗಳನ್ನು ನಾವು ಸಹಿಸಲೇಬೇಕು. ಆ ತೀಕ್ಷ್ಣವಾದ ಹೋರಾಟದ ನಂತರ ಸಿಗುವ ಸುಖವೇ ಅತಿ ಹೆಚ್ಚಿನ ಮೌಲ್ಯವನ್ನು ಹೊಂದಿರುತ್ತದೆ. ಸುಂದರವಾದದ್ದನ್ನು ಪಡೆಯಲು ಸ್ವಲ್ಪ ನೋವನ್ನು ಅನುಭವಿಸುವುದು ಪ್ರಕೃತಿಯ ಅಲಿಖಿತ ನಿಯಮ.​​”ವಾಸ್ತವವಾಗಿ, ಆ ಸೂರ್ಯನ ತೀಕ್ಷ್ಣತೆ ನಮ್ಮನ್ನು ದಣಿಸುವುದಕ್ಕಲ್ಲ, ಬದಲಾಗಿ ನಮ್ಮ ತಾಳ್ಮೆಯನ್ನು ಪರೀಕ್ಷಿಸುವುದಕ್ಕೆ. ಕಿಟಕಿಯ ಗಾಜಿನಿಂದ ನುಗ್ಗಿ ಬರುವ ಆ ಉರಿ ಬೆಳಕು, ಕತ್ತಲಾಗುವ ಮೊದಲು ನಾವೆಷ್ಟು ಗಟ್ಟಿಯಾಗಿ ನಿಲ್ಲಬಲ್ಲೆವು ಎಂದು ಕೇಳುವಂತಿದೆ.​ಆ ನೋವನ್ನು ದಾಟಿ ನಿಂತಾಗಲೇ, ಆಕಾಶವು ಬಣ್ಣಗಳ ಹಬ್ಬವನ್ನು ಆಚರಿಸುವುದು. ನಮಗೂ ಅಷ್ಟೇ, ಕಷ್ಟದ ಬಿಸಿ ತಾಕಿದಾಗ ಕುಗ್ಗದೆ ಕುಳಿತರೆ, ದಿನದ ಕೊನೆಯಲ್ಲಿ ನೆಮ್ಮದಿಯ ತಂಗಾಳಿ ಮೈದಡವುವುದು ಖಚಿತ. ಒಮ್ಮೊಮ್ಮೆ ಸುಂದರವಾದದ್ದನ್ನು ಅನುಭವಿಸಲು, ನಮಗೆ ಇಷ್ಟವಿಲ್ಲದಿದ್ದರೂ ಅನಿವಾರ್ಯವಾದ ನೋವನ್ನು ಪ್ರೀತಿಯಿಂದಲೇ ಸ್ವೀಕರಿಸಬೇಕಾಗುತ್ತದೆ.” ಕವಿತಾ ಶ್ರೀನಿವಾಸ್ ನಾಯಕ್

ಕವಿತಾ ಶ್ರೀನಿವಾಸ್ ನಾಯಕ್ ಅವರ “ನಿರ್ಗಮಿಸುವ ಮುನ್ನ….” Read Post »

ಇತರೆ

“ಹೊಗಳಿ ಹೊನ್ನ ಶೂಲಕ್ಕೇರಿಸದಿರಿ…. ಅಮ್ಮ ಕೂಡ ಸ್ವತಂತ್ರ ವ್ಯಕ್ತಿತ್ವ” ವೀಣಾ ಹೇಮಂತ್ ಗೌಡ ಪಾಟೀಲ್

ವೀಣಾ ಹೇಮಂತ್ ಗೌಡ ಪಾಟೀಲ್ “ಹೊಗಳಿ ಹೊನ್ನ ಶೂಲಕ್ಕೇರಿಸದಿರಿ…. ಅಮ್ಮ ಕೂಡ ಸ್ವತಂತ್ರ ವ್ಯಕ್ತಿತ್ವ” ( ಆಕೆಯ ವ್ಯಕ್ತಿತ್ವದ ಅದುಮಿಟ್ಟ ಭಾವವನ್ನು ಸಂಭ್ರಮಿಸಲು ಅವಕಾಶ ಕಲ್ಪಿಸಿ) ಈ ದಿನ ಅಮ್ಮಂದಿರ ದಿನ. ವಿಶ್ವದಾದ್ಯಂತ ಅಮ್ಮಂದಿರ ದಿನವನ್ನು ಎಲ್ಲರೂ ಆಚರಿಸುತ್ತಾರೆ. ಅಮ್ಮನ ಮಮತೆ, ಪ್ರೀತಿ, ತ್ಯಾಗ, ಕರ್ತವ್ಯಪರತೆಯನ್ನು ಹಾಡಿ ಹೊಗಳುತ್ತಾರೆ. ಆಕೆಯನ್ನು ದೇವತೆಯ ಸ್ಥಾನದಲ್ಲಿ ಇಟ್ಟು ಪೂಜಿಸುತ್ತಾರೆ. ಆಕೆಯ ಗುಣಗಾನ ಮಾಡಿ, ಹಾಡಿ ಹೊಗಳುತ್ತಾರೆ.ಝೆನ್ ಜಿ ಮಕ್ಕಳಿಂದ ಹಿಡಿದು ಇಂದಿನ ಸಾಮಾಜಿಕ ಜಾಲತಾಣಗಳ ಬಳಕೆದಾರರೆಲ್ಲರೂ ತಮ್ಮ ತಮ್ಮ ಮೊಬೈಲ್ನ ಸ್ಟೇಟಸ್ಗಳಲ್ಲಿ ತಾಯಿಯ ಚಿತ್ರವನ್ನು ಹಾಕಿ ನನ್ನ ಹಿಂದಿನ ಶಕ್ತಿ, ನನ್ನ ಸರ್ವಸ್ವ ಎಂದು ಹೇಳುವ ಮಕ್ಕಳ ಸಂಖ್ಯೆ ಕೋಟಿ ಇದ್ದರೆ ಅಯ್ಯೋ ಅಲ್ಲಿ ಹಾಕಿದ್ರೆ ಮಾತ್ರ ತಾಯಿಯ ಮೇಲೆ ಪ್ರೀತಿ ಇರುತ್ತದೆಯೇ ಎಂದು ತಾವು ಸ್ಟೇಟಸ್ ಗಳಲ್ಲಿ ಏನನ್ನೂ ಹಾಕದೆ ಇರುವ ಕಾರಣವನ್ನು ಹೇಳುವ ಮಕ್ಕಳು ಕೂಡ ಇದ್ದಾರೆ.ಅಮ್ಮನಿಗೆ ಒಂದು ಹೂವನ್ನು ಅರ್ಪಿಸುವ, ಒಂದು ಕಾಣಿಕೆಯನ್ನು ತಂದು ಕೊಡುವ, ಒಂದು ಸೀರೆಯನ್ನು ಗಿಫ್ಟ್ ನೀಡುವ ಮಕ್ಕಳು ಇದ್ದಾರೆ.ತಾಯಿ ತಮಗೆ ನೀಡಿದ ಸಮಯದ ಸಾವಿರಾರು ಘಂಟೆಗಳಲ್ಲಿ ಕೇವಲ ಒಂದು ಗಂಟೆ ಆಕೆಗೆ ನೀಡದ ಮಕ್ಕಳು ಕೇವಲ ಸ್ಟೇಟಸ್ ಹಾಕಿ ಸಂಭ್ರಮಿಸುವುದು ಯಾವ ನ್ಯಾಯ? ತನ್ನಿಡಿ ಬದುಕನ್ನು ಗಂಡ ಮನೆ ಮಕ್ಕಳು ಕೌಟುಂಬಿಕ ಜವಾಬ್ದಾರಿ ಎಂದು ಎಲ್ಲವನ್ನು ತನ್ನ ತಲೆ ಮೇಲೆ ಹೇರಿಕೊಳ್ಳುವ ಹೆಣ್ಣುಮಗಳನ್ನು ಗೌರವಿಸುವ ರೀತಿ ಇದಲ್ಲ?ನಮ್ಮೆಲ್ಲರ ನಿರೀಕ್ಷೆಗಳ ಭಾರಕ್ಕೆ ಯಾರದೋ ಮಗಳು, ಯಾರದೋ ಪತ್ನಿ, ಯಾರದ್ದೋ ಪುತ್ರಿ, ಯಾರದೋ ಸಹೋದರಿಯಾಗಿ ಬಾಳುವ ಹೆಣ್ಣು ಮಗಳಿಗೆ ತನ್ನದು ಎನ್ನುವ ಸ್ವಂತ ಮನೆ ಇಲ್ಲ. ಆಸೆ ಆಕಾಂಕ್ಷೆಗಳಿಗೆ ಬೆಲೆ ಇಲ್ಲ. ಕನಸುಗಳಿಗೆ ಬೆಂಬಲವಿಲ್ಲ. ನನಸಾಗಿಸಿಕೊಳ್ಳಲು ಸಾಧ್ಯವಾಗದಂತೆ ಆಕೆಯ ಕನಸಿನ ಹಕ್ಕಿಯ ರೆಕ್ಕೆಯನ್ನು ಮುರಿದು ಬಿಡುವರಲ್ಲ. ಆಕೆಯಿಂದಲೇ ಇಹ ಪರವನ್ನು ಕಾಣುವ, ಬೆಳಗಿನಿಂದ ಬೈಗಿನವರೆಗೂ ತಮ್ಮೆಲ್ಲ ಕೆಲಸಗಳಿಗೆ ಆಕೆಯ ಮೇಲೆ ಭಾವನಾತ್ಮಕವಾಗಿ, ಕೌಟುಂಬಿಕವಾಗಿ, ಧಾರ್ಮಿಕವಾಗಿ ಸಾಮಾಜಿಕವಾಗಿ ಅವಲಂಬಿತರಾಗಿರುವ ನಾವು ಕೇವಲ ಆರ್ಥಿಕ ಅವಲಂಬನೆಯನ್ನು ಆಕೆ ನಮ್ಮ ಮೇಲೆ ಹೊಂದಿರುವ ಕಾರಣ ಆಕೆಯನ್ನು ಅವಲಂಬಿತಳು ಎಂಬಂತೆ ಬಿಂಬಿಸುವುದು ಯಾವ ನ್ಯಾಯ? ನಿಜವಾಗಿಯೂ ಇಲ್ಲಿ ಯಾರ ಮೇಲೆ ಯಾರು ಅವಲಂಬಿತರಾಗಿದ್ದಾರೆ ಎಂಬುದು ಪ್ರಶ್ನೆಯಾಗಿಯೇ ಉಳಿಯುತ್ತದೆ ?.. ನೂರಕ್ಕೆ ನೂರರಷ್ಟು ಹೆಣ್ಣು ಮಕ್ಕಳ ಮೇಲೆ ಅವಲಂಬಿತರಾಗಿರುವ ಬಹುತೇಕ ಎಲ್ಲರೂ ಕೇವಲ ಒಂದು ಶೇಕಡ ಆಕೆ ತಮ್ಮ ಮೇಲೆ ಆರ್ಥಿಕವಾಗಿ ಅವಲಂಬಿತಳಾಗಿರುವುದನ್ನೇ ದೊಡ್ಡದಾಗಿಸುವುರು ಹೆಣ್ಣು ಮಕ್ಕಳ ಶೋಚನೀಯ ಪರಿಸ್ಥಿತಿಯನ್ನು, ಪಿತೃ ಸತ್ತಾತ್ಮಕ ವ್ಯವಸ್ಥೆಯ ಕ್ರೌರ್ಯವನ್ನು ತೋರಿಸುತ್ತದೆ.ಇಲ್ಲಿ ಹೆಣ್ಣಾಗಲಿ ಗಂಡಾಗಲಿ ಪರಸ್ಪರಾವಲಂಬಿಗಳು… ಅನಾದಿಕಾಲದಿಂದಲೂ ಸಾಮಾಜಿಕವಾಗಿ ತಮಗೆ ಕೊಡಮಾಡಿದ ಜವಾಬ್ದಾರಿಗಳನ್ನು ನಿರ್ವಹಿಸುತ್ತಾ ಬಂದವರು ಆದರೆ ನಂತರದ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಕ್ಷುಲ್ಲಕವಾಗಿ ಕಾಣುವ ಅವರ ಅಸ್ಮಿತೆಯನ್ನು ಕಡೆಗಣಿಸುವ ಅವರನ್ನು ತೇಜೋವಧೆ ಮಾಡುವ ಹುನ್ನಾರಗಳು ಆರಂಭವಾದವು. ಭಾರತೀಯ ಸಮಾಜದ ಪಿತೃ ಸತ್ತಾತ್ಮಕ  ದೃಷ್ಟಿಕೋನವು ಇದಕ್ಕೆ ಪೂರಕವಾಗಿ ಹೆಣ್ಣು ಮಕ್ಕಳನ್ನು ಎರಡನೆಯ ದರ್ಜೆಯ ಪ್ರಜೆಯನ್ನಾಗಿಸಿತು. ಅವರನ್ನು ಅಕ್ಷರಶಃ ತೊತ್ತಿನ ಸ್ಥಾನಕ್ಕೆ ಇಳಿಸಿತು. ಆಗಾಗ ಅಲ್ಲಲ್ಲಿ ಇದರ ವಿರುದ್ಧವಾಗಿ ಒಬ್ಬಿಬ್ಬರು ಹೆಣ್ಣು ಮಕ್ಕಳು ಧ್ವನಿ ಎತ್ತಿದರಾದರೂ ಅದನ್ನು ವ್ಯವಸ್ಥಿತವಾಗಿ ಸಂಪ್ರದಾಯದ ಹೆಸರಿನಲ್ಲಿ ಅಲ್ಲಲ್ಲಿಯೇ ಅಡಗಿಸಲಾಯಿತು. ಇದನ್ನು ಮೀರಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ನೋಡಿಕೊಂಡವರನ್ನು ಕೆಟ್ಟದಾಗಿ ನಡೆಸಿಕೊಂಡರು.ತಮಗಿರುವ ಜವಾಬ್ದಾರಿಗಳು, ತ್ಯಾಗಗಳು, ಕುಟುಂಬವೇ ಮೊದಲು ಎಂಬ ಸಾಮಾಜಿಕ ಒತ್ತಡಗಳ ನಡುವೆ ಹೆಣ್ಣು ಮಕ್ಕಳು ತಣ್ಣಗಿನ ಕ್ರೌರ್ಯವನ್ನು ಎದುರಿಸುತ್ತಾ ವಿರೋಧಿಸುವ ಗುಣವನ್ನೇ ಕಳೆದುಕೊಂಡರು. ತಮ್ಮ ಕನಸುಗಳನ್ನು ಬದಿಗೊತ್ತಿ, ಕುಟುಂಬದ ಮರ್ಯಾದೆಯ ದೃಷ್ಟಿಯಿಂದ ಸರಿ ಎಂದು ತೋರಿದ್ದನ್ನೇ ಮಾಡುವ ಮೂಲಕ ತಮ್ಮತನವನ್ನು ಕಳೆದುಕೊಂಡರು. ಬದುಕಿನಿಂದ ಹೆಚ್ಚಿನದನ್ನು ಅಪೇಕ್ಷಿಸದೆ ತಮ್ಮ ಕುಟುಂಬ, ತಮ್ಮ ಮಕ್ಕಳು ಎಂದು ಎಲ್ಲರ ಬದುಕನ್ನು ನೇರ್ಪಡಿಸುವ ನಿಟ್ಟಿನಲ್ಲಿ ತಮ್ಮನ್ನು ತಾವು ಗಾಣಕ್ಕೆ ಕಟ್ಟಿದ ಎತ್ತಿನಂತೆ ಭಾವಿಸಿ ಕಾರ್ಯನಿರ್ವಹಿಸಿದರು. ತಮ್ಮ ವೈಯುಕ್ತಿಕ ಆಸೆ ಆಕಾಂಕ್ಷೆಗಳು ಅವರಿಗೆ ನಗಣ್ಯವಾಗಿ ಕನಿಷ್ಠ ಪಕ್ಷ ತಮ್ಮ ಮಕ್ಕಳಾದರೂ ಚೆನ್ನಾಗಿ ತಮ್ಮ ಬದುಕನ್ನು ರೂಪಿಸಿಕೊಳ್ಳಲಿ ಎಂದು ಭಾವಿಸಿ ಗಂಧದ ಕೊರಡಿನಂತೆ ತಮ್ಮನ್ನು ತಾವು ಸವೆಸಿಕೊಂಡು ಉಳಿದವರ ಬದುಕಿಗೆ ಸುಗಂಧವಾದರು. ತನ್ನನ್ನು ತಾನುರಿಸಿಕೊಂಡು ಇತರರಿಗೆ ಬೆಳಕಾಗುವ ದೀಪವಾಗಿ ಬೆಳಗಿದರು.ಸಾಕು…. ಇನ್ನಾದರೂ ಹೆಣ್ಣು ಮಕ್ಕಳನ್ನು ಕಡೆಗಣಿಸುವ ಅವರ ಆಸೆ-ಆಕಾಂಕ್ಷೆಗಳಿಗೆ ತಣ್ಣೀರೆರಚುವ ಮತ್ತು ವರ್ಷದ ಯಾವುದೋ ಒಂದು ದಿನ ಅವರ ತ್ಯಾಗವನ್ನು, ಪ್ರೀತಿಯನ್ನು ಕರ್ತವ್ಯ ಪ್ರಜ್ಞೆಯನ್ನು  ಅಮ್ಮಂದಿರ ದಿನವನ್ನಾಗಿ ಆಚರಿಸುವ ಈ ಪದ್ಧತಿಯನ್ನು ಬಿಟ್ಟುಬಿಡೋಣ.ನಮ್ಮ ತಾಯಿಯೂ ಕೂಡ ಓರ್ವ ಹೆಣ್ಣು ಮಗಳು. ಓರ್ವ ಸ್ವತಂತ್ರ ವ್ಯಕ್ತಿ, ತನ್ನದೇ ಆದ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಹೊಂದಿದ್ದ ವ್ಯಕ್ತಿ ಎಂಬುದನ್ನು ಮೊದಲು ಗುರುತಿಸೋಣ. ಆಕೆಯ ವ್ಯಕ್ತಿತ್ವವನ್ನು ಸಂಭ್ರಮಿಸುವುದರ ಜೊತೆ ಜೊತೆಗೆ  ಚಿಕ್ಕಂದಿನಿಂದ ಕಂಡಿರುವ ಕನಸನ್ನು ಈಗಲಾದರೂ ನನಸಾಗಿಸುವ ಪ್ರಯತ್ನಕ್ಕೆ ನಾವು ನಮ್ಮ ಕೈಲಾದಷ್ಟು ಸಹಾಯ ಮಾಡೋಣ. ಮಮತೆಯ, ಮಾತೃತ್ವದ ಪ್ರತೀಕವಾದ ಆಕೆಯೂ ಕೂಡ ಒಂದೊಮ್ಮೆ ಹೊಂದಿರಬಹುದಾದ ತನ್ನದೇ ಆದ ಆಸೆ ಆಕಾಂಕ್ಷೆಗಳನ್ನು ಅರಿತು ಅವುಗಳನ್ನು ಈಡೇರಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಪಡೋಣ.ಅಮ್ಮ ಎಂದರೆ ಕೇವಲ ತ್ಯಾಗವಲ್ಲ, ಪ್ರೀತಿ, ವಾತ್ಸಲ್ಯಗಳ ಹಾಗೂ ಮಮತೆಯ ಮೂರ್ತಿಯಲ್ಲ. ಎಲ್ಲಕ್ಕೂ ಮುನ್ನ ಆಕೆ ಓರ್ವ ಹೆಣ್ಣು ಮಗಳು ನಮ್ಮ ನಿಮ್ಮೆಲ್ಲರಂತೆ ಆಕೆಯಲ್ಲಿಯೂ ಇರಬಹುದು. ಆಕೆಯ ಚಿಕ್ಕ ಪುಟ್ಟ ಆಸೆಗಳು,ಆಕಾಂಕ್ಷೆಗಳು, ಅದುಮಿಟ್ಟಿರುವ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ನಾವು ಆಕೆಗೆ ಜೊತೆಯಾಗೋಣ. ಅತ್ಯಂತ ಪ್ರೀತಿಯಿಂದ ಆಕೆಯನ್ನು ತಬ್ಬಿಕೊಂಡು ಐ ಲವ್ ಯು ಅಮ್ಮ ಎಂದು ಹೇಳುವುದು ನಿಜವಾದ ಪ್ರೀತಿಯ ಅಭಿವ್ಯಕ್ತಿ ಎಂದು ನಾವು ಭಾವಿಸುವುದು ಬೇಕಿಲ್ಲ… ನಿಜವಾದ ಪ್ರೀತಿಯೆಂದರೆ ನಿಸ್ವಾರ್ಥದಿಂದ ತಮ್ಮೆಲ್ಲವನ್ನು ನಮಗಾಗಿ ಬಿಟ್ಟು ಕೊಟ್ಟಿರುವ ನಮ್ಮ ತಾಯಂದಿರದು. ತಾಯಂದಿರ ದಿನದಂದು ಭಾವನಾತ್ಮಕವಾಗಿ ತಾಯಿಯ ಬಗ್ಗೆ ಹೇಳುತ್ತಾ ತಾಯ್ತನ ತಂದು ಕೊಡುವ ನೂರೆಂಟು ತ್ಯಾಗ ಬಲಿದಾನದ ಕಥೆಗಳ ಮೂಲಕ ಜಾಹೀರು ಮಾಡುವ ಬದಲಾಗಿ ಹೆಣ್ಣು ಮಕ್ಕಳನ್ನು ಅವರವರ ಪಾಡಿಗೆ ಬಿಟ್ಟುಬಿಡಬೇಕು. ಅವರದ್ದೇ ರೀತಿಯಲ್ಲಿ ಅವರು ತಮ್ಮ ಬದುಕನ್ನು ರೂಪಿಸಿಕೊಳ್ಳಲು ಸಹಾಯ ಮಾಡಬೇಕು. ಅತ್ಯಂತ ಅಸಹಾಯಕ ಸ್ಥಿತಿಯಲ್ಲಿದ್ದ ತನ್ನ ಮಗುವನ್ನು , ಇಂದಿನ ಈ ಸ್ವಾವಲಂಬಿ ಬದುಕಿಗೆ ಸಿದ್ದ ಮಾಡಲು ಅವರನ್ನು ಪಾಲಿಸಿ ಪೋಷಿಸಿ ಸದಾ ಅವರ  ಕೈ ಹಿಡಿದು ಇಲ್ಲಿಯತನಕ ನಡೆಸಿರುವ ತಾಯಂದಿರನ್ನು ಪರಾವಲಂಬಿಯಾಗಿಸದೆ, ಈ ಹಿಂದೆ ನಮ್ಮಲ್ಲಿ ಆಕೆ ತುಂಬಿದ ಮಾನಸಿಕ, ಭಾವನಾತ್ಮಕ ಕೌಟುಂಬಿಕ ಹಾಗೂ ವಾಸ್ತವಿಕವಾದ ಆರ್ಥಿಕ ಬೆಂಬಲವನ್ನು ನಾವು ನೀಡಲೇಬೇಕು.ಆ ಮೂಲಕ ತಾಯಂದಿರು ಮತ್ತಷ್ಟು ಸಶಕ್ತರಾಗಿ, ಸಚೇತನರಾಗಿ ನಮ್ಮ ಬಾಳಿನ ಬೆಳಕಾಗಿ ಪ್ರಖರವಾಗಿ ಬೆಳಗುವಂತೆ ಪೋಷಿಸಬೇಕು. ಅವರಿಗೆ ತಮ್ಮ ಕುರಿತು ಯೋಚಿಸುವಂತೆ ಪ್ರೇರೇಪಿಸಬೇಕು. ಎಲ್ಲರಿಗೂ ಎಲ್ಲವನ್ನೂ ಮಾಡುವ ತಾಯಿ ತನ್ನ ವೈಯಕ್ತಿಕ ಕಾಳಜಿಯನ್ನು ಮಾಡಿಕೊಳ್ಳಬೇಕು. ಹಾಗೆ ತನ್ನ ಕಾಳಜಿಯನ್ನು  ಮಾಡಿಕೊಳ್ಳದೆ ಆತ್ಮ ದ್ರೋಹ ಮಾಡಿಕೊಳ್ಳಬಾರದು.  ನಿಜ! ಪೋಷಣೆಯ ಅಗತ್ಯ ಕೇವಲ ಮಕ್ಕಳಿಗೆ ಮಾತ್ರವಲ್ಲ…. ತಾಯಂದಿರಿಗೂ ಇದೆ ಎಂಬ ಸತ್ಯವನ್ನು ಅರಿತು ಅವರ ಸಂತೋಷಕ್ಕೆ ಕಾರಣವಾಗಬೇಕು. ಆಗಲೇ ತಾಯಂದಿರ ದಿನಾಚರಣೆಗೆ ನಿಜವಾದ ಸಾರ್ಥಕತೆ ಹಾಗೂ ಅರ್ಥಪೂರ್ಣತೆ ದೊರೆಯುವುದು…ಏನಂತೀರಾ ಸ್ನೇಹಿತರೇ ? ವೀಣಾ ಹೇಮಂತ್ ಗೌಡ ಪಾಟೀಲ್

