ಕಾವ್ಯ ಸಂಗಾತಿ
ವ್ಯಾಸ ಜೋಶಿ
ತನಗಗಳು
![](https://sangaati.in/wp-content/uploads/2024/06/download-3-5.jpg)
ಋತುಚಕ್ರ ತಿರುಗಿ
ಬಂತು ಮುಂಗಾರು ಮಳೆ
ಬೀಜ ಬಿತ್ತುವುದಕೆ
ಹದಗೊಳಿಸಲಿಳೆ.
ಹಾತೊರೆದ ಭೂಮಿಯ
ಒಡಲಾಯ್ತು ಹಸಿಯು
ನಾಟಿಯನು ಮಾಡಲು
ಸರಿಯಾದ ತತಿಯು.
ಹದವಾದ ಭೂಮೀಲಿ
ಕೂರಿಗೆಯ ನೀ ಹೂಡು
ಮನಸಿಂದ ಕಸವ
ಕಳೆ ಕಿತ್ತಿ ಬಿಸಾಡು.
ಸಾಕಷ್ಟು ಕುದಿಯಲ್ಲೂ
ರೈತ ದಂಪತಿ ಮಾತು
ರಭಸದ ಮಳೆಯು
ಬೆಳೆಗೆ ಛೊಲೋ ಆತು.
ಕಚ ಪಚ ರಾಡೀಲಿ
ಹದವಾಗಿದೆ ಗದ್ದೆ
ಪೈರಿನ ಸಸಿಯನು
ನಾಟಿದವನೇ ಗೆದ್ದ.
ಸುಸಮಯದಿ ಮಳೆ
ಬಿತ್ತನೆಯಾದ ಇಳೆ
ಮೂರು ತಿಂಗಳ ಬೆಳೆ
ರಮಣಿಸುವ ಕಳೆ.
ಮಾಗಿದ ಫಲ ನೋಡಿ
ಬುತ್ತಿ ರೊಟ್ಟಿಯ ಮಾಡಿ
ಚರಗಾವ ಚೆಲ್ಲೋಣ
ಫಸಲಿಗೆ ಕಾಯೋಣ
—————————–
ವ್ಯಾಸ ಜೋಶಿ.
![](https://sangaati.in/wp-content/uploads/2023/09/vyasajoshi-832x1024.jpg)