ಧಾರಾವಾಹಿ ಸಂಗಾತಿ-111 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ವ್ಯವಸ್ಥೆಯಾದ ಮಕ್ಕಳ ಶಿಕ್ಷಣ ಎರಡನೇ ಮಗಳು ಪ್ರಥಮ ವರ್ಷದ ಪದವಿ ತರಗತಿಗೆ ಸೇರ್ಪಡೆಯಾದಳು. ಮೂರನೇ ಮಗಳು ತಾನು ಸ್ವಲ್ಪ ತಡವಾಗಿಯೇ ಪಿಯುಸಿಗೆ ಸೇರಿಕೊಳ್ಳುತ್ತೇನೆ. ಅಮ್ಮನ ಜೊತೆ ಸಹಾಯಕ್ಕೆ ಇರುತ್ತೇನೆ ಎಂದಳು. ಸುಮತಿಯ ಆರೋಗ್ಯ ಮೊದಲಿಗಿಂತ ಕ್ಷೀಣಿಸುತ್ತಿರುವುದು ಇಬ್ಬರ ಗಮನಕ್ಕೂ ಬಂದಿತ್ತು. ಹಾಗಾಗಿ ತಂಗಿ ಹೇಳಿದಾಗ ಅಕ್ಕ ಸರಿ ಅಂದಳು. ಸುಮತಿಯ ಕುಟುಂಬಕ್ಕೆ ಆಪ್ತರಾದ ಡ್ರೈವರ್, ಸಾಹುಕಾರರು ಹಾಗೂ ಅಮ್ಮ ಸಕಲೇಶಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡುವಾಗ ಜೊತೆಯಲ್ಲಿ ಇರುತ್ತಿದ್ದರು. ಹಾಗಾಗಿ ಅನಾಥಾಶ್ರಮದಲ್ಲಿ ಮಕ್ಕಳ ಮೇಲ್ವಿಚಾರಣೆ ಹಾಗೂ ಅವರಿಗೆ ಶಿಕ್ಷಕಿಯಾಗಿ ಕಲಿಕೆಗೆ ಸಹಾಯ ಮಾಡಲು ಯಾರೂ ಇಲ್ಲದಿರುವುದು ಡ್ರೈವರ್ ಗೆ ತಿಳಿದಿತ್ತು. ಅವರು ಅಮ್ಮನೊಂದಿಗೆ ಸುಮತಿಯ ಎರಡನೇ ಮಗಳ ವಿಚಾರವನ್ನು ಪ್ರಸ್ತಾಪಿಸಿದರು. ಸುಮತಿಯ ಎರಡನೇ ಮಗಳು ದ್ವಿತೀಯ ಪಿಯುಸಿಯನ್ನು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಳು ಹಾಗೂ ಈಗ ಪ್ರಥಮ ವರ್ಷದ ಪದವಿಗೆ ಅಡ್ಮಿಶನ್ ಪಡೆದುಕೊಂಡಿದ್ದಳು. ಈ ವಿಚಾರ ಅಮ್ಮನಿಗೂ ತಿಳಿದಿತ್ತು. ಆ ಹುಡುಗಿಗೆ ಅನಾಥಾಶ್ರಮದಲ್ಲಿ ಕೆಲಸ ದೊರೆತರೆ ಸುಮತಿಯ ಕುಟುಂಬಕ್ಕೆ ಸಹಾಯವಾಗಬಹುದು ಹಾಗೂ ಆ ಹುಡುಗಿಯು ತನ್ನ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಬಹುದು ಎಂಬುದು ಸುಮತಿಯ ಕುಟುಂಬದ ಆಪ್ತರಾದ ಡ್ರೈವರ್ ಹಾಗೂ ಅವರ ಪತ್ನಿಯ ಆಲೋಚನೆಯಾಗಿತ್ತು. ಡ್ರೈವರ್ ಹೇಳಿದ ವಿಚಾರವನ್ನು ಕೇಳಿ…. “ಸರಿ ನಾನು ಒಮ್ಮೆ ಡಾಕ್ಟರ್ ರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ನೋಡುತ್ತೇನೆ”…. ಎಂದರು. “ಹಾಗೆಯೇ ಆಗಲಿ ಅಮ್ಮ…. ನೀವು ಮತ್ತು ಸಾಹುಕಾರರು ಮೊದಲಿನಿಂದಲೂ ಟೀಚರ್ ಹಾಗೂ ಮಕ್ಕಳ ಕಾಳಜಿಯನ್ನು ವಹಿಸುತಿದ್ದೀರಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದೀರಿ….. ನಿಮ್ಮಿಂದ ಅವರು ನೆಮ್ಮದಿಯಿಂದ ಬದುಕುವಂತಾಗಿದೆ”…. ಎಂದರು. ಸುಮತಿಯ ಎರಡನೇ ಮಗಳು ಟೈಪಿಂಗ್ ಕಲಿಯುವಾಗ ಪ್ರತಿ ತಿಂಗಳೂ ಫೀಸ್ ಕಟ್ಟಲು ಅಮ್ಮನಿಂದ ಹಣವನ್ನು ಪಡೆಯಲು ಬರುತ್ತಿದ್ದಳು ಹಾಗೂ ಹೊಸದಾಗಿ ಇಲ್ಲಿಗೆ ವಾಸ್ತವ್ಯ ಹೂಡಿದ ನಂತರ ಅವಳಿಗೆ ರಜೆ ಇರುವಾಗ ತನ್ನ ಸಹಾಯಕ್ಕಾಗಿ ಅಮ್ಮ ಅವಳನ್ನು ಬಂಗಲೆಗೆ ಕರೆಸಿಕೊಳ್ಳುತ್ತಿದ್ದರು ಹಾಗಾಗಿ ಅವಳ ಪರಿಚಯ ಅಮ್ಮನಿಗಿತ್ತು. ಒಂದು ದಿನ ಸಂಜೆ ಸುಮತಿ ಮತ್ತು ಅವಳ ಎರಡನೇ ಮಗಳನ್ನು ಬಂಗಲೆಗೆ ಬರುವಂತೆ ಅಮ್ಮ ಕೆಲಸಗಾರರೊಂದಿಗೆ ಹೇಳಿ ಕಳಿಸಿದರು. ಅಮ್ಮ ತಮ್ಮನ್ನು ಏಕೆ ಕರೆದಿರಬಹುದು? ಎನ್ನುವ ಜಿಜ್ಞಾಸೆಯೊಂದಿಗೆ ಇಬ್ಬರೂ ಅಮ್ಮನನ್ನು ಭೇಟಿ ಮಾಡಲು ಬಂದರು. ಅಮ್ಮನನ್ನು ಕಂಡೊಡನೆ ಇಬ್ಬರೂ ವಂದಿಸಿದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅಮ್ಮ ತಾಯಿ-ಮಗಳನ್ನು ಕಂಡ ಕೂಡಲೇ….”ಹೇಗಿದ್ದೀರಿ ಸುಮತಿ…. ಇವಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ಎಂದು ಕೇಳಿದರು….. “ಎಲ್ಲವೂ ನಿಮಗೆ ಗೊತ್ತಿರುವ ವಿಚಾರ ಅಲ್ಲವೇ ಅಮ್ಮಾ…. ಇನ್ನು ನಾನೇನು ಹೇಳಲಿ?… ನಿಮ್ಮ ಕೃಪೆಯಿಂದ ನಾವು ಚೆನ್ನಾಗಿದ್ದೇವೆ”…. ಎಂದಳು ಸುಮತಿ. ಮಗಳನ್ನು ನೋಡುತ್ತಾ….. “ನೀನು ಏನು ಹೇಳುತ್ತೀಯ ಹುಡುಗಿ?…. ಎಂದು ಅಮ್ಮ ಕೇಳಿದಾಗ… “ನನ್ನ ಅಮ್ಮ ಹೇಳಿದ್ದೇ ನನ್ನ ಉತ್ತರ ಅಮ್ಮ”…. ಎಂದಳು ಹುಡುಗಿ ವಿನಯದಿಂದ. “….ನಿಮ್ಮಿಬ್ಬರನ್ನು ನಾನು ಇಲ್ಲಿಗೆ ಕರೆಸಿರುವುದು ಏಕೆಂದರೆ, ನಾವು ನಡೆಸುತ್ತಿರುವ ಅನಾಥಾಶ್ರಮದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?…. ಅಲ್ಲಿ ಈಗ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಇಲ್ಲ…. ಹಾಗಾಗಿ ನಿಮ್ಮ ಈ ಮಗಳನ್ನು ಅಲ್ಲಿಗೆ ನೇಮಿಸಬೇಕು ಎಂದು ಡಾಕ್ಟರ್ ಮತ್ತು ನಾನು ತೀರ್ಮಾನಿಸಿದ್ದೇವೆ…. ನೀವೇನು ಹೇಳುತ್ತೀರಿ? ಎಂದು ಸುಮತಿಯನ್ನು ಅಮ್ಮ ಕೇಳಲು, ….. “ಅಮ್ಮಾ…. ಇವಳಿನ್ನೂ ಚಿಕ್ಕ ಹುಡುಗಿ…. ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವಳು ನಿಭಾಯಿಸಲು ಸಾಧ್ಯವೇ?…. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಇವಳು ಅಲ್ಲಿಯೇ ಓದಿ ಬೆಳೆದವಳು…. ಆದರೂ….. ಇವಳ ವಯಸ್ಸಿಗೆ ಇದು ಬಹಳ ದೊಡ್ಡ ಜವಾಬ್ದಾರಿ ಎಂದು ನನಗೆ ಅನಿಸುತ್ತಿದೆ”…. ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ….. “ಸಂಪೂರ್ಣ ಜವಾಬ್ದಾರಿಯನ್ನು ಇವಳ ಮೇಲೆ ನಾವು ಹೊರಿಸುತ್ತಿಲ್ಲ…. ಅವಳಿಗೆ ಸಹಾಯ ಮಾಡಲು ನಮ್ಮ ಇನ್ನೊಂದು ಅಂಗವಿಕಲ ಶಾಲೆಯ ಮೇಲ್ವಿಚಾರಕರು ಇರುತ್ತಾರೆ…. ಇವಳು ಅಲ್ಲಿಯೇ ಮಕ್ಕಳ ಜೊತೆಗೆ ವಾಸವಿದ್ದು, ಅವರ ಕಲಿಕೆಗೆ ಸಹಾಯ ಮಾಡಬೇಕು ಅವರನ್ನು ನೋಡಿಕೊಳ್ಳಬೇಕು….ಜೊತೆಗೆ ಇವಳೂ ಅಲ್ಲಿಂದ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು…. ಹೇಗೂ ಅಲ್ಲಿನ ನಿಯಮಗಳೇನೆಂದು ಇವಳಿಗೆ ತಿಳಿದಿದೆ…. ಒಂದರಿಂದ ಹತ್ತನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳು ಅಲ್ಲಿದ್ದಾರೆ…. ಇವಳು ಬಹಳ ಬುದ್ಧಿವಂತಳಿದ್ದಾಳೆ… ಹಾಗಾಗಿ ಅಲ್ಲಿನ ಮಕ್ಕಳಿಗೆ ಪಠ್ಯದ ವಿಷಯಗಳಲ್ಲಿ ಇವಳು ಸಹಾಯ ಮಾಡಬಹುದು…. ನಿಮ್ಮ ಮಗಳಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ನಾವು ಕೊಡುತ್ತೇವೆ…. ಇದರಿಂದ ನಿಮಗೆ ಸಹಾಯವಾಗುತ್ತದೆ…. ಇನ್ನೊಬ್ಬಳು ಮಗಳು ಕೂಡಾ ನಿಮ್ಮ ಜೊತೆ ಇದ್ದು ಕಾಲೇಜಿಗೆ ಸೇರಬಹುದು…. ನಿಮ್ಮ ಕೊನೆಯ ಮಗಳು ಹೇಗೂ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ಪಿಯುಸಿಯವರೆಗೂ ಅವಳ ಚಿಂತೆ ನಿಮಗಿರುವುದಿಲ್ಲ… ಎಲ್ಲವೂ ಸರ್ಕಾರವೇ ನೋಡಿಕೊಳ್ಳುತ್ತದೆ…. ಈಗ ಇವಳೂ ಅಲ್ಪ ಸ್ವಲ್ಪ ಸಂಪಾದನೆ ಮಾಡುವುದರಿಂದ ನಿಮಗೂ ಸಹಾಯವಾಗುತ್ತದೆ…. ಇವಳು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನಮ್ಮ ಬೇರೆ ಶಾಲೆಗಳಲ್ಲಿಯೂ ಕೆಲಸ ಮಾಡಬಹುದು…. ಇವಳಿಗೆ ವಾಸಕ್ಕೆ ಅನಾಥಾಶ್ರಮದಲ್ಲಿ ಬೇಕಾದ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ….ಇವಳಿಗೆ ಸಹಾಯಕ್ಕಾಗಿ ಅಲ್ಲಿ ಒಬ್ಬ ಅಡುಗೆಯವರು ಇರುತ್ತಾರೆ…. ವಾರಕ್ಕೊಮ್ಮೆ ನಿಮ್ಮನ್ನು ಬಂದು ಭೇಟಿ ಮಾಡುತ್ತಾಳೆ…. ಇಲ್ಲಿ ನಿಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಇನ್ನೊಬ್ಬ ಮಗಳು ಇರುತ್ತಾಳೆ ಅಲ್ಲವೇ?…. ಆಲೋಚಿಸಿ ಆದಷ್ಟು ಬೇಗ ನಿಮ್ಮ ತೀರ್ಮಾನವನ್ನು ತಿಳಿಸಿ. ನಾವು ಕೂಡ ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತೇವೆ…. ಇವಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುತ್ತೇವೆ…. ನಮ್ಮ ನೆರಳಿನಲ್ಲಿ ಅವಳು ಇರುತ್ತಾಳೆ….ಹೇಗೂ ನೀವು ಶಿಕ್ಷಕಿ…. ನಿಮ್ಮ ಜೊತೆ ರಜೆಯಲ್ಲಿ ಆಗಾಗ ಇವಳು ಕೂಡ ಶಾಲೆಗೆ ಬರುತ್ತಿದ್ದಳಲ್ಲವೇ? …. ಹಾಗಾಗಿ ಮಕ್ಕಳಿಗೆ ಕಲಿಸಲು ಕಷ್ಟವಾಗದು ಎಂಬುದು ನನ್ನ ಅನಿಸಿಕೆ… ಇನ್ನು ತೀರ್ಮಾನ ನಿಮ್ಮಿಬ್ಬರದು…. ಎಂದರು ಅಮ್ಮ ನಸುನಗುತ್ತಾ.
“ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು”ವನಜ ಮಹಾಲಿಂಗಯ್ಯ
ಕುಟುಂಬ ಸಂಗಾತಿ ವನಜ ಮಹಾಲಿಂಗಯ್ಯ “ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು” ಹಿಂದಿನ ಕಾಲದಲ್ಲಿ ಮನೆಯಲ್ಲಿ ಅಪ್ಪ-ಅಮ್ಮ ಎಂದರೆ ದೇವರು. ಅವರ ಮಾತು ಕಟ್ಟಳೆ. ಅವರ ಆಶೀರ್ವಾದವೇ ಜೀವನದ ದೊಡ್ಡ ಆಸ್ತಿ ಎಂದು ನಂಬಲಾಗಿತ್ತು. ಆದರೆ ಇಂದು? ಮೊಬೈಲ್ನ ಸ್ಕ್ರೀನ್ಗಿಂತ ಹೆಚ್ಚು ಗೌರವ ಸಿಗುವುದಿಲ್ಲ ಅಪ್ಪ-ಅಮ್ಮನಿಗೆ. “ಏನು ಹಳೇ ಕಾಲದ ಟಾಕ್” ಎಂದು ಒಂದು ಮಾತಿಗೆ ತಿರಸ್ಕರಿಸುವ ಮಕ್ಕಳು ಹೆಚ್ಚಾಗುತ್ತಿದ್ದಾರೆ. ಈ ಬದಲಾವಣೆ ಏಕೆ? ಇದರ ಹಿಂದಿನ ಕಾರಣಗಳೇನು? ಇದು ಕೇವಲ ತಪ್ಪೋ, ಅಥವಾ ಕಾಲದ ಬದಲಾವಣೆಯ ಸಹಜ ಪರಿಣಾಮವೋ?ಮೊದಲನೆಯದಾಗಿ – ಡಿಜಿಟಲ್ ಜಗತ್ತಿನ ಒಡಂಬಡಿಕೆಇಂದಿನ ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಸ್ಮಾರ್ಟ್ಫೋನ್, ಇಂಟರ್ನೆಟ್, ಸೋಶಿಯಲ್ ಮೀಡಿಯಾ ಜೊತೆ ಬೆಳೆಯುತ್ತಾರೆ. ಈ ಜಗತ್ತಿನಲ್ಲಿ ಎಲ್ಲವೂ ತ್ವರಿತ. ಲೈಕ್, ಕಾಮೆಂಟ್, ಫಾಲೋವರ್ಗಳೇ ಮೌಲ್ಯ. ಅಪ್ಪ-ಅಮ್ಮನ ದೀರ್ಘಕಾಲದ ತ್ಯಾಗ, ರಾತ್ರಿ ಕಣ್ಣು ಮುಚ್ಚದೆ ದುಡಿದದ್ದು, ಮಕ್ಕಳಿಗಾಗಿ ಸ್ವಂತ ಆಸೆಗಳನ್ನು ಬಿಟ್ಟದ್ದು – ಇವೆಲ್ಲವೂ “ಸ್ಲೋ ಕಂಟೆಂಟ್”. ಇದನ್ನು ಸ್ಕ್ರೋಲ್ ಮಾಡಿ ಸ್ಕಿಪ್ ಮಾಡುವಷ್ಟು ಸುಲಭವಾಗಿದೆ. ಆದ್ದರಿಂದಲೇ “ನೀನು ಏನೂ ಅರ್ಥ ಮಾಡಿಕೊಳ್ಳದೆ ಇದ್ದೀಯಾ” ಎಂಬ ಮಾತುಗಳು ಮನೆಯಲ್ಲಿ ಸಾಮಾನ್ಯವಾಗಿವೆ.ಎರಡನೆಯದು – ಜನರೇಷನ್ ಗ್ಯಾಪ್ ದೊಡ್ಡದಾಗಿದೆಹಿಂದೆ ಅಪ್ಪ-ಅಮ್ಮ ತಮ್ಮ ಮಕ್ಕಳಿಗೆ ತಾವು ಬೆಳೆದ ರೀತಿಯಲ್ಲೇ ಬೆಳೆಸುತ್ತಿದ್ದರು. ಆದರೆ ಇಂದು ಒಂದು ದಶಕದಲ್ಲಿ ತಂತ್ರಜ್ಞಾನ, ಜೀವನಶೈಲಿ, ಆಲೋಚನೆಗಳು ತೀವ್ರ ಬದಲಾಗಿವೆ. ಅಪ್ಪನಿಗೆ ಇನ್ಸ್ಟಾಗ್ರಾಮ್ ರೀಲ್ಸ್ ಅರ್ಥವಾಗುವುದಿಲ್ಲ. ಮಗನಿಗೆ ಅಪ್ಪನ “ಹಳೇಯ ಕಾಲದ ಯೋಚನೆ” ಅರ್ಥವಾಗುವುದಿಲ್ಲ. ಈ ಅಂತರವೇ ಗೌರವ ಕೊರೆಯುವ ಮೂಲ. ಮಾತಿನಲ್ಲಿ ತಿರಸ್ಕಾರ ಬರುತ್ತದೆ. “ನೀನು ಏನೂ ಗೊತ್ತಿಲ್ಲ” ಎಂಬ ಭಾವನೆಯಿಂದ ಮಾತುಗಳು ಕಠಿಣವಾಗುತ್ತವೆ.