ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು

ಕಲಾ ಸಂಗಾತಿ ಗೊರೂರು ಅನಂತರಾಜು “ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿ ಅವರಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ” ಹಾಸನದ ನಿವೃತ್ತ ಚಿತ್ರಕಲಾ ಶಿಕ್ಷಕರು ಕಲಾವಿದರು  ಬಿ.ಎಸ್.ದೇಸಾಯಿ ಅವರ ಕಲಾಸಾಧನೆಗೆ ಕರ್ನಾಟಕ ರಾಜ್ಯ ಲಲಿತ ಕಲಾ ಅಕಾಡೆಮಿಯ ೨೦೨೫-೨೬ನೇ ಸಾಲಿನ ಗೌರವ ಪ್ರಶಸ್ತಿ ಒಲಿದು ಬಂದಿದೆ. ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ದಿನಾಂಕ ೨-೧೦-೧೯೬೫ ರಂದು ಜನಿಸಿದ ಇವರು ಹಾಸನದ ಬಾಲಕರ ಪದವಿ ಪೂರ್ವ ಕಾಲೇಜಿನಲ್ಲಿ ಚಿತ್ರಕಲಾ ಅಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿ ಇಲ್ಲಿಯೇ ನೆಲೆಸಿದ್ದಾರೆ. ನಾನು ಹಾಸನಕ್ಕೆ ಬಂದು ೩೬ ವರ್ಷಗಳಾದವು ಗುರುವೇ (ಗೊರೂರು ಅನಂತರಾಜು) ಈ ಪರಿಸರವು ನನಗೆ ಪ್ರಿಯವಾಗಿ ಒಗ್ಗಿಹೋಯಿತು. ಬಂದ ಹೊಸದರಲ್ಲಿ ಊರ ಕಡೆಗೆ ವರ್ಗ ಮಾಡಿಸಿಕೊಳ್ಳುವ ಆಲೋಚನೆ ಇತ್ತಾದರೂ ಕಾಲಕ್ರಮೇಣ ಇಲ್ಲಿಯ ಕಲಾವಿದರು, ಸಾಹಿತಿಗಳ ಒಡನಾಟದಲ್ಲಿ ಇಲ್ಲಿಯೇ ಮನೆ ಮಾಡಿಕೊಂಡೆ ಎಂದು ಮನದುಂಬಿ ಹೇಳಿದರು. ಇವರು ಚಿತ್ರಕಲಾ ವ್ಯಾಸಂಗವು   ಪ್ರಿ-ಯೂನಿವರ್ಸಿಟಿ ಕೋರ್ಸ್ (ವಾಣಿಜ್ಯ ಕಲೆ), ಡ್ರಾಯಿಂಗ್ ಮತ್ತು ಪೇಂಟಿAಗ್‌ನಲ್ಲಿ ಡಿಪ್ಲೊಮಾ, ಡಿಪ್ಲೊಮಾ ಇನ್ ಆರ್ಟ್ ಮಾಸ್ಟರ್, ಮಾಸ್ಟರ್ ಆಫ್ ವಿಷುಯಲ್ ಆರ್ಟ್  ಆದರ್ಶ ಫೈನ್ ಆರ್ಟ್ ಕಾಲೇಜ್ ಇಂಡಿ ಬಿಜಾಪುರ ಜಿಲ್ಲೆ, ಅಮೂರ್ತ ಕಲೆಯ ಕಲಾವಿದರು:ಅಮೂರ್ತತೆಯ ಬೆಳವಣಿಗೆಯ ಹಿಂದಿನ ಪ್ರೇರಣೆಗಳಲ್ಲಿ ಒಂದು ವಿಷಯಗಳ ಪ್ರಪಂಚದಿAದ ದೂರವಿರಲು ಅನೇಕ ಕಲಾವಿದರ ಬಲವಾದ ಬಯಕೆಯಾಗಿದೆ. ಲೌಕಿಕ ಭೌತವಾದದ ಉಲ್ಲೇಖವನ್ನು ಬಹಿಷ್ಕರಿಸುವುದು ಅಮೂರ್ತ ಕಲಾವಿದರ ಕೇಂದ್ರ ಗುರಿಯಾಗಿದೆ. ಇದು ಔಪಚಾರಿಕ ಪರಿಶುದ್ಧತೆಯ ಹುಡುಕಾಟಕ್ಕೆ ಮತ್ತು ಅತಿಕ್ರಮಣಕ್ಕಾಗಿ ನಿರಂತರವಾದ ಮಾನವ ಅನ್ವೇಷಣೆಯನ್ನು ವ್ಯಕ್ತಪಡಿಸುವ ಮಾರ್ಗಗಳ ಪರಿಗಣನೆಗೆ ಎರಡಕ್ಕೂ ಕಾರಣವಾಯಿತು. ದೇಸಾಯಿಯವರ ಕಲೆಯ ಪಯಣವೂ ಅದೇ ಹಾದಿಯಲ್ಲಿದೆ. ಯೋಗ ಮತ್ತು ಧ್ಯಾನದ ಸ್ವಾಭಾವಿಕತೆಯ ವರ್ಷಾಚರಣೆಯು ಅವರ ಹೊಸ ಅನ್ವೇಷಣೆಗೆ ಸರಿಹೊಂದುವAತೆ ಆಧ್ಯಾತ್ಮಿಕ ಭಾಷೆಯನ್ನು ಹುಡುಕುವಂತೆ ಮಾಡುತ್ತದೆ. ಸುತ್ತಮುತ್ತಲಿನ ಜೀವನದಲ್ಲಿ ಪರಮಾರ್ಥದ ಅನ್ವೇಷಣೆಯಲ್ಲಿ ಅವರು ತನ್ನದೇ ಆದ ರೀತಿಯಲ್ಲಿ ಅದರ ಸಾರವನ್ನು ಅಮೂರ್ತಗೊಳಿಸುತ್ತಾರೆ. ಆಕಸ್ಮಿಕ ಟೆಕಶ್ಚರ್‌ಗಳಿಂದ ಸ್ಫೂರ್ತಿ ಪಡೆದ ಅವರು ಹೊಸ ದೃಶ್ಯ ಪ್ರಪಂಚವನ್ನು ರಚಿಸಲು ಕ್ಯಾನ್ವಾಸ್‌ನಲ್ಲಿ ತೇವವಾದ ಎಣ್ಣೆ ಬಣ್ಣಗಳ ಕೆಲವು ಭಾಗವನ್ನು ತೆಗೆದುಹಾಕುವ ಕೆರೆದು ಅಳಿಸುವ ವಿಧಾನವನ್ನು ರೂಪಿಸಿದರು. ಅಂತಿಮ ಫಲಿತಾಂಶವೆAದರೆ ಐಷಾರಾಮಿ ಬಣ್ಣದ ಆರ್ಕೆಸ್ಟೆçÃಶನ್ ಮತ್ತು ಅದ್ದೂರಿ ಸಂಯೋಜನೆಗಳು. ಕೆಲವೊಮ್ಮೆ ಅಧೀನಗೊಂಡ ತೇಲುವ ರೂಪಗಳು ಕೆಲವು ಗುರುತಿಸಬಹುದಾದ ರೂಪಗಳ ಉಪಸ್ಥಿತಿಯನ್ನು ಸೂಚಿಸುತ್ತವೆಯಾದರೂ ಕಲಾವಿದನ ಉದ್ದೇಶವು ಎದ್ದುಕಾಣುವ ಮಾನಸಿಕ ಭಾವನೆಗಳನ್ನು ಹೆಚ್ಚಿಸುವುದು. ಅವರ ವರ್ಣಚಿತ್ರಗಳು ಈ ಬಣ್ಣ ಮತ್ತು ವಿನ್ಯಾಸದ ಕಾರಣದಿಂದಾಗಿ ಮತ್ತು ಸರಳವಾದ ಸುಂಟರಗಾಳಿ ರೂಪಗಳ ಮೇಲೆ ಕೇಂದ್ರೀಕರಿಸುವ ಮೂಲಕ ಪ್ರೇಕ್ಷಕರನ್ನು ಹೀರಿಕೊಳ್ಳುತ್ತವೆ. ಅವರ ಪ್ರತಿಯೊಂದು ಕೃತಿಯು ಭವ್ಯವಾದ ದೃಶ್ಯ ಕಾವ್ಯದ ಭಾವನೆಗಳನ್ನು ಉಂಟುಮಾಡುತ್ತದೆ.  ಸಿ.ಎಸ್.ಕೃಷ್ಣಶೆಟ್ಟಿ ವಿಮರ್ಶಕರು  ಅಭಿಪ್ರಾಯದಂತೆ   ದೇಸಾಯಿಯವರ ಕೆಲಸವನ್ನು ಅವರ ಆತ್ಮದ ಭೂದೃಶ್ಯ ಎಂದು ಕರೆಯಬಹುದು. ಆದರೆ ಇದು ಕಲಾವಿದ ಭಾವುಕ ಎಂದು ಸೂಚಿಸುವುದಿಲ್ಲ. ಅವರ ವರ್ಣಚಿತ್ರಗಳು ಭಾರತದ ಆಳವಾದ ವ್ಯಕ್ತಿತ್ವದ ಖಚಿತವಾದ ಪ್ರಭಾವವನ್ನು ಹೊಂದಿವೆ. ಅವರ ಬಣ್ಣಗಳ ವ್ಯಾಪ್ತಿಯು ಎದ್ದುಕಾಣುವ ಆದರೆ ಸಮಚಿತ್ತದಿಂದ ಅವರು ಸಾಧಿಸಿದ ಒಂದು ನಿರ್ದಿಷ್ಟ ಪರಿಶುದ್ಧತೆಯನ್ನು ವ್ಯಕ್ತಪಡಿಸುತ್ತಾರೆ. ಅವರ ಕುಂಚದ ಹೊಡೆತಗಳು ಅತೀಂದ್ರಿಯ ತೀವ್ರತೆಯನ್ನು ಎತ್ತಿ ತೋರಿಸುತ್ತವೆ. ಅವರ ಆಕೃತಿಗಳು ಅಮೂರ್ತವಲ್ಲ ಆದರೆ ಸಾಮರಸ್ಯ. ಇದು ಸಂಯೋಜನೆಗಳು  ನಿಗರ್ವಿಯಾಗಿ ಅಸ್ತಿತ್ವದಲ್ಲಿರಲು ಶಕ್ತಗೊಳಿಸುತ್ತದೆ. ಸಂಯೋಜನೆಗಳ ಮನೋಧರ್ಮವು ಒಟ್ಟಾರೆ ಮನಸ್ಥಿತಿಗೆ ಪೂರಕವಾಗಿದೆ, ಮಾನಸಿಕ ಅಥವಾ ಆಧ್ಯಾತ್ಮಿಕ ಅಂಶಗಳಿAದ ಗುಣಗಳನ್ನು ಪುಷ್ಟೀಕರಿಸಲಾಗುತ್ತದೆ. ಅವರ ಕಲೆಯು ಮೂಲಭೂತವಾಗಿ ಸಂತಾನ ಮೌಲ್ಯಗಳೊಂದಿಗೆ ಬಲವಾದ ನಂಬಿಕೆಯ ಅಭಿವ್ಯಕ್ತಿಯಾಗಿದೆ. ಪೂಜ್ಯತೆ ಮತ್ತು ನಮ್ರತೆ ಸ್ಪಷ್ಟವಾಗಿದೆ, ಜೊತೆಗೆ ಉತ್ತಮ ಸಂತಾನೋತ್ಪತ್ತಿ ಮತ್ತು ಆಂತರಿಕ ಸಂಸ್ಕೃತಿಯನ್ನು ಸೂಚಿಸುವ ಹಿಂಜರಿಕೆ. ಕಲಾವಿದನು ತಾನು ನಿಜವಾಗಿಯೂ ಚಿತ್ರಿಸಲು ಇಷ್ಟಪಡುವುದನ್ನು ಚಿತ್ರಿಸುವ ಕೌಶಲ್ಯವನ್ನು ಹೊಂದಿದ್ದಾನೆ, ಗಟ್ಟಿಯಾದ ಬಣ್ಣದಲ್ಲಿ ಜೋರಾಗಿ ಕೂಗದಿರುವ ಚಾತುರ್ಯವನ್ನು ಅವನು ಹೊಂದಿದ್ದಾನೆ. ಅವರ ಕುಂಚದ ಕೆಲಸವು ಬ್ರಷ್ ಅಲ್ಲ. ದೇಸಾಯಿ ಅವರು ಆಧುನಿಕ ವರ್ಣಚಿತ್ರಕಾರರಾಗಿದ್ದು ಅವರು ಆಳವಾದ ಭಾವನೆಗಳು ಮತ್ತು ಜೀವನದಲ್ಲಿ ತಮ್ಮದೇ ಆದ ಸತ್ಯವನ್ನು ಚಿತ್ರಿಸುತ್ತಾರೆ ಎಂಬುದು  ಕೇಶವ್ ಮಲಿಕ್, ನವದೆಹಲಿ ಅವರ ಅಭಿಪ್ರಾಯವಾಗಿದೆ.ಇನ್ನು ದೇಸಾಯಿ ಸಾಧನೆಯ ಹಾದಿಯ ಹಿಂದೆ ಹುಡುಕಿ ಹೋದರೆ ಅವರ ಏಕವ್ಯಕ್ತಿ ಪ್ರದರ್ಶನಗಳಲ್ಲಿ ಸಬ್ಲೈಮ್ ಆರ್ಟ್ ಗ್ಯಾಲರಿ, ಬೆಂಗಳೂರು (೨೦೧೮,೨೦೧೯) ಯುಬಿ ನಗರ,ಬೆಂಗಳೂರು-೨೦೧೧, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೧೦, ಕರ್ನಾಟಕ ಚಿತ್ರಕಲಾ ಪರಿಷತ್ತು ಬೆಂಗಳೂರು-೨೦೦೫, ಸಂಸ್ಕೃತಭವನ ಹಾಸನ-೨೦೦೫, ಕಲಾಕೃತಿ ಪ್ರದರ್ಶನ, ಬೆಂಗಳೂರು-೧೯೮೯ ಮುಖ್ಯವಾಗಿವೆ.ಇವರು ಭಾಗವಹಿಸಿದ ಶಿಬಿರ ಕಾರ್ಯಾಗಾರಗಳಲ್ಲಿ  ಪ್ರಮುಖವಾಗಿ ಬಿಜಾಪುರ ಕಲಾ ಶಿಬಿರ- ೨೦೨೪, ಅಂತರಾಷ್ಟಿçÃಯ ಕಲಾ ಶಿಬಿರ-ಮೂಡುಬಿದರೆ-೨೦೨೩, ಕಾರ್ಕಳ ಕಲಾ ಶಿಬಿರ-೨೦೨೨, ರಾಷ್ಟಿçÃಯ ಕಲಾವಿದರ ಶಿಬಿರ, ವಾರಣಾಸಿ-೨೦೧೬, ಪಿ.ಆರ್.ತಿಪ್ಪೇಸ್ವಾಮಿ ಟ್ರಸ್ಟ್–೨೦೧೪, ಕಾಗಿನೆಲೆ ಟ್ರಸ್ಟ್, ಕಾಗಿನೆಲೆ ಕಲಾಶಿಬಿರ, ಹಾವೇರಿ–೨೦೧೩,  ಕನ್ನಡ ಸಾಹಿತ್ಯ ಸಮ್ಮೇಳನ ಬಿಜಾಪುರ–೨೦೧೩, ವಿಶ್ವ ಕನ್ನಡ ಸಮ್ಮೇಳನ ಕಲಾ ಶಿಬಿರ ಬೆಳಗಾವಿ-೨೦೧೧, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾ ಶಿಕ್ಷಕರ ಶಿಬಿರ ಹಾಸನ-೨೦೧೦, ಕರ್ನಾಟಕ ಲಲಿತ ಕಲಾ ಅಕಾಡೆಮಿ ಕಲಾಶಿಬಿರ, ಕೆಮ್ಮಣ್ಣು ಗುಂಡಿ-೨೦೦೯, ವೆಂಕಟಪ್ಪ ಗ್ಯಾಲರಿ, ಬೆಂಗಳೂರು-೨೦೦೭, ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ-೨೦೦೬, ಉಪಾಸನಾ ಕಲಾವಿದರ ಶಿಬಿರ ಸಮಸೆ ಚಿಕ್ಕಮಗಳೂರು-೨೦೦೬, ರಾಷ್ಟಿçÃಯ ಕಲಾ ಪ್ರದರ್ಶನ, ಮೌಂಟ್ ಅಬು-೨೦೦೪, ಅಕಾಡೆಮಿ ಸದಸ್ಯರಿಗೆ ಕಲಾ ಶಿಬಿರ, ಹೊನ್ನಾವರ-೨೦೦೩ ರಾಷ್ಟಿçÃಯ ಸಂಶೋಧನಾ ಕಾರ್ಯಾಗಾರ, ದೆಹಲಿ-೨೦೦೦, ಹೊಯ್ಸಳ ಉತ್ಸವ ಕಲಾ ಶಿಬಿರ, ಹಳೇಬೀಡು- ೧೯೯೯, ಕಲಾ ಬರಹಗಾರರ ಶಿಬಿರ, ಕರ್ನಾಟಕ ಲಲಿತಕಲಾ ಅಕಾಡೆಮಿ, ಇಳಕಲ್-೧೯೯೯, ಕಲಾ ಉಪನ್ಯಾಸಕರ ಚಿತ್ರಕಲಾ ಪ್ರದರ್ಶನ ಬಿಜಾಪುರ-೧೯೯೯, ಕರ್ನಾಟಕ ಲಲಿತಕಲಾ ಅಕಾಡೆಮಿಯಿಂದ ಕಲಾವಿದರ ಶಿಬಿರ ಅಲ್ಲದೇ ದೇಸಾಯಿಯವರು ೬೦  ಮೇಲ್ಪಟ್ಟ ಗುಂಪು ಪ್ರದರ್ಶನದಲ್ಲಿ ಈವರೆಗೆ ಭಾಗಿಯಾಗಿದ್ದಾರೆ.  ಇವರ ಪೈಂಟಿAಗ್ಸ್ಗಳ ಖಾಸಗಿ ಸಂಗ್ರಹಣೆಗಳು ಸಾಗರೋತ್ತರವಾಗಿ  ಲಂಡನ್, ಬೆಲ್ಜಿಯಂ, ಫ್ರಾನ್ಸ್, ಸ್ವಿಜರ್ಲ್ಯಾಂಡ್, ಜರ್ಮನಿ, ಆಸ್ಟ್ರಿಯಾ, ಯುಎಇ, ಮಸ್ಕತ್, ಕೆನಡಾಗಳಲ್ಲಿ ಅಲ್ಲದೇ ಭಾರತದಲ್ಲಿ ಮೌಂಟ್ ಅಬು, ಹೈದರಾಬಾದ್, ಬೆಂಗಳೂರು, ಚೆನ್ನೈ, ದೆಹಲಿ, ಗುಲ್ಬರ್ಗಾ, ಕೊಪ್ಪಳ, ಮೈಸೂರು, ಹಾಸನ, ಹೊನ್ನಾವರ, ಮಂಗಳೂರು, ಉಡುಪಿ, ಕುಂದಾಪುರ, ಮುಂಬೈ, ಚೆನ್ನೈ, ಪಾಂಡಿಚೇರಿ, ಕೊಚ್ಚಿಯಲ್ಲಿ ಇವೆ.  ದೇಸಾಯಿಯವರು ಮಾಜಿ ಸದಸ್ಯರು ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಬಾಲ ವಿಕಾಸ ಅಕಾಡೆಮಿಯ ಮಾಜಿ ಸದಸ್ಯರು  ಧಾರವಾಡ,  ಸಂಚಾಲಕರು ಮಹಾಮಸ್ತಕಾಭಿಷೇಕ ಕಲಾವಿದರ ಶಿಬಿರ–೨೦೦೬, ಸುವರ್ಣ ಕರ್ನಾಟಕ ಕಲಾವಿದರ ಶಿಬಿರ, ಹಾಸನ ೨೦೦೬, ಸಂಚಾಲಕರು ಚಿತ್ಕಲಾ ಉದಯೋನ್ಮುಖ ಕಲಾವಿದರ ಪ್ರದರ್ಶನ, ಕಾರ್ಯದರ್ಶಿ ರಾಜ್ಯ ಕಲಾಶಿಕ್ಷಕರ ಸಮ್ಮೇಳನ ಹಾಸನ-೨೦೦೧,ಕಲಾವಿದರನ್ನು ಕಲೆ ಹಾಕಿ ಯಶಸ್ವಿ ಕಲಾಶಿಬಿರ ಕಲಾ ಪ್ರದರ್ಶನಗಳನ್ನು ಏರ್ಪಡಿಸಿ ಕಲಾಸಕ್ತರ ಗಮನ ಸೆಳೆದಿರುವ ದೇಸಾಯಿಯವರು ಉತ್ತಮ ಛಾಯಾಗ್ರಾಹಕರೂ ಹೌದು. ಅವರು ತಮ್ಮ ಛಾಯಗ್ರಾಹಣದಿಂದ ಹಾಸನದ ಹುಣಸಿನಕೆರೆ ಪೋಟೋ ತೆಗೆದು ಸಾರ್ವಜನಿಕರ, ಪರಿಸರ ಪ್ರೇಮಿಗಳ ಮನಸೆಳೆದು ಕೆರೆ ಉಳಿವಿಗೆ ತಮ್ಮದೇ ಕಲ್ಪನೆಯಲ್ಲಿ ಕೆಲಸ ಮಾಡಿದ್ದಾರೆ. ಮನಕ್ಕೆ ಮುದ ನೀಡುವ ಚಿಂತನೆಗೀಡು ಮಾಡುವ ಹಲವಾರು ಚಿತ್ರಗಳಿಗೆ ಕುಂಚದಿAದ ಜನ್ಮ ನೀಡಿದ್ದಾರೆ. ನಿಸರ್ಗದ ಅನೇಕ ಚಿತ್ರಗಳನ್ನು ರಚಿಸಿರುವುದಲ್ಲದೇ  ತಮ್ಮ ಕ್ಯಾಮರದಿಂದಲೂ ಪ್ರಕೃತಿಯ ರಮ್ಯ ದೃಶ್ಯಗಳನ್ನು ಸೆರೆ ಹಿಡಿದ್ದಾರೆ. ಪ್ರಕೃತಿಯ ವಿಶಿಷ್ಟ ಸೌಂದರ್ಯ ಕಲಾವಿದನನ್ನು ಪ್ರಭಾವಿಸುವಂತೆಯೆ ಅವನ ಭಾವನಾತ್ಮಕ ಪ್ರತಿಕ್ರಿಯೆಯು ಅವನ ಅಂತರAಗ ಸಾಮರ್ಥ್ಯವನ್ನು ಮತ್ತು ವೈಯಕ್ತಿಕ ಅಭಿರುಚಿಯನ್ನು ಒಳಗೊಂಡಿರುತ್ತದೆ. ಈ ದಿಸೆಯಲ್ಲಿ ದೇಸಾಯಿರವರ ಪ್ರಕೃತಿ ಮತ್ತು ವಿಕೃತಿ ಎಂಬ ಕಲಾಕೃತಿ ಅಮೂರ್ತ ಶೈಲಿಯ ಕಲಾರಚನೆಯಾಗಿದ್ದು ಚಿಂತನೆಗೆ ಹಚ್ಚುವ ಮೂಲದ್ರವ್ಯವನ್ನು ಒದಗಿಸುತ್ತದೆ. ಮನುಷ್ಯ ಮತ್ತು ಪ್ರಕೃತಿ ನಡುವಿನ ಅವಿನಾಭಾವ ಸಂಬAಧವನ್ನು ವಿಕೃತಗೊಳಿಸುತ್ತಿರುವ ಮನುಷ್ಯರ ಮನೋಭಾವನೆಯನ್ನು ಸಾಂಕೇತಿಕವಾಗಿ ಪ್ರತಿಬಿಂಬಿಸಿದೆ. ಪ್ರಕೃತಿಯನ್ನೇ ಅವಲಂಬಿಸಿ ಬದುಕುವ ಮನುಷ್ಯ ಭವಿಷ್ಯವನ್ನು ಯೋಚಿಸದೆ ನಿಸರ್ಗ ನಾಶ ಮಾಡುತ್ತಿರುವ ವಿಕೃತ ಮನೋಭಾವನೆಯನ್ನು ಅರ್ಥಗರ್ಭಿತವಾಗಿ ಮತ್ತು ಸಾಂಕೇತಿಕವಾಗಿ ಚಿತ್ರಿಸಲ್ಪಟ್ಟ ಕಲಾಕೃತಿಯಲ್ಲಿ ಪ್ರಸ್ತುತ ಜನ ನೈಸರ್ಗಿಕ ಸಂಪತ್ತನ್ನು ಹಾಳುಗೆಡುವುತ್ತಿರುವ ಬಗ್ಗೆ ಕಲಾವಿದರಲ್ಲಿ ಆಕ್ರೋಶ ಮತ್ತು ಸಮಾಜಿಕ ಕಳಕಳಿಯಿದೆ. ಚಿತ್ರಕಲೆಯ ವಿವಿಧ ಆಯಾಮಗಳಲ್ಲಿ ಕೃಷಿ ಮಾಡಿ ಜಲವರ್ಣ, ತೈಲವರ್ಣ, ಪೋಸ್ಟರ್ ಕಲರ್, ಟ್ರಾನ್ಸ್ಪರೆಂಟ್ ಬಣ್ಣ ಬಳಸಿ ಮನೋಹರವಾದ ಕಲಾಕೃತಿಗಳನ್ನು  ರಚಿಸಿದ್ದಾರೆ. ಜಲವರ್ಣದ ಪಾರದರ್ಶಕ ಬಣ್ಣಗಳನ್ನು ಬಳಸಿ ಸೃಷ್ಠಿಸಿರುವ ಚಿತ್ರಗಳು ಹಾಗೂ ತೈಲವರ್ಣದ ಇವರ ಕಲಾಭಿವ್ಯಕ್ತಿಗೆ ಸಾಕ್ಷಿಯಾಗಿದೆ. ಉತ್ತಮ ಛಾಯಾಗ್ರಾಹಕರಾಗಿರುವ ದೇಸಾಯಿಯವರು ತಾವು ಭೇಟಿನೀಡಿದ್ದ ಜರ್ಮನಿ, ಹಾಲೆಂಡ್, ಬೆಲ್ಲಿಯಂ, ಪ್ಯಾರಿಸ್, ಸ್ವಿಜ್ಜರ್ ಲ್ಯಾಂಡ್, ನ್ಯೂಜಿಲ್ಯಾಂಡ್ ಆಸ್ಟೆçÃಲಿಯ  ದೇಶಗಳ ಅದ್ಭುತ ಛಾಯಾಚಿತ್ರಗಳನ್ನು ಸೆರೆಹಿಡಿದ್ದಾರೆ. ತಮ್ಮ ಮನೆಯನ್ನೇ ಕಲಾಗ್ಯಾಲರಿ ಮಾಡಿ ಬೇರೆ ಹೊರಗಿನ ಕಲಾವಿದರ  ಕಲಾಪ್ರದರ್ಶನಗಳನ್ನು ಮಾಡಿದ್ದಾರೆ. ಗೊರೂರು ಅನಂತರಾಜು, ಹಾಸನ.ಮೊ: ೯೪೪೯೪೬೨೮೭೯,ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್, ಹಾಸನ-೫೭೩೨೦೧, 

