ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ

ವಿಶೇಷ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ “ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?-ಬಸವಣ್ಣನವರ ದೃಷ್ಟಿಯಲ್ಲಿ “”ನೈಜ ಶೃಂಗಾರ””“ನೀರಿಂಗೆ ನೈದಿಲೆಯೆ ಶೃಂಗಾರಸಮುದ್ರಕ್ಕೆ ತೆರೆಯೆ ಶೃಂಗಾರನಾರಿಗೆ ಗುಣವೆ ಶೃಂಗಾರಗಗನಕ್ಕೆ ಚಂದ್ರಮನೆ ಶೃಂಗಾರನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಬಾಹ್ಯ ಸೌಂದರ್ಯಕ್ಕೆ ಮಾರುಹೋಗುವ ಇಂದಿನ ಜಗತ್ತಿನಲ್ಲಿ ‘ನೈಜ ಶೃಂಗಾರ’ ಅಥವಾ ನೈಜ ಸೌಂದರ್ಯ ಎಂದರೇನು ಎಂಬುದನ್ನು ವಿಶ್ವಗುರು ಬಸವಣ್ಣನವರು ಅತ್ಯಂತ ಸರಳ ಉದಾಹರಣೆಗಳ ಮೂಲಕ ಈ ವಚನದಲ್ಲಿ ಬಿಡಿಸಿಟ್ಟಿದ್ದಾರೆ. ಪ್ರಕೃತಿಯ ಸಹಜ ಗುಣಗಳನ್ನು ಲೌಕಿಕ ಬದುಕಿಗೆ ಹಾಗೂ ಆಧ್ಯಾತ್ಮಿಕ ಉನ್ನತಿಗೆ ಸಮೀಕರಿಸುವ ಅವರ ದೃಷ್ಟಿಕೋನ ಸಾರ್ವಕಾಲಿಕವಾದುದು.ಲೌಕಿಕ ಜಗತ್ತಿಗೆ ಪೂರಕವಾದ ಅರ್ಥವನ್ನು ನೋಡುವುದಾದರೆ,ಲೌಕಿಕ ಅಥವಾ ಭೌತಿಕ ಜಗತ್ತಿನಲ್ಲಿ ನಾವು ದಿನನಿತ್ಯ ನೋಡುವುದೆಲ್ಲವೂ ಬಾಹ್ಯ ಆಕರ್ಷಣೆಗಳನ್ನೇ. ಆದರೆ ಅಪ್ಪ ಬಸವಣ್ಣನವರು ನೈಜ ಶೃಂಗಾರವು ಅದರ ಅಂತರ್ಗತ ಗುಣದಲ್ಲಿದೆ ಎನ್ನುತ್ತಾರೆ. ಕೇವಲ ನೀರಿದ್ದರೆ ಸಾಲದು, ಅದರಲ್ಲಿ ಅರಳುವ ನೈದಿಲೆ  ಆ ನೀರಿಗೆ ದೈವಿಕ ಸೌಂದರ್ಯವನ್ನು ನೀಡುತ್ತದೆ. ಅದೇ ರೀತಿಸಮುದ್ರಕ್ಕೆ ಅಲೆಯು ಸೌಂದರ್ಯವನ್ನು ನೀಡುತ್ತದೆ.ನಿಶ್ಚಲವಾಗಿ ನಿಂತ ನೀರು ಸಮುದ್ರವೆನಿಸದು. ನಿರಂತರವಾಗಿ ಏರಿಳಿಯುವ ಅಲೆಗಳೇ ಸಮುದ್ರದ ಜೀವಂತಿಕೆ ಮತ್ತು ಶೃಂಗಾರ. ನಮ್ಮ ಬದುಕಿನ ಏಳುಬೀಳುಗಳೂ ಸಹ ಬದುಕಿನ ಜೀವಂತಿಕೆಯನ್ನು ತೋರ್ಪಡಿಸುತ್ತವೆ.ಹಾಗೆಯೇ ..ನಾರಿಗೆ ಗುಣವೇ ಶೃಂಗಾರ: ಸಮಾಜದಲ್ಲಿ ಹೆಣ್ಣನ್ನು ಕೇವಲ ದೈಹಿಕ ಸೌಂದರ್ಯದ ತಕ್ಕಡಿಯಲ್ಲಿ ಅಳೆಯುವ ಕಾಲದಲ್ಲಿ, ಬಸವಣ್ಣನವರು ಹೆಣ್ಣಿಗೆ ಆಕೆಯ ‘ಸದ್ಗುಣ, ವಿವೇಕ ಮತ್ತು ನಡತೆಯೇ’ ನಿಜವಾದ ಶೃಂಗಾರ ಎಂದರು. ಬಾಹ್ಯ ಆಭರಣಗಳು ಕ್ಷಣಿಕ, ಆದರೆ ಆಕೆಯ ಉದಾತ್ತ ಗುಣಗಳು ಇಡೀ ಕುಟುಂಬ ಮತ್ತು ಸಮಾಜವನ್ನು ಬೆಳಗುತ್ತವೆ. ಇದು ಇಂದಿನ ಆಧುನಿಕ ಜಗತ್ತಿನ ಸ್ತ್ರೀ ಸಬಲೀಕರಣಕ್ಕೂ ಅತ್ಯಂತ ಪ್ರಸ್ತುತವಾದ ವಿಚಾರವಾಗಿದೆ.ಗಗನಕ್ಕೆ ಚಂದ್ರಮನೇ ಶೃಂಗಾರ ಅಂತ ನೋಡಿದಾಗ ..ವಿಶಾಲವಾದ ಕತ್ತಲ ಆಕಾಶಕ್ಕೆ ಕೇವಲ ನಕ್ಷತ್ರಗಳಿಗಿಂತ ಏಕಾಂಗಿಯಾಗಿ ನಿಂತು ತಂಪು ಬೆಳಕನ್ನು ನೀಡುವ ಚಂದ್ರನೇ ನಿಜವಾದ ಆಭರಣ.ಆಧ್ಯಾತ್ಮಿಕವಾದ  ಅರ್ಥಾನುಸಂಧಾನವನ್ನು  ನೋಡುವುದಾದರೆ,ವಚನದ ಕೊನೆಯ ಸಾಲಿನಲ್ಲಿ ಬಸವಣ್ಣನವರು ಲೌಕಿಕತೆಯಿಂದ ಆಧ್ಯಾತ್ಮದ ಅತ್ಯುನ್ನತ ಶಿಖರಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. “ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೆ ಶೃಂಗಾರ” ಎನ್ನುವ ಮೂಲಕ ಶರಣರ ನಿಜವಾದ ಸೌಂದರ್ಯವನ್ನು ವ್ಯಾಖ್ಯಾನಿಸುತ್ತಾರೆ.ನೊಸಲ ವಿಭೂತಿ ಎಂದು… ಆಧ್ಯಾತ್ಮಿಕವಾಗಿ ವಿಭೂತಿ ಎಂದರೆ ಕೇವಲ ಬೂದಿಯಲ್ಲ. ಅದು ‘ಅಹಂಕಾರದ ಭಸ್ಮ’. ದೇಹವು ಒಂದು ದಿನ ಬೂದಿಯಾಗಿಯೇ ತೀರುತ್ತದೆ ಎಂಬ ನಶ್ವರತೆಯ ಅರಿವು.ಶರಣನಾದವನಿಗೆ ಐಹಿಕ ಭೋಗಗಳು, ಅಧಿಕಾರ, ಸಂಪತ್ತು ಯಾವುದೂ ಆಭರಣಗಳಲ್ಲ. ತನುವನ್ನು ದಂಡಿಸಿ, ಮನದ ಕಲ್ಮಷವನ್ನು ಸುಟ್ಟು, ಅಹಂ ಭಾವವನ್ನು ಭಸ್ಮ ಮಾಡಿ ಹಣೆಯ ಮೇಲೆ ಧರಿಸುವ ವಿಭೂತಿಯೇ ಆತನ ಜ್ಞಾನದ ಸಂಕೇತ.ಅಹಂಕಾರ ಅಳಿದು, ದೈವತ್ವವನ್ನು ಮೈಗೂಡಿಸಿಕೊಂಡ ಶರಣನ ಮುಖದಲ್ಲಿ ಮೂಡುವ ಶಾಂತಿ ಮತ್ತು ಜ್ಞಾನದ ತೇಜಸ್ಸೇ ಆತನ ನಿಜವಾದ ಶೃಂಗಾರವೆಂದು ಅರುಹಿದ್ದಾರೆ.