ಕಥಾಯಾನ

ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ

green-and-brown birds perching on tree

ಟಿ. ಎಸ್.‌ ಶ್ರವಣ ಕುಮಾರಿ

ಎಲ್ಲೆಲ್ಲೋ ಹಾರಾಡುತ್ತಿದ್ದ ಕತೆ

ಕಾಗಕ್ಕ ಇನ್ನೂ ಬೆಳಗಾಗ ಗೂಡಿನ ಬಾಗಿಲು ತೆರೆಯುತ್ತಿರುವಾಗಲೇ ತನ್ನ ಗೂಡಿನ ಮುಂದೆ ಆಗಲೇ ರಂಗೋಲಿ ಇಡುತ್ತಿದ್ದ ಗುಬ್ಬಕ್ಕ ಇವಳನ್ನೇ ಕಾಯುತ್ತಿದ್ದವವಂತೆ ಶಬ್ದ ಮಾಡಿ ಗಮನ ಸೆಳೆದಳು.  ಬಲಗೈಲಿದ್ದ ಪೊರಕೆಯನ್ನು ಎಡಗೈಗೆ ಬದಲಾಯಿಸಿಕೊಂಡ ಕಾಗಕ್ಕ ಏನು ಎನ್ನುವಂತೆ ಸನ್ನೆ ಮಾಡಿದಳು. “ತುಂಬಾ ವಿಷಯ ಇದೆ ಮಾತಾಡಕ್ಕೆ; ಗಂಡ ಮಕ್ಕಳು ಹೊರಟ ಮೇಲೆ ಬರ್ತೀನಿ” ಎನ್ನುವಂತೆ ಸಂಜ್ಞೆ ಮಾಡಿ ಕಾಗಕ್ಕನೊಂದಿಗೆ ಅಪಾಯಿಂಟ್ಮೆಂಟ್ ಫಿಕ್ಸ್ ಮಾಡಿಕೊಂಡು ರಂಗೋಲಿ ಡಬ್ಬಿಯನ್ನೆತ್ತಿಕೊಂಡು ಗೂಡೊಳಗೆ ಹೋದಳು. ಕಾಗಕ್ಕನಿಗೋ ಆಗಿನಿಂದಲೇ ಕದನ ಕುತೂಹಲ ಶುರುವಾಯಿತು. ಬೆಳ್ಳಂಬೆಳಗ್ಗೆಯೇ ತನಗಾಗಿ ಕಾದು ನಿಂತು ಕತೆಯ ಪ್ರೋಮೋದ ಮೊದಲ ಕಾರ್ಡ್ ತೋರಿಸಿ ಹೋಗಿದ್ದಾಳೆಂದರೆ ವಿಷ್ಯ ಸಖತ್ತಾಗೇ ಇದ್ದಿರಬೇಕು.  ಯಾವುದಕ್ಕೂ ಇಬ್ಬರ ಗೂಡಿಂದಲೂ ಎಲ್ಲರೂ ಹೊರಡುವುದಕ್ಕೆ ಕಾಯಬೇಕಲ್ಲ ಎಂದುಕೊಂಡು ಆತುರಾತುರವಾಗೆ ಬೆಳಗಿನ ಸ್ನಾನ, ತಿಂಡಿ, ಅಡುಗೆ ಎಲ್ಲವನ್ನೂ ಮುಗಿಸಿ ಗಡಿಯಾರದ ಮುಳ್ಳು ಮುಂದೆ ಸಾಗುವುದನ್ನೇ ನಿರೀಕ್ಷಿಸುತ್ತಾ ನಿಂತವಳಿಗೆ ಇಂದೇಕೋ ಅದು ಬಲು ನಿಧಾನವಾಗೇ ಚಲಿಸುತ್ತಿದೆ ಅನ್ನಿಸಹತ್ತಿತು. ಅಂತೂ ಕಡೆಗೆ ಗಂಡ, ಮಕ್ಕಳೆಲ್ಲರೂ ತಿಂಡಿ ತಿಂದು, ಊಟದ ಡಬ್ಬಿ ಹಿಡಿದು ಹೊರಟ ತಕ್ಷಣ ಹೊರಗೆ ಬಂದು ಗುಬ್ಬಕ್ಕನ ಗೂಡಿನ ಕಡೆ ನೋಡಿದರೆ ಅಲ್ಲಿ ಇನ್ನೂ ಯಜಮಾನರ ಸವಾರಿ ಹೊರಟಂತಿರಲಿಲ್ಲ. ಅವರ ವಾಹನ ಮುಂದೇ ನಿಂತಿತ್ತು.  ಯಾರೋ ಬಂದಿರಬಹುದೇನೋ… ಅವರ ಗಾಡಿಯೂ ಅಲ್ಲೇ ನಿಂತಿದೆ. ಎಷ್ಟು ಹೊತ್ತಿಗೆ ಹೊರಡುತ್ತಾರೋ… ಇವಳ ಕಾತರ ಹೆಚ್ಚಾಗತೊಡಗಿ, ಅದನ್ನು ತೋರಿಸುವಂತಿಲ್ಲದೆ ಆ ಬಿಸಿಲಲ್ಲೂ ಮುಂದಿನ ಕೈತೋಟದ ಗಿಡಗಳ ಒಣಗಿದೆಲೆಯನ್ನು ಕೀಳುತ್ತಾ, ಬಿದ್ದಿರುವ ಒಣ ಹೂವುಗಳನ್ನೂ, ಕಸಕಡ್ಡಿಗಳನ್ನೂ, ತರಗೆಲೆಗಳನ್ನೂ ಹೆಕ್ಕಿ ತೆಗೆಯುತ್ತಾ ಕಾಲ ಕಳೆಯ ತೊಡಗಿದಳು. ಅಂತೂ ಇಂತೂ ಕಡೆಗೆ ಎರಡು ಗಾಡಿಗಳೂ ಗುಬ್ಬಕ್ಕನ ಗೂಡಿನ ಮುಂದಿನಿಂದ ಹೊರಟ ಶಬ್ಧ ಕೇಳಿ ಪರಮಾನಂದವಾಯಿತು. ಹೊರಗೆ ತಲೆ ಹಾಕಿದ ಗುಬ್ಬಕ್ಕ ʻಐದು ನಿಮಿಷ ತಡಿ ಬಂದೆʼ ಎನ್ನುವಂತೆ ಇಷಾರೆ ಮಾಡಿ ಮತ್ತೆ ಒಳಹೊಕ್ಕಳು.  ಬಾಗಿಲನ್ನು ತೆರೆದಿಟ್ಟೇ ಒಳಬಂದ ಕಾಗಕ್ಕನಿಗೋ ಒಂದೊಂದು ನಿಮಿಷವೂ ಗಂಟೆಯಂತೆ ತೋರುತ್ತಿದ್ದರೆ, ತನ್ನ ತಲೆಯಲ್ಲಿ ಹುಳ ಬಿಟ್ಟು ಗುಬ್ಬಕ್ಕ ಆರಾಮಾಗಿ ಇದ್ದಾಳೆ ಅನ್ನಿಸಿ ಅವಳ ಮೇಲೆ ತುಸು ಕೋಪವೇ ಬಂದರೂ, ಮಾತಿನ ಮಧ್ಯ ತಿನ್ನಲು ಒಂದಷ್ಟು ಹಚ್ಚಿದ ಕಳ್ಳೆಪುರಿಯನ್ನು ಒಂದು ಬಟ್ಟಲಿಗೆ ಹಾಕಿಕೊಂಡು ಬಂದು ಟೇಬಲ್ಲಿನ ಮೇಲೆ ಇರಿಸಿದಳು. ಕಾಫಿ ಡಿಕಾಕ್ಷನ್ ಇದೆ ತಾನೇ ಎಂದು ಫಿಲ್ಟರ್‌ನ ಕೆಳಗಿನ ಬಟ್ಟಲನ್ನು ಮತ್ತೊಮ್ಮೆ ನೋಡಿ ಸಮಾಧಾನಗೊಂಡಳು. 

