ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-23 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ನನ್ನ ಆತ್ಮಬಂಧು ಕೃಷ್ಣ ಬಂದನಂದು ನಾನೀಗ ಸುಧನ್ವನ ಎದುರು ನಿಂತಿದ್ದೆ. ಅವನ ಹೋರಾಟದ ಪರಿಯನ್ನು ಇದುವರೆಗೂ ಕಂಡಿದ್ದ ನಾನು ಈಗ ಅವನನ್ನು ತೀರಾ ಸನಿಹದಿಂದ ಕಂಡೆ. ನನಗೆ ಎಷ್ಟರವನಿವನು ಎನಿಸಿತು. ನನ್ನ ಯುದ್ಧಾನುಭವವೇನು! ಇವನ ವಯಸ್ಸೇನು! ಹೋರಾಡಬೇಕೇ ನಾನಿವನಲ್ಲಿ! ನಾನು ಗೆಲುವನ್ನು ಪಡೆಯುವುದಂತೂ ದಿಟ. ಗೆದ್ದರೂ ಸಣ್ಣವನೆದುರು ಗೆದ್ದಂತಾಗುತ್ತದಷ್ಟೇ. ಒಂದು ವೇಳೆ ಅಪ್ಪಿತಪ್ಪಿ ಸೋತೆನೆಂದಾದರೆ ಯುದ್ಧಾನುಯುದ್ಧಗಳನ್ನು ಗೆದ್ದ ಆ ಕಲಿ ಪಾರ್ಥ ಕದನದಭನುವವೇ ಇಲ್ಲದವನ ಎದುರು ಸೋತನಂತೆ ಎಂಬ ಸುದ್ದಿ ಹಬ್ಬುತ್ತದೆ. ಈ ಯುದ್ಧ ನನ್ನ ಯೋಗ್ಯತೆಗೆ ಸಲ್ಲುವಂಥದ್ದಲ್ಲ. ಇವನನ್ನು ಬೆದರಿಸಿಯೇ ಇಲ್ಲಿಂದ ತೊಲಗಿಸುವುದೊಳಿತು ಎನಿಸಿತು. ಅದು ನನ್ನೊಳಗಿನ ಅಹಂಕಾರದಿಂದ ಉದ್ಭವಿಸಿದ ಯೋಚನೆಯೋ, ನನಗದರ ಅರಿವಿಲ್ಲ.ದೊಡ್ಡ ಧ್ವನಿಯಲ್ಲಿ ಆರ್ಭಟಿಸಿದೆ ಸುಧನ್ವನಲ್ಲಿ. “ನನ್ನೊಡನೆ ಯುದ್ಧವನ್ನೇಕೆ ಬಯಸಿರುವೆ! ನೀನು ನಿಜಕ್ಕೂ ಅಪ್ರಬುದ್ಧ. ನನ್ನಂಥ ಪ್ರಸಿದ್ಧನೆದುರು ನಿನ್ನ ಹೋರಾಟವೇತಕ್ಕೆ! ನಿಮ್ಮ ಪಾಳಯದಲ್ಲಿ ಯಾರಾದರೂ ರಣ ಪರಾಕ್ರಮಿಗಳಿದ್ದರೆ ಅವರನ್ನು ಕಳುಹಿಸು ನನ್ನೆದುರು. ದ್ರೋಣ, ಭೀಷ್ಮ, ಕರ್ಣ ಮೊದಲಾದ ಘಟಾನುಘಟಿಗಳೇ ನನ್ನೆದುರು ಸೋತುಹೋಗಿದ್ದಾರೆ. ಈಗಲಾದರೂ ಇಲ್ಲಿಂದ ಹೊರಟುಹೋಗು. ಪ್ರಾಣ ಉಳಿಸಿಕೋ” ಎಂದು ಹೀಯಾಳಿಸಿದೆ.ಅದು ಆ ಕ್ಷಣಕ್ಕೆ ನಾನು ಪ್ರಯೋಗಿಸಿದ ಯುದ್ಧತಂತ್ರವೂ ಹೌದು. ಹಿಂದಣ ಸಾಧನೆಯನ್ನು ಮುಂದಿಟ್ಟುಕೊAಡು ಶತ್ರು ಸುಧನ್ವನ ಎದೆಬಲವನ್ನು ಕುಂದಿಸುವ ಯತ್ನ ಮಾಡಿದೆ. ನನ್ನ ಮಾತುಗಳಷ್ಟೂ ನಿಷ್ಪçಯೋಜಕವೆನಿಸಿದವು ಅವನ ಎದುರಲ್ಲಿ. ಶೌರ್ಯವದು ಅವನದು ಕಿರಿದಾಗಲಿಲ್ಲ. ಇಮ್ಮಡಿಸಿತು.ಪ್ರತಿಮಾತಿನಿಂದ ನನ್ನನ್ನು ಚುಚ್ಚಿದ. “ಕೌರವ ಸೇನೆಯ ವೀರರನ್ನು ನೀನು ಗೆದ್ದದ್ದು ನಿನ್ನ ಶಕ್ತಿಯಿಂದಲ್ಲ; ನಿನ್ನ ಸಾರಥಿಯಾಗಿದ್ದ ಆ ಶ್ರೀಕೃಷ್ಣನ ಬಲದಿಂದ. ಅವನಿಲ್ಲದೆ ನಿನಗಾವ ಗೌರವವಿದೆ ಈ ಧರೆಯಲ್ಲಿ! ಮೊದಲು ಕೃಷ್ಣನನ್ನು ಕರೆಸಿಕೋ. ನನ್ನನ್ನು ಜಯಿಸುವುದು ನಿನ್ನಿಂದ ಆಗುವಂಥದ್ದಲ್ಲ. ಗೆಲ್ಲುವ ಆಸೆಯನ್ನು ತೊರೆದುಬಿಡು” ಎಂದ.ಅಬ್ಬಾ! ಎಂತಹ ದಿಟ್ಟತನವಿತ್ತು ಆ ಮಾತಿನಲ್ಲಿ. ನನ್ನ ಅಸ್ತಿತ್ವದ ಮೂಲಬೇರಿಗೇ ಕೈಹಾಕಿ ಕೆದಕಿದ್ದ ಆ ಸುಧನ್ವ ಆ ಕ್ಷಣದಲ್ಲಿ. ಹೌದು! ನಾನು ಕೃಷ್ಣಸಖ. ಅವನಿಂದಲೇ ಬೆಳೆದವನು ಈ ಬದುಕಿನಲ್ಲಿ. ಶತ್ರುಗಳಾಗಿ ಮುಂದೆ ನಿಂತ ಬಂಧುಗಳನ್ನೂ, ಗುರು ಹಿರಿಯರನ್ನೂ ಎದುರಿಸಲಾರೆ ಎಂಬ ಖಿನ್ನತೆ ನನ್ನನ್ನು ಆವರಿಸಿದ ಆ ಕುರುಕ್ಷೇತ್ರ ರಣಕಣದಲ್ಲಿ ಜೀವನತತ್ವವನ್ನು ಬೋಧಿಸಿದವನು ಶ್ರೀಕೃಷ್ಣ. ನನ್ನ ಸಾಹಸ ಪ್ರದರ್ಶನಕ್ಕೆ ಪ್ರೇರಣೆಯಾದವನು ಶ್ರೀಕೃಷ್ಣ. ಅವನಿಂದಲೇ ನನ್ನ ಅಸ್ತಿತ್ವ. ಅವನ ನೆರವಿಲ್ಲದೆ ನಾನಿಷ್ಟು ಸಾಧಿಸುತ್ತಿರಲಿಲ್ಲ. ಅದು ಸರ್ವವೇದ್ಯ.ಸಾಧನೆಯ ಏಣಿಯನ್ನು ಹತ್ತುತ್ತಾ ಹತ್ತುತ್ತಾ ಹತ್ತನೆಯ ಮೆಟ್ಟಿಲಲ್ಲಿ ನಿಂತವನು ನಾನು. ಹತ್ತನೆಯ ಸಂಖ್ಯೆಯೇ ಆದವನು ನಾನು. ಕೃಷ್ಣನೆಂಬ ಒಂದು ಜೊತೆಗಿರಲು ನಾನು ಸಿಂಧು. ಇಲ್ಲವಾದರೆ ನಾನು ಬರಿಯ ಶೂನ್ಯ, ಬಿಂದು. ಸುಧನ್ವ ಕೋಪದಲ್ಲಾಡಿದ ಮಾತಿನಲ್ಲಿ ನನ್ನ ಬದುಕಿನ ನಿಜಸತ್ವವಿದೆ ಎನಿಸಿತು.ಅವನ ಮಾತನ್ನು ನಾನು ಈ ಬಗೆಯಲ್ಲಿ ಅರಗಿಸಿಕೊಳ್ಳುತ್ತಿದ್ದಾಗಲೇ ಅವನು ಪ್ರಯೋಗಿಸಿದ ಬಾಣವೊಂದು ಬಂದಪ್ಪಳಿಸಿತು ನನ್ನ ರಥಕ್ಕೆ. ತರ‍್ರನೆ ತಿರುಗಿತು ರಥ, ಬುಗುರಿಯನ್ನೂ ನಾಚಿಸುವಂತೆ. ನಿಜಕ್ಕೂ ಅವನ ಆ ಕೌಶಲ್ಯ ವಿಶಿಷ್ಟವಾದದ್ದೆನಿಸಿತು. ಎದುರಾಳಿಗಳ ರಥವನ್ನು ತಿರುಗುವಂತೆ ಮಾಡುವ ಸಾಮರ್ಥ್ಯ ಇದ್ದವರನ್ನು ನಾನು ಮೂರು ಲೋಕಗಳಲ್ಲಿಯೂ ಕಂಡಿರಲಿಲ್ಲ. ಅದ್ಭುತ ಭಾವ ನನ್ನೊಳಗೆ ಮೂಡಿತು. ಆದರೂ ಅದನ್ನು ತೋರಗೊಡದೆ “ನೀನಿನ್ನೂ ಹುಡುಗ. ಏಕೆ ಅಳಿವೆ ನನ್ನಿಂದ. ನಿನ್ನ ತಂದೆಯನ್ನು ಬರಹೇಳು. ಕುದುರೆಯನ್ನು ಬಿಟ್ಟುಬಿಡು” ಎಂದೆ.ಅವನು ಒಪ್ಪಿಕೊಳ್ಳಲಿಲ್ಲ. ಅದೆಷ್ಟೋ ಸಮಯ ನಮ್ಮ ನಡುವೆ ಕದನ ನಡೆಯಿತು. ನನ್ನ ಸಾರಥಿಯನ್ನೇ ಕೊಂದುಹಾಕಿದ ಸುಧನ್ವ. ಆ ಕ್ಷಣದಲ್ಲಿ ರಥವನ್ನೂ ನಾನೇ ನಡೆಸಬೇಕಾಯಿತು. ‘ಇವನನ್ನು ಎದುರಿಸಲಾರದ ತನ್ನದೂ ಒಂದು ಜನ್ಮವೇ!’ ಎಂಬ ವೈರಾಗ್ಯ ಭಾವ ನನ್ನನ್ನು ಆವರಿಸಿತು. ಅಶ್ವಮೇಧ ಯಾಗಕ್ಕೆ ಬಂದ ಬಹುದೊಡ್ಡ ತೊಡಕಿದು ಎನಿಸಿತು. ಆಪದ್ಬಾಂಧವ ಕೃಷ್ಣನನ್ನು ಕರೆಯದೆ ಬೇರೇನೂ ದಾರಿಯಿಲ್ಲ ಎನ್ನುವುದು ಖಚಿತವಾಯಿತು.ನೆನೆದೆ ಕೃಷ್ಣನನ್ನು. ಸ್ಮರಿಸಿದೆ ಹರಿಯನ್ನು. ಕಡುಗಾಲದಲ್ಲಿ ಬಿಡದೆ ಕಾಪಾಡುವ ಪೊಡವಿಗೊಡೆಯ ನಾನಿದ್ದೆಡೆಯಲ್ಲಿ ತಕ್ಷಣವೇ ಪ್ರತ್ಯಕ್ಷನಾದ. ಅದೇನೋ ನೂತನ ಶಕ್ತಿ ನನ್ನೊಳಗೆ ಪಸರಿಸಿದಂತಾಯಿತು. ಕೃಷ್ಣನ ದಿವ್ಯ ಚರಣಗಳಿಗೆ ಮಣಿದೆ. ಆಶೀರ್ವದಿಸಿದ. ಬಿಗಿದಪ್ಪಿಕೊಂಡ.ಕೃಷ್ಣನನ್ನು ದರ್ಶಿಸುತ್ತಿದ್ದ ಸುಧನ್ವನೊಳಗೂ ಭಕ್ತಿಭಾವ ಮೂಡಿತು. ಅವನು ಪುಳಕಿತನಾಗಿದ್ದ. ಅವನಿದ್ದ ಸ್ಥಳದಿಂದಲೇ ಸಾಷ್ಟಾಂಗ ಪ್ರಣಾಮ ಮಾಡಿದ. ತನ್ನ ಶೌರ್ಯಕ್ಕೆ ಸಾಕಿದು ಕೃಷ್ಣದರ್ಶನ! ಏನು ನೆನೆಸಿದ್ದೆನೋ ಅದು ಕೈಗೂಡಿದೆ ಎಂದು ಹಿರಿಹಿರಿ ಹಿಗ್ಗಿದ ಹಂಸಧ್ವಜಸುತ.ಕೃಷ್ಣನೀಗ ನನ್ನ ಜೊತೆಗಿದ್ದಾನೆ ಎಂಬ ಅಸೀಮ ಧೈರ್ಯ ಮೂಡಿತು ನನ್ನಲ್ಲಿ. ಅದೇ ಹುಮ್ಮಸ್ಸಿನಿಂದ ಸುಧನ್ವನ ಶಿರವನ್ನು ಇನ್ನು ಮೂರು ಬಾಣಗಳನ್ನಷ್ಟೇ ಪ್ರಯೋಗಿಸಿ ಕತ್ತರಿಸಿಹಾಕುವ ಪ್ರತಿಜ್ಞೆ ಮಾಡಿದೆ. ನನ್ನನ್ನೂ ಮೀರುವ ಹುಮ್ಮಸ್ಸಿನಲ್ಲಿ ಸುಧನ್ವ “ನೀನು ಬಿಡುವ ಸರ್ವಶಕ್ತ ಮೂರು ಬಾಣಗಳನ್ನು ನಡುವೆಯೇ ಕತ್ತರಿಸಿಹಾಕದಿದ್ದರೆ ಕಡುಪಾತಕಿಗೊದುವ ಗತಿ ನನಗೆ ಒದಗಲಿ” ಎಂದು ಪ್ರತಿಜ್ಞೆ ಮಾಡಿದ.ಹೀಗೆ ಮಾತನ್ನು ಮುಗಿಸಿದ ಅವನು ಬಿಟ್ಟ ಬಾಣದಿಂದ ಕೃಷ್ಣನಿದ್ದ ನನ್ನ ರಥ ನಾಲ್ಕುನೂರು ಮೊಳಗಳಷ್ಟು ದೂರ ಹಾರಿಹೋಯಿತು. ತಕ್ಷಣವೇ ಕೃಷ್ಣನಿಗೆ ಸುಧನ್ವನ ಅಂತಃಶ್ಶಕ್ತಿಯ ಅರಿವಾಯಿತು ಎನಿಸುತ್ತದೆ. ನನ್ನಲ್ಲಿ “ಯಾರೆದುರೂ ಸೋಲುವವನಲ್ಲ ಈತ. ಇವನೊಡನೆ ಯುದ್ಧ ಮಾಡುವವರಿಲ್ಲ. ನೀನು ನನ್ನಲ್ಲಿ ಸಮಾಲೋಚಿಸದೆ ಪ್ರತಿಜ್ಞೆ ಮಾಡಬಾರದಿತ್ತು” ಎಂದ. ಕೃಷ್ಣನೇ ಈ ಮಾತನ್ನು ಆಡಿದ ಮೇಲೆ!… ನನ್ನಲ್ಲೀಗ ಅಳುಕು ಮೂಡತೊಡಗಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-22 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಸುಧನ್ವನ ಸಾಹಸವದು ಸೂರೆಗೊಂಡಿತು ನಮ್ಮ ಸೇನೆಯನು                 ಈಗ ಪಶ್ಚಾತ್ತಾಪ ಭಾವ ಮೂಡಿತು ಪುರೋಹಿತ ಲಿಖಿತನಲ್ಲಿ. ಕೃಷ್ಣಭಕ್ತನಾದ ಸುಧನ್ವನಿಗೆ ತೊಂದರೆ ಆಗಲೆಂದು ಬಯಸಿದ ತನಗೆ ಮರಣವೇ ಸರಿಯಾದ ಶಿಕ್ಷೆ ಎಂಬ ಭಾವನೆ ಮೂಡಿತ್ತು ಅವನಲ್ಲಿ. ಸುಧನ್ವನಿದ್ದ ಆ ಎಣ್ಣೆ ಕೊಪ್ಪರಿಗೆಗೆ ಜಿಗಿದ. ಕೃಷ್ಣಭಕ್ತನ ಸಂಗದ ಘನಪರಿಣಾಮದಲಿ ಉಷ್ಣಾತಿಉಷ್ಣ ತೈಲದಲಿ ಬಿದ್ದರೂ ಸಹ ಲಿಖಿತ ಉಷ್ಣರಹಿತ ಸ್ಥಿತಿಯನ್ನು ಅನುಭವಿಸಿದ. ತಂಪುತಂಪಾದ ಕೊಳದಂತೆ ಭಾಸವಾಯಿತು ಆ ಕೊಪ್ಪರಿಗೆಯ ಒಳಗು ಅವನಿಗೆ.      ಅರಸ ಹಂಸಧ್ವಜನಿಗೆ ನಂಬಲಸಾಧ್ಯವಾದ ವಿಸ್ಮಯವಾಯಿತು. ಒಡನೆ ಬಂದವನು ಸುಧನ್ವ ಲಿಖಿತ ಇಬ್ಬರನ್ನೂ ಪ್ರೀತಿಯಿಂದ ಆಲಂಗಿಸಿಕೊAಡ. “ನಿನ್ನ ಮಗನ ದೆಸೆಯಿಂದ ನಮ್ಮ ಈ ನಗರ ಧನ್ಯವಾಯಿತಿಂದು” ಎಂದು ಹಂಸಧ್ವಜನಲ್ಲಿ ಸುಧನ್ವನನ್ನು ಮನಸಾರೆ ಹೊಗಳಿದ ಲಿಖಿತ.     