ಬಸವಣ್ಣನವರ ಈ ವಚನವು ನಮಗೆ ಬದುಕಿನ ದಾರಿದೀಪವಾಗಿದೆ. ಕೇವಲ ತೋರ್ಪಡಿಕೆಯ, ಕೃತಕವಾದ ಅಲಂಕಾರಗಳ ಬೆನ್ನತ್ತಿ ಹೋಗುತ್ತಿರುವ ಇಂದಿನ ಸಮಾಜಕ್ಕೆ, ತನು-ಮನಗಳ ಶುದ್ಧತೆ ಹಾಗೂ ಸದ್ಗುಣಗಳೇ ನಿಜವಾದ ಆಸ್ತಿ ಎಂಬುದನ್ನು ಇದು ನೆನಪಿಸುತ್ತದೆ. ಪ್ರಕೃತಿಯಲ್ಲಿ ಹೇಗೆ ಸಹಜತೆ ಸೌಂದರ್ಯವೋ, ಹಾಗೆಯೇ ಮನುಷ್ಯನ ಬದುಕಿನಲ್ಲಿ ಸದ್ಗುಣ ಮತ್ತು ದೈವಿಕ ಭಕ್ತಿಯೇ ನಿಜವಾದ ಶೃಂಗಾರ ಎಂಬುದನ್ನು ಅರಿತು ಬಾಳಬೇಕಿದೆ.ಅದೇ ರೀತಿ ಇಂದಿನ ‘ಇನ್‌ಸ್ಟಾಗ್ರಾಮ್’ ಮತ್ತು ‘ಫಿಲ್ಟರ್’ಗಳ ಜಗತ್ತಿನಲ್ಲಿ ಯುವ ಪೀಳಿಗೆಗೆ ಸೌಂದರ್ಯ ಎಂದರೆ ಕೇವಲ ಬಾಹ್ಯ ರೂಪ, ಬ್ರಾಂಡೆಡ್ ಬಟ್ಟೆಗಳು ಮತ್ತು ಫೋಟೋಗಳಿಗೆ ಸಿಗುವ ಲೈಕ್ಸ್‌ಗಳಷ್ಟೇ ಆಗಿಬಿಟ್ಟಿದೆ. ಕೃತಕ ಸೌಂದರ್ಯದ ಬೆನ್ನತ್ತಿ ಮುಖಕ್ಕೆ ಮೇಕಪ್ ಮಾಡಿಕೊಳ್ಳುವ ಉತ್ಸಾಹದಲ್ಲಿ, ನಾವು ನಮ್ಮ ಮನಸ್ಸನ್ನು ಸಜ್ಜುಗೊಳಿಸಲು ಮರೆಯುತ್ತಿದ್ದೇವೆ.ಈ ಹೊತ್ತಿನಲ್ಲಿ ಬಸವಣ್ಣನವರ ಈ ವಚನ ಯುವಜನತೆಗೆ ಒಂದು ದಿವ್ಯೌಷಧವೆಂದು ಹೇಳಬಹುದು.ಪ್ರೊಫೈಲ್ ಅಂದಕ್ಕಿಂತ ಕ್ಯಾರೆಕ್ಟರ್ ಮುಖ್ಯವಾದುದು… ಸಾಮಾಜಿಕ ಜಾಲತಾಣದ ಪ್ರೊಫೈಲ್ ಸುಂದರವಾಗಿ ಕಾಣಿಸುವುದಕ್ಕಿಂತ, ನಮ್ಮ ವ್ಯಕ್ತಿತ್ವ  ಸುಂದರವಾಗಿರಬೇಕು. ಹೆಣ್ಣಾಗಲಿ, ಗಂಡಾಗಲಿ ಅವರ ನಡತೆ ಮತ್ತು ಸದ್ಗುಣಗಳೇ ನಿಜವಾದ ಆಕರ್ಷಣೆಯಾಗಿರುತ್ತವೆ.ಸವಾಲುಗಳೇ ನಮ್ಮ ಶಕ್ತಿಯಾಗಬೇಕು. ಸಮುದ್ರದ ಅಲೆಗಳು ಅದಕ್ಕೆ ಸೌಂದರ್ಯ ತರುವಂತೆ,  ಬದುಕಿನಲ್ಲಿ ಎದುರಾಗುವ ಸೋಲು, ಗೆಲುವು ಹಾಗೂ ಸವಾಲುಗಳೇ ನಮ್ಮನ್ನು ಗಟ್ಟಿಗೊಳಿಸುತ್ತವೆ. ಸವಾಲುಗಳಿಗೆ ಹೆದರಿ ಓಡುವ ಬದಲು, ಅವುಗಳನ್ನು ಬದುಕಿನ ಸಹಜ ಏರಿಳಿತಗಳೆಂದು ಸ್ವೀಕರಿಸಬೇಕು.ಅಹಂಕಾರ ಬಿಟ್ಟು ವಿನಯಶೀಲರಾಗಿ ಬಾಳಬೇಕು. ಶರಣರಿಗೆ ಹಣೆಯ ಮೇಲಿನ ವಿಭೂತಿ ಹೇಗೆ ಅಹಂಕಾರದ ನಾಶವನ್ನು ನೆನಪಿಸುತ್ತದೆಯೋ, ಹಾಗೆಯೇ ಇಂದಿನ ಯುವಜನತೆ ತಮಗಿರುವ ಶಿಕ್ಷಣ, ಉದ್ಯೋಗ ಅಥವಾ ಜ್ಞಾನದ ಬಗ್ಗೆ ಅಹಂ ಪಡದೆ, ವಿನಯವಂತರಾಗಿ ಬಾಳುವುದನ್ನು ಕಲಿಯಬೇಕಿದೆ.ಬಾಹ್ಯ ಶೃಂಗಾರವು ವಯಸ್ಸಿನೊಂದಿಗೆ ಕರಗಿಹೋಗುತ್ತದೆ, ಆದರೆ ಅಂತರಂಗದ ಶೃಂಗಾರವಾದ ‘ಮಾನವೀಯತೆ’ ಮತ್ತು ‘ಸತ್ ಚಿಂತನೆ’ ನಮ್ಮನ್ನು ಸಾವಿನ ನಂತರವೂ ಜೀವಂತವಾಗಿರಿಸುತ್ತದೆ. ಬನ್ನಿ, ಕೃತಕ ಮುಖವಾಡಗಳನ್ನು ಕಳಚಿಟ್ಟು, ಬಸವಣ್ಣನವರು ತೋರಿದ ಸಹಜ ಮತ್ತು ಸಾತ್ವಿಕ ಸೌಂದರ್ಯದ ಹಾದಿಯಲ್ಲಿ ಸಾಗೋಣ.ಒಂದು ಶ್ಲೋಕದ ಪ್ರಕಾರ ನೋಡಿದಾಗ…ಕೇಯೂರಾ ನ ವಿಭೂಷಯಂತಿ ಪುರುಷಂ ಹಾರಾ ನ ಚಂದ್ರೋಜ್ಜ್ವಲಾಃ |ನ ಸ್ನಾನಂ ನ ವಿಲೇಪನಂ ನ ಕುಸುಮಂ ನಾಲಂಕೃತಾ ಮೂರ್ಧಜಾಃ ||ವಾಣ್ಯೇಕಾ ಸಮಲಂಕರೋತಿ ಪುರುಷಂ ಯಾ ಸಂಸ್ಕೃತಾ ಧಾರ್ಯತೇ |ಕ್ಷೀಯಂತೇ ಖಲು ಭೂಷಣಾನಿ ಸತತಂ ವಾಗ್ಭೂಷಣಂ ಭೂಷಣಮ್ .ಮನುಷ್ಯನಿಗೆ ತೋಳುಬಂದಿ  ಆಭರಣವಲ್ಲ, ಚಂದ್ರನಂತೆ ಹೊಳೆಯುವ ಮುತ್ತಿನ ಹಾರಗಳಾಗಲಿ, ಸುಗಂಧ ದ್ರವ್ಯಗಳ ಲೇಪನವಾಗಲಿ, ಸ್ನಾನವಾಗಲಿ, ತಲೆಗೆ ಮುಡಿಯುವ ಹೂವುಗಳಾಗಲಿ ನಿಜವಾದ ಸೌಂದರ್ಯವನ್ನು ನೀಡುವುದಿಲ್ಲ. ಬದಲಿಗೆ ಸಂಸ್ಕಾರಯುತವಾದ ಮತ್ತು ವಿನಯದಿಂದ ಕೂಡಿ ಆಡುವ ‘ಒಳ್ಳೆಯ ಮಾತು’ ಒಂದೇ ಮನುಷ್ಯನಿಗೆ ಶಾಶ್ವತವಾದ ಆಭರಣ. ಲೋಕದ ಉಳಿದೆಲ್ಲಾ ಭೌತಿಕ ಆಭರಣಗಳು ಕಾಲಕ್ರಮೇಣ ಸವಿದು ಹೋಗುತ್ತವೆ, ಆದರೆ ಒಳ್ಳೆಯ ನಡತೆ ಹಾಗೂ ಮೃದುವಾದ ವಾಗ್ಭೂಷಣ ಮಾತ್ರ ಎಂದಿಗೂ  ಕ್ಷಯಿಸದ ನೈಜ ಶೃಂಗಾರವಾಗಿದೆಹೀಗೆ, ಅಂದಿನಿಂದ ಇಂದಿನವರೆಗೆ ಭಾರತೀಯ ತತ್ವಚಿಂತನೆಯು ಬಾಹ್ಯ ತೋರ್ಪಡಿಕೆಯ ಸೌಂದರ್ಯಕ್ಕಿಂತ ಅಂತರಂಗದ ಗುಣ ಸೌಂದರ್ಯಕ್ಕೇ ಅಗ್ರಸ್ಥಾನ ನೀಡುತ್ತಾ ಬಂದಿದೆ ಎಂಬುದಕ್ಕೆ ಬಸವಣ್ಣನವರ ಈ ವಚನ ಮತ್ತು ಈ ಶ್ಲೋಕವೇ ಅತ್ಯುತ್ತಮ ಸಾಕ್ಷಿ. ಪೂರ್ಣಿಮಾ ಮಹೇಶ ಮುತ್ನಾಳ.ಅಳ್ನಾವರ

