ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಪುಸ್ತಕ ಸಂಗಾತಿ

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ)

ಪುಸ್ತಕ ಸಂಗಾತಿ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಹೆಚ್. ಎಸ್.ಪ್ರತಿಮಾ ಹಾಸನ್ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪ್ರತಿ ಬೋಧಪುಸ್ತಕದ ಪ್ರಥಮ ಮುದ್ರಣ-2024ಪುಸ್ತಕದ ಮುಖಪುಟ ವಿನ್ಯಾಸ –ಪ್ರಕಾಶನ -ಅನ್ನಪೂರ್ಣ ಪಬ್ಲಿಷಿಂಗ್ ಹೌಸ್.ಪುಸ್ತಕದ ಬೆಲೆ-250 ರೂ.ಪುಟಗಳ ಸಂಖ್ಯೆ-224ಮುನ್ನುಡಿ -ಖ್ಯಾತ ಹಿರಿಯ ಸಾಹಿತಿಗಳಾದ ಶ್ರೀ.ಹರಿನರಸಿಂಹ ಉಪಾಧ್ಯಾಯ ಅವರು ಈ ಲೇಖನ ಸಂಕಲನ ಕೃತಿಗೆ ಸೊಗಸಾದ ಮುನ್ನುಡಿಯನ್ನು ಬರೆದು ಶುಭ ಕೋರಿರುವರು  ಇತ್ತೀಚಿಗೆ ಎಲ್ಲೆಡೆಯೂ  ರಾಜ್ಯದ್ಯಂತ  ಹೆಸರು ಮಾಡುತ್ತಾ  ಶತಕಕ್ಕಿಂತ ಹೆಚ್ಚಿನ ಪ್ರಶಸ್ತಿಯನ್ನು ಪಡೆದಂತಹ ಹೆಮ್ಮೆಯ ಹಾಸನದ  ಮೂಲದವರಾದ  ಹಾಸನದ  ಹೆಮ್ಮೆಯ ಪುತ್ರಿ  ಶ್ರೀಮತಿ ಹೆಚ್ ಎಸ್ ಪ್ರತಿಮಾ  ಹಾಸನ್ ರವರುಮುಕ್ತಕ ಕವಯಿತ್ರಿ, ಶಿಕ್ಷಕಿ, ಸಮಾಜ ಸೇವಕಿ, ಸಂಘಟಕಿ,  ಪತ್ರಕರ್ತೆ, ಅಂಕಣಗಾರ್ತಿ, ಸಾಮಾಜಿಕ ಚಿಂತಕಿ, ಗಾಯಕಿ, ಸಾಹಿತಿ, ಬರಹಗಾರ್ತಿ,ಯಾಗಿ ಅಷ್ಟೇ ಅಲ್ಲದೆ  ಹಲವಾರು ಸಂಘ ಸಂಸ್ಥೆಗಳಲ್ಲಿ  ಜಿಲ್ಲೆ ಹಾಗೂ ರಾಜ್ಯ ಘಟಕಗಳಲ್ಲಿ ಪದಾಧಿಕಾರವನ್ನು ಪಡೆದು ಕಾರ್ಯ ಕಾರ್ಯನಿರ್ವಹಿಸುತ್ತಾ  ‘ ಬಹುಮುಖ ಪ್ರತಿಭೆ ‘ ಯಾಗಿ ಹೊರಹೊಮ್ಮಿದ್ದಾರೆ. ಇವರ ಬಹುಮುಖ ಪ್ರತಿಭೆಯನ್ನು ಕಂಡಾಗ ಉದಿಸಿ ಬಂದ ನುಡಿಗಳು ಹಲವಾರು.” ಆಗದು ಎಂಬ ಕಾರ್ಯವ ಆಗುವುದೆಂಬುದನ್ನು ತೋರಿದವಳು ಎಲ್ಲೆಡೆಯೂ ಪ್ರಸಿದ್ಧಿಯಾದವಳು   ಇಂದಿನ ಪೀಳಿಗೆಗೆ ಪ್ರೇರಣೆಯಾಗಿರುವಳು ಸದಾ ಕಾಲ ಸಮಾಜದ ಏಳಿಗೆಗಾಗಿ  ತುಡಿಯುವಂತಹ ಹೃದಯವ ಹೊಂದಿರುವ ಮಹಿಳಾ ಸಾಧಕಿ ಇವಳು “ಇವರ ಸಾಹಿತ್ಯ ಲೋಕದಲ್ಲಿನ ಸೇವೆಯು  ಇವರಿಂದ 11 ಕೃತಿಗಳು  ಸಾಹಿತ್ಯ ಲೋಕಕ್ಕೆ ಲೋಕಾರ್ಪಣೆಗೊಂಡಿದೆ. ಅದರಲ್ಲಿ ಪ್ರತಿ ಬೋಧವೂ ಒಂದು 224 ಪುಟಗಳನ್ನು ಒಳಗೊಂಡಿದೆ. 250 ರೂಪಾಯಿಯಾಗಿದ್ದು. ಬೆನ್ನುಡಿಯನ್ನು ಪ್ರೋ. ಸಮತಾ ದೇಶ ಮಾನೆ  ರವರು ಬರೆದಿದ್ದು  ಪ್ರೋತ್ಸಾಹವನ್ನು ನೀಡುತ್ತಾ  ಕಾರ್ಯವನ್ನು ಮಾಡಿದ್ದಾರೆ. ಇದು 2024ರ ಆವೃತ್ತಿಯಾಗಿದ್ದು. ಅರ್ಪಣೆಯನ್ನು ತನ್ನ ತಂದೆಯಾದಂತಹ ದಿವಂಗತ ಸುರೇಶ್ ರವರಿಗೂ ತಾಯಿ ನೀಲಮ್ಮ ಸುರೇಶ್ ರವರಿಗೆ ಹಾಗೂ ಅಚ್ಚುಮೆಚ್ಚಿನ ಪ್ರೋತ್ಸಾಹದಾಯಕರಾಗಿ ತನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಅಣ್ಣನಾದ ಶ್ರೀ ಹೆಚ್. ಎಸ್ ಮಂಜುನಾಥ್( ಆರೋಗ್ಯ ನಿರೀಕ್ಷಣಾಧಿಕಾರಿ ) ರವರಿಗೂ  ಅರ್ಪಿಸಿದ್ದಾರೆ. ಈ ಕೃತಿಯಲ್ಲಿ ನವಳಗುಳಿದವರು ಆಶಯ ನುಡಿಯ ಮೂಲಕ ಆಶೀರ್ವದಿಸಿದ್ದಾರೆ. ಅತ್ಯಂತ ಮುಖ್ಯವಾಗಿ  ಶ್ರೀ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಅಧ್ಯಕ್ಷರಾದಂತಹ  ಶ್ರೀ ಉದಯಕುಮಾರ್ ರವರು ಆಶಯ ನುಡಿಯನ್ನು  ಬರೆದಿದ್ದಾರೆ. ಆನಂತರದಲ್ಲಿ ಮನದಾಳದ ಮಾತಿನಲ್ಲಿ ತನ್ನ ಸಾಧನೆಯ ದಾರಿಯಲ್ಲಿ ಅಡೆತಡೆಯನ್ನು ನೀಡಿದಂತಹ ಹಾಗೂ ಪ್ರೋತ್ಸಾಹಿಸಿದಂತಹ  ಎಲ್ಲರಿಗೂ ಧನ್ಯವಾದಗಳನ್ನು ಲೇಖಕಿ ಶ್ರೀಮತಿ ಹೆಚ್.ಎಸ್. ಪ್ರತಿಮಾ ಹಾಸನ್ ರವರು  ತಿಳಿಸಿದ್ದಾರೆ. ನಂತರದಲ್ಲಿ ಮುನ್ನುಡಿಯನ್ನು  ಹರಿ ನರಸಿಂಹ ಉಪಾಧ್ಯಾಯರು ಬರೆದಿದ್ದಾರೆ. ಆನಂತರದಲ್ಲಿ ಪರಿವಿಡಿಯಲ್ಲಿ 45 ಲೇಖನಗಳನ್ನು ಒಳಗೊಂಡಂತಹ  ಅ ಲೇಖನಗಳಲ್ಲಿ ಕಥೆ, ಪ್ರಸ್ತುತ ದಿನಮಾನಕ್ಕೆ ಹೋಲಿಕೆ ಮಾಡುವಂತಹ ಲೇಖನಗಳು, ಮಂಗಳಮುಖಿಯರ ಬಗ್ಗೆ  ಹೀಗೆ ಹಲವಾರು ವಿಚಾರಗಳನ್ನು ಒಳಗೊಂಡಂತಹ ಲೇಖನಗಳು ಇವೆ. ಇದರಲ್ಲಿ ಇರುವಂತಹ  ಪ್ರತಿಯೊಂದು ಲೇಖನಗಳು ಪತ್ರಿಕೆಯಲ್ಲಿ ಪ್ರಕಟಗೊಂಡಿದೆ. ಕನ್ನಡ ಸಾಹಿತ್ಯವು ಇಂದು ಸೊರಗುತ್ತಿದೆ ಎಂಬ ಕೂಗು ಕೇಳಿ ಬರುವ ಹೊತ್ತಿನಲ್ಲಿ ಅದೆಷ್ಟೋ ಕವಿಗಳು, ಕವಯಿತ್ರಿಯರು, ಲೇಖಕ ಲೇಖಕಿಯರು ಕನ್ನಡದಲ್ಲಿ ಬರೆಯುತ್ತಿರುವುದು ಕಂಡು ಬರುತ್ತಿದೆ. ಇದನ್ನು ನೋಡಿದಾಗ ಕನ್ನಡದ ಜನರು ಕನ್ನಡವನ್ನು ಎಂದಿಗೂ ಹಿಂದೆ ಉಳಿಯಲು ಬಿಡುವ ಮಾತೇ ಇಲ್ಲ ಎನ್ನುವುದು ಗೊತ್ತಾಗುತ್ತದೆ. ಅದರಂತೆ ಇಂದು ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬಂದು ತಮ್ಮ ಸಾಹಿತ್ಯ ಅಭಿರುಚಿಯನ್ನು ತೋರಿಸುತ್ತಿರುವುದು ಹೆಮ್ಮೆಯ ವಿಚಾರ. ವಿವಿಧ ಸಾಹಿತ್ಯ ಪ್ರಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಉತ್ತಮ ಕೃಷಿ ಮಾಡುವಲ್ಲಿ  ಹೆಜ್ಜೆ ಹಾಕುವ ಅನೇಕರಲ್ಲಿ ಒಬ್ಬರು ಹಾಸನದ ಶ್ರೀಮತಿ ಪ್ರತಿಮಾ.ಹೆಚ್.ಎಸ್ ರವರು. ಈಗಾಗಲೇ ಹಲವು ಕೃತಿಗಳನ್ನು ಹೊರ ತಂದಿರುವ ಇವರು ಈಗ ಮುಕ್ತಕ ಸಂಕಲನ ಕೃತಿಯನ್ನು ತರುವಲ್ಲಿ ಆಸಕ್ತಿ ತೋರಿರುವುದು ಆ ಸಾಹಿತ್ಯ ಪ್ರಕಾರಕ್ಕೊಂದು ಹೆಚ್ಛಿನ ಗರಿಯಿಟ್ಟಂತಾಗುವುದು. ಶ್ರೀಮತಿ  ಹೆಚ್ ಎಸ್ ಪ್ರತಿಮಾ ಹಾಸನ್ ರವರು  ಈ ಮುಕ್ತಕ ಕೃತಿ *ಅಂತರಂಗ ಪ್ರತಿರವ* ದಲ್ಲಿ ಸುಮಾರು ನೂರು ಮುಕ್ತಕಗಳಿದ್ದು ಜೊತೆಗೆ ಓದಿ ಆರ್ಥೈಸಿಕೊಳ್ಳಲು ಸುಲಭವಾಗುವಂತೆ ಭಾವಾರ್ಥವನ್ನೂ ಬರೆದಿರುವುದನ್ನು ಕಾಣುತ್ತೇವೆ. ಕವಿಭಾವವನ್ನು ಅರ್ಥ ಮಾಡಿಕೊಳ್ಳುವುದು ಕೆಲವೊಮ್ಮೆ ಸುಲಭವಲ್ಲದ ಕಾರಣ ಓದುಗರು ಗೊಂದಲಕ್ಕೆ ಈಡಾಗಬಾರದು, ಓದಿದ ಪ್ರತಿಯೊಂದು ವಿಷಯಗಳೂ ಬೇಗ ಮನನವಾಗಲಿ ಎಂಬ ಉದ್ದೇಶದಿಂದ ಸರಳವಾಗಿ ಕೆಲವು ಸಾಲುಗಳಲ್ಲಿ ಅರ್ಥವನ್ನೂ ಇಲ್ಲಿ ನೀಡಿರುವುದು ಕೃತಿಯ ವಿಶೇಷತೆ.ಇಲ್ಲಿರುವ ಮುಕ್ತಕಗಳಲ್ಲಿ ಕೆಲವನ್ನು ನೋಡುವುದಾದರೆ…ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) ಸದ್ದಿರದೆ ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ ಕಪಿಲನಗರದರಸು ಗೌತಮಬುದ್ಧ ಮನೆಯನು ಬಿಟ್ಟು ಬೋಧಿವೃಕ್ಷದ ಕೆಳಗೆಸಿದ್ಧಿಗಳಿಸಲು ಕುಳಿತ ಲಕ್ಷ್ಮಿದೇವಿ  ಭಾವಾರ್ಥ:  ಪ್ರಪಂಚದಲ್ಲಿ ಎಲ್ಲರೂ  ಯಾವುದೇ ಶಬ್ದ ಮಾಡದೆ ರಾತ್ರಿ ವೇಳೆ ಶಾಂತಿಯಿಂದ ನಿದ್ದೆ ಮಾಡುತ್ತಿರುತ್ತಾರೆ. ಆದರೆ ಗೌತಮ ಕಪಿಲ ನಗರದ  ಅರಸ ಬೋಧಿವೃಕ್ಷದ ಕೆಳಗೆ  ಕುಳಿತು ಧ್ಯಾನ ಮಾಡುತ್ತ ಶಾಂತಿಯನ್ನು ಗಳಿಸುತ್ತಾನೆ . ಅದರಿಂದ ಸಿದ್ಧಿ ಪಡೆಯಬೇಕೆಂದು ಆಶಿಸುತ್ತಾನೆ. ಲೋಕದ ಸಾವು ನೋವುಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ನಡು ರಾತ್ರಿ ಮನೆ ಬಿಟ್ಟು ಹೋಗುತ್ತಾನೆ.  ಬೋಧಿವೃಕ್ಷದ ಕೆಳಗೆ  ಸಿದ್ದಿಗಳಿಸಲು ತಪಸ್ಸಿಗೆ ಕುಳಿತುಬಿಡುತ್ತಾನೆ.ಕನ್ನಡಕೆ ಕೈಯೆತ್ತು ಗೌರಿ ಶಿಖರದ ಹಾಗೆಕನ್ನಡಕೆ ಕೊರಳೆತ್ತು ಪಾಂಚಜನ್ಯಕನ್ನಡವ ನೆನೆಯುತ್ತ ಕನ್ನಡಾಂಬೆಗೆ ನಮಿಸುಕನ್ನಡವೆ ಚೆನ್ನುಡಿಯು ಲಕ್ಷ್ಮಿ ದೇವಿಭಾವಾರ್ಥ: ನಮ್ಮ ಕನ್ನಡ  ನಮ್ಮ ಆಸ್ತಿ. ಅದನ್ನು ಉಳಿಸಿಕೊಳ್ಳುವ ಕೆಲಸ ನಮ್ಮಿಂದಲೇ ಆಗಬೇಕೇ ಹೊರತು ಬೇರೆಯವರು ಅದನ್ನು ಉಳಿಸಲು ಬರುವುದಿಲ್ಲ. ಕನ್ನಡಕ್ಕೆ ಕೈ ಎತ್ತು  ಗೌರಿ ಶಿಖರದ ಹಾಗೆ  ಕನ್ನಡಕ್ಕೆ ಕೊರಳೆತ್ತು  ಪಾಂಚಜನ್ಯದ ರೀತಿಯಲ್ಲಿ ಎಂಬಂತೆ ಕನ್ನಡವನ್ನೇ ಉಸಿರಾಗಿಸಿಕೊಂಡು  ಕನ್ನಡವನ್ನೇ ಬೆಳೆಸಲು  ಹೋರಾಟವನ್ನು ಮಾಡಬೇಕಾಗುತ್ತದೆ. ಕನ್ನಡವ ನೆನೆಸುತಲಿ  ಕನ್ನಡಾಂಬೆಗೆ ನಮಿಸುತ್ತಲಿ  ತಾಯಿಯ ಋಣ ತೀರಿಸಲಾಗದೆಂದು  ನನ್ನ ಕನ್ನಡ ನನಗೆ ಹೆಮ್ಮೆ ಎಂದು ಹೇಳುತ್ತಾ ಸಾಗುವ ದಾರಿಯಲ್ಲಿ ಕನ್ನಡಾಂಬೆಯನ್ನು ನಮಿಸುತ್ತಾ ಕನ್ನಡವೇ ಚೆನ್ನುಡಿಯು ಎಂದು ಹೇಳುತ್ತಾ  ಎಲ್ಲೆಡೆಯೂ ಪ್ರೀತಿ ವಿಶ್ವಾಸದಲ್ಲಿ ಬಾಳಬೇಕಾಗಿದೆ. ಪ್ರತಿ ಮನೆ ಮನೆಗಳಲ್ಲೂ ಕನ್ನಡದ ಕಹಳೆಯನ್ನು ಕೂಗ ಬೇಕಾಗಿದೆ. ಕನ್ನಡವೇ ಸತ್ಯ, ಕನ್ನಡವೇ ನಿತ್ಯ, ಕನ್ನಡವೇ ನಮ್ಮಮ್ಮ, ಅವಳೇ ನಮ್ಮ ಉಸಿರಮ್ಮ ಎಂದು ಜೀವನದಲ್ಲಿ ಸಾಗ ಬೇಕಾಗುತ್ತದೆ.ಕೂಲಿನಾಲಿಯ ಮಾಡಿ ಮಕ್ಕಳಿಗೆ ಮುದನೀಡಿಪಾಲಿಸಿದ ತಾಯ್ತಂದೆ ನಿಜದೇವರುಹಾಲುಣಿಸಿ ತುತ್ತುಣಿಸಿ ಗೌರವವ ಹೆಚ್ಚಿಸಿದನೀಲಮ್ಮನಿಗೆ ಶರಣು ಲಕ್ಷ್ಮಿದೇವಿಭಾವಾರ್ಥ: ಯಾರೇ ಆಗಲಿ ಜನಿಸಿದ ಮಕ್ಕಳನ್ನು ಸಾಕುವಾಗ ತಮ್ಮ ಕುಡಿಗಳೆಂದು ಪ್ರೀತಿಯಿಂದ ಸಾಕುತ್ತಾರೆ.  ಯಾವುದೇ ಕಷ್ಟಗಳನ್ನು ತೋರಿಸಿಕೊಳ್ಳದಂತೆ ಕೂಲಿ ನಾಲಿ ಮಾಡಿ ಮಕ್ಕಳನ್ನು ಸಾಕುತ್ತಾರೆ. ಅವರೇ ನಿಜವಾದ ದೇವರು. ಅವರ ಕಷ್ಟಗಳು ಎಷ್ಟೇ ಇದ್ದರೂ  ನಗುನಗುತ ಪ್ರೀತಿಯಿಂದ ಊಟ ಮಾಡಿಸುತ್ತಾರೆ. ಅಂತಹ ದೇವರುಗಳನ್ನು  ಚೆನ್ನಾಗಿ ನೋಡಿಕೊಳ್ಳುವ ರೀತಿಯಲ್ಲಿ  ಕೃತಜ್ಞತೆಯನ್ನು ತೋರಬೇಕು.  ಅಂತಹ ನನ್ನ ತಾಯಿಯು ಸಹ ಎದೆ ಹಾಲು ನೀಡುತ್ತಾ ಗೌರವ ನೀಡುತ್ತ ಪ್ರೀತಿ ಪ್ರೇಮದಲಿ ಸಾಕು  ಹೂವಂತೆ ಸಂರಕ್ಷಿಸುತ  ನನ್ನ ಎಲ್ಲಾ ಕಾರ್ಯಗಳಲ್ಲಿ ಜೊತೆಯಾಗಿ ನಿಲ್ಲುತ್ತಾ ನನಗೆ ಯಶಸ್ಸನ್ನು ನೀಡುತ್ತಿರುವ  ನನ್ನ ತಾಯಿ ನೀಲಮ್ಮಗೆ ಶರಣು.        ಕೃತಿಯೊಳಗಿನ ಎಲ್ಲಾ ಮುಕ್ತಕಗಳಿಂದ ಆಯ್ದು ಬೆರಳೆಣಿಕೆಯಷ್ಟನ್ನು ಮಾತ್ರ ಇಲ್ಲಿ ಉದಾಹರಿಸಿದ್ದೇನೆ. ಈ ಎಲ್ಲ ರಚನೆಗಳನ್ನು ಕಂಡಾಗ ಕವಯಿತ್ರಿಯು ಎಷ್ಟು ವಿಶಾಲ ಚಿಂತನೆಯುಳ್ಳವರಾಗಿದ್ದಾರೆ ಎಂದು ಅರ್ಥವಾಗುತ್ತದೆ. ಪ್ರತಿಯೊಂದು ಮುಕ್ತಕಗಳಲ್ಲಿಯೂ ವಿವಿದ ವಿಷಯಗಳನ್ನು ಪ್ರಸ್ತಾಪಿಸುವ ಮೂಲಕ ಸಾಹಿತ್ಯದ ವಿಸ್ತಾರವನ್ನು ಸ್ಪಷ್ಟಪಡಿಸಿದ್ದಾರೆ. ಇಲ್ಲಿ ಪ್ರೀತಿ, ಒಳಿತು ಕೆಡುಕು, ಬುದ್ಧಿವಾದ, ಅಮ್ಮ, ಸ್ನೇಹ ಮೊದಲಾದ ಸಾಕಷ್ಟು ವಿಷಯಗಳು ಹಾಸುಹೊಕ್ಕಾಗಿವೆ. ಬದುಕಿನ ಆಗು ಹೋಗುಗಳಿಗೆ ಸ್ಪಂದಿಸುತ್ತವೆ. ಸಂಬಂಧ, ಪರಿಸರ ಕಾಳಜಿ, ಕನ್ನಡದ ಹಿರಿಮೆ, ದುಃಖ, ಭಕ್ತಿ, ಕಲಿಕೆ, ತಾಳ್ಮೆಯ ಕುರಿತು ಬೆಳಕು ಚೆಲ್ಲುವ ಹಲವು ಮುಕ್ತಕಗಳು ಮನಸ್ಸಿಗೆ ನಾಟುತ್ತವೆ. ಆಧುನಿಕ ವಚನದಂತೆ ಕಂಗೊಳಿಸುವ ನಾಲ್ಕು ಸಾಲಿನ ಮುಕ್ತಕಗಳು ಲಕ್ಷ್ಮಿದೇವಿ ಅಂಕಿತದಿಂದ ಕೊನೆಗೊಳ್ಳುತ್ತವೆ. ಈಗಾಗಲೇ ನೀಲ ಪ್ರತಿಮಾನ ಮಂಜು ಕವನ ಸಂಕಲನ, ಪಂಚ ಮುಕ್ತಕ ಮಾಲೆ, ಹಾಗೂ ಮನದಾಳದ ಪ್ರತಿಬಿಂಬ ಲೇಖನ ಸಂಕಲನ, ಪ್ರತಿಮಾವಲೋಕನ (ಕೃತಿ ವಿಮರ್ಶನ ಸಂಕಲನ), ಭಾವನೆಗಳ ಪ್ರತಿಬಿಂಬ, ಬಣ್ಣದ ಪ್ರತಿ ಡಬ್ಬಿ (ಶಿಶು ಗೀತೆ), ಪ್ರತಿಮಾನತರಂಗ (ಸಮಗ್ರಲೇಖನ ಸಂಗ್ರಹ ), ಪ್ರತಿ ಮುಕ್ತ ಸಿರಿ, ಕೃತಿಗಳನ್ನು ಹೊರತಂದಿರುವ ಇವರು ಪ್ರತಿಮಾ ಸಾಮಾಜಿಕ, ಸಾಂಸ್ಕ್ರತಿಕ ಟ್ರಸ್ಟ್ (ರಿ)ರಾಜ್ಯ ಘಟಕ. ಹಾಸನ ಜಿಲ್ಲೆ. ಯ ಸಂಸ್ಥಾಪಕಿಯೂ ಹೌದು. ಈ ಪ್ರತಿಷ್ಠಾನದ ಮೂಲಕ ಅನೇಕ ಸಮಾಜ ಸೇವೆಯನ್ನು ಮಾಡಿ ಗೌರವಕ್ಕೆ ಪಾತ್ರರಾಗಿರುವುದು ಇವರ ಬಹುಮುಖ ಪ್ರತಿಭೆಗೆ ಸಾಕ್ಷಿ. ಸಮಾಜ ಸೇವೆ ಹಾಗೂ ಸಾಹಿತ್ಯ ಸೇವೆಗೆ ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿರುವುದು ಹೆಮ್ಮೆಯ ವಿಚಾರ. ಈಗ ಈ ಮತ್ತೊಂದು ಕೃತಿಯೂ ಓದುಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಕೀರ್ತಿ, ಸಮ್ಮಾನಗಳು ಅರಸಿ ಬರಲಿ ಎಂದು ಆಶಿಸುತ್ತಾ ಈ ಕೃತಿಯಲ್ಲಿನ ಉತ್ತಮ ಜೀವನ ಮೌಲ್ಯಗಳನ್ನು ಸಂದೇಶಗಳು ಜನತೆಗೆ ದಾರಿ ದೀಪವಾಗಲಿ. ಶ್ರೀಮತಿ ಹೆಚ್. ಎಸ್. ಪ್ರತಿಮಾ ಹಾಸನ ರವರು ಇನ್ನಷ್ಟು ಹೆಚ್ಚು ವೈವಿಧ್ಯಮಯ ಸಾಹಿತ್ಯ ರಚನೆಯಾಗಲಿ, ತಾಯಿ ಭುವನೇಶ್ವರಿಯ ಆಶೀರ್ವಾದ ಸದಾ ಇವರಿಗೆ ಪ್ರಾಪ್ತವಾಗಲಿ ಎಂದು ಹೃನ್ಮನದಿಂದ ಹಾರೈಸುತ್ತೇನೆ. ಸಿರಿಗನ್ನಡಂ ಗೆಲ್ಗೆಸಿರಿಗನ್ನಡಂ ಬಾಳ್ಗೆ ಸಹೃದಯ ಓದುಗರು ಸಾಹಿತ್ಯಾಸಕ್ತರು ಪ್ರತಿಭೋದ ಲೇಖನ ಸಂಕಲನ ಕೃತಿಯ ಕೊಂಡು ಓದುವ ಮೂಲಕ ಸೃಜನಶೀಲ ಬರಹಗಾರ್ತಿಯಾದ ಬಹುಮುಖ ಪ್ರತಿಭೆಯ ಪ್ರತಿಭಾನ್ವಿತೆಯಾದ ಶ್ರೀಮತಿ ಪ್ರತಿಮಾ ಹಾಸನ ಇವರನ್ನು ಹರಸಿ ಹಾರೈಸಿ ಶುಭ ಕೋರಿ ಈ ಲೇಖನ ಸಂಕಲನ ಕೃತಿಯ ಕೊಂಡು ಕೊಳ್ಳಲು ಸಂಪರ್ಕಿಸಬೇಕಾದ ಲೇಖಕಿಯ ಮೊಬೈಲ್ ಸಂಪರ್ಕ ಸಂಖ್ಯೆ- +91 96115 34526 ಪೂರ್ಣಿಮಾ ರಾಜೇಶ್