“ಹೊಗಳಿ ಹೊನ್ನ ಶೂಲಕ್ಕೇರಿಸದಿರಿ…. ಅಮ್ಮ ಕೂಡ ಸ್ವತಂತ್ರ ವ್ಯಕ್ತಿತ್ವ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

ಡಾ.ಭಾರತಿ‌ ಅಶೋಕ್ ವಿಶೇಷ ಬರಹ “ಅಮ್ಮಾ….”

ಅಮ್ಮನ ಸಂಗಾತಿ ಡಾ.ಭಾರತಿ‌ ಅಶೋಕ್ “ಅಮ್ಮಾ….” ಅಮ್ಮಾ…. ಅವಳು ಅವಳನ್ನೇ ಮರೆತುಮಗುವ ಮೆರೆಸುವವಳುಅರ್ಥಪೂರ್ಣ ಮಾಂತ್ರಿಕಳುಅವಅಮ್ಮಾ,ಮಾ, ಮಾತೃ, ತಾಯಿ  ತಾಳ್ಮೆಯೇ ಮೈವೆತ್ತವಳು. “ದೇವರೇ  ಧನ್ಯವಾದಗಳು ನಮ್ಮನ್ನು ಮಾತ್ರ ನಿನ್ನ ಅನುವಾದಕರನ್ನಾಗಿ ಆಯ್ಕೆ ಮಾಡಿಕೊಂಡದ್ದಕ್ಕೆ” ಎನ್ನುವ ಕವಿಯ ಕೃತಜ್ಞತೆಗೆ ಅರ್ಥವಿದೆ. ಒಡಲುರಿಯ ಕತ್ತರಿಸಿ ಬೊಗಸೆಯಲ್ಲಿಟ್ಟು ಸದಾ ಕಣ್ಗಾವಲಿರಿಸಿ, ಕಾಯುವ ಜೀವ ಅಮ್ಮಾ. ಗರ್ಭದಲಿ ಮೂಡಿದ ಕ್ಷಣವೇ ಶುರುವಾಗುವುದು ಅಮ್ಮನ ಮಮಕಾರದ ತುಡಿತ.ಒಂದಿನಿತು ಕದಲದ ಚಿತ್ತ. ಮೂಡಿದ ಮಾಂಸ ಮುದ್ದೆಯೊಂದಿಗಿನ ಸಂವಾದ ಸದಾ. ಹೃದಯದ ಜೋಡಿ ಮಿಡಿತ ನವಮಾಸವೂ. ಪ್ರಸವದಲಿ  ಅವಳು  ಮರು ಹುಟ್ಟುವಳು ಮಗುವಿನೊಂದಿಗೆ.  ಇಲ್ಲಿಂದ ಎಲ್ಲ ಮಗುವಿಗೆ. ಪ್ರಸವದ ನೋವ ನುಂಗಿದವಳು ಈಗ ಹಸಿವ ನುಂಗುವಳು.ಜಗದ ನೋವೆನಗಿರಲೆಂದು ಅದರ ನಲಿವೆಲ್ಲ ಮಗುವಿಗಿಟ್ಟು ತಣ್ಣನೆ ನಗುವಳು – ಮಗುವ ಚಲನೆ ಕಂಡು. ಮಗು ಅತ್ತರೆ ತಾನು ಅತ್ತು, ನಕ್ಕರೆ ಸುಖಿಸಿ ನೋವ ಮರೆವಳು. ಬೆಳೆದ ಮಗು ಸಮಾಜಮುಖಿಯಾದರೆ ಕಿರೀಟ ಅಪ್ಪನಿಗೆ, ಇಲ್ಲದಿರೆ ನಿಂದೆಗೆ ಸದಾ ಸಖಿ. ಅನವರತ ತನ್ನವರ ಒಳಿತಿಗೆ ಮಿಡಿವ ಅಮ್ಮನ  ಒಳಿತು ಕೇಳುವ ಕಿವಿಗಳಿಗೆ ಬರ.ಅದ್ಯಾವುದ ಲೆಕ್ಕಿಸದ ಅವಳು  ಸದಾ ಹಸನ್ಮುಖಿ. ಜಗದ ಜನನಿ ತಾಯಿ.ನಿತ್ಯದ ಬದುಕು ಅವಳ ಛಾಯೆ, ಇಲ್ಲದಿಹ ಬದುಕಿಗೆಲ್ಲಿ ಠಾವು.ಅವಳು ಸದಾ ವಂದಿತಳು ಜಗದಿ ಪೂಜಿಪಳು. ಡಾ. ಭಾರತಿ ಅಶೋಕ್

ಡಾ.ಭಾರತಿ‌ ಅಶೋಕ್ ವಿಶೇಷ ಬರಹ “ಅಮ್ಮಾ….” Read Post »

