ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಇತರೆ, ಶಿಕ್ಷಣ

“ಕೆಲವೊಂದು ಸಲಹೆಗಳು:ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್

ಶಿಕ್ಷಣ ಸಂಗಾತಿ ವಾಣಿ ಶಿವಕುಮಾರ್ “ಕೆಲವೊಂದು ಸಲಹೆಗಳು: ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ”  pic̲:chat gpt/gemini ಇನ್ನೇನು ಕೆಲವೇ ದಿನಗಳಲ್ಲಿ ೧೦ ನೇ ತರಗತಿಯ ಪರೀಕ್ಷೆ ಶುರುವಾಗಲಿದೆ. ನಿಮ್ಮ ನಿಮ್ಮ ಶಾಲೆಗಳಲ್ಲಿ ಉತ್ತಮವಾದ ಸಿದ್ಧತೆ ಮಾಡಿಸಿರುವುದರ ಜೊತೆಗೆ ಆತ್ಮವಿಶ್ವಾಸವನ್ನೂ ಸಹ ಬಲಪಡಿಸಿರುತ್ತಾರೆ  ಹಲವಾರು ಮಾದರಿ ಪ್ರಶ್ನೆ ಪತ್ರಿಕೆಗೆ ಉತ್ತರ ನೀಡಿ ನಿಮ್ಮ ತಯಾರಿಕೆಗೆ ಮತ್ತಷ್ಟು ಪುಷ್ಟಿ ನೀಡಿರುತ್ತಾರೆ. ಊಟ, ನಿದ್ದೆ ಬಿಟ್ಟು ಓದಿ ಅಂತ ಯಾರೂ ಸಹ ಎಲ್ಲೂ ಉಲ್ಲೇಖಿಸಿಲ್ಲ ಓದಿನ ಜೊತೆ ನಿಮ್ಮ ಆರೋಗ್ಯದ ಕಡೆಗೂ ಗಮನವಿರಲಿ.  ಯಾರ ಅಂಕದ ಜೊತೆಗೂ ನಿಮ್ಮನ್ನು ನೀವು ಹೋಲಿಸಿಕೊಳ್ಳದಿರಿ ಪರೀಕ್ಷೆಯಿಂದ ಹೊರಬಂದ ಬಳಿಕ ಅನಗತ್ಯ ಚರ್ಚೆ ಬೇಡ, ಇದರಿಂದ ನೀವು ಗೊಂದಲಕ್ಕೊಳಗಾಗುವ ಸಾಧ್ಯತೆಯೇ ಹೆಚ್ಚು.  ಪೋಷಕರೇ ಮಕ್ಕಳ ಮೇಲೆ ಒತ್ತಡ ಹೇರಬೇಡಿ ಮೊದಲ ದಿನದಿಂದ ಅವರ ಓದು,ಬರಹ ಚಲನ ವಲನಗಳನ್ನು ಗಮನಿಸುತ್ತಾ ಬಂದಿರ್ತೀರ ಶೇಕಡಾ ೯೦ ೯೫ ಬರಲೇಬೇಕು ಅಂತ ತಾಕಿತು ಮಾಡಬೇಡಿ  ಎಷ್ಟೇ ಅಂಕ ಬಂದರೂ ಅವರು ನಮಗೆ ಮಕ್ಕಳೇ. ಎಲ್ಲಾ ಮಕ್ಕಳಲ್ಲಿಯೂ ವಿಶೇಷವಾದ ಕಲೆ ಇದ್ದೇ ಇರುತ್ತದೆ ಅದನ್ನು ಗುರುತಿಸಿ,ಪ್ರೋತ್ಸಾಹಿಸಿ, ಉತ್ತೇಜಿಸಿ. ಒಂದು ಹುದ್ದೆಯನ್ನು ಅಲಂಕರಿಸುವುದಕ್ಕೋಸ್ಕರ ಅಂಕಗಳು ಬೇಕು ಅಂಕಗಳು ಹೆಚ್ಚು ಕಡಿಮೆಯಾದರೂ ನಮ್ಮ ನಡವಳಿಕೆ, ಸಂಸ್ಕಾರ,ನಯ,ವಿನಯ ಅತಿ ಮುಖ್ಯವಾಗಿರುತ್ತದೆ  ಒಂದು ವೇಳೆ ಅಂಕಗಳು ಕಡಿಮೆ ಬಂದರೆ ಅಥವಾ ನಪಾಸ್ ಆದರೆ ದಯವಿಟ್ಟು ಕೆಟ್ಟ ಕೆಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವ ಕಠಿಣ ಸಾಹಸಕ್ಕೆ ಕೈ ಹಾಕಬೇಡಿ. ಅರಳ ಬೇಕಿರುವ ಪ್ರತಿಭೆಗಳು ನೀವು ಅರಳುವ ಮುನ್ನವೇ ಬಾಡಿ ಹೋಗದಿರಿ  ಪರೀಕ್ಷೆ ಬರೆಯುತ್ತಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಈ ಮೂಲಕ ಆಲ್ ದ ಬೆಸ್ಟ್ ಹೇಳುವುದಕ್ಕೆ ಬಯಸುತ್ತೇನೆ. ಕಠಿಣ ಪರಿಶ್ರಮ,ಪೋಷಕರ ಆಶೀರ್ವಾದ,ದೇವರ ಅನುಗ್ರಹ ಸದಾ ಇರುತ್ತದೆ. ಯಶಸ್ಸು ನಿಮ್ಮದಾಗಲೆಂದು ಹಾರೈಸುತ್ತೇನೆ. ವಾಣಿ ಶಿವಕುಮಾರ್

“ಕೆಲವೊಂದು ಸಲಹೆಗಳು:ಎಸ್‌ ಎಸ್‌ ಎಲ್‌ ಸಿ ವಿದ್ಯಾರ್ಥಿಗಳಿಗೆ” ವಾಣಿ ಶಿವಕುಮಾರ್ Read Post »

ಇತರೆ, ಪ್ರವಾಸ ಕಥನ

“ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಡಾ.ಸುಮತಿ ಪಿ

ಪ್ರವಾಸ ಸಂಗಾತಿ ಡಾ.ಸುಮತಿ ಪಿ “ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಪ್ರವಾಸವೆಂದರೆ ತಮ್ಮ ವಾಸಸ್ಥಾನದಿಂದ ಅಥವಾ ದೈನಂದಿನ ಚಟುವಟಿಕೆಯ ಸ್ಥಾನದಿಂದ ಬೇರೆ ಊರಿಗೆ ಅಥವಾ ಬೇರೆ ಸ್ಥಳಗಳಿಗೆ ಭೇಟಿ ನೀಡುವುದು. ದೈನಂದಿನ ಚಟುವಟಿಕೆಗಳ ಏಕತಾನತೆಯಿಂದ ಮನಸ್ಸನ್ನು ಪುನರ್ಚೇತನಗೊಳಿಸಲು ಪ್ರವಾಸದ ಯೋಜನೆಯನ್ನು ಹಾಕಿಕೊಂಡು ಪ್ರವಾಸ ಹೋಗುತ್ತಾರೆ. ಜೊತೆಗೆ ಅಧ್ಯಯನ ಪ್ರವಾಸ ಕೂಡ ಮಾಡುತ್ತಾರೆ. ಪ್ರವಾಸದಿಂದ ಹೊಸ ಅನುಭವ ಆಗುವುದರ ಜೊತೆಗೆ ಮನರಂಜನೆ ಕೂಡ ಸಿಗುತ್ತದೆ. ಪ್ರವಾಸದ ಸಮಯದಲ್ಲಿ ಉಂಟಾದ ಹೊಸ ಅನುಭವದಿಂದ ವ್ಯಕ್ತಿಯ ದೈನಂದಿನ ಬದುಕಿನಲ್ಲಿ  ಕೆಲವೊಂದು ಬದಲಾವಣೆಗಳು ಆಗಲು ಸಾಧ್ಯವಿದೆ. “ದೇಶ ಸುತ್ತು ಕೋಶ ಓದು”ಎಂಬ ಗಾದೆ ಮಾತಿದೆ. ಅದರಲ್ಲೂ ಪುಸ್ತಕದ ಜ್ಞಾನಕ್ಕಿಂತಲೂ ಪ್ರತ್ಯಕ್ಷ ಅನುಭವದ ಜ್ಞಾನ ಮನುಷ್ಯನ ಬದುಕಿನ ಮೇಲೆ ಹೆಚ್ಚಿನ ಪರಿಣಾಮ ಬೀರಬಲ್ಲದು.ಬೇರೆ ಊರುಗಳಿಗೆ ಪ್ರವಾಸಕ್ಕೆ ಹೋದಾಗ ಅಲ್ಲಿಯ ದೇವಸ್ಥಾನಗಳು, ಜನಜೀವನ,ಕಲೆ, ವಾಸ್ತುಶಿಲ್ಪ, ಜನರ ಸಂಸ್ಕೃತಿ ಇವೆಲ್ಲವನ್ನು ಗಮನಿಸುವಾಗ ನಮ್ಮ ದೇಶದ ಸಂಸ್ಕೃತಿಯ ಅರಿವಾಗುವುದರ ಜೊತೆಗೆ ಅಲ್ಲಿ ಏನು ಹೊಸತಿದೆ ಎಂಬುದು ಮನಸ್ಸಿಗೆ ಮುಟ್ಟುತ್ತದೆ.ಪ್ರವಾಸದ ಸಮಯದಲ್ಲಿ ಅದ್ಭುತವಾದಂತಹ ಕಟ್ಟಡಗಳು,ಪ್ರಕೃತಿ ಸೌಂದರ್ಯ, ಉದ್ಯಾನವನಗಳು,ಎತ್ತರದಿಂದ ಧುಮುಕುವ ಜಲಪಾತಗಳು ಇವುಗಳನ್ನೆಲ್ಲ ನೋಡುವಾಗ ಮನಸ್ಸಿಗೆ ಖುಷಿಯಾಗಿ ಎಲ್ಲವನ್ನು ಮರೆತು, ಸಂತೋಷದಿಂದ ಇರಲು ಸಾಧ್ಯವಾಗುತ್ತದೆ ಅದು ಮಾನಸಿಕ ನೆಮ್ಮದಿಯನ್ನು ನೀಡುತ್ತಾ ನಮ್ಮ ಆರೋಗ್ಯದ ಮೇಲು ಪ್ರಭಾವ ಬೀರುತ್ತದೆ ಈ ಕಾರಣದಿಂದಲೇ ಇರಬಹುದು ವರ್ಷವಿಡಿ ದುಡಿಯುವ ನೌಕರರು ಕೆಲವೊಂದು ದಿನಗಳ ಬಿಡುವು ಮಾಡಿಕೊಂಡು ಪ್ರವಾಸ ಹೋಗುತ್ತಾರೆ. ಪ್ರವಾಸ ಹೇಗಿರಬೇಕು ಪ್ರವಾಸಕ್ಕೆ ನಿರ್ದಿಷ್ಟವಾದ ಉದ್ದೇಶವಿರಬೇಕು.ಅದು ಮನರಂಜನೆಗೆ ಅಥವಾ ವಿಹಾರಕ್ಕಾಗಿ ಮಾಡುವ ಪ್ರವಾಸ ವಿರಬಹುದು, ಅಥವಾ ಶಿಕ್ಷಣದ ಉದ್ದೇಶದಿಂದ ಮಾಡುವ ಪ್ರವಾಸವಿರಬಹುದು ಅಥವಾ ಸಾಂಸ್ಕೃತಿಕ ಸ್ಥಿತಿಗತಿ ಅಧ್ಯಯನದ ಬಗ್ಗೆ ಪ್ರವಾಸ ಇರಬಹುದು. ಹೀಗೆ ಒಂದು ಉದ್ದೇಶವಿಟ್ಟುಕ್ಕೊಂಡು  ಮಾಡುವುದೇ ಪ್ರವಾಸ. ಪ್ರವಾಸ ಮಾಡುವ ಮೊದಲು ಅದರ ಉದ್ದೇಶಕ್ಕೆ ಅನುಗುಣವಾಗಿ ಯೋಚನೆ ಮಾಡಿ,ಯೋಜನೆ ಹಾಕಿಕೊಂಡು ಮುನ್ನಡೆದರೆ ಎಲ್ಲವೂ ಹಾಕಿಕೊಂಡ ಯೋಚನೆಯಂತೆ ನಡೆದರೆ ಅಂತಹ ಪ್ರವಾಸ ಒಳ್ಳೆಯ ಪ್ರತಿಫಲವನ್ನು ನೀಡಬಲ್ಲದು. ಪ್ರವಾಸ ಯಾವುದೇ ಇರಲಿ ಅದರ ಉದ್ದೇಶ ಈಡೇರಬೇಕು. ಪ್ರವಾಸದಿಂದ ಉಂಟಾಗುವ ಹೊಸ ಅನುಭವ ಪ್ರವಾಸವು ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ, ಒತ್ತಡವನ್ನು ಕಡಿಮೆ ಮಾಡಿ ಮನಸ್ಸಿಗೆ ಶಾಂತಿ ನೀಡುತ್ತದೆ. ಇದು ಹೊಸ ಸಂಸ್ಕೃತಿಗಳು, ಭಾಷೆಗಳು ಮತ್ತು ಸ್ಥಳಗಳನ್ನು ಪರಿಚಯಿಸುವುದರಿಂದ ಸೃಜನಶೀಲತೆ ಹಾಗೂ ಜ್ಞಾನ ವೃದ್ಧಿಸುತ್ತದೆ. ಜೊತೆಗೆ, ಆತ್ಮವಿಶ್ವಾಸ ಹೆಚ್ಚಿಸಿ, ಜೀವನಪೂರ್ತಿ ನೆನಪಿನಲ್ಲಿ ಉಳಿಯುವ ಅನುಭವಗಳನ್ನು ಒದಗಿಸುತ್ತದೆ.ಮನುಷ್ಯನ ಬದುಕಿನಲ್ಲಿ ಪ್ರತಿಯೊಂದು ದಿನವು ಹೊಸ ದಿನವೆಂಬಂತೆ ಕೈಗೊಳ್ಳುವ ಯಾವುದೇ ರೀತಿಯ ಪ್ರವಾಸದಿಂದ ಹೊಸತಾದ ಅನುಭವ ಆಗಿಯೇ ಆಗುತ್ತದೆ ಅಂತಹ ಹೊಸ ಅನುಭವ ಬದುಕಿನಲ್ಲಿ ರೋಚಕತೆಯನ್ನು ಉಳಿಸಿಕೊಂಡು ಹೊಸ ಬದಲಾವಣೆಯನ್ನು ತರಲು ಸಾಧ್ಯವಿದೆ ಉದಾಹರಣೆಗೆ ಯಾವುದೋ ಒಂದು ಹೊಸ ಸ್ಥಳಕ್ಕೆ ಭೇಟಿ ನೀಡಿದಾಗ ಅಲ್ಲಿಯ ಜನರ ಜೀವನ ಕ್ರಮ ನಮಗೆ ಇಷ್ಟವಾಗಬಹುದು ಆಗ ಆ ಜೀವನ ಕ್ರಮವನ್ನು ನಮ್ಮ ಊರಲ್ಲಿ ಬಂದು ನಾವು ಅನುಸರಿಸಿದರೆ ನಮ್ಮಲ್ಲಿ ಬದಲಾವಣೆಯಾಗಲು ಸಾಧ್ಯ. ಇದೇ ರೀತಿಯಲ್ಲಿ ನಾವು ಪ್ರವಾಸಕ್ಕೆ ಹೋದಾಗ ಕಂಡುಕೊಂಡಂತಹ ವಿಶೇಷತೆಗಳು ಅಲ್ಲಿನ ಜನರ ಸಭ್ಯತೆ ಇರಬಹುದು ಅಥವಾ ಆಹಾರ,ಆಚಾರ ವಿಚಾರ ಇರಬಹುದು ವ್ಯವಹಾರ ಇರಬಹುದು ಜೀವನ ಕ್ರಮ ಇರಬಹುದು ಇವುಗಳೆಲ್ಲ ಪ್ರವಾಸಿಗರ ಮನಸಲ್ಲಿ ಅಚ್ಚಳಿಯದೆ ಉಳಿಯುವಂತಹ ಕೆಲವೊಂದು ಅಂಶಗಳು ಪ್ರವಾಸಕ್ಕೆ ಹೋದಾಗ ಅಲ್ಲಿಯ ಜನರ ಜೀವನ ಕ್ರಮ ಪದ್ಧತಿಗಳನ್ನು ನೋಡುವಾಗ ನಮ್ಮ ಜೀವನ ಪ್ರಕ್ರಮ ಪದ್ಧತಿಯ ನೆನಪು ನಮಗಾಗುತ್ತದೆ ಮನಸ್ಸು ತನ್ನಂತಾನೆ ಸಾಮ್ಯತೆಯನ್ನು ಚಿಂತನೆ ಮಾಡುತ್ತದೆ ಯಾವುದು ಒಳ್ಳೇದು ಎಂಬುದನ್ನು ಆಲೋಚಿಸುತ್ತದೆ ಮನಸ್ಸಿಗೆ ಖುಷಿಯಾದರೆ ಅದನ್ನು ಅಳವಡಿಸುವ ಕೆಲಸವು ನಡೆಯುತ್ತದೆಒಟ್ಟಿನಲ್ಲಿ ಪ್ರವಾಸದಿಂದ ಹೊಸ ಅನುಭವ ಮಾತ್ರ ಸಿಗುತ್ತದೆ ಎನ್ನಲಾಗದು. ಪ್ರವಾಸದಿಂದ ಅನೇಕ ರೀತಿಯ ಪ್ರಯೋಜನಗಳು ಆಗುತ್ತವೆ ಎಲ್ಲಕ್ಕಿಂತಲೂ ಮಿಗಿಲಾಗಿ ನಮ್ಮಲ್ಲಿ ನಾವು ಬದಲಾವಣೆಯನ್ನು ತರುವುದಕ್ಕೆ ಸಾಧ್ಯವಾಗುತ್ತದೆ. ಕೂಪ ಮಂಡೂಕದಂತಿರುವ ಮನುಷ್ಯರು ಪ್ರವಾಸಕ್ಕೆ ಹೋಗಿ ಬಂದ ನಂತರ ಮನಸ್ಸು ವಿಶಾಲವಾಗುತ್ತದೆ ಬದಲಾವಣೆಯನ್ನು ಅವರು ಸ್ವೀಕರಿಸುತ್ತಾರೆ. ಹೊಸ ಪರಿಸರ ಮತ್ತು ಸಂಸ್ಕೃತಿಯು ಮೆದುಳನ್ನು ಸಕ್ರಿಯಗೊಳಿಸುತ್ತದೆ.ದೈನಂದಿನ ಜಂಜಾಟದಿಂದ ವಿರಾಮ ನೀಡಿ, ಮನಸ್ಸನ್ನು ಶಾಂತಗೊಳಿಸುತ್ತದೆ ಹೊಸ ಚೈತನ್ಯ ನೀಡುತ್ತದೆ.ವಿಭಿನ್ನ ಆಹಾರ ಪದ್ಧತಿ, ಸಂಪ್ರದಾಯ ಮತ್ತು ಜೀವನಶೈಲಿಯನ್ನು ಅರ್ಥಮಾಡಿಕೊಳ್ಳುವ ಅವಕಾಶ ಸಿಗುತ್ತದೆ.ಒಟ್ಟಾರೆಯಾಗಿ, ಪ್ರವಾಸವು ಬದುಕಿನ ಬದಲಾವಣೆಗೆ,ವ್ಯಕ್ತಿತ್ವ ವಿಕಸನಕ್ಕೆ ಮತ್ತು ಬದುಕಿನ ದೃಷ್ಟಿಕೋನವನ್ನು ವಿಸ್ತರಿಸಲು ಸಹಕಾರಿಯಾಗಿದೆ. ಡಾ.ಸುಮತಿ ಪಿ

