ಶಾಲಿನಿ ಕೆಮ್ಮಣ್ಣು ಕವಿತೆ-ಮಂಥನ

ಸಮುದ್ರ ತೀರದಲಿ ಕುಳಿತನೊಬ್ಬ ಬಾಲಕ
ಚಪ್ಪಲಿಗಳ ಅಲೆಗಳು ಕೊಚ್ಚಿದಕೆ ಅವನೆಂದ
ಕಳ್ಳ ಈ ಸಮುದ್ರ
ಮೀನು ತುಂಬಿದ ಬಲೆಯನೆಳೆದ ಮೀನುಗಾರ
ಸಂತೃಪ್ತಿಯಿಂದ ಹೇಳಿದ ನನ್ನ ಹೊಟ್ಟೆಯ ಮಾಲಿಕ ಈ ಸಮುದ್ರ
ಸಮುದ್ರದಲಿ ಮುಳುಗಿ ಸತ್ತನೊಬ್ಬ ವ್ಯಕ್ತಿ
ಆತನ ತಾಯಿ ಎಂದಳು ಕೊಲೆಗಾರ ಈ ಸಮುದ್ರ
ಕಡಲ ತೀರದಿ ಬಡವನಿಗೆ ಕಾಣಿಸಿತೊಂದು ಮುತ್ತು
ಖುಷಿಯಿಂದ ಉದ್ಘರಿಸಿದನಾತ ಮಹಾದಾನಿ ಈ ಸಮುದ್ರ
ಚಿಂತೆಯ ಮರೆಯಲೆಂದು ವಿಹರಿಸಲು ಬಂದ ಚಪಲಿಯೊಬ್ಬ
ತೆರೆಗಳ ಮೊರೆತಕೆ ಕೆರಳಿದ ಅವನೆಂದ ಭೋರ್ಗರೆವ ಜಲರಾಶಿ ಈ ಸಮುದ್ರ
ಕಡಲ ತಡಿಯಲಿ ಏಕಾಂತದಿ ಮುಳುಗಿದನೊಬ್ಬ ದಾರ್ಶನಿಕ
ಆನಂದದಿಂದ ಆತನೆಂದ ಸೊಬಗಿನಸಿರಿ ಈ ಸಮುದ್ರ
ಯಾರೇನಂದರೇನಂತೆ ?
ಹಿರಿ ಹಿಗ್ಗಿತೇ ಜಲಧಿ ಕಿರಿ ಕುಗ್ಗೀತೆ ಅಂಬುಧಿ ?
ಗಡಸಾಗಿ ಸೊಗಸಾಗಿ ತನ್ನಂತೆ ತಾನಿಹುದು
ನುಂಗಿ ಎಲ್ಲವನು ಮಹಾ ಗುರುವಾಯಿತು ಸಿಂಧು

ತಾರತಮ್ಯ ಯಾರ ಕರ್ಮ?
ಎಲ್ಲವೂ ಅವರವರ ಯೋಗ್ಯತೆಯ ಮರ್ಮ
ಸತ್ಕರ್ಮವೇ ಸಧರ್ಮ ಚಿಂತಿಸುವುದು ಪರಧರ್ಮ
ಅರಿವೇ ಗುರುವು ಸೃಷ್ಟಿಯೇ ಸದ್ಗುರುವು
ಹೊರುವವನಿರುವಾಗ ಹೊರೆಯ ಭಯವೇಕೆ?
ಉರಿವವರ ಕಡೆ ಗಮನವೇಕೆ?
ತಡೆ ಬರಲಿ ತಲ್ಲಣವೇಕೆ?
ಬಂದಂತೆ ಸಾಗು ಬಾಳ ದಾರಿಯಲಿ
ಏಳುಬೀಳುಗಳ ಹಂಗೇಕೆ?
ತಾಳ್ಮೆ ಇರಲಿ ಅನವರತ ಸ್ಥೈರ್ಯ ತುಂಬಲಿ ಭಗವಂತ


2 thoughts on “ಶಾಲಿನಿ ಕೆಮ್ಮಣ್ಣು ಕವಿತೆ-ಮಂಥನ

  1. ಮೇಡಮ್ ಅವರೇ ಕವನದ ಆರಂಭದ ಸಾಲುಗಳು ಬಹಳ ಉತ್ತಮವಾಗಿ ಮೂಡಿಬಂದಿವೆ. ಹಾಗೆಯೇ ಆ ಸಾಲುಗಳು ಚಿಂತನೆಗೆ ಹಚ್ಚುತ್ತವೆ. ಆದರೆ ಕೊನೆಯ ಚರಣ ನೀತಿ ಬೋಧಕ ಸಾಲುಗಳಂತೆ ಕಂಡುಬರುತ್ತಿವೆ. ಅಭಿನಂದನೆಗಳು. ಬಿ ಆರ್ ಅಣ್ಣಾಸಾಗರ

Leave a Reply

Back To Top