“ಅಮೂರ್ತ ಕಲೆಯ ಕಲಾವಿದ ಬಿ.ಎಸ್.ದೇಸಾಯಿಗೆ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ”ಗೊರೂರು ಅನಂತರಾಜು Read Post »

ಇತರೆ

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ

ಮಹಿಳಾ ಸಂಗಾತಿ ಮೇಘ ರಾಮದಾಸ್ ಜಿ “ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಭಾರತ ಸಂವಿಧಾನದ 73 ನೇ ತಿದ್ದುಪಡಿ ಬಹಳ ಮಹತ್ವವಾದದ್ದು. ಅಧಿಕಾರ ವಿಕೇಂದ್ರೀಕರಣದ ಮುನ್ನುಡಿಯಾಗಿದೆ. ಸ್ಥಳೀಯ ಸರ್ಕಾರಗಳಾದ ಗ್ರಾಮ ಪಂಚಾಯತಿಗಳ ಜನನ ಆಗಿದ್ದು ಇದರಿಂದಲೇ. ಅಭಿವೃದ್ಧಿ ಎಂದಿಗೂ ಒಕ್ಕೂಟ ಸರ್ಕಾರ ಅಥವಾ ರಾಜ್ಯ ಸರ್ಕಾರದ ದೃಷ್ಟಿಯಲ್ಲಿ ಕೇಂದ್ರೀಕೃತವಾಗಿರಬಾರದು, ಬದಲಿಗೆ ತಳಮಟ್ಟದಿಂದ ಅಂದರೆ ಗ್ರಾಮಗಳಿಂದ ಅಭಿವೃದ್ಧಿಯ ಪರಿಕಲ್ಪನೆ ರಚನೆಯಾಗಬೇಕು ಎನ್ನುವುದು ಈ ಅಧಿಕಾರ ವಿಕೇಂದ್ರೀಕರಣದ ಆಶಯವಾಗಿದೆ. ಕೇವಲ ಅಭಿವೃದ್ಧಿಯ ಕಾರಣಕ್ಕೆ ಅಷ್ಟೇ ಅಲ್ಲದೆ, ಗ್ರಾಮ ಮಟ್ಟದಲ್ಲಿ ರಕ್ಷಣಾ ವ್ಯವಸ್ಥೆಗಳಾಗಿಯೂ ಸಹಾ ಈ ಗ್ರಾಮ ಪಂಚಾಯತಿಗಳು ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಗಾಗಿಯೇ ರಾಜ್ಯದ 6022 ಗ್ರಾಮ ಪಂಚಾಯತಿಗಳಲ್ಲಿಯೂ ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿಗಳ ರಚನೆ ಕಡ್ಡಾಯವಾಗಿದೆ. ಈ ಸಮಿತಿಯು ಮಹಿಳೆಯರ ಹಾಗೂ ಮಕ್ಕಳ ರಕ್ಷಣೆಯ ಕುರಿತು ಗಮನ ಹರಿಸಬೇಕಿದೆ. ಆದರೆ ವಾಸ್ತವದಲ್ಲಿ ಈ ಸಮಿತಿಗಳು ನಿರೀಕ್ಷಿತ ಮಟ್ಟಕ್ಕೆ ಕಾರ್ಯನಿರ್ವಹಿಸುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ನಾಗರಿಕರಾಗಿ ನಮ್ಮ ಕರ್ತವ್ಯವಾಗಿದೆ. ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ ಎಂದರೇನು?ಪಂಚಾಯತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳ ಮಹಿಳೆಯರಿಗೆ ಮೂಲಭೂತ ಸೌಕರ್ಯ ಒದಗಿಸುವುದು ಮತ್ತು 18 ವರ್ಷದ ಒಳಗಿನ ಮಕ್ಕಳಿಗೆ ಅರಿವು ಮೂಡಿಸುವುದು ಮತ್ತು ರಕ್ಷಣೆ ಒದಗಿಸುವುದು ಈ ಸಮಿತಿಯ ಉದ್ದೇಶವಾಗಿದೆ. ಈ ಸಮಿತಿಯ ಸದಸ್ಯರು ಯಾರ್ಯಾರು? ಅಧ್ಯಕ್ಷರು – ಗ್ರಾಮ ಪಂಚಾಯತಿ ಅಧ್ಯಕ್ಷರು (ಮಹಿಳೆ)ಉಪಾಧ್ಯಕ್ಷರು – ಗ್ರಾಮ ಪಂಚಾಯತಿ ಉಪಾಧ್ಯಕ್ಷರು (ಮಹಿಳೆ)ಸದಸ್ಯರು – ಇಬ್ಬರು ಗ್ರಾಮ ಪಂಚಾಯಿತಿ ಸದಸ್ಯರು (ಒಬ್ಬರು ಮಹಿಳೆ ಕಡ್ಡಾಯ)ಸದಸ್ಯರು – ಗ್ರಾಮ ಪಂಚಾಯತಿ ಮಟ್ಟದ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮುಖೋಪಾಧ್ಯಾಯರು (ಪುರುಷವಿದ್ದಲ್ಲಿ ಮಹಿಳಾ ಶಿಕ್ಷಕಿಯನ್ನು ಆಯ್ಕೆ ಮಾಡಬೇಕು)ಸದಸ್ಯರು – ಗ್ರಾಮಲೆಕ್ಕಿದರುಸದಸ್ಯರು – ಆಶಾ ಕಾರ್ಯಕರ್ತೆಸದಸ್ಯರು – ಬಿಟ್ ಪೊಲೀಸ್ಸದಸ್ಯರು – ICDS ಮೇಲ್ವಿಚಾರಕಿಸದಸ್ಯರು – ಸ್ವಯಂ ಸೇವಾ ಸಂಸ್ಥೆಯ ಮಹಿಳಾ ಪ್ರತಿನಿಧಿಸದಸ್ಯರು – ಅಂಗನವಾಡಿ ಕಾರ್ಯಕರ್ತೆಸದಸ್ಯರು – ಸ್ತ್ರೀಶಕ್ತಿ ಸಂಘದ ಪ್ರತಿನಿಧಿಸದಸ್ಯರು – ಪ್ರೌಢಶಾಲೆಯ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬ ವಿದ್ಯಾರ್ಥಿನಿಸದಸ್ಯ ಕಾರ್ಯದರ್ಶಿ – ಪಿಡಿಒ/ಕಾರ್ಯದರ್ಶಿ ಸಮಿತಿಯ ಜವಾಬ್ದಾರಿಗಳು ಈ ಸಮಿತಿಗಳು ಸ್ಥಳೀಯ ಮಟ್ಟದ ಮಹಿಳೆ ಮತ್ತು ಮಕ್ಕಳ ರಕ್ಷಣಾ ಗೋಡೆಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಈ ಸಮಿತಿಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುತ್ತಿವೆಯೇ ಎಂಬುದನ್ನು ಪರಿಶೀಲಿಸುವುದು ಗ್ರಾಮದ ನಾಗರೀಕರಾಗಿ ನಮ್ಮೆಲ್ಲರ ಕರ್ತವ್ಯವಾಗಿದೆ. ಈ ಸಮಿತಿಗಳು ಪರಿಪೂರ್ಣವಾಗಿ ಕಾರ್ಯ ನಿರ್ವಹಿಸಿದಾಗ ಮಹಿಳೆಯರ ಮತ್ತು ಮಕ್ಕಳ ರಕ್ಷಣೆಯಲ್ಲಿ ದೊಡ್ಡ ಬದಲಾವಣೆ ತರಬಹುದಾಗಿದೆ. ಮೇಘ ರಾಮದಾಸ್ ಜಿಮಕ್ಕಳು ಮತ್ತು ಯುವಜನ ಕಾರ್ಯಕರ್ತರುಗುಳಿಗೇನಹಳ್ಳಿ ಸಿರಾ ತುಮಕೂರು7760908097

“ಮಹಿಳಾ ಮತ್ತು ಮಕ್ಕಳ ರಕ್ಷಣಾ ಕಾವಲು ಸಮಿತಿ – ಏಕೆ? ಏನು? ಹೇಗೆ?”‌ ಮೇಘ ರಾಮದಾಸ್ ಜಿ Read Post »

ಇತರೆ

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ

ವಿಶೇಷ ಸಂಗಾತಿ ಜಯಲಕ್ಷ್ಮಿ ಕೆ “ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ತಮ್ಮ ತಮ್ಮ ಸಾಮ್ರಾಜ್ಯದ ಎಲ್ಲೆಯನ್ನು ವಿಸ್ತರಿಸುವ ಸಲುವಾಗಿ ಯುದ್ಧ ಸಾರುತ್ತ “ಗೆಲುವು ನನ್ನದು ಸೋಲು ಅವನದು ” ಎಂದು ಬೀಗುತ್ತಿದ್ದ ಮಾನವ ಇಂದು ಗಗನ ಸಾಗರಗಳ ಒಡೆತನಕ್ಕಾಗಿ ಸಮರಕ್ಕಿಳಿದಿದ್ದಾನೆ. ಪ್ರಕೃತಿ ಮೊಗೆ ಮೊಗೆದು ಕೊಡುತ್ತಿರುವ ಗಾಳಿ ನೀರು , ಬೆಳಕು,ಪಚ್ಚೆ-ಪೈರುಗಳನ್ನು ಬಳಸಿ, ಉಳಿಸಿ ಹೋಗಬೇಕು ಎನ್ನುವ ಪ್ರಜ್ಞೆ ಇಲ್ಲದೆ ಕಡಲು ಸಾಗರಗಳ ಒಡೆತನಕ್ಕಾಗಿ ರಾಕ್ಷಸೀಯ ಪ್ರವೃತ್ತಿ ಮೆರೆಯುತ್ತಿದ್ದಾನೆ. ಜಗವಷ್ಟೇ ಅಲ್ಲ, ದಿಗ್ದೇವತೆಗಳು ಕೂಡಾ ಬೆರಗಿನಿಂದ ನೋಡುವಂತಹ ಕಾರ್ಯಗಳು ಮನುಜರಿಂದ ನಡೆಯುತ್ತಲೇ ಇವೆ. ಮುದ್ದು ಮಕ್ಕಳ ಮಾರಣ ಹೋಮ, ಸೈನಿಕರ ಪ್ರಾಣ ಹರಣ, ಅನಾಥ ಜೀವಗಳ ಆಕ್ರಂದನ…. ಉಹುಂ…. ಗೆಲುವಿನ ಬೆನ್ನೇರುವ ಹಠದಲ್ಲಿ ಕುರುಡಾಗಿವೆ ಕಣ್ಣುಗಳು.. ಮರುಭೂಮಿಯಾಗಿದೆ ಮನಸುಗಳು…ಬಾಂಬ್ ಮಿಸ್ಯೈಲು ಗಳ ಹೊಗೆ ಬಾನಂಗಳ ತುಂಬುತ್ತಿದೆ. ಗಗನ ಮುನಿದರೆ ಭುವಿಗೆ ಉಳಿಗಾಲವುಂಟೇ? ಕಣ್ಣಿಗೆ ಕಾಣದ ಸ್ವಂತ ಅಸ್ತಿತ್ವವೇ ಇಲ್ಲದ ವೈರಸ್ ಕಳಿಸಿದ ಪಾಠವನ್ನು ನಾವು ಎಷ್ಟು ಬೇಗ ಮರೆತೆವು!! ಮೊಸಳೆಯಂತೆ ಬಾಯಿ ತೆರೆದು ಕಡಲ ದಡದಲ್ಲಿ ಆನಂದಿಸುತ್ತಿದ್ದ ಜನರನ್ನು ನುಂಗಿ ಮತ್ತೆ ಹೊರಗೆಸೆದ ಜಲ ಪ್ರಳಯಗಳ ಭೀಕರತೆ, ಬದುಕಿನ ನಶ್ವರತೆ ಎಲ್ಲವೂ ಈಗ   ಮತ್ತೆ ಅಸ್ಪಷ್ಟವಾಗುತ್ತಾ ಸಾಗಿದೆ. ಭೂಮಿಯ ಒಡಲು ಮುನಿದು ಮನುಷ್ಯನ ಅಸ್ತಿತ್ವವನ್ನೇ ನಡುಗಿಸಿದ , ನಂಬಿಕೆಯನ್ನೇ ಬುಡಮೇಲು ಮಾಡಿದ ಉದಾಹರಣೆಗಳೂ ಮನುಷ್ಯನಿಗೆ ತನ್ನಷ್ಟಕ್ಕೆ ತಾನು ಬದುಕಬೇಕು ಎನ್ನುವ ನೀತಿ ಕಲಿಸಿಲ್ಲ. ಕೇವಲ ದಾಹ!! ಭೂತಳವನ್ನು ಬಗೆದು ನಿಧಿ ಶೋಧ, ಗಣಿಗಾರಿಕೆ, ಅಭಿವೃದ್ಧಿ ಕಾರ್ಯಗಳು… ನೀರಿನ ಮೂಲಗಳನ್ನು ಬರಿದು ಮಾಡುವ, ಮಲಿನಗೊಳಿಸುವ ಕೆಲಸಗಳು,ಕಾರ್ಖಾನೆಗಳ ಮಿತಿ ಮೀರಿದ ಹೊಗೆ, ಸಿಡಿಮದ್ದು,ಬಾಂಬ್ ಇತ್ಯಾದಿಗಳಿಂದ ಆಗಸದೆತ್ತರಕ್ಕೆ ಹೊಗೆ ಚಿಮ್ಮಿಸಿ ಇಡೀ ವಾತಾವರಣ ಕೆಡಿಸುವ, ವಿಜಯ ಸಾಧಿಸುವ, ಇಂಧನ ಮೂಲಗಳಿಗೆಲ್ಲ ಬೆಂಕಿ ಹಾಕಿ ಆ ಹೊಗೆಯಲ್ಲಿಯೇ ಕೇಕೆ ಹಾಕಿ ಬೀಗುವ ಕಾರ್ಯಗಳು ನಡೆಯುತ್ತಲೇ ಇವೆ. ನೈಸರ್ಗಿಕ ಸಂಪನ್ಮೂಲಗಳು ಜಗತ್ತಿನ ಸಕಲ ನಾಗರಿಕ ಚಟುವಟಿಕೆಗಳಿಗೆ ಮೂಲ ಆಧಾರ. ಅವುಗಳನ್ನು ಕಾಪಿಟ್ಟುಕೊಂಡರೆ ಕೊಡು ಕೊಳ್ಳುವಿಕೆಯ ಮೂಲಕ ಜನರು ಬಳಸಿಕೊಳ್ಳಬಹುದು. ಸುಟ್ಟು ಸಾಧಿಸುವುದೇನು?? ಭಾರೀ ಪ್ರಮಾಣದ ಕಟ್ಟಡಗಳನ್ನು ನಿರ್ಮಿಸುವುದು ನಂತರ ಕೆಡಹು ವುದು   ಭೂತಾಯಿಯ ಸಹನೆಯನ್ನು ಪರೀಕ್ಷೆ ಮಾಡುವುದು. ಭೂಮಿ ಸಹನಾಮಯಿ, ಹೌದು. ಆದರೆ ಸಹನೆಗೂ ಮಿತಿ ಇದೆ. ಭೂಮಾತೆ ನಮ್ಮನ್ನೆಲ್ಲ ಕ್ಷಮಿಸುವಷ್ಟು ಕಾಲ ಭೂಮಿಯ ಮೇಲ್ಪದರ ಚೆನ್ನಾಗಿಯೇ ಕಾಣುತ್ತದೆ. “ನೆಲದ ಒಡಲಿನೊಳಗೇನು ನಡೆವುದೋ ಎಲ್ಲಿ ಕುಳಿತಿಹನೊ ಕಲಾವಿದ” ಎನ್ನುವ ಚೆನ್ನವೀರ ಕಣವಿಯವರ ಹಾಡಿನ ಸಾಲಿನಂತೆ ಭೂಮಿಯ ಅಂತರಾಳದಲ್ಲಿನ ಒತ್ತಡ ಯಾವ ಮಟ್ಟದಲ್ಲಿದೆ ಎನ್ನುವುದನ್ನು ನಾವು ಯಾರೂ ಅರಿಯೆವು. ಗಾಳಿಯಲ್ಲಿ ಹೆಚ್ಚುತ್ತಿರುವ ಹಾನಿಕಾರಕ ಪದಾರ್ಥಗಳಿಂದ ಈಗಾಗಲೇ ಮನುಷ್ಯ ಅನೇಕ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಅದಕ್ಕೆ ಮತ್ತಷ್ಟು ವಿಷ ಅನಿಲಗಳು ಸೇರಿಕೊಳ್ಳುತ್ತಲೇ ಇವೆ. ವಿಜ್ಞಾನಿಗಳು, ಪರಿಸರ ತಜ್ಞರು ಎಚ್ಚರಿಕೆ ಕೊಡುತ್ತಲೇ ಇದ್ದಾರೆ. ವಾಹನದ ಹೊಗೆ, ಕಾರ್ಖಾನೆ ವಿದ್ಯುತ್ ಸ್ಥಾವರಗಳ  ಹೊಗೆ, ಕಲ್ಲಿದ್ದಲು ಪೆಟ್ರೋಲಿಯಂ ಉತ್ಪನ್ನಗಳನ್ನು ಉರಿಸುವುದರಿಂದ ಬಿಡುಗಡೆಯಾಗುವ ಧೂಳು, ( ಏರೋಸಾಲ್ ) ಪ್ಲಾಸ್ಟಿಕ್, ಕಸ, ಕೃಷಿ ತ್ಯಾಜ್ಯಗಳನ್ನು ಸುಡುವ ಸಂದರ್ಭ ಉಂಟಾಗುವ ಹೊಗೆ, ಕಾಡ್ಗಿಚ್ಚಿನ ಹೊಗೆ, ರೆಫ್ರಿಜರೇಟರ್ ಮತ್ತು ಏರ್ ಕಂಡೀಷನರ್ ಗಳಿಂದ ಹೊರಹೊಮ್ಮುವ ಕ್ಲೋರೋಫ್ಲೋರೋ  ಕಾರ್ಬನ್ ಗಳು ಇವೆಲ್ಲವುಗಳಿಂದ ಮಲಿನಗೊಂಡ ಗಾಳಿ -ಗಗನಕ್ಕೆ ಯುದ್ಧ ಎನ್ನುವ ಸ್ವಯಂಕೃತ ಅಪರಾಧಗಳಿಂದ ಮನುಷ್ಯ ಮತ್ತಷ್ಟು  ವಿಷಾನಿಲಗಳನ್ನು ಸೇರ್ಪಡೆಗೊಳಿಸುತ್ತಿದ್ದಾನೆ. ಯುದ್ಧದಿಂದ ಮನುಷ್ಯರು ಎದುರಿಸುತ್ತಿರುವ ಸಮಸ್ಯೆಗಳು, ಇಂಧನ ಸಮಸ್ಯೆಯ ಗೋಳು ದಿನ ನಿತ್ಯದ ವರದಿಯೇ ಆಗಿದೆ. ಭೂಮಿಯ ಮೇಲಿನ ಮನುಷ್ಯನ ಎಲ್ಲ ಚಟುವಟಿಕೆಗಳೂ ಇಂಧನದ ಮೇಲೆ ಅವಲಂಬಿತವಾಗಿದೆ. ಇಂಧನವಿಲ್ಲದ ನಮ್ಮ ಬದುಕಿನ ಪಥ ಹೇಗಿರಬಹುದು ಎನ್ನುವುದನ್ನು ಕಲ್ಪಿಸಿಕೊಳ್ಳುವುದಕ್ಕೂ ಸಾಧ್ಯವಿಲ್ಲ. ಯುದ್ಧ ತಂದಿತ್ತ ಇಂಧನ ಸಮಸ್ಯೆ ಕಣ್ಮುಂದೆ ಕಾಣುತ್ತಿದೆ.. ನಾವು ಮನುಜರು ಇದರ ಬಗ್ಗೆ ದನಿ ಎತ್ತುತ್ತಿದ್ದೇವೆ. ಪ್ರಕೃತಿಯ ಮೇಲೆ ಎಂಥ ದುಷ್ಪರಿಣಾಮ ಬೀರುತ್ತಿದೆ ಈ ಯುದ್ಧ!! ಮೌನವಾಗಿದೆ ಗಗನ.. ಮೌನವಾಗಿದೆ ಕಡಲು!! ಮಾನವನ ಬದುಕಿಗೆ ಅನಿವಾರ್ಯವಾದ ಕೆಲಸ – ಕಾರ್ಯಗಳಿಂದ ಪರಿಸರ ಮಲಿನ ಗೊಳ್ಳುವುದನ್ನು ತಡೆಯಲು ಕಷ್ಟ ಸಾಧ್ಯ. ಪರ್ಯಾಯ ವ್ಯವಸ್ಥೆಗಳೂ ಇಲ್ಲ ಎನ್ನಬಹುದು. ಆದರೆ ಒಬ್ಬ ವ್ಯಕ್ತಿಯ ಅಥವಾ ಒಂದು ದೇಶದ ಪ್ರತಿಷ್ಠೆಗಾಗಿ ಇಡೀ ಮನುಕುಲ ನರಳುವ ಸ್ಥಿತಿಗೆ ಬರುವ ಪರಿಸ್ಥಿತಿಯನ್ನು ಇಂದಿನ ಯುದ್ಧ ಸನ್ನಿವೇಶಗಳು ನಿರ್ಮಾಣ ಮಾಡುತ್ತಿವೆ. ಧನದಾಹ, ಹೆಸರು, ಕೀರ್ತಿಯ ಹಂಬಲ, ಅಧಿಕಾರದ ಅಮಲು  ಇವೆಲ್ಲವುಗಳಿಂದ ಪ್ರಕೃತಿಯನ್ನು ಅಲ್ಲಗಳೆವ ಮನುಷ್ಯರನ್ನು ಪಂಚಭೂತಗಳೇ ತಮ್ಮ ತಮ್ಮ ಕ್ರಿಯೆಗಳ ಮೂಲಕ  ” ನಮ್ಮ ಒಡೆತನ ನಿಮ್ಮ ಮುಷ್ಟಿಯಲ್ಲಿಲ್ಲ  ” ಎಂದು ಹೇಳುವ ದಿನಗಳು ದೂರವಿಲ್ಲ. ಚರಾಚರಗಳಲ್ಲಿ ಜೀವ ಅರಳಿಸಿ ನಗುತ್ತಿರುವ ಭೂಮಿಯ ಸಹನಾ ಗುಣವನ್ನು, ತಂಗಾಳಿಯ ಮೂಲಕ ಮುದಗೊಳಿಸುವ ವಾತಾವರಣದ ಹೃದಯವಂತಿಕೆಯನ್ನು, ಸಕಾಲದಲ್ಲಿ ಮೋಡ ಕಟ್ಟಿ ಮಳೆ ಸುರಿಸಿ ಬೆಳೆಯನ್ನು ಹಸಿರಾಗಿಸುವ ಆಗಸದ ಹಿರಿತನವನ್ನು ನಿರ್ಲಕ್ಷಿಸುವ ನಮಗೆ ಮುಂದಿನ ಬವಣೆಯ ದಿನಗಳ ಅರಿವಿಲ್ಲ. ಪ್ರಕೃತಿಯ ಸವಾಲುಗಳನ್ನು ಎದುರಿಸಲು ಸಿದ್ಧರಾಗುವ ಅನಿವಾರ್ಯ ಸ್ಥಿತಿ ಬರುವ ಮುನ್ನ ಮನುಕುಲ ಜಾಗೃತಗೊಳ್ಳಬೇಕಿದೆ. ಆದರೆ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?? ಯುದ್ಧದಾಹಿಗಳಿಗೆ ತಿಳಿ ಹೇಳುವವರು ಯಾರು? ಜಯಲಕ್ಷ್ಮಿ ಕೆ,

