ಸಾವಿಲ್ಲದ ಶರಣರು ಮಾಲಿಕೆ,ಸ್ವಾತಂತ್ರ್ಯ ಯೋಧ ಶ್ರೀ ಅಂಬಲಿ ಚೆನ್ನಬಸಪ್ಪ-ಡಾ.ಶಶಿಕಾಂತ್ ಪಟ್ಟಣ

ಅವಿಭಜಿತ ಬಿಜಾಪುರ (ಇಂದಿನ ವಿಜಯಪುರ) ಜಿಲ್ಲೆಯ ಅಗ್ರಗಣ್ಯ ಕಾಂಗ್ರೆಸ್ ನಾಯಕರಾಗಿದ್ದ ಇವರು, ಭಾರತದ ಸ್ವಾತಂತ್ರ್ಯ ಹೋರಾಟ ಮತ್ತು ಕರ್ನಾಟಕದ ಏಕೀಕರಣಕ್ಕಾಗಿ ದುಡಿದ ಮಹನೀಯರು.

ಅಂಬಲಿಯವರು ವಿಜಯಪುರ ಜಿಲ್ಲೆಯ ಬಬಲೇಶ್ವರ

 ತಾಲೊಕಿನ ಅರ್ಜುಣಗಿ ಗ್ರಾಮದವರು.

ಜನನ ಮತ್ತು ಶಿಕ್ಷಣ

1895-1962. ಸ್ವಾತಂತ್ರ್ಯಯೋಧ ಮತ್ತು ಕರ್ನಾಟಕ ಏಕೀಕರಣದ ನೇತಾರ. ವಿಜಯಪುರ ತಾಲ್ಲೂಕಿನ ಅರ್ಜುಣಗಿ ಗ್ರಾಮದಲ್ಲಿ ಒಕ್ಕಲುತನದ ಮನೆತನದಲ್ಲಿ ಜನಿಸಿದರು. ತಂದೆ ಜಗದೇವಪ್ಪ. ಶಿಕ್ಷಣ ಕನ್ನಡ ನಾಲ್ಕನೆಯ ತರಗತಿಯವರೆಗೆ.

ಸ್ವಾತಂತ್ರ್ಯ ಹೋರಾಟ

1914ರಲ್ಲಿ ಒಂದನೆಯ ಮಹಾಯುದ್ಧ ನಿದಿಗಾಗಿ ಗ್ರಾಮಕ್ಕೆ ಬಂದ ಮಾಮಲೆೆದಾರರನ್ನು ವಿರೋದಿಸಿ ಮೂರುದಿನ ಉಪವಾಸಮಾಡಿ ಬಂಧನದ ಶಿಕ್ಷೆ ಅನುಭವಿಸುವುದರೊಂದಿಗೆ ಇವರ ಸ್ವಾತಂತ್ರ್ಯಹೋರಾಟ ಪ್ರಾರಂಭವಾಯಿತೆನ್ನಬಹುದು. ಗಾಂಧಿಯವರ ಅನುಯಾಯಿಯಾಗಿ ಬಿಜಾಪುರದಲ್ಲಿ ಒಂದು ಸಂಘ ಕಟ್ಟಿ ಭೂಕಂದಾಯ ವಸೂಲಿಯನ್ನು ವಿರೋದಿsಸಿದರು. 1919ರ ಜಲಿಯನ್ವಾಲಾಬಾಗ್ ಹತ್ಯಾಕಾಂಡ ಇವರನ್ನು ಸಂಪೂರ್ಣವಾಗಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎಳೆದು ತಂದಿತು. ಚಳವಳಿಯಲ್ಲಿ ಭಾಗವಹಿಸಿ ಮೊದಲು 1919ರಲ್ಲಿ ಕಾರಾಗೃಹ ಶಿಕ್ಷೆ ಅನುಭವಿಸಿದರು.