“ಪ್ರವಾಸದ ಹೊಸ ಅನುಭವದಿಂದ ಬದಲಾವಣೆ” ಡಾ.ಸುಮತಿ ಪಿ Read Post »

ಆರೋಗ್ಯ, ಇತರೆ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ

ಆರೋಗ್ಯ ಸಂಗಾತಿ ಸಂಗಮೇಶ್ ಜವಾದಿ “ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ”  ಬೇಸಿಗೆಯು ವರ್ಷದ ಅದ್ಭುತ ಸಮಯವಾಗಿದ್ದು, ಬೆಚ್ಚಗಿನ ಹವಾಮಾನ, ದೀರ್ಘ ಹಗಲು ಸಮಯ ಮತ್ತು ಹೊರಾಂಗಣದಲ್ಲಿ ಆನಂದಿಸಲು ಸಾಕಷ್ಟು ಅವಕಾಶಗಳನ್ನು ತರುತ್ತದೆ. ಆದಾಗ್ಯೂ, ಸೂರ್ಯ, ಶಾಖ ಮತ್ತು ಆರ್ದ್ರತೆಯೊಂದಿಗೆ ಸಂಭಾವ್ಯ ಆರೋಗ್ಯ ಅಪಾಯಗಳು ಬರುತ್ತವೆ, ಅವುಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಅವು ಹಾನಿಕಾರಕವಾಗಬಹುದು. ಬೇಸಿಗೆಗೆ ನಾವು ಸಜ್ಜಾಗುತ್ತಿರುವಾಗ, ನಮ್ಮ ಬಗ್ಗೆ ಕಾಳಜಿ ವಹಿಸುವುದು ಪ್ರಮುಖ ಆದ್ಯತೆಯಾಗಿರಬೇಕು ಎಂಬುದನ್ನು ನೆನಪಿಟ್ಟುಕೊಳ್ಳುವುದು ಅಷ್ಟೇ ಮುಖ್ಯ.ಸೂರ್ಯನು ಸುಡುತ್ತಾ ಬಹುಮುಖಿ ದೇಹದ ತೊಂದರೆಗಳನ್ನು ಎದುರಿಸುತ್ತಿರುವಾಗ, ಬೇಸಿಗೆಯ ತಿಂಗಳುಗಳಲ್ಲಿ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಕೆಲವು ಸಲಹೆಗಳು ನೀಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ರಾಜ್ಯಾದ್ಯಂತ ವಿಶೇಷವಾಗಿ ಕಲ್ಯಾಣ ಕರ್ನಾಟಕ ಭಾಗ ಅದರಲ್ಲಿಯೂ ಬೀದರ ಮತ್ತು ಕಲಬುರ್ಗಿಜಿಲ್ಲೆಯಾದ್ಯಂತ ಪ್ರಸ್ತುತ ತಿಂಗಳಿನಿಂದ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕರು, ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ತಮ್ಮ ಆರೋಗ್ಯದ ರಕ್ಷಣೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಬಹಳಷ್ಟು ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಸಂದರ್ಭದಲ್ಲಿ ಸಾರ್ವಜನಿಕರು ಕೈಗೊಳ್ಳಬೇಕಾದ ಕ್ರಮಗಳ ಕುರಿತು. ಸರ್ಕಾರದಿಂದ ಸಾರ್ವಜನಿಕರಿಗೆ ಅನೇಕ ಸಲಹೆಗಳನ್ನು ನೀಡಿರುತ್ತಾರೆ. ಅವುಗಳನ್ನು ಖಂಡಿತವಾಗಿಯೂ ಪಾಲಿಸಬೇಕು. ಬೇಸಿಗೆ ಸಮಯದಲ್ಲಿ ಹೆಚ್ಚು ಹೆಚ್ಚು ನೀರನ್ನು ಕುಡಿಯಬೇಕು. ಮಜ್ಜಿಗೆ ಅಥವಾ ಎಳನೀರು, ಹಣ್ಣಿನ ರಸವನ್ನು ಹೆಚ್ಚಾಗಿ ಸೇವಿಸಬೇಕು. ನೀರಿನ ಅಂಶ ಹೆಚ್ಚಾಗಿರುವ ತರಕಾರಿಗಳು, ಹಣ್ಣುಗಳನ್ನು ಸೇವಿಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ. ಸಡಿಲವಾದ ತೆಳು ಬಣ್ಣದ ಹತ್ತಿಯ ಬಟ್ಟೆಯನ್ನು ಕಡ್ಡಾಯವಾಗಿ ಧರಿಸಬೇಕು ಹಾಗೂ ಗಾಳಿಯಾಡುವ ಪಾದರಕ್ಷೆ ಧರಿಸುವುದು ಅಷ್ಟೇ ಸುರಕ್ಷಿತ. ಹೊರಗಡೆ ತೆರಳುವ ವೇಳೆ ತಂಪು ಕನ್ನಡಕ, ಛತ್ರಿ, ಟವೆಲ್ ಅಥವಾ ಬಿಸಿಲಿನಿಂದ ಕಾಪಾಡಿಕೊಳ್ಳುವ ಸಾಮಾನ್ಯ ಕ್ರಮಗಳನ್ನು ಪಾಲಿಸಬೇಕು. ರೇಡಿಯೊ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬಿಸಿಯಾದ ಗಾಳಿ ಅಥವಾ ಶಾಖ ತರಂಗದ ಬಗ್ಗೆ ನೀಡುವ ಮಾಹಿತಿ ಅನುಸಾರ ದೈನಂದಿನ ಚಟುವಟಿಕೆಗಳನ್ನು ಚಾಚೂ ತಪ್ಪದೆ ಪಾಲಿಸಬೇಕು.ಅಲ್ಲದೆ  ವಿಶೇಷವಾಗಿ ಹೇಳಬೇಕೆಂದರೆ ‎ಬಿಸಿಲಿನಲ್ಲಿ  ಕಾರ್ಯನಿರ್ವಹಿಸುವವರು (ಜಮೀನು ಕೆಲಸ, ರಸ್ತೆ ಕಾಮಗಾರಿ ಮುಂತಾದವು) ಆದಷ್ಟು ಬೆಳಗ್ಗೆ 11 ಗಂಟೆಯ ಒಳಗೆ ಮತ್ತು ಸಂಜೆ 4 ಗಂಟೆ ನಂತರ ಕೈಗೊಳ್ಳುವುದು ಉತ್ತಮ. ಈ ಅವಧಿಯಲ್ಲಿ ಶ್ರಮದಾಯಕ ಕೆಲಸಗಳಿಂದ ವಿಶ್ರಾಂತಿ ಪಡೆಯಬೇಕು. ಬಿಸಿಲಿನಲ್ಲಿ ನಡೆಯುವಾಗ ಕಡ್ಡಾಯವಾಗಿ ಚಪ್ಪಲಿ ಧರಿಸಿ. ಟೀ ಅಥವಾ ಕಾಫಿ, ಹೆಚ್ಚು ಸಕ್ಕರೆ ಅಂಶವನ್ನು ಹೊಂದಿರುವ ಕಾರ್ಬೋನೇಟೆಡ್ ಪಾನೀಯ ಹಾಗೂ ಮದ್ಯಪಾನದಿಂದ ದೂರವಿರುವುದು ಆದಷ್ಟು ಒಳ್ಳೆಯದು. ವ್ಯಕ್ತಿ ತೊದಲು ಮಾತು ಅಥವಾ ಅರ್ಥ ರಹಿತವಾಗಿ ಬಡಬಡಿಸಿದಲ್ಲಿ ಕೂಡಲೇ ನೆರಳಿನ ಪ್ರದೇಶಕ್ಕೆ ಸ್ಥಳಾಂತರಿಸಿ. ಕೆಳಗೆ ಮಲಗಿಸಿ ಕಾಲುಗಳನ್ನು ಮೇಲಕ್ಕೆ ಎತ್ತಿ ವಿಶ್ರಾಂತಿ ಪಡೆಯುವುದು ಸೂಕ್ತ ಮತ್ತು ಅವಶ್ಯಕವಾಗಿದೆ.ಇನ್ನು ಆಹಾರವನ್ನು ತೆಗೆದುಕೊಳ್ಳುವಾಗ, ಯಾವಾಗಲೂ  ಕೈಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಮೂಲಭೂತ ನೈರ್ಮಲ್ಯ ಮುನ್ನೆಚ್ಚರಿಕೆಗಳನ್ನು ಗಮನಿಸಿ. ಕಲುಷಿತ ಆಹಾರ ಮತ್ತು ನೀರಿನಿಂದ ಸೋಂಕು ತಗುಲುವುದನ್ನು ತಪ್ಪುತ್ತದೆ.ಪ್ರಯಾಣಿಸುವಾಗ ಅಥವಾ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಾಗ ಸೂರ್ಯನ ಶಾಖದಿಂದ ಕಡ್ಡಾಯವಾಗಿ ರಕ್ಷಿಸಿಕೊಳ್ಳಲು ಕ್ಯಾಪ್ ಮತ್ತು ಸನ್ ಗ್ಲಾಸ್ ಧರಿಸಿ. ಟೋಪಿ ಮತ್ತು ಸನ್ ಗ್ಲಾಸ್ ಧರಿಸುವುದರಿಂದ ಸೂಕ್ಷ್ಮ ಪ್ರದೇಶಗಳು UV ಕಿರಣಗಳಿಗೆ ಹಾನಿಯಾಗದಂತೆ ರಕ್ಷಿಸುತ್ತದೆ.ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ :ಏನು ತಿನ್ನುತ್ತೀರಿ ಮತ್ತು  ದೇಹವನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಬೇಸಿಗೆಯು ಮಾನವರ ಶಕ್ತಿಯ ಮಟ್ಟಗಳು, ಚರ್ಮ, ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಒಂದು ವೇಳೆಬಿಸಿಗಾಳಿ ಮತ್ತು ಅತಿಯಾದ ತಾಪಮಾನದಿಂದ ಆರೋಗ್ಯ ಸಮಸ್ಯೆಗಳು ಉಂಟಾದಲ್ಲಿ ಸಮೀಪದ ಆರೋಗ್ಯ ಕೇಂದ್ರವನ್ನು ಸಂಪರ್ಕಿಸಿ ಅಥವಾ 108/102 ಕ್ಕೆ ಕರೆ ಮಾಡುವುದು ಸೂಕ್ತ.ಕೊನೆಯದಾಗಿ ಹೇಳುವುದಾದರೆ : ಬೇಸಿಗೆಯಲ್ಲಿ ಆರೋಗ್ಯವಾಗಿರಲು, ದಿನಕ್ಕೆ 4-5 ಲೀಟರ್ ನೀರು ಕುಡಿಯುವುದು, ಕಲ್ಲಂಗಡಿ, ಸೌತೆಕಾಯಿಯಂತಹ ನೀರಿನಂಶವಿರುವ ಆಹಾರ ಸೇವಿಸುವುದು, ಮತ್ತು ಮಧ್ಯಾಹ್ನ 11 ರಿಂದ 4 ರವರೆಗೆ ಬಿಸಿಲಿನಲ್ಲಿ ಓಡಾಡುವುದನ್ನು ಕಡಿಮೆ ಮಾಡುವುದು ಮುಖ್ಯ. ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ, ಸನ್‌ಸ್ಕ್ರೀನ್ ಬಳಸಿ ಮತ್ತು ತಾಜಾ ಆಹಾರ ಸೇವಿಸುವ ಮೂಲಕ ನಿರ್ಜಲೀಕರಣ ಹಾಗೂ ಶಾಖದ ಹೊಡೆತವನ್ನು ತಪ್ಪಿಸಬಹುದು.ವಿಶೇಷವಾಗಿ ದಿನವಿಡೀ ಸಾಕಷ್ಟು ನೀರು, ಎಳನೀರು, ನಿಂಬೆ ಪಾನಕ, ಮತ್ತು ಮಜ್ಜಿಗೆ ಕುಡಿಯುವುದು.ಕಲ್ಲಂಗಡಿ, ಸೌತೆಕಾಯಿ, ಕಿತ್ತಳೆ, ದ್ರಾಕ್ಷಿ, ಮತ್ತು ಮಾವಿನಹಣ್ಣಿನಂತಹ ತಾಜಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚಾಗಿ ಸೇವನೆ ಮಾಡುವುದು ಆರೋಗ್ಯ ಹಿತದೃಷ್ಟಿಯಿಂದ ಅತ್ಯುತ್ತಮ ಕ್ರಮವಾಗಿದೆ.ಅಲ್ಲದೆ ಹಸಿರು ತರಕಾರಿಗಳು, ಕಲರ್ ಫುಲ್ ಹಣ್ಣುಗಳು ಮತ್ತು ಗಿಡಮೂಲಿಕೆಗಳನ್ನು ಸೇವಿಸುವುದು ಒಳ್ಳೆಯದು. ಇವು ದೇಹವು ಅದರ ಹೈಡ್ರೇಶನ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಚರ್ಮವನ್ನು ಸಂಪೂರ್ಣವಾಗಿ ರಕ್ಷಿಸುತ್ತದೆ.ಜೊತೆಗೆ ನಿಂಬೆ ನೀರು ಸಹ  ದೇಹವನ್ನು ತಂಪಾಗಿಸಲು ಸಹಾಯ ಮಾಡುತ್ತದೆ.ಅಂದಹಾಗೆ ಬೇಸಿಗೆಯು ವರ್ಷದ ಅದ್ಭುತ ಸಮಯ, ಆದರೆ ಸಂಭಾವ್ಯ ಆರೋಗ್ಯ ಅಪಾಯಗಳನ್ನು ತಪ್ಪಿಸಲು ನಮ್ಮನ್ನು ನಾವು ನೋಡಿಕೊಳ್ಳುವುದು ಅಷ್ಟೇ ಮುಖ್ಯವಾಗಿರುತ್ತದೆ. ಈ ಸಲಹೆಗಳನ್ನು ಅನುಸರಿಸುವ ಮೂಲಕ ಬೇಸಿಗೆಯಲ್ಲಿ ದೊರೆಯಬಹುದಾದ ಎಲ್ಲವನ್ನೂ ಆನಂದಿಸುತ್ತಾ ಆರೋಗ್ಯವಾಗಿ ಮತ್ತು ಸುರಕ್ಷಿತವಾಗಿರಲು ಸಾಧ್ಯವಾಗುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಮಾನವರ ಆರೋಗ್ಯದ ಬಗ್ಗೆ ಯಾವುದೇ ಸಮಸ್ಯೆ ಇದ್ದರೆ ಅಥವಾ ಕಾಳಜಿಗಳಿದ್ದರೆ, ಸಮೀಪದ ಆರೋಗ್ಯ ಕೇಂದ್ರಗಳನ್ನು ದಯವಿಟ್ಟು ಸಂಪರ್ಕಿಸಿ. ಸಂಗಮೇಶ ಎನ್ ಜವಾದಿ