ಇತರೆ

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು

ಕಲಾ ಸಂಗಾತಿ ಗೊರೂರು ಅನಂತರಾಜು “ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿ ಅವರಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ” ಹಾಸನದ ನಿವೃತ್ತ ಚಿತ್ರಕಲಾ ಶಿಕ್ಷಕರು ಕಲಾವಿದರು  ಬಿ.ಎಸ್.ದೇಸಾಯಿ ಅವರ ಕಲಾಸಾಧನೆಗೆ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ೨೦೨೫-೨೬ನೇ ಸಾಲಿನ ಗೌರವ ಪ್ರಶಸ್ತಿ ಒಲಿದು ಬಂದಿದೆ. ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ದಿನಾಂಕ ೨-೧೦-೧೯೬೫ ರಂದು ಜನಿಸಿದ ಇವರು ಹಾಸನದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿಯೇ ನೆಲೆಸಿದ್ದಾರೆ. ನಾನು ಹಾಸನಕ್ಕೆ ಬಂದು ೩೬ ವರ್ಷಗಳಾದವು ಗುರುವೇ (ಗೊರೂರು ಅನಂತರಾಜು) ಈ ಪರಿಸರವು ನನಗೆ ಪ್ರಿಯವಾಗಿ ಒಗ್ಗಿಹೋಯಿತು. ಬಂದ ಹೊಸದರಲ್ಲಿ ಊರ ಕಡೆಗೆ ವರ್ಗ ಮಾಡಿಸಿಕೊಳ್ಳುವ ಆಲೋಚನೆ ಇತ್ತಾದರೂ ಕಾಲಕ್ರಮೇಣ ಇಲ್ಲಿಯ ಕಲಾವಿದರು, ಸಾಹಿತಿಗಳ ಒಡನಾಟದಲ್ಲಿ ಇಲ್ಲಿಯೇ ಮನೆ ಮಾಡಿಕೊಂಡೆ ಎಂದು ಮನದುಂಬಿ ಹೇಳಿದರು. ಇವರು ಚಿತ್ರಕಲಾ ವ್ಯಾಸಂಗವು   ಪ್ರಿ-ಯೂನಿವರ್ಸಿಟಿ ಕೋರ್ಸ್ (ವಾಣಿಜ್ಯ ಕಲೆ), ಡ್ರಾಯಿಂಗ್ ಮತ್ತು ಪೇಂಟಿAಗ್‌ನಲ್ಲಿ ಡಿಪ್ಲೊಮಾ, ಡಿಪ್ಲೊಮಾ ಇನ್ ಆರ್ಟ್ ಮಾಸ್ಟರ್, ಮಾಸ್ಟರ್ ಆಫ್ ವಿಷುಯಲ್ ಆರ್ಟ್  ಆದರ್ಶ ಫೈನ್ ಆರ್ಟ್ ಕಾಲೇಜ್ ಇಂಡಿ ಬಿಜಾಪುರ ಜಿಲ್ಲೆ, ಅಮೂರ್ತ ಕಲೆಯ ಕಲಾವಿದರು:ಅಮೂರ್ತತೆಯ ಬೆಳವಣಿಗೆಯ ಹಿಂದಿನ ಪ್ರೇರಣೆಗಳಲ್ಲಿ ಒಂದು ವಿಷಯಗಳ ಪ್ರಪಂಚದಿAದ ದೂರವಿರಲು ಅನೇಕ ಕಲಾವಿದರ ಬಲವಾದ ಬಯಕೆಯಾಗಿದೆ. ಲೌಕಿಕ ಭೌತವಾದದ ಉಲ್ಲೇಖವನ್ನು ಬಹಿಷ್ಕರಿಸುವುದು ಅಮೂರ್ತ ಕಲಾವಿದರ ಕೇಂದ್ರ ಗುರಿಯಾಗಿದೆ. ಇದು ಔಪಚಾರಿಕ ಪರಿಶುದ್ಧತೆಯ ಹುಡುಕಾಟಕ್ಕೆ ಮತ್ತು ಅತಿಕ್ರಮಣಕ್ಕಾಗಿ ನಿರಂತರವಾದ ಮಾನವ ಅನ್ವೇಷಣೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಪರಿಗಣನೆಗೆ ಎರಡಕ್ಕೂ ಕಾರಣವಾಯಿತು. ದೇಸಾಯಿಯವರ ಕಲೆಯ ಪಯಣವೂ ಅದೇ ಹಾದಿಯಲ್ಲಿದೆ. ಯೋಗ ಮತ್ತು ಧ್ಯಾನದ ಸ್ವಾಭಾವಿಕತೆಯ ವರ್ಷಾಚರಣೆಯು ಅವರ ಹೊಸ ಅನ್ವೇಷಣೆಗೆ ಸರಿಹೊಂದುವAತೆ ಆಧ್ಯಾತ್ಮಿಕ ಭಾಷೆಯನ್ನು ಹುಡುಕುವಂತೆ ಮಾಡುತ್ತದೆ. ಸುತ್ತಮುತ್ತಲಿನ ಜೀವನದಲ್ಲಿ ಪರಮಾರ್ಥದ ಅನ್ವೇಷಣೆಯಲ್ಲಿ ಅವರು ತನ್ನದೇ ಆದ ರೀತಿಯಲ್ಲಿ ಅದರ ಸಾರವನ್ನು ಅಮೂರ್ತಗೊಳಿಸುತ್ತಾರೆ. ಆಕಸ್ಮಿಕ ಟೆಕಶ್ಚರ್‌ಗಳಿಂದ ಸ್ಫೂರ್ತಿ ಪಡೆದ ಅವರು ಹೊಸ ದೃಶ್ಯ ಪ್ರಪಂಚವನ್ನು ರಚಿಸಲು ಕ್ಯಾನ್ವಾಸ್‌ನಲ್ಲಿ ತೇವವಾದ ಎಣ್ಣೆ ಬಣ್ಣಗಳ ಕೆಲವು ಭಾಗವನ್ನು ತೆಗೆದುಹಾಕುವ ಕೆರೆದು ಅಳಿಸುವ ವಿಧಾನವನ್ನು ರೂಪಿಸಿದರು. ಅಂತಿಮ ಫಲಿತಾಂಶವೆAದರೆ ಐಷಾರಾಮಿ ಬಣ್ಣದ ಆರ್ಕೆಸ್ಟೆçÃಶನ್ ಮತ್ತು ಅದ್ದೂರಿ ಸಂಯೋಜನೆಗಳು. ಕೆಲವೊಮ್ಮೆ ಅಧೀನಗೊಂಡ ತೇಲುವ ರೂಪಗಳು ಕೆಲವು ಗುರುತಿಸಬಹುದಾದ ರೂಪಗಳ ಉಪಸ್ಥಿತಿಯನ್ನು ಸೂಚಿಸುತ್ತವೆಯಾದರೂ ಕಲಾವಿದನ ಉದ್ದೇಶವು ಎದ್ದುಕಾಣುವ ಮಾನಸಿಕ ಭಾವನೆಗಳನ್ನು ಹೆಚ್ಚಿಸುವುದು. ಅವರ ವರ್ಣಚಿತ್ರಗಳು ಈ ಬಣ್ಣ ಮತ್ತು ವಿನ್ಯಾಸದ ಕಾರಣದಿಂದಾಗಿ ಮತ್ತು ಸರಳವಾದ ಸುಂಟರಗಾಳಿ ರೂಪಗಳ ಮೇಲೆ ಕೇಂದ್ರೀಕರಿಸುವ ಮೂಲಕ ಪ್ರೇಕ್ಷಕರನ್ನು ಹೀರಿಕೊಳ್ಳುತ್ತವೆ. ಅವರ ಪ್ರತಿಯೊಂದು ಕೃತಿಯು ಭವ್ಯವಾದ ದೃಶ್ಯ ಕಾವ್ಯದ ಭಾವನೆಗಳನ್ನು ಉಂಟುಮಾಡುತ್ತದೆ.  ಸಿ.ಎಸ್.ಕೃಷ್ಣಶೆಟ್ಟಿ ವಿಮರ್ಶಕರು  ಅಭಿಪ್ರಾಯದಂತೆ   ದೇಸಾಯಿಯವರ ಕೆಲಸವನ್ನು ಅವರ ಆತ್ಮದ ಭೂದೃಶ್ಯ ಎಂದು ಕರೆಯಬಹುದು. ಆದರೆ ಇದು ಕಲಾವಿದ ಭಾವುಕ ಎಂದು ಸೂಚಿಸುವುದಿಲ್ಲ. ಅವರ ವರ್ಣಚಿತ್ರಗಳು ಭಾರತದ ಆಳವಾದ ವ್ಯಕ್ತಿತ್ವದ ಖಚಿತವಾದ ಪ್ರಭಾವವನ್ನು ಹೊಂದಿವೆ. ಅವರ ಬಣ್ಣಗಳ ವ್ಯಾಪ್ತಿಯು ಎದ್ದುಕಾಣುವ ಆದರೆ ಸಮಚಿತ್ತದಿಂದ ಅವರು ಸಾಧಿಸಿದ ಒಂದು ನಿರ್ದಿಷ್ಟ ಪರಿಶುದ್ಧತೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಕುಂಚದ ಹೊಡೆತಗಳು ಅತೀಂದ್ರಿಯ ತೀವ್ರತೆಯನ್ನು ಎತ್ತಿ ತೋರಿಸುತ್ತವೆ. ಅವರ ಆಕೃತಿಗಳು ಅಮೂರ್ತವಲ್ಲ ಆದರೆ ಸಾಮರಸ್ಯ. ಇದು ಸಂಯೋಜನೆಗಳು  ನಿಗರ್ವಿಯಾಗಿ ಅಸ್ತಿತ್ವದಲ್ಲಿರಲು ಶಕ್ತಗೊಳಿಸುತ್ತದೆ. ಸಂಯೋಜನೆಗಳ ಮನೋಧರ್ಮವು ಒಟ್ಟಾರೆ ಮನಸ್ಥಿತಿಗೆ ಪೂರಕವಾಗಿದೆ, ಮಾನಸಿಕ ಅಥವಾ ಆಧ್ಯಾತ್ಮಿಕ ಅಂಶಗಳಿAದ ಗುಣಗಳನ್ನು ಪುಷ್ಟೀಕರಿಸಲಾಗುತ್ತದೆ. ಅವರ ಕಲೆಯು ಮೂಲಭೂತವಾಗಿ ಸಂತಾನ ಮೌಲ್ಯಗಳೊಂದಿಗೆ ಬಲವಾದ ನಂಬಿಕೆಯ ಅಭಿವ್ಯಕ್ತಿಯಾಗಿದೆ. ಪೂಜ್ಯತೆ ಮತ್ತು ನಮ್ರತೆ ಸ್ಪಷ್ಟವಾಗಿದೆ, ಜೊತೆಗೆ ಉತ್ತಮ ಸಂತಾನೋತ್ಪತ್ತಿ ಮತ್ತು ಆಂತರಿಕ ಸಂಸ್ಕೃತಿಯನ್ನು ಸೂಚಿಸುವ ಹಿಂಜರಿಕೆ. ಕಲಾವಿದನು ತಾನು ನಿಜವಾಗಿಯೂ ಚಿತ್ರಿಸಲು ಇಷ್ಟಪಡುವುದನ್ನು ಚಿತ್ರಿಸುವ ಕೌಶಲ್ಯವನ್ನು ಹೊಂದಿದ್ದಾನೆ, ಗಟ್ಟಿಯಾದ ಬಣ್ಣದಲ್ಲಿ ಜೋರಾಗಿ ಕೂಗದಿರುವ ಚಾತುರ್ಯವನ್ನು ಅವನು ಹೊಂದಿದ್ದಾನೆ. ಅವರ ಕುಂಚದ ಕೆಲಸವು ಬ್ರಷ್ ಅಲ್ಲ. ದೇಸಾಯಿ ಅವರು ಆಧುನಿಕ ವರ್ಣಚಿತ್ರಕಾರರಾಗಿದ್ದು ಅವರು ಆಳವಾದ ಭಾವನೆಗಳು ಮತ್ತು ಜೀವನದಲ್ಲಿ ತಮ್ಮದೇ ಆದ ಸತ್ಯವನ್ನು ಚಿತ್ರಿಸುತ್ತಾರೆ ಎಂಬುದು  ಕೇಶವ್ ಮಲಿಕ್, ನವದೆಹಲಿ ಅವರ ಅಭಿಪ್ರಾಯವಾಗಿದೆ.ಇನ್ನು ದೇಸಾಯಿ ಸಾಧನೆಯ ಹಾದಿಯ ಹಿಂದೆ ಹುಡುಕಿ ಹೋದರೆ ಅವರ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಸಬ್ಲೈಮ್ ಆರ್ಟ್ ಗ್ಯಾಲರಿ, ಬೆಂಗಳೂರು (೨೦೧೮,೨೦೧೯) ಯುಬಿ ನಗರ,ಬೆಂಗಳೂರು-೨೦೧೧, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೧೦, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೦೫, ಸಂಸ್ಕೃತಭವನ ಹಾಸನ-೨೦೦೫, ಕಲಾಕೃತಿ ಪ್ರದರ್ಶನ, ಬೆಂಗಳೂರು-೧೯೮೯ ಮುಖ್ಯವಾಗಿವೆ.ಇವರು ಭಾಗವಹಿಸಿದ ಶಿಬಿರ ಕಾರ್ಯಾಗಾರಗಳಲ್ಲಿ  ಪ್ರಮುಖವಾಗಿ ಬಿಜಾಪುರ ಕಲಾ ಶಿಬಿರ- ೨೦೨೪, ಅಂತರಾಷ್ಟಿçÃಯ ಕಲಾ ಶಿಬಿರ-ಮೂಡುಬಿದರೆ-೨೦೨೩, ಕಾರ್ಕಳ ಕಲಾ ಶಿಬಿರ-೨೦೨೨, ರಾಷ್ಟಿçÃಯ ಕಲಾವಿದರ ಶಿಬಿರ, ವಾರಣಾಸಿ-೨೦೧೬, ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್–೨೦೧೪, ಕಾಗಿನೆಲೆ ಟ್ರಸ್ಟ್, ಕಾಗಿನೆಲೆ ಕಲಾಶಿಬಿರ, ಹಾವೇರಿ–೨೦೧೩,  ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ–೨೦೧೩, ವಿಶ್ವ ಕನ್ನಡ ಸಮ್ಮೇಳನ ಕಲಾ ಶಿಬಿರ ಬೆಳಗಾವಿ-೨೦೧೧, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾ ಶಿಕ್ಷಕರ ಶಿಬಿರ ಹಾಸನ-೨೦೧೦, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾಶಿಬಿರ, ಕೆಮ್ಮಣ್ಣು ಗುಂಡಿ-೨೦೦೯, ವೆಂಕಟಪ್ಪ ಗ್ಯಾಲರಿ, ಬೆಂಗಳೂರು-೨೦೦೭, ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ-೨೦೦೬, ಉಪಾಸನಾ ಕಲಾವಿದರ ಶಿಬಿರ ಸಮಸೆ ಚಿಕ್ಕಮಗಳೂರು-೨೦೦೬, ರಾಷ್ಟಿçÃಯ ಕಲಾ ಪ್ರದರ್ಶನ, ಮೌಂಟ್ ಅಬು-೨೦೦೪, ಅಕಾಡೆಮಿ ಸದಸ್ಯರಿಗೆ ಕಲಾ ಶಿಬಿರ, ಹೊನ್ನಾವರ-೨೦೦೩ ರಾಷ್ಟಿçÃಯ ಸಂಶೋಧನಾ ಕಾರ್ಯಾಗಾರ, ದೆಹಲಿ-೨೦೦೦, ಹೊಯ್ಸಳ ಉತ್ಸವ ಕಲಾ ಶಿಬಿರ, ಹಳೇಬೀಡು- ೧೯೯೯, ಕಲಾ ಬರಹಗಾರರ ಶಿಬಿರ, ಕರ್ನಾಟಕ ಲಲಿತಕಲಾ ಅಕಾಡೆಮಿ, ಇಳಕಲ್-೧೯೯೯, ಕಲಾ ಉಪನ್ಯಾಸಕರ ಚಿತ್ರಕಲಾ ಪ್ರದರ್ಶನ ಬಿಜಾಪುರ-೧೯೯೯, ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಕಲಾವಿದರ ಶಿಬಿರ ಅಲ್ಲದೇ ದೇಸಾಯಿಯವರು ೬೦  ಮೇಲ್ಪಟ್ಟ ಗುಂಪು ಪ್ರದರ್ಶನದಲ್ಲಿ ಈವರೆಗೆ ಭಾಗಿಯಾಗಿದ್ದಾರೆ.  ಇವರ ಪೈಂಟಿAಗ್ಸ್ಗಳ ಖಾಸಗಿ ಸಂಗ್ರಹಣೆಗಳು ಸಾಗರೋತ್ತರವಾಗಿ  ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಜರ್ಲ್ಯಾಂಡ್, ಜರ್ಮನಿ, ಆಸ್ಟ್ರಿಯಾ, ಯುಎಇ, ಮಸ್ಕತ್, ಕೆನಡಾಗಳಲ್ಲಿ ಅಲ್ಲದೇ ಭಾರತದಲ್ಲಿ ಮೌಂಟ್ ಅಬು, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಗುಲ್ಬರ್ಗಾ, ಕೊಪ್ಪಳ, ಮೈಸೂರು, ಹಾಸನ, ಹೊನ್ನಾವರ, ಮಂಗಳೂರು, ಉಡುಪಿ, ಕುಂದಾಪುರ, ಮುಂಬೈ, ಚೆನ್ನೈ, ಪಾಂಡಿಚೇರಿ, ಕೊಚ್ಚಿಯಲ್ಲಿ ಇವೆ.  ದೇಸಾಯಿಯವರು ಮಾಜಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಾಜಿ ಸದಸ್ಯರು  ಧಾರವಾಡ,  ಸಂಚಾಲಕರು ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ–೨೦೦೬, ಸುವರ್ಣ ಕರ್ನಾಟಕ ಕಲಾವಿದರ ಶಿಬಿರ, ಹಾಸನ ೨೦೦೬, ಸಂಚಾಲಕರು ಚಿತ್ಕಲಾ ಉದಯೋನ್ಮುಖ ಕಲಾವಿದರ ಪ್ರದರ್ಶನ, ಕಾರ್ಯದರ್ಶಿ ರಾಜ್ಯ ಕಲಾಶಿಕ್ಷಕರ ಸಮ್ಮೇಳನ ಹಾಸನ-೨೦೦೧,ಕಲಾವಿದರನ್ನು ಕಲೆ ಹಾಕಿ ಯಶಸ್ವಿ ಕಲಾಶಿಬಿರ ಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಕಲಾಸಕ್ತರ ಗಮನ ಸೆಳೆದಿರುವ ದೇಸಾಯಿಯವರು ಉತ್ತಮ ಛಾಯಾಗ್ರಾಹಕರೂ ಹೌದು. ಅವರು ತಮ್ಮ ಛಾಯಗ್ರಾಹಣದಿಂದ ಹಾಸನದ ಹುಣಸಿನಕೆರೆ ಪೋಟೋ ತೆಗೆದು ಸಾರ್ವಜನಿಕರ, ಪರಿಸರ ಪ್ರೇಮಿಗಳ ಮನಸೆಳೆದು ಕೆರೆ ಉಳಿವಿಗೆ ತಮ್ಮದೇ ಕಲ್ಪನೆಯಲ್ಲಿ ಕೆಲಸ ಮಾಡಿದ್ದಾರೆ. ಮನಕ್ಕೆ ಮುದ ನೀಡುವ ಚಿಂತನೆಗೀಡು ಮಾಡುವ ಹಲವಾರು ಚಿತ್ರಗಳಿಗೆ ಕುಂಚದಿAದ ಜನ್ಮ ನೀಡಿದ್ದಾರೆ. ನಿಸರ್ಗದ ಅನೇಕ ಚಿತ್ರಗಳನ್ನು ರಚಿಸಿರುವುದಲ್ಲದೇ  ತಮ್ಮ ಕ್ಯಾಮರದಿಂದಲೂ ಪ್ರಕೃತಿಯ ರಮ್ಯ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಪ್ರಕೃತಿಯ ವಿಶಿಷ್ಟ ಸೌಂದರ್ಯ ಕಲಾವಿದನನ್ನು ಪ್ರಭಾವಿಸುವಂತೆಯೆ ಅವನ ಭಾವನಾತ್ಮಕ ಪ್ರತಿಕ್ರಿಯೆಯು ಅವನ ಅಂತರAಗ ಸಾಮರ್ಥ್ಯವನ್ನು ಮತ್ತು ವೈಯಕ್ತಿಕ ಅಭಿರುಚಿಯನ್ನು ಒಳಗೊಂಡಿರುತ್ತದೆ. ಈ ದಿಸೆಯಲ್ಲಿ ದೇಸಾಯಿರವರ ಪ್ರಕೃತಿ ಮತ್ತು ವಿಕೃತಿ ಎಂಬ ಕಲಾಕೃತಿ ಅಮೂರ್ತ ಶೈಲಿಯ ಕಲಾರಚನೆಯಾಗಿದ್ದು ಚಿಂತನೆಗೆ ಹಚ್ಚುವ ಮೂಲದ್ರವ್ಯವನ್ನು ಒದಗಿಸುತ್ತದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬAಧವನ್ನು ವಿಕೃತಗೊಳಿಸುತ್ತಿರುವ ಮನುಷ್ಯರ ಮನೋಭಾವನೆಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದೆ. ಪ್ರಕೃತಿಯನ್ನೇ ಅವಲಂಬಿಸಿ ಬದುಕುವ ಮನುಷ್ಯ ಭವಿಷ್ಯವನ್ನು ಯೋಚಿಸದೆ ನಿಸರ್ಗ ನಾಶ ಮಾಡುತ್ತಿರುವ ವಿಕೃತ ಮನೋಭಾವನೆಯನ್ನು ಅರ್ಥಗರ್ಭಿತವಾಗಿ ಮತ್ತು ಸಾಂಕೇತಿಕವಾಗಿ ಚಿತ್ರಿಸಲ್ಪಟ್ಟ ಕಲಾಕೃತಿಯಲ್ಲಿ ಪ್ರಸ್ತುತ ಜನ ನೈಸರ್ಗಿಕ ಸಂಪತ್ತನ್ನು ಹಾಳುಗೆಡುವುತ್ತಿರುವ ಬಗ್ಗೆ ಕಲಾವಿದರಲ್ಲಿ ಆಕ್ರೋಶ ಮತ್ತು ಸಮಾಜಿಕ ಕಳಕಳಿಯಿದೆ. ಚಿತ್ರಕಲೆಯ ವಿವಿಧ ಆಯಾಮಗಳಲ್ಲಿ ಕೃಷಿ ಮಾಡಿ ಜಲವರ್ಣ, ತೈಲವರ್ಣ, ಪೋಸ್ಟರ್ ಕಲರ್, ಟ್ರಾನ್ಸ್ಪರೆಂಟ್ ಬಣ್ಣ ಬಳಸಿ ಮನೋಹರವಾದ ಕಲಾಕೃತಿಗಳನ್ನು  ರಚಿಸಿದ್ದಾರೆ. ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಲಿಯಂ, ಪ್ಯಾರಿಸ್, ಸ್ವಿಜ್ಜರ್ ಲ್ಯಾಂಡ್, ನ್ಯೂಜಿಲ್ಯಾಂಡ್ ಆಸ್ಟೆçÃಲಿಯ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ. ತಮ್ಮ ಮನೆಯನ್ನೇ ಕಲಾಗ್ಯಾಲರಿ ಮಾಡಿ ಬೇರೆ ಹೊರಗಿನ ಕಲಾವಿದರ  ಕಲಾಪ್ರದರ್ಶನಗಳನ್ನು ಮಾಡಿದ್ದಾರೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯,ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧, 

