ವ್ಯಾಸ ಜೋಶಿ ಅವರ ತನಗಗಳು

ಅತಿಥಿಯ ಸತ್ಕಾರ
ಬಂಧುಗಳ ವಿಸ್ವಾಸ,
ಹಂಚಿ ತಿನ್ನುವ ಚಾಳಿ
ಅಮ್ಮನ ಬಳುವಳಿ.

ಸಂಸಾರ ಸಾಗರದಿ
ಎಷ್ಟೊಂದು ಅಲೆಗಳು
ತಲೆ ತಗ್ಗಿಸಿ ಈಜು
ಸುಗಮವದು ಬಾಳು.

ಜೀವನದಾಟದಲಿ
ಸೋಲು- ಜಯ ಸಹಜ
ಸೋಲೊಂದೆಮಗೆ ಪಾಠ
ಗೆಲ್ಲಬೇಕೆಂಬ ಹಠ.

ತಪ್ಪನ್ನು ಮರೆಮಾಚಿ
ತನ್ನದೇ ಸರಿ ಎಂದು
ವಾದಿಸುವ ಲೇಖನ
ಅದೇ ಆತ್ಮಕಥನ.

ಸುಗಮ ಕೆಲಸಕೆ
ನರ- ನಾರಾಯಣಗೂ
ಲಂಚವೆಂಬ ಕಾಣಿಕೆ
ಮಂತ್ರದಿ ಹೊಗಳಿಕೆ.

ಗೊತ್ತಿದ್ದೂ ಇಲ್ಲದಂತೆ
ಇರೋದು ಬರೀ ಗತ್ತು
ಸತ್ಯವು ಯಾವಾಗಲೂ
ಒಳ ಮನಕೆ ಗೊತ್ತು.

ಅಳಿಯ ಒಳ್ಳೆಯವ
ಮಗಳ ಮಾತ್ಕೇಳ್ತಾನ,
ಮಗನೇ ನಾಲಾಯಕ್
ಸೊಸೆ ಹೇಳ್ದಂಗ್ಕೇಳ್ತಾನ.

—————————–

Leave a Reply

Back To Top