“ಗೌಹರಜಾನ್”ಶಮಾ. ಜಮಾದಾರ ಅವರ ಸಣ್ಣ ಕಥೆ

ಇನ್ನೇನು ಆರಲಿರುವ ದೀಪದ ಕುಡಿಯ ನರ್ತನ ಕೊನೆಯ ಉಸಿರಿಗಾಗಿ ಚಡಪಡಿಸುವ ದೇಹವನ್ನು ಹೋಲುತ್ತಾ..ಜೀವಂತ ಶವದಂತಿರುವ ನನ್ನ ಮನಸನ್ನು ಕೆದಕಿತ್ತು. ಈ ಬಣ್ಣ ,ಈ ಥಳಕು ಬಳಕು, ನಿರ್ಜೀವ ನಗೆ..ಹೆಣದ ಸಿಂಗಾರದಂತೆ ಕಾಣುತ್ತಿದ್ದವು. ಆಜ್ ಧಂಧಾ ಮಂದ್ ಹೈರೇ..ಕೌನ್ ಭೀ ಶಾನಾ ನೈ ಫಸಾ ಮುಝೆ..ದೇಖ್ ಉಸಕೀ ತಕದೀರ್..ವಾರೇವ್ವಾ..ಎಂದು ನನ್ನ ಉದ್ದೇಶಿಸಿ ಉರಿದುಕೊಳ್ಳುವ ಪಾಪದ ಜೀವಗಳ ಬಗ್ಗೆ ಮರುಕವಿತ್ತು. ಇಂದಿನ ಹತ್ತು ಗಿರಾಕಿಗಳ ಫಾಳಿ ಮುಗಿದಿತ್ತು. ಇನ್ನು ಏನಿದ್ದರೂ.. ನಾಳೆಯೇ ಶುರು ಈ ದೇಹದ ವ್ಯಾಪಾರ. ಇದು ನನಗೆ ನಾನೇ ಹಾಕಿಕೊಂಡ ಉಸೂಲ್ ಆಗಿತ್ತು. ಲಾಲಿಬೇನ್ ಕೂಡಾ ಒಪ್ಪಿಗೆ ಕೊಟ್ಟಾಗಿತ್ತು.

                    ನನ್ನದಾದರೂ ನನ್ನದೆನಿಸದ ಈ ದೇಹವನ್ನು ಹೊತ್ತ ನನಗೆ ನಿಜಕ್ಕೂ ಇಂದು ದಣಿವಾಗಿತ್ತು. ಈ ಕೃತಕ ನಾಚಿಕೆ ನಕರಾಗಳಿಂದ ಗಿರಾಕಿಗಳನ್ನು ಬಕರಾ ಮಾಡುವ, ಈ ಜೀವನ ಎಳ್ಳಷ್ಟೂ ಇಷ್ಟವಿರಲಿಲ್ಲ. ಆದರೆ,  ಇದೇ ಬದುಕಾಗಿತ್ತು ಗೌಹರ್ ಜಾನ್.. ಆದ ನನಗೆ. ಇಲ್ಲಿ ಬಂದುದೇ ನೆನಪಿಲ್ಲ ನನಗೆ. ಮೊದಲು ಜೊತೆಗೆ ಅಮ್ಮನಿದ್ದಳು..ಅವಳ ಕೈಹಿಡಿದು.. ಓಡಾಡುವ ನಾನು, ಆಗಾಗ ಒಂಟಿಯಾಗಿಸಿ ಕಣ್ಮರೆಯಾಗುವ ಅಮ್ಮ.. ಏನಾದರೂ ತಿನ್ನಲು ಕೊಟ್ಟು ಪಕ್ಕದಲ್ಲಿ ಕೂಡಿಸಿಕೊಂಡು ಕಥೆ ಹೇಳುತ್ತಿದ್ದಳು ಲಾಲಿ ಬೇನ್. ಸ್ವಲ್ಪ ಹೊತ್ತಿನಲ್ಲಿ ಕೂದಲನ್ನು ಗಂಟುಕಟ್ಟುತ್ತಾ..ತುಟಿಯಂಚಿನ ಜಿನುಗು ನೆತ್ತರನು ಸೆರಗಿನಿಂದ ಒತ್ತಿ ಹಿಡಿಯುತ್ತಾ..ಬರುವ ಅಮ್ಮ ಕಾಣುತ್ತಿದ್ದಳು. ಮಾ..ಎಂದು ಜಿಂಕೆಯಂತೆ ಜಿಗಿದೋಡಿ ಹೋಗಿ.. ಅಪ್ಪುತ್ತಿದ್ದ..ನನಗೆ  ಅತ್ತರಿನ ಘಾಟು ವಾಸನೆಯಿಂದ  ಸೀನುತ್ತಿದ್ದೆ. ಅರೇ..ಬೇಟಾ ಏನಾಯ್ತು ಕಂದಾ.. ಎನ್ನುತ್ತಾ ಮುದ್ದು ಮಾಡುತ್ತಾ ಅಮ್ಮ.. ತೂಗುಮಂಚದಲ್ಲಿ ಕೂಡಿಸಿ ತೂಗುತ್ತಾ ನಿಂತು ಕಂಬನಿ ಒರೆಸಿ ಕೊಳ್ಳುತ್ತಿದ್ದಳು ನನಗೆ ಗೊತ್ತಾಗದಂತೆ.

