ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ವೃತ್ತಿ ಬದುಕಿನ ಹಿನ್ನೋಟ-30 ಸುಜಾತಾ ರವೀಶ್ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೩೦ ಬುಕ್ ಮಾಡಿದ್ದ ಬೈಕ್ ಬಂದಿದ್ದು ಅಷ್ಟರೊಳಗೆ ಪರ್ಮನೆಂಟ್ ಲೈಸೆನ್ಸ್ ಸಹ ಸಿಕ್ಕಿತ್ತು . ಆದರೆ ನನಗೆ ಗಾಡಿ ಓಡಿಸಲು ಬರುತ್ತಿರಲಿಲ್ಲ. ಬೈಕ್ ಪೂಜೆ ಮಾಡಿಸಿ ಮೈಸೂರಿನಿಂದ ರವೀಶ್ ಬೈಕ್ ಓಡಿಸಿಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಕೆಲವೊಮ್ಮೆ ಹಾಗೆ ಶುಕ್ರವಾರ ಸಕಲೇಶಪುರಕ್ಕೆ ಬರುತ್ತಿದ್ದರು ಶನಿವಾರ ಮಧ್ಯಾಹ್ನ ಆಫೀಸ್ ಮುಗಿದ ನಂತರ ಅವರ ಊರಿಗೆ ಬೈಕ್ ನಲ್ಲೆ ಹೋಗುತ್ತಿದ್ದೆವು. ಕೆಲವೊಮ್ಮೆ ಅವರು ಮೊದಲೇ ಬಂದು ಮೈಸೂರಿಗೆ ಸಹ ಬೈಕ್ ನಲ್ಲಿ ನಾಲ್ಕು ಐದು ಬಾರಿ ಬಂದಿದ್ದೇವೆ .ಹಾಗೆ ಬರುವಾಗ ಒಮ್ಮೆ ಸಕಲೇಶಪುರದಿಂದ ರಾಮನಾಥಪುರದ ಬಳಿ ಇರುವ ಇವರ ಊರಿನ ತನಕವೂ ಒಂದೇ ಸಮ ಮಳೆ. ಪಕ್ಕದಲ್ಲಿ ನದಿ ಹರಿಯುತ್ತಿದ್ದು ಆ ಅನುಭವ ಇಂದಿಗೂ ಮರೆಯಲಾಗದಷ್ಟು ಮನಸ್ಸಿನಲ್ಲಿ ನಿಂತುಬಿಟ್ಟಿದೆ.ಇನ್ನು ಸಕಲೇಶಪುರದ ಮಳೆಯ ಬಗ್ಗೆ ಹೇಳದಿದ್ದರೆ ಖಂಡಿತ ಆಗುವುದಿಲ್ಲ. ಜೂನ್ ತಿಂಗಳಿನಲ್ಲಿ ಆರಂಭವಾಗುವ ಮಳೆ ಕೆಲವೊಮ್ಮೆ ರಭಸ ಕೆಲವೊಮ್ಮೆ ಮೆತ್ತಗೆ ಅಷ್ಟೇ ದಿನವಿಡೀ ಸುರಿಯುತ್ತಲೇ ಇರುತ್ತಿತ್ತು ಮಳೆ ಅಂದರೆ ಪ್ರಾಣ ಬಿಡುವ ನನಗಂತೂ ಅಲ್ಲಿದ್ದ ಎರಡು ವರ್ಷವೂ ಒಂದು ರೀತಿ ಖುಷಿ ಕೊಟ್ಟಿತ್ತು. ಆದರೆ ಬಟ್ಟೆಗಳು ಒಣಗುತ್ತಿರಲಿಲ್ಲ ಒರೆಸಿಕೊಂಡ ಟವಲ್ ಹರವದಿದ್ದರೆ ಸಂಜೆಯ ವೇಳೆಗೆ ಕಪ್ಪಗೆ ಬೂಸ್ಟು ಬರುತ್ತಿತ್ತು .ಸಾಮಾನುಗಳಂತೂ ಸ್ವಲ್ಪವೇ ತೆಗೆದುಕೊಂಡು ಬರಬೇಕಿತ್ತು. ಅಕಸ್ಮಾತ್ ಊರಿಗೆ ಹೋಗಿ ಬಿಟ್ಟರೆ ಬರುವ ವೇಳೆಗೆ ಅವೆಲ್ಲ ಬೂಸ್ಟ್ ಹಿಡಿದದ್ದೇ ಹೌದು. ತರಕಾರಿಗಳು ಅಷ್ಟೇ ಆಗ ಫ್ರಿಜ್ ಸಹ ಇರಲಿಲ್ಲ .ತಂದ ತರಕಾರಿಗಳನ್ನು ಕ್ಲೀನಾಗಿ ಒರೆಸಿ ಒಂದಕ್ಕೊಂದು ತಾಗದಂತೆ ಹರವಿ ಇಟ್ಟರೆ ಬಚಾವ್. ಇಲ್ಲದಿದ್ದರೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಬೆಳ್ಳನೆಯ ಬೂಸ್ಟು ಅವುಗಳನ್ನು ಅಲಂಕರಿಸಿ ಬಿಟ್ಟಿರುತ್ತಿತ್ತು.ಆ ಮಳೆಯ ಆರ್ಭಟಕ್ಕೆ ಎಲ್ಲೋ ಬಿದ್ದ ಮರ ವಿದ್ಯುತ್ ತಂತಿ ಕಟ್ಟಾಗಿ ದಿನವಿಡೀ ಏನು! ವಾರವಿಡೀ ವಿದ್ಯುತ್ ಸರಬರಾಜು ಬಂದಾಗುತ್ತಿತ್ತು. ಆಗೆಲ್ಲಾ ನೀರು ಹೊತ್ತು ಹೊತ್ತು ಸಾಕಾಗುತ್ತಿತ್ತು. ಮಹಡಿಯ ಮೇಲಿನ ಮನೆ ಎಂದು ಹೇಳಿದ್ದೆ ಅಲ್ಲವೇ ಆ ಮೆಟ್ಟಲುಗಳು ಸಹ ಪಾಚಿ ಕಟ್ಟಿಕೊಂಡು ಬಿಡುತ್ತಿದ್ದವು. ಸದ್ಯ ಒಂದು ಬಾರಿಯೂ ಬಿದ್ದಿಲ್ಲ ಅದು ನನ್ನ ಪುಣ್ಯ.ಈ ಎಲ್ಲಾ ತೊಂದರೆಗಳ ಮಧ್ಯೆಯೂ ಆ ಜಿಟಿ ಜಿಟಿ ಸುರಿಯುವ ಮಳೆಯ ಸದ್ದು ಒಂದು ರೀತಿ ಜೋಗುಳದ ಹಾಗೆ ಕೇಳಿಸುತ್ತಿತ್ತು. ಸದಾ ಕಚೇರಿಗೆ ಹೋಗುವಾಗ ಬರುವಾಗ ಛತ್ರಿ ಎಡೆಬಿಡದ ಆಪ್ತ ಸಂಗಾತಿಯಾಗಿ ಬಿಟ್ಟಿತ್ತು. ಆದರೆ ಮೈಸೂರಿನಲ್ಲಿ ಇದ್ದಾಗ ಆಗಾಗ ಕಾಡುತ್ತಿದ್ದ ಮೈಗ್ರೇನ್ ಸಕಲೇಶಪುರಕ್ಕೆ ಹೋದಮೇಲೆ ಎಲ್ಲೋ ಮಾಯವೇ ಆಗಿಬಿಟ್ಟಿತ್ತು . ಆ ಚಳಿ ಪ್ರದೇಶದಲ್ಲಿ ತಲೆನೋವು ಇನ್ನೂ ಹೆಚ್ಚಾಗಬಹುದು ಎಂದ ಎಂದು ಹೆದರಿದ್ದ ನನಗೆ ಇದೊಂದು ನಿರಾಳತೆ.ಊರಿನಿಂದ ಆಚೆ ಒಂದೆರಡು ಕಿಲೋಮೀಟರ್ ಹೋದರೆ ಸಾಕಿತ್ತು ಕಣ್ಣಿಗೆ ರಾಚುವಷ್ಟು ಹಸಿರು .ತುಂಬಾ ಸುಂದರ ವಾತಾವರಣ ಬೈಕಿನಲ್ಲಿ ಸುತ್ತೆಲ್ಲಾ ಓಡಾಡಿದ್ದೆವು.ಹೀಗೆ ಬಂದು ಶನಿವಾರ ಸುಲೋಚನಾ ಅವರು ಮೈಸೂರಿಗೆ ಹೋಗಿದ್ದರು. ರವೀಶ್ ಸಕಲೇಶಪುರಕ್ಕೆ ಬಂದು ನಾವು ಧರ್ಮಸ್ಥಳ ಸುಬ್ರಹ್ಮಣ್ಯಕ್ಕೆ ಹೋಗುವ ಪ್ರೋಗ್ರಾಮ್ ಆಗಿತ್ತು ಆದರೆ ಆ ಬುಧವಾರವೇ ನನಗೆ ಮದ್ರಾಸ್ ಐ ಬಂದು ವಕ್ಕರಿಸಿ ಬಿಟ್ಟಿತ್ತು. ಆಫೀಸಿನ ಬಳಿಯೇ ಇದ್ದ ಒಂದು ಡಾಕ್ಟರ್ ಶಾಪ್ ಗೆ ತೋರಿಸಿ ಔಷಧಿ ಅಯಿಂಟ್ಮೆಂಟ್ ತೆಗೆದುಕೊಂಡಿದ್ದೆ. ಅದೇನೋ ಭಂಡ ಧೈರ್ಯದಲ್ಲಿ ಕಣ್ಣಿಗೆ ಕೂಲಿಂಗ್ ಗ್ಲಾಸ್ ಧರಿಸಿ ಬಸ್ಸಿನಲ್ಲೇ ಧರ್ಮಸ್ಥಳಕ್ಕೆ ಹೋಗಿ ಬಂದಿದ್ದೆವು. ಅಲ್ಲೇ ಒಂದು ಮೂಲೆಯಲ್ಲಿ ಕುಟೀರದಂತೆ ಇದ್ದ ಹೋಟೆಲ್ ನಲ್ಲಿ ತಿಂದ ಮಂಗಳೂರು ಬಜ್ಜಿಯ ರುಚಿ ಇನ್ನು ಸ್ಮೃತಿ ಪಟಲದಲ್ಲಿ ಹಸಿರಾಗಿಯೇ ಇದೆ. ಅಲ್ಲಿ ದರ್ಶನ ಮುಗಿಸಿ ಸುಬ್ರಹ್ಮಣ್ಯಕ್ಕೆ ಬಂದು ಸಂಜೆಯ ವೇಳೆಗೆ ಸಕಲೇಶಪುರಕ್ಕೆ ವಾಪಸಾಗಿದ್ದೆವು. ಸುಬ್ರಹ್ಣಣ್ಯದ ಅವಲಕ್ಕಿ ತುಂಬಾ ಫೇಮಸ್. ತುಂಬಾ ರುಚಿಕರ ಕೂಡ. ಕಟ್ಡಿಸಿಕೊಂಡು ಬಂದಿದ್ದೆವು.ಒಂದು ಬಾರಿ ಮೈಸೂರಿಗೆ ಬಂದಾಗ ಅಮ್ಮನನ್ನು ಸ್ವಲ್ಪ ದಿನ ಇರಲು ಕರೆದುಕೊಂಡು ಬಂದಿದ್ದೆ ಬೆಂಗಳೂರಿಗೆ ಹೋಗಿದ್ದ ನಮ್ಮ ತಂದೆ ಅಲ್ಲಿಂದ ನೇರವಾಗಿ ಬಂದರು. ನಮ್ಮ ಸುಮಿತ್ರ ದೊಡ್ಡಮ್ಮ ಅವರ ಪತಿ ಶಿವಾನಂದ್ ದೊಡ್ಡಪ್ಪ ಸಹ ಬಂದು ನಮ್ಮೊಡನೆ ಹದಿನೈದು ದಿನಗಳ ಕಾಲ ಇದ್ದಿದ್ದು ನಿಜಕ್ಕೂ ಮರೆಯಲಾಗದ ಒಂದು ಸುಂದರ ನೆನಪು.ಬಂದು ರಿಪೋರ್ಟ್ ಮಾಡಿಕೊಂಡ ಮಾರನೆಯ ದಿನವೇ ಅಲ್ಲೇ ಮುಖ್ಯರಸ್ತೆಯಲ್ಲಿದ್ದ ಸಾರ್ವಜನಿಕ ಗ್ರಂಥಾಲಯಕ್ಕೆ ಹೋಗಿ 2 ಸದಸ್ಯ ಕಾರ್ಡುಗಳನ್ನು ಮಾಡಿಸಿಕೊಂಡಿದ್ದೆವು ಅಲ್ಲಿನ ಗ್ರಂಥಪಾಲಕರು ಚಂದ್ರಶೇಖರ್ ಧೂಲೇಕರ್ ಅನ್ನುವವರು. ಅವರು ಸಹ ಲೇಖಕರು. ನಮ್ಮ ಆಸಕ್ತಿ ನೋಡಿ ಅವರಿಗೂ ಖುಷಿಯಾಗಿತ್ತು. ಕೆಲವೊಮ್ಮೆ  ಪೇಯಿಂಗ್ ಗೆಸ್ಟ್ ನಲ್ಲಿ ಇದ್ದಾಗ ಮಾಡಲು ಬೇರೆ ಕೆಲಸವಿಲ್ಲದೆ ಓದುವುದೊಂದೇ ಹವ್ಯಾಸ. ಪ್ರತಿದಿನ ಪುಸ್ತಕ ಬದಲಾಯಿಸಿ ಕೊಂಡು ಬರುತ್ತಿದ್ದೆವು.  ಬಹಳಷ್ಟು ಪುಸ್ತಕಗಳನ್ನು ಅಲ್ಲಿ ಓದಿದ್ದೇವೆ. ಹಾಗೆಯೇ ಕಚೇರಿಯ ನಿಯತಕಾಲಿಕೆಗಳು ಸಹ ಬಸ್ಟ್ಯಾಂಡ್ ಎದುರಿಗೆ ಇದ್ದ ಒಂದು ಗೂಡಿನ ಅಂಗಡಿಯಿಂದ ತೆಗೆದುಕೊಳ್ಳುತ್ತಿದ್ದು ಒಂದು ಪುಸ್ತಕ ಇಟ್ಟು ಅದರಲ್ಲಿ ಎಂಟ್ರಿ ಮಾಡಿಸಿ ಸಹಿ ಹಾಕುತ್ತಿದ್ದು ಅಷ್ಟೇ, ಅಲ್ಲಿಯೂ ಬಹಳ ಜನ ಪುಸ್ತಕ ಓದುತ್ತಿದ್ದು ಒಂದು ರೀತಿ ಸಾಹಿತ್ಯಕ ವಾತಾವರಣ ಇತ್ತು. ಇನ್ನು ಸುಲೋಚನಾ ನಾನು ಅಂತೂ ಸರಿ ಒಂದೇ ತರಹದ ಪುಸ್ತಕದ ಹುಳುಗಳು ತುಂಬಾ ಚೆನ್ನಾಗಿತ್ತು. ಈ ವಿಷಯದಲ್ಲಿ ನಿಮ್ಮಿಬ್ಬರಿಗೂ ಒಂದೇ ಗುಣ ಎಂದು ಹೇಳಿ ಪದೋನ್ನತಿ ತೆಗೆದುಕೊಳ್ಳಲು ಕಾರಣರಾದ ಟಿ ಎಂ ಪರಶಿವಮೂರ್ತಿಯವರಿಗೆ ಧನ್ಯವಾದಗಳನ್ನು ತಿಳಿಸಲೇ ಬೇಕು.ಸುಲೋಚನಾ ಅವರು ಅಷ್ಟೇ ತುಂಬಾ ಹೊಂದಾಣಿಕೆಯ ಗುಣದವರು. ನಮ್ಮಿಬ್ಬರಿಗೂ ಒಂದೇ ಒಂದು ಬಾರಿಯಾದರೂ  ಬಿನ್ನಾಭಿಪ್ರಾಯ ಬರಲಿಲ್ಲ. ಕಡೆಯವರೆಗೂ ಮೊದಲ ದಿನದ ಸ್ನೇಹ ಮುಂದುವರೆದುಕೊಂಡು ಬಂದಿತು. ನಿಜಕ್ಕೂ ಅವರ ಅಗಲಿಕೆ ನನಗಂತೂ ಒಂದು ತುಂಬಲಾರದ ನಷ್ಟ .ಇದುವರೆಗೂ ಅವರ ಬಗ್ಗೆ ಬರೆಯಲೇ ಸಾಧ್ಯವಾಗಿರಲಿಲ್ಲ ಈಗಲೇ ಅವರ ವಿಷಯ ಕಣ್ಣೀರಿಲ್ಲದೆ ಬರೆಯಲು ಸಾಧ್ಯವಾಗುತ್ತಿರುವುದು.ನಮ್ಮ ಮನೆಯಿದ್ದ ಕುಶಾಲನಗರ ಬಡಾವಣೆ ಎತ್ತರದಲ್ಲಿ ಇದ್ದುದರಿಂದ ಊರಿನ ದೇವಸ್ಥಾನ ನದಿ ತೀರ ಎಲ್ಲಾ ಕಿಟಕಿಯಿಂದಲೇ ತುಂಬಾ ಚೆನ್ನಾಗಿ ಕಾಣಿಸುತ್ತಿತ್ತು ಆ ಹಸಿರು ಮೇಲೆ ಜಿಟಿಪಿಟಿ ಮಳೆ ಕಿಟಕಿಯ ಬಳಿ ಕುಳಿತರೆ ಸಾಕು ಒಳ್ಳೆಯ ಸುಮನೋಹರ ದೃಶ್ಯ.ಅಲ್ಲಿದ್ದಾಗಲೇ ಸೆಪ್ಟೆಂಬರ್ 1998ರಲ್ಲಿ ನನ್ನ ತಂಗಿ ವೈಶಾಲಿಯ ಮಗ ನಿಶ್ಚಯ್ ಹುಟ್ಟಿದ್ದು ಆ ಸಮಯದಲ್ಲಿ ನಾನು 15 ದಿನ ರಜೆ ಹಾಕಿ ಮೈಸೂರಿಗೆ ಬಂದಿದ್ದೆ. ನಮ್ಮ ಮನೆಯ ಮೊಟ್ಟ ಮೊದಲ ಮೊಮ್ಮಗು ಅವನು ಎಲ್ಲರಿಗೂ ತುಂಬಾ ಖುಷಿಯಾಗಿತ್ತು. ಗರ್ಭಿಣಿಯಾಗಿದ್ದಾಗ ವೈಶಾಲಿ ಒಮ್ಮೆ ಅವಳ ಪತಿಯೊಂದಿಗೆ ಬೈಕ್ ನಲ್ಲೆ ಸಕಲೇಶಪುರಕ್ಕೆ ಬಂದಿದ್ದಳು ಎಲ್ಲರಿಂದ ಬೈಗುಳಗಳನ್ನು ತಿಂದಿದ್ದಳು.ಇನ್ನು ಫೆಲೋಶಿಪ್ ಪರೀಕ್ಷೆಗಳ ವಿಷಯಕ್ಕೆ ಬಂದರೆ ಓದಲು ಮನಸೇ ಬಂದಿರಲಿಲ್ಲ ಆದರೆ ಮೂರು ಪರೀಕ್ಷೆಗಳನ್ನು ತೆಗೆದುಕೊಂಡಾಗ ಮಧ್ಯೆ ಸಕಲೇಶಪುರಕ್ಕೆ ಹೋಗಲು ಸಾಧ್ಯವಿರದ ಕಾರಣ ರಜೆ ಸಿಗುತ್ತಿತ್ತು ಹಾಗಾಗಿ ಒಂದು ವಾರ ಮೈಸೂರಿನಲ್ಲಿ ಇರಬಹುದು ಎಂಬ ಆಸೆಗೆ ಅಲ್ಲಿದ್ದ ಎರಡು ವರ್ಷವೂ ನಾಮಕಾವಸ್ತೆಗೆ ಪರೀಕ್ಷೆ ತೆಗೆದುಕೊಂಡು ಬಂದು ಅರ್ಧ ಗಂಟೆ ಪರೀಕ್ಷೆ ಅಟೆಂಡ್ ಮಾಡಿ ವಾಪಸ್ ಹೋಗುತ್ತಿದ್ದುದು.ಹೀಗೇ ನಡೆದುಕೊಂಡು ಹೋಗುವಾಗ ನಾವಿದ್ದ ಮನೆಯ ಓನರ್ ರಾಜಮ್ಮ ಅವರ ಕಿರಿಕ್ ಆರಂಭವಾಯಿತು ಯಾರೋ ಅವರಿಗೆ ಆಫೀಸಿನಿಂದ ಮನೆಯನ್ನು ಲೀಸ್ ಮಾಡಿಸಿದರೆ ಎಲ್ ಐ ಸಿ ಇಂದಲೇ ಬಾಡಿಗೆ ಪಾವತಿ ಆಗುತ್ತದೆ. ಈಗ ಇರುವವರು ಬಿಟ್ಟರೂ ತಕ್ಷಣ ಮತ್ತೆ ಎಲ್ಐಸಿಯವರೆ ಬರಬಹುದು ಎಂಬ ವಿಷಯ ತಿಳಿದಿತ್ತು .ಹಾಗಾಗಿ ಮನೆಯನ್ನು ಲೀಸ್ ಮಾಡಿಸಿ ಎಂದು ಒಂದೇ ವರಾತ ಹಚ್ಚಿದರು. ಹಾಗೆ ಲೀಸ್ ಮಾಡಿಸಿದರೆ ನಮಗೆ ತೊಂದರೆ ಆಗುತ್ತಿತ್ತು. ನಾವು ಕೊಡುವ ಬಾಡಿಗೆಗಿಂತ ಮನೆಭತ್ಯ ಹೆಚ್ಚು ಬರುತ್ತಿತ್ತು .ಆರ್ಥಿಕವಾಗಿ ನಷ್ಟವಾಗುತ್ತಿತ್ತು. ಆದರೆ ಅವರಿಗೆ ಬರುವ ಹಣಕ್ಕಂತೂ ಏನು ವ್ಯತ್ಯಯ ಆಗುತ್ತಿರಲಿಲ್ಲ ನಾವು ಕೊಟ್ಟರೆ ಏನು ಎಲ್ಐಸಿ ಇಂದ ಬಂದರೆ ಏನು? ಆದರೆ ಆಕೆ ಕೇಳಲೇ ಸಿದ್ಧವಿರಲಿಲ್ಲ. ಲೀಸ್ ಮಾಡಿಸದಿದ್ದಲ್ಲಿ ಮನೆ ಬಿಟ್ಟುಬಿಡಿ ಎಂದು ಖಡಾ ಖಂಡಿತವಾಗಿ ಹೇಳಿದರು .ಮತ್ತೆ ಮಾಡುವುದೇನು ಬೇರೆ ಮನೆಯ ಹುಡುಕಾಟಕ್ಕೆ ತೊಡಗಿದೆವು. ಈ ಬಾರಿ ರವೀಶ್ ಅವರೇ ಬಂದು ಮನೆ ಹುಡುಕಲು ಸಹಾಯ ಮಾಡಿದರು.ಸಕಲೇಶಪುರದ ದೇವಸ್ಥಾನದ ಬೀದಿ ಸಂತೆಗೆ ಹತ್ತಿರದ ಗಾಯತ್ರಿ ಟೆಂಟ್ ಪಕ್ಕದ ಬಿಲ್ಡಿಂಗ್. ಮುಖ್ಯರಸ್ತೆಯಲ್ಲಿ ಬೇಕರಿ ನಡೆಸುತ್ತಿದ್ದವರು ಈ ಮನೆಯನ್ನು ಕಟ್ಟಿಸಿದ್ದರು .ಎರಡನೆಯ ಅಂತಸ್ತಿನಲ್ಲಿ ಎರಡು ಮನೆಗಳು. ಎದುರು ಬದುರು. ಅದರಲ್ಲಿ ಬೀದಿಯ ಕಡೆಗೆ ಮುಖ ಮಾಡಿದ ಮನೆಗೆ ನಾವು ಹೋಗುವುದು ಎಂದು ನಿರ್ಧಾರವಾಯಿತು ಹೊಸ ಮನೆ ಚೆನ್ನಾಗಿತ್ತು. ಹೋಗುತ್ತಲೇ ಇದ್ದ ಹಾಲ್ ವರಾಂಡದಷ್ಟೇ ಚಿಕ್ಕದಿತ್ತು .ಒಂದು ರೂಮ್ ಸ್ವಲ್ಪ ಪರವಾಗಿಲ್ಲ ಅಡುಗೆ ಮನೆ ಮಾತ್ರ ಹಾಲ್ ನಷ್ಟೇ ದೊಡ್ಡದಾಗಿ ಇತ್ತು. ಪಾತ್ರೆ ತೊಳೆಯಲು ಸಿಂಕ್ ಕಟ್ಟೆ ಎಲ್ಲಾ ಒಂದು ರೀತಿ ಚೆನ್ನಾಗಿ ಅನುಕೂಲಕರವಾಗಿ ಈಗಿರುವ ಮನೆಗಿಂತ ಚೆನ್ನಾಗಿಯು ಇತ್ತು. ಮೈಸೂರಿನಿಂದ ಬರುವಾಗ ದೇವಸ್ಥಾನದ ಬಳಿಯೇ ತಿಳಿದುಕೊಂಡರೆ ಮನೆಗೆ ಹೋಗಿ ನಂತರ ಆಫೀಸಿಗೆ ಬರಲು ಅನುಕೂಲವಾಗಿತ್ತು. ಇಲ್ಲಿ ಕೊಡುತ್ತಿದ್ದಷ್ಟೇ ಬಾಡಿಗೆ ಅಷ್ಟೇ ಅಡ್ವಾನ್ಸ್ ಇದ್ದಿದ್ರಿಂದ ಆರ್ಥಿಕವಾಗಿಯೂ ಏನು ತೊಂದರೆ ಅನಿಸಲಿಲ್ಲ. ಮನೆ ಬಿಡುತ್ತೇವೆ ಎಂದು ಹೇಳಿದಾಗ ಆಕೆಗೆ ಒಂದು ತರಹ ಆಯಿತು ನಾವು ಅವಳು ಹೇಳಿದಂತೆ ನಡೆಯಲಿಲ್ಲ ಎಂದು ಬೇಸರ ಇದ್ದರೂ ತೋರ್ಪಡಿಸಿಕೊಳ್ಳದೆ ಅಡ್ವಾನ್ಸ್ ಅನ್ನು ಸಕಾಲಕ್ಕೆ ಕೊಟ್ಟು ಸಹಕರಿಸಿದರು ಪಾಪ. ಆದರೆ ಅವರ ಲೆಕ್ಕಾಚಾರ ತಪ್ಪಿತಲ್ಲ  ನಮಗೆ ಬೇಗ ಮನೆ ಸಿಕ್ಕಿತಲ್ಲ ಅದು ನಮ್ಮ ಪುಣ್ಯ. ಈ ಮನೆಗೆ ರಸ್ತೆಯ ಕಡೆ ಒಂದು ಸಣ್ಣ ಬಾಲ್ಕನಿ ಸಹ ಇದ್ದು ಸಂಜೆಯ ವೇಳೆ ಕುಳಿತುಕೊಳ್ಳಲು ಅಲ್ಲೇ ಕುಳಿತು ಓದಲು ಎಲ್ಲಾ ಅನುಕೂಲವಿತ್ತು. ಆದರೆ ಕರೆಂಟು ಇಲ್ಲದಿದ್ದಾಗ ಮಾತ್ರ ಎರಡೆರಡು ಅಂತಸ್ತು ನೀರು ಬರಬೇಕಾಗಿದ್ದು ಮಾತ್ರ ದೊಡ್ಡ ಪನಿಶ್ಮೆಂಟ್. 3 _ 4 ಬಾರಿ ಆ ರೀತಿ ವಿದ್ಯುತ್ ನಿಲುಗಡೆಯಾಗಿ ನೀರು ಹೊರುವಂತಾಗಿತ್ತು. ಈ ಸಮಯದಲ್ಲಿ ನಮ್ಮ ತಂದೆಯವರಿಗೆ 60 ವರ್ಷ ತುಂಬಿತು ಷಷ್ಠ್ಯಬ್ದಿ ಸಮಾರಂಭವನ್ನು ಸಹ ಮೈಸೂರಿನಲ್ಲಿ ನಾವು ಮೂರು ಜನ ಅಕ್ಕ-ತಂಗಿಯರು ಸೇರಿ ಆಚರಿಸಿದೆವು. ವೈಶಾಲಿ ಆಗ ೩ ತಿಂಗಳ ಬಾಣಂತಿ. ನಮ್ಮ ತಾಯಿಗಂತೂ ತುಂಬಾ ಸಂತೋಷವಾಗಿತ್ತು.ಆನಂತರ ನಿಶ್ಚಯ್ ನಾಮಕರಣ. ಹೀಗೆ ಒಂದರ ಹಿಂದೊಂದು ಶುಭ ಸಮಾರಂಭಗಳು ನಡೆಯುತ್ತಿದ್ದವು. ನಮ್ಮ ಸೋದರತ್ತೆಯ ಮಗ ಶ್ರೀನಾಥನ ಮದುವೆ  ಆಗಲೇ ನಡೆದದ್ದು. ಆ ಸಮಯದಲ್ಲಿ ನಮಗೆ ಆಡಿಟ್ ನಡೆಯುತ್ತಿದ್ದುದರಿಂದ ನಾನು ಮದುವೆಗೆ ಹೋಗಲಾಗಲಿಲ್ಲ. ಸೋದರಮಾವ ಸೋಮುಮಾವನ ಮಗಳು ನಂದಿನಿ ಮದುವೆಗೆ ಅಮ್ಮ ಹೋಗಲೇಬೇಕಿತ್ತು. ನನ್ನ ತಂಗಿ ಬಾಣಂತಿ. ನಾನು ರಜೆ ಹಾಕಿ ಮೈಸೂರಿಗೆ ಹೋಗಿ ಅಮ್ಮನನ್ನು ಮದುವೆಗೆ ಕಳಿಸಿದೆ.ಚಿಕ್ಕಪ್ಪನ ಮಗ ಸಂಜೀವನ ಮದುವೆ ಬೆಂಗಳೂರಲ್ಲಿ ಆಯಿತು. ಶನಿವಾರ ಮಧ್ಯಾಹ್ನ ಆಫೀಸು ಮುಗಿಸಿ ಹೊರಟಿದ್ದು. ಗೊತ್ತಾಗದೆ ಷಟಲ್ ಬಸ್ನಲ್ಲಿ ಕೂತು ತಡವಾಗಿ ಬೆಂಗಳೂರು ತಲುಪಿದ್ದೊಂದು ದೊಡ್ಡ ಸಾಹಸ. ನಮ್ಮ ನಿಗಮದಲ್ಲಿ ಹೊಸದಾಗಿ ಪದೋನ್ನತಿ ಹೊಂದಿದವರಿಗೆ ತರಬೇತಿ ಕಾರ್ಯಕ್ರಮ ಇರುತ್ತದೆ .ಹೀಗಾಗಿ ನನಗೆ 25 5 98 ರಿಂದ 28 5 98ರ ವರೆಗೆ ಹೈದರಾಬಾದಿನ ಡೆಕ್ಕನ್ ಕಾಂಟಿನೆಂಟಲ್ ಹೋಟೆಲ್ ನಲ್ಲಿ ತರಬೇತಿಗೆ ಕರೆ ಬಂದಿತ್ತು .ನನ್ನೊಂದಿಗೆ ನಂದ ಶ್ರೀ ಕಟ್ಟಿ ಅಂದರೆ ಈ ಮುಂಚೆ ವಿಭಾಗೀಯ ಕಚೇರಿಯಲ್ಲಿ ನನ್ನ ಜೊತೆಗಿದ್ದ ನನ್ನದೇ ಬ್ಯಾಚ್ನ ಗೆಳತಿ. ಅವಳಿಗೆ ಮದುವೆಯಾಗಿ ಬೆಳಗಾವಿಗೆ