ಕೃಷ್ಣಲೀಲೆಗೆ ಪಾತ್ರನಾದ ಸುಧನ್ವ ಈಗ ವೀರಾಗ್ರಣಿಯ ಪಾತ್ರ ಧರಿಸಿ ರಣರಂಗಪ್ರವೇಶ ಮಾಡಿದ. ಈ ಮೊದಲು ಮಗನನ್ನು ತೆಗಳಿದ್ದ ಹಂಸಧ್ವಜನಲ್ಲಿ ಈಗ ಅದೇ ಮಗನ ಬಗೆಗೆ ಹೆಮ್ಮೆಯ ಭಾವನೆಯಿತ್ತು. ಮಕ್ಕಳಾದವರ ಬದುಕಿನ ನಿಜ ಸಾರ್ಥಕತೆಯಿದು ಎನಿಸಿತು ನನಗೆ ಆ ಕ್ಷಣದಲ್ಲಿ. ತಂದೆ ತಾಯಿ ಅವರಿವರಲ್ಲಿ ಹೇಳಿಕೊಂಡು ಹೆಮ್ಮೆಪಡುವಂತಹ ರೀತಿಯಲ್ಲಿ ಬದುಕುವುದಕ್ಕಿಂತ ಮಿಗಿಲಾದದ್ದು ಏನಿದೆ ಮಕ್ಕಳ ಪಾಲಿಗೆ! ಹಂಸಧ್ವಜನ ಆ ಪ್ರೌಢ ಮೊಗದಲ್ಲಿ ಸಂತಸದ ಭಾವ ತಾಂಡವವಾಡುತ್ತಿತ್ತು.     ತಂದೆಯ ಚರಣಕ್ಕೆ ನಮಿಸಿದ ಸುಧನ್ವ ಯುದ್ಧಕ್ಕೆ ಸಿದ್ಧನಾಗಿ ಚತುರಂಗ ಬಲವನ್ನು ನಮ್ಮೆಡೆಗೆ ಮುನ್ನಡೆಸಿದ. ಮುಂದೆ ಮುಂದೆ ಬಂದ ಸೇನೆ ನಮ್ಮ ಕುದುರೆಯನ್ನು ಹಿಡಿಯಿತು. ತಕ್ಷಣವೇ ಪದ್ಮವ್ಯೂಹವನ್ನು ರಚಿಸಿದರು ಚಂಪಕಾಪುರಿಯ ಸೈನಿಕರು. ಆ ವ್ಯೂಹದೊಳಗೆ ಬಂಧಿಯಾಯಿತು ನಮ್ಮ ಕುದುರೆ.     ಈ ವಿಚಾರ ತಿಳಿದ ತಕ್ಷಣವೇ ನಾನು ಹೊರಳಿದ್ದು ಶ್ರೀಕೃಷ್ಣ ಸುತನೆಡೆಗೆ. ವಿಷಯ ತಿಳಿಸಿದೆ. ಮಾಡಬಹುದೇನೀಗ ಎಂದು ಕೇಳಿದೆ. ಕೆಲವೊಮ್ಮೆ ಹಾಗೆಯೇ, ಬದುಕೆಂಬ ಯುದ್ಧರಂಗದಲ್ಲಿ ಅನುಭವಕ್ಕಿಂತಲೂ ಕಿರಿಯರ ತಕ್ಷಣದ ಸಲಹೆಯೇ ಮುಖ್ಯ ಎನಿಸಿಬಿಡುತ್ತದೆ. ತಾನೊಬ್ಬನೇ ಪದ್ಮವ್ಯೂಹವನ್ನು ಹೊಕ್ಕು ಕುದುರೆಯನ್ನು ಬಿಡಿಸಿ ತರುತ್ತೇನೆ ಎಂಬ ಧೀರನುಡಿಯನ್ನಾಡಿದ ಪ್ರದ್ಯುಮ್ನ. ಅವನಿಗೊಂದು ಅವಕಾಶ ಕೊಟ್ಟುನೋಡುವುದು ಒಳ್ಳೆಯದು ಎನಿಸಿತು.     ಅಷ್ಟರಲ್ಲಿ ಬಳಿಬಂದ ಕರ್ಣಸುತ ವೃಷಕೇತು “ಇಂದಿನ ಯುದ್ಧವಿದು ನನ್ನನ್ನು ಸೆಳೆಯುತ್ತಿದೆ. ಶತ್ರುಸೇನೆಯನ್ನು ಪುಡಿಗಟ್ಟಿ ಕುದುರೆಯನ್ನು ತಾರದೇ ಹೋದರೆ ನಾನು ಕರ್ಣನಿಗೆ ಜನಿಸಿದವನೇ ಅಲ್ಲ” ಎಂದ. ಪ್ರದ್ಯುಮ್ನನ ಮಾತಿಗಿಂತಲೂ ಇವನ ಮಾತಿನಲ್ಲಿ ಬಿರುಸು ಅಧಿಕವಿದೆ ಎನಿಸಿತು. ಅವನನ್ನೇ ಕಳುಹಿಸಿಕೊಟ್ಟೆ ಸುಧನ್ವನಿಗೆ ಎದುರಾಗಿ.     ಯುದ್ಧಕ್ಕೆ ಹೋದ ವೃಷಕೇತುವಿನ ಗುರುತು ಮೊದಲಿಗೆ ಸಿಗಲಿಲ್ಲ ಸುಧನ್ವನಿಗೆ. ಕೇಳಿದ. “ನೀನಾರು? ಯಾರ ಮಗ? ಯಾವ ಕುಲ ನಿನ್ನದು?”     ಕುಲದ ಪ್ರಶ್ನೆಯೆತ್ತಿದ್ದಕ್ಕೆ ಘಟಾನುಘಟಿಗಳ ಎದುರೇ ಸಿಡಿದುನಿಂತವನು ಕರ್ಣ. ಅವನ ಮಗನಾದ ವೃಷಕೇತುವಿನಲ್ಲಿಯೂ ಕಾಣಿಸಿಕೊಂಡಿತು ಅದೇ ಬಗೆಯ ಅಸಮಾಧಾನ, ಸುಧನ್ವ ಪ್ರಶ್ನೆ ಕೇಳಿದಾಗ. “ನಯನಕ್ಕೆ ಅಗೋಚರವಾಗಿರುವ ಹೂವೊಂದು ಪರಿಮಳವನ್ನು ಪಸರಿಸುತ್ತದೆ. ಕುಲ ಯಾವುದು ಎನ್ನುವುದು ಅರಿವಿಗೆ ಬರಬೇಕಾದದ್ದು ಪೌರುಷದಿಂದಲೇ ಹೊರತು ಬೇರಾವುದರಿಂದಲೂ ಅಲ್ಲ. ನಿನಗೆ ನನ್ನ ಗುರುತು ಇಲ್ಲವೆಂದ ಮಾತ್ರಕ್ಕೆ ನಾನು ಪರಾಕ್ರಮ ತೋರಿಸದೇ ಇರುವವನಲ್ಲ” ಎಂದ ಕರ್ಣತನಯ.     ನನಗವನ ಮಾತು ಸರಿಯೆಂದು ತೋರಿತು. ಕುಲದ ಪ್ರಶ್ನೆಯನ್ನು ಮುಂದಿಟ್ಟುಕೊAಡು ಅವಕಾಶವನ್ನು ಕೊಡುವುದಾಗಲೀ, ಅವಕಾಶವನ್ನು ನಿರಾಕರಿಸುವುದಾಗಲೀ ಸರಿಯಲ್ಲ. ಕುಲವನ್ನು ಇನ್ನೊಬ್ಬರು ಹೇಳಿಕೊಳ್ಳಬೇಕಾದ ಅಗತ್ಯವೂ ಇಲ್ಲ.    ಯುದ್ಧಕ್ಕಿಳಿದರು ಸುಧನ್ವ ವೃಷಕೇತು. ಇದ್ದವರೆಲ್ಲರೂ ಅಚ್ಚರಿಯಿಂದ ನೋಡುವ ತೆರದಲ್ಲಿ ಶೌರ್ಯಭರಿತವಾಗಿ ಕದನ ನಡೆಯಿತು. ಹಂಸಧ್ವಜಸುತ ಪ್ರಯೋಗಿಸಿದ ಬಾಣಗಳು ಕರ್ಣಸುತನ ಶರೀರದೆಲ್ಲೆಡೆ ನಾಟಿ ಅವನನ್ನು ಅತೀವವಾಗಿ ಜರ್ಜರಿತಗೊಳಿಸಿದವು. ಪ್ರಜ್ಞೆ ಕಳೆದುಕೊಂಡ ವೃಷಕೇತು. ಸುಧನ್ವನ ಗೆಲುವಿಗೆ ಪ್ರಜ್ಞೆಬಂತು. ರಥವನ್ನು ತಿರುಗಿಸಿದ ಸಾರಥಿ ವೃಷಕೇತುವಿನ ಜೀವವನ್ನು ಉಳಿಸಿದ.    ಆಗಲೇ ಸುಧನ್ವನೆದುರು ಹೋಗಿ ಕದನಕ್ಕೆ ಮನಮಾಡಿದ ಪ್ರದ್ಯುಮ್ನ. ಎಂಟು ಬಾಣಗಳು ಸಿಡಿದು ಬಂದವು ಕೃಷ್ಣಪುತ್ರನೆಡೆಗೆ, ಹಂಸಧ್ವಜಪುತ್ರನ ಬಿಲ್ಲಿನಿಂದ. ಪ್ರದ್ಯುಮ್ನನೂ ಅದೇ ಬಗೆಯ ಉತ್ತರವಿತ್ತ. ಅವನ ಪ್ರತಿಕ್ರಿಯೆಯನ್ನು ಸಹಿಸುವುದಕ್ಕಾಗಲಿಲ್ಲ ಸುಧನ್ವನಿಗೆ. “ಕೃಷ್ಣಸುತ ನೀನೆಂದು ಇದುವರೆಗೂ ಸಹಿಸಿದೆ. ಇನ್ನು ನಾನು ಸಹಿಸುವವನಲ್ಲ. ನನ್ನ ಬಾಣವದು ಬಾಯಾರಿದೆ. ನಿನ್ನೊಡಲಲ್ಲಿ ಕೆಂಪುಜಲವಿದೆ. ನನ್ನ ಬಾಣಕ್ಕೆ ಆ ಜಲವನ್ನು ಕುಡಿಸದೆ ಬಿಡುವವನಲ್ಲ” ಎಂದು ಹೇಳುತ್ತಲೇ ಪ್ರದ್ಯುಮ್ನನ ಬಾಣವನ್ನು ಏಳು ತುಂಡುಗಳಾಗಿ ಕತ್ತರಿಸಿದ. ಸುಧನ್ವ ಶೌರ್ಯದ ಮುಂದೆ ಪ್ರದ್ಯುಮ್ನ ಪರಾಕ್ರಮವದು ಕಳೆಗುಂದಿತು.     ಸುಧನ್ವನನ್ನು ಸೋಲಿಸದೆಯೇ ಮರಳುವವರಲ್ಲ ಎಂದು ವೀರಾವೇಷದಿಂದ ಹೋದ ಕೃತವರ್ಮ ಸೋಲಿನ ಮುಖ ಹೊತ್ತು ಮರಳುವಂತಾಯಿತು. ಅನುಸಾಲ್ವನ ಸಾಮರ್ಥ್ಯವದು ಸಾಲದೇ ಹೋಯಿತು. ನಮ್ಮ ಸೇನೆಯನ್ನು ಸಂಪೂರ್ಣವಾಗಿ ಸೂರೆಗೊಳ್ಳುವ ಹುಮ್ಮಸ್ಸಿನಲ್ಲಿದ್ದಾನೆ ಆತ ಎನ್ನುವುದು ಗೊತ್ತಾಗುತ್ತಿತ್ತು. ನಮ್ಮ ಕಡೆಯ ವೀರಾಧಿವೀರರನ್ನು ಬಹುಬೇಗ ಕೊನೆಗಾಣಿಸಿ ಕ್ಷಿಪ್ರವಾಗಿ ಕೃಷ್ಣದರ್ಶನಗೈಯ್ಯುವ ಉತ್ಸುಕತೆ ಸುಧನ್ವನಲ್ಲಿ ಇದ್ದಂತಿತ್ತು. ಜೀವ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದ ನಮ್ಮ ಸೇನೆಯ ಆನೆ ಕುದುರೆ ರಥ ಸೈನಿಕರು ಎಲ್ಲವೂ ಎಲ್ಲರೂ ಸಾರಿ ಸಾರಿ ಹೇಳುತ್ತಿದ್ದುದು ಗಗನದೆತ್ತರವಾಗಿದ್ದ ಸುಧನ್ವ ಪರಾಕ್ರಮವನ್ನು. ಬರಿಯ ಕೃಷ್ಣಭಕ್ತ ಇವನಲ್ಲ, ಯುದ್ಧದಲ್ಲಿ ಸರ್ವಶಕ್ತ ಎಂದೆನಿಸಿತು ನನಗೆ. ಆದರೂ ನನ್ನ ಶಕ್ತಿಗೆ ಸಮನಲ್ಲ ಎಂಬ ಮೇಲರಿಮೆಯ ಭಾವವೂ ಮೂಡಿತು.    ಇನ್ನು ನಾನು ಯುದ್ಧರಂಗವನ್ನು ಪ್ರವೇಶಿಸದಿದ್ದರೆ ಗೆಲುವು ದೊರೆಯುವಂಥದ್ದಲ್ಲ ಎಂದು ಹೇಳುತ್ತಿತ್ತು ನನ್ನ ಅಂತರಂಗ. ಸುಧನ್ವನನ್ನು ಎದುರಿಸಲು ಸಜ್ಜಾದೆ…      ಡಾ. ವಿಶ್ವನಾಥ ಎನ್ ನೇರಳಕಟ್ಟೆ         

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-21 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆ ಕಟ್ಟೆ ಬಿಸಿಯೆಣ್ಣೆಯದು ಭಕ್ತಿರಸದಲಿ ತೋಯ್ದು ಸಿರಿಗಂಧವಾಯ್ತು!         ಮಡದಿಯೊಂದಿಗಿನ ಮದನಕೇಳಿಯಿಂದ ಸಂತೃಪ್ತನಾಗಿದ್ದ ಸುಧನ್ವ ನಗುನಗುತ್ತಾ ಯುದ್ಧರಂಗದೆಡೆಗೆ ಹೊರಟಿದ್ದ. ಆಗಲೇ ಬಳಿಗೆ ಬಂದ ಸೇವಕರು ಅವನನ್ನು ಗಟ್ಟಿಯಾಗಿ ಹಿಡಿದು, ಎರಡೂ ಕೈಗಳನ್ನು ಜೊತೆಸೇರಿಸಿ ಹಗ್ಗದಿಂದ ಕಟ್ಟಿ, ಕಳ್ಳನನ್ನು ಎಳೆದುಕೊಂಡು ಬರುವಂತೆ ಭರದಿಂದ ತಂದುನಿಲ್ಲಿಸಿದರು ಹಂಸಧ್ವಜನ ಮುಂದೆ. ಸೇವಕರಿಗೆ ಆ ಬಗೆಯ ಆದೇಶವನ್ನು ಕೊಟ್ಟದ್ದು ಹಂಸಧ್ವಜನೇ. ಸೇನೆಯಲ್ಲಿ ಮಗ ಸುಧನ್ವನನ್ನು ಕಾಣದೆ ತವಕಿಸುತ್ತಿದ್ದ ಅವನು ಮಗ ಎಲ್ಲಿದ್ದರೂ ಎಳೆದುಕೊಂಡು ಬರಬೇಕೆಂದು ತನ್ನ ಸೇವಕರಿಗೆ ಆಜ್ಞಾಪಿಸಿದ್ದ. ಅವರು ಅದೇ ರೀತಿಯಲ್ಲಿ ಎಳೆದುಕೊಂಡು ಹೋಗಿದ್ದರು ಸುಧನ್ವನನ್ನು.     ಯುದ್ಧರಂಗಕ್ಕೆ ಬರಲು ವಿಳಂಬವಾದುದಕ್ಕೆ ಕಾರಣವೇನೆಂದು ಅಬ್ಬರಿಸಿ ಮಗನಲ್ಲಿ ಕೇಳಿದ ಹಂಸಧ್ವಜ. ಉತ್ತಮ ರಾಜನಿಗಿರಬೇಕಾದ ಲಕ್ಷಣವದು. ತನ್ನ ಮಗನನ್ನೂ ಪ್ರಜೆಯಾಗಿ ನೋಡುವ ಭಾವ ಅವನದ್ದು.     ಸುಧನ್ವ ನಿಜ ವಿಚಾರವನ್ನೇ ಅರುಹಿದ. “ಸಂತಾನವನ್ನು ಬಯಸಿದ ಸತಿಯ ಸತತ ಇಚ್ಛೆಗಳನ್ನು ಪೂರೈಸುವ ಕಾರಣದಿಂದಾಗಿ ತಡವಾಯಿತು” ಎಂದ.     ಹಂಸಧ್ವಜ ಕೋಪೋದ್ರಿಕ್ತನಾದ. ಕೃಷ್ಣದರ್ಶನದ ಪುಣ್ಯಕಾಲವದು ಪ್ರಾಪ್ತವಾಗಿರಲು ಅನ್ಯವಿಷಯಗಳಿಗೆ ಮನಗೊಟ್ಟ ಸುಧನ್ವನದ್ದು ತಪ್ಪು ಎಂದು ಜರಿದ. ಶಂಖ ಲಿಖಿತರನ್ನು ಬರಹೇಳಿದ. ಅಲ್ಲಿಗೆ ಬಂದರು ಶಂಖ ಲಿಖಿತರು. ಸಮರದ ಸಮಯದಲ್ಲಿ ವಿಳಂಬಗೈದವರನ್ನು ಕಾದ ಎಣ್ಣೆ ಕೊಪ್ಪರಿಗೆಗೆ ಎಸೆಯಬೇಕು ಎಂಬ ಕಟ್ಟಳೆಯನ್ನು ಈಗಾಗಲೇ ಅಳವಡಿಸಿಕೊಂಡಿದ್ದರು ಈ ಪುರೋಹಿತ ಸಹೋದರರು. ಅದೇ ನಿರ್ಧಾರವನ್ನು ತಿಳಿಸಿದರು ಅರಸ ಹಂಸಧ್ವಜನಲ್ಲಿ. “ಕಾದ ಎಣ್ಣೆ ಕೊಪ್ಪರಿಗೆಗೆ ಈ ಸುಧನ್ವನನ್ನು ಎಸೆಯದಿದ್ದರೆ ನಾವು ಈ ಚಂಪಕಾಪುರದಲ್ಲಿ ಇರುವವರಲ್ಲ” ಎಂಬ ನಿಷ್ಠುರದ ನುಡಿಯನ್ನಾಡಿದರು.    