ಮಾಯಾಕನ್ನಡಿ

ಪುಸ್ತಕ ಸಂಗಾತಿ

ಮಾಯಾಕನ್ನಡಿ

ಸಾಹಿತ್ಯದ ವಿವಿಧ ಪ್ರಕಾರಗಳಿಗೆ ತಮನ್ನು ಒಡ್ಡಿಕೊಂಡಿರುವ ಲೇಖಕಿ ಕಮಲಾ ಹಮ್ಮಿಗೆಯವರು ಇದುವರೆಗೆ ಒಂಬತ್ತು ಅನುವಾದಿತ ಕೃತಿಗಳನ್ನು ಕೊಟ್ಟಿದ್ದಾರೆ. ನಾನಾ ಕಾರಣದಿಂದ ಕೇರಳದಲ್ಲಿ ನೆಲೆಸಿದ್ದರಿಂದ ಇವರು ಮಲೆಯಾಳೀ ಸ್ತ್ರೀ ಸಂಕಥನಗಳಿಗೆ ಕೈಹಚ್ಚಿದರು. ‘ಚಿರು ಕಥ’ ಎಂದು ಕರೆಸಿಕೊಳುವ ಸಣ್ಣ ಕಥೆಗಳ ಪ್ರಖರತೆ ಮನಗೊಂಡು ಅತ್ತಿ ಹಣ್ಣಿನಂಥ ಹೆಣ್ಣಿನ ಬದುಕನ್ನು — ಅಂದರೆ ಮೇಲೆ ಆಕರ್ಷಕವಾಗಿದ್ದು ಒಳಗೆ ಅರೆಕೊರೆಯಿದ್ದರೂ — ಬಿಚ್ಚಿಡುವ ಕಥೆಗಳನ್ನಾಧರಸಿಕೊಂಡು ಒಟ್ಟಾರೆ ಕೇರಳ ಕಾಂತೆಯರ ನಿಟ್ಟುಸಿರು, ಕೋಪಗಳನ್ನು ಕನ್ನಡಕ್ಕೆ ತರುವಲ್ಲಿ ಸಾಫಲ್ಯ ಕಂಡಿದ್ದಾರೆ ಕಮಲಾ ಹೆಮ್ಮಿಗೆ…

‘ಮಾಯಾಕನ್ನಡಿ’ ಕೇರಳ ಕಾಂತಾ ಸಮ್ಮಿತದ ಮುಂದುವರಿದ ಭಾಗವೆನ್ನೆಡ್ಡಿಯಿಲ್ಲ. ಸ್ವಾತಂತ್ರೋತ್ತರ ಭಾರತ, ಸುಶಿಕ್ಷಿತ ಸ್ತ್ರೀಯರ ಬವಣೆಗಳು, ಸಮಾಜದ ದ್ವಂದ್ವ ನೀತಿಗಳನ್ನು ಪ್ರಶ್ನಿಸುವ ಗುಣ‌ ಇವೆಲ್ಲವನ್ನೂ ಇಲ್ಲಿಯ ೧೬ ಕಥೆಗಳಲ್ಲಿ ಕಾಣಬಹುದು. ೧೯ ನೆಯ ಶತಮಾನದಲ್ಲೇ ಭ್ರಮನಿರಸನ(ಗಾಂದೀಜಿಯೋತ್ತರ ದಿನಗಳು)ವಾದ ಚಿತ್ರ ಇಲ್ಲಿ ನೋಡಲು ಸಿಗುವುದು.

ಪೊಲೀಸ್ ವ್ಯವಸ್ಥೆ ವಿರುದ್ಧ ಕಮಲಾದಾಸ್ (ಸುರೈಯ್ಯಾ) ಎತ್ತಿದ ಧ್ವನಿ ‘ಕಲ್ಲ್ಯಾಣಿ’ಯಲ್ಲಿದ್ದರೆ ‘ವತ್ಸಲಾ’ರ ಕಥೆಗಳಲ್ಲಿ ಹೆಣ್ಣಿನ ಸೂಕ್ಷ್ಮ ಸಂವೇದನೆ ಹಾಗೂ ಮಾತೃ ಹೃದಯಗಳ ಚಿತ್ರಣವಿದೆ. ‘ಚರಿತ್ರೆ ಮರುಕಳಿಸಲಿಲ್ಲ’ ದಲ್ಲಿ ‘ರಾಜಲಕ್ಷ್ಮಿ’ಯವರು ಅಳಿಯ ಸಂತಾನ ಕಟ್ಟು (ಮಾತೃ ಮೂಲ ಕುಟುಂಬ) ಕುರಿತು ವಿಡಂಬಿಸಿದ್ದಾರೆ.  ‘ಕನ್ಯ’ ‘ಸಲಿಂಗ ಪಶು’ ಕಥೆಗಳಲ್ಲಿ ಇಂದೂ ಮೇನೊನ್ ಹೆಣ್ಣಿನದೇ ವಿಶಿಷ್ಟಾನುಭಗಳನ್ನು ದಟ್ಟವಾಗಿ ಮುಂದಿಟ್ಟಿದ್ದಾರೆ.

ಇ.ಪಿ.ಸುಷ್ಮಾರ ‘ಮಗಳು’ ಧೋರಣೆ ಕಲಾತ್ಮಕತೆ ಎರಡೂ ದ್ರವ್ಯತೆಯಿಂದ ಪರಿಪಕ್ವವಾದ ಕಥೆ. ನಿಜವಾಗಿ ಇದು ಕವಿತೆ!

ಮೂರು ತಲೆಮಾರಿನ ಲೇಖಕರ ಪ್ರಾತಿನಿಧಿಕ ಕಥಾ ಸಂಕಲನ.  ಹೀಗೆ ನಮ್ಮೆದುರು ಸುರುಳಿ ಬಿಚ್ಚುತ್ತದೆ.

ಕಮಲಾ ಹೆಮ್ಮಿಗೆಯವರು ಉದ್ದೇಶ ಪೂರ್ವಕವಾಗಿ ‘ಜನಪದ ಕಥೆ’ಯೊಂದನ್ನು ಸೇರಿಸಿ ಕೃತಿಗೆ ಮೆರಗು ನೀಡಿದ್ದಾರೆ. ಒಂದು ಹರೆಯದ ಹುಡಿಗಿಗೆ ರಸಹಗಳಲ್ಲಿರುವು ಹಾಗೂ ಯಾತನೆಗಳಲ್ಲಿ‌ ಯಾವುದು‌ ತೀವ್ರ ಎಂಬ ‘ಯಕ್ಷ ಪ್ರಶ್ನೆ’ ಹಾಕುವ ಸಮಾಜದ ಕ್ರೌರ್ಯವನ್ನು ಕಣ್ಣಿಗೆ ಕಟ್ಟಿ ಕೊಟ್ಟಿದ್ದಾರೆ. (ಒಟ್ಟು ಸಂಕಲನದ ‘ಆಶಯ’ವನ್ನಿದು ಪ್ರಕಟಿಸುತ್ತದೆ).

ಇನ್ನು ಮುಖಪುಟ ಹಾಗೂ ಶೀರ್ಷಿಕೆ ಸಂಬಂಧಿಸಿದ ‘ಮಾಯಾಕನ್ನಡಿ’ ಸೊಗಸೇ ಬೇರೆ.

ಇಲ್ಲಿ ಕಳ್ಳನೊಬ್ಬನಿಗೆ ಗುಜರಿಯಲ್ಳಿ ಕನ್ನಡಿಯೊಂದು ಸಿಗುತ್ತದೆ. ಅ ಯುವಕ ಮನೆಗೆ ತಂದು ಮುಖ ನೋಡಿಕೊಳ್ಳಲು ಸಹಜವಾಗಿ ಬಯಸಿದರೆ, ಅಲ್ಲಿ ಸೈತಾನನ‌ ಬದಲು ಕ್ರಿಸ್ತನ ಮುಖ ಕಾಣುವುದು!

ನಂತರದ ಕ್ಷಣಗಳಲ್ಲಾತ ಒಳ್ಳೊಳ್ಳೆ ಕಾರ್ಯಗಳನ್ನು ಎಸಗುವನು.

ಕಥೆಯ ಅಂತ್ಯದಲ್ಲಿ ಕನ್ನಡಿಯಲ್ಲಿ ಸೈತಾನನ ಮೊಗವೇ ಕಾಣುವುದು ಬದುಕಿನ ವ್ಯಂಗ್ಯ! ಹಿರಿಯ ಲೇಖಕಿ ‘ಗ್ರೇಸಿ’ಯವರ ಕಥೆ ಇದು. ಫ್ಯಾಂಟಸಿ ಚಿತ್ರಣವಿದೆ.