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಎಂಟು ಸವಿತಾ ದೇಶಮುಖ ಅವರಿಂದ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್‌ ಚೇತನ ಲೇ-ಸವಿತಾ ದೇಶಮುಖಜಯದೇವಿತಾಯಿಲಿಗಾಡೆಯವರ ಮೊಮ್ಮಗಳು ೧೯೩೨ರ ಸಮಯ….. ಜಯದೇವಿ ತಾಯಿಯವರು ತಮ್ಮ 20ನೆಯ ವಯಸ್ಸಿನಲ್ಲಿ ಪಾದಾರ್ಪಣೆ ಮಾಡಿದ್ದರು…… ಮೂರು ಮಕ್ಕಳ ತಾಯಿಯಾಗಿ ಜೀವನದ ಕೆಲವು ಹಂತಗಳಲ್ಲಿ ತೇರ್ಗಡೆಯಾದ ನಂತರ…ಮನೆ, ಮಕ್ಕಳು, ಜವಾಬ್ದಾರಿಗಳ ಮಧ್ಯೆ … ಬಿಡುವಿನ ಸಮಯ ಸಿಕ್ಕಾಗಲೆಲ್ಲ ಜಯದೇವಿತಾಯಿಯ ಹೃದಯದಲ್ಲಿ ಒಂದು ಹೊಸ ಆಸೆ ಮೊಳಕೆಯೊಡೆದು ಅದು ಫಲ ಕೊಡುವ ಕಾಲ ಬಂದಿತ್ತು …ಮರಾಠಿ ಭಾಷೆ ಬರೆಯಲು ಓದಲು ಕಲಿತವರಾಗಿದ್ದರು .ಮನೆಯಲ್ಲಿ ಮಾತ್ರ ಕನ್ನಡದಲ್ಲಿ ಮಾತನಾಡಿದವರು,ಹಾಡುವರು.. ಮನೆಯ ಕೆಲಸ ಆಳುಗಳ ವಹಿವಾಟುವೂ ಕನ್ನಡದಲ್ಲಿ ನಡೆದಿರುತ್ತಿತ್ತು.ಮಕ್ಕಳೊಂದಿಗೂ ಕನ್ನಡ ಭಾಷೆಯಲಿ ಮಾತನಾಡುತಿದ್ದರು…….  ಆದರೆ ಮನದೊಳಗೊಂದು ಅತಿ ದೊಡ್ಡ ಕೊರಗು —“ಕನ್ನಡ ಭಾಷೆ ಓದಲು ಬರೆಯಲು ಬರದ ಕೊರಗು ….??!! ಆ ಸಮಯದಲ್ಲಿ ಪ್ರತಿದಿನ “ವಾರದ” ಪಾಠಶಾಲೆಯಿಂದ ಇಬ್ಬರು ಜಂಗಮರು ಪ್ರಸಾದಕ್ಕೆ ಎಂದು ಮನೆಗೆ ಬರುತ್ತಿದ್ದರು.   ಜಂಗಮ ವಿದ್ಯಾರ್ಥಿಳಿಗೆ ತಮಗೆ ಕನ್ನಡ ಭಾಷೆಯ ಜ್ಞಾನವನ್ನು ಕೊಡಬೇಕು ಎಂದು ಕೇಳಿದಾಗ ಅವರು ಸಂತಸದಿಂದ ಒಪ್ಪಿಕೊಂಡರು . *ಕೇವಲ ಎಂಟು ದಿನಗಳಲ್ಲಿ ಕನ್ನಡದ ಅಕ್ಷರ ಮಾಲೆಗಳನ್ನು ಅವರು ಕಲಿತರು ಮೂರು ಮಕ್ಕಳು ಆದ ನಂತರ…!!!* “ಜಂಗಮರು ಹಾಕಿ ಕೊಡುತ್ತಿದ್ದ  ಅಕ್ಷರವನ್ನು ಬಹಳ ಸರಾಗವಾಗಿ, ಸರಳ- ಸಹಜವಾಗಿ ಕನ್ನಡವನ್ನು ನಾನು ಕಲಿತೆ ಅದು ನನ್ನ ತಾಯಿ ಭಾಷೆಯ ಮರ್ಮ…. ಬಲು ಬೇಗ   ಒತ್ತಕ್ಷರಗಳನ್ನು ವರ್ಣಮಾಲೆಗಳನ್ನು ಬರೆಯಲು ಪ್ರಾರಂಭಿಸಿದೆ” ಅಂತ ಹೇಳ್ತಿದ್ದರು.   ಕಲಿತ ಕನ್ನಡ ಭಾಷೆಯನ್ನು ಅದೆಷ್ಟು ಸಂಭ್ರಮಿಸಿದರು ಅಂದರೆ ಕೈಗೆ ಸಿಕ್ಕ ಎಲ್ಲ ವಚನಗಳ ಪುಸ್ತಕಗಳನ್ನು ತೆಗೆದುಕೊಂಡು ಓದಲು ಶುರು ಮಾಡಿದರು ಅವುಗಳನ್ನು ಚೆನ್ನಾಗಿ ಓದುತ್ತಿದ್ದೇನಾ ಇಲ್ಲವಾ  ಅನ್ನೋದನ್ನ ತಿಳಿದುಕೊಳ್ಳಲು ಬಹಳ ಸಮಯವೇನು ಬೇಕಾಗಲಿಲ್ಲ ಅಂತ ಹೇಳುವರು… ಮೊದಲ ದಿನ ಕನ್ನಡದ “ಅ” ಅಕ್ಷರವನ್ನು ಬರೆಯುವಾಗ ಅವರ ಕೈ ಕಂಪಿಸಿತು…ವಯಸ್ಸು ಅಡ್ಡಬಂತು…ಮಕ್ಕಳು ನಗಬಹುದು ಅತ್ತೆ ಗಂಡ ಮುನಿಸಿಕೊಳ್ಳಬಹುದು ಎನ್ನುವ ಭಯವೂ ಬಂದಿತು…ಆದರೆ ಹೃದಯದ ಉತ್ಸಾಹ ಆ ಭಯಕ್ಕಿಂತ ದೊಡ್ಡದಾಗಿತ್ತು.“ಸಿದ್ದರಾಮ” ಎಂಬ ಪದವನ್ನು ಕನ್ನಡದಲ್ಲಿ ಓದಿದಾಗಅವರು ಕಣ್ಣೀರಿಟ್ಟರು…ಅದು ಕೇವಲ ಪದವಲ್ಲ,ಅದು ಅವರ “ಗುರುವಿನ ನಾಮ”…. “ಭಕ್ತಿಯ ರೂಪ ಒಡಮೂಡಿ ಕನ್ನಡ ಭಾಷೆಯಲ್ಲಿ ನೋಡಿ ಸಂತೋಷವಾಯಿತು…..ಆ ದಿನ ಅವರು ಮತ್ತೆ ಒಂದು ಬಾಲಕಿ ಆಗಿದ್ದರು —ಹೊಸ ಅಕ್ಷರಗಳ ಮುಂದೆ ಕುತೂಹಲದಿಂದಪ್ರತಿ ಪದವು ಮುತ್ತಿನಂತೆ ಸಂಗ್ರಹಿಸುತ್ತಿದ್ದರು.ಕನ್ನಡದಲ್ಲಿ ಮೊದಲ ಅಕ್ಷರ ಮಾಲೆಗಳ ನೋಡಿ ಕ್ಷಣಅವರ ಮುಖದಲ್ಲಿ ಮೂಡಿದ ಆ ನಗುಮಕ್ಕಳು ಹುಟ್ಟಿದಾಗ ಕಂಡ ನಗುವಿನಷ್ಟೇ ಪವಿತ್ರವಾಗಿತ್ತು.ಅದು ಕೇವಲ ಭಾಷೆ ಕಲಿತ ಸಂತಸವಲ್ಲ…ಅದು ತನ್ನ ಆತ್ಮವನ್ನು ಶರಣ ಸಂಸ್ಕೃತಿಗೆ- ಜೋಡಿಸಿದ ಸಂತಸ,ವಚನಗಳ ಹೆದ್ದಾರಿ,ತನ್ನ ಅನುಭಾವದ ಬಾಗಿಲು ತೆರೆದ ಸಂತಸ,…..ತಾನು ತಾಯಿಯಾಗಿದ್ದರೂ ತಾನೂ ಇನ್ನೂ ಕಲಿಯಬಲ್ಲೆ ಎಂಬ ಆತ್ಮವಿಶ್ವಾಸದ ಜಯಘೋಷ ಸಾರಿತ್ತು. ….ಅದೇಷ್ಟೋತ್ತು ಕಂಬನಿ ಸುರಿದವು ಅಂತ  ಅಭಿಮಾನದಿಂದ ಹೇಳುತಿದ್ದರು.ಕಣ್ಣೀರಿನಲ್ಲಿ ಹೆಮ್ಮೆ  ಇತ್ತು. ಮರಾಠಿಯ ಮಗಳಾಗಿ,,ಕನ್ನಡದ ಸೊಸೆಯಾಗಿ….,ಎರಡು ಭಾಷೆಗಳ ಸೇತುವೆಯಾದರು ಮುಂದೆ  ….ಕನ್ನಡಿಗರ ತಾಯಾಗಿ ನಿಂದರು ಅಂತೇನು ಹೇಳಬೇಕಾಗಿ ಆಗಿಲ್ಲವೇ..!! ಎಲ್ಲ‌ ಬಲ್ಲವಳೆಂಬ /ಇಲ್ಲವದು ಭ್ರಮೆಯೆನಗೆಬಲ್ಲವರ ಪಾದಹಿಡಿಯುವೆ -ಬಲ್ಲಿದರುಕಲಿಸಿರಿ ಮತ್ತು ನುಡಿಸಿರಿ!! ಅಂತ ಹೇಳತಾಬಲ್ಲವರಿಂದ‌ ಕಲಿಯುತ ಮುಂದೆ ನಡೆದರು. 16-09-1895 ರಲ್ಲಿ ಸೊಲ್ಲಾಪುರದ ಮಹಾದಾನಿಯಾದ ರಾವ್ ಬಹದ್ದೂರ್ ಮಲ್ಲಪ್ಪ ವಾರದರು “ಸರಸ್ವತಿ ಸದನ “.ಎಂಬ ಶೈಕ್ಷಣಿಕ ಸಂಸ್ಕೃತಿಕ ಸಂಸ್ಥೆ ಸ್ಥಾಪನೆ ಮಾಡಿದ್ದರು . ಸರಸ್ವತಿ ಸದನ ಇಲ್ಲಿ ಮಹಿಳೆಯರಲ್ಲಿ ಸ್ವಾವಲಂಬಿ ಜೀವನದ ಅರಿವು, ಶಿಕ್ಷಣದ ಮಹತ್ವ,ಆರೋಗ್ಯದ ಬಗ್ಗೆ ತಿಳುವಳಿಕೆ ಮೂಡಿಸುವ ಕಾರ್ಯಕ್ರಮಗಳ ಅನುಷ್ಠಾನ ಮಾಡಲಾಗುತ್ತಿತ್ತು.  ೧೯೧೦ ರಲ್ಲಿ ಸರಸ್ವತಿ ಸದನ ಮೂರು ವಿಭಾಗದಲ್ಲಿ ತನ್ನ ಕೆಲಸ ಹಮ್ಮಿಕೊಂಡಿತ್ತು. ಕನ್ನಡ ಮಾತನಾಡುವವರಿಗಾಗಿ ವಾರದ ಮಲ್ಲಪ್ಪನವರ ಮನೆಯಲ್ಲಿ “ವೀರಶೈವ ಮಹಿಳಾ  ಜ್ಞಾನ” ಮಂದಿರ ಕಟ್ಟಲಾಗಿತ್ತು.  ಇನ್ನು ಮರಾಠಿ ಮಾತನಾಡುವವರಿಗಾಗಿ ಶ್ರೀ ಶಂಕರ ರಾವ ದೇವಾಂಕರ್ ಅವರ ಮನೆಯಲ್ಲಿ “ಸರಸ್ವತಿ ಮಂದಿರ “ಕಟ್ಟಲಾಗಿತ್ತು . ಗುಜರಾತಿ ಭಾಷಿಕರಿಗಾಗಿ ಹಿರಾಚಂದ್ರ ನೇಮಿಚಂದ್ರ ಮನೆಯಲ್ಲಿ ಶ್ರಾವೀಕಾಶ್ರಮ ಸಂಸ್ಥೆಗಳನ್ನು ಸ್ಥಾಪನೆ ಮಾಡಿದ್ದರು.ಮಹಿಳೆಯರ ಒಳತಿಗಾಗಿ ಪ್ರತಿ  ವಾರಕ್ಕೊಮ್ಮೆ ಸಭೆ ಸೇರಿ.. ಮೊದಮೊದಲಿಗೆ ಅರಿಶಿಣ ಕುಂಕುಮ ಕೊಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.ಎಡಬಿಡದೆ ಚಟುವಟಿಕೆಗಳು ನಡೆಯುತ್ತಿದ್ದವು. ಅಲ್ಲಿ ಪ್ರಾರ್ಥನೆ, ಕೀರ್ತನೆ ,ಪುರಾಣ ಪ್ರವಚನ ಸಂಪ್ರದಾಯ ಮಡಿ-ಮೈಲಿಗೆ ಅಂಥ ಮೂಢ ನಂಬಿಕೆಗಳಿಂದ ಮುಕ್ತರಾಗಿ ..ಧಾರ್ಮಿಕ ಸರಿಯಾದ ತಿಳುವಳಿಕೆ ಕೊಡುವುದು…ಅವರ ಕಾಳಜಿ‌ ಅವರೇ ವಹಿಸುವುದನ್ನು ಕಲಿಸುತ್ತಿದ್ದರು.  ಸ್ವಾವಲಂಬನೆಯ ಜೀವನ ನಡೆಸುವುದು ಬಗ್ಗೆ ತಿಳುವಳಿಕೆಯನ್ನು ಹೇಳಿಕೊಡಲಾಗುತ್ತಿತ್ತು .ವಾರದ ಮಲ್ಲಪ್ಪನವರ ಪತ್ನಿಯರಾದ ಗೌರವ್ವಬಾಯಿ ಮತ್ತು ಬಸವ್ವಬಾಯಿ ಹಾಗೂ ಅವರ ಮಗಳು ಸಂಗವ್ವನವರು ಮೇಲ್ವಿಚಾರಣೆ ವಹಿಸಿಕೊಂಡಿದ್ದರು.  ತಾಯಿಯೊಂದಿಗೆ ಜಯದೇವಿ ತಾಯಿಯವರು ಸರಸ್ವತಿ ಸದನದಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದರು.  ಮುಂದೆ 1932 ರಲ್ಲಿ ಮಹಿಳಾ ಜ್ಞಾನ ಮಂದಿರದ ಸಂಪೂರ್ಣ ಜವಾಬ್ದಾರಿಯನ್ನು ವಹಿಸಿಕೊಂಡರು ಏಕೆಂದರೆ ಪತಿ ಚೆನ್ನಮಲ್ಲಪ್ಪ ಲಿಗಾಡೆ ಅವರು ತಾಯಿಯವರ ಹೆಸರ ಮೇಲೆ ಜಗವನ್ನು ಖರೀದಿಸಿ ತಾಯಿಯವರ ಹೆಸರಿನಲ್ಲಿಯೇ ಕನ್ಯಾ ಶಾಲೆಯನ್ನು ಪ್ರಾರಂಭಿಸಿದರು. ಈ ಶಾಲೆಯು ಸೊಲ್ಲಾಪುರದಲ್ಲಿ 25 ವರ್ಷಗಳ ಕಾಲ ತಾಯಿಯವರ ಹೆಸರಿನಲ್ಲಿಯೇ ನಡೆದಿತ್ತು.  ತಾಯಿಯವರು ಈ ಶಾಲೆ ಗೆ ಸಿದ್ದರಾಮನ ಹೆಸರನ್ನೇ ಇಡಬೇಕೆಂದು ಒತ್ತಾಯಿಸಿದರು. “ಸಿದ್ದೇಶ್ವರ” ಶಾಲೆಯಾಗಿ ಪರಿವರ್ತನೆಗೊಂಡಿತು. ಈ ಶಾಲೆಯಲ್ಲಿ ಅವಿಶ್ರಾಂತವಾಗಿ ಓದುವುದನ್ನು ಕನ್ನಡದಲ್ಲಿ ಬರೆಯುವುದನ್ನು ರೂಢಿಸಿಕೊಂಡರು. ಸಿದ್ದೇಶ್ವರ ಕನ್ಯಾ ಪಾಠಶಾಲೆ ಸಿದ್ದೇಶ್ವರ ಕನ್ಯಾ ಪಾಠಶಾಲೆ ಜಯದೇವಿತಾಯಿಯವರ ಕಾರ್ಯ ಮಾಡುವ ಮುಖ್ಯವಾದ ಕಾರ್ಯ ಕ್ಷೇತ್ರಗಳು ಅಂದರೆ …ವಾರದ ಸಂಸ್ಕೃತ ಪಾಠಶಾಲೆ ,ಮಹಿಳಾ ಜ್ಞಾನ ಮಂದಿರ, ಸರಸ್ವತಿ ಸದನ ಹಾಗೂ ಸಿದ್ದೇಶ್ವರ ಕನ್ಯಾ ಶಾಲೆ, ಬಾಲ ಶ್ರಾವಿಕಾಶ್ರಮ ಮಂದಿರ  ಈ ಎಲ್ಲ ಶಿಕ್ಷಣ ಸಂಸ್ಥೆಗಳಲ್ಲಿ ನಿರಂತರವಾಗಿ ದುಡಿದರು .ಮೂರು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದರು. ಮಹಿಳೆಯರಲ್ಲಿ ಶಿಕ್ಷಣದ ಅರಿವು ,ರಾಷ್ಟ್ರೀಯ ಚಿಂತನೆ ,ನಾಡ ನುಡಿ ಪ್ರಜ್ಞೆ ಸಮಾಜದ ಚಟುವಟಿಕೆಯ ಮೂಲಕ ಸ್ವಾವಲಂಬನೆಯ ಬದುಕು, ದೇಶಿಯ ಚಿಂತನೆಗಳನ್ನು ಬೆಳೆಸುತ್ತಿದ್ದರು.  ಈ ಕಾಲಕ್ಕೆ ಗಾಂಧೀಜಿಯವರು ಭಾರತಾರದಾದ್ಯಂತ ಸ್ವಾತಂತ್ರ್ಯದ ಹೋರಾಟದಲ್ಲಿ ಜನರನ್ನು ಒಂದು ಗುಡಿಸುತ್ತಿದ್ದರು ಅವರ ಅಹಿಂಸಾವಾದ ,ಸ್ವದೇಶಿ ಚಿಂತನೆಯ  ಚಟುವಟಿಕೆಗಳಲ್ಲಿ ಜಯದೇವಿ ತಾಯಿಯವರು ಸಕ್ರಿಯವಾಗಿ ಭಾಗಿಯಾಗುತ್ತಿದ್ದರು. ಗಾಂಧೀಜಿ ಚಿಂತನೆಗಳು ಜಯದೇವಿಯವರಿಗೆ ತುಂಬಾ ಆಕರ್ಷಣೆ ಮಾಡಿದ್ದವು . ಇದೇ ಕಾಲಕ್ಕೆ ತಿಲಕರು ಸ್ವದೇಶಿ ಚಳುವಳಿಯ ನಾಲ್ಕು ಅಂಕಗಳಾದ ಸ್ವರಾಜ್ಯ ,ರಾಷ್ಟ್ರೀಯ ಶಿಕ್ಷಣ, ಸ್ವದೇಶಿ ಚಳುವಳಿ ,ವಿದೇಶಿ ಬಹಿಷ್ಕಾರ …..ಮೌಲ್ಯಗಳ ಪ್ರಚಾರಕ್ಕಾಗಿ ಮುಂಬೈ ಕರ್ನಾಟಕದಲ್ಲಿ ಪ್ರವಾಸ ಕೈಗೊಂಡಿದ್ದರುಆ ಕಾಲದಲ್ಲಿ ತಿಲಕರು ವಾರದವರ ಮನೆತನದಲ್ಲಿ ಗಣೇಶೋತ್ಸವವನ್ನು ಬಹಳ ವಿಜೃಂಭಣೆಯಿಂದ ಮಾಡುತ್ತಿರುವುದನ್ನು ನೋಡಿ ತಿಲಕರು ಸಾಮೂಹಿಕವಾಗಿ ಈ ರೀತಿಯಲ್ಲಿ ಗಣೇಶನನ್ನು ಪೂಜಿಸಿದರೆ ಸ್ವಾತಂತ್ರ ಹೋರಾಟದಲಿ ಎಲ್ಲ ಮತೀಯರು ಎಲ್ಲ ಜಾತಿಯವರು ಒಂದು ಸೇರಿ ಭಾರತೀಯರು ಒಂದಾಗಿ ಬ್ರಿಟಿಷರ ವಿರುದ್ಧ ಹೋರಾಡಬಹುದು ಎನ್ನುವ ವೈಚಾರಿಕತೆಯನ್ನು ಪಡೆದುಕೊಳ್ಳುತ್ತಾರೆ. ಭಾರತದಾದ್ಯಂತ ಗಣೇಶ ಉತ್ಸವವನ್ನು ಪ್ರಾರಂಭಿಸುವುದನ್ನು ಶುರು ಮಾಡಿದರು. ತಿರಕರು ವಾರದ ಮಲ್ಲಪ್ಪನವರಿಗೆ ಧನ್ಯವಾದ ಹೇಳಿರುವ ಆಕರ‌ ಲಭ್ಯವಾಗಿವೆ. ಅಂತೆಯೇ  ಜಯದೇವಿ ತಾಯಿಯವರು ಕೂಡ ಗಣೇಶನ ಪೂಜೆಯನ್ನು ಅತಿ ಸಂಭ್ರಮದಿಂದ ಅನುಸರಿಸುತ್ತಿದ್ದರು ಹಾಗೆ ಗಾಂಧೀಜಿಯವರ  ಆಚಾರ ವಿಚಾರಗಳನ್ನು ಕಾರ್ಯರೂಪದಲ್ಲಿ ತರುತ್ತಿದ್ದರು .ಅವರಲ್ಲಿಯ ರಾಷ್ಟ್ರ ಪ್ರೇಮವು ಉತ್ಕಟವಾಗಿತ್ತು.  ರಾಷ್ಟ್ರೀಯ ಚಟುವಟಿಕೆ ಹಾಗೆ ಚರ್ಚೆಗಳಲ್ಲಿ ಭಾಗವಹಿಸುತ್ತಿದ್ದರು .   ಕರ್ನಾಟಕದಲ್ಲಿ ಸುಮಾರು 48 ರಾಷ್ಟ್ರೀಯ ಶಾಲೆಗಳದ್ದವು. ಜಯದೇವಿ ತಾಯಿಯವರು ರಾಷ್ಟ್ರೀಯ ಶಾಲೆಗಳನ್ನು ಪ್ರೋತ್ಸಾಹಿಸುತ್ತಿದ್ದರು…  ಸೊಲ್ಲಾಪುರದಲ್ಲಿ ಬಾಲ “ವಿದ್ಯಾ ಮಂದಿರ, ಶ್ರಾವಿಕಾಶ್ರಮ ಶಾಲೆ ,ಹುಬ್ಬಳ್ಳಿಯಲ್ಲಿ ‘ಭಾರತೀಯ ಹೈಸ್ಕೂಲ್,” ಧಾರವಾಡದಲ್ಲಿ “ಜಯದೇವಿತಾಯಿ ಲಿಗಾಡೆ” ಹೈಸ್ಕೂಲ್ ಶಾಲೆಗಳನ್ನು ಆರಂಭಿಸಿದ್ದರು. ಅಲ್ಲಿ ರಾಷ್ಟ್ರೀಯ ವಿಚಾರಗಳ ಕುರಿತು ಚರ್ಚೆಗಳು ನಡೆಯುತ್ತಿದ್ದವು. *ಸರಸ್ವತಿ ವಿದ್ಯಾ ಮಂದಿರ*  ತಾಯಿ ಸಂಗವ್ವ ಮಡಿಕೆ ,ಭಾಗೀರಥಿಬಾಯ್, ಪಂಚವ್ವಬಾಯಿ ಅವರು ಅಸಹಕಾರ ಚಳುವಳಿಯಲ್ಲಿ ಧುಮುಕಿದ್ದರೂ ಅದೇ ರೀತಿಯಾಗಿ ತಾಯಿಯವರು ಗಂಡನ ಮನೆಯಲ್ಲಿ ಇದ್ದುಕೊಂಡು ಗಾಂಧೀಜಿಯವರು ಕರೆ ಕೊಡುತ್ತಿದ್ದ ಎಲ್ಲ ರಾಷ್ಟ್ರೀಯ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದರು. ಕನ್ನಡವನ್ನು ಕಲಿಯುತ್ತಲೇ ಮುಂದೆ ಕನ್ನಡದ ವೇಧಾವಿ ಭಾಷಣಕಾರ್ತಿಯಾಗಿ ಪರಿವರ್ತಿಸಿದರು.ಮೊಟ್ಟ ಮೊದಲ ಬಾರಿ ಜಯದೇವಿ ತಾಯಿಯವರು ಭಾಷಣವನ್ನು ಮಾಡಿದ ನೆನಪನ್ನು ಮಾಡಿಕೊಳ್ಳುತ್ತಿದ್ದರು…… *ಮೊಟ್ಟ ಮೊದಲ ಬಾರಿ ಭಾಷಣ ಮಾಡಿದ ವಾರದ ವಾಡೆ* ಮೊದಲಸಲ ಬಾಷಣ ಮಾಡಿದ ವಾಡೆ ಮನೆಯ ಎದುರುಗಡೆ ಸ್ಥಿತವಾದ ವಾರದವರ ಮನೆಯಲ್ಲಿ ತಿಂಗಳಿಗೊಮ್ಮೆ  ಅಕ್ಕಮಹಾದೇವಿಯ  ಪುರಾಣ ಪಠಣ ಮಾಡಿದ ಗುರುಗಳು ಜಯದೇವಿ ತಾಯಿಯವರನ್ನು ಕರೆದು “ನಾಳೆ ನೀನೇ ಭಾಷಣವನ್ನು ಮಾಡಿ ಪುರಾಣದ ಸಮಾಪ್ತಿಯನ್ನು ಮಾಡಬೇಕು “ಎಂದು ಕೇಳಿಕೊಂಡರು…  ಜಯದೇವಿ ತಾಯಿಯವರಿಗೆ  ಕೈ ಕಾಲು ಕಂಪಿಸಿದವು ಹೊಟ್ಟೆಯಲ್ಲಿ ಚಿಟ್ಟೆ ಓಡಾಡಿದಂಗ ಆಯಿತುಅಂತ ಹೇಳುತ್ತಿದ್ದರು. ಮೊಟ್ಟ ಮೊದಲ ಬಾರಿಗೆ ಭಾಷಣ ಮಾಡುವುದು ಸಾಮಾನ್ಯ ಕೆಲಸವಾಗಿರಲಿಲ್ಲ ಏಕೆಂದರೆ ಕೇವಲ ತಾಯಿ ಭಾಷಣ ಮಾಡುವುದನ್ನು ಕೇಳುತ್ತಿದ್ದರು… ಆದರೆ ಭಾಷಣ ಮಾಡಿದವರಾಗಿರಲಿಲ್ಲ.. ತಂದೆಯ ಹತ್ತಿರ ಹೋಗಿ ಏನನ್ನು ಮಾತನಾಡಬೇಕು ಅನ್ನೋದನ್ನ ಸುಮಾರು 9 -10 ಪುಟಗಳಷ್ಟು ಭಾಷಣವನ್ನು ಬರೆದುಕೊಂಡು ಬಂದು…. ಪುಟಗಳಲ್ಲಿನ ಒಂದು ಅಕ್ಷರವನ್ನು ಕೂಡ ಬಿಡದಂತೆ ಮರು ದಿವಸವೇ  ಭಾಷಣ ಮಾಡಿದರು.ಆ ಭಾಷಣವು ಎಲ್ಲರ ಮೇಲೆ ಅತ್ಯಂತ ಪ್ರಭಾವ ಬೀರಿದ್ದು ಹಾಗೂ ಪೂರ್ತಿಯಾಗಿ ಎಲ್ಲರ ಮನ ಗೆದ್ದಿದ್ದರು.ತಾಯಿಯವರು ಮಾಡುತ್ತಿದ್ದ ಭಾಷಣವನ್ನು ಕೇಳಿದ ತಂದೆ ಕಣ್ಣುನೀರು ಉರಿದವು… ತಾಯಿ  ಮಗಳನ್ನು ತಬ್ಬಿಕೊಂಡಿದ್ದರು .ಹಾಗೆ ಗೌರವ್ವಬಾಯಿಯು   ಬೆರಳುಗಳಿಂದ ನಿವಾಳಿಸಿ ಲಟ್ಟಿ ಮುರದಿದ್ದರು.ಇನ್ನೂ ಸಮಾಜದ ಸ್ತ್ರೀಯರೆಲ್ಲರೂ …ಬಂದಂತಹ ಎಲ್ಲ ಅತಿಥಿಗಳು ಅತ್ಯಂತ ಹೆಮ್ಮೆಯಿಂದ ನೋಡುತ್ತಿರುವ ದೃಶ್ಯ ಮನಸ್ಸಿಗೆ ಬಹಳ ಪ್ರಫುಲ್ಲತೆ ತಂದಿದ್ದು ….. ಮನದಲ್ಲಿ ಸಾವಿರ ಬಾರಿ ಸಿದ್ದರಾಮಯ್ಯನವರು ನೆನೆಸಿ ಧನ್ಯವಾದಗಳು ಹೇಳಿದ್ದರು.ಹಾಗೆ ಅತ್ತೆಯು ಭಾಷಣಗಾರತೀಯ ಮಗಳು ಅಂತ  ಅಣುಕಿಸುತ್ತಿರುವ ಮಾತುಗಳು ಕೂಡ  ನೆನಪಿಗೆ ಬಾರದೇ ಇರಲಿಲ್ಲ ಅಂತ ಹೇಳಿದರು.  ಮುಂದೆ ಪ್ರಯಾಗಬಾಯಿ ಅತ್ತೆಯು ಕೂಡ ತಾಯಿಯವರು ಮಾಡುವ ಭಾಷಣದ ಅಭಿಮಾನಿಗಳಾದರು.ಗಂಡ ಚೆನ್ನಮಲ್ಲಪ್ಪನವರು ತುಂಬಾ ಅಭಿಮಾನ ಪಡುವಂತ ಆಯ್ತು. *ಶರಣರ ಕರುಣೆಯು ಕಾಸರಕವಲೊಡೆದು ಹರೆದು ಹಾಯದಿತ್ತಎನ ಮೇಲೆ ಸಿದ್ದನ ವರವಾಗಿತ್ತು ..*… ಮುಂದೆ ಅವರ ಜನಜಾಗೃತಿಯ ಕಾರ್ಯ-ಭಾಷಣ ಗಾರ್ತಿಯ ಪಯಣ ಸಾಗುತ್ತಲೇ ನಡೆಯಿತು. ಅಲ್ಲಲ್ಲಿ ಎಲ್ಲ ಸಮಾಜದಲ್ಲಿ ಭಾಷಣಗಳನ್ನು ಮಾಡುತ್ತಿದ್ದರು.  ಸುತ್ತಲಿನ ಹಳ್ಳಿಗಳಿಂದ ಊರುಗಳಿಂದ ಭಾಷಣ ಮಾಡುವುದಕ್ಕಾಗಿ ಆಮಂತ್ರಣ ಬರಲಾರಂಸಿದವು .ಅನೇಕ ಶರಣ ಅನುಭಾವಿಗಳ ಒಡನಾಟ ಬೆಳೆಯ ಲಾರಂಭಿಸಿತು. ಕನ್ನಡ ಮೇರು ಸಾಹಿತ್ಯದ ಅಧ್ಯಯನ, ಶರಣ ಸಂಸ್ಕೃತಿಯ ಪರಂಪರೆಯ ಆಚರಣೆಮಾಡುತ್ತಾ ನಾಡಿನ ಮೂಲೆ ಮೂಲೆಗಳಲ್ಲಿ ಹೋಗಿ ಭಾಷಣವನ್ನು ಕೊಡುವುದು ಸಮಾಜದ ಸೇವೆಯನ್ನು ಮಾಡುವುದು ರಾಜ್ಯದ ರಾಷ್ಟ್ರದ ಅನೇಕ ಸಂತರು ಮಹಾತ್ಮರು, ಶಿವಯೋಗಿಗಳು, ಮಹಾನುಭಾವರೊಂದಿಗೆ ಜೊತೆ ಗೂಡಿ ಅನೇಕ ಕಾರ್ಯಗಳನ್ನು ಹಮ್ಮಿಕೊಳ್ಳಲಾರಂಬಿಸಿದರು. ಜಯದೇವಿ ತಾಯಿ ಅವರ ಸರ್ವತೋಮುಖ ಸಮಾಜದ ಕಾರ್ಯಗಳಿಗೆ ಹೇಗೆ ಮುಂದುವರೆದವು ಅನ್ನುವದ ಮುಂದಿನ ವಾರ ನೋಡೋಣ ಬನ್ನಿ….. ಸವಿತಾ ದೇಶಮುಖ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ

ಧಾರಾವಾಹಿ ಸಂಗಾತಿ-112 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ಅನಾಥಾಶ್ರಮದ ಕೆಲಸಕ್ಕೆ ಹೊರಟ ಮಗಳು ಬಂಗಲೆಯಿಂದ ಇಬ್ಬರೂ ಮನೆಗೆ ಬಂದ ನಂತರ ಮೂರನೇ ಮಗಳ ಜೊತೆಗೆ ಕುಳಿತು ಅಮ್ಮ ಹೇಳಿದ ವಿಷಯದ ಬಗ್ಗೆ ಚರ್ಚಿಸಿದರು. ಇಷ್ಟು ಸಣ್ಣ ವಯಸ್ಸಿನಲ್ಲಿಯೇ ಅನಾಥಾಶ್ರಮದ ಮಕ್ಕಳ ಮೇಲ್ವಿಚಾರಣೆ ನನ್ನ ಮಗಳಿಂದ ಸಾಧ್ಯವೇ? ಕಲಿಸುವ ವಿಷಯದಲ್ಲಿ ಎರಡು ಮಾತಿಲ್ಲ. ಅವಳು ಖಂಡಿತ ಅಲ್ಲಿನ ಮಕ್ಕಳ ಶಾಲೆಯ ಪಠ್ಯ ವಿಷಯಗಳ ಕಲಿಕೆಯ ಸಹಾಯಕ್ಕೆ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ. ಅದರಲ್ಲಿ ನನಗೆ ಸಂಶಯವಿಲ್ಲ. ಆದರೆ ಅಲ್ಲಿನ ಕೆಲಸ ಕಾರ್ಯಗಳನ್ನು ನೋಡಿಕೊಳ್ಳಲು, ಮಕ್ಕಳ ವಿಷಯದಲ್ಲಿ ಕಟ್ಟುನಿಟ್ಟಾಗಿ ಇರಲು ನನ್ನ ಮಗಳು ಸಮರ್ಥಳೇ? ಈ ಚಿಕ್ಕ ಹುಡುಗಿಯ ಮಾತನ್ನು ಅಲ್ಲಿನ ಮಕ್ಕಳು ಅನುಸರಿಸಿಯಾರೇ? ಆ ಮಕ್ಕಳ ನಡುವೆ ಈಕೆಯು ಕೂಡ ಮಕ್ಕಳಂತೆ ಅಲ್ಲವೇ? ಅಲ್ಲಿನ  ಖರ್ಚು- ವೆಚ್ಚ, ಉಳಿತಾಯ ಇತರೆ ವಿಷಯಗಳ ಬಗ್ಗೆ ಇವಳಿಗೆ ಯಾವುದೇ ಅರಿವಿಲ್ಲ. ಅಮ್ಮ ಹೇಳಿದಂತೆ ಅವಳಿಗೆ ಸಹಾಯಕ್ಕಾಗಿ ಅಲ್ಲಿ ಎಲ್ಲರೂ ಇರುತ್ತಾರೆ. ಅವಳು ಕೂಡ ಅಲ್ಲಿ ಇದ್ದುಕೊಂಡು ತನ್ನ ವಿದ್ಯಾಭ್ಯಾಸ ಮುಂದುವರಿಸಬಹುದು ಎಂದು ಹೇಳಿದ್ದಾರೆ. ಮೂರು ವರ್ಷದ ಪದವಿ ತರಗತಿಯನ್ನು ಮುಗಿಸಿದ ನಂತರ ಅವಳಿಗೆ ಯಾವುದಾದರೂ ಒಳ್ಳೆಯ ಕೆಲಸ ಸಿಗಬಹುದು. ಬಿ ಎಡ್ ತರಬೇತಿ ಪಡೆದು ಹೈ ಸ್ಕೂಲ್ ಶಿಕ್ಷಕಿಯೂ ಆಗಬಹುದು. ಅಲ್ಲದೇ ಕನ್ನಡ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಟೈಪಿಂಗ್ ಸಹ ಕಲಿತಿದ್ದಾಳೆ. ನಮಗೂ ಈಗ ಹಣದ ಅಗತ್ಯವಿದೆ. ಇವಳಿಗೊಂದು ಒಳ್ಳೆಯ ಕೆಲಸ ಸಿಕ್ಕರೆ ಮುಂದೆ ನಾವು ಒಳ್ಳೆಯ ದಿನಗಳನ್ನು ನೋಡಬಹುದು.  ನನಗೆ ಸಹಾಯ ಮಾಡುವುದಕ್ಕಾಗಿ ನನ್ನ ಮಕ್ಕಳು ಯಾವುದೇ ರೀತಿಯ ಕೆಲಸವನ್ನು ಮಾಡಲು ತಯಾರಿದ್ದಾರೆ. ಹೈಸ್ಕೂಲ್ ಹಂತದಲ್ಲಿರುವಾಗಲೇ ತಮಗೆ ರಜೆ ಇದ್ದಾಗ ಕಾಫಿ ತೋಟಕ್ಕೆ ಹೋಗಿ, ಕಾಫಿ ಹಣ್ಣುಗಳನ್ನು ಕೊಯ್ದು ತಮಗೆ ಸಾಧ್ಯವಾದಷ್ಟು ಹಣವನ್ನು ಗಳಿಸಿ ನನ್ನ ಕೈಲಿಟ್ಟಿದ್ದಾರೆ. ನಾವು ಓದುತ್ತಿರುವ ಮಕ್ಕಳು ಎನ್ನುವ ಅಹಂಭಾವವಿಲ್ಲದೆ ಸೊಂಟಕ್ಕೆ ಗೋಣಿ ಚೀಲವನ್ನು ಕಟ್ಟಿ, ನಾನು ತುಂಬಿಸಿಕೊಟ್ಟ ಊಟದ ಬುತ್ತಿಯನ್ನು ತೆಗೆದುಕೊಂಡು ಹೋಗಿ, ಹಣ್ಣು ಕೊಯ್ಯುವ ಅಭ್ಯಾಸ ಇಲ್ಲದಿದ್ದರೂ ಕೂಲಿ ಕೆಲಸಗಾರರ ಜೊತೆ ಸೇರಿ ಹುಮ್ಮಸ್ಸಿನಿಂದ ನನ್ನ ಮೂವರು ಮಕ್ಕಳೂ ಅವರ ಜೊತೆ ಹಣ್ಣುಗಳನ್ನು ಕೊಯ್ದು ದೊಡ್ಡ ಚೀಲದಲ್ಲಿ ತುಂಬಿಸಿ ಟ್ರ್ಯಾಕ್ಟರ್ ಗೆ ಹಾಕಿ, ಕಾಫಿ ಕಣದಲ್ಲಿ ಅವರ ಚೀಲಗಳನ್ನು ಗುರುತಿಸಿ ತೆಗೆದು ಅದನ್ನು ತೂಕ ಹಾಕಿಸಿ, ಪಲ್ಪರ್ ಮಾಡುವಲ್ಲಿಗೆ ತೆಗೆದುಕೊಂಡು ಹೋಗಿ ಕೊಟ್ಟು ಸಂಬಳವನ್ನು ಪಡೆದು ಖುಷಿಯಿಂದ ತಮ್ಮ ಸಂಪಾದನೆಯನ್ನು…. ‘ಅಮ್ಮಾ…..ನೋಡು…. ನಾವೆಷ್ಟು ಸಂಪಾದನೆ ಮಾಡಿದ್ದೇವೆ…. ಎಂದು ಕಣ್ಣರಳಿಸಿ ಸಂತೋಷದಿಂದ ನನ್ನ ಕೈಲಿಟ್ಟಿದ್ದಾರೆ….. ಒಂದು ಬಿಡಿಗಾಸನ್ನು ಕೂಡಾ ನಮಗಾಗಿ ಕೊಡಿ ಎಂದು ಆ ಮಕ್ಕಳು ಕೇಳಿಲ್ಲ….”ಬೇಡ ಮಕ್ಕಳೇ ನಿಮಗಿದು ಅಭ್ಯಾಸವಿಲ್ಲದ ಕೆಲಸ…. ನೀವಿನ್ನೂ ಚಿಕ್ಕವರು…..ತೋಟದ ಗಿಡಗಳ ನಡುವೆ ಇಳಿಜಾರಿನಲ್ಲಿ ಕೂಡ ಇಳಿದು ಹಣ್ಣುಗಳನ್ನು ಕೊಯ್ಯಬೇಕು…. ನಿಮ್ಮಿಂದ ಇದು ಸಾಧ್ಯವಾಗದು…. ಎಂದು ನಾನು ಹೇಳಿದಾಗ…. ಏನು ಆಗೋದಿಲ್ಲ ಅಮ್ಮಾ… ಅಲ್ಲಿ ಕೆಲಸ ಮಾಡುವ ಕೆಲಸಗಾರರು ನಮಗೆ ಪರಿಚಿತರಲ್ಲವೇ?…. ರೈಟರ್ ಕೂಡ ಹೇಗೆ ಹಣ್ಣುಗಳನ್ನು ಕೊಯ್ಯಬೇಕೆಂದು ನಮಗೆ ತಿಳಿಸುತ್ತಾರೆ”…. ಎಂದು ಹೇಳಿ ನನ್ನ ಸಮ್ಮತಿಯನ್ನು ಪಡೆದುಕೊಂಡು ಹಣ್ಣು ಕೊಯ್ಯುವ ಕೆಲಸಕ್ಕೆ ಕೂಡ ಹೋಗಿದ್ದಾರೆ. ಆದರೆ ಅನಾಥಾಶ್ರಮದ ಕೆಲಸ ಹೆಚ್ಚು ಜವಾಬ್ದಾರಿಯುತವಾದದ್ದು. ಇದನ್ನು ನಿಭಾಯಿಸಲು ನನ್ನ ಈ ಮಗಳ ಕೈಲಿ ಸಾಧ್ಯವೇ? ಇವಳಿಂದೇನಾದರೂ ಪ್ರಮಾದವಾದರೆ ಕಷ್ಟವಲ್ಲವೇ? ನಾನು ‘ಹೂಂ’ ಅಂದರೆ ಇವಳು ಖಂಡಿತ ಈ ಕೆಲಸಕ್ಕೆ ಹೋಗುತ್ತಾಳೆ. ನೋಡೋಣ ಅವಳ ತೀರ್ಮಾನ ಏನೆಂದು ಎಂದು ಯೋಚಿಸುತ್ತಾ…. ಮಗಳೇ, ನೀನು ಅಮ್ಮ ಹೇಳಿದ ಈ ಕೆಲಸವನ್ನು ಮಾಡಬಲ್ಲೆಯೇ? ನಿನ್ನಿಂದ ಇದು ಸಾಧ್ಯವೇ? ಎಂದು ಸುಮತಿ ಕೇಳಿದಾಗ…. ಅಮ್ಮಾ …ಸ್ವಲ್ಪ ದಿನ ಹೋಗಿ ಅಲ್ಲಿ ಇದ್ದು ಕೆಲಸ ಮಾಡಿ ನೋಡುತ್ತೇನೆ…. ಸಾಧ್ಯವಾದರೆ ಮುಂದುವರೆಸುತ್ತೇನೆ… ಇಲ್ಲದಿದ್ದರೆ ಆ ಕೆಲಸವನ್ನು ಬಿಟ್ಟು ಬಂದು ಇಲ್ಲಿ ನಿನ್ನ ಜೊತೆ ಇರುತ್ತೇನೆ….. ನನ್ನ ಡಿಗ್ರಿ ಮುಗಿದ ಕೂಡಲೇ ಯಾವುದಾದರೂ ಸಣ್ಣ ಪುಟ್ಟ ಕೆಲಸ ಸಿಕ್ಕರೂ ಸೇರಿಕೊಂಡು ನಿನ್ನ ಜವಾಬ್ದಾರಿಯನ್ನು ಸ್ವಲ್ಪವಾದರೂ ಕಡಿಮೆ ಮಾಡಬೇಕು ಎನ್ನುವ ಹಂಬಲ ನನಗೆ ಇದೆ ಅಮ್ಮ…. ನಾನು ಅನಾಥಾಶ್ರಮಕ್ಕೆ ಹೋಗುತ್ತೇನೆ …. ಹೇಗಿದ್ದರೂ ಅದು ನಾನು ಕಳೆದ ಪರಿಸರವಲ್ಲವೇ? ವಾರಕ್ಕೊಮ್ಮೆ ಬಂದು ನಿನ್ನನ್ನು ನೋಡಬಹುದಲ್ಲವೇ?…. ಎಂದಾಗ ಸುಮತಿ ಮಗಳನ್ನು ಅಪ್ಪಿಕೊಂಡಳು. ಅವಳ ಕಣ್ಣುಗಳು ತುಂಬಿ ಬಂತು. ಈ ಮಗಳು ನನ್ನ ಜೊತೆ ಇದ್ದಿದ್ದೇ ಕಡಿಮೆ. ಇವಳಿಗೆ ನಾಲ್ಕುವರೆ ವರ್ಷವಿದ್ದಾಗ ಅನಾಥಾಶ್ರಮಕ್ಕೆ ಸೇರಿದ ಹುಡುಗಿ, ಎಂಟನೇ ತರಗತಿಯಿಂದ 10ನೇ ತರಗತಿವರೆಗೂ ನನ್ನ ಹಿರಿಯ ಮಗಳ ಮನೆಯಲ್ಲಿದ್ದಳು. ಈಗ ಒಂದೆರಡು ವರ್ಷದಿಂದ ನನ್ನ ಜೊತೆ ಇದ್ದಾಳಷ್ಟೇ…. ಹೆಣ್ಣು ಮಕ್ಕಳು ಹೇಗಿದ್ದರೂ ಮುಂದೆಯಾದರೂ ನನ್ನನ್ನಗಲಿ ಇನ್ನೊಬ್ಬರ ಮನೆಗೆ ಹೋಗಬೇಕಾದವರೇ…. ಆದರೆ ಅಲ್ಲಿಯವರೆಗೂ ನನ್ನ ಜೊತೆಗಿರುವ ಅದೃಷ್ಟವಿಲ್ಲವೇ ದೇವರೇ?…. ಮಗಳ ಜೊತೆ ಇದ್ದು ಆಸೆ ಪೂರೈಸಿಲ್ಲ…. ಇಷ್ಟು ಬೇಗ ಮತ್ತೊಮ್ಮೆ ಅಗಲಿಕೆಯೇ? ಎಂದು ತನ್ನಲ್ಲೇ ಸ್ವಗತ ಹೇಳಿಕೊಂಡಳು. ತನ್ನ ಮಗಳನ್ನು ಅನಾಥಾಶ್ರಮದಲ್ಲಿ ಕೆಲಸಕ್ಕೆ ಕಳುಹಿಸದೆ ಬೇರೆ ದಾರಿ ಇರಲಿಲ್ಲ. ಅಕ್ಕನ ತೀರ್ಮಾನ ಕೇಳಿದಾಗ ತಂಗಿಗೆ ಬಹಳ ದುಃಖವಾಯಿತು. ಏಕೆಂದರೆ ಅಕ್ಕ ಎಂದರೆ ಅವಳಿಗೆ ಬಹಳ ಪ್ರೀತಿ. ಅಕ್ಕನ ಜೊತೆ ಕಾಲ ಕಳೆಯುವುದೆಂದರೆ ಅವಳಿಗೆ ಎಲ್ಲಿಲ್ಲದ ಸಂತೋಷ. ಅಕ್ಕನ ಜೊತೆ ಕಳೆದ ಕ್ಷಣಗಳು ಅವಳ ಅತ್ಯಂತ ಸಂತೋಷದ ಸಮಯವಾಗಿದ್ದವು. ಕೊನೆಯ ತಂಗಿಯು ಜೊತೆಯಲ್ಲಿಲ್ಲ ಅವಳು ದೂರದ ನವೋದಯ ಶಾಲೆಯಲ್ಲಿ ಓದುತ್ತಿರುವಳು. ವಾರ್ಷಿಕ ರಜೆ ಇದ್ದಾಗ ಮಾತ್ರ ಮನೆಗೆ ಬರುವಳು. ಈಗ ಅಕ್ಕ ಅನಾಥಾಶ್ರಮದ ಮೇಲ್ವಿಚಾರಕಿ ಹಾಗೂ ಶಿಕ್ಷಕಿಯಾಗಿ ಕೆಲಸಕ್ಕೆ ಸೇರಿಕೊಳ್ಳುತ್ತಿದ್ದಾಳೆ. ತಾಯಿಯ ಜೊತೆ ಇರುವುದೆಂದರೆ ಅವಳಿಗೆ ಸಂತೋಷದ ವಿಚಾರವೇ, ಆದರೂ ಸಣ್ಣ ವಯಸ್ಸಿನಿಂದ ಅಕ್ಕನ ಜೊತೆ ಅಕ್ಕನ ಪ್ರೀತಿಯಲ್ಲಿ ಕಳೆದ ಅವಳಿಗೆ ಈಗ ಅವಳು ಮತ್ತೆ ದೂರ ಹೋಗುತ್ತೇನೆ ಎಂದಾಗ ಸಂಕಟವಾಯಿತು. ಆದರೂ ಅವಳಿಗೂ ತಮ್ಮ ಮನೆಯ ಪರಿಸ್ಥಿತಿಯ ಅರಿವಿದ್ದ ಕಾರಣ ಏನೂ ಮಾತನಾಡದೆ ಸಮ್ಮತಿ ಸೂಚಿಸಿದಳು. ಸುಮತಿ ಬಂಗಲೆಗೆ ಹೋಗಿ ಅಮ್ಮನನ್ನು ಭೇಟಿ ಮಾಡಿ, ನನ್ನ ಮಗಳು ಅನಾಥಾಶ್ರಮದಲ್ಲಿ ಕೆಲಸಕ್ಕೆ ಸೇರಿಕೊಳ್ಳಲು ಸಮ್ಮತಿಸಿದ್ದಾಳೆ ಎನ್ನುವ ವಿಚಾರವನ್ನು ಅಮ್ಮನಿಗೆ ತಿಳಿಸಿದಳು. ವಿಷಯ ತಿಳಿದು ಅಮ್ಮನಿಗೆ ಸಂತೋಷವಾಯಿತು. ಶಾಲೆ ಪ್ರಾರಂಭವಾಗುವ ಮೊದಲೇ ಆದಷ್ಟು ಬೇಗ ಮುಂದಿನ ವಾರವೇ ಅಲ್ಲಿಗೆ ಹೋಗುವ ತಯಾರಿಯನ್ನು ಮಾಡಿಕೊಳ್ಳಲು ಮಗಳಿಗೆ ತಿಳಿಸಲು ಅಮ್ಮ ಸುಮತಿಗೆ ಹೇಳಿದರು.