“ಮುಖಕ್ಕೆ ಮೇಕಪ್ ಸರಿ, ಬದುಕಿಗೆ ?” ಪೂರ್ಣಿಮಾ ಮಹೇಶ ಮುತ್ನಾಳ Read Post »

ಇತರೆ, ಜೀವನ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ.

ವಿಶೇಷ ಸಂಗಾತಿ ಡಾ.ಯಲ್ಲಮ್ಮ ಕೆ. “ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಇನ್ನೂ ಗಟ್ಟಿ ಇದ್ಲು ಏನಿಲ್ಲಾಂದ್ರೂ ಎಂಟ್ಹತ್ತು ವರುಷ ಬಾಳು ಸವೆಸಬಹುದಿತ್ತು, ಮೊಮ್ಮಕ್ಕಳ ಮದುವೆ ಮಾಡಿ ಮರಿಮೊಮ್ಮಕ್ಕಳನ್ನು ಎತ್ತಿ ಆಡಿಸುವ ಕನಸು ಹೊತ್ತಿದ್ದ ಶಿವಮ್ಮ; ಎದ್ದು ಓಡಾಡುವ ತ್ರಾಣ ಇಲ್ಲದಿದ್ದರೂ ಹಣ್ಣ ಹಣ್ಣ ಮುದೇಕಿಯೇನೂ ಆಗಿರಲಿಲ್ಲ, ದೇವರು ತನ್ಮೇಲೆ ಯಾಕೆ ಹಾಕೋತ್ತಾನೆ? ಏನಾದರೂ ಒಂದು ಕುಂಟುನೆಪ ಹೇಳಿ ತನ್ನೆಡೆಗೆ ಕರಕೋತ್ತಾನೆ ಅಷ್ಟೇ ಎಂದು ಅಮ್ಮನ ವಾರಿಗೆಯವ್ರು ಕಣ್ಣೀರು ಹಾಕ್ತಾ ಪಾರ್ಥಿವ ಶರೀರದ ಮುಂದೆ ಕೂತು ಕಣ್ಣೀರ ಮಳೆಗಾರೆಯುತ್ತಿದ್ದರು! ಕಳೆದ ಐದಾರು ವರುಷಗಳ ಹಿಂದೆ ಕಣ್ ಆಪರೇಷನ್ ಮಾಡಿಸಬೇಕು ಅಂತ ಮನೆ ಮಂದಿಯೆಲ್ಲ ಯೋಚಿಸಿದಾಗ ಡಾಕ್ಟರ್ ಸಾರಾಸಗಟಾಗಿ ನಿರಾಕರಿಸಿದ್ದ ಆಪರೇಷನ್ ಮಾಡಿದರೂ ಕಣ್ ಬರೋ ಚಾನ್ಸಸ್ ಬಾಳ ಕಮ್ಮಿ ಅಂತ್ಹೇಳಿ,  ಆಗಲೇ ಆ ವಿಚಾರಕ್ಕೆ ಎಳ್ಳು-ನೀರು ಬಿಟ್ಟಾಗಿತ್ತು. ಕಣ್ಣು ಪುಟ್ಟ ಪೂರಾ ಕಾಣತ್ತಿದ್ದಿಲ್ಲ ಅಂತೇನಿಲ್ಲ ಮಸಗು ಮಸಗು ಆಗಿ ಕಾಣತ್ತಿದ್ದವು ಅಂತಿದ್ಲು. ಅದ್ಯಾವ ವಿಷಗಳಿಯೋ ನಾನರಿಯೆ? ಸರ್ಕಾರಿ ಆಸ್ಪತ್ರೆಯಲ್ಲಿ ಕಣ್ ತಪಾಸಣಾ ಶಿಬಿರಕ್ಕೆ ಅದ್ಯಾರೋ ಮಾತು ಕೇಳಿ, ಮತ್ಯಾರನ್ನೋ ಕರಕೊಂಡು ಹೋಗಿ ಬಂದ್ಮೇಲಿಂದ ಒಂದೇ ಹಠ! ಕಣ್ ಬರುತ್ತೆ ಅಂತ ಡಾಕ್ಟರ್ ಹೇಳಿದ್ದಾರೆ, ನನಗೆ ಕಣ್ ಆಪರೇಷನ್ ಮಾಡಿಸಿ ಎಂದು; ಅದೂ ಇದೂ ಅಂತ್ಹೇಳಿ ಒಂದು ಮೂರೂ ತಿಂಗಳು ಮುಂದಕ್ಕೆ ತಳ್ಳಿಕೊಂಡು ಹೊಂಟಿದ್ವೀ.., ಅವರಿವರು ಏನಂತಾರೆ? *ಮನೆಯಲ್ಲಿ ದುಡಿದು ತಿನ್ನುವ ಮಕ್ಕಳ್ನಾ ಬಿಡು, ಮಗಳು ನೌಕರಿ ಮಾಡ್ತಾಳ, ಮೊಮ್ಮಗಳು ನೌಕರಿ ಮಾಡ್ತಾಳೆ ಅಷ್ಟೇ ಅಲ್ಲದೇ ಮೊಮ್ಮಗಳ ಗಂಡನೂ ನೌಕರಿ ಮಾಡ್ತಾನೆ ಕಣ್ ಆಪರೇಶನ್ ಮಾಡಿಸೋಕೆ ಏನು? ದುಡ್ಡಿನ ಮಕ ನೋಡ್ತಾರೆ* ಅನ್ನೋ ತಿರಸ್ಕಾರದ ಮಾತುಗಳನ್ನು ಕೇಳಿದ ಮೇಲೂ ಸುಮ್ನೆ ಇರೋದು ಹೇಗೆ ಹೇಳಿ? *ಜೀವ ಮತ್ತು ಜೀವನ ಕೊಟ್ಟ ಅಮ್ಮನಿಗೆ ಕಣ್ ಬಂದ್ರೆ ಎಲ್ಲರಿಗೂ ಖುಷಿ ತಾನೇ* , ಅಮ್ಮನ ಆಸೆ ಮತ್ತು ಹಠಕ್ಕೆ ಸೋತು ಆಪರೇಷನ್ ಸಜ್ಜಾಗೆ, ಪೇಟೆಯ ಮೈಲಾರ ಆಸ್ಪತ್ರೆಗೆ ಹೋಗಿ ಇಡೀ ದಿನ ಕಾದು ತಪಾಸಣೆ ಮುಗಿದಮೇಲೆ ಫಿಟ್ ಇದ್ದಾರೆ, ಬಿ.ಪಿ ನಾರ್ಮಲ್ ಇದೆ, ಆಪರೇಷನ್ ಮಾಡಿ ಲೆನ್ಸ್ ಹಾಕಿದ್ರಾಯ್ತು.., *ನಾಳೆ ಬನ್ನಿ ಎಂದು ಡಾಕ್ಟರ್ ಹೇಳಿ ಕಳಿಸಿದ್ಮೇಲೆ ಲವಲವಿಕೆಯಿಂದ ಇದ್ದ ಅಮ್ಮನ ಮುಖದಲ್ಲಿ ಹೊಸ ಕಳೆ ಬಂದಂತಿತ್ತು!* ಮಾರನೇ ದಿನ ದುಡ್ಡು ಹೊಂದಿಸಿ ಕೊಟ್ಟು ನಾನು ಕೆಲಸಕ್ಕೆ ಹೋದೆ, ಮಗನನ್ನು ಕರೆದುಕೊಂಡು ಹೋಗಿ ಅಡ್ಮಿಟ್ ಆದ್ರು, ಹನ್ನೆರೆಡುಗಂಟೆ ಹೊತ್ತಿಗಾಗಲೇ ಆಪರೇಷನ್ ಮುಗಿತು, ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ ಅಂತ ಅಣ್ಣ ಕಾಲ್ ಮಾಡಿ ಹೇಳಿದ್ದ, ಸಾಯಂಕಾಲ ಆರರೊಳಗೆ ಮೂರು- ನಾಲ್ಕು ಬಾರಿ ಕಾಲ್ ಮಾಡಿ ಅಮ್ಮನ ಆರೋಗ್ಯದ ಬಗ್ಗೆ ವಿಚಾರಿಸಿದ್ದೆ, ಕೆಲಸ ಮುಗಿಸಿಕೊಂಡು ಬಂದು ಅಮ್ಮನನ್ನು ಕಂಡು ಮಾತನಾಡಿಸಿ ಇಡ್ಲಿ-ಸಾಂಬಾರ್ ತಿನಿಸಿ, ಚಹಾ ಕುಡಿಸಿದೆ, *ಮಸಗು ಕಣ್ಣಿಗ್ಹಾಕಿದ ಲೆನ್ಸ್ ನೊಂದಿಗೆ ಜಗತ್ತನ್ನು ಹೊಸ ದೃಷ್ಟಿಕೋನದಿಂದ ನೋಡುವ ಹೆಬ್ಬಯಕೆ ಅಮ್ಮನ ಮೊಗದಿ ಎದ್ದು ಕಾಣುತ್ತಿತ್ತು!