“ನೀಲ ಗಗನ ತಿಳಿನೀರ ಸಾಗರಗಳ ಒಡೆತನ ಯಾರದ್ದು?” ಜಯಲಕ್ಷ್ಮಿ ಕೆ Read Post »

ಇತರೆ

“ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..”ಹಾಸ್ಯಲೇಖನ,ಗೊರೂರು ಅನಂತರಾಜು

ಹಾಸ್ಯ ಸಂಗಾತಿ ಗೊರೂರು ಅನಂತರಾಜು “ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..” ಬೆಳಿಗ್ಗೆ ಎಂಟು ಗಂಟೆ. ಸೋಮುವಾರ ವಾರದ ಪೂಜೆಗೆ ಹೂ ಹಣ್ಣು, ತಿಂಡಿಗೆ ತರಕಾರಿ ತರಲು ನಗರದ ಕಟ್ಟಿನಕೆರೆ ಮಾರ್ಕೇಟಿಗೆ ಬಂದಿದ್ದೆ. ಪಿಕ್ಚರ್ ಪ್ಯಾಲೇಸ್ ಥಿಯೇಟರ್‌ನಲ್ಲಿ ಹಳೇ ಚಿತ್ರದ ಪೋಸ್ಟರ್ ಕಣ್ಣಿಗೆ ಬಿತ್ತು. ಅದು ಅಂದಿನ ಕಾಲದ ಬಾಂಡ್ ಸಿನಿಮಾ ಜೇಡರ ಬಲೆ. ವಿದ್ಯಾರ್ಥಿ ದಿನಗಳಲ್ಲಿ ನಮ್ಮೂರ ಶ್ರೀ ಯೋಗನರಸಿಂಹಸ್ವಾಮಿ ಜಾತ್ರೆಗೆ ನೋಡಿದ್ದೆ. ಅದೇನು ಭಯಂಕರ ಹೊಡೆದಾಟ, ನಮ್ಮೂರ ಜಯಣ್ಣ, ಎತ್ತಿನಗಾಡಿಗೆ ಪೋಸ್ಟರ್ ಅಳವಡಿಸಿ ‘ ನೋಡಲು ಮರೆಯದಿರಿ. ಮರೆತು ಮರುಗದಿರಿ. ಭಯಂಕರ ಹೊಡೆದಾಟಗಳಿಂದ ಕೂಡಿದ ಚಿತ್ರ. ಜೇಡರಬಲೆ..ಎಂ.ಪಿ.ಶಂಕರ್ ಕೊಲೆ.. ಜಯಣ್ಣನ ರೋಚಕ ಪ್ರಚಾರಕ್ಕೆ ಆಕರ್ಷಿತನಾಗಿ ಟೆಂಟ್ ಸಿನಿಮಾದಲ್ಲಿ ಫ್ರಂಟ್ (ನೆಲ) ನಲ್ಲಿ ಕುಳಿತು ಸಿನಿಮಾ ನೋಡಿದ್ದೆ. ದಡ್.! ನನ್ನ ಕುತ್ತಿಗೆ ಮೇಲೆ ಬಲವಾದ ಪೆಟ್ಟು ಬಿದ್ದು ತಿರುಗಿ ನೋಡಿದೆ. ಕಟ್ಟುಮಸ್ತಾದ ಆಳು! ಕನ್ನಡದ ಕಟ್ಟಾಳು! ಮೀಸೆ ಗೋಪಾಲ. ಬಿದ್ದ ಏಟಿನ ನೋವಿಗೆ ದವಡೆಗೆ ಹೊಡೆಯುವ ಸಿಟ್ಟು ಬಂದರೂ ಹೊಡೆಯಲಾದೀತೆ ಈ ಬಡಕಲು ಶರೀರದ ಕವಿಗೆ.! ಶಕುನಿಯ ಮಾಯ ನೋಟದಂತೆ ಪೋಸ್ ಕೊಟ್ಟು  ವಕ್ರನೋಟದಿ  ನಕ್ಕೆ.“ಎಲ್ಲಿಗೆ ಹೊರಟ್ಯೋ ವಿಕಟಕವಿ. ಬಾ ಟೀ ಕುಡಿಸು..” ತರಕಾರಿ ತರಲು ಹೋಗಬೇಕು ಗುರು.. “ ಹೋಗುವೆ ಬಾ. ಅಪರೂಪಕ್ಕೆ ಸಿಕ್ಕಿದ್ದೀಯ.  ಗುರು ಭವನದಲ್ಲಿ ಟೀ ಕುಡಿಸು ಬಾ.. ಎಂದು ಹೊರಟ ಕಟ್ಟಾಳುವನ್ನು ಹಿಂಬಾಲಿಸಿದೆ.  ಗುರು ಭವನದಲ್ಲಿ ನಮ್ಮ  ಗುರುಗೋಪಾಲರು ಒಂದು ಮಸಾಲೆ ದೋಸೆಗೆ ಆರ್ಡರ್ ಮಾಡಿದರು.“ ನಿನಗೆ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಸಿಕ್ಕಿಲ್ಲವೇನೋ ಕವಿ.. ದೋಸೆಯನ್ನು ಬಾಯಿಗೆ ತುರುಕುತ್ತಾ ಕೇಳಿದರು ಗುರುಗಳು.“ ಇಲ್ಲಾ ಗುರುವೇ. ಪ್ರಶಸ್ತಿಗೆ ಅರ್ಜಿ ಹಾಕಿ ಪ್ರಶಸ್ತಿ ಪಡೆಯಬೇಕೆ? ಗುರುತಿಸಿಕೊಡುವುದು  ಧರ್ಮ ಅಲ್ಲವೇ..?“ಅಯ್ಯೋ ನಿನ್ನ ಕರ್ಮವೇ.! ಎಷ್ಟು ಪುಸ್ತಕ ಬರೆದಿದ್ದಿಯ..?“ ಅರವತ್ತು ದಾಟಿದೆ.. ವಯಸ್ಸು ಅರವತ್ನಾಲ್ಕು ದಾಟಿದೆ.“ ಜಿಲ್ಲೆದು ಆಗಿದೆ ಅಲ್ವೆ.? ಹೌದು ಬಹಳ ಹಿಂದೆಯೇ ಆಗಿದೆ.. ಸರಿ, ಏನಾದ್ರೂ ಮಾಡುವ.. ಈಗ ಒಂದು ಟೀಗೆ ಆರ್ಡರ್ ಮಾಡು..ಬೈಟು ಹೇಳಬೇಡ.“ಸರಿ ಅಣ್ಣ.. ಎಂದು ಬಾಯಿಬಿಟ್ಟು ಹೇಳಿ ವಯಸ್ಸಿನಲ್ಲಿ ನನಗಿಂತ ಸಣ್ಣ..ಎಂದು ಗೊಣಗಿಕೊಂಡೆ.  ‘ಡರ್..! ಎಂದು ತೇಗಿ ‘ಹುಳಿ ತೇಗೆಂದು ಗೊಣಗಿದರು ಗುರು ದ್ರೋಣಚಾರ್ಯರು ಬಿಲ್ಲು ಬಿಡಲಿಲ್ಲ. ನಾನು ಕೊಟ್ಟೆ. ಹೋಟೆಲ್ ನಿಂದ  ಹೊರಗೆ ಬಂದೆವು. ಅಣ್ಣ ನೀವೀಗ ಫಿಲಂ ಸೆನ್ಸಾರ್ ಮಂಡಳಿಯ ಸದಸ್ಯರಲ್ಲವೇ..“ ಕಟ್.! ಹೇ ವಿಕಟಕವಿ  ಆ ಸೆನ್ಸಾರ್ ವಿಷಯವೆಲ್ಲಾ ಹಾದಿ ಬೀದಿಯಲ್ಲಿ ಮಾತನಾಡಬಾರದು.. ಎಂದು ನನ್ನ ಮಾತಿಗೆ ಕತ್ತರಿ ಹಾಕಿ “ಈಗ ಹೇಳು ನಿನ್ನ ಬರವಣಿಗೆ ಹೇಗೆ ಸಾಗಿದೆ. ಬರೇ ಚುಟುಕ ಬರೆದುಕೊಂಡು ಸಮಾಜವನ್ನು ಕುಟುಕುತ್ತಿರುವೆಯಾ  ಹೇಗೆ ಕಟುಕ..?“ಅಣ್ಣಾವರ ಮಾತು ಯಾವಾಗಲೂ ಕಟುವೇ.! ಏನೂ ಮಾಡುವುದು ಮಾತು ಎಷ್ಟೇ ಕಹಿಯಾದರೂ ಅರಗಿಸಿಕೊಳ್ಳಲೇಬೇಕು.‘ಹಾಂ ಗೋಪಾಲ್ ಜೀ..  ದಿನಾ ಬೆಳಿಗ್ಗೆ ನಮ್ಮ ಹಾಸನ್  ಚುಟುಕು ಕವಿ ಕುಮಾರ್ ಅವರು ಹೊಸ ಹೊಸ ಹಸನಾದ ಕವಿತೆ ಹೊಸೆದು ವ್ಯಾಟ್ಸಪ್‌ನಲ್ಲಿ  ನಿಮ್ಮ ನಂಬರನ್ನು ನಮ್ಮ ರೈರ‍್ಸ್  ಗ್ರೂ:ಪ್‌ಗೆ  ಸೇರಿಸಲೇ..“ ಯಾವುದೇ ಕಾರಣಕ್ಕೂ ಬೇಡ. ನಾನು ಈಗಾಗಾಲೇ ಸಾಕಷ್ಟು ರೈರ‍್ಸ್ ಗ್ರೂಪ್ ನಿಂದ ಲೆಫ್ಟ್ ಆಗಿದ್ದೇನೆ. ಇರಲಿ, ನೀನು ಆಗೆಲ್ಲಾ ಲೋಕಲ್ ಪೇಪರ್ ನಲ್ಲಿ  ಚುಟುಕು ಬರೀತ್ತಿದ್ದೆಯೆಲ್ಲಾ.. ಇನ್ನೂ ಜಿಲ್ಲೆಯಲ್ಲೇ ಉಳಿದಿದ್ದಿಯೋ.. ಸ್ಟೇಟ್‌ಗೆ ಪ್ರಮೋಟ್ ಆಗಿದ್ದೀಯೊ..? ಮೊನ್ನೆ ಯಾವುದೋ ನ್ಯೂಸ್ ಪೇಪರ್‌ನಲ್ಲಿ ನಿನ್ನ ನಾನ್ಸೆನ್ಸ್ ಪೊಯೆಂ ನೋಡಿದೆ. ಸರಿ, ಹೇಗಾದ್ರೂ ರ‍್ಕೊಂಡು ಸಾಯಿ.  ಈಗ ನನ್ನ ತಲೆ ಬಿಸಿ ಆಗಿದೆ. ಒಂದು ಬರಕ್ಲೇ ಸಿಗರೇಟು ಕೊಡಿಸು ಬಾ ಎಂದು ಬೀಡಾ ಅಂಗಡಿಗೆ ಕರೆದೊಯ್ದರು. ಅಣ್ಣನನ್ನು ಬೇಗ ಬೀಳ್ಕೊಡಬೇಕು. ಇಲ್ಲವಾದರೇ ಬೀಳುತ್ತೆ ಬರೆ.!“ಇತ್ತೀಚಿಗೆ ನವ್ಯ ಕವಿಗಳು ಜಡೆ ಕವಿತೆ ಬರೆಯುತ್ತಿದ್ದಾರಲ್ಲಾ. ನೀನ್ಯಾವ ಜಡೆಗೆ ಕೈ ಹಾಕಿಲ್ಲವೇನೋ ವಿಕಟಕವಿ. ಸಿಗರೇಟ್ ಹೊಗೆ ಉಗುಳಿ ಅಣ್ಣ ನಿರಾಳ ಮನಸ್ಥಿತಿಗೆ ಬಂದರು.  ‘ಗೋಪಾಲು, ನಾನಿನ್ನು  ಜಡೆ ಕವಿತೆ ಬರೆಯಲು ಪ್ರಯತ್ನಿಸಿಲ್ಲ. ಆದರೆ ಹಿಂದೊಮ್ಮೆ ಟೂ ಲೈನ್ ಚುಟುಕ ಬರೆದಿದ್ದೆ. ಅದನ್ನು ಇಲ್ಲೇ ಈಗಲೇ ವಾಚಿಸುವೇ ಕೇಳಿ ಪ್ಲೀಸ್..ದ್ರೌಪದಿ ತೊಟ್ಟಿದ್ದರೆ ಚೂಡಿದಾರದುಶ್ಯಾಸನ ಎಳೆಯುತ್ತಿದ್ದನೆ ದಾರ..“ಲೇ ಪ್ರಾಸ ಕವಿ, ನೀನು ಹೀಗೆ ಹಾದಿ ಬೀದಿಯಲ್ಲೆಲ್ಲಾ ಚುಟುಕು ವಾಚಿಸಿದರೆ ಅಟ್ಟಿಬಿಡುವೆ ರುದ್ರಪಟ್ಟಣಕ್ಕೆ.! ಲೇ ಕವಿ, ಯಾಕೋ ಹೊಟ್ಟೆನೋವು ಶುರು ಆಗ್ತಾ ಇದೆ. ಈಗ ಗ್ಯಾಸ್‌ಗೆ ಟ್ರಬಲ್ ಟ್ಯಮ್.  ಅವನ್ಯಾರೋ, ಹಳೇ ದೋಸೆ ಮಗಚಿ ಹಾಕಿ ನನ್ನ ಹೊಟ್ಟೆಗೆ ಗ್ಯಾಸ್ ತಂದಿಟ್ಟದ್ದಾನೆ. ಸರಿ ನೀನು ಮನೆಗೆ ಹೊರಡು.  ನಾನು ಹೊರಡುತ್ತೇನೆ. ಇದೇ ಇವತ್ತಿನ ಮೊದಲನೇ ಪಾಠ. ಅಂದ್ಹಾಗೆ ನಿನ್ನ ಚುಟುಕು ಕೇಳಿ  ನನಗೆ ನೆನಪಾಯಿತು. ಇವತ್ತು ಹಾಸನಾಂಬ ಕಲಾಕ್ಷೇತ್ರದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದ್ರೌಪದಿ ವಸ್ತಾçಪಹರಣ ದೃಶ್ಯ ವೀಕ್ಷಿಸಿ ಸೆನ್ಸಾರ್ ಮಂಡಳಿಗೆ ವರದಿ ಕಳಿಸಬೇಕು.. ಎಂದು ಸಿಗರೇಟ್ ತುಂಡನ್ನು ಕಾಲಿನಿಂದ ಹೊಸಕಿ ದುಶ್ಯಾಸನನಂತೆ ನಕ್ಕನು.ಅಯ್ಯೋ, ಗೋಪಾಲ  ಕುರುಕ್ಷೇತ್ರ ನಾಟಕದಲ್ಲಿ ಆ ದೃಶ್ಯ ಇಲ್ಲ..! ಗೊರೂರು ಅನಂತರಾಜು, ಹಾಸನ. ಮೊ: ೯೪೪೯೪೬೨೮೭೯.ವಿಳಾಸ: ಹುಣಸಿನಕೆರೆ ಬಡಾವಣೆ, ೨೯ನೇ ವಾರ್ಡ್, ೩ನೇ ಕ್ರಾಸ್,ಹಾಸನ-೫೭೩೨೦೧.