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ-“ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ

ಶರಣರ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ “ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ” ದೇಶವುಕಂಡ ಅಪರೂಪದ ಶ್ರೇಷ್ಠ ನೀರಾವರಿ ತಜ್ಞ ಕರ್ನಾಟಕಕ್ಕೆ ನೀರಿನ ಹಕ್ಕಿನ ಹಕ್ಕಿನ. ಬಗ್ಗೆ ನಿರಂತರ ಹೋರಾಟ ಮಾಡುತ್ತಲೆ ನ್ಯಾಯ ಒದಗಿಸುತ್ತಿದ್ದ ಉತ್ತರ ಕರ್ನಾಟಕದ ಬೆಳಗಾವಿ ಮೂಲದ ಲಿಂಗೈಕ್ಯ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರು. ಶಿವಪ್ಪ ಗುರುಸಿದ್ದಪ್ಪ ಬಾಳೆಕುಂದ್ರಿ ಎಸ್. ಜಿ. ಬಾಳೆಕುಂದ್ರಿಯವರು ಕರ್ನಾಟಕದ ಶ್ರೇಷ್ಠ ನೀರಾವರಿ ತಜ್ಞ ಇಂಜನಿಯರರು. ತಮ್ಮ ಬುದ್ದಿಮತ್ತೆ,ದಕ್ಷತೆ, ಪರಿಶ್ರಮ ಹಾಗು ಪ್ರಾಮಾಣಿಕ ಸೇವೆ ಇವುಗಳಿಗಾಗಿ ಬಾಳೆಕುಂದ್ರಿಯವರು ಕರ್ನಾಟಕದಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದೇ ಖ್ಯಾತರಾಗಿದ್ದಾರೆ  ಕರ್ನಾಟಕ ಕಂಡ ಅತ್ಯಂತ ಶ್ರೇಷ್ಠ ನೀರಾವರಿ ತಜ್ಞರಲ್ಲಿ ನೆನಪಿಗೆ ಬರುವ ಒಂದೇ ಒಂದು ಹೆಸರೆಂದರೆ ಸರ್ ಎಂ ವಿಶ್ವೇಶ್ವರಯ್ಯನವರದು. ಆದರೆ ಅವರಷ್ಟೇ ಸಮರ್ಥರಾದ ಇಂಜಿನಿಯರೊಬ್ಬರು ಉತ್ತರ ಕರ್ನಾಟಕದಲ್ಲಿ ಕನ್ನಡಿಗರಿಗಾಗಿ ನೀರಿನ ಹೋರಾಟ ಮಾಡಿದ್ದರು ಎಂಬುದು ಅನೇಕರಿಗೆ ಗೊತ್ತಿಲ್ಲ. ಅವರೇ ಎಸ್ ಜಿ ಬಾಳೆಕುಂದ್ರಿ.  ಉತ್ತರ ಕರ್ನಾಟಕದ ಮಹಾದಾಯಿಯ ಬಗ್ಗೆ ಕೂಡ ಆಲೋಚನೆ ಅಧ್ಯಯನ ಮಾಡಿದ್ದರು. ಜನನ ಶಿವಪ್ಪ ಬಾಳೆಕುಂದ್ರಿಯವರು 1922  ಮೇ 5 ರಂದು ಬೆಳಗಾವಿಯಲ್ಲಿ ಜನಿಸಿದರು. ಇವರ ತಾಯಿ ಲಕ್ಷ್ಮೀದೇವಿ; ತಂದೆ ಗುರುಸಿದ್ದಪ್ಪ. ಶಿಕ್ಷಣ ಪ್ರಾಥಮಿಕ ವಿದ್ಯಾಭ್ಯಾಸವನ್ನು ಹುಬ್ಬಳ್ಳಿಯ ಅಕ್ಕಿಹೊಂಡದ ಮುನಿಸಿಪಾಲಿಟಿ ಕನ್ನಡ ಶಾಲೆಯಲ್ಲಿ ಮುಗಿಸಿ, ಕೊಪ್ಪೀಕರ ಪ್ರೌಢಶಾಲೆಯಲ್ಲಿ ಎರಡು ವರ್ಷ ಕಲಿತು, ತರವಾಯ ಬೆಳಗಾವಿಯ ಸರದಾರ ಹೈಸ್ಕೂಲ್ ಸೇರಿದರು.  ಲಿಂಗರಾಜ ಕಾಲೇಜಿನಿಂದ ಇಂಟರ ಸಾಯನ್ಸ್ ವಿಷಯದ ಮೇಲೆ ಅಧ್ಯಯನ ನಡೆಸಿ ತೇರ್ಗಡೆಯಾದರು. ಆ ಬಳಿಕ ಪುಣೆಯಲ್ಲಿದ್ದ ಸರಕಾರಿ ಇಂಜನಿಯರಿಂಗ್ ಕಾಲೇಜಿಗೆ ಪ್ರವೇಶ ಪಡೆದು 1944 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರು. 1947 ರಲ್ಲಿ ಎಡಿನ್ಬರೊ ವಿಶ್ವವಿದ್ಯಾಲಯದಿಂದ ಪ್ರಥಮ ಶ್ರೇಣಿಯಲ್ಲಿ ಪದವಿ ಸಂಪಾದಿಸಿಕೊಂಡರು. ವೃತ್ತಿ ಮತ್ತು ಉದ್ಯೋಗ 1945 ರಲ್ಲಿ ಆಗಿನ ಮುಂಬಯಿ ರಾಜ್ಯದ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜನಿಯರ ಆದರು. ಮುಂಬಯಿ ಸರಕಾರ ಇವರನ್ನು ನೀರಾವರಿ ವಿಷಯದಲ್ಲಿ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಎಡಿನ್ಬರೊ ವಿಶ್ವವಿದ್ಯಾಲಯಕ್ಕೆ ಕಳುಹಿಸಿತು. ಅನಂತರ ಹಾಲಂಡ್, ಸ್ವಿಡನ್, ಮತ್ತು ಇತರ ಕೆಲವು ಬಾಲ್ಟಿಕ್ ರಾಜ್ಯಗಳನ್ನು ಸಂದರ್ಶಿಸಿದರು. ವಿದೇಶದಿಂದ ಹಿಂದಿರುಗಿದ ನಂತರ ಪುಣೆ ವಿಭಾಗದ ನೀರಾವರಿ ಕಾಲುವೆಗಳ ಕೆಲಸವನ್ನುನಿರ್ವಹಿಸಿದರು. ನಂತರ ನಾಸಿಕ ಬಳಿ ನಿರ್ಮಾಣವಾಗುತ್ತಿದ್ದ ಗಂಗಾ ಆಣೆಕಟ್ಟಿನ ಉಸ್ತುವಾರಿ ಮಾಡಿದರು. ಆ ಬಳಿಕ ಧೂಲಿಯಾ ಆಣೆಕಟ್ಟು ಮತ್ತು ಅಹ್ಮದ ನಗರ ವಿಭಾಗದ ಉಸ್ತುವಾರಿ ನಿರ್ವಹಿಸಿದರು. 1956 ರಲ್ಲಿ ರಾಜ್ಯಗಳ ಪುನರ್ವಿಂಗಡಣೆಯ ನಂತರ ಕರ್ನಾಟಕಕ್ಕೆ ಬಂದ ಬಾಳೆಕುಂದ್ರಿಯವರು ಕೆಲಕಾಲ ಉಪಪ್ರಧಾನ ಇಂಜನಿಯರ ಆಗಿ ಸೇವೆ ಸಲ್ಲಿಸಿದರು. ಆ ನಂತರ ಇವರ ಸೇವೆಯನ್ನು ಕೇಂದ್ರ ಸರಕಾರಕ್ಕೆ ಎರವಲು ನೀಡಲಾಯಿತು. ಅಲ್ಲಿ ಇವರು ಭಾರತ ಸರಕಾರದ ಪ್ಲ್ಯಾನಿಂಗ್ ಕಮಿಶನ್ “ನೀರಾವರಿ ಮತ್ತು ಚೈತನ್ಯ” ತಂಡದ ಸಹಾಯಕರಾಗಿಕಾರ್ಯನಿರ್ವಹಿಸಿದರು. ಈ ಸಮಯದಲ್ಲಿ ನದಿ ನೀರಿನ ಹಂಚಿಕೆಯಲ್ಲಿ ಕರ್ನಾಟಕಕ್ಕೆ ಆಗುತ್ತಿದ್ದ ಅನ್ಯಾಯವನ್ನು ಬಾಳೆಕುಂದ್ರಿಯವರು ಗಮನಿಸಿ ಕರ್ನಾಟಕದ ಲೋಕಸಭಾ ಸದಸ್ಯರ ಗಮನಕ್ಕೆ ತಂದರು. ಇದರಿಂದ ಪ್ರಭಾವಿತರಾದ ಕರ್ನಾಟಕದ ಮುಖ್ಯ ಮಂತ್ರಿ ಶ್ರೀ ಬಿ.ಡಿ.ಜತ್ತಿಯವರು ಬಾಳೆಕುಂದ್ರಿಯವರನ್ನು ರಾಜ್ಯಕ್ಕೆ ಮರಳಿ ಕರೆಯಿಸಿಕೊಂಡರು. 1959 ರಲ್ಲಿ ಮರಳಿ ರಾಜ್ಯಕ್ಕೆ ಬಂದ ನಂತರ ಅಂತರರಾಜ್ಯ ನದಿ ವಿವಾದ ವಿಷಯದ ಹೊಣೆ ಹೊತ್ತುಕೊಂಡ ಬಾಳೆಕುಂದ್ರಿಯವರು ಕರ್ನಾಟಕದ ನ್ಯಾಯಬದ್ಧ ಹಕ್ಕಿಗಾಗಿ ಸಮರ್ಥವಾಗಿ ಹೋರಾಡಿದರು. 1964 ರಲ್ಲಿ ಮುಖ್ಯ ಇಂಜನಿಯರ ಆಗಿ ಪದೋನ್ನತಿ ಪಡೆದು, ಬೃಹತ್ ನೀರಾವರಿ ಯೋಜನೆಗಳ ಸಹಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು. 1967 ರಿಂದ 1972 ರ ವರೆಗೆ ನೀರಾವರಿ ಇಲಾಖೆಯ ಉತ್ತರ ವಿಭಾಗದ ಮುಖ್ಯ ಇಂಜನಿಯರ ಎಂದು ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಬಾಳೆಕುಂದ್ರಿಯವರು ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ನಿರ್ಮಾಣಗಳಲ್ಲಿ ಮಹತ್ವದ ಪಾತ್ರ ವಹಿಸಿದರು. 1974 ರಿಂದ 1976 ರ ವರೆಗೆ ಮಲಪ್ರಭಾ ಮತ್ತು ಘಟಪ್ರಭಾ ಯೋಜನೆಗಳ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮತ್ತು ಆಡಳಿತಾಧಿಕಾರಿಯಾಗಿ ಹಾಗು 1976 ರಿಂದ 1977ರ ವರೆಗೆ ನೀರಾವರಿ ಇಲಾಖೆಯ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, 1977 ಮೇದಲ್ಲಿ, ಅಂದರೆ ತಮ್ಮ 55 ನೆಯ ವಯಸ್ಸಿನಲ್ಲಿ ಸರಕಾರಿ ಸೇವೆಯಿಂದ ನಿವೃತ್ತರಾದರು. ನಿವೃತ್ತಿಯ ನಂತರವೂ, ತುಂಗಭದ್ರಾ ಯೋಜನೆಯ ಮಾರ್ಪಾಡಿನ ತಜ್ಞ ಸಲಹಾ ಸಮಿತಿಯ ಅಧ್ಯಕ್ಷ, ಬಾಗಲಕೋಟೆ ಪುನರ್ನಿರ್ಮಾಣ ಮತ್ತು ಪುನರ್ವಸತಿ ಪರಿಶೀಲನಾ ಸಮಿತಿ ಅಧ್ಯಕ್ಷ, ಬೃಹತ್ ನೀರಾವರಿ ಯೋಜನೆಗಳ ನಿಯಂತ್ರಣ ಮಂಡಳದ ಅಧ್ಯಕ್ಷ ಕರ್ನಾಟಕದಲ್ಲಿ ತಾಂತ್ರಿಕ ವಿಶ್ವವಿದ್ಯಾಲಯ ಪ್ರಾರಂಭಿಸುವ ಕುರಿತು ನೇಮಿಸಿದ ಏಕಸದಸ್ಯ ಸಮಿತಿ ಅಧ್ಯಕ್ಷ ಹೀಗೆ ವಿವಿಧ ಸಾಮರ್ಥ್ಯಗಳಲ್ಲಿ ಕರ್ನಾಟಕಕ್ಕೆ ಸೇವೆಸಲ್ಲಿಸಿದರು. (ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು 1-4-1998 ರಲ್ಲಿ ಸಾಕಾರಗೊಂಡಿತು). ದುರಂತ ಮರಣ ದಿನಾಂಕ 4-1-1993 ರಂದು ಸಂಜೆ ಬಾಳೆಕುಂದ್ರಿಯವರು ವಾಯುವಿಹಾರಕ್ಕೆ ಹೋದ ಸಮಯದಲ್ಲಿ ಬೇಜವಾಬ್ದಾರಿ ಆಟೊ ಚಾಲಕನೊಬ್ಬ ಡಿಕ್ಕಿ ಹೊಡೆದ ಪರಿಣಾಮವಾಗಿ ಪ್ರಜ್ಞಾಹೀನ ಅವಸ್ಥೆಯಲ್ಲಿ ಅಸ್ಪತ್ರೆಗೆ ಸೇರಿಸಲ್ಪಟ್ಟರು. 1993 ಜನೆವರಿ 8 ರಂದು ಅದೇ ಅವಸ್ಥೆಯಲ್ಲಿಯೆ ಬಾಳೆಕುಂದ್ರಿಯವರು ಕೊನೆಯುಸಿರೆಳೆದರು. ಬಡ ವಿದ್ಯಾರ್ಥಿಗಳಿಗಾಗಿ ಶಿವಕಮಲ ಟ್ರಸ್ಟ್ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ, ವಿಶೇಷತಃ ತಾಂತ್ರಿಕ ಶಿಕ್ಷಣದಲ್ಲಿ ಧನಸಹಾಯ ಮಾಡಲು ಒಂದು ಟ್ರಸ್ಟ ಅನ್ನು ರೂಪಿಸುವದು ಶ್ರೀ ಬಾಳೆಕುಂದ್ರಿ ಹಾಗು ಶ್ರೀಮತಿ ಬಾಳೆಕುಂದ್ರಿಯವರ ಕನಸಾಗಿತ್ತು. ಶ್ರೀಬಾಳೆಕುಂದ್ರಿಯವರ ನಿಧನದ ನಂತರ ಶ್ರೀಮತಿ ಕಮಲಾ ಬಾಳೆಕುಂದ್ರಿಯವರು “ ಶಿವಕಮಲ ಟ್ರಸ್ಟ್ ” ಸ್ಥಾಪಿಸುವ ಮೂಲಕ ತಮ್ಮೀರ್ವರ ಕನಸನ್ನು ನನಸಾಗಿಸಿದರು. ಗೌರವ ಸನ್ಮಾನ ತಮ್ಮ ಪ್ರತಿಭೆ, ದಕ್ಷತೆ ಹಾಗು ಸಚ್ಚಾರಿತ್ರ್ಯದಿಂದ ಬಾಳೆಕುಂದ್ರಿಯವರು ಕರ್ನಾಟಕದ ನೀರಾವರಿ ಯೋಜನೆಗಳಿಗೆ ಮಹತ್ವಪೂರ್ಣ ಕಾಣಿಕೆ ನೀಡಿದ್ದಾರೆ ಹಾಗು ಕರ್ನಾಟಕ ನೀರಾವರಿ ಇಲಾಖೆಯಲ್ಲಿ ಎರಡನೆಯ ವಿಶ್ವೇಶ್ವರಯ್ಯ ಎಂದು ಹೆಸರಾಗಿದ್ದಾರೆ. ಮಲಪ್ರಭಾಎಡದಂಡೆಕಾಲುವೆಗೆಬಾಳೆಕುಂದ್ರಿಕಾಲುವೆಎಂದುಹೆಸರಿಟ್ಟುಸರಕಾರಇವರನ್ನುಗೌರವಿಸಿದೆ. 1987 ರಲ್ಲಿ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ನೀಡಲಾಯಿತು. 1998 ರಲ್ಲಿ ಬೆಂಗಳೂರಿನ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಎದುರಿನ ವೃತ್ತಕ್ಕೆ ಬಾಳೆಕುಂದಿ ವೃತ್ತ ಎಂದು ನಾಮಕರಣ ಮಾಡಲಾಯಿತು. 1999ರಲ್ಲಿಘಟಪ್ರಭಾಜಲಾಶಯದಲ್ಲಿಬಾಳೆಕುಂದ್ರಿಯವರಪ್ರತಿಮೆಯನ್ನುಅನಾವರಣ ಮಾಡಲಾಯಿತು. 2004 ರಲ್ಲಿ ಧಾರವಾಡದ ಇನ್ಸ್ಟಿಟ್ಯೂಶನ್ ಆಫ್ ಇಂಜನಿಯರ್ಸ್ ಸಂಸ್ಥೆಯ ಮುಂದಿನ ರಸ್ತೆಗೆ ಎಸ್.ಜಿ.ಬಾಳೆಕುಂದ್ರಿ ಮಾರ್ಗ ಎಂದು ಹೆಸರಿಡಲಾಯಿತು. ಕರ್ನಾಟಕಸರಕಾರವು 2001 ರಿಂದ ಪ್ರತಿ ವರ್ಷನೀರಾವರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಇಲಾಖೆಯ ಇಂಜನಿಯರರಿಗೆ ಬಾಳೆಕುಂದ್ರಿಯವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಿದೆ. 5 ಮೇ , 2006 ರಂದು ಅಂದರೆ ಬಾಳೆಕುಂದ್ರಿಯವರ 85 ನೆಯ ಜನ್ಮದಿನದಂದು ಕೃಷ್ಣಾ ಮೇಲ್ದಂಡೆ ಯೋಜನೆಯ ಆಲಮಟ್ಟಿ ಆಣೆಕಟ್ಟಿನ ವೃತ್ತದಲ್ಲಿ ಅವರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು. ಘಟಪ್ರಭಾ, ಮಲಪ್ರಭಾ ಹಾಗು ಕೃಷ್ಣಾ ನೀರಾವರಿ ಯೋಜನೆ ಹಾಗು ಆಣೆಕಟ್ಟು ನಿರ್ಮಾಣದಲ್ಲಿ ಶ್ರೀ ಎಸ್ ಜಿ ಬಾಳೆಕುಂದ್ರಿ ಅವರ ಪಾತ್ರ ಬಹಳ ದೊಡ್ದದು. ಸಮಗ್ರಹಸಿರುಕ್ರಾಂತಿಯಹರಿಕಾರನೀರಾವರಿಯತಜ್ಞಸಾಮಾಜಿಕಚಿಂತಕಎಸ್ಜಿಬಾಳೆಕುಂದ್ರಿ ಅವರಿಗೆ ನಮ್ಮ ನೂರು ನಮನಗಳು. ________________________ *ಡಾ ಶಶಿಕಾಂತ ಪಟ್ಟಣ ರಾಮದುರ್ಗ 

ಸಾವಿಲ್ಲದ ಶರಣರು ಮಾಲಿಕೆ-“ಶ್ರೇಷ್ಠ ನೀರಾವರಿ ತಜ್ಞ ಎಸ್ ಜಿ ಬಾಳೆಕುಂದ್ರಿ”ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ Read Post »

ಅಂಕಣ ಸಂಗಾತಿ, ಅರ್ಜುನ ಉವಾಚ

ಧಾರಾವಾಹಿ ಸಂಗಾತಿ-14 ಅರ್ಜುನ ಉವಾಚ ವಿಶ್ವನಾಥ್‌ ಎನ್‌ ನೇರಳೆಕಟ್ಟೆ ಅನಲ ಅಳಿಯನಾದ ಬಗೆ ಹೀಗೆ ಅನಲ ಅಳಿಯನಾದ ಬಗೆ ಹೀಗೆ‘ಮೇಧಾಶ್ವವನ್ನು ಯಾವ ಕಾರಣಕ್ಕೂ ಬಿಡಲಾರೆ. ನನ್ನ ಜೊತೆಗೆ ಹೋರಾಟ ಮಾಡಿಯೇ ಕುದುರೆಯನ್ನುಕರೆದೊಯ್ಯಬೇಕು ನೀನು. ಇದು ಖಚಿತ’ ಎಂಬ ನೀಲಧ್ವಜ ಉದ್ಘೋಷಿತ ಸಂದೇಶ ನನ್ನನ್ನು ಬಂದು ತಲುಪಿತು.ನನಗಾದದ್ದು ಅಚ್ಚರಿ.ಅಗ್ನಿಯ ಮಾತಿನಂತೆ ಯುದ್ಧವನ್ನು ನಿಲ್ಲಿಸಿದ್ದವನು ನೀಲಧ್ವಜ. ಕುದುರೆಯನ್ನವನು ಬಿಟ್ಟುಕೊಡುತ್ತಾನೆಎನ್ನುವುದು ನನಗಿದ್ದ ಸರಳ ಸಹಜ ಅಂದಾಜು. ಆದರೆ ಇದ್ದಕ್ಕಿದ್ದಂತೆಯೇ ಅವನು ಮನಸ್ಸು ಬದಲಾಯಿಸಿದ್ದ.ಮಾಹಿಷ್ಮತಿಯರಸನ ಮನ ತಕ್ಷಣ ಬದಲಾದುದಕೆ ಏನದು ಕಾರಣ ಎಂಬ ಮೂಲ ಮರ್ಮಲತೆಯನ್ನು ಹುಡುಕಿಹೊರಟನನಗೆ ತಿಳಿದುಬಂದದ್ದು ಜ್ವಾಲೆಯೆಂಬವಳ ಮಾತು.ಜ್ವಾಲೆ, ನೀಲಧ್ವಜನ ಪ್ರೀತಿಯ ರಾಣಿ. ಅರ್ಜುನನ ಕುದುರೆಯನ್ನು ಬಿಟ್ಟು ಕಳುಹಿಸಬೇಕು ಎಂದು ಮಂತ್ರಿಗಳಲ್ಲಿನೀಲಧ್ವಜ ಮಾತನಾಡುತ್ತಿದ್ದುದು ಅವಳಿಗೆ ತಿಳಿಯಿತಂತೆ. ಅವಳಿಗದು ಮೆಚ್ಚುಗೆಯಾಗಲಿಲ್ಲ. “ಹೆದರಿಕೆ ಅದೇತಕೆ!ಬಿಡದಿರು ಕುದುರೆಯನ್ನು. ನಿಲ್ಲಿಸದಿರು ಯುದ್ಧವನ್ನು. ಅರ್ಜುನನಿಗೆದುರಾಗಿ ನಿಂತು ಕದನವ ಮಾಡು” ಎಂಬ ಸಲಹೆಇತ್ತಳಂತೆ ತನ್ನೊಡೆಯನಿಗೆ. ಅದಾವ ಮಾಯೆಯಲ್ಲಿ ಅವಳ ಮಾತಿನ ಸುಳಿಗೆ ಸಿಲುಕಿದನೋ ಆ ನೀಲಧ್ವಜ! ಹಯವಬಿಟ್ಟುಕೊಡದಿರುವ ಛಲವ ಹೊತ್ತುಮೆರೆಯುತಿಹ ಸಂದೇಶವ ನನಗೆ ಕಳುಹಿಸಿಕೊಟ್ಟ.ಜ್ವಾಲೆಯ ಮನೋಭೂಮಿಕೆ ಹೊಸದೆನಿಸಿತು ನನಗೆ. ಸಾಮಾನ್ಯವಾಗಿ ಕ್ಷಾತ್ರಪುರುಷರು ಕಲಹದೆಡೆಗೆಕುತೂಹಲಿಗಳಾಗಿರುತ್ತಾರೆ. ಅವರ ಆಸಕ್ತಿಯದು ಸಹಜ. ಹೆಂಗಳೆಯರು ಯುದ್ಧ ಬೇಡವೆಂದು ಗಂಡಂದಿರನ್ನು ತಡೆಯುವಪ್ರಯತ್ನ ಮಾಡುತ್ತಾರೆ. ಕದನವಾದರೆ ತನ್ನವನಿಗೆ ಅದೇನಾದೀತೋ ಎಂಬ ಆತಂಕ ಅವರಲ್ಲಿರುತ್ತದೆ. ಆದರೆ ಈ ಜ್ವಾಲೆಯುದ್ಧದಿಂದ ವಿಮುಖನಾಗಿ ಶಾಂತಿಯೆಡೆಗೆ ಮನಸ್ಸು ಮಾಡಿದ ರಮಣನ ಮನಸ್ಸನ್ನು ಮತ್ತೆ ಕ್ರಾಂತಿಯೆಡೆಗೆ ಸೆಳೆಯುವಮನಸ್ಸು ಮಾಡಿದ್ದಳು. ರಮಣನ ಪ್ರಾಣದೆಡೆಗೆ ಅವಳಿಗೆ ಮಮಕಾರ ಭಾವ ಇರಲಿಲ್ಲವೇ?! ಗೊತ್ತಿಲ್ಲ.ಅವಳಿಗೆ ನನ್ನ ಮೇಲೇನಾದರೂ ದ್ವೇಷವಿತ್ತೇ! ನನಗೆ ಅರಿವಿಲ್ಲ. ನಾನ್ಯಾವತ್ತೂ ಅವಳಲ್ಲಿ ಮಾತನಾಡಿದ್ದಿಲ್ಲ.ಜಗಳ ಆಡಿದ್ದಿಲ್ಲ. ಹಾಗಿರುವಾಗ ನನ್ನ ಮೇಲೆ ಅವಳಿಗೆ ದ್ವೇಷ ಇರಲು ಸಾಧ್ಯವೇ! ತಿಳಿಯಲಿಲ್ಲ.ಇನ್ನೊಂದು ಬಗೆಯ ಯೋಚನೆ ಮೂಡಿತು ನನಗೆ ಆ ಕ್ಷಣದಲ್ಲಿ. ಯುದ್ಧ ಸಂಧಾನಕಾರನಾಗಿ ನಡೆದುಕೊಂಡವನುಅಗ್ನಿ. ಅವನು ನೀಲಧ್ವಜನ ಅಳಿಯ. ಮಾಹಿಷ್ಮತಿಯಲ್ಲಿಯೇ ನೆಲೆನಿಂತು ಆ ನಗರದ ಅಳಿಯನಂತೆ ಗುರುತಿಸಿಕೊಂಡವನು.ಮಗಳನ್ನು ಮದುವೆಯಾದ ಅಳಿಯನ ಮೇಲೇನಾದರೂ ಕೋಪ ಇರಬಹುದೇ ಜ್ವಾಲೆಗೆ?! ಎಂಬ ಆಲೋಚನೆ ನನ್ನಲ್ಲಿಉದಯಿಸಿತು.ಈ ಬಗೆಯ ಚಿಂತನೆ ನನ್ನಲ್ಲಿ ಮೂಡುವುದಕ್ಕೆ ಸಕಾರಣವಿತ್ತು. ನೀಲಧ್ವಜನ ಮಗಳು ಅಗ್ನಿಯನ್ನು ಪ್ರೀತಿಸಿಮದುವೆ ಆದವಳು.ನೀಲಧ್ವಜ ಜ್ವಾಲೆಯರ ಮಗಳು ಅಪ್ರತಿಮ ರೂಪವತಿಯಾಗಿದ್ದಳು. ಗುಣಶೀಲೆ ಎನಿಸಿಕೊಂಡಿದ್ದಳು. ಹೀಗಿದ್ದಚೆಲುವೆ ಯೌವ್ವನಾವಸ್ಥೆಯನ್ನು ತಲುಪಿದಾಗ ನೀಲಧ್ವಜನಲ್ಲಿ ಮಗಳ ಮದುವೆಯ ಯೋಚನೆ ಮೂಡಿತು. ಮೂರೂ ಲೋಕಗಳಲ್ಲಿ ಖ್ಯಾತಿ ಗಳಿಸಿದ, ವೀರರೆಂದು ಹೆಸರು ಪಡೆದ, ಸಿರಿವಂತರೆAದು ಗುರುತಿಸಿಕೊಂಡ ಪುರುಷರ ಚಿತ್ರವನ್ನುಅವಳೆದುರು ಹಿಡಿದು, “ಇವರಲ್ಲಿ ನಿನ್ನ ಪತಿಯಾಗುವವರು ಯಾರೆಂದು ನೀನೇ ಹೇಳು ಮುದ್ದು ಮಗಳೇ” ಎಂದ.ತಂದೆಯ ಮಾತಿನಂತೆ ಚಿತ್ರಪಟದೆಡೆಗೆ ಹರಿಣಿನೇತ್ರವನ್ನು ಹರಿಸಿದ ಸುಂದರಿಗೆ ಚೆಲುವನಾಗಿ ಕಂಡದ್ದು ಅಗ್ನಿದೇವ.ತಂದೆ ತಂದು ಕೈಗಿಟ್ಟಿದ್ದ ಚಿತ್ರಪಟದಲ್ಲಿ ಅಗ್ನಿ ಗಂಧರ್ವ ಯಕ್ಷ ದೇವತೆಗಳನ್ನು ತನ್ನ ಚೆಲುವಿನಿಂದಲೇ ಅಪಹಾಸ್ಯ ಮಾಡಿನಗುತ್ತಿದ್ದ. ಸಕಲ ಭೂಮಂಡಲದ ರಾಜಾಧಿರಾಜರನ್ನು ಮೀರುವಂತೆ ತೋರುತ್ತಿದ್ದ. ಮನ್ಮಥರಾಜ ವಸಂತರಾಜರನ್ನೂಮೀರಿದ ಸೌಂದರ್ಯವನ್ನು ಆವಾಹಿಸಿಕೊಂಡು ಕುಳಿತಿದ್ದ. ತಕ್ಷಣವೇ ನೀಲಧ್ವಜಕುವರಿಯ ಚಿತ್ತ ಚಿತ್ರಪಟದಲ್ಲಿದ್ದಅಗ್ನಿದೇವನ ಹೃದಯವನ್ನು ಕೂಡಿಕೊಂಡಿತು. “ಎನಗಿನ್ನು ಇವನೇ ರಮಣ” ಎಂದಳು ತಂದೆಯಲ್ಲಿ, ನಸುನಾಚಿಕೆತೋರುತ್ತ.ನಡೆಯಲಾರದ್ದರೆಡೆಗೆ, ಸಾಧ್ಯವಾಗದ್ದರ ಕಡೆಗೆ ಮಗಳು ಮನಸ್ಸು ಹರಿಸಿದ್ದಾಳೆ ಎನಿಸಿತು ನೀಲಧ್ವಜನಿಗೆ.ಅದನ್ನೇ ತನುಜೆಗೆ ಹೇಳಿದ. ತಂದೆಯ ಮಾತು ಅಪಥ್ಯವಾಯಿತು ಆ ಚೆಲುವೆಗೆ. ಜನಕನನ್ನು ಜರಿದವಳು ಅರಮನೆಯನ್ನುತೊರೆದುಹೋದಳು.ತಾರುಣ್ಯವೆಂದರೆ ಹಾಗೆಯೇ. ಹೃದಯ ಏನನ್ನು ಬಯಸುತ್ತದೆಯೋ ಅದು ದಕ್ಕದಾದಾಗ ನಿರಾಸೆ ಮೂಡುತ್ತದೆ;ಹಠ ಕುಡಿಯೊಡೆಯುತ್ತದೆ. ಪಡೆಯದಿರಲಾರೆ ಮನ ಬಯಸಿದ ಅನಲನನ್ನು ಎಂದುಕೊಂಡಳು ನೀಲಧ್ವಜಸುತೆ.ಅರಮನೆಯನ್ನು ತೊರೆದವಳು ನರ್ಮದಾ ತೊರೆಯ ತೀರವನ್ನು ಸೇರಿದಳು, ತೀರದಾಸೆಯನ್ನು ಎದೆಯಲ್ಲಿಹೊತ್ತುಕೊಂಡು. ನಾನಾ ವಿಧಗಳಲ್ಲಿ ಅಗ್ನಿದೇವನನ್ನು ಅರ್ಚಿಸಿದಳು.ಅವಳ ಪೂಜೆಯ ಸೊಗಸದು ಅಗ್ನಿಗೆ ಮೆಚ್ಚುಗೆಯಾಯಿತು. ಅವಳನ್ನು ಮದುವೆಯಾಗುವ ಇಚ್ಛೆ ಅವನಲ್ಲಿಯೂಮೂಡಿತು.ಬ್ರಾಹ್ಮಣ ವೇಷವನ್ನು ತಾಳಿದ ಅನಲ ಕಾಣಿಸಿಕೊಂಡದ್ದು ನೀಲಧ್ವಜನ ಆಸ್ಥಾನದಲ್ಲಿ. ಸಭೆಗೆ ಬಂದಭೂಸುರನನ್ನು ಸ್ವಾಗತಿಸಿದ ನೀಲಧ್ವಜ. ಬಂದ ಕಾರಣವನ್ನು ನಯವಾಗಿ ಕೇಳಿದ. “ಕನ್ಯೆಯನ್ನು ಬಯಸಿ ಬಂದಿದ್ದೇನೆ.ನಿನ್ನ ಸುತೆಯನ್ನು ಕೊಡು ಎನಗೆ. ರಾಜನಾಗಿರುವ ನೀನು ಬ್ರಾಹ್ಮಣನಾದ ನನಗೆ ಮಗಳನ್ನು ಮದುವೆಮಾಡಿಕೊಡಬಹುದು. ಶಾಸ್ತçದ ಅಭ್ಯಂತರವಿಲ್ಲ” ಎಂದ ಬ್ರಾಹ್ಮಣ ವೇಷದ ಅನಲ.ಮಗಳು ಅಗ್ನಿಯನ್ನು ಮದುವೆಯಾಗುವ ಮನಸ್ಸು ಮಾಡಿದ್ದಾಳೆ. ಏನು ಮಾಡಲಿ! ಎಂದು ಅಸಹಾಯಕತೆತೋರಿದ ನೀಲಧ್ವಜ. ತಕ್ಷಣವೇ ತಾನೇ ಅಗ್ನಿ ಎಂಬ ಸತ್ಯವನ್ನು ಅರುಹಿದ ಅನಲ.ನೀಲಧ್ವಜನ ಆಪ್ತಮಂತ್ರಿ ಪರೀಕ್ಷಿಸಿದ. ಅವನು ಅಗ್ನಿಯೆನ್ನುವುದು ಸಾಬೀತಾಯಿತು. ನೀಲಧ್ವಜನ ಸತಿಯೂಪರೀಕ್ಷೆ ಮಾಡಿದಳು. ವಿಪ್ರ ವೇಷವದು ನಕಲು. ನಿಜವಾಗಿಯೂ ಅಗ್ನಿಯವನು ಎನ್ನುವುದವರ ಅರಿವಿಗೆ ಬಂತು. ನೀಲಧ್ವಜಅಗ್ನಿಯಲ್ಲಿ “ಮಗಳನ್ನು ನಿನಗೆ ಮದುವೆ ಮಾಡಿಕೊಡುತ್ತೇನೆ. ಆದರೆ ನೀನು ಇದೇ ನಗರದಲ್ಲಿ ಇರಬೇಕು” ಎಂದ. ಅಗ್ನಿಒಪ್ಪಿದ. ಅನಲ ನೀಲಧ್ವಜನ ಅಳಿಯ ಎನಿಸಿಕೊಂಡ.ಹೀಗೆ ಅಳಿಯನಾದ ಅಗ್ನಿಯ ಮೇಲೆ ರಾಣಿ ಜ್ವಾಲೆಗೆ ಏನಾದರೂ ಅಸಮಾಧಾನ ಇತ್ತೋ ಏನೋ! ಈಕಾರಣದಿಂದಲೇ ಅವನು ಏರ್ಪಡಿಸಿದ ಸಂಧಾನವದು ಅವಳಿಗೆ ಸಹ್ಯವಾಗಲಿಲ್ಲವೋ ಏನೋ! ನೀಲಧ್ವಜ ಸೇನೆಯೊಡನೆ ಮತ್ತೆ ಕದನ ಹೂಡುವುದೀಗ ಅನಿವಾರ್ಯವಾಗಿಬಿಟ್ಟಿತ್ತು ನಮಗೆ. ಕುದುರೆಯಕಾಲುಗಳು ಮಾಹಿಷ್ಮತಿ ನಗರವನ್ನು ತೊರೆದು ಮುಂದೆ ಚಲಿಸಬೇಕಾದರೆ ನಮ್ಮ ಕಾಲುಗಳು ಕದನರಂಗಕ್ಕಿಳಿಯಬೇಕಿತ್ತು. ಡಾ. ವಿಶ್ವನಾಥ ಎನ್ ನೇರಳಕಟ್ಟೆ

Read Post »

ಅಂಕಣ ಸಂಗಾತಿ, ವೀಣಾ-ವಾಣಿ

ಅಂಕಣ ಸಂಗಾತಿ ವೀಣಾ ವಾಣಿ ವೀಣಾ ಹೇಮಂತ್‌ ಗೌಡ ಪಾಟೀಲ್ ಬದುಕಿನ ಪಯಣ ಬದುಕು ಒಂದು ರೀತಿಯ ರೈಲು ಗಾಡಿಯ ಪಯಣ ಇದ್ದಂತೆ. ರೈಲುಗಾಡಿಯಲ್ಲಿ ಹತ್ತಿ ಕುಳಿತುಕೊಳ್ಳುವ  ನಾವುಗಳು ಮಾರ್ಗ ಮಧ್ಯದಲ್ಲಿ ಹತ್ತುವ-ಇಳಿಯುವ, ನೂರಾರು ಜನರೊಂದಿಗೆ ಸ್ನೇಹ ಸಂಬಂಧಗಳನ್ನು ಬೆಳೆಸುತ್ತೇವೆ ಅವರವರ ನಿಲ್ದಾಣ ಬಂದಾಗ ಅವರವರು ಇಳಿದು ಹೋಗುತ್ತಾರೆ….. ಅಂತೆಯೇ ನಾವು ಕೂಡನಮ್ಮ ಬದುಕಿನ ಪಯಣ ಕೂಡ ಹಾಗೆಯೇ…. ಆದರೆ ಈ ಪಯಣ ಅನಿರೀಕ್ಷಿತ ಸಂತೆಗಳ ಆಗರ.ಇದಮಿತ್ಥಂ ಎಂದು ಹೇಳುವ ಹಾಗೆಯೇ ಇಲ್ಲ. ನಮ್ಮ ಮುಂದಿನ ನಿಲ್ದಾಣ ಯಾವುದು ಎಂಬುದು ನಮಗೆ ಗೊತ್ತಿರುವುದಿಲ್ಲ.ತಂದೆ ತಾಯಿಯ ಕೈ ಹಿಡಿದು ಬದುಕಿನ ಪಯಣವನ್ನು ಆರಂಭಿಸುವ ನಾವು ನಮ್ಮ ಜೀವಿತದ ಕೊನೆಯವರೆಗೂ ಅವರು ನಮ್ಮೊಂದಿಗೆ ಇರುತ್ತಾರೆ ಎಂಬ ಭರವಸೆಯ ಜೊತೆಗೆ ಜೀವಿಸುತ್ತೇವೆ…. ಆದರೆ ತಮ್ಮ ಪ್ರಯಾಣ ಪೂರೈಸುವ ಅವರು ಯಾವ ಘಳಿಗೆ ಯಲ್ಲಾದರೂ ನಮ್ಮನ್ನು ಬಿಟ್ಟು ಹೊರಟು ಹೋಗಬಹುದು ಹಾಗೂ ಅವರಿಲ್ಲದೆ ನಾವು ನಮ್ಮ ಬದುಕಿನ ಪಯಣವನ್ನು ಮುಂದುವರಿಸಬೇಕು ಎಂಬ ನಿಷ್ಟುರ ಸತ್ಯದ ಅರಿವಿದ್ದು ಕೂಡ ಅರಿವಿಲ್ಲದ ರೀತಿಯಲ್ಲಿ ನಾವು ಬಾಳುತ್ತೇವೆ.ಆದರೂ ಕೂಡ ಯಾವುದೇ ಸೀಟುಗಳು ಖಾಲಿ ಉಳಿಯುವುದಿಲ್ಲ. ನಮಗೆ ಸ್ವಲ್ಪ ಹಿಂದು ಮುಂದಾಗಿ ನಮ್ಮ ಒಡಹುಟ್ಟಿದವರು, ಸ್ನೇಹಿತರು, ಸಂಬಂಧಿಗಳು ಹಾಗೂ ನಾವು ಪ್ರೀತಿಸುವ ಬದುಕಿನಲ್ಲಿ ನಮ್ಮೊಂದಿಗೆ ಇರಲಿ ಎಂದು ಬಯಸುವ ಹತ್ತು ಹಲವು ಸಂಗತಿಗಳು ನಮ್ಮೊಂದಿಗೆ ಬದುಕಿನ ಪಯಣದ ಸ್ಥಾನವನ್ನು ಆಕ್ರಮಿಸಿಕೊಳ್ಳುತ್ತವೆ.  ತಮ್ಮ ತಮ್ಮ ಪಯಣ ಮುಗಿಸಿ ಕೆಲವರು ನಿರೀಕ್ಷಿತ ಸಮಯಕ್ಕೆ ಇಳಿದು ಹೊರಟು ಹೋದರೆ ಮತ್ತೆ ಕೆಲವರು ನಮ್ಮ ಬದುಕಿನ ಮೇಲೆ ಸಾಕಷ್ಟು ಪರಿಣಾಮವನ್ನು ಬೀರುವ ನಮ್ಮಲ್ಲಿ ಖಾಲಿತನವನ್ನುಹುಟ್ಟು ಹಾಕುವ ರೀತಿಯಲ್ಲಿ ಕಣ್ಮರೆಯಾಗುತ್ತಾರೆ…. ಮತ್ತೆ ಕೆಲವರ ನಿರ್ಗಮನ ಅದೆಷ್ಟು ಅನಿರೀಕ್ಷಿತವಾಗುತ್ತದೆ೦ದರೆ ಅದನ್ನು ಅರಗಿಸಿಕೊಳ್ಳುವುದು ಬಹಳವೇ ಕಷ್ಟ .ಈ ಪಯಣವು ಸುಖ ದುಃಖಗಳ ಏರಿಳಿವುಗಳ ಮೇಲೆ ತೂಗುಯ್ಯಾಲೆಯಂತೆ ಭಾಸವಾಗುತ್ತದೆ. ಕೆಲ ಭೇಟಿಗಳು ಮನಸ್ಸನ್ನು ಪ್ರಫುಲ್ಲಗೊಳಿಸಬಹುದು ಎಷ್ಟೋ ಬಾರಿ ಭರವಸೆಗಳು ಹುಸಿಯಾಗಬಹುದು…. ವಿದಾಯಗಳು ಎದೆಯ ಭಾರವನ್ನು ಹೆಚ್ಚಿಸಬಹುದು ಕೆಲವರ ಜೊತೆಯು ಸಂತಸವನ್ನು ಉಂಟುಮಾಡಿದರೆ ಮತ್ತೆ ಕೆಲವರ ಸಾಂಗತ್ಯ ರೇಜಿಗೆಯನ್ನುಂಟು ಮಾಡಬಹುದುಬದುಕಿನಲ್ಲಿ ಪಯಣದಲ್ಲಿ ಚೆನ್ನಾಗಿ ಬದುಕುವುದು ಎಂದರೆ ನಮ್ಮ ಜೊತೆಗಿರುವ ಸಹ ಪ್ರಯಾಣಿಕರ ಕುರಿತು ಒಳ್ಳೆಯ ಅರಿವನ್ನು ಹೊಂದಿರಬೇಕು. ಉತ್ತಮ ಸಂವಹನವನ್ನು ಹೊಂದಿರಬೇಕು…. ಅದರಲ್ಲೂ ಮುಖ್ಯವಾಗಿ ನಮ್ಮ ಬದುಕಿನ ಹೊರೆಗಳನ್ನು ಹಂಚಿಕೊಂಡಿರುವವರೊಂದಿಗೆ ಅತ್ಯಂತ ಆತ್ಮೀಯವಾದ  ಸಂಬಂಧವನ್ನು ಮುಂದುವರಿಸಬೇಕು  ಜೀವನದ ಪಯಣದಲ್ಲಿ ನಮ್ಮ ಪಯಣದ ಆರಂಭದ ಸಮಯದಲ್ಲಿ ನಮಗೆ ನೀಡಲಾದ ಟಿಕೇಟಿನಲ್ಲಿ ಆರಂಭಿಸಿದ ಸಮಯ ದಿನ, ತಿಂಗಳು ವಾರ ಮತ್ತು ವರ್ಷಗಳನ್ನು ನಮೂದಿಸುತ್ತದೆ ನಿಜ ಆದರೆ ಯಾವಾಗ ನಾವು ಜೀವನದ ಪಯಣ ಮುಗಿಸಿ ಇಳಿಯಬಹುದು ಎಂಬ ಸಣ್ಣ ಸುಳಿವು ಕೂಡ ನಮಗೆ ಇರುವುದಿಲ್ಲ. ನಮ್ಮ ಪಯಣದ ಹಾದಿಯನ್ನು ನಾವು ಹೇಗೆ ಇಟ್ಟುಕೊಳ್ಳುತ್ತೇವೆ ಎಂಬುದರ ಮೇಲೆ ನಮ್ಮ ಬದುಕಿನ ಗುಣಮಟ್ಟವನ್ನು ಅಳೆಯಬಹುದು.. ನಾವು ದೇವರನ್ನು ಪ್ರೀತಿಸಬೇಕು ಅತ್ಯಂತ ಸರಳವಾಗಿ ಕ್ಷಮಿಸಬೇಕು ಜೊತೆಗೆ ನಮ್ಮ ನೈಜತೆಯನ್ನು ಹೊರ ಹಾಕಬೇಕು.ಅಂತಿಮ ಪಯಣದ ಸಮಯದಲ್ಲಿ ನಮಗೆ ದೊರೆಯುವ ಸಂಜ್ಞೆಗಳನ್ನು ಗುರುತಿಸಿ ಮೆಲ್ಲಗೆ ಹೊರಟು ಬಿಡಬೇಕು. ಮರದ ಗೊಂಬೆಯನ್ನು ಆಶ್ರಯಿಸಿದ ಹಕ್ಕಿ ಒಂದೇ ಏಟಿಗೆ ರೆಕ್ಕೆಗಳನ್ನು ಅಗಲಿಸಿ ಹಾರಿ ಹೋಗುವಂತೆ ನಾವು ಕೂಡ ಬದುಕಿನ ಈ ಪಯಣವನ್ನು ಮುಗಿಸಿ ಹೊರಟು ಬಿಡಬೇಕು.. ಉಳಿದವರ ಬದುಕಿನ ಅತ್ಯಂತ ಸುಂದರ ನೆನಪಾಗಿ ನಾವು ಉಳಿದುಕೊಳ್ಳಬೇಕೆ ಹೊರತು ಅವರ ಚಿತ್ತವನ್ನು ಕಲಕಿ ಮಾನಸಿಕ ಸ್ವಾಸ್ಥ್ಯವನ್ನು ಕದಡುವ, ನಮ್ಮ ನೆನಪು ಅವರಲ್ಲಿ ಬೇಸರ ಹುಟ್ಟಿಸುವ ರೀತಿಯಲ್ಲಿ ಬದುಕಬಾರದು.ಬದುಕಿನ ಪ್ರಯಾಣದಲ್ಲಿ ಸಂತೋಷ, ತೃಪ್ತಿ,ನೆಮ್ಮದಿ ಇಂತಹ ಹಗುರವಾದ ಭಾವಗಳನ್ನು ನಮ್ಮ ಲಗೇಜ್ ಗಳನ್ನಾಗಿ ಕೊಯ್ಯಬೇಕೇ ಹೊರತು ಮನಸ್ಸನ್ನು ಭಾರವಾಗಿಸುವ ನೋವು ನಿರಾಶೆ ಅತೃಪ್ತಿ ಆ ಸಂತೋಷಗಳೆಂಬ ಭಾರವಾದ ವಸ್ತುಗಳನ್ನು ಅಲ್ಲಲ್ಲಿಯೇ ಬಿಟ್ಟು ಮುಂದೆ ಹೊರಡಬೇಕು.ಲೆಸ್ ಲಗೇಜ್ ಮೋರ್ ಕಂಫರ್ಟ್ ಎಂಬ ಮಾತು ಬದುಕಿನ ಪಯಣಕ್ಕೂ ಸೂಕ್ತವಾಗಿದೆ.ನಮ್ಮ ಬದುಕಿನಲ್ಲಿ ನಾವು ಬಹು ದೂರ ಸಾಗಬೇಕಾದ ಪರಿಸ್ಥಿತಿಯಲ್ಲಿ ನಮ್ಮೊಂದಿಗೆ ಹೆತ್ತವರು, ಒಡಹುಟ್ಟಿದವರು, ಸಂಗಾತಿ, ಮಕ್ಕಳುಸಂಬಂಧಿಗಳು ಸ್ನೇಹಿತರು ಜೊತೆ ಇರಬೇಕು. ನಮ್ಮ ಹೆಗಲ ಮೇಲೆ ನಾವು ಮಲಗಲು ಸಾಧ್ಯವಿಲ್ಲ…. ನಮ್ಮ ಮನದ ಭಾವನೆಗಳನ್ನು ಹಂಚಿಕೊಂಡು ಹಗುರವಾಗಲು ನಮಗೆ ಬೇರೊಬ್ಬರ ಹೆಗಲು ಬೇಕೇ ಬೇಕು.ನಮ್ಮ ಬದುಕಿನ ಉದ್ದೇಶ ಮತ್ತು ಗುರಿಗಳು ಸ್ಪಷ್ಟವಾಗಿದ್ದು ತಲುಪುವ ಗಮ್ಯದ ಅರಿವು ನಮಗಿರಬೇಕು….. ಅಂದರೆ ನಮ್ಮ ಪಯಣ ಅತ್ಯಂತಸುರಕ್ಷಿತ ಹಾಗೂ ತೃಪ್ತಿದಾಯಕವಾಗಿರುತ್ತದೆ. ಏನಂತೀರಾ ಸ್ನೇಹಿತರೇ?….. ನೀವು ಕೂಡ ನಿಮ್ಮ ಬದುಕಿನ ಪಯಣವನ್ನು ಅತ್ಯಂತ ಸರಳ ಹಾಗೂ ಸುಂದರವಾದ ಬದುಕಿನ ಪಯಣ ನಿಮ್ಮದಾಗಿರಲಿ ವೀಣಾ ಹೇಮಂತ್ ಗೌಡ ಪಾಟೀಲ್ 