ಅರಸ ತಡಮಾಡಲಿಲ್ಲ. ಆಪ್ತಸಚಿವ ಎನಿಸಿಕೊಂಡ ಸುಮತಿಯನ್ನು ಕರೆದ. “ಸುಧನ್ವನ ಕೈಗಳನ್ನು ಕಟ್ಟಿ ಕುದಿವ ಎಣ್ಣೆಯಲ್ಲಿ ಎಸೆಯಬೇಕು” ಎಂಬ ಆಜ್ಞೆಯನ್ನು ನೀಡಿದ. ಅದನ್ನು ಪೂರೈಸುವ ಹೊಣೆಯನ್ನು ಸುಮತಿಗೆ ನೀಡಿದ. ರಾಜ ಘೋಷಿಸಿದ ಶಿಕ್ಷೆಯನ್ನು ರಾಜಗುವರನಿಗೆ ನೀಡುವುದಕ್ಕಾಗಿ ಸುಧನ್ವನನ್ನು ಸೆಳೆದೊಯ್ದ ಸುಮತಿ.     ಕೊಪ್ಪರಿಗೆಯನ್ನು ಇರಿಸಿದ. ತೈಲವನ್ನದಕೆ ಸುರಿಸಿದ. ಒಣಕಟ್ಟಿಗೆಗಳನ್ನು ತರಿಸಿದ. ಬೆಂಕಿಯನ್ನು ಉರಿಸಿದ. ಪ್ರಿಯ ರಾಜಗುವರನಿಗೆದುರಾದ ಕಡುಗತಿಗೆ ಮರುಗಿ ಕಣ್ಣೀರ ಹರಿಸಿದ.     ಸುಧನ್ವ ಸ್ವಭಾವ ಅದಾವ ಬಗೆಯದು ಎನ್ನುವುದರ ಸಂಪೂರ್ಣ ಅರಿವಿತ್ತು ಸುಮತಿಗೆ. “ಪ್ರಿಯ ರಾಜಕುಮಾರ, ನಿನಗೆ ಇಂತಹ ಗತಿ ಒದಗಿತೇ! ಅಯ್ಯೋ! ಕೃಷ್ಣನ ಭಕ್ತ ನೀನು. ಚೆಲುವ ಎನಿಸಿರುವೆ. ತಂದೆ ತಾಯಿಯರ ಬಗೆಗೆ ಅಕ್ಕರೆಯ ಭಾವವನ್ನು ಇಟ್ಟುಕೊಂಡವನು. ನೀತಿ ಅನೀತಿಗಳನ್ನು ತಿಳಿದುಕೊಂಡವನು. ಎಲ್ಲವನ್ನೂ ಅರಿತ ಜ್ಞಾನಿ. ದೈನ್ಯತೆಯಿಂದ ಬಳಿ ಬಂದವರಿಗೆ ದಾನವಿತ್ತು ಸಂತೋಷಿಸುವವನು. ಕೋಮಲ ಕಾಯದವನು. ಸುಖವನ್ನೇ ಬದುಕಿನಲ್ಲಿ ಉಂಡವನು. ಕಷ್ಟವನ್ನು ಕಾಣದವನು. ನಿನ್ನನ್ನು ಈ ಬಿಸಿಬಿಸಿಯಾದ ಎಣ್ಣೆಗೆ ನಾನು ಎಸೆಯುವುದಾದರೂ ಹೇಗೆ! ಇದಾವ ಉಭಯಸಂಕಟ ಒದಗಿತಿಂದು ಎನಗೆ!” ಎಂದು ತಾನೇ ಬಿಸಿಯೆಣ್ಣೆಯ ಕೊಪ್ಪರಿಗೆಯಲ್ಲಿ ಬಿದ್ದಂತೆ ಪ್ರಲಾಪಿಸಿದ ಆ ಆಪ್ತಸಚಿವ ಸುಮತಿ.     ಸಂಕಟಪಡಬೇಕಾದ ಸುಧನ್ವ ಸಂಪೂರ್ಣ ಸೋತ ಸುಮತಿಯನ್ನು ಸಂತೈಸಿದ. “ನಾನು ಇದುವರೆಗೂ ಧರ್ಮಮಾರ್ಗವನ್ನು ತೊರೆದು ನಡೆದವನಲ್ಲ. ಯುದ್ಧದಲ್ಲಿ ಶತ್ರುಗಳೊಡನೆ ಹೋರಾಡಿ ಮಡಿಯಬೇಕಾಗಿದ್ದ ನನ್ನ ಈ ಶರೀರ ಈ ಎಣ್ಣೆ ಕೊಪ್ಪರಿಗೆಯಲ್ಲಿ ಕೊನೆಗಾಣುವಂತಾಯಿತು ಎನ್ನುವುದಕ್ಕೆ ದುಃಖವಿದೆ ನಿಜ. ಆದರೆ ಕೃಷ್ಣನ ನಾಮಸ್ಮರಣೆಗೆ ಶರಣು ಹೋಗುವೆ. ಅವನು ನನ್ನನ್ನು ಕಾಯುತ್ತಾನೆ ಎಂಬ ಭರವಸೆಯಿದೆ ನನ್ನೊಳಗೆ. ನೀನು ಅಂಜದೆ ಅರಸನ ಆಜ್ಞೆಯನ್ನು ಪೂರ್ಣಗೊಳಿಸು” ಎಂದ ಸುಧನ್ವ.     ಮಾತನ್ನು ಮನ್ನಿಸಿದ ಸುಮತಿ. ಸುಧನ್ವನನ್ನು ಎತ್ತಿದ ಆತ ಕುದಿಯುತ್ತಿರುವ ಎಣ್ಣೆಯೊಳಗೆ ಅವನನ್ನು ಎಸೆದ. ರಾಜ ಪರಿವಾರದವರೆಲ್ಲಾ ಅಲ್ಲೇ ನೆರೆದಿದ್ದರು. ತಮ್ಮ ದೇಹವೇ ಕುದಿಯಿತೇನೋ ಎನ್ನುವಂತೆ ಮರುಗಿದರು. ಈ ಬಗೆಯ ಸಾವು ಒದಗಿಬಂತೇ ಸುಧನ್ವನಿಗೆ! ಎಂದು ಅಳುಮಳೆಯನ್ನು ಕರೆದರು. ಅದೆಂತು ಈ ಬಗೆಯ ಆಜ್ಞೆ ಕೊಟ್ಟನೋ ಆ ಅರಸ ಎನ್ನುತ್ತಾ ದೊರೆಯ ಕಠಿಣತೆಯ ನೆನೆದು ಕರಗಿದರು.     ಕುದಿವ ಎಣ್ಣೆಯೊಳಗೆ ಬಿದ್ದ ಸುಧನ್ವ ಅಪ್ಪಿಕೊಂಡದ್ದು ಹರಿನಾಮ ಸ್ಮರಣೆಯನ್ನು. “ಹಿಂದೆ ರಕ್ಷಿಸಿದೆ ಅಸುರಸುತ ಪ್ರಹ್ಮಾದನನ್ನು ನೀ ಅಸುರಾರಿಯೇ. ಅಂದು ಧಾರ್ತರಾಷ್ಟçನ ದುಷ್ಟತೆಯ ಸಹಿಸದೆಯೇ ಸಭಾಪಮಾನದಲ್ಲಿ, ದ್ರುಪದಸುತೆಯ ಮಾನವನ್ನು ಕಾಯ್ದೆ ದುಷ್ಟಸಂಹಾರಕನೇ. ಇಂದು ನನಗೆ ನೀನಲ್ಲದೆ ಬೇರೆ ಇನ್ನಾರೂ ದಿಕ್ಕಿಲ್ಲ. ಕಾಪಾಡಬೇಕು ಎನ್ನನು ಓ ಕರುಣಾಳು ಕೃಷ್ಣಾ!” ಎಂದು ಮನದಲ್ಲಿಯೇ ಕೃಷ್ಣನನ್ನು ಕರೆಯುತ್ತಾ ಶ್ರೀಹರಿಯ ಧ್ಯಾನದಲ್ಲಿದ್ದನು ಸುಧನ್ವ.     ಕೃಷ್ಣಕೃತ ವಿಸ್ಮಯ ಸಂಭವಿಸಿತು ಆ ಕ್ಷಣದಲ್ಲಿ! ಕೊತಕೊತನೆ ಕುದಿಯುತ್ತಿದ್ದ ಎಣ್ಣೆಯದು ಮೈಗೆ ಸೊಗಸನ್ನಿಕ್ಕುವ, ತನುವಿಗೆ ಸೊಗವನ್ನೀಯುವ ಸಿರಿಗಂಧವಾಯ್ತು ಅವನ ಪಾಲಿಗೆ. ಹೊರಗೆ ನೋಡುತ್ತಿದ್ದವರ ಕಣ್ಣಿಗದು ಕುದಿಕುದಿವ ಎಣ್ಣೆ. ಒಳಗಿದ್ದ ಸುಧನ್ವನ ಪಾಲಿಗದು ತಂಪನ್ನೀಯುವ ಬೆಣ್ಣೆ. ಅವನ ತನುವಿನ ರೋಮಗಳು ಕರಟಿಹೋಗಲಿಲ್ಲ. ಮೊಗದ ಚೆಲುವದು ಮುರುಟಿಹೋಗಲಿಲ್ಲ. ಕೊರಳಲ್ಲಿದ್ದ ತುಳಸಿ ಮಾಲೆಯದು ಬಾಡಲಿಲ್ಲ. ಅದರಲ್ಲಿದ್ದ ಕುಸುಮಗಳು ಮುದುಡಲಿಲ್ಲ. ಒಂದಿಷ್ಟೂ ಕುಂದದ ಅವನ ಮುಖ ನೆನಪಿಸುತ್ತಿತ್ತು ಪೂರ್ಣ ಅರಳಿದ ಅಂಬುಜವನ್ನು. ಹರಿನಾಮವೆಂಬ ಹರಿಗೋಲು ಅವನನ್ನು ಬಿಸಿಯೆಣ್ಣೆಯೆಂಬ ಕಷ್ಟತೊರೆಯಿಂದ ನಿರಾಳತೆಯೆಂಬ ನದಿತಟಕ್ಕೆ ತಲುಪಿಸಿತು.     ನೋಡುತ್ತಿದ್ದ ಸರ್ವ ಸಜ್ಜನರ ಮೊಗದಲ್ಲಿ ಅಚ್ಚರಿಯ ಭಾವ. ಎಲ್ಲಾ ಜನರು ಬೆರಗಾದರು ಕೃಷ್ಣಮಹಿಮೆಯ ಕಣ್ಣಾರೆ ಕಂಡು.     ಅಲ್ಲಿಯೇ ಇದ್ದ ಲಿಖಿತನಿಗೆ ಸಂಶಯ ಮೂಡಿತು. ಸುಧನ್ವ ಅಗ್ನಿಸ್ತಂಭನ ವಿದ್ಯೆಯಲ್ಲಿ ಪರಿಣತನಿರಬೇಕು ಎಂಬ ಸಂದೇಹ ಅವನನ್ನು ಕಾಡಿತು. ಎಳನೀರನ್ನು ಎಣ್ಣೆಗೆ ಸುರಿದರೆ ಉರಿ ಇನ್ನಷ್ಟು ಹೆಚ್ಚಾಗುತ್ತದೆ. ಇದವನಿಗೆ ತಿಳಿದಿತ್ತು. ಎಳನೀರನ್ನು ತರಿಸಿದ ಲಿಖಿತ. ಎಣ್ಣೆ ಕೊಪ್ಪರಿಗೆಗೆ ಸುರಿದ. ನಭೋಮಂಡಲವನ್ನೇ ವ್ಯಾಪಿಸುವಂತೆ ಉರಿಯೆದ್ದಿತು. ಆದರೂ ಸುಧನ್ವ ಏನೂ ಆಗದ ರೀತಿಯಲ್ಲಿ ನಗುತ್ತಲೇ ಇದ್ದ…                                          ಡಾ. ವಿಶ್ವನಾಥ ಎನ್ ನೇರಳಕಟ್ಟೆ  

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-20 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ರಣರಂಗ ಪ್ರವೇಶಿಸದಂತೆ ರಾಜಕುವರನನ್ನು ತಡೆದಿತ್ತು ರತಿಕಾಮನೆ    ಹಂಸಧ್ವಜ ಕಾಯುತ್ತಿದ್ದದ್ದು ಪ್ರೀತಿಯ ಮಗ ಸುಧನ್ವನ ಬರುವಿಕೆಗಾಗಿ. ಅವನು ವಿಳಂಬ ಮಾಡಿದ್ದಾನೆ ಎಂಬ ಕೋಪ ಹಂಸಧ್ವಜನಲ್ಲೀಗ ಮೂಡತೊಡಗಿತ್ತು. ರಣವೀರ ಸುಧನ್ವ ರಣರಂಗದೆಡೆಗೆ ಬರಲು ವಿಳಂಬವಾದುದಕ್ಕೆ ಸಕಾರಣವಿತ್ತು. ಸೈನಿಕರು ಯುದ್ಧಕ್ಕೆ ಸಿದ್ಧರಾಗಿ ಹೋಗುತ್ತಿದ್ದುದನ್ನು ಕಂಡ ಸುಧನ್ವ ತಾನೂ ತಯಾರಾದ. ವೇಷಭೂಷಣಗಳನ್ನು ಧರಿಸಿಕೊಂಡ. ಮನವನ್ನು ರಣಶೌರ್ಯಕ್ಕೆ ಸಿದ್ಧವಾಗಿಸಿಕೊಂಡ. ಹೋಗಿ ಸಾಷ್ಟಾಂಗ ವಂದಿಸಿದ್ದು ತಾಯಿಯ ಚರಣಕಮಲಗಳಿಗೆ. “ಕುದುರೆಯನ್ನು ಕಟ್ಟಿ ಕದನವನ್ನು ಮಾಡಹೊರಟಿರುವ ನನ್ನ ಮೇಲೆ ನಿನ್ನ ಪೂರ್ಣ ಆಶೀರ್ವಾದವಿರಲಿ ತಾಯೇ” ಎಂದು ಬೇಡಿದ.      ಮಗನ ಮನವನ್ನು ವೀರತ್ವದಿಂದ ಹರಿದಾಸತ್ವದೆಡೆಗೆ ಸೆಳೆವ ಪರಮವಾಣಿ ಮೊಳಗಿತು ಆ ಕ್ಷಣದಲ್ಲಿ ಮಾತೆಯ ಮನದಾಳದಿಂದ. “ಅರ್ಜುನನ ಯಾಗದ ಕುದುರೆಯದು ನಾಲ್ಕಡಿಯ ದೇಹವನ್ನು ಹೊಂದಿದೆಯಷ್ಟೇ. ಅದರ ಗೊಡವೆಗಿಂತಲೂ ಆ ಪೊಡವೀಪತಿ ಶ್ರೀಕೃಷ್ಣನನ್ನು ಒಲಿಸುವ ಬುದ್ಧಿಯದು ನಿನಗೆ ಒಲಿಯಬೇಕಿದೆ. ನಿನ್ನ ಸಾಹಸವನ್ನು ಮೆಚ್ಚಿ ಆ ಅಸುರಾರಿ ಇಂದು ಪ್ರತ್ಯಕ್ಷನಾದರೆ ನಾವೆಲ್ಲರೂ ಸಾಕ್ಷಾತ್ ಕಾಣಬಹುದು ಅವನ” ಎಂದಳು ಸುಧನ್ವ ಮಾತೆ.      ಮಾತೆ ಮಾತದು ಪ್ರೇರೇಪಿಸಿತು ಸುಧನ್ವನನು ಪ್ರತಿಜ್ಞಾಬದ್ಧತೆಯೊಂದರ ಕಡೆಗೆ. “ಅರ್ಜುನನಿಗೆ ನೋವಾದರೆ ಆ ಶ್ರೀಕೃಷ್ಣ ಬಾರದೇ ಇರುವನೇ! ಆಪ್ತರ ಆರ್ತನಾದವನ್ನು ಆ ಆಪದ್ಬಾಂಧವ ಸಹಿಸಿಯಾನೇ! ಇಂದ್ರಸುತನೊಡನೆ ಹೋರಾಡುವೆ ಶೌರ್ಯದಿಂದ. ತನ್ಮೂಲಕ ಆ ಹರಿಯನ್ನು ನಮ್ಮೀ ಧರಣಿಗೆ ಬರಗೊಡುವೆ. ನಂತರ ಆ ಕೃಷ್ಣನ ಮುಂದೆ ನನ್ನ ಪೌರುಷವನ್ನು ತೋರಿಸುವೆ” ಎಂದು ದಿಟ್ಟತನದಿಂದ ನುಡಿದನು ಸುಧನ್ವ.      ಶ್ರೀಕೃಷ್ಣ ಬಂದಾಗ ಮಗನೆಲ್ಲಿ ಯುದ್ಧಕ್ಕೆ ವಿಮುಖನಾಗುವನೋ ಎಂಬ ಭಾವ ಆ ತಾಯಿಯನ್ನು ಕಾಡಿತು. ಅದನ್ನೇ ಹೇಳಿದಳು ಮಗನಲ್ಲಿ. “ಕೃಷ್ಣಾಗಮನದ ಗಳಿಗೆಯಲ್ಲಿ ನೀನು ಯುದ್ಧಕ್ಕೆ ವಿಮುಖನಾದರೆ ಜನರ ಮುಂದೆ ಮರ್ಯಾದೆ ನಾಶವದು ಖಚಿತ” ಎಂಬ ಎಚ್ಚರಿಕೆ ನೀಡಿದಳು.     “ಕೃಷ್ಣನಿಗೆ ವಿಮುಖನಾಗಿ ಬಂದರೆ ನಿನ್ನ ಗರ್ಭದಲ್ಲಿ ಜನಿಸಿದವನೇ ನಾನಲ್ಲ” ಎಂಬ ಧೀರನುಡಿಯನಾಡಿದ ಸುಧನ್ವ, ಕದನದಲ್ಲಿ ಭರಪೂರ ಶೌರ್ಯವನ್ನು ತೋರಿಸುವ ಆಶ್ವಾಸನೆಯನ್ನು ಅವಳಿಗಿತ್ತನು.      