“ಎಲ್ಲಿಗೆ ಹೊರಟ್ಯೋ ವಿಕಟಕವಿ ಬಾ ಟೀ ಕುಡಿಸು..”ಹಾಸ್ಯಲೇಖನ,ಗೊರೂರು ಅನಂತರಾಜು Read Post »

ಇತರೆ

“ನನ್ನ ಯೋಗಾಭ್ಯಾಸ ಪ್ರಾರಂಭ” ಗೊರೂರು ವಸಂತಿ ಮೂರ್ತಿ (ಕೆನಡ)

ವಿಶೇಷ ಲೇಖನ ಗೊರೂರು ವಸಂತಿ ಮೂರ್ತಿ (ಕೆನಡ) “ನನ್ನ ಯೋಗಾಭ್ಯಾಸ ಪ್ರಾರಂಭ” ಮನುಷ್ಯ ಸುಖವಾಗಿ ಬಾಳಬೇಕಾದರೆ ಇರುವುದಕ್ಕೆ ಒಂದು ಮನೆ, ಉಡುವುದಕ್ಕೆ ಬಟ್ಟೆ, ಹೊಟ್ಟೆತುಂಬ ಊಟ ಮತ್ತು ಒಳ್ಳೆಯ ಆರೋಗ್ಯ ಅತ್ಯಗತ್ಯ. ಈ ಪಟ್ಟಿಯಲ್ಲಿ ಆರೋಗ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಮನ್ನಣೆ ಕೊಡಲಾಗುತ್ತದೆ.. ಇದಕ್ಕೆ ಕಾರಣ ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಮನೆ, ಬಟ್ಟೆ, ರುಚಿಕರವಾದ ಆಹಾರ, ಕಾರು ಒಡವೆಗಳಿಂದ ಸಂತೋಷ ಪಡೆಯಲು ಸಾಧ್ಯ. ಉತ್ತಮ ಆರೋಗ್ಯವಿಲ್ಲದಿದ್ದರೆ ಯಾವ ಐಶ್ವರ್ಯದಿಂದಲೂ ಪ್ರಯೋಜನವಿಲ್ಲ. ಅದರಿಂದಲೇ ಆರೋಗ್ಯವೇ ಭಾಗ್ಯ ಎಂಬ ಮಾತು ವಾಡಿಕೆಯಲ್ಲಿದೆ. “It is health that is real wealth and not pieces of gold and silver” ಎಂದು ಗಾಂಧೀಜಿ ಅವರು ಕೂಡ ಹೇಳಿದ್ದಾರೆ. ಆದ್ದರಿಂದ ಆರೋಗ್ಯ ಭಾಗ್ಯ ಮಿಕ್ಕೆಲ್ಲ ಭಾಗ್ಯಗಳಿಗಿಂತಲೂ ಹೆಚ್ಚು ಮುಖ್ಯ. ಇದು ನಾನು ಕಂಡುಹಿಡಿದ ಹೊಸ ವಿಷಯವೇನಲ್ಲ. ಎಲ್ಲರಿಗೂ ಎಲ್ಲ ಕಾಲದಲ್ಲೂ ತಿಳಿದಿರುವ ವಿಚಾರ. ಹಾಗಿರುವಾಗ ಪ್ರತಿವ್ಯಕ್ತಿಯೂ ತನ್ನ ಆರೋಗ್ಯದ ಬಗ್ಗೆ ಅತ್ಯಂತ ಹೆಚ್ಚು ನಿಗಾ ಇಟ್ಟುಕೊಳ್ಳಬೇಕು ಎಂಬುದು ಸರ್ವವಿದಿತವಾಗಿದೆ ತಾನೇ. ಹಾಗಿದ್ದೂ ವ್ಯಕ್ತಿ ತನ್ನ ಆರೋಗ್ಯದ ವಿಚಾರ ಯೋಚಿಸುವುದು ಅದು ಶರೀರದಲ್ಲಿ ಕಡಿಮೆಯಾಗಿ ತೊಂದರೆ ಶುರುವಾದಾಗ ಮಾತ್ರ. ಉದಾಹರಣೆಗೆ ನಮ್ಮ ಬಾಯಿನಲ್ಲಿ ಇರುವ ಹಲ್ಲನ್ನೇ ನೋಡೋಣ. ನಾವು ನಮ್ಮ ಬಾಯಿನಲ್ಲಿರುವ ಹಲ್ಲನ್ನು ಎಂದೂ ಗಮನಿಸಿದ್ದೇ ಇಲ್ಲ. ಆದರೂ ಅದು ನಾವು ಹುಟ್ಟಿದಾಗಿನಿಂದ ನಮ್ಮ ಬಾಯಲ್ಲಿದ್ದು ನಾವು ಯಾವ ತಿಂಡಿ, ಹಣ್ಣು, ಊಟ, ದೋಸೆ, ಚಪಾತಿ, ವಡೆ ಇಡ್ಲಿ ಸಾಂಬಾರ್ ಮೈಸೂರ್ ಪಾಕ್ ಹೀಗೆ ಏನೇ ಹಾಕಿದರೂ ಅದನ್ನು ಅಗಿದು. ಅದರ ರುಚಿ, ಘಮಗಳನ್ನು ನಮ್ಮ ಬಾಯಿನಲ್ಲಿ ಕುದುರಿಸಿ ನಮ್ಮ ರಸಾನುಭವವನ್ನು ಹೆಚ್ಚಿಸಿದೆ. ಆದರೂ ಹಲ್ಲಿಗೆ ನಾವು ಯಾವ ರೀತಿಯ ಮನ್ನಣೆ ಅಥವಾ ಕೃತಜ್ಞತೆಯನ್ನೂ ತೋರಿಸಿದ್ದಿಲ್ಲ. ಹೀಗಿರುವಾಗ ಇದ್ದಕ್ಕಿದ್ದಂತೆ ಒಂದು ದಿನ ಹಲ್ಲು ನೋವು ಶುರುವಾದಾಗ ನಮಗೆ ಹಲ್ಲಿನ ಅಸ್ತಿತ್ವ ಬರುತ್ತದೆ. ಆಗ ನಾವು ಯಾವ ತಿಂಡಿಯನ್ನೂ ಬಯಸುವುದಿಲ್ಲ. ಅಷ್ಟೇ ಅಲ್ಲ ನಮ್ಮ ಪ್ರೀತಿಯ ತಿಂಡಿ ಎದುರಿಗೇ ಇದ್ದರೂ ಅದನ್ನು ಬಾಯಿಗೆ ಹಾಕಿಕೊಳ್ಳುವ ಇಚ್ಛೆ ಬರುವುದಿಲ್ಲ. ಹಲ್ಲುನೋವಿಗೆ ಏನು ಮಾಡಬೇಕು ಎಂದು ಕಂಡವರನ್ನೆಲ್ಲ ಕೇಳುತ್ತೇವೆ. ಕೆಲವರು ಉಪ್ಪು ನೀರು ಕುಪ್ಪಳಿಸಿ ಎನ್ನುತ್ತಾರೆ. ಇನ್ನೊಬ್ಬರು ಲವಂಗ ಬಾಯಿಗೆ ಹಾಕಿಕೊಳ್ಳಿ ಎನ್ನುತ್ತಾರೆ. ನಾವು ಏನುಮಾಡುವುದಕ್ಕೂ ತಯಾರಾಗುತ್ತೇವೆ. ದಂತವೈದ್ಯರನ್ನು ಹುಡುಕಿಕೊಂಡು ಭರಬಿದ್ದು ಓಡುತ್ತೇವೆ. ಆದ್ದರಿಂದ ನಾವು ನಮ್ಮ ಆರೋಗ್ಯಕ್ಕೆ ಗಮನ ಕೊಟ್ಟು ಅದನ್ನು ಕಾಪಾಡಿಕೊಳ್ಳಬೇಕೆಂದು ಎಲ್ಲರಿಗೂ ಗೊತ್ತಿದೆ. ನಮ್ಮ ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಲು ನಾವು ಕೆಲವು ಸುಲಭವಾದ ನಿಯಮಗಳನ್ನು ಪಾಲಿಸಬೇಕು. ಹಿತಮಿತವಾದ ಊಟ, ವ್ಯಾಯಾಮ ಇವು ಅತ್ಯಗತ್ಯ, ನಮ್ಮಲ್ಲಿ ಅನೇಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡವರೇ ಅಲ್ಲ. ಇಷ್ಟ ಬಂದದ್ದನ್ನು ತಿನ್ನುತ್ತಾ, ಕುಡಿಯುತ್ತಾ, ದಿನವೂ ಮದುವೆ, ಮುಂಜಿ, ತಿಥಿ, ಹಬ್ಬ, ಹರಿದಿನ, ಗ್ರಹಪ್ರವೇಶ, ದೇವರ ಸಮಾರಾಧನೆ ಹುಟ್ಟಿದ ಹಬ್ಬಗಳು, ಹೋಟೆಲ್ ಊಟಗಳು ಹೀಗೆ ಯಾವಯಾವ ನೆಪವನ್ನೂ ಹುಡುಕಿ ಮಿತಿಮೀರಿ ಊಟ ಮಾಡುತ್ತಾ, ತಮ್ಮ ಆರೋಗ್ಯವನ್ನು ಅಲಕ್ಷ್ಯಮಾಡುತ್ತಾರೆ. ಸಿಹಿ ತಿಂಡಿಗಳು, ಎಣ್ಣೆಯಲ್ಲಿ ಕರಿದ ಬೋಂಡಾ, ಚೆಕ್ಕುಲಿ, ಮಸಾಲವಡೆ ಇನ್ನೂ ಅನೇಕ ವಿಧವಾದ ಖಾದ್ಯ ಪದಾರ್ಥಗಳನ್ನು ಸದಾ ಮೇಯುತ್ತಾ ಮೈಗಳ್ಳರಾಗಿ ನಾನು ಕಲ್ಲನ್ನೂ ತಿಂದು ಅರಗಿಸಿಕೊಳ್ಳಬಲ್ಲೆ. ಆರೋಗ್ಯದಲ್ಲಿ ನನಗೆ ಸಮಾನವಾದವರು ಯಾರೂ ಇಲ್ಲವೇ ಇಲ್ಲ. ಎಂದು ಜಂಬ ಕೊಚ್ಚಿಕೊಳ್ಳುತ್ತಾರೆ. ಚಿಕ್ಕವಯಸ್ಸಿನ ಯುವಕರಲ್ಲಿ ಈ ತರ್ಕ ನಡೆಯಬಹುದು. ಆದರೆ ಇದು ತಾತ್ಕಾಲಿಕ. ಕೆಲವೇ ವರ್ಷಗಳಲ್ಲಿ ಮೈಯ್ಯಲ್ಲಿ ತೂಕ ಹೆಚ್ಚಾಗುತ್ತದೆ. ಹಿಂದಿನ ಕಾಲದಲ್ಲಿ ಜನರಿಗೆ ಅಷ್ಟು ಆರ್ಥಿಕ ಸೌಕರ್ಯ ಇರುತ್ತಿರಲಿಲ್ಲವಾಗಿ ಅವರು ಊಟ ತಿಂಡಿಗಳ ಬಗ್ಗೆ ಹಿತಮಿತವಾಗಿ ಇರುತ್ತಿದ್ದರು. ಊಟದಲ್ಲಿ ಅಷ್ಟು ತುಪ್ಪ, ಎಣ್ಣೆ, ಬೆಣ್ಣೆ ಸಕ್ಕರೆ, ಮೈದಾ ಇರುತ್ತಿರಲಿಲ್ಲ. ಈಗ ಹೆಚ್ಚು ಜನರ ಜೀವನ ಆರ್ಥಿಕವಾಗಿ ಸುಧಾರಿಸಿದೆ. ಇದು ಸಂತೋಷದ ವಿಚಾರ. ಇದನ್ನು ಜನ ತಮ್ಮ ಒಳಿತಿಗಾಗಿ ಉಪಯೋಗಿಸಿಕೊಳ್ಳಬೇಕು. ಆದೂ ಅಲ್ಲದೆ ಆ ಕಾಲದಲ್ಲಿ ಬಸ್ಸು ಕಾರುಗಳ ಸೌಕರ್ಯ ಅಷ್ಟು ಇರಲಿಲ್ಲವಾಗಿ ಎಲ್ಲರೂ ತಮ್ಮ ತಮ್ಮ ಕೆಲಸಗಳಿಗೆ ನಡೆದುಕೊಂಡೇ ಹೋಗಬೇಕಾಗಿತ್ತು. ಮನೆಕೆಲಸ, ದನಕರುಗಳ ಪಾಲನೆ, ವ್ಯವಸಾಯ ಹೀಗೆ ಎಲ್ಲರಿಗೂ ಯಥೇಚ್ಛವಾಗಿ ವ್ಯಾಯಾಮ ಸಿಗುತ್ತಿತ್ತು. ಈಗ ಸಾರಿಗೆ ವ್ಯವಸ್ಥೆಗಳು ತುಂಬಾ ಸುಧಾರಿಸಿವೆ. ಪ್ರತಿಮನೆಯಲ್ಲೂ ಸ್ಕೂಟರ್, ಕಾರುಗಳಿದ್ದು, ಯಾರೂ ಕಾಲಿಗೆ ವ್ಯಾಯಾಮ ಕೊಡಬೇಕಾದ ಅವಶ್ಯಕತೆಯೇ ಇಲ್ಲವಾಗಿದೆ. ಹಿಂದಿನ ಕಾಲದಲ್ಲಿ ಮನೆಗೆ ಯಾರಾದರೂ ನೆಂಟರು ಬರುತ್ತಾರೆ ಎಂದರೆ ಮನೆಯ ಹೆಂಗಸರಿಗೆ ಕೆಲಸ ಜಾಸ್ತಿ ಯಾಗುತಿತ್ತು. ಆದರೆ ಈ ಆಧುನಿಕ ಯುಗದಲ್ಲಿ ಹೆಂಗಸರು ಹೆಚ್ಚು ಕೆಲಸ ಮಾಡಬೇಕಾಗಿಲ್ಲ. ಇಷ್ಟ ಬಂದರೆ ಮಾಡಬಹುದು. ಇಲ್ಲದಿದ್ದರೆ ಬೇಕಿಲ್ಲ. ಅದರಲ್ಲೂ ಅನೇಕ ಹೆಂಗಸರು ಹೊರಗೆ ಉದ್ಯೋಗ ಮಾಡುತ್ತಾರೆ. ಅವರಿಗೆ ಮನೆ ಕೆಲಸ ಮಾಡುವುದಕ್ಕೆ ಖಂಡಿತ ಸಮಯ ಸಿಕ್ಕುವುದಿಲ್ಲ. ಈಗ ಬೆಂಗಳೂರು ಮತ್ತು ಇತರ ದೊಡ್ಡ ನಗರಗಳಲ್ಲಿ ಬೀದಿ ಬೀದಿಯಲ್ಲೂ ರುಚಿ ರುಚಿಯಾದ ತಿಂಡಿ, ಊಟಗಳನ್ನೂ ತಯಾರಾಗಿ ಮಾರುವ ಅಂಗಡಿಗಳು ಇವೆ. ಅಲ್ಲಿಯೇ ಹೋಗಿ ಕುಳಿತು ತಿನ್ನಬಹುದು ಇಲ್ಲ ಮನೆಗೆ ಕಟ್ಟಿಸಿಕೊಂಡು ಬರಬಹುದು. ಸಿಹಿ ಪದಾರ್ಥಗಳನ್ನು ಮಾಡಿ ರೆಡಿಯಾಗಿ ಇಟ್ಟಿರುವ ಆಶಾ ಸ್ವೀಟ್ಸ್, ಕಾಂತಿಸ್ವೀಟ್ಸ್, ನಂದಿನಿ ಪಾರ್ಲರ್, ಹೋಳಿಗೆಮನೆ ಮುಂತಾದುವು ಬಹಳ ಜನಪ್ರಿಯವಾಗಿವೆ. ಹೀಗೆ ಕಷ್ಟಪಡದೇ ರುಚಿ ರುಚಿಯಾದ ಊಟ ಮಾಡುವುದು ಯಾರಿಗೆ ತಾನೇ ಇಷ್ಟವಾಗುವುದಿಲ್ಲ? ಇದು ಬಹಳ ಮಜಾ ಎನ್ನಿಸುತ್ತದೆ. ಆದರೆ ಈ ಖುಷಿಗೆ ಬರುವ ಧಕ್ಕೆ ನಮ್ಮ ಶರೀರ ಸ್ಥೂಲವಾದಾಗ. ಇದ್ದಕ್ಕಿದ್ದಂತೆ ನಾನು ದಪ್ಪನಾಗುತ್ತಿದ್ದೇನೆ ಎನ್ನುವ ಒಳಧ್ವನಿ ಕೇಳಿಸಲು ಶುರುವಾಗುತ್ತದೆ. ಆದರೆ ಅದನ್ನು ಒಪ್ಪಿಕೊಳ್ಳಲು ನಮ್ಮ ಮನಸ್ಸು ತಯಾರಿಲ್ಲ. ಅಂಗಿ, ರವಿಕೆ ಬಿಗಿಯಾದ ಕಾರಣ ಏನು ಎಂದು ಹೊರಗಿನ ಕಾರಣ ಹುಡುಕುತ್ತೇವೆ. “ನೋಡು ಈ ಬ್ಲೌಸ್ ಒಂದು ಸಲ ನೀರಿಗೆ ಹಾಕಿದ ಕೂಡಲೇ ಶೃಂಕ್ ಆಗಿದೆ.” ಎನ್ನುತ್ತೇವೆ. ಆದರೆ ನೀರನ್ನೇ ಕಾಣದ ಪೆಟ್ಟಿಗೆಯಲ್ಲಿ ಮಡಿಸಿ ಇಟ್ಟಿರುವ ಸಿಲ್ಕ್ ರವಿಕೆ ಶೃಂಕ್ ಆಗುವುದಕ್ಕೆ ಏನು ಕಾರಣ? ಅದಕ್ಕೆ ಬಟ್ಟೆ ಹೊಲೆದ ದರ್ಜಿಯೇ ಕಾರಣ ಎಂದು ತೀರ್ಪು ಕೊಡುತ್ತೇವೆ. ಕರೆಕ್ಟ್ ಆಗಿರುವ ಅಳತೆ ಬ್ಲೌಸ್ ಕೊಟ್ಟಿದ್ದೆ. ಆದರೂ ಎಷ್ಟು ಬಿಗಿಯಾಗಿ ಹೊಲೆದಿದ್ದಾನೆ ನೋಡು. ಉಸಿರು ಬಿಡುವುದಕ್ಕೇ ಆಗುವುದಿಲ್ಲ ಎಂದು ನಿರಪರಾಧಿಯಾದ ದರ್ಜಿಯನ್ನೇ ಬೈಯುತ್ತೇವೆ. ಆದರೆ ನಮ್ಮ ಒಳಗುಟ್ಟು ನಮಗೇ ಗೊತ್ತಿದೆ. ನನ್ನ ದೇಹದ ತೂಕ ಜಾಸ್ತಿ ಆಗುತ್ತಿದೆ. ಊಟ ಕಡಿಮೆ ಮಾಡಬೇಕು. ದಿನವೂ ವಾಕಿಂಗ್ ಮಾಡಬೇಕು. ಯೋಗ ಕ್ಲಾಸ್ ಸೇರುವುದು ಒಳ್ಳೆಯದು ಎಂಬ ಯೋಚನೆ ಬರುತ್ತದೆ. ಆದರೆ ಶರೀರ ಸ್ಥೂಲವಾದಷ್ಟೂ ವ್ಯಾಯಾಮ ಮಾಡುವುದು ಹೆಚ್ಚು ಕಷ್ಟವಾಗುತ್ತದೆ. ನಡೆಯುವಾಗ ಏದುಸಿರು ಬರುತ್ತದೆ. ಅನೇಕರಿಗೆ ಡಾಕ್ಟರು ನಿಮಗೆ ಬ್ಲಡ್ ಪ್ರೆಷರ್ ಜಾಸ್ತಿಯಾಗುತ್ತಿದೆ. ನೀವು ವ್ಯಾಯಾಮ ಮಾಡಿ. ತೂಕ ಕಡಿಮೆ ಮಾಡಿಕೊಳ್ಳಿ ಎಂದು ಬಹಳ ಸೂಕ್ಷ್ಮವಾಗಿ ಹೇಳುತ್ತಾರೆ. ಇದನ್ನು ಕೇಳಿದಾಗ ನಮಗೆ ಡಾಕ್ಟರರ ಮೇಲೆಯೇ ಅಸಮಾಧಾನವಾಗುತ್ತದೆ. ಬ್ಲಡ್ ಪ್ರೆಷರ್ ವಿಚಾರ ಹೇಳುವಾಗ ನನಗೆ ನನ್ನ ಚಿಕ್ಕಪ್ಪ (ನನ್ನ ತಂದೆಯವರ ಸ್ವಂತ ತಮ್ಮ) ಪಂಡಿತ ನರಸಿಂಹಾಚಾರ್ ಅವರ ಜ್ನ್ಯಾಪಕ ಬರುತ್ತದೆ. ಅವರು ಬಹಳ ವೈದೀಕರು. ಶ್ರದ್ಧಾವಂತರು. ಸಂಸೃತ, ಕನ್ನಡ ಹಾಗೂ ಹಿಂದಿ ಪಂಡಿತರು. ಊಟ ತಿಂಡಿಗಳಲ್ಲಿ ಬಹಳ ನಿಯಮವಾಗಿ ಇರುವವರು. ಏಕಾದಶಿಯ ದಿನ ಸಂಪೂರ್ಣ ಉಪವಾಸ ಮಾಡುತ್ತಿದ್ದರು. ಅವರು ಬೆಂಗಳೂರಿನಲ್ಲಿ ಎಲ್ಲಿಂದ ಎಲ್ಲಿಗೂ ನಡೆದುಕೊಂಡೇ ಹೋಗುತ್ತಿದ್ದರು. ಆಟೋರಿಕ್ಷಾ ಹತ್ತಿದವರೇ ಅಲ್ಲ. ಅವರು ಪ್ರತಿವರ್ಷ ಚಾತುರ್ಮಾಸ್ಯ ಎಂಬ ವ್ರತವನ್ನು ಪಾಲಿಸುತ್ತಿದ್ದರು. ಅದು ಬಹಳ ಕಷ್ಟಕರವಾದ ವ್ರತ. ವರ್ಷದಲ್ಲಿ ನಾಲ್ಕು ತಿಂಗಳು, ಪ್ರತಿತಿಂಗಳೂ ನಿರ್ದಿಷ್ಠವಾದ ಪದಾರ್ಥಗಳನ್ನು ವರ್ಜಿಸಿ ಊಟ ಮಾಡಬೇಕು. ಕೊನೆಯ ತಿಂಗಳಿನಲ್ಲಿ ಉಪ್ಪಿಲ್ಲದೆ ಊಟಮಾಡಬೇಕು. ಇಂತಹ ಕಠಿಣ ವ್ರತವನ್ನು ಅನೇಕ ವರ್ಷಗಳ ಕಾಲ ಪಾಲಿಸಿ ಜಯಿಸಿದ ಅವರಿಗೆ ನಾವು ಸದಾಕಾಲವೂ ಮೇಯುತ್ತಿರುವುದನ್ನು ನೋಡಿ ಮನಸ್ಸಿಗೆ ಕಷ್ಟವಾಗಿದ್ದಿರಬೇಕು. ಅವರು ಯಾವುದನ್ನೂ ಖಡಾಖಂಡಿತವಾಗಿ ಹೇಳುವವರು. ಆದರೆ ಅವರ ಮನಸ್ಸು ಒಳ್ಳೆಯದು. ಅವರು ಮೃದುಹೃದಯದವರು. ಅವರ ಮಾತೇ ಗಡಸು. ಈ ಕಾರಣದಿಂದ ನಾವು ಚಿಕ್ಕಂದಿನಿಂದಲೂ ಅವರೊಡನೆ ಎಷ್ಟೋ ಅಷ್ಟೇ ಮಾತನಾಡುತ್ತಿದ್ದೆವು. ಒಮ್ಮೆ ನಾನು ಡಾಕ್ಟರ್ ಬಳಿ ಹೋಗಿ ವಾಪಸ್ಸು ಬಂದಾಗ ಅವರು ಕಾಳಜಿಯಿಂದ ಡಾಕ್ಟರ್ ಏನು ಹೇಳಿದರು ಎಂದು ವಿಚಾರಿಸಿದರು. ಡಾಕ್ಟರ್ ನನಗೆ ಬ್ಲಡ್ ಪ್ರೆಷರ್ ಜಾಸ್ತಿ ಆಗಿದೆ ಎಂದು ಹೇಳಿದರು ಎಂದೆ. ಅವರು ನಿರ್ದಾಕ್ಷಿಣ್ಯವಾಗಿ “ಅದು ಬ್ಲಡ್ ಪ್ರೆಷರ್ ಅಲ್ಲ. ಫುಡ್ ಪ್ರೆಷರ್. ನಿನಗೆ ಬ್ಲಡ್ ಪ್ರೆಷರ್ ಹೆಚ್ಚಾಗಿರುವುದಕ್ಕೆ ಇಷ್ಟೇ ಕಾರಣ. ಆಹಾರ ಜಾಸ್ತಿ ಆಗಿದೆ. ನೀನು ಊಟ ತಿಂಡಿಗಳನ್ನು ತಿನ್ನುವುದು ಕಡಿಮೆ ಮಾಡಿಕೋ. ದಿನಾ ಒಂದುಘಂಟೆ ಕಾಲ ನಡೆಯುವ ಅಭ್ಯಾಸ ಇಟ್ಟುಕೋ. ನಿನ್ನ ಬ್ಲಡ್ ಪ್ರೆಷರ್ ತಾನಾಗಿಯೇ ಹತೋಟಿಗೆ ಬರುತ್ತದೆ.” ಎಂದು ತೀರ್ಮಾನ ಕೊಟ್ಟರು. ನಾನು ಅವರಿಂದ ಸಹಾನುಭೂತಿಯನ್ನು ನಿರೀಕ್ಷಿಸಿದ್ದೆ. ಅದರ ಬದಲು ಅವರ ಈ ನಿರ್ಣಯವನ್ನು ಕೇಳಿ ನನಗೆ ಸ್ವಲ್ಪ ಅಪಮಾನವಾದಂತಾಯಿತು. ಮುಖ ಪೆಚ್ಚಾಯಿತು. ಅಲ್ಲಿಯೇ ನಿಂತಿದ್ದ ಅವರ ಮಗಳು ಹೆಚ್ಚು ಮಾತನಾಡಬೇಡ ಎಂಬಂತೆ ಸನ್ನೆ ಮಾಡಿದಳು. ಆಮೇಲೆ ಅಣ್ಣ ಹತ್ತಿರ ಯಾಕೆ ಹೇಳುವುದಕ್ಕೆ ಹೋದೆ. ಅವರಿಗೆ ಗೊತ್ತಿರುವುದು ತಲೆಗೆಲ್ಲಾ ಒಂದೇ ಮಂತ್ರ. “ಲಂಘನಮ್ ಪರಮೌಷಧಂ” ಎಂದು ನಕ್ಕಳು. ಆದರೆ ನನಗೆ ಮಾತ್ರ ಅವರು ಹೇಳಿದ್ದು ನೂರಕ್ಕೆ ನೂರು ನಿಜ ಎನ್ನಿಸಿತು. ನಮ್ಮ ತೂಕ ಹೆಚ್ಚಾಗಿರುವುದಕ್ಕೆ ಆಧುನಿಕ ಯುಗದಲ್ಲಿ ಅನೇಕ ಕಾರಣಗಳು ಇವೆ ಎಂದು ಹೇಳಿದೆನಷ್ಟೆ. ಸೃಷ್ಟಿಕರ್ತನ ತಪ್ಪೂ ಇದರಲ್ಲಿ ಇದೆ ಎನ್ನಿಸುತ್ತದೆ. ಅದು ಹೇಗೆ ಎಂದು ನೀವು ಕೇಳಬಹುದು. ದೇವರು ಮನುಷ್ಯನ ಶರೀರವನ್ನು ಸೃಷ್ಟಿಸಿದಾಗ ಪ್ರತಿಯೊಬ್ಬ ಜೀವಿಗೂ ಒಂದು ತಲೆ, ಎರಡು ಕಣ್ಣು, ಎರಡು ಕಿವಿ, ಒಂದು ಮೂಗು, ಎರಡು ಕೈ, ಎರಡು ಕಾಲು ಹೀಗೆ ನಿಗದಿಯಾಗಿ ಕೊಟ್ಟಿದ್ದಾನೆ. ಆದರೆ ನಮ್ಮ ಮೈಯ್ಯನ್ನು ಸುತ್ತಿರುವ ಚರ್ಮಕ್ಕೆ ಇಷ್ಟೇ ಎಂಬ ನಿಗದಿಯೇ ಇಲ್ಲ. ಅದು ನಾವು ದಪ್ಪನಾದಷ್ಟೂ ಹಿಗ್ಗುತ್ತಾ ಹೋಗುತ್ತದೆ. ಒಂದು ಪಕ್ಷ ಹಾಗಿಲ್ಲದೇ ನಾವು ತಿನ್ನುತ್ತಿರುವಾಗಲೇ ಆ ಕ್ಷಣದಲ್ಲೇ ನಮ್ಮ ಹೊಟ್ಟೆ ದಪ್ಪನಾಗಿ ಊದುತ್ತಾ ಚರ್ಮ ಬಿಗಿಯಾಗುತ್ತಾ ಪಟಾರ್ ಎಂದು ಹರಿದುಹೋಗಿ ನಾವು ತಿಂದಿದ್ದೆಲ್ಲ ಹೊರಕ್ಕೆ ಚೆಲ್ಲಿ ನಾವು ಎಷ್ಟು ತಿಂದಿದ್ದೇವೆ ಎಂದು ಎಲ್ಲರಿಗೂ ಕಾಣಿಸುವಂತಾಗಿದ್ದರೆ ನಮಗೆ ಆಗುವ ಅವಮಾನವನ್ನು ಊಹಿಸಿಕೊಳ್ಳಿ. ತಕ್ಷಣವೇ ಹೊಟ್ಟೆಗೆ ತುರುಕುವುದನ್ನು ನಿಲ್ಲಿಸಬೇಕಾಗಿತ್ತಿತ್ತು. ಅದಕ್ಕೇ ದೇವರು ನಮ್ಮ ಮೇಲೆ ಕರುಣೆ ಇಟ್ಟು ಈ ವರವನ್ನು ಕರುಣಿಸಿದ್ದಾನೆ ಎನ್ನಿಸುತ್ತದೆ. ನಾನು ಮೊದಲೇ ಹೇಳಿದಂತೆ ಆರ್ಥಿಕವಾಗಿ ಸಮಾಜದಲ್ಲಿ ಬಹಳ ಸುಧಾರಣೆ ಉಂಟಾಗಿದೆ. ಅನೇಕರು ಕಾರು, ಸ್ಕೂಟರ್ ಹೀಗೆ ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಅನೇಕ ಮನೆಗಳಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಹೆಚ್ಚಾಗಿದೆ. ಅದೂ ಅಲ್ಲದೇ ಸಮಾಜದಲ್ಲಿ ಕಾರು ಇಟ್ಟುಕೊಂಡವರ ಘನತೆ ಗೌರವಗಳು ಹೆಚ್ಚು ಎನ್ನಿಸಿಕೊಳ್ಳುತ್ತದೆ. ಇದರಿಂದ ವಾಕಿಂಗ್ ಮುಂತಾದ ಚಟುವಟಿಕೆಗಳಿಗೆ ಧಕ್ಕೆ ಉಂಟಾಗಿದೆ. ಅಷ್ಟೇ ಅಲ್ಲ ದೊಡ್ಡ ನಗರಗಳಲ್ಲಿ ಸ್ವಂತ ವಾಹನವಿಲ್ಲದಿದ್ದರೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೇ ಬಹಳ ಕಷ್ಟವಾಗುತ್ತದೆ. ಆಟೋ, ಬಸ್ಸು, ಊಬರ್ ಇವು ಯಾವುದೂ ಸಮರ್ಪಕವಾಗಿ ನಮ್ಮನ್ನು ಸಮಯಕ್ಕೆ ಸರಿಯಾಗಿ ತಲಪಿಸುವುದಿಲ್ಲ. ಈ ಕಾರಣದಿಂದ ಯಾವ ಜಾಗಕ್ಕಾದರೂ ಹೋಗಬೇಕೆಂದರೆ ಹೆಚ್ಚು ಕಡಿಮೆ ಒಂದು ಇಡೀ ದಿನವನ್ನೇ ಮೀಸಲಾಗಿಡಬೇಕಾಗುತ್ತದೆ. ಇತ್ತೀಚೆಗೆ ನಮ್ಮ ಹಳ್ಳಿಯ