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು Read Post »

ಇತರೆ

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ

ಮಹಿಳಾ ಸಂಗಾತಿ ಮೇಘ ರಾಮದಾಸ್ ಜಿ “ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಭಾರತ ಸಂವಿಧಾನದ 73 ನೇ ತಿದ್ದುಪಡಿ ಬಹಳ ಮಹತ್ವವಾದದ್ದು. ಅಧಿಕಾರ ವಿಕೇಂದ್ರೀಕರಣದ ಮುನ್ನುಡಿಯಾಗಿದೆ. ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಜನನ ಆಗಿದ್ದು ಇದರಿಂದಲೇ. ಅಭಿವೃದ್ಧಿ ಎಂದಿಗೂ ಒಕ್ಕೂಟ ಸರ್ಕಾರ ಅಥವಾ ರಾಜ್ಯ ಸರ್ಕಾರದ ದೃಷ್ಟಿಯಲ್ಲಿ ಕೇಂದ್ರೀಕೃತವಾಗಿರಬಾರದು, ಬದಲಿಗೆ ತಳಮಟ್ಟದಿಂದ ಅಂದರೆ ಗ್ರಾಮಗಳಿಂದ ಅಭಿವೃದ್ಧಿಯ ಪರಿಕಲ್ಪನೆ ರಚನೆಯಾಗಬೇಕು ಎನ್ನುವುದು ಈ ಅಧಿಕಾರ ವಿಕೇಂದ್ರೀಕರಣದ ಆಶಯವಾಗಿದೆ. ಕೇವಲ ಅಭಿವೃದ್ಧಿಯ ಕಾರಣಕ್ಕೆ ಅಷ್ಟೇ ಅಲ್ಲದೆ, ಗ್ರಾಮ ಮಟ್ಟದಲ್ಲಿ ರಕ್ಷಣಾ ವ್ಯವಸ್ಥೆಗಳಾಗಿಯೂ ಸಹಾ ಈ ಗ್ರಾಮ ಪಂಚಾಯತಿಗಳು ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿಯೇ ರಾಜ್ಯದ 6022 ಗ್ರಾಮ ಪಂಚಾಯತಿಗಳಲ್ಲಿಯೂ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಗಳ ರಚನೆ ಕಡ್ಡಾಯವಾಗಿದೆ. ಈ ಸಮಿತಿಯು ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಯ ಕುರಿತು ಗಮನ ಹರಿಸಬೇಕಿದೆ. ಆದರೆ ವಾಸ್ತವದಲ್ಲಿ ಈ ಸಮಿತಿಗಳು ನಿರೀಕ್ಷಿತ ಮಟ್ಟಕ್ಕೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ನಾಗರಿಕರಾಗಿ ನಮ್ಮ ಕರ್ತವ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಎಂದರೇನು?ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಮಹಿಳೆಯರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು 18 ವರ್ಷದ ಒಳಗಿನ ಮಕ್ಕಳಿಗೆ ಅರಿವು ಮೂಡಿಸುವುದು ಮತ್ತು ರಕ್ಷಣೆ ಒದಗಿಸುವುದು ಈ ಸಮಿತಿಯ ಉದ್ದೇಶವಾಗಿದೆ. ಈ ಸಮಿತಿಯ ಸದಸ್ಯರು ಯಾರ್ಯಾರು? ಅಧ್ಯಕ್ಷರು – ಗ್ರಾಮ ಪಂಚಾಯತಿ ಅಧ್ಯಕ್ಷರು (ಮಹಿಳೆ)ಉಪಾಧ್ಯಕ್ಷರು – ಗ್ರಾಮ ಪಂಚಾಯತಿ ಉಪಾಧ್ಯಕ್ಷರು (ಮಹಿಳೆ)ಸದಸ್ಯರು – ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು (ಒಬ್ಬರು ಮಹಿಳೆ ಕಡ್ಡಾಯ)ಸದಸ್ಯರು – ಗ್ರಾಮ ಪಂಚಾಯತಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖೋಪಾಧ್ಯಾಯರು (ಪುರುಷವಿದ್ದಲ್ಲಿ ಮಹಿಳಾ ಶಿಕ್ಷಕಿಯನ್ನು ಆಯ್ಕೆ ಮಾಡಬೇಕು)ಸದಸ್ಯರು – ಗ್ರಾಮಲೆಕ್ಕಿದರುಸದಸ್ಯರು – ಆಶಾ ಕಾರ್ಯಕರ್ತೆಸದಸ್ಯರು – ಬಿಟ್ ಪೊಲೀಸ್ಸದಸ್ಯರು – ICDS ಮೇಲ್ವಿಚಾರಕಿಸದಸ್ಯರು – ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಪ್ರತಿನಿಧಿಸದಸ್ಯರು – ಅಂಗನವಾಡಿ ಕಾರ್ಯಕರ್ತೆಸದಸ್ಯರು – ಸ್ತ್ರೀಶಕ್ತಿ ಸಂಘದ ಪ್ರತಿನಿಧಿಸದಸ್ಯರು – ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಸದಸ್ಯ ಕಾರ್ಯದರ್ಶಿ – ಪಿಡಿಒ/ಕಾರ್ಯದರ್ಶಿ ಸಮಿತಿಯ ಜವಾಬ್ದಾರಿಗಳು ಈ ಸಮಿತಿಗಳು ಸ್ಥಳೀಯ ಮಟ್ಟದ ಮಹಿಳೆ ಮತ್ತು ಮಕ್ಕಳ ರಕ್ಷಣಾ ಗೋಡೆಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸಮಿತಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಗ್ರಾಮದ ನಾಗರೀಕರಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಮಿತಿಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸಿದಾಗ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯಲ್ಲಿ ದೊಡ್ಡ ಬದಲಾವಣೆ ತರಬಹುದಾಗಿದೆ. ಮೇಘ ರಾಮದಾಸ್ ಜಿಮಕ್ಕಳು ಮತ್ತು ಯುವಜನ ಕಾರ್ಯಕರ್ತರುಗುಳಿಗೇನಹಳ್ಳಿ ಸಿರಾ ತುಮಕೂರು7760908097

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ Read Post »