ಮೂರನೆಯದು – ಮೌಲ್ಯಗಳ ಬದಲಾವಣೆಇಂದು ಯಶಸ್ಸು = ಹಣ + ಫೇಮ್ + ಸ್ವಾತಂತ್ರ್ಯ ಎಂಬ ಸಮೀಕರಣ ಮಕ್ಕಳ ಮನಸ್ಸಿನಲ್ಲಿ ಬಲವಾಗಿ ಕೂತಿದೆ. ಅಪ್ಪ-ಅಮ್ಮನ ತ್ಯಾಗವನ್ನು “ಡ್ಯೂಟಿ” ಎಂದು ತೆಗೆದುಕೊಂಡು, ಅದಕ್ಕೆ ಬೆಲೆ ಕಟ್ಟದೆ ಇರುವುದು ಸಹಜವೆನಿಸುತ್ತದೆ. “ನಾನು ಏನೂ ಕೇಳಿಲ್ಲ, ನೀನೇ ಮಾಡಬೇಕಿತ್ತು” ಎಂಬ ಧೋರಣೆ ಬರುತ್ತದೆ. ಆದರೆ ಒಂದು ಸತ್ಯ – ಯಾರ ಮೇಲೂ “ಬೇಕಾಬಿಟ್ಟಿ” ಪ್ರೀತಿ ಬರುವುದಿಲ್ಲ. ಅದು ಗಳಿಸಬೇಕಾದ ಭಾವನೆ.ಆದರೂ ಒಂದು ಆಶಾಕಿರಣಎಲ್ಲಾ ಮಕ್ಕಳೂ ಹೀಗಲ್ಲ. ಇನ್ನೂ ಸಾವಿರಾರು ಮನೆಗಳಲ್ಲಿ ಅಪ್ಪ-ಅಮ್ಮನ ಕೈ ಹಿಡಿದುಕೊಂಡು ನಡೆಯುವ ಮಕ್ಕಳಿದ್ದಾರೆ. ಅವರು ತಮ್ಮ ತಂದೆತಾಯಿಯವರನ್ನು ಗೌರವಿಸುತ್ತಾರೆ, ಕಾಳಜಿ ವಹಿಸುತ್ತಾರೆ. ಆದರೆ ಬಹುತೇಕ ಮನೆಗಳಲ್ಲಿ ಈ ಸಂವಾದದ ಕೊರತೆ ಇದೆ. ಮಕ್ಕಳು ಒಂದು ಬಾರಿ ಕೇಳಬೇಕು – “ನಾನು ದೊಡ್ಡವನಾದ ಮೇಲೆ ನನ್ನ ಮಗ ನನ್ನನ್ನು ಹೀಗೆಯೇ ನೋಡಿದರೆ ಎಷ್ಟು ನೋವಾಗುತ್ತದೆ?” ಎಂದು.ಅಪ್ಪ-ಅಮ್ಮನಿಗೆ ಬೆಲೆ ಕೊಡುವುದು ದೊಡ್ಡ ಉಡುಗೊರೆಯಲ್ಲ. ಅದು ಸಣ್ಣ ಸಣ್ಣ ಮಾತುಗಳು, ಒಂದು ಫೋನ್ ಕರೆ, ಒಂದು ಭೇಟಿ, ಒಂದು “ಥ್ಯಾಂಕ್ ಯು” – ಇಷ್ಟೇ ಸಾಕು. ಏಕೆಂದರೆ ಅವರು ನಿಮಗಾಗಿ ಕೊಟ್ಟದ್ದು ಜೀವನವೇ. ನೀವು ಕೊಡುವುದು ಕೇವಲ ಸ್ವಲ್ಪ ಗೌರವ.ಇಂದಿನ ಮಕ್ಕಳೇ, ಒಮ್ಮೆ ನಿಮ್ಮ ಅಪ್ಪ-ಅಮ್ಮನ ಕಣ್ಣುಗಳನ್ನು ನೋಡಿ. ಅಲ್ಲಿ ನಿಮಗಾಗಿ ಕಾದಿರುವ ಪ್ರೀತಿಯನ್ನು ಕಾಣಬಹುದು. ಆ ಪ್ರೀತಿಗೆ ಬೆಲೆ ಕಟ್ಟಲು ಆಗದು – ಆದರೆ ಅದನ್ನು ಗೌರವಿಸಲು ಸಾಧ್ಯ. ಅದನ್ನು ಮಾಡಿ. ಏಕೆಂದರೆ ನಾಳೆ ನೀವೂ ಅಪ್ಪ-ಅಮ್ಮ ಆಗುತ್ತೀರಿ. ಆಗ ನಿಮಗೆ ಈ ಗೌರವ ಬೇಕಾಗುತ್ತದೆ.ನಿಮ್ಮ ಅಭಿಪ್ರಾಯ ಏನು? ಈ ಬಗ್ಗೆ ನಿಮ್ಮ ಅನುಭವ ಹಂಚಿಕೊಳ್ಳಿ. ವನಜ ಮಹಾಲಿಂಗಯ್ಯ
“ಹೆತ್ತವರ ಮಾತುಗಳಿಗೆ ಬೆಲೆಕೊಡದ ಈಪೀಳಿಗೆಯ ಮಕ್ಕಳು”ವನಜ ಮಹಾಲಿಂಗಯ್ಯ Read Post »
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಕನಸುಗಳಿರಬೇಕು”
ಕಾವ್ಯ ಸಂಗಾತಿ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ “ಕನಸುಗಳಿರಬೇಕು” ಕನಸುಗಳಿರಬೇಕು ಸುತ್ತಲೂಕವಿದ ಕತ್ತಲು ಕಳೆವಬೆಳಗುವ ದೀಪದಂತೆ ಕನಸುಗಳಿರಬೇಕು ಕಣ್ಣಲ್ಲಿತುಂತುರು ಮಳೆ ಕಾಮನಬಿಲ್ಲಕಾತುರದಿಂದ ನೋಡುವಂತೆ ಕನಸುಗಳಿರಬೇಕು ಹೆಜ್ಜೆಜ್ಜೆಗೂಸಾಧನೆ ಗರಿಗೆದರಿ ಸುರಿಮಳೆಯಲ್ಲಿ ಸಂಭ್ರಮಿಸುವಂತೆ ಕನಸುಗಳಿರಬೇಕು ಮನದಲ್ಲಿಸೋಲಿನಲ್ಲೂ ಸ್ಥೈರ್ಯದಿಭರವಸೆ ಪುಟ್ಟಿದೇಳುವಂತೆ ಕನಸುಗಳಿರಬೇಕು ನೋಂದಾಗಸವಾಲುಗಳನ್ನು ಸ್ವೀಕರಿಸಿಬದುಕಿನ ದಿಕ್ಕು ಬದಲಿಸುವ ದಿಕ್ಸೂಚಿಯಂತೆ ಕನಸುಗಳಿರಬೇಕು ಬದುಕಿಗೆಸದಾ ಉತ್ಸಾಹದ ಬುಗ್ಗೆಯಾಗಿಎಂದಿಗೂ ಬತ್ತದ ವರತೆಯಂತೆ ಕನಸುಗಳಿರಬೇಕು ನನಸಾಗಿಸಲುಬರಡು ಭೂವಿಯಲ್ಲಿಹಸಿರು ಹರಡಿನೆಮ್ಮದಿ ನೀಡುವ ತಂಗಾಳಿಯಂತೆ ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ
ಡಾ ಗೀತಾ ದಾನಶೆಟ್ಟಿ ಬಾಗಲಕೋಟೆ ಅವರ ಕವಿತೆ “ಕನಸುಗಳಿರಬೇಕು” Read Post »
“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು
ಪ್ರವಾಸಿ ಸಂಗಾತಿ “ಗೊರೂರು ಅನಂತರಾಜು “ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ ನಾವು ಶಿರಸಿಯಿಂದ ಬನವಾಸಿ ಬಸ್ಸು ಹತ್ತಿದಾಗಲೇ ನಾಲ್ಕೂವರೆ ಆಗಿತ್ತು. ಶಾಲೆ ಬಿಡುವ ವೇಳೆ ಬಸ್ ರಷ್ ಆಗಿತ್ತು. ನುಗ್ಗಿ ಬಸ್ ಹತ್ತಿ ಬನವಾಸಿಯಲ್ಲಿ ಇಳಿದಾಗ ಐದೂವರೆ ಆಗಿತ್ತು. ಕ್ಯಾಂಟಿನ್ನಲ್ಲಿ ಟೀ ಕುಡಿದು ಮೈಂಡ್ ಪ್ರೆಶ್ ಆಯಿತು. ಅಲ್ಲಿ ದೇವಾಲಯದ ದಾರಿ ಕೇಳಲು ನೀವು ಆಟೋದಲ್ಲಿ ಹೋಗಿ ಆರೂವರೆಗೆ ದೇವಸ್ಥಾನದ ಬಳಿಗೆಯೇ ಬಸ್ ಬರುತ್ತದೆ ಅಲ್ಲಿ ವಾಪಸ್ಸು ಹತ್ತಬಹುದು ಎಂದರು. ಎರಡು ಆಟೋದಲ್ಲಿ ಮಧುಕೇಶ್ವರ ದೇವಸ್ಥಾನಕ್ಕೆ ಹೋದವು. ದೇವಸ್ಥಾನದ ಪ್ರವೇಶದ್ವಾರದಲ್ಲಿ ನಾವು ಐವರು ಎ.ಹೆಚ್.ಗಣೇಶ್, ಪುಟ್ಟಸ್ವಾಮಿಗೌಡರು, ಬೇಕ್ರೀ ರಾಜೇಗೌಡರು, ಪಟ್ನ ವೆಂಕಟೇಗೌಡರು ಪೋಟೋ ತೆಗೆಸಿಕೊಂಡವು. ಅರ್ಚಕರು ನಿಮಗೆ ಗೈಡ್ ಬೇಕೆ ಎಂದರು. ಹೌದೆಂದು ಅವರಿಂದ ಅನೇಕ ಐತಿಹಾಸಿಕ ಮಾಹಿತಿ ಪಡೆದೆವು. ಸಿರಸಿಯಿಂದ ಬನವಾಸಿಗೆ ೨೨ ಕಿ.ಮೀ. ದೂರದ ಪ್ರಯಣ. ನಾವು ಪ್ರಯಣಿಸಿದ್ದು ಸೊರಬ ರಸ್ತೆಯಲ್ಲಿ. ವರದಾ ನದಿ ದಂಡೆಯಲ್ಲಿ ಬನವಾಸಿ ಇದೆ. ಇದು ಶಿರಸಿ ತಾಲ್ಲೂಕಿಗೆ ಸೇರಿದೆ. ಕ್ರಿ.ಶ. ೧ನೇ ಶತಮಾನದಲ್ಲಿ ಬಾರತಕ್ಕೆ ಬಂದಿದ್ದ ಗ್ರೀಕ್ ಪ್ರವಾಸಿ ಟಾಲೆಮಿ ಈ ಪಟ್ಟಣವನ್ನು ಬನೌಸಿ ಇಂದು ಕರೆದಿದ್ದಾನೆ. ಕ್ರಿ.ಶ.೪ನೇ ಶತಮಾನದಲ್ಲಿ ಜಯಂತಿಪುರ ಅಥವಾ ವೈಜಯಂತಿ ಎಂದು ಕರೆಯಲಾಗುತ್ತಿತ್ತು. ಪಾಂಡವರು ತಮ್ಮ ವನವಾಸದ ಕೆ¯ ಕಾಲ ಇಲ್ಲೇ ಕಳೆದರೆಂದೂ ಧರ್ಮರಾಜನ ಅಶ್ವಮೇಧಯಾಗದ ಸಂದರ್ಭ ಸಹದೇವ ದಕ್ಷಿಣ ಭಾರತದ ದಿಗ್ವಿಜಯ ಕಾಲದಲ್ಲಿ ವನವಾಸಕಾ ನಗರವನ್ನು ಗೆದ್ದನೆಂದೂ ಮಹಾಭಾರತದಲ್ಲಿ ಬನವಾಸಿಯನ್ನು ವನವಾಸಕ ಎಂಬ ಉಲ್ಲೇಖವಿದೆ. ವೈಜಯಂತಿ ಎಂದು ಹೆಸರಾದ ಈ ನಗರದಲ್ಲಿ ಮಧು ಕೈಟಭರೆಂಬ ದೈತ್ಯರನ್ನು ವಿಷ್ಣು ಕೊಂದನೆAದು, ಶಿವಭಕ್ತರಾದ ಈ ದೈತ್ಯರ ಹೆಸರಿನಲ್ಲಿ ಬನವಾಸಿಯಲ್ಲಿ ಮಧುಕೇಶ್ವರ ಮತ್ತು ನದಿಯ ಇನ್ನೊಂದು ದಂಡೆಯಲ್ಲಿರುವ ಅವನಟ್ಟಿ ಅಥವಾ ಕುಪ್ಪತ್ತೂರಿನಲ್ಲಿ ಕೈಟಭೇಶ್ವರ ದೇವಾಲಯ ನಿರ್ಮಿಸಲಾಗಿದೆ ಎಂದು ಹೇಳಲಾಗಿದ್ದರೂ ಈಗಿರುವಂತೆ ಆ ದೇವಾಲಯಗಳು ಅನಂತರ ಕಾಲದವು. ನಾನು ಹಾಸನದಲ್ಲಿ ನೋಡಿದ ದೇವಿ ಮಹಾತ್ಮೆ ನಾಟಕದಲ್ಲಿ ಈ ಎರಡು ಪಾತ್ರಗಳು ಬರುತ್ತವೆ. ಬೌದ್ಧ ಧರ್ಮ ಪ್ರಸಾರಕ್ಕಾಗಿ ಅಶೋಕ ಚಕ್ರವರ್ತಿ ಕಳುಹಿಸಿದ ಬೌದ್ಧ ಭಿಕ್ಷÄ ರಖ್ಖಿತ ಬನವಾಸಿ ಪ್ರಾಂತ್ಯಕ್ಕೆ ಬಂದಿದ್ದನೆAದು ಮಹಾವಂಶ ಎಂಬ ಬೌದ್ಧಗ್ರಂಥ ತಿಳಿಸುತ್ತದೆ. ನಾಗಾರ್ಜುನಕೊಂಡದ ಒಂದು ಶಾಸನದ ಪ್ರಕಾರ ಸಿಂಹಳದ ಭೌದ್ಧ ಭಿಕ್ಷÄಗಳು ಧರ್ಮ ಪ್ರಸಾರಕ್ಕಾಗಿ ಬನವಾಸಿಗೆ ಬಂದಿದ್ದರAತೆ. ಬನವಾಸಿ ಗೌತಮೀ ಪುತ್ರ ಸಾತಕರ್ಣಿಯ ನೇರ ಆಡಳಿತಕ್ಕೆ ಸೇರಿದ್ದು ಅವನು ತನ್ನ ಸೈನ್ಯದೊಡನೆ ವಿಜಯ ವೈಜಯಂತಿಯಲ್ಲಿ ಬೀಡುಬಿಟ್ಟಿದ್ದನೆಂದು ನಾಸಿಕದ ಶಾಸನ ಹೇಳುತ್ತದೆ. ಬನವಾಸಿಯಲ್ಲಿ ದೊರಕಿದ ಸಾತವಾಹನ ದೊರೆ ವಾಸಿಷ್ಠೀ ಪುತ್ರ ಸಿವಸಿರಿ ಪುಳುಮಾವಿನ ಅನಂತರ ಬಂದ (ಕ್ರಿ.ಶ.೨ನೇ ಶತಮಾನ) ಶಿವಶ್ರೀ ಪುಳುಮಾವಿಯ ಶಾಸನ ಅವನ ರಾಣಿಯ ಸ್ಮಾರಕ ಶಿಲೆಯಾಗಿದ್ದು ಆ ಕಾಲದಲ್ಲಿ ಬನವಾಸಿಯ ಪ್ರಾಮುಖ್ಯವನ್ನು ಸೂಚಿಸುತ್ತದೆ. ಮುಂದೆ ಸಾತವಾಹನರ ಸಾಮಂತರೂ ಆ ವಂಶದ ಶಾಖೆಗೆ ಸೇರಿದವರೂ ಆದ ಚಟುಸಾತಕರ್ಣಿ ದೊರೆಗಳ ಕಾಲದಲ್ಲೂ ಬನವಾಸಿ ಪ್ರಮುಖ ನಗರವಾಗಿತ್ತು. ಮಧುಕೇಶ್ವರ ದೇವಾಲಯದ ಕಂಬದಮೇಲೆ ರಾಷ್ಟçಕೂಟ, ಕಲ್ಯಾಣ ಚಾಳುಕ್ಯ, ವಿಜಯನಗರ ಮತ್ತು ಸೋದೆ ಅರಸರ ಹಲವಾರು ಶಾಸನಗಳು ದೇವಸ್ಥಾನದ ಜೀರ್ಣೋದ್ದಾರ ದಾನದತ್ತಿಗಳ ಬಗ್ಗೆ ತಿಳಿಸುತ್ತವೆ. ಕನ್ನಡವನ್ನು ರಾಜ್ಯ ಭಾಷೆಯಾಗಿ ಬಳಸಿದ ಪ್ರಪ್ರಥಮ ರಾಜವಂಶ ಕದಂಬರು. ಈ ರಾಜ್ಯದ ಸ್ಥಾಪಕ ಮಯೂರಶರ್ಮ (ಕ್ರಿ.ಶ.೩೪೫-೩೬೫) ಈತನ ರಾಜಧಾನಿ ಬನವಾಸಿ. ರಾಜಾ ಕಾಕುಸ್ಥವರ್ಮನ ಕಾಲದಲ್ಲಿ (೪೩೫-೪೫೫) ಉಚ್ಛಾçಯ ಸ್ಥಿತಿಯಲ್ಲಿತ್ತು. ಕನ್ನಡದ ಆದಿಕವಿ ಪಂಪ ತನ್ನ ಕಾವ್ಯ ವಿಕ್ರಮಾರ್ಜುನ ವಿಜಯದಲ್ಲಿ ಬನವಾಸಿಯನ್ನು ವರ್ಣಿಸುತ್ತ ಆರಂಕುಶವಿಟ್ಟೊಡA ನೆನೆವುದೆನ್ನ ಮನಂ ಬನವಾಸಿ ದೇಶಮಂ ಎಂದಿದ್ದಾನೆ. ಬನ ಮತ್ತು ವಾಸಿ ಪದಗಳಿಂದ ಬನವಾಸಿ ಎಂಬ ಹೆಸರು ಬಂದಿದ್ದು ಕ್ರಮವಾಗಿ ಕಾಡು ಮತ್ತು ವಸಂತ ಎಂಬ ಅರ್ಥ ಕೊಡುತ್ತದೆ. ಬನವಾಸಿ ಕರ್ನಾಟಕದ ಹಳೆಯ ಪಟ್ಟಣಗಳಲ್ಲಿ ಒಂದು. ಕದಂಬರ ಕಾಲದ ಅನೇಕ ಬಾರಿ ನವೀಕರಿಸಿದ ಸುಂದರ ಮಧುಕೇಶ್ವರ ದೇವಾಲಯ ಪ್ರಾಚೀನ ಇತಿಹಾಸ ಮತ್ತು ಶಾಸನಗಳಿಂದ ಕೂಡಿದೆ. ಇದು ಶಿವನಿಗೆ ಸಮರ್ಪಿತವಾದ ದೇವಾಲಯ. ಗರ್ಭಗುಡಿಯಲ್ಲಿ ಜೇನು ಬಣ್ಣದ ಲಿಂಗವಿದೆ. ಇಲ್ಲಿಯ ಕೋಟೆ ಬಹಳ ಪುರಾತನವಾದದ್ದು. ಚಾಲುಕ್ಯ ಇಮ್ಮಡಿ ಪುಲಕೇಶಿಯ ಐಹೊಳೆ ಶಾಸನದಲ್ಲಿ ಈ ಕೋಟೆಯ ಪ್ರಸ್ತಾಪವಿದೆ. ತಾಳಗುಂದ ಗುಂಡನೂರು ಚಂದ್ರವಳ್ಳಿ ಹಲಸಿ ಮತ್ತು ಹಲ್ಮಿಡಿ ಶಾಸನಗಳು ಈ ಕನ್ನಡ ವಂಶದ ಬಗ್ಗೆ ಬೆಳಕು ಚೆಲ್ಲುತ್ತವೆ. ಕನ್ನಡದ ಮೊಟ್ಟಮೊದಲ ಶಾಸನವೆಂದು ಹೆಸರಾಗಿರುವ ಹಲ್ಮಿಡಿ ಶಾಸನ (ಕ್ರಿ.ಶ.೪೫೦) ಬೇಲೂರು ತಾ. ಹಲ್ಮಿಡಿ ಗ್ರಾಮದಲ್ಲಿ ದೊರಕಿದೆ. ರಾಜಾ ಶಾಂತಿವರ್ಮನ (ಕ್ರಿ.ಶ.