ವಿಶೇಷ

ಕನ್ನಡ ಬರಹಗಾರ ಮತ್ತು ಜಾಲತಾಣಗಳು.

 ಡಿ.ಎಸ್.ರಾಮಸ್ವಾಮಿ

        ಕನ್ನಡಕ್ಕೂ ಮತ್ತು ಅದರ ಸಾಹಿತ್ಯ ಚರಿತ್ರೆಗೂ ಶತಮಾನಗಳ ಇತಿಹಾಸವೇ ಇದೆ. ಮೌಖಿಕ ಪರಂಪರೆಯಿಂದ ಹಿಡಿದು ಇವತ್ತು ನಾವು ನೀವೆಲ್ಲ ಬಳಸುತ್ತಿರುವ ಸಾಮಾಜಿಕ ಜಾಲತಾಣಗಳವರೆಗೂ ಅದರ ವಿಸ್ತರತೆ ಇದೆ. ಇಂಗ್ಲಿಷಿಗೆ ತರ್ಜುಮೆಯಾಗದ ಏಕೈಕ ಕಾರಣಕ್ಕೆ ಶ್ರೇಷ್ಠ ಸಾಹಿತ್ಯ ಕೃತಿಗಳಾಗಿದ್ದೂ ವಿಶ್ವ ಮನ್ನಣೆ ಪಡೆಯುವ ಹಲವಾರು ಬಹುಮಾನಗಳಿಂದ ಕನ್ನಡದ ಲೇಖಕರು ವಂಚಿತರಾಗಿರುವುದೂ ಮತ್ತು ಇಂಗ್ಲಿಷಿಗೆ ಅನುವಾದಗೊಂಡ ಕಾರಣಕ್ಕೇ ಸಾಮಾನ್ಯ ಲೇಖಕರೂ ವಿಶ್ವ ವ್ಯಾಪೀ ಪ್ರಚಾರ ಪಡೆದುದೂ ಇದೆ.

     ಅಂದರೆ ಕನ್ನಡ ನೆಲದ ಅಸ್ಮಿತೆ ಲೋಕ ಖ್ಯಾತವಾಗಲು ಬಳಸಬಹುದಾದ ಹಲವು ಏರುಮಣೆಗಳನ್ನು ಬಳಸುವ ಚಾಕಚಕ್ಯತೆ ಇದ್ದವರು ಮುನ್ನೆಲೆಗೆ ಬಂದಿದ್ದಾರೆ ಹಾಗೇ ಆಯಾ ಕಾಲದ ಮಾಧ್ಯಮಗಳನ್ನು ಬಳಸಿಕೊಳ್ಳದ ಜಾಣ್ಮೆ ಇಲ್ಲದಿದ್ದವರು ಅವಕಾಶ ವಂಚಿತರಾಗಿದ್ದಾರೆ. ಇದು ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದೊಟ್ಟಿಗೆ ಸಂಪರ್ಕವಿರಿಸಿಕೊಂಡಿರುವ ಎಲ್ಲರ ಅನುಭವವೂ ಹೌದು. ಸಣ್ಣ ಹಳ್ಳಿಯೊಂದರಲ್ಲಿ ತನ್ನ ಪಾಡಿಗೆ ತಾನು ಸ್ವಾದಿಷ್ಠವೂ ರಸಭರಿತವೂ ಆದ ಆಹಾರವನ್ನು ತಯಾರು ಮಾಡುವ ಬಾಣಸಿಗ ಸ್ಟಾರ್ ಹೋಟೆಲಿನ ಛೆಫ್ ತರಹ ಪ್ರಸಿದ್ಧನಾಗುವುದೇ ಇಲ್ಲ! ಏಕೆಂದರೆ ಛೆಫ್ ಗೆ ಇರುವ ಅವಕಾಶ ಮತ್ತು ಅವಕಾಶವಾದಿತನ ಹಳ್ಳಿಯ ಬಾಣಸಿಗನಿಗೆ ದಕ್ಕುವುದಿಲ್ಲ.