ಹೆಚ್. ಎಸ್.ಪ್ರತಿಮಾ ಹಾಸನ್ ರವರ “ಪ್ರತಿಬೋಧ” ( ತಾರ್ಕಿಕ ಲೋಕದಲ್ಲೊಂದು ಪಯಣ) ಕೃತಿಯ ಅವಲೋಕನ ಪೂರ್ಣಿಮಾ ರಾಜೇಶ್(ಬಸು ಮಲ್ಕಿ) Read Post »

ಕಾವ್ಯಯಾನ

ರತ್ನರಾಯ ಮಲ್ಲ ಅವರ “ಗಜಲ್”

ಕಾವ್ಯ ಸಂಗಾತಿ ರತ್ನರಾಯ ಮಲ್ಲ “ಗಜಲ್” ಗುಲಾಬಿ ಪಲ್ಲಂಗದಲಿ ಮಲ್ಲಿಗೆಯ ಸುಮದ ಪಕಳೆ ನಿನಗಾಗಿ ಅರಳುತಿದೆಬೆಳಗಿನ ಹನಿ ಸ್ಪರ್ಶದಂತೆ ನನ್ನೊಳಗೆ ಸುಕನಸು ಮರವಾಗಿ ಹೊನಲುತಿದೆ ನಿನ್ನ ಆಲಿಂಗನದಿ ಹೂದಳದ ತೇವವು ಆಯಸ್ಕಾಂತದಂತೆ ಸೆಳೆಯುತಿದೆಮಳೆ ಮಣ್ಣನು ಅಪ್ಪಿಕೊಳ್ಳುವ ಹೊತ್ತಲಿ ನಿನ್ನ ಸೇರುವ ಆಸೆ ಚಿಗುರುತಿದೆ ಉಸಿರಿನೊಳಗಿನ ತಾಪದಲಿ ಹೃದಯದ ಅಡುಗೆಮನೆ ರಸಪಾಕ ನೀಡಿದೆನಿನ್ನಿಂದ ಹೂ ಅರಳುವುದಕ್ಕೆ ಮುಂಚಿನ ಕಂಪನ ಮನದಲಿ ಹರಡುತಿದೆ ತೆರೆದ ಹೂದೋಟದಂತಹ ಪ್ರೇಮಲೋಕದಲಿ ನಮಗೆ ವಯಸ್ಸು ತಾಗದುಮಧುಚಂದ್ರಕಾಗಿ ಹೂವಿನ ತೊಟ್ಟಿಲಲಿ ಸುಗಂಧದ ಹೊದಿಕೆ ಕಾಯುತಿದೆ ನೀನು ಹೃದಯ ತಣಿಸುವ ರಮಣೀಯ ದೃಶ್ಯ ಕಾವ್ಯ ದಣಿಯುವ ಮಾತಿಲ್ಲನಿನ್ನ ಮಡಿಲಲಿ ದೀಪ ದೀಪಕ್ಕೆ ಬೆಳಕು ನೀಡಲು ಮಲ್ಲಿ ಮನ ಮಿನುಗುತಿದೆ ರತ್ನರಾಯಮಲ್ಲ

ರತ್ನರಾಯ ಮಲ್ಲ ಅವರ “ಗಜಲ್” Read Post »

ಅನುವಾದ

ಜಿ. ಉಮಾಮಹೇಶ್ವರ್ ಅವರ ತೆಲುಗು ಕಥೆ “ಶ್ರೀಶೈಲಂ – ಶಿವರಾತ್ರಿ”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು

ಅನುವಾದ ಸಂಗಾತಿ ಶ್ರೀಶೈಲಂ -ಶಿವರಾತ್ರಿ ತೆಲುಗು ಮೂಲ –ಜಿ. ಉಮಾಮಹೇಶ್ವರ್ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು ನಾವು ಸುನ್ನಿಪೆಂಟದಲ್ಲಿ  ಆಚರಿಸಿದ ಮೂರು ಶಿವರಾತ್ರಿಗಳಲ್ಲಿ ನನ್ನ ಏಳನೇ ತರಗತಿಯ ಶಿವರಾತ್ರಿಗೆ ಒಂದು ವಿಶೇಷವಿದೆ. ಅದು ನಾನು ಮೊಟ್ಟಮೊದಲಬಾರಿಗೆ ಗೆಳೆಯರೊಂದಿಗೆ ಶ್ರೀಶೈಲಕ್ಕೆ ನಡೆದುಕೊಂಡು ಹೋಗಿರುವ ಶಿವರಾತ್ರಿ. ಪ್ರತಿಬಾರೀ ಕುಟುಂಬವೆಲ್ಲಾ ಯಾವುದಾದರೂ ಒಂದು  ಜೀಪುನಲ್ಲಿ ಹೊರಟು ಸದಾಶಿವ ಛತ್ರದಲ್ಲಿ ಉಳಿದುಕೊಂಡು, ಅಲ್ಲೇ ನಮ್ಮ ಲಗೆಜುಗಳನ್ನು  ಮಡಗಿ ದೇವರ ದರ್ಶನಕ್ಕೆ ಹೋಗುತ್ತಿದ್ದೆವು. ಆದರೆ ಪ್ರತಿಬಾರೀ ಎಲ್ಲರೂ ಆಸೆ ತೋರಿಸುವ ಕಾಲುದಾರಿ ಯಲ್ಲಿ ಹೋಗಬೇಕೆಂದು ಬಹಳ ಕಾಲದಿಂದ ಒಂದು ಆಸೆ ಯಿತ್ತು. ಅದಕ್ಕಾಗಿ  ಆ ಆ ಬಾರಿ ಹಿರಿಯರನ್ನು ಒಪ್ಪಿಸಿ ಗೆಳೆಯರೊಂದಿಗೆ ಹೊರಟೆ. ನಮ್ಮ ಮನೆಯಲ್ಲಿ ಅಷ್ಟು ಸುಲಭವಾಗಿ ಒಪ್ಪಿಕೊಳ್ಳುತ್ತಾರೆಂದು ನಾನು ಊಹಿಸಲಿಲ್ಲ.  ಆದರೆ ಅವರು ಒಂದು  ಕಂಡಿಷನ್ ಮೇಲೆ ಓಕೆ ಅಂದರು. ಹೋಗುವಾಗ ಗೆಳೆಯರೊಂದಿಗೆ ಹೋದರೂ ಅಲ್ಲಿ ಸದಾಶಿವ ಸತ್ರದ ಬಳಿ ಮತ್ತೆ ತಮ್ಮನ್ನು ಭೇಟಿಯಾಗಬೇಕು ಎಂಬ ಷರತ್ತು ಹಾಕಿ ಕಳುಹಿಸಿದರು.ಶಿವರಾತ್ರಿಯ ಹಿಂದಿನ ದಿನ ಮಲ್ಲಿ, ರಮಣ, ಜೀ. ಶೀನು, ಸತ್ತಾರು, ಎಂ. ಪ್ರಸಾದ್, ಇನ್ನೂ  ಕೆಲವು ಸ್ನೇಹಿತರು  ಶಾಲೆಯ ಬಳಿ ಭೇಟಿಯಾಗಲು ನಿರ್ಧರಿಸಿದವು. ಎಲ್ಲರೂ ಬಂದಾಗ,ಅಲ್ಲಿಂದ ಒಟ್ಟಿಗೆ ಕೇಕೆಹಾಕುತ್ತಾ ಶಿಳ್ಳೆ ಹೊಡೆಯುತ್ತಾ  ಐ.ಟಿ.ಐ. ದಾಟಿ ಮುಂದಕ್ಕೆ ಹೋಗುತ್ತಿದ್ದೆವು. ನನಗೆ ಈ ದಾರಿಯಲ್ಲಿ ಬರುತ್ತಿರುವುದು ಇದೇ ಮೊದಲು. ಅವರಂತೆ ವೇಗವಾಗಿ ಹೆಜ್ಜೆಗಳು ಹಾಕಲು ಸಾಧ್ಯವಾಗುತ್ತ ಇಲ್ಲ. ಸತ್ತಾರು,ರಮಣ,ನನ್ನೊಂದಿಗೆ ನಿಧಾನವಾಗಿ ನಡೆಯುತ್ತಿದ್ದಾರೆ. ಸ್ವಲ್ಪ ದೂರ ಸಾಗಿದಮೇಲೆ ‘ಸಾಕಲಿ ಸೆಲ/ಹಳ್ಳ’ ತಲುಪಿದೆವು. ಅಲ್ಲೊಂದು ಪುಟ್ಟ ಹಳ್ಳ ಹರಿಯುತ್ತಿದೆ. ಅಲ್ಲೇ ನಾವು  ಬೇಕಾದಷ್ಟುನೀರು ಕುಡಿದು, ಸ್ವಲ್ಪ ನೀರಿನಲ್ಲಿ ಪಾದಗಳನ್ನು ಒದ್ದೆಮಾಡಿಕೊಂಡು, ಒಬ್ಬರಮೇಲೊಬ್ಬರು ನೀರು ಸುರಿದುಕೊಳ್ಳುತ್ತಾ, ತಮಾಷೆಮಾಡುತ್ತಾ ನಡೆಯುತ್ತಿದ್ದೇವು. ನಮ್ಮ ಜಾತ್ರೆ ಕೋಲಾಹಲದಿಂದ ನಡೆಯುತ್ತಿದೆ.ಅಲ್ಲಿಂದ ಹಾಗೆ ನಡೆಯುತ್ತಾ ಮುಂದಕ್ಕೆ ಹೋದರೆ ‘ಮಾವಿನ ಹಳ್ಳ ಸಿಗುತ್ತದೆ. ಅಲ್ಲಿ ಮಾವಿನ ತೋಪುಗಳಿದ್ದವು. ಅದಕ್ಕಾಗಿ ಆ ಹೆಸರು ಬಂದಿರಬಹುದೆಂದು ರಮಣ ಹೇಳಿದ. ಹಾಗೆ ಮುಂದೆ ಸಾಗಿದಂತೆ ಕಾಡು ದಟ್ಟವಾಗುತ್ತದೆ. ದಾರಿಯಲ್ಲಿ ಮರ, ಕೊಂಬೆಗಳಿಂದ ಹಣ್ಣು, ಹಾಲಿನಹಣ್ಣು, ಚಿಟಿಮಿಟಿಹಣ್ಣು, ಬಚ್ಚಲಿ ಹಣ್ಣುಗಳನ್ನು  ಯಾರಿಗೆ ಬೇಕಾದನ್ನು  ಅವರು ಹಾಗೆ ಮರಗಳಿಂದ, ಗಿಡಗಳಿಂದ ಕಿತ್ತುಕೊಂಡು ತಿನ್ನುತ್ತಿದ್ದರು. ಮರಗಳಲ್ಲಿ ಇದ್ದ ಹಣ್ಣನ್ನು ಕೊಯ್ದುಕೊಂಡು ತಿನ್ನುವ ಆನಂದವೇ ಬೇರೆ. ಯಾರೋ ಕುಯ್ದು ತಂದು  ಮಾರಿದ ಹಣ್ಣಿನಲ್ಲಿನ  ಸಿಹಿಗಿಂತ, ಆಗಿಂದಾಗಲೆ ಕಿತ್ತುಕೊಂಡು ತಿಂದ ಕಾಡಿನ ಹಣ್ಣುಗಳ ರುಚಿ ತುಂಬಾ ಚೆನ್ನಾಗಿತ್ತು.  ಸುತ್ತಲೂ ಕತ್ತಲಾದಂತಹ ಕಾಡು. ಮರಗಳ ಸಂದುಗಳಿಂದ ಬೀಳುವ ಸೂರ್ಯನ ಕಿರಣಗಳು ಯಾರೋ  ಲಕ್ಷ ವಾಟ್ ಬಲ್ಬು ನಿಂದ ಬೆಳಕು ಚೆಲ್ಲುತ್ತಿರುವಂತೆ, ಕತ್ತಲೆಯ ಪರದೆಗಳನ್ನು ತೆಗೆದುಹಾಕುತ್ತಿವೆ. ಎಂದೂ ಕೇಳದ ಹಕ್ಕಿಗಳ ಕಲರಾವಗಳು, ಅವು ಅರ್ಥವಾದಂತೆ  ಮೂಲೆಮೂಲೆಗಳಿಂದ ಬಂದಿರುವ  ಪ್ರತಿಕ್ರಿಯೆಗಳು, ಅಗಾಗ್ಗ ಜೋರಾಗಿ ನಮ್ಮ ಕೂಗುಗಳು, ಆತಂಕದಿಂದ, ಕಂಪಿಸಿದಂತೆ, ಕಲ್ಲೋಲ ಶಬ್ದಗಳಿಂದ ಬೆಚ್ಚಿಬೀಳಿದಂತೆ ಶಬ್ದಗಳು.  ಅಲ್ಲಲ್ಲಿ ಓತಿಕೇತಗಳೋ , ಅಳಿಲುಗಳೋ, ಮೊಲೆಗಳೋ, ‘ಸರ್ ಸರ್’ ಎಂದು  ಓಡಾಡುತ್ತಿರುವ  ಸದ್ದುಗಳು,  ಹಾವುಗಳಂತಹ ಸರೀಸೃಪಗಳು ವೇಗವಾಗಿ ಹರಿದಾಡುವ  ಶಬ್ದಗಳು, ಎಲ್ಲೋ  ಮೇಲಿಂದ ಧುಮುಕುವ ಜಲಪಾತಗಳ  ಸದ್ದುಗಳು .. ಕಾಡಿನಲ್ಲಿ ನಡೆದುಕೊಂಡು ಹೋಗುವ ಪ್ರಯಾಣ  ಒಂದು ಅದ್ಭುತ.ಹೀಗೆ ಒಂದು ಗಂಟೆ ಪ್ರಯಾಣಮಾಡಿ ಹಠಕೇಶ್ವರ ತಲುಪಿದೆವು. ಇದು ಅತ್ಯಂತ ಶಾಂತಿಯುತ ಸ್ಥಳವಾಗಿದೆ. ಮೂರು ತಿಂಗಳ ಹಿಂದೆ ಕಾರ್ತಿಕ ಮಾಸದಲ್ಲಿ ವನಭೋಜನಕ್ಕೆಂದು ಇಲ್ಲಿಗೆ ಬಂದಿದ್ದೆವು. ಕೆಲವು ಕುಟುಂಬಗಳು ಸೇರಿ ಬೆಳಗಿನಿಂದ  ಸಂಜೆಯವರೆಗೆ ಒಂದು ಇಡೀ ದಿನವನ್ನು ಸಂತೋಷದಿಂದ ಕಳೆಯುವ ಅಪರೂಪದ ತಾಣವಿದು. ನಾವು ಮೇಲಿಂದ ಬಂದಿದ್ದರಿಂದ ಅಲ್ಲಿ ಸ್ವಲ್ಪ ಹೊತ್ತು ವಿಶ್ರಮಿಸಿ, ಮಂಗಗಳೊಂದಿಗೆ ಮರಗಳ ಮೇಲೆ ಹಾರುತ್ತಾ , ಬಾಳೆತೋಟಗಳಲ್ಲಿ ಹಣ್ಣಾಗಿದ್ದ  ಬಾಳೆ ಹಣ್ಣುಗಳನ್ನು  ಹುಡುಕುತ್ತಾ, ಅಲ್ಲಿ ರಾಶಿಯಾಗಿರುವ  ಅಂಜೂರು ಹಣ್ಣುಗಳನ್ನು ಹೊಟ್ಟೆ ಬಿಚ್ಚಿ ನೋಡಿ, ಹುಳಗಳು ಇಲ್ಲವೆಂದು ಖಚಿತಪಡಿಸಿಕೊಂಡೆವು. ಅನಂತರ ಬೇಕಾದಷ್ಟು ತಿಂದು, ನೀರು ಕುಡಿದು ಮತ್ತೆ ನಡೆಯ ತೊಡಗಿದೆವು. ಎದುರುಗೆ  ‘ಪಾಲಧಾರ-ಪಂಚಧಾರ’ದಲ್ಲಿ ಮೆಟ್ಟಿಲು ಇಳಿಯುವ ಸ್ಪರ್ಧೆ  ನಡೆದಿತ್ತು.  ಧಾರಾಕಾರವಾಗಿ ಸುರಿಯುವ ನೀರಿನ ಕೆಳಗೆ ಕೈ ಸಾಚಿ ಆ  ಶುದ್ಧವಾದ ನೀರನ್ನು ಕುಡಿದು, ಸ್ವಲ್ಪ ತಲೆಯ ಮೇಲೆ ಸುರಿದುಕೊಂಡು ಅಲ್ಲಿಂದ ಕಣಿವೆಯತ್ತ ನೋಡಿದರೆ  ಉಂಟಾಗುವ ಭಯವನ್ನು ಕಲ್ಪಿಸಿಕೊಂಡು ಮತ್ತೆ ನೇರವಾಗಿ  ಕಾಡಿನತ್ತ ಪ್ರಯಾಣಿಸಿದೆವು. ಈದಾರಿ ನನಗೆ ಹೊಸದಾದರೂ ಅನೇಕ ಗೆಳೆಯರಿಗೆ ಇದು  ಚೆನ್ನಾಗಿ ಗೊತ್ತಿರುವ ದಾರಿ. ಈ ದಾರಿಯಲ್ಲಿ ಸಾಗುವಾಗ ಅನೇಕರು ತಮ್ಮ ಅನುಭವಗಳನ್ನು ಹೇಳತೊಡಗಿದರು. ಒಂದುಸಲ ಸೈಕಲ್  ಮೇಲೆ ಬರುತ್ತಿರುವಾಗ  ಹತ್ತಿರದಲ್ಲೇ, ಈ ಪ್ರಾಂತದಲ್ಲೇ ಒಂದು ಕರಡಿ  ಅವರ ಹಿಂದೆ ಬಂತೆಂದು , ಆ ಭಯದಲ್ಲಿ ವೇಗ ಹೆಚ್ಚಿಸಬೇಕೆಂದರೆ ಅದು ಏರುದಾರಿ ಆಗಿರುವುದರಿಂದ, ಸೈಕಲ್ ಗಿಂತಲೂ ಓಡುವುದೇ  ಬೆಟರ್ ಎಂದು ಸೈಕಲ್ ಬಿಟ್ಟು ಓಡಿಹೋದೆನೆಂದು ಅಚ್ಚಯ್ಯ  ಹೇಳಿದರಿಂದ, ಇನ್ನೂ ಸ್ವಲ್ಪ ಹತ್ತಿರದಲ್ಲಿನ ಮಗ್ಗುಲಲ್ಲಿ  ತಾನೊಂದು ಹುಲಿಯನ್ನು ನೋಡಿದೆನೆಂದು ಪ್ರಸಾದ್ ಹೇಳಿದ.   ಅಲ್ಲಿರುವ ಚಿಕ್ಕ ಹಳ್ಳದಲ್ಲಿ ದಿನವೂ ನೀರು ಕುಡಿಯಲು ಹುಲಿಗಳು ಬರುತ್ತವೆಯಂತೆ. ಆದರೆ ಈ ಸಮಯದಲ್ಲಿ ಬರುವುದಿಲ್ಲ, ಅದರಿಂದ ಏನೂ ಪರವಾಯಿಲ್ಲ ಎಂದು ಧೈರ್ಯ ಹೇಳಿದರು. ಅಲ್ಲಿಂದ ಸಾರ್ವಜನಿಕರ ಒತ್ತಡ ಹೆಚ್ಚಾಯಿತು. ಇವರೆಲ್ಲಾ ಎಲ್ಲಿಂದ ಬರುತಿದ್ದಾರೆಂದು ತಿಳಿಯಲಿಲ್ಲ . ಆಗ ಮಲ್ಲಿ ‘ಶ್ರೀಶೈಲಕ್ಕೆ ಸೇರಲು  ವೆಂಕಟಾಪುರದಿಂದ ಭೀಮನ ಕೊಳದ ಮೂಲಕ ರಸ್ತೆಯಿರುವುದೆಂದು, ಪ್ರತಿ ವರ್ಷ್ ಆ ರಸ್ತೆಯಲ್ಲಿ  ದೊಡ್ಡ  ಸಂಖ್ಯೆಯಲ್ಲಿ ಭಕ್ತರು ಶ್ರೀಶೈಲವನ್ನು ಸೇರುತ್ತಾರೆ’  ಎಂದು ಹೇಳಿದ.ಅಲ್ಲಿಂದ ಸ್ವಲ್ಪ ದೂರದಲ್ಲಿ ರಸ್ತೆಯಲ್ಲಿ ಸಾಕ್ಷಿ ಗಣಪತಿ ದೇವಸ್ಥಾನ ಕಾಣಿಸುತ್ತದೆ. ಶ್ರೀಶೈಲ ದರ್ಶನಕ್ಕೆ ತೆರಳುವ ಭಕ್ತರೆಲ್ಲರೂ ಇಲ್ಲಿಯೇ ನಿಂತು ಈ ಗಣಪತಿಗೆ ನಮಸ್ಕಾರ ಮಾಡಿ ಹೋಗುವುದು ರೂಢಿ.  ನಾವು ಹೋಗಿದ್ದೇವೆ ಎಂದು ಅವರು ತಮ್ಮದಾಖಲೆಗಳಲ್ಲಿ ನಮೂದಿಸುತ್ತಾರೆ ಎಂದು ಪ್ರಸಿದ್ಧಿ.  ಅದಕ್ಕೆ ಸಂಕೇತವಾಗಿ ಗಣಪತಿಮೂರ್ತಿಯ ಕೈಯಲ್ಲಿ ಘಂಟಾವೂ, ಮತ್ತು ತಾಳೆ ಪತ್ರ ಗ್ರಂಥವೂ ಇರುತ್ತದೆ.  ನಾವೆಲ್ಲವೂ ಹೋಗಿ ಹಾಜರಾತಿ ಹಾಕಿಸಿಕೊಂಡೆವು. ಖುಷಿ ಯಿಂದ ತಮಾಷಾ ಮಾಡುತ್ತಾ ಶಾಲೆ ಯಲ್ಲಿ ಹಾಜರಿ ಹಾಕುವಗ ನಮ್ಮ ಸಾರ್ ಹೇಗೆ ಕರೇಯುತ್ತಾರೋ  ಹಾಗೇ ಅನುಕರಣೆ ಮಾಡುತ್ತಾ ಸಂತೋಷದಿಂದ ನಲಿದವು./ಕುಣಿದಾಡಿದವು.  ಅಲ್ಲಿಂದ  ಖುಷಿಯಿಂದ ಹೋಗುವು ಸಮಯಕ್ಕೆ ಶ್ರೀಶೈಲವು ಸಂಪೂರ್ಣವಾಗಿ ವಿಭಿನ್ನವಾಗಿ ಕಾಣಿಸಿದೆ. ಸಾಮಾನ್ಯವಾಗಿ ಶಾಂತಿಯುತ ಮತ್ತು  ವಿಶಾಲವಾದ ಪಥಗಳೊಂದಿಗೆ, ಪ್ರಶ್ನವಾಗಿ, ಆಹ್ಲಾದಕರವಾಗಿ ಇರುವ ಶ್ರೀಶೈಲ ಜನರಿಂದ ತುಂಬಿಹೋಗಿದೆ. ಎಲ್ಲಿ ನೋಡಿದರೂ ಜನರೇ. ರಸ್ತೆಗಳೆಲ್ಲಾ ಕಿರಿದಾಗಿ ಹೋಗಿವೆ. ಛತ್ರಗಳಿಗಾಗಿ ಕಾಯುವ ಜನ, ಛತ್ರ ಗಳು ಸಿಗದಿದ್ದಾಗ ರಸ್ತೆಬದಿಯಲ್ಲೇ ಸಂಸಾರ ಹೂಡುತ್ತಿದ್ದವರು, ಎಲ್ಲೆಲ್ಲಿಂದಲೋ ಬಂದು ಹೊಸದಾಗಿ ಅಟಿಕೆಗಳು, ತಿನಿಸುಗಳು ಮಾರುವವರು, ರಂಕರಾಟ್ಣ, ಬೊಂಬಾಯಿ ಮಿಠಾಯಿಗಳನ್ನು ಮಾರುವವರು, ಜಡೆ ಬಿಚ್ಚಿಕೊಂಡಿರುವ ಸಾಧುಗಳು, ಮಕ್ಕಳುಮರಿ ಮೂಟೆಗಳನ್ನು ತಲೆಮೇಲೆ ಹೊತ್ತುಕೊಂಡು, ಅವಸರದಿಂದ ನಡೆಯುವವರು,  ವಿಚಿತ್ರ ಆಕಾರದೊಂದಿಗೆ, ವೇಷಗಳೊಂದಿಗೆ  ವೀರಾವೇಶ ಮಾಡುವವರು, ಅಲ್ಲಲ್ಲಿ ಭಜನೆಮಾಡುವ ಕಲಾವಿದರು, ತತ್ವಪದಗಳನ್ನು ಹಾಡುವ ಸಾಧುಗಳು… ನಾವು ರಜಾ ದಿನಗಳಲ್ಲಿ ಕಾಣುವ ಶ್ರೀಶೈಲಕ್ಕೂ, ಇವತ್ತಿಗೂ ಎಷ್ಟೊಂದು ವ್ಯತ್ಯಾಸ!ಗೆಳೆಯರೆಲ್ಲರನ್ನು  ಬೀಳ್ಕೊಟ್ಟು ನಾನು  ಬಸ್ ಸ್ಟಾಂಡ್  ಹಿಂಬದಿಯಿಂದ ಷಾರ್ಟ್  ಕಟ್ ನಲ್ಲಿ ನಾವೂ ಯಾವಾಗಲೂ ತಂಗುವ ಸದಾಶಿವ  ಛತ್ರಕ್ಕೆ  ಸೇರುಕೊಂಡೆ. ಅಲ್ಲಿಗೆ ಆಗಾಗಲೇ  ನಮ್ಮ ಮನೆಯವರು, ಮಹದೇವಪ್ಪನವರ ಕುಟುಂಬ ಮತ್ತು ತಿಪ್ಪೇಸ್ವಾಮಿಯವರ ಕುಟುಂಬಗಳು ಈಗಾಗಲೇ ಬೀಡುಬಿಟ್ಟಿವೆ. ಎಲ್ಲರೂ ಊಟಕ್ಕೆ ಹೊರಡುತ್ತಿದ್ದಾರೆ. ನಾನು ಕೂಡಾ ನನ್ನ ಅನುಭವಗಳನ್ನು ನನ್ನ ತಂಗಿಯೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ಆನಂತರ  ಮಹದೇವಪ್ಪನವರ ಪುತ್ರ ಪ್ರಸಾದ್  ಭೇಟಿಮಾಡಿದ. ಅವನು ಒಂದು ವರ್ಷ ಚಿಕ್ಕವನು.  ಇಂತಹ ಸಮಯದಲ್ಲಿ ಇಬ್ಬರೂ ಜೋಡಿಯಾಗಿ ಒಟ್ಟಿಗೆ ಪ್ರಯಾಣಿಸುತ್ತಿದ್ದೆವು.ಅಂದು ಸಂಜೆ ದೇವರ ದರ್ಶನ ಮಾಡಿ ಆ ರಾತ್ರಿ ವಿಶ್ರಮಿಸಿದೆವು.ಮರುದಿನ ಶಿವರಾತ್ರಿ. ತಲೆ ಸ್ನಾನ ಮಾಡಿ ನಾವು ಕೂಡಾ ಉಪವಾಸವು ಇರುತ್ತೇವೆಂದು ಹೇಳಿ ಕೇವಲ ಬಾಳೆಹಣ್ಣು ತಿಂದು , ಪಾನಕ ಕುಡಿದು, ಆ ದಿನವೆಲ್ಲಾ ಕಳೆದವು. ಮಹಾದೇವಪ್ಪನವರ ಶಿಫಾರಾಸ್ ನಿಂದ  ಇನ್ನೊಂದುಸಲ ಮಲ್ಲನ್ನನ  ದರ್ಶನ ಮಾಡಿಕೊಂಡೆವು. ಸಾಯಂಕಾಲ, ಛತ್ರ ದವರು ಬಿಸಿಬಿಸಿ ಉಪ್ಪಿಟ್ಟು ಮಾಡಿದರು. ಕಡ್ಲೆ ಮತ್ತು  ಉಪ್ಪಿಟ್ಟು  ಹೊಟ್ಟೆ ತುಂಬಾ ತಿಂದು ಇಬ್ಬರೂ ಹೊರಗೆ ಹೋದೆವು.  ನಮ್ಮನ್ನು ಆ ಎರಡು ದಿನ ಹಚ್ಚಿಕೊಂಡವರೇ ಇಲ್ಲ.ರಾತ್ರಿ ಶ್ರೀಶೈಲವನ್ನು ಬಣ್ಣಬಣ್ಣದ ದೀಪಗಳಿಂದ  ಅಲಂಕರಿಸಿದರಿಂದ, ಆ ಪ್ರದೇಶ   ದೇದೀಪ್ಯಮಾನವಾಗಿ ಬೆಳಗುತ್ತಾಯಿದೆ. ಎಲ್ಲಾ ಸತ್ರಗಳು/ಛತ್ರಗಳು/ಧರ್ಮಶಾಲೆಗಳು  ಜನರಿಂದ ಕಿಕ್ಕಿರಿಸುತ್ತಿದ್ದವು.  ಸುಣ್ಣ ಬಣ್ಣ ಹಾಕಿಸಿ, ತಮ್ಮ ಕೈಲಾದಷ್ಟು  ಅಲಂಕರಿಸಿದ ಛತ್ರಗಳು /ಸತ್ರಗಳು ಹಬ್ಬಕ್ಕೆ ತಮ್ಮದೇ ಆದ  ಸೊಬಗನ್ನು ನೀಡುತ್ತಿದ್ದವು. ಸ್ಪೀಕರ್ ಗಳಿಂದ ಮಂತ್ರೋಂಚ್ಛಾರಣೆಗಳು ನಿರಂತರವಾಗಿ ನಡೆಯುತ್ತಿವೆ. ದರ್ಶನಕ್ಕಾಗಿ ಜನರು ದೊಡ್ಡ ದೊಡ್ಡ ಸಾಲುಗಳಲ್ಲಿ ನಿಂತಿದ್ದರು. ಶ್ರೀಶೈಲ ಮಲ್ಲಣ್ಣ, ಶರಣು ಶರಣು ಎನ್ನುತ್ತಾ, ಓಂ ನಮಶ್ಶಿವಾಯ ಎಂದು ಶಿವನಾಮ ಸ್ಮರಣದಿಂದ ದೇವಸ್ಥಾನದ ಪ್ರಾಂಗಣವೆಲ್ಲಾ ಪ್ರತಿಧ್ವನಿಸುತ್ತದೆ.  ಅಭಿಷೇಕ ಮತ್ತು ಅರ್ಚನೆಗಳಿಂದ ಆವರಣದೊಳಗಿನ ಎಲ್ಲಾ ಮಂಟಪಗಳು ಕಿಕ್ಕಿರಿಸಿದ್ದವು. ದೇವಾಲಯದ ಸುತ್ತಲೂ ಕೋಲಾಟ, ಭಜನೆ, ಭಾಗವತ, ವೀರರಸ ಪ್ರಧಾನವಾದ ಪ್ರದರ್ಶನೆಗಳು, ವಾದ್ಯಗಳು, ಗಜ್ಜೆಗಳ ಎಲ್ಲೂ ಸಂಭ್ರಮವಾಗಿ ಇವೆ.ಶ್ರೀಶೈಲದಲ್ಲಿ ಶಿವರಾತ್ರಿಗೆ  ಒಂದು ವಿಶೇಷತೆ ಇದೆ. ಅದೇ ಪಾಗಾ ಸುತ್ತುವುದು. ರಾತ್ರಿ ಹನ್ನೆರಡು ಗಂಟೆಗೆ ಸರಿಯಾಗಿ ಲಿಂಗೋದ್ಭವದ ಸಮಯದಲ್ಲಿ ದೇವಾಲಯದ ಸುತ್ತಲೂ ಕತ್ತಲೆಮಯವಾಗುತ್ತದೆ.  ಲೈಟ್ಸ್  ಆಫ್ ಮಾಡಿಬಿಡುತ್ತಾರೆ.  ಕಣ್ಣು ಬಿಟ್ಟಾರೂ ಕಾಣದ ಕತ್ತಲು.  ಆಗ ಪ್ರಾರಂಭವಾಗುತ್ತದೆ ಆ ಘಟ್ಟ. ಅನೇಕ ತಲೆಮಾರುಗಳಿಂದ ಒಂದು  ಕೈಮಗ್ಗದ ಕುಟುಂಬವು ಪ್ರತಿದಿನವೂ , ಒಂದೊಂದು ಮೊಳೆ  ಬಿಳಿಬಟ್ಟೆಯನ್ನು ಮಲ್ಲಿಕಾರ್ಜುನ ಸ್ವಾಮಿಯವರಿಗಾಗಿ ನೇಯುತ್ತಾರೆ. ವರ್ಷ ಮುಗಿದನಂತರ,  ಆ  ವಸ್ತ್ರವನ್ನು ತೆಗೆದುಕೊಂಡು ಆ ಕುಟುಂಬದಿಂದ ಯಾರದರೊಬ್ಬರು ಶ್ರೀಶೈಲವನ್ನು ತಲುಪುತ್ತಾರೆ. ಶಿವರಾತ್ರಿಯ ದಿನ ಸರಿಯಾಗಿ ಮಧ್ಯರಾತ್ರಿ ಹನ್ನೆರಡು ಗಂಟೆಗೆ  ಬಟ್ಟೆಯನ್ನೆಲ್ಲ ಕಳಚಿ,  ನಗ್ನವಾಗಿ, ತಾನು ಸ್ವಾಮಿಗಾಗಿ ತಂದಿರುವ  ವಸ್ತ್ರವನ್ನು  ಕಲಶಕ್ಕೆ ನಾಲ್ಕು ಮೂಲೆಗಳಲ್ಲಿ  ಇರುವ  ಬಸವನ್ನರಿಗೆ ಸೇರಿಸಿ ಸುತ್ತುತ್ತಾರೆ.  ಈ ಘಟ್ಟವನ್ನು  ಕೆಲವು ತಲೆಮಾರುಗಳಿಂದ  ನಡೆಯುತ್ತಾ ಬಂದಿದೆ. ಇಡೀ  ವಸ್ತ್ರಧಾರಣೆ ಮುಗಿದನಂತರ ತಿರುಗಿ ಬಟ್ಟೆ ಹಾಕಿಕೊಂಡು  ಕೆಳಗೆ ಇಳಿಯುವ ವರೆಗೂ  ಕರೆಂಟ್  ಬೆಳಕುಗಳು  ಪಸರಿಸುವುದಲ್ಲ.‘ಪಾಗಾ ಘಟ್ಟ ಮುಗಿದನಂತರ ಸರ್ವ ದರ್ಶನವಿರುತ್ತದೆ.  ಆಗ ಮತ್ತೊಮ್ಮೆ ಸ್ವಾಮಿಯನ್ನು ಸ್ಪರ್ಶ ದರ್ಶನ ಮಾಡಿಕೊಂಡು ತಿರುಗಿ ಸತ್ರಕ್ಕೆ ಬಂದರೆ  ರಾತ್ರಿ ನಿದ್ದೆ ಹೋಗದೆ ಇರಲಿಕ್ಕೆ ಜಾಗರಣೆಯ  ವ್ಯವಸ್ಥೆ ಮಾಡಲಾಗಿತ್ತು. ಹಾಡುಗಳು, ಶ್ಲೋಕ ಮತ್ತು ಭಜನೆಗಳು. ಆಗಾಗ  ನಡುವೆ ನಡುವೆ ಬೇಯಿಸಿದ ಗೆಣಸು ಗೆಡ್ಡೆಯೋ, ಬೇಯಿಸಿದ ಕಡ್ಲೆಯೋ  ನೀಡುತ್ತಿದ್ದರು.  ಹಾಗೆ ಅವರೊಂದಿಗೆ ಕುಳಿತು, ತೂಗುತ್ತಾ ತೂಗುತ್ತಾ  ಎಂದೋ ನಿದ್ದೆ ಹತ್ತಿತು .ಮರುದಿನ ಬೆಳಿಗ್ಗೆ ಸರಿಯಾಗಿ ಹನ್ನೊಂದುಗಂಟೆಗೆ ಸತ್ರದಲ್ಲಿ ಊಟ ಸಿದ್ಧವಾಯಿತು. ಎಲ್ಲರೂ  ಜಬರ್ದಸ್ತಾಗಿ  ಊಟ ಮಾಡಿ  ಮತ್ತೆ ಮಧ್ಯಾಹ್ನಕ್ಕೆ  ಸುನ್ನಿಪೆಂಟ ತಲುಪಿದೆವು. ಆನಂತರ ಎಷ್ಟು ಶಿವರಾತ್ರಿಗಳನ್ನು ಆಚರಿಸಿದರೂ ಅಂದಿನ  ಶಿವರಾತ್ರಿಯೇ ಇಂದಿಗೂ ಸಂತೃಪ್ತಿಯಾಗಿ ತೋರುತ್ತದೆ. ತೆಲುಗು ಮೂಲ –ಜಿ. ಉಮಾಮಹೇಶ್ವರ್ಕನ್ನಡಕ್ಕೆ-ರಂಗನಾಥ ರಾಮಚಂದ್ರರಾವು*