ಇವಳ ಐದು ನಿಮಿಷ ಇನ್ನೂ ಆಗಲಿಲ್ಲವೇ ಎಂದು ಸಿಡಿಮಿಡಿಗೊಳ್ಳುತ್ತಿರುವಾಗಲೇ ಅಂತೂ ಗುಬ್ಬಕ್ಕ “ಉಸ್ಸಪ್ಪ.  ಸಾಕಾಯ್ತು…” ಎನ್ನುತ್ತಾ ಒಳಬಂದು ಸೋಫಾದ ಮೇಲೆ ಕಾಲು ಚಾಚಿ ಕುಳಿತುಕೊಂಡು ಕಣ್ಣು ಮುಚ್ಚಿಕೊಂಡು ಹಿಂದಕ್ಕೆ ಒರಗಿಕೊಂಡಳು.  ಕಾಗಕ್ಕನಿಗೋ ಅವಳ ತಲೆಯ ಮೇಲೆ ಮೇಜಿನ ಮೇಲಿದ್ದ ವೇಸನ್ನೆತ್ತಿ ಕುಟ್ಟಿಬಿಡುವಷ್ಟು ಕೋಪ ಬಂದರೂ ತಡೆದುಕೊಂಡು “ಏನೋ ದೊಡ್ಡದಾಗಿ ಕತೆ ಹೇಳೋ ಸಸ್ಪೆನ್ಸ್ ತೋರ್ಸಿ ಈಗ ಇಲ್ಲಿ ಆರಾಮಾಗಿ ಊಟ ಮಾಡಿದ್ಮೇಲೆ ಮಲಗೋ ತರ ತಣ್ಣಗೆ ಕಣ್ಣು ಮುಚ್ಚಿಕೊಂಡು ಆರಾಮ್ ತೊಗೋತಾ ಇದೀಯಲ್ಲ. ಎದ್ದೇಳು” ಎಂದು ಮಾತಲ್ಲೇ ತಿವಿದಳು. “ಏ… ಸ್ವಲ್ಪ ಇರು ಬೆಳಗಿಂದ ದಡಬಡಾಂತ ಕೆಲ್ಸ ಮಾಡಿ ಸುಸ್ತಾಗಿದೆ”. “ನಾನೇನು ಸುಮ್ನೆ ಕೂತಿದ್ನಾ. ನಿನ್ನಷ್ಟೇ ಕಷ್ಟ ಪಟ್ಟು ಮಾಡಿದೀನಿ. ಎದ್ದೇಳು ಮೇಲೆ. ಅದೇನು ಕತೆಯೋ ಬೇಗ ಹೇಳು.  ಬೆಳಗಿಂದ ನಾಲಕ್ಕು ಕಿವಿಯಾಗಿ ಕೇಳಕ್ಕೆ ಕೂತಿದೀನಿ. ಸ್ವಲ್ಪ ಹೊತ್ತಾದ ಮೇಲೆ ಬೇಕಾದ್ರೆ ಸ್ವಲ್ಪ ಕಾಫಿ ಮಾಡ್ಕೊಂಡು ಬಂದು ಕೊಡ್ತೀನಿ” ಎನ್ನುತ್ತಾ ಅವಳು ಒರಗಲಿಕ್ಕೆ ಬಿಡದೇ ಮಾತಿಗೆಬ್ಬಿಸಿದಳು.