“ಬೇಸಿಗೆಯಲ್ಲಿ ಆರೋಗ್ಯ ರಕ್ಷಣೆಯ ಅವಶ್ಯಕತೆ” ವಿಶೇಷಬರಹ ಸಂಗಮೇಶ್ ಜವಾದಿ Read Post »

ಇತರೆ

“ಕರುಣೆ ತೋರಿಸಿ” ವಿಶೇಷ ಲೇಖನ ವಾಣಿ ಶಿವಕುಮಾರ್

ಜೀವ ಸಂಗಾತಿ ವಾಣಿ ಶಿವಕುಮಾರ್ “ಕರುಣೆ ತೋರಿಸಿ” ಮೂಕ ಪ್ರಾಣಿಗಳೆಂದ ಮಾತ್ರಕ್ಕೆ ದಯವಿಟ್ಟು ನಮ್ಮನ್ನು ಕೀಳಾಗಿ ಕಾಣಬೇಡಿ ನಾವೂ ಸಹ ನಿಮ್ಮಂತೆಯೇ ಉಸಿರಾಡುತ್ತೇವೆ. ನಾಯಿ,ಹಸು,ಕುರಿ, ಕೋಳಿ,ಮೇಕೆ ಹೆಸರುಗಳಿಂದ ನಮ್ಮನ್ನು ಗುರುತಿಸುತ್ತೀರಾ.  ಬೇಸಿಗೆಕಾಲ ಶುರುವಾಗಿದೆ ನಿಮಗೆ ಹೇಗೆ ನೀರಿನ ಅಗತ್ಯವಿದೆಯೋ, ಅದೇ ರೀತಿ ನಮಗೂ ಸಹ ಅಗತ್ಯವಿರುತ್ತದೆ. ದಯವಿಟ್ಟು ನಿಮ್ಮ ನಿಮ್ಮ ಮನೆಯ ಮುಂದೆ ಒಂದು ಬಟ್ಟಲಿನಲ್ಲಿ ಅಥವಾ ಅಗಲವಾದ ಪಾತ್ರೆಯಲ್ಲಿ ನಮಗಾಗಿಯೇ ಅಂತ ಕುಡಿಯಲು ನೀರಿನ ವ್ಯವಸ್ಥೆಯನ್ನು ಮಾಡಿ ಕರುಣೆಯನ್ನು ತೋರಿಸಿ.  ಗೇಟಿನ ಮುಂದೆ ಬಂದರೆ ಸಾಕು ನಮ್ಮನ್ನು ಓಡಿಸುತ್ತೀರಾ ಯಾವ ಕಾರಣಕ್ಕಾಗಿ ಬಂದಿದೀವಿ ಅಂತ ಸ್ವಲ್ಪ ಮಟ್ಟಿಗಾದರೂ ಯೋಚಿಸಿ ಕೆಲವರ ಮನೆಯ ಮುಂದೆ ನಮಗಾಗಿ ಅಂತ ಸದಾ ನೀರಿನ ವ್ಯವಸ್ಥೆಯನ್ನು ಮಾಡಿರುತ್ತಾರೆ ಇನ್ನೂ ಕೆಲವರು ನೀರನ್ನು ಕುಡಿಯಲು ಕೊಡುವ ಬದಲು ಆ ನೀರನ್ನೇ ನಮ್ಮ ಮೇಲೆ ಎರಚಿ ನಮ್ಮನ್ನು ಓಡಿಸುತ್ತಾರೆ.  ನಿಮ್ಮಂತೆಯೇ ನಾವೂ ಸಹ ಮಾತನಾಡುವ ಸಾಮರ್ಥ್ಯವನ್ನು ಹೊಂದಿದ್ದರೆ ಬಿರು ಬಿಸಿಲಿನಲ್ಲಿ ಬೀದಿಬೀದಿ ಅಲೆದಾಡುವ ಪ್ರಸಂಗ ಬರುತ್ತಿರಲಿಲ್ಲ. ಮನೆಯಲ್ಲಿ ಹಳಸಿದ ಅನ್ನ,ಒಣಗಿರುವ ರೊಟ್ಟಿ, ಕೊಳೆತ ಹಣ್ಣು ತರಕಾರಿಗಳನ್ನು ಒಂದು ಕವರಿನಲ್ಲಿ ಹಾಕಿ ಬೀದಿ ಬದಿಯಲ್ಲಿ ಎಸೆಯುತ್ತೀರ  ಹಸಿವೆಯನ್ನು ತಾಳಲಾರದೆ ಕವರಿನಲ್ಲಿರುವ ಆಹಾರವನ್ನು ತಿನ್ನುವುದರ ಜೊತೆಗೆ ಹಾನಿಕಾರಕ ಪ್ಲಾಸ್ಟಿಕ್ ನಮ್ಮ ದೇಹವನ್ನು ಸೇರಿ ಗಂಭೀರ ಖಾಯಿಲೆಯಿಂದ ಬಳಲಿ ಪ್ರಾಣವನ್ನೇ ಕಳೆದುಕೊಳ್ಳುತ್ತಿದ್ದೇವೆ.  ಪ್ಲಾಸ್ಟಿಕ್ ಕವರಿನಲ್ಲಿ ಆಹಾರ ಪದಾರ್ಥಗಳನ್ನು ಗಂಟು ಕಟ್ಟಿ ಎಸೆಯುವ ಬದಲು ಯಾವುದಾದರೊಂದು ಕಲ್ಲಿನ ಮೇಲೆ ಅಥವಾ ಒಂದು ಎಲೆಯ ಮೇಲೆ ನಮಗಾಗಿ ಅಂತ ಮೀಸಲಿಟ್ಟಿರುವ ಆಹಾರವನ್ನು ಇಟ್ಟರೆ ಪ್ಲಾಸ್ಟಿಕ್ ಬಳಕೆ ಕಮ್ಮಿಯಾಗುವುದರ ಜೊತೆಗೆ ನಮ್ಮ ಜೀವವೂ ಸಹ ಉಳಿಯುತ್ತದೆ. ಬಾನಾಡಿಯಲ್ಲಿ ಸ್ವಚ್ಛಂದವಾಗಿ ಹಾರಾಡುವ ನಮ್ಮ ಗೆಳೆಯ ಗೆಳತಿಯರಿಗಾಗಿ ನಿಮ್ಮ ಮನೆಯ ಮೇಲ್ಛಾವಣಿಯಲ್ಲಿ ಅವರಿಗೂ ಸಹ ನೀರಿನ ವ್ಯವಸ್ಥೆಯನ್ನು ಕಲ್ಪಿಸಿ. ದಯವಿಟ್ಟು ಪ್ಲಾಸ್ಟಿಕ್ ಬಳಕೆಯನ್ನು ನಿಲ್ಲಿಸಿ ನಮ್ಮನ್ನು ಉಳಿಸಿ. ವಾಣಿ ಶಿವಕುಮಾರ್

“ಕರುಣೆ ತೋರಿಸಿ” ವಿಶೇಷ ಲೇಖನ ವಾಣಿ ಶಿವಕುಮಾರ್ Read Post »

ಇತರೆ, ಜೀವನ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ.

ಜೀವನಸಂಗಾತಿ ಡಾ. ಸುಮತಿ ಪಿ. “ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” “ಅತಿಯಾಸೆ ಗತಿ ಕೇಡು”ಎಂಬ ಮಾತಿನಂತೆ ಮನುಷ್ಯನಿಗೆ ಅತಿಯಾದ ಆಸೆಗಳಿದ್ದರೆ, ಒಂದು ಆಸೆ ಅಥವಾ ಬಯಕೆಯ ಈಡೇರಿಕೆಯ ನಂತರ ಇನ್ನೊಂದು ಆಸೆ ಗರಿಗೆದರಿ ಎದ್ದು ನಿಲ್ಲುತ್ತದೆ. ಅಂತಹ ಸಂದರ್ಭದಲ್ಲಿ ಮನುಷ್ಯನಿಗೆ ಸಂತೃಪ್ತಿ ಎನ್ನುವುದು ಸಿಗದೇ ಇರಬಹುದು. ಅದಕ್ಕೆ ಮನುಷ್ಯರಾದ ನಾವು ಸಂತಸದಿಂದ  ಜೀವನ ನಡೆಸಬೇಕಾದರೆ ಇದ್ದದ್ದರಲ್ಲಿ ತೃಪ್ತಿಯನ್ನು ಅನುಭವಿಸುವ ಗುಣ ನಮ್ಮದಾಗಬೇಕು. ಸಂಪತ್ತು ಎಂದರೆ ಶ್ರೇಷ್ಠವಾದದ್ದು,ಮೌಲ್ಯಯುತವಾದದ್ದು ಎಂದರ್ಥ. ಯಾವುದರಿಂದ ನಮಗೆ ಒಳಿತಾಗುತ್ತದೆಯೋ ಅದುವೇ ಸಂಪತ್ತು ಎನಿಸಿಕೊಳ್ಳುತ್ತದೆ.ಸಂತೃಪ್ತಿ ಎನ್ನುವುದು ಒಬ್ಬ ವ್ಯಕ್ತಿಯು ತನ್ನ ಜೀವನದಲ್ಲಿನ ಪರಿಸ್ಥಿತಿಯಿಂದ ತೃಪ್ತನಾಗುವ ಸ್ಥಿತಿಯಾಗಿದೆ, ಸಂತೃಪ್ತಿ ಇದ್ದವರು ಜೀವನದಲ್ಲಿ ಆಂತರಿಕ ಶಾಂತಿಯನ್ನು ಹೊಂದಿರುತ್ತಾರೆ .ಆಗ ಅವರಲ್ಲಿ ಸಂತೃಪ್ತಿಯೇ ದೊಡ್ಡ ಸಂಪತ್ತಾಗಿ ವಿಜೃಂಭಿಸುತ್ತದೆ.ಸಂತೃಪ್ತಿ ಎಂದರೆ ಇದ್ದಹಾಗೆ ಜೀವನವನ್ನು ಸಾಗಿಸುವುದು ಎಂಬರ್ಥ ಬಂದಿದೆ. ಆದರೆ ನಿಜಾರ್ಥದಲ್ಲಿ ಸಂತೃಪ್ತಿಯೆಂದರೆ, ಸರಿಯಾದುದರಲ್ಲಿ, ಉದಾತ್ತವಾದುದರಲ್ಲಿ ನಾವು ನೆಲೆಗೊಳ್ಳುವುದಾಗಿದೆ.. ಸಂತೃಪ್ತಿಯು ಬಯಕೆಗಳ ಬಿರುಗಾಳಿಯಿಂದ ನಮ್ಮನ್ನು ರಕ್ಷಿಸುತ್ತದೆ. ನಮ್ಮದೇ ಜೀವನವನ್ನು ತೆಗೆದುಕೊಂಡರೆ, ನಾವು ಅನುಭವಿಸುವ ಸಂತೃಪ್ತಿಯೆಂಬುವುದು ನಮ್ಮ ಬದುಕಿನ ಅತ್ಯಂತ ಸಂತೋಷದ ಕ್ಷಣಗಳಾಗಿ , ಮನಸ್ಸು ಶಾಂತಿ ಸಮಾಧಾನದಿಂದ ಇರುತ್ತದೆ. ಕೆಲವರನ್ನು ನಾವು ಸ್ಥಿತಪ್ರಜ್ಞರು ಎನ್ನುತ್ತೇವೆ. ಸ್ಥಿತಪಜ್ಞರು ಶಾಂತವಾಗಿರುತ್ತಾರೆ. ಸಂತೃಪ್ತಿಯನ್ನು ಹೊಂದುವವರಾಗಿರುತ್ತಾರೆ. ಸಾಗರದ ನೀರನ್ನು ಕಲಕಲು ಪ್ರಯತ್ನಿಸಿದರೂ, ಸಾಗರ ತನ್ನದೇ ಲಯದಲ್ಲಿರುತ್ತದೆ. ಹಾಗೆಯೇ ಸ್ಥಿತಪ್ರಜ್ಞೆಯ  ವ್ಯಕ್ತಿಯೂ  ಸಂತೃಪ್ತ  ಮನಸ್ಸಿನಿಂದ ಧನಾತ್ಮಕ ಭಾವನೆ ಹೊಂದಿರುತ್ತಾನೆ. ಪ್ರಾಣಿಗಳಲ್ಲಿ ಮನುಷ್ಯ ಜನ್ಮ ಅತೀ ಶ್ರೇಷ್ಠವಾದದ್ದು.ಮನುಷ್ಯ ಜನ್ಮದಲ್ಲಿ ಬದುಕು ನಡೆಸುವಾಗ ಸುಖ ಕಾಣಬೇಕಾದರೆ ಸಂತೃಪ್ತಿ ಇರಬೇಕು.ಸಂತೃಪ್ತಿ ಎಂಬುದು ಮನುಷ್ಯನ ಜೀವನದಲ್ಲಿ ಮೂಡಬೇಕಾದ ತೃಪ್ತ ಭಾವನೆ. ‘ಪಾಲಿಗೆ ಬಂದದ್ದು ಪಂಚಾಮೃತ’ ಎಂಬಂತೆ ತನಗೆ ಸಿಕ್ಕಿದಷ್ಟು ಪಡೆದು, ತೃಪ್ತಿಯಿಂದ ಜೀವನ ಸಾಗಿಸುವುದು. ಎಲ್ಲಾ ಜನರು ಒಂದೇ ರೀತಿ ಇರುವುದಿಲ್ಲ. ಬೇರೆ ಬೇರೆ ಜನರ ಜೀವನ ರೀತಿ ಬೇರೆ ಬೇರೆ ಇರುತ್ತದೆ .ಆದುದರಿಂದ ತನ್ನನ್ನು ಇನ್ನೊಬ್ಬರೊಂದಿಗೆ ಹೋಲಿಸಿ ಕೀಳರಿಮೆಯಿಂದ ಶಾಂತಿ ನೆಮ್ಮದಿಯನ್ನು ಕಳೆದುಕೊಂಡರೆ ಬದುಕಲ್ಲಿ ಸಂತೃಪ್ತಿಯನ್ನು ಕಾಣಲು ಸಾಧ್ಯವಾಗದು. ಮನುಷ್ಯರು ಎಂದ ಮೇಲೆ ಒಬ್ಬರ ತರಹ ಇನ್ನೊಬ್ಬರು ಇರುವುದಿಲ್ಲ. ಕೆಲವರು ಯಾವಾಗಲೂ ಸಂತೋಷವಾಗಿರುತ್ತಾರೆ. ಇನ್ನು ಕೆಲವರು ಸುಖ ದುಃಖಗಳನ್ನು ಸಮನಾಗಿ ಸ್ವೀಕರಿಸುತ್ತಾರೆ. ಮತ್ತು ಕೆಲವರು ಹಿಂದೆ ನಡೆದ ಯಾವುದೋ ಕಹಿ ಘಟನೆಯನ್ನು ಮೆಲುಕು ಹಾಕುತ್ತಾ ಕೊರಗುತ್ತಿರುತ್ತಾರೆ. ಆದರೆ ಇರುವಷ್ಟು ದಿನ ನೆಮ್ಮದಿಯಾಗಿ ಬದುಕಬೇಕು ಎಂದರೆ  ಬದುಕಿನಲ್ಲೇ ಸಂತೋಷವನ್ನು ಕಾಣಬೇಕು. ಜೀವನದಲ್ಲಿ ಸಂತೋಷಕ್ಕೆ ಸಂತೃಪ್ತಿಯೇ ಮುಖ್ಯ ಎಂದು ನಾವು ತಿಳಿದುಕೊಳ್ಳಬೇಕು. ಒಬ್ಬ ವ್ಯಕ್ತಿಯು ಎಷ್ಟೇ ಸಂಪತ್ತನ್ನು ಹೊಂದಿದ್ದರೂ, ಅವನು ತೃಪ್ತನಾಗದ ಹೊರತು, ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ.ಮನುಷ್ಯ ಜೀವನದಲ್ಲಿ ಸಂತೃಪ್ತಿಯನ್ನು ಕಾಣಬೇಕಾದರೆ ತನ್ನ ಆಸೆಗಳಿಗೆ ಕಡಿವಾಳ ಹಾಕಲೇಬೇಕು “ಆಸೆಯೇ ದುಃಖಕ್ಕೆ ಮೂಲ”ವೆಂದು ಗೌತಮ ಬುದ್ಧ ತಿಳಿಸಿದಂತೆ,ಅತಿ ಆಸೆಯಿಂದ ಮಾನವ ಇತರರನ್ನು ನೋಡಿ, ತಾನು ಅವರಂತೆ ಆಗಬೇಕು ಎಂದು ಏನೇನೋ  ಮಾಡಲು ಸಾಗಿ, ಇರುವ ಸುಖ, ನೆಮ್ಮದಿಯನ್ನು ಕಳೆದುಕೊಳ್ಳುತ್ತಾನೆ. ಪ್ರತಿಯೊಬ್ಬನೂ  ಬೇರೆಯವರ ಸುಖವನ್ನೇ ಅಳೆಯುವುದು ಜಾಸ್ತಿ.ಸ್ವಾರ್ಥ ಮನೋಭಾವದಲ್ಲಿ ಸುಖದ ಸುಪ್ಪತ್ತಿಗೆಯಲ್ಲಿ ಬದುಕುವ ಕನಸಲ್ಲಿ, ಇರುವ ಸುಖವನ್ನು ನಿರ್ಲಕ್ಷಿಸಿ, ಅತೃಪ್ತಿಯ ಬಾಳು ಸಾಗಿಸುವುದಕ್ಕಿಂತ ನಮಗಿಂತಲೂ ಕಷ್ಟದಲ್ಲಿರುವವರನ್ನು ಕಂಡು “ನಾವೇ ಅವರಿಗಿಂತ ಸುಖಿಗಳು “ಎನ್ನುವ ಭಾವನೆ ತಾಳುವುದೇ ಸಂತೃಪ್ತಿ.ಸಂತೃಪ್ತಿಯೆ ಬದುಕಿನ ಸಂಪತ್ತು. ಬದುಕಿನಲ್ಲಿ  ಸಂತೃಪ್ತಿ ಇದ್ದಾಗ ,ಸಕಾರಾತ್ಮಕ ದೃಷ್ಟಿಕೋನದಿಂದ ಶಾಂತಿ, ಸಹನೆ ,ನೆಮ್ಮದಿ, ತಾಳ್ಮೆ ಮುಂತಾದಂತಹ ಗುಣಗಳು ಬೆಳೆದು ಬದುಕಿನ ಸಂಪತ್ತಾಗಿ ವಿಜೃಂಭಿಸುತ್ತದೆ ಯಮರಾಜ ಯುಧಿಷ್ಠಿರನಿಗೆ ಅದ್ಭುತವಾದ ಪ್ರಶ್ನೆಗಳನ್ನು ಕೇಳಿದಂತಹ ಸಂದರ್ಭದಲ್ಲಿ ರಾಜನು ಅವುಗಳಿಗೆ ಸೂಕ್ತವಾದ ಉತ್ತರವನ್ನು ನೀಡುತ್ತಾನೆ ಎಂಬುವುದನ್ನು ನಾವು ಓದಿದ್ದೇವೆ.ಅದೇ ಅವನು ಕೇಳಿದ ಪ್ರಶ್ನೆಗಳಲ್ಲೊಂದು“ಶ್ರೇಷ್ಠ ಸಂತೋಷ ಯಾವುದು?”. ಯುಧಿಷ್ಠಿರ  ಅದಕ್ಕೆ ಕೊಟ್ಟ ಶ್ರೇಷ್ಠವಾದ ಉತ್ತರ “ತೃಪ್ತಿಯಿಂದ ಪಡೆದ ಸಂತೋಷವೇ ಶ್ರೇಷ್ಠ ಸಂತೋಷ”. ಆದ್ದರಿಂದ ತೃಪ್ತಿಯು ಯಾವುದೇ ಸಮಯದಲ್ಲಿ ಹೊಂದಬಹುದಾದ ಶ್ರೇಷ್ಠ ಸಂಪತ್ತು. ಒಳ್ಳೆಯ ಗುಣವನ್ನು ಅಭಿವೃದ್ಧಿಪಡಿಸುವ ಮೂಲಕ,ಉತ್ಸಾಹ ಮತ್ತು ಅಜ್ಞಾನದ ಗುಣಗಳನ್ನು ನಿಗ್ರಹಿಸುವ ಮೂಲಕ  ತೃಪ್ತರಾಗಿರುತ್ತೇವೆ.ಸಂತೃಪ್ತ ಜೀವನವು ಯಶಸ್ವಿ ಜೀವನವೆಂದರೆ ತಪ್ಪಾಗಲಾರದು ಜೀವನದ ಯಶಸ್ಸಿನ ಅಂಶವೆಂದರೆ ಸಂತೃಪ್ತಿ ಎಂದು ಹೇಳಬಹುದು. ನಮಗೆ ಜೀವನದಲ್ಲಿ ಸಂತೃಪ್ತಿ ಇಲ್ಲದಿದ್ದರೆ, ನಮಗೆ ಯಾವುದೇ ಗೆಲುವಿನ ಸಂತಸ ಸಿಗಲಾರದು. ನಮ್ಮಲ್ಲಿ ಹಣವಿರಬಹುದು, ಆಸ್ತಿಗಳಿರಬಹುದು,ಆದರೆ ಆಂತರಿಕ ತೃಪ್ತಿ ಇಲ್ಲ ಎಂದಾದಲ್ಲಿ. ಅದು ಸಂತಸದ ಯಶಸ್ವಿ ಜೀವನವಲ್ಲ. ‘ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ’ ಎಂದು ಕವಿಗಳು ಹೇಳುತ್ತಾರೆ. ಮನುಷ್ಯನಿಗೆ ಇಂದು ಎಷ್ಟೇ ಸುಖ. ಸಮೃದ್ಧಿ, ಸಂಪತ್ತು ಇದ್ದರೂ ಬದುಕಿನಲ್ಲಿ ಸಂತೃಪ್ತಿ ಇಲ್ಲವಾಗಿದೆ. ಇಂದು ಸ್ಪರ್ಧಾತ್ಮಕ ಜಗತ್ತಿನಲ್ಲಿರುವ ನಮಗೆ ಸಂತೃಪ್ತಿಯೇ ಬದುಕಿನ ದೊಡ್ಡ ಸಂಪತ್ತು ಎಂಬುದು ಒಪ್ಪಿಕೊಂಡು,ಅದನ್ನು ಪಡೆಯುವುದು ಕಷ್ಟವಾದರೂ  ಇಷ್ಟಪಟ್ಟು ಜೀವನದಲ್ಲಿ ಸಂತೃಪ್ತಿಯನ್ನು ಗಳಿಸಬೇಕಾಗುತ್ತದೆ.ಸಂತೃಪ್ತಿಯಿಂದಲೇ ನಾವು ಜೀವನದಲ್ಲಿ ಎದುರಿಸಬೇಕಾದ ಅನೇಕ ಸಮಸ್ಯೆಗಳಿಗೆ ಮುಕ್ತಿಯನ್ನು ಹಾಡಬಹುದು, ಸಂತೃಪ್ತಿ ಇದ್ದರೆ ಜೀವನದಲ್ಲಿ ಯಶಸ್ಸನ್ನು ಗಳಿಸಬಹುದು. ಆದುದರಿಂದ ಸಂತೃಪ್ತಿಯೇ ದೊಡ್ಡ ಸಂಪತ್ತು. ಸಂತೃಪ್ತಿ ಅನ್ನೋದು ಬದುಕಿನಲ್ಲಿ ಇರಬೇಕಾದ ಮೂಲಭೂತವಾದ ಅಂಶವಾಗಿದೆ. ಸಂತೃಪ್ತಿಯೇ ಯಶಸ್ವಿ ಬದುಕಿನ ಮೂಲ ಆಧಾರಸ್ತಂಭವೆಂದೇ ಹೇಳಬಹುದು. ಈ ಭೂಮಿಯ ಮೇಲಿನ ಬದುಕೆಂಬ ನಾಲ್ಕು ದಿನದ ಬಾಳು ಅದು ಗೋಳಾಗದೆ ಇರಬೇಕಾದರೆ ಬದುಕಿನಲ್ಲಿ ಸಂತೃಪ್ತಿಯನ್ನು ಕಾಣುವಂತಹ ಮನಸ್ಸು ನಮ್ಮದಾಗಬೇಕು. ಸಂತೃಪ್ತಿಯನ್ನೇ ನಮ್ಮ ಬದುಕಿನ ದೊಡ್ಡ ಸಂಪತ್ತನ್ನಾಗಿಸಬೇಕು. ಬದುಕಿನ ದಿನಗಳನ್ನು ಚಿಂತೆ, ದುಃಖ, ನಿರಾಸೆಯಿಂದ ಅತೃಪ್ತರಾಗಿ ಕಳೆಯದೆ ಶಾಂತಿ ಸಮಾಧಾನದಿಂದತೃಪ್ತ ಜೀವನ ನಡೆಸುವುದು ನಮ್ಮೆಲ್ಲರ ಕೈಯಲ್ಲಿದೆ ಅಲ್ಲವೇ? ಡಾ.ಸುಮತಿ ಪಿ