ವರ್ತಮಾನದ ಸಾಹಿತ್ಯ ಸಂದರ್ಭವೂ ಇದಕ್ಕಿಂತ ಹೆಚ್ಚೇನೂ ವ್ಯತ್ಯಾಸದಲ್ಲಿ ಇಲ್ಲ. ತನ್ನ ಪಾಡಿಗೆ ತಾನು ಒಳ್ಳೆಯ ಓದು ಮತ್ತು ಬರಹದಲ್ಲಿ ಸುಖ ಕಂಡಂತೆ ಇರುವ ಅದೆಷ್ಟೋ ಬರಹಗಾರರು ಎಲೆ ಮರೆಯ ಕಾಯಂತೆ ಇದ್ದರೆ ಒಂದಷ್ಟು ಚಾಕಚಕ್ಯತೆ ಮತ್ತು ಲೋಕನುಭವದಿಂದ ಸತ್ಯವನ್ನು ಅರಿತವರು ಯಾರನ್ನು ಯಾವಾಗ ಮತ್ತು ಹೇಗೆ ಹಿಡಿದರೆ ತಾವು ಸಲ್ಲಬಹುದು ಖ್ಯಾತರಾಗಬಹುದು ಎಂಬ ಅಂದಾಜಿದ್ದವರೇ ಇವತ್ತು ವೇದಿಕೆಗಳಲ್ಲಿ ಮಿಂಚುತ್ತಿದ್ದಾರೆ. ಅಂಥವರೇ ತಮ್ಮದೇ ಗುಂಪುಗಳನ್ನು ಕ್ಷಮಿಸಿ ಸಮಾನ ಮನಸ್ಕರನ್ನು ಒಂದೆಡೆ ಸೇರಿಸಿ ಸಾಹಿತ್ಯ ಸಾಂಸ್ಕೃತಿಕ ಲೋಕದ ನಿಯಂತ್ರಣಕ್ಕೆ ಕಟಿಬದ್ಧರಾಗಿರುತ್ತಾರೆ. ಆದರೂ ಖುಷಿಯೆಂದರೆ ಈ ಎಲ್ಲ ಗುಂಪು ಗದ್ದಲ ಮತ್ತು ಗೋಜುಗಳಾಚೆಯೂ ಅತ್ಯುತ್ತಮ ಎನ್ನಬಹುದಾದ ಹಲವು ಸಂಕಲನಗಳು ಬರುತ್ತಿವೆ ಮತ್ತು ಘೋಷಿತ ವಲಯಕ್ಕೂ ಅಚ್ಚರಿ ಮತ್ತು ಗಾಬರಿಗಳನ್ನು ಹುಟ್ಟಿಸುತ್ತಲೂ ಇವೆ.

ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಇಣುಕು ಹಾಕದ ಬರಹಗಾರರು ಇಲ್ಲವೇ ಇಲ್ಲ ಎಂದು ಧೈರ್ಯವಾಗಿ ಹೇಳಬಹುದು. ಅಂಡ್ರಾಯ್ಡ್ ಫೋನು ಮತ್ತು ಅಂತರ್ಜಾಲ ಸುಲಭಕ್ಕೆ ಸಿಗುತ್ತಿರುವ ಕಾಲದಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಮತ್ತು ಭಾಗವಹಿಸುವಿಕೆ ಪ್ರತಿಷ್ಠೆಯಾಗಿಯೂ ಬದಲಾಗುತ್ತಿದೆ. ಫೋನಿನ ಡಾಟ ಬಟನ್ ಒತ್ತಿದ ತಕ್ಷಣವೇ ಓತ ಪ್ರೋತ ಬಂದೆರಗುವ ಹೆಚ್ಚಿನ ಸಂದೇಶಗಳು ಓದದೇ ಫಾರ್ವರ್ಡ್ ಆದವೇ ಆಗಿರುತ್ತವೆ. ಓದುವ ಮುನ್ನವೇ ಲೈಕ್ ಕೊಡುವ ಇಮೋಜಿಯನ್ನೋ ಚಿತ್ರವನ್ನೋ ಪ್ರತಿಕ್ರಿಯೆಯಾಗಿ ಹರಿಯಬಿಡುವುದು ತೀರ ಸುಲಭದ ಕೆಲಸವಾಗಿ ಬಿಟ್ಟಿದೆ. ಇಂಥ ಸಂದರ್ಭದಲ್ಲಿ ಸಾಮಾಜಿಕ ಜಾಲತಾಣಗಳು ಸಾಹಿತ್ಯದ ಬೆಳವಣಿಗೆಗೆ ಪೂರಕವೋ ಮಾರಕವೋ ಎಂದು ಚಿಂತಿಸುವುದು ಪ್ರೌಢಶಾಲೆಯ ಚರ್ಚಾ ಸ್ಪರ್ದೆಯ ವಿಷಯವಾಗಬಹುದೇ ವಿನಾ ಅದರಾಚೆಗೆ ಅದರ ವ್ಯಾಪ್ತಿ ಇಲ್ಲ. ಏಕೆಂದರೆ ಈ ಜಾಲತಾಣಗಳ ಭೇಟಿ ಇವತ್ತು ಚಟವಾಗಿ ಬದಲಾಗಿದೆಯೇ ವಿನಾ ಅದು ರಸಾನುಭವದ ಕೊಡು ಕೊಳ್ಳುವಿಕೆಯ ವೇದಿಕೆಯಾಗಿ ಉಳಿದಿಲ್ಲ. ಜೊತೆಗೆ ಈ ಜಾಲತಾಣಗಳು ಸಾಮಾಜಿಕ ಆರ್ಥಿಕ ರಾಜಕೀಯ ವಲಯಗಳ ಸುಳ್ಳು ವದಂತಿಗಳ ಹಂಚುವಿಕೆಗೆ ಮತ್ತು ವ್ಯಕ್ತಿ ಹಾಗು ಪಂಥದ ವಿರುದ್ಧದ ವ್ಯವಸ್ಥಿತ ಸಂಚಾಗಿ ಬಳಕೆಯಾಗುತ್ತಿರುವುದನ್ನೂ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲವಾಗಿದೆ.