* ಅದೇ ಭರವಸೆಯಲ್ಲಿ ಮನೆಗೆ ಬಂದೆ, ಅಮ್ಮನಿಗೆ ತಾನು ಕಣ್ಣಾದ ಬಗೆಗೆ ನೆನೆದು ನೆಮ್ಮದಿಯ ನಿದ್ದೆಗೈದೆ. ಮರುದಿನ ಪರೀಕ್ಷಾ ಕಾರ್ಯ ನಿಮಿತ್ತ ಅಮ್ಮನನ್ನು ಕಾಣದೇ ಕಾಲೇಜಿಗೆ ಹೋದೆ.., ಸಾಂಕಾಲದೊತ್ತಿಗೆ ರಾಘಣ್ಣ ಅಮ್ಮನ ಕಣ್ಪಟ್ಟಿ ತೆಗೆಸಿ, ಕರಿಕನ್ನಡಕ ಹಾಕಿಸಿ ಡಿಸ್ಚಾರ್ಜ್ ಮಾಡಿಸಿಕೊಂಡು ಬಂದಿದ್ದ, ಮನೆ ತುಂಬೆಲ್ಲಾ ಹೂನಗೆ ಚೆಲ್ಲಿತ್ತು. *ಕಪ್ಪು ಕನ್ನಡಕ ಅಮ್ಮನಿಗೆ ಚಂದವಾಗಿ ಒಪ್ಪಿತ್ತು,* ರಾತ್ರಿ ಗಂಜಿ ಕುಡಿದು, ಗುಳುಗಿ ನುಂಗಿ ಅಮ್ಮ ಮಲಗಿದ್ದಳು. ನಿತ್ಯದ ದಿನಚರಿಯಂತೆ ನಾನೆದ್ದು ರೆಡಿಯಾಗಿ ಕಾಲೇಜಿಗೆ ಹೊರಟು ನಿಂತಿದ್ದೆ, ಇನ್ನೂ ಹಾಸಿಗೆಯಲ್ಲಿ ಮಗ್ಗಲು ಹೊರಳಿಸಿದ್ದ ಅಮ್ಮನನ್ನ ಕಂಡು ಯಾಕೆ ಅಮ್ಮ ಸಪ್ಗಿದ್ದೀಯಾ? ನಿದ್ದೆ ಆಗಿಲ್ವಾ? ಎಂದಿದ್ದಕ್ಕೆ; ಕಣ್ಣು ಸ್ವಲ್ಪ ನೋವಾಗಿದೆ, ಎರಡು ಮೂರು ಬಾರಿ ಭೇದಿ ಆಯ್ತು, ಎದ್ದು ಹೋಗಿ ಬಂದು, ಹೋಗಿ ಬಂದು ಕೈ-ಕಾಲು ಸೋತಂಗಾಗಿದೆ ಅಂದ್ಲು, ಮಗನಿಗೆ ಮೆಡಿಕಲ್ ಶಾಪ್ ನಿಂದ ಒಂದೆರಡು ಭೇದಿ ಗುಳಿಗೆ ತಂದು ಕೊಡು ಅಮ್ಮ ನುಂಗ್ತಾಳೆ, ಆರಾಮ್ ಅನಿಸಿಲ್ಲ ಅಂದ್ರೆ ಸಂಜೆ ಆಸ್ಪತ್ರೆಗೆ ಕರೆದುಕೊಂಡು ಹೋಗೋಣ ಅಂತ ಹೇಳಿ ನಾನು ಕಾಲೇಜಿಗೆ ಹೊರಟೆ, ನಾನಿನ್ನೂ ಕಾಲೇಜ್ ಮುಟ್ಟಿದ್ದಿಲ್ಲ.., ನಂತರದ ಬೆಳವಣಿಗೆ ಆಘಾತವನ್ನುಂಟು ಮಾಡಿತ್ತು. ಅಮ್ಮನಿಗೆ ಮತ್ತೆರಡು ಬಾರಿ ಭೇದಿ ಆಯ್ತಂತೆ, ಸುಸ್ತು, ಡಾಕ್ಟರನ್ನು ಕರೆಸಿ ಸೂಜಿ ಹಾಕ್ಸರಿ ಅಂತ ಕೇಳಿದ್ದಾಳೆ, ಮನೆಯಲ್ಲಿ ಅತ್ತಿಗೆ, ರಶ್ಮಿ, ದೀಪಾ, ಶಶಿ, ಮೊಮ್ಮಕ್ಕಳು ಮರಿ ಮೊಮ್ಮಕ್ಕಳಿದ್ದರು, ಅಪ್ಪ, ಅಣ್ಣ ಎಲ್ಲರೂ ಗದ್ದೆ ಕೆಲಸಕ್ಕೆ ಹೋಗಿದ್ದರು. ದೈವಿಕ್ [ಮರಿ ಮೊಮ್ಮಗ] ಎದ್ದು ಕೂಡಲೇ ಮನೆಯ ಮುಂದಿನ ಮೆಟ್ಟಿಲ ಮೇಲೆ ಆತನನ್ನು ತೊಡೆಯಮೇಲೆ ಕೂಡಿಸಿಕೊಂಡು ಮುದ್ದು ಮಾಡುತ್ತಾ.., ದಾರಿಗುಂಟ ಹೋಗಿ ಬರೋರನ್ನು ಎದ್ರಾ, ಉಂಡ್ರಾ- ತಿಂದ್ರಾ ಎಂದು ಲೋಕಾಭಿರಾಮವಾಗಿ ಮಾತನಾಡಿಸುತ್ತಾ, ಆಗ್ತಾನೇ ಗೂಡಿನಿಂದ ಹೊರಬಿದ್ದ ಕೋಳಿ-ಮರಿಗಳಿಗೆ ಕಾಳು ಹಾಕುತ್ತಾ ಆಡಿಸುತ್ತಾ ಕೂಡುವುದು ಅಮ್ಮನದು  ನಿತ್ಯದ ದಿನಚರಿ. ಎಂದಿನಂತೆ ಇಂದು ಮೊಮ್ಮಗ ಬಂದು ಅವ್ವ ಅವ್ವ ಎಂದು ಕರೆದಾಗ ದೈವಿಕ್ ಇವತ್ತು ನನ್ನ ಕರಿಬೇಡಪ್ಪಾ..,   ನನ ಹತ್ತಿರ ಬರಬೇಡಪ್ಪಾ.., ಹೋಗು ಎಂದು ತನ್ನೊಳಗಿನ ಚಡಪಡಿಕೆ, ದುಃಖದಿಂದ ಗದರಿಸಿದಳೋ ಏನೋ? ಅವನು ಅಳುತ್ತಾ ಬಂದವನು ಮತ್ತೆ ಅವ್ವ ಎನ್ನಲಿಲ್ಲ. ಪಕ್ಕದ ಮನೆಯವರು ಎದುರಿನ ಮನೆಯ ಕುಮಾರಸ್ವಾಮಿ ಅಣ್ಣ, ಆತನ ಮಗ ಕಾರ್ತಿಕ್ ಓಡಿ ಬಂದಿದ್ದಾರೆ, ಲೋಕಲ್ [ಆರ್.ಎಮ್.ಪಿ] ಡಾಕ್ಟರ್ ನ ಕರೆಸಿ ಒಂದು ಇಂಜೆಕ್ಷನ್ ಮಾಡಿಸಿದ್ದಾರೆ, ಅಮ್ಮ ಸುಸ್ತಾಗಿ ಮಲಗ್ಬಿಟ್ಟಿದ್ದಾಳೆ, *ಮೈ-ಕೈ ಎಲ್ಲಾ ತಣ್ಣಗಾಗಿದ್ದನ್ನು ಕಂಡು ಅತ್ತಿಗೆ ಒಲಿಬೂದಿ ತಂದು ಕೈಕಾಲಿಗೆ ತಿಕ್ಕಿದ್ದಾಳೆ,*  ತಡಮಾಡದೆ.., ಕೂಡಲೇ ಆಟೋ ಬಾಡಿಗೆ ಮಾಡಿಕೊಂಡು ಆಸ್ಪತ್ರೆಗೆ ಹೋಗಿದ್ದಾರೆ, *ಆಸ್ಪತ್ರೆಯ ಆವರಣದಲ್ಲಿ ಡಾಕ್ಟರ್ ಓಡಿ ಬಂದು ಚೆಕ್ ಮಾಡಿ ಅಮ್ಮ ಇನ್ನಿಲ್ಲ* ಎಂದು ದೃಢೀಕರಿಸಿದ್ದಾರೆ. ಸುದ್ದಿ ತಿಳಿಯುತ್ತಲೇ ಕಾಲೇಜಿಂದ ಹೊರಬಿದ್ದೆ ಮನೆಗೆ ಬಂದು ಸೇರುವಷ್ಟರಲ್ಲಿ ಒಂದು ಗಂಟೆ ಆಗಿತ್ತು, ಮನೆಯ ಮುಂದೆ ಪೆಂಡಾಲ್ ಹಾಕಿ, ಚಪ್ಪರದಡಿಯಲ್ಲಿ ಮಂಚದ ಮೇಲೆ ಹೊಸ ಸೀರೆ ತೊಟ್ಟು ಮಂದಹಾಸದಿ ಮಲಗಿದ್ದ ಅಮ್ಮನ ಮುಖದಲ್ಲಿ ಚೆಲುವಿತ್ತು!  