ಅಷ್ಟರಲ್ಲಿ ಬಳಿಗೆ ಬಂದ ಅವನ ಸಹೋದರಿ ಕುವಲೆಯೆನ್ನುವವಳು “ಕೃಷ್ಣನಿಗೆ ವಿಮುಖನಾಗಿ ನೀನು ಬಂದರೆ ನನ್ನ ಗಂಡನ ಮನೆಯಲ್ಲಿ ನಾನು ತಲೆಯೆತ್ತಿ ನಡೆಯಲಾರೆ” ಎಂದು ಹೇಳಿ, ಅಣ್ಣ ಅಸಹಾಯ ಶೌರ್ಯ ತೋರಲಿ ಎಂದು ಹಾರೈಸಿ, ಆರತಿಯನೆತ್ತಿ, ಚಂದನದ ತಿಲಕವನ್ನಿಟ್ಟು, ಕರ್ಪೂರ ವೀಳ್ಯವನ್ನು ಕೊಟ್ಟು, ಅಕ್ಷತೆಯನ್ನು ಎರಚಿ ಕಳುಹಿಸಿಕೊಟ್ಟಳು ಸುಧನ್ವನನ್ನು.     ಹೀಗೆ ಯುದ್ಧಮುಖನಾಗಿ ಅರಮನೆಯಿಂದ ಹೊರಟುನಿಂತ ಸುಧನ್ವನಿಗೀಗ ಎದುರಾದವಳು ಪ್ರಭಾವತಿ. ಅವನ ಪ್ರಿಯ ರಾಣಿ. ಚಂದ್ರಮಂಡಲದಂತಿತ್ತು ಅವಳ ವದನ. ಹೊಸತು ಬೆಳದಿಂಗಳಂತೆ ಶೋಭಿಸುವ ಅವಳ ನಗು. ರೇಷ್ಮೆಯುಡುಗೆಯನ್ನು ತೊಟ್ಟು ಮೆರೆಯುತ್ತಿದ್ದಾಳೆ. ಅವಳ ಹಣೆಯ ಮೇಲಿನ ಕೆಂಬಣ್ಣದ ಸಿಂಧೂರ ತಿಲಕವದು ಅವಳ ಚಿತ್ತದ ಅನುರಾಗವನ್ನು ಸೂಚಿಸುವಂತಿದೆ. ಸೌಂದರ್ಯವನ್ನೇ ಹೊತ್ತುನಿಂತಿದ್ದಳು ಪ್ರಭಾವತಿ.      ಮಡದಿಯ ಬೆಡಗು ಬಿನ್ನಾಣಗಳನ್ನು ನೋಡಿ ಮುಗುಳುನಗುತ ಸುಧನ್ವ “ಇಂದು ಯುದ್ಧದಲ್ಲಿ ಅರ್ಜುನನ ಬಿಂಕವನ್ನು ಕೊನೆಗಾಣಿಸುತ್ತೇನೆ. ಕೃಷ್ಣ ಪ್ರತ್ಯಕ್ಷನಾದಾಗ ಅವನ ಮುಂದೆಯೂ ನನ್ನ ಪರಾಕ್ರಮದ ಪ್ರದರ್ಶನಗೈಯ್ಯುತ್ತೇನೆ. ಗೆಲುವನ್ನು ಪಡೆಯುತ್ತೇನೆ. ಅದಾಗದಿದ್ದರೆ ವೀರಮರಣವನ್ನು ಪಡೆದು ಮುಕ್ತಿಯನ್ನು ಗಳಿಸುತ್ತೇನೆ. ನನ್ನನ್ನು ಒಲವಿನಿಂದ ಕಳಿಸಿಕೊಡು ನೀನು” ಎಂದನು.      ರಾಣಿ ಪ್ರಭಾವತಿಯ ಆಕಾಂಕ್ಷೆಯದು ಬೇರೆಯದೇ ತೆರದಲ್ಲಿತ್ತು. ಕೃಷ್ಣನಿಗೆ ಯುದ್ಧದಲ್ಲಿ ಎದುರಾದ ಬಳಿಕ ಮೋಕ್ಷವಲ್ಲದೆ ಜಯ ದೊರೆಯಲು ಸಾಧ್ಯವಿಲ್ಲ ಎಂಬ ಅರಿವಿತ್ತು ಅವಳಿಗೆ. ಗಂಡ ಯುದ್ಧಕ್ಕೆ ಹೋಗುವುದಕ್ಕೂ ಮೊದಲು ತನ್ನನ್ನು ಕೂಡಿದರೆ ಆ ಬಳಿಕ ತಾನು ಸಂತಾನರಹಿತೆ ಎನಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದು ಅವಳ ಯೋಚನೆ. ಕಾಮಾಸಕ್ತಿ ಅವಳಲ್ಲಿ ಗರಿಗೆದರಿತ್ತು. ತಾಯ್ತನದ ಹಂಬಲ ಅವಳನ್ನು ಕಾಡತೊಡಗಿತ್ತು. ತನ್ನನ್ನು ತೃಪ್ತಿಗೊಳಿಸಿ ಯುದ್ಧಕ್ಕೆ ತೆರಳು ಎಂದು ಕೇಳಿಕೊಂಡಳು ಸುಧನ್ವನನ್ನು.     ಯುದ್ಧರಂಗದೆಡೆಗೆ ಮುಖಮಾಡಿದ್ದ ಹಂಸಧ್ವಜಸುತನಿಗೆ ಮಡದಿಯ ಮಾತು ಸರಿದೋರಲಿಲ್ಲ. “ಕಾಮದಾಟಕ್ಕೆ ಇದು ಸಮಯವಲ್ಲ. ಕದನಭೇರಿ ನನ್ನನ್ನು ಕರೆಯುತ್ತಿದೆ. ನನ್ನ ತಂದೆ ಈಗಾಗಲೇ ರಣಭೂಮಿಯನ್ನು ಸೇರಿಯಾಗಿದೆ. ಸರಿಯಾದ ಸಮಯದಲ್ಲಿ ನಾನಲ್ಲಿ ಇರದಿದ್ದರೆ ಕ್ರಮವನ್ನು ಮೀರಿದಂತಾಗುತ್ತದೆ. ನೀನು ನನ್ನನ್ನೀಗ ತಡೆಯುವುದು ಸರಿಯಲ್ಲ. ನನ್ನನ್ನು ಹೋಗಲು ಬಿಡು” ಎಂದು ಹೇಳುತ್ತಾ ಅವನು ಮುಂದುವರಿಯುವ ಮನಸ್ಸು ಮಾಡಿದ.     ಆಗಲೇ ಅವಳು ಅವನ ಗಲ್ಲವನ್ನು ಹಿಡಿದು, ಮುದ್ದುಮಾಡಿ, ಅವನೆಡೆಗೆ ತನ್ನ ತನುವನ್ನು ನೂಕಿದಳು. ಮನ್ಮಥನ ರಣರಂಗವನ್ನು ಪ್ರವೇಶಿಸಬೇಕಾದ ನೀನು ಕುದುರೆಯನ್ನು ಗೆಲ್ಲಬೇಕಾದ ಯುದ್ಧರಂಗಕ್ಕೆ ಹೇಗೆ ಹೋಗುವೆಯೋ ನೋಡುತ್ತೇನೆ ಎಂಬಂತೆ ಅವಳು ತನ್ನೆರಡೂ ಮೊಲೆಗಳನ್ನು ಅವನ ದೇಹಕ್ಕೆ ಒತ್ತುತ್ತಾ, ಗಾಢವಾಗಿ ಆಲಿಂಗನಗೈದು ಶೃಂಗಾರ ಚೇಷ್ಟೆಗಳನ್ನು ತೋರಿದಳು. ಹಂಸಗಳ ತುಪ್ಪಳದಿಂದ ನಿರ್ಮಿಸಲಾದ ಹಾಸಿಗೆಯೆಡೆಗೆ ಅವನನ್ನು ಸೆಳೆದೊಯ್ದಳು.     ಮಡದಿಯ ಮೋಹದಾಟಗಳು ಯುದ್ಧರಂಗದೆಡೆಗೆ ಮುಖಮಾಡಿದ್ದ ಸುಧನ್ವನ ಅಂತರಂಗವನ್ನು ಇನ್ನೊಂದು ದಿಕ್ಕಿಗೆ ಹಾಯಿಸಿದವು. ಮನದನ್ನೆಯ ಮನದ ಕಾಮನೆಯನ್ನು ತಣಿಸಿ, ರಮಿಸುವುದರಲ್ಲೇನೂ ತಪ್ಪಿಲ್ಲ ಎಂದು ತೋರಿತು ಅವನಿಗೆ. ಸರಸದ ಮಾತುಗಳನ್ನಾಡಿದ. ಚುಂಬಿಸಿದ. ಪ್ರೀತಿಯಿಂದ ಅವಳೆದೆಯಲ್ಲಿ ಒರಗಿದ. ಕಾಮಿನಿಯ ಕಾಮದ ಕಡಲಲ್ಲಿ ಮುಳುಗಿಹೋದ ಸುಧನ್ವ.                                       ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅರ್ಜುನ ಉವಾಚ

ಧಾರಾವಾಹಿ ಸಂಗಾತಿ ಅರ್ಜುನ ಉವಾಚ ವಿಶ್ವನಾಥ್‌ ಎನ್ ನೇರಳೆಕಟ್ಟೆ ಕೃಷ್ಣದರ್ಶನದ ಹಂಬಲವದು ಕುದುರೆಯನು ಕಟ್ಟಿಸಿತು ಚಂಪಕಾನಗರಿಯ ಅರಸ ಹಂಸಧ್ವಜ. ನಿಷ್ಠೆ ನಿಯಮಗಳಿಗೆ ನಿಜಾರ್ಥದ ದೊರೆಯಾಗಿದ್ದವನು. ಇಡಿಯ ಚಂಪಕಾಪುರಕ್ಕೆ ಸರಿಹೊಂದುವ ನಿಯಮಾವಳಿಯನ್ನವನು ರೂಪಿಸಿದ್ದ. ಎಲ್ಲಾ ಪ್ರಜೆಗಳು ಏಕಪತ್ನೀವ್ರತವನ್ನು ಪಾಲಿಸಬೇಕಿತ್ತು. ಕೃಷ್ಣಪೂಜೆಯನ್ನು ಗೈಯ್ಯಬೇಕಿತ್ತು. ದಾನಧರ್ಮಗಳನ್ನು ನಡೆಸಬೇಕಿತ್ತು. ಹೀಗೆ ರಾಜಕೃತ ನಿಯಮಾವಳಿಗಳನ್ನು ಯಾರೂ ಮೀರುವುದಕ್ಕೆ ಸಾಧ್ಯವೇ ಇರಲಿಲ್ಲ. ಪ್ರಜೆಗಳ ಕೆಡುಕಿನ ವರ್ತನೆಯನ್ನು ಸಹಿಸದವನಾಗಿದ್ದ ಹಂಸಧ್ವಜ. ಹಾಗೆಂದು ಕೇವಲ ಪ್ರಜೆಗಳ ಮೇಲೆ ನಿರ್ಬಂಧ ಹೇರಿ ಸುಮ್ಮನಿರುವವನಲ್ಲ ಆತ. ಪ್ರಜೆಗಳಿಗೆ ಇವುಗಳನ್ನು ಬೋಧಿಸುವುದಕ್ಕೂ ಮೊದಲು ತಾನೇ ಪಾಲಿಸಿದವನಾಗಿದ್ದ. ‘ಯಥಾ ರಾಜ ತಥಾ ಪ್ರಜಾ’ ಎಂಬ ಮಾತಿನಂತೆ ಹಂಸಧ್ವಜನ ಸುಗುಣಗಳನ್ನು ಅಲ್ಲಿನ ಪ್ರಜೆಗಳಲ್ಲಿಯೂ ಕಾಣಬಹುದಾಗಿತ್ತು. ಎಲ್ಲರೂ ಏಕಪತ್ನೀವ್ರತಸ್ಥರಾಗಿದ್ದರು. ಕೃಷ್ಣಪೂಜೆಯಲ್ಲಿ ನೆಮ್ಮದಿ ಕಂಡುಕೊಂಡಿದ್ದರು. ತಮ್ಮಲ್ಲಿರುವ ಸಂಪತ್ತಿನಲ್ಲಿ ಒಂದಷ್ಟು ಭಾಗವನ್ನು ಅವಶ್ಯಕತೆ ಇರುವವರಿಗೆ ಕೊಟ್ಟು ಧನ್ಯಭಾವವನ್ನು ಅನುಭವಿಸುತ್ತಿದ್ದರು. ಹೀಗಿತ್ತು ಚಂಪಕಾನಗರಿ, ನಮ್ಮ ಯಾಗದ ಕುದುರೆ ಅಲ್ಲಿಯ ಧರಣಿಯ ಮೇಲೆ ಕಾಲನ್ನಿರಿಸಿದಾಗ.     ಏಳು ಮಂದಿ ತಮ್ಮಂದಿರಿದ್ದರು ಹಂಸಧ್ವಜನಿಗೆ. ಸುದರ್ಶನ, ಸುಧನ್ವ, ಸುಮನಸ, ಸುರಥ ಎಂಬ ನಾಮಾಂಕಿತ ನಾಲ್ಕು ಮಂದಿ ವೀರ ಪುತ್ರರಿದ್ದರು. ಶಂಖ ಲಿಖಿತ ಎಂಬ ಅಣ್ಣತಮ್ಮಂದಿರು ಹಂಸಧ್ವಜನ ಪುರೋಹಿತರೆನಿಸಿಕೊಂಡಿದ್ದರು. ಇವರಿಬ್ಬರಿಗೂ ಶಾಸ್ತçಪಾಲನೆಯ ವಿಚಾರ ಬಂದಾಗ ಬಾಂಧವ್ಯವಾಗಲೀ, ಆತ್ಮೀಯತೆಯಾಗಲೀ ಮುಖ್ಯವಾಗುತ್ತಿರಲಿಲ್ಲ. ಅದೊಂದು ಸಲ ಲಿಖಿತನ ಆಶ್ರಮಕ್ಕೆ ಬಂದ ಶಂಖ ಅವನಲ್ಲಿ ಕೇಳದೆಯೇ ನೆಲದಲ್ಲಿ ಬಿದ್ದಿದ್ದ ಹಣ್ಣನ್ನು ಎತ್ತಿಕೊಂಡು ತಿಂದ. ಶಂಖನ ವರ್ತನೆಯದು ದೋಷ ಎಂದು ತೀರ್ಮಾನಿಸಿದ ಲಿಖಿತ ಸಹೋದರ ಎನ್ನುವುದನ್ನೂ ಪರಿಗಣಿಸದೆ ಶಿಕ್ಷೆ ಕೊಡಿಸಲು ಹಂಸಧ್ವಜನ ಆಸ್ಥಾನಕ್ಕೆ ಕರೆತಂದಿದ್ದ. ಶಂಖನ ಕೈಗಳನ್ನು ಕತ್ತರಿಸಿಹಾಕುವ ಶಿಕ್ಷೆ ಪ್ರಕಟವಾಯಿತು ಹಂಸಧ್ವಜನ ಕಡೆಯಿಂದ. ಹೀಗೆ ಶಿಕ್ಷೆಗೆ ಒಳಗಾದ ಶಂಖನಿಗೆ ತಪೋಬಲದಿಂದ ಮತ್ತೆ ಕೈ ಮೂಡುವಂತೆ ಮಾಡಿದ ಲಿಖಿತ. ಹೀಗೆ ಸರಿ ತಪ್ಪುಗಳ ವಿವೇಚನೆಗಿಳಿದರೆ ಬೇರಾವುದಕ್ಕೂ ಎಡಗೊಡದ ಕಟ್ಟುನಿಟ್ಟಿನ ಚಿತ್ತದ ಅಣ್ಣತಮ್ಮಂದಿರು ಪುರೋಹಿತರೆನಿಸಿಕೊಂಡು ಹಂಸಧ್ವಜನಿಗೆ ಮಾರ್ಗದರ್ಶನ ನೀಡುತ್ತಿದ್ದರು.   ಕುದುರೆಯ ರಕ್ಷಣೆಗಾಗಿ ಚಂಪಕಾನಗರಿಯನ್ನು ಸೇರಿಕೊಂಡ ನಾನು ಪಟ್ಟಣದ ಜನರನ್ನೂ ಹಾಗೆಯೇ ಒಮ್ಮೆ ನೋಡಿದೆ. ಉಣ್ಣುವುದಕ್ಕೆ ಉಡುವುದಕ್ಕೆ ಯಾವ ಕೊರತೆಯೂ ಅಲ್ಲಿನ ಜನರಿಗಿರಲಿಲ್ಲ. ವಸ್ತçಭೂಷಣಗಳಿಂದ, ಅಲಂಕಾರ- ಸುಗಂಧ ದ್ರವ್ಯಗಳಿಂದ ಶೋಭಿಸುತ್ತಿದ್ದರು. ವೀರರು ಎನ್ನುವುದು ಅವರ ನಿಲುವಿನಲ್ಲಿಯೇ ಗೊತ್ತಾಗುವಂತಿತ್ತು.     