ಜಿ. ಉಮಾಮಹೇಶ್ವರ್ ಅವರ ತೆಲುಗು ಕಥೆ “ಶ್ರೀಶೈಲಂ – ಶಿವರಾತ್ರಿ”ಕನ್ನಡಾನುವಾದ ರಂಗನಾಥ ರಾಮಚಂದ್ರರಾವು Read Post »

ಕಾವ್ಯಯಾನ

“ಲೋಕದ ಡೊಂ(ಕೊಂ)ಕು”ಎಮ್ಮಾರ್ಕೆ ಕವಿತೆ

ಕಾವ್ಯ ಸಂಗಾತಿ “ಲೋಕದ ಡೊಂ(ಕೊಂ)ಕು” ಎಮ್ಮಾರ್ಕೆ ಕವಿತೆ ತನು ಮನ ಸಂತೈಸಿಕೊಂಡುಸುಮ್ಮನಿರಬೇಕಷ್ಟೇ ಇಲ್ಲಿ,ಮುಖಕ್ಕಿಂತ ಮುಖವಾಡವಮುದ್ದಿಸುವವರೇ ಹೆಚ್ಚು ಲೋಕದ ಡೊಂಕು ತಿದ್ದುವಹುದ್ದೆಗಳೆಲ್ಲವು ಖಾಲಿ ಇಲ್ಲಿ,ಕೊಂಕು ಮಾತಿನ ರೂಪದಿಸಿಗುವ ಸಂಬಳವೇ ಹೆಚ್ಚು ಮುಂಗಡದ ಜೊತೆ ಜೊತೆಗೆಕೈಗಡವ ನೀಡುವರು ಇಲ್ಲಿ,ಇಷ್ಟಾದರೂ ಈ ನೌಕರಿಯಬೇಡ ಎನುವವರೇ ಹೆಚ್ಚು ದಂತಕಥೆಗಳು ಕಣ್ಮುಂದಿವೆಬೇತಾಳ ಬೆನ್ನ ಹಿಂದೆ ಇಲ್ಲಿ,ಹೊತ್ತ ವಿಕ್ರಮಗರಿಗಿಂತಲೂಹೂತ ಅಕ್ರಮಗಳೇ ಹೆಚ್ಚು ಅಂಕು ಡೊಂಕುಗಳೇ ಮನೆಮನಗಳ ಸಿಂಗರಿಸಿವೆ ಇಲ್ಲಿ,ಲೋಕೋದ್ಧಾರ ಬಯಸದೇಹುಟ್ಟಿದ ಹುಳುಗಳೇ ಹೆಚ್ಚು ದೂರು ಇಲ್ಲ ದೂರುವರಿಲ್ಲದರ್ಬಾರು ನಡೆದಿದೆ ಇಲ್ಲಿ,ಕಾರ್ಯದ ಭಾರಕ್ಕಿಂತಲೂಕಾರುಬಾರುಗಳೇ ಹೆಚ್ಚು ನಾನು ನಾನಾಗುವುದ ಬಿಟ್ಟುಎಲ್ಲರೊಳಗೊಂದಾದೆ ಇಲ್ಲಿ,ಮಂಕುತಿಮ್ಮನ ತುಸುಮತಿಗೆಮಂಕು ಕವಿದಿಹುದೇ ಹೆಚ್ಚು ಎಮ್ಮಾರ್ಕೆ

“ಲೋಕದ ಡೊಂ(ಕೊಂ)ಕು”ಎಮ್ಮಾರ್ಕೆ ಕವಿತೆ Read Post »

ಅನುವಾದ

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ.

ಅನುವಾದ ಸಂಗಾತಿ ಮನಸ್ಸು ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.   ಮನ——ಯಾವುದೇ ಸಮಯದಲ್ಲಿಯೂ… ಜೇಡರ ಬಲೆ ಕಟ್ಟಿರುವಒಂದು ‘ಮನಸ್ಸು’ನನಗೆ ಉಂಟು…! ನೀನು ನನ್ನ ಬಾಳಿನಿಂದಹೋದ ಮೇಲೆತೆರೆದು ನೋಡಲುಉದಾಸಿನ ಮಾಡಿರುವ ಮನಸ್ಸು..! ಒಮ್ಮೆ ತೆರೆದುನೋಡಬೇಕು ಎಂದು‘ಆಸೆ’ ಹೊಂದಿದಾಗ ಎಲ್ಲಾನೀನು ಕೊನೆದಾಗಿ ಹೇಳಿದನುಡಿಯು ನೆನಪಿಗೆಬರುತ್ತದೆ…! ‘ಎಲ್ಲಾ ಮರೆಯಬೇಕು…’..! ಸರಿ…..,ನೀನೇ ಇಲ್ಲಾದೇಇರುವಾಗ ನನಗೆಯಾವ‘ ನೆನಪು’ಗಳು……?!! ಮಲಯಾಳಂ ಮೂಲ: ಅಶ್ವಥಿಕನ್ನಡ ಅನುವಾದ: ಐಗೂರು ಮೋಹನ್ ದಾಸ್ ಜಿ.