ಅಮ್ಮನ ಬಳಗ ಅಪ್ಪನ ಬಳಗ, ಬಂಧು-ಬಳಗ ಆಗಲೇ ನೆರದಿತ್ತು, ಅವರುಗಳು ತಂದ ಹೂಮಾಲೆಗಳು ರಾಶಿ ರಾಶಿ ಅಮ್ಮನ ಮೇಲೆ ಬಿದ್ದಿತ್ತು, ಅಮ್ಮನ ಜಾತ್ರೆಗೆ ತೇರು ಸಿದ್ದಗೊಂಡಿತ್ತು.., ಮಂತ್ರ ಘೋಷ, ಸನಾಯಿ ನಾಧಾ ಮೊಳಗುತ್ತಲೇ  ಅಮ್ಮನ ತೇರು ಮುಂದೆ ಮುಂದೆ ಸಾಗಿದರೆ ನಾವು ಅವರತ್ತ ಭಾರವಾದ ಹೆಜ್ಜೆಗಳನ್ನ ಹಾಕುತ್ತಾ ಹಿಂದೆ ಹಿಂದೆ ಸಾಗಿದೆವು ಮಸಣದ ಕಡೆಗೆ.., *ಅಮ್ಮನ ಸಿದಿಗೆ ಹೊತ್ತವರು ಹೆಗಲು ಬದಲಿಸುತ್ತಾ.., ಅಮ್ಮನಿಗೆ ನೋವಾಗದಿರಲೆಂದು ನಿಧಾನ ಹೆಜ್ಜೆ ಹಾಕುತ್ತಾ ಸಾಗಿ* ಕುಣಿಯ ತಲುಪಿ ಅಲ್ಲಿ ಅಮ್ಮನಿಗೆ ಕಡೆಯದಾಗಿ ಬಾಯಿಗೆ ನೀರು ಬಿಟ್ಟು, ಅಂತಿಮ ಪೂಜೆ-ಪುನಸ್ಕಾರ ಮಾಡಿ ಕೈ ಮುಗಿದು ನಿಂತೆವು..,  *”ಆಡಿ ಬಾ ನನ ಕಂದ ಅಂಗಾಲ ತೊಳದೇನ ತೆಂಗಿನ ಕಾಯಿ ತಿಳಿನೀರು, ತೆಂಗಿನ ಕಾಯಿ ತಿಳಿನೀರ ತಕ್ಕೊಂಡು ಕಂದಮ್ನ ಪಾದದ ಧೂಳ ತೊಳದೇನ”* ಎಂಬ ಅಮ್ಮನ ಜೋಗುಳ ಕೇಳಿ ಮಲಗಿದ *ಮಕ್ಕಳೆಲ್ಲರೂ ಸೇರಿ ಅಮ್ಮನನ್ನು ಗುಂಡಿಯಲಿಟ್ಟು ಮಣ್ಣುಗೂಡಿಸಿ ಬರುವಾಗ ಕರುಳು ಕಿತ್ತು ಬಾಯ್ಗೆ ಬಂದಂತಾಯ್ತು,* ಅಮ್ಮ ಪಾಪ ಅದೆಷ್ಟು ನೊಂದುಕೊಂಡಳೋ..? ಒಬ್ಬಂಟಿಯಾಗಿ ಹೋದಳು, ಕುಣಿ ಮುಂದೆ ನಿಂತುಕೊಂಡು ಮಾದಿಗರ ಚಂದಪ್ಪ.., ಮಸಣದಿ ನೆರೆದ ಜನಸ್ತೋಮದೆದಿರು ಸಲಿಕೆಗೆ ಒಂದು ನಾಣ್ಯದಿಂದ ಗಂಟೆಯಂತೆ ಭಾರಿಸುತ್ತ – *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* *ನರಲೋಕ ಸಾಕಾಗಿ ದೇವಲೋಕಕ್ಕೆ ಹೋದಳು ಶಿವಮ್ಮ..,* ಎಂದು ಮೂರೂ ಬಾರಿ ಸಾರಿದ ಮೇಲೆ; ಅಮ್ಮನ ಅಗಲಿಕೆಯು ಕಣ್ಣು ಕಳೆದುಕೊಂಡ ಕುರುಡರಾದಂತಹ ಅನುಭವ, ಅಕ್ಷರಶಃ ನನ್ನನ್ನು ಅನಾಥಳನ್ನಾಗಿಸಿ ಹೊರಟೆ ಬಿಟ್ಟಳು ಬಾರದ ಲೋಕಕ್ಕೆ, *ಸಗ್ಗದ ಸಿರಿ-ಸೀಮೆಯ, ಸೊಬಗ ಸವಿಯಲು ತನ್ನೆರೆಡು ಕಣ್ಗಳು ಸಾಲದೆಂದು ಲೆನ್ಸ್ ಹಾಕಿಸಿಕೊಂಡು ಹೋದ ಅಮ್ಮ ಮತ್ತೆ ಎಂದಿಗೂ ಬಾರಳು, ಆದರೆ ಅಲ್ಲಿ ಕಂಡುಂಡ ಅನುಭವಗಳನ್ನು ಅಮ್ಮ ಚಿತ್ತದಿ ದಾಖಲಿಸಿಕೊಂಡು ಮರೆಯದೆ ನನಗೆ ಟಪಾಲು ಬರೆದು ಕಳುಹಿಸಬಹುದು* ಎಂದು ಆಸೆಗಣ್ಣಲಿ ಅಂಚೆಯಣ್ಣನ ದಾರಿ ಕಾಯುತ್ತಿರುವೆ. ನನ್ನ ತಂಗಿ, ಮಗ, ಮಗಳು ಆಡ್ಯಾಡಿಕೊಂಡು ಅತ್ತು ಹಗುರಾದರು, ನೆರೆದವರು ಏನೆಂದುಕೊಂಡರೋ ಏನೋ? ನನ್ನ ಬಗ್ಗೆ ನನಗೆ ಅಳಲು ಬಾರದು, ಕಣ್ಣೀರು ತನ್ತಾನೇ ಸುಮ್ಮನೆ ತಣ್ಣಗೆ ಸುರಿವ ಜಿಟಿ ಜಿಟಿ ಮಳೆಯಂತೆ ಜಿನುಗುಟ್ಟುತ್ತಿತ್ತಿ.., *ಅವ್ಯಕ್ತ ಭಾವನೆಗಳನ್ನು ಹತ್ತಿಕ್ಕಲಾಗದೆ.., ಬರೆದು ಹಗುರ ಆಗೋಣವೆಂದುಕೊಂಡು.., ಒಂದೇ ಉಸಿರಿನಲ್ಲಿ ಬರೆದೆ..,* ನನ್ನ ಬರಹವನ್ನು ಮತ್ತೆ ಮತ್ತೆ ನಾನೇ ಮನಸಿನಲ್ಲಿ ಓದಿಕೊಂಡಂತೆಲ್ಲ; ನನ್ನ ಮನ‌ಸಿನ ನೋವೇ ಅಕ್ಷರ ರೂಪು ಪಡೆದಿವೆಅನ್ನುವಷ್ಟರ ಮಟ್ಟಿಗೆ ಮೂಡಿಬಂದಿದೆ ಎನಿಸಿ *ಅಳು ಜುಳು-ಜುಳು ದಳಿ-ದಳಿ  ಹರಿಯುತ್ತಿತ್ತು.*  *ಅಮ್ಮ ಕನಸಿನಲ್ಲಿ ಬರಬಹುದೂ, ತನ್ನ ಸಾವಿಗೂ ಮುನ್ನ ಅನುಭವಿಸಿದ ಚಡಪಡಿಕೆಯನ್ನು ನನ್ನೊಂದಿಗೆ ಹಂಚಿಕೊಳ್ಳಬಹುದು  ಎನ್ನುವ ನಿರೀಕ್ಷೆಯಲ್ಲಿ ಮಲಗಿದ್ದೇ,* ಅಮ್ಮ ತನ್ನ ಏನೊಂದೂ ಕಷ್ಟ ಹೇಳಿಕೊಳ್ಳದೆ ಪಕ್ಕದಿ ಕೂತು ತಲೆ ನೇವರಿಸುತ್ತಾ ಜೋಗುಳ ಹಾಡುತ್ತಿದ್ದಳು ನಾನು ಹಸುಗಂದಮ್ಮನಂತೆ ನಿದ್ದೆಗೆ ಜಾರಿದೆ. ಡಾ. ಯಲ್ಲಮ್ಮ ಕೆ