“ಆದೇನಾಯ್ತಪ್ಪಾ ಅಂದ್ರೇ ….” ಎನ್ನುತ್ತಾ ಹೆಚ್ಚು ಕಡಿಮೆ ಮಲಗಿದಂತೇ ಕುಳಿತಿದ್ದವಳು ಯಾರೋ ಎಳೆಯುತ್ತಿದ್ದಾರೇನೋ ಎನ್ನುವಂತೆ ಎದ್ದು ಕುಳಿತಳು. “ನಿನ್ನೆ ನಮ್ಮಮ್ಮನ ಮನೇತ್ರ ಹೋಗಿದ್ನಾ…” “ಅಲ್ಲೇನಾಯ್ತು?” “ಸ್ವಲ್ಪ ತಡಕೋ. ಅದ್ನೇ ಅಲ್ವಾ ಹೇಳ್ತಿರೋದು. ಅಲ್ಲಿಂದ ಎರಡೇ ಮರದಾಚೆ ಅಲ್ವಾ ನಿಮ್ಮಣ್ಣನ ಬೀಗರಿರೋದು.. ಅವ್ರಲ್ಲೂ ನಮ್ಮಮ್ಮನ ಮನೇಲೂ ಗೀಜಕ್ಕನೇ ಕೆಲಸ ಮಾಡೋದು. ಅವ್ಳೇಳಿದ್‌ ವಿಷ್ಯ… ಮೊನ್ನೇ ಅಲ್ಲಿ ಗಂಡ ಹೆಂಡ್ತಿ ಮಧ್ಯ ಜೋರು ಜೋರು ಮಾತುಕತೆ ನಡೀತಾ ಇತ್ತಂತೆ. ಮಗಳು ಗಿಣಿಮರಿ ಹತ್ರ ಫೋನಲ್ಲಿ ಮಾತಾಡ್ತಿದ್ರಂತೆ. “ನಿನ್ ಗಂಡ ಎನಂತ ತಿಳ್ಕೊಂಡಿದಾನೆ, ನೀನೇನು ಗತಿಗೆಟ್ಟೋರ ಕಡೆಯಿಂದ ಹೋಗಿಲ್ಲ. ನಿನ್ ಸಂಬಳದಿಂದಾನೇ ಅಲ್ವಾ ಅವರಪ್ಪ ತನ್ ಮರಿಗಳ್ನ ಓದುಸ್ತಿರೋದು. ನಿನ್ನ ಹೊಡೆಯೋ ಅಷ್ಟು ಮುಂದುವರೆದ್ನ?  ಮುಂದಿನ್ವಾರ ನಾವಿಬ್ರೂ ಬರ್ತೀವಿ. ಅಲ್ಲೀವರ್ಗೆ ತಡಕೋ. ಬಂದು ವಿಚಾರಿಸಿಕೋತೀವಿ.” ಅಂತ. ಮೈನಕ್ಕ ಮಾತಾಡ್ತಿರೋವಾಗ್ಲೇ ಅವಳ್ಗಂಡ ಪಾರ್ವಾಳಪ್ಪ ಫೋನ್ ಕಿತ್ಕೊಂಡು “ಗೊರವಂಕಂಗೆ ತಲೆಗೆ ಏರಿರೋ ಪಿತ್ತ ಇಳಿಸ್ತೀನಿ. ಕೆಲ್ಸ ಇಲ್ದೇ ಬಿದ್ದಿದ್ದಾಗ ಯಾರ್ಯಾರ ಕೈಯಿ ಕಾಲು ಕಟ್ಟಿ ಅವನಿಗೆ ಕೆಲ್ಸ ಕೊಡಿಸಿದ್ದು.  ಜೊತೆಗೆ ಬಾಳ್ವೆ ಮಾಡು ಅಂತ ಮುದ್ದಿಂದ ಸಾಕಿದ ಮಗ್ಳುನ್ನೂ ಕೊಟ್ರೆ ಬಾಳ್ವೆ ಮಾಡಕ್ಕೆ ಯೋಗ್ಯತೆ ಇರಬೇಕಲ್ವಾ. ನೀನು ಬೇಜಾರು ಮಾಡ್ಕೋಬೇಡ ಪುಟ್ಟ. ನಾನೆಲ್ಲ ನೋಡ್ಕೋತೀನಿ” ಅಂತ ಮಗ್ಳಿಗೆ ಸಮಾಧಾನ ಹೇಳ್ತಿದ್ರಂತೆ. “ಇನ್ನೂ ಏನೇನು ಮಾತಾಡ್ತಿದ್ರೋ… ಗೀಜಕ್ಕ ಎಷ್ಟು ಹೊತ್ತೂಂತ ಕಸ ಬಳಿಯೋ ನಾಟಕ ಆಡ್ತಾಳೆ. ಅವ್ಳಿಗೆ ತಿಳಿದಷ್ಟನ್ನ ನಮ್ಮಮ್ಮನ ಹತ್ರ ಹೇಳಿದ್ಳಂತೆ. ನಮ್ಮಮ್ಮ ನನ್ನತ್ರ ಹಂಗಂದ್ರು. ನಿಂಗೇನಾದ್ರೂ ನಿಮ್ಮಣ್ಣನಿಂದಾನೋ ಅತ್ಗೇಂದಾನೋ ಏನಾದ್ರೂ ಸಮಾಚಾರ ಬಂದಿರ್ಬೋದೇನೋ ಅಂದುಕೊಂಡೆ.” ಎನ್ನುತ್ತಾ ಕಾಗಕ್ಕನ ಮುಖ ನೋಡಿದಳು.  “ಹಂಗಾ.. ನಿಜವಾ ನೀ ಹೇಳ್ತೀರೋದು…” ಕಾಗಕ್ಕನ ಮುಖ ಅಚ್ಚರಿಯಿಂದ ಅರಳಿತು.  “ಯಾವ್ಮುಖ ಇಟ್ಕೊಂಡು ಹೇಳ್ತಾರೆ ಹೇಳು? ಎನ್ ಸುಖದ್ ಸಮಾಚಾರಾನಾ ಬಿಂಕವಾಗಿ ಹೇಳಕ್ಕೆ. ನನ್ ಮಗ್ಳುನ್ನ ಸೊಸೆ ಮಾಡ್ಕೊಳ್ಳೋ ಅಣ್ಣಾ, ತೌರುಮನೇಗೆ ನಮ್ಮನೇ ಬಳ್ಳಿ ಸುತ್ಕೊಳತ್ತೆ ಅಂದ್ರೇ, “ನಿಂಗೊತ್ತಿಲ್ಲಾ ಕಾಗೀ,  ಬಳಗದಲ್ಲಿ ಮದ್ವೆ ಮಾಡ್ಕೊಂಡ್ರೆ ಉಟ್ಟೋ ಪಿಳ್ಳೆಗಳು ರೋಗವಾಗಿ ಉಟ್ಟುಟ್ವೆ. ನಿನ್ನ ಮಗ್ಳೂ ನನ್ನ ಮಗಳಾಂಗೇ ಅಲ್ವಾ.  ಸಂಬಂಧ ಬೆಳಸೋದು ಬೇಡ. ಇರೋ ಸಂಬಂಧ ಚೆನ್ನಾಗಿಟ್ಕೋಣೋಣ’ ಅಂದ. ಅತ್ಗೇ… “ಕಾಗೀ ನಿನ್ನ ಮಗ್ಳು ಕಪ್ಪಿದ್ರೂ ಕಡಿದ ಶಿಲೆ ಹಾಗಿದಾಳೆ. ಯಾರಾದ್ರೂ ಹುಡುಕ್ಕೊಂಡು ಬಂದು ಮಾಡ್ಕೋತಾರೆ. ಯೋಚ್ನೇನೇ ಮಾಡ್ಬೇಡ’ ಅಂತ ವೈಯ್ಯಾರವಾಗಿ ನನ್ನ ಮಗ್ಳ ಬಣ್ಣಾನ ಎತ್ತಿ ಅಡೋದ! ಆಗ್ಬೇಕು ಆವಂಗೆ ಹಿಂಗೆ” ಕೂತಲ್ಲೇ ನೆಟಿಕೆ ಮುರಿದವಳು “ಸ್ವಲ್ಪ ತಡೀ ಕಾಫಿ ತರ್ತೀನಿ ಅಲ್ಲೀವರ್ಗೂ ಕಳ್ಳೇಪುರಿ ತಿಂತಿರು ಎಂದು ಬಟ್ಟಲನ್ನ ಮುಂದು ಸರಿಸಿದಳು. ಅದರಲ್ಲಿಂದ ಒಂದೊಂದೇ ಕಡಲೇಕಾಯಿ ಬೀಜವನ್ನು ಹೆಕ್ಕುತ್ತಾ ಗುಬ್ಬಕ್ಕ ಬಾಯಾಡಿಸ ತೊಡಗಿರುವಾಗಲೇ “ಮುಂದೇನಾಯ್ತಂತೆ?” ಎನ್ನುತ್ತಾ ಕಾಗಕ್ಕ ಕಾಫಿಯ ಬಟ್ಟಲನ್ನು ತೆಗೆದುಕೊಂಡು ಬಂದಳು.  ಕಾಫಿ ಹೊಟ್ಟೆಗೆ ಬಿದ್ದ ಮೇಲೆ ಇನ್ನೂ ಏನಾದ್ರೂ ಒಳಗೆ ಇರೋ ವಿಷ್ಯಾ ಹೊರಕ್ಕೆ ಕಾರುತ್ತೇನೋ ಅಂತ ಗುಬ್ಬಕ್ಕನ ಮುಖವನ್ನೇ ನೋಡತೊಡಗಿದಳು. 