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-29 ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೯ ಈ ಹಿಂದೆ ಮೈಸೂರಿನಿಂದ ವರ್ಗವಾಗಿ ಹೋಗಿದ್ದ ರೇಣುಕುಮಾರಿ ಹಾಗೂ ಪದ್ಮಿನಿ ಎನ್ನುವರು ಅಲ್ಲಿ ಒಬ್ಬರ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ಇದ್ದರು. ಅವರು ಮತ್ತೆ ವಾಪಸ್ ಮೈಸೂರಿಗೆ ವರ್ಗವಾಗಿದ್ದರಿಂದ ಅವರ ಜಾಗದಲ್ಲಿ ಆ ಹಾಸ್ಟೆಲಿಗೆ ನಾವು ಸೇರುವುದು ಎಂದು ಈಗಾಗಲೇ ನಾನು ಸುಲೋಚನ ನಿರ್ಧರಿಸಿದ್ದೆವು. ರವೀಶ್ ನನ್ನ ಜೊತೆ ಬರಲು ನಿರ್ಧರಿಸಿದ್ದರಿಂದ ಸುಲೋಚನ ಅವರ ಅಕ್ಕ ಬರುವುದು ಬೇಡ ಎಂದು ಹೇಳಿ ನಾವು ಡಿಸೆಂಬರ್ ೧ ೧೯೯೭ರ  ಬೆಳಿಗ್ಗೆ 5:30 ಬಸ್ಸಿಗೆ ಸಕಲೇಶಪುರಕ್ಕೆ ಹೊರಟೆವು.ಮೊದಲು ರವೀಶ್ ಅವರ ಸಂಬಂಧಿ ಸತ್ಯ ಅವರ ಮನೆಗೆ ಹೋಗಿ ತಿಂಡಿ ತಿಂದು ನಂತರ ಆಫೀಸಿನ ಕಡೆ ಹೋದೆವು. ಮಾಮೂಲಿನಂತೆ ಡ್ಯೂಟಿ ರಿಪೋರ್ಟ್ ಹಾಗೂ ವರ್ಗಾವಣೆ ಅರ್ಜಿ ಎರಡನ್ನು ಸಲ್ಲಿಸಿಆಯಿತು. ಆದರೆ ಕನ್ಫರ್ಮೇಷನ್ ಆಗುವ ತನಕ ನಮ್ಮ ಅರ್ಜಿಗೆ ಮಾನ್ಯತೆ ಇರುವುದಿಲ್ಲ.  ನಾನು ಈಗಾಗಲೇ ಹೊಸ ವ್ಯವಹಾರ ವಿಭಾಗದಲ್ಲಿ ವಿಭಾಗ ಕಚೇರಿಯಲ್ಲಿ ಇದ್ದುದರಿಂದ ನನಗೆ ಅದೇ ಡಿಪಾರ್ಟ್ಮೆಂಟ್ ಕೊಟ್ಟರು. ಸುಲೋಚನಾ ಅವರು ಪಾಲಿಸಿ ಸೇವಾ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿರುವುದರಿಂದ ಅವರಿಗೆ ಗೊತ್ತಿದ್ದ ಅದೇ ಡಿಪಾರ್ಟ್ಮೆಂಟ್. ಮಧ್ಯಾಹ್ನ ರವೀಶ್ ಅವರು ವಾಪಸ್ ಹೋದರು. ಸಂಜೆ ಕಚೇರಿ ಮುಗಿದ ನಂತರ ರೇಣು ಅವರ ಜೊತೆಯಲ್ಲಿ ಹಾಸ್ಟೆಲ್ ಗೆ ಹೋದೆವು. ಈಗಾಗಲೇ ಅಲ್ಲಿ ಮತ್ತೊಬ್ಬರು ಉಪಾಧ್ಯಾಯಿನಿ ಶಿಲ್ಪ ಎನ್ನುವವರು ಇದ್ದರು.  ಒಟ್ಟು ಮೂರು ಜನ ಒಂದು ಕೋಣೆಯಲ್ಲಿ ಇದ್ದುದ್ದು. ನಾವು ಹೊಸಬರು ಡ್ಯೂಟಿ ರಿಪೋರ್ಟ್ ಮಾಡಿಕೊಂಡ ನಂತರ ಮುಂದಿನ ವಾರ ಅವರು ಅಲ್ಲಿಂದ ರಿಲೀವ್ ಆಗಬೇಕಿದ್ದು ಹಾಗಾಗಿ ಆ ಒಂದು ವಾರ ಆ ಚಿಕ್ಕ ಕೋಣೆಯಲ್ಲಿ ನಾವು ಇರಲು ಸಾಧ್ಯವಿರಲಿಲ್ಲ. ಆ ಪ್ರಶ್ನೆ ನಮಗೆ  ಎದುರಾಗಿಯೇ ಇರದುದ್ದರಿಂದ ಎಲ್ಲಿ ಇರುವುದು ಎನ್ನುವ ಪ್ರಶ್ನೆ ಉದ್ಭವವಾಯಿತು. ಸಂಬಂಧಿಗಳ ಮನೆ ಸಹ ಚಿಕ್ಕದಾಗಿದ್ದರಿಂದ ಅಲ್ಲಿ ಉಳಿಯುವುದು ಸಾಧ್ಯವಿರಲಿಲ್ಲ. ಕಡೆಗೆ ಊರಿಗೆ ವಾಪಸ್ ಆಗಿ ಮುಂದಿನ ವಾರ ಬರುವುದು ಎಂಬ ನಿರ್ಧಾರಕ್ಕೂ ಬಂದೆವು. ಸದ್ಯ ಅಲ್ಲಿಯೇ ಮೂರು ಜನ ಬೇರೆ ನಮ್ಮ ಕಚೇರಿಯ ಉದ್ಯೋಗಿಗಳು ಒಂದು ಮನೆ ಮಾಡಿಕೊಂಡು ಇದ್ದರು. ಇನ್ನುಳಿದ ಐದು ದಿನ ಇಲ್ಲಿಯೇ ಇರಿ ಎಂದು ಅವರು ಆಹ್ವಾನಿಸಿದ್ದರಿಂದ ರಜೆ ಹಾಕುವ  ಯೋಚನೆ ಕೈ ಬಿಟ್ಟು ಅಲ್ಲಿಯೇ ಇರಬೇಕಾಯಿತು. ಬಸ್ ಸ್ಟ್ಯಾಂಡ್ ಪಕ್ಕದಲ್ಲಿ ಇದ್ದ ಅವರ ಮನೆ ಅಲ್ಲೇ ಬಸ್ಟಾಂಡ್. ಎದುರಿಗೆ ಆಫೀಸ್. ಅಂತೂ ಅವರ ಜೊತೆ ಅವರಿಗೆ ತೊಂದರೆ ಕೊಟ್ಟುಕೊಂಡು 5 ದಿನ ಇದ್ದು ಹಾಸ್ಟೆಲ್ ಗೆ ಅಡ್ವಾನ್ಸ್ ಕೊಟ್ಟು ಜಾಗ ಖಚಿತಪಡಿಸಿಕೊಂಡಿದ್ದಾಯಿತು.ನನಗೆ ಹೊಸ ವ್ಯವಹಾರ ವಿಭಾಗದಲ್ಲಿ ಆಗ ಜವರಯ್ಯ ಮತ್ತು ಕುಮಾರ್ ಎಂಬುವವರು ಸಹಾಯಕರು. ಇಸ್ಮಾಯಿಲ್ ಎನ್ನುವರು ಅಲ್ಲಿನ ರೆಕಾರ್ಡ್ ಕ್ಲರ್ಕ್. ತುಂಬಾ ಹೊಂದಿಕೊಳ್ಳುವಂತಹ ವ್ಯಕ್ತಿತ್ವದವರು. ಅಲ್ಲಿ ಇದ್ದ ಚಂದ್ರು ಎನ್ನುವವರು ಕ್ಯಾಶಿಯರ್ ಆಗಿ ಹೋಗಿದ್ದರು ಸ್ವಲ್ಪ ಕೆಲಸ ಬಾಕಿ ಉಳಿದಿತ್ತು ಡಿಸೆಂಬರ್ ಅಂತ್ಯದ ವೇಳೆಗೆ ಶೆಡ್ಯೂಲ್ ಗಳನ್ನು ಸಲ್ಲಿಸಬೇಕಿತ್ತು ಅದರ ಕಡೆಯ ಕೆಲಸ ಏನು ಆಗಿರಲಿಲ್ಲ ಸ್ವಲ್ಪ ಹೆಚ್ಚಿನ ಶ್ರಮ ಹಾಕಬೇಕಿತ್ತು.ಐದು ವರೆಗೆ ಸರಿಯಾಗಿ ನಾವು ಹೊರಟರೆ ಅಲ್ಲಿ ಎಲ್ಲರಿಗೂ ಆಶ್ಚರ್ಯ. ಎಲ್ಲರೂ ಅಲ್ಲಿ ಆರು ವರೆ ಏಳು ಗಂಟೆಯ ತನಕ ಆಫೀಸಿನಲ್ಲಿಯೇ ಇರುತ್ತಿದ್ದವರು. ಕೆಲಸ ಬಾಕಿ ಉಳಿದಿದ್ದವರು ಕೆಲಸ ಮಾಡುತ್ತಿದ್ದರು. ಇಲ್ಲದಿದ್ದವರು ಕೇರಂ ಅಥವಾ ಟಿಟಿ ಆಡುತ್ತಾ ಕಾಲ ಕಳೆಯುತ್ತಿದ್ದರು. ಬಹಳಷ್ಟು ಜನ ಮನೆಗಳಿಂದ ದೂರ ಬಂದು ಇಲ್ಲಿ ರೂಮ್ ಮಾಡಿಕೊಂಡು ಇರುತ್ತಿದುದರಿಂದ ಇಲ್ಲಿ ಅದೇ ಸಂಸ್ಕೃತಿ ಬೆಳೆದು ಬಂದಿತ್ತು. ಆ ಒಂದು ವಾರ ನಾವು ಉಳಿದಿದ್ದ ನಮ್ಮ ಉದ್ಯೋಗಿಗಳು ಎಲ್ಲರೂ ಉಡುಪಿಯ ಕಡೆಯವರು. ಅವರಲ್ಲಿ ನೀರಜ ಎನ್ನುವವರಿಗೆ ಮದುವೆಯಾಗಿ ಒಂದು ಮಗುವಿತ್ತು. ಈ ಹಿಂದೆ ಪೋಸ್ಟಲ್ ಡಿಪಾರ್ಟ್ಮೆಂಟ್ ನಲ್ಲಿ ಕೆಲಸ ಮಾಡುತ್ತಿದ್ದವರು ಅದನ್ನು ಬಿಟ್ಟು ಇಲ್ಲಿ ಸೇರಿದ್ದರು. ಮಂಗಳೂರಿಗೆ ವರ್ಗಾವಣೆ ಅರ್ಜಿ ಕೋರೊದ್ದರು. ಪ್ರತಿ ಶನಿವಾರ ಮಧ್ಯಾಹ್ನ ಅವರು ಮಂಗಳೂರಿಗೆ ಹೋಗಿ ಸೋಮವಾರ ಬೆಳಿಗ್ಗೆ ವಾಪಸ್ ಆಗುತ್ತಿದ್ದರು. ಇನ್ನೊಬ್ಬರು ಶುಭದಾ. ಅವರು ಅಷ್ಟೇ ಉಡುಪಿಯವರು. ಅವರ ತಂದೆ ಸಹ ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರಿಗೂ ಒಂದು ಪುಟ್ಟ ಮಗು ಇತ್ತು .ಮತ್ತು ಒಬ್ಬರು ಶ್ರೀಲತಾ ಆಗತಾನೇ ವಿವಾಹವಾಗಿ ವಿವಾಹದ ಆಧಾರದ ಮೇಲೆ ಮಂಗಳೂರಿಗೆ ವರ್ಗಾವಣೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅವರೊಂದಿಗೆ ನಾವು ಇಬ್ಬರು ಸೇರಿದ್ದೆವು ತುಂಬಾ ಒಳ್ಳೆಯವರು ಚೆನ್ನಾಗಿ ಹೊಂದಿಕೊಂಡು ಹೋಗುತ್ತಿದ್ದರು ನಮ್ಮ ಕಡೆಯ ಅಡುಗೆ ಇಷ್ಟವಾಗಿದ್ದರಿಂದ ಆ ಐದು ದಿನ ಅಡುಗೆಯ ಹೊಣೆ ನಾನೇ ಹೊತ್ತಿದ್ದೆ ಅಲ್ಲಿ ಎಷ್ಟು ಹೊಂದಾಣಿಕೆ ಇತ್ತೆಂದರೆ ಹಾಸ್ಟೆಲ್ ಬದಲು ಅಲ್ಲೇ ಮುಂದುವರೆಯಬಹುದಿತ್ತು ಆದರೆ ಐದು ಜನಕ್ಕೆ ಆ ಮನೆ ಸ್ವಲ್ಪ ಚಿಕ್ಕದಾಗುತ್ತಿತ್ತು ಹಾಗಾಗಿ ಆ ಯೋಜನೆ ಕೈ ಬಿಟ್ಟೆವು. ನಮ್ಮ ಜೊತೆಗೆ ಶಶಿಕಲಾ ಎನ್ನುವವರು ಹುಣಸೂರಿನಿಂದ ಇಲ್ಲಿಗೆ ಉನ್ನತ ದರ್ಜೆ ಸಹಾಯಕಿಯಾಗಿ ಬಂದಿದ್ದರು ಅವರಿಗೆ ಇಬ್ಬರು ಮಕ್ಕಳು, ಬೆಂಗಳೂರಿನಲ್ಲಿ ಅವರ ಪತಿ ಹಾಗೂ ತಾಯಿಯ ಮನೆ ಇತ್ತು ಪ್ರತಿವಾರ ಬೆಂಗಳೂರಿಗೆ ಹೋಗಲು ಕಷ್ಟ ಎಂದು ಎರಡು ವಾರಕ್ಕೊಮ್ಮೆ ಹೋಗುತ್ತಿದ್ದರು ಅವರು ಈ ಬೇರೆ ಇನ್ನೊಂದು ಹಾಸ್ಟೆಲ್ ಸೇರಿದ್ದರು ಆದರೆ ಅದು ನಾನ್-ವೆಜ್ ಸಹ ಇರುವುದರಿಂದ ನಾವು ಹೋಗಲು ಇಷ್ಟಪಡಲಿಲ್ಲ.ಮೊದಲು ನಮ್ಮ ಶಾಖೆ ಬಸ್ ನಿಲ್ದಾಣದ ಎದುರಿನ ರಸ್ತೆ ಮಸೀದಿಯ ಎದುರು ಇತ್ತು ಆದರೆ ಜನವರಿ ತಿಂಗಳಿನಲ್ಲಿ ಬಸ್ ನಿಲ್ದಾಣದ ಎದುರು ಮುಖ್ಯರಸ್ತೆಯ ಒಂದು ಹೊಸ ಕಾಂಪ್ಲೆಕ್ಸ್ ನ ೧ ಹಾಗೂ ೨ ನೆಯ ಮಹಡಿಗೆ ಸ್ಥಳಾಂತರ ಗೊಳ್ಳಲಿತ್ತು. ಆ ನಿಟ್ಟಿನಲ್ಲಿ ಪ್ಯಾಕಿಂಗ್ ಮತ್ತು ಸಾಗಣೆ ಕೆಲಸಗಳ ಹೊರೆಯೂ ಇತ್ತು.ಈ ಹಿಂದೆ ಹೊಸದಾಗಿ ಕೆಲಸಕ್ಕೆ ಸೇರುವಾಗ ನಮ್ಮ ಜೊತೆಯ ಬ್ಯಾಚ್ನಲ್ಲಿ ಇದ್ದ ಮುಕುಂದನ್ ಅವರೂ ಸಹ ಉನ್ನತ ದರ್ಜೆ ಸಹಾಯಕರಾಗಿ ಈ ಶಾಖೆಯಲ್ಲೇ ಇದ್ದರು. ವಿಕ್ರಯ ವಿಭಾಗದಲ್ಲಿ ಅವರಿದ್ದುದು. ಅವರ ಪತ್ನಿ ಅಲ್ಲಿನ ಕಾರ್ಪೊರೇಷನ್ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದುದರಿಂದ ಅವರು ಇಲ್ಲಿಗೆ ವರ್ಗಾವಣೆ ತೆಗೆದುಕೊಂಡಿದ್ದರು. ನಮ್ಮ ಹೊಸ ವ್ಯವಹಾರ ವಿಭಾಗಕ್ಕೆ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದವರು ಮಂಜುನಾಥ್ ಎಂಬವರು ಅವರ ಪತ್ನಿ ನವರತ್ನಮ್ಮ ಅವರು ಸಹ ನಮ್ಮ ನಿಗಮದ ಉದ್ಯೋಗಿ ಅದೇ ಶಾಖೆಯಲ್ಲಿ ಇದ್ದರು. ಇತ್ತೀಚಿಗೆ ಸರ್ವಿಸ್ ನಲ್ಲಿ ಇದ್ದಾಗಲೇ ನವರತ್ನ ಅವರು ನಿಧನ ಹೊಂದಿದ್ದರು. ತುಂಬಾ ಒಳ್ಳೆಯವರು. ಸ್ನೇಹಜೀವಿ ಕೂಡ. ಮೊದಲ ವಾರ ಶನಿವಾರ ಮುಗಿದ ನಂತರವೇ ನಾನು ಸುಲೋಚನಾ ಮೈಸೂರಿಗೆ ವಾಪಸ್ ಆದೆವು. ಆನಂತರ ಒಂದೆರಡು ಮೂರು ದಿನ ರಜಾ ಹಾಕಿ ಮತ್ತೆ ಬರುವುದು ಎಂದು ನಿರ್ಧರಿಸಿದ್ದರಿಂದ ಗುರುವಾರದ ದಿನ ಸಕಲೇಶಪುರಕ್ಕೆ ಹೋಗಿ ಸಂಜೆ ಹಾಸ್ಟೆಲ್ ಗೆ ಹೋದೆವು. ಸಕಲೇಶಪುರದ ಚಂಪಕ ನಗರದಲ್ಲಿ ರೋಟರಿ ಎಕ್ಸ್ಟೆಂಶನ್ ಎಂದು ಅದನ್ನು ಕರೆಯುತ್ತಿದ್ದರು. ಮೊದಲ ದಿನ ಮಾತನಾಡಲು ಹೋದಾಗಲೇ ತಲಾ 600 ಅಡ್ವಾನ್ಸ್ ತೆಗೆದುಕೊಂಡಿದ್ದರು. ಚಿಕ್ಕ ರೂಂ ಒಂದು ಡಬಲ್ ಕಾಟ್ ಹಾಕಿದರೆ ಬೆಳಗ್ಗೆ ಸ್ವಲ್ಪ ಜಾಗ ಉಳಿದಿರುತ್ತಿತ್ತು ಅಷ್ಟೇ, ಮೂರು ಜನ ಆದುದರಿಂದ ಹಾಸಿಗೆಯನ್ನು ಸಹ ನಾವೇ ತೆಗೆದುಕೊಳ್ಳಬೇಕು ಎಂದು ಹೇಳಿದರು. ಇಬ್ಬರು ಮಂಚದ ಮೇಲೆ ಒಬ್ಬರು ನೆಲದ ಮೇಲೆ. ಏಕೋ ವಾತಾವರಣವೇ ಸರಿ ಹೋಗಲಿಲ್ಲ .ಇನ್ನು ಊಟ ತಿಂಡಿ ಆ ದೇವರಿಗೆ ಪ್ರೀತಿ .ಎಲ್ಲಾ ಮಾಡಿ ಡೈನಿಂಗ್ ಟೇಬಲ್ ಮೇಲೆ ಇಟ್ಟುಬಿಡುತ್ತಿದ್ದರು. ನಾವು ತಿನ್ನಲು ಹೋಗುವ ವೇಳೆಗೆ ಆರಿ ಅಕ್ಷತೆ ಆಗಿರುತ್ತಿತ್ತು. ಲೆಕ್ಕಾಚಾರವಾಗಿ ಅಷ್ಟೇ ಇಡುತ್ತಿದ್ದರು ನಮಗೇನು ಆ ರುಚಿ ಗೆ ಹೆಚ್ಚು ಬೇಕಾಗುತ್ತಲೂ ಇರಲಿಲ್ಲ. ಆದರೆ ಒಂದು ತರಹ ಇರಸುಮುರಸು ಮೊದಲ ದಿನದಿಂದಲೇ. ನಾಲ್ಕೈದು ದಿನ ಕಳೆದ ನಂತರ ನಮಗೆ ಇಲ್ಲಿ ಸರಿ ಬರುವುದಿಲ್ಲ ಬೇರೆ ಮನೆ ಮಾಡಿಕೊಳ್ಳುವ ಎಂದು ನಿರ್ಧರಿಸಿದೆವು. ಆಫೀಸಿನಲ್ಲಿ ಎಲ್ಲರಿಗೂ ಮನೆ ನೋಡಲು ಹೇಳಿದೆವು.  ಸಂಜೆ ಆಯಿತೆಂದರೆ ಯಾರಾದರೂ ಮನೆ ಖಾಲಿ ಇದೆ ಎಂದು ಹೇಳಿದ ಕಡೆ ಹೋಗುವುದು. ಮನೆ ನೋಡುವುದು .ಆದರೆ ಯಾಕೋ ಯಾವುದೂ ಸರಿ ಹೋಗುತ್ತಿರಲಿಲ್ಲ. ಸರಿ ಹೋದ ಮನೆಗೆ ಸಿಕ್ಕಾಪಟ್ಟೆ ಬಾಡಿಗೆ. ಸಕಲೇಶಪುರ ಬೆಂಗಳೂರಿಗಿಂತಲೂ ದುಬಾರಿ ಎಂದು ನಮಗೆ ಅರಿವಾಗಿದ್ದು ಆಗಲೇ. ಹೋಗಲಿ ಎಂದರೆ ಯಾವುದು ಸರಿ ಹೋಗುತ್ತಲೂ ಇರಲಿಲ್ಲ .ಮೈಸೂರಿನಿಂದಲೇ ಒಂದಷ್ಟು ಪುಡಿಗಳು ಚಟ್ನಿಪುಡಿ ಮೆಂತ್ಯದ ಹಿಟ್ಟು ಅನ್ನದ ಪುಡಿ ತುಪ್ಪ ಮತ್ತು ಉಪ್ಪಿನಕಾಯಿ ತೊಕ್ಕುಗಳನ್ನು ತೆಗೆದುಕೊಂಡು ಹೋಗಿದ್ದರಿಂದ ಹೇಗೋ ಅದನ್ನೇ ಬಳಸಿಕೊಂಡು ಊಟ ಮಾಡುತಿದ್ದೆವು. ಬೆಳಿಗ್ಗೆ ಕಾಫಿಗೆ ಹೋದಾಗ ಎದುರುಗಿನ ಹೋಟೆಲ್ನಲ್ಲಿ ಅಲ್ಲಿನ ಸ್ಪೆಷಾಲಿಟಿ ಕಡುಬು ಮತ್ತು ಅಕ್ಕಿ ರೊಟ್ಟಿ ಒಂದರಲ್ಲಿ ಅರ್ಧ ಮಾಡಿ ತ ತಿನ್ನುತ್ತಿದ್ದುದು.  ಸಂಜೆ ಕಚೇರಿ ಮುಗಿದ ನಂತರ ಮನೆ ಹುಡುಕಲು ಯಾರಾದರೂ ಮನೆಗೆ ಹೋದಾಗ ಅಲ್ಲಿ ಕಾಫಿ ಇನ್ನೇನಾದರೂ ಆತಿಥ್ಯ ಆಗುತ್ತಿತ್ತು. ಇಲ್ಲದಿದ್ದರೆ ಸಂಜೆಯ ವೇಳೆಯೂ ಅಲ್ಲಿ ಹೋಗಿ ತಿಂಡಿ ತಿಂದು ಮನೆಗೆ ಹೋಗುತ್ತಿದ್ದುದು.. ಹೋದ ತಕ್ಷಣ ಒಂದರ್ಧ ಲೋಟ ಕಾಫಿ ಕೊಡುತ್ತಿದ್ದರು ಅಷ್ಟೇ. ರಾತ್ರಿಯ ಊಟವೂ ಅಷ್ಟೇ ಬೆಳಗ್ಗೆ ಉಳಿದದ್ದನ್ನು ಹಾಕುತ್ತಿದ್ದು ಎಷ್ಟು ಬಾರಿ ಹೇಳಿದರು ಒಂದು ದಿನವೂ ಬಿಸಿ ಊಟ ತಿಂಡಿ ಹಾಕಲಿಲ್ಲ .ಆ ಡಿಸೆಂಬರ್ ಚಳಿಗೆ ಆ ಊರಿನ ವಾತಾವರಣಕ್ಕೆ ಆರಿದ್ದು ತಿನ್ನುವುದು ತುಂಬಾ ಹಿಂಸೆ ಎನಿಸುತ್ತಿತ್ತು. ಯಾವಾಗ ನಾವು ನಮಗೆ ಬೇರೆ ಮನೆ ಮಾಡುತ್ತೇವಪ್ಪಾ ಅಂತ ಅನ್ನಿಸತೊಡಗಿತ್ತು. ಯಾವುದೇ ಹಾಸ್ಟೆಲ್ ನಲ್ಲಿದ್ದು‌ ಅಭ್ಯಾಸ ಇಲ್ಲದ ನಮಗೆ ಹೊರಗಿನ ಊಟದ ಕಷ್ಟ ಏನೆಂದು ಆಗ ಅರ್ಥವಾಯಿತು. ಅಲ್ಲದೆ ಹೆಚ್ಚು ಕಡಿಮೆ ಮೂರು ಕಿಲೋಮೀಟರ್ ದೂರ ಇತ್ತು ಅದು ನಮ್ಮ ಕಚೇರಿಯಿಂದ. ಹೋಗಿ ಬರುವುದು ಸಹ ಕಷ್ಟವೇ. ಸದ್ಯ ಆಗ ಡಿಸೆಂಬರ್ ನಲ್ಲಿ ಮಳೆ ಇಲ್ಲದಿದ್ದರಿಂದ ಹೇಗೋ ನಡೆಯಿತು ಹಾಗಾಗಿ ಕಚೇರಿಗೆ ಹತ್ತಿರದ ಸ್ಥಳಗಳಲ್ಲಿ ನಾವು ಮನೆ ಹುಡುಕುತ್ತಿದ್ದು. ಕೆಲವು ದೂರದ ಪ್ರದೇಶ ಏರಿಯಾದಲ್ಲಿ ಮನೆ ಸಿಕ್ಕುತ್ತಿದ್ದರು ನಮ್ಮ ಬಳಿ ವಾಹನ ಇಲ್ಲದ್ದರಿಂದ ಅಲ್ಲಿನ ಮಳೆ ಸಮಯದಲ್ಲಿ ಓಡಾಡಲು ಕಷ್ಟ ಎಂದು ಎಲ್ಲರೂ ಹೇಳಿದ್ದರಿಂದ ದೂರದ ಏರಿಯಾಗಳಿಗೆ ಹೋಗಲು ಮನಸ್ಸು ಮಾಡಲಿಲ್ಲ.ಕಡೆಗೆ ಕಚೇರಿಯಿಂದ ಒಂದೇ ಕಿಲೋಮೀಟರ್ ದೂರ ಇದ್ದ ಕುಶಾಲನಗರ ಎಕ್ಸ್ಟೆಂಶನ್ ಎಂಬಲ್ಲಿ ಮಹಡಿಯ ಮೇಲೆ ಒಂದು ಮನೆ ಖಾಲಿ ಇದೆ ಎಂದು ತಿಳಿಯಿತು ರಾಜಮ್ಮ ಎನ್ನುವವರು ಅಲ್ಲಿನ ರಾಜಕೀಯ ಪುಡಾರಿ ಅವರದೇ ಮನೆ. ಕೆಳಗಡೆ ಅವರದೊಂದು ದೊಡ್ಡ ಮನೆ. ಪಕ್ಕದಲ್ಲಿ ಸ್ವಲ್ಪ ಜಾಗ ಅವರ ಮನೆಗೆ ಸೇರಿದಂತೆಯೇ ಮಹಡಿಯ ಮೇಲೆ ಎರಡು ಮನೆಗಳು ಅಲ್ಲಿ ಕೆಳಗಡೆ ಅಟಾಚ್ಡ್ ಬಾತ್ರೂಮ್ ಇರುವಂತಹ ಎರಡು ಕೊಠಡಿಗಳು. ಅಂತಹ ಒಂದು ಕೊಠಡಿಯಲ್ಲಿ ನಮ್ಮದೇ ಆಫೀಸಿನ ಹೊಸ ರೆಕ್ರೂಟ್ಮೆಂಟ್ ಆದ ಆನಂದ್ ಮತ್ತು ಮೋಹನ್ ಎನ್ನುವವರು ಇದ್ದುದರಿಂದ ಅವರ ಮೇಲಿನ ಮನೆ ಖಾಲಿಯಾಗುತ್ತದೆ ಎಂದು ತಿಳಿಸಿದರು. ಹಾಗಾಗಿ ಅಲ್ಲಿ ನೋಡಲು ಹೋದೆವು. ಅವರ ಮನೆಯಲ್ಲಿ ಟೀ ಚೌಚೌ ಆತಿಥ್ಯ ಸ್ವೀಕರಿಸಿ ಮನೆ ನೋಡಲು ಹೋದೆವು. ಒಂದು ರೂಮಿನ ಮನೆ. ಮನೆ ಏನೋ ಚೆನ್ನಾಗಿತ್ತು ಆದರೆ ಅಲ್ಲಿ ಯಾರು

Read Post »