೪೫೦) ಕಾಲದ ತಾಳಗುಂದದ ಶಾಸನವು ಬನವಾಸಿ ಕದಂಬರ ಸಾಮ್ರಾಜ್ಯದ ಹುಟ್ಟಿನ ಸಂಭವನೀಯ ವಿವರ ನೀಡುತ್ತದೆ. ತಾಳಗುಂದದ ನಿವಾಸಿ ಮಯೂರವರ್ಮನು ತನ್ನ ಅಜ್ಜ ಮತ್ತು ಗುರು ವೀರವರ್ಮನೊಂದಿಗೆ ವೈದಿಕ ವಿದ್ಯಾರ್ಜನೆಗಾಗಿ ಕಂಚಿಗೆ ಹೋಗುತ್ತಾನೆ. ಅಲ್ಲಿ ಪಲ್ಲವರ ಕಾವಲು ಭಟರೊಂದಿಗೆ ಮನಸ್ತಾಪವಾಗಿ ಅವರಿಂದ ಅವಮಾನಿತನಾಗುತ್ತಾನೆ. ಇದರಿಂದ ಕೋಪಿತನಾಗಿ ಪ್ರತೀಕಾರದ ಪ್ರತಿಜ್ಞೆಗೈದು ಕಂಚಿಯನ್ನು ಬಿಟ್ಟು ವಾಪಸ್ಸು ಬಂದು ಶಸ್ತಾçಭ್ಯಾಸ ಪ್ರಾರಂಭಿಸುತ್ತಾನೆ. ಸೈನ್ಯ ಕಟ್ಟಿ ಪಲ್ಲವರೊಂದಿಗೆ ದೀರ್ಘಕಾಲದ ಯುದ್ಧ ನಂತರ ಕದಂಬರು ಸ್ವತಂತ್ರ ರಾಜ್ಯ ಘೋಷಿಸಿ ಕದಂಬರನ್ನು ಹತ್ತಿಕ್ಕಲಾರದೆ ಪಲ್ಲವರು ಅವರ ಸ್ವತಂತ್ರ ರಾಜ್ಯವನ್ನು ಒಪ್ಪಬೇಕಾಯಿತು. ಅಂತಿಮವಾಗಿ ಬಾದಾಮಿಯ ಚಾಲುಕ್ಯರಿಂದ ಈ ಸಾಮ್ರಾಜ್ಯ ಪತನವಾಯಿತು. ಅಲ್ಲಿಂದ ಮುಂದೆ ಬಾದಾಮಿ ಚಾಲುಕ್ಯರು ನಂತರ ರಾಷ್ಟçಕೂಟರ ಕಲ್ಯಾಣಿ ಚಾಲುಕ್ಯರ ಸಾಮಂತರಾಗಿ ಈ ವಂಶ ಮುಂದುವರಿಯಿತು. ದೇವಸ್ಥಾನದ ಆವರಣದಲ್ಲಿ ಇರುವ ಫಲಕದಲ್ಲಿ ದೇವಸ್ಥಾನ ಕುರಿತ್ತಾದ ಕೆಲವು ಐತಿಹಾಸಿಕ ಮಾಹಿತಿಗಳಿವೆ. ಕದಂಬರ ಕಾಲದ ಮಧುಕೇಶ್ವರ ದೇವಾಲಯ ಕಲ್ಯಾಣ ಚಾಲುಕ್ಯರಿಂದ ಸೋಂದಾ ಅರಸರ ಕಾಲದವರೆಗೆ ಅನೇಕ ವಾಸ್ತು ಸೇರ್ಪಡೆ ಬದಲಾವಣೆಗಳನ್ನು ಮಾಡುತ್ತಾ ಬಂದಿರುವುದು ಇಲ್ಲಿನ ವಾಸ್ತುಶೈಲಿ ಮತ್ತು ದೊರಕಿರುವ ೧೨ ಶಾಸನಗಳಿಂದ ತಿಳಿಯಬಹುದಾಗಿದೆ. ಕದಂಬರು ಶಾತವಾಹನರ ಶಿಲ್ಪಕಲಾಶೈಲಿಯನ್ನು ಅಳವಡಿಸಿಕೊಂಡರು. ಪೂರ್ವಾಭಿಮುಖವಾಗಿ ಇರುವ ದೇವಾಲಯದ ಚೌಕಾಕಾರ ಗರ್ಭಗೃಹದ ಸುತ್ತಲೂ ಪ್ರದಕ್ಷಿಣಾ ಪಥವಿದೆ. ಗರ್ಭಗೃಹದಲ್ಲಿ ಪೀಠದ ಮೇಲೆ ಮಧುಕೇಶ್ವರ ಲಿಂಗವಿದೆ. ಲಿಂಗವು ಜೇನುತುಪ್ಪದ ಬಣ್ಣದಲ್ಲಿದೆ. ಎಡಭಾಗದಲ್ಲಿ ಪಾರ್ವತಿ ದೇವಾಲಯವಿದೆ. ಪೂರ್ವಭಾಗದ ಗೋಡೆಗೆ ಅಂಟಿಕೊAಡAತೆ ಇರುವ ೨ ಉಪಗುಡಿಗಳಲ್ಲಿ ಮಹಿಷಮರ್ದಿನಿ ಗಣೇಶನ ಶಿಲ್ಪಗಳಿವೆ ಮತ್ತು ದೊಡ್ಡ ಕಂಬಗಳಿರುವ ವಿಶಾಲ ಮಂಟಪವಿದೆ. ಈ ಎಲ್ಲಾ ರಚನೆಗಳು ಕಲ್ಯಾಣ ಚಾಲುಕ್ಯರ ಕಾಲಕ್ಕೆ ಸೇರಿದವುಗಳಾಗಿವೆ. ಈ ಮಂಟಪದ ಮುಂಭಾಗದಲ್ಲಿ ತಿರುಗಣಿ ಯಂತ್ರದಿAದ ರಚಿತವಾದ ಅಲಂಕೃತ ಕಂಬಗಳಿರುವ ನವರಂಗವಿದೆ. ಅದರಲ್ಲಿ ಕುಳಿತ ನಂದಿಯ ಶಿಲ್ಪವಿದೆ. ನಂದಿಯ ಒಂದು ಕಣ್ಣು ಮಧುಕೇಶ್ವರನನ್ನು ಇನ್ನೊಂದು ಕಣ್ಣು ಪಾರ್ವತಿಯನ್ನು ನೋಡುತ್ತಿದೆ ನೋಡಿ ಎಂದರು ಅರ್ಚಕರು. ನವರಂಗದ ಸುತ್ತಲೂ ಕಕ್ಷಾಸನವಿದ್ದು ನವರಂಗಕ್ಕೆ ಮೂರು ಪ್ರವೇಶದ್ವಾರಗಳಿವೆ. ಇವುಗಳು ಸಹ ಕಲ್ಯಾಣ ಚಾಲುಕ್ಯರ ಕಾಲದ ನಿರ್ಮಿತಿಗಳಾಗಿವೆ. ದೇವಾಲಯದ ಒಳಭಾಗದಲ್ಲಿ ಪ್ರಾಚೀನ ಶಿಲ್ಪಶೈಲಿಯ ಲಕ್ಷಣಗಳಿರುವ ಆದಿಮಾಧವ ಮತ್ತು ಕಾರ್ತಿಕೇಯನ ಶಿಲ್ಪಗಳಿವೆ. ದೇವಾಲಯಕ್ಕೆ ಈಗಿರುವ ಶಿಖರವು ವಿಜಯನಗರ ಸೋಂದಾ ಅರಸರ ಕಾಲಕ್ಕೆ ಸೇರಿದ್ದು ಸುಖನಾಸಿಯನ್ನು ಹೊಂದಿರುವ ಕದಂಬ ನಾಗರ ಶಿಖರವು ಪಿರಮಿಡ್ಡು ಆಕಾರದಲ್ಲಿ ಮೇಲಕ್ಕೇರುತ್ತದೆ. ನಾಲ್ಕು ಮೂಲೆಗಳಲ್ಲಿ ನಂದಿ ವಿಷ್ಣುವಿನ ದಶಾವತಾರ ೧೨ ಆದಿತ್ಯರು, ದಿಕ್ಪಾಲಕರು, ನಾಗಬಂಧ ಮತ್ತು ಇತರ ದೇವತೆಗಳ ಗಾರೆ ಶಿಲ್ಪಗಳಿಂದ ಶಿಖರವನ್ನು ಅಲಂಕರಿಸಲಾಗಿದೆ. ನವರಂಗದ ಛಾವಣಿಯ ಸಮತಟ್ಟಾಗಿ ಅದರ ಅಂಚು ಇಳಿಜಾರಿನಿಂದ ಕೂಡಿದೆ. ದೇವಾಲಯದ ಮುಂಭಾಗ ದ್ವಜ ಸ್ಥಂಭವಿದೆ. ಪ್ರಾಕಾರದಲ್ಲಿರುವ ಉಪ ಗುಡಿಗಳಲ್ಲಿ ಸೋಂದಾ ಅರಸರ ಕಾಲದ ದಿಕ್ಪಾಲರು ದುಂಡಿರಾಜ, ಗಣಪತಿ ಚಿಂತಾಮಣಿ ನರಸಿಂಹ ಮತ್ತಿತರ ಶಿಲ್ಪಗಳಿವೆ. ಶಾಸನ ಸಹಿತ ನಾಗಶಿಲ್ಪ ಮತ್ತು ಅಲಂಕೃತ ಶಿಲಾ ಮಂಟಪದAತಿರುವ ಮಂಟಪವು ದೇವಾಲಯದಲ್ಲಿರುವ ಮುಖ್ಯ ರಚನೆಗಳಾಗಿವೆ. ಆಯತಾಕಾರದ ತೆಳು ಶಿಲಾ ಫಲಕದ ಮಧ್ಯದಲ್ಲಿ ಸುತ್ತಿಕೊಂಡAತೆ ಇರುವ ೫ ಹೆಡಗಳುಳ್ಳ ನಾಗಶಿಲ್ಪವಿದೆ. ಶಿಲಾಫಲಕದ ಎರಡೂ ಬದಿಯ ಅಂಚಿನಲ್ಲಿ ಕ್ರಿ.ಶ.೨ನೇ ಶತಮಾನಕ್ಕೆ ಸೇರುವ ಬ್ರಾಹ್ಮಿ ಲಿಪಿಯ ಪ್ರಾಕೃತ ಶಾಸನವಿದೆ. ಅದು ಹರಿತಪುತ್ರ ವಿನುಕಡೆ ಚುಟುಕುಲಾನಂದ ಶಾಕಕರ್ಣಿಯ ೧೨ನೇ ಆಳ್ವಿಕೆಯ ವರ್ಷದಲ್ಲಿ ಅವನ ಪುತ್ರಿ ಶಿವಸ್ಕಂದ ನಾಗಶ್ರೀಯು ಒಂದು ಕೆರೆ ಹಾಗೂ ವಿಹಾರದೊಂದಿಗೆ ಈ ಕಲಾತ್ಮಕ ನಾಗಶಿಲ್ಪವನ್ನು ನಿರ್ಮಿಸಿ ಕೊಡುಗೆಯಾಗಿ ನೀಡಿದ್ದಾಗಿ ತಿಳಿಸುತ್ತದೆ. ಸಂಜಯAತಿಯ (ಬನವಾಸಿ) ನಿವಾಸಿ ಅಚಾರ್ಯ ದಾಮೋರಕನ ಶಿಷ್ಯ ನಾಟಕನೆಂಬ ಶಿಲ್ಪಿಯ ಈ ನಾಗಶಿಲ್ಪವನ್ನು ಕೆತ್ತಿದನೆಂದು ಶಾಸನವು ದಾಖಲಿಸಿದೆ. ಸೋಂದಾ ಅರಸ ಸದಾಶಿವ ನಾಯಕನು (ಕ್ರಿ.ಶ.೧೬ನೇ ಶತಮಾನ) ನಿರ್ಮಿಸಿರುವ ಅತ್ಯಂತ ಸೂಕ್ಷö್ಮ ಕೆತ್ತನೆಗಳಿಂದ ಕೂಡಿದ ತ್ರಿಲೋಕ ಮಂಟಪವೆAದು ಕರೆಯಲಾಗುವ ಶಿಲೆಯು ನವರಂಗದಲ್ಲಿದೆ. ರಘುನಾಥ ನಾಯಕ (ಕ್ರಿ.ಶ.೧೬೨೮) ಕೊಡುಗೆಯಾಗಿ ನೀಡಿದ ಶಿಲಾಮಂಟಪದಲ್ಲಿ ಗಿಡ, ಬಳ್ಳಿ, ಪ್ರಾಣಿ ಮತ್ತು ಜಾಮಿತಿಯ ಅಲಂಕರಣಿಗಳಿAದ ಕೂಡಿದ ಸೂಕ್ಷö್ಮ ಕೆತ್ತನೆಗಳಿವೆ. ಇಲ್ಲಿನ ಗಣೇಶನ ಅರ್ಧಬಾಗ ಮಾತ್ರ ಇರುವ ಮೂರ್ತಿ ಇದರ ಇನ್ನರ್ದ ವಾರಣಾಸಿಯಲ್ಲಿದೆಯಂತೆ. ದೇವಾಲಯ ಸಮುಚ್ಛಯದ ಪೂರ್ವ ಭಾಗದಲ್ಲಿರುವ ಮುಖ್ಯ ಪ್ರವೇಶ ದ್ವಾರದಲ್ಲಿರುವ ಮೆಟ್ಟಿಲುಗಳ ಕೈಪಿಡಿ ಗೋಡೆಗಳನ್ನು ಎರಡು ಅಲಂಕೃತ ಆನೆಗಳ ಶಿಲ್ಪಗಳಿಂದ ಕೆತ್ತಲಾಗಿದೆ. ಇಲ್ಲಿಯ ಕಲ್ಲಿನ ಮಂಚ ಪ್ರಧಾನ ಆಕರ್ಷಣೆಗಳಲ್ಲೊಂದು. ಬನವಾಸಿ ಪರಿಸರದಲ್ಲಿ ಸಾಮಾನ್ಯ ಅಲಂಕರಣೆಗಳ ಆದಿಕದಂಬರೇಶ್ವರ, ಆದಿಮಧುಕೇಶ್ವರ, ಅಲ್ಲಮಪ್ರಭು ದೇವಾಲಯಗಳಿವೆ. ನಾವು ದೇವಸ್ಥಾನದಿಂದ ಹೊರಬಂದಾಗ ಕತ್ತಲು ಆವರಿಸುತ್ತಿತ್ತು. ದೇವಾಲಯದ ಹೊರಬಾಗದಲ್ಲಿ ಎರಡು ರಥಗಳನ್ನು ಎತ್ತರಕ್ಕೆ ಮನೆ ನಿರ್ಮಿಸಿ ನಿಲ್ಲಿಸಲಾಗಿದೆ. ಈಗ ರಥೋತ್ಸವಕ್ಕೆ ಹೊಸ ರಥ ಬಳಸಲಾಗುತ್ತಿದ್ದು ಹಳೆಯ ರಥವನ್ನು ಸಂರಕ್ಷಿಸಲಾಗಿದೆ. ಹೊರಗಡೆ ಒಂದು ಸುತ್ತು ಹಾಕಿ ನಡೆದುಕೊಂಡೆ ಬಸ್ಸ್ಟಾö್ಯಂಡ್ಗೆ ಬಂದೆವು. ಕೆಲಹೊತ್ತಿಗೆ ಬಸ್ಸು ಬಂತು. ಹತ್ತಲು ಹೋದೆವು. ದೇವಸ್ಥಾನಕ್ಕೆ ಹೋಗಿ ಬರುತ್ತೇವೆ ಇಲ್ಲೇ ಇರಿ ಎಂದ ಕಂಡಕ್ಟರ್ ಮೇಡಂ ಹತ್ತಿಸಿಕೊಳ್ಳಲಿಲ್ಲ. ಕದಂಬ ಸೈನ್ಯ ಅಧ್ಯಕ್ಷರು ಬೇಕ್ರಿ ರಮೇಶ್ ನಮಗೆ ಬನವಾಸಿಯ ಗುತ್ಯಪ್ಪ ಮಾದರ್ ಕಪ್ಪಗೇರಿ ಅವರ ಪೋನ್ ನಂಬರ್ ನೀಡಿದ್ದರು. ನಾವು ಬಸ್ ಕಾಯುವಾಗ ಗುತ್ಯಪ್ಪರು ಪೋನ್ ಮಾಡಿ ನಮ್ಮನ್ನು ಗುರುತಿಸಿ ಮಾತನಾಡಿಸಲು ಬಂದರು. ಅಷ್ಟರಲ್ಲಿ ದೇವಸ್ಥಾನದಿಂದ ಬಸ್ಸು ಬಂತು. ನಾಳೇ ಭುವನಗಿರಿಯಲ್ಲಿ ಭೇಟಿಯಾಗೋಣ ಎಂದು ಗುತ್ಯಪ್ಪರಿಗೆ ವಿಶ್ ಮಾಡಿ ಶಿರಸಿ ಬಸ್ಸು ಹತ್ತಿದವು. ಗೊರೂರು ಅನಂತರಾಜು, ಹಾಸನ.
“ಐತಿಹಾಸಿಕ ಬನವಾಸಿ ಮಧುಕೇಶ್ವರ ದೇವಸ್ಥಾನಕ್ಕೆ ಭೇಟಿ”ಗೊರೂರು ಅನಂತರಾಜು Read Post »
ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ
ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಸವ ಭಕ್ತ ಲಿಂಗಾಯತ ಧರ್ಮದ ಪ್ರಚಾರಕ ಚಿಂತಕ ಸಾಹಿತಿ ಹರ್ಡೇಕರ ಮಂಜಪ್ಪನವರ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ. ಹರ್ಡೇಕರ ಮಂಜಪ್ಪನವರು ಕರ್ನಾಟಕದ ಸಾಮಾಜಿಕ, ಪತ್ರಿಕೋದ್ಯಮ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು. ಕೌಟುಂಬಿಕ ಹಿನ್ನಲೆ ಮತ್ತು ಶಿಕ್ಷಣ 1886ರ ಫೆಬ್ರುವರಿ 18 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಡ ಕುಟುಂಬ ಒಂದರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತನು. ಮಂಜಪ್ಪನವರು ಕಲಿತಿದ್ದು ಕೇವಲ ಕನ್ನಡ, 7ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. 1903ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. 1905 ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ಪತ್ರಿಕಾ ಜೀವನ ಮಂಜಪ್ಪನವರು ಅಂದಿನ ರಾಷ್ಟ್ರೀಯತೆ ವಾತಾವರಣದಿಂದ ಪ್ರಭಾವಿತರಾಗಿ ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟರು. ಇವರ ಅಣ್ಣನೂ ಸಹ ತಮ್ಮ ಕೆಲಸವನ್ನು ಬಿಟ್ಟುಬಿಟ್ಟರು. ಇವರಿಬ್ಬರೂ ಜೊತೆಯಾಗಿ 1906ರ ಸೆಪ್ಟಂಬರದಲ್ಲಿ “ಧನುರ್ಧಾರಿ” ಎನ್ನುವ ಪತ್ರಿಕೆಯನ್ನು ದಾವಣಗೆರೆಯಿಂದ ಪ್ರಕಟಿಸತೊಡಗಿದರು. ಈ ಪತ್ರಿಕೆಯು ಲೋಕಮಾನ್ಯ ತಿಲಕರು ಮಹಾರಾಷ್ಟ್ರದಲ್ಲಿ ಹೊರಡಿಸುತ್ತಿದ್ದ ಮರಾಠಿ ಪತ್ರಿಕೆ ಕೇಸರಿಯ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುತ್ತಿತ್ತು. ಪತ್ರಿಕೆಯ ಉಗ್ರಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆ ಹೆಚ್ಚಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿ ಪತ್ರಿಕೆಯನ್ನು ಮತ್ತೆ ಪ್ರಾರಂಭಿಸಿದರು. ಆದರೆ 1915ರಲ್ಲಿ ಧನುರ್ಧಾರಿ ಮತ್ತೆ ನಿಂತುಹೋಯಿತು. ಸತ್ಯಾಗ್ರಹ ಆಶ್ರಮ ಕಟ್ಟಿದರು _____________________ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಭಕ್ತರಾದ ಶ್ರೀ ಹರ್ಡೇಕರ ಮಂಜಪ್ಪನವರು ಅವರಿಂದ ಲಿಂಗ ದೀಕ್ಷೆಯನ್ನು ಪಡೆದರು. ಮುಂದೆ ವಿಜಯಪುರದ ಶ್ರೀ ಬಂಥನಾಳ ಸಂಗನಬಸವ ಸ್ವಾಮಿಗಳ ಆಜ್ಞೆಯಂತೆ ಅವರಿಂದ ಜಂಗಮ ದೀಕ್ಷೆ ಪಡೆದರು. ರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು 1910ರಲ್ಲಿ ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು. 1914ರಲ್ಲಿ ತಿಲಕರನ್ನು ಭೆಟ್ಟಿಯಾದರು. 1920 ಅಗಸ್ಟದಲ್ಲಿ ಖಾದಿವ್ರತ ಕೈಗೊಂಡರು. ಹರಿಹರ ರೇಲ್ವೆ ಸ್ಟೇಶನ್ದಿಂದ 5 ಕಿ.ಮಿ. ದೂರದಲ್ಲಿ, ತುಂಗಭದ್ರಾ ನದಿಯ ದಂಡೆಯ ಮೇಲೆ ಬಾಳಪ್ಪ ಎನ್ನುವ ತಮ್ಮ ಗೆಳೆಯರ ಭೂಮಿಯಲ್ಲಿ ಒಂದು ಆಶ್ರಮ ಕಟ್ಟಿಸಿಕೊಂಡರು. ಅದಕ್ಕೆ “ಸತ್ಯಾಗ್ರಹ ಆಶ್ರಮ” ಎಂದು ಹೆಸರಿಡಲಾಯಿತು. 1923 ರಲ್ಲಿ ಈ ಆಶ್ರಮವನ್ನು ಪ್ರವೇಶಿಸಿದರು. 1924ರಲ್ಲಿ ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಬಸವೇಶ್ವರ ಸೇವಾದಳ ಎನ್ನುವ ಸ್ವಯಂಸೇವಕರ ಸಂಘಟನೆಯನ್ನು ರಚಿಸಿ ಅಧಿವೇಶನದ ಯಶಸ್ಸಿಗೆ ಕಾರಣರಾದರು. ಮಹಾತ್ಮಾ ಗಾಂಧಿಯವರಿಗೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮಣ ರಾವ್ ಬೀಡೆ ಅವರ ಸತ್ಯಾಗ್ರಹಿ ಬಸವೇಶ್ವರ ಎಂಬ ಪುಸ್ತಕವನ್ನು ಮಹಾತ್ಮಾ ಗಾಂಧಿ ಅವರ ಓದಿಗೆ ತಲುಪಿಸಿದರು. ವಿಧಾಯಕ ಯೋಜನೆಗಳು 1925 ರಲ್ಲಿ ಮಂಜಪ್ಪನವರ ತಾಯಿ ತೀರಿಕೊಂಡರು. ಆಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿದರು. ಗ್ರಾಮೋದ್ಧಾರದ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಿದರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. ನೈತಿಕ ಪ್ರಚಾರ ಮಾಡಿದರು. 