ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಸಹನೆ ಕರುಣೆ ತಾಳ್ಮೆ
ಸುಶೀಲ ಮಮತೆ ಸನ್ನಡತೆ
ವಿಶೇಷಣಗಳ ಸಿಂಗಾರ
ಚಿನ್ನದ ಬಲೆಗೊಂದು ಚಿತ್ತಾರ ಮೂಡಿಸಿ
ಬಣ್ಣದ ಪಂಜರದಲ್ಲಿ ಬಂಧಿಸಿದರು

ಸುಳ್ಳನ್ನೇ ಸತ್ಯವೆಂದು ನಂಬಿಸಿ
ಶೀಲದ ಪರಿಕಲ್ಪನೆಯಲಿ
ಉದಾತ್ತ ಗುಣಗಳ ಆರೋಪಿಸಿ
ಪರಮೋಚ್ಚ ಬದುಕು ಇದೆಂದು
ಬುರುಡೆ ಬಿಟ್ಟವರು

ಉಸಿರು ಗಟ್ಟುವ ಸಂಯೋಗದಿ
ಮೌನವೇ ಒಪ್ಪಿಗೆ
ಎಂದು ಭ್ರಮಿಸಿ
ಭಾವನೆಗಳ ಮೇಲೆ ಸವಾರಿ ಮಾಡಿ
ಮಖಾಡ ತೊಡಿಸಿದವರು

ಗಟ್ಟಿಮನಸ್ಸಿನ ದಿಟ್ಟ ನಿರ್ಧಾರವ
ಸಡಿಲಗೊಳಿಸಲು ಬಗೆ ಬಗೆಯ ತಂತ್ರ
ಆಸೆ ಆಮಿಷದ ಮೆರವಣಿಗೆ
ಒಣ ಸಿದ್ದಾಂತಗಳ ಮನಸ್ಸಿಗೆ ಲೇಪಿಸಿ
ಮಸುಕಾಗಿಸುವರು

ಹಣೆಗೆ ತಿಲಕವಿಟ್ಟವರನ್ನು
ಚಿತೆಗೇರಿಸುವ ಹೃದಯಹೀನರು
ಯುದ್ಧಗೆದ್ದವನಿಗೆ
ಸೋಲುಂಡವನ
ಮಡದಿಯ ಮೇಲೆ ಮೋಹ

ಸಾಕಿನ್ನು ದುರಾಚಾರ ದುರಾಕ್ರಮಣ
ನಿರಾಕರಿಸಬೇಕಿದೆ ಬಿರುದು ಬಾವಲಿಗಳ
ಧಿಕ್ಕರಿಸಬೇಕಿದೆ
ವಂದಿ ಮಾಗಧರ
ಬಹುಪರಾಕುಗಳ

ನಿಲ್ಲಬೇಕಿದೆ ಅಪಚಾರ
ಎಷ್ಟಂತ ಅವಿತುಕೊಂಡಿರುವುದು
ಗೋಡೆಗಳ ಮಧ್ಯೆ
ಇಣುಕಿಣುಕಿ ದಿನ ದೂಡುವುದು
ಕತ್ತಲೆಯ ಕೂಪದಲಿ

ನಲುಗಿ ಹೋಗಿರುವರು ಕಣ್ಣಳತೆಯಲಿ
ಮಥುರ ಇರೋಮ ಶರ್ಮಿಳ
ಭನವಾರಿ ಮತ್ಯಾರೋ …..
ಅಳಿಸಬೇಕಿದೆ ನೋವುಂಡವರ ಕಥೆಗಳ
ಬರೆಯಬೇಕಿದೆ ಗೌರವ ಆದರಗಳ ಹೊಸ ಪರ್ವವನ್ನ

ಆದರಿಸಬೇಕು ಅಸ್ತಿತ್ವ ನೆಲೆಯೂರಲು
ನೆರವಾದ ಊರುಗೋಲನ್ನ
ಕಣ್ಣೊರೆಸುವ ಕೈಗಳನ್ನ
ಸಾಂತ್ವಾನ ನುಡಿದ ಮಾತುಗಳನ್ನು
ಗಾಯ ಸವರಿದ ಬೆರಳುಗಳನ್ನು

ದಟ್ಟ ಕಾಡುಗಳ ಮಧ್ಯೆ
ಕಿರಣ ಸೋಂಕಿಸಲು ಸೆಣಸಾಡುವ
ಸೂರ್ಯನಂತೆ
ಭರವಸೆಯ ಬೆಳಕೊಂದು
ಮೂಡಿತು ಮುಂದೆ…,..

——————————

About The Author

Leave a Reply

You cannot copy content of this page

Scroll to Top