ನಿಧಾನವಾಗಿ ಗುಟುಕರಿಸುತ್ತಾ ಏನೋ ಗಹನವಾದ ಆಲೋಚನೆಯಲ್ಲಿರುವಂತೆ ಮುಖ ಮಾಡಿಕೊಂಡ ಗುಬ್ಬಕ್ಕ “ಒಂದ್ಕೆಲ್ಸ ಮಾಡೋಣ” ಎನ್ನುತ್ತಾ ಬಟ್ಟಲನ್ನು ಕೆಳಗಿಟ್ಟಳು.  `ಏನು?’ ಎನ್ನುವಂತೆ ನೋಡಿದ ಕಾಗಕ್ಕನ ಮುಖವನ್ನೇ ನೋಡುತ್ತಾ ನಾಳೇನೋ ನಾಡಿದ್ದೋ ಹಂಸನ ಹತ್ರ ಹೋಗೋಣ.  ಅವ್ಳ ಮಗ್ಳೂ, ಈ ಅರಗಿಣೀನೂ ಗೆಳ್ತೀರು. ಅಂದ್ಮೇಲೆ ಏನೋ ಒಂದಷ್ಟು ವಿಷ್ಯ ಗೊತ್ತೇ ಇರತ್ತಲ್ವ.  ಏನಾದ್ರೂ ಅವರಮ್ಮನ ಹತ್ರ ಹೇಳಿರ್ಬೋದು. ಹೋದ್ರೆ ಗೊತ್ತಾಗುತ್ತೆ.  ಫೋನ್ ಮಾಡಿ ಕೇಳಕ್ಕಾಗಲ್ಲ”.  “ನಾವು ಹೋಗಿ ಕೇಳಿಬಿಟ್ರೆ ಅವ್ಳು ಹೇಳಿಬಿಡ್ತಾಳೋ” ಕಾಗಕ್ಕ, ಹಂಸ ಹೇಳ್ಳಿಕ್ಕಿಲ್ಲ ಎನ್ನುವ ಭಾವ ವ್ಯಕ್ತಪಡಿಸಿದಳು. “ಕೇಳೋ ತರ ಕೇಳಿದ್ರೆ ಹೇಳ್ತಾಳೆ.  ಅವ್ಳಿಗೆ ಗೊತ್ತಿರೋ ವಿಷ್ಯ ಕಕ್ಸೋ ಭಾರ ನಂದು. ಯಾವಾಗ ಹೋಗೋಣ ಹೇಳು” ಎಂದ ಗುಬ್ಬಕ್ಕನಿಗೆ “ಇವತ್ತಿನ್ನೂ ಮಂಗಳ್ವಾರ.  ನಾಳೆ ಬುಧವಾರ. ಎರ್ಡು ದಿನ್ವೂ ಇವ್ರು ಬೇಗ ಬರ್ತಾರೆ. ಎಲ್ಲೂ ಹೋಗೋ ಹಂಗಿಲ್ಲ. ಈ ವಿಷ್ಯಕ್ಕೆ ಅಂತೇನಾದ್ರೂ ತಿಳಿದ್ರೆ ಅಷ್ಟೇ ಬಡದು ಬಲಿ ಹಾಕ್ಬಿಡ್ತಾರೆ. ಶುಕ್ರವಾರದ ಪೂಜೇಗೆ ಕರೆಯೋ ನೆಪ ಮಾಡ್ಕೊಂಡು ಗುರುವಾರ ಹೋಗೋಣ” ಎಂದಳು.  “ಆದೇನ್ ನಿನ್ನ ಗಂಡನ ಕೆಲಸ್ವೋ. ವಾರಕ್ಕೆ ಮೂರ್ ದಿನ ನಾಲಕ್ಕುಗಂಟೇಗೇ ಬಂದು ಕೂತ್ಕೋತಾರೆ. ದೂರ್ವಾಸನ್ ಸಾವಾಸ ನಿಂಗೆ. ನನ್ನ ಗಂಡ ನೋಡು ರಾತ್ರಿ 9 ಗಂಟೇಗ್ ಮುಂಚೆ ಬರಲ್ಲ. ಇನ್ನೇನ್ಮಾಡೋದು? ಗುರ್ವಾರವೇ ಹೋಗೋಣ. ಈಗ ಅಲ್ಲೀವರ್ಗೂ ತಡ್ಕೊಂಡು ಕೂತಿರ್ಬೇಕಲ್ಲಾ ನಾವು…  ಹೊಸತರಲ್ಲಿರೋ ಮಜಾ ಅಮೇಲಿರಲ್ಲ. ಏನ್ ಮಾಡೋದು.. ಸರಿ ..  ಅಷ್ಟರಲ್ಲಿ ಇನ್ನೇನಾದ್ರೂ ವಿಷ್ಯ ಗೊತ್ತಾದ್ರೆ ನೀನೂ ಹೇಳು; ನಾನೂ ಹೇಳ್ತೀನಿ” ಎನ್ನುತ್ತಾ ಅಂದಿನ ಮೀಟಿಂಗ್ ಭರ್ಕಾಸ್ತ್ ಮಾಡಿ ಗುಬ್ಬಕ್ಕ ಹೊರಟಳು.

ಕಾಗಕ್ಕನಿಗೋ ಒಂದ್ಕಡೆ ಖುಷಿ, ಇನ್ನೊಂದ್ಕಡೆ ಕುತೂಹಲ ಎನಾಗಿರ್ಬೋದು?  ಯಾಕೆ ಗಂಡ ಹೆಂಡ್ತಿ ಮಧ್ಯ ಈ ಮಟ್ಟಕ್ಕೆ ಜಗಳ ಆಯ್ತು…  ಈ ಗುಬ್ಬಕ್ಕನ್ ಮಾತನ್ನ ಪೂರಾ ನಂಬಕ್ಕಾಗಲ್ಲ; ಇನ್ಯಾರನ್ನ ಕೇಳಿದ್ರೆ ಸರಿಯಾಗಿ ಏನು ನಡೀತು ಅಂತ ತಿಳಿಯತ್ತೆ … ಏನೂ ತೋಚದೆ ತಲೆಯನ್ನ ಪರಪರ ಕೆರೆದುಕೊಂಡ್ರೂ ಯಾರೂ ತಲೆಗೆ ಬರ್ಲಿಲ್ಲ.  ಮಧ್ಯಾನ್ಹದ ಊಟಾನೂ ಸರಿಯಾಗಿ ಸೇರ್ಲಿಲ್ಲ. ಒಂದ್ ಗಳಿಗೆ ಕಣ್ಣುಮುಚ್ಚಿಕೊಳ್ಳೋಣ ಅಂತ ಉರುಳಿಕೊಂಡ್ರೂ ಸಮಾಧಾನವಿಲ್ಲ. ಹಿಂಗೇ ಯೋಚ್ನೇ ಮಾಡ್ತಾ ಒಂದ್ ಕಣ್ ಹತ್ತಿತ್ತೋ ಏನೋ ಅಷ್ಟರಲ್ಲೇ ಬಾಗಿಲು ಡಬಡಬ ಬಡ್ಕೊಂತು. `ಯಾರ್ಬಂದ್ರೋ ಪಾಪಿಗ್ಳು ನಿದ್ದೇಗೆ ಎರವಾಗಿ’ ಎಂದು ಬೈದುಕೊಳ್ಳುತ್ತಾ ಕಷ್ಟ ಪಟ್ಟು ಎದ್ದು ಹೋಗಿ ಬಾಗಿಲು ತೆರೆದಳು.`ವಿಷ್ಯಾ ಗೊತ್ತಾಯ್ತಾ…’ ಆತಂಕದಿಂದ ಒಳ ಬಂದಳು ಕುಕ್ಕುಟಕ್ಕ… ಅತ್ತಿಗೆಯ ಅತ್ತಿಗೆ. “ಏನತ್ಗೆ.. ಬಾ.. ಕೂತ್ಕೋ  ಎನ್ನುತ್ತಾ ಸೋಫಾ ತೋರಿದಳು.  “ಇಲ್ಬೇಡಾ.. ನಮ್ಮನೇಗ್ ಬಾ” ಎಂದಳು.  “ಆಯ್ ಇವತ್ತು ಇವ್ರು ಇನ್ನೊಂದು ಗಂಟೇಗೆಲ್ಲಾ ಬಂದು ಎಲ್ಲೋ ಓಗ್ಬೇಕಂತೆ.  ಇನ್ನೂ ತಿಂಡಿ ಮಾಡ್ಬೇಕು.. ಮಕ್ಳೂ ಐದು ಗಂಟೆಗೆಲ್ಲಾ ಬಂದ್ಬಿಡ್ತಾವೆ. ಬರಕ್ಕಾಗಲ್ಲ. ಇಲ್ಲೇ ಹೇಳು ಮತ್ತೆ.’  “ಇಲ್ಲ; ನಾನು ಬರುವಾಗ ಗುಬ್ಬಕ್ಕ ನೋಡಿದ್ಳು.  ಅವ್ಳಿಗೆ ತಿಳಿಯೋದು ಬೇಡ.  ನೀನೊಬ್ಳೇ ಮಂಗಳ ಗೌರಿ ಪೂಜೆ ಅರಿಶಿನ ಕುಂಕುಮಕ್ಕೆ ಕರೆದೆ ಅನ್ನೋ ನೆಪ ಮಾಡಿಕೊಂಡು ಬಾ. ನಾನು ಇನ್ನೊಂದು ನಿಂಷ ಇಲ್ಲಿದ್ರೆ ಅವ್ಳು ಬಂದ್ಬಿಡ್ತಾಳೆ. ಏಳು ಗಂಟೇಗೆ ಕಾಯ್ತಿರ್ತೀನಿ” ಎನ್ನುತ್ತಾ ಹೊರಟೇಬಿಟ್ಟಳು. `ಅಯ್ಯೋ ದೇವ್ರೆ.  ಏನು ಇವ್ಳ ಕತೆ.  ಈ ಥರ ಸಸ್ಪೆನ್ಸ್ ಹುಟ್ಟು ಹಾಕಿ ಹೋಗೋದ…’ ಎಂದು ಕೊಳ್ಳುತ್ತಿರುವಾಗಲೇ ಗುಬ್ಬಕ್ಕ ನುಸುಳಿದಳು “ಏನಂತೆ ಕುಕ್ಕುಟಕ್ಕನ ಕತೆ…” ರಾಗವಾಗಿ ಕೇಳಿದಳು.  ಏನೋ ಖಂಡಿತವಾಗಿ ಇದೆ ಎನ್ನುವಂತೆ.  “ಮಂಗಳ ಗೌರಿ ಪೂಜೆಯಂತೆ. ಸಂಜೇಗೆ ಅರಿಶ್ನ ಕುಂಕ್ಮಕ್ಕೆ ಬಂದೋಗು ಅಂತ ಕರಿಯಕ್ಕೆ ಬಂದಿದ್ಲು.”  “ಅಂಗಾ.. ಗೊತ್ತಾಯ್ತು ಬಿಡು.. ನಂಗ್ ಹೇಳ್ದೇ ಹೋದೀಯ” ಕಣ್ಣು ಮಿಟುಕಿಸಿದಳು.  “ಏ… ವಿಷ್ಯ ಇದ್ರೆ ನಿಂಗೆ ಹೇಳ್ದೇ ಇರ್ತೀನಾ.  ನಿಜವಾಗೂ ಕರೆಯಕ್ಕೇ ಬಂದಿದ್ಳು” ಕಾಗಕ್ಕ ವಿಷಯದ ತಿಂಡಿಯ ಮೇಲೆ ಮುಸುಕು ಹಾಕಲು ನೋಡಿದಳು. “ಸರಿ ಸರಿ ಹೋಗು…  ಆಮೇಲೆ ಸಿಗ್ತೀನಿ” ಎನ್ನುತ್ತಾ ಅವಳು ಹೊರಟರೂ ತನ್ನ ಮಾತನ್ನ ಅವಳು ನಂಬಿಲ್ಲ ಎನ್ನುವುದು ಕಾಗಕ್ಕನಿಗೆ ಗೊತ್ತಾಗಿ ಹೋಯಿತು.