ಇತರೆ

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ “ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ತಮ್ಮ ತಮ್ಮ ಸಾಮ್ರಾಜ್ಯದ ಎಲ್ಲೆಯನ್ನು ವಿಸ್ತರಿಸುವ ಸಲುವಾಗಿ ಯುದ್ಧ ಸಾರುತ್ತ “ಗೆಲುವು ನನ್ನದು ಸೋಲು ಅವನದು ” ಎಂದು ಬೀಗುತ್ತಿದ್ದ ಮಾನವ ಇಂದು ಗಗನ ಸಾಗರಗಳ ಒಡೆತನಕ್ಕಾಗಿ ಸಮರಕ್ಕಿಳಿದಿದ್ದಾನೆ. ಪ್ರಕೃತಿ ಮೊಗೆ ಮೊಗೆದು ಕೊಡುತ್ತಿರುವ ಗಾಳಿ ನೀರು , ಬೆಳಕು,ಪಚ್ಚೆ-ಪೈರುಗಳನ್ನು ಬಳಸಿ, ಉಳಿಸಿ ಹೋಗಬೇಕು ಎನ್ನುವ ಪ್ರಜ್ಞೆ ಇಲ್ಲದೆ ಕಡಲು ಸಾಗರಗಳ ಒಡೆತನಕ್ಕಾಗಿ ರಾಕ್ಷಸೀಯ ಪ್ರವೃತ್ತಿ ಮೆರೆಯುತ್ತಿದ್ದಾನೆ. ಜಗವಷ್ಟೇ ಅಲ್ಲ, ದಿಗ್ದೇವತೆಗಳು ಕೂಡಾ ಬೆರಗಿನಿಂದ ನೋಡುವಂತಹ ಕಾರ್ಯಗಳು ಮನುಜರಿಂದ ನಡೆಯುತ್ತಲೇ ಇವೆ. ಮುದ್ದು ಮಕ್ಕಳ ಮಾರಣ ಹೋಮ, ಸೈನಿಕರ ಪ್ರಾಣ ಹರಣ, ಅನಾಥ ಜೀವಗಳ ಆಕ್ರಂದನ…. ಉಹುಂ…. ಗೆಲುವಿನ ಬೆನ್ನೇರುವ ಹಠದಲ್ಲಿ ಕುರುಡಾಗಿವೆ ಕಣ್ಣುಗಳು.. ಮರುಭೂಮಿಯಾಗಿದೆ ಮನಸುಗಳು…ಬಾಂಬ್ ಮಿಸ್ಯೈಲು ಗಳ ಹೊಗೆ ಬಾನಂಗಳ ತುಂಬುತ್ತಿದೆ. ಗಗನ ಮುನಿದರೆ ಭುವಿಗೆ ಉಳಿಗಾಲವುಂಟೇ? ಕಣ್ಣಿಗೆ ಕಾಣದ ಸ್ವಂತ ಅಸ್ತಿತ್ವವೇ ಇಲ್ಲದ ವೈರಸ್ ಕಳಿಸಿದ ಪಾಠವನ್ನು ನಾವು ಎಷ್ಟು ಬೇಗ ಮರೆತೆವು!! ಮೊಸಳೆಯಂತೆ ಬಾಯಿ ತೆರೆದು ಕಡಲ ದಡದಲ್ಲಿ ಆನಂದಿಸುತ್ತಿದ್ದ ಜನರನ್ನು ನುಂಗಿ ಮತ್ತೆ ಹೊರಗೆಸೆದ ಜಲ ಪ್ರಳಯಗಳ ಭೀಕರತೆ, ಬದುಕಿನ ನಶ್ವರತೆ ಎಲ್ಲವೂ ಈಗ   ಮತ್ತೆ ಅಸ್ಪಷ್ಟವಾಗುತ್ತಾ ಸಾಗಿದೆ. ಭೂಮಿಯ ಒಡಲು ಮುನಿದು ಮನುಷ್ಯನ ಅಸ್ತಿತ್ವವನ್ನೇ ನಡುಗಿಸಿದ , ನಂಬಿಕೆಯನ್ನೇ ಬುಡಮೇಲು ಮಾಡಿದ ಉದಾಹರಣೆಗಳೂ ಮನುಷ್ಯನಿಗೆ ತನ್ನಷ್ಟಕ್ಕೆ ತಾನು ಬದುಕಬೇಕು ಎನ್ನುವ ನೀತಿ ಕಲಿಸಿಲ್ಲ. ಕೇವಲ ದಾಹ!! ಭೂತಳವನ್ನು ಬಗೆದು ನಿಧಿ ಶೋಧ, ಗಣಿಗಾರಿಕೆ, ಅಭಿವೃದ್ಧಿ ಕಾರ್ಯಗಳು… ನೀರಿನ ಮೂಲಗಳನ್ನು ಬರಿದು ಮಾಡುವ, ಮಲಿನಗೊಳಿಸುವ ಕೆಲಸಗಳು,ಕಾರ್ಖಾನೆಗಳ ಮಿತಿ ಮೀರಿದ ಹೊಗೆ, ಸಿಡಿಮದ್ದು,ಬಾಂಬ್ ಇತ್ಯಾದಿಗಳಿಂದ ಆಗಸದೆತ್ತರಕ್ಕೆ ಹೊಗೆ ಚಿಮ್ಮಿಸಿ ಇಡೀ ವಾತಾವರಣ ಕೆಡಿಸುವ, ವಿಜಯ ಸಾಧಿಸುವ, ಇಂಧನ ಮೂಲಗಳಿಗೆಲ್ಲ ಬೆಂಕಿ ಹಾಕಿ ಆ ಹೊಗೆಯಲ್ಲಿಯೇ ಕೇಕೆ ಹಾಕಿ ಬೀಗುವ ಕಾರ್ಯಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪನ್ಮೂಲಗಳು ಜಗತ್ತಿನ ಸಕಲ ನಾಗರಿಕ ಚಟುವಟಿಕೆಗಳಿಗೆ ಮೂಲ ಆಧಾರ. ಅವುಗಳನ್ನು ಕಾಪಿಟ್ಟುಕೊಂಡರೆ ಕೊಡು ಕೊಳ್ಳುವಿಕೆಯ ಮೂಲಕ ಜನರು ಬಳಸಿಕೊಳ್ಳಬಹುದು. ಸುಟ್ಟು ಸಾಧಿಸುವುದೇನು?? ಭಾರೀ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸುವುದು ನಂತರ ಕೆಡಹು ವುದು   ಭೂತಾಯಿಯ ಸಹನೆಯನ್ನು ಪರೀಕ್ಷೆ ಮಾಡುವುದು. ಭೂಮಿ ಸಹನಾಮಯಿ, ಹೌದು. ಆದರೆ ಸಹನೆಗೂ ಮಿತಿ ಇದೆ. ಭೂಮಾತೆ ನಮ್ಮನ್ನೆಲ್ಲ ಕ್ಷಮಿಸುವಷ್ಟು ಕಾಲ ಭೂಮಿಯ ಮೇಲ್ಪದರ ಚೆನ್ನಾಗಿಯೇ ಕಾಣುತ್ತದೆ. “ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೊ ಕಲಾವಿದ” ಎನ್ನುವ ಚೆನ್ನವೀರ ಕಣವಿಯವರ ಹಾಡಿನ ಸಾಲಿನಂತೆ ಭೂಮಿಯ ಅಂತರಾಳದಲ್ಲಿನ ಒತ್ತಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನಾವು ಯಾರೂ ಅರಿಯೆವು. ಗಾಳಿಯಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಪದಾರ್ಥಗಳಿಂದ ಈಗಾಗಲೇ ಮನುಷ್ಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅದಕ್ಕೆ ಮತ್ತಷ್ಟು ವಿಷ ಅನಿಲಗಳು ಸೇರಿಕೊಳ್ಳುತ್ತಲೇ ಇವೆ. ವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚರಿಕೆ ಕೊಡುತ್ತಲೇ ಇದ್ದಾರೆ. ವಾಹನದ ಹೊಗೆ, ಕಾರ್ಖಾನೆ ವಿದ್ಯುತ್ ಸ್ಥಾವರಗಳ  ಹೊಗೆ, ಕಲ್ಲಿದ್ದಲು ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸುವುದರಿಂದ ಬಿಡುಗಡೆಯಾಗುವ ಧೂಳು, ( ಏರೋಸಾಲ್ ) ಪ್ಲಾಸ್ಟಿಕ್, ಕಸ, ಕೃಷಿ ತ್ಯಾಜ್ಯಗಳನ್ನು ಸುಡುವ ಸಂದರ್ಭ ಉಂಟಾಗುವ ಹೊಗೆ, ಕಾಡ್ಗಿಚ್ಚಿನ ಹೊಗೆ, ರೆಫ್ರಿಜರೇಟರ್ ಮತ್ತು ಏರ್ ಕಂಡೀಷನರ್ ಗಳಿಂದ ಹೊರಹೊಮ್ಮುವ ಕ್ಲೋರೋಫ್ಲೋರೋ  ಕಾರ್ಬನ್ ಗಳು ಇವೆಲ್ಲವುಗಳಿಂದ ಮಲಿನಗೊಂಡ ಗಾಳಿ -ಗಗನಕ್ಕೆ ಯುದ್ಧ ಎನ್ನುವ ಸ್ವಯಂಕೃತ ಅಪರಾಧಗಳಿಂದ ಮನುಷ್ಯ ಮತ್ತಷ್ಟು  ವಿಷಾನಿಲಗಳನ್ನು ಸೇರ್ಪಡೆಗೊಳಿಸುತ್ತಿದ್ದಾನೆ. ಯುದ್ಧದಿಂದ ಮನುಷ್ಯರು ಎದುರಿಸುತ್ತಿರುವ ಸಮಸ್ಯೆಗಳು, ಇಂಧನ ಸಮಸ್ಯೆಯ ಗೋಳು ದಿನ ನಿತ್ಯದ ವರದಿಯೇ ಆಗಿದೆ. ಭೂಮಿಯ ಮೇಲಿನ ಮನುಷ್ಯನ ಎಲ್ಲ ಚಟುವಟಿಕೆಗಳೂ ಇಂಧನದ ಮೇಲೆ ಅವಲಂಬಿತವಾಗಿದೆ. ಇಂಧನವಿಲ್ಲದ ನಮ್ಮ ಬದುಕಿನ ಪಥ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯುದ್ಧ ತಂದಿತ್ತ ಇಂಧನ ಸಮಸ್ಯೆ ಕಣ್ಮುಂದೆ ಕಾಣುತ್ತಿದೆ.. ನಾವು ಮನುಜರು ಇದರ ಬಗ್ಗೆ ದನಿ ಎತ್ತುತ್ತಿದ್ದೇವೆ. ಪ್ರಕೃತಿಯ ಮೇಲೆ ಎಂಥ ದುಷ್ಪರಿಣಾಮ ಬೀರುತ್ತಿದೆ ಈ ಯುದ್ಧ!! ಮೌನವಾಗಿದೆ ಗಗನ.. ಮೌನವಾಗಿದೆ ಕಡಲು!! ಮಾನವನ ಬದುಕಿಗೆ ಅನಿವಾರ್ಯವಾದ ಕೆಲಸ – ಕಾರ್ಯಗಳಿಂದ ಪರಿಸರ ಮಲಿನ ಗೊಳ್ಳುವುದನ್ನು ತಡೆಯಲು ಕಷ್ಟ ಸಾಧ್ಯ. ಪರ್ಯಾಯ ವ್ಯವಸ್ಥೆಗಳೂ ಇಲ್ಲ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯ ಅಥವಾ ಒಂದು ದೇಶದ ಪ್ರತಿಷ್ಠೆಗಾಗಿ ಇಡೀ ಮನುಕುಲ ನರಳುವ ಸ್ಥಿತಿಗೆ ಬರುವ ಪರಿಸ್ಥಿತಿಯನ್ನು ಇಂದಿನ ಯುದ್ಧ ಸನ್ನಿವೇಶಗಳು ನಿರ್ಮಾಣ ಮಾಡುತ್ತಿವೆ. ಧನದಾಹ, ಹೆಸರು, ಕೀರ್ತಿಯ ಹಂಬಲ, ಅಧಿಕಾರದ ಅಮಲು  ಇವೆಲ್ಲವುಗಳಿಂದ ಪ್ರಕೃತಿಯನ್ನು ಅಲ್ಲಗಳೆವ ಮನುಷ್ಯರನ್ನು ಪಂಚಭೂತಗಳೇ ತಮ್ಮ ತಮ್ಮ ಕ್ರಿಯೆಗಳ ಮೂಲಕ  ” ನಮ್ಮ ಒಡೆತನ ನಿಮ್ಮ ಮುಷ್ಟಿಯಲ್ಲಿಲ್ಲ  ” ಎಂದು ಹೇಳುವ ದಿನಗಳು ದೂರವಿಲ್ಲ. ಚರಾಚರಗಳಲ್ಲಿ ಜೀವ ಅರಳಿಸಿ ನಗುತ್ತಿರುವ ಭೂಮಿಯ ಸಹನಾ ಗುಣವನ್ನು, ತಂಗಾಳಿಯ ಮೂಲಕ ಮುದಗೊಳಿಸುವ ವಾತಾವರಣದ ಹೃದಯವಂತಿಕೆಯನ್ನು, ಸಕಾಲದಲ್ಲಿ ಮೋಡ ಕಟ್ಟಿ ಮಳೆ ಸುರಿಸಿ ಬೆಳೆಯನ್ನು ಹಸಿರಾಗಿಸುವ ಆಗಸದ ಹಿರಿತನವನ್ನು ನಿರ್ಲಕ್ಷಿಸುವ ನಮಗೆ ಮುಂದಿನ ಬವಣೆಯ ದಿನಗಳ ಅರಿವಿಲ್ಲ. ಪ್ರಕೃತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಅನಿವಾರ್ಯ ಸ್ಥಿತಿ ಬರುವ ಮುನ್ನ ಮನುಕುಲ ಜಾಗೃತಗೊಳ್ಳಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?? ಯುದ್ಧದಾಹಿಗಳಿಗೆ ತಿಳಿ ಹೇಳುವವರು ಯಾರು? ಜಯಲಕ್ಷ್ಮಿ ಕೆ,

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ Read Post »

ಇತರೆ

“ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..”ಹಾಸ್ಯಲೇಖನ,ಗೊರೂರು ಅನಂತರಾಜು