ಅಶ್ವಥಿಯವರಮಲಯಾಳಂ ಕವಿತೆ “ಮನಸ್ಸು!” ಕನ್ನಡಾನುವಾದ ಐಗೂರು ಮೋಹನ್ ದಾಸ್ ಜಿ. Read Post »

ಕಾವ್ಯಯಾನ

“ತಾಯಿ ದೇವರಲ್ಲವೇ?” ಲೇಖನ ವನಜ ಮಹಾಲಿಂಗಯ್ಯ

ಜೀವನ ಸಂಗಾತಿ ವನಜ ಮಹಾಲಿಂಗಯ್ಯ “ತಾಯಿ ದೇವರಲ್ಲವೇ?” ಒಂದು ಪುಟ್ಟ ಕುಟುಂಬ ತಂದೆ ತಾಯಿ ಅಣ್ಣ ತಂಗಿ. ತಂದೆ ತಕ್ಕಮಟ್ಟಿಗೆ ಆಸ್ತಿ ಮಾಡಿ ಮಕ್ಕಳನ್ನು ಓದಿಸಿ  ಚನ್ನಾಗಿಯೇ ಬೆಳೆಸಿರುತ್ತಾರೆ.    ತಂದೆಒಂದುವ್ಯಾಪಾರದಲ್ಲಿತೊಡಗಿರುತ್ತಾರೆ.ಯಾವುದಕ್ಕೂ ಕೊರತೆಯಿಲ್ಲದೆ ಆ ಕುಟುಂಬ ಖುಷಿಯಲ್ಲಿರುತ್ತದೆ.ಮಗಳನ್ನು ಒಂದು ಒಳ್ಳೆಯ ಕುಟುಂಬದ ಹುಡುಗನಿಗೆ ಮದುವೆ ಮಾಡಿ ಕೊಡುತ್ತಾರೆ. ಮನೆಯ ಯಜಮಾನನಿಗೆ ಆರೋಗ್ಯ ಸರಿ ಇಲ್ಲದ ಕಾರಣ ಮರಣ ಹೊಂದುತ್ತಾರೆ. ತಾಯಿ ಮಗ ಮನೆಯಲ್ಲಿ ಇಬ್ಬರೇ ಉಳಿಯುತ್ತಾರೆ.ತಾಯಿ ಮಗನನ್ನು ಮದುವೆ ಮಾಡಲು ಪ್ರಸ್ತಾಪಿಸುತ್ತಾರೆ. ಮಗನು ಸಹ ಒಪ್ಪಿಕೊಳ್ಳುತ್ತಾನೆ . ಮಗನು ತಂದೆಯ ವ್ಯಾಪಾರದ ಕಡೆ ಗಮನಹರಿಸಿ ಜವಾಬ್ದಾರಿಯಿಂದಲೇ ದುಡಿಯುತ್ತಿರುತ್ತಾನೆ.ಒಂದು ಒಳ್ಳೆಯ ಸಂಬಂಧದಿಂದ ಹೆಣ್ಣು ತಂದು ತಾಯಿ ಮಗನಿಗೆ ಮದುವೆಯನ್ನು ಮಾಡುತ್ತಾರೆ. ಪ್ರತಿದಿನ ಮಗ ತನ್ನ ಕೆಲಸದ ಕಡೆ ಹೆಚ್ಚಿನ ಗಮನಹರಿಸಿ ಚನ್ನಾಗಿಯೆ ದುಡಿಯುತ್ತಿರುತ್ತಾನೆ. ಮನೆಯಲ್ಲಿ  ಮನೆಯ ಕೆಲಸದ ನಂತರ ಖಾಲಿ ಕೂತಿದ್ದ  ಅವನ ಹೆಂಡತಿಗೆ ಅತ್ತೆಯ ಬಗ್ಗೆ ಏನೋ ಒಂದು ತರಹದ ತಾತ್ಸಾರ ಮನೋಭಾವ. ಪ್ರತಿದಿನ ಅತ್ತೆಯೊಂದಿಗೆ ಜಗಳ ಮಾಡಿ ಗಂಡ ಮನೆಗೆ ಬಂದ ತಕ್ಷಣ ಅವನಿಗೆ ಒಂದಕ್ಕೆ ಹತ್ತು ಸೇರಿಸಿ ಹೇಳುವುದು, ಆದರೆ ಮಗನಿಗೆ ತಾಯಿಯ ಮೇಲೆ ಅಪಾರವಾದ ಪ್ರೀತಿ , ಗೌರವ. ಅವನು ಹೆಂಡತಿಗೆ ನೀನು ಹೊಂದಾಣಿಕೆ ಮಾಡಿಕೊಂಡು ಹೋಗು ಅಮ್ಮ ವಯಸ್ಸಾದವರು ಅವರನ್ನು ನೋಡಿಕೊಳ್ಳುವುದು ನಮ್ಮ ಕರ್ತವ್ಯ ನಾನಲ್ಲದೇ ನನ್ನಮ್ಮನನ್ನು ಯಾರು ನೋಡಿಕೊಳ್ಳುತ್ತಾರೆಂದು ತಿಳಿ ಹೇಳಿ ತನ್ನ ಕೆಲಸಕ್ಕೆ ಹೋಗುತ್ತಿದ್ದ. ಆದರೆ ಅವನ ಹೆಂಡತಿ ಮಾತ್ರ ಅತ್ತೆಗೆ ಹಿಂಸೆ ಮಾಡುತ್ತಿದ್ದಳು.ಊಟ ಕೊಡದೆ  ತಿಂಡಿ ಕೊಡದೆ ಅವರನ್ನುಹಸಿವಿನಿಂದ ನರಳಿಸುತ್ತಿದ್ದಳು.ವಯಸ್ಸಾದ ತಾಯಿ ಹಸಿವಿನಿಂದ ಅರೋಗ್ಯ ಕೆಟ್ಟು ಹಾಸಿಗೆ ಹಿಡಿದು , ನಿದ್ದೆ ಮಾಡುವಾಗ ಏನೇನೋ ಬಡಬಡಿಸುತ್ತಿದ್ದಳು.ಪಾಪ ಮಗ ತಾಯಿಯನ್ನು ಆಸ್ಪತ್ರೆಗೆ ಕರೆದೊಯ್ದು ಔಷದೋಪಚಾರ ಮಾಡಿಸುತ್ತಿದ್ದ ,ಆದರೆ  ತನ್ನ ಕೆಲಸದ ಒತ್ತಡದಿಂದ ಹೆಂಡತಿ ಏನು ಮಾಡುತ್ತಾಳೆಂದು  ಗಮನಹರಿಸಲಿಲ್ಲ.  ಒಂದು ದಿನ ಹೆಂಡತಿ ರೀ ನಿಮ್ಮ ಅಮ್ಮ ನಿದ್ದೆಯಲ್ಲಿ ಏನೇನೋ ಮಾತನಾಡುತ್ತಾರೆ ಅವರಿಗೆ ತಲೆ ಸರಿಯಿಲ್ಲ ಅನ್ನಿಸುತ್ತೆ, ಮಾನಸಿಕ ಅಸ್ಪತ್ರೆಗೆ ಸೇರಿಸೋಣ ಅಂದಳು. ಆಗ ಮಗ ಹೆಂಡತಿಗೆ ನಿನಗೆ ತಲೆ ಕಟ್ಟಿದೆ ಅಮ್ಮನಿಗಲ್ಲ ಅಂದ. ಅದರೂ ಅವಳು ಗಂಡನಿಗೆ ಒತ್ತಾಯ ಮಾಡಿ ನೀವೇನು ಬರಬೇಡಿ ನಾನೆ ಕರೆದುಕೊಂಡು ಹೋಗುವೆ ಅಂತ ಹೇಳಿ ಅತ್ತೆಯನ್ನು ಕರೆದುಕೊಂಡು ಹೋಗಿ ವೃದ್ಧಾಶ್ರಮಕ್ಕೆ ಸೇರಿಸಿ ಬಂದಳು. ಸಂಜೆ ಬಂದು ಗಂಡನಿಗೆ,  ಡಾಕ್ಟರ್ ಹೇಳಿದರು ಅತ್ತೆ  ಗುಣವಾಗುವವರೆಗೆ ಆಸ್ಪತ್ರೆಯಲ್ಲಿಯೇ ಇರಬೇಕಂತೆ, ನಾವುಗಳು ಪದೇ ಪದೇ ಹೋಗಬಾರದಂತೆ, ಅವರೆ ಕಾಲ್ ಮಾಡಿ ತಿಳಿಸುತ್ತಿರುತ್ತಾರಂತೆಅಂತ ಹೇಳಿದಳು.  ಕುರುಡು ಪ್ರೀತಿಯನ್ನು ಅರಿಯದ ಅವನು ಹೌದಾ ಏನಾದರಾಗಲಿ ಅಮ್ಮ ಗುಣವಾಗಿ ಬೇಗ ಮನೆ ಬಂದರೆ ಸಾಕು. ಅವರನ್ನು ಬಿಟ್ಟಿರಲು ಸಾಧ್ಯವಿಲ್ಲ ಅಂದು ತನ್ನ ಕೆಲಸದಲ್ಲಿ ನಿರತನಾದ. ಹೀಗೆ ದಿನ ,ತಿಂಗಳುಗಳು ಕಳೆದವು. ಮಗನ ವ್ಯಾಪಾರದಲ್ಲಿ ಕುಂಠಿತವಾಗುತ್ತಾ ಬಂತು. ಗಾಡಿ, ಕಾರು ಸೈಟು ಎಲ್ಲವನ್ನೂ ಮಾರಿಬಿಟ್ಟ. ಇವೆಲ್ಲವು ಇಲ್ಲವಾದ ಮೇಲೆ ಹೆಂಡತಿ ಗಂಡನೊಡನೆ ಜಗಳಮಾಡಿಕೊಂಡು ಮನೆ ಬಿಟ್ಟು ಹೋದಳು.ಅಗ ನೆನಪಾಗಿದ್ದು ಮಾತ್ರ ಅಮ್ಮ ಅಮ್ಮ ಅಮ್ಮ.ಅವಳಿರುವುದುಯಾವ ಆಶ್ರಮ  ಗೊತ್ತಿಲ್ಲ  ಅಮ್ಮನ ಪೋಟೋ ಹಿಡಿದು ಹುಡುಕುತ್ತಾ ಹೋದ. ಕೊನೆಗೆ ಒಂದು ಆಶ್ರಮದಲ್ಲಿ ಹೇಳಿದರು ನಿಮ್ಮ ತಾಯಿಯನ್ನು ಒಬ್ಬ ವ್ಯಕ್ತಿ ಅವರ ಮನೆಗೆ ಕರೆದೊಯ್ದರು  ಅಂತ. ಅವರ ವಿಳಾಸ ಪಡೆದು ಹೋದ. ಅಲ್ಲಿ ಮನೆಯ ಹತ್ತಿರ ಬಾಗಿಲು ಬಡಿದ ಒಬ್ಬ ವ್ಯಕ್ತಿ ಬಂದು ಬಾಗಿಲು ತೆಗೆದ. ಯಾರು ಬೇಕು ಅಂದ. ಇವನು ಒಳಗೆ ಕಣ್ಣಾಡಿಸಿದ ಒಬ್ಬ  ವಯಸ್ಸಾದ ಮಹಿಳೆ ಬೆಳ್ಳಿ ತಟ್ಟೆ ಯಲ್ಲಿ ಊಟಮಾಡುತ್ತಿದ್ದಳು. ಮನೆಯ ಯಜಮಾನ ಕೇಳಿದ ಯಾರು ಬೇಕಪ್ಪಾ ಅಂತ. ಅವನಿಗೆ ಮಾತು ಬರುತ್ತಿಲ್ಲ, ಓಡಿ ಹೋಗಿ ಅವಳ ಕಾಲಿಗೆ ಬಿದ್ದು ಕ್ಷಮಿಸಮ್ಮ ಎನ್ನುತ್ತಾ ಗೋಳಾಡಿದ. ತಾಯಿಗೆ ಏನೂಂತ ಗೊತ್ತಾಗಲೇ ಇಲ್ಲ. ಆಗ ಮನೆಯ ಯಾಜಮಾನನಿಗೆ ಹೇಳಿದ  ನನ್ನ ತಾಯಿ ಇವರು ಕಳಿಸಿಕೊಡಿ ನನ್ನ ಜೊತೆ ಅಂದ. ಆ ಯಜಮಾನ ಇಲ್ಲಪ್ಪ ಆಗಲ್ಲ, ನನಗೆ ತಂದೆ ತಾಯಿ ಯಾರೂ ಇಲ್ಲ, ಈ ತಾಯಿಯನ್ನುನಾನು ನನ್ನತಾಯಿಯೆಂದು  ಕರೆದು ಕೊಂಡು ಬಂದೆ,  ಈ ಮಹಾತಾಯಿ ಬಂದ ಮೇಲೆ ನನ್ನ ಬದುಕೇ ಬದಲಾಯಿತು,  ಇವತ್ತು ನಾನು ಇಷ್ಟೊಂದು  ಚನ್ನಾಗಿರುವೆ ಕಾರು ಬಂಗಲೆ ಎಲ್ಲವೂ ಈ ತಾಯಿಯ ಕಾಲ್ಗುಣ , ಈಕೆ ದೇವತೆ ನಾನು ಕಳಿಸುವುದಿಲ್ಲ ಅಂದ.   ನಾನು ನನ್ನ ಮನೆಯಲ್ಲಿ ಎಲ್ಲವನ್ನು ಕಳೆದುಕೊಂಡೆ, ಈಗ ನನ್ನ ಹತ್ತಿರ ಏನೂ ಇಲ್ಲ, ನನಗೆ ಏನೂ ಬೇಡ ,ನಾನು ನನ್ನ ತಾಯಿಯ ಸೇವೆ ಮಾಡುತ್ತಾ ಇಲ್ಲಿಯೇ ಇರಬಹುದಾ ಎಂದಾಗ ತಾಯಿ ಮಗನನ್ನು ತಬ್ಬಿಕೊಂಡಳು. ಯಜಮಾನ ಒಪ್ಪಿಕೊಂಡ.ಮಕ್ಕಳನ್ನು  ಹೊತ್ತು ಹೆತ್ತು, ಚಿಕ್ಕಂದಿನಿಂದ ಅವರ ಎಲ್ಲಾ ನಿತ್ಯಕಮ ೯ಗಳನ್ನು  ಸ್ವಚ್ಛ ಮಾಡಿ, ವಯಸ್ಸಿಗೆ ಬರೋ ತನಕ ಸಮಯಕ್ಕೆ ಸರಿಯಾಗಿ  ಊಟ ತಿಂಡಿ, ಬಟ್ಟೆ, ಒಳಿತು ಕೆಡಕು ಎಲ್ಲವನ್ನು ತಾಳ್ಮೆಯಿಂದ ನಿರ್ವಹಿಸಿ ತನ್ನನ್ನು ತಾನು ಸವೆಸಿಕೊಂಡ  ತಾಯಿ ಹೃದಯ ಕ್ಕೆ ಘಾಸಿಮಾಡುವ ಮಕ್ಕಳ ಸಂಖ್ಯೆ ಅತಿಯಾಗಿದೆ. ಇದಕ್ಕೆ ಮುಕ್ತಿ ಇಲ್ಲವೇ? ತಾಯಿ ದೇವರೆನ್ನುವುದು ಸುಳ್ಳಲ್ಲ  ಅಸೆ ಇಲ್ಲದೆ ಮಕ್ಕಳಿಗೋಸ್ಕರ ಬದುಕುವುದೇ ಅವಳು.ಯಾರೂ ತಾಯಿಯನ್ನ ದಿಕ್ಕರಿಸಬೇಡಿ.ಹೆಂಡತಿಯನ್ನು ನಿಮ್ಮಂತೆ ಮಾಡಿಕೊಳ್ಳಿ ಅವಳಂತೆ ನೀವು ಹೋಗಬೇಡಿ. ಹೆಂಡತಿಗೆ ಕೊಡುವ ಪ್ರೀತಿ ಹೆಂಡತಿಗೆ ಕೊಡಿ. ತಾಯಿಗೆ ಕೊಡುವ ಗೌರವ, ಪ್ರೀತಿ, ರಕ್ಷಣೆ ಮಗನೇ ಕೊಡಬೇಕಲ್ಲವೇ ? ಆಗ ಮಾತ್ರ ನೀವುಗಳು ಮಾಡುವ   “”Mothers day”” ಗೆ  ಆಥ೯ವಿದೆ. ವನಜ ಮಹಾಲಿಂಗಯ್ಯ.

“ತಾಯಿ ದೇವರಲ್ಲವೇ?” ಲೇಖನ ವನಜ ಮಹಾಲಿಂಗಯ್ಯ Read Post »

ಇತರೆ

“ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ.

