ಡಾ. ಪುಷ್ಪಾವತಿ ಶಲವಡಿಮಠ ಕವಿತೆ-ಬಸವನ ಕಾಗೆ

ಹಂಚಿಕೊಂಡು ತಿನ್ನಬೇಕು
ಹಂಚಿಕೊಂಡಷ್ಟು
ಹುಲುಸಾಗುವುದು ಸಕಲವೂ…
ನಿತ್ಯ ಸತ್ಯವಾದ ತತ್ವವೊಂದನು
ನಿತ್ಯವೂ ಕಲಿಯುತ್ತಿತ್ತು ಮಗುವೊಂದು

ಕಾಗೆ ಒಂದಗಳು ಕಂಡರೆ
ಕರೆಯದೇ ತನ್ನ ಬಳಗವನ್ನೆಲ್ಲಾ
ಬಸವನ ವಚನ ನಿತ್ಯವೂ
ತಪ್ಪದೆ ಕಂಠ ಪಾಠ ಮಾಡುತ್ತಿತ್ತು ಬಿಡದೆ

ಒಂದು ದಿನ
ಮಗುವಿನ ಮಗ್ಗುಲಲಿ
ರೊಟ್ಟಿಯ ತುಣುಕೊಂದು ಬಿದ್ದಿತ್ತು
ರೊಟ್ಟಿಗಾಗಿ ಹಾರಿ ಬಂದ ಕಾಗೆ
ಕರೆಯಿತು ತನ್ನ ಬಳಗವನ್ನೆಲ್ಲ
ಬಸವನ ವಚನವ ನೆನೆಯಿತು
ಮುಗ್ದ ಮಗುವಿನ ಮನಸು

ಕಾಗೆಯ ಬಳಗವೆಲ್ಲ
ರೊಟ್ಟಿಯ ಆಸೆಗೆ ಒಂದುಗೂಡಿತು
ಬಳಗವೆಲ್ಲ ಸೇರಿ ರೊಟ್ಟಿ ಆಸೆಗೆ
ಬಾಯಿ ಹಾಕಲು
ಕರೆದ ಕಾಗೆ ತುಣುಕು ರೊಟ್ಟಿ ಬಿಡದೆ
ಕಚ್ಚಿಕೊಂಡು ಹಾರಿ ಹೋಯಿತು

ಇದನೋಡಿದ ಮಗುವಿಗೀಗ ಗೊಂದಲ
ಓಡಿ ಬಂದು ಅಮ್ಮನಿಗೆಂದಿತು

ಕಾಗೆ
ಹೀಗೇಕೆ ಅಮ್ಮಾ?!
ನಾ ಓದಿದ ವಚನದ ವಿರುದ್ದ!

ನಸು ನಗುತಾ
ಅಮ್ಮನೆಂದಳು
ಮಗು ಇದು ಕಲಿಯುಗದ ಕಾಗೆ
ಅಲ್ಲ ಅದು ಬಸವನ ಕಾಗೆ
ಸಿಕ್ಕಷ್ಟು ಬಾಚಿಕೊಂಡು
ಯಾರಿಗೂ ದಕ್ಕದಂತೆ
ಕಸಿದೊಯ್ಯುವುದೇ ಅದರ ಗುಣ.

ಬಸವನ ಕಾಗೆಯಂತೆ
ಹಂಚಿಕೊಳ್ಳುವ ಗುಣ
ಅದಕ್ಕೆಲ್ಲಿ ಬಂದೀತು?
——‐‐



ಈಗ ಏನಿದ್ದರೂ ಬಸವ ವಚನ
ಓದಲು ಹಾಡಲು ಹೊಗಳಲು
ಕಂಠ ಪಾಠ ಮಾಡಲು ಮಾತ್ರ….

ಹೋಗು ಮಗು ನೀನೂ
ಕಂಠ ಪಾಠ ಮಾಡು
ನಾಳೆ ನಿನಗಿದೆ
ವಚನ ಕಂಠ ಪಾಠ ಸ್ಪರ್ಧೆ !

————————

7 thoughts on “ಡಾ. ಪುಷ್ಪಾವತಿ ಶಲವಡಿಮಠ ಕವಿತೆ-ಬಸವನ ಕಾಗೆ

  1. ಸೋಹಂ ಏನಿಸದೆ ದಾಸೋಹಂ ಎಂದೆನಿಸುವ ಶರಣರ ಆಶಯ ವನ್ನು ಮನುಷ್ಯರು ಬಿತ್ತ ಬೇಕಿತ್ತು ಕಾಲದ ವ್ಯಂಗ್ಯ ವೆಂದರೆ ಪ್ರಾಣಿ ಪಕ್ಷಿ ಗಳು ದಾಸೋಹ ಚಿಂತನೆ ಮಾಡುತ್ತಿವೆ. ಹಂಚಿ ತಿನ್ನುವ ಕಲ್ಪನೆ ತತ್ವ ಹೇಳುವದು ಶಾಸ್ತ್ರ ತಿನ್ನುವದು ಬದನೇಕಾಯಿ ಎಂಬಂತೆ ಪಕ್ಷಿಗಳ ಮೇಟಾಫರ ಮೂಲಕ ಕವಿತೆ ರಚಿತ ವಾಗಿದೆ
    ಕಾವ್ಯ ಸಶಕ್ತ ವಾಗಿದೆ ಮೇಡಂ
    ಶುಭಾಶಯಗಳು

  2. ವಾಸ್ತವದ ಅನಾವರಣ ಕಾವ್ಯದ ಮೂಲಕ ಅದ್ಭುತವಾಗಿದೆ ಶರಣರ ಅಂದಿನ ಕಾಂಜ್ಞಾನದ ವಚನಗಳು ಇಂದಿನ ಬದುಕಿನ ನಿತ್ಯಸತ್ಯಗಳಾಗಿವೆ. ಗುರುಮಾತೆ, ನಿಮಗೆ ನನ್ನ ನಮನ

  3. ಅಮೋಘವಾದ ಭಾವದ ಹರಿಯು ಈ ಕವಿತೆಯಲ್ಲಿ ಇದೆ. ಸೂಪರ್ ಕಾವ್ಯವು

  4. ಪ್ರಸ್ತುತ ದಿನಮಾನದ ವಾಸ್ತವದ ಅನಾವರಣ…ಅದ್ಭುತ ರಚನೆ ಮೇಡಂ..
    ಹಮೀದಾ ಬೇಗಂ ದೇಸಾಯಿ. ಸಂಕೇಶ್ವರ.

Leave a Reply

Back To Top