“ನನ್ನ ಯೋಗಾಭ್ಯಾಸ ಪ್ರಾರಂಭ” ಗೊರೂರು ವಸಂತಿ ಮೂರ್ತಿ (ಕೆನಡ) Read Post »

ಇತರೆ, ಲಹರಿ

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ

ನೆನಪಿನ ಸಂಗಾತಿ ಕಲ್ಪನಾ ಎಸ್‌ ಪಾಟೀಲ “ಓಯ್ ಪಾರ್ಲೆ ಹುಡುಗಿ” ನಾನು ಇನ್ನೂ ಚಿಕ್ಕವಳಿದ್ದೆ ಒಂದು ದಿನ ಅಂದು ಭಾನುವಾರ. ನಮ್ಮದೇ ಅಂಗಡಿ ಇತ್ತು, ಅಂಗಡಿಗೆ ಹೋಗಿ ಪಾರ್ಲೆ ಬಿಸ್ಕಿಟ್ ತರಬೇಕ ಅಂತ ಹೋದೆ.ಬಹಳ ದೂರ,ಅಷ್ಟು ಸಮೀಪ ಅಲ್ಲದ,ನಡೆದುಕೊಂಡೆ ಹೋಗಬೇಕಿತ್ತು.‌ ಅಂಗಡಿಯಲ್ಲಿ ಅಪ್ಪ ಇದ್ದರೆ, ಎನ್ ಬೇಕೋ ಅದನೆಲ್ಲ ತಿನ್ನಬಹುದಿತ್ತು.. ಆದರೆ ದೊಡ್ಡಪ್ಪ ಇದ್ದಾಗ ಕಿರಿ ಕಿರಿ, ಅದನ್ನ ತಿನ್ನಬ್ಯಾಡ್ರಿ,ಮುಟ್ಟಬ್ಯಾಡ್ರಿ ಅಂತ ಕಣ್ಣಲ್ಲೇ ಬಯ್ಯುವ. ಅಂದು ದಾರಿಯಲ್ಲಿ ಒಬ್ಬ ಹುಡುಗ ಹರಿದ ಬಟ್ಟೆ, ಕೆದರಿದ ಕೂದಲು, ಕೊಳಕು ಕೈ,ಕಾಲುಗಳು. ನನ್ನ ಬೆನ್ನತ್ತಿ ಬಂದಿದ್ದ. ನಾನು ಬಿಸ್ಕಿಟ್ ತಗೊಂಡು ಮನೆಗೆ ಬರತಿದ್ದಾಗ ಅವನು ಹಿಂದಿಂದೆ ಬಂದು ಮನೆಗೆ ಹತ್ತಿರ ಆಗ್ತಿದ್ದಂತೆ ” ಓಯ್ ಪಾರ್ಲೆ ಹುಡುಗಿ, ಓsಯ್ , ಕಿವಿ ಕೇಳಿಸೋದಿಲ್ಲ ನಿನಗ? ಎನ್ನುತಾ ನಮ್ಮ ಮನೆಯ ಕಟ್ಟೆಯ ಮೇಲೆ ಬಂದು ಕುಳಿತ”. ಎಲ್ಲರಿಗೂ ಆಶ್ಚರ್ಯ, ಯಾರ ಇವನು? ಇವನನ್ನ ಯಾಕ ಕರೆದುಕೊಂಡ ಬಂದೆ? ನೂರೆಂಟು ಪ್ರಶ್ನೆಗಳು. ಅವನ್ನ ನಾನು ಕರಕೊಂಡ ಬಂದಿಲ್ಲ, ಅವನೇ ಬಂದಿದ್ದಾನ ಅಂದೆ, ಅವ್ವ, ಯಾರೋ ಕಂದ ನೀನು ? ಎನ್ ಬೇಕು? ನಿಮ್ಮನೆ ಎಲ್ಲಿ? ನಿನ್ಯಾಕಿಲ್ಲಿ ಬಂದಿಯಾ? ಅಂದಾಗ ಅವನ ದೃಷ್ಟಿ ಆ ಬಿಸ್ಕಿಟ್ ಕಡೆಗೆ ಇತ್ತು. ಆವಾಗ ಅನಿಸಿತ್ತು ನನಗೆ ಓಹೋ, ಪಾಪ! ಇವನಿಗೆ ಬಿಸ್ಕಿಟ್ ತಿನ್ನುವ ಆಸೆ ಆಗಿರಬೇಕು. ಬಿಸ್ಕಿಟ್ ಬೇಕಾ? ಅಂತ ಬರಿ ಕೈ ಮುಂದೆ ಮಾಡಿದೆ, ಕಿತ್ತುಕೊಂಡವನೇ ಅಲ್ಲಿಂದ ಓಡಿ ಹೋದ.ಅವ್ವ,ಬಾರೋ ಇಲ್ಲಿ ಊಟ ಮಾಡುವಂತೆ. ಅಂತ ಕೂಗಿದರೂ ತಿರುಗಿ ನೋಡಲಿಲ್ಲ ಅವನು. ಅವ್ವ ಅವನು ಮರೆಯಾಗುವವರೆಗೆ ಬಿಡಳು. ಅಯ್ಯೋ, ಅವ್ವಾ ಅವನು ಹೋದಾ, ನನಗೆ ಹಸಿವಾಗಿದೆ.‌ಮತ್ತೆ ಅಂಗಡಿಗೆ ಹೋಗಿ ಬಿಸ್ಕಿಟ್ ತರಲಾ? ಅಂದೆ. ಬೇಡ ಊಟ ಮಾಡು ಬಾ. ಬಿಸ್ಕಿಟ್ ಬಹಳ ತಿನ್ನಬಾರದು ಅಂತ ಒಳಗೆ ಹೋದಳು. ಇದ್ದದ್ದನ್ನ ಕಸಿದುಕೊಂಡು ಹೋದ, ಇನ್ನೂ ತಿನ್ನೊದೆಲ್ಲಿಂದ. ನನಗೆ ಊಟ ಬೇಡವಾಗಿತ್ತು, ಆ ಹುಡುಗ ಯಾರಿರಬಹುದು? ದಾರಿಯಲ್ಲಿ ತಾನಾಗಿಯೇ ಹಿಂದೆ ಬಂದು ಹೋಗಿಯೆ ಬಿಟ್ಟ್ನಲ್ಲ.! ಅನಾಥನಾ? ಅವನಿಗೆ ಅವ್ವ-ಅಪ್ಪ ಇಲ್ಲವಾ? ಅವನು ಹಾಗೇಕಿದ್ದ. ಉತ್ತರವಿಲ್ಲದ ಪ್ರಶ್ನೆಗಳು.ಆ ದಿನ ,ಆ ಕ್ಷಣ ನನ್ನಲ್ಲಿ ಮೂಡಿದ ಪ್ರಶ್ನೆಗಳಿಗೆ ಕಾರಣ ಆ ಹುಡುಗ ಹುಡುಕಿದರೂ‌ ಸಿಗದವ. ಹಸಿವು ಅನ್ನೋದು ಏನೆಲ್ಲ ಮಾಡಿಸಬಹುದಲ್ಲವೆ.??!! pics:chatgpt ಕಲ್ಪನಾ ಎಸ್ ಪಾಟೀಲ್

“ಓಯ್ ಪಾರ್ಲೆ ಹುಡುಗಿ”ಬಾಲ್ಯದ ನೆನಪಿನ ಲಹರಿ,ಕಲ್ಪನಾ ಎಸ್‌ ಪಾಟೀಲ ಅವರಿಂದ Read Post »

ಇತರೆ

“ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನಕ್ಕೆ ವಿಶೇಷಲೇಖನ,ಡಾ. ಭಾರತಿ ಮೂಲಿಮನಿ