ಹಾಸ್ಯ ಸಂಗಾತಿ ಗೊರೂರು ಅನಂತರಾಜು “ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..” ಬೆಳಿಗ್ಗೆ ಎಂಟು ಗಂಟೆ. ಸೋಮುವಾರ ವಾರದ ಪೂಜೆಗೆ ಹೂ ಹಣ್ಣು, ತಿಂಡಿಗೆ ತರಕಾರಿ ತರಲು ನಗರದ ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್ ಕಣ್ಣಿಗೆ ಬಿತ್ತು. ಅದು ಅಂದಿನ ಕಾಲದ ಬಾಂಡ್ ಸಿನಿಮಾ ಜೇಡರ ಬಲೆ. ವಿದ್ಯಾರ್ಥಿ ದಿನಗಳಲ್ಲಿ ನಮ್ಮೂರ ಶ್ರೀ ಯೋಗನರಸಿಂಹಸ್ವಾಮಿ ಜಾತ್ರೆಗೆ ನೋಡಿದ್ದೆ. ಅದೇನು ಭಯಂಕರ ಹೊಡೆದಾಟ, ನಮ್ಮೂರ ಜಯಣ್ಣ, ಎತ್ತಿನಗಾಡಿಗೆ ಪೋಸ್ಟರ್ ಅಳವಡಿಸಿ ‘ ನೋಡಲು ಮರೆಯದಿರಿ. ಮರೆತು ಮರುಗದಿರಿ. ಭಯಂಕರ ಹೊಡೆದಾಟಗಳಿಂದ ಕೂಡಿದ ಚಿತ್ರ. ಜೇಡರಬಲೆ..ಎಂ.ಪಿ.ಶಂಕರ್ ಕೊಲೆ.. ಜಯಣ್ಣನ ರೋಚಕ ಪ್ರಚಾರಕ್ಕೆ ಆಕರ್ಷಿತನಾಗಿ ಟೆಂಟ್ ಸಿನಿಮಾದಲ್ಲಿ ಫ್ರಂಟ್ (ನೆಲ) ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ದಡ್.! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು ಬಿದ್ದು ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ಕನ್ನಡದ ಕಟ್ಟಾಳು! ಮೀಸೆ ಗೋಪಾಲ. ಬಿದ್ದ ಏಟಿನ ನೋವಿಗೆ ದವಡೆಗೆ ಹೊಡೆಯುವ ಸಿಟ್ಟು ಬಂದರೂ ಹೊಡೆಯಲಾದೀತೆ ಈ ಬಡಕಲು ಶರೀರದ ಕವಿಗೆ.! ಶಕುನಿಯ ಮಾಯ ನೋಟದಂತೆ ಪೋಸ್ ಕೊಟ್ಟು  ವಕ್ರನೋಟದಿ  ನಕ್ಕೆ.“ಎಲ್ಲಿಗೆ ಹೊರಟ್ಯೋ ವಿಕಟಕವಿ. ಬಾ ಟೀ ಕುಡಿಸು..” ತರಕಾರಿ ತರಲು ಹೋಗಬೇಕು ಗುರು.. “ ಹೋಗುವೆ ಬಾ. ಅಪರೂಪಕ್ಕೆ ಸಿಕ್ಕಿದ್ದೀಯ.  ಗುರು ಭವನದಲ್ಲಿ ಟೀ ಕುಡಿಸು ಬಾ.. ಎಂದು ಹೊರಟ ಕಟ್ಟಾಳುವನ್ನು ಹಿಂಬಾಲಿಸಿದೆ.  ಗುರು ಭವನದಲ್ಲಿ ನಮ್ಮ  ಗುರುಗೋಪಾಲರು ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು.“ ನಿನಗೆ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲವೇನೋ ಕವಿ.. ದೋಸೆಯನ್ನು ಬಾಯಿಗೆ ತುರುಕುತ್ತಾ ಕೇಳಿದರು ಗುರುಗಳು.“ ಇಲ್ಲಾ ಗುರುವೇ. ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ? ಗುರುತಿಸಿಕೊಡುವುದು  ಧರ್ಮ ಅಲ್ಲವೇ..?“ಅಯ್ಯೋ ನಿನ್ನ ಕರ್ಮವೇ.! ಎಷ್ಟು ಪುಸ್ತಕ ಬರೆದಿದ್ದಿಯ..?“ ಅರವತ್ತು ದಾಟಿದೆ.. ವಯಸ್ಸು ಅರವತ್ನಾಲ್ಕು ದಾಟಿದೆ.“ ಜಿಲ್ಲೆದು ಆಗಿದೆ ಅಲ್ವೆ.? ಹೌದು ಬಹಳ ಹಿಂದೆಯೇ ಆಗಿದೆ.. ಸರಿ, ಏನಾದ್ರೂ ಮಾಡುವ.. ಈಗ ಒಂದು ಟೀಗೆ ಆರ್ಡರ್ ಮಾಡು..ಬೈಟು ಹೇಳಬೇಡ.“ಸರಿ ಅಣ್ಣ.. ಎಂದು ಬಾಯಿಬಿಟ್ಟು ಹೇಳಿ ವಯಸ್ಸಿನಲ್ಲಿ ನನಗಿಂತ ಸಣ್ಣ..ಎಂದು ಗೊಣಗಿಕೊಂಡೆ.  ‘ಡರ್..! ಎಂದು ತೇಗಿ ‘ಹುಳಿ ತೇಗೆಂದು ಗೊಣಗಿದರು ಗುರು ದ್ರೋಣಚಾರ್ಯರು ಬಿಲ್ಲು ಬಿಡಲಿಲ್ಲ. ನಾನು ಕೊಟ್ಟೆ. ಹೋಟೆಲ್ ನಿಂದ  ಹೊರಗೆ ಬಂದೆವು. ಅಣ್ಣ ನೀವೀಗ ಫಿಲಂ ಸೆನ್ಸಾರ್ ಮಂಡಳಿಯ ಸದಸ್ಯರಲ್ಲವೇ..“ ಕಟ್.! ಹೇ ವಿಕಟಕವಿ  ಆ ಸೆನ್ಸಾರ್ ವಿಷಯವೆಲ್ಲಾ ಹಾದಿ ಬೀದಿಯಲ್ಲಿ ಮಾತನಾಡಬಾರದು.. ಎಂದು ನನ್ನ ಮಾತಿಗೆ ಕತ್ತರಿ ಹಾಕಿ “ಈಗ ಹೇಳು ನಿನ್ನ ಬರವಣಿಗೆ ಹೇಗೆ ಸಾಗಿದೆ. ಬರೇ ಚುಟುಕ ಬರೆದುಕೊಂಡು ಸಮಾಜವನ್ನು ಕುಟುಕುತ್ತಿರುವೆಯಾ  ಹೇಗೆ ಕಟುಕ..?“ಅಣ್ಣಾವರ ಮಾತು ಯಾವಾಗಲೂ ಕಟುವೇ.! ಏನೂ ಮಾಡುವುದು ಮಾತು ಎಷ್ಟೇ ಕಹಿಯಾದರೂ ಅರಗಿಸಿಕೊಳ್ಳಲೇಬೇಕು.‘ಹಾಂ ಗೋಪಾಲ್ ಜೀ..  ದಿನಾ ಬೆಳಿಗ್ಗೆ ನಮ್ಮ ಹಾಸನ್  ಚುಟುಕು ಕವಿ ಕುಮಾರ್ ಅವರು ಹೊಸ ಹೊಸ ಹಸನಾದ ಕವಿತೆ ಹೊಸೆದು ವ್ಯಾಟ್ಸಪ್‌ನಲ್ಲಿ  ನಿಮ್ಮ ನಂಬರನ್ನು ನಮ್ಮ ರೈರ‍್ಸ್  ಗ್ರೂ:ಪ್‌ಗೆ  ಸೇರಿಸಲೇ..“ ಯಾವುದೇ ಕಾರಣಕ್ಕೂ ಬೇಡ. ನಾನು ಈಗಾಗಾಲೇ ಸಾಕಷ್ಟು ರೈರ‍್ಸ್ ಗ್ರೂಪ್ ನಿಂದ ಲೆಫ್ಟ್ ಆಗಿದ್ದೇನೆ. ಇರಲಿ, ನೀನು ಆಗೆಲ್ಲಾ ಲೋಕಲ್ ಪೇಪರ್ ನಲ್ಲಿ  ಚುಟುಕು ಬರೀತ್ತಿದ್ದೆಯೆಲ್ಲಾ.. ಇನ್ನೂ ಜಿಲ್ಲೆಯಲ್ಲೇ ಉಳಿದಿದ್ದಿಯೋ.. ಸ್ಟೇಟ್‌ಗೆ ಪ್ರಮೋಟ್ ಆಗಿದ್ದೀಯೊ..? ಮೊನ್ನೆ ಯಾವುದೋ ನ್ಯೂಸ್ ಪೇಪರ್‌ನಲ್ಲಿ ನಿನ್ನ ನಾನ್ಸೆನ್ಸ್ ಪೊಯೆಂ ನೋಡಿದೆ. ಸರಿ, ಹೇಗಾದ್ರೂ ರ‍್ಕೊಂಡು ಸಾಯಿ.  ಈಗ ನನ್ನ ತಲೆ ಬಿಸಿ ಆಗಿದೆ. ಒಂದು ಬರಕ್ಲೇ ಸಿಗರೇಟು ಕೊಡಿಸು ಬಾ ಎಂದು ಬೀಡಾ ಅಂಗಡಿಗೆ ಕರೆದೊಯ್ದರು. ಅಣ್ಣನನ್ನು ಬೇಗ ಬೀಳ್ಕೊಡಬೇಕು. ಇಲ್ಲವಾದರೇ ಬೀಳುತ್ತೆ ಬರೆ.!“ಇತ್ತೀಚಿಗೆ ನವ್ಯ ಕವಿಗಳು ಜಡೆ ಕವಿತೆ ಬರೆಯುತ್ತಿದ್ದಾರಲ್ಲಾ. ನೀನ್ಯಾವ ಜಡೆಗೆ ಕೈ ಹಾಕಿಲ್ಲವೇನೋ ವಿಕಟಕವಿ. ಸಿಗರೇಟ್ ಹೊಗೆ ಉಗುಳಿ ಅಣ್ಣ ನಿರಾಳ ಮನಸ್ಥಿತಿಗೆ ಬಂದರು.  ‘ಗೋಪಾಲು, ನಾನಿನ್ನು  ಜಡೆ ಕವಿತೆ ಬರೆಯಲು ಪ್ರಯತ್ನಿಸಿಲ್ಲ. ಆದರೆ ಹಿಂದೊಮ್ಮೆ ಟೂ ಲೈನ್ ಚುಟುಕ ಬರೆದಿದ್ದೆ. ಅದನ್ನು ಇಲ್ಲೇ ಈಗಲೇ ವಾಚಿಸುವೇ ಕೇಳಿ ಪ್ಲೀಸ್..ದ್ರೌಪದಿ ತೊಟ್ಟಿದ್ದರೆ ಚೂಡಿದಾರದುಶ್ಯಾಸನ ಎಳೆಯುತ್ತಿದ್ದನೆ ದಾರ..“ಲೇ ಪ್ರಾಸ ಕವಿ, ನೀನು ಹೀಗೆ ಹಾದಿ ಬೀದಿಯಲ್ಲೆಲ್ಲಾ ಚುಟುಕು ವಾಚಿಸಿದರೆ ಅಟ್ಟಿಬಿಡುವೆ ರುದ್ರಪಟ್ಟಣಕ್ಕೆ.! ಲೇ ಕವಿ, ಯಾಕೋ ಹೊಟ್ಟೆನೋವು ಶುರು ಆಗ್ತಾ ಇದೆ. ಈಗ ಗ್ಯಾಸ್‌ಗೆ ಟ್ರಬಲ್ ಟ್ಯಮ್.  ಅವನ್ಯಾರೋ, ಹಳೇ ದೋಸೆ ಮಗಚಿ ಹಾಕಿ ನನ್ನ ಹೊಟ್ಟೆಗೆ ಗ್ಯಾಸ್ ತಂದಿಟ್ಟದ್ದಾನೆ. ಸರಿ ನೀನು ಮನೆಗೆ ಹೊರಡು.  ನಾನು ಹೊರಡುತ್ತೇನೆ. ಇದೇ ಇವತ್ತಿನ ಮೊದಲನೇ ಪಾಠ. ಅಂದ್ಹಾಗೆ ನಿನ್ನ ಚುಟುಕು ಕೇಳಿ  ನನಗೆ ನೆನಪಾಯಿತು. ಇವತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ವಸ್ತಾçಪಹರಣ ದೃಶ್ಯ ವೀಕ್ಷಿಸಿ ಸೆನ್ಸಾರ್ ಮಂಡಳಿಗೆ ವರದಿ ಕಳಿಸಬೇಕು.. ಎಂದು ಸಿಗರೇಟ್ ತುಂಡನ್ನು ಕಾಲಿನಿಂದ ಹೊಸಕಿ ದುಶ್ಯಾಸನನಂತೆ ನಕ್ಕನು.ಅಯ್ಯೋ, ಗೋಪಾಲ  ಕುರುಕ್ಷೇತ್ರ ನಾಟಕದಲ್ಲಿ ಆ ದೃಶ್ಯ ಇಲ್ಲ..! ಗೊರೂರು ಅನಂತರಾಜು, ಹಾಸನ. ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್,ಹಾಸನ-೫೭೩೨೦೧.

“ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..”ಹಾಸ್ಯಲೇಖನ,ಗೊರೂರು ಅನಂತರಾಜು Read Post »

ಇತರೆ

“ನನ್ನ ಯೋಗಾಭ್ಯಾಸ ಪ್ರಾರಂಭ” ಗೊರೂರು ವಸಂತಿ ಮೂರ್ತಿ (ಕೆನಡ)