ಅನಂತರ ಕಾಯದೆಭಂಗ ಚಳವಳಿಯಲ್ಲಿ ಜೈಲು (1931) ಸೇರಿ ವಿಜಯಪುರ ಹಾಗೂ ವಿಸಾಪುರಗಳಲ್ಲಿ ಬಂಧನದಲ್ಲಿದ್ದರು. ಸರ್ಕಾರದ ಕಿರುಕುಳ ಹೆಚ್ಚಾದಾಗ ಇವರು ವಿಜಯಪುರ ಬಿಟ್ಟು ಸಂಸಾರಸಮೇತ ಸೊಲ್ಲಾಪುರಕ್ಕೆ ಹೋಗಬೇಕಾಯಿತು. ಅಲ್ಲಿ ಜೀವನವನ್ನು ಸಾಗಿಸಲು ನೌಕರಿ ಹಿಡಿದರೂ ಕಾಯದೆಭಂಗ ಚಳವಳಿಯಲ್ಲಿ ಮತ್ತೆ ಸೇರಿ ಲಷ್ಕರಿ ಕಾನೂನಿನ ಕಾಲದಲ್ಲಿ ಸರ್ಕಾರದ ಕಣ್ಣುತಪ್ಪಿಸಿ ಸೊಲ್ಲಾಪುರದಿಂದ ಮತ್ತೆ ವಿಜಯಪುರಕ್ಕೆ ಬಂದರು. 1930-33ರ ಸಾರ್ವತ್ರಿಕ ಕಾಯದೆಭಂಗ ಚಳವಳಿಯಲ್ಲಿ ಮುಖ್ಯಪಾತ್ರ ವಹಿಸಿದ್ದಕ್ಕಾಗಿ ಸರ್ಕಾರ ಇವರಿಗೆ ಕಠಿಣಶಿಕ್ಷೆ ವಿದಿಸಿತು. ಜೈಲುವಾಸದ ಕಾಲದಲ್ಲಿ ಇವರು ಕನ್ನಡ, ಹಿಂದಿ ಮತ್ತು ಮರಾಠಿ ಭಾಷೆಗಳನ್ನು ಕಲಿತರು.

1940ರಲ್ಲಿ ಇವರು ಕೆ.ಪಿ.ಸಿ.ಸಿ. ಕಾರ್ಯದರ್ಶಿಯಾಗಿ ಹುಬ್ಬಳ್ಳಿಧಾರವಾಡಗಳಲ್ಲಿ ವಾಸಮಾಡತೊಡಗಿದರು. 1942ರಲ್ಲಿ ಕಾರ್ಯಕರ್ತರಾಗಿ, ಚಲೇಜಾವ್ ಸಮಿತಿಯ ಅಧ್ಯಕ್ಷರಾಗಿ ದುಡಿದರು. ಟಪಾಲು ಲೂಟಿ ಮಾಡುವುದು, ಸರ್ಕಾರಿ ಮಹತ್ತ್ವದ ಕಾಗದಪತ್ರಗಳನ್ನು ಸುಡುವುದು ಮುಂತಾದ ವಿಧ್ವಂಸಕ ಕೃತ್ಯಗಳನ್ನು ಕೈಗೊಂಡರು. ಇವರ ನೇತೃತ್ವದಲ್ಲಿ ಮಿಂಚನಾಳ ಮತ್ತು ಜುಮನಾಳ ರೈಲು ನಿಲ್ದಾಣಗಳು ಅಗ್ನಿಗೆ ಆಹುತಿಯಾದವು. ಮುಂಬಯಿಯಿಂದ ಇಂಗ್ಲೆಂಡಿಗೆ ಬಂಗಾರ, ಸಾಮಾನುಸರಂಜಾಮು ತುಂಬಿಕೊಂಡು ಹೊರಟ ಹಡಗೊಂದರ ಜಲಸಮಾದಿ ಮಾಡಿದ ಕೀರ್ತಿ ಇವರದು. ಆ ಕಾಲದಲ್ಲಿ ಇವರನ್ನು ಹಿಡಿದುಕೊಟ್ಟರೆ ರೂ.5,000 ಬಹುಮಾನ ಕೊಡುವುದಾಗಿ ಸರ್ಕಾರ ಸಾರಿತು.