ಹಿರಿಯರ ಸಂಗಾತಿ ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ “ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು” ಕನ್ನಡ ಸಾಹಿತ್ಯದಲ್ಲಿ ವಿಶೇಷ ಸ್ಥಾನಮಾನ ಪಡೆದುಕೊಂಡ ಸಮನ್ವಯ ಕವಿ ನವೋದಯ ನವ್ಯ ಬಂಡಾಯ ಸಾಹಿತ್ಯ ಪ್ರಕಾರಗಳಲ್ಲಿ ಸೈ ಎನಿಸಿಕೊಂಡ ಭಾವ ಗೀತೆಗಳ ಕವಿ ಬೆಳಕಿನ ಕವಿ ಜಿ ಎಸ್ ಶಿವರುದ್ರಪ್ಪನವರು. ಗುಗ್ಗರಿ ಶಾಂತವೀರಪ್ಪ ಶಿವರುದ್ರಪ್ಪ ( ಜಿ. ಎಸ್. ಶಿವರುದ್ರಪ್ಪ )ಅಥವಾ ಜಿ.ಎಸ್.ಎಸ್ ಎಂದೇ ಪರಿಚಿತರಾದ ಕನ್ನಡದ ಕವಿ, ವಿಮರ್ಶಕ, ಸಂಶೋಧಕ, ನಾಟಕಕಾರ ಮತ್ತು ಪ್ರಾಧ್ಯಾಪಕ. ಗೋವಿಂದ ಪೈ, ಕುವೆಂಪು ನಂತರ ‘ರಾಷ್ಟ್ರಕವಿ’ ಗೌರವಕ್ಕೆ ಪಾತ್ರರಾದವರು. 1ನವೆಂಬರ್ , 2006 ರಲ್ಲಿ ಸುವರ್ಣ ಕರ್ನಾಟಕ ರಾಜ್ಯೋತ್ಸವದಂದು ಶಿವರುದ್ರಪ್ಪನವರನ್ನು ರಾಷ್ಟ್ರಕವಿ ಎಂದು ಘೋಷಿಸಲಾಯಿತು. ಅವರನ್ನು ಸಮನ್ವಯ ಕವಿ ಎಂದೇ ಗುರುತಿಸಲಾಗುತ್ತದೆ. *ಹುಟ್ಟು ಮತ್ತು ಬಾಲ್ಯ* .ಜಿ.ಎಸ್.ಶಿವರುದ್ರಪ್ಪ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ತಾಲೂಕಿನ ಈಸೂರುಗ್ರಾಮದಲ್ಲಿ ಫೆಬ್ರವರಿ 7, 1926 ರಂದು ಜನಿಸಿದರು. ತಂದೆ ಶಾಂತವೀರಪ್ಪ ಅಲ್ಲಿನ ಮಾಧ್ಯಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು. ತಾಯಿ ವೀರಮ್ಮ. *ಶಿಕ್ಷಣ*ತಂದೆಯಿಂದ ಸಾಹಿತ್ಯದ ಗೀಳು ಹತ್ತಿಸಿಕೊಂಡ ಶಿವರುದ್ರಪ್ಪನವರು ಹೊನ್ನಾಳಿ, ಕೋಟೆಹಾಳಗಳಲ್ಲಿ ಪ್ರಾಥಮಿಕ ಶಿಕ್ಷಣವನ್ನು, ರಾಮಗಿರಿ, ಬೆಲಗೂರಲ್ಲಿ ಮಾಧ್ಯಮಿಕ ಶಿಕ್ಷಣವನ್ನು, ದಾವಣಗೆರೆ, ತುಮಕೂರುಗಳಲ್ಲಿ ಪ್ರೌಢಶಾಲಾ, ಇಂಟರ್ ಮೀಡಿಯಟ್ ಶಿಕ್ಷಣವನ್ನೂ ಮುಗಿಸಿದರು. ಮೈಸೂರು ವಿಶ್ವವಿದ್ಯಾನಿಲಯದ ಮಹಾರಾಜ ಕಾಲೇಜಿನಲ್ಲಿ ಬಿ.ಎ. ಆನರ್ಸ್ (1949) ಪದವಿ ಪಡೆದರು.ಕೆಲಕಾಲ ದಾವಣಗೆರೆಯ ಡಿ.ಆರ್.ಎಮ್. ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿದ್ದು ನಂತರ ಎಂ.ಎ. (1953) ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿ ಮೂರು ಸುವರ್ಣ ಪದಕಗಳನ್ನು ಪಡೆದರು.  1955 ರಲ್ಲಿ ಭಾರತ ಸರಕಾರದ ಸಂಶೋಧನಾ ಶಿಷ್ಯ ವೇತನದ ಸಹಾಯದಿಂದಕುವೆಂಪುರವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿದರು. ಮೈಸೂರು ವಿಶ್ವವಿದ್ಯಾನಿಲಯದಿಂದಡಾಕ್ಟರೇಟ್ ಪಡೆದುಕೊಂಡ ಇವರ ಪ್ರೌಢ ಪ್ರಬಂಧ -ಸೌಂದರ್ಯ ಸಮೀಕ್ಷೆ. *ವೃತ್ತಿ ಜೀವನ/ನಿರ್ವಹಿಸಿರುವ ಜವಾಬ್ದಾರಿಗಳು*  ಡಾ.ಜಿ.ಎಸ್.ಶಿವರುದ್ರಪ್ಪ ನವರು ಮೈಸೂರು ವಿಶ್ವ ವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ, ಬೆಂಗಳೂರು ಸೆಂಟ್ರಲ್ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.1963ರ ನವೆಂಬರ್‌ನಿಂದ 2 ವರ್ಷಗಳ ಕಾಲ ಹೈದರಾಬಾದಿನ ಉಸ್ಮಾನಿಯಾ ವಿಶ್ವ ವಿದ್ಯಾಲಯದಲ್ಲಿ ಕನ್ನಡ ವಿಭಾಗದ ಉಪ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 1971 ರ ನವೆಂಬರಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕರಾದ ಅವರು, ಮುಂದೆ ಅದು “ಕನ್ನಡ ಅಧ್ಯಯನ ಕೇಂದ್ರ” ವಾಗಿ ಪರಿವರ್ತಿತವಾದಾಗ, ಅದರ ನಿರ್ದೇಶಕರೂ ಆದರು.ಹಸ್ತಪ್ರತಿಗಳ ಸಂಗ್ರಹಣೆ, ಅವುಗಳ ರಕ್ಷಣೆಗಳ ಬಗ್ಗೆ ವಿಶೇಷ ಕಾಳಜಿ ಹೊಂದಿದ್ದ ಶಿವರುದ್ರಪ್ಪನವರು 1971 ರಲ್ಲಿ ಕನ್ನಡ ಅಧ್ಯಯನ ಕೇಂದ್ರದಲ್ಲಿ ‘ಹಸ್ತಪ್ರತಿ ವಿಭಾಗ’ ವನ್ನು ಪ್ರಾರಂಭಿಸಿದರು. ಕೇವಲ 4 ವರ್ಷಗಳಲ್ಲಿ 3000 ಕ್ಕೂ ಹೆಚ್ಚು ಓಲೆಗರಿಯ ಹಾಗೂ 1000 ಕ್ಕೂ ಹೆಚ್ಚು ಕಾಗದದ ಹಸ್ತ ಪ್ರತಿಗಳ ಸಂಗ್ರಹಣೆಯಾಯಿತು. ತಾವು ಓದಿದ ಮೈಸೂರು ವಿಶ್ವವಿದ್ಯಾನಿಲಯದಲ್ಲೇ 1949 ರಲ್ಲಿ ಕನ್ನಡ ಅಧ್ಯಾಪಕರಾಗಿ ವೃತ್ತಿಯನ್ನು ಆರಂಭಿಸಿದರು.1963 ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಆಹ್ವಾನದ ಮೇರೆಗೆ ರೀಡರ್ ಮತ್ತು ಕನ್ನಡ ವಿಭಾಗದ ಮುಖ್ಯಸ್ಥರಾಗಿ 1966 ರ ವರೆಗೂ ಅಲ್ಲಿ ಸೇವೆ ಸಲ್ಲಿಸಿದರು. 1966 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕ ಹಾಗೂ ನಿರ್ದೇಶಕರಾಗಿ ಆಯ್ಕೆಯಾಗಿ 1987 ರವರೆವಿಗೂ ಕನ್ನಡ ಅಧ್ಯಯನ ಕೇಂದ್ರದಲ್ಲಿ ಸೇವೆ ಸಲ್ಲಿಸಿದರು. ಅವರ ಕಾಲದಲ್ಲೇ ಕನ್ನಡ ವಿಭಾಗವು ಕನ್ನಡ ಅಧ್ಯಯನ ಕೇಂದ್ರವಾಯಿತು.ನಿವೃತ್ತಿಯ ನಂತರವೂ ಮೈಸೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ಕುವೆಂಪು ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಗಣನೀಯ ಸೇವೆ ಸಲ್ಲಿಸಿರುತ್ತಾರೆ.  ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾಗಿ, ರಾಜ್ಯ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ದುಡಿದಿದ್ದಾರೆ. ದೆಹಲಿಯ ರಾಷ್ಟ್ರೀಯ ಕವಿ ಸಮ್ಮೇಳನ, ತುಮಕೂರಿನ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷರಾಗಿ, ಮದರಾಸಿನ ಕನ್ನಡ ಸಮ್ಮೇಳನ ದ ಅಧ್ಯಕ್ಷರಾಗಿ, 1992 ದಾವಣಗೆರೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿಯೂ ಗೌರವಿಸಲ್ಪಟ್ಟಿದ್ದಾರೆ. *ಕೃತಿಗಳು**ಕವನ ಸಂಕಲನಗಳು*ಸಾಮಗಾನ (1947)ಚೆಲುವು-ಒಲವು (1951)ದೇವಶಿಲ್ಪ (1953)ದೀಪದ ಹೆಜ್ಜೆ (1956)ಕಾರ್ತಿಕ (1959)ಅನಾವರಣ (1961)ತೆರೆದ ದಾರಿ (1963)ಗೋಡೆ (1966)ಕಾಡಿನ ಕತ್ತಲಲ್ಲಿ (1972)ಪ್ರೀತಿ ಇಲ್ಲದ ಮೇಲೆ (1982)ಚಕ್ರಗತಿ (1987)ವ್ಯಕ್ತಮಧ್ಯ (1993)ಅಗ್ನಿಪರ್ವ (2000)ತೀರ್ಥವಾಣಿ (1953)ಜಾರಿದ ಹೊವುಸಮಗ್ರ ಕಾವ್ಯಎದೆತುಂಬಿ ಹಾಡಿದೆನುಮೇರಾ ದಿಯಾ ಮತ್ತು ಇತರ ಕವನಗಳು (ರಾಜಮಂಗಲ ಪಬ್ಲಿಕೇಷನ್ಸ್ 2022) *ವಿಮರ್ಶೆ/ಗದ್ಯ*ಪರಿಶೀಲನವಿಮರ್ಶೆಯ ಪೂರ್ವ ಪಶ್ಚಿಮಸೌಂದರ್ಯ ಸಮೀಕ್ಷೆ. (ಇದು ಅವರ ಪಿಹೆಚ್‌ಡಿ ಮಹಾ ಪ್ರಬಂಧ)ಕಾವ್ಯಾರ್ಥ ಚಿಂತನಗತಿಬಿಂಬಅನುರಣನಪ್ರತಿಕ್ರಿಯೆಕನ್ನಡ ಸಾಹಿತ್ಯ ಸಮೀಕ್ಷೆಮಹಾಕಾವ್ಯ ಸ್ವರೂಪಕನ್ನಡ ಕವಿಗಳ ಕಾವ್ಯ ಕಲ್ಪನೆಹೊಸಗನ್ನಡ ಕವಿತೆಗಳಲ್ಲಿ ಕಾವ್ಯ ಚಿಂತನಕುವೆಂಪು : ಪುನರವಲೋಕನಸಮಗ್ರ ಗದ್ಯ ಭಾಗ 1 2  ಮತ್ತು 3ಬೆಡಗುನವೋದಯ –ಕುವೆಂಪು-ಒಂದು ಪುನರ್ವಿಮರ್ಶೆ – ಕರ್ನಾಟಕ ಸರ್ಕಾರಕ್ಕೆ ಕುವೆಂಪು ಮೇಲೆ ಜೀವನಚರಿತ್ರೆಯ ಕೆಲಸ *ಪ್ರವಾಸ ಕಥನ*ಮಾಸ್ಕೋದಲ್ಲಿ ೨೨ ದಿನ -(ಸೋವಿಯತ್‌ಲ್ಯಾಂಡ್ ನೆಹರೂ ಪ್ರಶಸ್ತಿ ಬಂದಿದೆ)ಇಂಗ್ಲೆಂಡಿನಲ್ಲಿ ಚತುರ್ಮಾಸಅಮೆರಿಕದಲ್ಲಿ ಕನ್ನಡಿಗಗಂಗೆಯ ಶಿಖರಗಳಲ್ಲಿ *ಜೀವನ ಚರಿತ್ರೆ*ಕರ್ಮಯೋಗಿ (ಸಿದ್ದರಾಮನ ಜೀವನ ಚರಿತ್ರೆ) *ಪ್ರಮುಖ ಪ್ರಶಸ್ತಿಗಳು* ಪಂಪ ಪ್ರಶಸ್ತಿ,ಮಾಸ್ತಿ ಪ್ರಶಸ್ತಿ,ಅನಕೃ ಪ್ರತಿಷ್ಠಾನ ಪ್ರಶಸ್ತಿ,ನಾಡೋಜ ಪ್ರಶಸ್ತಿ,ಸೋವಿಯತ್ ಲ್ಯಾಂಡ್ ಪ್ರಶಸ್ತಿ ಜಿ.ಎಸ್.ಶಿವರುದ್ರಪ್ಪನವರು 1992 ರಲ್ಲಿ ದಾವಣಗೆರೆಯಲ್ಲಿ ಜರುಗಿದ 61 ನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಸ್ನೇಹ ಕಾರ್ತೀಕ,ಗೌರವ,ಹಣತೆ, ಇವು ಜಿ.ಎಸ್.ಎಸ್ ಅವರಿಗೆ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥಗಳು. *ನಿಧನ*ಅನಾರೋಗ್ಯದಿಂದ ಬಳಲುತ್ತಿದ್ದ ಜಿ.ಎಸ್.ಶಿವರುದ್ರಪ್ಪನವರು 23 ಡಿಸೆಂಬರ್ 2013ರಂದು ತಮ್ಮ ಬನಶಂಕರಿಯ ನಿವಾಸದಲ್ಲಿ ಸ್ವರ್ಗಸ್ಥರಾದರು. ಜಿ.ಎಸ್. ಶಿವರುದ್ರಪ್ಪನವರ ಆಣತಿಯಂತೆಯೆ ಅವರ ಅಂತ್ಯ ಸಂಸ್ಕಾರದ ವಿಧಿ ವಿಧಾನವನ್ನು ಬೆಂಗಳೂರು ವಿ.ವಿ. ಸಮೀಪವಿರುವ ಕಲಾಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಾದರಗಳೊಂದಿಗೆ 24 ಡಿಸೆಂಬರ್ 2013ರಂದು ನೇರವೇರಿಸಲಾಯಿತು. ಎದೆತುಂಬಿ ಹಾಡಿದ ಕನ್ನಡದ ಶ್ರೇಷ್ಠ ಕವಿ ಡಾ ಜಿ ಎಸ್ ಶಿವರುದ್ರಪ್ಪನವರ ಶತಮಾನೋತ್ಸವದ ಸಂಭ್ರಮದಲ್ಲಿ ನಮ್ಮ ಭಕ್ತಿಪೂರ್ವಕ ಶರಣಾರ್ಥಿಗಳು.ಕನ್ನಡಕ್ಕೊಬ್ಬರೇ ಜಿ ಎಸ್ ಎಸ್ ಎನ್ನುವಂತೆ ಅವರ ಸಾಹಿತ್ಯ ಕೊಡುಗೆ ನಮ್ಮೆಲ್ಲರ ಆಸ್ತಿ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಮನ್ವಯದ ಶತಮಾನದ ಕವಿ ಡಾ ಜಿ ಎಸ್ ಶಿವರುದ್ರಪ್ಪನವರು”ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ ಪುಣೆ. Read Post »

ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಕೊಡಚಾದ್ರಿ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಕೊಡಚಾದ್ರಿ” ಕೊಡಚಾದ್ರಿ—ನೀನು ಪರ್ವತವಲ್ಲ,ಪ್ರತಿದಿನ ಹೊಸದಾಗಿ ಹುಟ್ಟುವನಿತ್ಯ ಸುಂದರಿ. ಶೋಲಾ ಕಾಡಿನ ಹಸಿರು ಸೀರೆಯಲಿನೀನು ಮೌನವಾಗಿ ನಿಂತಾಗ,ಮೋಡಗಳು ನಿನ್ನ ಕೆನ್ನೆಗೆಮುತ್ತಿಟ್ಟು ಹೋಗುತ್ತವೆ—ನನಗೆ ಮಾತ್ರದೂರದಿಂದ ನೋಡುವ ಹಕ್ಕು. ಹಿಡ್ಲುಮನೆನಿನ್ನ ಕೂದಲ ತುದಿಯಿಂದಜಾರಿ ಬೀಳುವ ನಗುವಿನಂತೆ,ಅದು ನೆಲ ತಾಕುವ ಮುನ್ನವೇನನ್ನ ಮನಸ್ಸು ತಾಕಿನನ್ನನ್ನು ಕರಗಿಸುತ್ತದೆ. ನಿನ್ನ ಹಾದಿಯಲ್ಲಿಜಿಗಣೆ ನನ್ನ ರಕ್ತ ಹೀರುವಾಗ,ನೋವಿಗಿಂತನಿನ್ನ ಹತ್ತಿರ ಇರುವ ಸವಿಹೆಚ್ಚಾಗಿ ಗೊತ್ತಾಗುತ್ತದೆ. ಬೆವರು ದೇಹ ಬಿಟ್ಟುನಿನ್ನ ಮಣ್ಣಲ್ಲಿ ಬೆರೆತಾಗ,ನಾನು ನಿಧಾನವಾಗಿನಿನ್ನೊಳಗೆ ಲೀನವಾಗುತ್ತೇನೆ—ಹೆಸರಿಲ್ಲದೆ,ಆಕಾರವಿಲ್ಲದೆ. ಏರುವೆಡೆಗೆ ಹೆಜ್ಜೆ ಹಾಕುತ್ತಾಉಸಿರು ಕಷ್ಟವಾದಾಗ,ನಿನ್ನ ಗಾಳಿ ಬಂದುಎದೆಯ ಮೇಲೆ ಕೈ ಇಟ್ಟುಹೇಳುತ್ತದೆ—“ನನ್ನನ್ನು ಬಯಸುವುದೂಒಂದು ತಪಸ್ಸೇ”. ಸರ್ವಜ್ಞ ಪೀಠದ ಬಳಿನೀನು ಶಾಂತಳಾಗುತ್ತೀಯ,ಅಲ್ಲಿನನ್ನ ಆಸೆಗಳು ಕೂಡತಲೆಯೊಗ್ಗಿ ಕುಳಿತುಕೊಳ್ಳುತ್ತವೆ. ಚಿತ್ರಮೂಲದ ಮೌನದಲ್ಲಿನಿನ್ನ ಕಣ್ಣು ಮಿಟುಕಿದಂತೆಒಂದು ಸಂಕೆತ,ಅದು ನನ್ನೊಳಗೆಹುಟ್ಟು–ಸಾವು ಎರಡನ್ನೂಒಂದೇ ಕ್ಷಣದಲ್ಲಿ ಕಲಿಸುತ್ತದೆ. ಸೂರ್ಯಾಸ್ತದ ಹೊತ್ತಿಗೆನೀನು ಕೆಂಪಾಗಿ ನಾಚಿದಾಗ,ಅರಬ್ಬೀ ಸಮುದ್ರವೂನಿನ್ನ ಸೌಂದರ್ಯಕ್ಕೆಅಲೆಗಳನ್ನೇ ಮರೆತು ನಿಂತುಬಿಡುತ್ತದೆ. ಕೊಡಚಾದ್ರಿ—ನಿನ್ನನ್ನು ಏರುವುದುಚಾರಣವಲ್ಲ,ನಿನ್ನೊಳಗೆ ಕಳೆದುಕೊಳ್ಳುವಪ್ರೇಮಯಾನ. ನೀನು ಆಧ್ಯಾತ್ಮ,ನೀನು ಆಕಾಂಕ್ಷೆ,ನೀನು ಶಿಖರ,ನೀನು ಶೃಂಗಾರ. ಒಂದು ದಿನನಾನು ಸಂಪೂರ್ಣವಾಗಿನಿನ್ನೊಳಗೆ ಲೀನವಾದರೆ—ಅಂದುನಾನು ಮಾನವನಲ್ಲ,ನಿನ್ನ ಮೌನದಒಂದು ಉಸಿರಾಗಿಬಿಡುತ್ತೇನೆ. ಅಷ್ಟೇ ಸಾಕು. ಡಾ. ಹೆಚ್. ನಟರಾಜ್ ಆರ್ಯ  

