“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ.
ಶಿಕ್ಷಣ ಸಂಗಾತಿ ಜಯಲಕ್ಷ್ಮಿ ಕೆ. “ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಶಿಕ್ಷಣ, ಉದ್ಯೋಗ, ಆರೋಗ್ಯ ಸಂವಹನ ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ಇಂದು ತಂತ್ರಜ್ಞಾನದ್ದೇ ಮೇಲುಗೈ. ವಿಜ್ಞಾನ ತಂತ್ರಜ್ಞಾನವಿಲ್ಲದೆ ನಮ್ಮ ಬದುಕೇ ಇಲ್ಲ ಎನ್ನುವ ಕಾಲಘಟ್ಟದಲ್ಲಿ ನಾವಿದ್ದೇವೆ . ರಾಷ್ಟ್ರದ ಅಭಿವೃದ್ಧಿಯ ಮಾನದಂಡವೇ ತಂತ್ರಜ್ಞಾನವಾಗಿದೆ. ಪ್ರೌಢ ಶಾಲಾ ಶಿಕ್ಷಣವನ್ನು ಮುಗಿಸಿದ ಬಳಿಕ ಮಕ್ಕಳಿಗಾಗಲಿ ಅವರ ಪೋಷಕರಿಗಾಗಲೀ ಮಾನವೀಯ ಶಾಸ್ತ್ರಗಳ ಅಧ್ಯಯನ ಇಷ್ಟವಾಗುವುದಿಲ್ಲ. ಕಲಾ ವಿಭಾಗವನ್ನು ಆಯ್ಕೆ ಮಾಡಿಕೊಳ್ಳುವ ಮಕ್ಕಳು ತೀರಾ ಕಡಿಮೆ ಎಂದೇ ಹೇಳಬಹುದು. ಎಷ್ಟೋ ಖಾಸಗಿ ಕಾಲೇಜುಗಳಲ್ಲಿ ವಿಜ್ಞಾನ ವಾಣಿಜ್ಯ ವಿಭಾಗಗಳನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ. ಒಂದು ಕಡೆಯಿಂದ ಇನ್ನೊಂದು ಕಡೆಗೆ ತಿರುಗಾಡುತ್ತಾ, ಗೆಡ್ಡೆ ಗೆಣಸು ಹಸಿ ಮಾಂಸಗಳನ್ನು ತಿನ್ನುತ್ತಾ, ವನ್ಯ ಮೃಗಗಳಂತೆ ಗುಹೆಗಳಲ್ಲಿ ಬದುಕುತ್ತಿದ್ದ ಮಾನವ ಒಂದೆಡೆ ನೆಲೆ ನಿಂತು ಬಾಳಲು ಕಲಿತದ್ದೇ ಒಂದು ಸುದೀರ್ಘ ಇತಿಹಾಸ. ಅನಾಗರಿಕತೆಯಿಂದ ಹಂತ ಹಂತವಾಗಿ ಅಭಿವೃದ್ಧಿ ಹೊಂದುತ್ತಾ ನಾಗರಿಕತೆಯೆಡೆಗೆ ಸಾಗಿ ಬಂದ ಮಾನವ ಜೀವಯಾನದ ಕಥೆಗಳಲ್ಲಿ ಕಷ್ಟ -ಸುಖ, ಸೋಲು -ಗೆಲುವುಗಳ ಪಾಠವಿದೆ. ಮಾನವನ ಅಸ್ಥಿತ್ವ, ಸಂಸ್ಕೃತಿ ಮತ್ತು ಸಮಾಜದ ಬೆಳವಣಿಗೆಯ ಬಗ್ಗೆ ಬೆಳಕು ಚೆಲ್ಲುವಂತಹ ಇತಿಹಾಸವೇ ಮೊದಲಾದ ಮಾನವೀಯ ಶಾಸ್ತ್ರಗಳ ಅಧ್ಯಯನ ಇಂದು ಬಲು ದೂರ ಸರಿದಿದೆ. ಭೂತಕಾಲವನ್ನು ಅರ್ಥೈಸಿಕೊಂಡು ಭವಿಷ್ಯದ ಬಗೆಗೆ ಚಿಂತನೆಗೈಯುತ್ತಾ ವರ್ತಮಾನದಲ್ಲಿ ಬದುಕುವ ಕಲೆಗಾರಿಕೆಯನ್ನು ಕಲಿಸಿಕೊಡುವ ಇತಿಹಾಸದ ಅಧ್ಯಯನವಾಗಲೀ . ಪ್ರಜೆಗಳ ಹಕ್ಕು ಕರ್ತವ್ಯ, ಸರಕಾರದ ನೀತಿ ನಿಯಮ, ಉದಾತ್ತ ವ್ಯಕ್ತಿಗಳ ಜೀವನ- ಸಾಧನೆ, ಪರಸ್ಪರರ ಭಾವನೆಗಳಿಗೆ ಧಕ್ಕೆಯಾಗದಂತೆ ಬದುಕುವ ಜೀವನ ಕ್ರಮ, ಮನುಷ್ಯ ತನ್ನ ಸಮಾಜದೊಂದಿಗೆ ಮಾಡಿಕೊಳ್ಳಲೇ ಬೇಕಾದ ಹೊಂದಾಣಿಕೆ ಇತ್ಯಾದಿಗಳನ್ನು ತಿಳಿಸಿಕೊಡುವಂತಹ ಇತರ ಮಾನವ ಶಾಸ್ತ್ರಗಳ ಅಧ್ಯಯನವಾಗಲೀ ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಮುಖ್ಯತೆ ಪಡೆದಿಲ್ಲ . ಶ್ರುತಿ ಮತ್ತು ಸ್ಮೃತಿ ಆಧಾರಿತ ಗುರುಕುಲ ಶಿಕ್ಷಣ ಪದ್ಧತಿ ಬದಲಾವಣೆ ಹೊಂದುತ್ತಾ ಹೊಂದುತ್ತಾ “ತಂತ್ರಜ್ಞಾನವೇ ಶಿಕ್ಷಣದ ಜೀವಾಳ ” ” ಶಿಕ್ಷಣ ಎಂದರೆ ವಿಜ್ಞಾನ -ತಂತ್ರಜ್ಞಾನ ಎನ್ನುವಲ್ಲಿಗೆ ನಮ್ಮ ಶಿಕ್ಷಣ ಕ್ರಮ ಬಂದು ತಲುಪಿದೆ. ಗುರು-ಶಿಷ್ಯ ಸಂಬಂಧ, ಕಲಿಕಾ ಕ್ರಮ, ಪಠ್ಯಕ್ರಮ, ಕಲಿಕೆಯ ಉದ್ದೇಶ, ಬೋಧನಾ ವಿಧಾನ, ಎಲ್ಲವೂ ಬದಲಾಗಿದೆ. ಕಲಿಕಾ ವಾತಾವರಣವಷ್ಟೇ ಅಲ್ಲ, ಶಿಕ್ಷಣದ ಮೂಲೋದ್ದೇಶವೇ ಬದಲಾಗಿರುವ ಯುಗವಿದು. ಶಿಕ್ಷಣದೊಂದಿಗೇ ಬೆಸೆದು ಹೋಗಿದ್ದ ಅಧ್ಯಾತ್ಮ ಇಂದು ಶಿಕ್ಷಣ ವ್ಯವಸ್ಥೆಯಿಂದ ಕಾಣೆಯೇ ಆಗಿದೆ ಎಂದರೂ ತಪ್ಪಾಗಲಾರದು. ವಿದ್ಯಾರ್ಥಿ- ವಿದ್ಯಾರ್ಥಿನಿಯರನ್ನು ಜಾಗತಿಕ ವೃತ್ತಿ ಜೀವನಕ್ಕೆ ತಯಾರಿಗೊಳಿಸುವ ಭರದಲ್ಲಿ ತಾಂತ್ರಿಕ ಶಿಕ್ಷಣಕ್ಕೇ ಆಧ್ಯತೆ ನೀಡುತ್ತಿರುವ ನಾವು ಮಾನವೀಯ ಶಾಸ್ತ್ರಗಳನ್ನೇ ಮರೆತಿದ್ದೇವೆ. ಇತಿಹಾಸ, ತತ್ವಜ್ಞಾನ,ಅರ್ಥಶಾಸ್ತ್ರ ಮನಃಶಾಸ್ತ್ರ,ಸಮಾಜಶಾಸ್ತ್ರ ಇತ್ಯಾದಿಗಳನ್ನು ಅಧ್ಯಯನ ಮಾಡುವ ವಿದ್ಯಾರ್ಥಿಗಳ ಸಂಖ್ಯೆ ಗಣನೀಯವಾಗಿ ಇಳಿಮುಖಗೊಂಡಿದೆ . ಪ್ರಾಥಮಿಕ ಪ್ರೌಢ ಹಂತದಲ್ಲಿ ಅಂಕಗಳಿಕೆ, ನಂತರ ಮೆಡಿಕಲ್ ಇಂಜಿನಿಯರಿಂಗ್ ಸೀಟ್ ಗಳಿಕೆ ತದನಂತರ ಹೆಚ್ಚು ಸಂಬಳದ ಉದ್ಯೋಗ ಗಳಿಕೆ ಈ ಮೂರನ್ನೇ ಶಿಕ್ಷಣದ ಉದ್ದೇಶ ಎಂದು ಪರಿಭಾವಿಸಿದ್ದರ ಪರಿಣಾಮ ಮಾನವ ಶಾಸ್ತ್ರಗಳ ಅಧ್ಯಯನ ದೂರ ಉಳಿಯಿತು. ಇದರ ಜೊತೆಗೆ ಮೌಲ್ಯಾಧರಿತ ಶಿಕ್ಷಣವೂ…. ವಿಜ್ಞಾನ ತಂತ್ರಜ್ಞಾನಗಳಲ್ಲಿ ಪ್ರಾವೀಣ್ಯತೆ ಗಳಿಸಿ ಐಟಿ ಬಿಟಿ ಕಂಪನಿಗಳಲ್ಲಿ ಉದ್ಯೋಗ ಗಳಿಸಿಕೊಂಡಿರುವ ಯುವ ಜನಾಂಗ ಕೌಟುಂಬಿಕ ವ್ಯವಸ್ಥೆ, ಸಾಮಾಜಿಕ ಪರಿಸರ, ಸ್ನೇಹಿತ ವರ್ಗದಿಂದ ಹಂತ ಹಂತವಾಗಿ ದೂರವಾಗುತ್ತಿದ್ದು, ಅವರು ಭಾವನಾತ್ಮಕವಾಗಿ ಬಡವಾಗುತ್ತಿದ್ದಾರೆ. ಈ ನಡುವೆ ತಂತ್ರಜ್ಞಾನದ ಬಳಕೆಯಿಂದ ಅಮಾಯಕರನ್ನು ಭಾವನಾತ್ಮಕವಾಗಿ ಬೆದರಿಸಿ ಹಣ ಲೂಟಿ ಮಾಡುವ ಸಣ್ಣ ವಯಸ್ಸಿನ ವಿಪರೀತಮತಿಗಳು ಅಲ್ಲಲ್ಲಿ ತಲೆಯೆತ್ತಿವೆ . ಇಂತಹ ಅಪರಾಧಿಗಳನ್ನು ಕಂಡುಹಿಡಿಯುವುದೇ ಸರಕಾರಕ್ಕೊಂದು ದೊಡ್ಡ ಸವಾಲಾಗಿದೆ. ವಿಜ್ಞಾನ ತಂತ್ರಜ್ಞಾನ ವರಿಯದ ಕಳ್ಳನೊಬ್ಬ ನಮ್ಮ ಹಣ ವಾಚು,ಚಿನ್ನ ಇತ್ಯಾದಿ ಬೌತಿಕ ವಸ್ತುಗಳನ್ನಷ್ಟೇ ಕದ್ದರೆ ತಂತ್ರಜ್ಞಾನದಲ್ಲಿ ಪಳಗಿದ ಕಳ್ಳ ನಮ್ಮ ಹಣ ಸಂಪತ್ತುಗಳ ಜೊತೆ ಜೊತೆಗೆ ನಮ್ಮ ಆರೋಗ್ಯ,ಮಾನ, ಕೊನೆಗೆ ಜೀವವನ್ನೇ ಕಸಿದುಕೊಳ್ಳುತ್ತಾನೆ. ” ಯಂತ್ರಗಳಿಗೆ ಅಂತಃಕರಣವಿಲ್ಲ ” ನಿಜ. ಆದರೆ ಯಾಂತ್ರಿಕ ಬದುಕು ನಡೆಸುತ್ತಿರುವ ಇಂದಿನ ಅದೆಷ್ಟೋ ಯುವಕ ಯುವತಿಯರಿಗೆ ಪ್ರೀತಿ, ಕರುಣೆ, ಸಹನೆ, ಸಹಾನುಭೂತಿ, ಕೃತಜ್ಞತಾ ಭಾವ ಇವಾವುವೂ ಇಲ್ಲ. ಇದಕ್ಕೆ ಇತ್ತೀಚೆಗೆ ಸುದ್ದಿ ಯಾಗುತ್ತಿರುವ ಅವರ ವರ್ತನೆಗಳೇ ಸಾಕ್ಷಿ. ತಮ್ಮ ಸ್ವೇಚ್ಛಾಚಾರದ ಬದುಕಿಗೆ ಅಡ್ಡಿಯಾದರೆ ಹೊತ್ತ ತಂದೆಯೋ, ಹೆತ್ತ ತಾಯಿಯೋ, ರಕ್ತ ಹಂಚಿಕೊಂಡು ಹುಟ್ಟಿದ ಅಕ್ಕ ತಂಗಿಯರೋ.. ಯಾರಾಗಿದ್ದರೂ ಸರಿಯೇ, ಅವರನ್ನು ಕೊಚ್ಚಿ ಕೊಲ್ಲುವಷ್ಟು ಕ್ರೌರ್ಯ, ಮೃಗೀಯ ವರ್ತನೆ ತೋರಿಬಿಡುತ್ತಾರೆ. ಆಟಿಕೆಗಳನ್ನು ಒಗೆದಂತೆ ತಮ್ಮೊಡನೆಯೇ ಇದ್ದ ಜೀವಗಳನ್ನು ಕಂದಕಕ್ಕೆ ನೂಕಿ ಬದುಕಿನಲ್ಲಿ ನಲಿವು ಕಾಣಬೇಕೆಂದು ಹಂಬಲಿಸುತ್ತಾರೆ! ಅಂತಃಕರಣ ಅರಳಿಸುವ ಶಿಕ್ಷಣ, ಕೂಡಿ ಬಾಳುವ ಮನೋಭಾವ ಶಾಲಾ ಕಾಲೇಜುಗಳಲ್ಲಿ ಕಲಿತಿಲ್ಲ. ಸೋಲು ಗೆಲುವುಗಳಲ್ಲಿ ಸಮತೋಲನವನ್ನು ಸಾಧಿಸುವ ಕಲೆಗಾರಿಕೆಯನ್ನು ರೂಢಿ ಮಾಡಿಕೊಂಡಿಲ್ಲ. ಮನೆಯಲ್ಲಿ ಮಾನವಿಕ ಶಾಸ್ತ್ರ ಗಳನ್ನು ಹೇಳಲು – ಕೇಳಲು ಯಾರಿಗೂ ಬಿಡುವಿಲ್ಲ. ದೊಡ್ಡವರನ್ನು ನೋಡಿ ಕಲಿಯಲು ಕೂಡು ಕುಟುಂಬ ವ್ಯವಸ್ಥೆ ಮೊದಲೇ ಇಲ್ಲ. ಸಮಾಜಮುಖಿಯಾಗಿ ಬೆಳೆಯಲು ಇಂದಿನ ಮಕ್ಕಳಿಗೆ ಯೋಗ್ಯ ಅವಕಾಶಗಳಾಗಲೀ, ಸಾಮಾಜಿಕ ಭದ್ರತೆಯಾಗಲೀ ಇಲ್ಲ. ಹಸಿವು, ಬಡತನ,ಕಷ್ಟ, ಇತ್ಯಾದಿಗಳ ಅರಿವಿಲ್ಲದೆ’ ಬದುಕೆಂದರೆ ತಮ್ಮ ವೈಯಕ್ತಿಕ ಸುಖ ಸಂತೋಷಗಳ ಒಂದು ಮೊತ್ತ ‘ ಎಂದೇ ಭಾವಿಸಿಕೊಂಡಿರುವ ಯುವ ಮನಸುಗಳು ಆ ಸುಖ ಸಾಧನೆಗಾಗಿ ಯಾರಿಗೆ ಯಾವ ಕೆಡುಕು ಮಾಡುವುದಕ್ಕೂ ಹೇಸುವುದಿಲ್ಲ. ಅದಕ್ಕೆ ಬೇಕಾದ ತಂತ್ರಜ್ಞಾನ ಕೂಡಾ ಅವರಲ್ಲಿದೆ!! ಹುಟ್ಟಿ ಬೆಳೆದ ಸಮಾಜದ ಋಣ ತನ್ನ ಮೇಲಿದೆ, ಆದ ಕಾರಣ ಇತರರಿಗೆ ಬಾಳಗೊಡುತ್ತಾ ತಾನು ಬಾಳಬೇಕು ಎನ್ನುವ ಸಾಮಾನ್ಯ ಜ್ಞಾನವಿಲ್ಲ ಮಾತ್ರ ಇಲ್ಲ!!!ಅವಿದ್ಯಾವಂತರು ಮಾಡುವ ಮೋಸ ವಂಚನೆಗಳಿಗಿಂತ ವಿದ್ಯಾವಂತ (ಅ ) ನಾಗರಿಕರು ಮಾಡುವ ಮೋಸ ವಂಚನೆಗಳು ಘನ ಘೋರ !! ಸಾಮಾನ್ಯವಾಗಿ ಮಕ್ಕಳು ಓದಿ ಉದ್ಯೋಗ ಗಿಟ್ಟಿಸಿಕೊಳ್ಳುವ ಹಂತಕ್ಕೆ ಬಂದಾಗ ಅವರ ಜೊತೆಗಿನ ಪೋಷಕರ ಓಟ – ಒಡನಾಟ ನಿಧಾನವಾಗುತ್ತದೆ ಅಥವಾ ಅನಿವಾರ್ಯ ಪರಿಸ್ಥಿತಿಗಳಿಂದಾಗಿ ನಿಂತೇ ಹೋಗುತ್ತದೆ. ಆದರೆ ಮಕ್ಕಳ ನಿಜವಾದ ಬದುಕು ಆರಂಭವಾಗುವುದೇ ಅಲ್ಲಿಂದ. ತನ್ನನ್ನು ಪ್ರತ್ಯೇಕವೆಂದು ಭಾವಿಸದೆ ತಾನೂ ಸಮಾಜದ ಒಂದು ಭಾಗ ಎಂದು ಅರಿತುಕೊಳ್ಳುತ್ತಾ, ಭಾವನಾತ್ಮಕವಾಗಿ ಪರಿ ಪರಿಪಕ್ವತೆಯನ್ನು ಪಡೆದುಕೊಳ್ಳುತ್ತಾ ಯುವ ಜನತೆ ದೇಶದ ಆಸ್ತಿಯಾಗಿ ಉಳಿಯಬೇಕಾದರೆ ತಂತ್ರಜ್ಞಾನದ ಜೊತೆ ಜೊತೆಗೆ ಮಾನವ ಶಾಸ್ತ್ರಗಳ ಅಧ್ಯಯನವೂ ಶಿಕ್ಷಣದಲ್ಲಿ ಮಿಳಿತಗೊಂಡಿರಬೇಕು. ಜಯಲಕ್ಷ್ಮಿ ಕೆ ಮಡಿಕೇರಿ.
“ತಾಂತ್ರಿಕ ಶಿಕ್ಷಣದ ಭರಾಟೆಯಲ್ಲಿ ಅನಾಥವಾಗುತ್ತಿರುವ ಮಾನವೀಯ ಶಾಸ್ತ್ರಗಳು..” ಜಯಲಕ್ಷ್ಮಿ ಕೆ. Read Post »