ರಾಜಕೀಯ ಜೀವ

1955ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ, ತಿಕೋಟಾ ವಿಧಾನಸಭಾ ಕ್ಷೇತ್ರ(ಈಗಿನ ಬಬಲೇಶ್ವರ ವಿಧಾನಸಭಾ ಕ್ಷೇತ್ರ)ದಿಂದ 1952 ಮತ್ತು 1957ರಲ್ಲಿ ವಿಧಾನ ಸಭಾ ಸದಸ್ಯರಾಗಿ ಇವರು ಆಯ್ಕೆಹೊಂದಿದರು. ಕರ್ನಾಟಕ ಏಕೀಕರಣಕ್ಕಾಗಿ ಮತ್ತು ಅಸ್ಪ್ನೃಶ್ಯತಾ ನಿವಾರಣೆಗಾಗಿ ದುಡಿದರು. ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಬೇಕೆಂಬುದು ಇವರ ಹಟವಾಗಿತ್ತು.

ಅಂಬಲಿ ಚೆನ್ನಬಸಪ್ಪನವರು ತಿಕೋಟಾ ತಾಲ್ಲೂಕಿನಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ರಾಜಕೀಯ ಜೀವನ ಆರಂಭಿಸಿದರು. ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿಯ ಅಧ್ಯಕ್ಷರಾಗಿ [ 1957 ರ ರಾಜ್ಯ ಚುನಾವಣೆಯಲ್ಲಿ ಬಸವರಾಜ ನಾದೂರರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾದರು. ಮರಾಠಿ ಭಾಷೆಯ ಮಧ್ಯೆ ಮರೆಯಾಗಿದ್ದ ಕನ್ನಡ ಮತ್ತು ಕನ್ನಡ ನಾಡನ್ನು ಒಂದಾಗಿಸಲು ಶ್ರಮವಹಿಸಿದ ಚೆನ್ನಬಸಪ್ಪನವರು ಕರ್ನಾಟಕದ ಸರ್ದಾರ್ ಪಟೇಲರೆಂದೇ ಬಿಜಾಪುರದಲ್ಲಿ ಖ್ಯಾತರಾದರು.[ಎಸ್ ಆರ್ ಕಂಠಿ, ಮುರಿಗೆಪ್ಪ ಸುಗಂಧಿ, ಬಸಪ್ಪ ದಾನಪ್ಪ ಜತ್ತಿ ಮುಂತಾದ ನಾಯಕರ ಒಡನಾಡಿಯಾಗಿದ್ದರು. ಯುವ ನೇತಾರರನ್ನು ಬೆಳೆಸುವಲ್ಲಿ ಆಸಕ್ತಿ ವಹಿಸಿದ್ದ ಚೆನ್ನಬಸಪ್ಪನವರು, 1962 ರ ಚುನಾವಣೆಯಲ್ಲಿ ಬಿ ಎಂ ಪಾಟೀಲರಿಗೆ ಸ್ಥಾನ ಬಿಟ್ಟುಕೊಟ್ಟರು.[

ಸಮಾಜ ಸೇವೆ

ಸ್ವಾತಂತ್ರ್ಯ ಹೋರಾಟದಲ್ಲಿ ಕರಪತ್ರ ಹಂಚಲು ಹಣ ಸಾಲದಾದಾಗ, ಹೊಸದಾಗಿ ಮದುವೆಯಾಗಿ ಮನೆಗೆ ಬಂದ ಅತ್ತಿಗೆಯ 10 ತೊಲ ಚಿನ್ನದ ಒಡವೆಯನ್ನು ಕೇಳಿ ಪಡೆದರು. ನಿಸ್ಪ್ರಹ ಮನಸ್ಸಿನ ಸಾಧ್ವಿಯಾದ ಚೆನ್ನಬಸಪ್ಪನವವರ ಅತ್ತಿಗೆ ಮರುಯೋಚಿಸದೆಯೇ ನೀಡಿದ್ದರು. 