“ಸಂತೃಪ್ತಿಯೇ ಮನುಜನ ಶ್ರೇಷ್ಠ ಸಂಪತ್ತಾಗಲಿ” ವಿಶೇಷ ಲೇಖನ ಡಾ. ಸುಮತಿ ಪಿ. Read Post »

ಇತರೆ

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್

ಮಹಿಳಾ ಸಂಗಾತಿ “ವೀಣಾ ಹೇಮಂತ್ ಗೌಡ ಪಾಟೀಲ್ “ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ ನಾಲ್ಕು ಹೆಣ್ಣು ಮಕ್ಕಳ ಜೊತೆಗಿನ ನಮ್ಮ ಸಂಬಂಧಗಳು. ಈ ಸಂಬಂಧದ ಹೊರತಾಗಿ ಆಕೆ ಓರ್ವ ಸ್ನೇಹಿತೆಯೂ ಆಗಬಹುದು. ಒಂದು ಹಂತದವರೆಗೆ ಆಕೆಯೊಂದಿಗೆ ನಮ್ಮ ಮನ ಬಿಚ್ಚಿ ನಾವು ಮಾತನಾಡಲು ಸಾಧ್ಯವಾಗುತ್ತದೆ. ಅವರವರು ಕಂಡುಕೊಂಡಂತೆ ಹೆಣ್ಣನ್ನು ಎಲ್ಲರೂ ವರ್ಣಿಸುತ್ತಾರೆ ಹೊರತು ಆಕೆಯ ನಿಜವಾದ ಅಸಲಿಯತ್ತು ಯಾರಿಗೂ ಗೊತ್ತಿಲ್ಲ… ಕೆಲವರಿಗೆ ಹೆಣ್ಣು ಮಾಯೆಯಾದರೆ ಮತ್ತೆ ಕೆಲವರಿಗೆ ಆಕೆ ಮೋಹಿನಿ ಮತ್ತೆ ಕೆಲವರಿಗೆ ಆಕೆ ದೇವತಾ ಸ್ವರೂಪಿಣಿ ಮತ್ತೆ ಕೆಲವರಿಗೆ ಆಕೆ ಜಾರಿಣಿಯು ಆಗಬಹುದು, ಇನ್ನು ಕೆಲವರಿಗೆ ಆಕೆಯ ರಕ್ಕಸಿಯು ಆಗಬಹುದು…. ಅವರವರ ಭಾವಕ್ಕೆ ತಕ್ಕಂತೆ ಅವರು ಹೆಣ್ಣಿನ ಕುರಿತು ಮಾತನಾಡುತ್ತಾರೆಯೇ ಹೊರತು ಖುದ್ದು ಆಕೆ ಯಾರೆಂದು ಅವರಿಗೆ ಗೊತ್ತಿರುವುದಿಲ್ಲ.ಆಕೆ ಯಾರ ಅಂಕೆಗೂ ನಿಲುಕುದ ಸೀಮಾತೀತಳು. ಯಾವ ಉಪಮೆಗೆ ನಿಲುಕದ ಉಪಮಾತೀತಳು.ಹೆಣ್ಣು ಮೌನದಲ್ಲೇ ಸಾವಿರ ಮಾತುಗಳನ್ನು ಹೊತ್ತು ನಡೆಯುವ ಛಾತಿಯುಳ್ಳವಳು.ತನ್ನ ಕರ್ತವ್ಯಕ್ಕೆ ಬದ್ಧಳಾಗಿ ತನ್ನನ್ನು ನಂಬಿದವರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪೊರೆಯುವವಳು. ಯಾರಿಗೂ ಕೇಡನ್ನು ಬಯಸದ ಆಕೆ ಜನರು ತನ್ನನ್ನು ಕೈಬಿಟ್ಟರೂ ದೇವರು ತನ್ನೊಂದಿಗೆ ಇದ್ದಾನೆ ಎಂಬ ನಂಬಿಕೆಯ ಬಲದಿಂದಲೇ ಬದುಕನ್ನು ನಡೆಸುತ್ತಾಳೆ. ಆಕೆಯ ಪ್ರಕಾರ ಬದುಕು ಪ್ರದರ್ಶನವಲ್ಲ ಅದೊಂದು ಪ್ರಯಾಣ… ಈ ಪ್ರಯಾಣದಲ್ಲಿ ಹೆತ್ತವರು, ಶಿಕ್ಷಕರು ಸಂಗಾತಿ ಮಕ್ಕಳು ಎಲ್ಲವೂ ಆಯಾ ಸಮಯಕ್ಕೆ ಆಕೆಯ ಜೊತೆಗೆ ಸಾಗುತ್ತದೆ ಇದೊಂದು ರೀತಿಯಲ್ಲಿ ಬದುಕಿನ ಪ್ರತಿಯೊಂದು ಕ್ಷಣವನ್ನು ಉಸಿರಾಡುವ ಆನಂದಿಸುವ ಪ್ರಭುದ್ಧತೆಯ ಹಾದಿಯಲ್ಲಿ ಸಾಗಿ ಹೋಗುವ ಪಯಣ. ಇನ್ನೂ ಹೇಳಬೇಕೆಂದರೆ ಆಕೆ ಜೀವನದ ಅರ್ಥ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ ಬದಲಾಗಿ ತನ್ನ ಮನದ ಆಳದ ಕತ್ತಲೆಯನ್ನು ಆಕೆ ತಳ್ಳಿ ಹಾಕದೆ ಮರೆ ಮಾಡದೆ ಆ ಕತ್ತಲೆಯ ಒಳಗಿರುವ ಬೆಳಕಿನತ್ತ ಮುಖ ಮಾಡುತ್ತಾಳೆ.ಆಕೆಗೆ ಗೊತ್ತು ಆಕೆ ನಡೆಯುತ್ತಿರುವ ಹಾದಿಯಲ್ಲಿ ಆತ್ಮ ವಿಶ್ವಾಸ ಹಾಗೂ ನಿಶಬ್ದ ಶಕ್ತಿ ಮಾತ್ರ ಆಕೆಯೊಂದಿಗೆ ಇರುತ್ತದೆ ಎಂದು. ಆಕೆ ಪ್ರತಿಭಟನೆಯನ್ನು ಒಂದು ಪಾಠವಾಗಿ ಸ್ವೀಕರಿಸುತ್ತಾಳೆ ಪ್ರತಿ ತಪ್ಪು ಹೆಜ್ಜೆಯನ್ನು ಅನುಭವದ ಬೆಳಕಾಗಿ ಮಾರ್ಪಡಿಸಿಕೊಳ್ಳುತ್ತಾಳೆ. ತನ್ನ ಅಂತರಾಳದಲ್ಲಿ ಮತ್ತಷ್ಟು ದೃಢವಾಗಿ ರೂಪುಗೊಳ್ಳುತ್ತಾಳೆ.ಮನೆಯ ಪ್ರತಿಯೊಬ್ಬರ ಆಗುಹೋಗುಗಳನ್ನು ಅನುಸರಿಸಿ ಅದಕ್ಕೆ ತಕ್ಕಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವ ಆಕೆ ಒಂದೊಮ್ಮೆ ನಿಜವಾಗಿಯೂ ತನ್ನದೇ ಆದ ಬದುಕನ್ನು ನಡೆಸಬೇಕು ಎಂದು ಇಚ್ಛಿಸಿದರೆ ಖಂಡಿತವಾಗಿಯೂ ಈ ಜೀವ ಜಗತ್ತಿನ ಉಳಿದ ಜೀವಿಗಳು ತಲ್ಲಣಗೊಳ್ಳುತ್ತವೆ ಕಾರಣ ಎಲ್ಲರ ಜೀವನದ ದೈನಂದಿನ ಚಟುವಟಿಕೆಗಳ ಕೇಂದ್ರ ಬಿಂದು ಆಕೆಯೇ. ಇವರೆಲ್ಲರ ಚಟುವಟಿಕೆಗಳಿಗೆ ಪೂರಕವಾಗಿ ತನ್ನ ಇಡೀ ಬದುಕನ್ನು ಮುಡಿಪಾಗಿರುವ ಆಕೆಯ ಪಾಲಿಗೆ ಬದುಕು ಎಂದರೆ ಗಮ್ಯ ಸ್ಥಾನಕ್ಕೆ ಓಡುವ ಓಟವಲ್ಲ ಬದಲಾಗಿ ತಾನಿಡುವ ಪ್ರತಿ ಹೆಜ್ಜೆಯಲ್ಲೂ ಅರ್ಥವನ್ನು ಕಂಡುಕೊಳ್ಳುವ ಪಯಣ. ಆಕೆಯ ಅನುಭವಗಳೇ ಆಕೆಯನ್ನು ಇಂದಿನ ವ್ಯಕ್ತಿಯಾಗಿ ರೂಪಿಸುತ್ತದೆ.ಒಂದೊಮ್ಮೆ ಆಕೆಯನ್ನು ದುರ್ಬಲಗೊಳಿಸಿದ ಘಟನೆಗಳು ಇಂದು ಆಕೆಯನ್ನು ಗಟ್ಟಿಗೊಳಿಸಿರುತ್ತವೆ. ಪ್ರತಿ ಘಟನೆಗೂ ಒಂದು ಅರ್ಥವಿದೆ ಎಂಬ ನಂಬಿಕೆಯಿಂದ ಬದುಕುವ ಆಕೆ ಜೀವನದ ನಿಜವಾದ ಗೆಲುವು ಇತರರನ್ನು ಮೀರಿಸುವುದಲ್ಲ ಬದಲಾಗಿ ತನ್ನ ಅಂತರಂಗದ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರಿವನ್ನುಹೊಂದಿರುತ್ತಾಳೆ ಅಂತೆಯೇ ಆಕೆ ಎಲ್ಲರನ್ನು ಕ್ಷಮಿಸಬಲ್ಲಳು ಕೂಡ. ಬದುಕಿನ ಪಯಣದಲ್ಲಿ ವಯೋ ಸಹಜವಾಗಿ ಕೆಲವೊಮ್ಮೆ ಆಕೆಯ ನಡಿಗೆ ನಿಧಾನವಾಗಬಹುದು… ಆದರೆ ನಂಬಿಕೆ ಆಕೆಯನ್ನು ಮುನ್ನಡೆಸುತ್ತದೆ.ಇಷ್ಟೆಲ್ಲ ಇದ್ದರೂ ಕೂಡ ಒಮ್ಮೊಮ್ಮೆ ಹೆಣ್ಣು ಮಕ್ಕಳು ಮಾನಸಿಕವಾಗಿ ನೊಂದು ಬೇಯುತ್ತಾರೆ. ಅಸ್ತಿತ್ವ ರಹಿತತೆಯನ್ನು ಅನುಭವಿಸುತ್ತಾರೆ. ಕಳೆದು ಹೋದವರಂತೆ ಭಾವಿಸುತ್ತಾರೆ. ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯ ವಾಗಲಿಲ್ಲ ಎಂಬ ಭಾವದಿಂದ ಹತಾಶೆಯನ್ನು ಹೊಂದುತ್ತಾರೆ.ಅಂತಹ ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತುಕನ್ನಡಿಯ ಮುಂದೆ ನಿಂತು ತನ್ನ ಬಿಂಬವನ್ನೇ ಪರಿಭಾವಿಸುವುದರಿಂದ ಆತ್ಮ ಸಾಕ್ಷಾತ್ಕಾರ ಇಲ್ಲವೇ ಸ್ವಂತಿಕೆ ಒದಗಿ ಬರುವುದಿಲ್ಲ. ನಾನು ಎಲ್ಲವನ್ನು ಪಡೆದುಕೊಂಡಿದ್ದೇನೆ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ ಹಾಗೆ ಪಡೆದುಕೊಂಡವರು ಅದನ್ನು ವಿವರಿಸಲು ಕೂಡ ಸಾಧ್ಯವಿಲ್ಲ ಎಲ್ಲವೂ ಅವರವರ ದೃಷ್ಟಿಕೋನದ ಮೇಲೆ ನಿರ್ಧಾರವಾಗಿರುತ್ತದೆ ….ಆದರೆ ಶಿಕ್ಷಣ ಮತ್ತು ಸಮಾಜದ ಕೆಲಸಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಹೆಂಗಸರು ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಲು ಮುಂದಾಗದಿದ್ದರೆ ತಮ್ಮ ಮಾನವೀಯ ನೆಲೆಗಳನ್ನು ಕಳೆದುಕೊಳ್ಳುತ್ತಾರೆ.ಪ್ರಸ್ತುತ ಬದುಕಿನಲ್ಲಿ ಹೆಣ್ಣು ಮಕ್ಕಳಿಗೆ ಗೊತ್ತು ಗುರಿಗಳಿಲ್ಲ ಆಸೆ ಆಕಾಂಕ್ಷೆಗಳಿಲ್ಲ ನಾಳೆಗಾಗಿ ಹಂಬಲಿಸುವುದಿಲ್ಲ ತನ್ನ ದೇಹ ಸಮರ್ಥವಾಗಿರುವ ಹೊತ್ತಿನಲ್ಲಿಯೇ ಏನನ್ನಾದರೂ ಸಾಧಿಸಬೇಕು ಎಂಬ ಛಲವಿಲ್ಲ ಇದೊಂದು ರೀತಿಯ ಆತ್ಮಹತ್ಯೆಯೇ ಸರಿ. ಮಕ್ಕಳನ್ನು ಹೆತ್ತು, ಹೊತ್ತು ಅವರನ್ನು ಶಾಲೆಗೆ ಕಳುಹಿಸಿದ ಹೊತ್ತಿನಲ್ಲಿ ಸುಮ್ಮನೆ ಕುಳಿತುಕೊಂಡ ಹೆಣ್ಣು ಮಕ್ಕಳು ತಮಗೆ ತಾವೇ ಮಿತಿಗಳನ್ನು ಹಾಕಿಕೊಂಡು ತಮ್ಮ ಅನನ್ಯ ಸಾಮರ್ಥ್ಯಗಳ ಅರಿವನ್ನು ಕಳೆದುಕೊಂಡು ಬಿಡುತ್ತಾರೆ.ಕೇವಲ ಎರಡು ದಶಕಗಳ ಹಿಂದೆ ಗೃಹಿಣಿಯರನ್ನು ಸಂದರ್ಶಿಸಿದ ಮಾಧ್ಯಮ ಒಂದು ಹೆಂಗಸಾಗಿ ಕೆಲಸ ಮಾಡುವಾಗನೀವು ಏನೆಲ್ಲಾ ತಳಮಳವನ್ನು ಎದುರಿಸಿದಿರಿ? ನಿಮ್ಮ ಹಿಂದಿನ ಬದುಕಿನಲ್ಲಿ ಮುಖ್ಯ ಸಂತೃಪ್ತಿ ಮತ್ತು ಮುಖ್ಯ ತಳಮಳ ಯಾವುದು?