ಸಂಜೆ ಗಂಡ ಮಕ್ಕಳು ಬಂದ ಮೇಲೆ, ರಾತ್ರಿ ಆಡುಗೇನೂ ಮಾಡಿಟ್ಟು ʻಕುಕ್ಕುಟಕ್ಕನ ಮನೆಗೆ ಅರಿಶ್ನ ಕುಂಕ್ಮಕ್ಕೆ ಹೋಗ್ಬರ್ತೀನಿʼ ಅಂತ ಹೇಳಿ ಹೊರಟಳು.  ಬಾಗಿಲಲ್ಲೇ ಕಾಯ್ತಾ ನಿಂತಿದ್ದ ಕುಕ್ಕುಟಿ “ಬಂದ್ಯಾ ಬಾ ಬಾ” ಎನ್ನುತ್ತಾ ಒಳಗೆ ಎಳೆದುಕೊಂಡಂತೇ ಕರೆದುಕೊಂಡು ಹೋದಳು.  ಸೋಫಾದ ಮೇಲೆ ಇನ್ನೂ ಊರುತ್ತಿದ್ದ ಹಾಗೇ “ಗೊತ್ತಾ ವಿಷ್ಯ…” ಆತಂಕದಿಂದ ಕೇಳಿದ್ಳು. ಏನೂ ಗೊತ್ತಿಲ್ಲದ ಸೋಗು ಹಾಕಿಕೊಳ್ಳುತ್ತ “ಏನತ್ತಿಗೆ… ಏನಾಯ್ತು?” ಆತುರದಿಂದ ಕೇಳಿದಳು. “ಏನ್ ಗೊತ್ತಾ ಕಾಗಿ, ನಿಮ್ಮಣ್ಣನ ಮಗನ ಮದ್ವೆ ಮುರಿದು ಬೀಳೋ ಹಂತಕ್ಕೆ ಬಂದಿದ್ಯಂತೆ..” ಈಗಲಾದರೂ ಕಾಗಿಯಿಂದ ಏನಾದರೂ ಮುತ್ತು ಉದುರಬಹುದೂಂತ ಅವಳ ಮುಖವನ್ನೇ ನೋಡಿದಳು. ಅವಳಿನ್ನೂ ಚಾಲಾಕಿ. “ಹೌದಾ… ಯಾಕಂತೆ?” ಭಯ, ವಿಸ್ಮಯ, ಆತಂಕ ಎಲ್ಲವನ್ನೂ ಒಟ್ಟಿಗೆ ಮುಖದ ಮೇಲೆ ತಂದುಕೊಂಡಳು.” “ಏನೋ ಜೋರು ಜಗಳವಂತೆ… ಗಂಡ ಹೆಂಡ್ತಿ ಮದ್ಯೆ ಅಷ್ಟು ಸರಿ ಇಲ್ವಂತೆ.” ʻಈಗಲಾದರೂ ಏನಾದ್ರೂ ಹೇಳ್ತೀಯಾʼ ಅನ್ನುವಂತೆ ಕಾಗಿಯ ಮುಖ ನೋಡಿದಳು.  ಅದಕ್ಕಿಂತ ಹೆಚ್ಚು ಕಾಗಿಗೆ ತಾನೇ ಏನು ಗೊತ್ತಿತ್ತು. “ಇವ್ಳು ದುಡಿದಿದ್ದ ದುಡ್ಡುನ್ನೆಲ್ಲಾ ಅವ್ನು ಅದೇಂತದೋ ಶೇರ್ ಅಂತಾರಂತಲ್ಲ… ಅದಕ್ಕೆ ಹಾಕಿ ಕಳಿದಿದಾನಂತೆ. ವಾಪಸ್ಸು ಕೊಡು, ಅರ್ಜೆಂಟಾಗಿ ಬೇಕು ಅಂತ ಕೇಳಿದ್ಳಂತೆ. ನಿಂತ ಕಾಲಲ್ಲಿ ಕೇಳಿದ್ರೆ ಹೇಗೆ.  ಇಷ್ಟಕ್ಕೂ ನಿನ್ನ ದುಡ್ಡು ನಂದುಡ್ಡೇ ಅಲ್ವಾ ಅಂದನಂತೆ… ಮಾತಿಗೆ ಮಾತು ಬೆಳೀತಂತೆ… ಕೋಪದಲ್ಲಿ ಅರಗಿಣಿ ಗೊರವಂಕನ ಕೆನ್ನೇಗೆ ಬಾರ್ಸಿದ್ಳಂತೆ. ಅವ್ನಿಗೆ ಧಿಗ್ಭ್ರಮೆಯಾಗಿ ಬಿದ್ದೋದ್ನಂತೆ. ಇವ್ಳು ರೂಮಿಗೆ ಹೋಗಿ ಬಾಗ್ಲು ಹಾಕ್ಕೊಂಡವ್ಳು ಬೆಳಗಾನಾ ತೆಗೀಲಿಲ್ವಂತೆ.”  “ಹೌದು… ಇಷ್ಟು ವಿಷ್ಯ ನಿಂಗೆಂಗೆ ಗೊತ್ತಾಯ್ತು?” ಅಚ್ಚರಿಯಿಂದ ತೆರೆದ ಬಾಯಿ ಮುಚ್ಚದೇ ಕೇಳಿದಳು ಕಾಗಿ. ಎದುರು ಮನೆ ಮಾಡಿ ಮೇಲಿರೋ ಗೂಡಲ್ಲಿ ನನ್ನ ಮಗನ ಗೆಳೆಯ ಬೆಳ್ಳಕ್ಕಿ ಇದಾನಲ್ವಾ. ಅವ್ನು ಗೊರವಂಕನತ್ರ ಏನೋ ಕೇಳಕ್ಕೆ ಅಂತ ಓಗಿದ್ನಂತೆ. ಒಳಗೆ ಜೋರಾಗಿ ಗಲಾಟೆ ನಡೀತಿತ್ತಲ್ವಾ, ಮರೇಲಿ ನಿಂತ್ಕೊಂಡು ನೋಡ್ಕೊಂದು ಬಂದು ಇವನತ್ರ ಹೇಳ್ದ. ಇವ್ನು `ನೋಡು ಅತ್ತೆ ಮಗಂಗೆ ಇಂಗಾಯ್ತಂತೆ’ ಅಂತ ನನ್ಹತ್ರ ಹೇಳ್ದ. ಮುಂದೇನಾಯ್ಟೊ ತಿಳೀಲಿಲ್ಲ; ನಿಂಗೇನಾದ್ರೂ ಗೊತ್ತಾಯ್ತಾ ಅಂತ ಕೇಳಕ್ಕೆ ಕರ್ದೆ. ಸುಂಸುಮ್ನೆ ನಾವೇ ಏನೋ ಕತೆ ಕಟ್ಬಾರ್ದಲ್ವಾ. ಅದಕ್ಕೇ ಗುಬ್ಬೀನ ಕರೀಲಿಲ್ಲ” ಅಮಾಯಕತೆಯನ್ನು ಪ್ರದರ್ಶಿಸುತ್ತಾ ಕೇಳಿದಳು.  “ನಿನ್ನಾಣೆ ನಂಗೇನೂ ತಿಳೀದು ಕುಕ್ಕುಟಿ.  ನಂಗೇನಾದ್ರೂ ತಿಳಿದ್ರೆ ನಿಂಗೂ ಹೇಳ್ತೀನಿ ಬಿಡು.  ಇನ್ನು ಹೊರಡ್ತೀನಿ “ ಕಾಗಕ್ಕ ಎದ್ದಾಗ ಬಾಗಿಲಲ್ಲಿ ಗುಬ್ಬಕ್ಕ ನಿಂತಿದ್ದಳು. “ಆಯ್ತಾ ಮಂಗಳ ಗೌರಿ ಆರತಿ ಕುಕ್ಕುಟಕ್ಕ; ಕಾಗಕ್ಕನ ಮನೇಗೆ ಯಾರೋ ಬಂದಿದಾರಂತೆ.  ಸ್ವಲ್ಪ ಕರ್ಕೊಂಡು ಬಾಮ್ಮ ಅಂತ ಅವ್ಳ ಯಜಮಾನ್ರು ಹೇಳಿದ್ರು ಬಂದೆ.” ಎಂದಳು. “ಮೊದಲ ವಾರವಲ್ವಾ. ಏನೂ ಹೆಚ್ಚಿಗೆ ಜೋಡಿಸಿ ಕೊಂಡಿರ್ಲಿಲ್ಲ.  ಒಬ್ರುಗಾದ್ರೂ ಕುಂಕುಮ ಕೊಡೋಣಾಂತ ಕಾಗಕ್ಕನ್ನ ಕರ್ದೆ ಅಷ್ಟೇ. ಈಗೇನು ಒಳ್ಳೇದೇ ಆಯ್ತು ನೀನೂ ಬಾ ಕುಂಕುಮ ಇಟ್ಕೋ” ಎನ್ನುತ್ತಾ ಇಬ್ಬರಿಗೂ ಎಲೆ ಅಡಿಕೆ ಜೋಡಿಸಿಕೊಂಡು ತಂದುಕೊಟ್ಟಳು. ʻಬರ್ತೀವಿ ಕುಕ್ಕುಟೀʼ ಎನ್ನುತ್ತಾ ಇಬ್ಬರೂ ಹೊರಟರು. 