ಅಂಕಣ ಸಂಗಾತಿ, ಜಯದೇವಿ ತಾಯಿ ಲಿಗಾಡೆ ಜೀವನ

ಧಾರಾವಾಹಿ ಸಂಗಾತಿ ಕಂತು-ಏಳು ಜಯದೇವಿ ತಾಯಿ ಲಿಗಾಡೆ ಜೀವನಗಾಥೆ ಸವಿತಾ ದೇಶಮುಖ ತಾಳಲಾರೆ ಯಾತನೆ/ಕೇಳೋಕೂಗು ನೀಲಕಂದರನೆ !! ಪಲ್ಲವಿ!!ಚಂದಿರನ ತಂಗಾಳಿ ನೊಂದ ಮನಕೆ ಬೀರಿ ಕಂದಳನು ಕಾಪಾಡ ಬಾರೋ!!ಬಾಳಿನ ತುಂಬೆಲ್ಲ ತಾಳಬಾರದು ಗೋಳುಹೇಳಲು ಬರೋದು ಎನಗಯ್ಯ !! ಅಂತ ಪಾಡುತ……ಚಂದಿರನ ಬೆಳದಿಂಗಳದ ಕೆಳಗೆ ಕುಳಿತು… ತೊರೆದು ಹೋದ ಚೊಚ್ಚಲ ಮಗುವನ್ನು ನೆಯುತ ಜಯದೇವಿ ತಾಯಿಯವರು ಖಾಲಿ ಹೃದಯ ಹೊತ್ತು, ಕಣ್ಣೀರು ಧಾರೆಯಲಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಬಹಳ ಹೊತ್ತು ಅತ್ತರು. ಆದರೆ ಜೀವನ ಯಾರಿಗೂ ಹೆಚ್ಚು ಕಾಲ ವಿರಾಮ ಕೊಡುವುದಿಲ್ಲವಲ್ಲಾ….!!! ಮತ್ತೆ ಗಂಡನ ಮನೆಗೆ ಹೊರಡಬೇಕು…..!!!ಗಂಡನ ಮನೆಗೆ ಹೋಗುವ ದಿನವೂ ಬಂತು…ತವರ ಬಾಗಿಲು ದಾಟಲು ಕಾಲುಗಳು ಮುಂದೆ ಸಾಗಲಿಲ್ಲ.ಪ್ರತಿ ಹೆಜ್ಜೆಯೂ ಒಂದು ನೆನಪನ್ನು ತುಳಿಯುವಂತೆ……ತವರಿನ ಗೋಡೆಗಳೆಲ್ಲಆ ಮಗು ನಗುವಿನ ಧ್ವನಿ ತುಂಬಿತ್ತು… ಕಳವಳ ಗೊಂಡ ಮನ…. ಕರಳು ಹಿಚುಕುವ ಸನ್ನಿವೇಶ… ಗಂಡನ ಮನೆಗೆ ಹೋಗುವ ದಾರಿಯಲ್ಲಿಮೌನವಾಗಿ ದೇವರನ್ನು ಕೇಳಿದಳು — ಕಳವಳಗೊಳ್ಳುತ್ತಾ ಬಳಲುತ್ತ ಬೇಡುವೆತಿಡಿಗೇಡಿಗೆ ಹೇಳೊ ಮನಶಾಂತಿಯ !! ನೊಂದ ಜೀವ ಬೆಂದ ಮನ ಸಂದುಸಂದಿನನೋವ ಅಂದಿಂದ ಮೈ ಮನಕೆಂದೇ !! ಹಂಣ್ಣಾದ ಈ ಮನಕೆ ಸಣ್ಣ ಮಾಡುವುದಕ್ಕೆ?!ಕಣ್ಣು ತೆರೆದು ಕರುಣಿಸಯ್ಯ ರೋಮರೋಮಂಗಳಿಗೆ ಸ್ವಾಮಿ ನಿನ್ನಯ ಒಲವು ಅಮರ ಧಾರೆಯ ಎರೆಯಯ್ಯಾ!! ಭವ ದೂರ ಭವನಾಶ ‘ಜಯ ಸಿದ್ದರಾಮೇಶನೆ’ ದಯದೋರೊ ಎನ್ನ ಭಯ ದೂರ ಸರಿಸೋ !! ಜಯದೇವಿ ತಾಯಿಯವರ ತಮ್ಮ ಶಿವಶಂಕರ್ ಮಡಕಿ ,ತಂಗಿಶ್ರೀದೇವಿ ಗಾಡವೆ, ,ಮಗಳು ಶಶಿಕಲಾ ಮಡಕಿ, ತಂಗಿ ಸುಮತಿ ಅಸ್ಟುರೆ ಗಂಡನ ಮನೆ ಅವರನ್ನು ಕಾಯುತ್ತಿತ್ತು…..ಆದರೆ ಕಣ್ಣುಗಳಲ್ಲಿ ಜೀವಂತವಾಗಿದ್ದಒಂದು ಚಿಕ್ಕ ಮುಖ…ಒಂದು ಅಪೂರ್ಣ ನಗುವಿನ ನೆನಹು ಮನದಲಿ ತುಂಬಿತ್ತು ………. ಅಲ್ಲಿ ಇನ್ನೂ ಏನ ಗ್ರಹಚಾರವಿದೆಯೋ..ಅತ್ತೆಯ ನೆನಪಾಗಿ ಕೈ ಕಾಲುಗಳು ನಡುಗಲಾರಂಭಿಸಿದವು. ‌‌ ಖಾಲಿ ಕೈಯಲ್ಲಿ ಹೇಗೆ ಹೋಗುವದು ಬರಿದಾದ ಒಡಲನ್ನು ತೆಗೆದುಕೊಂಡು…????ಹೆದರುತ್ತ ಹೆದರುತ್ತಲೇ ಗಂಡನ ಮನೆಯಲ್ಲಿ ಕಾಲಿಟ್ಟ ತಕ್ಷಣ ಅತ್ತೆ ಪ್ರಯಾಗಬಾಯಿ ಎದುರಾದರು …… ಎದುರಾದ ಅತ್ತೆ ಮುಖ ಕಳೆಗುಂದಿತು ಕರುಣಾ ಮಯಿಯಾಗಿ ಕಂಡರು……. ಮಡಿಲಲ್ಲಿ ಮಗು ಇಲ್ಲದ ಸೊಸೆಯ ಕಣ್ಣುಗಳೇ ಸಾವಿರ ಮಾತುಗಳ ಹೇಳುವದ ಕಂಡು……. ಬಾಗಿಲ ಬಳಿ ನಿಂತಿದ್ದ ಸೊಸೆಯನ್ನು ನೋಡಿಅತ್ತೆಯ ಹೃದಯ ಕಗ್ಗತ್ತಲಾಯಿತು…..ಸೊಸೆ ಒಂದು ಹೆಜ್ಜೆ ಒಳಗೆ ಇಟ್ಟಳು…….ಸೊಸೆಯ ಕಾಲನಡಿಗೆಯ ನಡುಗು.ಹೃದಯದಲ್ಲಿ ಹೊತ್ತಿ ಉರಿಯುವ ಶೋಕ……ಕಣ್ಣುಗಳಲ್ಲಿ ಅಳಲು ,ಒಣಗಿದ ಕಣ್ಣೀರು, ನೋವಿನ ನಿರಾಶೆ, ಜೀವ ಒಡೆದುಹೋದ ವ್ಯಥೆ ಹೇಳಿದವು… ಅತ್ತೆ ಮುಂದೆ ಬಂದು “ಇರ್ಲಿ ನಿನ್ನ ಮಗನ ಶಿವ ಕರ್ಸ್ಕೊಂಡಾನ ಇಂತಹ ಹತ್ತು ಮಕ್ಕಳನ್ನು ಮತ್ತೇ ಹೆರುವಂತಿ ಬಾ ಒಳಕ್ಕೆ ಬಾ “ಅಂದರಂತೆ ಕಣ್ಣಲ್ಲಿ ನೀರುತುಂಬಿಕೊಕಡಿದ್ದವು.. ಒಂದು ಕ್ಷಣದಲ್ಲಿ ‘ಅತ್ತೆ’ … ‘ತಾಯಿ’ ಆಗಿಬಿಟ್ಟಳು.ಸೊಸೆಯ ಖಾಲಿ ಕೈಗಳನ್ನು ಮಮತೆಯಿಂದ ಗಟ್ಟಿಯಾಗಿ ಹಿಡಿದರು.ಇದು ಮೊಟ್ಟಮೊದಲ ಬಾರಿ —ಪ್ರೀತಿಯಿಂದ ಸೊಸೆ ಎದೆಗೆ ತಲೆ ಒರಗಿಸಿಮುರಿದು ಬಿದ್ದಳು.ಇಬ್ಬರ ನೋವು ಒಂದಾಗಿ ಹರಿದ ಕ್ಷಣಗಳಿಗೆಆ ಮನೆಯ ಗೋಡೆಗಳು ಸಾಕ್ಷಿಯಾಗಿದ್ದವು —ಕಾಡುತ್ತಿದ್ದ ಅತ್ತೆ ಇವತ್ತು ಕರಗಿಬಿಟ್ಟಳು.ಸೊಸೆ ಮಾತಾಡಲಿಲ್ಲ. ಮೌನವಾಗಿ ಒಳ ನಡೆದರು. ಆ ದಿನದಿಂದ ಆ ಮನೆಯ ವಾತಾವರಣ ಬದಲಾಗಿತು.ಅತ್ತೇಯ ಕಾಡುವ ಮಾತುಗಳು ಇಲ್ಲವಾಗಿದ್ದವು….. ಕಾಲ ಕೆಲವೊಮ್ಮೆ ಶಿಕ್ಷಕ ಆಗುತ್ತೆ ಅಲ್ಲವೇ….!!! ಒಂದು ಮರಣ ಎರಡು ಹೃದಯಗಳನ್ನು ಹತ್ತಿರ ಮಾಡಿತು.ಅದಕ್ಕೆ ಜಯದೇವಿತಾಯಿಯವರು ಹೇಳ್ತಾರೆ “ಕಾಡುವವರು ಇರಬೇಕ/ ಕಡಿತನಕ ಜನುಮಕ್ಕ ನೋಡುವರ ಇರಬೇಕು ವರೆಗೆ ಹಚ್ಚಿ-ಈ ಮನೆಕ ನೀಡುವರು ಇರಬೇಕ ನಿಜದರಿವ!! ಕಾಡುವರು ನನಗ /ಕಡೆತನಕ ಇರಲವ್ವಕೇಡ ಬಯಸಿನು ನಾ ಅವರಿಗ-ಕಡೆತನಹಾಡಿ ಹರಿಸುತ ಸುಖಿಸುವೆ!! ಏಕೆಂದರೆ ಒಂದೊಂದು ಕಠಿಣ ಪರೀಕ್ಷೆಗಳು ಅವರನ್ನು ದೇವರ ಸಮೀಪ ಕರೆದು ಒಯ್ಯಯುತಿವೆ. ಅನ್ನುವುದು ಖಚಿತಗೊಳ್ಳಲಾರಂಭಿಸಿತ್ತು..ಅತ್ತೆಯ ಕಾಟಾಚಾರವು ಕೂಡಾ ಜೀವನದಲ್ಲಿ ಅನೇಕ ಪಾಠಗಳನ್ನು ಕಲಿಸಿದ್ದವು ಅವರಿಗೆ ಸಕಾರಾತ್ಮಕ ಬದುಕನ್ನು ಬದುಕುವ ಪಾಠ ಕಲಿಸಿತ್ತು ಅಂತ ಹೇಳುತ್ತಿದ್ದರು. “ನೋವಿನ ಪೆಟ್ಟು ಬಿದ್ದಂತೇಲ್ಲ ಸಿದ್ದರಾಮನ ಸಾಮಿಪ್ಯಕೆ ಸಮಿಸತಾ ಹೋದೆ…. ಹಾಗೆ ಕನ್ನಡ ತಾಯಿಯನ್ನು ನಾನು ಅಪ್ಪಿಕೊಳ್ತಾ ಹೋದೆ ‌…….ಮನದಲ್ಲಿ ಉಲ್ಬಣಿಸುತ್ತಿದ್ದ ವೇದನೆಗಳು… ಕಾವ್ಯದ ರೂಪದಲ್ಲಿ ಮನದ ಮೂಲೆಯಲ್ಲಿ ಹರಿದು ಬರುತ್ತಿತ್ತು ಕಷ್ಟಗಳನೆಲ್ಲ ನನ್ನ ತಾಯಿ ಭಾಷೆ ಕನ್ನಡಭಾಷೆಯಲ್ಲಿ ತೋಡಿಕೊಳ್ಳುತ್ತಿದ್ದೆ …. ಆದರೆ ಅವುಗಳನ್ನು ಶಬ್ದಾಂಕನ ಗೊಳ್ಳಿಸಲಿಕ್ಕೆ ಬೇಕಾಗುವ ಕನ್ನಡ ಶಬ್ದಗಳು ಬರೆಯುವ ಜ್ಞಾನ ಇನ್ನೂ ನನಗೆ ಇರಲಿಲ್ಲ ಏಕೆಂದರೆ ನಾಲ್ಕನೇ ಇಯತ್ತೆ ಮರಾಠಿ ಕಲಿತವಳು…ಕನ್ನಡ ಭಾಷೆಯನ್ನು ಬರೆಯಲು ನಾನು ಕಲಿತಿರಲಿಲ್ಲ .”ಅಂತ ಹೇಳ್ತಾ ಇದ್ದರು. ಜಯದೇವಿ ತಾಯಿಯವರ ಮೈದುನ ಜಗದೇವಪ್ಪನವರು ಗಂಡ ಚೆನ್ನಮಲ್ಲಪ್ಪನಂತೆ ವ್ಯಾಪಾರದಲ್ಲಿ ಜಾಣರೇನು ಆಗಿರಲಿಲ್ಲ…….!! ಕೆಟ್ಟ ಸಂಗತಿಯ ಗೆಳೆಯರಿಂದ ಅವರು ದಾರಿ ತಪ್ಪುತ್ತಿರುವುದನ್ನು ನೋಡಿದ ಪ್ರಯಾಗಬಾಯಿಯು ಒಬ್ಬ ಸುಂದರ ಮರಾಠವಾಡಾದ ಹೆಣ್ಣನ್ನು ನೋಡಿ ಮದುವೆ ಮಾಡಿದರು.ಆದರೆ ಮದುವೆಯಾಗಿ ಬಂದ ಓರಗಿತ್ತಿಯು ತಾಯಿಯವರ ತದ್ವಿರುದ್ಧ ಅವಳು ತುಂಬಾ ಚಂಚಲೆ, ಚಟಪಟ ಅಂತ ಮಾತನಾಡುವ ಎದುರುತ್ತರ ನೀಡುವ ಸೊಸೆ ….ಅತ್ತಿಯಂದಿರು ಹೇಳಿದ ಮಾತುಗಳನ್ನು ಕೇಳುತ್ತಿರಲಿಲ್ಲ… ಹೀಗಾಗಿ ಮದುವೆಯಾದ ಹೊಸತರಲ್ಲಿ ಪ್ರಯಾಗಬಾಯಿ ಸಣ್ಣ ಸೊಸೆಗೆ ಯಾವುದಾದರೂ ಸಣ್ಣ ಕೆಲಸ ಹೇಳಿದರು ಓರಗಿತ್ತಿಯು ಮಾಡುತ್ತಿರಲಿಲ್ಲ.ಅವಳು ರಾತ್ರಿ ಸಮಯ ಒಂಬತ್ತು ಗಂಟೆ ಆಗುತ್ತಿದ್ದಂತೆ ತನ್ನ ಗಂಡನ ಕೋಣೆಗೆ ಹೋಗಿಬಿಡುತ್ತಿದ್ದಳು . ಸಿರಿಮಂತ ಮನೆಯ ಸೊಸೆ ಅಲ್ಲವೇ ಬೆಳಗ್ಗಿನ ವಿಹಾರಕೆ ಅಂತ ಇಬ್ಬರೂ ಗಂಡ ಹೆಂಡದಿರು ಹೊರಟು ಹೋಗುತ್ತಿದ್ದರು.ಅತ್ತಿಯಂದಿರ ಹೇಳುವ ಕೆಲಸಗಳನ್ನು ಎಷ್ಟು ಕೇಳಬೇಕು ಅಷ್ಟೇ ಕೇಳುವಳು…ತಾನಾಯಿತು ತನ್ನ ಗಂಡನಾಯಿತು ಅಷ್ಟೇ ಅವಳ ಪ್ರಪಂಚವಾಗಿತ್ತು. ಜಯದೇವಿ ತಾಯಿಯವರಂತೆ ಸುಶೀಲ ಸದ್ಗುಣ ಸಾಧ್ವಿ ಸೊಸೆ ಆಗಿರಲಿಲ್ಲ ಹೀಗಾಗಿ ಸಹಜವಾಗಿ ಪ್ರಯಾಗಬಾಯಿಗೆ ಜಯದೇವಿ ತಾಯಿಯವರ ಮೇಲೆ ನಂಬಿಕೆ ಪ್ರೀತಿ ಮಮತೆ ಹುಟ್ಟಲಾರಂಭಿಸಿತು. ಅತ್ತೆಯಂದಿರ ನೆಚ್ಚಿನ ಸೊಸೆಯಾದರು . ಜಯದೇವಿ ತಾಯಿಯವರ ಗಂಡನ ತಮ್ಮನ ಮದುವೆಯಾದ ನಂತರ ತಾಯಿಯವರು ಎರಡನೆಯ ಹೆರಿಗೆ ಹೋದರು ಈ ಸಲ ಮೊದಲ ಹೇರಿಗೆ ಅಂತ ಉತ್ಸಾಹ ಸಂತಸ ಯಾವುದು ಇರಲಿಲ್ಲ ಯಾವ ಸಂಭ್ರಮ ಇರಲಿಲ್ಲ ಸಹಜವಾಗಿ ಹೊರಟು ನಿಂತರು. ಈ ಸಲದ ಹೇರಿಗೆಯು ಸುರಕ್ಷಿತವಾಗಿ ಸುಗಮವಾಗಿ ಸಾಗಿತು. ಅತ್ಯಂತ ಸುಂದರ ಹೆಣ್ಣು ಮಗುವಿಗೆ ಜನ್ಮವನ್ನು ಕೊಟ್ಟರು ಚಂದಿರನಂತೆ ಸುಂದರವಾಗಿದ್ದ ಮಗುವಿಗೆ ‘ಶಶಿಕಲಾ ‘ಎಂದು ನಾಮಕರಣ ಮಾಡಿ ಸಂತೈಸಿದರು .ಇಷ್ಟರಲ್ಲಿ ಬ್ರಿಟಿಷರ ಸೊತ್ತಾಗಿದ್ದ ಲಿಗಾಡೆ ಮನೆತನದ ಆಸ್ತಿಯನ್ನೆಲ್ಲ ಚೆನ್ನಮಲ್ಲಪ್ಪನವರಿಗೆ ಬ್ರಿಟಿಷರು ಆದರದಿಂದ ಒಪ್ಪಿಸಿದ್ದರು.ನಂತರ ಅವರು ಮೂರನೇ ಹೇರಿಗೆ ಹೋರಟರು ಹೀಗೆ ಮೇಲಿಂದ ಮೇಲೆ ತವರು ಮನೆಗೆ ಹೋಗುವುದು ಗಂಡನಿಗೆ ಬೇಸರ ತರುತ್ತಿದ್ದರು ಹೇರಿಗೆಯೂ ಮನೆಯಲ್ಲಿ ಆಗಲಿ ಅಂತ ಹೇಳುವ ಧೈರ್ಯ ಅವರಿಗೆ ಇರಲಿಲ್ಲ. ಅನಿವಾರ್ಯ ಹೋಗಲೇ ಬೇಕಾಲ್ಲ…ಮೂರನೆಯ ಹೇರಿಗೆ ಸುಂದರ ಗಂಡು ಮಗವನ್ನು ಹೆತ್ತರು. ಅವನಿಗೆ ‘ಶ್ರೀಕಂಠ ‘ಅಂತ ಹೆಸರಿಡಲಾಯಿತು. ಅತ್ಯಂತ ಅದ್ದೂರಿಯಾಗಿ ಸಂಭ್ರಮವನ್ನು ಆಚರಿಸಿದರು.ಗಂಡು ಮಗ ಅಂದರೆ ಕೇಳಬೇಕು ಆಗಿನ ಕಾಲದಲ್ಲಿ ಗಂಡು ಮಗ ಹುಟ್ಟಿದರೆ ಸ್ವರ್ಗದ ಬಾಗಿಲ ತೆರೆದಂತೆಆದರೆ ಜಯದೇವಿ ತಾಯಿಯವರು ಹೆಣ್ಣು ಗಂಡು ಎರಡನ್ನು ಸಮಾನತೆಯಲ್ಲಿ ನೋಡುವ ದೃಷ್ಟಿಕೋನವನ್ನು ಚಿಕ್ಕವರಿರುವಾಗಲೇ ಅವರು ಹೊಂದಿದವರಾಗಿದ್ದರು. ಅದಕ್ಕೆ ತಾಯಿಯವರು ಒಂದು ಕಡೆ ಬರೆಯುತ್ತಾರೆ ಹೆಣ್ಣು ಹುಟ್ಟೇದಂತ | ಕಣ್ಣೀರ ಕರಿಬ್ಯಾಡ ಸಣ್ಣಾಗಬ್ಯಾಡ ಮನದಾಗ -ತಾಯವ್ವಹೆಣ್ಣಿನ ಜಗದ ಕಣ್ಣೇನ || ಕಾನೂನು ಬದ್ಧವಾಗಿ ಹೆಣ್ಣು ಗಂಡು ಇಬ್ಬರೂ ಸಮಾನತೆ ಪಡೆಯುವಂತಹ ಕಾಲದಲ್ಲಿ ಜಯದೇವಿ ತಾಯಿಯವರು ಹುಟ್ಟಿದ್ದರೂ ಸಂಪ್ರದಾಯದಾಯಸ್ಥ ಕುಟುಂಬಕ್ಕೆ ಪುಷ್ಟಿ ಕೊಟ್ಟವರು.ಯಾವ ಕಾಲದಲ್ಲೂ ಹೆಣ್ಣು ಹುಟ್ಟಿ ಎರಡು ಮನೆಯಲ್ಲಿ ದೀಪ ಬೆಳಗುವಳಾಗಬೇಕು. ಕುಟುಂಬದ ಹೃದಯವಾಗಿ ನಿಲ್ಲಬೇಕು ನಿಜ . ಸೊಸೆಯಾಗಿ ಬಂದವಳು ಮೊದಲು ಸಹನೆ ಸೈಯ್ಯಮ ವಿನಯತೆ ಅವಳಿಗೆ ಆಭರಣ …ಹಿರಿಯರಿಗೆ ಆದರ ತೋರುತ್ತ ಕುಟುಂಬವ ನಿರ್ವಹಿಸುವುದೇ ಅವಳ ಧರ್ಮ. ಸಂಪ್ರದಾಯದ ಬಳುವಳಿಯನ್ನೇ ಬಳವಿಗೆ ಮಾಡಿದ್ದಾರೆ. ಕುಟುಂಬ ಜೀವನದ ಅನೇಕ ಏರಿಳಿತದ ಬಗ್ಗೆ ಹೇಳ್ತಾ ಹೋಗ್ತಾರೆ … ಗರತಿಯ ಬಗ್ಗೆ ಹೀಗೆ ಹೇಳ್ತಾರೆ “ದಯ ಬೇಕ ನುಡಿಯಲಿ |ಭಯ ಬೇಕ ನಡೆಯಲ್ಲಿ ದಯ ಬೇಕ ಸಕಲ ಜೀವನದಲ್ಲಿ -ತಾಯವ್ವಲಯ ಬೇಕು ಶಿವನ ನೆನಹುನಲಿ|| ಸೊಸೆಯಾದವಳು ಮೊದಲು ಮನೆ ಕೆಲಸ ಮಾಡಿ ಮನೆಯ ಮಂದಿಯ ಮನವನ್ನೇಲ್ಲ ಗೆಲ್ಲಬೇಕು ಗಂಡನ ಮನ ಗೆಲ್ಲಬೇಕು…. ವಿನಯಶೀಲರಾಗಿರಬೇಕು… ಎಲ್ಲರ ಬೇಕು ಬೇಡುಗಳನ್ನು ನೋಡುವಂಥವಳು ಆಗಿರಬೇಕು. ಮಾತಿಗೆ ಮಾತು ಬೆಳೆಸದಂಥವಳಿರಬಾರದು ಹೆಚ್ಚು ಅಗೆದರೆ ತಗ್ಗು ಬೀಳುವುದು ಹೆಚ್ಚು…. ಎಂಬಂತೆ ಮಾತಿನ ಗತಿ ಹೇಗಿರಬೇಕೆಂದರೆ ಮನಗಳನ್ನು ತಿಳಿಯಾಗಿಸಬೇಕು ಅನ್ನುತ್ತಿದ್ದರು ….ಮನೆಯ ಕಂಬವಾಗಿರಬೇಕು ಸೊಸೆ ಆದವಳು. ಸಿಟ್ಟಲಿ ಗಂಡ-ಅತ್ತೆಗ ಎದುರು ಉತ್ತರ ನುಡಿದರೆಮನೆಯವರ ಮನ ಸುಡು ಸುಡು ಸುಟ್ಟುಮರಳಿ ಸೊಸೆಯ ಕಡೆಗೆ ಚಟ್ಟಂತಹ ಸಿಡಿಯುವದಬಿರುಗಾಳಿ ಬೀಸಿದಂಗ ತೂರಿ ಬಂದ ಮಾತುಗಗನಕ್ಕಹಾರಿ ಒಯ್ದು ನೆಲಕ್ಕೆ ದೊಪ್ಪೆಂದ ಒಗೆವದ.. ಅಂತ ಹೇಳುವ ಮಾರ್ಮಿಕವಾದ ಉದಾರಣೆಯನ್ನು ಹೇಳುತ್ತಿದ್ದರು .ಹೆಣ್ಣಾದವಳು ನಗುನಗುತ ಮಾತಾಡಬೇಕುಹಗೆ ಎದುರಾದರೂ ಹೊಗೆ ನುಡಿ ಸಲ್ಲಕಾಣಲಾರದ ಕಣ್ಣು ಕಂಡ್ನಗ ಕಂಡಹಂಗ ಆಡಿ ಬಾಣಧಾಂಗ ಮಾತು ಮರಳಿ ಬಡೆಯದ ಮುನ್ನ ಜೋಕೆಯಿಂದಿದ್ದುತಾನು ಸುಟ್ಟುಕೊಂಡು ಇತರರ ಮನ ತಂಪಾಗಿರಬೇಕು….. ತುಪ್ಪ ಸಕ್ಕರೆ ಉಪ್ಪ-ಖಾರ ಉಣಿಸಿ ಒಪ್ಪುಳ್ಳ ಮಾತು ಕಲಿಸಿದರೆ ನಾಲಿಗೆ ಹಾಲಿನ ಹೆಪ್ಪುಗೆಡಿಸಿತ್ತು ಆಗಸಿರಿ ಇದ್ದು ಸುತರಿದ್ದು ಸುಖವಿಲ್ಲ ಹಿತವಿಲ್ಲದಿದ್ದರೆ ಫಲವೇನು….. ಎನ್ನುತ್ತಾರೆ ಕಡಿಮೆ ಎಂದರೆ ಮೂರು ತಲೆಮಾರಿನವರು ಜನರು ಕೂಡಿ ಇರುವ ಪದ್ಧತಿಯೇ ನಮ್ಮ ಸಂಸ್ಕೃತಿ ನಮ್ಮ ದೇಶದ ಪರಂಪರೆಯ ಬಳುವಳಿಯನ್ನು ನಾವು ಮೀರಬಾರದು ಅನ್ನುವುದು ಜಯದೇವಿ ತಾಯಿಯವರ ವಾದವಾಗಿತ್ತು. ಐದು ಜನ ಅತೇರ ಕೈಯಲ್ಲಿ ನಡೆದು ನಾಲ್ಕು ಜನ ಸೊಸೆಯೊಂದನ್ನು ನಡೆಸಿಕೊಂಡ ಗೊತ್ತು 23 ಮೊಮ್ಮಕ್ಕಳು ಮರಿ ಮೊಮ್ಮಕ್ಕಳನ್ನು ಕಂಡತುಂಬಾ ಜೀವನದ ಅನುಭವದ ವಿಚಾರ. ಹರೆಯದ ಹೆಣ್ಣು ನೂರಾರು ಆಸೆ ಹೊತ್ತು ಅತ್ತೆಯ ಮನೆಗೆ ಬಂದಾಗ ತನ್ನ ಸುಖಕ್ಕಿಂತ ಮನೆಯಲ್ಲಿಯೇ ಹಿತ ರಕ್ಷಿಸುವುದೇ ಮೇಲು ತನ್ನ ಮನ ನೊಂದರು ಉಳಿದವರ ಮನನೊಯದಂತೆ ನೋಡಿಕೊಳ್ಳಬೇಕು ಅನ್ನುತ್ತಿದ್ದ . ಅವಿಭಕ್ತ ಕುಟುಂಬದಲ್ಲಿ ಬೆಳೆದ ತಾಯಿಯವರು ಸ್ವಾಭಿಮಾನದಿಂದಲೇ ಈ ಮಾತುಗಳ ಹೇಳಿದ್ದಾರೆ ನಮ್ಮ ಸಂಸ್ಕೃತಿಯಿಂದ ದೂರ ಸರಿಯದೇ ವ್ಯಕ್ತಿ ವಿಕಸನವನ್ನು ಮಾಡಿಕೊಳ್ಳಬಹುದು….. ಬೆಳೆಯಬಹುದು ಅನ್ನುವುದು ತೋರಿಸಿಕೊಟ್ಟ ಸಾಕ್ಷಾತ್ ನಿದರ್ಶನ ಅವರ ಜೀವನ. ಹಾಗೆ ಹೆಣ್ಣಾಗಿ ಸತ್ಯಕ್ಕಾಗಿ ಹೋರಾಡಬೇಕು, ಕೆಟ್ಟದ್ದನ್ನು ಪ್ರತಿಭಟಿಸಬೇಕು ,ಗಂಡನಿಗೆ ಸರಿ ಸಮಾನವಾಗಿ ನಿಲ್ಲಬೇಕು ಜೀವನದಲ್ಲಿ ಸಾಧನೆ ಮುಖ್ಯ ಗುರಿ ಆಗಿರಬೇಕು ಜ್ಞಾನಧ ಎತ್ತರಕ್ಕೆ ಇರಬೇಕು ಅನ್ನೋ ಧೋರಣೆಯನ್ನು ಕೂಡ ಹೊಂದಿದ್ದರು. ಮೊದಲು ಹೆಣ್ಣಾದವಳು ಸೋತು ಸೋತು ಗೆಲ್ಲಬೇಕು ಅನ್ನುವ ತಮ್ಮ ಅನುಭವವನ್ನು ಎಲ್ಲರೊಂದಿಗೆ ಹಂಚಿಕೊಳ್ಳುವುದು ವೈಶಿಷ್ಟ ಪೂರ್ಣವಾದ ವ್ಯಕ್ತಿ ವಿಶೇಷತೆ ತೋರುತ್ತದೆ. ವ್ಯಾಪಾರದಲ್ಲಿ ನೈಪುಣ್ಯತೆ ಹೊಂದಿರುವ ತಂದೆ ಚನ್ನಬಸಪ್ಪನವರ ಜೊತೆ ಕೂಡಿ ವ್ಯಾಪಾರವನ್ನು ಮಾಡುತ್ತಿದ್ದರು…ಗಂಡ ಚೆನ್ನಮಲ್ಲಪ್ಪನವರು. ಹಾಗೆ ಜಯದೇವಿ ತಾಯಿಯವರ ಅಕ್ಕ ತಂಗಿಯರು ಅಣ್ಣ ತಮ್ಮಂದಿರನ್ನು ಆದರದಿಂದ ನೋಡಿಕೊಳ್ಳುತ್ತಿದ್ದರು.ಜಯದೇವಿ ತಾಯಿಯವರ ತಂಗಿಯಂದಿರು ಮಕ್ಕಳ ವಯಸ್ಸಿನವರಷ್ಟೇ ಇದ್ದರು .ಆಗಿನ ಕಾಲದಲ್ಲಿ ತಾಯಿ ಮಗಳ ಹೆರಿಗೆ ಜೊತೆ ಜೊತೆಗೆ ಆಗುವುದು ಸಹಜವಾಗಿತ್ತು…..ಹೀಗಾಗಿ ಜಯದೇವಿ ತಾಯಿಯವರ ತಂಗಿಯಂದಿರು ಹಾಗೂ ಮಕ್ಕಳು ಎಲ್ಲರೂ ಸೇರಿ ಶಾಲೆಗೆ ಹೋಗುತ್ತಿದ್ದರು. ಈ ಸಮಯದಲ್ಲಿ ತಾಯಿಯವರಿಗೆ ವಚನವನ್ನು ಓದುವ ಮಹದಾಸೆ ಹೆಚ್ಚಾಗಿ ತೊಡಗಿತ್ತು.ಶರಣರ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದರು. ಆಳವಾದ ಅಮೂಲ್ಯವಾದ ವಚನ ಸಾಹಿತ್ಯವನ್ನು ಅಭ್ಯೆಸಿಸಬೇಕು ತನ್ನಲ್ಲಿ …ಹುಟ್ಟುವ ಭಾವನೆಗಳನ್ನು ತಾಯಿ ಭಾಷೆಯಲ್ಲಿ ವ್ಯಕ್ತಪಡಿಸಬೇಕು ಅನ್ನುವ ತಳಮಳ ಅವರಲ್ಲಿ ಉಲ್ಬಣಗೊಳ್ಳಲಾರಂಭಿಸಿತು ….ಕನ್ನಡ

Read Post »