ನಿಮ್ಮೊಳಗೆ ನೀವು ಹೇಗೆ ಬದಲಾಗಿದ್ದೀರಿ ವಯಸ್ಸಾಗುವುದನ್ನು ನೀವು ಹೀಗೆ ಗ್ರಹಿಸುತ್ತಿದ್ದೀರಿ ಹಾಗೂ ಇದಕ್ಕಿಂತ ಭಿನ್ನವಾಗಿ ಬೇರೇನು ಮಾಡಬೇಕೆಂಬ ಆಸೆ ನಿಮ್ಮಲ್ಲಿತ್ತು ಎಂಬ ಪ್ರಶ್ನೆಗಳನ್ನು ಕೇಳಿದಾಗ ಅವರ ನಿಜ ಸಮಸ್ಯೆಗಳಿಗೆ ಶಿಕ್ಷಣ ಕಾರಣವಲ್ಲ ಎಂಬುದು ಸ್ಪಷ್ಟವಾಯಿತು ಅವರೆಲ್ಲರೂ ಶಿಕ್ಷಣವನ್ನು ತಾವು ಗಂಭೀರವಾಗಿ ಪರಿಗಣಿಸಲಿಲ್ಲ ಹಾಗೂ ಅದನ್ನು ಬಳಸಲು ತಕ್ಕ ಯೋಜನೆ ಮಾಡಿಕೊಳ್ಳಲಿಲ್ಲ ಎಂದು ಬೇಸರದಿಂದ ನುಡಿದಿದ್ದರು.ಮದುವೆಯಾದವರಲ್ಲಿ ಬೆರಳೆಣಿಕೆಯ ಜನರು ವಿಚ್ಛೇದಿತರಾಗಿದ್ದರೂ ಮತ್ತೆ ಶೇಕಡ ೯0 ಜನ ಮಕ್ಕಳಿಗೆ ತಾಯಿಯಾಗಿದ್ದರು ಮತ್ತೆ ಕೆಲವರು ತಮಗೂ ಗೃಹಿಣಿ ಎಂದು ಹೇಳಿಕೊಳ್ಳಲು ಸಂತಸವೇನು ಇಲ್ಲ ಎಂಬ ಭಾವವನ್ನು ಹೊಂದಿದ್ದರು.ಇನ್ನೂ ಕೆಲವರಿಗೆ ತಾವು ಪಡೆದ ಶಿಕ್ಷಣ ತಮ್ಮೊಳಗಿನ ತಳಮಳಕ್ಕೆ ಕಾರಣ ಎಂದು ಅರಿವಾಗಿತ್ತು. ತಮಗೆ ಶಿಕ್ಷಣ ಒದಗಿಸಿದ್ದ ಸ್ವಾಯತ್ತತೆ, ಗುರಿ, ಮೌಲ್ಯ ಹಾಗೂ ಬದ್ಧತೆಗಳನ್ನು ತಾವು ಬಳಸಿಕೊಂಡಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು.ಮತ್ತೆ ಕೆಲವರು ಸಮುದಾಯದ ಮಿತಿಯಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಬಳಸುವ ಮೂಲಕ ತಮ್ಮ ಸ್ವಂತಿಕೆಯನ್ನು ಪುನರ್ನವೀಕರಿಸಿಕೊಂಡು ತಮ್ಮ ಬದುಕಿನಲ್ಲಿ ಹೊಸತನವನ್ನು ಕಂಡುಕೊಂಡರು.ಮುಂದೆ ಕೆಲವು ವರ್ಷಗಳ ನಂತರ ಅವರನ್ನು ಈ ಕುರಿತು ಮತ್ತೊಮ್ಮೆ ಪ್ರಶ್ನೆಸಿದಾಗ ಕೆಲವರ ಮನಸ್ಸಿನಲ್ಲಿ ಗೃಹಿಣಣಿಯರಾಗಿದ್ದ ಕಾರಣ ಕಹಿ ಭಾವನೆ ಇಲ್ಲವೇ ನಿರಾಸೆ ಮತ್ತು ಹತಾಶೆಗಳು ಮನೆ ಮಾಡಿದ್ದವು.ಮತ್ತೆ ಕೆಲವರು ಉದ್ಯೋಗ ಮತ್ತು ತಾಯ್ತನಗಳನ್ನು ಒಗ್ಗೂಡಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದರು .ಇನ್ನೂ ಕೆಲವರು ನಾನ್ಯಾರು ಎಂಬುದೇ ನನಗೆ ಇನ್ನೂ ಅರ್ಥವಾಗಿಲ್ಲ ನನ್ನದೇ ಆದ ಸೃಜನಶೀಲ ಜೀವನವನ್ನು ಕಟ್ಟಲು ತಕ್ಕ ಯೋಚನೆ ಮಾಡಬೇಕಿತ್ತು ಎಂದು ಈಗ ಅನಿಸುತ್ತಿದೆ ಎಂದು ಬೇಸರ ಪಟ್ಟುಕೊಂಡರು.ಜೀವನಪೂರ್ತಿ ಅವರಿವರ ಕೆಲಸಗಳನ್ನು ಮಾಡುತ್ತಾ ತಮ್ಮನ್ನು ತಾವು ಕಡೆಗಣಿಸಿದ ಪರಿಣಾಮವಾಗಿ ಮಾನಸಿಕವಾಗಿ ಕುಸಿದು ಹೋಗುತ್ತಾ, ಕೀಳರಿಮೆಯಿಂದ ಬಳಲುತ್ತಾ ಹೆಣ್ಣುತನ ಎಂಬ ಕಣ್ಕಟ್ಟಿನಿಂದ ತಮ್ಮಂತಹ ಹೆಣ್ಣು ಮಕ್ಕಳು ಬದುಕಿನ ಕುರಿತು ನೂರೆಂಟು ತೊಂದರೆಗಳನ್ನು, ನೋವುಗಳನ್ನು, ನಕಾರಾತ್ಮಕ ಭಾವಗಳನ್ನು ವ್ಯಕ್ತ ಪಡಿಸುತ್ತಾರೆ. ಗಂಡ ಮನೆ ಮತ್ತು ಮಕ್ಕಳಿಗೆ ಮಾಡಿ ಮಾಡಿ ನಾನು ನನ್ನ ಬದುಕನ್ನೇ ಸವೆಸಿದೆ ಎಂದು ಹೇಳುತ್ತಾರೆ ಮಾಡಿದ ಮನೆ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುತ್ತಾ ಇನ್ನಷ್ಟು ಮತ್ತಷ್ಟು ಉಜ್ಜುತ್ತಾ ಕಾಲ ಕಳೆದಿರುತ್ತಾಳೆ.ಅದರ ಬದಲಾಗಿ ಮನೆವಾರ್ತೆಯೇ ತಮ್ಮ ಉದ್ಯೋಗ ಎಂದು ನಂಬುವುದನ್ನು ನಿಲ್ಲಿಸಿ ತಮ್ಮ ಮನೆ ವಾರ್ತೆಯ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು.. ಮನೆ ಮಕ್ಕಳು ಕುಟುಂಬದ ಹೊರತಾಗಿಯೂ ತಮಗೆ ಒಂದು ಬದುಕಿದೆ ಎಂಬ ಅರಿವನ್ನು ಮೂಡಿಸಿಕೊಂಡು ಹಾಡು ಹೊಲಿಗೆ ಹಸೆ, ಕಂಪ್ಯೂಟರ್ ಕಲಿಕೆ ಚಿತ್ರಕಲೆ ಸಂಗೀತ ಸೌಂದರ್ಯವರ್ಧನ ಚಿಕಿತ್ಸೆಗಳು ಹೀಗೆ ಹತ್ತು ಹಲವು ಕಲಿಕೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ತಮ್ಮ ಬದುಕಿನಲ್ಲಿ ತಮಗಾಗಿ ತಾವೇ ಒಂದು ಸ್ಥಾನವನ್ನು ಕಲ್ಪಿಸಿಕೊಂಡು ಆ ಸ್ಥಾನದಲ್ಲಿ ಪಟ್ಟಾಗಿ ಕುಳಿತುಕೊಳ್ಳುವ ರೀತಿನಲ್ಲಿ ಕಾರ್ಯ ನಿರ್ವಹಿಸಿದ ಹೆಣ್ಣು ಮಕ್ಕಳು ಬದುಕಿನಲ್ಲಿ ಸಾಕಷ್ಟು ವಿಷಯಗಳಲ್ಲಿ ಸಾಧನೆ ಮಾಡಬಹುದು.ಪ್ರತಿ ಹೆಣ್ಣು ಮಗಳು ಕೂಡ ತಾನು ಕೇವಲ ಮಗಳು ಪತ್ನಿ ತಾಯಿ ಮಾತ್ರವಲ್ಲ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ಓರ್ವ ಹೆಣ್ಣುಮಗಳು ಸಮಾಜ ರಚನೆಯ ಭಾಗ ತಾನು ಎಂದು ಅರಿತುಕೊಳ್ಳಬೇಕು.ಪ್ರಸ್ತುತ ವ್ಯವಸ್ಥೆಯು ಹೆಣ್ಣು ಮಕ್ಕಳಿಗೆ ಒಂದು ಹೊರೆ ಎಂಬಂತಾದರೆ ಅದರಿಂದ ಹೊರಬರಲು ಉದ್ಯೋಗವನ್ನು ಜೀವನ ಯೋಜನೆಯ ಭಾಗವಾಗಿಸಿಕೊಂಡು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಮನೋರಂಜನೆಯ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾತಂತ್ರ್ಯ, ಸಾಮರ್ಥ್ಯ ಮತ್ತು ಆತ್ಮಸ್ಥೈರ್ಯವನ್ನು ಪಡೆದುಕೊಳ್ಳಬಹುದು.ಕೆಲವು ಹೆಣ್ಣು ಮಕ್ಕಳು ಉದ್ಯೋಗಗಳನ್ನು ಪಡೆದುಕೊಂಡರೂ ಅದಕ್ಕೆ ತಕ್ಕ ಹೊಸ ಜೀವನಯೋಜನೆಯನ್ನು ರೂಪಿಸುವುದಿಲ್ಲ. ಉದ್ಯೋಗಗಳು ತಮ್ಮ ಭವಿಷ್ಯದ ಬಾಗಿಲನ್ನು ತೆರೆದು ತನ್ನ ಉದ್ಯೋಗದ ಗಳಿಗೆ ಕುಟುಂಬದ ವೆಚ್ಚಕ್ಕೆ ನೆರವಾದಾಗ ಮಾತ್ರ ತಾನು ದುಡಿದದ್ದು ಸಾರ್ಥಕ ಎಂಬುದು ಹೆಣ್ಣು ಮಕ್ಕಳ ಮನಸ್ಥಿತಿ. ಯಾವುದೇ ವೃತ್ತಿ ಬಯಸುವ ಬದ್ಧತೆಗೆ ಬೇಕಾದ ಶಿಸ್ತು ಮತ್ತು ಪ್ರಯತ್ನಗಳನ್ನು ನೀಡಬಯಸುವ ಹೆಣ್ಣು ಮಕ್ಕಳು ಹೆಣ್ಣುತನ ಎಂಬ ಕಣ್ಕಟ್ಟನ್ನು ದೂರವಿರಿಸಬೇಕು.. ಆ ಹೆಣ್ಣುತನ ಎಂಬ ಕಣ್ಕಟ್ಟು ಆಕೆಯಲ್ಲಿ ಭಯವನ್ನು ಬಿತ್ತಬಹುದು ಪೂರ್ವಾಗ್ರಹಗಳನ್ನು ಹೇರಬಹುದು ಆಕೆಯಲ್ಲಿ ಹಿಂಜರಿಕೆಯನ್ನು ಉಂಟುಮಾಡಬಹುದು ಧಾರ್ಮಿಕ ಸಾಂಪ್ರದಾಯಿಕತೆಯ ಮುಖವಾಡ ಧರಿಸಿ ಪ್ರತಿರೋಧಗಳನ್ನು ಒಡ್ಡಬಹುದು.ಸಂಪ್ರದಾಯಬದ್ಧರಲ್ಲದ ಹೆಣ್ಣು ಮಕ್ಕಳಿಗೂ ಕೂಡ ಮನೆ ಬಿಟ್ಟು ದುಡಿಯಲು ಹೋಗುವುದೆಂದರೆ, ಗಂಡ ಮಕ್ಕಳನ್ನು ಕಡೆಗಣಿಸಿದಂತೆ ಎಂಬ ಭಾವ ಇರುತ್ತದೆ. ಒಂದು ವೇಳೆ ಮಗುವಿಗೆ ಅನಾರೋಗ್ಯವಾದರೆ, ಗಂಡನಿಗೆ ಆತನದ್ದೆ ಆದ ಸಮಸ್ಯೆಗಳು ಎದುರಾದರೆ ಸಮುದಾಯದಲ್ಲಿ ಆಕೆ ಗಂಡನನ್ನು ಕಡೆಗಣಿಸಿದ್ದೇ ಇದಕ್ಕೆ ಕಾರಣ ಎಂಬ ಭಾವ ಮೂಡುವಂತೆ  ಮಾಡುವ ಈ ಕಣ್ಕಟ್ಟು ಆಕೆಯ ಬೆಳವಣಿಗೆಗೆ ಅಡ್ಡಿ ಆತಂಕವನ್ನು ಉಂಟುಮಾಡುತ್ತದೆ ಎಂಬ ಅರಿವನ್ನು ಹೊಂದಿದ್ದರು.ನಿಜ ಹೆಣ್ಣು ಮಕ್ಕಳು ಹೋರಾಡಲು ಕಲಿಯಬೇಕು ಹೆಂಗಸಿನಂತೆ ಅಲ್ಲ ಬದಲಾಗಿ ಓರ್ವ ಮನುಷ್ಯಳಂತೆ. ಹೆಂಗಸರು ಅಂತಿಮವಾಗಿ ತಾವೇ ತಾವಾಗಿದ್ದಾಗ ಏನಾಗಿರುತ್ತಾರೆ ಎಂಬುದನ್ನು ಯಾರು ಬಲ್ಲರು? ಪ್ರೀತಿಯ ಒತ್ತಾಸೆಯನ್ನು ಕಳೆದುಕೊಳ್ಳದೆ ಅವರ ಬುದ್ಧಿವಂತಿಕೆಯು ಪೋಷಣೆ ಪಡೆದಾಗ ಅದು ಏನೆಲ್ಲಾ ಸಾಧನೆಗಳನ್ನು ಮಾಡುತ್ತದೆ ಎಂಬುದನ್ನು ಅರಿತವರಾರು? ಹೆಣ್ಣು ಮಕ್ಕಳ ಬದುಕು ಬದಲಾಗುತ್ತಿದೆ ಆಕೆ ತನ್ನನ್ನು ತಾನು ಅರಿತಂತೆ ಆಕೆಯಲ್ಲಿನ ಸಾಮರ್ಥ್ಯ ಒತ್ತಾಸೆ ಪ್ರೀತಿಗಳು ವೃದ್ಧಿಗೊಳ್ಳುತ್ತಿವೆ. ಆಕೆ ತನ್ನನ್ನು ಪ್ರೀತಿಸಿದಷ್ಟೇ ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತಿದೆ. ತನ್ನ ಕೆಲಸವನ್ನು ಹೆಂಗಸಾಗಿ ಆಕೆ ಅನುಭವಿಸುತ್ತಿದ್ದಂತೆಯೇ ಅದರ ಅನುಭವದ ಆಧಾರದ ಮೇಲೆ ಇತರರಿಗೆ ಮಾದರಿಯಾಗುತ್ತಿದ್ದಾಳೆ.ಏನಂತೀರಾ ಸ್ನೇಹಿತರೇ ವೀಣಾ ಹೇಮಂತ್ ಗೌಡ ಪಾಟೀಲ್