                            ನನಗೆ ತಿಳುವಳಿಕೆ ಬಂದ ನಂತರ ನನ್ನ ವಿರೋಧ ಅವಳನ್ನು ತುಂಬಾ ನೋಯಿಸುತ್ತಿತ್ತು. ಇದನ್ನು ಬಿಟ್ಟರೆ, ನನಗೆ ಬೇರೆ ಏನೂ ಗೊತ್ತಿಲ್ಲ . ಗೌಹರ್. ಬಂಡವಾಳ ಇಲ್ಲದ ದುಡಿಮೆ ಇದು. ನೀ ತಲೀ ಕೆಡಿಸಿಕೋ ಬೇಡ..ಓದಿನ ಕಡೆ ಗಮನಕೊಡು. ಈ ನರಕದಿಂದ ಆಗಲೇ ಮುಕ್ತಿ ಬೇಟಾ.. ಎನ್ನುತ್ತಿದ್ದಳು. ನನಗೂ ಏನೂ ತೋಚದೇ.. ಹೋಗುತ್ತಿತ್ತು ಆಗ.  ಅಮ್ಮ.. ನನ್ನ ತಂದೆ.. ತಂದೆ ಎಲ್ಲಮ್ಮಾ..ಯಾರವರು..?
ನಾವು ಇಲ್ಲಿ.. ಹೇಗೆ..ಎನ್ನುವ ಪ್ರಶ್ನೆ.. ಅಮ್ಮನ ಮನದಲ್ಲಿ ತೂಫಾನ್ ತರುತಿದ್ದವು. ಗೊತ್ತಿಲ್ಲ ಗೌಹರ್.. ತನ್ನ ಮನೆಗೆ ಕರೆದೊಯ್ಯುವೆನೆಂದು ಇಲ್ಲಿ ಕರೆತಂದು ಬಿಟ್ಟು ಹೋದವರು ತಿರುಗಿ ಬರಲೇ ಇಲ್ಲ ಕಣೇ ನಿನ್ನ ಬಾಬಾ. ದೊಡ್ಡ ಖಾನ್ದಾನ್ ಹೊಂದಿದ್ದರು ಅವರು. ಆದರೆ ಹೀಗೇಕೆ ಮಾಡಿದರೋ ನನಗೆ ಗೊತ್ತಿಲ್ಲ ಮಗಳೇ..ಎಂದು ಬಿಕ್ಕಳಿಸಿ ಅಳುವ ಅಮ್ಮನ ಕಣ್ಣೀರು ಒಡಲಲ್ಲಿ ಬೆಂಕಿ ಹಚ್ಚುತ್ತಿದ್ದವು. ಅರ್ಧ ರಾತ್ರಿಯವರೆಗೆ ಬಣ್ಣದ ಬೊಂಬೆಯಂತೆ ಸಾಲಿನಲ್ಲಿ ನಿಂತು,ವಿಟರ ಹಾಸಿಗೆಯಲ್ಲಿ ಯಂತ್ರದಂತೆ ಕರ್ತವ್ಯ ನಿರ್ವಹಿಸಿ..ಮೈಮನಗಳ ಗಾಯಗಳಿಂದ ಜರ್ಜಳಿತಳಾಗಿ ದಿಂಬಿಗೆ ಮುಖವಿಟ್ಟು ಅಳುವ ಅಮ್ಮನನ್ನು ಈ ನರಕದಿಂದ ಪಾರುಮಾಡುವ ಹಟ..ದಿನವೂ ಗಟ್ಟಿಯಾಗುತ್ತಿತ್ತು. ಬೆಳೆದು ನಿಂತ ನಂತರದ ನನ್ನ ಬದುಕು..ಸರಳವೇನಿರಲಿಲ್ಲ. ಯಾರ ಕಣ್ಣಿಗೂ ಬೀಳದಂತೆ ನನ್ನನ್ನು ನಾನು ರಕ್ಷಿಸಿಕೊಂಡು..ಬುರಖೆಯಲ್ಲಿ ಮುಖಮುಚ್ಚಿ ಹಿಂದಿನ ಬಾಗಿಲಿಂದಲೇ ಓಡಾಡುವ ಸಂಧಿಗ್ಧ. ಹಗಲಿರುಳು ಅಮ್ಮನಿಗೆ.. ನನ್ನದೇ ಚಿಂತೆ. ಯಾವ ಕಾಮುಕ ದೃಷ್ಟಿ ಬೀಳದಂತೆ ಕಾಯುವುದೇ ಸವಾಲಾಗಿತ್ತು.. ಅವಳಿಗೆ.
ಲಾಲಿಬೇನ್.. ನನ್ನ ನೋಡುವ ನೋಟ..ಒಮ್ಮೊಮ್ಮೆ ಹೆದರಿಸುತ್ತಿತ್ತು. ಬಲಿಗೊಡಲು ಕುರಿಯನ್ನು ತೂಗುವ ನೋಟದಂತೆ ನನಗೆ ಭಾಸವಾಗುತ್ತಿತ್ತು. ಅಮ್ಮನಿಗೆ ಹೆದರಿ ಬಾಯಿ ಮುಚ್ಚಿ ಕೂತಿದ್ದಳು.