ಡಾ. ಹೆಚ್. ನಟರಾಜ್ ಆರ್ಯ ಅವರ ಕವಿತೆ “ಕೊಡಚಾದ್ರಿ” Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-28 ಪದೋನ್ನತಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೮ ೧೯೯೭……..  ಮಕ್ಕಳಾಗಲು ಎಷ್ಟೇ ಚಿಕಿತ್ಸೆ ತೆಗೆದುಕೊಂಡರೂ ಫಲಕಾರಿಯಾಗದೆ ಏಕೋ ತುಂಬಾ ಬೇಸರ. ಹಾರ್ಮೋನ್ ಚಿಕಿತ್ಸೆಯ ಪರಿಣಾಮ ತೂಕದಲ್ಲಿ ಹೆಚ್ಚಳ. ಒಂದು ತರಹ ಖಿನ್ನತೆಗೆ ಒಳಗಾಗುತ್ತಿದ್ದೆ. ವಿಭಾಗೀಯ ಕಛೇರಿಯಲ್ಲಿ ಡಿಪಾರ್ಟ್ಮೆಂಟ್ ಬದಲಾವಣೆಗೆ ಅವಕಾಶವಿರಲಿಲ್ಲ ಆಗ. ಇತ್ತೀಚೆಗೆ ೧೫ ವರ್ಷಗಳಿಂದ ಶಾಖೆಗಳಲ್ಲಿರುವಂತೆ ೩ ವರ್ಷಕ್ಕೊಮ್ಮೆ ಬದಲಾವಣೆ ಇದೆ. ಈಗ ನನ್ನೊಂದಿಗೆ ಸಹಾಯಕರಾಗಿ ರಾಮಚಂದ್ರ ಮತ್ತು ಉನ್ನತದರ್ಜೆ ಸಹಾಯಕರಾಗಿ ಮುರಳಿ ಇದ್ದರು. ಸಹಾಯಕ ವಿಭಾಗಾಧಿಕಾರಿಯಾಗಿ  ಶ್ರೀಮತಿ ಪ್ರಮದಾ ಪ್ರಕಾಶ್ ಅವರು ಬೆಂಗಳೂರಿನಿಂದ ಬಂದಿದ್ದರು. ಇದೇ ಮೊದಲು ನಾನು ಮಹಿಳಾ ಅಧಿಕಾರಿಯೊಂದಿಗೆ ಕೆಲಸ ಮಾಡಿದ್ದು. ಸುವರ್ಣ ಅವರಂತೂ ಇದ್ದರು. ತುಂಬಾ ಸೌಹಾರ್ದಕರ ವಾತಾವರಣವಿತ್ತು. ಆ ಸಮಯದಲ್ಲೇ ನನ್ನ ತಂಗಿ ವೈಶಾಲಿಯ ವಿವಾಹವೂ ಜರುಗಿದ್ದು. ಪ್ರಮದಾ ಮೇಡಂ ಅವರು ತುಂಬಾ ತಿಳಿ ಹೇಳಿ ಉನ್ನತ ದರ್ಜೆ ಸಹಾಯಕಿಯಾಗಿ ಬಡ್ತಿ ತೆಗೆದುಕೊಳ್ಳಲು ಪ್ರೇರೇಪಿಸಿದರು. ಸ್ಥಳ ಬದಲಾವಣೆ ಆದರೆ ಚಿಕಿತ್ಸೆಗು ಒಳ್ಳೆಯದು ಎಂದು ಅವರು ಹೇಳಿದ ಮಾತು ನನ್ನಲ್ಲೂ ಒಂದು ಹೊಸ ಆಸೆ ಮೂಡಿಸಿತು. ಹಾಗಾಗಿ ಆ ವರ್ಷ ಉನ್ನತ ದರ್ಜೆ ಸಹಾಯಕರ ಬಡ್ತಿಗಾಗಿ ಕರೆ ಕೊಟ್ಟಾಗ ನಾನು ಸಹ ಅರ್ಜಿ ಕೊಟ್ಟೆ. ನಮ್ಮ ತಂದೆ ಅಂತೂ ಉದ್ಯೋಗದಲ್ಲಿ ಮುಂದೆ ಬರಲಿ ಎಂದು ತುಂಬಾನೇ ಇಷ್ಟಪಡುತ್ತಿದ್ದರು ಹಾಗಾಗಿಯೇ ನನ್ನ ತಂಗಿ ಸಹ  ಸಹಾಯಕ ಅಧಿಕಾರಿಯಾಗಿ ಹೋಗಿದ್ದು.  ನನಗೂ ಅವರು ಬಡ್ತಿ ತೆಗೆದುಕೊಳ್ಳಲು ಹೇಳಿ ಅದನ್ನು ರವೀಶ್ ಅವರು ಅನುಮೋದಿಸಿದಾಗ ಆಯಿತು ಎಂದುಕೊಂಡಿದ್ದೆ. ಸಾಮಾನ್ಯ ಎಲ್ಲರಿಗೂ ದಿನ ಓಡಾಡುವ ಸ್ಥಳಕ್ಕೆ ಪೋಸ್ಟಿಂಗ್ ಆಗುತ್ತಿತ್ತು . ಒಂದು ಅಥವಾ ಎರಡು ವರ್ಷ ಹೀಗೆ ಓಡಾಡಿದ ನಂತರ ಮೈಸೂರಿಗೆ ವಾಪಸ್ ಬರಬಹುದಿತ್ತು. ಆದರೂ ಕೆಲವು ಗೆಳತಿಯರು ಆರಾಮವಾಗಿ ಮೈಸೂರಿನಲ್ಲಿ ಇರುವುದನ್ನು ಬಿಟ್ಟು ಓಡಾಡುವ ತೊಂದರೆ ತೆಗೆದುಕೊಳ್ಳುವುದು ಏಕೆ ಎಂದು ಸಹ ಕೇಳಿದ್ದರು. ಆದರೂ ಬದಲಾವಣೆಗೆ ಏನೋ ಒಂದು ರೀತಿಯ ತುಡಿತ ಏಕತಾನತೆಯಿಂದ ದೂರ ಹೋಗುವ ಆಸೆ ನನ್ನನ್ನು ಪದೋನ್ನತಿಗೆ ಪ್ರಯತ್ನಿಸುವ ಹಾಗೆ ಮಾಡಿತು. ಇದಕ್ಕೂ ಒಂದು ಪ್ರವೇಶ ಪರೀಕ್ಷೆ ಇರುತ್ತದೆ. ಆದರೆ ಅಸೋಸಿಯೇಟ್ ಪರೀಕ್ಷೆ ಪಾಸಾದವರಿಗೆ ಪ್ರವೇಶ ಪರೀಕ್ಷೆಯಿಂದ ರಿಯಾಯಿತಿ. ಆ ವೇಳೆಗೆ ನನ್ನದು ಅಸೋಸಿಯೇಟ್  ಆಗಿದ್ದರಿಂದ ನಾನು ನೇರ ಸಂದರ್ಶನಕ್ಕೆ ಅರ್ಹಳಾಗಿದ್ದೆ. ಎಂದಿನಂತೆ ಆ ಸಂದರ್ಶನಕ್ಕೆ ನಮ್ಮ ಹೊಸ ವ್ಯವಹಾರ ವಿಭಾಗದಿಂದ ಕೇಳಬಹುದಾದ ಸಂಭವನೀಯ ಪ್ರಶ್ನೆಗಳ ಪಟ್ಟಿ ನಾನೇ ತಯಾರು ಮಾಡಿ ಕೊಟ್ಟಿದ್ದೆ. ಆ ಬಾರಿ ಸಂದರ್ಶನ ಸಮಿತಿಯಲ್ಲಿ ನಮ್ಮ ಹೊಸ ವ್ಯವಹಾರ ವಿಭಾಗದ ಆಡಳಿತ ಅಧಿಕಾರಿಯಾಗಿದ್ದ ಶ್ರೀ ಟಿ ಎಂ ಪರಶಿವಮೂರ್ತಿ ಅವರು ಹಾಗೂ ಪಕ್ಕದಲ್ಲಿ ಇದ್ದ ಯೋಜನಾ ವಿಭಾಗದ ಸಹಾಯಕ ವಿಭಾಗ ಅಧಿಕಾರಿಯಾದ ಶ್ರೀ ಅಶ್ವತ್ಥ ನಾರಾಯಣಾಚಾರ್ ಅವರು ಇದ್ದರು. ನಂಜನಗೂಡಿನಲ್ಲಿ ನಾನು ಕಾರ್ಯನಿರ್ವಹಿಸುತ್ತಿರುವಾಗ ಅಶ್ವತ್ಥನಾರಾಯಣಾಚಾರ್  ಅವರೇ ನಮ್ಮ ಶಾಖಾಧಿಕಾರಿ ಆಗಿದ್ದರು . ಆ ಸಮಿತಿಯ ಅಧ್ಯಕ್ಷರಾಗಿ ಗೃಹ ಸಾಲ ವಿಭಾಗದ ಶ್ರೀ ನಾಗರಾಜ್ ಅವರು ನಿಯುಕ್ತರಾಗಿದ್ದರು. ವಿಭಾಗಿಯ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ಒಂದು ಅನುಕೂಲವೆಂದರೆ ಸಂದರ್ಶನ ಸಮಿತಿಯ ಎಲ್ಲರೂ ನಮಗೆ ತಿಳಿದವರಾಗಿ ಜೊತೆಯಲ್ಲಿ ಕೆಲಸ ಮಾಡಿದವರಾಗಿದ್ದರಿಂದ ಸಂದರ್ಶನ ಎಂದರೆ ಒಂದು ವಿಶೇಷ ಭಯ ಇರುವುದಿಲ್ಲ. ಸಂದರ್ಶನದ ಸ್ವಲ್ಪ ದಿನ ಮುಂಚೆ ಒಂದು ಹೊಸ ಚೂಡಿದಾರ್ ಕೊಂಡಿದ್ದೆ .ಅದನ್ನೇ ಸಂದರ್ಶನಕ್ಕೆ ಹಾಕಿಕೊಂಡು ಹೋಗುವುದು ಎಂದು ನಿರ್ಧರಿಸಿದೆ. ನನಗೆ ಇಷ್ಟವಾದ ಬೂದಿ ಬಣ್ಣದ ಡ್ರೆಸ್ ಅದು. ಸಂದರ್ಶನದ ಕೊಠಡಿ ಒಳಗೆ ಪ್ರವೇಶಿಸಿ  ಅವರುಗಳಿಗೆ ವಂದಿಸಿ ಕುರ್ಚಿಯಲ್ಲಿ ಕುಳಿತಿದ್ದಾಯಿತು. ಪರಶಿವಮೂರ್ತಿಯವರು ನಗುನಗುತ್ತಲೆ ಏನ್ರೀ ಕೇಳೋದು ನಿಮ್ಮನ್ನ ನೀವೇ ತಯಾರು ಮಾಡಿ ಕೊಟ್ಟಿರುವುದು ಈ ಪಟ್ಟಿ ಎಂದರು. ನಂತರ ನಮ್ಮ ಹೊಸ ವ್ಯವಹಾರ ವಿಭಾಗದಲ್ಲಿ ಅವರು ಹೊಸಬರಾಗಿದ್ದಾಗ ಅವರಿಗೆ ಅಲ್ಲಿನ ಕೆಲಸ ನಾನೇ ಹೇಳಿಕೊಟ್ಟಿದ್ದು.  ಹಾಗಾಗಿ ಏನು ಕೇಳಲಿ ಎಂದು ತಮಾಷೆ ಮಾಡಿದ್ದರು. ಅಶ್ವಥನಾರಾಯಣಚಾರ್ ಅವರು ಸಹ ಒಂದೆರಡು ಔಪಚಾರಿಕ ಪ್ರಶ್ನೆಗಳನ್ನು ಕೇಳಿದರು ಅಷ್ಟೇ. ನಾಗರಾಜ ಅವರು ಪಾಲಿಸಿ ಸರ್ವಿಸ್ ಗೆ ಸಂಬಂಧಿಸಿದಂತೆ ಒಂದೆರಡು ಪ್ರಶ್ನೆಗಳನ್ನು ಕೇಳಿದರು. ನನಗೆ ನೆನಪಿರುವುದು ಕಚೇರಿಯಲ್ಲೇ ಪಾಲಿಸಿ ಬಾಂಡ್ ಕಳೆದು ಹೋದಾಗ ಅದರ ತಯಾರಿಕೆಗಾಗಿ ಪಾಲಿಸಿದಾರರಿಂದ ವಸೂಲು ಮಾಡಬೇಕಾದ ಹಣ ಎಷ್ಟು ಎಂದು. ಕಚೇರಿಯಲ್ಲಿ ನಾವೇ ಪಾಲಿಸಿ ಕಳೆದು ಹಾಕಿದಾಗ ನಮ್ಮ ಖರ್ಚಿನಲ್ಲೇ ನಕಲು ಪ್ರತಿಯನ್ನು ತಯಾರು ಮಾಡಬೇಕು ಅದಕ್ಕಾಗಿ ಒಂದು ಆಫೀಸ್ ನೋಟ್ ತಯಾರು ಮಾಡಬೇಕು. ಪಾಲಿಸಿದಾರರಿಂದ ಯಾವ ಹಣವನ್ನು ಪಡೆಯುವಂತಿಲ್ಲ ಎಂದು ಹೇಳಿದ್ದಕ್ಕೆ ಅವರು ತಲೆಯಾಡಿಸಿದರು ಅಷ್ಟೇ. 10 ನಿಮಿಷಗಳಲ್ಲಿ ನನ್ನ ಸಂದರ್ಶನ ಮುಗಿದು ಹೋಗಿತ್ತು ನಮ್ಮ ವಿಭಾಗದ ಎದುರುಗಡೆಯ ಕೊಠಡಿಯಲ್ಲಿ ಸಂದರ್ಶನ ನಡೆದದ್ದು ಹಾಗಾಗಿ ಬಂದವರು ಎಲ್ಲ ನನ್ನ ಸೀಟಿನ ಬಳಿ ಕುಳಿತಿರುತ್ತಿದ್ದರು. ಕೆಲವರನ್ನಂತೂ ಬಹಳ ಪ್ರಶ್ನೆ ಕೇಳಿದ್ದರು ಎಂದು ತಿಳಿಯಿತು. ಹೀಗೆ ಪದೋನ್ನತಿಗೆ ಆಯ್ಕೆ ಮಾಡುವಾಗ ನಾವು ಮಾಡಿದ ಸೇವಾ ಅವಧಿ ಹಾಗೂ ನಮಗೆ ಪ್ರತಿ ವರ್ಷ ಕೊಡುವ ನಮ್ಮ ಸಿ ಅರ್ ಅಂದರೆ ನಮ್ಮ ಕೆಲಸದ ಬಗೆಗಿನ ವಾರ್ಷಿಕ ವರದಿ ಮತ್ತು ಸಂದರ್ಶನದಲ್ಲಿ ನಾವು ಕಳಿಸಿದ ಅಂಕ ಇವೆಲ್ಲವುಗಳನ್ನು ಆಧರಿಸಿ ಅಂಕೆಗಳನ್ನು ಕೊಡುತ್ತಾರೆ. ನಮ್ಮ ಜೀವ ವಿಮಾ ನಿಗಮದ ಒಂದು ಅಲಿಖಿತ ನಿಯಮದಂತೆ ಅಂದು ಶನಿವಾರ ಮಧ್ಯಾಹ್ನ ಫಲಿತಾಂಶ ಹೊರಬಿದ್ದಿತ್ತು. ಅರ್ಹತೆವಾರು ಪಟ್ಟಿಯಲ್ಲಿ ನನ್ನದು ಮೊದಲ ಹೆಸರು. ಇಷ್ಟೆಲ್ಲಾ ಆದರೂ ಒಂದು ರೀತಿಯ ಸಂಧಿಗ್ಧ. ಹೋಗುವುದು ಬೇಡವೋ ಎಂದು. ನೋಡೋಣ ಎಲ್ಲಿಗೆ ಪೋಸ್ಟಿಂಗ್ ಸಿಕ್ಕತ್ತೆ ಅದರ ಮೇಲೆ ನಿರ್ಧರಿಸೋಣ ಎಂದುಕೊಂಡಿದ್ದು.  ನಾನು ಆಯ್ಕೆ ಮಾಡಿ ಕೊಟ್ಟಿದ್ದ ಸ್ಥಳಗಳು ಕೆ ಆರ್ ನಗರ ಹುಣಸೂರು ಮತ್ತು ಚಾಮರಾಜನಗರ ಆದರೆ ನನ್ನ ಜೊತೆ ಆಯ್ಕೆಯಾದವರು ನನಗಿಂತ ವಯಸ್ಸಿನಲ್ಲಿ ಸೀನಿಯರ್ ಆಗಿದ್ದರಿಂದ ದಿನವು ಓಡಾಡಬಹುದಾದ ಈ ಸ್ಥಳಗಳು ಸಹ ನನಗೆ ಸಿಗುವ ಸಾಧ್ಯತೆ ಇರಲಿಲ್ಲ. ಆ ಪಟ್ಟಿ ಬಿಟ್ಟರೆ ಮುಂದೆ ಒಂದು ಕಂಟಿನ್ಜೆನ್ಸಿ ಪಟ್ಟಿಯಲ್ಲಿ ಕೆ ಆರ್ ಪೇಟೆ ಸಿಗುವ ಸಾಧ್ಯತೆ ಇತ್ತು. ದಿನವೂ ಓಡಾಡಬಹುದಾದರು ಹೆಚ್ಚು ಬಸ್ಸುಗಳು ಇರಲಿಲ್ಲ ಮತ್ತು ರಸ್ತೆ ಸಹ ತುಂಬಾ ಕೆಟ್ಟದಾಗಿ ಇತ್ತು . ನಂಜನಗೂಡಿನಲ್ಲಿ ನನ್ನೊಂದಿಗೆ ಕೆಲಸ ಮಾಡುತ್ತಿದ್ದ ಸುಲೋಚನಾ ಅವರಿಗೂ ಪದೋನ್ನತಿ ಸಿಕ್ಕಿದ್ದು ಅವರು ಸಹ ಪೋಸ್ಟಿಂಗ್ ವಿಷಯದಲ್ಲಿ ಸಂದಿಗ್ಧದಲ್ಲಿ ಇದ್ದರು ನಮ್ಮ ಆಡಳಿತ ಅಧಿಕಾರಿಯಾಗಿದ್ದ ಟಿ ಎಂ ಪರಶಿವಮೂರ್ತಿ ಅವರು ಸುಲೋಚನಾ ಅವರಿಗೆ ಬಹಳ ಆಪ್ತರು ಅವರು ನಮ್ಮಿಬ್ಬರ ಜೊತೆ ಮಾತನಾಡಿ ನಿಮ್ಮಿಬ್ಬರ ಸ್ವಭಾವ ತುಂಬಾ ಚೆನ್ನಾಗಿ ಹೊಂದುತ್ತದೆ ಇಬ್ಬರು ಮಾತನಾಡಿಕೊಂಡು ಒಂದೇ ಕಡೆಗೆ ಪೋಸ್ಟಿಂಗ್ ತೆಗೆದುಕೊಳ್ಳಿ ಒಂದು ವರ್ಷ ಒಟ್ಟಿಗೆ ಇದ್ದು ನಂತರ ವಾಪಸ್ ಬರಬಹುದು ಎಂದರು. ರವೀಶ್ ಮತ್ತು ನನ್ನ ತಂದೆ ಸಹ ದಿನ ಓಡಾಡಿ ಕಷ್ಟಪಡುವುದರ ಬದಲು ಇದು ಒಳ್ಳೆಯ ಸಲಹೆ ಎಂದಾಗ ಸಂಬಂಧ ಪಟ್ಟವರೊಡನೆ ಮಾತನಾಡಿದಾಗ ಇಬ್ಬರನ್ನು ಒಟ್ಟಿಗೆ ಸಕಲೇಶಪುರಕ್ಕೆ ಪೋಸ್ಟಿಂಗ್ ಮಾಡಿದರು. ಈಗಾಗಲೇ ಮೊದಲ ವರ್ಷಗಳಲ್ಲಿ ಹೋದವರು ಅಲ್ಲಿ ಒಂದು ಪ್ಲೇಯಿಂಗ್ ಗೆಸ್ಟ್ ಮನೆಯಲ್ಲಿ ಇದ್ದರು ಎಂಬ ವಿಷಯ ತಿಳಿದು ಹೋಗೋಣ ಎಂದು ನಾನು ಸುಲೋಚನಾ ನಿರ್ಧರಿಸಿದೆವು.ರವೀಶ್ ಅವರ ಊರಿನ ಕೆಲವರು ಆಗ ಸಕಲೇಶಪುರದಲ್ಲೇ ಇದ್ದುದರಿಂದ ಅವರ ಸಹಾಯ ಪಡೆಯಬಹುದು ಎಂಬ ಒಂದು ನಂಬಿಕೆಯು ಇತ್ತು.ಸರಿ ಹೋಗುವುದು ನಿರ್ಧಾರವಾಗಿ ವಿಭಾಗಿಯ ಕಚೇರಿಯ ಎಲ್ಲರಿಗೂ ಸಿಹಿ ಹಂಚಿದ್ದು ಆಯಿತು ನಮ್ಮ ವಿಭಾಗದವರು ಮತ್ತು ನನಗೆ ಆಪ್ತರಾಗಿದ್ದ ಸರಸ್ವತಿ ಕಮಲ ಮತ್ತು ಸುಮಾ ಇವರುಗಳನ್ನು ಕರೆದುಕೊಂಡು ಹೋಗಿ ಫಾರಸ್ ಹೋಟೆಲಿನಲ್ಲಿ ಪಾರ್ಟಿ ಕೊಡಿಸಿದ್ದು ಆಯಿತು. ಸುಮಾ ಮತ್ತು ಕಮಲ ಒಂದು ಚೆಂದದ ವ್ಯಾನಿಟಿ ಬ್ಯಾಗ್ ಅನ್ನು ನಮಗೆ ಗಿಫ್ಟ್ ಆಗಿ ನೀಡಿದರು. ನಮ್ಮ ಹೊಸ ವ್ಯವಹಾರ ವಿಭಾಗದವರು ಸೇರಿಕೊಂಡು ಒಂದು ಸೂಟ್ಕೇಸ್ ಉಡುಗೊರೆ ನೀಡಿದರು. ನಾನು ತುಂಬಾ ಅಮೃತಾಂಜನ್ ಅಥವಾ ಜಂಡು ಬಾಮನ್ನು ಹಣೆಗೆ ಹಚ್ಚಿಕೊಳ್ಳುತ್ತಲೇ ಇರುತ್ತಿದ್ದೆ .ಅದಕ್ಕೆ ಮುರಳಿಯವರು ರೇಗಿಸಿ ಇಲ್ಲಿಯೇ ಇಷ್ಟೊಂದು ಬಳಸುತ್ತೀರಿ . ಇನ್ನು ಆ ಥಂಡಿ ಪ್ರದೇಶದಲ್ಲಿ ಎಷ್ಟೊಂದು ಬೇಕಾಗುತ್ತದೆ. ಒಂದು ಡಝನ್ ಗಿಫ್ಟ್ ಕೊಡೋಣವಾ  ಅಂತ ರೇಗಿಸಿದ್ದರು. ಅಂತೂ ಏಳು ವರ್ಷಗಳಿಂದ ಇದ್ದ ವಿಭಾಗೀಯ ಕಚೇರಿಯನ್ನು ಬಿಡಲು ತುಂಬಾನೇ ಬೇಸರ ಅನಿಸಿತು. ಆದರೂ ಹೊಸ ಜಾಗ ಹೊಸ ಸವಾಲುಗಳು ಒಂದು ರೀತಿಯ ಥ್ರಿಲ್ ಎಂದು ಕೂಡ ಎದುರು ನೋಡುತ್ತಿದ್ದೆ. ಸುಜಾತಾ ರವೀಶ್