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್

ಮಹಿಳಾ ಸಂಗಾತಿ ಪ್ರೇಮಾ ಟಿ ಎಂ ಆರ್ ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ ಮಹಿಳಾ ದಿನಾಚರಣೆ ಹತ್ತಿರ ಬಂದಂತೆ ಎದೆ ಮಿಸುಗುತ್ತದೆ.. ಒಂದಷ್ಟು ಭಾಷಣ ಗಾಯನ ನರ್ತನ ಪಾರ್ಟಿಗಳಲ್ಲಿಯೇ  ಮುಗಿದು ಹೋಗುವ ದಿನವೇಕೋ ನೆಮ್ಮದಿ ಕೆಡಿಸುತ್ತದೆ. ಹೆಣ್ಣು ಸುಖವಾಗಿ ಬದುಕುತ್ತಿದ್ದಾಳೆ, ಯಂತ್ರಗಳ ಬಳಕೆಯಿಂದ ಅವಳ ಶ್ರಮ ಕಡಿಮೆಯಾಗಿದೆ, ಹಾಗೆ ಹೀಗೆ ಅಂತ ಉರುಹೊಡೆದ ಭಾಷಣ ಬಿಗಿವ ನಾವುಗಳು ನೋಡುವದು ನಮ್ಮ ಕಣ್ಣಳತೆಯಲ್ಲಿ ನಡೆವುದನ್ನಷ್ಟೇ .ನಿಜ ಅರ್ಬನ್  ಏರಿಯಾಗಳಲ್ಲಿ ಹೆಣ್ಣು ಆಜಾಶಕ್ಕೆ ಕೈಚಾಚಿ ಪೈಲಟ್ ಆಗಿ ಬಾಹ್ಯಾಕಾಶದಲ್ಲಿಯೂ ತನ್ನ ಕೌಶಲ್ಯ ಮೆರೆಯುವ ಮಟ್ಟಿಗೆ ಬೆಳೆದದ್ದು ಒಪ್ಪಿಕೊಳ್ಳಬೇಕಾದ ವಿಷಯವಾದರೂ, ಎಷ್ಟು ಪ್ರತಿಶತ ಎನ್ನುವದಿಲ್ಲಿ ಪ್ರಶ್ನೆ .ಇರಲಿಬಿಡಿ, ತೀರ ಹಿಂದುಳಿದ ಹಳ್ಳಿಗಳಲ್ಲಿ ಇಂದಿಗೂ ನೀ ಹೆಣ್ಣು ,ಇರುವಾಂಗೇ ಇರು, ಹೆಂಗಿರ್ಬೇಕೋ ಹಾಂಗೇ ಇರು ಎನ್ನುವ ಚೂಪು ಮೊನೆಯ ಮಾತುಗಳು ಅವಳೆದೆಯ ಚುಚ್ಚುವದು ಮಾಮೂಲು .ಹತ್ತು ದಾಟುವದೇ ತಡ ಎದೆಯ ಒಳ ಉಡುಪು ಬಿಗಿಗೊಳ್ಳತೊಡಗುತ್ತವೆ .ಬೆನ್ನು ಬಾಗಿಸಿ ಎದೆ ಹುದುಗಿಸಿ ನಡೆವಂತೆ ಮತ್ತೆ ಮತ್ತೆ ಕತ್ತಿ ಅಲುಗಿನ ಮಾತುಗಳನ್ನು ಎಳೆಕಂದಮ್ಮಗಳು ಸಹಿಸಬೇಕು .ಹೆಣ್ಣು ಬೆಳೆದಂತೆ ಅವಳು ಮನೆಯ ಮರ್ಯಾದೆಯಾಗಿ ಬದಲಾಗುವದು ವಿಪರ್ಯಾಸ . ಹೆಣ್ಣು ಕಂದಮ್ಮಗಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾದರೂ ಕೂಡ ಅದು ಸುದ್ದಿಯಾಗದಂತೆ ಹೆತ್ತವರೇ ಮುಖ ಮೈಮನಸ್ಸುಗಳ ಮೊಟಕಿ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಾರೆ. “ಮನೆ ಮರ್ಯಾದೆ ಕಳೆದೆಯಲ್ಲೇ ಯಾಕೆ ಹುಟ್ಟಿದೆ ನಮ್ಮ ಹೊಟ್ಟೆಯಲ್ಲಿ ” ಎಂದು ಯಾರದೋ ತಪ್ಪಿಗೆ ಅವಳ ಹುಟ್ಟನ್ನು ಹಳಿಯಲಾಗುತ್ತದೆ. ಒಳಗೊಳಗೇ ಹುದುಗಿ ಹೋಗುವ ಅಂಥ ಹೆಣ್ಣುಗಳ ಅಂತರಾತ್ಮದ ಗಾಯದ  ನೋವು  ಆಗದ ವೈರಿಗೂ ಬೇಡ. ಹತ್ತು ಕಳೆಯಿತೋ ಬಾಲ್ಯದ ಚೇಷ್ಟೆಗಳೆಲ್ಲ ಕಳೆದು ಹೆಣ್ಣು ಕಂದಮ್ಮಗಳು ಕಿರಿಕಿರಿ ಸಂಕೋಚ ವಿಸ್ಮಯ  ಆತಂಕದ ಜೊತೆಗೆ  ಒಳಹೊರಗೂ ವಿಲಕ್ಷಣ ಅನುಭವಗಳೊಂದಿಗೆ ತಮಗೆ ತಾವೇ ಅಪರಿಚಿತ ಲೋಕಕ್ಕೆ ಜಿಗಿದು ನಿಂತಂತೇ ಗಲಿಬಿಲಿಗೊಳ್ಳುವ ಹೊತ್ತು. ಎದೆ ಚಿಗುರತೊಡಗುತ್ತದೆ. ಮೊದಲಮುಟ್ಟು ಕಾಡಿದಷ್ಟು ಬೇರಾವುದೂ ಅವಳನ್ನು ಕಾಡಲಿಕ್ಕಿಲ್ಲ . ಇಂಥ ಹೊತ್ತಲ್ಲಿ ಹೆತ್ತವರ ಹಿತವಾದ ಆರೈಕೆ ಒಂದಷ್ಟು ಸಾಂತ್ವನ ತಿಳುವಳಿಕೆ ವಿಶ್ವಾಸವನ್ನು ತುಂಬುವದು ಅತ್ಯವಶ್ಯ . ಇಲ್ಲದಿದ್ದರೆ ತನ್ನದೇ ಮನೆಯಲ್ಲಿ ಅವಳು ಪರಿತ್ಯಕ್ತೆಯಾಗಿ ನಿಲ್ಲುತ್ತಾಳೆ.     ಜಗತ್ತಿನ ಬಹುತೇಕ ರಾಷ್ಟ್ರಗಳ ಹಳ್ಳಿಗಾಡುಗಳಲ್ಲಿ ಬದುಕುವ ಜನಾಂಗಗಳಲ್ಲಿ, ಕಾಮುಕರೆಂಬ ಕೆಟ್ಟ ಕ್ರಿಮಿಗಳು ಹುಟ್ಟಿಕೊಳ್ಳುವದಕ್ಕೆ, ಹೆಣ್ಣಿನ ಋತುಮತಿಯಾಗುವ ಕ್ರಿಯೆ ಹಾಗೂ ಬೆಳೆಯುವ ಎದೆಯೇ ಕಾರಣವೆಂದು ನಂಬಲಾಗುತ್ತದೆ . ದಕ್ಷಿಣ ಆಫ್ರಿಕಾದ ಕೆಮರೂನ್ ನಲ್ಲಿ, ಕಿಶೋರಿಯರ ಮುಟ್ಟು ಮುಚ್ಚಿಡುವದಕ್ಕಾಗಿಯೇ ಹೆಣ್ಣುಗಳು ಮೈನೆರೆವ ಮೊದಲು, ಅಥವಾ ಮೈನೆರೆದ ತಕ್ಷಣ ಬ್ರೀಸ್ಟ್ ಫ್ಲಾಟನಿಂಗ್ ಅಥವಾ ಬ್ರೀಸ್ಟ್ ಐರನಿಂಗ್ ಎನ್ನುವ ಅಸಾಧ್ಯ ನೋವು ಕೊಡುವ ಅಮಾನುಷ ಪದ್ಧತಿಯಿಂದ, ಅವರ ಚಿಗುರುವ ಎದೆಯನ್ನ ವಿರೂಪಗೊಳಿಸುವ ಪದ್ಧತಿಯೊಂದು ಇಂದಿಗೂ ಜಾರಿಯಲ್ಲಿದೆ ಅಂದರೆ ನೀವು ನಂಬಲೇಬೇಕು. ಯುನೈಟೆಡ್ ನೇಶನ್ಸ್ ಯಾವುದನ್ನು ಫೈವ್ ಫೊರಗೊಟನ್ ಕ್ರೈಮ್ಸ ಎಂದು ಕರೆಯುತ್ತದೆಯೋ ಅದರಲ್ಲಿಯೇ ಒಂದಾದ ಈ ಬ್ರೀಸ್ಟ ಐರನಿಂಗ್ ಗೆ ಪ್ರತಿ ನಾಲ್ಕರಲ್ಲಿ ಒಬ್ಬರಂತೆ ಅಲ್ಲಿ ಶಿಖಾರಿಗಳಾಗುತ್ತಿದ್ದಾರೆ. ಈ ಪದ್ಧತಿ ನಶಿಸುವದರ ಬದಲು ವೃದ್ಧಿಯಾಗುತ್ತಲೇ ಇದೆ. ಪುಟ್ಟಹೆಣ್ಣುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಈ ಕ್ರಿಯೆ ಅತ್ಯಂತ ಗಂಬೀರ ಪರಿಣಾಮವನ್ನು ಉಂಟುಮಾಡುತ್ತದೆ. ಒಬಿಯಾಮಾ ಮರ್ಸಿ ಎಂಬ ನೈಜೀರಿಯಾದ ಯುವ ವೈದೈ ಹೇಳುತ್ತಾಳೆ, “ಕೆಮರೂನ್ ನಲ್ಲಿ ಅದೆಷ್ಟೋ ಹುಡುಗಿಯರು ಈ ಎದೆ ಸಪಾಟು ಮಾಡುವ ಕ್ರಿಯೆಯ ಅಡ್ಡ ಪರಿಣಾಮಗಳಿಂದ ಬಳಲುತ್ತಿರುತ್ತಾರೆ . ಬರೀ ತಾತ್ಕಾಲಿಕವಾಗಲ್ಲ, ಕೆಲವೊಂದು ಪ್ರಕರಣಗಳಲ್ಲಿ  ಇದು ಶಾಶ್ವತವಾದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಎಷ್ಟೋ ಹುಡುಗಿಯರ ಸ್ಥನಗಳು ಸಂಪೂರ್ಣ ನಾಶವಾಗಿ ಮುಂದೆ ಅವರು ಹುಟ್ಟುವ ಮಕ್ಕಳಿಗೆ ಎದೆಯೂಡಲಾಗದೇ ಹಳಹಳಿಸುತ್ತಾರೆ .ಎದೆಯ ಜೀವಕೋಶಗಳು ಸುಟ್ಟು ವಿಕಲತೆಯನ್ನುಂಟುಮಾಡುತ್ತದೆ. ಕೆಲವರು ಖಿನ್ನತೆಗೆ ಒಳಗಾದರೆ ಇನ್ನು ಕೆಲವರು ಶಾಶ್ವತವಾಗಿ ಮಾನಸಿಕ ರೋಗಿಗಳಾಗಿಯೇ ಇದ್ದುಹೋಗುತ್ತಾರೆ .ಇನ್ನು ಕೆಲವು ಸಂದರ್ಭಗಲ್ಲಿ ಎದೆ ಬಾತು ಕೊಳೆತುಹೋದ ಉದಾಹರಣೆಗಳಿಗೂ ಕೊರತೆಯಿಲ್ಲ.  ಎದೆ ಸಪಾಟುಮಾಡುವಾಗ ಪೈಪಿನಂಥ ಉದ್ದದ ಕಲ್ಲುಗಳನ್ನು ಕಾಯಿಸಿ ಹೆಣ್ಣುಗಳ ಸ್ಥನಗಳನ್ನು ಜಜ್ಜಲಾಗುತ್ತದೆ ಅಥವಾ ಮೆರೆಯಲಾಗುತ್ತದೆ. ಕೆಲವೊಮ್ಮೆ ಕಟ್ಟಿಗೆ ಅಥವಾ ಕಬ್ಬಿಣದ ತುಂಡುಗಳನ್ನು ಬೆಂಕಿಗಿಟ್ಟು ಅದರಿಂದ ಸುಡಲಾಗುತ್ತದೆ. ಕೆಲವೊಮ್ಮೆ ಬಿಸಿ ಕೆಂಡಗಳು ಸುಟ್ಟತೆಂಗಿನ ಚಿಪ್ಪು ಸುಟ್ಟ ಸಾಣೆಕಲ್ಲುಗಳನ್ನು ಬಳಸಲಾಗುತ್ತದೆ.” ಎಂದು   “ಅದರಿಂದ ಅನುಭವಿಸುವ ನೋವು ಅಸಾಧ್ಯ. ಮಾತಿಗೆ  ನಿಲುಕುವದಿಲ್ಲ ಆ ನೋವು. ಅದರ ಜೊತೆಗೆ ನಮ್ಮನ್ನು ನಾವು ನೋಡಿಕೊಂಡರೆ ನಮಗೇ ಹೇಸಿಗೆ ಹುಟ್ಟುವಂತಿರುತ್ತವೆ ನಮ್ಮೆದೆಗಳು” ಎಂದು ಕೆಮರೂನಿನ ಎದೆ ಸಪಾಟು ಮಾಡಿಸಿಕೊಂಡ ಎಳೆಯ ಹೆಣ್ಣುಮಕ್ಕಳು ಅತೀವ ಸಂಕಟದಿಂದ ನುಡಿಯುತ್ತಾರೆ .