                    ಗೌಹರಜಾನ್.. ಮೈಯೆಲ್ಲಾ ಕಣ್ಣಾಗಿರಬೇಕು ಬೇಟಾ, ಯಾವುದೇ ಕಾರಣಕ್ಕೂ ಈ ಜಹರ್ ನೀ ಕುಡೀಬಾರದು..ಎನ್ನುವ ಪ್ರತಿಗಳಿಗೆಯ ಅಮ್ಮನ ಕನಸು ಭಗ್ನವಾಗುವ ಕ್ಷಣದ ಹೆಜ್ಜೆ ಸಪ್ಪಳ ನಮಗೆ ಕೇಳಿಸಲೇ ಇಲ್ಲ. ದಿನಾಲೂ ಅಮ್ಮನ ಆಸೆಗೆ ಬರುವ ಮನೋವಿಕಾರಿ ವಿಟನೊಬ್ಬನ ಹಟ..ಅಮ್ಮನ ಹೆಣ ಉರುಳಿಸಿತ್ತು. ಎಷ್ಟೇ ನಿರಾಕರಿಸಿದರೂ ಕೇಳದ ಆ ಮನುಜ ರೂಪದ ರಾಕ್ಷಸ.. ತನ್ನೊಂದಿಗೆ ಹೊರಗೆ ಬರಲೇ ಬೇಕು ಎನ್ನುವ ಬೇಡಿಕೆ ಈಡೇರದೇ ಹೋದಾಗ..  ಚೂರಿ ಇರಿದಿದ್ದನು ಅಮ್ಮನ ಎದೆ ಮತ್ತು ಹೊಟ್ಟೆಗೆ. ಒಂದೇ ಬಾರಿಯಲ್ಲ..ಬಾರಿ ಬಾರಿ ಇರಿದು..ಸ್ಥಳದಲ್ಲೇ ಕೊಂದುಹಾಕಿದ್ದನು. ಯಕಶ್ಚಿತ್ ವೈಶ್ಯೆಯೊಬ್ಬಳು ತನ್ನ ಮಾತನ್ನು ನಿರಾಕರಿಸಿದಳಲ್ಲಾ..ಎನ್ನುವ ಕೋಪ..ಆ ಹುಚ್ಚನಿಗೆ. ಅವನ ಈ ಹುಚ್ಚಾಟ.. ನನ್ನ ಜೀವನವನ್ನೇ ತಿಂದು ತೇಗಿತ್ತು. ಅಮ್ಮನಿಲ್ಲದ ನನ್ನ ಬದುಕು ಕರಾಳವಾಗಿತ್ತು. ಗಂಧದ ಕೊರಡಂತೆ ದೇಹ ತೇಯ್ದು, ನನ್ನ ಭವಿಷ್ಯ ರೂಪಿಸುವ ಕನಸು ಕಂಡ ಅಮ್ಮನ ಅಂತಿಮ ವಿದಾಯ ಈ ರೀತಿಯಲ್ಲಿ ಆಗಬಹುದೆಂಬ ಊಹೆ ಯಾರಿಗೂ ಇರಲಿಲ್ಲ. ಮನೆಯಲ್ಲಿ ಎಲ್ಲರ ಮರುಕ, ಕಾಳಜಿ ನನ್ನ ದುಃಖವನ್ನು ಕಡಿಮೆ ಮಾಡಲೇ ಇಲ್ಲ. ಲಾಲಿಬೇನ್ ಳ ಲಾಭಕೋರ ಮನಸು ಬೇರೆಯದೇ ಲೆಕ್ಕ ಹಾಕುತ್ತಿತ್ತು. ಬಹಳಷ್ಟು ನಂಜು ತುಂಬಿದ ಅವಳ ಸಂತಾಪ ಭರಿತ ಪ್ರೀತಿ.. ನನಗೆ ಸಹ್ಯವಾಗುತ್ತಿರಲಿಲ್ಲ. ಅಲ್ಲಿ ಕೂತು, ಅವರ ಹಂಗಿನ ಊಟ..ಮಾಡಲು ಹೇವರಿಕೆಯಾಗುತ್ತಿತ್ತು. ಹೊರಗಿನ ಪ್ರಪಂಚದ ಜ್ಞಾನ ಮೊದಲೇ ಇರಲಿಲ್ಲ. ಶಾಲೆಯ ಓದು ಶಾಶ್ವತವಾಗಿ ನಿಂತೇ ಹೋಗಿತ್ತು. ನನ್ನವರೆಂದು ಯಾರನ್ನೂ ನಂಬುವ ಧೈರ್ಯ ನನಗಿರಲಿಲ್ಲ. ಅಮ್ಮನ ಗೆಳತಿಯರು ತಮಗಾದಷ್ಟು ಸಹಕಾರದ ರೂಪದಲ್ಲಿ ನನ್ನ ಹೊಟ್ಟೆ ತುಂಬಿಸಿದರೂ..ಭವಿಷ್ಯದ ಬಗ್ಗೆ ಸಹಾಯ ಮಾಡುವಷ್ಟು ಶಕ್ತರಾಗಲಿ ಉದಾರಿಗಳಾಗಲಿ ಅವರಿರಲಿಲ್ಲ..ಅಮ್ಮ ತುಳಿದ ದಾರಿಯಲ್ಲಿ ಬರೀ ಕತ್ತಲೆಯೇ ಎಂಬುದನ್ನು ಅರೆದು ಕುಡಿದಾಗಿತ್ತು ನಾನು.

                     ಅದೊಂದು ದಿನ, ಲಾಲಿಬೇನ್ ಕರೆದು ಪಕ್ಕದಲ್ಲಿ ಕುಳ್ಳಿರಿಸಿ..ನೋಡು ಬೇಟಾ, ನಿನ್ನ ತಾಯಿ ನಮ್ಮ ಮೇಲೆ ನಿನ್ನ ಜವಾಬ್ದಾರಿ ಬಿಟ್ಟು ಹೋಗಿದ್ದಾಳೆ. ಅವಳು ಏನೇನೋ ಕನಸು ಕಂಡಿದ್ದಳು. ಅವೆಲ್ಲವೂ ನನಸಾಗದೇ ಹೋದರೂ..ನಿನ್ನ ಮದುವೆ ಮಾಡಿ.. ಸ್ವಲ್ಪ ಶಾಂತಿಯನ್ನಾದರೂ ಅವಳ ಆತ್ಮಕ್ಕೆ ಕೊಡಬೇಕೆನ್ನುವುದು ನನ್ನ ಉದ್ದೇಶ. ನಿನಗೊಂದು ಸಂಬಂಧ ಬಂದಿದೆ. ಈ ಮಾಹೋಲಿನಲ್ಲಿ ನೀನಿರೋದು ಸರಿಯಲ್ಲ.. ಗೌಹರ್ ಹೂಂ ಅಂದ್ರೆ.. ನಾನು ಮಾತಾಡುವೆ ಅಂದಳು. ನಾನು ಏನೂ ತೋಚದೇ ಅಳುತ್ತಾ ಕೂತೆ. ಅಲ್ಲಿರುವ ಎಲ್ಲರೂ ಇದೇ ಸೂಕ್ತ.. ಗೌಹರಜಾನ್.. ಈ ಪರಿಸರದಲ್ಲಿ ನಿನಗೆ ಖತರಾ ಕಟ್ಟಿಟ್ಟ.. ಬುತ್ತಿ. ಮೊದಲು ಇಲ್ಲಿಂದ ಹೊರಗೆ ಹೋಗು. ಅಲ್ಹಾನ ಕೃಪೆಯಿಂದ ನಿನ್ನ ಬಾಳು ಬಂಗಾರ ಆಗಬಹುದು.. ಎಂದು ಒತ್ತಾಯಿಸಿದರು. ನನಗೂ ಸರಿಯೆನಿಸಿ..ಮದುವೆಯ ಬಂಧನಕ್ಕೆ ಒಳಗಾದೆ.