ವಿಶೇಷ ಲೇಖನ ಗೊರೂರು ವಸಂತಿ ಮೂರ್ತಿ (ಕೆನಡ) “ನನ್ನ ಯೋಗಾಭ್ಯಾಸ ಪ್ರಾರಂಭ” ಮನುಷ್ಯ ಸುಖವಾಗಿ ಬಾಳಬೇಕಾದರೆ ಇರುವುದಕ್ಕೆ ಒಂದು ಮನೆ, ಉಡುವುದಕ್ಕೆ ಬಟ್ಟೆ, ಹೊಟ್ಟೆತುಂಬ ಊಟ ಮತ್ತು ಒಳ್ಳೆಯ ಆರೋಗ್ಯ ಅತ್ಯಗತ್ಯ. ಈ ಪಟ್ಟಿಯಲ್ಲಿ ಆರೋಗ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಮನ್ನಣೆ ಕೊಡಲಾಗುತ್ತದೆ.. ಇದಕ್ಕೆ ಕಾರಣ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮನೆ, ಬಟ್ಟೆ, ರುಚಿಕರವಾದ ಆಹಾರ, ಕಾರು ಒಡವೆಗಳಿಂದ ಸಂತೋಷ ಪಡೆಯಲು ಸಾಧ್ಯ. ಉತ್ತಮ ಆರೋಗ್ಯವಿಲ್ಲದಿದ್ದರೆ ಯಾವ ಐಶ್ವರ್ಯದಿಂದಲೂ ಪ್ರಯೋಜನವಿಲ್ಲ. ಅದರಿಂದಲೇ ಆರೋಗ್ಯವೇ ಭಾಗ್ಯ ಎಂಬ ಮಾತು ವಾಡಿಕೆಯಲ್ಲಿದೆ. “It is health that is real wealth and not pieces of gold and silver” ಎಂದು ಗಾಂಧೀಜಿ ಅವರು ಕೂಡ ಹೇಳಿದ್ದಾರೆ. ಆದ್ದರಿಂದ ಆರೋಗ್ಯ ಭಾಗ್ಯ ಮಿಕ್ಕೆಲ್ಲ ಭಾಗ್ಯಗಳಿಗಿಂತಲೂ ಹೆಚ್ಚು ಮುಖ್ಯ. ಇದು ನಾನು ಕಂಡುಹಿಡಿದ ಹೊಸ ವಿಷಯವೇನಲ್ಲ. ಎಲ್ಲರಿಗೂ ಎಲ್ಲ ಕಾಲದಲ್ಲೂ ತಿಳಿದಿರುವ ವಿಚಾರ. ಹಾಗಿರುವಾಗ ಪ್ರತಿವ್ಯಕ್ತಿಯೂ ತನ್ನ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚು ನಿಗಾ ಇಟ್ಟುಕೊಳ್ಳಬೇಕು ಎಂಬುದು ಸರ್ವವಿದಿತವಾಗಿದೆ ತಾನೇ. ಹಾಗಿದ್ದೂ ವ್ಯಕ್ತಿ ತನ್ನ ಆರೋಗ್ಯದ ವಿಚಾರ ಯೋಚಿಸುವುದು ಅದು ಶರೀರದಲ್ಲಿ ಕಡಿಮೆಯಾಗಿ ತೊಂದರೆ ಶುರುವಾದಾಗ ಮಾತ್ರ. ಉದಾಹರಣೆಗೆ ನಮ್ಮ ಬಾಯಿನಲ್ಲಿ ಇರುವ ಹಲ್ಲನ್ನೇ ನೋಡೋಣ. ನಾವು ನಮ್ಮ ಬಾಯಿನಲ್ಲಿರುವ ಹಲ್ಲನ್ನು ಎಂದೂ ಗಮನಿಸಿದ್ದೇ ಇಲ್ಲ. ಆದರೂ ಅದು ನಾವು ಹುಟ್ಟಿದಾಗಿನಿಂದ ನಮ್ಮ ಬಾಯಲ್ಲಿದ್ದು ನಾವು ಯಾವ ತಿಂಡಿ, ಹಣ್ಣು, ಊಟ, ದೋಸೆ, ಚಪಾತಿ, ವಡೆ ಇಡ್ಲಿ ಸಾಂಬಾರ್ ಮೈಸೂರ್ ಪಾಕ್ ಹೀಗೆ ಏನೇ ಹಾಕಿದರೂ ಅದನ್ನು ಅಗಿದು. ಅದರ ರುಚಿ, ಘಮಗಳನ್ನು ನಮ್ಮ ಬಾಯಿನಲ್ಲಿ ಕುದುರಿಸಿ ನಮ್ಮ ರಸಾನುಭವವನ್ನು ಹೆಚ್ಚಿಸಿದೆ. ಆದರೂ ಹಲ್ಲಿಗೆ ನಾವು ಯಾವ ರೀತಿಯ ಮನ್ನಣೆ ಅಥವಾ ಕೃತಜ್ಞತೆಯನ್ನೂ ತೋರಿಸಿದ್ದಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಹಲ್ಲು ನೋವು ಶುರುವಾದಾಗ ನಮಗೆ ಹಲ್ಲಿನ ಅಸ್ತಿತ್ವ ಬರುತ್ತದೆ. ಆಗ ನಾವು ಯಾವ ತಿಂಡಿಯನ್ನೂ ಬಯಸುವುದಿಲ್ಲ. ಅಷ್ಟೇ ಅಲ್ಲ ನಮ್ಮ ಪ್ರೀತಿಯ ತಿಂಡಿ ಎದುರಿಗೇ ಇದ್ದರೂ ಅದನ್ನು ಬಾಯಿಗೆ ಹಾಕಿಕೊಳ್ಳುವ ಇಚ್ಛೆ ಬರುವುದಿಲ್ಲ. ಹಲ್ಲುನೋವಿಗೆ ಏನು ಮಾಡಬೇಕು ಎಂದು ಕಂಡವರನ್ನೆಲ್ಲ ಕೇಳುತ್ತೇವೆ. ಕೆಲವರು ಉಪ್ಪು ನೀರು ಕುಪ್ಪಳಿಸಿ ಎನ್ನುತ್ತಾರೆ. ಇನ್ನೊಬ್ಬರು ಲವಂಗ ಬಾಯಿಗೆ ಹಾಕಿಕೊಳ್ಳಿ ಎನ್ನುತ್ತಾರೆ. ನಾವು ಏನುಮಾಡುವುದಕ್ಕೂ ತಯಾರಾಗುತ್ತೇವೆ. ದಂತವೈದ್ಯರನ್ನು ಹುಡುಕಿಕೊಂಡು ಭರಬಿದ್ದು ಓಡುತ್ತೇವೆ. ಆದ್ದರಿಂದ ನಾವು ನಮ್ಮ ಆರೋಗ್ಯಕ್ಕೆ ಗಮನ ಕೊಟ್ಟು ಅದನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲರಿಗೂ ಗೊತ್ತಿದೆ. ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಕೆಲವು ಸುಲಭವಾದ ನಿಯಮಗಳನ್ನು ಪಾಲಿಸಬೇಕು. ಹಿತಮಿತವಾದ ಊಟ, ವ್ಯಾಯಾಮ ಇವು ಅತ್ಯಗತ್ಯ, ನಮ್ಮಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರೇ ಅಲ್ಲ. ಇಷ್ಟ ಬಂದದ್ದನ್ನು ತಿನ್ನುತ್ತಾ, ಕುಡಿಯುತ್ತಾ, ದಿನವೂ ಮದುವೆ, ಮುಂಜಿ, ತಿಥಿ, ಹಬ್ಬ, ಹರಿದಿನ, ಗ್ರಹಪ್ರವೇಶ, ದೇವರ ಸಮಾರಾಧನೆ ಹುಟ್ಟಿದ ಹಬ್ಬಗಳು, ಹೋಟೆಲ್ ಊಟಗಳು ಹೀಗೆ ಯಾವಯಾವ ನೆಪವನ್ನೂ ಹುಡುಕಿ ಮಿತಿಮೀರಿ ಊಟ ಮಾಡುತ್ತಾ, ತಮ್ಮ ಆರೋಗ್ಯವನ್ನು ಅಲಕ್ಷ್ಯಮಾಡುತ್ತಾರೆ. ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ಬೋಂಡಾ, ಚೆಕ್ಕುಲಿ, ಮಸಾಲವಡೆ ಇನ್ನೂ ಅನೇಕ ವಿಧವಾದ ಖಾದ್ಯ ಪದಾರ್ಥಗಳನ್ನು ಸದಾ ಮೇಯುತ್ತಾ ಮೈಗಳ್ಳರಾಗಿ ನಾನು ಕಲ್ಲನ್ನೂ ತಿಂದು ಅರಗಿಸಿಕೊಳ್ಳಬಲ್ಲೆ. ಆರೋಗ್ಯದಲ್ಲಿ ನನಗೆ ಸಮಾನವಾದವರು ಯಾರೂ ಇಲ್ಲವೇ ಇಲ್ಲ. ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ಚಿಕ್ಕವಯಸ್ಸಿನ ಯುವಕರಲ್ಲಿ ಈ ತರ್ಕ ನಡೆಯಬಹುದು. ಆದರೆ ಇದು ತಾತ್ಕಾಲಿಕ. ಕೆಲವೇ ವರ್ಷಗಳಲ್ಲಿ ಮೈಯ್ಯಲ್ಲಿ ತೂಕ ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ಜನರಿಗೆ ಅಷ್ಟು ಆರ್ಥಿಕ ಸೌಕರ್ಯ ಇರುತ್ತಿರಲಿಲ್ಲವಾಗಿ ಅವರು ಊಟ ತಿಂಡಿಗಳ ಬಗ್ಗೆ ಹಿತಮಿತವಾಗಿ ಇರುತ್ತಿದ್ದರು. ಊಟದಲ್ಲಿ ಅಷ್ಟು ತುಪ್ಪ, ಎಣ್ಣೆ, ಬೆಣ್ಣೆ ಸಕ್ಕರೆ, ಮೈದಾ ಇರುತ್ತಿರಲಿಲ್ಲ. ಈಗ ಹೆಚ್ಚು ಜನರ ಜೀವನ ಆರ್ಥಿಕವಾಗಿ ಸುಧಾರಿಸಿದೆ. ಇದು ಸಂತೋಷದ ವಿಚಾರ. ಇದನ್ನು ಜನ ತಮ್ಮ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಆದೂ ಅಲ್ಲದೆ ಆ ಕಾಲದಲ್ಲಿ ಬಸ್ಸು ಕಾರುಗಳ ಸೌಕರ್ಯ ಅಷ್ಟು ಇರಲಿಲ್ಲವಾಗಿ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಮನೆಕೆಲಸ, ದನಕರುಗಳ ಪಾಲನೆ, ವ್ಯವಸಾಯ ಹೀಗೆ ಎಲ್ಲರಿಗೂ ಯಥೇಚ್ಛವಾಗಿ ವ್ಯಾಯಾಮ ಸಿಗುತ್ತಿತ್ತು. ಈಗ ಸಾರಿಗೆ ವ್ಯವಸ್ಥೆಗಳು ತುಂಬಾ ಸುಧಾರಿಸಿವೆ. ಪ್ರತಿಮನೆಯಲ್ಲೂ ಸ್ಕೂಟರ್, ಕಾರುಗಳಿದ್ದು, ಯಾರೂ ಕಾಲಿಗೆ ವ್ಯಾಯಾಮ ಕೊಡಬೇಕಾದ ಅವಶ್ಯಕತೆಯೇ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದರೆ ಮನೆಯ ಹೆಂಗಸರಿಗೆ ಕೆಲಸ ಜಾಸ್ತಿ ಯಾಗುತಿತ್ತು. ಆದರೆ ಈ ಆಧುನಿಕ ಯುಗದಲ್ಲಿ ಹೆಂಗಸರು ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಇಷ್ಟ ಬಂದರೆ ಮಾಡಬಹುದು. ಇಲ್ಲದಿದ್ದರೆ ಬೇಕಿಲ್ಲ. ಅದರಲ್ಲೂ ಅನೇಕ ಹೆಂಗಸರು ಹೊರಗೆ ಉದ್ಯೋಗ ಮಾಡುತ್ತಾರೆ. ಅವರಿಗೆ ಮನೆ ಕೆಲಸ ಮಾಡುವುದಕ್ಕೆ ಖಂಡಿತ ಸಮಯ ಸಿಕ್ಕುವುದಿಲ್ಲ. ಈಗ ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ಬೀದಿ ಬೀದಿಯಲ್ಲೂ ರುಚಿ ರುಚಿಯಾದ ತಿಂಡಿ, ಊಟಗಳನ್ನೂ ತಯಾರಾಗಿ ಮಾರುವ ಅಂಗಡಿಗಳು ಇವೆ. ಅಲ್ಲಿಯೇ ಹೋಗಿ ಕುಳಿತು ತಿನ್ನಬಹುದು ಇಲ್ಲ ಮನೆಗೆ ಕಟ್ಟಿಸಿಕೊಂಡು ಬರಬಹುದು. ಸಿಹಿ ಪದಾರ್ಥಗಳನ್ನು ಮಾಡಿ ರೆಡಿಯಾಗಿ ಇಟ್ಟಿರುವ ಆಶಾ ಸ್ವೀಟ್ಸ್, ಕಾಂತಿಸ್ವೀಟ್ಸ್, ನಂದಿನಿ ಪಾರ್ಲರ್, ಹೋಳಿಗೆಮನೆ ಮುಂತಾದುವು ಬಹಳ ಜನಪ್ರಿಯವಾಗಿವೆ. ಹೀಗೆ ಕಷ್ಟಪಡದೇ ರುಚಿ ರುಚಿಯಾದ ಊಟ ಮಾಡುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಇದು ಬಹಳ ಮಜಾ ಎನ್ನಿಸುತ್ತದೆ. ಆದರೆ ಈ ಖುಷಿಗೆ ಬರುವ ಧಕ್ಕೆ ನಮ್ಮ ಶರೀರ ಸ್ಥೂಲವಾದಾಗ. ಇದ್ದಕ್ಕಿದ್ದಂತೆ ನಾನು ದಪ್ಪನಾಗುತ್ತಿದ್ದೇನೆ ಎನ್ನುವ ಒಳಧ್ವನಿ ಕೇಳಿಸಲು ಶುರುವಾಗುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿಲ್ಲ. ಅಂಗಿ, ರವಿಕೆ ಬಿಗಿಯಾದ ಕಾರಣ ಏನು ಎಂದು ಹೊರಗಿನ ಕಾರಣ ಹುಡುಕುತ್ತೇವೆ. “ನೋಡು ಈ ಬ್ಲೌಸ್ ಒಂದು ಸಲ ನೀರಿಗೆ ಹಾಕಿದ ಕೂಡಲೇ ಶೃಂಕ್ ಆಗಿದೆ.” ಎನ್ನುತ್ತೇವೆ. ಆದರೆ ನೀರನ್ನೇ ಕಾಣದ ಪೆಟ್ಟಿಗೆಯಲ್ಲಿ ಮಡಿಸಿ ಇಟ್ಟಿರುವ ಸಿಲ್ಕ್ ರವಿಕೆ ಶೃಂಕ್ ಆಗುವುದಕ್ಕೆ ಏನು ಕಾರಣ? ಅದಕ್ಕೆ ಬಟ್ಟೆ ಹೊಲೆದ ದರ್ಜಿಯೇ ಕಾರಣ ಎಂದು ತೀರ್ಪು ಕೊಡುತ್ತೇವೆ. ಕರೆಕ್ಟ್ ಆಗಿರುವ ಅಳತೆ ಬ್ಲೌಸ್ ಕೊಟ್ಟಿದ್ದೆ. ಆದರೂ ಎಷ್ಟು ಬಿಗಿಯಾಗಿ ಹೊಲೆದಿದ್ದಾನೆ ನೋಡು. ಉಸಿರು ಬಿಡುವುದಕ್ಕೇ ಆಗುವುದಿಲ್ಲ ಎಂದು ನಿರಪರಾಧಿಯಾದ ದರ್ಜಿಯನ್ನೇ ಬೈಯುತ್ತೇವೆ. ಆದರೆ ನಮ್ಮ ಒಳಗುಟ್ಟು ನಮಗೇ ಗೊತ್ತಿದೆ. ನನ್ನ ದೇಹದ ತೂಕ ಜಾಸ್ತಿ ಆಗುತ್ತಿದೆ. ಊಟ ಕಡಿಮೆ ಮಾಡಬೇಕು. ದಿನವೂ ವಾಕಿಂಗ್ ಮಾಡಬೇಕು. ಯೋಗ ಕ್ಲಾಸ್ ಸೇರುವುದು ಒಳ್ಳೆಯದು ಎಂಬ ಯೋಚನೆ ಬರುತ್ತದೆ. ಆದರೆ ಶರೀರ ಸ್ಥೂಲವಾದಷ್ಟೂ ವ್ಯಾಯಾಮ ಮಾಡುವುದು ಹೆಚ್ಚು ಕಷ್ಟವಾಗುತ್ತದೆ. ನಡೆಯುವಾಗ ಏದುಸಿರು ಬರುತ್ತದೆ. ಅನೇಕರಿಗೆ ಡಾಕ್ಟರು ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿಯಾಗುತ್ತಿದೆ. ನೀವು ವ್ಯಾಯಾಮ ಮಾಡಿ. ತೂಕ ಕಡಿಮೆ ಮಾಡಿಕೊಳ್ಳಿ ಎಂದು ಬಹಳ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಕೇಳಿದಾಗ ನಮಗೆ ಡಾಕ್ಟರರ ಮೇಲೆಯೇ ಅಸಮಾಧಾನವಾಗುತ್ತದೆ. ಬ್ಲಡ್ ಪ್ರೆಷರ್ ವಿಚಾರ ಹೇಳುವಾಗ ನನಗೆ ನನ್ನ ಚಿಕ್ಕಪ್ಪ (ನನ್ನ ತಂದೆಯವರ ಸ್ವಂತ ತಮ್ಮ) ಪಂಡಿತ ನರಸಿಂಹಾಚಾರ್ ಅವರ ಜ್ನ್ಯಾಪಕ ಬರುತ್ತದೆ. ಅವರು ಬಹಳ ವೈದೀಕರು. ಶ್ರದ್ಧಾವಂತರು. ಸಂಸೃತ, ಕನ್ನಡ ಹಾಗೂ ಹಿಂದಿ ಪಂಡಿತರು. ಊಟ ತಿಂಡಿಗಳಲ್ಲಿ ಬಹಳ ನಿಯಮವಾಗಿ ಇರುವವರು. ಏಕಾದಶಿಯ ದಿನ ಸಂಪೂರ್ಣ ಉಪವಾಸ ಮಾಡುತ್ತಿದ್ದರು. ಅವರು ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೂ ನಡೆದುಕೊಂಡೇ ಹೋಗುತ್ತಿದ್ದರು. ಆಟೋರಿಕ್ಷಾ ಹತ್ತಿದವರೇ ಅಲ್ಲ. ಅವರು ಪ್ರತಿವರ್ಷ ಚಾತುರ್ಮಾಸ್ಯ ಎಂಬ ವ್ರತವನ್ನು ಪಾಲಿಸುತ್ತಿದ್ದರು. ಅದು ಬಹಳ ಕಷ್ಟಕರವಾದ ವ್ರತ. ವರ್ಷದಲ್ಲಿ ನಾಲ್ಕು ತಿಂಗಳು, ಪ್ರತಿತಿಂಗಳೂ ನಿರ್ದಿಷ್ಠವಾದ ಪದಾರ್ಥಗಳನ್ನು ವರ್ಜಿಸಿ ಊಟ ಮಾಡಬೇಕು. ಕೊನೆಯ ತಿಂಗಳಿನಲ್ಲಿ ಉಪ್ಪಿಲ್ಲದೆ ಊಟಮಾಡಬೇಕು. ಇಂತಹ ಕಠಿಣ ವ್ರತವನ್ನು ಅನೇಕ ವರ್ಷಗಳ ಕಾಲ ಪಾಲಿಸಿ ಜಯಿಸಿದ ಅವರಿಗೆ ನಾವು ಸದಾಕಾಲವೂ ಮೇಯುತ್ತಿರುವುದನ್ನು ನೋಡಿ ಮನಸ್ಸಿಗೆ ಕಷ್ಟವಾಗಿದ್ದಿರಬೇಕು. ಅವರು ಯಾವುದನ್ನೂ ಖಡಾಖಂಡಿತವಾಗಿ ಹೇಳುವವರು. ಆದರೆ ಅವರ ಮನಸ್ಸು ಒಳ್ಳೆಯದು. ಅವರು ಮೃದುಹೃದಯದವರು. ಅವರ ಮಾತೇ ಗಡಸು. ಈ ಕಾರಣದಿಂದ ನಾವು ಚಿಕ್ಕಂದಿನಿಂದಲೂ ಅವರೊಡನೆ ಎಷ್ಟೋ ಅಷ್ಟೇ ಮಾತನಾಡುತ್ತಿದ್ದೆವು. ಒಮ್ಮೆ ನಾನು ಡಾಕ್ಟರ್ ಬಳಿ ಹೋಗಿ ವಾಪಸ್ಸು ಬಂದಾಗ ಅವರು ಕಾಳಜಿಯಿಂದ ಡಾಕ್ಟರ್ ಏನು ಹೇಳಿದರು ಎಂದು ವಿಚಾರಿಸಿದರು. ಡಾಕ್ಟರ್ ನನಗೆ ಬ್ಲಡ್ ಪ್ರೆಷರ್ ಜಾಸ್ತಿ ಆಗಿದೆ ಎಂದು ಹೇಳಿದರು ಎಂದೆ. ಅವರು ನಿರ್ದಾಕ್ಷಿಣ್ಯವಾಗಿ “ಅದು ಬ್ಲಡ್ ಪ್ರೆಷರ್ ಅಲ್ಲ. ಫುಡ್ ಪ್ರೆಷರ್. ನಿನಗೆ ಬ್ಲಡ್ ಪ್ರೆಷರ್ ಹೆಚ್ಚಾಗಿರುವುದಕ್ಕೆ ಇಷ್ಟೇ ಕಾರಣ. ಆಹಾರ ಜಾಸ್ತಿ ಆಗಿದೆ. ನೀನು ಊಟ ತಿಂಡಿಗಳನ್ನು ತಿನ್ನುವುದು ಕಡಿಮೆ ಮಾಡಿಕೋ. ದಿನಾ ಒಂದುಘಂಟೆ ಕಾಲ ನಡೆಯುವ ಅಭ್ಯಾಸ ಇಟ್ಟುಕೋ. ನಿನ್ನ ಬ್ಲಡ್ ಪ್ರೆಷರ್ ತಾನಾಗಿಯೇ ಹತೋಟಿಗೆ ಬರುತ್ತದೆ.” ಎಂದು ತೀರ್ಮಾನ ಕೊಟ್ಟರು. ನಾನು ಅವರಿಂದ ಸಹಾನುಭೂತಿಯನ್ನು ನಿರೀಕ್ಷಿಸಿದ್ದೆ. ಅದರ ಬದಲು ಅವರ ಈ ನಿರ್ಣಯವನ್ನು ಕೇಳಿ ನನಗೆ ಸ್ವಲ್ಪ ಅಪಮಾನವಾದಂತಾಯಿತು. ಮುಖ ಪೆಚ್ಚಾಯಿತು. ಅಲ್ಲಿಯೇ ನಿಂತಿದ್ದ ಅವರ ಮಗಳು ಹೆಚ್ಚು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿದಳು. ಆಮೇಲೆ ಅಣ್ಣ ಹತ್ತಿರ ಯಾಕೆ ಹೇಳುವುದಕ್ಕೆ ಹೋದೆ. ಅವರಿಗೆ ಗೊತ್ತಿರುವುದು ತಲೆಗೆಲ್ಲಾ ಒಂದೇ ಮಂತ್ರ. “ಲಂಘನಮ್ ಪರಮೌಷಧಂ” ಎಂದು ನಕ್ಕಳು. ಆದರೆ ನನಗೆ ಮಾತ್ರ ಅವರು ಹೇಳಿದ್ದು ನೂರಕ್ಕೆ ನೂರು ನಿಜ ಎನ್ನಿಸಿತು. ನಮ್ಮ ತೂಕ ಹೆಚ್ಚಾಗಿರುವುದಕ್ಕೆ ಆಧುನಿಕ ಯುಗದಲ್ಲಿ ಅನೇಕ ಕಾರಣಗಳು ಇವೆ ಎಂದು ಹೇಳಿದೆನಷ್ಟೆ. ಸೃಷ್ಟಿಕರ್ತನ ತಪ್ಪೂ ಇದರಲ್ಲಿ ಇದೆ ಎನ್ನಿಸುತ್ತದೆ. ಅದು ಹೇಗೆ ಎಂದು ನೀವು ಕೇಳಬಹುದು. ದೇವರು ಮನುಷ್ಯನ ಶರೀರವನ್ನು ಸೃಷ್ಟಿಸಿದಾಗ ಪ್ರತಿಯೊಬ್ಬ ಜೀವಿಗೂ ಒಂದು ತಲೆ, ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಎರಡು ಕೈ, ಎರಡು ಕಾಲು ಹೀಗೆ ನಿಗದಿಯಾಗಿ ಕೊಟ್ಟಿದ್ದಾನೆ. ಆದರೆ ನಮ್ಮ ಮೈಯ್ಯನ್ನು ಸುತ್ತಿರುವ ಚರ್ಮಕ್ಕೆ ಇಷ್ಟೇ ಎಂಬ ನಿಗದಿಯೇ ಇಲ್ಲ. ಅದು ನಾವು ದಪ್ಪನಾದಷ್ಟೂ ಹಿಗ್ಗುತ್ತಾ ಹೋಗುತ್ತದೆ. ಒಂದು ಪಕ್ಷ ಹಾಗಿಲ್ಲದೇ ನಾವು ತಿನ್ನುತ್ತಿರುವಾಗಲೇ ಆ ಕ್ಷಣದಲ್ಲೇ ನಮ್ಮ ಹೊಟ್ಟೆ ದಪ್ಪನಾಗಿ ಊದುತ್ತಾ ಚರ್ಮ ಬಿಗಿಯಾಗುತ್ತಾ ಪಟಾರ್ ಎಂದು ಹರಿದುಹೋಗಿ ನಾವು ತಿಂದಿದ್ದೆಲ್ಲ ಹೊರಕ್ಕೆ ಚೆಲ್ಲಿ ನಾವು ಎಷ್ಟು ತಿಂದಿದ್ದೇವೆ ಎಂದು ಎಲ್ಲರಿಗೂ ಕಾಣಿಸುವಂತಾಗಿದ್ದರೆ ನಮಗೆ ಆಗುವ ಅವಮಾನವನ್ನು ಊಹಿಸಿಕೊಳ್ಳಿ. ತಕ್ಷಣವೇ ಹೊಟ್ಟೆಗೆ ತುರುಕುವುದನ್ನು ನಿಲ್ಲಿಸಬೇಕಾಗಿತ್ತಿತ್ತು. ಅದಕ್ಕೇ ದೇವರು ನಮ್ಮ ಮೇಲೆ ಕರುಣೆ ಇಟ್ಟು ಈ ವರವನ್ನು ಕರುಣಿಸಿದ್ದಾನೆ ಎನ್ನಿಸುತ್ತದೆ. ನಾನು ಮೊದಲೇ ಹೇಳಿದಂತೆ ಆರ್ಥಿಕವಾಗಿ ಸಮಾಜದಲ್ಲಿ ಬಹಳ ಸುಧಾರಣೆ ಉಂಟಾಗಿದೆ. ಅನೇಕರು ಕಾರು, ಸ್ಕೂಟರ್ ಹೀಗೆ ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಅನೇಕ ಮನೆಗಳಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಅದೂ ಅಲ್ಲದೇ ಸಮಾಜದಲ್ಲಿ ಕಾರು ಇಟ್ಟುಕೊಂಡವರ ಘನತೆ ಗೌರವಗಳು ಹೆಚ್ಚು ಎನ್ನಿಸಿಕೊಳ್ಳುತ್ತದೆ. ಇದರಿಂದ ವಾಕಿಂಗ್ ಮುಂತಾದ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ. ಅಷ್ಟೇ ಅಲ್ಲ ದೊಡ್ಡ ನಗರಗಳಲ್ಲಿ ಸ್ವಂತ ವಾಹನವಿಲ್ಲದಿದ್ದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೇ ಬಹಳ ಕಷ್ಟವಾಗುತ್ತದೆ. ಆಟೋ, ಬಸ್ಸು, ಊಬರ್ ಇವು ಯಾವುದೂ ಸಮರ್ಪಕವಾಗಿ ನಮ್ಮನ್ನು ಸಮಯಕ್ಕೆ ಸರಿಯಾಗಿ ತಲಪಿಸುವುದಿಲ್ಲ. ಈ ಕಾರಣದಿಂದ ಯಾವ ಜಾಗಕ್ಕಾದರೂ ಹೋಗಬೇಕೆಂದರೆ ಹೆಚ್ಚು ಕಡಿಮೆ ಒಂದು ಇಡೀ ದಿನವನ್ನೇ ಮೀಸಲಾಗಿಡಬೇಕಾಗುತ್ತದೆ. ಇತ್ತೀಚೆಗೆ ನಮ್ಮ ಹಳ್ಳಿಯ