Read Post »

ಇತರೆ

ಕನ್ನಡದ ಶ್ರೇಷ್ಠ ಕವಿ ನಿಸ್ಸಾರ್ ಅಹ್ಮದ್ ಮತ್ತು ಹಿರಿಯ ಸಾಹಿತ್ಯ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ನಡುವಿನ ಸೌಜನ್ಯ ತುಂಬಿದ ಸ್ನೇಹ” ಒಂದು ನೆನಪು, ಗೊರೂರು ವಸಂತಿ ಮೂರ್ತಿ (ಕೆನಡಾ) ಅವರಿಂದ

ಹಿರಿಯರ ಸಂಗಾತಿ ಗೊರೂರು ವಸಂತಿ ಮೂರ್ತಿ (ಕೆನಡಾ) ಗೊರೂರುರಾಮಸ್ವಾಮಿ ಅಯ್ಯಂಗಾರ್‌ ಅವರ ಸುಪುತ್ರಿ ಕನ್ನಡದ ಶ್ರೇಷ್ಠ ಕವಿ ನಿಸ್ಸಾರ್ ಅಹ್ಮದ್ ಮತ್ತು ಹಿರಿಯ ಸಾಹಿತ್ಯ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ನಡುವಿನ ಸೌಜನ್ಯ ತುಂಬಿದ ಸ್ನೇಹ” ಒಂದು ನೆನಪು, ಈ ದಿನ ಶ್ರೀ ನಿಸ್ಸಾರ್ ಅಹ್ಮದ್ ಅವರ ಜನ್ಮದಿನೋತ್ಸವ.  ಅವರು  1936 ಫೆಬ್ರವರಿ 5 ನೆಯ  ತಾರೀಕು ಜನಿಸಿದರು.  ಕರ್ನಾಟಕದಲ್ಲಿ ಅವರ ಹೆಸರನ್ನು ಕೇಳದವರು ಯಾರಿದ್ದಾರೆ? ಅವರು ನನ್ನ ತಂದೆ Dr. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸ್ನೇಹಿತರು .  ಆ ಸ್ನೇಹ, ಸೌಜನ್ಯದಿಂದ ತುಂಬಿದ ಸ್ನೇಹ.  ಒಮ್ಮೆ ನಿಸ್ಸಾರ್ ಅಹ್ಮದ್ ಅವರು ನಮ್ಮ ಬೆಂಗಳೂರಿನ ರಾಜಾಜಿನಗರದ ಮನೆಗೆ ಬೆಂಗಳೂರು ಆಕಾಶವಾಣಿಯ ಪರವಾಗಿ ಬಂದು ನಮ್ಮ ತಂದೆಯವರ ಸಂದರ್ಶನವನ್ನು ಧ್ವನಿಮುದ್ರಣ ಮೂಲಕ ಮಾಡಿದರು.  ಈ ಸಂದರ್ಶನ ಇಂದಿಗೂ ಯು ಟ್ಯೂಬ್ನಲ್ಲಿ ದೊರೆಯುತ್ತದೆ. ಕನ್ನಡ ಸಾಹಿತ್ಯದ ದಿಗ್ಗಜರು ಕುಳಿತು ಮಾತನಾಡಿರುವ ಅಪೂರ್ವ ಸಂದರ್ಭ.  ಈ ಸಂದರ್ಶನವನ್ನು ನೋಡಿದವರಿಗೆ ಅವರಿಬ್ಬರಲ್ಲಿರುವ ಪರಸ್ಪರ ಗೌರವ  ತಾನೇತಾನಾಗಿ ವ್ಯಕ್ತ ವಾಗುತ್ತದೆ. ಆ ಸಂದರ್ಶನದ ಲಿಂಕ್ ಇಲ್ಲಿದೆ.  ಒತ್ತಿ ಕೇಳಬಹುದು. https://youtu.be/KYBBBtwaJ7Q?si=UJ3FFcw4dsoSlNsy. ಶ್ರೀ ನಿಸ್ಸಾರ್ ಅವರ ಉತ್ತಮ ಸಾಹಿತ್ಯ. ಕವನಗಳಿಗೆ ಅನೇಕ ಬಿರುದು, ಪ್ರಶಂಸೆ ಹಾಗೂ ಬಹುಮಾನಗಳು ಸಂದಿವೆ.  ಅವರ ನಿತ್ಯೋತ್ಸವದ ಧ್ವನಿಮುದ್ರಣವಂತೂ ಕನ್ನಡಿಗರ ಮನಸ್ಸನ್ನು ಸೂರೆಗೊಂಡಿದೆ. ಅವರು ನಿಧನರಾದುದು 2020 May 3 ನೆಯ ತಾರೀಕು.  ಆದಿನ ಅನೇಕ ಲೇಖಕರು, ಅಭಿಮಾನಿಗಳು ಕನ್ನಡ ಸಾಹಿತ್ಯ ಲೋಕಕ್ಕೆ ಆದ ತುಂಬಲಾರದ ನಷ್ಟವನ್ನು ಕುರಿತು ಬರೆದರು.  ಆ ಸಮಯದಲ್ಲಿ ಕನ್ನಡ ಓದಲು ಮತ್ತು ಬರೆಯಲು ತಿಳಿಯದ ನನ್ನ ಕೆಲವು ಸ್ನೇಹಿತರಿಗಾಗಿ ನಾನು ನಿಸ್ಸಾರ್ ಅಹ್ಮದ್ ಅವರ ಒಂದು ಖ್ಯಾತ ಪದ್ಯವನ್ನು ಇಂಗ್ಲಿಷಿಗೆ ತರ್ಜುಮೆ ಮಾಡಿದ್ದೆ.  ಅ ಪದ್ಯದ ಹೆಸರು: ನಿಮ್ಮೊಡನಿದ್ದರೂ ನಿಮ್ಮಂತಾಗದೇ ಕನ್ನಡ ಮೂಲ:ನಿಮ್ಮೊಡನಿದ್ದೂ ನಿಮ್ಮಂತಾಗದೆಸಾಹಿತ್ಯ : ಪ್ರೊ. ಕೆ ಎಸ್ ನಿಸಾರ್ ಅಹಮದ್. ನಿಮ್ಮೊಡನಿದ್ದೊ ನಿಮ್ಮಂತಾಗದೆಜಗ್ಗಿದ ಕಡೆ ಬಾಗದೆನಾನು ನಾನೇ ಆಗಿ ಈ ನೆಲದಲ್ಲೆ ಬೇರೊತ್ತಿದ್ದರೂ ಬೀಗಿ ಪರಕೀಯನಾಗಿತಲೆಯೆತ್ತುವುದಿದೆ ನೋಡಿಅದು ಬಲುಕಷ್ಟದ ಕೆಲಸ. ವೃತ್ತದಲ್ಲಿ ಉನ್ಮತ್ತರಾದನಿಮ್ಮ ಕುಡಿತ ಕುಣಿತ ಕೂಟಗಳುಕೆಣಕಿ ಎಸೆದಿದ್ದರೂಪಂಚೇಂದ್ರಿಯಕ್ಕೆ ಲಗಾಮು ಜಡಿದು ಜಾರದೆ ನಿಮ್ಮತ್ತಸಂಯಮವನ್ನೇ ಪೋಷಿಸಿ ಸಾಕುತ್ತರೇಖೆಯಲ್ಲೇ ದೊಂಬರಾಟ ನಡೆಸುವುದಿದೆ ನೋಡಿಅದು ಬಲು ಕಷ್ಟದ ಕೆಲಸ. ಒಳಗೊಳಗೆ ಬೇರುಕೊಯ್ದುಲೋಕದೆದುರಲ್ಲಿ ನೀರು ಹೊಯ್ದುನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂಗೊತ್ತಿಲ್ಲದಂತೆ ನಟಿಸಿಚಕಾರವೆತ್ತದೆ ನಿಮ್ಮೊಡನೆ ಕಾಫಿಹೀರಿ ಪೇಪರೋದಿ ಹರಟಿಬಾಳ ತಳ್ಳುವುದಿದೆ ನೋಡಿಅದು ಬಲು ಕಷ್ಟದ ಕೆಲಸ. ನಿಮ್ಮ ಮಾತುಕತೆಗಳಲ್ಲಿ ಹುದುಗಿದ ಬೆಕ್ಕುಸಂಶಯದ ಪಂಜವೆತ್ತಿನನ್ನ ನಂಬಿಕೆ ನೀಯತ್ತು ಹಕ್ಕುಕೊನೆಗೆ ಸಾಚಾತನವನ್ನು ಪರಚಿ, ಒತ್ತಿನೋವಿಗೆ ಕಣ್ಣು ತುಂಬಿದ್ದರೂ, ಚೆಲ್ಲಿದ ರಕ್ತದಲ್ಲಿ ರಾಷ್ಟ್ರೀಯತೆಯ ಧಾತುಗಳನನ್ನದುರಿನಲ್ಲೇ ತನಿಖೆಮಾಡುವ ಕ್ಷಣವನ್ನುಹುಸಿನಗುತ್ತ ಎದುರಿಸುವುದಿದೆಯಲ್ಲಅದು ಬಲು ಕಷ್ಟದ ಕೆಲಸ My translation:Nimmodaniddu NimmanthagadeByNissar Ahmed Even while being with youNot being able to become like you,Not leaning towards any pull and being myselfWhile all of me and my whole existence are rooted in this landYet I am shirking like a foreignerTrying to lift my head you seeIt is a very difficult task!! In your circle of intoxication, drunkenness, dancing partiesEven while being provokedKeeping the five senses under the leashNot sliding down, maintaining disciplineAnd walking a fine lineWhile participating in the show you seeIt is a very difficult task While having chopped my roots insideAnd pouring water for the purpose of showAlthough I know of your hypocrisyBut having to pretend like I do not know thisWithout a single sign of objectionDrinking coffee with youReading the newspaper and making small talkLiving the entire life like this you seeIs a very difficult talk ಈ ಪದ್ಯದಲ್ಲಿ.ನಿಸ್ಸಾರ್ ಅಹ್ಮದ್ ಅವರು ತಮ್ಮ ಹೃದಯದ ಅಂತರಾಳದಲ್ಲಿ ಇರುವ ಒಂದು ನೋವನ್ನು ನಮಗೆ ಒಂದು ಸಣ್ಣ ಕಿಂಡಿಯ ಮೂಲಕ ಬೆಳಕು ಬಿಟ್ಟು ತೋರಿಸಿದ್ದಾರೆ.  ಈ ಪದ್ಯ ಪ್ರತಿ ದಿನವೂ, ಪ್ರತಿ ಕ್ಷಣವೂ ಅವರ ಮನಸ್ಸಿನಲ್ಲಿ ನಡೆಯುತ್ತಿರುವ ತುಮುಲ ಯುದ್ಧದ ಪರಿಚಯವನ್ನು ನಮಗೆ ಮಾಡಿಸುತ್ತದೆ.  ಶ್ರೀ ನಿಸ್ಸಾರ್ ಅಹ್ಮದ್ ಅವರ ಸಾಹಿತ್ಯ ಸಾಧನೆ ಕನ್ನಡ ಭಾಷೆಯಲ್ಲಿ ಅದ್ವಿತೀಯ.  ಅವರಿಗೆ ಹೃತ್ಪೂರ್ವಕ ನಮನಗಳು. ಲೇಖಕಿ: ಗೊರೂರು ವಸಂತಿ ಮೂರ್ತಿ (ಕೆನಡಾ)ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಸುಪುತ್ರಿ

ಕನ್ನಡದ ಶ್ರೇಷ್ಠ ಕವಿ ನಿಸ್ಸಾರ್ ಅಹ್ಮದ್ ಮತ್ತು ಹಿರಿಯ ಸಾಹಿತ್ಯ ದಿಗ್ಗಜರಾದ ಗೊರೂರು ರಾಮಸ್ವಾಮಿ ಅಯ್ಯಂಗಾರ್‌ ನಡುವಿನ ಸೌಜನ್ಯ ತುಂಬಿದ ಸ್ನೇಹ” ಒಂದು ನೆನಪು, ಗೊರೂರು ವಸಂತಿ ಮೂರ್ತಿ (ಕೆನಡಾ) ಅವರಿಂದ Read Post »

You cannot copy content of this page

Scroll to Top