                          ಸೊಗಸಾದ ಕನಸುಗಳ ಘೂಂಘಟ್ ಹೊದ್ದು, ಹೊಸಜೀವನದ ಖುಷಿಗಳನ್ನು ಕನವರಿಸುತ್ತಾ.‌.ಅಮ್ಮನಿಲ್ಲದೇ ನಿಖಾಃ..ನಾಮೆಗೆ ಸಹಿ ಮಾಡಿ.. ಕಬೂಲ್ ಹೈ..ಎಂದು ಒಪ್ಪಿ..ಐವತ್ತು ಸಾವಿರ ಹಕ್ ಮೆಹರ್ ಪಡೆದು ಮುನ್ನಾ ಪಠಾನ್ ನ ಅಧಿಕೃತ ಬೀವಿಯಾಗಿ..ಆ ಜನಾನ್ ಖಾನೆಯ ಹೊಸ್ತಿಲು ದಾಟಿ..ಹೊರಗಿನ ಪ್ರಪಂಚಕ್ಕೆ ಕಾಲಿಟ್ಟೆನು. ನನ್ನನ್ನು ಹೊತ್ತೊಯ್ದ ಕಾರು, ಹಳೆಯ ಬಂಗಲೆಯ ಮುಂದೆ ನಿಂತಿತು. ನನ್ನನ್ನು ಇಳಿಸಿ, ಬಾಗಿಲಿಗೆ ಕರೆದೊಯ್ದು.. ಕಾಲುತೊಳೆದು..ಸೇರು ಒದೆಸಿ ಮನೆತುಂಬಿಸಿಕೊಂಡ ಮಹಿಳೆಯರ ದಂಡು, ಏನೇನೋ ಸಂಪ್ರದಾಯ ಹಾಡು ಹಸೆಗಳಿಂದ ಬಹಳ ಹೊತ್ತಿನ ತನಕ ರಂಜಿಸಿದರು. ಇದೆಲ್ಲ ನನಗೆ ರುಚಿಸತೊಡಗಿತ್ತು. ಒಂದು ಸಂಪ್ರದಾಯಸ್ಥ ಕುಟುಂಬದ ಹಾಗೆ ನನಗೆ ಆ ಮನೆ ಪ್ರಿಯವಾಗಿತ್ತು. ಆ ನರಕದಿಂದ ಸಿಕ್ಕ ಬಿಡುಗಡೆ ಖುಷಿ ತಂದಿತ್ತು. ಗಿಜಿ ಗಿಜಿ ಜನರಿಂದ ಮನೆ ತುಂಬಿ ತುಳುಕುತ್ತಿತ್ತು. ಪ್ರತಿಯೊಬ್ಬರೂ ಒಂದೊಂದು ಸಂಬಂಧ ಹೇಳಿದರು. ತಾಯಾ, ಚಾಚೂ, ಮಾಮು, ಭಾಭಿ.. ಹೀಗೆಯೇ. ದಿನಕ್ಕೊಂದು ಅಡುಗೆ.. ಮಾತು.. ದಿನ ಕಳೆದದ್ದೇ ಅರಿವಾಗುತ್ತಿರಲಿಲ್ಲ.

              ….ಮುನ್ನಾ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಹನಿಮೂನ್ ಹೆಸರಿನಲ್ಲಿ ಒಂದು ವಾರ ಹೊರಗೆ ಕರೆದೊಯ್ದ. ಅದೊಂದು ದೊಡ್ಡ ಹೊಟೆಲ್. ಐಷಾರಾಮಿ ವ್ಯವಸ್ಥೆ ಜೋರಾಗಿಯೇ ಇತ್ತು. ಸಂಜೆ ನನಗಾಗಿ ಏನೇನೋ ಉತ್ಸವಗಳು. ತಿಂಡಿ, ತಿನಿಸು ತರತರದ ಪೇಯಗಳು. ಎಂದೂ ಕಾಣದ ಕೇಳದ ರುಚಿಯದು. ರಾತ್ರಿ, ಬ್ಯೂಟಿ ಪಾರ್ಲರ್ ರವರಿಂದ ಶೃಂಗಾರ. ಹೀಗೆಯೇ.. ನಡೆದಿತ್ತು. ಆದರೆ ರಾತ್ರಿ ನಡೆದ ಯಾವುದೇ ವಿಷಯದ ನೆನಪು ನನಗಿರುತ್ತಿರಲಿಲ್ಲ.. ದಿನವೂ ಇದೇ ರೌಟಿನ್. ಮನೆಗೆ ಹೋಗುವ ಮಾತೇ ಆಡಲಿಲ್ಲ.. ನನ್ನ ಗಂಡ. ನಾನಾಗಿ ಕೇಳಿದರೂ..ಯಾಕೆ ಮಜವಾಗಿಲ್ಲವೇ ಎನ್ನುತ್ತಿದ್ದ. ಮನೆಯಲ್ಲಿ ಖಾಯಂ ಇರೋದಿದೆ ಸ್ವಲ್ಪ ದಿನ ಇಲ್ಲಿ ಕಳೆಯೋಣ..ಎಂದು ಮಾತು ಮರೆಸುತ್ತಿದ್ದ. ಅದೊಂದು ದಿನ..ಆ ಪೇಯ ಕುಡಿಯಲು ಮನಸಾಗದೇ..ಕುಡಿದಂತೆ ಮಾಡಿ.. ಚೆಲ್ಲಿ ಸುಮ್ಮನೆ ಕುಳಿತೆ. ಮೇಕಪ್ ಕೂಡಾ ಯಾಕೆ ಎಂದರೆ ನೀ ನನಗೆ ಚೆಂದ ಕಾಣಬೇಕು ಎನ್ನುತ್ತಾ ರೂಮಿಗೆ ಕರೆದುಕೊಂಡು ಹೋಗಿ.. ಅದೂ ಇದೂ ಮಾತಾಡುತ್ತಾ.‌ಮಲಗಿದರೆ ಜೊಂಪು ಹತ್ತಿತ್ತು. ನನ್ನೊಂದಿಗೆ ಏನೋ ಆಗುತಿದೆ..ಎನ್ನುವ ಪರಿವೆ..ಬಂದಾಗ..ಗಂಡನೇ ಎನ್ನುವ ನಂಬಿಕೆ. ಆದರೆ ಕಣ್ಬಿಟ್ಟಾಗ..ಮೈಮೇಲೆ ಯಾವುದೋ..ಅಪರಿಚಿತ ಮುಖ ಕಂಡಿತು. ಧಿಗ್ಗನೇ ಎದ್ದು ಕುಳಿತು.. ಚೀರಾಡತೊಡಗಿದೆ. ಮುನ್ನಾ.‌..ಮುನ್ನಾ ಎಂದು ಕೂಗುತ್ತ ಬಾತ್ ರೂಮ್ ಸೇರಿ ಒಳಗೆ ಕೂತು ಬಿಟ್ಟೆ.