1927 ರ ಮೇ 13ರಂದು ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿದ್ಯಾಲಯದಲ್ಲಿ ಕೇವಲ ಔಪಚಾರಿಕ ಶಿಕ್ಷಣವನ್ನಲ್ಲದೆ , ಜೀವನ ಶಿಕ್ಷಣ ಎನ್ನುವ ಹೆಸರಿನಲ್ಲಿ ಕೈಕಸಬುಗಳನ್ನೂ ಸಹ ಕಲಿಸಲಾಗುತ್ತಿತ್ತು. ಗಾಂಧೀಜಿಯವರೂ ಸಹ ಆನಂತರದ ತಮ್ಮ ಶಿಕ್ಷಣಪದ್ಧತಿಯಲ್ಲಿ ಇಂತಹದೆ ನಯಿ ತಾಲೀಮ ಎನ್ನುವ ವಿಧಾನವನ್ನು ಅಳವಡಿಸಿಕೊಂಡರು. 1930 ರಲ್ಲಿ ಮಂಜಪ್ಪನವರು “ಉದ್ಯೋಗ” ಎನ್ನುವ ಮಾಸಪತ್ರಿಕೆಯನ್ನು ಹಾಗು ಮಕ್ಕಳ ಸಾಹಿತ್ಯಮಾಲೆಯನ್ನು ಪ್ರಾರಂಭಿಸಿದರು. 1931ರಲ್ಲಿ ಶರಣಸಂದೇಶ ಎನ್ನುವ ಮಾಸಪತ್ರಿಕೆಯನ್ನು ಹೊರಡಿಸತೊಡಗಿದರು. 1924 ರಲ್ಲಿ ಮತ್ತು 1934 ರಾಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆಗಿನ ಸುತ್ತಾಟದಲ್ಲಿ ಪಾಲ್ಗೊಂಡರು. 1946ರಲ್ಲಿ ಮಂಜಪ್ಪನವರು ಪ್ರಗತಿ ಗ್ರಂಥಮಾಲೆಯನ್ನು ಪ್ರಾರಂಭಿಸಿದರು. ನಿಧನ 1947 ಜನೆವರಿ 3 ರಂದು ಹರ್ಡೇಕರ ಮಂಜಪ್ಪನವರು ನಿಧನರಾದರು. ಸಾಹಿತ್ಯ ಹರ್ಡೀಕರ ಮಂಜಪ್ಪನವರು ಅನೇಕ ಲೇಖನಗಳನ್ನು ಹಾಗು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂತಿವೆ: ಸ್ವಕರ್ತವ್ಯ ಸಿದ್ಧಾಂತ ಬುದ್ಧಿಯ ಮಾತು ವಾರದ ಮಲ್ಲಪ್ಪನವರ ಚರಿತ್ರೆ ಸ್ತ್ರೀನೀತಿ ಸಂಗ್ರಹ ಆರೋಗ್ಯ ಜೀವನ ಬುದ್ಧ ಚರಿತ್ರೆ ಗಾಂಧೀ ಚರಿತ್ರೆ ರಾಮತೀರ್ಥರ ಉಪನ್ಯಾಸ ಭಾರತೀಯರ ದೇಶಭಕ್ತಿ ಬಸವ ಚರಿತ್ರೆ ಆಧುನಿಕ ಜರ್ಮನಿ ವೀರಶೈವ ಸಮಾಜ ಸುಧಾರಣೆ ಕೇರ ಹಾರ್ಡಿ ಖಾದಿ ಬ್ರಹ್ಮಚರ್ಯ ಅಹಿಂಸೆ ಸತ್ಯಾಗ್ರಹ ಧರ್ಮ ಬಸವ ಬೋಧಾಮೃತ ಸುಬೋಧಸಾರ ಎಚ್ಚತ್ತ ಹಿಂದುಸ್ಥಾನ “ಕಳೆದ ನನ್ನ 30 ವರ್ಷಗಳ ಕಾಣಿಕೆ” 1936 ರಲ್ಲಿ ಪ್ರಕಟವಾದ ಇದು ಹರ್ಡೀಕರ ಮಂಜಪ್ಪನವರ ಆತ್ಮ ಚರಿತ್ರೆಯಾಗಿದೆ ಮತ್ತು ಕನ್ನಡದ ಮೊದಲ ಆತ್ಮ ಚರಿತ್ರೆ ಎಂದು ದಾಖಲೆಯಾಗಿದೆ. ಕರ್ನಾಟಕ ನಾಡು ನುಡಿ ಸಂಸ್ಕೃತಿಗಾಗಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಪ್ರಸಾರಕ್ಕಾಗಿ ಬಸವ ಜಯಂತಿಯನ್ನು ಮೊಟ್ಟ ಮೊದಲು ಆರಂಭಿಸಿದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಹರ್ಡೇಕರ್ ಮಂಜಪ್ಪನವರು ನಾಡು ದೇಶ ಕಂಡ ಅಪರೂಪದ ಶಿವಯೋಗ ಸಾಧಕರು. ಇಂತಹ ದಿವ್ಯ ಚೇತನಕ್ಕೆ ನೂರು ನೂರು ನಮನಗಳು. _________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ
“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್ ಗೌಡ ಪಾಟೀಲ್
ಜೀವನ ಸಂಗಾತಿ “ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್ ಗೌಡ ಪಾಟೀಲ್ ಮಕ್ಕಳು…..ತಾಯಿಯ ಪ್ರತಿಬಿಂಬ ಬದುಕಿನಲ್ಲಿ ಈ ವಿಷಯವನ್ನು ಎಂದೂ ಮರೆಯಬಾರದು. ಯಾವುದನ್ನು ನೀವು ನಿಮ್ಮ ಸ್ವಂತ ತಾಯಿಗೆ ಬದುಕಿನಲ್ಲಿ ಕೊಡಲು ಸಾಧ್ಯವಿಲ್ಲವೋ ಅದನ್ನು ನೀವು ಕೂಡ ಪಡೆಯಲು ಸಾಧ್ಯವಿಲ್ಲ. ನಿಮ್ಮ ತಾಯಿಯೊಂದಿಗೆ ನೀವು ವರ್ತಿಸುವ ರೀತಿಯಲ್ಲಿ ಬದುಕು ನಿಮ್ಮೊಂದಿಗೆ ವರ್ತಿಸುತ್ತದೆ. ನಿಮ್ಮನ್ನು ಪ್ರೀತಿಸಿದ ಮೊದಲ ಹೃದಯ ನಿಮ್ಮ ತಾಯಿಯದಾಗಿರುತ್ತದೆ. ತಾಯಿಯ ಪ್ರೀತಿ ಶರತ್ತುಗಳನ್ನು ಹೊಂದಿರುವುದಿಲ್ಲ ಆದ್ದರಿಂದ ಎಂದಿಗೂ ನಿಮ್ಮ ತಾಯಿಯನ್ನು ಎಂದೂ ನಿರ್ಣಯಾತ್ಮಕವಾಗಿ ನೋಡಬೇಡಿ.ನಿಮ್ಮ ತಾಯಿ ಬದುಕಿನ ಎಂತೆಂತಹ ಯುದ್ಧಗಳಲ್ಲಿ ಹೋರಾಡಿರುವಳು ಎಂಬುದರ ಅರಿವು ನಿಮಗಿಲ್ಲ. ಆಕೆ ಮೌನವಾಗಿ ಸಹಿಸಿದ ನೋವುಗಳ ಕುರಿತು ನಿಮಗೆ ಗೊತ್ತಿಲ್ಲ. ತನ್ನ ಗಂಟಲುಬ್ಬಿಸುವ ನೋವನ್ನು ನುಂಗಿ ಕಣ್ಣೀರನ್ನು ಅಲ್ಲಿಯೇ ಇಂಗಿಸಿ ಕಿರುನಗೆ ನಕ್ಕ ಆಕೆಯ ನಗುವಿನ ಹಿಂದಿನ ಆಳವಾದ ಸತ್ಯದ ಅರಿವು ನಿಮಗಿಲ್ಲ.ಆರದ ಅದೆಷ್ಟೋ ಗಾಯಗಳು ಆಕೆಯ ಮನದಲ್ಲಿ ವಾಸವಾಗಿವೆ ಎಂಬುದರ ಅರಿವು ನಿಮಗೆ ಇಲ್ಲ.ಆಕೆಯ ಯೌವನವೆಲ್ಲ ತನ್ನ ಪತಿಯ ಬೇಕು ಬೇಡಗಳಿಗೆ ಸ್ಪಂದಿಸುತ್ತಾ ಮಕ್ಕಳ ಅಗತ್ಯಗಳನ್ನು ಪೂರೈಸುತ್ತಾ ಸಾಗಿರುತ್ತದೆ.ಮಕ್ಕಳ ಭವಿಷ್ಯವನ್ನು ರೂಪಿಸಲು ಅತ್ಯಗತ್ಯವಾದ ಆರೋಗ್ಯ, ಸಂಸ್ಕಾರ, ಶಿಕ್ಷಣ, ದೈನಂದಿನ ಅವಶ್ಯಕತೆಗಳನ್ನು ಪೂರೈಸುತ್ತಾ ತನಗೂ ಕೂಡ ತನ್ನದೇ ಆದ ಬದುಕಿದೆ ಎಂಬುದನ್ನು ಆಕೆ ಮರೆತುಬಿಟ್ಟಿರುತ್ತಾಳೆ.ಯೌವನದ ದಿನಗಳನ್ನು ಆಕೆ ಭಯ, ನಿರಾಶೆ ಮತ್ತು ಆರ್ಥಿಕ ತೊಂದರೆಗಳಿಂದ ಕಳೆದಿರುತ್ತಾಳೆ. ಹೆಣ್ಣೆಂಬ ಒಂದೇ ಕಾರಣಕ್ಕೆ ಆಕೆಯನ್ನು ಯಾರೂ ಅಷ್ಟಾಗಿ ಅರ್ಥ ಮಾಡಿಕೊಳ್ಳುವುದಿಲ್ಲ. ಆಕೆಯ ಮನದಾಳದ ಮಾತಿಗೆ ಕಿವಿಯಾಗುವುದಿಲ್ಲ ಆಕೆಯನ್ನು ಪೋಷಿಸುತ್ತಾರೆಯೇ ಹೊರತು ಆಕೆಯ ಭಾವನೆಗಳನ್ನು ಲಕ್ಷಿಸುವುದಿಲ್ಲ…. ಎಲ್ಲವನ್ನು ಮಾಡಿಯೂ ಕೂಡ ಆಕೆ ಏನನ್ನೂ ಬಯಸದೇ ಹೋದರೂ ಆಕೆಯನ್ನು ಪರಿಗಣಿಸುವುದೇ ಇಲ್ಲ. ನಿಮ್ಮ ಹುಟ್ಟಿನಿಂದ ಹಿಡಿದು ತಾನು ನಿಮ್ಮೊಂದಿಗೆ ಇರುವ ಹಾಗೂ ಬದುಕಿರುವ ಪ್ರತಿ ಕ್ಷಣವು ನಿಮ್ಮ ಮನದ ಮಾತುಗಳಿಗೆ ಆಸೆಗಳಿಗೆ ಆಕಾಂಕ್ಷೆಗಳಿಗೆಕಿವಿಗೊಡುವ, ಅದಕ್ಕಾಗಿ ಹೋರಾಡುವವರು ತಾಯಿ.,ಬದುಕಿನ ಹೋರಾಟದ ಎಲ್ಲಾ ಕಷ್ಟಗಳಿಗೆ ಗುರಾಣಿಯಂತೆ ನಿಮ್ಮನ್ನು ರಕ್ಷಿಸಿ ಬೆಳೆಸುವ ಆಕೆಗೆ ತನ್ನದೇ ಆದ ವೈಯಕ್ತಿಕ ಸುಖ ಸಂತೋಷಗಳು ಇಲ್ಲವೇ ಇಲ್ಲ ಎಂದಲ್ಲ… ಆದರೆ ಅವೆಲ್ಲವೂ ನಿಮ್ಮನ್ನು ಕಾಳಜಿ ಮಾಡುವ ಆಕೆಗೆ ಕುಟುಂಬದ ಸಂತಸದಲ್ಲಿಯೇ ಸಾರ್ಥಕತೆಯನ್ನು ಕಾಣುವ ಆಕೆಯ ವಿಶಾಲ ಹೃದಯದ ಮೂಲೆಯಲ್ಲಿ ಅಡಗಿ ಕುಳಿತಿರುತ್ತವೆ.ಆದ್ದರಿಂದ ನಿಮ್ಮ ತಾಯಿಯೊಂದಿಗೆ ಮಾತನಾಡಿ… ಆಕೆಯ ಮಾತುಗಳಿಗೆ ಕಿವಿಯಾಗಿ ಬದುಕಿನಲ್ಲಿ ಆಕೆ ಅನುಭವಿಸಿದ ನೋವು ಯಾತನೆಗಳನ್ನು ಆಕೆಯ ಮಾತುಗಳಲ್ಲಿ ಆಲಿಸಿ.ತಾಯಿಯ ಕುರಿತಾದ ಭಾವನಾತ್ಮಕ ಮಾತುಗಳನ್ನು ಮುಂದಿನ ದಿನಕ್ಕಾಗಿ ಉಳಿಸಿಕೊಳ್ಳದಿರಿ. ನಿಮ್ಮ ತಾಯಿಯ ತಾಳ್ಮೆ, ಸಹನೆ, ಸಿಟ್ಟು, ಸೆಡವು, ಅದ್ವಿತೀಯ ಕಾರ್ಯವೈಖರಿಯನ್ನು ಪ್ರಶಂಶಿಸುವುದಾದರೆ ಅದು ಇಂದೇ ಆಗಲಿ…ಯಾರಿಗೆ ಗೊತ್ತು ಮುಂದೊಂದು ದಿನ ನೀವು ಅದನ್ನೆಲ್ಲಾ ಹೇಳುವ ಹೊತ್ತಿಗೆ ಆಕೆಯೇ ಇಲ್ಲವಾಗಿರಬಹುದು…. ಇದ್ದಾಗ ಸಿಗದ ಗೌರವವನ್ನು ಸತ್ತ ಮೇಲೆ ಪಡೆಯುವುದರಲ್ಲಿ ಯಾವ ಪುರುಷಾರ್ಥವಿದೆ…. ನೀವೇ ಹೇಳಿ.ಬಹುಶಹ ಆಕೆಯ ಕಂಗಳಲ್ಲಿ ಇಡೀ ಜಗತ್ತಿನ ಸುಖ ಸೌಲಭ್ಯಗಳು ತಕ್ಕಡಿಯ ಒಂದು ತಟ್ಟೆಯಲ್ಲಿ ತೂಗಿದರೆ ನಿಮ್ಮ ಒಂದು ಅಕ್ಕರೆಯ, ಕಾಳಜಿಯ ಮಾತು ಮತ್ತೊಂದು ತಟ್ಟೆಯಲ್ಲಿ ತೂಗುತ್ತದೆನಿಮ್ಮ ತಾಯಿಯ ಕುರಿತಾದ ನಿಮ್ಮ ಪ್ರೀತಿ ಮತ್ತು ಗೌರವ ನಿಮಗೆ ಆಶೀರ್ವಾದವಾಗಿ ಮರಳಿ ದೊರೆಯುತ್ತದೆ. ಬಹುಶಹ ನಿಮ್ಮಿಂದ ಆಕೆ ನಿರೀಕ್ಷಿಸುವುದು ಕೂಡ ಅದನ್ನೇ. ಮುಂದಿನ ಬದುಕಿನಲ್ಲಿ ನೀವು ಆಕೆಗೆ ಈ ಎಲ್ಲವನ್ನು ಕೊಡಲಿ ಎಂದೇನೂ ಆಕೆ ಇದೆಲ್ಲವನ್ನು ಮಾಡಿರುವುದಿಲ್ಲ ನಿಜ. ಮಕ್ಕಳಾಗಿ ನಿಮ್ಮನ್ನು ಹಾಗೆ ಬೆಳೆಸುವುದು ತನ್ನ ಕರ್ತವ್ಯ ಎಂದು ಆಕೆ ಭಾವಿಸಿದ್ದರೆ ಅದು ಆಕೆಯ ತಪ್ಪಲ್ಲ…. ಆದರೆ ಆಕೆ ನಿಮಗೆ ಕೊಡ ಮಾಡುವ ಪ್ರೀತಿ, ಅಕ್ಕರೆ, ಕಾಳಜಿ, ಕಠಿಣತೆ, ಶಿಸ್ತುಗಳು ನಿಮ್ಮನ್ನು ನೀವು ಈಗಿರುವ ವ್ಯಕ್ತಿಯಾಗಿ ರೂಪಿಸುವಲ್ಲಿ ತನ್ನದೇ ಆದ ಪಾತ್ರವನ್ನು ವಹಿಸಿರುತ್ತದೆ.ಆಕೆಯ ಪ್ರೀತಿ, ಮಮತೆಗಳು ನಿಮ್ಮನ್ನು ಆರೋಗ್ಯಕರ ಕೌಟುಂಬಿಕ ವ್ಯಕ್ತಿಯನ್ನಾಗಿ ಬೆಳೆಸಿದರೆ ಕಠಿಣತೆಯ ಮುಖವಾಡವನ್ನು ಹೊಂದಿರುವ ಶಿಸ್ತು ಪಾಲನೆಯು ನಿಮ್ಮನ್ನು ಓರ್ವ ಸಭ್ಯ ಹಾಗೂ ಕ್ರಿಯಾಶೀಲ ವ್ಯಕ್ತಿಯನ್ನಾಗಿ ರೂಪಿಸಿರುತ್ತದೆ. ಆಕೆ ನಿಮಗೆ ತೋರುವ ಕಾಳಜಿಪೂರ್ವಕ ನಡವಳಿಕೆ ನಿಮ್ಮನ್ನು ಓರ್ವ ಸಾಮಾಜಿಕ ವ್ಯಕ್ತಿಯನ್ನಾಗಿ ರೂಪಿಸಿದರೆ ಆಕೆಯ ಧಾರ್ಮಿಕ ನಂಬಿಕೆಗಳು ನಿಮ್ಮಲ್ಲಿ ಓರ್ವ ಆಶಾವಾದಿಯನ್ನು, ಭರವಸೆಯ ನಾಯಕನನ್ನು ಸೃಷ್ಟಿಸುತ್ತವೆಆದ್ದರಿಂದ ಮಕ್ಕಳೇ…. ತಾಯಿಯ ಕುರಿತು ನಿಷ್ಕಾಳಜಿ ಬೇಡ ಆಕೆ ಭೌತಿಕವಾಗಿ ಇರಲಿ ಅಥವಾ ಇಲ್ಲದೇ ಇರಲಿ ಆಕೆಯ ಆಶೀರ್ವಾದ ಶಾಂತಿಯಾಗಿ ನಿಮ್ಮನ್ನು ಆವರಿಸುತ್ತದೆ. ಆಂತರಿಕ ಶಕ್ತಿಯಾಗಿ ನಿಮ್ಮಲ್ಲಿ ತುಂಬಿಕೊಂಡು ನಿಮ್ಮನ್ನು ಗಟ್ಟಿಯಾಗಿಸುತ್ತದೆನಿಮಗೆ ಕೇವಲ ಒಬ್ಬ ತಾಯಿ ಮಾತ್ರ ದೊರೆಯುತ್ತಾಳೆ ಹಾಗೂ ಆಕೆಗೆ ನೀವು ಏನನ್ನು ಕೊಡುವಿರೋ ಅದನ್ನೇ ನೀವು ಬದುಕಿನಲ್ಲಿ ಪಡೆಯುವಿರಿ ಎಂಬುದನ್ನು ನೆನಪಿಟ್ಟುಕೊಂಡು ಬದುಕಿನಲ್ಲಿ ತಾಯಿಯನ್ನು ಪ್ರೀತಿಸಿ ಗೌರವಿಸಿ ಆರಾಧಿಸಿ…… ತಾಯಿ ಅದಕ್ಕೂ ಹೆಚ್ಚಿನದನ್ನು ನಿಮ್ಮಿಂದ ನಿರೀಕ್ಷಿಸುವುದಿಲ್ಲ. ಏನಂತೀರಾ ಸ್ನೇಹಿತರೇ?? ವೀಣಾ ಹೇಮಂತ್ ಗೌಡ ಪಾಟೀಲ್
“ಮಕ್ಕಳು…..ತಾಯಿಯ ಪ್ರತಿಬಿಂಬ” ವೀಣಾ ಹೇಮಂತ್ ಗೌಡ ಪಾಟೀಲ್ Read Post »