ಒಂದು ದು:ಖ್ಖದಾಯಕ ವಿಷಯವೆಂದರೆ ಸ್ವತಹ ಹೆತ್ತ ತಾಯಂದಿರೇ ತಮ್ಮ ಮಕ್ಕಳ ಎದೆ ಸಪಾಟು ಮಾಡುವ ಕ್ರಿಯೆಗೆ ಸಂಪೂರ್ಣ ಸಹಮತ ತೋರಿ, ಅವರೇ ಮುಂದೆನಿಂತು ಮಕ್ಕಳ ಎದೆಯನ್ನು ಸುಡಿಸಿ ಮೆರೆಯಿಸಿ ಜಜ್ಜಿಸಿ ಆವರೆದೆಗಳನ್ನು ನಾಶಪಡಿಸುತ್ತಾರೆ. ನ್ಯೂಲೆ ಬ್ಲೆಸ್ಸಿಂಗ್ ಎಂಬ ಕೆಮರೂನಿನ ತಾಯಿಯೊಬ್ಬಳು ಹೇಳುವದೇನು ಗೊತ್ತಾ? “ಹೌದು, ನಾನು ನನ್ನ ಮಗಳಿಗೆ ಅದನ್ನು ಮಾಡಿದೆ .ನನಗೆ ನನ್ನದೇ ಕಾರಣಗಳಿದ್ದವು. ನನ್ನ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹಸಿಮಾಂಸದ ಥರ ನೋಡುತ್ತಾರೆ .ಅವಳೆದೆ ಒಂಚೂರು ಆಕಾರಗೊಳ್ಳುವದೇ ತಡ ಗಂಡಸರು ,ಪುಂಡ ಹುಡುಗರು ಹಸಿದ ತೋಳಗಳಂತೆ ಅವರ ಸುತ್ತ ಸುತ್ತುತ್ತಾರೆ. ಅವರನ್ನು ಹೊರಗೆ ಕಳಿಸುವದಕ್ಕೇ ಭಯವಾಗುತ್ತದೆ. ನನ್ನ ಮಗಳಿಗೆ ತಾನು ಓದಬೇಕು ವಿದ್ಯಾವಂತಳಾಗಬೇಕೆಂಬ ಆಸೆ. ಈಗವಳು ಭಯವಿಲ್ಲದೇ  ಅವಳ ಗುರಿ ಮುಟ್ಟಬಹುದು” ಎನ್ನುತ್ತ ತನ್ನ ಮಗಳ ಸಪಾಟಾದ ಎದೆಯನ್ನು ತೋರುತ್ತಾಳೆ. ಮತ್ತವಳು ಕಣ್ಣಲ್ಲಿ ನೀರು ತುಂಬಿಕೊಂಡು ನುಡಿಯುತ್ತಾಳೆ, “ಆದರೆ ಅದಕ್ಕಾಗಿ ನಾನು ನನ್ನ ಮಗಳ ದೈಹಿಕ ಆರೋಗ್ಯ ಹಾಗೂ ಸೌಂದರ್ಯವನ್ನು ಹಾಳುಗೆಡಹುವ ಒಪ್ಪಂದವನ್ನು ಮಾಡಿಕೊಂಡೆ. ಈಗ ನೋಡಿ ಅವಳು ಅಂದಗೆಟ್ಟಿದ್ದಾಳೆ .ಅದರರ್ಥ ಅವಳೀಗ ಸುರಕ್ಷಿತ .ಹೆಣ್ಣುಮಕ್ಕಳು ಅಸಾಧ್ಯ ನೋವಿಗೆ ವಿಲಗುಡುತ್ತ ತಮ್ಮೆದೆಯ ಅಸಹ್ಯ ಬದಲಾವಣೆಗೆ ಬೇಯುತ್ತ ತಮ್ಮ ತಾಯಂದಿರನ್ನು ಪ್ರಶ್ನಿಸಿದರೆ ಬರುವ ಉತ್ತರವೇನು ಗೊತ್ತಾ?”ನೀವು ಲೈಂಗಿಕ ದೌರ್ಜನ್ಯಕ್ಕೆ ಅತ್ಯಾಚಾರಕ್ಕೆ ಒಳಗಾಗದಿರಲೆಂದು ನಾವು ಇದನ್ನು ಮಾಡಬೇಕಾಗಿದೆ .ಹಾಗೇನಾದರೂ ನೀನು ಬಸುರಿಯಾದರೆ ಇಡೀ ಕುಟುಂಬದ ಘನತೆ ಕೀರ್ತಿ ಮಣ್ಣುಪಾಲಾಗಿ ಹೋಗುತ್ತದೆ”.  ಓ ದೇವ್ರೇ ಇದಕ್ಕಿಂತಲೂ ಎಚ್ಚಿನ ನರಕದರ್ಶನ ಬೇರೊಂದಿರಬಹುದೇ…    ಒಂದು ನೆನಪಿರಲಿ, ಈ ಎದೆ ಸಪಾಟು ಮಾಡುವ ಪದ್ಧತಿಯಲ್ಲಿ ಬಳಕೆಯಾಗುವದು ನುರಿತ ಸರ್ಜನ್ ಗಳ ವೈದ್ಯಕೀಯ ಕಿಟ್ ಗಳಲ್ಲ, ನೋವು ನಿವಾರಕ ಇಂಜಕ್ಷನ್ ಗಳಿಲ್ಲ , ಎಲ್ಲವೂ ಹಸಿಹಸಿ ಜೀವ ಸುಡುವ ಗಾಂವ್ಟಿ ಪದ್ಧತಿಗಳು. ಸಹಿಸುವ ಪುಟ್ಟ ಹೆಣ್ಣುಗಳ ಮನಸ್ಥಿತಿ ದೇಹಸ್ಥಿತಿಗಳನ್ನು ಊಹಿಸಬಲ್ಲಿರಾ?     ಭೂಮಿಯಮೇಲೆ ಹೆಣ್ಣುಗಳು ಕುಟುಂಬದ ಗೌರವ ಘನತೆ ಮರ್ಯಾದೆಗಳನ್ನು ಗುತ್ತಿಗೆ ಪಡೆದೇ ಹುಟ್ಟುತ್ತಾರೆ. ಅದನ್ನು ಹೊತ್ತುಕೊಂಡೇ ಬದುಕುತ್ತಾರೆ. ನಮ್ಮಲ್ಲೇನು ಕಡಿಮೆಯಿಲ್ಲ….‌ ಆಯುಧಗಳನ್ನು ಬಳಸೋದಿಲ್ಲ ಅಷ್ಟೇ… ಅದೆಂತ ಹಾಗೆ ಎದೆ ಮೀರಿಸ್ಕೊಂಡು ನಡ್ದಾಡ್ತೆ, ಅದೆಂತಕೆ ಹಾಂಗೆ ಗಲಗಲ ಅಲುಗಸ್ತಾ ತಿರ್ಗಾಡ್ತೆ ಎಡ್ನಾಡಿ, ಅದ್ನ ಸರಿ ಬಿಗ್ದು ಕಟ್ಕೊಂಬುಕೆ ಏನ್ ಧಾಡಿ,  ಆಯುಧಗಳಿಗಿಂತ ಹರಿತ ಮಾತುಗಳು ಚಿಗುರುವ ಎದೆಯನ್ನು ಜಜ್ಜಿ ಬಿಡುತ್ತವೆ. “ದೇವ್ರೆ ನನ್ನನ್ನು ಈ ನೆಲ ನುಂಗಬಾರದೇ..?” ಎಂದು ಅಮಾಯಕ ಜೀವಗಳು ನರಳುತ್ತವೆ.. ಹೊರುವ ಹೆರುವ ಮೈಯೊಳಗೆರಡು ಊಡುವ ಅಪ್ಪಿ ಎದೆಗೊತ್ತಿಕೊಳ್ಳುವ ವಾತ್ಸಲ್ಯದ ವೇದಗಳು.. ಆದರೆ ಅದನ್ನೋದುವ  ನೋಟ ಕೊಳಕು ಕೆಡುಕು ಕೊಂಕು ಕೆಣಕು ಕೀಸು ಅಣುಕು ಹುಳುಕು. ಅಯ್ಯೋ ಎಲ್ಲವೂ ಸೂಜಿ ಚುಚ್ಚಿದ ನೋವುಗಳು. ಎದೆ ಭಾವದಲ್ಲಿ ಸಾವಿರ ಸುಟ್ಟ ಬೊಬ್ಬೆಗಳು.. ಬೆಂದ ಹುಣ್ಣುಗಳು.. ಒಂದು ಹನಿ ಕಣ್ಣೀರು ಸಾಕೇ? ಒಂದು ದಿನದ ಆಚರಣೆ ತಂಪು ತಂದೀತೇ..? ಹಾಂ, ಲೋಕದ ಕಣ್ಣಿಗೆ ಹೆಣ್ಣು ಮಾಧುರ್ಯವೇ  ಇರಬಹುದು, ನಿಜದ ಕಣ್ಣಿಗೆ ಅವಳು ನೋವು ತುಂಬಿಕೊಳ್ಳಲೆಂದೇ ಹುಟ್ಟುವ ಪಾತ್ರೆಗಳು  ಅಥವಾ ಪಾತ್ರಗಳೇ… ? ಬಿಟ್ಟುಬಿಡು ದೇವರೇ….. ಮತ್ತೆ ಹುಟ್ಟಿಸಬೇಡ ಎನಬೇಡಿ. ನಮ್ಮ ಮೊರೆ ಮುಟ್ಟುವದಿಲ್ಲ ಅಲ್ಲಿಗೆ… ಮುಟ್ಟಿದರೆ ಈ ನೆಲ  ಸುಟ್ಟು ಬೂದಿಯಾಗಿಬಿಡಬಹುದು..‌ ಪಟವಾಗಿ ಪೂಜೆಗೊಳ್ಳುವ ಹೆಣ್ಣು ನಿತ್ಯ ಉಸಿರಿಗೆ ಮಿಸುಗುತ್ತಲೇ ಇದ್ದಾಳೆ. ಊದಿನಕಡ್ಡಿ ಕರ್ಪೂರದ ಆರತಿ ಬೇಡ. ನಮಗೂ ನೋವಾಗುತ್ತದೆ.. ಬದುಕಲು ಬಿಟ್ಟುಬಿಡಿ, ಅಷ್ಟು ಸಾಕು ಎಂಬ ಆಶಯಗಳೊಂದಿಗೆ……… ನಿಮ್ಮ ಪ್ರೇಮಾ ಟಿ ಎಂ ಆರ್                         ಪ್ರೇಮಾ ಟಿ ಎಮ್ ಆರ್

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್ Read Post »

ಇತರೆ

ಮಹಿಳಾದಿನದ ವಿಶೇಷ, ಲತಾ ಎ ಆರ್‌ ಬಾಳೆಹೊನ್ನೂರು

ಮಹಿಳಾದಿನದ ವಿಶೇಷ ಲತಾ ಎ ಆರ್‌ ಬಾಳೆಹೊನ್ನೂರು ದಿಟ್ಟ ಮಹಿಳೆ ತಂದೆ ತಾಯಿಯರ ಮುದ್ದಿನ ಮಗಳಿವಳುಅಣ್ಣಾ ಅಕ್ಕಾ ರ ಮುದ್ದಿನ ತಂಗಿಯಿವಳುಎಲ್ಲರ ಜೊತೆ ಸಮನಾಗಿ ಬೆರೆತವಳುಸಂತಸದ ಸೆಲೆ ಕುಟುಂಬಕ್ಕೆ ಕೊಟ್ಟವಳು ವಿದ್ಯೆಯನು ಚಂದದಿ ಶಾಲೆಯಲಿ ಕಲಿತವಳುಬದುಕಿಗೆ ಬಾಳಿನ ಬೆಳಕು ತಂದುಕೊಂಡವಳುದಿಟ್ಟ ಮಹಿಳೆಯಾಗಿ ಬದುಕು ಕಟ್ಟಿದವಳುಸಮಾಜಕ್ಕೆ ಸುಖದ ಹೊನಲು ಹರಿಸಿದವಳು ಏಳು ಬೀಳುಗಳ ಜೊತೆ ಸಾಗಿದವಳುಸುಖ ಸಂಸಾರದ ಸವಿ ಕಂಡವಳುಬಂದ ನೋವುಗಳ ಮೌನದಿ ಸಹಿಸಿದವಳುಮನೆ ಬೆಳಗುವ ಸಾತ್ವಿಕ ಮನದವಳು ಎಲ್ಲಾ ರಂಗದಲಿ ಸೈ ಎನಿಸಿದವಳುಲೋಕದ ಸೃಷ್ಟಿಗೆ ಕಾರಣ ಆದವಳುಎಲ್ಲರ ಮನ ಗೆದ್ದ ವಿನಯವಂತಳುಸೌಹೃದಯದ ಕರುಣಾಳು ಸಾಹಸಿ ಗುಣದವಳು ಡಾ.ಲತಾ ಎ.ಆರ್ ಬಾಳೆಹೊನ್ನೂರು

ಮಹಿಳಾದಿನದ ವಿಶೇಷ, ಲತಾ ಎ ಆರ್‌ ಬಾಳೆಹೊನ್ನೂರು Read Post »