            ನಂತರ ಇಷ್ಟು ದಿನ ನಡೆದ ಗಂಡನ ಮೋಸ ತಿಳಿಯಿತು. ಮದುವೆಯ ಹೆಸರಿನಲ್ಲಿ.. ನನ್ನನ್ನು ಅದೇ ಕೂಪಕ್ಕೆ ತಳ್ಳಿದ್ದಳು ಲಾಲಿಬೇನ್. ನನ್ನ ತಾಯಿಯ ಇಚ್ಛೆ
ಈ ರೀತಿ ಮಣ್ಣುಪಾಲಾಗಿತ್ತು. ಏನು ಮಾಡಬಲ್ಲೆ ನಾನು..? ಗಂಡನಿಗೆ ಬೈದೆ, ಜಗಳವಾಡಿದೆ..ಉಪವಾಸ ಕೂತೆ..ಯಾವ ಪ್ರಯೋಜನ ಆಗಲೇ ಇಲ್ಲ. ನಾನು ಒಂದು ಮೊತ್ತಕೆ ಮಾರಾಟವಾಗಿದ್ದೆ..ಪಶುವಿನಂತೆ. ಕೊಂಡು ತಂದು ವ್ಯಾಪಾರಕ್ಕೆ ನಿಂತಿದ್ದ ಗಂಡನೆನಿಸಿಕೊಂಡ ದಲ್ಲಾಳಿ. ಅತ್ತೆ, ಕರೆದೆ..ವಿಧಿಯಿಲ್ಲದೆ.. ಹಣೆಬರಹದ ಆಜ್ಞೆಗೆ ತಲೆ ಬಾಗಿದೆ. ನಡೆದಿತ್ತು.. ಇದೇ ರೀತಿ ಜೀವನ. ಇಂದು ಈ ಊರಾದರೆ ನಾಳೆ ಮತ್ತೊಂದು ಊರು. ಅದೊಂದು ದಿನ, ಗಂಡ ಮುನ್ನಾ ಪಟೇಲ್.. ಯಾರದೋ ದ್ವೇಷದ ದಳ್ಳುರಿಯಲ್ಲಿ ಉರಿದು ಬೂದಿಯಾದ. ಅವನದಲ್ಲದ ಮನೆಯಲ್ಲಿ ನನಗೆ ಯಾವ ಜಾಗವಾಗಲಿ ಆದರವಾಗಲಿ ದೊರಕದೇ ಹೋದಾಗ ಮತ್ತೆ ನೆನಪಾದದ್ದು.. ತಾಯಿಯ ಮನೆ..ಮತ್ತು ಲಾಲಿಬೇನ್.

                         ಭರಾಟೆಯಿಂದ ಮಾಂಸದಡ್ಡೆಯ ವ್ಯಾಪಾರ ನಡೆದಿತ್ತು. ಹಸಿರಕ್ತ ಮಾಂಸದ ವಾಸನೆಗೆ ಹದ್ದುಗಳ ಹಾರಾಟವೂ ಭರ್ಜರಿಯಾಗಿತ್ತು. ವಯಸ್ಸು, ರೂಪ ಹೆಸರಾಂತ ಕಾಲ್ ಗರ್ಲ್ ಎನ್ನುವ ಪಟ್ಟ ಡಿಮ್ಯಾಂಡ್ ಹೆಚ್ಚಿಸಿತ್ತು. ದಿನಕ್ಕೆ ಹತ್ತು ಗಿರಾಕಿಗಳನ್ನು ಮಾತ್ರ ತೃಪ್ತಿ ಪಡಿಸುವ ಪರಿಪಾಠ ಹಾಕಿಕೊಂಡು.. ಅದನ್ನೇ ಪಾಲಿಸುತ್ತಾ ಬಂದೆ. ಅದೊಂದು ದಿನ.. ಕೊನೆಯ ಗಿರಾಕಿಯನ್ನು ಹೊರದಬ್ಬಿ..ಸಹಾಯಕಳ ಹೆಸರು ಕೂಗುತ್ತ ಗುಸಲ್ಖಾನೆಯಲ್ಲಿ ಬಟ್ಟೆ ತೆಗೆದು ಬೀಸುಟ್ಟು.. ಆದಷ್ಟು ಬೇಗ ಈ ಕೊಳಕು ಮೈಯನ್ನು ತೊಳೆಯಬೇಕೆನ್ನುವ ತರಾತುರಿಯಲ್ಲಿ.. ಇದ್ದಾಗ.. ಗೌಹರ್ ಗೌಹರಜಾನ್..ಎನ್ನುವ ಜೀವದ ಗೆಳತಿಯ ಕರೆಗೆ.. ಅಲ್ಲಿಂದಲೇ.. ಓಗೊಟ್ಟೆ. ಓ..ಇಲ್ಲಿದೀಯಾ ಜಾನ್, ಇನ್ನೊಂದು ಗಿರಾಕಿಯಿದೆ..ನಿನಗಾಗಿ ಹಟ ಹಿಡಿದು ಕೂತಿದೆ ಜೀವ. ನಿನ್ನ ಉಸೂಲ್ ಬಗ್ಗೆ.. ನಿನ್ನ ಕೋಪದ ಬಗ್ಗೆ ಎಲ್ಲಾ ರೀತಿಯಲ್ಲಿ ಹೇಳಿದರೂ..ಕೇಳುತ್ತಲೇ ಇಲ್ಲ. ನೀನೇ ಬೇಕು.. ಈಗಲೇ ಬೇಕು.. ಎನ್ನುವ ಕೋರಿಕೆ ಮೇರಿ ಜಾನ್..ಎಂದಳು ನೂರಿ. ನಾನೀಗ ಯಾರನ್ನೂ ನೋಡೋದಿಲ್ಲ..ನೂರಿ. ಗುಸಲ್ ನಂತರ ನನ್ನ ಇಬಾದತ್ ಶುರು..ನಿನಗೆ ಗೊತ್ತಿಲ್ಲವೇ.. ಹೋಗಲು ಹೇಳು..ಯಾವ ಮುಲಾಜೂ ಬೇಡ. ಹೂಂ ನಡೀ ಹೊರಗೆ. ಆಯ್ತಮ್ಮಾ..ಹೇಳುವೆ ಬಿಡೂ..