ಹಾಗೆ ನಾನು ಈಕ್ಷಿಸುತ್ತಿದ್ದಾಗಲೇ ಡಂಗುರದ ದನಿ ಕೇಳಿಬಂತು. ನಮ್ಮ ಕುದುರೆಯನ್ನು ಕಟ್ಟಿಹಾಕುವ ನಿರ್ಧಾರ ಮಾಡಿದ್ದ ಹಂಸಧ್ವಜ. ಅವನು ನಮ್ಮ ಜೊತೆಗಿನ ಯುದ್ಧಕ್ಕೆ ಮನಸ್ಸು ಮಾಡಿದ್ದೇಕೆ ಎಂಬ ವಿಷಯವೂ ಸ್ವಲ್ಪ ಸಮಯದಲ್ಲಿಯೇ ನನ್ನ ಸೇವಕರ ಮೂಲಕ ತಿಳಿದುಬಂತು. ನಮ್ಮ ಯಾಗದ ಕುದುರೆ ಅವನ ನಗರಿಯನ್ನು ಪ್ರವೇಶಿಸಿದ ತಕ್ಷಣವೇ ತನ್ನ ಆಪ್ತ ಸಚಿವರ ಸಭೆಯನ್ನು ಕರೆದನಂತೆ. “ಪಾಂಡವರ ಯಾಗದ ಕುದುರೆಯನ್ನು ಕಟ್ಟಿ ಅರ್ಜುನನ ಜೊತೆ ಸಂಘರ್ಷಕ್ಕಿಳಿದರೆ ಸಾಕ್ಷಾತ್ ಶ್ರೀಕೃಷ್ಣ ಪರಮಾತ್ಮನೇ ನಮ್ಮ ಈ ಭೂಮಿಯಲ್ಲಿ ಪ್ರತ್ಯಕ್ಷನಾಗುತ್ತಾನೆ. ಇಷ್ಟರವರೆಗೂ ನಾವು ಯಾರೂ ಕೃಷ್ಣನನ್ನು ಕಂಡವರಲ್ಲ. ಈಗ ಕಾಣುವ ಸುಯೋಗ ಒದಗಿಬಂದಿದೆ. ಕೃಷ್ಣ ಪ್ರತ್ಯಕ್ಷನಾಗಿ ನಮ್ಮನ್ನು ವಿರೋಧಿಸಿದರೂ ಅದು ನಮಗೆ ಸಂತಸವೇ. ಅದಕ್ಕಾಗಿ ಕುದುರೆಯನ್ನು ಕಟ್ಟಿಹಾಕಬೇಕಿದೆ” ಎಂದನಂತೆ. ಅಂದರೆ, ಕೃಷ್ಣದರ್ಶನದ ಹಂಬಲದಿಂದಲೇ ಅವನು ನಮ್ಮ ಯಾಗದ ಕುದುರೆಯ ಚಲನೆಗೆ ತಡೆಯೊಡ್ಡಿದ್ದ. ರಾಜಾಜ್ಞೆ ಹೊರಟ ಮೇಲೆ ಯುದ್ಧ ನಿಶ್ಚಯ ಎನ್ನುವುದು ನನಗೆ ಸ್ಪಷ್ಟವಾಯಿತು.     ಅವನ ಜೊತೆಗೆ ಯುದ್ಧವನ್ನು ಆರಂಭಿಸುವುದಕ್ಕೂ ಮೊದಲು ಅವನ ಬಲಾಬಲಗಳನ್ನು ಅರಿತುಕೊಳ್ಳುವುದು ಬಲುಮುಖ್ಯ ಎನಿಸಿತು. ತಿಳಿದುಕೊಂಡೆ. ಎಪ್ಪತ್ತು ಮಂದಿ ದಳಪತಿಗಳಿದ್ದರು ಅವನ ಸೇನೆಯಲ್ಲಿ. ಒಬ್ಬೊಬ್ಬ ದಳಪತಿಗಳು ಎಪ್ಪತ್ತೊಂದು ಸಾವಿರ ರಥಗಳಿಗೆ, ಇಪ್ಪತ್ತೊಂದು ಸಾವಿರ ಆನೆಗಳಿಗೆ, ಲಕ್ಷ ಕುದುರೆಗಳಿಗೆ, ಲಕ್ಷ ಸೈನಿಕರಿಗೆ ಅಧಿಪತಿಗಳೆನಿಸಿಕೊಂಡಿದ್ದರು. ಹಿರಿದು ಸೈನ್ಯವನ್ನೇ ಎದುರುಹಾಕಿಕೊಳ್ಳಬೇಕಿದೆ ನಾವು ಎನ್ನುವುದು ದೃಢವಾಯಿತು ನನಗೆ.    ಹಂಸಧ್ವಜನೆAಬ ಪ್ರಜಾಪರ ರಾಜನ ಡಂಗುರವನ್ನು ಅಲ್ಲಿನ ಪ್ರಜೆಗಳು ಒಡನೆಯೇ ಪಾಲಿಸಿದರು. ಚತುರಂಗ ಬಲಗಳು ಸಿದ್ಧಗೊಂಡವು. ಯುದ್ಧ ನಡೆಯುವ ತಾಣದೆಡೆಗೆ ನಡೆದುಬರತೊಡಗಿದವು.    ನನಗೆ ವಿಸ್ಮಯ ಮೂಡಿದ್ದು ಯುದ್ಧಕ್ಕೆ ಬರುತ್ತಿದ್ದ ಸೈನಿಕರ ಮೊಗದ ಭಾವನೆಯನ್ನು ಕಂಡಾಗ. ಸಾಮಾನ್ಯವಾಗಿ ಯುದ್ಧಕ್ಕೆ ಬರುವ ಸೈನಿಕರಲ್ಲಿ ವೀರತ್ವ ಮನೆಮಾಡಿರುತ್ತದೆ. ಜೊತೆಗೆ ಅಂಜಿಕೆಯೂ ಇರುತ್ತದೆ. ಆದರೆ ಚಂಪಕಾನಗರಿಯ ಸೈನಿಕರ ಮೊಗದಲ್ಲಿ ಹರ್ಷಭಾವ ತುಂಬಿ ತುಳುಕುತ್ತಿತ್ತು. ಅದರ ಹಿಂದಿನ ಕಾರಣವನ್ನು ತಿಳಿದುಕೊಂಡೆ. ಕೃಷ್ಣ ಪ್ರತ್ಯಕ್ಷವಾಗದೆ ನನಗೆ ಸೋಲುವವನಲ್ಲ ಹಂಸಧ್ವಜ ಎನ್ನುವುದು ಸೈನಿಕರಿಗೆ ಖಚಿತವಾಗಿತ್ತು. ಕೃಷ್ಣದರ್ಶನ ತಮಗೆ ಲಭಿಸುತ್ತದೆ. ತಮ್ಮ ಜನ್ಮ ಸಾರ್ಥಕವಾಗುತ್ತದೆ ಎಂಬ ಭಕ್ತಿಭಾವದ ಶರಧಿಯಲ್ಲಿ ತೇಲುತ್ತಾ, ಸೊಗಭಾವ ಅನುಭವಿಸುತ್ತಿದ್ದರು ಆ ಸೈನಿಕರು.     ಹೀಗೆ ಯುದ್ಧರಂಗದೆಡೆಗೆ ನಡೆದುಬರುತ್ತಿದ್ದ ಸೈನಿಕರನ್ನು ನೋಡುತ್ತಿದ್ದರು ಉಪ್ಪರಿಗೆಗಳಲ್ಲಿ ನಿಂತ ಅಂಗನೆಯರು. ರಣರಂಗದ ಮೇಲಿನ ಯುದ್ಧಕ್ಕೂ ಮೊದಲು ಶಯನಗೃಹದ ಸರಸಕಾಳಗದೆಡೆಗೆ ಗಂಡನ ಮನಸ್ಸನ್ನು ಸೆಳೆದ ಅದೆಷ್ಟೋ ಕಾಮಿನಿಯರು ಯುದ್ಧ ಮಾಡುವುದಕ್ಕೆ ಬೇಕಾದ ಭರಪೂರ ಉತ್ಸಾಹವನ್ನು ಅವರಲ್ಲಿ ತುಂಬಿ ಕಳುಹಿಸಿಕೊಟ್ಟಿದ್ದರು.     ಯುದ್ಧಕ್ಕೆ ಸಿದ್ಧವಾಗಿ ನಾವೂ ನಿಂತೆವು. ಹಂಸಧ್ವಜನ ಸೇನೆಯೂ ನಿಂತಿತು. ಯಾರದೋ ಆಗಮನಕ್ಕೆ ಕಾಯುತ್ತಿರುವಂತೆ, ಅವನೇಕೆ ಇನ್ನೂ ಬಂದಿಲ್ಲ ಎಂದು ಅತ್ತಿತ್ತ ನೋಡುತ್ತಿರುವಂತೆ ಹಂಸಧ್ವಜನ ವರ್ತನೆಯಿತ್ತು. ರಣಕಹಳೆ ಇನ್ನೂ ಮೊಳಗಿರಲಿಲ್ಲ. ಯಾರಿಗಾಗಿ ಕಾಯುತ್ತಿದ್ದಾನೆ ಹಂಸಧ್ವಜ?! ನನಗೆ ಅರ್ಥವಾಗಲಿಲ್ಲ.                                                  ಡಾ. ವಿಶ್ವನಾಥ ಎನ್ ನೇರಳಕಟ್ಟೆ     

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-17 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಕುದುರೆ ಸಂಚಾರಕ್ಕೆ ಸಂಚಕಾರವಾಯಿತು ಆ ಶಿಲೆ! ಈಗ ನಮ್ಮ ಜೊತೆ ನೀಲಧ್ವಜನೂ ಸೇರಿಕೊಂಡಿದ್ದ. ತೆಂಕುದಿಕ್ಕಿನೆಡೆಗೆ ಹೆಜ್ಜೆ ಹಾಕುತ್ತಿತ್ತು ಹಯ. ಮುಂದೆ ಕಾಣುತ್ತಿದ್ದದ್ದು ವಿಂಧ್ಯಾ ಪರ್ವತ. ನಮ್ಮ ಅವಿರತ ಚಲನೆಯನ್ನು ಕಂಡೂ ಚಲನೆಗೆ ಮನಸ್ಸು ಮಾಡದೆ ದೃಢತೆಯೇ ಮೈವೆತ್ತ ಬಗೆಯಲ್ಲಿತ್ತು ಅದರ ನಿಲುವು. ಶೃಂಗವಿತ್ತು. ಕಂದರವಿತ್ತು. ಮಂಜು ಮುಸುಕಿತ್ತು. ಕಾಡು ಬೆಳೆದಿತ್ತು. ಅರಣ್ಯವನ್ನೇ ಆಶ್ರಯಿಸಿಕೊಂಡಿದ್ದ ಜನರನ್ನು ಕಂಡೆವು. ಬಗೆಬಗೆಯ ಪಕ್ಷಿಗಳು ಅಲ್ಲಿದ್ದವು. ವಿಧವಿಧದ ಪ್ರಾಣಿಸಮೂಹಗಳಿದ್ದವು. ಹಾಗೆಯೇ ಮುಂದೆ ಹೋಗುತ್ತಿದ್ದಂತೆ ಋಷಿಗಳ ಆಶ್ರಮಗಳು ಕಣ್ಣಿಗೆ ಕಂಡವು.ವಿಂಧ್ಯಾ ಪರ್ವತದೊಳಗನ್ನು ಪ್ರವೇಶಿಸಿದೆವು. ಕುದುರೆಯನ್ನು ಕೂಡಿಕೊಂಡ ನಾವು, ಕೃಷ್ಣ ಕಿಂಕರರು, ಕಾಲಿಟ್ಟ ಒಡನೆಯೇ ಅಚ್ಚರಿ ಹುಟ್ಟಿಸುವ ಪರಿವರ್ತನೆಗೀಡಾಯಿತು ಆ ಪರ್ವತ ಪ್ರದೇಶ. ದುರ್ಗಮವಾಗಿದ್ದ ದಾರಿಯದು ಸುಗಮವಾಗಿ ತೋರಿತು. ಅದುವರೆಗೂ ನೆಲೆಸಿದ್ದ ಕತ್ತಲು ತೊಲಗಿ ಬೆಳ್ಳನೆಯ ಬೆಳಕು ಮೂಡಿಬಂತು. ನಾವೆಲ್ಲರೂ ಕುದುರೆಯ ಜೊತೆಜೊತೆಗೇ ಇದ್ದೆವು. ತನ್ನ ಇಚ್ಛೆಯನುಸಾರ ಸಾಗುತ್ತಿತ್ತು ಆ ಕುದುರೆ. ಮುಂದೆ ಮುಂದೆ ಹೋದಾಗ ಎದುರಾದದ್ದು ಅತೀವ ವಿಸ್ತಾರದ ಒಂದು ಶಿಲೆ. ಒಂದು ಯೋಜನದಷ್ಟು ಅಗಲವಿದ್ದಿರಬಹುದು ಅದು. ಅದರ ಮೇಲೆಯೂ ನಡೆಯುವೆ ತಾನು ಎಂಬAತೆ ಕಾಲುಗಳನ್ನಿಟ್ಟಿತು ಕುದುರೆ.ಸ್ವಚ್ಛಂದವಾಗಿ ಸಂಚರಿಸುತ್ತಿದ್ದ ಅಶ್ವದ ಸುಗಮ ಸಂಚಾರಕ್ಕೆ ಸಂಚಕಾರ ಎದುರಾದದ್ದು ಆಗಲೇ. ಕಾಲುಗಳನ್ನು ಮೇಲಕ್ಕೆ ಎತ್ತಲಾಗದ, ಎತ್ತಿ ಮುಂದಿಡಲಾಗದ ಸ್ಥಿತಿಯಲ್ಲಿ ಕುದುರೆ ಅಲ್ಲಿಯೇ ನಿಂತುಬಿಟ್ಟಿತು. ಆ ಶಿಲೆಗೆ ಅದರ ಕಾಲುಗಳು ಅಂಟಿಕೊAಡಿವೆಯೋ ಏನೋ ಎಂಬAತೆ ತೋರುತ್ತಿತ್ತು. ನಡೆಯುವುದನ್ನೇ ಮರೆತಂತೆ ಅದು ಅಲ್ಲಿಯೇ ನಿಂತಿತು. ಪೌರ್ಣಮಿಯಂದು ಚಂದ್ರಾಕೃತಿಯ ಒಳಗೆ ಮೊಲವೊಂದು ತಟಸ್ಥವಾಗಿ ತೋರುವಂತೆ ಅಗಲಗಲವಾಗಿದ್ದ ಶಿಲೆಯ ಮೇಲೆ ಈ ಕುದುರೆ ಅಚಲವಾಗಿ ನಿಂತಿತ್ತು. ಗಾಳಿಯ ವೇಗವನ್ನೂ ಮೀರಿ ನಡೆಯುವ ಕುದುರೆ ಈ ಬಗೆಯಲ್ಲಿ ನಿಂತುದನ್ನು ಕಂಡಾಗ ಆಶ್ಚರ್ಯವಲ್ಲದೆ ಇನ್ನೇನು ತಾನೇ ಆಗಲು ಸಾಧ್ಯ!ಕುದುರೆ ಚಲಿಸಲೇಬೇಕಿತ್ತು. ಅದು ಚಲಿಸದೆಯೇ ನಾವು ಚಲಿಸುವಂತಿರಲಿಲ್ಲ. ಚಲಿಸಿದರೂ ಅದಕ್ಕೇನೇನೂ ಸಾರ್ಥಕತೆಯಿರಲಿಲ್ಲ. ಬದುಕು ಎಂದರೆ ಕೆಲವೊಮ್ಮೆ ಹೀಗೆಯೇ. ಇನ್ನೊಬ್ಬರ ಚಲನೆಯಿದ್ದರೆ ಮಾತ್ರ ನಮ್ಮ ಚಲನೆಗೆ ಅರ್ಥವಿರುತ್ತದೆ.ಜೊತೆಗಿದ್ದ ಸೇವಕರನ್ನು ಕುದುರೆಯ ಬಳಿಗೆ ಅಟ್ಟಿದೆ. ಕುದುರೆಯ ಕಾಲುಗಳನ್ನು ಬಿಡಿಸಲು ಹೇಳಿದೆ. ಅಳವು ತೋರಿದ ಆಳುಗಳು ಸೋತು ಅಳುಮೋರೆ ಮಾಡಿದರು.ಏನಾಯಿತಿದು! ಕುದುರೆಗೇಕೆ ಇಂತಹ ದುರವಸ್ಥೆ! ಅದು ಚಲಿಸದಿದ್ದರೆ ಮುಂದಿನ ತಾಣವನ್ನು ಸೇರುವ ಬಗೆ ಹೇಗೆ! ಅಶ್ವಮೇಧ ಯಾಗದ ಗತಿಯೇನಾಯಿತು! ಎಂದೆಲ್ಲಾ ಚಿಂತೆ ಮಾಡಿದ ನನಗೆ ಹೊಳೆದ ಯೋಚನೆ ಮುನಿಶಾಪದ್ದು. ಯಾರೋ ಮುನಿಗಳ ಶಾಪದ ಫಲವೇ ಇದಾಗಿರಬೇಕು ಎನಿಸಿತು. ತಿಳಿದ ಹಿರಿಯರಲ್ಲಿ ಕೇಳಿದರೆ ಒಳಿತು ಎನಿಸಿತು.“ಈ ಸ್ಥಳದಲ್ಲಿ ಸುತ್ತಮುತ್ತ ಋಷಿಗಳ ಆಶ್ರಮವಿದೆಯೇ ಎಂದು ನೋಡಿಬನ್ನಿ” ಎಂದು ಸೇವಕರನ್ನು ಕಳುಹಿಸಿಕೊಟ್ಟೆ. ತಾಣವನ್ನು ಸುತ್ತಾಡಿದ ಅವರು ಸ್ವಲ್ಪ ಸಮಯದಲ್ಲಿಯೇ ನನ್ನ ಬಳಿಬಂದು ಹತ್ತಿರದಲ್ಲಿಯೇ ಒಂದು ಆಶ್ರಮ ಇರುವುದಾಗಿ ಹೇಳಿದರು. ಪ್ರದ್ಯುಮ್ನ, ವೃಷಕೇತು, ಸಾಲ್ವಪತಿ, ಯೌವನಾಶ್ವ, ನೀಲಧ್ವಜ ಇವರೆಲ್ಲರನ್ನೂ ಜೊತೆ ಸೇರಿಸಿಕೊಂಡು ಆ ಆಶ್ರಮವಿದ್ದೆಡೆಗೆ ಹೊರಟೆ. ಹೋಗಿ ತಲುಪಿದೆ.ಶ್ರೇಷ್ಠ ಋಷಿಗಳು ಇರುವ ಪ್ರದೇಶವದು ಎನ್ನುವುದು ಆ ಪರಿಸರವನ್ನು ಈಕ್ಷಿಸಿದಾಗಲೇ ಗೊತ್ತಾಗುವಂತಿತ್ತು. ಬಗೆಬಗೆಯ ಮೃಗಗಳು ಪಕ್ಷಿಗಳು ತಮ್ಮ ವೈರತ್ವವನ್ನು ಮರೆತು ಅನುರಾಗ ಭಾವದಲ್ಲಿ ಸೊಗ ಕಂಡುಕೊಂಡಿದ್ದವು. ಅಗ್ನಿ, ವಾಯು, ಚಂದ್ರ, ವರುಣ ಮೊದಲಾದ ದೇವಾನುದೇವತೆಗಳು ಅಲ್ಲಿ ನೆಮ್ಮದಿಯಿಂದ ನೆಲೆಸಿದ್ದರು. ಅಲ್ಲಿದ್ದ ಎಲ್ಲಾ ಗಿಡ ಮರಗಳಲ್ಲಿಯೂ ಕಾಯಿ ಹಣ್ಣುಗಳ ಸಮೃದ್ಧಿ. ಬಂದವರು ಬಯಸಿದ್ದನ್ನು ಯಾವಾಗಲೂ ನೀಡಲು ಸಿದ್ಧವಾಗಿ ನಿಂತಂತೆ ತೋರುತ್ತಿತ್ತು ವೃಕ್ಷ ತರುಗಳು ನಿಂತ ಭಂಗಿ. ಸದಾಕಾಲವೂ ಸುಗ್ಗಿಯ ಕಾಲ ಎಂಬAತೆ ಪ್ರಕೃತಿ ಕಾಣಿಸುತ್ತಿತ್ತು. ಸುಖದ ಕೊರತೆಯಿದ್ದರೆ ತಾನೇ ದುಃಖ ಹುಟ್ಟುವುದು! ದುಃಖ ಉದ್ಭವಿಸಲು ಅಲ್ಲಿ ಅವಕಾಶವೇ ಇರಲಿಲ್ಲ. ಸುಖವೇ ಎಲ್ಲಾ.