ಇತರೆ

ಮಹಿಳಾದಿನದ ವಿಶೇಷ,ಜಯಶ್ರೀ ಭ. ಭಂಡಾರಿ 

ಮಹಿಳಾದಿನದ ವಿಶೇಷ ಜಯಶ್ರೀ ಭ. ಭಂಡಾರಿ  ವಿಶ್ವ ಮಹಿಳಾ ದಿನಾಚರಣೆ ವಿಶೇಷತೆ. ನಾರಿ ಹಿ ಸಾರಿ ಕಿ ಹೈ.ಸಾರಿ‌ ಹಿ ನಾರಿ ಕಿ ಹೈ.“ಎಲ್ಲವೂ ನಾರಿಯೇ. ನಾರಿಯೇ ಎಲ್ಲಾ’” ಮಾತೃದೇವೋ ಭವ ಪೂಜ್ಯತೆ ಪಡೆದವಳು. ಎಲ್ಲ ಕಡೆ ತಾನಿರಲಾಗುವುದಿಲ್ಲವೆಂದೇ ಪ್ರತಿ ಮನೆಯಲಿ ಒಬ್ಬ ತಾಯಿಯನ್ನು ದೇವರು ಸೃಷ್ಟಿ ಮಾಡಿದನಂತೆ. ತಾಯಿಯ ಎದೆ ಹಾಲೆಂಬ ಬಿಳಿ ಮಸಿ  ಮಗುವಿನ  ಭವಿಷ್ಯ ರೂಪಿಸುತ್ತದೆ. ಕಾರಣ‌ ತಾಯಿ ಹಾಲೂಡಿಸುವಾಗ ” ಈ‌ ನನ್ನ ಕಂದ ಜಗತ್ತನ್ನೇ ಗೆಲ್ಲುವ ಬಲಶಾಲಿಯಾಗಲಿ ” ಎಂದು ಮಮತೆ ತುಂಬಿ ಹಾರೈಸಿ ಹರಸುವಳು. “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ  ಗರಿಯಸಿ”  ಎಂದರೆ ಹೆತ್ತ‌ ತಾಯಿ,ಹೊತ್ತ ಭೂಮಿ ಇವೆರಡೂ ಸ್ವರ್ಗಕ್ಕಿಂತಲೂ ಮಿಗಿಲು. ಇವರಿಬ್ಬರ ಋಣ ತೀರಿಸಲಾಗದು. ತಾಯಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತಾಯಿಯೆಂಬ ಮಹಿಳೆಗೂ ಒಂದು ದಿನವಿದೆ. ಅದೆಂದರೆ ” ವಿಶ್ವ ಮಹಿಳಾ ದಿನಾಚರಣೆ”. ವಿಶ್ವದೆಲ್ಲೆಡೆ ಸಂಭ್ರಮದಿಂದ. ಆಚರಿಸಲಾಗುತ್ತದೆ   1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ತಮ್ಮ ಹಕ್ಕುಗಳನ್ನು  ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು. 1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು. ಸಬಲತೆ ಅಥವಾ ಸಶಕ್ತತೆ ಎಂಬ ಪರಿಕಲ್ಪನೆಯು ಅಧಿಕಾರ ಹೊಂದುವುದು ಮತ್ತು ಶಕ್ತಿಯುತರಾಗುವುದುನ್ನು ಸೂಚಿಸುತ್ತದೆ. ಸಬಲತೆ ಎನ್ನುವುದು ಸ್ತ್ರೀ-ಪುರು‍ಷರಿಬ್ಬರಿಗೂ ಸಮಾಜದಲ್ಲಿ ಬದುಕಲು ಬೇಕಾದ ಶಕ್ತಿ. ಒಬ್ಬ ಮಹಿಳೆಯು ಶಕ್ತಿವಂತಳಾಗಿ, ಸ್ವತಂತ್ರವಾಗಿ ತನ್ನ ಇಚ್ಛೆಯಂತೆ ಸ್ವಾಲಂಬಿಯಾಗಿ ಬಾಳುವ ಸ್ಥಿಯನ್ನು ಸಾಮಾನ್ಯ ಅದನ್ನು ಸಬಲತೆ ಎನ್ನಬಹುದು. ಒಬ್ಬ ಮಹಿಳೆ ತನ್ನ ಜೀವನದ ಬಗ್ಗೆ ಪರಿಪೊರ್ಣ ಜ್ಞಾನವನ್ನು ಹೊಂದುವುದು, ತನ್ನ ಜೀವನದಬಗ್ಗೆ ನಿರ್ಣಯ ಹಾಗೂ ತೀರ್ಮಾನಗಳನ್ನು ಕೈಗೊಲಳ್ಳುವ ಸ್ವಾತಂತ್ರ್ಯ ಹೊಂದುವುದು, ಅಧಿಕಾರ ಹಾಗೂ ಸಂಪನ್ಮೂಲಗಳನ್ನು ಬಳಸಿಕೂಳ್ಳುವ ಅವಕಾಶಗಳನ್ನು ಹೊಂದುವುದು. ಯಾವುದೇರೀತಿಯ ಅಸಮಾನತೆ,ಶೋಷಣೆಗಳಿಗೆ ಒಳಗಾಗದೆ ಶಿಕಣ, ಉದ್ಯೋಗ, ವಿವಾಹ, ಜೀವನ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳನ್ನು ಹೊಂದುವುದು. ಸಾಮಾಜಿಕ ಚಾಲನೆ, ರಾಜಕೀಯ ಮತ್ತು ಆಡಳಿತದಲ್ಲಿ ಪಾಲ್ಗೋಳ್ಳುವಿಕೆ ಇಂತಹ ಅಂಶಗಳ ಬಗ್ಗೆ ಸ್ವತಂತ್ರ್ಯ ಹೊಂದಿ ಸ್ವಾಭಿಮಾನಿಯಾಗಿ ಅತ್ಮ ವಿಸ್ವಾಸದಿಂದ ಬಾಳುವಶಕ್ತಿಯೇ ಮಹಿಳಾ ಸಬಲತೆ. ಮಹಿಳಾ ಸಬಲತೆಯು ಮೂಲಭೂತವಾಗಿ ಮಹಿಳೆಯರ ಮಾನಸಿಕ ಸಬಲತೆಯೂಗಿದ್ದು ಅವರು ಪ್ರಜ್ನಾಪೂರ್ವಕವಾಗಿ ಶಕ್ತಿ ವಂತರಾಗುವ ಸ್ಥಿತಿ. ಮಹಿಳೆಯರ ಯೋಚನೆ, ಶಕ್ತಿ,ಸಾಮರ್ಥ್ಯ, ಅರಿವು, ಅಭಿವ್ಯಕ್ತಿ, ಆರೋಗ್ಯ, ನಿರ್ಣಯ, ಆತ್ಮವಿಶ್ವಾಸ,ಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಚಾಲನೆಗಳಿಂದ ಹಂತ ಹಂತವಾಗಿ ಶಕ್ತಿವಂತಳಾಗಿ, ಸ್ವಾಲಂಬಿಯಾಗಿ ವಿಕಾಸವಾಗುವ ಕ್ರಿಯೆಯೇ ಸಬಲತೆ. ಮಹಿಳಾ ಸಬಲತೆಯು ಬಹು ಆಯಾಮಗಳ ಪ್ರಕ್ರಿಯೆಯಾಗಿದ್ದು ವ್ಯಕ್ತಿಗತವಾಗಿ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಮೂಡಿಬರುವಂತಹದ್ದು. ವ್ಯಕ್ತಿತ್ವದೂದಿಂಗೆ ಮಹಿಳೆಯು ತನ್ನನ್ನು ಗುರುತಿಸಿಕೂಳ್ಳುವುದು, ತನ್ನ ಜೀವನದ ಬಗ್ಗೆ ಪೂರ್ಣ ಅಧಿಕಾರ ಹೊಂದುವ ಸ್ಥಿತಿ. ಪುರುಷರಿಗೆ ಸರಿಸಮಾನವಾಗಿ ಸ್ಥಾನ ಮಾನ, ವ್ಯಕ್ತಿಗೌರವ ಮತ್ತು ಘನತೆ ಹೊಂದುವುದು. ಸಾಮಾಜಿಕ ಚಾಲನೆ,ಆರ್ಥಿಕ ಸ್ವಾವಲಂಬನೆ, ಹಕ್ಕುಗಳ ಬಗ್ಗೆ ಅರಿವು, ಆರೋಗ್ಯಸೇವೆಗಳು ಮತ್ತು ಸಂಪನ್ಮೂಲಗಳ ಮೇಲಿನ ಒಡೆತನ, ಆರ್ಥಿಕ ಚಟುವಟಿಕೆಗಳು ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಆತ್ಮವಿಶ್ವಾಸದಿಂದ ಸಶಕ್ತವಾಗಿ ಬಾಳಬಹುದು.     ಮಹಿಳಾ ಸಬಲೀಕರಣದ ಉದ್ದೇಶಗಳು. ೧. ಸಮಾಜದಲ್ಲಿ ಆಚರಣೆಯಲ್ಲಿರುವ ಲಿಂಗ ತಾರತಮ್ಯವನ್ನು ತೊಡೆದುಹಾಕಿಮಹಿಳೆಯರ ಘನತೆ, ಗೌರವ ಹಾಗೂ ಸಾಮಾಜಿಕಸ್ಥಾನ ಮಾನಗಳನ್ನು ಉನ್ನತಿಗೊಳಿಸುವುದು. ೨. ಮಹಿಳೆಯರಲ್ಲಿ ಸುಪ್ತವಾಗಿರುವ ಅಪೂರ್ವ ಸಾಮರ್ಥ್ಯಗಳನ್ನು ಗುರ್ತಿಸಿ ವೃದ್ಥಿಗೂಳಿಸಿ ಅವರು ಬದಲಾವಣೆಯ ನಿಯೋಗಿಗಳಾಗಿ ರೂಪುಗೊಳ್ಳುವಂತೆ ಆತ್ಮವಿಶ್ವಾಸ ಮೂಡಿಸುವುದು. ೩. ಮಹಿಳೆಯರು ತಮ್ಮ್ ಅಭಿವೃದ್ಧಿಗೆ ಅವಕಾಶಗಳನ್ನು ಗುರುತಿಸಿಕೊಂಡು ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡುವುದು. ೪. ಮನೆ ಹಾಗು ಸಮುದಾಯದಲ್ಲಿ ಲಭ್ಯವಿರುವ ವಿವಿಧ ರೀತಿಯ ಸಂಪನ್ಮೂಲಗಳ ಮೇಲೆ ಅಧಿಕರ ಹೊಂದುವುದು ಹಾಗೂ ಅವುಗಳನ್ನು ಬಳಸಿಕೊಳ್ಳು ತಿಳಿವಳಿಕೆಮತ್ತು ತಂತ್ರಗಳನ್ನ್ನು ಬೆಳೆಸುವುದು. ೫. ಮಹಿಳೆಯರ ಸಂತಾನೋತ್ಪತಿ ಆರೋಗ್ಯ, ಶಿಶು ಜನನ ಮತ್ತು ಮಕ್ಕಳ ಪಾಲನೆಗಳ ಬಗ್ಗೆ ಅರಿವು ನೀಡುವುದು. ೬. ಅಸಮಾನತೆ, ಹಸಿವು, ಶೋಷಣೆ, ಹಿಂಸೆ ಹಾಗೂ ನಿಂದನೆಗಳ ವಿರುದ್ದ ಜಾಗೃತರಾಗಿ ಸಮಾನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಸಂಘಟನಾತ್ಮಕ ಹೋರಾಟ ಮಾಡುವ ಆತ್ಮವಿಶ್ವಾಸ ಬೆಳೆಸುವುದು . ೭. ಹಕ್ಕುಗಳು ಹಾಗೂ ಅಭಿವೃದ್ಧಿಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದು. ೮. ಮಹಿಳೆಯರಲ್ಲಿ ವ್ಯಕ್ತಿತ್ವ ವಿಕಾಸದೂಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುವುದು. ೯. ಮಹಿಳೆಯರಲ್ಲಿ ತನ್ನ ಹಾಗೂ ಕುಟುಂಬದ ಶೈಕ್ಷಣಿಕ, ಆರೋಗ್ಯ, ಆರ್ಥಿಕ ವಿಷಯಗಳಲ್ಲಿ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ, ಜವಾಬ್ದಾರಿ ಹೊರುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸುವುದು. ಆದರೆ ಇಂದು ಸಮಾಜದಲ್ಲಿ ಮಹಿಳೆಯ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಾ ಸಾಗಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಯಾವ ದೇಶದಲ್ಲಿ ಸ್ತ್ರೀಯರಿಗೆ ಅತ್ಯುನ್ನತ ಸ್ಥಾನ,ಮಾನ ಗೌರವ ಇರುವುದೊ ಆ ದೇಶ ಮುಂದುವರಿದ ದೇಶವಾಗಿರುತ್ತದೆ. “ಭೇಟಿ ಬಚಾವೋ ,ಭೇಟಿ ಪಡಾವೋ”ಸದಾ ಎಲ್ಲರ ಮನದಲ್ಲಿ ಅನುರಣಿಸಲಿ. ಜೋಗುಳ ಹಾಡಿ ಬೆಳೆಸಿದ ತಾಯಿಯನ್ನು ಸದಾ ಸ್ಮರಿಸೋಣ. ಇಳೆಯ ಕಳೆ ಹೆಚ್ಚಿಸುವ ಮಹಿಳೆ ಸದಾ ಸಂತಸದಿಂದ ಬದುಕಲಿ.  ಅವಳ ನೆರಳಿನಲ್ಲಿ ನಾವೆಲ್ಲ ಅನುಗಾಲ ಸುಖವಾಗಿರೋಣ.  ಜಯಶ್ರೀ ಭ. ಭಂಡಾರಿ  

ಮಹಿಳಾದಿನದ ವಿಶೇಷ,ಜಯಶ್ರೀ ಭ. ಭಂಡಾರಿ  Read Post »

ಇತರೆ

ಮಹಿಳಾದಿನದ ವಿಶೇಷ, ಶ್ರೀದೇವಿ. ಮ. ಗುಮ್ಮಗೋಳ

ಮಹಿಳಾದಿನದ ವಿಶೇಷ ಶ್ರೀದೇವಿ. ಮ. ಗುಮ್ಮಗೋಳ ಮಾನಿನಿಯ ಮನ ಮಾರಿಯೆಂದರುಮಾಯಾಂಗನಿ ಎಂದು ಮೊದಲಿಸಿದರೂ….ಅರಿವಿಲ್ಲದೆ ಅದೇ ಮಾಯಾಜಾಲದಲಿಬಂದಿಯಾದರೂ ಆ ಚಕ್ರವ್ಯೂಹ ಭೇದಿಸಿದಳು ನೀನು… ಬಾಯಬಡಿಕಿ ಎಂದರುಎಲ್ಲ ತಿಳಿದ ಮಳ್ಳಿ ಎಂದರೂ….ಹೊರ ಪ್ರಪಂಚದಲ್ಲಿದ್ದುಏನೂ ಅರಿದ ಕಪ್ಪೆಯಂತಿದ್ದವಳು….ಸಂಸಾರವೆಂಬ ಬಾವಿಯೊಳಗೆಎಲ್ಲವ ಅರಿತು ಮೌನವಾದವಳು ನೀನು… ಬುದ್ದಿ ಮೊನಕಾಲ ಕೆಳಗೆಂದರುಮತಿಹೀನಳೆಂದರೂ…ದೇಶದ ಚುಕ್ಕಾಣಿ ಹಿಡಿದವಳು ನೀನು…ದೇಶದ ಚಿತ್ತ ಹರಿಸಿ ವಿತ್ತ ಓದಿದವಳು ನೀನು….. ಬಜಾರಿ ಎಂದರೂಹೆಮ್ಮಾರಿ ಎಂದರೂ…..ಕಟ್ಟಳೆಗಳ ಗೆರೆ ಎಳೆದರೂ…ಇನಿಯನ ಬರುವಿಗಾಗಿ ಶಬರಿಯಂತೆ ಕಾದವಳು ನೀನು….ದೇಶಭಕ್ತಿ, ದೈವಭಕ್ತಿ ಪ್ರೇಮಭಕ್ತಿಯ ಮೆರೆದು‌ ಸ್ಪುಟವಾದವಳು ನೀನು….ಆಟ, ಓಟ, ಪಾಠ ಎಲ್ಲಂದರಲ್ಲೂ ಸೈ ಎನಸಿಇತಿಹಾಸ ಪುಟವಾದವಳು ನೀನು… ಮನೆಗೆ ಭಾರವೆಂದರೂ…ಇದಿಯಾದವಳೆಂದರೂ…ಪ್ರೀತಿ ಅಕ್ಕರೆಯ ತೋರಿ ಸಾಕಿ ಸಲುಹಿದಮಗನೇ ಬೆನ್ನು ತಿರುಗಿಸಿದಾಗಹೆತ್ತವರನ್ನೆ ದೂಡಿ ಬಿಸಾಕಿದಾಗಹೆಗಲು ಕೊಟ್ಟವಳು ನೀನು…ಅಕ್ಕರೆಯಿಂದ ಆಸರೆಯಾಗಿ ಸಲುಹಿದವಳು ನೀನು..ಕಡೆಗೆ ಸತ್ತಾಗ ಅದೇ ಜೀವಗಳಿಗೆ ಅಳುತಹಿಡಿ ಮಣ್ಣು ಹಾಕಿದವಳು ನೀನು.. ಅಬಲೆಯೆಂದರೂ‌‌….ಮೂಲ ಹುಡಕಬೇಡವೆಂದರೂ…ಮಾನಿನಿ ನಿನ್ನ ಬಾಳಲ್ಲಿಮಾಗಿ ಹಣ್ಣಾದವಳು ನೀನು…ಬಾಗಿ ಸಣ್ಣಾದವಳು ನೀನು…ತೂಗಿ ಹೊನ್ನಾದವಳು ನೀನು…ತನ್ನತನವ ತೊರೆದುಇತರರಿಗಾಗಿ ಬಾಳಿದವಳು ನೀನು…ಕೊನೆಗೆ ನಿನ್ನ ಅಸ್ತಿತ್ವ ನೀನೆ ಹುಡುಕುತಮಣ್ಣಾದವಳು ನೀನು…. ಶ್ರೀದೇವಿ. ಮ. ಗುಮ್ಮಗೋಳ   ಶ್ರೀದೇವಿ. ಮ. ಗುಮ್ಮಗೋಳ

ಮಹಿಳಾದಿನದ ವಿಶೇಷ, ಶ್ರೀದೇವಿ. ಮ. ಗುಮ್ಮಗೋಳ Read Post »

You cannot copy content of this page

Scroll to Top