ಅಂಕಣ ಸಂಗಾತಿ, ಒಬ್ಬ ಅಮ್ಮನ ಕಥೆ, ನಿಮ್ಮೊಂದಿಗೆ

ಧಾರಾವಾಹಿ ಸಂಗಾತಿ-111 ಒಬ್ಬ ಅಮ್ಮನ ಕಥೆ ರುಕ್ಮಿಣಿ ನಾಯರ್ ವ್ಯವಸ್ಥೆಯಾದ ಮಕ್ಕಳ ಶಿಕ್ಷಣ ಎರಡನೇ ಮಗಳು ಪ್ರಥಮ ವರ್ಷದ ಪದವಿ ತರಗತಿಗೆ ಸೇರ್ಪಡೆಯಾದಳು. ಮೂರನೇ ಮಗಳು ತಾನು ಸ್ವಲ್ಪ ತಡವಾಗಿಯೇ ಪಿಯುಸಿಗೆ ಸೇರಿಕೊಳ್ಳುತ್ತೇನೆ. ಅಮ್ಮನ ಜೊತೆ ಸಹಾಯಕ್ಕೆ ಇರುತ್ತೇನೆ ಎಂದಳು. ಸುಮತಿಯ ಆರೋಗ್ಯ ಮೊದಲಿಗಿಂತ ಕ್ಷೀಣಿಸುತ್ತಿರುವುದು ಇಬ್ಬರ ಗಮನಕ್ಕೂ ಬಂದಿತ್ತು. ಹಾಗಾಗಿ ತಂಗಿ ಹೇಳಿದಾಗ ಅಕ್ಕ ಸರಿ ಅಂದಳು. ಸುಮತಿಯ ಕುಟುಂಬಕ್ಕೆ ಆಪ್ತರಾದ ಡ್ರೈವರ್, ಸಾಹುಕಾರರು ಹಾಗೂ ಅಮ್ಮ ಸಕಲೇಶಪುರದಲ್ಲಿರುವ ಅನಾಥಾಶ್ರಮಕ್ಕೆ ಭೇಟಿ ನೀಡುವಾಗ ಜೊತೆಯಲ್ಲಿ ಇರುತ್ತಿದ್ದರು. ಹಾಗಾಗಿ ಅನಾಥಾಶ್ರಮದಲ್ಲಿ ಮಕ್ಕಳ ಮೇಲ್ವಿಚಾರಣೆ ಹಾಗೂ ಅವರಿಗೆ ಶಿಕ್ಷಕಿಯಾಗಿ ಕಲಿಕೆಗೆ ಸಹಾಯ ಮಾಡಲು ಯಾರೂ ಇಲ್ಲದಿರುವುದು ಡ್ರೈವರ್ ಗೆ ತಿಳಿದಿತ್ತು. ಅವರು ಅಮ್ಮನೊಂದಿಗೆ ಸುಮತಿಯ ಎರಡನೇ ಮಗಳ ವಿಚಾರವನ್ನು ಪ್ರಸ್ತಾಪಿಸಿದರು. ಸುಮತಿಯ ಎರಡನೇ ಮಗಳು ದ್ವಿತೀಯ ಪಿಯುಸಿಯನ್ನು ಉತ್ತಮ ಅಂಕ ಗಳಿಸಿ ತೇರ್ಗಡೆಯಾಗಿದ್ದಳು ಹಾಗೂ ಈಗ ಪ್ರಥಮ ವರ್ಷದ ಪದವಿಗೆ ಅಡ್ಮಿಶನ್ ಪಡೆದುಕೊಂಡಿದ್ದಳು. ಈ ವಿಚಾರ ಅಮ್ಮನಿಗೂ ತಿಳಿದಿತ್ತು. ಆ ಹುಡುಗಿಗೆ ಅನಾಥಾಶ್ರಮದಲ್ಲಿ ಕೆಲಸ ದೊರೆತರೆ ಸುಮತಿಯ ಕುಟುಂಬಕ್ಕೆ ಸಹಾಯವಾಗಬಹುದು ಹಾಗೂ ಆ ಹುಡುಗಿಯು ತನ್ನ ವಿದ್ಯಾಭ್ಯಾಸವನ್ನು ಯಾವುದೇ ಅಡಚಣೆ ಇಲ್ಲದೆ ಮುಂದುವರೆಸಬಹುದು ಎಂಬುದು ಸುಮತಿಯ ಕುಟುಂಬದ ಆಪ್ತರಾದ ಡ್ರೈವರ್ ಹಾಗೂ ಅವರ ಪತ್ನಿಯ ಆಲೋಚನೆಯಾಗಿತ್ತು. ಡ್ರೈವರ್ ಹೇಳಿದ ವಿಚಾರವನ್ನು ಕೇಳಿ…. “ಸರಿ ನಾನು ಒಮ್ಮೆ ಡಾಕ್ಟರ್ ರೊಂದಿಗೆ ಈ ವಿಚಾರವನ್ನು ಪ್ರಸ್ತಾಪಿಸಿ ನೋಡುತ್ತೇನೆ”…. ಎಂದರು.  “ಹಾಗೆಯೇ ಆಗಲಿ ಅಮ್ಮ…. ನೀವು ಮತ್ತು ಸಾಹುಕಾರರು ಮೊದಲಿನಿಂದಲೂ ಟೀಚರ್ ಹಾಗೂ ಮಕ್ಕಳ ಕಾಳಜಿಯನ್ನು ವಹಿಸುತಿದ್ದೀರಿ ಹಾಗೂ ಅವರಿಗೆ ಸಹಾಯ ಮಾಡುತ್ತಿದ್ದೀರಿ….. ನಿಮ್ಮಿಂದ ಅವರು ನೆಮ್ಮದಿಯಿಂದ ಬದುಕುವಂತಾಗಿದೆ”…. ಎಂದರು. ಸುಮತಿಯ ಎರಡನೇ ಮಗಳು ಟೈಪಿಂಗ್ ಕಲಿಯುವಾಗ ಪ್ರತಿ ತಿಂಗಳೂ ಫೀಸ್ ಕಟ್ಟಲು ಅಮ್ಮನಿಂದ ಹಣವನ್ನು ಪಡೆಯಲು ಬರುತ್ತಿದ್ದಳು ಹಾಗೂ ಹೊಸದಾಗಿ ಇಲ್ಲಿಗೆ ವಾಸ್ತವ್ಯ ಹೂಡಿದ ನಂತರ ಅವಳಿಗೆ ರಜೆ ಇರುವಾಗ ತನ್ನ ಸಹಾಯಕ್ಕಾಗಿ ಅಮ್ಮ ಅವಳನ್ನು ಬಂಗಲೆಗೆ ಕರೆಸಿಕೊಳ್ಳುತ್ತಿದ್ದರು ಹಾಗಾಗಿ ಅವಳ ಪರಿಚಯ ಅಮ್ಮನಿಗಿತ್ತು. ಒಂದು ದಿನ ಸಂಜೆ ಸುಮತಿ ಮತ್ತು ಅವಳ ಎರಡನೇ ಮಗಳನ್ನು ಬಂಗಲೆಗೆ ಬರುವಂತೆ ಅಮ್ಮ ಕೆಲಸಗಾರರೊಂದಿಗೆ ಹೇಳಿ ಕಳಿಸಿದರು. ಅಮ್ಮ ತಮ್ಮನ್ನು ಏಕೆ ಕರೆದಿರಬಹುದು? ಎನ್ನುವ ಜಿಜ್ಞಾಸೆಯೊಂದಿಗೆ ಇಬ್ಬರೂ ಅಮ್ಮನನ್ನು ಭೇಟಿ ಮಾಡಲು ಬಂದರು. ಅಮ್ಮನನ್ನು ಕಂಡೊಡನೆ ಇಬ್ಬರೂ ವಂದಿಸಿದರು. ಸದಾ ಹಸನ್ಮುಖಿಯಾಗಿರುತ್ತಿದ್ದ ಅಮ್ಮ ತಾಯಿ-ಮಗಳನ್ನು ಕಂಡ ಕೂಡಲೇ….”ಹೇಗಿದ್ದೀರಿ ಸುಮತಿ…. ಇವಳ ವಿದ್ಯಾಭ್ಯಾಸ ಹೇಗೆ ನಡೆಯುತ್ತಿದೆ? ಎಂದು ಕೇಳಿದರು….. “ಎಲ್ಲವೂ ನಿಮಗೆ ಗೊತ್ತಿರುವ ವಿಚಾರ ಅಲ್ಲವೇ ಅಮ್ಮಾ…. ಇನ್ನು ನಾನೇನು ಹೇಳಲಿ?… ನಿಮ್ಮ ಕೃಪೆಯಿಂದ ನಾವು ಚೆನ್ನಾಗಿದ್ದೇವೆ”…. ಎಂದಳು ಸುಮತಿ. ಮಗಳನ್ನು ನೋಡುತ್ತಾ….. “ನೀನು ಏನು ಹೇಳುತ್ತೀಯ ಹುಡುಗಿ?…. ಎಂದು ಅಮ್ಮ ಕೇಳಿದಾಗ… “ನನ್ನ ಅಮ್ಮ ಹೇಳಿದ್ದೇ ನನ್ನ ಉತ್ತರ ಅಮ್ಮ”…. ಎಂದಳು ಹುಡುಗಿ ವಿನಯದಿಂದ. “….ನಿಮ್ಮಿಬ್ಬರನ್ನು ನಾನು ಇಲ್ಲಿಗೆ ಕರೆಸಿರುವುದು ಏಕೆಂದರೆ, ನಾವು ನಡೆಸುತ್ತಿರುವ ಅನಾಥಾಶ್ರಮದ ಬಗ್ಗೆ ನಿಮಗೆ ತಿಳಿದಿದೆಯಲ್ಲವೇ?…. ಅಲ್ಲಿ ಈಗ ಮೇಲ್ವಿಚಾರಕಿ ಹಾಗೂ ಶಿಕ್ಷಕಿ ಇಲ್ಲ…. ಹಾಗಾಗಿ ನಿಮ್ಮ ಈ ಮಗಳನ್ನು ಅಲ್ಲಿಗೆ ನೇಮಿಸಬೇಕು ಎಂದು ಡಾಕ್ಟರ್ ಮತ್ತು ನಾನು ತೀರ್ಮಾನಿಸಿದ್ದೇವೆ…. ನೀವೇನು ಹೇಳುತ್ತೀರಿ? ಎಂದು ಸುಮತಿಯನ್ನು ಅಮ್ಮ ಕೇಳಲು, ….. “ಅಮ್ಮಾ…. ಇವಳಿನ್ನೂ ಚಿಕ್ಕ ಹುಡುಗಿ…. ಅಷ್ಟು ದೊಡ್ಡ ಜವಾಬ್ದಾರಿಯನ್ನು ಇವಳು ನಿಭಾಯಿಸಲು ಸಾಧ್ಯವೇ?…. ಒಂದನೇ ತರಗತಿಯಿಂದ ಎಂಟನೇ ತರಗತಿಯವರೆಗೂ ಇವಳು ಅಲ್ಲಿಯೇ ಓದಿ ಬೆಳೆದವಳು…. ಆದರೂ….. ಇವಳ ವಯಸ್ಸಿಗೆ ಇದು ಬಹಳ ದೊಡ್ಡ ಜವಾಬ್ದಾರಿ ಎಂದು ನನಗೆ ಅನಿಸುತ್ತಿದೆ”…. ಎಂದಳು. ಸುಮತಿಯ ಮಾತನ್ನು ಕೇಳಿದ ಅಮ್ಮ….. “ಸಂಪೂರ್ಣ ಜವಾಬ್ದಾರಿಯನ್ನು ಇವಳ ಮೇಲೆ ನಾವು ಹೊರಿಸುತ್ತಿಲ್ಲ…. ಅವಳಿಗೆ ಸಹಾಯ ಮಾಡಲು ನಮ್ಮ ಇನ್ನೊಂದು ಅಂಗವಿಕಲ ಶಾಲೆಯ ಮೇಲ್ವಿಚಾರಕರು ಇರುತ್ತಾರೆ…. ಇವಳು ಅಲ್ಲಿಯೇ ಮಕ್ಕಳ ಜೊತೆಗೆ ವಾಸವಿದ್ದು, ಅವರ ಕಲಿಕೆಗೆ ಸಹಾಯ ಮಾಡಬೇಕು ಅವರನ್ನು ನೋಡಿಕೊಳ್ಳಬೇಕು….ಜೊತೆಗೆ ಇವಳೂ ಅಲ್ಲಿಂದ ಕಾಲೇಜಿಗೆ ಹೋಗಿ ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು…. ಹೇಗೂ ಅಲ್ಲಿನ ನಿಯಮಗಳೇನೆಂದು ಇವಳಿಗೆ ತಿಳಿದಿದೆ…. ಒಂದರಿಂದ ಹತ್ತನೇ ತರಗತಿಯವರೆಗೂ ಓದುತ್ತಿರುವ ವಿದ್ಯಾರ್ಥಿಗಳು ಅಲ್ಲಿದ್ದಾರೆ…. ಇವಳು ಬಹಳ ಬುದ್ಧಿವಂತಳಿದ್ದಾಳೆ… ಹಾಗಾಗಿ ಅಲ್ಲಿನ ಮಕ್ಕಳಿಗೆ ಪಠ್ಯದ ವಿಷಯಗಳಲ್ಲಿ ಇವಳು ಸಹಾಯ ಮಾಡಬಹುದು…. ನಿಮ್ಮ ಮಗಳಿಗೆ ತಿಂಗಳಿಗೆ ಇಂತಿಷ್ಟು ಎಂದು ಸಂಬಳವನ್ನು ನಾವು ಕೊಡುತ್ತೇವೆ…. ಇದರಿಂದ ನಿಮಗೆ ಸಹಾಯವಾಗುತ್ತದೆ…. ಇನ್ನೊಬ್ಬಳು ಮಗಳು ಕೂಡಾ ನಿಮ್ಮ ಜೊತೆ ಇದ್ದು ಕಾಲೇಜಿಗೆ ಸೇರಬಹುದು…. ನಿಮ್ಮ ಕೊನೆಯ ಮಗಳು ಹೇಗೂ ನವೋದಯ ಶಾಲೆಯಲ್ಲಿ ಓದುತ್ತಿದ್ದಾಳೆ…. ಪಿಯುಸಿಯವರೆಗೂ ಅವಳ ಚಿಂತೆ ನಿಮಗಿರುವುದಿಲ್ಲ… ಎಲ್ಲವೂ ಸರ್ಕಾರವೇ ನೋಡಿಕೊಳ್ಳುತ್ತದೆ…. ಈಗ ಇವಳೂ ಅಲ್ಪ ಸ್ವಲ್ಪ ಸಂಪಾದನೆ ಮಾಡುವುದರಿಂದ ನಿಮಗೂ ಸಹಾಯವಾಗುತ್ತದೆ…. ಇವಳು ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ನಮ್ಮ ಬೇರೆ ಶಾಲೆಗಳಲ್ಲಿಯೂ ಕೆಲಸ ಮಾಡಬಹುದು…. ಇವಳಿಗೆ ವಾಸಕ್ಕೆ ಅನಾಥಾಶ್ರಮದಲ್ಲಿ ಬೇಕಾದ ಸೌಕರ್ಯವನ್ನು ಮಾಡಿಕೊಡಲಾಗುತ್ತದೆ….ಇವಳಿಗೆ ಸಹಾಯಕ್ಕಾಗಿ ಅಲ್ಲಿ ಒಬ್ಬ ಅಡುಗೆಯವರು ಇರುತ್ತಾರೆ…. ವಾರಕ್ಕೊಮ್ಮೆ ನಿಮ್ಮನ್ನು ಬಂದು ಭೇಟಿ ಮಾಡುತ್ತಾಳೆ…. ಇಲ್ಲಿ ನಿಮ್ಮ ಯೋಗ ಕ್ಷೇಮವನ್ನು ನೋಡಿಕೊಳ್ಳಲು ಇನ್ನೊಬ್ಬ ಮಗಳು ಇರುತ್ತಾಳೆ ಅಲ್ಲವೇ?…. ಆಲೋಚಿಸಿ ಆದಷ್ಟು ಬೇಗ ನಿಮ್ಮ ತೀರ್ಮಾನವನ್ನು ತಿಳಿಸಿ. ನಾವು ಕೂಡ ಆಗಾಗ ಅಲ್ಲಿ ಭೇಟಿ ನೀಡುತ್ತಿರುತ್ತೇವೆ…. ಇವಳು ಅನುಸರಿಸಬೇಕಾದ ಕ್ರಮಗಳ ಬಗ್ಗೆ ನಿರ್ದೇಶನಗಳನ್ನು ನೀಡುತ್ತಿರುತ್ತೇವೆ…. ನಮ್ಮ ನೆರಳಿನಲ್ಲಿ ಅವಳು ಇರುತ್ತಾಳೆ….ಹೇಗೂ ನೀವು ಶಿಕ್ಷಕಿ…. ನಿಮ್ಮ ಜೊತೆ ರಜೆಯಲ್ಲಿ ಆಗಾಗ ಇವಳು ಕೂಡ ಶಾಲೆಗೆ ಬರುತ್ತಿದ್ದಳಲ್ಲವೇ? …. ಹಾಗಾಗಿ ಮಕ್ಕಳಿಗೆ ಕಲಿಸಲು ಕಷ್ಟವಾಗದು ಎಂಬುದು ನನ್ನ ಅನಿಸಿಕೆ… ಇನ್ನು ತೀರ್ಮಾನ ನಿಮ್ಮಿಬ್ಬರದು…. ಎಂದರು ಅಮ್ಮ ನಸುನಗುತ್ತಾ.

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಸಂಗಾತಿ ಸಾವಿಲ್ಲದ ಶರಣರು ಮಾಲಿಕೆ- ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಬಸವ ಭಕ್ತ ಲಿಂಗಾಯತ ಧರ್ಮದ ಪ್ರಚಾರಕ ಚಿಂತಕ ಸಾಹಿತಿ ಹರ್ಡೇಕರ ಮಂಜಪ್ಪನವರ ಕೊಡುಗೆ ಕರ್ನಾಟಕಕ್ಕೆ ಅಪಾರವಾಗಿದೆ. ಹರ್ಡೇಕರ ಮಂಜಪ್ಪನವರು ಕರ್ನಾಟಕದ ಸಾಮಾಜಿಕ, ಪತ್ರಿಕೋದ್ಯಮ ಶೈಕ್ಷಣಿಕ, ಸಾಹಿತ್ಯ ಕ್ಷೇತ್ರಗಳನ್ನೊಳಗೊಂಡಂತೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಸಮಾಜಸೇವಕರು. ಆಮೂಲಕ ಕರ್ನಾಟಕದ ಗಾಂಧಿ ಎಂದು ಹೆಸರಾಗಿದ್ದವರು. ಕೌಟುಂಬಿಕ ಹಿನ್ನಲೆ ಮತ್ತು ಶಿಕ್ಷಣ 1886ರ ಫೆಬ್ರುವರಿ 18 ರಂದು ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಬಡ ಕುಟುಂಬ ಒಂದರಲ್ಲಿ ಜನಿಸಿದರು. ಇವರ ಅಣ್ಣನೆ ಇವರ ಪಾಲನೆಯನ್ನು ಮಾಡಿದ್ದಲ್ಲದೆ, ಇವರ ಎಲ್ಲ ಧ್ಯೇಯ ಸಾಧನೆಗಳಿಗೆ ಒತ್ತಾಸೆಯಾಗಿ ನಿಂತನು. ಮಂಜಪ್ಪನವರು ಕಲಿತಿದ್ದು ಕೇವಲ ಕನ್ನಡ, 7ನೆಯ ತರಗತಿಯವರೆಗೆ. ತಮ್ಮ ಸ್ವಂತ ಪ್ರಯತ್ನಗಳಿಂದ ಇಂಗ್ಲಿಷ್ ಕಲಿಯಲು ಪ್ರಯತ್ನಿಸಿದರೂ ಸಹ ಅದರಲ್ಲಿ ಹೆಚ್ಚಿನ ಪ್ರಗತಿಯಾಗಲಿಲ್ಲ. 1903ರಲ್ಲಿ ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಅವರು ಉದ್ಯೋಗಕ್ಕೆ ಹತ್ತಬೇಕಾಯಿತು. ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲಿಯೆ ಸಹಶಿಕ್ಷಕರಾದರು. 1905 ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ಪತ್ರಿಕಾ ಜೀವನ ಮಂಜಪ್ಪನವರು ಅಂದಿನ ರಾಷ್ಟ್ರೀಯತೆ ವಾತಾವರಣದಿಂದ ಪ್ರಭಾವಿತರಾಗಿ ತಮ್ಮ ಶಿಕ್ಷಕ ವೃತ್ತಿಗೆ ರಾಜೀನಾಮೆ ಕೊಟ್ಟರು. ಇವರ ಅಣ್ಣನೂ ಸಹ ತಮ್ಮ ಕೆಲಸವನ್ನು ಬಿಟ್ಟುಬಿಟ್ಟರು. ಇವರಿಬ್ಬರೂ ಜೊತೆಯಾಗಿ 1906ರ ಸೆಪ್ಟಂಬರದಲ್ಲಿ “ಧನುರ್ಧಾರಿ” ಎನ್ನುವ ಪತ್ರಿಕೆಯನ್ನು ದಾವಣಗೆರೆಯಿಂದ ಪ್ರಕಟಿಸತೊಡಗಿದರು. ಈ ಪತ್ರಿಕೆಯು ಲೋಕಮಾನ್ಯ ತಿಲಕರು ಮಹಾರಾಷ್ಟ್ರದಲ್ಲಿ ಹೊರಡಿಸುತ್ತಿದ್ದ ಮರಾಠಿ ಪತ್ರಿಕೆ ಕೇಸರಿಯ ಲೇಖನಗಳ ಕನ್ನಡ ಅನುವಾದವನ್ನು ಪ್ರಕಟಿಸುತ್ತಿತ್ತು. ಪತ್ರಿಕೆಯ ಉಗ್ರಧೋರಣೆಯನ್ನು ಇಷ್ಟಪಡದ ಮುದ್ರಕರು ಬಾಡಿಗೆ ಹೆಚ್ಚಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿ ಪತ್ರಿಕೆಯನ್ನು ಮತ್ತೆ ಪ್ರಾರಂಭಿಸಿದರು. ಆದರೆ 1915ರಲ್ಲಿ ಧನುರ್ಧಾರಿ ಮತ್ತೆ ನಿಂತುಹೋಯಿತು. ಸತ್ಯಾಗ್ರಹ ಆಶ್ರಮ ಕಟ್ಟಿದರು _____________________ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಪರಮ ಭಕ್ತರಾದ ಶ್ರೀ ಹರ್ಡೇಕರ ಮಂಜಪ್ಪನವರು ಅವರಿಂದ ಲಿಂಗ ದೀಕ್ಷೆಯನ್ನು ಪಡೆದರು. ಮುಂದೆ ವಿಜಯಪುರದ ಶ್ರೀ ಬಂಥನಾಳ ಸಂಗನಬಸವ ಸ್ವಾಮಿಗಳ ಆಜ್ಞೆಯಂತೆ ಅವರಿಂದ ಜಂಗಮ ದೀಕ್ಷೆ ಪಡೆದರು. ರಾಷ್ಟ್ರೀಯ ನಾಯಕರಿಂದ ಪ್ರಭಾವಿತರಾದ ಮಂಜಪ್ಪನವರು 1910ರಲ್ಲಿ ಬ್ರಹ್ಮಚರ್ಯ ವ್ರತದ ಪ್ರತಿಜ್ಞೆ ಮಾಡಿದರು. 1914ರಲ್ಲಿ ತಿಲಕರನ್ನು ಭೆಟ್ಟಿಯಾದರು. 1920 ಅಗಸ್ಟದಲ್ಲಿ ಖಾದಿವ್ರತ ಕೈಗೊಂಡರು. ಹರಿಹರ ರೇಲ್ವೆ ಸ್ಟೇಶನ್ದಿಂದ 5 ಕಿ.ಮಿ. ದೂರದಲ್ಲಿ, ತುಂಗಭದ್ರಾ ನದಿಯ ದಂಡೆಯ ಮೇಲೆ ಬಾಳಪ್ಪ ಎನ್ನುವ ತಮ್ಮ ಗೆಳೆಯರ ಭೂಮಿಯಲ್ಲಿ ಒಂದು ಆಶ್ರಮ ಕಟ್ಟಿಸಿಕೊಂಡರು. ಅದಕ್ಕೆ “ಸತ್ಯಾಗ್ರಹ ಆಶ್ರಮ” ಎಂದು ಹೆಸರಿಡಲಾಯಿತು. 1923 ರಲ್ಲಿ ಈ ಆಶ್ರಮವನ್ನು ಪ್ರವೇಶಿಸಿದರು. 1924ರಲ್ಲಿ ಸಾಬರಮತಿಗೆ ಹೋಗಿ ಗಾಂಧೀಜಿಯವರ ಜೊತೆಗೆ ಕೆಲ ದಿನ ಇದ್ದರು. 1924ರಲ್ಲಿ ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆದಾಗ ಬಸವೇಶ್ವರ ಸೇವಾದಳ ಎನ್ನುವ ಸ್ವಯಂಸೇವಕರ ಸಂಘಟನೆಯನ್ನು ರಚಿಸಿ ಅಧಿವೇಶನದ ಯಶಸ್ಸಿಗೆ ಕಾರಣರಾದರು. ಮಹಾತ್ಮಾ ಗಾಂಧಿಯವರಿಗೆ ಅಥಣಿ ಶ್ರೀ ಮುರುಗೇಂದ್ರ ಶಿವಯೋಗಿಗಳ ಆಜ್ಞೆಯಂತೆ ಶ್ರೀ ಲಕ್ಷ್ಮಣ ರಾವ್ ಬೀಡೆ ಅವರ ಸತ್ಯಾಗ್ರಹಿ ಬಸವೇಶ್ವರ ಎಂಬ ಪುಸ್ತಕವನ್ನು ಮಹಾತ್ಮಾ ಗಾಂಧಿ ಅವರ ಓದಿಗೆ ತಲುಪಿಸಿದರು. ವಿಧಾಯಕ ಯೋಜನೆಗಳು 1925 ರಲ್ಲಿ ಮಂಜಪ್ಪನವರ ತಾಯಿ ತೀರಿಕೊಂಡರು. ಆಬಳಿಕ ಮಂಜಪ್ಪನವರು ಕರ್ನಾಟಕದ ಉದ್ದಗಲಕ್ಕೂ ಹಳ್ಳಿಗಳಲ್ಲಿ ಸಂಚರಿಸಿದರು. ಗ್ರಾಮೋದ್ಧಾರದ ಅನೇಕ ವಿಧಾಯಕ ಕಾರ್ಯಕ್ರಮಗಳನ್ನು ನೆರವೇರಿಸಿದರು. “ರಾಟಿ ಸಂಘ”ಗಳನ್ನು ಸ್ಥಾಪಿಸಿದರು. ನೈತಿಕ ಪ್ರಚಾರ ಮಾಡಿದರು. 1927 ರ ಮೇ 13ರಂದು ಮಂಜಪ್ಪನವರು ಆಲಮಟ್ಟಿಯಲ್ಲಿ ವಿದ್ಯಾಲಯವನ್ನು ಸ್ಥಾಪಿಸಿದರು. ಈ ವಿದ್ಯಾಲಯದಲ್ಲಿ ಕೇವಲ ಔಪಚಾರಿಕ ಶಿಕ್ಷಣವನ್ನಲ್ಲದೆ , ಜೀವನ ಶಿಕ್ಷಣ ಎನ್ನುವ ಹೆಸರಿನಲ್ಲಿ ಕೈಕಸಬುಗಳನ್ನೂ ಸಹ ಕಲಿಸಲಾಗುತ್ತಿತ್ತು. ಗಾಂಧೀಜಿಯವರೂ ಸಹ ಆನಂತರದ ತಮ್ಮ ಶಿಕ್ಷಣಪದ್ಧತಿಯಲ್ಲಿ ಇಂತಹದೆ ನಯಿ ತಾಲೀಮ ಎನ್ನುವ ವಿಧಾನವನ್ನು ಅಳವಡಿಸಿಕೊಂಡರು. 1930 ರಲ್ಲಿ ಮಂಜಪ್ಪನವರು “ಉದ್ಯೋಗ” ಎನ್ನುವ ಮಾಸಪತ್ರಿಕೆಯನ್ನು ಹಾಗು ಮಕ್ಕಳ ಸಾಹಿತ್ಯಮಾಲೆಯನ್ನು ಪ್ರಾರಂಭಿಸಿದರು. 1931ರಲ್ಲಿ ಶರಣಸಂದೇಶ ಎನ್ನುವ ಮಾಸಪತ್ರಿಕೆಯನ್ನು ಹೊರಡಿಸತೊಡಗಿದರು. 1924 ರಲ್ಲಿ ಮತ್ತು 1934 ರಾಲಿ ಗಾಂಧೀಜಿ ಕರ್ನಾಟಕಕ್ಕೆ ಬಂದಾಗ ಮಂಜಪ್ಪನವರು ಅವರ ಜೊತೆಗಿನ ಸುತ್ತಾಟದಲ್ಲಿ ಪಾಲ್ಗೊಂಡರು. 1946ರಲ್ಲಿ ಮಂಜಪ್ಪನವರು ಪ್ರಗತಿ ಗ್ರಂಥಮಾಲೆಯನ್ನು ಪ್ರಾರಂಭಿಸಿದರು. ನಿಧನ 1947 ಜನೆವರಿ 3 ರಂದು ಹರ್ಡೇಕರ ಮಂಜಪ್ಪನವರು ನಿಧನರಾದರು. ಸಾಹಿತ್ಯ ಹರ್ಡೀಕರ ಮಂಜಪ್ಪನವರು ಅನೇಕ ಲೇಖನಗಳನ್ನು ಹಾಗು ಪುಸ್ತಕಗಳನ್ನು ರಚಿಸಿದ್ದಾರೆ. ಅವರ ಕೃತಿಗಳು ಇಂತಿವೆ: ಸ್ವಕರ್ತವ್ಯ ಸಿದ್ಧಾಂತ ಬುದ್ಧಿಯ ಮಾತು ವಾರದ ಮಲ್ಲಪ್ಪನವರ ಚರಿತ್ರೆ ಸ್ತ್ರೀನೀತಿ ಸಂಗ್ರಹ ಆರೋಗ್ಯ ಜೀವನ ಬುದ್ಧ ಚರಿತ್ರೆ ಗಾಂಧೀ ಚರಿತ್ರೆ ರಾಮತೀರ್ಥರ ಉಪನ್ಯಾಸ ಭಾರತೀಯರ ದೇಶಭಕ್ತಿ ಬಸವ ಚರಿತ್ರೆ ಆಧುನಿಕ ಜರ್ಮನಿ ವೀರಶೈವ ಸಮಾಜ ಸುಧಾರಣೆ ಕೇರ ಹಾರ್ಡಿ ಖಾದಿ ಬ್ರಹ್ಮಚರ್ಯ ಅಹಿಂಸೆ ಸತ್ಯಾಗ್ರಹ ಧರ್ಮ ಬಸವ ಬೋಧಾಮೃತ ಸುಬೋಧಸಾರ ಎಚ್ಚತ್ತ ಹಿಂದುಸ್ಥಾನ “ಕಳೆದ ನನ್ನ 30 ವರ್ಷಗಳ ಕಾಣಿಕೆ” 1936 ರಲ್ಲಿ ಪ್ರಕಟವಾದ ಇದು ಹರ್ಡೀಕರ ಮಂಜಪ್ಪನವರ ಆತ್ಮ ಚರಿತ್ರೆಯಾಗಿದೆ ಮತ್ತು ಕನ್ನಡದ ಮೊದಲ ಆತ್ಮ ಚರಿತ್ರೆ ಎಂದು ದಾಖಲೆಯಾಗಿದೆ. ಕರ್ನಾಟಕ ನಾಡು ನುಡಿ ಸಂಸ್ಕೃತಿಗಾಗಿ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳ ಪ್ರಸಾರಕ್ಕಾಗಿ ಬಸವ ಜಯಂತಿಯನ್ನು ಮೊಟ್ಟ ಮೊದಲು ಆರಂಭಿಸಿದ ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಶ್ರೀ ಹರ್ಡೇಕರ್ ಮಂಜಪ್ಪನವರು ನಾಡು ದೇಶ ಕಂಡ ಅಪರೂಪದ ಶಿವಯೋಗ ಸಾಧಕರು. ಇಂತಹ ದಿವ್ಯ ಚೇತನಕ್ಕೆ ನೂರು ನೂರು ನಮನಗಳು. _________________________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಸಾವಿಲ್ಲದ ಶರಣರು ಮಾಲಿಕೆ-ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕರ್ನಾಟಕ ಗಾಂಧಿ ಶ್ರೀ ಹರ್ಡೇಕರ್ ಮಂಜಪ್ಪನವರು, ಡಾ ಶಶಿಕಾಂತ್ ಪಟ್ಟಣ ರಾಮದುರ್ಗ Read Post »

You cannot copy content of this page

Scroll to Top