ಧಾರಾವಾಹಿ ಸಂಗಾತಿ-13 ಅರ್ಜುನ ಉವಾಚ ವಿಶ್ವನಾಥ ಎನ್ ನೇರಳೆಕಟ್ಟೆ ಕದನಾಂತರಂಗದಲ್ಲಿ ಅನಲ ನರ್ತನ ಕದನಾಂತರಂಗದಲ್ಲಿ ಅನಲ ನರ್ತನ ಪ್ರವೀರನೆಂಬ ವೀರ ಮೇಧಾಶ್ವವನ್ನು ಕಟ್ಟಿಹಾಕಿದ್ದಾನೆ ಎಂಬ ಸುದ್ದಿಯನ್ನು ನನ್ನಲ್ಲಿಗೆ ಹೊತ್ತುತಂದರು ಕುದುರೆಯ ಮೈಗಾವಲಿಗಿದ್ದ ಭಟರು. ಗೆಲ್ಲುವ ಸಾಮರ್ಥ್ಯವಿದ್ದರೆ ಆ ಪಾರ್ಥ ನನ್ನೆದುರು ಯುದ್ಧಕ್ಕೆ ಬರಲಿ ಎಂದಿದ್ದನಂತೆ ಪ್ರವೀರ. ನಗುವೂ ಬಂತು. ಕೋಪವೂ ಉಕ್ಕಿತು. ಇಂತಹ ಸಾಕಷ್ಟು ಯುದ್ಧಗಳನ್ನು ಕಾಣುವುದಕ್ಕಿದೆ ಮುಂದೆ ಎಂದು ಸಾಮರ್ಥ್ಯವನ್ನು ಮುಂದುಮಾಡಿಕೊಂಡೇ ಬಂದವ ನಾನು. ಹಾಗಿರುವಾಗ ಆ ಪ್ರವೀರ ಗೆಲ್ಲುವ ಸಾಮರ್ಥ್ಯ ಇದ್ದರೆ ಎಂಬ ಮಾತನ್ನು ಆಡಿದನಲ್ಲಾ ಎಂಬ ಯೋಚನೆ ನಗುವನ್ನು ಮೂಡಿಸಿತು. ಪಾಂಡವವೀರರಿಗೆ ಸೇರಿದ ಅಶ್ವವಿದು ಎಂದು ಅರಿವಾದ ಬಳಿಕವೂ ಶರಣು ಬರದೆ ಕುದುರೆಯನ್ನು ಕಟ್ಟುವ ಭಂಡಧೈರ್ಯ ತೋರಿದನಲ್ಲಾ ಎಂದು ಕೋಪ ಬಂತು. ಸೈನಿಕರನ್ನೆಲ್ಲಾ ಸನ್ನದ್ಧಗೊಳಿಸಿದೆ. ಚತುರಂಗ ಬಲಗಳೂ ಬಲಪಡೆದು ನಿಂತವು. ಮಾಹಿಷ್ಮತಿ ನಗರದ ಮೇಲೆ ಧಾಳಿಯಿರಿಸಿದೆವು. ಮೇಧಾಶ್ವವನ್ನು ಬಿಡಿಸಿಕೊಳ್ಳಬೇಕೆಂಬ ಉತ್ಸುಕತೆಯಲ್ಲಿದ್ದ ನಮ್ಮ ಕಡೆಯ ಸೈನಿಕರಲ್ಲಿ ಅಶ್ವಸದೃಶ ಶಕ್ತಿ ನೆಲೆಗೊಂಡಿತ್ತು. ನಮ್ಮ ಧಾಳಿಯ ಬಿರುಸಿಗೆ ಧೂಳೆದ್ದಿತು. ಜೊತೆಗೆ ವಾದ್ಯಗಳ ಆರ್ಭಟ. ಪ್ರವಾಹವೇ ಬಂತೇನೋ ಎನ್ನುವಂತೆ ಬೆದರಿದರು ಮಾಹಿಷ್ಮತಿ ಪಟ್ಟಣದ ಜನರು. ಉಕ್ಕಿದ ಕಡಲಿನ ಬಗೆಯಲ್ಲಿ, ಪ್ರಳಯ ಕಾಲದ ಕಾರ್ಮೋಡದ ತೆರದಲ್ಲಿ ಹೋಗಿ ಮುತ್ತಿದೆವು ಕುದುರೆಯನ್ನು ವಶಪಡಿಸಿಕೊಂಡಿದ್ದ ವೀರ ಪ್ರವೀರನನ್ನು. ಹುಚ್ಚು ಧೈರ್ಯ ಅವನದು ಎಂದುಕೊಂಡಿದ್ದೆ ಮೊದಲಿಗೆ, ಅವನು ಕುದುರೆಯನ್ನು ಕಟ್ಟಿಹಾಕಿದ ವಿಚಾರ ಕೇಳಿದಾಗ. ಆದರೆ ಈಗ ಸೇನೆಸಹಿತ ಅವನನ್ನು ಸುತ್ತುವರಿದಾಗ ಅವನ ನಿಜ ಪರಾಕ್ರಮ ನನ್ನರಿವಿಗೆ ಬಂತು. ನನ್ನನ್ನು ಕಂಡೊಡನೆಯೇ ರಥವನ್ನು ಭರದಿಂದ ಓಡಿಸಿಯಾನು ಎಂಬ ಅಂದಾಜು ನನ್ನದು. ಆದರೆ ಅವನು ಚಲಿಸದೆಯೇ ನಿಂತ. ಕೆಲವೊಮ್ಮೆ ಹಾಗೆಯೇ. ಏನು ಮಾಡಬೇಕೆಂದು ತೋಚದಾದಾಗಲೂ ಶರೀರಕ್ಕೊಂದು ಸ್ಥಿರತೆ ಒದಗುತ್ತದೆ. ಅಂತಹದ್ದೇ ಸ್ಥಿರತೆ ಆಗಿರಬೇಕಿದು ಎಂದುಕೊಂಡೆ. ಅಲ್ಲ! ನಿಜಬಗೆಯ ದಿಟ್ಟತನದಲ್ಲಿ ರಥದಲ್ಲಿಯೇ ಕುಳಿತಿದ್ದ ಪ್ರವೀರ. ವೀರರು ಸುತ್ತುವರಿದಾಗಲೂ ಅಂಜದೆ ಅಳುಕದೆ ತೇರಿನಲ್ಲಿ ಕುಳಿತಿದ್ದ ಅವನ ಆ ನಿಲುವು ಪರಮ ವೈರಾಗಿಯನ್ನು ನೆನಪಿಸುವಂತಿತ್ತು. ಯುದ್ಧದ ಅಂತಿಮ ಪರಿಣಾಮವನ್ನು ಮನಗಂಡ ತತ್ವಜ್ಞಾನಿಯಂತೆ ಕುಳಿತಿದ್ದನಾತ. ಏಕಾಂಗಿಯಾಗಿ ಹೋರಾಟಕ್ಕಿಳಿದ ಆತ ನಮ್ಮ ಸೈನಿಕರನ್ನೆಲ್ಲಾ ಸತತ ಬಾಣಪ್ರಯೋಗಗಳಿಂದ ಕೊಂದುಹಾಕಿದ. ಸತ್ವಯುತನಿವನು ಎನ್ನುವುದು ನನಗೆ ಖಚಿತವಾಯಿತು. ಹೀಗಿದ್ದಾಗಲೇ ನೀಲಧ್ವಜ ಸೇನೆಸಹಿತನಾಗಿ ನಮ್ಮನ್ನು ಎದುರಿಸುವುದಕ್ಕೆ ಬಂದ. ಒಂಟಿಯಾಗಿ ಹೋರಾಡುತ್ತಿದ್ದ ಪ್ರವೀರನಿಗೆ ಸಮಸ್ತ ಬಲವದು ದೊರಕಿದಂತಾಯಿತು. ಅವರ ಶಕ್ತಿಯುತವಾದ ಹೋರಾಟ ನಮ್ಮ ಸೇನೆಯನ್ನು ಕಳೆಗುಂದಿಸಿತು. ಸೇನೆಯ ಮುಂಚೂಣಿಯಲ್ಲಿದ್ದ ನಾನು ನಾಯಕತ್ವವನ್ನು ಸರಿಯಾಗಿ ನಿಭಾಯಿಸಲಾಗದೆ ಎಡವಿದೆ ಎಂಬ ಭಾವ ನನ್ನನ್ನು ಆವರಿಸಿತು. ನನ್ನ ಅಂತರಂಗದೊಳಗೆ ಯಾರೋ ಬೆಂಕಿ ಹಚ್ಚಿದ ಅನುಭವ. ಮೊದಲ ಯುದ್ಧದಲ್ಲಿಯೇ ಹೀಗಾದರೆ ಇನ್ನುಳಿದ ಕದನಗಳ ಗತಿಯೇನು ಎಂಬ ಯೋಚನೆ ಬಂತು. ಅಣ್ಣ ಧರ್ಮಜ ನನ್ನ ಮೇಲಿಟ್ಟಿರುವ ನಂಬಿಕೆಯನ್ನು ಉಳಿಸಿಕೊಳ್ಳದವನಾದೆನೇ ಎಂಬ ಅಳುಕು ಮೂಡಿತು. ಬಗೆಬಗೆಯ ಭಾವಗಳ ನೆಲೆವೀಡಾಗಿಹೋದ ನನ್ನ ಚಿತ್ತ ಯುದ್ಧದತ್ತ ಏಕಾಗ್ರವಾಗಲೇ ಇಲ್ಲ. ಸೋಲುತ್ತೇನೆ ಎಂಬ ಭಾವ ದೃಢವಾದಾಗಲೇ ‘ಇಲ್ಲ! ಏನೆಂದರೂ ಬಿಡಲಾರೆ’ ಎಂಬ ಛಲ ನಮ್ಮಲ್ಲಿ ಮೂಡುವುದು. ಯುದ್ಧದಲ್ಲಿಯೂ ಹೀಗೆಯೇ. ಬದುಕಿನಲ್ಲಿಯೂ ಹೀಗೆಯೇ. ಎದುರಿಗಿದ್ದ ಮಾಹಿಷ್ಮತಿ ಸೇನೆ ನನ್ನ ಪಾಲಿಗೆ ಒಗಟಿನಂತಾಗಿತ್ತು. ಬಿಡಿಸುತ್ತೇನೆ ಈ ಒಗಟನ್ನು ಕುದುರೆಯನ್ನು ಬಿಡಿಸುವುದಕ್ಕೋಸ್ಕರ ಎಂದುಕೊAಡೆ. ಕೋಪಾತಿರೇಕದ ಆ ಅವಸ್ಥೆಯಲ್ಲಿ ಬಿಲ್ಲಿಗೆ ಕೈಯ್ಯಿಕ್ಕಿದೆ. ಹೆದೆಯನ್ನು ಮಿಡಿದೆ. ಎದ್ದ ನಾದ ಮಾಹಿಷ್ಮತಿ ಸೇನೆಯನ್ನು ಯಮಪುರಿಗಟ್ಟುವ ಮರಣಶ್ರುತಿಯಾಯಿತು. ಮಳೆಗಾಲದ ಕೊನೆಕೊನೆಯಲ್ಲಿ ಹಠಹಿಡಿದು ಸುರಿವ ಮಳೆಯಂತೆ ಅಬ್ಬರಿಸಿದೆ. ನೀಲಧ್ವಜನ ಸೇನೆಯದು ದಿಕ್ಕೆಟ್ಟುಹೋಯಿತು. ಕಂಗೆಟ್ಟ ನೀಲಧ್ವಜ ಹೋಗಿ ಸಹಾಯ ಕೇಳಿದ್ದು ಅಗ್ನಿಯಲ್ಲಿ. ಅನಲ ನೀಲಧ್ವಜನ ಅಳಿಯ. ಅವನ ಮಗಳನ್ನು ಮದುವೆಯಾದವನು. ಮಾಹಿಷ್ಮತಿ ಪಟ್ಟಣದಲ್ಲಿಯೇ ನೆಲೆಸಿದ್ದವನು. ಮಾವನ ಕೋರಿಕೆಗೆ ಬೆಲೆಯಿತ್ತ ಅಗ್ನಿ, ನಮ್ಮಿಡೀ ಸೈನ್ಯವನ್ನು ಕರುಣೆಯಿಲ್ಲದೆಯೇ ದಹಿಸತೊಡಗಿದ. ಅನಲನ ಕೆನ್ನರ್ತನ ನಮ್ಮ ಕಡೆಯ ಸೈನಿಕರನ್ನು ಕಪ್ಪಗಾಗಿಸಿತು. ಅವನ ಚಲನೆ ನಮ್ಮವರನ್ನು ಅಚಲರಾಗಿಸಿತು. ಅವನ ತೇಜಸ್ಸು ಹೆಚ್ಚಿದಂತೆ ನಮ್ಮವರೆಲ್ಲಾ ತೇಜಶೂನ್ಯರಾದರು. ದೆಸೆದೆಸೆಗಳಲ್ಲಿ ಭೀಕರವಾದ ಹೊಗೆ. ದಿಕ್ಕುದಿಕ್ಕುಗಳಲ್ಲಿ ಅನಲ ಜ್ವಾಲೆ. ಯಾರಲ್ಲಿಯೂ ಭೇದ ತೋರದೆ ಎಲ್ಲರನ್ನೂ ಆಹುತಿಗೊಳ್ಳತೊಡಗಿದ ಅನಲ. ನನ್ನಲ್ಲಿ ಅತೀವ ಆತಂಕ ಮನೆಮಾಡಿತು. ಅಗ್ನಿಯ ಶಕ್ತಿಯೇನೆಂಬುದರ ಅರಿವಿತ್ತು ನನಗೆ. ಅವನ ಸಾಮರ್ಥ್ಯವನ್ನು ನಾನು ಕಂಡದ್ದು ಇದೇ ಮೊದಲೇನಲ್ಲ. ಅಂದು ಖಾಂಡವ ವನವನ್ನು ದಹಿಸಿದ ಅವನ ಉರಿಹಸಿವಿನ ತೀಕ್ಷ್ಣತೆಯನ್ನು ಸಾಮಿಪ್ಯದಿಂದ ದರ್ಶಿಸಿದವ ನಾನು. ಹಾಗಿರುವಾಗ ಅಗ್ನಿಯ ಈ ಬಗೆ ಹೀಗೆಯೇ ಮುಂದುವರಿದರೆ ಅಶ್ವಮೇಧದ ನೆಪದಲ್ಲಿ ಬಂದ ನಾವೆಲ್ಲರೂ ಅಗ್ನಿಯೊಡಲಿಗೆ ಮೇಧಾಶ್ವಗಳಾಗುವುದು ಖಚಿತ ಎನಿಸಿತು ನನಗೆ. ಶಕ್ತಿಯಿಂದ ಗೆಲ್ಲಲಾಗದ್ದನ್ನು ಯುಕ್ತಿಯಿಂದ ಗೆಲ್ಲಬೇಕು. ಇದು ಲೋಕರೂಢಿ. ಜಗದ ನಿಯಮ. ನುಡಿಯಿಂದ ಅನಲನನ್ನು ಮೆಚ್ಚಿಸಿ ಅವನನ್ನು ತೃಪ್ತಗೊಳಿಸುವ ತಂತ್ರ ಹೂಡಿದೆ. “ನೀನೇನೂ ನನಗೆ ಅಪರಿಚಿತನಲ್ಲ. ನಾನು ಗಾಂಡೀವಿ ಎನಿಸಿಕೊಳ್ಳಲು ಕಾರಣವಾದ ಗಾಂಡೀವ ಧನುಸ್ಸು ದೊರೆತದ್ದೇ ನಿನ್ನಿಂದ. ನನ್ನ ಮಡದಿ ದ್ರೌಪದಿ ನಿನ್ನಿಂದಲೇ ಉದಿಸಿಬಂದವಳು” ಎಂದೆಲ್ಲಾ ಹೇಳಿ ನನಗೂ ಅವನಿಗೂ ಇರುವ ಬಾಂಧವ್ಯದ ನೆನಪು ಮಾಡಿದೆ. ವೇದವ್ಯಾಸ ಮುನಿಗಳು ಹೇಳಿದ್ದಕ್ಕಾಗಿ, ಶ್ರೀಕೃಷ್ಣ ಸೂಚನೆ ಇತ್ತದ್ದಕ್ಕಾಗಿ ಈ ಯಾಗ; ಈ ಯುದ್ಧ. ಇಲ್ಲವಾದರೆ ಇದೆಲ್ಲಾ ಬೇಕಿರಲಿಲ್ಲ ಎಂದೆ. ಅಗ್ನಿ ತಂಪಾದ. ದಹಿಸುವುದನ್ನು ನಿಲ್ಲಿಸಿದ. ನನ್ನ ಮಾತಿನಲ್ಲಿದ್ದ ದೈನ್ಯತೆ ಅವನನ್ನು ದಯಾಪರನನ್ನಾಗಿಸಿತು. ಮಗಳನಿತ್ತ ಮಾವನಾದ ನೀಲಧ್ವಜನಲ್ಲಿ ಯುದ್ಧ ನಿಲ್ಲಿಸುವಂತೆ ಸೂಚಿಸಿದ. ಅಳಿಯ ಅಗ್ನಿಯ ಮಾತನ್ನು ಅಂಗೀಕರಿಸಿದ ನೀಲಧ್ವಜ. ಯುದ್ಧ ನಿಂತಿತು ಎಂದು ನಾನು ನಿರಾಳತೆ ಹೊಂದುವಷ್ಟರಲ್ಲಿ ನನ್ನನ್ನು ಮತ್ತೆ ಚಿಂತೆಗೀಡುಮಾಡುವ ಸುದ್ದಿಯೊಂದು ಬಂದು ತಲುಪಿತು… ಡಾ. ವಿಶ್ವನಾಥ ಎನ್ ನೇರಳಕಟ್ಟೆ
“ವಿಜಯನಗರದ ರಾಣಿಯರು” ಡಾ.ತಾರಾ ಬಿ.ಎನ್. ಧಾರವಾಡ
ಇತಿಹಾಸ ಸಂಗಾತಿ ಡಾ.ತಾರಾ ಬಿ.ಎನ್. ಧಾರವಾಡ “ವಿಜಯನಗರದ ರಾಣಿಯರು” 1 ಪೀಠಿಕೆ ವಿಜಯನಗರ ಸಾಮ್ರಾಜ್ಯ (ಕ್ರಿ.ಶ. 1336–1646) ದಕ್ಷಿಣ ಭಾರತದ ರಾಜಕೀಯ, ಸಾಂಸ್ಕೃತಿಕ ಹಾಗೂ ಆರ್ಥಿಕ ಇತಿಹಾಸದಲ್ಲಿ ಮಹತ್ವದ ಸ್ಥಾನ ಪಡೆದಿದೆ. ಹರಿಹರ ಮತ್ತು ಬುಕ್ಕರಾಯರು ಸ್ಥಾಪಿಸಿದ ಈ ಸಾಮ್ರಾಜ್ಯವು ಸಂಗಮ, ಸಾಲುವ, ತುಳು ಮತ್ತು ಅರವೀಡು ವಂಶಗಳ ಮೂಲಕ ಸುಮಾರು ಮೂರು ಶತಮಾನಗಳ ಕಾಲ ಆಳಿತು. ಸಾಮಾನ್ಯವಾಗಿ ರಾಜರ ಸಾಧನೆಗಳು, ಯುದ್ಧಗಳು ಮತ್ತು ಆಡಳಿತ ವ್ಯವಸ್ಥೆ ಕುರಿತಂತೆ ಹೆಚ್ಚಿನ ಅಧ್ಯಯನಗಳು ನಡೆದಿದ್ದರೂ, ವಿಜಯನಗರದ ರಾಣಿಯರ ಪಾತ್ರವೂ ಸಮಾನ ,ಗಮನಾರ್ಹವಾಗಿದೆ.ರಾಣಿಯರು ಕೇವಲ ರಾಜರ ಸಹಚರಲ್ಲ; ಅವರು ಧಾರ್ಮಿಕ ದಾನಿಗಳು, ಸಾಂಸ್ಕೃತಿಕ ಪ್ರೋತ್ಸಾಹಕರು, ಸಾಹಿತ್ಯ ಸೃಷ್ಟಿಕರ್ತರು ಮತ್ತು ಕೆಲ ಸಂದರ್ಭಗಳಲ್ಲಿ ಆಡಳಿತಾತ್ಮಕ ನಿರ್ಣಯಗಳಲ್ಲಿ ಪಾಲ್ಗೊಂಡವರಾಗಿದ್ದರು. ಶಾಸನಗಳು, ವಿದೇಶಿ ಪ್ರವಾಸಿಗರ ವರ್ಣನೆಗಳು ಮತ್ತು ಸಾಹಿತ್ಯಕೃತಿಗಳು ರಾಣಿಯರ ಪ್ರಭಾವವನ್ನು ಸ್ಪಷ್ಟಪಡಿಸುತ್ತವೆ.1. ಗಂಗಾದೇವಿ :- ಕುಮಾರ ಕಂಪಣನ ಪತ್ನಿ. ಪ್ರಸಿದ್ಧ ಕೃತಿ “ಮಧುರಾ ವಿಜಯಂ” ರಚಿಸಿದರು. ಈ ಕಾವ್ಯದಲ್ಲಿ ಮದುರೈ ಮೇಲೆ ವಿಜಯನಗರದ ವಿಜಯವನ್ನು ವರ್ಣಿಸಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ಮಹಿಳೆಯರ ಕೊಡುಗೆಯನ್ನು ಹೆಚ್ಚಿಸಿದರು. ಗಂಗಾದೇವಿ ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ರಾಣಿ ಹಾಗೂ ಕವಿ. ಅವರು ಕುಮಾರಕಂಪಣನ ಪತ್ನಿಯಾಗಿದ್ದರು. ಗಂಗಾದೇವಿಯ ಅತ್ಯಂತ ಪ್ರಸಿದ್ಧ ಕೃತಿ “ಮಧುರಾ ವಿಜಯಂ” (ಅಥವಾ ವೀರಕಂಪಣರಾಯ ಚರಿತೆ). ಈ ಕೃತಿಯಲ್ಲಿ ಅವರು ತಮ್ಮ ಪತಿಯ ಮದುರೈ ವಿಜಯವನ್ನು ವಿವರಿಸಿದ್ದಾರೆ. ಈ ಕಾವ್ಯವು ಕೇವಲ ಸಾಹಿತ್ಯಕೃತಿಯಷ್ಟೇ ಅಲ್ಲ; ಅದು ಇತಿಹಾಸದ ಮಹತ್ವದ ದಾಖಲೆ ಕೂಡ ಆಗಿದೆ. ಸಂಸ್ಕೃತದಲ್ಲಿ ರಚಿಸಲಾದ ಈ ಕೃತಿ ವಿಜಯನಗರ ಸಾಮ್ರಾಜ್ಯದ ರಾಜಕೀಯ ಮತ್ತು ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಬಿಸುತ್ತದೆ. ಮಹಿಳೆಯೊಬ್ಬಳು ಆ ಕಾಲದಲ್ಲಿ ಇಂತಹ ಮಹಾಕಾವ್ಯವನ್ನು ರಚಿಸಿರುವುದು ಮಹಿಳಾ ಶಿಕ್ಷಣ ಮತ್ತು ಬೌದ್ಧಿಕ ಶಕ್ತಿಯ ಸಾಕ್ಷಿಯಾಗಿದೆ.2. ತಿರುಮಲಾ ದೇವಿ :- ಶ್ರೀಕೃಷ್ಣದೇವರಾಯರ ಪ್ರಮುಖ ರಾಣಿ. ಧಾರ್ಮಿಕ ಕಾರ್ಯಗಳಲ್ಲಿ ಸಕ್ರಿಯರಾಗಿದ್ದರು. ದೇವಾಲಯಗಳ ನಿರ್ಮಾಣ ಮತ್ತು ದೇಣಿಗೆಗಳಲ್ಲಿ ಪಾಲ್ಗೊಂಡರು. ರಾಜಕೀಯ ಕಾರ್ಯಗಳಲ್ಲಿ ರಾಜನಿಗೆ ಬೆಂಬಲ ನೀಡಿದರು. ತಿರುಮಲದೇವಿ ಶ್ರೀಕೃಷ್ಣದೇವರಾಯರ ಪ್ರಮುಖ ರಾಣಿಯರಲ್ಲಿ ಒಬ್ಬರು. ಅವರು ಧಾರ್ಮಿಕ ಕಾರ್ಯಗಳಲ್ಲಿ, ದಾನಧರ್ಮಗಳಲ್ಲಿ ಮತ್ತು ದೇವಾಲಯಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸಿದರು. ತಿರುಮಲದೇವಿ ತಿರುಪತಿ ಹಾಗೂ ಇತರ ಪವಿತ್ರ ಕ್ಷೇತ್ರಗಳಿಗೆ ದೇಣಿಗೆಗಳನ್ನು ನೀಡಿದ್ದು ಶಾಸನಗಳಲ್ಲಿ ದಾಖಲಾಗಿದೆ. ಅವರು ರಾಜಕೀಯ ವಿಚಾರಗಳಲ್ಲಿಯೂ ರಾಜನಿಗೆ ಸಲಹೆಗಾರ್ತಿಯಾಗಿ ನೆರವಾದರು ಎಂಬ ಉಲ್ಲೇಖಗಳು ದೊರೆಯುತ್ತವೆ. ಅವರ ಪ್ರಭಾವದಿಂದ ಅರಮನೆಯಲ್ಲಿ ಸಂಸ್ಕೃತಿ, ಸಂಗೀತ ಮತ್ತು ಕಲೆಗಳಿಗೆ ಉತ್ತೇಜನ ದೊರೆಯಿತು.