“ನನ್ನ ಯೋಗಾಭ್ಯಾಸ ಪ್ರಾರಂಭ” ಗೊರೂರು ವಸಂತಿ ಮೂರ್ತಿ (ಕೆನಡ) Read Post »

ಇತರೆ, ಲಹರಿ

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ

ನೆನಪಿನ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಓಯ್ ಪಾರ್ಲೆ ಹುಡುಗಿ” ನಾನು ಇನ್ನೂ ಚಿಕ್ಕವಳಿದ್ದೆ ಒಂದು ದಿನ ಅಂದು ಭಾನುವಾರ. ನಮ್ಮದೇ ಅಂಗಡಿ ಇತ್ತು, ಅಂಗಡಿಗೆ ಹೋಗಿ ಪಾರ್ಲೆ ಬಿಸ್ಕಿಟ್ ತರಬೇಕ ಅಂತ ಹೋದೆ.ಬಹಳ ದೂರ,ಅಷ್ಟು ಸಮೀಪ ಅಲ್ಲದ,ನಡೆದುಕೊಂಡೆ ಹೋಗಬೇಕಿತ್ತು.‌ ಅಂಗಡಿಯಲ್ಲಿ ಅಪ್ಪ ಇದ್ದರೆ, ಎನ್ ಬೇಕೋ ಅದನೆಲ್ಲ ತಿನ್ನಬಹುದಿತ್ತು.. ಆದರೆ ದೊಡ್ಡಪ್ಪ ಇದ್ದಾಗ ಕಿರಿ ಕಿರಿ, ಅದನ್ನ ತಿನ್ನಬ್ಯಾಡ್ರಿ,ಮುಟ್ಟಬ್ಯಾಡ್ರಿ ಅಂತ ಕಣ್ಣಲ್ಲೇ ಬಯ್ಯುವ. ಅಂದು ದಾರಿಯಲ್ಲಿ ಒಬ್ಬ ಹುಡುಗ ಹರಿದ ಬಟ್ಟೆ, ಕೆದರಿದ ಕೂದಲು, ಕೊಳಕು ಕೈ,ಕಾಲುಗಳು. ನನ್ನ ಬೆನ್ನತ್ತಿ ಬಂದಿದ್ದ. ನಾನು ಬಿಸ್ಕಿಟ್ ತಗೊಂಡು ಮನೆಗೆ ಬರತಿದ್ದಾಗ ಅವನು ಹಿಂದಿಂದೆ ಬಂದು ಮನೆಗೆ ಹತ್ತಿರ ಆಗ್ತಿದ್ದಂತೆ ” ಓಯ್ ಪಾರ್ಲೆ ಹುಡುಗಿ, ಓsಯ್ , ಕಿವಿ ಕೇಳಿಸೋದಿಲ್ಲ ನಿನಗ? ಎನ್ನುತಾ ನಮ್ಮ ಮನೆಯ ಕಟ್ಟೆಯ ಮೇಲೆ ಬಂದು ಕುಳಿತ”. ಎಲ್ಲರಿಗೂ ಆಶ್ಚರ್ಯ, ಯಾರ ಇವನು? ಇವನನ್ನ ಯಾಕ ಕರೆದುಕೊಂಡ ಬಂದೆ? ನೂರೆಂಟು ಪ್ರಶ್ನೆಗಳು. ಅವನ್ನ ನಾನು ಕರಕೊಂಡ ಬಂದಿಲ್ಲ, ಅವನೇ ಬಂದಿದ್ದಾನ ಅಂದೆ, ಅವ್ವ, ಯಾರೋ ಕಂದ ನೀನು ? ಎನ್ ಬೇಕು? ನಿಮ್ಮನೆ ಎಲ್ಲಿ? ನಿನ್ಯಾಕಿಲ್ಲಿ ಬಂದಿಯಾ? ಅಂದಾಗ ಅವನ ದೃಷ್ಟಿ ಆ ಬಿಸ್ಕಿಟ್ ಕಡೆಗೆ ಇತ್ತು. ಆವಾಗ ಅನಿಸಿತ್ತು ನನಗೆ ಓಹೋ, ಪಾಪ! ಇವನಿಗೆ ಬಿಸ್ಕಿಟ್ ತಿನ್ನುವ ಆಸೆ ಆಗಿರಬೇಕು. ಬಿಸ್ಕಿಟ್ ಬೇಕಾ? ಅಂತ ಬರಿ ಕೈ ಮುಂದೆ ಮಾಡಿದೆ, ಕಿತ್ತುಕೊಂಡವನೇ ಅಲ್ಲಿಂದ ಓಡಿ ಹೋದ.ಅವ್ವ,ಬಾರೋ ಇಲ್ಲಿ ಊಟ ಮಾಡುವಂತೆ. ಅಂತ ಕೂಗಿದರೂ ತಿರುಗಿ ನೋಡಲಿಲ್ಲ ಅವನು. ಅವ್ವ ಅವನು ಮರೆಯಾಗುವವರೆಗೆ ಬಿಡಳು. ಅಯ್ಯೋ, ಅವ್ವಾ ಅವನು ಹೋದಾ, ನನಗೆ ಹಸಿವಾಗಿದೆ.‌ಮತ್ತೆ ಅಂಗಡಿಗೆ ಹೋಗಿ ಬಿಸ್ಕಿಟ್ ತರಲಾ? ಅಂದೆ. ಬೇಡ ಊಟ ಮಾಡು ಬಾ. ಬಿಸ್ಕಿಟ್ ಬಹಳ ತಿನ್ನಬಾರದು ಅಂತ ಒಳಗೆ ಹೋದಳು. ಇದ್ದದ್ದನ್ನ ಕಸಿದುಕೊಂಡು ಹೋದ, ಇನ್ನೂ ತಿನ್ನೊದೆಲ್ಲಿಂದ. ನನಗೆ ಊಟ ಬೇಡವಾಗಿತ್ತು, ಆ ಹುಡುಗ ಯಾರಿರಬಹುದು? ದಾರಿಯಲ್ಲಿ ತಾನಾಗಿಯೇ ಹಿಂದೆ ಬಂದು ಹೋಗಿಯೆ ಬಿಟ್ಟ್ನಲ್ಲ.! ಅನಾಥನಾ? ಅವನಿಗೆ ಅವ್ವ-ಅಪ್ಪ ಇಲ್ಲವಾ? ಅವನು ಹಾಗೇಕಿದ್ದ. ಉತ್ತರವಿಲ್ಲದ ಪ್ರಶ್ನೆಗಳು.ಆ ದಿನ ,ಆ ಕ್ಷಣ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಕಾರಣ ಆ ಹುಡುಗ ಹುಡುಕಿದರೂ‌ ಸಿಗದವ. ಹಸಿವು ಅನ್ನೋದು ಏನೆಲ್ಲ ಮಾಡಿಸಬಹುದಲ್ಲವೆ.??!! pics:chatgpt ಕಲ್ಪನಾ ಎಸ್ ಪಾಟೀಲ್

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ Read Post »

You cannot copy content of this page

Scroll to Top