ವ್ಯಕ್ತಿ ಸಂಗಾತಿ ಡಾ. ಭಾರತಿ ಮೂಲಿಮನಿ “ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನ ಮನುಷ್ಯನು ಅಜ್ಞಾನದಿಂದ ಮಾಡುವ ತಪ್ಪುಗಳನ್ನು ಎತ್ತಿ ತೋರಿಸುವ, ಆ ಮೂಲಕ ಅದನ್ನು ತಿದ್ದುವ ಕೆಲಸವನ್ನು ಹಾಸ್ಯ ಸಾಹಿತ್ಯ ಮಾಡುತ್ತದೆ. ಹಾಸ್ಯದ ತೀವ್ರತೆ ಹೆಚ್ಚಾದಂತೆ ಅದರ ವಿಡಂಬನೆಯ ತೀವ್ರತೆಯು ಹೆಚ್ಚಾಗುತ್ತ ಹೋಗುತ್ತದೆ. ವಿಡಂಬನೆಯ ಮೊನಚು ಹೆಚ್ಚುವುದು ಅಸಹನೀಯವಾದ ಕೃತ್ಯಗಳು ನಡೆದಾಗ. “ಒಂದು ವಿಷಯವನ್ನು ಒಬ್ಬ ವ್ಯಕ್ತಿಗೆ ಮನಮುಟ್ಟುವಂತೆ ಪರಿಣಾಮಕಾರಿಯಾಗಿ ಹೇಳುವ, ಆ ಮೂಲಕ  ಅಜ್ಞಾನದಿಂದ ನಡೆಯುವ ತಪ್ಪನ್ನು ತಿದ್ದುವ, ತಡೆಯುವ ಪರಿಣಾಮಕಾರಿ ಸಾಧನ ವಿಡಂಬನೆ” ಹಿಂದೆ ಜಾನಪದರು ಹಬ್ಬದ ದಿನಗಳಲ್ಲಿ ತಮ್ಮ ಬಂಧುಗಳೊಂದಿಗೆ ಸಂತೋಷದಿಂದ ಕಾಲ ಕಳೆಯಲು ಒಬ್ಬರನ್ನೊಬ್ಬರು ಹಾಸ್ಯ, ಮೊನಚಾದ  ವಿಡಂಬನೆಯಿಂದ ನಿಂದಿಸಿಕೊಳ್ಳುತ್ತಿದ್ದರು. ಹೀಗೆ ಬೇರೆಯವರನ್ನು  ವಿಡಂಬನೆ ಮಾಡಿದರೆ ಅದು ಅತಿರೇಕದ ಪರಿಣಾಮವನ್ನು ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು.. ಆದರೆ ಮೊನಚಾದ ಹಾಸ್ಯದ ಮೂಲಕ ವಿಡಂನೆಯ ಗಾಂಭೀರ್ಯವನ್ನು ತಮ್ಮ ಮಾನಸ ಪುತ್ರ ತಿಂಮನ ಕೈಗೆ ಲೇಖನಿ ಕೊಟ್ಟವರು ಬೀಚಿ.ತಿಂಮ ಒಮ್ಮೊಮ್ಮೆ ಗುರುವು ಮೀರಿಸಿದ್ದು ಉಂಟೆಂದು ಅವರೇ ಹೇಳುತ್ತಾರೆಬೀಚಿಯವರು ಒಂದೂ ಶಬ್ಧವನ್ನೂ ನಿರರ್ಥಕವಾಗಿ ಬಳಸಿಕೊಂಡಿಲ್ಲ. ಯಾವದನ್ನೂ ಸುಮ್ಮನ್ನೇ ಎಳೆದು ತರುವುದಿಲ್ಲ. ಎನ್ನುವ ವಿಮರ್ಶಕರ ಮಾತಿನಲ್ಲಿ ಸತ್ಯವಿದೆ. ೬೩ಕೃತಿಗಳಲ್ಲಿ ಯಾವುದನ್ನು ಕೈಗೆತ್ತಿಕೊಂಡರೆ ಆ ಕಾಲದ,ಈ ಹೊತ್ತಿಗೂ ಹಸಿ ಹಸಿಯಾದ ಸಮಸ್ಯೆಗಳನ್ನು ಅದಕ್ಕೆ ಸುಡು ಸುಡು ಉದಾಹರಣೆ ಸಮೇತ ಓದುಗರ ಮುಂದೆ ತೆರೆದಿಡುವ,  ಆ ಮೂಲಕ  ಸಮಾಜದ ಶ್ರೇಣಿಯಲ್ಲಿ ಮೇಲಿಂದ ತುತ್ತ ತುದಿಯಲ್ಲಿ ಬದುಕುವ ಪ್ರತಿಯೊಬ್ಬರಿಗೂ ಅನ್ವಯಿಸುವ ತಾತ್ವಿಕತೆಯನ್ನು ಹೊತ್ತ ಮಹತ್ವದ ಹೊತ್ತಿಗೆಗಳೇ ಆಗಿವೆ. ಮುಂದೆ ಅಧ್ಯಯನ ಮಾಡಿದ ಕೃತಿಗಳಲ್ಲಿನ ಅವರ ತಾತ್ವಿಕತೆಯ ತುಣುಕುಗಳನ್ನು ಕಾಣಿಸಿದ್ದೇನೆ. ಇದು ನಾನು ಸಂಶಿಧನಾ ವಿದ್ಯಾರ್ಥಿಯಾಗಿ ಅವರನ್ನು ಕಂಡ ಬಗೆ . ಆ ಮೂಲಕ ಬೀಚಿ ಗುರುವಿಗೆ ನನ್ನ ನುಡಿ ನಮನ ಧರ್ಮ ಎನ್ನುವುದು ಬದುಕುವ ರೀತಿ. ಅದು ನೈತಿಕ ತಳಹದಿಯ ಮೇಲೆ ರಚನೆಯಾಗಿರಬೇಕಾದ ಅಗತ್ಯವಾಗಿದೆ. ನೈತಿಕತೆ ಎನ್ನುವುದು ಆಯಾ ಕಾಲ ಸಮಾಜ ನಂಬಿರುವ ಮತ್ತು ಒಪ್ಪಿರುವ ನಿಯಮಗಳೇ ಆಗಿವೆ, ಧರ್ಮ ಎನ್ನುವುದು ಬಲ ಹೀನನನ್ನು ಬಲಿಷ್ಟನು ಕಾಪಾಡುವುದೇ ಆಗಿದೆ. ಅದು ಎಲ್ಲಾ ಪ್ರಾಣಿ ಸಮೂಹಕ್ಕೂ ಅನ್ವಹಿಸುತ್ತದೆ. ಮನುಷ್ಯ ಮನುಷ್ಯನನ್ನು ನಂಬಿ ಆಶ್ರಯಕ್ಕೆ ಬಂದರೆ ನಂಬಿಕೆಗೆ ದ್ರೋಹ ಎಸಗುವುದು ಧರ್ಮ ಎನಿಸಲಾರದು. ಆಶ್ರಯ ಅದಕಿಲ್ಲ ಬಂಧುಗಳು ಯಾರಿಲ್ಲ!ಆಸೆ ಬದುಕಲು ಅದಕೆ ಪಾಪ ಪಾಪ!!ಆಶ್ರಮಕೆ ಬಂದಳು ಸ್ವಾಮಿ ಪಾದವ ನಂಬಿ!ಪ್ರಸವ ವೇದನೆ ಮಾತ್ರ ತಪ್ಪಲಿಲ್ಲವೋ ತಿಂಮ!! ಬೀಚಿಯವರು ಹೇಳುವುದು ಅದನ್ನೇ ಇಲ್ಲಿ ಎಲ್ಲವನ್ನು, ಎಲ್ಲರನ್ನು ಕಳೆದುಕೊಂಡು ಏಕಾಂಗಿಯಾಗಿರುವ ಹೆಣ್ಣು ಆಶ್ರಯ ಬೇಡಿ ಬಂದರೆ ಆಕೆಯ ಶೀಲವನ್ನೇ ದೋಚುವುದು, ಅದು ಒಂದು ಆಶ್ರಮದ ಸ್ವಾಮಿಯಿಂದ ಇಂಥಹ ಕುಕೃತ್ಯ ನಡೆಪದರೆ ಯಾರನ್ನು ನಂಬಿ ಬದುಕನ್ನು ಕಟ್ಟಿಕೊಳ್ಳಬೇಕು ಎನ್ನುವ ಪ್ರಶ್ನೆ ಖಂಡಿತ ಕಾಡುತ್ತದೆ. ನಂಬಿಕೊಂಡು ಬಂದ ಹೆಣ್ಣಿನ ಮೇಲೆ ಪುರುಷ ಸಮಾಜದಿಂದ ಆಗುವ  ದೌರ್ಜನ್ಯವನ್ನು  ಹೇಳುತ್ತಾ ಹೆಣ್ಣಿನ ಬದುಕಿಗೆ ಪುರುಷ ಸಮಾಜದಿಂದ ಆಗುವ ತೊಂದರೆಯನ್ನು, ಅದರಿಂದ ಅವಳಿಗಾಗುವ ಮಾನಸಿಕ, ದೈಹಿಕ ಹಿಂಸೆಯ ಒಟ್ಟು ನಷ್ಟವನ್ನು ಹೇಳುತ್ತಾರೆ. ಸ್ತ್ರೀಯನ್ನು ಸ್ವಾತಂತ್ರ್ಯಳಾಗಿ ಬದುಕಲು ಬಿಡದ ಮತ್ತು ನಂಬಿ ಆಶ್ರಯಕ್ಕೆ ಬಂದವಳನ್ನು ವಂಚಿಸುವ ಧರ್ಮಾಧಿಕಾರಿಯು ಒಂದು ಆಶ್ರಮವನ್ನು ನಡೆಸುವಂತಹದ್ದು, ಮತ್ತು  ನಂಬಿದವಳನ್ನು ವಂಚಿಸುವಂತಹದ್ದು  ಧರ್ಮದ ಹೆಸರಿನಲ್ಲಿ ನಡೆಯುವ ವಂಚನೆಯಾಗಿದೆ. ಮತ್ತು ಧರ್ಮಕ್ಕೆ ಮಸಿ ಬಳಿಯುವ  ಮೂರ್ಖತನ ಅದು. ಇದು ಇಂದು ನೆನ್ನೆಯದ್ದಲ್ಲ ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವುದಾಗಿದೆ. ಸಮಾಜದ ಸಾಮನ್ಯ ಜನರ ಮೇಲಿಲ್ಲದ ನಂಬಿಕೆ  ಆಶ್ರಮಗಳು ಮತ್ತು ಮಠಗಳ ಮೇಲಿರುವುದು. ಅಲ್ಲಿಯೂ ಹೆಣ್ಣಿಗೆ ರಕ್ಷಣೆ ಇಲ್ಲ ಎನ್ನುವುದು ಇಲ್ಲಿ ಸಾಭಿತಾಗುತ್ತದೆ. ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು ಜನರ ಬದುಕನ್ನು ಅದರಲ್ಲೂ ದಿಕ್ಕಿಲ್ಲದ ಅನಾಥ ಮಕ್ಕಳ, ಸ್ತ್ರೀಯರ ಬದುಕನ್ನು ರಕ್ಷಿಸುತ್ತವೆ ಎನ್ನುವ ಬಲವಾದ ನಂಬಿಕೆ ಸುಳ್ಳಾಗುತ್ತದೆ. ಯಾವ ದೈವದ ಮೇಲೆ ನಂಬಿಕೆ ಇಟ್ಟು  ದೈರ್ಯದಿಂದ ಆಶ್ರಯವನ್ನು ಬೇಡಿ  ಬಂದ ಹೆಣ್ಣಿಗೆ  ನಂಬಿಕೆ ದ್ರೋಹ, ಅವಳಿಗೆ ತನ್ನನ್ನು ತಾನು ರಕ್ಷಿಸಿಕೊಳ್ಳುವಲ್ಲಿ ಆಗುವ ವಿಫಲತೆ  ಮತ್ತು ಮಠ ಮಂದಿರಗಳ ಮೇಲಿನ ನಂಬಿಕೆ ಸುಳ್ಳಾಗುತ್ತದೆ. ಹೆಣ್ಣಿನ ರಕ್ಷಣೆ ಮಾಡಬೇಕಾದುದು ಕುಟುಂಬ. ಅಂಥಹ ಕುಟುಂಬವನ್ನು ಕಳೆದುಕೊಂಡ ಹೆಣ್ಣು ಸಮಾಜದಲ್ಲಿ ಬದುಕುವುದು ಇಷ್ಟೊಂದು ಕಠಿಣ ಎನ್ನುವುದು ಈ ಮಾತಿನಲ್ಲಿ ಅಡಕವಾಗದೆ. ಒಂದು ಹೆಣ್ಣು ಯಾರ ಸಹಾಯವಿಲ್ಲದೇ ಬದುಕು ರೂಪಿಸಿಕೊಳ್ಳಲು ಆದದಂತಹ ಸ್ಥಿತಿ. ಆದರೂ ಆಶ್ರಮಕ್ಕೆ ಬಂದ ಹೆಣ್ಣಿಗೆ ಅಲ್ಲಿಯೂ  ಕಾಮುಕರ ಕಾಟ  ತಪ್ಪುವುದಿಲ್ಲ ಆಶ್ರಮ ಎಂದರೆ ಕುಟುಂಬಕ್ಕಿಂತಲೂ ಹೆಚ್ಚು ಭದ್ರತೆ ಒದಗಿಸುವ ತಾಣ, ಅಂತಹ ಆಶ್ರಮ ನಡೆಸುವ ಮಹನೀಯರು ಆಶ್ರಯ ಕೊಡುವ  ನೆಪದಲ್ಲಿ  ಹೆಣ್ಣಿನ ಶೀಲ ದೋಚುವ ಅವಳ ಬದುಕನ್ನು ಕಿತ್ತುಕೊಳ್ಳುವ ತಾಣಗಳಾಗಿ ಮಾರ್ಪಟ್ಟಿರುವುದು ಶೊಚನೀಯ ಸಂಗತಿಯಾಗಿದೆ. “ಗಂಡ ಹೆಂಡತಿ ಜಗಳ ಬೀದಿಗೆ ಬಂತೊಮ್ಮೆ|                                          ಕಂಡು ನಿಂತರು ಎಲ್ಲ, ಜಾಣೊಬ್ಬ ನುಡಿದ||ಗಂಡ ಹೆಂಡತಿ ಜಗಳ ಉಂಡು ಮಲಗುವತನಕಉಂಡರೆ ಮುಗಿದೀತು, ಊಟಕಿಲ್ಲದಕೆ ಜಗಳವೋ ತಿಂಮ|”ಈ ಚೌಪದಿಯಲ್ಲಿ ಬೀಚಿಯವರು ಸಮಾಜದಲ್ಲಿ ನಡೆಯುವ ಘಟನೆಗಳಿಗೆ ತುಂಬಾ ಸೂಕ್ಷ್ಮವಾಗಿ ಸಂವೇದಿಸುತ್ತಾರೆ. ಬಡತನಲ್ಲಿ ಹುಟ್ಟಿ ಬೆಳೆದ ಅವರಿಗೆ ಅದು ಹೊಸದಲ್ಲ. ಅದರಲ್ಲೇ ಸಂತೋಷದಿಂದ  ಬಾಳಿ ಬದುಕಿದವರು. ಗಂಡ ಹೆಂಡತಿಯ ಜಗಳ ಉಂಡು ಮಲಗುವ ತನಕ ಎನ್ನುವುದು ಸಾಮಾನ್ಯವಾದ ಗಾದೆ. ಆದರೂ ಅದು ಬಾಗಶಃ ಸತ್ಯ. ಅಂದರೆ ಒಂದು ಕುಟುಂಬವು ನೆಮ್ಮದಿಯಿಂದ ಬಾಳಲು ಕೌಟುಂಬಿಕ ಹಿನ್ನಲೆಯೂ ಕಾರಣವಾಗಿರುತ್ತದೆ. ಹಸಿವು ಮನುಷ್ಯನನ್ನು ಎಂಥ ಹೀನ ಕೆಲಸÀಕ್ಕೂ ತೊಡಗಿಸುತ್ತದೆ. ಕೌಟುಂಬಿಕ ಸುಖ ಎನ್ನುವುದು ಬದುಕಿನ ಮೂಲಭೂತ ಅಗತ್ಯವನ್ನು ಮೀರಿದ್ದು. ಇಲ್ಲಿ ಅವರು ಹೇಳುತ್ತಿರುವುದು ಜೀವಿಸಲು ಅತೀ ಮುಖ್ಯವಾಗಿ ಬೇಕಾದುದು ಆಹಾರ ಅದೇ ಅವರಿಗೆ ಇಲ್ಲದಿದ್ದಾಗ ಅದಕ್ಕಾಗಿಯೇ ಮನೆಯಲ್ಲಿ ಕಲಹ ಹಸಿವನ್ನು ಮೀರಿದ್ದು ಇನ್ನೊಂದಿಲ್ಲ. ಆ ಅಗತ್ಯ ತೀರಿದರೆ ಮುಂದಿನ ಬೇಡಿಕೆ. ನೆಮ್ಮದಿಯಿಂದ ಹೊಟ್ಟೆ ತುಂಬಿದರೆ ತೃಪ್ತ ಮನಸ್ಸು ನಿದ್ದೆಗೆ ಜಾರುತ್ತದೆ. ಅಲ್ಲಿ ಜಗಳ ಇಲ್ಲದೇ ನೆಮ್ಮದಿಯಿಂದ ಬದುಕು ಸಾಗುತ್ತದೆ ಆದರೆ, ತಿನ್ನಲು ಅನ್ನವೇ ಇಲ್ಲದಿದ್ದಾಗ ಊಟಕ್ಕಾಗಿಯೇ ಜಗಳ ಆಗುವುದು ವಿಪರ್ಯಾಸ ಸತ್ಯ. ಉಂಡು ಮಲಗುವತನಕ ಜಗಳ ಎಂದರೆ ಉಂಡರೆ ಮಲಗುವ ಅವಸರ ಉಣ್ಣಲು ಅನ್ನ ಬೇಡವೇ? ಲೇಖಕರು ಇಲ್ಲಿ ಬಡತನವನ್ನು ಒತ್ತಿ ಹೇಳುತ್ತಾ…ದಾಂಪತ್ಯ ಪಾಡು ಮತ್ತು ಬಡತನವನ್ನು ಮುಖಾ ಮಖಿಯಾಗಿಸುತ್ತಾರೆ. ಉಂಡು ಮಲಗುವುದಾದರೆ ಜಗಳ ನಿಂತೀತು, ಅದಕ್ಕಾಗಿ ಉಣ್ಣಬೇಕು, ಆ ಉಣ್ಣಲು ಇಲ್ಲದಿರುವುದಕ್ಕೆ ಈ ಜಗಳಿನ್ನು ಅದು ಮುಗಿಯುವುದೆಂತು ಮುಗಿಯಲು ಉಣ್ಣಬೇಕು. ಒಂದಕ್ಕೊಂದು ಬೆಸೆದುಕೊಂಡಿವೆ. ಊಟ ಮಾಡಲು ಆಹಾರವೇ ಇಲ್ಲದಿರೆ ಜಗಳ ನಿಲ್ಲುವುದಿಲ್ಲ, ಜಗಳ ನಿಲ್ಲಲು ಊಟ ಬೇಕು. ಬಡತನದ ಬದುಕು, ಬಡವ ಅನುಭವಿಸುವ ನೋವು ಹಸಿವಿನ ಸಂಕಟ, ಏನೆಲ್ಲಾ ಸಂಕಷ್ಟಗಳನ್ನು ತಂದೊಡ್ಡುತ್ತದೆ ಎನ್ನುವುದನ್ನು ಚಿತ್ರಿಸುತ್ತದೆ. ಊಟ ಇಲ್ಲದ್ದಕ್ಕೆ ಜಗಳ ನಡೆಯುತ್ತಿದೆ, ಜಗಳವು ಜಗಜ್ಜಾಹಿರಾಗುತ್ತಿದೆ. ಕುಟುಂದ ಕಲಹ ಬೀದಿಗೆ ಬರಬಾರದು ಎನ್ನುವುದು ಸೂಕ್ಷö್ಮ ಆದರೆ ಅದು ಬೀದಿಯಲ್ಲೇ ಬದುಕುವ ಜನರಿಗೆ ಜಗಳಕ್ಕಾಗಿಯೇ ಮನೆ ಎಲ್ಲಿಂದ ತರುವುದು. ತಮ್ಮ ಮನೆಯಲ್ಲಿ ಕತ್ತೆ ಸತ್ತರೂ ಪಕ್ಕದವರ ತಟ್ಟೆಯ ನೊಣ ತೆಗೆಯುವ ಬುದ್ಧಿ ಮಾತ್ರ ಹೋಗುವುದಿಲ್ಲ  ಜನರಿಗೆ. ಅದನ್ನು ಹೇಳುವುದು ಸಹ ಬೀಚಿಯವರ ಉದ್ಧೇಶವಾಗಿದೆ. ಇದರಿಂದ ತಿಳಿಯಬೇಕಾದುದಿಷ್ಟೆ  ಸಂಸಾರ ಎಂದ ಮೇಲೆ ಒಂದಿಲ್ಲೊಂದು ಕಾರಣಕ್ಕೆ ಇಂಥ ಸಣ್ಣ ಪುಟ್ಟ ಕಲಹಗಳು ಇದ್ದೇ ಇರುತ್ತವೆ. ಎಂದು ತಿಳಿದು ಜನ ಸುಮ್ಮನಿರದೇ ತಾವು ಅಲ್ಲಿ ಇಣುಕುವುದ ಸರಿಯಲ್ಲ. ಎಲ್ಲರ ಮನೆ ದೋಸೆ ತೂತೇ ಎನ್ನುವ ಮಾತು ಅವರಿಗೆ ಗೊತ್ತಿರಬೇಕು. “ಹಿಂದೊಂದು ಕಾಲದಿ ನಮಿಸುತ್ತ ಹೊರಟೆ|ಬಂದವರೆಲ್ಲರೂ ತಲೆಗೆ ಕಾಲಿಟ್ಟರು||ಅಂದು ಕಾಲೆತ್ತಿದೆ ಬಾಗಿದವು ತಲೆಗಳು|\ಒಂದು ತಿಳಿ, ದುಂಡು ಜಗತ್ತಿಗೆ ರುಂಡವಿಲ್ಲವೂ ತಿಂಮ|” ಜಗತ್ತು ಎಂದರೆ ನಾವು ಹೇಗೆ ಬದುಕುತ್ತೇವೆ ಎನ್ನುವುದರ ಮೇಲೆ  ಅದರ ಇರುವಿಕೆ. ನಮ್ಮನ್ನು ನಾವು ಹೇಗೆ ಪರಿಚಯಿಸಿಕೊಂಡಿರುತ್ತೇವೆ ಎನ್ನವುದರ ಮೇಲೆ ನಮ್ಮನ್ನು ಅದು ಉಪಚರಿಸುತ್ತದೆ, ನಾವು ಹೆದರಿ ವಿಧೇಯತೆ ತೋರಿದರೆ ತನ್ನ ಹಿಡಿತಲ್ಲಿಟ್ಟುಲೊಳ್ಳುತ್ತದೆ, ನಮ್ಮ ಬದುಕನ್ನು ತನ್ನ ಕಾಲ ಬುಡದಲ್ಲಿರಿಸಿಕೊಳ್ಳುತ್ತದೆ, ಹಾಗೆ ನಾವು ಬಲಿಷ್ಟರಾಗಿದ್ದರೆ ನಮ್ಮ ಹಿಡಿತದಲ್ಲಿ ತಾನು ಇರುತ್ತದೆ, ನಮ್ಮ ಕಾಲ ಬುಡದಲ್ಲಿದ್ದು ವಿಧೇಯತೆಯನ್ನು ತೋರುತ್ತದೆ. ಜಗತ್ತಿಗೆ ಹೀಗೆ ಇರಬೇಕೆನ್ನುವುದು ನಿಯಮವಲ್ಲ ಅದು ಅಲ್ಲಿನ ಜನತೆಯ ಬದುಕಿನ ಶೈಲಿಯ ಮೇಲೆ ಅವಲಂಬಿಸಿದೆ. ಇದೊಂದು ವಿಷವರ್ತುಲ ಎಂದೂ ನಿಲ್ಲುವುದಿಲ್ಲ ಒಬ್ಬನನ್ನು ತುಳಿಯಲು ಮತ್ತೊಬ್ಬ, ಅವನನ್ನು ತುಳಿಯಲು ಇನ್ನೊಬ್ಬ ಹೀಗೆ ಸಾಗುತ್ತಾ ಯಾವುದೂ ಸ್ಥಿರವಲ್ಲದ ಸ್ಥಿತಿಗೆ ತಲುಪುತ್ತದೆ ಎನ್ನುವ ಸಂದೇಶವನ್ನು ಬೀಚಿಯವರು ಕೊಡುತ್ತಾರೆ. ದಾಸಕೂಟದ ರಂಗನಾಥರಾಯರು ತಮ್ಮ ಬಂಗಲೆಗೆ “ಆನಂದವಿಲ್ಲ” ಎಂದು ಹೆಸರಿಸಿದ್ದು ಸೂಕ್ತವಾಗಿದೆ. ಸರಿಯಾಗಿ ಆ ಸಮಯಕ್ಕಾಗಲೇ ತಮ್ಮ ಆ ಸ್ವಾಮಿನಿಷ್ಠೆಯ ದಾಸ್ಯದಲ್ಲಿಯ ಆನಂದಕ್ಕೆ ಕೊನೆ ಅಲ್ಲಿಗೆ ಬ್ರಿಟಿಷರ ಆಳ್ವಿಕೆಗೆ ವಿರುದ್ಧವಾಗಿ ಹೇಗಾದರೂ ಅವರನ್ನು ಇಲ್ಲಿಂದ ಓಡಿಸುವ ಮತ್ತು ಭಾರತವನ್ನು ದಾಸ್ಯದಿಂದ ಮುಕ್ತಿಗೊಳಿಸುವ ನಿಟ್ಟಿನಲ್ಲಿ ಹೋರಾಟ ದೇಶಾದ್ಯಂತ ನಡೆಯುತ್ತಿದೆ. ಎಲ್ಲೆಡೆ ಗಾಂಧೀಜಿಯವರ ಮುಂದಾಳತ್ವದಲ್ಲಿ ಅವರ ತತ್ವಗಳನ್ನು ಆಧರಿಸಿ ಚಳುವಳಿ ಉಗ್ರ ರೂಪ ತಾಳಿದೆ. ಆಂಗ್ಲರ ಆಳ್ವಿಕೆ ಯಾವಾಗ ಕೊನೆಯಾಗುತ್ತದೆ ಗೊತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ತಾವು ಹಿಂದೆ ೧೨ ರೂಪಾಯಿ ವೇತನ ಪಡೆದರೂ ಸುಖ ಜೀವನ ನಡೆಸುತ್ತಿದ್ದರು. ಅಮಾಯಕ ಜನಗಳ ಬದುಕನ್ನು ಛಿದ್ರಗೊಳಿಸಿ ಸತ್ತ ದನಗಳನ್ನು ಬಿಡದೆ ಲೀಲಾವೂ ಮಾಡಿಸಿ ರಾಜ ಸತ್ತೆಯ ಖಜಾನೆಗೆ ತುಂಬುತ್ತಿದ್ದ ಕಾಲ ಇನ್ನೂ ಮರೆಯಾಗುತ್ತಿದೆ. ಆನಂದ ಖಂಡಿತ ಇಲ್ಲದಾಗುತ್ತದೆ. ತಮ್ಮ ಬಂಗಲೆಗೆ ಕೊಟ್ಟ ಹೆಸರು ಎಷ್ಟೊಂದು ಹಾಸ್ಯಾಸ್ಪದವಾಗಿದೆ. “ಅವಶ್ಯಕತೆ ಇದ್ದರಷ್ಟೇ ಆಯಾ ವಸ್ತುವಿಗೆ ಬೆಲೆ ಇಲ್ಲದಾಗ ಅದೊಂದು ಕಸ. ಸಾಮಾನ್ಯವಾಗಿ ಅನೇಕರಿಗೆ ದೇವರು ಕೂಡ ಇಂಥದ್ದೊಂದು ಕೊಡೆ” ದೇವರು ಇದ್ದಾನೆ ಎನ್ನುವ ಆಸ್ತಿಕರ ಮುಂದೆ ದೇವರೇ ಇಲ್ಲ ಎನ್ನುವ ನಾಸ್ತಿಕನೊಬ್ಬನಿಗೆ ಪಾಠ ಕಲಿಸಬೇಕಾದರೆ ಅವನಿಗೆ ಪರಿಸ್ಥಿತಿಯನ್ನು ಅರ್ಥೈಸಬೇಕು ಅದು ಅವನ ಲೈಂಗಿಕ ಬಯಕೆಯನ್ನು ಅದರೊಂದಿಗೆ ಬೆಸೆದು .ಅದಕ್ಕೆ ಪೂರಕವಾಗಿ ಅದನ್ನು ಸಾಧಿಸಿ ತೋರಿ.ಸಿ. ನೋಡು, ಇದೇ ದೇವರು ನಿನ್ನ ಮನೋ ಕಾಮನೆಗಳನ್ನು ಈಡೇರಿಸಿದವನು ಎಂದು ದೇವಸ್ಥಾನದಲ್ಲಿ ನಿಂತು ಲೈಂಗಿಕ ಅತೃಪ್ತನೊಬ್ಬನಿಗೆ ದೇವರಿದ್ದಾನೆ ಎಂದು ತೋರಿಸುವುದು ವಿಡಂಬನಾತ್ಮಕವಾಗಿದೆ. ಲೇಖಕರದು ಇಧೆ ವಾದ “ಅವರನ್ನು ಯಾರಾದರೂ ವೇವರಿದ್ದಾನೆಯೇ ಎಂದರೆ ಇದ್ದಾನೆ, ಇಲ್ಲವೇ ಎಂದರೆ ಇಲ್ಲ” ಎನ್ನುತ್ತಾರೆ. ಅಂದರೆ ದೇವರ ಬಗೆಗೆ ತಮಗಿರುವ ಕಲ್ಪನೆಯೂ ಕೊಡೆಯಂತೆಯೆ ಅಗತ್ಯವಿದ್ದಾಗ ಅದನ್ನು ಬಳಸಿಕೊಂಡು ಅಗತ್ಯವಿಲ್ಲದಿದ್ದಾಗ ಮೂಲೆ ಸೇರಿಸುವುದು. ದೇವರು ಅಷ್ಟೇ! ಅಗತ್ಯಕ್ಕೆ ತಕ್ಕಂತೆ ಬಳಕೆಯಾಗುತ್ತಾನೆ ಅಗತ್ಯ ಇಲ್ಲದಾಗ ಮೂಲೆ ಸೇರುತ್ತಾನೆ. “ನಮಗೆ ಬೇಡವಾದುದನ್ನೆಲ್ಲ ಕರ್ಮದ ತಲೆಗೆ ಕಟ್ಟುವುದು ಸುಲಭ”ತಂದೆ ತಾಯಿಗಳು ಆಸ್ತಿಕರಾಗಿದ್ದರೂ, ಮಹಾನ್ ದೈವ ಭಕ್ತರಾಗಿದ್ದಾಗಲೂ ಮಗ ನಾಸ್ತಿಕನಾದರೆ ಅದು ಅವನ ಪೂರ್ವಾರ್ಜಿತ ಕರ್ಮ ಎಂದು ಅಂದುಕೊಂಡು ತಂದೆ ತಾಯಿ ಅವನನ್ನು ಅವನ ಪಾಡಿಗೆ ಬಿಟ್ಟು ತಾವು ಅವನ್ನು ಕರ್ಮ ಫಲ ಎಂದು ಹೇಳುವುದು ಪರಿಸ್ಥಿತಿಯ ವ್ಯಂಗ್ಯವೇ ಸರಿ. ಯಾವುದು ಮನುಷ್ಯನ ಹುಟ್ಟಿನಿಂದಲೇ ಪಡೆದುಕೊಂಡು ಬಂದಿರುವುದಿಲ್ಲ. ಅದು ಅವನು ರೂಢಿಸಿಕೊಂಡದ್ದಾಗಿರುತ್ತದೆ. ಸಾಧ್ಯವಾದರೆ ಹಿರಿಯರು ಅವನ ಮನೋಭಾವಗಳನ್ನು ಬದಲಾಯಿಸಬಹುದು. ಅವನನ್ನು ತಿದ್ದಲಾಗದೆ ಅವನ ಇಚ್ಛೆಯಂತೆ ಅವನನ್ನು ಬೆಳೆಯಲು ಬಿಟ್ಟು ಬಿಡುವುದು ತಮ್ಮ ಬೇಜವಾದ್ಬಾರಿ  ಆಗಿದೆ.