ಇತರ ವಿಜಯನಗರ ರಾಣಿಯರಾದ ಚಿನ್ನದೇವಿ, ಅಬ್ಬಕ್ಕದೇವಿ ಮುಂತಾದವರು ಸಹ ಧೈರ್ಯ, ಆಡಳಿತಪಾಟು ಮತ್ತು ಧಾರ್ಮಿಕ ಭಕ್ತಿಯ ಮೂಲಕ ಹೆಸರುವಾಸಿಯಾಗಿದ್ದರು. ರಾಣಿಯರು ದೇವಾಲಯಗಳ ನಿರ್ಮಾಣ, ಅನ್ನಸತ್ರಗಳ ಸ್ಥಾಪನೆ, ಬ್ರಾಹ್ಮಣರಿಗೆ ಹಾಗೂ ಪಂಡಿತರಿಗೆ ದಾನ ನೀಡುವ ಮೂಲಕ ಸಮಾಜದ ಕಲ್ಯಾಣಕ್ಕೆ ಸಹಕರಿಸಿದರು. ಕೆಲವರು ಯುದ್ಧಕಾಲದಲ್ಲಿ ರಾಜರಿಗೆ ಬೆಂಬಲವಾಗಿ ನಿಂತರು ಹಾಗೂ ಸಾಮ್ರಾಜ್ಯದ ಏಕತೆಯನ್ನು ಕಾಪಾಡಲು ನೆರವಾದರು.ಒಟ್ಟಿನಲ್ಲಿ ವಿಜಯನಗರ ರಾಣಿಯರು ಸಾಹಿತ್ಯ, ಧರ್ಮ, ಕಲೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಮ್ಮದೇ ಆದ ಗುರುತು ಮೂಡಿಸಿದರು. ಅವರು ಮಹಿಳೆಯರು ಕೇವಲ ಕುಟುಂಬದ ಪಾತ್ರದಲ್ಲೇ ಸೀಮಿತರಲ್ಲ; ಸಮಾಜ ನಿರ್ಮಾಣದಲ್ಲಿ ಪ್ರಮುಖ ಶಕ್ತಿ ಎಂಬುದನ್ನು ಸಾಬೀತುಪಡಿಸಿದರು. ಅವರ ಸಾಧನೆಗಳು ಇಂದಿಗೂ ಇತಿಹಾಸದಲ್ಲಿ ಸ್ಮರಣೀಯವಾಗಿವೆ.3. ಚಿತ್ತಾದೇವಿ (ಚಿನ್ನದೇವಿ) :- ಶ್ರೀಕೃಷ್ಣದೇವರಾಯರ ಮತ್ತೊಬ್ಬ ರಾಣಿ. ಕಲಾ ಮತ್ತು ಸಂಗೀತಕ್ಕೆ ಪ್ರೋತ್ಸಾಹ ನೀಡಿದರು. ಹಲವಾರು ದಾನಧರ್ಮ ಕಾರ್ಯಗಳನ್ನು ನೆರವೇರಿಸಿದರು. ಚಿನ್ನದೇವಿ ಶ್ರೀಕೃಷ್ಣದೇವರಾಯರ ಮತ್ತೊಬ್ಬ ಪ್ರಮುಖ ರಾಣಿ. ಅವರು ದೇವಾಲಯಗಳಿಗೆ ಭೂದಾನ, ಆಭರಣ, ನಗದು ದೇಣಿಗೆಗಳನ್ನು ನೀಡಿದ ಬಗ್ಗೆ ಶಾಸನಗಳಲ್ಲಿ ಉಲ್ಲೇಖವಿದೆ. ತಿರುಪತಿ, ಕಂಚಿಪುರಂ ಮತ್ತು ಹಂಪಿಯ ದೇವಾಲಯಗಳ ಅಭಿವೃದ್ಧಿಗೆ ಅವರು ಸಹಕರಿಸಿದರು. ಧಾರ್ಮಿಕ ಆಚರಣೆಗಳು ಸರಿಯಾಗಿ ನಡೆಯುವಂತೆ ಆರ್ಥಿಕ ನೆರವು ನೀಡುವುದು ಅವರ ಪ್ರಮುಖ ಕಾರ್ಯವಾಗಿತ್ತು.4. ಅಬ್ಬಕ್ಕ ದೇವಿ (ಉಲ್ಲಾಳ ರಾಣಿ ಅಬ್ಬಕ್ಕ) :- ವಿಜಯನಗರ ಸಾಮ್ರಾಜ್ಯದ ಅಧೀನದಲ್ಲಿದ್ದ ಉಲ್ಲಾಳದ ರಾಣಿ. ಪೋರ್ಟುಗೀಸ್ರ ವಿರುದ್ಧ ಧೈರ್ಯವಾಗಿ ಹೋರಾಡಿದರು. ಸ್ವಾತಂತ್ರ್ಯ ಮತ್ತು ದೇಶಭಕ್ತಿಯ ಪ್ರತೀಕವಾಗಿ ಪರಿಗಣಿಸಲ್ಪಟ್ಟಿದ್ದಾರೆ.5. ವರದಾಂಬಿಕೆ :- ಅಚ್ಯುತದೇವರಾಯರ ರಾಣಿ. ಧಾರ್ಮಿಕ ಕಾರ್ಯಗಳು ಮತ್ತು ದೇಣಿಗೆಗಳಲ್ಲಿ ಪಾಲ್ಗೊಂಡರು. ಕೆಲ ಶಾಸನಗಳಲ್ಲಿ ಅವರ ಹೆಸರು ಉಲ್ಲೇಖವಾಗಿದೆ. ವರದಾಂಬಿಕಾ (Varadambika) ವರದಾಂಬಿಕಾ ಅಚ್ಯುತದೇವರಾಯರ ರಾಣಿ ಎಂದು ಇತಿಹಾಸದಲ್ಲಿ ಉಲ್ಲೇಖಿಸಲಾಗಿದೆ. ಅಚ್ಯುತದೇವರಾಯರು ಶ್ರೀಕೃಷ್ಣದೇವರಾಯರ ನಂತರ ವಿಜಯನಗರ ಸಿಂಹಾಸನಾರೂಢರಾದರು. ಅವರ ಕಾಲದಲ್ಲಿ ಸಾಮ್ರಾಜ್ಯವು ಆಂತರಿಕ ರಾಜಕೀಯ ಸವಾಲುಗಳನ್ನು ಎದುರಿಸುತ್ತಿತ್ತು. ಇಂತಹ ಸಂದರ್ಭದಲ್ಲಿ ವರದಾಂಬಿಕಾ ಅರಮನೆಯಲ್ಲಿ ಪ್ರಭಾವಶಾಲಿ ವ್ಯಕ್ತಿತ್ವವಾಗಿದ್ದರು. ಶಾಸನಗಳ ಪ್ರಕಾರ, ವರದಾಂಬಿಕಾ ದೇವಾಲಯಗಳಿಗೆ ದಾನ ನೀಡಿದ್ದು, ಧಾರ್ಮಿಕ ಆಚರಣೆಗಳನ್ನು ಉತ್ತೇಜಿಸಿದರು. ಅವರು ತಿರುಪತಿ ಹಾಗೂ ಇತರ ಪ್ರಮುಖ ಕ್ಷೇತ್ರಗಳಿಗೆ ಭೂಮಿ, ಹಣ ಮತ್ತು ಆಭರಣಗಳನ್ನು ಸಮರ್ಪಿಸಿದರೆಂದು ಉಲ್ಲೇಖಗಳಿವೆ. ಧಾರ್ಮಿಕ ಕಾರ್ಯಗಳ ಮೂಲಕ ಅವರು ರಾಜಮನೆತನದ ಭಕ್ತಿಭಾವವನ್ನು ವ್ಯಕ್ತಪಡಿಸಿದರು ಮತ್ತು ಜನರಲ್ಲಿ ವಿಶ್ವಾಸವನ್ನು ಬೆಳೆಸಿದರು. ವರದಾಂಬಿಕಾ ರಾಜಕೀಯವಾಗಿ ಕೂಡ ಪ್ರಭಾವ ಬೀರಿದ್ದರೆಂದು ಇತಿಹಾಸಕಾರರು ಅಭಿಪ್ರಾಯಪಡುತ್ತಾರೆ. ರಾಜನಿಗೆ ಸಲಹೆ ನೀಡುವುದು, ಅರಮನೆ ವ್ಯವಹಾರಗಳನ್ನು ಸಮನ್ವಯಗೊಳಿಸುವುದು ಮತ್ತು ರಾಜಕುಮಾರರ ಶಿಕ್ಷಣದಲ್ಲಿ ಆಸಕ್ತಿ ತೋರಿರುವುದು ಅವರ ಪಾತ್ರವನ್ನು ತೋರಿಸುತ್ತದೆ. ಅವರ ನಡೆನುಡಿಗಳು ಸಾಮ್ರಾಜ್ಯದ ಆಂತರಿಕ ಶಾಂತಿಯನ್ನು ಕಾಪಾಡಲು ನೆರವಾದವು.6. ವಿತ್ತಲಾದೇವಿ (Vittaladevi / Vithalambika) :- ವಿತ್ತಲಾದೇವಿಯರು ವಿಜಯನಗರದ ಮತ್ತೊಬ್ಬ ಪ್ರಮುಖ ರಾಣಿ. ಕೆಲವು ಶಾಸನಗಳಲ್ಲಿ ಅವರನ್ನು ಅಚ್ಯುತದೇವರಾಯರ ಪತ್ನಿಯಾಗಿ ಉಲ್ಲೇಖಿಸಲಾಗಿದೆ. ವಿತ್ತಲಾದೇವಿಯರು ವಿಶೇಷವಾಗಿ ಧಾರ್ಮಿಕ ಹಾಗೂ ದಾನಧರ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಅವರು ವೈಷ್ಣವ ಸಂಪ್ರದಾಯದ ಭಕ್ತೆಯಾಗಿದ್ದು, ವಿಷ್ಣು ದೇವಾಲಯಗಳ ಅಭಿವೃದ್ಧಿಗೆ ಸಹಕರಿಸಿದರು ಎಂಬ ದಾಖಲೆಗಳಿವೆ. ದೇವಾಲಯಗಳಿಗೆ ದೇಣಿಗೆ, ಉತ್ಸವUÀ¼À£ÀÄß K¥Àðr¸ÀĪÀ°è ªÀĺÀvÀézÀ PÁAiÀÄð ªÀiÁqÀÄwÛzÀÝgÀÄ.7. ಅನ್ನಪೂರ್ಣಾದೇವಿ :- (ಕೆಲವು ಶಾಸನಗಳಲ್ಲಿ ಉಲ್ಲೇಖ) ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದರು. ಅವರು ಅನ್ನಸತ್ರಗಳ ಸ್ಥಾಪನೆ, ಯಾತ್ರಿಕರಿಗೆ ವಸತಿ ವ್ಯವಸ್ಥೆ ಮತ್ತು ಬಡವರಿಗೆ ನೆರವು ನೀಡುವಂತಹ ಕಾರ್ಯಗಳನ್ನು ನಡೆಸಿದರು. ಇದು ಸಮಾಜದಲ್ಲಿ ರಾಣಿಯರ ಕಾಳಜಿ ಮತ್ತು ಮಾನವೀಯತೆಯನ್ನು ತೋರಿಸುತ್ತದೆ. ವಿತ್ತಲಾಂಬಿಕಾ (ಅಚ್ಯುತದೇವರಾಯರ ಪತ್ನಿ ಎಂದು ಹೇಳಲಾಗುತ್ತದೆ) ಧಾರ್ಮಿಕ ಕಾರ್ಯಗಳಲ್ಲಿ ಚುರುಕಾಗಿದ್ದರು. ಅವರು ವಿವಿಧ ದೇವಾಲಯಗಳಿಗೆ ದಾನ ನೀಡಿದ ಬಗ್ಗೆ ಉಲ್ಲೇಖಗಳಿವೆ. ಅವರ ಪ್ರಭಾವದಿಂದ ವೈಷ್ಣವ ಮತ್ತು ಶೈವ ಸಂಪ್ರದಾಯಗಳಿಗೆ ಉತ್ತೇಜನ ದೊರೆಯಿತು. ಕೆಲವು ರಾಣಿಯರು ರಾಜಕೀಯ ವಿಷಯಗಳಲ್ಲಿಯೂ ಪರೋಕ್ಷವಾಗಿ ಪ್ರಭಾವ ಬೀರಿದರು. ರಾಜನಿಗೆ ಸಲಹೆ ನೀಡುವುದು, ಉತ್ತರಾಧಿಕಾರ ಪ್ರಶ್ನೆಗಳಲ್ಲಿ ಸಮತೋಲನ ಸಾಧಿಸುವುದು, ರಾಜಕುಮಾರರ ಶಿಕ್ಷಣ ಮತ್ತು ತರಬೇತಿಯಲ್ಲಿ ಗಮನಹರಿಸುವುದು ಅವರ ಹೊಣೆಗಾರಿಕೆಯಾಗಿತ್ತು. ಇದರಿಂದ ಸಾಮ್ರಾಜ್ಯದ ಸ್ಥಿರತೆ ಕಾಪಾಡಲು ಸಹಾಯವಾಯಿತು. ರಾಣಿಯರು ಕಲೆ ಮತ್ತು ಸಂಸ್ಕೃತಿಯ ಪೋಷಕರಾಗಿದ್ದರು. ಸಂಗೀತ, ನೃತ್ಯ, ಸಾಹಿತ್ಯ ಮತ್ತು ಶಿಲ್ಪಕಲೆಗೆ ಆಶ್ರಯ ನೀಡಿದರು. ಅರಮನೆಗಳಲ್ಲಿ ಪಂಡಿತರು, ಕವಿಗಳು ಮತ್ತು ಕಲಾವಿದರು ನೆಲೆಸುವಂತೆ ನೆರವು ನೀಡಿದರು. ಇದರಿಂದ ವಿಜಯನಗರವು ಸಂಸ್ಕೃತಿಯ ಕೇಂದ್ರವಾಗಿತು.ಒಟ್ಟಿನಲ್ಲಿ ತೆರೆಮರೆಯಲ್ಲಿ ಕಾರ್ಯನಿರ್ವಹಿಸಿದ ವಿಜಯನಗರದ ರಾಣಿಯರು ಸಾಮ್ರಾಜ್ಯದ ಅಭಿವೃದ್ಧಿಗೆ ಮೌನಶಕ್ತಿ ಆಗಿದ್ದರು. ಅವರ ಧಾರ್ಮಿಕ ದಾನ, ಸಾಮಾಜಿಕ ಸೇವೆ, ರಾಜಕೀಯ ಪ್ರಭಾವ ಮತ್ತು ಸಾಂಸ್ಕೃತಿಕ ಆಶ್ರಯವು ವಿಜಯನಗರ ಸಾಮ್ರಾಜ್ಯವನ್ನು ಬಲಪಡಿಸಿತು. ಅವರ ಹೆಸರುಗಳು ಹೆಚ್ಚು ಪ್ರಸಿದ್ಧಿಯಾಗದಿದ್ದರೂ, ಅವರ ಸೇವೆ ಇತಿಹಾಸದಲ್ಲಿ ಮಹತ್ವಪೂರ್ಣವಾಗಿದೆ. ಮಹತ್ವ :-ವಿಜಯನಗರದ ರಾಣಿಯರು ಕೇವಲ ಅರಮನೆಯಲ್ಲೇ ಸೀಮಿತವಾಗಿರದೆ ಸಾಹಿತ್ಯ, ಧರ್ಮ, ಕಲೆ ಮತ್ತು ಆಡಳಿತ ಕ್ಷೇತ್ರಗಳಲ್ಲಿ ತಮ್ಮ ಗುರುತು ಮೂಡಿಸಿದ್ದಾರೆ. ಅವರು ದೇವಾಲಯಗಳ ನಿರ್ಮಾಣ, ದಾನಧರ್ಮ, ಸಾಹಿತ್ಯ ರಚನೆ ಹಾಗೂ ಶತ್ರುಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದರು. ನೀವು ಬೇಕಾದರೆ ಈ ವಿಷಯವನ್ನು ಸಂಕ್ಷಿಪ್ತವಾಗಿ (5 ಅಂಕಗಳ ಉತ್ತರದಂತೆ) ಅಥವಾ ಪ್ರಬಂಧ ರೂಪದಲ್ಲಿ ಕೊಡಬಹುದು.ವಿಜಯನಗರದ ಆಡಳಿತ ವ್ಯವಸ್ಥೆ :-ವಿಜಯನಗರ ಸಾಮ್ರಾಜ್ಯದ ಆಡಳಿತವು ಕೇಂದ್ರೀಕೃತ ರಾಜತಂತ್ರವಾಗಿತ್ತು. ವಿಜಯನಗರ ಸಾಮ್ರಾಜ್ಯದ ಆಡಳಿತದಲ್ಲಿ ರಾಣಿಯರ ಪಾಲುದಾರಿಕೆ (A4 ಗಾತ್ರದ ವಿವರವಾದ ಉತ್ತರ) ವಿಜಯನಗರ ಸಾಮ್ರಾಜ್ಯವು ದಕ್ಷಿಣ ಭಾರತದ ಅತ್ಯಂತ ಶಕ್ತಿಶಾಲಿ ಮತ್ತು ಸಮೃದ್ಧ ಸಾಮ್ರಾಜ್ಯವಾಗಿತ್ತು. ಈ ಸಾಮ್ರಾಜ್ಯದ ಸ್ಥಿರತೆ ಮತ್ತು ವೈಭವಕ್ಕೆ ರಾಜರು ಮಾತ್ರವಲ್ಲದೆ ರಾಣಿಯರೂ ಮಹತ್ವದ ಕೊಡುಗೆ ನೀಡಿದ್ದಾರೆ. ರಾಣಿಯರು ನೇರವಾಗಿ ಆಡಳಿತ ಹುದ್ದೆಗಳನ್ನು ವಹಿಸದಿದ್ದರೂ, ಅವರು ಪರೋಕ್ಷವಾಗಿ ಹಾಗೂ ಕೆಲವೊಮ್ಮೆ ನೇರವಾಗಿಯೂ ಆಡಳಿತ ವ್ಯವಸ್ಥೆಯಲ್ಲಿ ಪಾಲ್ಗೊಂಡಿದ್ದರು. ಅವರ ಪಾತ್ರ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ.1. ರಾಜಕೀಯ ಸಲಹೆಗಾರ್ತಿಯರಾಗಿ :-ರಾಣಿಯರು ರಾಜನಿಗೆ ವಿಶ್ವಾಸಾರ್ಹ ಸಲಹೆಗಾರ್ತಿಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅರಮನೆಯ ಒಳರಾಜಕೀಯ, ಉತ್ತರಾಧಿಕಾರ ಪ್ರಶ್ನೆಗಳು ಮತ್ತು ಮಹತ್ವದ ನಿರ್ಧಾರಗಳ ಸಮಯದಲ್ಲಿ ರಾಣಿಯರ ಅಭಿಪ್ರಾಯಗಳಿಗೆ ಮಹತ್ವ ನೀಡಲಾಗುತ್ತಿತ್ತು. ವಿಶೇಷವಾಗಿ ಅಚ್ಯುತದೇವರಾಯರು ಮತ್ತು ಶ್ರೀಕೃಷ್ಣದೇವರಾಯರ ಕಾಲದಲ್ಲಿ ರಾಣಿಯರ ಪ್ರಭಾವ ಅರಮನೆ ವ್ಯವಹಾರಗಳಲ್ಲಿ ಕಾಣಿಸಿಕೊಂಡಿತ್ತು. ಇದು ಸಾಮ್ರಾಜ್ಯದ ಆಂತರಿಕ ಸ್ಥಿರತೆಗೆ ನೆರವಾಯಿತು.2. ಧಾರ್ಮಿಕ ಮತ್ತು ದೇವಾಲಯ ಆಡಳಿತ :-ವಿಜಯನಗರ ಆಡಳಿತದಲ್ಲಿ ದೇವಾಲಯಗಳು ಆರ್ಥಿಕ ಹಾಗೂ ಸಾಮಾಜಿಕ ಕೇಂದ್ರಗಳಾಗಿದ್ದವು. ಅನೇಕ ರಾಣಿಯರು ದೇವಾಲಯಗಳಿಗೆ ಭೂದಾನ, ಹಣ ಮತ್ತು ಆಭರಣಗಳನ್ನು ನೀಡುವುದರ ಮೂಲಕ ಅವುಗಳ ನಿರ್ವಹಣೆಯಲ್ಲಿ ಪಾಲ್ಗೊಂಡಿದ್ದರು. ದೇವಾಲಯಗಳ ಉತ್ಸವಗಳು, ಪೂಜೆಗಳು ಮತ್ತು ಅನ್ನಸತ್ರಗಳ ವ್ಯವಸ್ಥೆಗಾಗಿ ಅವರು ಆರ್ಥಿಕ ನೆರವು ಒದಗಿಸುತ್ತಿದ್ದರು. ಈ ಮೂಲಕ ಧಾರ್ಮಿಕ ಸಂಸ್ಥೆಗಳ ಆಡಳಿತದಲ್ಲಿ ರಾಣಿಯರು ಪ್ರಮುಖ ಪಾತ್ರವಹಿಸಿದರು.3. ಆರ್ಥಿಕ ವ್ಯವಹಾರಗಳಲ್ಲಿ ಪಾಲ್ಗೊಳ್ಳಿಕೆ :-ಶಾಸನಗಳ ಪ್ರಕಾರ, ಕೆಲ ರಾಣಿಯರು ತಮ್ಮ ಹೆಸರಿನಲ್ಲಿ ಭೂಮಿಗಳನ್ನು ಹೊಂದಿದ್ದು, ಆ ಭೂಮಿಗಳ ಆದಾಯವನ್ನು ಧಾರ್ಮಿಕ ಹಾಗೂ ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದರು. ಇದು ಅವರಿಗೆ ಆರ್ಥಿಕ ಸ್ವಾಯತ್ತತೆ ಇತ್ತೆಂಬುದನ್ನು ತೋರಿಸುತ್ತದೆ. ಅವರ ದಾನಧರ್ಮಗಳು ಸಾಮ್ರಾಜ್ಯದ ಆರ್ಥಿಕ ವ್ಯವಸ್ಥೆಯ ಒಂದು ಭಾಗವಾಗಿದ್ದವು.