                   ಸಹಾಯಕಿಯ ಸಹಾಯದಿಂದ ಮೂರ್ನಾಲ್ಕು ಸಾರಿ ತಿಕ್ಕಿ ತಿಕ್ಕಿ ಸ್ನಾನ ಮಾಡಿದರೂ..ದೇಹ ಶುಚಿ ಎನ್ನುವ ಭಾವ ಬರುವುದಿಲ್ಲ . ಬಿಳಿಯ ಬಣ್ಣದ ಬಟ್ಟೆ ತೊಟ್ಟು.. ಅಲ್ಹಾನ ಸನ್ನಿಧಿಯಲ್ಲಿ ತಲೆಬಾಗಿ.. ಸಾವಿರ ಬಾರಿ ಕ್ಷಮೆ ಕೇಳುತ್ತೇನೆ. ನನ್ನ ತಾಯಿಯ ಆತ್ಮಕ್ಕೆ ಶಾಂತಿ ಕೋರುತ್ತೇನೆ. ಈ ಸಮಯದಲ್ಲಿ ಯಾವ ಕೃತಕತೆಯೂ  ಇರೋದಿಲ್ಲ. ಕೇವಲ ನಾನುಮತ್ತು ನನ್ನ ದೇವರ ಮಧ್ಯೆ ಮಾತುಕತೆ ನಡೆಯುತ್ತದೆ. ಯಾರೂ ತಡವುವದಿಲ್ಲ. ಊಟದ ಸಮಯದಲ್ಲಿ ಮತ್ತೆ ನೂರೀ..ಬಂದು, ಜಾನ್, ಇನ್ನೂ ನಿನ್ನ ನಿರೀಕ್ಷೆ ಮುಗಿದಿಲ್ಲ ಅವನಿಗೆ. ಕುಂತೇ ಇದ್ದಾನೆ ನಿನ್ನ ದೀದಾರ್ ನ ಆಶೆಯಲ್ಲಿ. ಅವನ ಕಣ್ಣುಗಳಲ್ಲಿ ಹಸಿದ ಕಾಮದ ವಾಸನೆ ಇಲ್ಲ ಗೆಳತಿ.. ಏನೋ ಧಾವಂತವಿದೆ. ಏನೋ ಹೇಳುವ ಕಾತುರವಿದೆ. ಗೌಹರ್.. ಒಮ್ಮೆ ನೋಡಬಾರದೇ..ನನಗೇಕೋ ಅವನ ಮೇಲೆ ಕರುಣೆ ಬರುತ್ತಿದೆ ಕಣೇ..ಎಲ್ಲರಂತಿಲ್ಲ ಅವನು.. ನೀನೇ ನೋಡು ಬಂದು. ಇಲ್ಲ, ನೂರೀ..ನನಗೀಗ ಮನಸಿಲ್ಲ. ದೇವರೊಂದಿಗೆ ರಾತ್ರಿಯಿಡೀ ಮಾತಾಡಬೇಕು ನಾನು. ಮತ್ತೆ ಮೈಲಿಗೆ ಬೇಡ ಕಣೇ..ನಾಳೆ ಮೊದಲ ಗಿರಾಕಿ ಅವನೇ..ಹೇಳಿ ಬಿಡು ಹೋಗಲು. ನಾಳೆ ಬರಲಿ ಎಂದು ಶಯನಗೃಹದತ್ತ ನಡೆದೆ