“ದಾರ್ಶನಿಕ ಬೀಚಿ” ಹಾಸ್ಯಬ್ರಹ್ಮ ಬೀಚಿಯವರ ಜನ್ಮದಿನಕ್ಕೆ ವಿಶೇಷಲೇಖನ,ಡಾ. ಭಾರತಿ ಮೂಲಿಮನಿ Read Post »

ಇತರೆ, ಜೀವನ

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಸಂಗಾತಿ “ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ ನಮ್ಮ ಪುಣ್ಯ ಭರತ ಭೂಮಿಯ ಹಳ್ಳಿಯೊಂದರಲ್ಲಿ ಓರ್ವ ರೈತ ವಾಸವಾಗಿದ್ದ. ಆತನ ಕೈಗಳು ಭೂಮಿಯಿಂದ ಆತನನ್ನು ಎಳೆದು ತೆಗೆದಂತೆ ತಿರುಚಿದ್ದವು ಆತನ ಬೆನ್ನು ಬಿಲ್ಲಿನಂತೆಬಾಗಿತ್ತು. ಅತ್ಯಂತ ವಯಸ್ಸಾಗಿದ್ದ ಆತ ಒಬ್ಬನೇ ವಾಸಿಸುತ್ತಿದ್ದ. ತನ್ನವರೆಲ್ಲರನ್ನು ಕಳೆದುಕೊಂಡ ಆತನಿಗೆ ಒಂಟಿ ಜೀವನ ಅಭ್ಯಾಸವಾಗಿತ್ತು.ಅದೊಂದು ಸುಗ್ಗಿಯ ದಿನ ಸತತವಾಗಿ ಕೆಲಸ ಮಾಡಿ ಮರಳಿಮನೆಗೆ ಬಂದ ಆತನ ದೇಹದಿಂದ ಬೆವರಿನ ವಾಸನೆ ಹಾಗೂ ಆತನ ಬಟ್ಟೆಗೆ ಮೆತ್ತಿದ ಹಸಿ ಮಣ್ಣಿನ ವಾಸನೆ ಇನ್ನಿಲ್ಲದಂತೆ ಅಂಟಿಕೊಂಡಿತ್ತು. ಮನೆಯ ಹಿತ್ತಲಿನ ಬಾವಿಯ ಬಳಿ ಕೈಕಾಲು ಮುಖವನ್ನು ತೊಳೆದ ಆತ ತನ್ನ ಸ್ನೇಹಿತನಿಗೂ ನೀರು ಕೊಟ್ಟು ಉಪಚರಿಸಿದ… ನಂತರ ಸ್ನೇಹಿತನೊಂದಿಗೆ ಅಡುಗೆಮನೆಯ ಮೇಜಿನ ಮೇಲೆ ಕುಳಿತ. ಮುಂಜಾನೆ ತಾನೇ ಮಾಡಿಟ್ಟ ಅಡುಗೆ ಅಲ್ಲಿತ್ತು.ತಟ್ಟೆಯಲ್ಲಿ ಬಡಿಸಿಕೊಂಡ ಆತ ಊಟವನ್ನು ಸೇವಿಸುವ ಮುನ್ನ ಎಂದಿನಂತೆ ತನ್ನ ತಲೆಯನ್ನು ಬಾಗಿಸಿ ಕೆಲ ಪ್ರಾರ್ಥನೆಯ ಮಂತ್ರಗಳನ್ನು ನಿಧಾನವಾಗಿ ಪಠಿಸಿದ. ನಂತರ ತನ್ನ ಜೊತೆಗೆ ಬಂದಿದ್ದ ಸ್ನೇಹಿತನೊಂದಿಗೆ ಕುಳಿತು ಊಟ ಮಾಡಿದ. ಊಟಕ್ಕೂ ಮುನ್ನ ತಮ್ಮ ರೈತ ಸ್ನೇಹಿತ ತಲೆಬಾಗಿ ಪ್ರಾರ್ಥನೆ ಮಾಡಿದ್ದನ್ನು ನೋಡಿದ ಆತನ ಸ್ನೇಹಿತನಿಗೆ ಇನ್ನು ತಡೆಯಲಾಗಲಿಲ್ಲ..ಗೆಳೆಯ… ಊಟಕ್ಕೆ ಮುನ್ನ ಪ್ರಾರ್ಥನೆಯ ಅಗತ್ಯ ಇದೆಯೇ? ಇದೆಲ್ಲವನ್ನು ನೀನು ಕಷ್ಟಪಟ್ಟು ದುಡಿದು ಸಂಪಾದಿಸಿದ ಹಣದಿಂದ ಪಡೆದದ್ದು ಮತ್ತೇಕೆ ದೇವರನ್ನು ಪ್ರಾರ್ಥಿಸುವೆ ಎಂದು ಗೆಳೆಯನನ್ನು ಪ್ರಶ್ನಿಸಿದ.ತಾನು ಕುಳಿತುಕೊಂಡಿದ್ದ ಸಾಕಷ್ಟು ಶಿಥಿಲವಾಗಿದ್ದ ಕುರ್ಚಿಯಿಂದ ತುಸು ಮುಂದಕ್ಕೆ ಬಾಗಿದ ಆ ರೈತ ನಿಧಾನವಾಗಿ ಎದ್ದು ನಿಂತನು. ಕಿಟಕಿಯ ಬಳಿ ತೆರಳಿ ತನ್ನ ಎರಡು ಕೈಗಳನ್ನು ಬಳಸಿ ಕಿಟಕಿಯ ಕಂಬಿಯನ್ನು ಗಟ್ಟಿಯಾಗಿ ಹಿಡಿದನು. ಮುಖದಲ್ಲಿ ಪುಟ್ಟದಾದ ನಗುವೊಂದನ್ನು ಹೊತ್ತು ದೂರದಲ್ಲಿ ಕಾಣುತ್ತಿದ್ದ ತನ್ನ ಹೊಲವನ್ನು ಸ್ನೇಹಿತನಿಗೆ ತೋರಿಸಿ ಅತ್ಯಂತ ಶಾಂತವಾಗಿ ಹೇಳಿದ. ಗೆಳೆಯ…ನಾನು ಹೊಲದಲ್ಲಿ ಕೆಲಸ ಮಾಡಲು ಸಾಧ್ಯ, ಆದರೆ ಮಳೆ ಬರಿಸಲು ನನ್ನಿಂದ ಸಾಧ್ಯವಿಲ್ಲ. ನನಗೆ ಬೀಜವನ್ನು ಬಿತ್ತಲು ಸಾಧ್ಯ ಆದರೆ ಆ ಬೀಜಕ್ಕೆ ಮೊಳೆತು ಬೆಳೆ ಎಂದು ಅಜ್ಞಾಪಿಸಲು ಸಾಧ್ಯವಿಲ್ಲ. ನನ್ನ ಕೈಗಳು ಕೆಲಸವನ್ನು ನಿರ್ವಹಿಸುತ್ತದೆ ಎಂಬುದೇನೋ ಖಂಡಿತವಾಗಿಯೂ ನಿಜ, ಆದರೆ ಚಮತ್ಕಾರವನ್ನು ಮಾಡಲು ಅಗೋಚರ ಶಕ್ತಿಗೆ ಮಾತ್ರ ಸಾಧ್ಯ ಎಂದು ಹೇಳಿ ದೀರ್ಘವಾದ ಉಸಿರನ್ನು ತೆಗೆದುಕೊಂಡ.ಆತನ ಕಣ್ಣುಗಳಲ್ಲಿ ಪ್ರಶಾಂತತೆ ತುಂಬಿ ತುಳುಕುತ್ತಿತ್ತು.ಒಂದೆರಡು ಕ್ಷಣಗಳ ವಿರಾಮವನ್ನು ತೆಗೆದುಕೊಂಡ ಆತ ಇದೆಲ್ಲ ಚಮತ್ಕಾರವನ್ನು ಬೇರೊಬ್ಬರು  ಮಾಡುತ್ತಿದ್ದಾರೆ…. ಪ್ರಾರ್ಥಿಸುವ ಮೂಲಕ ನಾನು ನನ್ನ ಕೆಲಸ ಯಾವುದು ಎಂಬುದನ್ನು ಅರಿತುಕೊಳ್ಳುತ್ತೇನೆ. ಉಪಕಾರ ಸ್ಮರಣೆ ಮಾಡುವುದರ ಮೂಲಕ ನನ್ನ ಮೇಲೆ ಕೃಪೆಯನ್ನು ತೋರುವ ಆ ಭಗವಂತನನ್ನು ನಾನು ನೆನೆಯದಿದ್ದರೆ ಹೇಗೆ ? ಆದ್ದರಿಂದಲೇ ಆ ಕಾಣದ ಕೈಗಳಿಗೆ, ಅಗೋಚರ ಶಕ್ತಿಗೆ ಪ್ರಾರ್ಥನೆಯ ಮಾಡುವ ಮೂಲಕ ನಾನು ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ಇದು ನನ್ನ ಆದ್ಯ ಕರ್ತವ್ಯ ಎಂದು ತನ್ನ ಮಾತನ್ನು ಪೂರ್ಣಗೊಳಿಸಿದನು.ಆತ ಹೇಳಿದ ಮಾತುಗಳನ್ನು ನಾವೆಂದೂ ಮರೆಯಬಾರದು. ಎಲ್ಲರ ಬದುಕು ಅಷ್ಟೇ ಸರಳವಾಗಿ ಇರುವುದಿಲ್ಲ. ಅದರಲ್ಲೂ ಬಿರುಗಾಳಿ, ನೆರೆ, ಭೀಕರ ಕ್ಷಾಮ ಇದ್ದೇ ಇರುತ್ತವೆ. ರೈತನ ಬದುಕಂತೂ ಅನಿಶ್ಚಿತತೆಯ ಹಾದಿಯಲ್ಲಿ ಸಾಗುತ್ತದೆ. ಬಿತ್ತಿದ ಬೆಳೆಗೆ ಸಾಕಷ್ಟು ಮಳೆ ಬೀಳದೆ ಹೋಗಬಹುದು ಫಸಲು ಕೈಗೆ ಬರುವುದರಲ್ಲಿಯೇ ಹಾಳಾಗಿ ಹೋಗಬಹುದು ಫಸಲಿಗೆ ಒಳ್ಳೆಯ ಬೆಲೆ ಸಿಕ್ಕದೆ ಹೋಗಬಹುದು. ಆತನ ಹೊರೆಗಳು ಮತ್ತಷ್ಟು ಹೆಚ್ಚಾಗುತ್ತವೆಯೇ ಹೊರತು ಕಡಿಮೆಯಾಗುವುದು ಸಾಧ್ಯವಿಲ್ಲ…ಆದರೂ ಕೂಡ ಪ್ರತಿದಿನ ಮುಂಜಾನೆ ಆತ ಬೇಗನೆ ಏಳುವುದನ್ನು ತಪ್ಪಿಸುವುದಿಲ್ಲ. ತನ್ನ ಅನಿಶ್ಚಿತ ಬದುಕಿನ ಕುರಿತು ಆತನಿಗೆ ಬೇಸರವಿಲ್ಲ… ಆದರೂ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ತನಗೆ ಉಸಿರು ಕೊಟ್ಟದ್ದಕ್ಕಾಗಿ, ತನ್ನಲ್ಲಿ ಸಾಮರ್ಥ್ಯವನ್ನು ತುಂಬಿದ್ದಕ್ಕಾಗಿ ಮತ್ತೆ ತನ್ನ ಹೊಲದಲ್ಲಿ ತಾನು ನಡೆದು ಓಡಾಡಲು ಅವಕಾಶವನ್ನು ಕಲ್ಪಿಸಿದ್ದಕ್ಕಾಗಿ ಆತ ದೇವರಿಗೆ ಸದಾ ಕೃತಜ್ಞನಾಗಿರುತ್ತಾನೆ. ಅಂತಹ ಒಂದು ಶಾಂತವಾದ, ಸಂತೃಪ್ತವಾದ, ಕೃತಜ್ಞತಾ ಭಾವದ ಮನಸ್ಥಿತಿಯಲ್ಲಿ ಆತ ತನ್ನ ಬದುಕಿನಲ್ಲಿ ಅದೆಷ್ಟೇ ದೊಡ್ಡ ಪ್ರಮಾಣದ ಬಿರುಗಾಳಿ ಬೀಸಿದರೂ ಅಚಲವಾಗಿ ನಿಲ್ಲುವ ಸಾಮರ್ಥ್ಯವನ್ನು ಹೊಂದುತ್ತಾನೆ. ಸ್ನೇಹಿತರೆ, ಕೃತಜ್ಞತೆ ಎನ್ನುವುದು ನಮಗೆ ಬಲಹೀನತೆಯಾಗಿ ತೋರಬೇಕಾಗಿಲ್ಲ ಕೃತಜ್ಞತೆಯನ್ನು ತೋರುವುದು ಅಂಧ ವಿಶ್ವಾಸವಂತೂ ಖಂಡಿತವಾಗಿ ಅಲ್ಲ. ಎಲ್ಲಾ ಆಶಾಶ್ವತತೆಗಳ ನಡುವೆ ಅತ್ಯಂತ ವಿನಮ್ರತೆಯಿಂದ ರೂಪುಗೊಂಡ ಶಕ್ತಿ ಹಾಗೂ ಸಾಮರ್ಥ್ಯವೇ ಕೃತಜ್ಞತೆಯಾಗಿರುತ್ತದೆ. ಬದುಕಿನ ಅನಿಶ್ಚಿತತೆಗಳ ನಡುವೆಯೂ ಕೂಡ ನಮಗೆ ಬದುಕು ಕೊಟ್ಟ ಎಲ್ಲ ಅವಕಾಶಗಳನ್ನು ಗೌರವ ಪೂರ್ವಕವಾಗಿ ನೆನೆಯಲು ನಾವು ಆಯ್ದುಕೊಳ್ಳುವ ಒಂದು ವಿಧಾನವಾಗಿರುತ್ತದೆ. ಏನಂತೀರಾ ಸ್ನೇಹಿತರೆ ? ವೀಣಾ ಹೇಮಂತ್ ಗೌಡ ಪಾಟೀಲ್

“ರೈತ ನೀಡಿದ ಕೃತಜ್ಞತೆಯ ಪಾಠ” ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ರಂಗಭೂಮಿ