ವಿಜಯನಗರದಲ್ಲಿ ಮಹಿಳೆಯರ ಸ್ಥಾನಮಾನ :-ವಿದೇಶಿ ಪ್ರವಾಸಿಗರ ವರದಿಗಳು ವಿಜಯನಗರದಲ್ಲಿ ಮಹಿಳೆಯರಿಗೆ ಉತ್ತಮ ಸ್ಥಾನಮಾನವಿದ್ದುದನ್ನು ಸೂಚಿಸುತ್ತವೆ. ಅಬ್ದುರ್ ರಜ್ಜಾಕ್ (1440ರ ದಶಕ) ಅವರು ವಿಜಯನಗರದ ಅರಮನೆಗಳಲ್ಲಿ ಮಹಿಳೆಯರು ಆಡಳಿತ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದರೆಂದು ಉಲ್ಲೇಖಿಸಿದ್ದಾರೆ. ಡೊಮಿಂಗೊ ಪೈಸ್ ಮತ್ತು ಫರ್ನಾಂ ನುನಿಜ್ (16ನೇ ಶತಮಾನ) ಶ್ರೀಕೃಷ್ಣದೇವರಾಯರ ಕಾಲದ ವರ್ಣನೆಗಳಲ್ಲಿ ರಾಣಿಯರ ಧಾರ್ಮಿಕ ಮತ್ತು ರಾಜಕೀಯ ಪಾತ್ರ ಮಹತ್ವದ್ದಾಗಿದೆ, ರಾಣಿಯರ ಆಡಳಿತಾತ್ಮಕ ಪಾತ್ರ ªÀĺÀvÀézÁÝVzÉ. ಧಾರ್ಮಿಕ ದಾನ, ದೇವಾಲಯ ನಿರ್ಮಾಣ, ಬ್ರಾಹ್ಮಣರಿಗೆ ಭೂದಾನ, ಹಬ್ಬಗಳ ಆಯೋಜನೆ, ಆರ್ಥಿಕ ಪ್ರಭಾವ, ರಾಣಿಯರು ಸ್ವಂತ ಆಸ್ತಿ ಹೊಂದಿದ್ದು, ಅದನ್ನು ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಿಗೆ ಬಳಸುತ್ತಿದ್ದರು. ರಾಜಕೀಯ ಸಲಹೆಗಾರರು ಕೆಲ ಸಂದರ್ಭಗಳಲ್ಲಿ ರಾಜರ ನಿರ್ಣಯಗಳಲ್ಲಿ ರಾಣಿಯರ ಪ್ರಭಾವವಿತ್ತು. ಶಾಸನಾಧಾರಿತ ಸಾಕ್ಷ್ಯಗಳು ವಿಜಯನಗರ ಕಾಲದ ಹಲವಾರು ಶಾಸನಗಳಲ್ಲಿ ರಾಣಿಯರ ಹೆಸರುಗಳಿವೆ: ತಿರುಮಲಾದೇವಿಯ ದಾನಶಾಸನಗಳು. ದೇವಾಲಯಗಳಿಗೆ ನೀಡಿದ ಭೂದಾನ ದಾಖಲೆಗಳು.ರಾಜಮಾತೆಯರ ಉಲ್ಲೇಖಗಳು.(Epigraphia Indica; Epigraphia Carnatica)ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆಸಂಗೀತ ಮತ್ತು ನೃತ್ಯ ಪ್ರೋತ್ಸಾಹ.ದೇವಾಲಯ ಶಿಲ್ಪಕಲೆ ಬೆಂಬಲ.Burton Stein (1989) ವಿಜಯನಗರವನ್ನು “Temple-centered polity” ಎಂದು ವರ್ಣಿಸಿದ್ದು, ರಾಣಿಯರ ಪಾತ್ರವನ್ನು ಇದರಲ್ಲಿ ಮುಖ್ಯವೆಂದು ಸೂಚಿಸುತ್ತಾರೆ. ವಿಜಯನಗರದ ಪತನ ಮತ್ತು ಮಹಿಳೆಯರ ಸ್ಥಿತಿ 1565ರ ತಾಳಿಕೋಟೆ ಯುದ್ಧದ ನಂತರ ರಾಜ ಕುಟುಂಬದ ಮಹಿಳೆಯರು ಸಂಕಷ್ಟ ಅನುಭವಿಸಿದರು. ಕೆಲವು ಅರಮನೆ ಮಹಿಳೆಯರು ಪ್ರಾಂತ್ಯಗಳಿಗೆ ಸ್ಥಳಾಂತರಗೊಂಡರು (Sewell, 1900). ಸಮಗ್ರ ವಿಶ್ಲೇಷಣೆ ವಿಜಯನಗರದ ರಾಣಿಯರು: ನೇರ ಆಡಳಿತ ಕಡಿಮೆ ನಡೆಸಿದರೂ, ಪರೋಕ್ಷ ರಾಜಕೀಯ ಪ್ರಭಾವ ಹೆಚ್ಚು ಹೊಂದಿದ್ದರು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವಹಿಸಿದರು. ಶಾಸನಗಳು ಅವರ ಆರ್ಥಿಕ ಸ್ವಾಯತ್ತತೆಯನ್ನು ಸೂಚಿಸುತ್ತವೆ.ಉಪಸಂಹಾರ :-ವಿಜಯನಗರ ಸಾಮ್ರಾಜ್ಯದ ಇತಿಹಾಸದಲ್ಲಿ ರಾಣಿಯರ ಪಾತ್ರವು
“ವಿಜಯನಗರದ ರಾಣಿಯರು” ಡಾ.ತಾರಾ ಬಿ.ಎನ್. ಧಾರವಾಡ Read Post »
“ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು”ಡಾ. ಮಲ್ಲಿನಾಥ ಎಸ್. ತಳವಾರ
ಸ್ಥಳ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು” ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು “If you don’t know where you are, you don’t know who you are.”— Wendell Berry ‘ವೈಶಿಷ್ಟ್ಯ’ ಎಂಬ ಪದವು ಕೇವಲ ವಿಶೇಷತೆ ಎನ್ನುವ ಅರ್ಥವನ್ನಷ್ಟೇ ಹೊಂದಿಲ್ಲ; ಇದು ಒಂದು ಸ್ಥಳದ ಆತ್ಮ, ಅದರ ಇತಿಹಾಸದ ಧ್ವನಿ, ಸಂಸ್ಕೃತಿಯ ಸ್ಪಂದನೆ ಮತ್ತು ಜನಜೀವನದ ವೈವಿಧ್ಯಮಯ ರೂಪಗಳ ಒಕ್ಕೂಟವಾಗಿದೆ. ಒಂದು ಪ್ರದೇಶವನ್ನು ಇತರ ಪ್ರದೇಶಗಳಿಂದ ವಿಭಿನ್ನವಾಗಿ ಗುರುತಿಸುವ ಸ್ವಭಾವ, ಪರಂಪರೆ, ಸಾಧನೆಗಳು ಮತ್ತು ಜೀವನಪದ್ಧತಿಗಳ ಸಮಗ್ರ ರೂಪವೇ ಅದರ ವೈಶಿಷ್ಟ್ಯ. ಪ್ರತಿ ಭೂಭಾಗಕ್ಕೂ ತನ್ನದೇ ಆದ ಪ್ರಕೃತಿ ರಚನೆ, ಐತಿಹಾಸಿಕ ಪಾದಚಿಹ್ನೆಗಳು, ಧಾರ್ಮಿಕ ನಂಬಿಕೆಗಳು, ಭಾಷಾ-ಸಾಹಿತ್ಯ ಪರಂಪರೆ, ಜನಪದ ಆಚರಣೆಗಳು ಹಾಗೂ ಆರ್ಥಿಕ-ಸಾಮಾಜಿಕ ಜೀವನದ ರೂಪರೇಖೆಗಳಿವೆ. ಇವುಗಳ ಸಮನ್ವಯದಿಂದ ಆ ಪ್ರದೇಶದ ರೂಪುರೇಷೆ ನಿರ್ಮಾಣವಾಗುತ್ತದೆ. ಅದನ್ನು ಸ್ಪಷ್ಟವಾಗಿ ಗುರುತಿಸುವ ಲಕ್ಷಣಗಳೇ ವೈಶಿಷ್ಟ್ಯಗಳು. ವೈಶಿಷ್ಟ್ಯವು ಕೇವಲ ಭೌಗೋಳಿಕ ಅಥವಾ ಐತಿಹಾಸಿಕ ಅಂಶಗಳಿಗೆ ಮಾತ್ರ ಸೀಮಿತವಾಗಿರುವುದಿಲ್ಲ; ಇದು ಮಾನವ ಸಂಬಂಧಗಳ ಉಷ್ಣತೆಯಲ್ಲಿ, ಆಚರಣೆಗಳ ಸರಳತೆಯಲ್ಲಿ, ನಂಬಿಕೆಗಳ ಆಳದಲ್ಲಿ ಮತ್ತು ಸೃಜನಶೀಲತೆಯ ಸ್ಪಂದನದಲ್ಲಿ ವ್ಯಕ್ತವಾಗುತ್ತದೆ. ಒಂದು ಸ್ಥಳದ ವೈಶಿಷ್ಟ್ಯವನ್ನು ಅರಿತುಕೊಳ್ಳುವುದು ಎಂದರೆ ಅದರ ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ಸಂಧಿಬಿಂದುಗಳನ್ನು ಅರಿಯುವುದಾಗಿದೆ. ಈ ಹಿನ್ನೆಲೆಯಲ್ಲಿ “ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು” ಎಂಬುದನ್ನು ಪರಿಗಣಿಸಿದಾಗ, ಇದು ಕೇವಲ ಸ್ಥಳೀಯ ಮಾಹಿತಿ ಸಂಗ್ರಹವಲ್ಲ; ಬದಲಿಗೆ ಚಿತ್ತಾಪುರದ ಭೌಗೋಳಿಕ ರೂಪರೇಖೆ, ಐತಿಹಾಸಿಕ ಪರಂಪರೆ, ಧಾರ್ಮಿಕ ಸೌಹಾರ್ದತೆ, ಸಾಹಿತ್ಯಿಕ ಚೈತನ್ಯ ಮತ್ತು ಜನಪದ ಸಂಸ್ಕೃತಿಯ ಅನನ್ಯತೆಗಳನ್ನು ಪರಿಚಯಿಸುವ ಪ್ರಯತ್ನವಾಗಿದೆ. ಒಂದು ಸ್ಥಳದ ಹೆಸರಿನಲ್ಲಿ ಅದರ ಇತಿಹಾಸ ಮಾತ್ರವಲ್ಲ, ಅಲ್ಲಿಯ ಜನರ ಮನೋಭಾವ, ಧಾರ್ಮಿಕ ನಂಬಿಕೆಗಳು, ಜೀವನ ವಿಧಾನ ಮತ್ತು ತಾತ್ವಿಕ ಚಿಂತನೆಗಳು ಅಡಗಿರುತ್ತವೆ. “ಚಿತ್ತಾಪುರ”ವು ಕರ್ನಾಟಕದ ಕಲಬುರಗಿ ಜಿಲ್ಲೆಯಲ್ಲಿರುವ ಒಂದು ಐತಿಹಾಸಿಕ ತಾಲೂಕು. ಇದನ್ನು ‘ಚಿತ್ತಾಪೂರ’ ಎಂತಲೂ ಕರೆಯಲಾಗುತ್ತದೆ. ಆಡಳಿತಾತ್ಮಕ/ಅಧಿಕೃತ ಬಳಕೆ, ಸರ್ಕಾರದ ದಾಖಲೆಗಳು, ತಾಲೂಕು ಹೆಸರು, ನಕ್ಷೆಗಳು … ಎಲ್ಲೆಡೆಯೂ ‘ಚಿತ್ತಾಪುರ’ ಎಂಬ ರೂಪವನ್ನೇ ಬಳಸಲಾಗುತ್ತದೆ. ಇನ್ನೂ ‘ಪೂರ’ (ಪೂರ್) ರೂಪವು ಕೆಲವು ಸಂದರ್ಭಗಳಲ್ಲಿ ಧ್ವನಿಮಾಧುರ್ಯಕ್ಕಾಗಿ ಸಾಹಿತ್ಯದಲ್ಲಿ ಬಳಸಲಾಗುತ್ತದೆ. ಅಂದರೆ ಅಧಿಕೃತ ಮತ್ತು ವ್ಯಾಕರಣಬದ್ಧವಾಗಿ ‘ಚಿತ್ತಾಪುರ’, ಸಾಹಿತ್ಯಿಕ ಪ್ರಯೋಗವಾಗಿ ‘ಚಿತ್ತಾಪೂರ’ವೆಂದು! ‘ಚಿತ್ತಾಪುರ’ವನ್ನು ಪದದ ನಿಷ್ಪತ್ತಿಯ ಹಿನ್ನೆಲೆ ಗಮನಿಸಿದರೆ ಅದು ಚಿತ್ತ + ಪುರ ಎಂಬ ಎರಡು ಪದಗಳಿಂದ ಕೂಡಿರುವುದು ಮನದಟ್ಟಾಗುತ್ತದೆ. ‘ಚಿತ್ತ’ ಎಂಬುದು ಸಂಸ್ಕೃತ, ಪ್ರಾಕೃತ ಮತ್ತು ಪಾಲಿ ಭಾಷೆಗಳಲ್ಲಿ ಬಳಕೆಯಲ್ಲಿರುವ ಪದ. ಇದು ಮನಸ್ಸು, ಚೇತನ, ಭಾವ, ಜ್ಞಾನ, ಸ್ಮೃತಿ ಎಂಬ ಹಲವು ಅರ್ಥಗಳನ್ನು ಹೊಂದಿದೆ. ಇನ್ನೂ ‘ಪುರ’ ಎಂದರೆ ನಗರ, ವಸತಿ ಕೇಂದ್ರ, ಸಂಘಟಿತ ವಾಸಸ್ಥಳ ಎಂದೆಲ್ಲಾ ಅರ್ಥವನ್ನು ಹೊಂದಿದೆ. ಈ ನೆಲೆಯಲ್ಲಿ ವಿವೇಚಿಸಿದಾಗ ಇದು ‘ಮನಸ್ಸಿನ ನಗರ’ ಅಥವಾ ‘ಧಾರ್ಮಿಕ ಕೇಂದ್ರ’ವನ್ನು ಸೂಚಿಸುತ್ತದೆ. ಇದನ್ನು ‘ಸ್ಥಳೀಯ ದೇವಾಲಯ ಅಥವಾ ಚಿತ್ರಕಲೆಗಳಿಂದ (ಚಿತ್ತಾರ) ಪ್ರಸಿದ್ಧ ನೆಲೆಯಾಗಿರಬಹುದು’ ಎಂದೂ ಅರ್ಥೈಸಿಕೊಳ್ಳಬಹುದಾಗಿದೆ. ಸ್ಥಳನಾಮಗಳು ಭೌಗೋಳಿಕ ಗುರುತುಗಳಷ್ಟೇ ಅಲ್ಲ; ಇವು ಒಂದು ಪ್ರದೇಶದ ಸ್ಮೃತಿ, ಸಂಸ್ಕೃತಿ ಮತ್ತು ಚೇತನದ ಭಾಷ್ಯಗಳು. ಇಂಥ ಭಾರತೀಯ ಸ್ಥಳನಾಮ ಪರಂಪರೆಯಲ್ಲಿ ‘ಪುರ’ ಎಂಬ ಪ್ರತ್ಯಯವು ಸಾಮಾನ್ಯವಾಗಿ ಸಾಂಸ್ಕೃತಿಕ ಅಥವಾ ರಾಜಕೀಯ ಕೇಂದ್ರಗಳಿಗೆ ಬಳಕೆಯಾಗಿದೆ. ಇದರಿಂದ ಚಿತ್ತಾಪುರವೂ ಕೇವಲ ಗ್ರಾಮವಲ್ಲದೆ, ಒಂದು ಕಾಲದಲ್ಲಿ ಸಾಂಸ್ಕೃತಿಕ ಕೇಂದ್ರವಾಗಿದ್ದ ಸೂಚನೆಯೂ ದೊರಕುತ್ತದೆ. ಚಿತ್ತಾಪುರ ತಾಲ್ಲೂಕಿನ ವ್ಯಾಪ್ತಿಯಲ್ಲಿರುವ ಸನ್ನತಿ (ಆಶೋಕ ಶಿಲಾಶಾಸನ), ಕನಗನಹಳ್ಳಿ (ಮಹಾಸ್ತುಪ) ಮತ್ತು ವಿಹಾರ ಸಂಸ್ಕೃತಿಯ ಅವಶೇಷಗಳ ಹಿನ್ನೆಲೆಯಲ್ಲಿ ‘ಚಿತ್ತ’ ಪದದ ಬೌದ್ಧ ತಾತ್ವಿಕ ಅರ್ಥವನ್ನು ಇನ್ನಷ್ಟು ದೃಢಪಡಿಸುತ್ತದೆ. ಬೌದ್ಧ ತತ್ವದಲ್ಲಿ ಚಿತ್ತ ಎಂದರೆ ‘ಎಲ್ಲದರ ಮೂಲ; ಶುದ್ಧವಾದರೆ ಮುಕ್ತಿ, ಅಶುದ್ಧವಾದರೆ ಬಂಧನ’ ಎಂದಾಗುತ್ತದೆ. ಇದರಿಂದ ‘ಚಿತ್ತಾಪುರ’ ಎಂಬ ಹೆಸರು ‘ಚಿತ್ತಶುದ್ಧಿಯ ಕೇಂದ್ರ’ ಎಂಬ ತಾತ್ವಿಕ ಸೂಚನೆಯಾಗಿ ಕಾಣುತ್ತದೆ. ಬೌದ್ಧ ಸಂಸ್ಕೃತಿಯ ಹಿನ್ನೆಲೆಯಲ್ಲಿ ‘ಚಿತ್ತಾಪುರ’ವು ಧ್ಯಾನಸ್ಥಳದ ರೂಪಕವಾಗಿಯೂ ಕಂಡುಬರುತ್ತದೆ. ಇಲ್ಲಿ ಶಬ್ದಕ್ಕಿಂತ ಮೌನ ಮುಖ್ಯವಾದ ನೆಲೆಯಾಗಿದ್ದು, ಇತಿಹಾಸವು ಮಾತಾಡುವುದಿಲ್ಲ; ಮೌನವಾಗಿ ಸೂಚಿಸುತ್ತದೆ. ಸಾಹಿತ್ಯದ ದೃಷ್ಟಿಯಲ್ಲಿ ಚಿತ್ತಾಪೂರ ಎಂದರೆ ‘ಮನಸ್ಸು ವಾಸಿಸುವ ಊರು’ ಎಂದಾಗುತ್ತದೆ. ಅಂತೆಯೇ ಊರುಗಳು ಕಲ್ಲಿನಿಂದ ಕಟ್ಟಲ್ಪಡುವುದಿಲ್ಲ; ಅವು ಚಿತ್ತದಿಂದ ನಿರ್ಮಾಣವಾಗುತ್ತವೆ. ಇಂತಹ ಚಿತ್ತದಿಂದ ಕಟ್ಟಲ್ಪಟ್ಟ ಊರೇ ‘ಚಿತ್ತಾಪೂರ’. ಇನ್ನೂ ‘ಚಿತ್ತಾಪುರ’ವನ್ನು ಒಂದು ಮಾನಸಿಕ, ಭೌಗೋಳಿಕ ರೂಪಕವಾಗಿ ನೋಡಿದರೆ, ‘ಚಿತ್ತಾಪುರ’ ಬರಿ ಒಂದು ತಾಲೂಕು ಅಲ್ಲ, ಒಂದು ಮನಸ್ಸಿನ ನಕ್ಷೆ. ಇಲ್ಲಿ ‘ಭೀಮಾ ನದಿ’ಯ ಚಿಂತನೆಯ ಪ್ರವಾಹ, ‘ಸನ್ನತಿ’ಯ ಶಾಂತಿಯ ತಟ ಹಾಗೂ ‘ಕನಗನಹಳ್ಳಿ’ಯ ಸ್ಮೃತಿಗಳ ಸ್ತೂಪ ಇವೆಲ್ಲವೂ ಸೇರಿ, ‘ಚಿತ್ತಾಪುರ’ವನ್ನು ಮಾನವ ಚಿತ್ತದ ಭೌಗೋಳಿಕ ರೂಪವಾಗಿಸಿವೆ. ‘ಚಿತ್ತಾಪುರ’ವು ಕರ್ನಾಟಕದ ಕಲಬುರಗಿ ಜಿಲ್ಲೆಯ ದಕ್ಷಿಣ–ಪೂರ್ವ ಭಾಗದಲ್ಲಿರುವ ದಕ್ಕನ್ ಪೀಠಭೂಮಿಯ ಒಂದು ಪ್ರಮುಖ ಪ್ರದೇಶ. ಇದರ ಭೌಗೋಳಿಕ ಸ್ವರೂಪವು ಸಮತಟ್ಟು ಮತ್ತು ಸ್ವಲ್ಪ ಏರಿಳಿತಗಳಿರುವ ಭೂಪ್ರದೇಶದಿಂದ ಕೂಡಿದೆ. ಭೀಮಾ, ಕಾಗಿಣಾ, ಬೆಣ್ಣೆತೊರಾ, ಗಂಡೋರಿ ನಾಲಾ, ಮುಲ್ಲಾಮಾರಿ ನದಿಗಳು ತಾಲೂಕಿನ ಜೀವನಾಡಿಯಾಗಿವೆ. ಇಲ್ಲಿಯ ಆಲ್ಯೂವಿಯಲ್ ಮಣ್ಣು ಕೃಷಿಗೆ ಅನುಕೂಲಕರವಾಗಿದೆ. ಅಂದರೆ, ನದಿಗಳಿಂದ ತಂದು ಸೇರಿಸಲ್ಪಟ್ಟಿದ್ದು! ಈ ಪ್ರದೇಶದಲ್ಲಿ ಮುಖ್ಯವಾಗಿ ಕಪ್ಪು ಮಣ್ಣು ವ್ಯಾಪಕವಾಗಿದ್ದು ತೊಗರಿ, ಜೋಳ, ಗೋಧಿ, ಸಜ್ಜೆ, ಕುಸುಬೆ, ಕಡಲೆ ಮುಂತಾದ ಬೆಳೆಗಳಿಗೆ ಸೂಕ್ತವಾಗಿದೆ. ಇಲ್ಲಿಯ ಹವಾಮಾನ ಅರ್ಧಶುಷ್ಕ ಸ್ವಭಾವದ್ದು. ಬೇಸಿಗೆಯಲ್ಲಿ ಉಷ್ಣಾಂಶ ಹೆಚ್ಚಾಗುತ್ತದೆ; ಮಳೆಗಾಲವಂತೂ ದಕ್ಷಿಣ–ಪಶ್ಚಿಮ ಮಾನ್ಸೂನ್ ಮೇಲೆ ಅವಲಂಬಿತವಾಗಿದೆ. ಸರಾಸರಿ ಮಳೆಯ ಪ್ರಮಾಣ ಮಧ್ಯಮ ಮಟ್ಟದಲ್ಲಿದೆ. ಭೂವೈಜ್ಞಾನಿಕವಾಗಿ ದಕ್ಕನ್ ಟ್ರಾಪ್ ಶಿಲಾಸಂರಚನೆ, ಸಾಲ್ಟ್ ಕಲ್ಲುಗಳು ಮತ್ತು ಚೂನಾಪತ್ರಿ ಪದರಗಳು ಕಂಡುಬರುತ್ತವೆ. ಸಸ್ಯಸಂಪತ್ತು ಮುಖ್ಯವಾಗಿ ಒಣಮೈದಾನ ಪ್ರಭೇದಕ್ಕೆ ಸೇರಿದೆ. ಚಿತ್ತಾಪುರದ ಇತಿಹಾಸವು ಕೇವಲ ಆಡಳಿತ ಬದಲಾವಣೆಗಳ ಸರಣಿ ಅಲ್ಲ; ಧರ್ಮ, ಸಂಸ್ಕೃತಿ, ನದಿ ಮತ್ತು ಮಾನವ ವಸತಿಯ ನಿರಂತರ ಪ್ರವಾಹವಾಗಿದೆ. ಭೀಮಾ ನದಿ ತಟದಲ್ಲಿ ಆರಂಭವಾದ ಬೌದ್ಧ ಚೇತನದಿಂದ ಹಿಡಿದು ಆಧುನಿಕ ಕರ್ನಾಟಕದ ಭಾಗವಾಗುವವರೆಗೆ ಚಿತ್ತಾಪುರವು ದಕ್ಕನ್ ನೆಲದ ಐತಿಹಾಸಿಕ ಸ್ಮೃತಿ ಸಂಗ್ರಹವಾಗಿದೆ. ಇದು ಅನೇಕ ಮಹತ್ವದ ಸಾಮ್ರಾಜ್ಯಗಳ ಆಡಳಿತವನ್ನು ಅನುಭವಿಸಿದೆ. ಕ್ರಿ.