“ಯಾರು ಬಂದಿದಾರಂತೆ” ಕಾಗಕ್ಕ ಕೇಳಿದಳು. “ಯಾರೂ ಬಂದಿಲ್ಲ. ಕುತೂಹಲ ತಡೀಲಿಕ್ಕಾಗ್ಲಿಲ್ಲ. ನೀವೇನು ಮಾತಾಡ್ತಿದೀರೋ ಕೇಳೋಣ ಅಂದುಕೊಂಡು ಬಂದೆ ಅಷ್ಟೇ. ನೀನು ಅಷ್ಟರಲ್ಲಿಯೇ ಎದ್ದೇ ಬಿಟ್ಟಿದ್ಯಲ್ಲ. ಹೋಗ್ಲಿ ಏನು ಹೇಳಿದ್ಳು?” ಗುಬ್ಬಕ್ಕ ಕಾಗಕ್ಕನ ಮುಖ ನೋಡಿದಳು.  “ಅಂತದೇನಿಲ್ಲ. ಅವ್ಳಿಗೆ ನಮಗೆ ಗೊತ್ತಿರೋ ಅಷ್ಟೂ ಗೊತ್ತಿಲ್ಲ.” ಕತ್ತಲಿತ್ತು ಇಬ್ಬರಿಗೂ ಒಬ್ಬರೊಬ್ಬರ ಮುಖಭಾವ ಗೊತ್ತಾಗಲಿಲ್ಲ.  “ಸರಿ ಹಾಗಾದ್ರೆ. ನಂಗ್ಯಾಕೋ ನೀನು ಮುಚ್ಚಿಡ್ತಿದೀ ಅನ್ಸುತ್ತೆ. ಬಿಡು ನಂಗೆ ಇನ್ನೇನಾದ್ರೂ ಗೊತ್ತಾದ್ರೆ ನಾನೂ ಹೇಳಲ್ಲ” ಗುಬ್ಬಕ್ಕ ತನ್ನ ಮನೆ ಕಡೆ ತಿರುಗಿದಳು. “ಹಂಗಲ್ಲ ಗುಬ್ಬೀ ಬೇಜಾರು ಮಾಡ್ಕೋಬೇಡ. ನಾಳೆ ಬೆಳಗ್ಗೆ ನಾನೇ ನಿಮ್ಮನೇಗೆ ಬರ್ತೀನಿ. ಗೊತ್ತಿರೋದನ್ನ ಹೇಳ್ತೀನಿ” ಎನ್ನುತ್ತಾ ಕಾಗಕ್ಕ ತನ್ನ ಮನೆಗೆ ತಿರುಗಿದ್ದನ್ನು ನೋಡುತ್ತಾ ಗುಬ್ಬಕ್ಕ “ಹಂಗೆ ಬಾ ದಾರಿಗೆ” ಅಂದುಕೊಂಡಳು.