“ಮಾತೃ ವಿಯೋಗ: ನರಲೋಕದಿಂದ ದೇವಲೋಕ ಸೇರಿದಳು ಶಿವಮ್ಮ” ಡಾ.ಯಲ್ಲಮ್ಮ ಕೆ. Read Post »

ಜೀವನ

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್

ಸಂಬಂಧಗಳ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್ “ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಸಂಬಂಧಗಳನ್ನು ಕಟ್ಟುವುದು ಪ್ರೀತಿಯಿಂದ, ಆದರೆ ಅವನ್ನು ಉಳಿಸುವುದು ನಂಬಿಕೆಯಿಂದ. ಪ್ರೀತಿ ಎಷ್ಟೇ ಆಳವಾಗಿದ್ದರೂ, ಒಂದು ಕ್ಷಣದ ಅನುಮಾನ ಅದರ ಬೇರುಗಳನ್ನು ಅಲ್ಲಾಡಿಸಬಲ್ಲದು. ಕೆಲವೊಮ್ಮೆ ತಪ್ಪು ನಡೆದಿರಲೂಬಹುದು, ಕೆಲವೊಮ್ಮೆ ತಪ್ಪೇ ಇರದೇ ಇರಬಹುದು. ಆದರೆ ಒಮ್ಮೆ ಮನಸ್ಸಿನಲ್ಲಿ ಅನುಮಾನದ ಬೀಜ ಬಿದ್ದರೆ, ಅದು ನಿಧಾನವಾಗಿ ಸಂಬಂಧದ ಪ್ರತಿಯೊಂದು ಕೊಂಬೆಯನ್ನೂ ಒಣಗಿಸಲು ಆರಂಭಿಸುತ್ತದೆ. ಜೀವಂತವಾಗಿರುವ ಮನುಷ್ಯನನ್ನು ಸತ್ತವನಂತೆ ಮಾಡುವ ಶಕ್ತಿ ಕತ್ತಿಗೆ ಇಲ್ಲ; ಅನುಮಾನಕ್ಕೆ ಇದೆ. ದೇಹ ಉಸಿರಾಡುತ್ತಿರಬಹುದು, ಆದರೆ ಮನಸ್ಸು ಪ್ರತಿದಿನ ಸಾಯುತ್ತಿರುತ್ತದೆ. ಒಮ್ಮೆ ಕಳೆದುಹೋದ ನಂಬಿಕೆಯನ್ನು ಮರಳಿ ಕಟ್ಟುವುದು ಮನೆ ಕಟ್ಟುವುದಕ್ಕಿಂತ ಕಷ್ಟ. ಒಡೆದ ಗಾಜನ್ನು ಅಂಟಿಸಬಹುದು, ಆದರೆ ಅದರ ಬಿರುಕು ಎಂದಿಗೂ ಕಾಣದಂತೆ ಮಾಡಲಾಗುವುದಿಲ್ಲ. ಅದೇ ರೀತಿ ಒಡೆದ ವಿಶ್ವಾಸ ಮತ್ತೆ ಹುಟ್ಟಿದರೂ, ಅದರ ಗಾಯದ ಗುರುತು ಮನಸ್ಸಿನಲ್ಲಿ ಉಳಿಯುತ್ತದೆ. ಪ್ರತಿಯೊಬ್ಬ ಮನುಷ್ಯನೂ ತಪ್ಪು ಮಾಡಬಹುದು. ತಪ್ಪು ಮಾಡದವರು ಯಾರೂ ಇಲ್ಲ. ಆದರೆ ಒಮ್ಮೆ ನಡೆದ ತಪ್ಪನ್ನು ಜೀವಮಾನವಿಡೀ ಹಿಡಿದುಕೊಂಡು ಪ್ರತಿದಿನ ಅವಮಾನಿಸುವುದು, ಮಾತಿನ ಮೂಲಕ ಕಿರುಕುಳ ಕೊಡುವುದು, ಕುಟುಂಬದವರನ್ನೂ ಕೀಳಾಗಿ ಕಾಣುವುದು ನ್ಯಾಯವಲ್ಲ. ಕ್ಷಮೆ ಎನ್ನುವುದು ತಪ್ಪನ್ನು ಮರೆತಂತೆ ಅಲ್ಲ; ಮತ್ತೊಬ್ಬರ ಮಾನವೀಯತೆಯನ್ನು ಗೌರವಿಸಿದಂತೆ. ಮಾತುಗಳಿಗೆ ಗಾಯಗೊಳಿಸುವ ಶಕ್ತಿ ಇದೆ. ಕತ್ತಿಯಿಂದ ಆದ ಗಾಯಕ್ಕೆ ಔಷಧ ಸಿಗುತ್ತದೆ. ಆದರೆ ಮಾತಿನಿಂದ ಆದ ಗಾಯಕ್ಕೆ ಔಷಧವೇ ಇರುವುದಿಲ್ಲ. ಕೆಲವರು ಒಂದು ದಿನ ಅತ್ತು ಮರೆತುಬಿಡುತ್ತಾರೆ. ಆದರೆ ಇನ್ನೂ ಕೆಲವರು ಪ್ರತಿದಿನ ನಗುವ ಮುಖವಾಡ ಧರಿಸಿ ಬದುಕುತ್ತಾರೆ. ಹೊರಗೆ ನಗುವರು, ಒಳಗೆ ಮಾತ್ರ ಸಾವಿರ ಬಾರಿ ಮುರಿಯುತ್ತಾರೆ. ಆ ನಗುವಿನ ಹಿಂದೆ ಎಷ್ಟು ಕಣ್ಣೀರು, ಎಷ್ಟು ಮೌನ, ಎಷ್ಟು ನೋವು ಅಡಗಿದೆ ಎಂಬುದು ಯಾರಿಗೂ ಕಾಣುವುದಿಲ್ಲ. ಸಂಸಾರವೆಂದರೆ ಇಬ್ಬರು ಮನುಷ್ಯರ ಒಪ್ಪಂದವಲ್ಲ; ಅದು ಎರಡು ಹೃದಯಗಳ ಜವಾಬ್ದಾರಿ. ಅಲ್ಲಿ ಗಂಡನಿಗೂ ಗೌರವ ಬೇಕು, ಹೆಂಡತಿಗೂ ಗೌರವ ಬೇಕು. ಇಬ್ಬರಿಗೂ ತಮ್ಮ ಭಾವನೆ ಹೇಳುವ ಹಕ್ಕು ಇದೆ. ಇಬ್ಬರಿಗೂ ಸ್ವಾತಂತ್ರ್ಯ ಇದೆ. ಯಾರನ್ನೂ ಸದಾ ಅನುಮಾನದಿಂದ ನೋಡುತ್ತಾ, ಅವರ ವ್ಯಕ್ತಿತ್ವವನ್ನು ಕುಗ್ಗಿಸುತ್ತಾ ಬದುಕಿಸುವುದು ಸಂಬಂಧವಲ್ಲ; ಅದು ಮನಸ್ಸಿನ ಬಂಧನ. ಒಮ್ಮೆ ಕಳೆದುಕೊಂಡ ನಂಬಿಕೆ ಮರಳಿ ಬರಬಹುದು. ಆದರೆ ಅದಕ್ಕೆ ಸಮಯ, ಪ್ರಾಮಾಣಿಕತೆ, ಪರಸ್ಪರ ಗೌರವ ಮತ್ತು ನಿಜವಾದ ಬದಲಾವಣೆ ಬೇಕು. ಪ್ರತಿದಿನ ಹಳೆಯ ಗಾಯವನ್ನು ಕೆದಕುತ್ತಾ ಹೋದರೆ ಅದು ಎಂದಿಗೂ ಮಾಯವಾಗುವುದಿಲ್ಲ. ಗಾಯ ಗುಣವಾಗಬೇಕಾದರೆ ಅದನ್ನು ಮರುಮರು ಹರಿಯಬಿಡಬಾರದು. ಮಕ್ಕಳು ಮನೆಯ ಗೋಡೆಗಳನ್ನು ಮಾತ್ರ ನೋಡುವುದಿಲ್ಲ; ತಂದೆ-ತಾಯಿಯ ಮಾತುಗಳನ್ನು, ವರ್ತನೆಯನ್ನು, ಪರಸ್ಪರ ಗೌರವವನ್ನು ನೋಡಿ ಬದುಕು ಕಲಿಯುತ್ತಾರೆ. ಪ್ರೀತಿಗಿಂತ ಹೆಚ್ಚು ಅವರಿಗೆ ಬೇಕಾಗಿರುವುದು ಸುರಕ್ಷಿತವಾದ ವಾತಾವರಣ. ಪ್ರತಿದಿನ ಜಗಳ, ಅನುಮಾನ, ಅವಮಾನ ಇರುವ ಮನೆಯಲ್ಲಿ ಬೆಳೆದ ಮನಸ್ಸು ನಿಧಾನವಾಗಿ ತನ್ನ ನಗುವನ್ನೇ ಕಳೆದುಕೊಳ್ಳುತ್ತದೆ. ಕೆಲವು ನೋವುಗಳು ಕಾಲದೊಂದಿಗೆ ಮಾಸುತ್ತವೆ. ಆದರೆ ಕೆಲವು ನೋವುಗಳು ಪ್ರತಿದಿನ ಜೀವಂತವಾಗಿಯೇ ಉಳಿಯುತ್ತವೆ. ಅವು ಕಣ್ಣಿಗೆ ಕಾಣುವುದಿಲ್ಲ, ಆದರೆ ಹೃದಯವನ್ನು ನಿಧಾನವಾಗಿ ಕರಗಿಸುತ್ತವೆ. ಅದಕ್ಕಾಗಿಯೇ ಸಂಬಂಧದಲ್ಲಿ ಗೆಲ್ಲುವುದು ಮುಖ್ಯವಲ್ಲ; ಒಬ್ಬರ ಮನಸ್ಸನ್ನು ಮತ್ತೊಬ್ಬರು ಕಾಪಾಡುವುದು ಮುಖ್ಯ. ಒಳ್ಳೆಯ ವ್ಯಕ್ತಿ ಎಂದರೆ ಎಂದಿಗೂ ತಪ್ಪು ಮಾಡದವನು ಅಲ್ಲ. ತನ್ನ ತಪ್ಪನ್ನು ಅರಿತು ತಿದ್ದಿಕೊಳ್ಳುವವನು, ಎದುರಾಳಿಯ ಮನಸ್ಸನ್ನು ಅರ್ಥಮಾಡಿಕೊಳ್ಳುವವನು, ಕ್ಷಮೆ ಕೇಳಬೇಕಾದಲ್ಲಿ ಕೇಳುವವನು, ಕ್ಷಮಿಸಬೇಕಾದಲ್ಲಿ ಕ್ಷಮಿಸುವವನು. ಜೀವನದ ಕೊನೆಯಲ್ಲಿ ಜನರು ನೆನಪಿಡುವುದು ಯಾರು ಗೆದ್ದರು ಎಂಬುದಲ್ಲ. ಯಾರು ಪ್ರೀತಿಸಿದರು, ಯಾರು ಕಾಪಾಡಿದರು, ಯಾರು ಕಣ್ಣೀರನ್ನು ಒರೆಸಿದರು ಎಂಬುದನ್ನು. ನಂಬಿಕೆ ಇದ್ದರೆ ಸಂಬಂಧಗಳು ಅರಳುತ್ತವೆ.ಗೌರವ ಇದ್ದರೆ ಸಂಸಾರ ಉಳಿಯುತ್ತದೆ.ಕ್ಷಮೆ ಇದ್ದರೆ ಗಾಯಗಳು ಗುಣವಾಗುತ್ತವೆ.ಪ್ರೀತಿ ಇದ್ದರೆ ಜೀವನ ಸುಂದರವಾಗುತ್ತದೆ.*ಯಾಕೆಂದರೆ ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಭಾವನೆಗಳಿವೆ, ತನ್ನ ಕನಸುಗಳಿವೆ, ತನ್ನ ಗೌರವವಿದೆ, ತನ್ನ ಹಕ್ಕು ಮತ್ತು ಸ್ವಾತಂತ್ರ್ಯವಿದೆ. ಆ ಗೌರವವನ್ನು ಕಾಪಾಡಿದಾಗ ಮಾತ್ರ ಯಾವುದೇ ಸಂಬಂಧ ನಿಜವಾದ “ಸರಿಯಾದ ವ್ಯಕ್ತಿ”ಯ ಸಂಬಂಧವಾಗುತ್ತದೆ.* ಕೆ.ಎಂ. ಕಾವ್ಯ ಪ್ರಸಾದ್

“ನಂಬಿಕೆ ಒಡೆದಾಗ ಸಂಬಂಧಗಳು ಬದುಕುತ್ತವೆಯೇ?” ಕೆ.ಎಂ. ಕಾವ್ಯ ಪ್ರಸಾದ್ Read Post »