ಆಶ್ರಮದ ಒಂದೆಡೆಯಲ್ಲಿ ಒಂದಷ್ಟು ಮುನಿಗಳು ವೇದ ಆಗಮ ಶಾಸ್ತç ಪುರಾಣಗಳ ಪ್ರವಚನ, ಅಧ್ಯಯನದಲ್ಲಿ ನಿರತರಾಗಿದ್ದರು. ಇನ್ನೊಂದಷ್ಟು ಋಷಿಗಳು ಜಪ ತಪಸ್ಸನ್ನು ಗೈಯ್ಯುತ್ತಾ, ಪರಮಾತ್ಮ ಸ್ಮರಣೆಯಲ್ಲಿ ಪವಿತ್ರಾನುಭವ ಪಡೆಯುತ್ತಿದ್ದರು. ಸೂರ್ಯ ನಮಸ್ಕಾರ, ಹರಿಹರ ಸಮಾರಾಧನೆ, ಯೋಗ ಸಾಧನೆ ಮೊದಲಾದವು ನಡೆಯುತ್ತಿದ್ದವು. ಅತಿಥಿಗಳನ್ನು ಆದರದಿಂದ ಸತ್ಕರಿಸುವುದರಲ್ಲಿ ತಲ್ಲೀನರಾಗಿದ್ದರು ಕೆಲವರು.ಆಗಲೇ ನನ್ನ ಕಣ್ಣನ್ನು ಕಾಡಿದ್ದು ತೇಜೋಮಯವಾದ ಒಂದು ದಿವ್ಯಕಾಯ. ಶಾಂತಭಾವವೇ ಮೂರ್ತರೂಪ ಪಡೆದಂತೆ ಕುಳಿತಿದ್ದರು ಮುನಿಶ್ರೇಷ್ಠರೆನಿಸಿಕೊಂಡ ಸೌಭರಿ ಮುನಿಗಳು. ಅಗ್ನಿಯಂತಹ ಪ್ರವರ್ಧಮಾನವಾದ ಬೆಳಕಿನಿಂದ ಕಂಗೊಳಿಸುತ್ತಿದ್ದರು. ಆದರೆ ಸುಡುವವರಲ್ಲ. ಸೂರ್ಯನಂತೆ ಕಾಂತಿಮಯವಾಗಿದ್ದರು. ಆದರೆ ಮೈಸುಡುವ ಬಿಸಿ ಅವರದ್ದಲ್ಲ. ಜಟೆಯನ್ನು ಹೊತ್ತಿದ್ದವರು ಶಿವನಂತೆ ತೋರುತ್ತಿದ್ದರು. ಆದರೆ ನಂಜಿನ ಕಂಠ ಅವರದ್ದಲ್ಲ.ಸಾಷ್ಟಾಂಗ ನಮಸ್ಕರಿಸಿದೆ ಅವರಿಗೆ. ಅಶ್ವಮೇಧ ಯಾಗದ ವಿಚಾರ ಅರುಹಿದೆ. ಈಗ ಕುದುರೆ ಶಿಲೆಯ ಮೇಲೆ ಕಾಲಿಟ್ಟು ತಟಸ್ಥವಾದ ವಿಷಯ ತಿಳಿಸಿದೆ. “ನಿಮ್ಮ ಮಾರ್ಗದರ್ಶನ ಬೇಕು” ಎಂದೆ.ನನ್ನನ್ನು ಲೇವಡಿ ಮಾಡುವ ನಗು ಅವರ ಮೊಗದಲ್ಲಿ ಮೂಡಿತು. ಈ ಪರಿಯ ನಗುವದೇತಕೆ! ಅರ್ಥವಾಗಲಿಲ್ಲ. ಅವರ ಮುಖವನ್ನೇ ನೋಡಿದೆ. ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ-15 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಕುಟುಂಬ ಕಲಹವದು ಕುದುರೆ ಕದನದಿಂದ… ಕುಟುಂಬ ಕಲಹವದು ಕುದುರೆ ಕದನದಿಂದ… ಸೂರ್ಯನಿನ್ನೂ ಉದಯಿಸಿರಲಿಲ್ಲ. ನನ್ನೊಳಗೆ ಕದನ ಸೆಳೆತ ಉದಯಿಸಿಯಾಗಿತ್ತು. ಮಾಹಿಷ್ಮತಿಯ ಸೇನೆಗೆ ಸಾಧ್ಯವಾದಷ್ಟು ಶೀಘ್ರ ಸೋಲುಣಿಸುತ್ತೇನೆ ಎಂಬ ತವಕ ತಲೆಯೇರಿ ಕುಳಿತಿತ್ತು. ನೇಸರನ ನಸುಬೆಳಕು ಮಾಹಿಷ್ಮತಿಯ ಬುವಿನಾರಿಯನ್ನು ಸ್ಪರ್ಶಿಸುವ ಮಧುರ ಗಳಿಗೆಗೂ ಮೊದಲೇ ಕುದುರೆಯನ್ನು ಕಟ್ಟಿಹಾಕಿದ್ದ ಕಟ್ಟಾಳುಗಳನ್ನು ಕದನದಲ್ಲಿ ಕೊನೆಗಾಣಿಸುವ ರುಧಿರ ಗಳಿಗೆ ನನ್ನನ್ನಪ್ಪಿತು.ನಮ್ಮ ಚತುರಂಗ ಬಲ ಮಾಹಿಷ್ಮತಿ ಪಟ್ಟಣಕ್ಕೆ ಮುತ್ತಿಗೆ ಹಾಕಿತು. ಎರಡೂ ಪಡೆಗಳ ಮಧ್ಯೆ ಬಿಡುವಿರದ, ಎಡೆಯಿರದ ಕಾದಾಟ. ಕಂಡ ಕಂಡ ಕಡೆಯಲ್ಲೆಲ್ಲಾ ಬಾಣಗಳ ಆರ್ಭಟ. ಆನೆ ಕುದುರೆ ರಥಗಳ ಎಡೆಬಿಡದ ಓಡಾಟ. ಯಮರಾಜನಿಗದೋ ಸೈನಿಕರ ಸಾವಿನ ರಸದೂಟ.ನಾನಂತೂ ಯಾವುದಕ್ಕೂ ಅಳುಕದವನಾಗಿದ್ದೆ. ಇಂದಂತೂ ಜಯ ನಮ್ಮ ಸೈನ್ಯಕ್ಕೆ ಒದಗಲೇಬೇಕು ಎಂಬ ಹಠ ನನ್ನೊಳಗಿತ್ತು. ನನ್ನ ಈ ಬಗೆಯ ವೀರಾವೇಶ ನೀಲಧ್ವಜನ ಅರಿವಿಗೂ ಬಂದಿತ್ತು. ನನ್ನ ರಭಸವನ್ನು ತಾಳಿಕೊಳ್ಳುವ ತ್ರಾಣವದು ಅವನ ಸೇನೆಗೆ ಅದೆಲ್ಲಿತ್ತು!ಸೈನಿಕರು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಲೇ ಇದ್ದರು. ರಥಗಳು ಮುರಿದವು. ಗಜಶಿರಗಳು ಒಡೆದವು. ಕುದುರೆಗಳು ಧರಾಶಾಯಿಯಾದವು.ಅನಾಥಪ್ರಜ್ಞೆ ನೀಲಧ್ವಜನನ್ನು ಬಂದು ಅಪ್ಪಿದ್ದು ಆ ಗಳಿಗೆಯಲ್ಲಿ, ಸಹೋದರ ಸುತರನ್ನು ಕಳೆದುಕೊಂಡ ಹೀನ ಕ್ಷಣದಲ್ಲಿ. ಕುಗ್ಗಿಹೋದ ನೀಲಧ್ವಜ. ಹಿಂದಣ ಯುದ್ದದಲ್ಲಿ ಕಾಣದ ಹತಾಶೆ ಅವನೊಳಗೆ. ಯುದ್ಧವೇ ಬೇಡ ಎಂಬ ವೈರಾಗ್ಯ ಆತನಲ್ಲಿ ಮೂಡಿದಂತೆನಿಸಿತು ನನಗೆ. ಕೆಲವೊಮ್ಮೆ ಹಾಗೆಯೇ. ಬಂಧುಗಳಿರುವಾಗ, ನಮ್ಮವರೆನಿಸಿಕೊಂಡವರು ನಮ್ಮ ಜೊತೆಗೇ ಇರುವಾಗ ಅವರ ಮೌಲ್ಯ ನಮ್ಮರಿವಿಗೆ ದಕ್ಕುವುದಿಲ್ಲ. ಆದರೆ ಅವರನ್ನು ಕಳೆದುಕೊಂಡಾಗ ಇಡಿಯ ಬದುಕೇ ಪೂರ್ಣಶೂನ್ಯವಾಗಿ ನಮ್ಮನ್ನು ಆವರಿಸಿ ಕಾಡತೊಡಗುತ್ತದೆ. ಅದೇ ಬಗೆಯ ಭಾವತೀವ್ರತೆ ನೀಲಧ್ವಜನಲ್ಲಿ ಮೂಡಿಬಂತು. ಅದು ನನ್ನ ತಿಳಿವಳಿಕೆಗೆ ನಿಲುಕಿತು.ಇದ್ದಕ್ಕಿದ್ದಂತೆಯೇ ರೋಷಾತಪ್ತನಾದ ಮಾಹಿಷ್ಮತಿಯ ಅರಸ. ಮಡಿದ ತನುಜ ಅನುಜರ ಸಾವಿಗೆ ಸೇಡು ತೀರಿಸಿಕೊಳ್ಳುವ ಕೆಚ್ಚು ಅವನಲ್ಲಿ ಮೂಡಿದ್ದಿರಬೇಕು. ಕೆರಳಿನಿಂತ. ಕಿಡಿಕಿಡಿಯಾದ. ವಿಚಿತ್ರವಾದ ಆವೇಶದಲ್ಲಿ ನನ್ನೊಡನೆ ಹೋರಾಟಕ್ಕಿಳಿದ. ನನ್ನಲ್ಲಿ ಈಗಲೂ ಕದನದ ಉಮೇದು ಅಳಿದಿರಲಿಲ್ಲ. ಬಾಣವನ್ನು ನಿರಂತರವಾಗಿ ಪ್ರಯೋಗಿಸಿದೆ. ಅದೊಂದು ಕ್ಷಣದಲ್ಲಿ ನೀಲಧ್ವಜ ಪೂರ್ಣಪ್ರಜ್ಞೆಯಿಂದ ವಿಮುಕ್ತನಾದ. ಮೂರ್ಛೆ ಹೋದ. ರಥದಲ್ಲಿಯೇ ಕುಸಿದು ಕೂತ. ಅವನ ಸಾರಥಿಗೆ ದೊರೆಯ ಸ್ಥಿತಿ ಮನದಟ್ಟಾಯಿತು. ರಥವನ್ನಲ್ಲಿಂದ ಓಡಿಸಿ ಅರಮನೆಯ ಬಳಿಗೆ ಒಯ್ದ.ರಾಜನೇ ಇಲ್ಲವಾದ ಮಾಹಿಷ್ಮತಿ ಸೇನೆಯಲ್ಲಿ ಗೊಂದಲ, ತಳಮಳ. ಒಡೆಯನಿಲ್ಲವಾದ ಸೈನಿಕರು ದೆಸೆದೆಸೆಗೆ ಓಡಿದರು. ಅವರ ಕಳವಳದ ಬೊಬ್ಬೆಯದು ನಮ್ಮ ಗೆಲುವನ್ನು ಸಾರಿಹೇಳುವ ವಿಜಯಘೋಷವಾಯಿತು. ನಾವು ಗೆದ್ದೆವು.ಅರಮನೆಯಲ್ಲಿ ಎಚ್ಚರಗೊಂಡ ನೀಲಧ್ವಜನಿಗೆ ಸೋಲಿನ ವಿಚಾರ ತಿಳಿಯಿತು. ಅವಮಾನವಾಯಿತು. ಮೊದಲೇ ಸಂಧಾನದ ಮೂಲಕ ಗೌರವಯುತವಾಗಿ ಕುದುರೆಯನ್ನು ಬಿಟ್ಟುಕೊಡುವ ನಿರ್ಧಾರ ಮಾಡಿದವನು ತಾನು. ಆದರೆ ಆ ಬಳಿಕ ಕದನಕ್ಕಿಳಿದು ಉಳಿಸಿಕೊಂಡ ಮರ್ಯಾದೆಯನ್ನು ಮಣ್ಣುಪಾಲು ಮಾಡಿಕೊಂಡೆ ಎಂಬ ಅಪಮಾನಸುಳಿ ಅವನನ್ನು ಕೀಳರಿಮೆ ಕೊಳದಲ್ಲಿ ಮುಳುಗಿಸಿತು. ಅದಕ್ಕೆ ಕಾರಣಳಾದ ರಾಣಿ ಜ್ವಾಲೆಯ ಮೇಲೆ ಕೋಪ ಉಕ್ಕಿಬಂತು. “ನಿನ್ನೆಯೇ ಕುದುರೆಯನ್ನು ಪಾರ್ಥನಿಗೆ ಬಿಟ್ಟುಕೊಡುವ ನಿರ್ಣಯ ತಳೆದವನು ನಾನು. ಬಿಡಬೇಡ ಎಂಬ ತಪ್ಪು ಸಲಹೆ ಕೊಟ್ಟು ನನ್ನನ್ನು ಹಾಳುಮಾಡಿದೆಯಲ್ಲಾ! ನಿನ್ನ ಮಾತು ಕೇಳಿ ನನ್ನವರನ್ನು ಕಳೆದುಕೊಂಡೆ. ದುಷ್ಟೆ ನೀನು. ನಿಕೃಷ್ಟೆ ನೀನು. ಅತಿಕಷ್ಟ ಕೊಟ್ಟೆಯೆನಗೆ” ಎಂದು ಅವಳನ್ನು ಪರಿಪರಿಯಾಗಿ ಜರಿದ. “ನನ್ನ ಅರಮನೆಯಲ್ಲಿ ನೀನು ಇರಕೂಡದು” ಎಂದು ಆಜ್ಞಾಪಿಸಿದ.ಹೀಗೆ ಜ್ವಾಲೆಯೊಂದಿಗೆ ಜಗಳವಾಡಿ ಅವಳೊಂದಿಗಿನ ಬಂಧವನ್ನು ಮುರಿದ ನೀಲಧ್ವಜ ಬಂದದ್ದು ನನ್ನ ಬಳಿಗೆ. ನಮ್ಮ ಗೆಲುವನ್ನವನು ಪೂರ್ಣ ಮನಸ್ಸಿನಿಂದ ಒಪ್ಪಿಕೊಂಡ. ಅಖಿಲ ವಸ್ತುಗಳನ್ನು ಸಮರ್ಪಿಸಿದ. ಅಶ್ವಮೇಧ ಯಾಗಕ್ಕಾಗಿ ಸಂಪದವನ್ನಿತ್ತ. ಬಗೆಬಗೆಯ ಧವಸಧಾನ್ಯಗಳನ್ನು ಬಂಡಿಬಂಡಿಗಳಲ್ಲಿ ತುಂಬಿಸಿ ತರಿಸಿ ಎದುರಿಗಿರಿಸಿದ. ಪಾಂಡವ ಸಾರ್ವಭೌಮತ್ವವನ್ನವನು ಸ್ವೀಕರಿಸಿದ. ಒಲವಿನಿಂದ ನನ್ನ ಬಳಿಗೆ ಬಂದು ನಮ್ಮದು ನಿಜ ಗೆಲುವು ಎನ್ನುವುದನ್ನು ಮನ್ನಿಸಿದ.ನನಗಂತೂ ಸಂತಸವಾಗಿತ್ತು. ಅಗ್ನಿಯ ಸಂಧಾನಕ್ಕೆ ಅನುಸಾರವಾಗಿ ಅವನು ಕುದುರೆಯನ್ನು ಬಿಟ್ಟು ಕಳುಹಿಸಿಕೊಟ್ಟಿದ್ದರೆ ಈ ಬಗೆಯ ಸಂಭ್ರಮ ಖಂಡಿತವಾಗಿಯೂ ನನ್ನದಾಗುತ್ತಿರಲಿಲ್ಲ. ಶಕ್ತಿಯನ್ನು ಪ್ರದರ್ಶಿಸಿ, ನೋವು ಬೇಗೆಗಳನ್ನು ದರ್ಶಿಸಿ ಪಡೆದ ಗೆಲುವಾದ್ದರಿಂದ ಇದಕ್ಕೆ ಮಹತ್ವ ಅಧಿಕ ಎನಿಸಿತು.ಆದರದಿಂದ ನೀಲಧ್ವಜನಿಗೆ ನಮಿಸಿದೆ. ಅಲ್ಲಿಂದ ಹೊರಡುತ್ತೇನೆಂದೆ. ಅವನೂ ನಮ್ಮ ಜೊತೆಗೆ ಬರುವುದಕ್ಕೆ ಸಿದ್ಧನಿದ್ದ. ಅವನನ್ನೂ ಜೊತೆಮಾಡಿಕೊಂಡು ನಾವು ಮುಂದೆ ಮುಂದೆ ಹೋದೆವು. ಹಯವದು ಚಲಿಸುತ್ತಿತ್ತು ನಮ್ಮ ಮುಂದೆ. ದಕ್ಷಿಣ ದಿಶೆಯೆಡೆಗೆ ಮುಖಮಾಡಿ ಹೊರಟಿತು ಆ ಕುದುರೆ.ನೀಲಧ್ವಜನಿಂದ ತಿರಸ್ಕೃತಳಾದ ಜ್ವಾಲೆಯೊಡಲಲ್ಲಿ ಅವಮಾನದ ಜ್ವಾಲೆಯೆದ್ದಿತ್ತು. ಇಷ್ಟೊಂದು ಅವಮಾನ ಮಾಡಿಸಿಕೊಂಡು ಇಲ್ಲಿರುವುದಾದರೂ ಏತಕ್ಕೆ ಎಂಬ ಭಾವ ತಳೆದ ಅವಳು ಅರಮನೆಯನ್ನು ಆ ಕ್ಷಣವೇ ತೊರೆದಳು. ಉನ್ಮುಖ ಹೆಸರಿನ ಸಹೋದರನಿದ್ದ ಅವಳಿಗೆ. ಅವನ ಮನೆಗೆ ಹೋದಳು.