ಬೆಳಗ್ಗೆ ಗುಬ್ಬಿಯ ಮನೆಯಲ್ಲಿ ಕುಳಿತು ವಿಚಾರ ವಿನಿಮಯ ಮಾಡಿಕೊಂಡು ತಮ್ಮ ತಮ್ಮ ಇಟ್ಟಿಗೆಗಳನ್ನೂ ಆ `ಗೊತ್ತಾ’ ಕತೆಯ ಕಟ್ಟಡಕ್ಕೆ ಸೇರಿಸುತ್ತಿರುವಾಗಲೇ ಮರಕುಟಿಕ ಬಂದು ಬಾಗಿಲನ್ನು ತಟ್ಟಿದ.  “ಏನ್ರಮ್ಮಾ.  ಇಬ್ರೂ ಒಂದ್ಕಡೆ ಸೇರಿದೀರಾ ಅಂದ್ರೆ ಯಾರಿಗೆ ಗ್ರಾಚಾರವೋ” ಎನ್ನುತ್ತಾ ಒಳಗೆ ಬಂದು ಕುರ್ಚಿಯ ಮೇಲೆ ಕುಳಿತುಕೊಂಡ. “ಬಾಣ್ಣ, ಪೋಲಿಸ್ ಸ್ಟೇಷನ್ನಲ್ಲಿ ಗುಮಾಸ್ತೆಯಾಗಿದ್ದ ದೊಡ್ಡಪ್ಪನ ಮಗನನ್ನು ಗುಬ್ಬಕ್ಕ ಆತ್ಮೀಯವಾಗಿ ಕರೆದಳು.”ಒಂದ್ಲೋಟ ನೀರ್ಕೊಡಮ್ಮ” ತಂಗಿಯನ್ನು ಕೇಳಿದವನೇ ಕಾಗಕ್ಕನ ಕಡೆ ತಿರುಗುತ್ತಾ “ಏನ್ ಕಾಗಕ್ಕ ನಿಮ್ಮಣ್ಣನ ಬೀಗರು ಪೋಲಿಸ್ ಸ್ಟೇಷನ್ಗೆ ಬಂದಿದ್ರಲ್ಲಾ. ಏನೋ ಜಗಳವಂತೆ. ಮಾವ ಸೊಸೆ ಮೇಲೆ ಕೈ ಮಾಡಿದ್ನಂತೆ. ಸೊಸೆ ದುಡ್ಡುನ್ನೆಲ್ಲಾ ಅಪ್ಪ ಮಗ ಸೇರಿ ಲಪಟಾಯ್ಸಿದಾರಂತೆ. ವರದಕ್ಷಿಣೆ ಕಿರುಕುಳ ಅಂತ ಕೇಸಾಕ್ಟಾರಂತೆ. ಏನ್ಸಮಾಚಾರ” ಕೈಯಲ್ಲಿ ನೀರಿನ ಲೋಟ ಇರುವುದನ್ನೂ ಮರೆತ ಗುಬ್ಬಕ್ಕ ಅಲ್ಲಿಯೇ ಹೊಸ ವಿಷಯ ತಿಳಿದ ಅಚ್ಚರಿಯಿಂದ ನಿಂತಳು ಮತ್ತೊಮ್ಮೆ ಮರಕುಟಿಕ ಕೇಳುವ ತನಕ. “ಏನ್ವಿಷಯಾ ಸ್ವಲ್ಪ ಸರಿಯಾಗಿ ಹೇಳಣ್ಣ” ಗುಬ್ಬಕ್ಕ ಕಾಗಕ್ಕನನ್ನು ಒತ್ತಟ್ಟಿಗೆ ಸರಿಸಿ ಮೈಯೆಲ್ಲಾ ಕಿವಿಯಾಗಿ ಕೇಳಿದಳು. ನಂಗೊತ್ತಿರೋ ವಿಷ್ಯ ಹೇಳಿದ್ನಲ್ಲಾ ಇನ್ನು ಕಾಗಕ್ಕಾನೇ ಹೇಳ್ಬೇಕು ಎನ್ನುತ್ತಾ ನೀರಿನ ಲೋಟ ತೆಗೆದುಕೊಂಡ. “ಓ…” ಎನ್ನುತ್ತಾ ಇಬ್ಬರೂ ಒಬ್ಬರ ಮುಖ ಒಬ್ಬರು ನೋಡಿಕೊಂಡು ಸುಮ್ಮನಾದರು. ಸ್ವಲ್ಪ ಹೊತ್ತು ಅದೂ ಇದೂ ಮಾತನಾಡುತ್ತಾ ಕುಳಿತಿದ್ದವನು ಹೊರಟ. `ಹೆಂಡ್ತಿ ಗಂಡಂಗೆ ಹೊಡೆದಿದ್ದಾ… ಗಂಡ ಹೆಂಡ್ತಿಗೆ ಹೊಡೆದಿದ್ದಾ.. ಇಲ್ಲಾ… ಮಾವ ಸೊಸೆಗೆ ಹೊಡೆದಿದ್ದಾ…’ ಇಬ್ಬರಿಗೂ ಬಗೆಹರಿಯಲಿಲ್ಲ.