ಚೆನ್ನಬಸಪ್ಪನವರು 1962ರಲ್ಲಿ ಹೃದಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು 5 ಲಕ್ಷ ರೂಪಾಯಿಯನ್ನು ದೇಣಿಗೆ ನೀಡಿ, ಶ್ರೀ ಜಯದೇವ ಹೃದ್ರೋಗ ಸಂಸ್ಥೆಯನ್ನು ಸ್ಥಾಪಿಸಲು ಕಾರಣರಾದರು].ಜಯದೇವ ಸಂಸ್ಥೆ, 1984ರ ಏಪ್ರಿಲ್ 9 ರಂದು ಅಂದಿನ ರಾಷ್ಟ್ರಪತಿ ಗ್ಯಾನಿ ಜೈಲ್ ಸಿಂಗ್ ರಿಂದವಿದ್ಯುಕ್ತವಾಗಿ ಉಧ್ಘಾಟನೆಯಾಯಿತು.[

ನಿಧನ

ಪಾರ್ಶ್ವವಾಯುಪೀಡಿತರಾಗಿ 1962 ಮಾರ್ಚ್ 1ರಂದು ನಿಧನರಾದರು. ಸ್ವಂತ ಊರಾದ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲ್ಲೂಕಿನ ಅರ್ಜುಣಗಿ ಗ್ರಾಮಯಲ್ಲಿ ಇವರ ಸಮಾದಿ ಇದೆ.


9 thoughts on “ಸಾವಿಲ್ಲದ ಶರಣರು ಮಾಲಿಕೆ,ಸ್ವಾತಂತ್ರ್ಯ ಯೋಧ ಶ್ರೀ ಅಂಬಲಿ ಚೆನ್ನಬಸಪ್ಪ-ಡಾ.ಶಶಿಕಾಂತ್ ಪಟ್ಟಣ

  1. ಈ ಲೇಖನದಲ್ಲಿ ಎಲೆ ಮರೆಯ ಕಾಯಿಯಂತಿರುವ ಸ್ವಾತಂತ್ರ್ಯ ಹೋರಾಟಗಾರರ ಪರಿಚಯವಿದೆ.
    ಧನ್ಯವಾದಗಳು ಸರ್

    ಡಾ ಗೀತಾ ಡಿಗ್ಗೆ

  2. ಸ್ವತಂತ್ರ ಯೋಧರ ಪರಿಚಯ ಚೆನ್ನಾಗಿ ಮೂಡಿ ಬಂದಿದೆ ಸರ್

  3. ನಾಡಿಗಾಗಿ ತಮ್ಮ ಜೀವನವನ್ನು ಕಳೆದ ಸಾರ್ಥಕ ಬದುಕಿನ ಪರಿಚಯ ಲೇಖನ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು

  4. ಸ್ವತಂತ್ರ ಯೋಧರು ನಮ್ಮೂರ ಹಿರಿಯರ ಬಗ್ಗೆ ತುಂಬಾ ಅದ್ಭುತವಾಗಿ ಪರಿಚಯ ಮಾಡಿದಿರಾ ಸರ್

  5. ಸ್ವತಂತ್ರ್ಯಯೋದ ಶ್ರೀ ಅಂಬಲಿ ಚನ್ನಬಸಪ್ಪನವರ ಮಾಹಿತಿ ಚೆನ್ನಾಗಿ ತಿಳಿಸಿದ್ರಿ, ಸರ್ ಧನ್ಯವಾದಗಳು.

Leave a Reply

Back To Top