ಅಕ್ಕನನ್ನು ಅಕ್ಕರೆಯಿಂದ ಆದರಿಸಿದ ಉನ್ಮುಖ. ಅಕ್ಕನ ಆಕಸ್ಮಿಕ ಆಗಮನದ ಕಾರಣವೇನೆಂದು ಕೇಳಿದ. ನನ್ನೆದುರಿಗೆ ಕದನದಲ್ಲಿ ಮಕ್ಕಳನ್ನು ಕಳೆದುಕೊಂಡುದನ್ನು ತಮ್ಮನಿಗೆ ತಿಳಿಸಿದಳು. ಪತಿ ನೀಲಧ್ವಜ ಗೆಲುವಿಗೆ ಅಧಿಪತಿಯಾಗದಿರುವುದನ್ನು ನೋವಿನಿಂದ ಉಸುರಿದಳು. ತನ್ನ ಕುಟುಂಬದ ಹೀನಸ್ಥಿತಿಗೆ ಕಾರಣನಾದ ಅರ್ಜುನನ ಶಿರವನ್ನು ಕತ್ತರಿಸಿಹಾಕಬೇಕು ನೀನು ಎಂದು ಮನವಿ ಮಾಡಿಕೊಂಡಳು ತಮ್ಮನನ್ನು.ತನ್ನ ರೋಷದ ನುಡಿಗೆ ಅವನು ಸ್ಪಂದಿಸಿಯಾನು ಎಂಬ ನಿರೀಕ್ಷೆಯಿತ್ತು ಅವಳಲ್ಲಿ. ನಿರುಕಿಸಿದಳು ಜ್ವಾಲೆ ಉನ್ಮುಖನ ಮೊಗವನ್ನು “ನರನ ಶಿರವನ್ನು ನಾನು ತಂದೊಪ್ಪಿಸುವೆ ನಿನಗೆ” ಎಂಬ ಮಾತು ಅವನಿಂದ ಹೊರಹೊಮ್ಮುತ್ತದೆಂಬ ಭಾವದಲ್ಲಿ… ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-14 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅನಲ ಅಳಿಯನಾದ ಬಗೆ ಹೀಗೆ ಅನಲ ಅಳಿಯನಾದ ಬಗೆ ಹೀಗೆ‘ಮೇಧಾಶ್ವವನ್ನು ಯಾವ ಕಾರಣಕ್ಕೂ ಬಿಡಲಾರೆ. ನನ್ನ ಜೊತೆಗೆ ಹೋರಾಟ ಮಾಡಿಯೇ ಕುದುರೆಯನ್ನುಕರೆದೊಯ್ಯಬೇಕು ನೀನು. ಇದು ಖಚಿತ’ ಎಂಬ ನೀಲಧ್ವಜ ಉದ್ಘೋಷಿತ ಸಂದೇಶ ನನ್ನನ್ನು ಬಂದು ತಲುಪಿತು.ನನಗಾದದ್ದು ಅಚ್ಚರಿ.ಅಗ್ನಿಯ ಮಾತಿನಂತೆ ಯುದ್ಧವನ್ನು ನಿಲ್ಲಿಸಿದ್ದವನು ನೀಲಧ್ವಜ. ಕುದುರೆಯನ್ನವನು ಬಿಟ್ಟುಕೊಡುತ್ತಾನೆಎನ್ನುವುದು ನನಗಿದ್ದ ಸರಳ ಸಹಜ ಅಂದಾಜು. ಆದರೆ ಇದ್ದಕ್ಕಿದ್ದಂತೆಯೇ ಅವನು ಮನಸ್ಸು ಬದಲಾಯಿಸಿದ್ದ.ಮಾಹಿಷ್ಮತಿಯರಸನ ಮನ ತಕ್ಷಣ ಬದಲಾದುದಕೆ ಏನದು ಕಾರಣ ಎಂಬ ಮೂಲ ಮರ್ಮಲತೆಯನ್ನು ಹುಡುಕಿಹೊರಟನನಗೆ ತಿಳಿದುಬಂದದ್ದು ಜ್ವಾಲೆಯೆಂಬವಳ ಮಾತು.ಜ್ವಾಲೆ, ನೀಲಧ್ವಜನ ಪ್ರೀತಿಯ ರಾಣಿ. ಅರ್ಜುನನ ಕುದುರೆಯನ್ನು ಬಿಟ್ಟು ಕಳುಹಿಸಬೇಕು ಎಂದು ಮಂತ್ರಿಗಳಲ್ಲಿನೀಲಧ್ವಜ ಮಾತನಾಡುತ್ತಿದ್ದುದು ಅವಳಿಗೆ ತಿಳಿಯಿತಂತೆ. ಅವಳಿಗದು ಮೆಚ್ಚುಗೆಯಾಗಲಿಲ್ಲ. “ಹೆದರಿಕೆ ಅದೇತಕೆ!ಬಿಡದಿರು ಕುದುರೆಯನ್ನು. ನಿಲ್ಲಿಸದಿರು ಯುದ್ಧವನ್ನು. ಅರ್ಜುನನಿಗೆದುರಾಗಿ ನಿಂತು ಕದನವ ಮಾಡು” ಎಂಬ ಸಲಹೆಇತ್ತಳಂತೆ ತನ್ನೊಡೆಯನಿಗೆ. ಅದಾವ ಮಾಯೆಯಲ್ಲಿ ಅವಳ ಮಾತಿನ ಸುಳಿಗೆ ಸಿಲುಕಿದನೋ ಆ ನೀಲಧ್ವಜ! ಹಯವಬಿಟ್ಟುಕೊಡದಿರುವ ಛಲವ ಹೊತ್ತುಮೆರೆಯುತಿಹ ಸಂದೇಶವ ನನಗೆ ಕಳುಹಿಸಿಕೊಟ್ಟ.ಜ್ವಾಲೆಯ ಮನೋಭೂಮಿಕೆ ಹೊಸದೆನಿಸಿತು ನನಗೆ. ಸಾಮಾನ್ಯವಾಗಿ ಕ್ಷಾತ್ರಪುರುಷರು ಕಲಹದೆಡೆಗೆಕುತೂಹಲಿಗಳಾಗಿರುತ್ತಾರೆ. ಅವರ ಆಸಕ್ತಿಯದು ಸಹಜ. ಹೆಂಗಳೆಯರು ಯುದ್ಧ ಬೇಡವೆಂದು ಗಂಡಂದಿರನ್ನು ತಡೆಯುವಪ್ರಯತ್ನ ಮಾಡುತ್ತಾರೆ. ಕದನವಾದರೆ ತನ್ನವನಿಗೆ ಅದೇನಾದೀತೋ ಎಂಬ ಆತಂಕ ಅವರಲ್ಲಿರುತ್ತದೆ. ಆದರೆ ಈ ಜ್ವಾಲೆಯುದ್ಧದಿಂದ ವಿಮುಖನಾಗಿ ಶಾಂತಿಯೆಡೆಗೆ ಮನಸ್ಸು ಮಾಡಿದ ರಮಣನ ಮನಸ್ಸನ್ನು ಮತ್ತೆ ಕ್ರಾಂತಿಯೆಡೆಗೆ ಸೆಳೆಯುವಮನಸ್ಸು ಮಾಡಿದ್ದಳು. ರಮಣನ ಪ್ರಾಣದೆಡೆಗೆ ಅವಳಿಗೆ ಮಮಕಾರ ಭಾವ ಇರಲಿಲ್ಲವೇ?! ಗೊತ್ತಿಲ್ಲ.ಅವಳಿಗೆ ನನ್ನ ಮೇಲೇನಾದರೂ ದ್ವೇಷವಿತ್ತೇ! ನನಗೆ ಅರಿವಿಲ್ಲ. ನಾನ್ಯಾವತ್ತೂ ಅವಳಲ್ಲಿ ಮಾತನಾಡಿದ್ದಿಲ್ಲ.ಜಗಳ ಆಡಿದ್ದಿಲ್ಲ. ಹಾಗಿರುವಾಗ ನನ್ನ ಮೇಲೆ ಅವಳಿಗೆ ದ್ವೇಷ ಇರಲು ಸಾಧ್ಯವೇ! ತಿಳಿಯಲಿಲ್ಲ.ಇನ್ನೊಂದು ಬಗೆಯ ಯೋಚನೆ ಮೂಡಿತು ನನಗೆ ಆ ಕ್ಷಣದಲ್ಲಿ. ಯುದ್ಧ ಸಂಧಾನಕಾರನಾಗಿ ನಡೆದುಕೊಂಡವನುಅಗ್ನಿ. ಅವನು ನೀಲಧ್ವಜನ ಅಳಿಯ. ಮಾಹಿಷ್ಮತಿಯಲ್ಲಿಯೇ ನೆಲೆನಿಂತು ಆ ನಗರದ ಅಳಿಯನಂತೆ ಗುರುತಿಸಿಕೊಂಡವನು.ಮಗಳನ್ನು ಮದುವೆಯಾದ ಅಳಿಯನ ಮೇಲೇನಾದರೂ ಕೋಪ ಇರಬಹುದೇ ಜ್ವಾಲೆಗೆ?! ಎಂಬ ಆಲೋಚನೆ ನನ್ನಲ್ಲಿಉದಯಿಸಿತು.ಈ ಬಗೆಯ ಚಿಂತನೆ ನನ್ನಲ್ಲಿ ಮೂಡುವುದಕ್ಕೆ ಸಕಾರಣವಿತ್ತು. ನೀಲಧ್ವಜನ ಮಗಳು ಅಗ್ನಿಯನ್ನು ಪ್ರೀತಿಸಿಮದುವೆ ಆದವಳು.ನೀಲಧ್ವಜ ಜ್ವಾಲೆಯರ ಮಗಳು ಅಪ್ರತಿಮ ರೂಪವತಿಯಾಗಿದ್ದಳು. ಗುಣಶೀಲೆ ಎನಿಸಿಕೊಂಡಿದ್ದಳು. ಹೀಗಿದ್ದಚೆಲುವೆ ಯೌವ್ವನಾವಸ್ಥೆಯನ್ನು ತಲುಪಿದಾಗ ನೀಲಧ್ವಜನಲ್ಲಿ ಮಗಳ ಮದುವೆಯ ಯೋಚನೆ ಮೂಡಿತು. ಮೂರೂ ಲೋಕಗಳಲ್ಲಿ ಖ್ಯಾತಿ ಗಳಿಸಿದ, ವೀರರೆಂದು ಹೆಸರು ಪಡೆದ, ಸಿರಿವಂತರೆAದು ಗುರುತಿಸಿಕೊಂಡ ಪುರುಷರ ಚಿತ್ರವನ್ನುಅವಳೆದುರು ಹಿಡಿದು, “ಇವರಲ್ಲಿ ನಿನ್ನ ಪತಿಯಾಗುವವರು ಯಾರೆಂದು ನೀನೇ ಹೇಳು ಮುದ್ದು ಮಗಳೇ” ಎಂದ.ತಂದೆಯ ಮಾತಿನಂತೆ ಚಿತ್ರಪಟದೆಡೆಗೆ ಹರಿಣಿನೇತ್ರವನ್ನು ಹರಿಸಿದ ಸುಂದರಿಗೆ ಚೆಲುವನಾಗಿ ಕಂಡದ್ದು ಅಗ್ನಿದೇವ.ತಂದೆ ತಂದು ಕೈಗಿಟ್ಟಿದ್ದ ಚಿತ್ರಪಟದಲ್ಲಿ ಅಗ್ನಿ ಗಂಧರ್ವ ಯಕ್ಷ ದೇವತೆಗಳನ್ನು ತನ್ನ ಚೆಲುವಿನಿಂದಲೇ ಅಪಹಾಸ್ಯ ಮಾಡಿನಗುತ್ತಿದ್ದ. ಸಕಲ ಭೂಮಂಡಲದ ರಾಜಾಧಿರಾಜರನ್ನು ಮೀರುವಂತೆ ತೋರುತ್ತಿದ್ದ. ಮನ್ಮಥರಾಜ ವಸಂತರಾಜರನ್ನೂಮೀರಿದ ಸೌಂದರ್ಯವನ್ನು ಆವಾಹಿಸಿಕೊಂಡು ಕುಳಿತಿದ್ದ. ತಕ್ಷಣವೇ ನೀಲಧ್ವಜಕುವರಿಯ ಚಿತ್ತ ಚಿತ್ರಪಟದಲ್ಲಿದ್ದಅಗ್ನಿದೇವನ ಹೃದಯವನ್ನು ಕೂಡಿಕೊಂಡಿತು. “ಎನಗಿನ್ನು ಇವನೇ ರಮಣ” ಎಂದಳು ತಂದೆಯಲ್ಲಿ, ನಸುನಾಚಿಕೆತೋರುತ್ತ.ನಡೆಯಲಾರದ್ದರೆಡೆಗೆ, ಸಾಧ್ಯವಾಗದ್ದರ ಕಡೆಗೆ ಮಗಳು ಮನಸ್ಸು ಹರಿಸಿದ್ದಾಳೆ ಎನಿಸಿತು ನೀಲಧ್ವಜನಿಗೆ.ಅದನ್ನೇ ತನುಜೆಗೆ ಹೇಳಿದ. ತಂದೆಯ ಮಾತು ಅಪಥ್ಯವಾಯಿತು ಆ ಚೆಲುವೆಗೆ. ಜನಕನನ್ನು ಜರಿದವಳು ಅರಮನೆಯನ್ನುತೊರೆದುಹೋದಳು.ತಾರುಣ್ಯವೆಂದರೆ ಹಾಗೆಯೇ. ಹೃದಯ ಏನನ್ನು ಬಯಸುತ್ತದೆಯೋ ಅದು ದಕ್ಕದಾದಾಗ ನಿರಾಸೆ ಮೂಡುತ್ತದೆ;ಹಠ ಕುಡಿಯೊಡೆಯುತ್ತದೆ. ಪಡೆಯದಿರಲಾರೆ ಮನ ಬಯಸಿದ ಅನಲನನ್ನು ಎಂದುಕೊಂಡಳು ನೀಲಧ್ವಜಸುತೆ.ಅರಮನೆಯನ್ನು ತೊರೆದವಳು ನರ್ಮದಾ ತೊರೆಯ ತೀರವನ್ನು ಸೇರಿದಳು, ತೀರದಾಸೆಯನ್ನು ಎದೆಯಲ್ಲಿಹೊತ್ತುಕೊಂಡು. ನಾನಾ ವಿಧಗಳಲ್ಲಿ ಅಗ್ನಿದೇವನನ್ನು ಅರ್ಚಿಸಿದಳು.ಅವಳ ಪೂಜೆಯ ಸೊಗಸದು ಅಗ್ನಿಗೆ ಮೆಚ್ಚುಗೆಯಾಯಿತು. ಅವಳನ್ನು ಮದುವೆಯಾಗುವ ಇಚ್ಛೆ ಅವನಲ್ಲಿಯೂಮೂಡಿತು.ಬ್ರಾಹ್ಮಣ ವೇಷವನ್ನು ತಾಳಿದ ಅನಲ ಕಾಣಿಸಿಕೊಂಡದ್ದು ನೀಲಧ್ವಜನ ಆಸ್ಥಾನದಲ್ಲಿ. ಸಭೆಗೆ ಬಂದಭೂಸುರನನ್ನು ಸ್ವಾಗತಿಸಿದ ನೀಲಧ್ವಜ. ಬಂದ ಕಾರಣವನ್ನು ನಯವಾಗಿ ಕೇಳಿದ. “ಕನ್ಯೆಯನ್ನು ಬಯಸಿ ಬಂದಿದ್ದೇನೆ.ನಿನ್ನ ಸುತೆಯನ್ನು ಕೊಡು ಎನಗೆ. ರಾಜನಾಗಿರುವ ನೀನು ಬ್ರಾಹ್ಮಣನಾದ ನನಗೆ ಮಗಳನ್ನು ಮದುವೆಮಾಡಿಕೊಡಬಹುದು. ಶಾಸ್ತçದ ಅಭ್ಯಂತರವಿಲ್ಲ” ಎಂದ ಬ್ರಾಹ್ಮಣ ವೇಷದ ಅನಲ.ಮಗಳು ಅಗ್ನಿಯನ್ನು ಮದುವೆಯಾಗುವ ಮನಸ್ಸು ಮಾಡಿದ್ದಾಳೆ. ಏನು ಮಾಡಲಿ! ಎಂದು ಅಸಹಾಯಕತೆತೋರಿದ ನೀಲಧ್ವಜ. ತಕ್ಷಣವೇ ತಾನೇ ಅಗ್ನಿ ಎಂಬ ಸತ್ಯವನ್ನು ಅರುಹಿದ ಅನಲ.ನೀಲಧ್ವಜನ ಆಪ್ತಮಂತ್ರಿ ಪರೀಕ್ಷಿಸಿದ. ಅವನು ಅಗ್ನಿಯೆನ್ನುವುದು ಸಾಬೀತಾಯಿತು. ನೀಲಧ್ವಜನ ಸತಿಯೂಪರೀಕ್ಷೆ ಮಾಡಿದಳು. ವಿಪ್ರ ವೇಷವದು ನಕಲು. ನಿಜವಾಗಿಯೂ ಅಗ್ನಿಯವನು ಎನ್ನುವುದವರ ಅರಿವಿಗೆ ಬಂತು. ನೀಲಧ್ವಜಅಗ್ನಿಯಲ್ಲಿ “ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ಇದೇ ನಗರದಲ್ಲಿ ಇರಬೇಕು” ಎಂದ. ಅಗ್ನಿಒಪ್ಪಿದ. ಅನಲ ನೀಲಧ್ವಜನ ಅಳಿಯ ಎನಿಸಿಕೊಂಡ.