                         ಕನ್ನಡಿಯ ಕಣ್ಣಲ್ಲಿ ಕಣ್ಣಿಟ್ಟು ನನ್ನನ್ನು ನಾನೇ ಹುಡುಕುತ್ತಾ ತುಟಿಗೆ ಬಣ್ಣ ಮೆತ್ತಿ..ನಿಸ್ತೇಜ ಕಣ್ಣುಗಳಿಗೆ ಕಾಡಿಗೆ ತೀಡಿ, ತುಟಿಯ ಮೇಲೆ ನಗುವಿನ ಮುಖವಾಡ ತೊಟ್ಟು.. ಕಾಯುತ್ತಿರುವ ಗಿರಾಕಿಗಳ ಎದೆಗೆ ಲಗ್ಗೆ ಹಾಕಲು ಎದ್ದು ನಿಂತೆ..ನಿನ್ನೆಯ ಪಾಗಲ್ ಪ್ರೇಮಿಯ ನೆನಪಾಯ್ತು. ಬಂದಿರುವನೋ ಇಲ್ಲವೋ..ನಶೆಯಲ್ಲಿ ಮಾಡುವ ನಾಟಕವೋ..ಅನಿಸಿ, ಕೋಣೆಯತ್ತ ನಡೆದೆ. ಅದಾಗಲೇ ಹಾಜರಿ ಹಾಕಿದ್ದ ವಿಟನನ್ನೊಮ್ಮೆ ದಿಟ್ಟಿಸಿದೆ. ನನ್ನ ಆಗಮನದಲಿ ಗೌರವದಿಂದ ಎದ್ದು ನಿಂತು ತಲೆ ಕೆಳಗೆ ಹಾಕಿ ನಿಂತವನನ್ನು.. ಕಂಡಾಗ, ಹೊಸತೆನಿಸಿತು. ಏನೂ ತೋರಗೊಡದೆ..ಕದವನಿಕ್ಕಿ..ಸರಸರ ಸೀರೆಯ ನೆರಿಗೆಗಳನ್ನು ಎಳೆದು ಹಾಕಿ, ಇನ್ನೇನು.. ದಯವಿಟ್ಟು… ದಯವಿಟ್ಟು.. ಆ ಕಷ್ಟ ಬೇಡ ಮೊಹತರ್ಮಾ..ತಾವು ಕುಳಿತು ಕೊಳ್ಳಿ. ಮಾತನಾಡಬೇಕಿದೆ ನನಗೆ.. ಅಷ್ಟೇ. ಎಂದು ತೊದಲುತ್ತಾ..ಆ ವ್ಯಕ್ತಿ ಮಾತಾಡಿದಾಗ.. ಸಿಟ್ಟು ನೆತ್ತಿಗೇರಿತು. ಇದು ಧಂಧೆಯ ಟೈಮ್.. ಇದೆಂತಹ ಮಜಾ಼ಕ್ ನಿನ್ನದು.? ಇದಕ್ಕಾಗಿ ನಿನ್ನೆಯಿಂದ ಕಾದಿರುವೆಯಾ…? ಎಂದಾಗ.. ಮಾಫಿ.‌ಮಾಫಿ ಮೊಹತರ್ಮಾ.. ವಿಷಯವೇ ಅಂತದ್ದು. ದಯವಿಟ್ಟು ಸ್ವಲ್ಪ ಸಮಯ ನೀಡಿ. ಹೇಳುವುದನ್ನು ಹೇಳಿ ಹೊರಡುವೆ..ಎಂದು ಕೈಮುಗಿದಾಗ..ಹೂಂ..ಹೇಳಿ ತೊಲಗು ಬೇಗ..ಎಂದೆ ಕೋಪದಿಂದ. ತಾವು ಕುಳಿತು ಸಮಾಧಾನದಿಂದ ನನ್ನ ಮಾತುಗಳನ್ನು ಕೇಳಿ..ನಾನು, ನಿಮ್ಮ ತಂದೆಯ ಕಡೆಯಿಂದ ಫೈಗಾಮ್ ತಂದಿರುವೆ.. ಎಂದ. ಆಂ,..ಏನಂದೆ.. ಎಂದು ಅಕ್ಷರಶಃ.. ಕೂಗಿದೆ. ಶ್..ಶ್..ಯಾರಿಗೂ ಗೊತ್ತಾಗದಿರಲಿ..ಹೌದು, ನಿಮ್ಮ ತಂದೆಯೇ  ಇಲ್ಲಿ ಕಳಿಸಿದ್ದಾರೆ. ನಿಮ್ಮ ತಾಯಿಯ ಬಗ್ಗೆ ತಿಳಿದ ನಂತರ..ಬಹಳ ನೊಂದುಕೊಂಡರು. ಈಗ ನಿಮ್ಮ ಚಿಂತೆಯಲ್ಲಿ ಬೇಯುತ್ತಿದ್ದಾರೆ. ರೋಷ..ಉಕ್ಕಿ ಬಂತು.. ಏಳೋ..ಏಳೋ ಮೇಲೆ, ಆ ನಾಮರ್ದ್ ನನಗೆ ತಂದೆ ಅಲ್ಲ.. ನನಗೆ ತಂದೆ ಅಲ್ಲಾ ಅವ್ನು.. ಹೋಗಿ ಹೇಳು.. ಹೂಂ ನಡೀ ಹೊರಗೆ. ಮೊಹತರ್ಮಾ.. ಶಾಂತಿ.. ಶಾಂತಿ. ಇದು ಸಹಜ..ಈ ಕೋಪ ಜಾಯಿಜ್ ಇದೆ. ಈಗ ಮರಣಶಯ್ಯೆಯಲ್ಲಿ ಇದ್ದಾರೆ ಅವರು. ಅವರ ಕೊನೆಯ ಇಚ್ಛೆ.. ನಿಮಗೆ ಹೇಳಬೇಕಿದೆ.. ಒಮ್ಮೆ ಬಂದು ಅವರನ್ನು ನೋಡಿ.. ನಾಳೆಯವರೆಗೆ ನಾನು ನಿಮಗಾಗಿ ಕಾಯುವೆ. ಮನಸು ತಿಳಿಯಾಗಿಸಿಕೊಂಡು
ಯೋಚಿಸಿ ತೀರ್ಮಾನಿಸಿ. ನಿಮ್ಮ ಯಾವುದೇ ನಿರ್ಧಾರಕ್ಕೆ ಗೌರವವಿದೆ. ಒತ್ತಾಯ ಏನಿಲ್ಲ. ನಾಳೆ ಮತ್ತೆ ಬರುವೆ..ಎಂದು ಹೇಳಿದವನೇ ಹೊರಟು ಹೋದ.

                    ಅಪ್ಪ.. ನನಗೂ ಅಪ್ಪ ಇದ್ದಾನಾ..?.. ಇಷ್ಟ ದಿನ ಇಲ್ಲದೇ ಇಂದು.. ನನ್ನ ನೆನಪೇಕೆ.? ಅವನ ದ್ರೋಹಕ್ಕೆ ನಲುಗಿ ಪ್ರತಿ ದಿನವೂ ಸತ್ತು ಬದುಕಿದ್ದಳು ಅಮ್ಮ.. ಪಾಪ. ಸಾಯುವಾಗ ಮಾಡಿದ ಕರ್ಮ ನೆನಪಾಗಿದೆ ನಾಮರ್ದ್ ನಿಗೆ..ಥೂ..ಎಂದು ಉಗಿದು, ಹೊರಬಂದೆ. ಮುಂದಿನ ಗಿರಾಕಿ.. ಹೊರಗೆ ಕಾಯುತ್ತಿದ್ದ. ಈ ಅವತಾರ ಕಂಡು..ಮೆಲ್ಲನೆ ಜಾಗ ಖಾಲಿ ಮಾಡಿದ. ಆ ದಿನ ಪೂರ್ತಿ.. ಕೆಂಡದ ಮೇಲೆ ನಿಂತವರಂತೆ ಕಳೆದೆ ಏನು ಮಾಡಲಿ ಎನ್ನುವ ಡೋಲಾಯಮಾನ ಸ್ಥಿತಿ. ಇದೆಲ್ಲ ಏನಾದರೂ ಮೋಸದ ಜಾಲವಿರಬಹುದೇ..ಮತ್ತೆ ನನ್ನನ್ನು ಯಾಮಾರಿಸಿ.. ಮಾರುವ ಲಾಲಿಬೇನ್ ಉದ್ದೇಶವೋ..ಯಾರನ್ನೂ ನಂಬದ ಮಾನಸಿಕ ಸ್ಥಿತಿ.
ಆದದ್ದಾಗಲಿ..ನೋಡೇ ಬಿಡೋಣ. ಅಪ್ಪನೆನ್ನುವ ಆ ವ್ಯಕ್ತಿ ಸಿಕ್ಕರೆ ಮೊದಲೆರಡು ಕಪಾಳಕ್ಕೆ ಬಾರಿಸಿಯೇ ಮಾತಾಡುವೆ ಅವನಿಗೆ.