ಪೂ. ೩ನೇ ಶತಮಾನ, ಅಶೋಕನ ಕಾಲದಲ್ಲಿ ಈ ಪ್ರದೇಶ ಮೌರ್ಯ ಸಾಮ್ರಾಜ್ಯಕ್ಕೆ ಸೇರಿತ್ತು; ಸನ್ನತಿಯ ಶಿಲಾಶಾಸನಗಳೇ ಇದಕ್ಕೆ ಸಾಕ್ಷಿ. ಮುಂದೆ ಬಂದ ಶಾತವಾಹನರು ಬೌದ್ಧ ಸಂಸ್ಕೃತಿ ಮತ್ತು ವ್ಯಾಪಾರ ಚಟುವಟಿಕೆಗಳಿಗೆ ಉತ್ತೇಜನ ನೀಡಿದರು. ಇನ್ನೂ ಚಾಲುಕ್ಯರು ಹಾಗೂ ರಾಷ್ಟ್ರಕೂಟರು ದಕ್ಕನ್ ಪ್ರದೇಶದ ರಾಜಕೀಯ–ಸಾಂಸ್ಕೃತಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರದ ಕಲ್ಯಾಣಿ ಚಾಲುಕ್ಯರು ಮತ್ತು ಯಾದವರು ದೇವಾಲಯ ಸಂಸ್ಕೃತಿ ಮತ್ತು ಕೃಷಿ ಆಧಾರಿತ ಆಡಳಿತ ವಿಸ್ತರಣೆ ಮಾಡಿದರು. ಬಹಮನಿ ಸುಲ್ತಾನರು ಮತ್ತು ಆದಿಲ್ ಶಾಹಿಗಳ ಕಾಲದಲ್ಲಿ ಇಸ್ಲಾಮೀಯ ವಾಸ್ತುಶೈಲಿ ಮತ್ತು ನಗರೀಕರಣದ ಪ್ರಭಾವವಿರುವುದು ಕಂಡುಬರುತ್ತದೆ. ಔರಂಗಜೇಬನ ಕಾಲದಲ್ಲಿ ಈ ದಕ್ಕನ್ ಪ್ರದೇಶವು ಮೊಘಲ್ ಆಳ್ವಿಕೆಗೆ ಸೇರಿತ್ತು. ಮುಂದೆ ಇದು ನಿಜಾಮ್ ರ ಆಳ್ವಿಕೆಯಿಂದಾಗಿ ಹೈದರಾಬಾದ್ ಸಂಸ್ಥಾನದ ಭಾಗವಾಗಿ, ೧೯೪೮ರಲ್ಲಿ ಹೈದರಾಬಾದ್ ವಿಮೋಚನೆಯೊಂದಿಗೆ ಭಾರತದ ಪ್ರಭುತ್ವಕ್ಕೆ ಸೇರಿತು. ೧೯೫೬ರ ಭಾಷಾವಾರು ಪ್ರಾಂತ್ಯಗಳ ನಂತರ ಕರ್ನಾಟಕ ರಾಜ್ಯದ ಭಾಗವಾಗಿ ತಾಲೂಕಾಗಿ ರೂಪುಗೊಂಡಿರುವುದು ನಮ್ಮ ಮುಂದಿನ ಇತಿಹಾಸವಾಗಿದೆ! ಚಿತ್ತಾಪುರ ತಾಲೂಕಿನ ಶೈಕ್ಷಣಿಕ ಇತಿಹಾಸವು ಕೇವಲ ಶಾಲಾ–ಕಾಲೇಜುಗಳ ಬೆಳವಣಿಗೆಯ ಕಥೆಯಲ್ಲ; ಪ್ರಾಚೀನ ಜ್ಞಾನ ಪರಂಪರೆಯಿಂದ ಆಧುನಿಕ ವಿಶ್ವವಿದ್ಯಾಲಯ ಮಟ್ಟದ ಶಿಕ್ಷಣದವರೆಗೆ ಹರಡಿರುವ ನಿರಂತರ ಪ್ರವಾಹವಾಗಿದೆ. ಇಲ್ಲಿಯ ಶೈಕ್ಷಣಿಕ ಪರಂಪರೆ ಎಂದರೆಬೌದ್ಧ ಧ್ಯಾನ-ನಾಗಾವಿಯ ಶಾಸ್ತ್ರಪೀಠ-ಮಠ-ಮದರಸಾ ಶಿಕ್ಷಣ ಹಾಗೂ ಆಧುನಿಕ ಶಾಲಾ ವ್ಯವಸ್ಥೆ ಎಂಬ ನಿರಂತರ ಜ್ಞಾನಧಾರೆಯಾಗಿದೆ. ಸನ್ನತಿ–ಕನಗನಹಳ್ಳಿ ಪ್ರದೇಶಗಳಲ್ಲಿ ಕಂಡುಬರುವ ಬೌದ್ಧ ವಿಹಾರಗಳು ಇಲ್ಲಿ ಧ್ಯಾನ, ತತ್ವಚಿಂತನೆ ಮತ್ತು ಶಾಸ್ತ್ರಾಧ್ಯಯನ ನಡೆದಿದ್ದುದನ್ನು ಸೂಚಿಸುತ್ತವೆ. ಜ್ಞಾನವು ಧರ್ಮದೊಂದಿಗೆ ಬೆಸೆದುಕೊಂಡಿದ್ದ ಕಾಲದ ಪ್ರತಿಧ್ವನಿಯೇ ಇದು. ಇದಕ್ಕೆ ಮುಂದುವರಿದ ರೂಪವೇ ಚಾಲುಕ್ಯರ ಕಾಲದ ನಾಗಾವಿ ವಿದ್ಯಾಕೇಂದ್ರ. ಶಾಸನಗಳಲ್ಲಿ ಉಲ್ಲೇಖವಾಗಿರುವ ನಾಗಾವಿ “ವಿದ್ಯಾನಗರಿ”ಯಾಗಿ ಪ್ರಸಿದ್ಧವಾಗಿದ್ದು, ವೇದ, ವ್ಯಾಕರಣ, ತರ್ಕ, ಮೀಮಾಂಸೆ ಮೊದಲಾದ ಶಾಸ್ತ್ರಗಳ ಅಧ್ಯಯನ ನಡೆಯುತ್ತಿದ್ದ ಕೇಂದ್ರವಾಗಿತ್ತು. ಇದು ದಕ್ಕನ್ ಪ್ರದೇಶದ ಪ್ರಾಚೀನ ವಿಶ್ವವಿದ್ಯಾಲಯ ಸಮಾನವಾದ ಜ್ಞಾನಪೀಠ. ಮಧ್ಯಯುಗದಲ್ಲಿ ಮಠ–ದೇವಾಲಯ ಪಾಠಶಾಲೆಗಳು ಹಾಗೂ ಮದರಸಾ ಶಿಕ್ಷಣ ಜ್ಞಾನ ಪರಂಪರೆಯನ್ನು ಮುಂದುವರಿಸಿತು. ನಿಜಾಂ ಕಾಲದಲ್ಲಿ ಮೂಲಭೂತ ಶಾಲಾ ವ್ಯವಸ್ಥೆ ರೂಪುಗೊಂಡಿತು. ಸ್ವಾತಂತ್ರ್ಯಾನಂತರ ಕನ್ನಡ ಮಾಧ್ಯಮ ಶಿಕ್ಷಣ ವಿಸ್ತಾರಗೊಂಡು, ಇಂದು ಶಾಲೆ–ಕಾಲೇಜುಗಳ ಮೂಲಕ ಶಿಕ್ಷಣವು ವ್ಯಾಪಕಗೊಂಡಿದೆ. ಇದು ಕೇವಲ ಶಿಕ್ಷಣ ಸಂಸ್ಥೆಗಳ ಇತಿಹಾಸವಲ್ಲ; ಜ್ಞಾನವನ್ನು ಜೀವಂತ ಪರಂಪರೆಯಾಗಿ ಉಳಿಸಿಕೊಂಡ ನೆಲದ ಚೇತನವಾಗಿದೆ. ಇಲ್ಲಿಯ ಸಮಕಾಲೀನ ಶಿಕ್ಷಣ ವ್ಯವಸ್ಥೆ ಗ್ರಾಮೀಣ ನೆಲೆಯಲ್ಲೇ ವಿಸ್ತಾರಗೊಂಡ ಸಮಗ್ರ ಶೈಕ್ಷಣಿಕ ಜಾಲವಾಗಿದೆ. ಸರ್ಕಾರಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಹೆಚ್ಚಿನ ಗ್ರಾಮಗಳಿಗೆ ತಲುಪಿದ್ದು, ಮಧ್ಯಾಹ್ನ ಊಟ, ವಿದ್ಯಾರ್ಥಿವೇತನ ಹಾಗೂ ಉಚಿತ ಪಠ್ಯಪುಸ್ತಕಗಳಂತಹ ಯೋಜನೆಗಳು ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿವೆ. ಇವುಗಳೊಂದಿಗೆ ಹಲವಾರು ಶಿಕ್ಷಣ ಸಂಸ್ಥೆಗಳು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿವೆ. ಪಟ್ಟಣ ಮಟ್ಟದಲ್ಲಿ ಪದವಿಪೂರ್ವ ಮತ್ತು ಪದವಿ ಕಾಲೇಜುಗಳ ಮೂಲಕ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಶಿಕ್ಷಣದ ಜೊತೆಗೆ ಉನ್ನತ ಹಾಗೂ ವೃತ್ತಿಪರ ಶಿಕ್ಷಣವೂ ಲಭ್ಯವಿದೆ. ಕಲ್ಯಾಣ ಕರ್ನಾಟಕ (೩೭೧J) ಸೌಲಭ್ಯಗಳಿಂದ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ಮತ್ತು ಹಾಸ್ಟೆಲ್–ವಿದ್ಯಾರ್ಥಿವೇತನಗಳ ಮೂಲಕ ಶಿಕ್ಷಣ ಪ್ರವೇಶ ವಿಸ್ತರಿಸಿದೆ. ಜೊತೆಗೆ ಕೌಶಲ್ಯಾಭಿವೃದ್ಧಿ ಮತ್ತು ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರಗಳತ್ತ ಯುವಜನರ ಒಲವು ಹೆಚ್ಚುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಚಿತ್ತಾಪುರವು ಕಲ್ಯಾಣ ಕರ್ನಾಟಕದ ಸಂಸ್ಕೃತಿ ಪ್ರವಾಹದಲ್ಲಿ ಬೆಳೆದ, ಬೆಳೆಯುತ್ತಿರುವ ತಾಲೂಕು. ಇಲ್ಲಿ ಜನಪದದ ಜೀವಂತಿಕೆ, ಭಕ್ತಿ ಸಾಹಿತ್ಯದ ಝರಿ, ಗ್ರಾಮೀಣ ಸಂಗೀತದ ಲಯ ಮತ್ತು ದೇವಾಲಯ–ದರ್ಗಾಗಳ ವಾಸ್ತುಸೌಂದರ್ಯ.. ಎಲ್ಲವೂ ಸೇರಿ ವಿಶಿಷ್ಟ ಸಾಂಸ್ಕೃತಿಕ ಸ್ವರೂಪವನ್ನು ನಿರ್ಮಿಸಿವೆ. ಡೊಳ್ಳು ಕುಣಿತ, ಕೋಲಾಟದಂತಹ ಜನಪದ ನೃತ್ಯಗಳು ಹಬ್ಬ–ಜಾತ್ರೆಗಳಲ್ಲಿ ಇನ್ನೂ ಜೀವಂತವಾಗಿವೆ. ಅಂತೆಯೇ ಜಾತ್ರೆಗಳು, ಊರಹಬ್ಬಗಳು ಜನಪದಕಲೆಯ ವೇದಿಕೆಗಳಾಗಿವೆ. ಡೊಳ್ಳು, ಚಂಡೆಮದ್ದಳೆ, ತಾಳಗಳ ಲಯ ಜನಪದ ಸಂಗೀತಕ್ಕೆ ಶಕ್ತಿ ನೀಡುತ್ತದೆ. ಭಜನಾ ಮಂಡಳಿಗಳು ಹಾಗೂ ದಾಸಪದಗಳ ಗಾಯನ ಭಕ್ತಿಭಾವವನ್ನು ಗಾಢಗೊಳಿಸಿದರೆ, ಸೂಫಿ ಪರಂಪರೆಯ ಕವ್ವಾಲಿ ಕಾರ್ಯಕ್ರಮಗಳು ಧರ್ಮಸೌಹಾರ್ದದ ಸಂಕೇತವಾಗಿವೆ. ಲಂಬಾಣಿ ಪರಂಪರೆ, ಕಸೂತಿ ಮತ್ತು ಗ್ರಾಮೀಣ ಕೈಗಾರಿಕೆಗಳು ಸ್ಥಳೀಯ ಸೌಂದರ್ಯವನ್ನು ಪ್ರತಿಬಿಂಬಿಸುತ್ತವೆ. ಇಲ್ಲಿಯ ಸಾಹಿತ್ಯದಲ್ಲಿ ವಚನ-ಭಕ್ತಿಧಾರೆಯ ಪ್ರಭಾವದಿಂದ ಶರಣ ಸಂವೇದನೆಗಳ ಛಾಯೆ ಎದ್ದು ಕಾಣುತ್ತದೆ. ಇನ್ನೂ ಜನಪದ ಗೀತೆಗಳು ಗ್ರಾಮಜೀವನದ ನೋವು, ನಲಿವುಗಳ ಪರಂಪರೆಗೆ ಕನ್ನಡಿ ಹಿಡಿಯುತ್ತಿವೆ. ಇತ್ತೀಚೆಗೆ ಸ್ಥಳೀಯ ಕವಿಗಳು, ಕಥೆಗಾರರು ಸಾಮಾಜಿಕ ಪ್ರಶ್ನೆಗಳನ್ನು ಕೇಂದ್ರವಾಗಿಟ್ಟುಕೊಂಡು ಬರವಣಿಗೆ ಮಾಡುತ್ತ, ಸಾಹಿತ್ಯಿಕ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರದೇಶದ ದೇವಾಲಯಗಳಲ್ಲಿ ಕಲ್ಯಾಣಿ ಚಾಲುಕ್ಯ–ದ್ರಾವಿಡ–ವಿಜಯನಗರ ಪ್ರಭಾವಗಳ ಮಿಶ್ರಣ ಕಾಣುತ್ತೇವೆ. ಈ ವಾಸ್ತುಶಿಲ್ಪದಲ್ಲಿ ಪ್ರದೇಶದ ಸಂಸ್ಕೃತಿ–ಸಾಮಾಜಿಕ ಸಂಧಿಯ ಜೀವಂತ ಚಿತ್ರಣ ಕಾಣುತ್ತದೆ. ಇವು ಗ್ರಾಮೀಣ ಭಕ್ತಿ, ಶಿಲ್ಪಸೌಂದರ್ಯ ಮತ್ತು ಇತಿಹಾಸದ ಗುರುತುಗಳನ್ನು ಒಟ್ಟುಗೂಡಿಸಿವೆ. ಇವುಗಳು ಕೇವಲ ಪೂಜಾಸ್ಥಳಗಳಲ್ಲ; ಇತಿಹಾಸದ ಕಲ್ಲುಬರಹ, ಭಕ್ತಿಯ ಸ್ಥಿರರೂಪ ಮತ್ತು ಶಿಲ್ಪಕಲೆಯ ಸಾಂದ್ರ ಸ್ಮೃತಿಯಾಗಿವೆ. ದರ್ಗಾ–ಮಸೀದಿಗಳಲ್ಲಿ ಇಸ್ಲಾಮಿಕ್ ಕಮಾನು–ಗುಂಭಜಗಳ ಸೌಂದರ್ಯ ನೋಡುಗರನ್ನು ಆಕರ್ಷಿಸುತ್ತವೆ.
“ಚಿತ್ತಾಪುರ ತಾಲೂಕಿನ ವೈಶಿಷ್ಟ್ಯಗಳು”ಡಾ. ಮಲ್ಲಿನಾಥ ಎಸ್. ತಳವಾರ Read Post »
ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ”
ಕಾವ್ಯಸಂಗಾತಿ ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ” ಬಡವರ ಬಾಳಿನ ವಿದ್ಯಾದಾತರುಅನಾಥ ಮಕ್ಕಳ ಪಾಲಿನ ಕಲ್ಪವ್ರಕ್ಷರುಅನ್ನ ಅಕ್ಷರ ಜ್ಞಾನ ದಾಸೋಹ ನೇತಾರರುಸಾಂಸ್ಕೃತಿಕ ಕ್ಷೇತ್ರದ ರಾಯಭಾರಿಗಳವರು/೧/ ಮನುಕುಲೋದ್ಧಾರಕ ಹಿತಚಿಂತಕರುಶರಣರ ಸಂದೇಶ ಪರಿಪಾಲಕರುದಯೆ ಮಮತೆ ಕರುಣಾ ಸಾಗರರುಸುತ್ತೂರ ಶ್ರೀ ಮಹಾಶಿವಯೋಗಿಗಳವರು/೨/‘ಅರಿವೆ ಗುರು’ ತತ್ವಾದರ್ಶ ಆರಾಧಕರುಜ್ಞಾನ ದೀಕ್ಷೆ ಸಂಸ್ಕೃತಿ ಹರಿಕಾರರುಸರಳ ಸಾಮಾಜಿಕ ಅಪೂರ್ವ ಸಾಧಕರುಕಾಯಕದಲ್ಲಿ ಕೈಲಾಸ ಕಂಡುಂಡವರು/೩/ಬಡವರೇಳ್ಗೆಗಾಗಿ ಚಿನ್ನಾಭರಣ ತ್ಯಜಿಸಿಹರುನಿರಾಡಂಬರ ನಿಸ್ವಾರ್ಥಕೆ ದಾರಿದೀಪರುಮನುಕುಲದ ವೈರತ್ವ ನಿವಾರಿಸಿಹರುವಿದೇಶಗಳಲ್ಲಿ ಸಾಂಸ್ಕೃತಿಕ ಪರಂಪರೆ ಬಿತ್ತರಿಸಿಹರು/೪/ಬಡತನದ ಬವಣೆಯಲಿ ಬೆಂದವರುನಾಡಿನ ಶ್ರೇಯೋಭಿವೃದ್ಧಿಗಾಗಿ ಶ್ರಮಿಸಿಹರುಜನ್ಮಶತಮಾನೋತ್ಸವದ ಮಹಾನಾಯಕರುಶ್ರೀ ಶಿವರಾತ್ರಿ ರಾಜೇಂದ್ರ ಪರಮಪೂಜ್ಯರು/೫/ಶರಣ ಸಾಹಿತ್ಯ ಪರಿಷತ್ತು ಸಂಸ್ಥಾಪಕರುಅಂತಾರಾಷ್ಟ್ರೀಯ ಸಂಘಟನಾ ಚತುರರುಸ್ನೇಹ ವಾತ್ಸಲ್ಯ ಮಮತೆಯ ಸ್ವರೂಪರುಸೂರ್ಯ ಚಂದ್ರರಂತೆ ಆಚಂದ್ರಾರ್ಕರು/೬/ಬಹು ಕ್ಷೇತ್ರ ಅನುಪಮ ಸಾಧಕವರೇಣ್ಯರುಗೌರವ ಡಾಕ್ಟರೇಟ್ ಪದವಿ ಪುರಸ್ಕೃತರುಕನ್ನಡ ನಾಡುನುಡಿಯ ಸೌಭಾಗ್ಯ ದೇವರುವಿಶ್ವಕೆ ಆದರ್ಶಪ್ರಾಯ ಮಹಾನ್ ದಾರ್ಶನಿಕರು/೭/ ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ
ಪ್ರೊ.ಶಕುಂತಲಾ.ಚನ್ನಪ್ಪ. ಸಿಂಧೂರ “ಸಾಂಸ್ಕೃತಿಕ ರಾಯಭಾರಿ” Read Post »