   ಆದರೂ ಅಪರೂಪಕ್ಕೆಂಬಂತೆ ಒಂದೆರಡು ವಾಟ್ಸ್ ಅಪ್ ಗುಂಪುಗಳು ಒಳ್ಳೆಯ ಊಟ ಉಪಾಹಾರಗಳ ತಯಾರಿಕೆ ಮತ್ತು ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಿದಂತೆಯೇ ಕತೆ, ಕವಿತೆಗಳ ಪ್ರಕಟಣೆಗೆ ವಿಮರ್ಶೆಗೆ ಪರಸ್ಪರರ ಭೇಟಿ ಮಾತುಕತೆಗೆ ನೆರವಾಗುತ್ತಿವೆ. ಆದರೆ ಇವುಗಳ ಸಂಖ್ಯೆ ತೀರ ಕಡಿಮೆ. ಜಾತಿ,ಕೆಲಸ,ನಂಬಿಕೆಯ ತಳಹದಿಯ ಮೇಲೇ ರಚಿತವಾಗುವ ಜಾಲತಾಣಗಳು ಹೆಚ್ಚೇನನ್ನೂ ಸೃಜಿಸಲಾರವು.

  ನಿಜಕ್ಕೂ ಹೇಳಬಹುದೆಂದರೆ ಸಾಮಾಜಿಕ ಜಾಲತಾಣ ಒಂದು ಬಗೆಯ ಸಂತೆ ಇದ್ದಂತೆ. ಇಲ್ಲಿ ಎಲ್ಲರಿಗೂ ಬೇಕಾದ ವಿವಿಧ ಬಗೆಯ ಸಾಮಾನು ಸರಂಜಾಮು ಮಾರಾಟಕ್ಕೆ ಇದೆ. ತನಗೆ ಬೇಕಾದ್ದನ್ನು ಬೇಕಾದವರು ಅರಸಿ ಹೋಗಿ ಖರೀದಿಸುವಂತೆ ತನ್ನಿಷ್ಟದ ಸಾಹಿತ್ಯದ ಪ್ರಕಾರಕ್ಕೆ ಚಂದಾದಾರನಾಗುವುದು ಚಂದಾ ನೀಡುವುದು ಅಥವ ಚಂದವಾಗಿ ಎದ್ದು ಹೊರ ನಡೆಯುವುದು ಆಯಾಯ ವ್ಯಕ್ತಿಯ ಬೌದ್ಧಿಕ ಮಾನಸಿಕ ಮತ್ತು ಸಾಮಾಜಿಕ ನಿಲುವು ಮತ್ತು ಒಲವುಗಳ ವಿಷಯವಾಗಿದೆಯೇ ವಿನಾ ಅದೇ ಸಾಹಿತ್ಯ ಜಗತ್ತಿನ ಹೆಬ್ಬಾಗಿಲಾಗಿಲ್ಲ ಎನ್ನುವುದು ನನ್ನ ನಿಲುವು.

ಡಿ.ಎಸ್.ರಾಮಸ್ವಾಮಿ.

ಲೇಖಕರ ಪರಿಚಯ:

ಭಾರತೀಯ ಜೀವವಿಮಾ ನಿಗಮದಲ್ಲಿ ಆಡಳಿತಾಧಿಕಾರಿಯಾಗಿರುವ ಇವರು ಮೂಲತ: ಕವಿಯಾಗಿದ್ದು,ಇವರ ಉಳಿದ ಪ್ರತಿಮೆಗಳು ಕವನಸಂಕಲನಕ್ಕೆ 2006ರ ಮುದ್ದಣ ಕಾವ್ಯ ಪ್ರಶಸ್ತಿ ಬಂದಿರುತ್ತದೆ.

One thought on “ವಿಶೇಷ

  1. ಒಳಗೆ ತಲ್ಲಣ ಹುಟ್ಟಿಸಿದರೂ ವಾಸ್ತವಾಂಶವನ್ನು ರಾಮಸ್ವಾಮಿ ಸರ್ ಬರೆದಿದ್ದಾರೆ.

    ಸಾಹಿತ್ಯ ಜಗತ್ತಿನ ಹೆಬ್ಬಾಗಿಲಾಗಿಲ್ಲ ಎನ್ನುವ ಮಾತನ್ನು ಪ್ರತಿ ಬರಹಗಾರರು ಅರಿತು ಬರಹದಲ್ಲಿ ತೊಡಗಿಸಬೇಕಿದೆ.ಆದರೆ ಸಾಹಿತ್ಯ ಜಗತ್ತಿನ ಕಿಂಡಿಗಳಲ್ಲಿ ಒಂದು ಎನ್ನುವ ಆಶಾಭಾವನೆಯನ್ನು ತಾಳುವುದೂ ಮುಖ್ಯ.
    ಧನ್ಯವಾದಗಳು ರಾಮಸ್ವಾಮಿ ಸರ್ ಒಂದು ಒಳ್ಳೆಯ ಲೇಖನಕ್ಕೆ.

Leave a Reply

Back To Top