ಅಂತೂ ಗುರುವಾರ ಬಂತು. ಇಬ್ಬರ ಸವಾರಿ ಹಂಸನ ಮನೆಗೆ ಹೊರಟಿದ್ದಾಯಿತು. ಅಪರೂಪಕ್ಕೆ ಬಂದ ಇಬ್ಬರನ್ನೂ ಕಂಡ ಹಂಸಳಿಗೂ ಆನಂದವಾಯಿತು. ವರಮಹಾಲಕ್ಷ್ಮಿ ಹಬ್ಬಕ್ಕೆ ಕರೆದದ್ದೂ ಆಯಿತು. ಈಗ ಮುಖ್ಯ ವಿಷಯಕ್ಕೆ ಬಂದರು.  ಗುಬ್ಬಕ್ಕನೇ ಶುರು ಮಾಡಿದಳು.  “ಹಂಸಾ… ನಿನ್ನ ಮಗ್ಳು ಕೋಕಿಲಾಗೆ ಮದ್ವೆ ಮಾಡೋ ಯೋಚ್ನೆ ಏನಾದ್ರೂ ಮಾಡಿದೀಯ? ಅವಳೂ, ಅರಗಿಣೀನೂ ಒಟ್ಗೆ ಓತ್ತಿದ್ದವರಲ್ವೆ? ಅವ್ಳ ಮದ್ವೆ ಆಗಿ ಎರ್ಡು ವರ್ಷವಾಯ್ತೇನೋ ಆಗ್ಲೇ”  “ಹೂಂ…  ಮಾಡ್ಬೇಕು. ಯಾಕೋ ಈಚೆಗೆ ನಡೀತಾ ಇರೋದನ್ನ ನೋಡಿದ್ರೆ ಮದ್ವೆ ಮಾಡಕ್ಕೇ ಭಯವಾಗುತ್ತೆ” ಹಂಸನ ಮುಖದಲ್ಲಿ ಭಯ ಆತಂಕ ಕಾಣಿಸಿತು.  “ಯಾಕೆ? ಎನಾಯ್ತೀಗ?” ಇಬ್ರೂ ಒಟ್ಟಿಗೇ ಕೇಳಿದ್ರು. “ನೋಡೀಗ ಅರಗಿಣಿ ಮದ್ವೆ ಡೈವೋರ್ಸ್ಗೆ ಬಂದು ಕೂತಿದೆ. ಅವ್ನು ಸರಿಯಿಲ್ವಂತೆ…” ಎಂದು ನಿಲ್ಲಿಸಿದಳು. “ಸರಿಯಿಲ್ಲಾಂದ್ರೆ…?” ಇಬ್ಬರ ಮುಖದಲ್ಲೂ ಪ್ರಶ್ನೆ. “ಅವ್ಳು ಕಾಲೇಜಿನಲ್ಲಿದ್ದಾಗ ಜೊತೇಲಿ ಓತ್ತಾ ಇದ್ದ ಹುಡುಗ ಒಬ್ನ ಜೊತೆ ಸ್ವಲ್ಪ ಸಲುಗೆಯಾಗಿದ್ಳಂತೆ. ಅವ್ರಿಬ್ರೂ ಕೊಕ್ಕರೆ ಬೆಳ್ಳೂರಿಗೆ ವಿಹಾರಕ್ಕೆ ಬೇರೆ ಹೋಗಿದ್ರಂತೆ.  ಏನಾಗಿತ್ತೋ, ಏನಾಗ್ಲಿಲ್ವೋ ತಿಳೀದು. ಆ ಹುಡ್ಗ ಆ ಫೋಟೋನೆಲ್ಲಾ ಅದೇನೋ ಫೇಸ್ ಬುಕ್ ಅಂತಲ್ಲಾ ಅದರಲ್ಲಿ ಮೊನ್ನೆ ಯಾವಾಗ್ಲೋ ಹಾಕಿದ್ನಂತೆ. ಅದನ್ನ ನೋಡಿ ಗೊರವಂಕ ಸುಮ್ನಿರ್ತಾನ… ಅವ್ನಿಗೆ ಅನುಮಾನ; ʻಇವ್ಳಿಗೆ ಈಗ್ಲೂ ಸ್ನೇಹವಿದ್ಯಾʼ ಅಂತ. ಅದಕ್ಕೇ ಇಬ್ರಿಗೂ ಜಗ್ಳವಾಯ್ತಂತೆ.. ಕೋಪ ನೆತ್ತಿಗೇರಿ `ನೀನು ನೆಟ್ಟಗಿದ್ದಿದ್ರೆ ನಿನಗೀ ಅನುಮಾನ ಬರ್ತಿರ್ಲಿಲ್ಲ’ ಅಂತ ಕೂಗಾಡಿದಳಂತೆ. ಮತ್ತಿನ್ನೇನು. ಈಗ ಇಲ್ಲಿಗೆ ಬಂದು ನಿಂತಿದೆ. “ಅಂದ್ರೆ ಅವ್ನು….?” ದೊಡ್ಡ ಪ್ರಶ್ನೆ ಕಾಗಕ್ಕನ ಮುಖದಲ್ಲಿ. “ಅವ್ಳೇನಾದ್ರೂ…” ಗುಬ್ಬಕ್ಕನ ಮುಖದಲ್ಲಿ… “ಈ ಮಕ್ಳು ವಿಷಯ ಅರ್ಥವಾಗೋದೇ ಇಲ್ಲ.. ಏನು ಕತೆಯೋ…” ಹಂಸ ಹೇಳುತ್ತಿರುವಷ್ಟರಲ್ಲಿ ಕತ್ತಲಿನ ಮೂಲೆಯಲ್ಲಿ ಕುಳಿತಿದ್ದ ಅವಳ ಅತ್ತೆ ಕುರುಡು ಮುದುಕಿ ಗೂಬವ್ವ “ಏನ್ ಮನೆಹಾಳ್ ಕತೆ ಆಡ್ತಾ ಕೂತಿದೀರೆ ನೀವು. ಅವರವರ ಮನೆ ಜಗಳ ಅವ್ರು ನೋಡ್ಕೋತಾರೆ. ಎದ್ದಿಷ್ಟು ಕಾಪಿ ಮಾಡು. ನನ್ನ ಗಂಟಲು ಒಣಗ್ತಾ ಇದೆ” ಗುರ್ರೆಂದ್ಳು. ‌ʻಇನ್ನು ಕುಳಿತರೆ ಮರ್ಯಾದೆಯಿಲ್ಲʼ ಎಂದು ಇಬ್ಬರೂ ಮೇಲೆದ್ದರು, `ಕಾಫಿ ಮಾಡ್ತಿದೀನಿ ಇರಿ’ ಎಂದರೂ `ಪರವಾಗಿಲ್ಲ ಬಿಡು’ ಎನ್ನುತ್ತಾ…

ಓದುಗ ಮಹಾಶಯರೇ ಇದೆಲ್ಲಾ ನಡೆದು ನಾಲ್ಕಾರು ತಿಂಗಳುಗಳೇ ಆಗಿರಬಹುದು. ಅಲ್ಲಿ ಇಲ್ಲಿ ಹಾರಾಡುತ್ತಿದ್ದ ತುಂಡು ತುಂಡು ಕತೆಯನ್ನು ಸೇರಿಸಿಕೊಂಡು ನಮ್ಮ ಕಾಗಕ್ಕ ಗುಬ್ಬಕ್ಕ ಇಬ್ಬರೂ ತಮತಮಗೆ ತೋಚಿದಂತೆ ಕತೆ ಕಟ್ಟಿಕೊಂಡರು. ಇನ್ನೊಂದು ಕತೆ ಸಿಗುವವರೆಗೂ ತಮ್ಮ ತಮ್ಮ ಅಂತೆ ಕಂತೆಗಳನ್ನು ಅದಕ್ಕೆ ಸೇರಿಸಿಕೊಂಡರು. ಇದರಲ್ಲಿರುವ ಬೇರೆ ಬೇರೆ ಪಾತ್ರಗಳೂ ತಮ್ಮದೇ ಕತೆ ಕಟ್ಟಿಕೊಂಡಿರಬಹುದು. ಹಾಗೇ ಓದಿದ ನೀವೂ ನಿಮ್ಮ ನಿಮ್ಮ ಕಲ್ಪನೆಯನ್ನು ಸೇರಿಸಿ ಕಟ್ಟಿಕೊಳ್ಳಲಿಕ್ಕೆ ಯಾವ ಅಡ್ಡಿಯೂ ಇಲ್ಲ….

ಕತೆ ಮುಗಿಸುವ ಮುನ್ನ ಒಂದು ವಿಷಯ ನಿಮಗೆ ಹೇಳಬೇಕು. ಮೊನ್ನೆ ಭಾನುವಾರ ಫೇಸ್ ಬುಕ್ ನಲ್ಲಿ ಗಿಳಿ ಗೊರವಂಕಗಳಿಬ್ಬರೂ ತಾವು ಕೊಂಡ ಹೊಸ ಎರಡಂತಸ್ತಿನ ಗೂಡಿನ ಮುಂದೆ ಒಬ್ಬರನ್ನೊಬ್ಬರು ತಬ್ಬಿನಿಂತುಕೊಂಡು ಬರಲಿರುವ ನಮ್ಮ ಪುಟ್ಟ ಮರಿಗೆ ಸ್ವಾಗತ ಎಂದು ಸೆಲ್ಫಿ ಚಿತ್ರ ಹಾಕಿಕೊಂಡಿದ್ದರಂತೆ….

********

Leave a Reply

Back To Top