“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ.ಗೊರೂರು ಅನಂತರಾಜು

ರಂಗ ಸಂಗಾತಿ ಗೊರೂರು ಅನಂತರಾಜು “ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ. “ಲೋಕಾಯುಕ್ತರು ಬರುತ್ತಾರೆ”ಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ರಂಗ ಪ್ರಯೋಗ ಹಾಸನದ ನಾಟ್ಯ ವೈಭವ, ರಂಗಸಿರಿ ಮತ್ತು ಜಿಲ್ಲಾ ಪತ್ರಕರ್ತರ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆದ 3 ದಿನಗಳ ಕಾಲೇಜು ರಂಗೋತ್ಸವದಲ್ಲಿ 2ನೇ ದಿನ ಬುಧವಾರಸ್ತುತಿ : ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿಯರು, ಗಂಧದಕೋಠಿ. ಹಾಸನ.ಮೂಲ: ನಿಕೊಲಾಯ್ ಗೊಗೊಲ್.ಕನ್ನಡ ರೂಪ, ಸಂಗೀತ ನಿರ್ದೇಶನ ಧನಂಜಯ ದಿಯಾನ್ ಅವರದು. ಬೆಳಿಗ್ಗೆ ಪ್ರದರ್ಶಿಸಿದ ನಾಟಕ ಲೋಕಾಯುಕ್ತರು ಬರುತ್ತಾರೆ. ಪ್ರಲೋಕಾಯುಕ್ತರು ಬರುತ್ತಾರೆ ನಾಟಕವು ವ್ಯಂಗ್ಯ, ಹಾಸ್ಯ ಮತ್ತು ಸಾಮಾಜಿಕ ಸತ್ಯಗಳ ಸಮನ್ವಯದಲ್ಲಿ ಮೂಡಿ ಬಂದ ಒಂದು ಶಕ್ತಿಯುತ ರಂಗಕೃತಿ. ಇದು ಮೂಲತಃ The Government Inspector ಎಂಬ ಪ್ರಸಿದ್ಧ ನಾಟಕದಿಂದ ಪ್ರೇರಿತವಾಗಿದ್ದು, Nikolai Gogol ಅವರ ಕೃತಿಯ ಆತ್ಮವನ್ನು ಕನ್ನಡದ ನೆಲದ ಸನ್ನಿವೇಶಕ್ಕೆ ತಂದು, ಧನಂಜಯ ದಿಯಾನ್ ಅವರು ಹೊಸ ಅರ್ಥಭರಿತ ರೂಪದಲ್ಲಿ ಮರು ಸೃಷ್ಟಿಸಿದ್ದಾರೆ. ಈ ನಾಟಕದ ಕೇಂದ್ರದಲ್ಲಿ ಇರುವ ವಿಷಯ ಭಯ!ಆದರೆ ಅದು ಸಾಮಾನ್ಯ ಭಯವಲ್ಲ. ಅದು ಅಧಿಕಾರಿಗಳ ಅಂತರಂಗದಲ್ಲಿರುವ ಅಪರಾಧ ಭಾವನೆಯ ಭಯ. ಲೋಕಾಯುಕ್ತರು ಬರುತ್ತಾರೆ ಎಂಬ ಒಂದು ವದಂತಿ ಮಾತ್ರವೇ ಸಂಪೂರ್ಣ ವ್ಯವಸ್ಥೆಯನ್ನು ನಡುಗಿಸುತ್ತದೆ. ಈ ಕಲ್ಪನೆ ನಾಟಕದ ಹೃದಯವಾಗಿದ್ದು, ಅಧಿಕಾರದ ಅಹಂಕಾರ, ಭ್ರಷ್ಟಾಚಾರ ಮತ್ತು ಸುಳ್ಳಿನ ಮೇಲೆ ಕಟ್ಟಿದ ವ್ಯವಸ್ಥೆಯ ದುರ್ಬಲತೆಯನ್ನು ಬಯಲಿಗೆಳೆಯುತ್ತದೆ.ನಾಟಕದಲ್ಲಿ ಪಟ್ಟಣದ ಮೇಯರ್ ಹಾಗೂ ಇತರೆ ಅಧಿಕಾರಿಗಳು ತಮ್ಮ ತಮ್ಮ ತಪ್ಪುಗಳನ್ನು ಮುಚ್ಚಿಹಾಕಲು ತೊಡಗುತ್ತಾರೆ. ಯಾರೂ ನೇರವಾಗಿ ಸತ್ಯವನ್ನು ಎದುರಿಸಲು ಸಿದ್ಧರಿರುವುದಿಲ್ಲ. ಆದರೆ ನಿಜವಾದ ಲೋಕಾಯುಕ್ತರು ಬಂದಿರಲಿ ಇಲ್ಲದಿರಲಿ ಅವರ ಭಯವೇ ಅವರನ್ನು ಒಳಗಿನಿಂದ ಒಡೆದುಹಾಕುತ್ತದೆ. ಇದು ಈ ನಾಟಕದ ಅತ್ಯಂತ ಪರಿಣಾಮಕಾರಿ ವ್ಯಂಗ್ಯ ವಿಡಂಬನೆ. ಧನಂಜಯ ದಿಯಾನ್ ಅವರ ರೂಪಾಂತರದಲ್ಲಿ ಈ ಕಥೆ ಕೇವಲ ಒಂದು ಆಡಳಿತ ವ್ಯವಸ್ಥೆಯ ವಿಮರ್ಶೆಯಾಗಿ ಉಳಿಯುವುದಿಲ್ಲ. ಅದು ಸಮಗ್ರ ಸಮಾಜದ ಪ್ರತಿಬಿಂಬವಾಗುತ್ತದೆ. ಲೋಕಾಯುಕ್ತರು ಇಲ್ಲಿ ಕೇವಲ ಒಂದು ಸಂಸ್ಥೆಯ ಹೆಸರು ಅಲ್ಲ.ಅದು ನಮ್ಮೊಳಗಿನ ಅಂತಃಕರಣ,ನಮ್ಮ ಪ್ರಜ್ಞೆ,ನಮ್ಮ ಸತ್ಯದ ಕಣ್ಣು.ಈ ನಾಟಕದ ಇನ್ನೊಂದು ವಿಶಿಷ್ಟತೆ ಎಂದರೆ ಇದನ್ನು ಮಹಿಳಾ ಕಾಲೇಜು ವಿದ್ಯಾರ್ಥಿಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದಾರೆ ನಿರ್ದೇಶಕರು. ಸಾಮಾನ್ಯವಾಗಿ ಪುರುಷ ಪ್ರಧಾನವಾಗಿರುವ ಪಾತ್ರಗಳನ್ನು ಇಲ್ಲಿ ಮಹಿಳಾ ಧ್ವನಿಗಳ ಮೂಲಕ ಹೊಸ ರೀತಿಯಲ್ಲಿ ಅಭಿವ್ಯಕ್ತಿಸಲಾಗಿದೆ. ಇದರಿಂದ ನಾಟಕವು ಹೊಸ ಸಂವೇದನೆ,  ಹೊಸ ದೃಷ್ಟಿಕೋನವನ್ನು ಪಡೆಯುತ್ತದೆ. ಮಹಿಳೆಯರ ಅನುಭವ ಅವರ ಒಳ ಜಗತ್ತು  ಅವರ ಪ್ರಶ್ನೆಗಳು ಈ ನಾಟಕದ ಮೂಲಕ ಹೆಚ್ಚು ತೀವ್ರವಾಗಿ ಹೊರಹೊಮ್ಮುತ್ತವೆ.ಶೈಲಿಯಲ್ಲಿ, ನಾಟಕವು ಹಾಸ್ಯ ಮತ್ತು ವ್ಯಂಗ್ಯವನ್ನು ಬಳಸಿಕೊಂಡು ಗಂಭೀರ ವಿಷಯಗಳನ್ನು ಹೇಳುತ್ತದೆ. ಸಂಭಾಷಣೆಗಳಲ್ಲಿ ಲಯ, ಪ್ರಾಸ, ನಾಟಕೀಯ ತೀವ್ರತೆ ಕಂಡುಬರುತ್ತದೆ. ಕೆಲವೆಡೆ ಕಾಮಿಡಿ ದೃಶ್ಯಗಳು ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸುತ್ತವೆ. ಅಂತೆಯೇ ಆ ನಗುವಿನ ಹಿಂದಿನ ಕಠಿಣ ಸತ್ಯವೂ ಗೋಚರಿಸುತ್ತದೆ. ಇದು  ನಾಟಕದ ಒಂದು ಶಕ್ತಿ.ಸಂಗೀತ, ಲಯಬದ್ಧ ಹಾಡುಗಳು ಮತ್ತು ರಂಗರೂಪಗಳು ನಾಟಕಕ್ಕೆ ಮತ್ತಷ್ಟು ಜೀವ ತುಂಬುತ್ತವೆ. ವಿಶೇಷವಾಗಿ ಲಂಚಾವತಾರ ನಿಲ್ಲಬೇಕು ಎಂಬ ಸಂದೇಶದ ಹಾಡುಗಳು ಕೇವಲ ಹಾಡುಗಳಲ್ಲಅವು ಒಂದು ಸಾಮಾಜಿಕ ಘೋಷಣೆ, ಒಂದು ಹೋರಾಟದ ನಾದವಾಗಿ ಹೊರಹೊಮ್ಮಿದೆ.ಕ್ಲೈಮಾಕ್ಸ್‌ನಲ್ಲಿ ನಾಟಕ ತನ್ನ ಶಿಖರವನ್ನು ತಲುಪುತ್ತದೆ. ಎಲ್ಲಾ ಭ್ರಮೆಗಳು ಒಡೆದುಹೋಗುತ್ತವೆ. ಸುಳ್ಳಿನ ಮೇಲಿರುವ ಕಟ್ಟಡ ಕುಸಿಯುತ್ತದೆ. ಪ್ರೇಕ್ಷಕರ ಮುಂದೆ ಉಳಿಯುವುದು ಒಂದೇ ಪ್ರಶ್ನೆನಿಜವಾದ ಲೋಕಾಯುಕ್ತರು ಯಾರು?ಹೊರಗಿನಿಂದ ಬರುವವನಾ?ಅಥವಾ ನಮ್ಮೊಳಗೇ ಇರುವ ನ್ಯಾಯ ಬುದ್ಧಿಯೇನಾ?ಒಟ್ಟಾರೆ ಲೋಕಾಯುಕ್ತರು ಬರುತ್ತಾರೆ ನಾಟಕವು ಕೇವಲ ಮನರಂಜನೆ ನೀಡುವ ಕೃತಿ ಅಲ್ಲ. ಅದು ಒಂದು ಜಾಗೃತಿ. ಒಂದು ಪ್ರತಿಬಿಂಬ. ಒಂದು ಎಚ್ಚರಿಕೆ.ಇದು ಪ್ರೇಕ್ಷಕರನ್ನು ನಗಿಸುತ್ತದೆ, ಯೋಚಿಸಲು ಪ್ರೇರೇಪಿಸುತ್ತದೆ, ಮತ್ತು ಕೊನೆಗೆಸತ್ಯದ ಎದುರು ನಿಲ್ಲುವ ಧೈರ್ಯವನ್ನು ನೀಡುತ್ತದೆ.ಇಲ್ಲಿ ನನ್ನ (ಗೊರೂರು ಅನಂತರಾಜು) ಒಂದೆರಡು ಅನುಭವಗಳು ನೆನಪಾದವು. ಹಿಂದೊಮ್ಮೆ  ಲೋಕಾಯುಕ್ತ ಡಿ.ವೈ.ಎಸ್.ಪಿ. ಯಾಗಿದ್ದವರು ನನ್ನ  ಕವಿ ಮಿತ್ರರು.  ಇವರ ಒಂದು ಹನಿಗವನ ಸಂಕಲನದ ವಿಮರ್ಶೆ  ಬರೆದಿದ್ದನು. ಹಿಂದೊಮ್ಮೆ ಇವರು ನಡೆಸಿದ  ರೈಡ್ ಗೆ ನಾನೇ  ಸಾಕ್ಷಿಯಾಗಿ ಹೋಗಿ ಬಾಲ್ಯದಲ್ಲಿ ನಾನು ಓದುತ್ತಿದ್ದ . ಎನ್.ನರಸಿಂಹಯ್ಯನವರ  ಪತ್ತೇದಾರಿ ಕಾದಂಬರಿ ಡಿಡೆಕ್ಟಿವ್ ಪತ್ತೇದಾರಿ ಪುರುಷೋತ್ತಮನ ಸಹಾಯಕ ಮೃತ್ಯುಂಜಯನ ಪಾತ್ರ ಮತ್ತು ಚಲನಚಿತ್ರನಟ ಬಾಲಕೃಷ್ಣ ಒಂದು ಸಿನಿಮಾದಲ್ಲಿ  ಹೇಳುತ್ತಿದ್ದ ಥ್ರಿಲ್ ರೋಮಾಂಚನ! ಸಂಭಾಷಣೆ ದೃಶ್ಯ ಎಲ್ಲಾ ಒಟ್ಟೊಟ್ಟಿಗೆ ನೆನಪಾದವು.. ನನ್ನ ಹಾಸ್ಯ ಸವಿ ಹನಿಗವನ ಸಂಕಲನದಕವಿಗವನಗಳು ಹೀಗಿದೆ.ಕವಿಗಳು ಶ್ರೀಮಂತರುಹಾಗೆಂದು ಲೋಕಾಯುಕ್ತರುದಾಳಿ ಮಾಡಿದರೆ ಸಿಗಬಹುದುಶಾಲು ಕೃತಿಗಳು ನಿಘಂಟುಸಿಗಲಾರದು ಗಂಟುಏಕೆಂದರೆ ಇವರು ಬರೇಭಾವನೆಗಳ ಹೃದಯ ಶ್ರೀಮಂತರು ಇನ್ನೂ   ನಿರ್ದೇಶಕರು Dhananjaya Diyan ಅವರು ಕನ್ನಡ ರಂಗಭೂಮಿಯಲ್ಲಿ ವೈಶಿಷ್ಟ್ಯಮಯ ಚಿಂತನೆ, ಸಂವೇದನಾಶೀಲ ಅಭಿವ್ಯಕ್ತಿ ಮತ್ತು ಆಳವಾದ ಕಲಾತ್ಮಕ ದೃಷ್ಟಿಯಿಂದ ಗುರುತಿಸಿಕೊಂಡಿರುವ ನಿರ್ದೇಶಕ, ನಟನಾ ತರಬೇತುದಾರ ಹಾಗೂ ಸಾಹಿತ್ಯಕರ್ತ. ನಿನಾಸಂನಲ್ಲಿ ಪಡೆದ ರಂಗಶಿಕ್ಷಣದ ಆಧಾರದ ಮೇಲೆ, ಅವರು ರಂಗಭೂಮಿಯನ್ನು ಕೇವಲ ಮನರಂಜನೆಗೆ ಸೀಮಿತಗೊಳಿಸದೆ, ಸಮಾಜದ ಒಳನೋಟಗಳನ್ನು ಅನಾವರಣಗೊಳಿಸುವ ಶಕ್ತಿಯಾಗಿ ಬಳಸುತ್ತಾರೆ.40ಕ್ಕೂ ಹೆಚ್ಚು ರಂಗತರಬೇತಿ ಶಿಬಿರಗಳನ್ನು ನಡೆಸಿ, ಅನೇಕ ಯುವ ಪ್ರತಿಭೆಗಳನ್ನು ರೂಪಿಸಿರುವ ಇವರು, ಕಲಿಕೆಯನ್ನು ಅನುಭವಾತ್ಮಕ ಪ್ರಕ್ರಿಯೆಯಾಗಿ ರೂಪಿಸುವಲ್ಲಿ ವಿಶೇಷತೆ ಹೊಂದಿದ್ದಾರೆ. Andhayuga, Tughlaq, Kusumabaale ಸೇರಿದಂತೆ ಹಲವು ಪ್ರಮುಖ ನಾಟಕಗಳನ್ನು ನಿರ್ದೇಶಿಸಿರುವ ಇವರ ಪ್ರತಿಯೊಂದು ಕೃತಿಯಲ್ಲೂ ಭಾವನೆ, ದಾರ್ಶನಿಕತೆ ಮತ್ತು ಜೀವನದ ಸೂಕ್ಷ್ಮತೆಗಳನ್ನು ಒಳಗೊಂಡಿರುತ್ತವೆ.‘Innu Saku Badukiddu ಎಂಬ ಕವನ ಸಂಕಲನದ ಮೂಲಕ ಸಾಹಿತ್ಯ ಕ್ಷೇತ್ರದಲ್ಲಿಯೂ ತಮ್ಮ ಸ್ಪರ್ಶ ಮೂಡಿಸಿರುವ ಇವರು ಬರವಣಿಗೆ, ನಿರ್ದೇಶನ ಮತ್ತು ತರಬೇತಿಯ ಮೂಲಕ ಸಮಗ್ರ ಕಲಾ ವ್ಯಕ್ತಿತ್ವವಾಗಿ ಬೆಳೆದಿದ್ದಾರೆ. ಇವರ ದೃಷ್ಟಿಯಲ್ಲಿ ರಂಗಭೂಮಿ ಒಂದು ಸಾಧನೆ ಮನಸ್ಸುಗಳನ್ನು ಸ್ಪರ್ಶಿಸಿ, ಚಿಂತನೆಗೆ ಪ್ರೇರೇಪಿಸುವ ಶಕ್ತಿಯುತ ಸಾಧನ. ಇದಿಷ್ಟು ಮಾಹಿತಿಯನ್ನು ಹಂಚಿಕೊಂಡ  ಇದೇ ಧನಂಜಯ್ ಅವರು 15 ವರ್ಷಗಳ ಹಿಂದೆ ಇದೇ ರಂಗಸಿರಿ ಸಂಘಟನೆಯಲ್ಲಿ ಹಾಸನದಲ್ಲಿ ನಡೆದ ಕಾಲೇಜು ರಂಗೋತ್ಸವದಲ್ಲಿ ಹಾಸನ ಸರ್ಕಾರಿ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿಯರಿಗೆ ವಿಶ್ರಾಂತ ನಾಟಕ ನಿರ್ದೇಶಿಸಿದ್ದರು. ಇದರ ವಿಮರ್ಶಾ ಬರಹ 2011 ರಲ್ಲಿ ಪ್ರಕಟವಾಗಿರುವ ನನ್ನ ರಂಗಪ್ರಯೋಗ ಕೃತಿಯಲ್ಲಿಯೂ ದಾಖಲಾಗಿದೆ ಗೊರೂರು ಅನಂತರಾಜು, ಹಾಸನ9449462879ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 3ನೇ ಕ್ರಾಸ್,ಹಾಸನ- .573201

“ಲೋಕಾಯುಕ್ತರು ಬರುತ್ತಾರೆ” ವ್ಯಂಗ್ಯ, ಹಾಸ್ಯ, ಸಾಮಾಜಿಕ ಸತ್ಯ ಸಮನ್ವಯ  ನಾಟಕ.ಗೊರೂರು ಅನಂತರಾಜು Read Post »

ಇತರೆ

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ.

ಭಾಷಾ ಸಂಗಾತಿ ಜಯಲಕ್ಷ್ಮಿ ಮಡಿಕೇರಿ. ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು ಮನುಷ್ಯನ ಅತಿ ದೊಡ್ಡ ಸಂಶೋಧನೆಗಳಲ್ಲಿ ಭಾಷೆ ಕೂಡಾ ಒಂದು. ಹಾಗಾಗಿ ಭಾಷೆಯನ್ನು ಬೆಳಕಿಗೆ ಹೋಲಿಸಲಾಗಿದೆ, ಅದಕ್ಕೆ ಬೆಳಕಿನ ಪಟ್ಟವನ್ನು ನೀಡಲಾಗಿದೆ. ಜಗತ್ತಿನಲ್ಲಿ ಸಹಸ್ರಾರು ಭಾಷೆಗಳಿದ್ದರೂ ಕನ್ನಡಕ್ಕೆ ಒಂದು ವಿಶೇಷ ಸ್ಥಾನಮಾನವಿದೆ. ಕವಿರತ್ನತ್ರಯರಿಂದ ಬೆಳೆದು ಬಂದು ಅದ್ವಿತೀಯ ಸಾಹಿತ್ಯ ರಚನೆಗಳನ್ನು ಸಾರಸ್ಕೃತ ಲೋಕಕ್ಕೆ ನೀಡಿದ, ಎಂಟು ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹೆಗ್ಗಳಿಕೆ ನಮ್ಮ ಭಾಷೆಗಿದೆ.  ಇದು ಮಾಧ್ಯಮಗಳ ಯುಗ.  ಪುಲಿಗೆರೆಯ ಸೋಮನಾಥ ಹೇಳುವಂತೆ ” ಕೆಲವಂ ಬಲ್ಲವರಿಂದ ಕಲ್ತು, ಕೆಲವಂ ಶಾಸ್ತ್ರಂಗಳಂ ಕೇಳುತಂ  ಕೆಲವಂ ಮಾಳ್ಪವರಿಂದ ಕೆಲವಂ  ಸುಜ್ಞಾನದಿಂದ,   ಅರಿತುಕೊಂಡು ಬೆಳೆಯಲು  ಯಾರಿಗೂ ಸಮಯವಾಗಲಿ ವ್ಯವಧಾನವಾಗಲಿ ಇಲ್ಲ.  ಮುದ್ರಣ ಮಾಧ್ಯಮದಲ್ಲಿ ಪ್ರಧಾನ ಪಾತ್ರವಹಿಸಿರುವ ಪುಸ್ತಕಗಳ ಓದು ಬದಿಗೆ ಸರಿದ ಕಾಲವಿದು. ಸ್ವಚ್ಛ ಶುದ್ಧ ಭಾಷೆಯ ಬೆಳವಣಿಗೆಗೆ  ಪೂರಕವಾಗಿರುವ ರೇಡಿಯೋ, ಸೃಜನಶೀಲ ಬರಹಗಳು, ಪತ್ರಿಕೆಗಳು ನಿಯತಕಾಲಿಕೆಗಳು ಇವೆಲ್ಲವುಗಳನ್ನು ಮೀರಿ ಟಿವಿ ಸಿನಿಮಾ ಇಂಟರ್ನೆಟ್ ವಾಟ್ಸಪ್ ಫೇಸ್ಬುಕ್ ಇತ್ಯಾದಿಗಳಿಗೆ ಜನ ಮುಗಿ ಬೀಳುವ ಕಾಲಘಟ್ಟವಿದು.  ಒಂದೆಡೆ ಇಂಗ್ಲಿಷ್ ಭಾಷೆಯನ್ನು ಬಳಸಿ ಮಾತನಾಡುವುದೇ ಒಂದು ಹೆಗ್ಗಳಿಕೆ  ಎಂಬ ಭ್ರಮೆಯಲ್ಲಿರುವ ಕನ್ನಡಿಗರು, ಇನ್ನೊಂದೆಡೆ ತಾವು ಬಳಸಿದ್ದೇ ಭಾಷೆ ಎನ್ನುವಂತೆ ಕನ್ನಡ ಭಾಷೆ ಗೌರವಕ್ಕೆ ಚ್ಯುತಿ  ತರುವಂತೆ ಪ್ರತಿ ದಿನ  ತಪ್ಪುಗಳನ್ನೇ ತೋರುವ ಹೇಳುವ ಕೆಲ ದೃಶ್ಯ ಮಾಧ್ಯಮಗಳು. ಇವುಗಳಿಂದ ಕನ್ನಡ ಭಾಷೆ ತನ್ನ  ಅಂದ ಚಂದವನ್ನು, ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿದ್ದು  ನಮ್ಮ ಭಾಷಾ ಸಹಜತೆಯನ್ನು ಗುರುತರ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ದೃಶ್ಯ ಮಾಧ್ಯಮಗಳಲ್ಲಿ ಅತಿ ದೊಡ್ಡದಾಗಿ ಬಿತ್ತರ ವಾಗುವ ತಪ್ಪು ತಪ್ಪಾದ ಪದಗಳನ್ನು ಚಿತ್ತಬಿತ್ತಿಯಲ್ಲಿ ಮುದ್ರಿಸಿಕೊಳ್ಳುವ ಮಕ್ಕಳು ಅದುವೇ ಸರಿಯಾದ ಕನ್ನಡ ಎಂದು ತಿಳಿದು ಅದನ್ನೇ ಕಲಿಯುತ್ತಾರೆ. ಭಾಷಾ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸ ತಕ್ಕಂತಹ ಪಾ.ವೆಂ. ಆಚಾರ್ಯರ   ‘ಪದಾರ್ಥ ಚಿಂತಾಮಣಿ ‘ , ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ” ಇಗೋ ಕನ್ನಡ “, ಕೊಕ್ಕಡ ವೆಂಕಟರಮಣ ಭಟ್ಟರ ” ಸರಿಗನ್ನಡ ಸರಿಕನ್ನಡ ” ಶುದ್ಧ ಕನ್ನಡದ ಬಗ್ಗೆ ನಮಗೆ ಅರಿವಾಗುತ್ತದೆ ಮತ್ತು ಮುದ್ರಣ ಮಾಧ್ಯಮ ಭಾಷ ಕ್ಷೇತ್ರದಲ್ಲಿ ಮೂಡಿಸಿದ ಜಾಗೃತಿಯ ಬಗ್ಗೆ ಹೆಮ್ಮೆ ಎನಿಸುತ್ತದೆ. ಹಿರಿಯರು ಪುಸ್ತಕಗಳನ್ನು ಓದುವ ಸಂಸ್ಕೃತಿಯನ್ನು ರೂಢಿಸಿಕೊಳ್ಳುವ ಮೂಲಕ ಮಕ್ಕಳಲ್ಲಿ ಓದುವ ಹವ್ಯಾಸವನ್ನು ಬೆಳೆಸಬೇಕಿದೆ. ಅಧಿಕಾರ ಸ್ಥಾನದಲ್ಲಿ ಇರುವವರು, ಶಿಕ್ಷಕರು, ಪೋಷಕರು ಮಾಧ್ಯಮ ಬಂಧುಗಳು ಕನ್ನಡ ಭಾಷಾ ಶುದ್ಧಿಯನ್ನು ಕಾಪಾಡಿಕೊಂಡು ಬರಬೇಕಿದೆ ಹೊಂಬೆಳಕು ಮಾಸಿಕ ಕಾರ್ಯಕ್ರಮದ ಮೂಲಕ ಹಲವಾರು ತತ್ವ ಚಿಂತನೆಗಳು ಮಠದಲ್ಲಿ ನಡೆಯುತ್ತಿದ್ದು ಹಲವಾರು ಪುಸ್ತಕಗಳು ಕೂಡ ಈ ವೇದಿಕೆಯಲ್ಲಿ ಲೋಕಾರ್ಪಣೆಗೊಳ್ಳುತ್ತಿರುವ ಬಗ್ಗೆ ಶ್ರೀ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅವರು ಸಂತಸ ವ್ಯಕ್ತಪಡಿಸಿದರು. ತಮ್ಮ ಅಮೃತ ಹಸ್ತದಿಂದ  ಕೆ ಜಯಲಕ್ಷ್ಮಿ ಅವರ  ‘ ನಡೆದಷ್ಟೂ ದಾರಿ ‘ ಕೃತಿಯನ್ನು ಲೋಕಾರ್ಪಣೆಗೊಳಿಸಿ ಶುಭ ಕೋರಿದರಲ್ಲದೆ ಶರಣ ಶರಣೆಯರ ಜೀವನ ಆದರ್ಶಗಳ ಬಗ್ಗೆ ಹೇಳುತ್ತಾ  ವಚನಗಳ ಸಾರ್ವಕಾಲಿಕ ಮೌಲ್ಯಗಳ  ಬಗ್ಗೆ ವಿವರಿಸಿದರು. ನೆರೆದಿರುವ ಭಕ್ತ ವೃಂದಕ್ಕೆ ಆಶೀರ್ವಚನ ನೀಡಿದರು .  ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿದ ಕೊಡಗು ಜಾನಪದ ಪರಿಷತ್ತಿನ ಅಧ್ಯಕ್ಷರು ಹಾಗೂ ಶಕ್ತಿ ದಿನಪತ್ರಿಕೆಯ  ಸಲಹಾ ಸಂಪಾದಕರಾದ ಬಿಜಿ ಅನಂತಶಯನ ರವರು ಸಾಮಾಜಿಕ ಧಾರ್ಮಿಕ ಕ್ಷೇತ್ರಕ್ಕೆ ಅರಮೇರಿ ಮಠದ ಪರಮಪೂಜ್ಯ ಗುರುಗಳು ನೀಡುತ್ತಾ ಬರುತ್ತಿರುವ ಸಮಾಜಮುಖಿ ಕಾರ್ಯಕ್ರಮಗಳನ್ನು ಶ್ಲಾಘಿಸಿದರು. ಶಿಕ್ಷಕಿ ಸಾಹಿತಿ ಸುನಿತಾ ಕುಶಾಲನಗರ ಅವರು ಜಯಲಕ್ಷ್ಮಿ ಕೆ ಯವರ” ನಡೆದಷ್ಟೂ ದಾರಿ  ” ತೃತೀಯ ಬಗ್ಗೆ ಮಾತನಾಡುತ್ತಾ ಓದುವ ಕುತೂಹಲವನ್ನು ಕೆರಳಿಸುವ , ವಿಚಾರಧಾರೆಗಳ ಸ್ಪಷ್ಟ ನಿರೂಪಣೆಯ ಪುಸ್ತಕವಿದು. ಲೇಖಕಿ ಬಳಸಿದ ಭಾಷೆ ಸರಳ ಸ್ವಚ್ಛ ಸುಂದರ ಎಂದರು.ಉದಾತ್ತ  ವ್ಯಕ್ತಿಗಳ ಜೀವನ ಚರಿತ್ರೆಯನ್ನು ವಿವರಿಸಿತ್ತ  ವಾಸ್ತವದಲ್ಲಿ ಬದುಕುವ ಚಿಂತನೆ ಉತ್ತಮ ಎಂದರು. ಪೊನ್ನಂಪೇಟೆ ಸಿ ಐ ಟಿ ಕಾಲೇಜಿನ ಉಪನ್ಯಾಸಕಿ ಸುಶ್ಮಿತಾ ರವರು  ಜಯಲಕ್ಷ್ಮಿ ಅವರ ಕೆಲವು ಲೇಖನಗಳ ಬಗ್ಗೆ ಮಾತನಾಡಿದರು.ಕುಮಾರಿ ಮಿನುಗು  ಪ್ರಾರ್ಥಿಸಿದಳು. ಕಿಗ್ಗಾಲ್ ಹರೀಶ್  ನಿರೂಪಿಸಿದರು. ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಕೇಶವ ಕಾಮತ್, ಮಾಜಿ ಅಧ್ಯಕ್ಷರಾದ ಶ್ರೀ ಲೋಕೇಶ್ ಸಾಗರ್, ಸಾಹಿತಿ ಕಿಗ್ಗಾಲ್ ಗಿರೀಶ್, ಡಾಕ್ಟರ್ ಸತೀಶ್, ಸಮರ್ಥ ಕನ್ನಡಿಗರು ಸಂಸ್ಥೆಯ ಸಂಚಾಲಕಿಯರು, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

ಮಾಧ್ಯಮಗಳು ಭಾಷೆಯ ಆರೋಗ್ಯ ಕಾಪಾಡುವ ವೈದ್ಯರಾಗಬೇಕು -ಜಯಲಕ್ಷ್ಮಿ ಮಡಿಕೇರಿ. Read Post »

You cannot copy content of this page

Scroll to Top