ಹೀಗೆ ಅಳಿಯನಾದ ಅಗ್ನಿಯ ಮೇಲೆ ರಾಣಿ ಜ್ವಾಲೆಗೆ ಏನಾದರೂ ಅಸಮಾಧಾನ ಇತ್ತೋ ಏನೋ! ಈಕಾರಣದಿಂದಲೇ ಅವನು ಏರ್ಪಡಿಸಿದ ಸಂಧಾನವದು ಅವಳಿಗೆ ಸಹ್ಯವಾಗಲಿಲ್ಲವೋ ಏನೋ! ನೀಲಧ್ವಜ ಸೇನೆಯೊಡನೆ ಮತ್ತೆ ಕದನ ಹೂಡುವುದೀಗ ಅನಿವಾರ್ಯವಾಗಿಬಿಟ್ಟಿತ್ತು ನಮಗೆ. ಕುದುರೆಯಕಾಲುಗಳು ಮಾಹಿಷ್ಮತಿ ನಗರವನ್ನು ತೊರೆದು ಮುಂದೆ ಚಲಿಸಬೇಕಾದರೆ ನಮ್ಮ ಕಾಲುಗಳು ಕದನರಂಗಕ್ಕಿಳಿಯಬೇಕಿತ್ತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-13 ಅರ್ಜುನ ಉವಾಚ ವಿಶ್ವನಾಥ ಎನ್‌ ನೇರಳೆಕಟ್ಟೆ ಕದನಾಂತರಂಗದಲ್ಲಿ ಅನಲ ನರ್ತನ                         ಕದನಾಂತರಂಗದಲ್ಲಿ ಅನಲ ನರ್ತನ ಪ್ರವೀರನೆಂಬ ವೀರ ಮೇಧಾಶ್ವವನ್ನು ಕಟ್ಟಿಹಾಕಿದ್ದಾನೆ ಎಂಬ ಸುದ್ದಿಯನ್ನು ನನ್ನಲ್ಲಿಗೆ ಹೊತ್ತುತಂದರು ಕುದುರೆಯ ಮೈಗಾವಲಿಗಿದ್ದ ಭಟರು. ಗೆಲ್ಲುವ ಸಾಮರ್ಥ್ಯವಿದ್ದರೆ ಆ ಪಾರ್ಥ ನನ್ನೆದುರು ಯುದ್ಧಕ್ಕೆ ಬರಲಿ ಎಂದಿದ್ದನಂತೆ ಪ್ರವೀರ.      ನಗುವೂ ಬಂತು. ಕೋಪವೂ ಉಕ್ಕಿತು. ಇಂತಹ ಸಾಕಷ್ಟು ಯುದ್ಧಗಳನ್ನು ಕಾಣುವುದಕ್ಕಿದೆ ಮುಂದೆ ಎಂದು ಸಾಮರ್ಥ್ಯವನ್ನು ಮುಂದುಮಾಡಿಕೊಂಡೇ ಬಂದವ ನಾನು. ಹಾಗಿರುವಾಗ ಆ ಪ್ರವೀರ ಗೆಲ್ಲುವ ಸಾಮರ್ಥ್ಯ ಇದ್ದರೆ ಎಂಬ ಮಾತನ್ನು ಆಡಿದನಲ್ಲಾ ಎಂಬ ಯೋಚನೆ ನಗುವನ್ನು ಮೂಡಿಸಿತು. ಪಾಂಡವವೀರರಿಗೆ ಸೇರಿದ ಅಶ್ವವಿದು ಎಂದು ಅರಿವಾದ ಬಳಿಕವೂ ಶರಣು ಬರದೆ ಕುದುರೆಯನ್ನು ಕಟ್ಟುವ ಭಂಡಧೈರ್ಯ ತೋರಿದನಲ್ಲಾ ಎಂದು ಕೋಪ ಬಂತು.       ಸೈನಿಕರನ್ನೆಲ್ಲಾ ಸನ್ನದ್ಧಗೊಳಿಸಿದೆ. ಚತುರಂಗ ಬಲಗಳೂ ಬಲಪಡೆದು ನಿಂತವು. ಮಾಹಿಷ್ಮತಿ ನಗರದ ಮೇಲೆ ಧಾಳಿಯಿರಿಸಿದೆವು. ಮೇಧಾಶ್ವವನ್ನು ಬಿಡಿಸಿಕೊಳ್ಳಬೇಕೆಂಬ ಉತ್ಸುಕತೆಯಲ್ಲಿದ್ದ ನಮ್ಮ ಕಡೆಯ ಸೈನಿಕರಲ್ಲಿ ಅಶ್ವಸದೃಶ ಶಕ್ತಿ ನೆಲೆಗೊಂಡಿತ್ತು. ನಮ್ಮ ಧಾಳಿಯ ಬಿರುಸಿಗೆ ಧೂಳೆದ್ದಿತು. ಜೊತೆಗೆ ವಾದ್ಯಗಳ ಆರ್ಭಟ. ಪ್ರವಾಹವೇ ಬಂತೇನೋ ಎನ್ನುವಂತೆ ಬೆದರಿದರು ಮಾಹಿಷ್ಮತಿ ಪಟ್ಟಣದ ಜನರು.      ಉಕ್ಕಿದ ಕಡಲಿನ ಬಗೆಯಲ್ಲಿ, ಪ್ರಳಯ ಕಾಲದ ಕಾರ್ಮೋಡದ ತೆರದಲ್ಲಿ ಹೋಗಿ ಮುತ್ತಿದೆವು ಕುದುರೆಯನ್ನು ವಶಪಡಿಸಿಕೊಂಡಿದ್ದ ವೀರ ಪ್ರವೀರನನ್ನು. ಹುಚ್ಚು ಧೈರ್ಯ ಅವನದು ಎಂದುಕೊಂಡಿದ್ದೆ ಮೊದಲಿಗೆ, ಅವನು ಕುದುರೆಯನ್ನು ಕಟ್ಟಿಹಾಕಿದ ವಿಚಾರ ಕೇಳಿದಾಗ. ಆದರೆ ಈಗ ಸೇನೆಸಹಿತ ಅವನನ್ನು ಸುತ್ತುವರಿದಾಗ ಅವನ ನಿಜ ಪರಾಕ್ರಮ ನನ್ನರಿವಿಗೆ ಬಂತು. ನನ್ನನ್ನು ಕಂಡೊಡನೆಯೇ ರಥವನ್ನು ಭರದಿಂದ ಓಡಿಸಿಯಾನು ಎಂಬ ಅಂದಾಜು ನನ್ನದು. ಆದರೆ ಅವನು ಚಲಿಸದೆಯೇ ನಿಂತ. ಕೆಲವೊಮ್ಮೆ ಹಾಗೆಯೇ. ಏನು ಮಾಡಬೇಕೆಂದು ತೋಚದಾದಾಗಲೂ ಶರೀರಕ್ಕೊಂದು ಸ್ಥಿರತೆ ಒದಗುತ್ತದೆ. ಅಂತಹದ್ದೇ ಸ್ಥಿರತೆ ಆಗಿರಬೇಕಿದು ಎಂದುಕೊಂಡೆ. ಅಲ್ಲ! ನಿಜಬಗೆಯ ದಿಟ್ಟತನದಲ್ಲಿ ರಥದಲ್ಲಿಯೇ ಕುಳಿತಿದ್ದ ಪ್ರವೀರ. ವೀರರು ಸುತ್ತುವರಿದಾಗಲೂ ಅಂಜದೆ ಅಳುಕದೆ ತೇರಿನಲ್ಲಿ ಕುಳಿತಿದ್ದ ಅವನ ಆ ನಿಲುವು ಪರಮ ವೈರಾಗಿಯನ್ನು ನೆನಪಿಸುವಂತಿತ್ತು. ಯುದ್ಧದ ಅಂತಿಮ ಪರಿಣಾಮವನ್ನು ಮನಗಂಡ ತತ್ವಜ್ಞಾನಿಯಂತೆ ಕುಳಿತಿದ್ದನಾತ. ಏಕಾಂಗಿಯಾಗಿ ಹೋರಾಟಕ್ಕಿಳಿದ ಆತ ನಮ್ಮ ಸೈನಿಕರನ್ನೆಲ್ಲಾ ಸತತ ಬಾಣಪ್ರಯೋಗಗಳಿಂದ ಕೊಂದುಹಾಕಿದ. ಸತ್ವಯುತನಿವನು ಎನ್ನುವುದು ನನಗೆ ಖಚಿತವಾಯಿತು.      ಹೀಗಿದ್ದಾಗಲೇ ನೀಲಧ್ವಜ ಸೇನೆಸಹಿತನಾಗಿ ನಮ್ಮನ್ನು ಎದುರಿಸುವುದಕ್ಕೆ ಬಂದ. ಒಂಟಿಯಾಗಿ ಹೋರಾಡುತ್ತಿದ್ದ ಪ್ರವೀರನಿಗೆ ಸಮಸ್ತ ಬಲವದು ದೊರಕಿದಂತಾಯಿತು. ಅವರ ಶಕ್ತಿಯುತವಾದ ಹೋರಾಟ ನಮ್ಮ ಸೇನೆಯನ್ನು ಕಳೆಗುಂದಿಸಿತು.      ಸೇನೆಯ ಮುಂಚೂಣಿಯಲ್ಲಿದ್ದ ನಾನು ನಾಯಕತ್ವವನ್ನು ಸರಿಯಾಗಿ ನಿಭಾಯಿಸಲಾಗದೆ ಎಡವಿದೆ ಎಂಬ ಭಾವ ನನ್ನನ್ನು ಆವರಿಸಿತು. ನನ್ನ ಅಂತರಂಗದೊಳಗೆ ಯಾರೋ ಬೆಂಕಿ ಹಚ್ಚಿದ ಅನುಭವ. ಮೊದಲ ಯುದ್ಧದಲ್ಲಿಯೇ ಹೀಗಾದರೆ ಇನ್ನುಳಿದ ಕದನಗಳ ಗತಿಯೇನು ಎಂಬ ಯೋಚನೆ ಬಂತು. ಅಣ್ಣ ಧರ್ಮಜ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳದವನಾದೆನೇ ಎಂಬ ಅಳುಕು ಮೂಡಿತು. ಬಗೆಬಗೆಯ ಭಾವಗಳ ನೆಲೆವೀಡಾಗಿಹೋದ ನನ್ನ ಚಿತ್ತ ಯುದ್ಧದತ್ತ ಏಕಾಗ್ರವಾಗಲೇ ಇಲ್ಲ.     ಸೋಲುತ್ತೇನೆ ಎಂಬ ಭಾವ ದೃಢವಾದಾಗಲೇ ‘ಇಲ್ಲ! ಏನೆಂದರೂ ಬಿಡಲಾರೆ’ ಎಂಬ ಛಲ ನಮ್ಮಲ್ಲಿ ಮೂಡುವುದು. ಯುದ್ಧದಲ್ಲಿಯೂ ಹೀಗೆಯೇ. ಬದುಕಿನಲ್ಲಿಯೂ ಹೀಗೆಯೇ. ಎದುರಿಗಿದ್ದ ಮಾಹಿಷ್ಮತಿ ಸೇನೆ ನನ್ನ ಪಾಲಿಗೆ ಒಗಟಿನಂತಾಗಿತ್ತು. ಬಿಡಿಸುತ್ತೇನೆ ಈ ಒಗಟನ್ನು ಕುದುರೆಯನ್ನು ಬಿಡಿಸುವುದಕ್ಕೋಸ್ಕರ ಎಂದುಕೊAಡೆ.     ಕೋಪಾತಿರೇಕದ ಆ ಅವಸ್ಥೆಯಲ್ಲಿ ಬಿಲ್ಲಿಗೆ ಕೈಯ್ಯಿಕ್ಕಿದೆ. ಹೆದೆಯನ್ನು ಮಿಡಿದೆ. ಎದ್ದ ನಾದ ಮಾಹಿಷ್ಮತಿ ಸೇನೆಯನ್ನು ಯಮಪುರಿಗಟ್ಟುವ ಮರಣಶ್ರುತಿಯಾಯಿತು. ಮಳೆಗಾಲದ ಕೊನೆಕೊನೆಯಲ್ಲಿ ಹಠಹಿಡಿದು ಸುರಿವ ಮಳೆಯಂತೆ ಅಬ್ಬರಿಸಿದೆ. ನೀಲಧ್ವಜನ ಸೇನೆಯದು ದಿಕ್ಕೆಟ್ಟುಹೋಯಿತು.      ಕಂಗೆಟ್ಟ ನೀಲಧ್ವಜ ಹೋಗಿ ಸಹಾಯ ಕೇಳಿದ್ದು ಅಗ್ನಿಯಲ್ಲಿ. ಅನಲ ನೀಲಧ್ವಜನ ಅಳಿಯ. ಅವನ ಮಗಳನ್ನು ಮದುವೆಯಾದವನು. ಮಾಹಿಷ್ಮತಿ ಪಟ್ಟಣದಲ್ಲಿಯೇ ನೆಲೆಸಿದ್ದವನು.      ಮಾವನ ಕೋರಿಕೆಗೆ ಬೆಲೆಯಿತ್ತ ಅಗ್ನಿ, ನಮ್ಮಿಡೀ ಸೈನ್ಯವನ್ನು ಕರುಣೆಯಿಲ್ಲದೆಯೇ ದಹಿಸತೊಡಗಿದ. ಅನಲನ ಕೆನ್ನರ್ತನ ನಮ್ಮ ಕಡೆಯ ಸೈನಿಕರನ್ನು ಕಪ್ಪಗಾಗಿಸಿತು. ಅವನ ಚಲನೆ ನಮ್ಮವರನ್ನು ಅಚಲರಾಗಿಸಿತು. ಅವನ ತೇಜಸ್ಸು ಹೆಚ್ಚಿದಂತೆ ನಮ್ಮವರೆಲ್ಲಾ ತೇಜಶೂನ್ಯರಾದರು. ದೆಸೆದೆಸೆಗಳಲ್ಲಿ ಭೀಕರವಾದ ಹೊಗೆ. ದಿಕ್ಕುದಿಕ್ಕುಗಳಲ್ಲಿ ಅನಲ ಜ್ವಾಲೆ. ಯಾರಲ್ಲಿಯೂ ಭೇದ ತೋರದೆ ಎಲ್ಲರನ್ನೂ ಆಹುತಿಗೊಳ್ಳತೊಡಗಿದ ಅನಲ.      ನನ್ನಲ್ಲಿ ಅತೀವ ಆತಂಕ ಮನೆಮಾಡಿತು. ಅಗ್ನಿಯ ಶಕ್ತಿಯೇನೆಂಬುದರ ಅರಿವಿತ್ತು ನನಗೆ. ಅವನ ಸಾಮರ್ಥ್ಯವನ್ನು ನಾನು ಕಂಡದ್ದು ಇದೇ ಮೊದಲೇನಲ್ಲ. ಅಂದು ಖಾಂಡವ ವನವನ್ನು ದಹಿಸಿದ ಅವನ ಉರಿಹಸಿವಿನ ತೀಕ್ಷ್ಣತೆಯನ್ನು ಸಾಮಿಪ್ಯದಿಂದ ದರ್ಶಿಸಿದವ ನಾನು. ಹಾಗಿರುವಾಗ ಅಗ್ನಿಯ ಈ ಬಗೆ ಹೀಗೆಯೇ ಮುಂದುವರಿದರೆ ಅಶ್ವಮೇಧದ ನೆಪದಲ್ಲಿ ಬಂದ ನಾವೆಲ್ಲರೂ ಅಗ್ನಿಯೊಡಲಿಗೆ ಮೇಧಾಶ್ವಗಳಾಗುವುದು ಖಚಿತ ಎನಿಸಿತು ನನಗೆ.      ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲಬೇಕು. ಇದು ಲೋಕರೂಢಿ. ಜಗದ ನಿಯಮ. ನುಡಿಯಿಂದ ಅನಲನನ್ನು ಮೆಚ್ಚಿಸಿ ಅವನನ್ನು ತೃಪ್ತಗೊಳಿಸುವ ತಂತ್ರ ಹೂಡಿದೆ.     “ನೀನೇನೂ ನನಗೆ ಅಪರಿಚಿತನಲ್ಲ. ನಾನು ಗಾಂಡೀವಿ ಎನಿಸಿಕೊಳ್ಳಲು ಕಾರಣವಾದ ಗಾಂಡೀವ ಧನುಸ್ಸು ದೊರೆತದ್ದೇ ನಿನ್ನಿಂದ. ನನ್ನ ಮಡದಿ ದ್ರೌಪದಿ ನಿನ್ನಿಂದಲೇ ಉದಿಸಿಬಂದವಳು” ಎಂದೆಲ್ಲಾ ಹೇಳಿ ನನಗೂ ಅವನಿಗೂ ಇರುವ ಬಾಂಧವ್ಯದ ನೆನಪು ಮಾಡಿದೆ. ವೇದವ್ಯಾಸ ಮುನಿಗಳು ಹೇಳಿದ್ದಕ್ಕಾಗಿ, ಶ್ರೀಕೃಷ್ಣ ಸೂಚನೆ ಇತ್ತದ್ದಕ್ಕಾಗಿ ಈ ಯಾಗ; ಈ ಯುದ್ಧ. ಇಲ್ಲವಾದರೆ ಇದೆಲ್ಲಾ ಬೇಕಿರಲಿಲ್ಲ ಎಂದೆ.     ಅಗ್ನಿ ತಂಪಾದ. ದಹಿಸುವುದನ್ನು ನಿಲ್ಲಿಸಿದ. ನನ್ನ ಮಾತಿನಲ್ಲಿದ್ದ ದೈನ್ಯತೆ ಅವನನ್ನು ದಯಾಪರನನ್ನಾಗಿಸಿತು. ಮಗಳನಿತ್ತ ಮಾವನಾದ ನೀಲಧ್ವಜನಲ್ಲಿ ಯುದ್ಧ ನಿಲ್ಲಿಸುವಂತೆ ಸೂಚಿಸಿದ. ಅಳಿಯ ಅಗ್ನಿಯ ಮಾತನ್ನು ಅಂಗೀಕರಿಸಿದ ನೀಲಧ್ವಜ.      ಯುದ್ಧ ನಿಂತಿತು ಎಂದು ನಾನು ನಿರಾಳತೆ ಹೊಂದುವಷ್ಟರಲ್ಲಿ ನನ್ನನ್ನು ಮತ್ತೆ ಚಿಂತೆಗೀಡುಮಾಡುವ ಸುದ್ದಿಯೊಂದು ಬಂದು ತಲುಪಿತು…                                             ಡಾ. ವಿಶ್ವನಾಥ ಎನ್ ನೇರಳಕಟ್ಟೆ  

Read Post »

You cannot copy content of this page

Scroll to Top