              ….. ಲಾಲೀಬೇನ್ ಗಿರಾಕಿ ಹೊರಗೆ ಹೋಗುವ ಖ್ವಾಯಿಷ್ ಮಾಡಿದ್ದಾನೆ. ಬೆಲೆ ದುಪ್ಪಟ್ಟು ಏನು ಮಾಡಲಿ..? ಹೂಂ ಹೋಗಿ ಬಾ..ನಿನಗೂ ಬೇಜಾರಾಗಿರಬಹುದು..ಎಂದಾಗ.. ಮಾತಾಡದೇ ಹೊರಗೆ ಬಂದೆ ಅವನ ಹಿಂದೆ. ಗಾಡಿ ತಯಾರಿತ್ತು. ಎರಡು ಗಂಟೆಗಳ ಪ್ರಯಾಣದ ನಂತರ.. ಹವೇಲಿಯಂತಹ ಮನೆಗೆ ಬಂದೆವು. ಮುಂದೆ ಅಲ್ಲಿ ಕಂಡದ್ದೆಲ್ಲಾ ಅಮ್ಮ ಹೇಳಿದ ವೈಭವದ ವಾತಾವರಣ.
ಒಂದು ಕೋಣೆಯ ಮಂಚದ ಮುಂದೆ ನಾನು ಬಂದು ಕೂತಿದ್ದೆ. ಬಹಳಷ್ಟು ಯಂತ್ರಗಳ ನಡುವೆ ಮನುಜನ ಮುದ್ದೆಯೊಂದು ಮಲಗಿತ್ತು. ಖುಷಾಮದಿ ಗೌಹರಜಾನ್. ಬೇಟಿ ..ಅನ್ನುವ ಅಧಿಕಾರ ನನಗಿಲ್ಲ.. ನಾ ನಿನ್ನ ಮುಜರಿಮ್ ..ಬೇಟಿ , ಅನ್ಯಾಯ ಆಗಿದೆ ನಿನಗೆ ನಿಮ್ಮ ತಾಯಿಗೆ.. ದೊಡ್ಡ ಅನ್ಯಾಯ.. ಬೇಟಿ..ಮಾಫಿ.. ಮಾಫಿ ಬೇಟಿ.. ಎಂದು ಮಾತನಾಡಲಾಗದೇ..ತೇಕತೊಡಗಿದಾಗ..ಪಕ್ಕದಲ್ಲಿ ಇದ್ದ ವೈದ್ಯರ ದಂಡು..ಶುಶ್ರೂಷೆ ಆರಂಭಿಸಿದರು. ಆಗಾಗ ತೊಂದರೆಯ ನಡುವೆ ನನಗೆ ಕೈಮುಗಿದು.. ಕ್ಷಮೆ ಕೇಳುತ್ತಲೇ ಇದ್ದ. ಅವನನ್ನು ಕಂಡ ನನಗೆ ಕೋಪವೆನ್ನುವುದು ಕರಗಿ ಹೋಯಿತು. ಏನು ಹೇಳಲಿ.? ಸತ್ತ ತಾಯಿಯ ಪರವಾಗಿ ನಾನು ಕ್ಷಮಿಸಲೇ..ಅವಳು ಅನುಭವಿಸಿದ ನರಕಸದೃಶ ಬದುಕಿನ ವ್ಯಥೆ ಹೇಗೆ ತಿಳಿದೀತು ಇವನಿಗೆ.? ಸತ್ತ ನಂತರವೂ ಸ್ವರ್ಗಕ್ಕೆ ಹೋಗುವ ಹಪಾಹಪಿ.. ಮುದುಕನಿಗೆ. ಇವನಿಗೆ ಕ್ಷಮೆ ಸಿಗಬಾರದು ಅಲ್ಹಾ..ನನ್ನ ತಾಯಿಯ ಕ್ಷಮೆಗೆ ಅರ್ಹನಲ್ಲ ಇವನು. ನನ್ನ ಈ ಹೊಲಸು ಜೀವನಕ್ಕೂ ಇವನೇ ಕಾರಣ..ನನ್ನ ಕ್ಷಮೆಯೂ ಇಲ್ಲ ಇವನಿಗೆ. ನರಕ..ನರಕ ಸಿಗಲಿ ಇವನಿಗೆ.. ನರಕ ಕೊಡೂ ದೇವರೇ..ಇಂತಹ ಹುಳುಗಳನ್ನು ಖಂಡಿತ ಭೂಮಿಗೆ ತರಬೇಡ..ಇದು ನನ್ನ ಕಳಕಳಿಯ ಬೇಡಿಕೆ ನಿನ್ನಡಿಗೆ..ಎದ್ದು ಹೊರಬಂದವಳ ಕಿವಿಗೆ.. ಮಾಫಿ.. ಬೇಟಾ ಮಾಫಿ ದೇ..ಎನ್ನುವ ಕೂಗು ಕೇಳುತ್ತಲೇ ಇತ್ತು.


3 thoughts on ““ಗೌಹರಜಾನ್”ಶಮಾ. ಜಮಾದಾರ ಅವರ ಸಣ್ಣ ಕಥೆ

  1. ನನ್ನ ಕಥೆ ಪ್ರಕಟಿಸಿದ ಸಂಗಾತಿ ಪತ್ರಿಕೆಗೆ ಹೃತ್ಪೂರ್ವಕ ಧನ್ಯವಾದಗಳು

    ಶಮಾ ಜಮಾದಾರ.

  2. ಮೇಡಂ ಅದ್ಭುತ ಕಥೆ….ಓದಿ ಕಣ್ಣು ತೇವಗೊಂಡವು.

Leave a Reply

Back To Top