ಹೀಗೆ ಬದುಕಿನ ನಿಸ್ಸಾರತೆ, ಸ್ವಾರಸ್ಯ ಎರಡನ್ನೂ ಕುರಿತ ಕಥೆಗಳು ವಾಚಕರಿಗೆ ಸಂಕಲನ ನೀಡುತ್ತದೆ. ಸ್ತ್ರೀ-ದೃಷ್ಟಿಕೋನ ಇಲ್ಲಿ ಮುಖ್ಯ.

ಕಮಲಾ ಹೆಮ್ಮಿಗೆಯವರು ತುಂಬಾ ಸರಳ ಭಾಷೆಯಲ್ಲಿ ಅಲ್ಲಿಯ ಪರಿಸರ, ನಾಣ್ನುಡಿ, ಮುಂತಾದವುನ್ನು ಸಾರ ಕೆಡದಂತೆ ಒಪ್ಪಳಿಯದಂತೆ ಕನ್ನಡಕ್ಕೆ ತಂದಿದ್ದಾರೆ.

ಉತ್ತರ ಕರ್ನಾಟಕದ (ಉದಾ: ಶಿಕಾವತು) ಹವಣಾದ ಶಬ್ದಗಳೂ ಬಳಕೆಗೊಂಡಿವೆ. ಸಂಕೀರ್ಣವಾದ ವಾಕ್ಯಗಳು ಎಲ್ಲೂ ಇಲ್ಲ.

‘ಪ್ಯಾಸಿ’ವೂ ಒಂದು ಶೃತಿಯಾಗಿ ಸಂಕಲನದುದ್ದಕ್ಕೂ ಇರುವ ಅನುಭವ!

ಇಂಥ ಸ್ತ್ರೀ ‘ಅಸ್ಮಿತೆ’, ಸಂವೇದನೆ, ಕನ್ನಡಕ್ಕೆ ಅತ್ಯವಶ್ಯವಾಗಿತ್ತು. ಅದನ್ನು ಕಮಲಾ ಹೆಮ್ಮಿಗೆಯವರು ಸಮರ್ಥವಾಗಿ ಒದಗಿಸಿದ್ದಾರೆ.

‘ಕೇರಳ ಕಾಂತಾ ಸಮ್ಮಿತ’ದ ಕಥೆಗಳು ಅಘಾತ ತರುವಂತಿದ್ದವು. ಇಲ್ಲಿ ಮಾತ್ರ ‘ಪ್ರಶಾಂತ ಸಮುದ್ರ. ಎರಡೂ ಕಮಲಾ ಹೆಮ್ಮಿಗೆಯವರ ಕೌಶಲ್ಯಕ್ಕೆ ಸಾಕ್ಷಿಯೇ..!

ಮುಖಪುಟ, ಹಿಂಬದಿ ‘ಸಮುದ್ರ ದೇವತೆ’ ಬೆನ್ನುಡಿ ಅರ್ಥಪೂರ್ಣ. ‘ಬ್ಲರ್ಬ್’ ಬರೆದ ಪ್ರಭು.ಅಜಾನೂರು, ಅನುವಾದಕರ ಸರಳ, ಸಂಪನ್ನ ವ್ಯಕಿತ್ವವನ್ನು‌ ಸರಿಯಾಗಿ ಗುರುತಿಸಿದ್ದಾರೆ.

ಇಷ್ಟು ಹೇಳಿ ಈ ಕಮಲಾ ಹೆಮ್ಮಿಗೆಯವರ ಅನುವಾದಿತ ನೂತನ ಕಥೆಗಳ ಬಗೆಗೆ ಸಾಕುಮಾಡುತ್ತೇನೆ.

ಪುಸ್ತಕ ಪ್ರತಿ ಬೇಕಾದವರಿಗೆ ಒಂದು ಸಲಹೆ–

ಸಂಪರ್ಕಿಸಬೇಕಾದ ಮೊಬೈಲ್ ನಂಬರ್ ಕೆಳಗಿನಂತೆ ಇದೆ.–

‘ಕಣ್ವ ಪ್ರಕಾಶನ’ ಬೆಂಗಳೂರು

ಮೊಬೈಲ್ ನಂಬರ್—9845052481

******************************************

ಕೆ.ಶಿವು ಲಕ್ಕಣ್ಣವರ

Leave a Reply

Back To Top