ಅನಸೂಯ ಜಹಗೀರದಾರ ಗಜಲ್

ಕಾರಣವಿಲ್ಲದೆ ಏಕೆ ನನ್ನ ಕೈ ಬಿಟ್ಟರು
ತಿಳಿಯದಂತೆ ಇದ್ದು ಏಕೆ ನಟಿಸಿದರು

ಬಹಳ ದಿನದಿಂದ ಹೀಗೆ ತಳಮಳವಿದೆ
ಅರ್ಥೈಸಿಕೊಳ್ಳದೆ ತಪ್ಪೇಕೆ ಗ್ರಹಿಸಿದರು

ಏನು ಹೇಳಲಿ ಎಲ್ಲ ನೀರಲಿ ಹೋಮ
ಉಸುಕ ಮನೆ ನಿಂತೀತೆ ಏಕೆ ಕಟ್ಟಿದರು

ಒಂದು ದೌರ್ಬಲ್ಯವೆನಗೆ ಸುಳ್ಳಾಗದು
ಖರೇ ಆಗದವರೇಕೆ ಹತ್ತಿರ ಸುಳಿದರು

ಎರಡು ನಾಲಿಗೆ ಸೀಳು ತುಟಿ ಇವರದು
ಮುಗುದ ಬಾಳಿನಲಿ ಏಕೆ ಬಂದಿಳಿದರು

ಹೆಜ್ಜೆಗೂ ಪರೀಕ್ಷೆ ನಡೆಯಲೂ ಬೇಸರ
ಹಳದಿ ಹೃದಯವನೇಕೆ ಹೊತ್ತು ತಂದರು

ಹಾಕಿದ ಹೂಗಳೇಕೆ ಮುಳ್ಳಾಗುತ್ತವೆ ಅನು
ಎದೆ ಹಕ್ಕಿ ಗೂಡಲಿ ಮತಾಪನೇಕೆ ಇಟ್ಟರು




Leave a Reply

Back To Top