ಇತರೆ

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು

ಗ್ರಂಥಾಲಯ ಸಂಗಾತಿ ಗೊರೂರು ಅನಂತರಾಜು “ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗ್ರಂಥಾಲಯ ಪರಿಕಲ್ಪನೆ ರಾಜಕೇಂದ್ರಿತವಾಗಿತ್ತು ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್: ಡಾ. ಕುಶಾಲ್ ಬರಗೂರು ಗ್ರಂಥಾಲಯದ ಚಾರಿತ್ರಿಕ ಪರಿಕಲ್ಪನೆ ನಗರ ಕೇಂದ್ರಿತವಾದದ್ದು, ರಾಜ ಪ್ರಣೀತವಾದದ್ದಾಗಿತ್ತು. ಅದನ್ನು ಮೊದಲು ಮುರಿದವರು ಡಾ. ಬಾಬಾಸಾಹೇಬ್ ಅಂಬೇಡ್ಕರ್ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಸದಸ್ಯರು, ಕನ್ನಡ ಪ್ರಾಧ್ಯಾಪಕರು ಡಾ. ಕುಶಾಲ್ ಬರಗೂರು ತಿಳಿಸಿದರು. ಕರ್ನಾಟಕ ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತ ಸಮಿತಿ, ಹಾಸನ ಜಿಲ್ಲೆ  ವತಿಯಿಂದ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವು ಡಾ.ಬಿ.ಡಿ.ಕುಮಾರ್, ನಿವೃತ್ತ ಕನ್ನಡ ಪ್ರಾಧ್ಯಾಪಕರು, ಬಾಗೇಶಪುರ ಗುಡ್ಡದಮನೆ ಇಲ್ಲಿ ಏರ್ಪಡಿಸಿ ಪ್ರಾಸ್ತವಿಕವಾಗಿ ಅವರು ಮಾತನಾಡುತ್ತಿದ್ದರು.  ನಗರದಲ್ಲಿ ಇದ್ದದ್ದನ್ನು ತಮ್ಮ ಮನೆಯಲ್ಲೆ ಗ್ರಂಥಾಲಯ ಮಾಡಿ, ಮನೆಯನ್ನೆ ಜ್ಞಾನಕೇಂದ್ರ ಮಾಡಿ, ರಾಜಗೃಹ ಎಂದು ಹೆಸರಿಟ್ಟ ಪ್ರಥಮ ಜ್ಞಾನಿ. ಆ ದಾರಿಯ ಹಾದಿ ಹಿಡಿದವರು ಡಾ. ಬಿ.ಡಿ.ಕುಮಾರ್  ತಮ್ಮ ಮನೆಯನ್ನು ಹಳ್ಳಿಗಾಡಿನಲ್ಲಿ ಮಾಡಿ ಅದನ್ನು ಸಾಹಿತ್ಯ ಚರ್ಚಾ ಕ್ಷೇತ್ರವನ್ನಾಗಿ ಮಾಡಿರುವರು. ಕ್ಷೇತ್ರಕಾರ್ಯ ಸಂಶೋಧಕರಾಗಿ ನಾನಾ ಪ್ರಾಚೀನ ಕೃತಿಗಳನ್ನು ಸಂಪಾದಿಸಿ ಸಂಗ್ರಹಿಸಿಟ್ಟಿದ್ದಾರೆ.  ಇದು ಕನ್ನಡ ಸಾಹಿತ್ಯ ಸಂಶೋಧಕರಿಗೆ ಆಧಾರ ಮಾಹಿತಿ ಕೇಂದ್ರವಾಗಿದೆ. ಅಂದು ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಪಾದಿಸಿದಂತೆ, ಹಲಸಂಗಿ ಗೆಳೆಯರು, ಜೀ.ಶಂ.ಪ, ಕ್ಯಾತನಹಳ್ಳಿ ರಾಮಣ್ಣ, ಪಿ.ಕೆ.ರಾಜಶೇಖರ್ ಮುಂತಾದವರು  ಜಾನಪದ ಕ್ಷೇತ್ರ ಕಾರ್ಯ ಮಾಡಿದಂತೆ   ಕುಮಾರ್ ತಮ್ಮ ಮನೆಯನ್ನು ಮಾಹಿತಿ ಕಣಜ ಮಾಡಿದ್ದಾರೆ. ಇದು ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ಮಾದರಿ  ಪ್ರೇರಣಿಯೂ ಹೌದು.  ಇಲ್ಲಿ 18,000 ಪುಸ್ತಕ, ಪತ್ರಿಕೆ, ಸಂಚಿಕೆ, ಹಸ್ತಪ್ರತಿ ಇನ್ನಿತರೆ ಸಾಹಿತ್ಯ ಗ್ರಂಥಗಳಿವೆ ಎನ್ನುತ್ತಾರೆ.  ಇಂತಹ ಶೋಧನಾ ಕಾರ್ಯವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ.ಮಾನಸ ಮತ್ತು ಅವರ ಜೊತೆಗೂಡಿ  ಪ್ರಾಧಿಕಾರ ಸದಸ್ಯರು   ಮಾಡುತ್ತಿರುವರು.  ಈ ಕಾರ್ಯಕ್ರಮ ಈಗ  ರಾಜ್ಯ ಅಷ್ಟೇ ಅಲ್ಲ ಹೊರ ರಾಜ್ಯಗಳಲ್ಲೂ, ಪಾಶ್ಚಿಮಾತ್ಯ ರಾಷ್ಟ್ರಗಳ ಗಮನವನ್ನು  ಸೆಳೆದಿದೆ ಎಂದರು.ಡಾ.ಬಿ.ಡಿ.ಕುಮಾರ್ ಅವರು ಸಂಗ್ರಹಿಸಿ ಕಾಪಾಡಿಟ್ಟಿರುವ ತಾಳೆಗರಿ ಗ್ರಂಥ ರಾಮಾಯಣ ಕಟ್ಟುಗಳ ಕಟ್ಟು ಬಿಚ್ಚಿ  ಉದ್ಘಾಟನಾ ಭಾಷಣ  ಮಾಡಿದ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ ಅವರು ತಾವು ಕನ್ನಡ ಪುಸ್ತಕ ಪ್ರಾಧಿಕಾರದ 10ನೇ ಅಧ್ಯಕ್ಷರು. ಮೊದಲನೇ ಅಧ್ಯಕ್ಷರು   ಎಲ್.ಎನ್. ಶೇಷಗಿರಿರಾವ್ ಅವರು.  ಅಂದಿನಿಂದ ಪ್ರಾಧಿಕಾರವು ಹಲವಾರು ಯೋಜನೆಗಳನ್ನು ರೂಪಿಸಿದೆ. ಪುಸ್ತಕ ಪ್ರಕಾಶಕರು, ಮುದ್ರಕರನ್ನುಪ್ರೋತ್ಸಾಹಿಸಲು ಪುಸ್ತಕ ಸೊಗಸು ಪ್ರಶಸ್ತಿ, ನಗದು ಬಹುಮಾನ ಯೋಜನೆ ಇದೆ.  ಪುಸ್ತಕ ಓದುಗರನ್ನು ಗುರುತಿಸಿ ಪ್ರೋತ್ಸಾಹಿಸಲು ವಲಯವಾರು    ನಾಲ್ಕು ಪ್ರಶಸ್ತಿಗಳನ್ನು 25000 ನಗದು ಬಹುಮಾನ ನೀಡಲಾಗುವುದು ಎಂದರು.  ಡಾ. ಬಿ ಡಿ. ಕುಮಾರ್ ಅವರ ಅಭಿನಂದನಾ ಗ್ರಂಥ ಅಕ್ಷರ ಕೃಷಿಕ ಪುಸ್ತಕದ ಸಂಪಾದಕರು ಹಾಗೂ ಕನ್ನಡ ಪ್ರಾಧ್ಯಾಪಕರು ಡಾ. ಹರೀಶ್ ಕುಮಾರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಅರಸೀಕೆರೆ ಕೃತಿ ಪರಿಚಯಿಸಿ ಮಾತನಾಡಿ ಕುಮಾರ್  ಅವರು ಅರಸೀಕೆರೆಯಲ್ಲಿ ಬಹು ಧೀರ್ಘಕಾಲ  ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡಿ, ಕಲಾವಿದರಾಗಿ ದೆಹಲಿಯಲ್ಲಿ ಜನಪದ ಕಾರ್ಯಕ್ರಮ ನೀಡಿ ಬಂದಿದ್ದಾರೆ. ಪ್ರಗತಿಪರ  ಕೃಷಿಕರಾಗಿ ಹಳ್ಳಿ ವಿದ್ಯಾರ್ಥಿಗಳಿಗೆ ಮಾದರಿಯಾಗಿದ್ದಾರೆ,  ಇವರ ಜೀವನಶೈಲಿ ಇಂದಿನ ಸಮಾಜಕ್ಕೆ ಮಾದರಿ ಎಂದು ಪ್ರಶಂಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲೆಯ ಹಿರಿಯ ಸಾಹಿತಿ ಗೊರೂರು ಅನಂತರಾಜು     ಬಾರೆ ನೆಲದಲ್ಲಿ ಗುಡ್ಡದ ಮನೆ  ಮಾಡಿ, ಉತ್ತು ಭಿತ್ತಿ ಹಸನಾದ, ಫಲವತ್ತಾದ ಭೂಮಿಯನ್ನಾಗಿ ಪರಿವರ್ತಿಸಿರುವ ಪ್ರಗತಿಶೀಲ ಕುಮಾರ್ ಅವರ ತೋಟದ ಮನೆ, ಪ್ರಾಚೀನ ತಾಳೆಗರಿ, ಹಳೆಯ ಬೆಲೆ ಬಾಳುವ ಮೌಲ್ಯಯುತ ಪುಸ್ತಕಗಳ ಸಂಗ್ರಹ ಸಂರಕ್ಷಣೆ ನೋಡುತ್ತಿದ್ದರೆ ಬಂಗಾರದ ಮನುಷ್ಯ ಚಿತ್ರ ನನಗೆ ನೆನಪಾಗುತ್ತದೆ. ಈ ಗ್ರಂಥಾಲಯವನ್ನು ಸಂರಕ್ಷಿಸುವುದು ಅಗತ್ಯವಾಗಿದೆ.  ಇದು ಕನ್ನಡ ಸಂಶೋಧಕ ವಿದ್ಯಾರ್ಥಿಗಳಿಗೆ,  ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಬೇಕಿದೆ. ಈ ದಿಶೆಯಲ್ಲಿ, ಸಂಘ ಸಂಸ್ಥೆಗಳು ಅವರಿಗೆ ಸಹಕರಿಸಿ ನೆರವಾಗಬೇಕಿದೆ ಎಂದರು.  ಜಿಲ್ಲಾ ಜಾಗೃತ ಸಮಿತಿ ಸದಸ್ಯರು ಡಾ. ಬರಾಳು ಶಿವರಾಮ ಚನ್ನರಾಯಪಟ್ಟಣ,  ಸುಂದರೇಶ್ ಡಿ ಉಡುವಾರೆ, ರೈತ ಹೋರಾಟಗಾರರು ಮನೋಹರ್ ಪಾಟೀಲ್, ತಿಪಟೂರು, ಕವಿ ಎನ್.ಎಲ್. ಚನ್ನೇಗೌಡ, ಕೊಬ್ಬರಿ ಕೆತ್ತನೆ  ಕಲಾವಿದರು ಅರಸೀಕೆರೆ ಹರೀಶ್ ಕುಮಾರ್, ಹರ್ಷ ಇದ್ದರು. ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷರು ಡಾ. ಮಾನಸ  ಕುಮಾರ್  ದಂಪತಿಗಳನ್ನು  ಶಾಲು ಓದಿಸಿ ಸನ್ಮಾನಿಸಿ ಅಭಿನಂದನಾ ಪತ್ರ ನೀಡಿ ಗೌರವಿಸಿದರು. ಡಾ.ಬಿ.ಡಿ..ಕುಮಾರ್ ಜನಪದ ಗೀತೆ ಹಾಡಿ ಪ್ರಾರ್ಥಿಸಿದರು. ಗೊರೂರು ಅನಂತರಾಜು

“ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮ” ಗೊರೂರು ಅನಂತರಾಜು Read Post »

ಇತರೆ

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ

ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ  “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ  ಗೃಹಿಣಿ…. ಅಯ್ಯೋ ಈ ಮನೆ ಕೆಲಸ ಮುಗಿಯೋದೇ ಇಲ್ಲ ಇದರ ಮೇಲೆ ಮಕ್ಕಳು ಗಂಡ ಹೇಳಿದ್ದನ್ನೆಲ್ಲ ಮಾಡಿ ಹಾಕಬೇಕು. ಅತ್ತೆ ಮಾವನ ಕಾಳಜಿ ಮಾಡಬೇಕು. ನನ್ನ ಬದುಕು ಪೂರ್ತಿ ಗಂಡ ಮನೆ ಮಕ್ಕಳು ಅಂತ ಅವರ ಸುತ್ತಲೇ ಸುತ್ತುತ್ತದೆ ಅಂತ ಅನಿಸುತ್ತದೆ ನನಗೋಸ್ಕರ ಒಂದಷ್ಟು ಟೈಮ್ ಮಾಡ್ಕೋಬೇಕು  ನಾನು ಕೂಡ ಬದುಕಿನಲ್ಲಿ ಏನನ್ನಾದರೂ ಸಾಧಿಸಬೇಕು ಅನ್ನೋ ಆಸೆ ನನಗೂ ಇದೆ ಆದರೆ ಏನು ಮಾಡೋದು ? ಯಾವುದೂ ಆಗ್ತಾ ಇಲ್ಲ…. ಪಕ್ಕದ ಮನೆಯ ಲೀಲಾ ಶಾಲೆಯಲ್ಲಿ ಟೀಚರ್ ಆಗಿ ಕೆಲಸ ಮಾಡ್ತಾಳೆ ದೊಡ್ಡ ಸಂಬಳ ಬರದೇ ಇರಬಹುದು, ನಿಜ ಆದರೆ ಆಕೆ ಪ್ರತಿದಿನ ಸಮಯಕ್ಕೆ ಸರಿಯಾಗಿ ತಯಾರಾಗಿ ಶಾಲೆಗೆ ಹೋಗುವಾಗ ಆಕೆಯ ಮುಖದಲ್ಲಿರುವ ಸಂತಸ ಹೆಮ್ಮೆ ನೋಡಿದರೆ ನನಗೆ ಖುಷಿಯಾಗುತ್ತೆ. ಕೆಲಸ ಜೊತೆ ಕೆಲಸ ಆಯ್ತು ಶಾಲೆಯಲ್ಲಿ ನಡೆಯೋ ಎಲ್ಲಾ ಆಕ್ಟಿವಿಟೀಸ್ ಗಳಲ್ಲಿ ಅವರು ಪಾರ್ಟಿಸಿಪೇಟ್ ಮಾಡ್ತಾರೆ ಜನರ ಜೊತೆ ಸಂಪರ್ಕ ಇರುತ್ತೆ. ಮಕ್ಕಳ ಜೊತೆ ನಕ್ಕು ನಲೀತಾರೆ ಜೊತೆಗೆ ಒಂದಷ್ಟು ಪಾಕೆಟ್ ಮನಿ ರೀತಿಯಲ್ಲಿ ಹಣ ಕೂಡ ಸಂಪಾದಿಸುತ್ತಾರೆ.ತಾವು ಖರೀದಿಸಿದ ಬಟ್ಟೆಗಳನ್ನ, ಒಡವೆಗಳನ್ನ ಆಯಾ ಕಾರ್ಯಕ್ರಮಗಳಿಗೆ ತಕ್ಕಂತೆ ಸರಿಯಾದ ರೀತಿಯಲ್ಲಿ ಉಪಯೋಗಿಸಿಕೋತಾರೆ. ಶಾಲೆಯಲ್ಲಿ ಮಕ್ಕಳೊಟ್ಟಿಗೆ, ನಂತರ ಸಹೋದ್ಯೋಗಿಗಳೊಂದಿಗೆ ವಿವಿಧ ಬಗೆಯ ಕಾರ್ಯಕ್ರಮಗಳನ್ನ ಅಟೆಂಡ್ ಮಾಡ್ತಾರೆ ಪ್ರವಾಸ ಹೋಗ್ತಾರೆ, ಬದುಕನ್ನ ಪರಿಪೂರ್ಣವಾಗಿ ಎಂಜಾಯ್ ಮಾಡ್ತಾರೆ….  ಒಟ್ಟಿನಲ್ಲಿ ನೆಮ್ಮದಿಯ ಬದುಕು ಅವರದು.ಲೀಲಾ ಟೀಚರ್…. ಅಯ್ಯೋ ನಮ್ಮನೆಯವರು ಚೆನ್ನಾಗಿ ದುಡಿತಾ ಇದ್ರೆ, ನಾನ್ ಯಾಕ್ರೀ ಈ ಚಾಕರಿಗೆ ಬರ್ತಾ ಇದ್ದೆ. ಮನೆಯಲ್ಲಿ ಒಂದು ಇದ್ದರೆ ಒಂದು ಇರಲ್ಲ… ಆರ್ಥಿಕವಾಗಿ ಅನುಕೂಲ ಇದ್ರೆ ಎಲ್ಲವೂ ಚೆನ್ನ. ಅದಕ್ಕೆ ಅದೆಷ್ಟೇ ಕಷ್ಟ ಆದರೂ ಪರವಾಗಿಲ್ಲ ಅಂತ ಈ ಕೆಲಸಕ್ಕೆ ಸೇರಿಕೊಂಡಿದೀನಿ. ತಕ್ಕಮಟ್ಟಿಗೆ ಸಂಬಳಾನು ಸಿಗುತ್ತೆ ಅನ್ನಿ.ಆದರೆ ಏನು ಮಾಡೋದು….ಕೆಲಸಕ್ಕೆ ಹೋಗೋ ಅವಸರದಲ್ಲಿ ಗಡಿಬಿಡಿಯಿಂದ ಮನೆಯ ಎಲ್ಲಾ ಕೆಲಸ ಮುಗಿಸಿ ಸ್ನಾನ ಮಾಡಿ ತಿಂಡಿ ತಿಂದು ಶಾಲೆಗೆ ಓಡಿ ಹೋಗುವಷ್ಟರಲ್ಲಿ ಅಬ್ಬಾ! ಸಾಕು ಈ ಧಾವಂತದ ಬದುಕು ಅನ್ಸುತ್ತೆ. ಇನ್ನು ಇಡೀ ದಿನ ಎಲ್ಲಾ ಶಾಲೆಯಲ್ಲಿ ಕಳೆದು ಹೋಗುತ್ತೆ. ಖಾಸಗಿ ಶಾಲೆ ಆಗಿರೋದ್ರಿಂದ ಎಲ್ಲರ ಮರ್ಜಿ ಕಾಯಬೇಕು. ಆಡಳಿತ ಮಂಡಳಿಯವರ ಕಣ್ಣಿಗೆ ಕಿಸುರಾಾಗಬಾರದು. ಪ್ರಿನ್ಸಿಪಾಲ್ ಹೇಳಿದ ರೀತಿಯಲ್ಲಿ ಕ್ಲಾಸ್ಗಳನ್ನ ತಗೋಬೇಕು. ಚೋಟುದ್ದ ಮಕ್ಕಳ ಧಿಮಾಕು ತುಸು ಹೆಚ್ಚೇ ಇರುತ್ತೆ ಅವರನ್ನು ಸರಿದಾರಿಗೆ ತರೋದಕ್ಕೆ ನಮ್ಮೆಲ್ಲಾ ಶ್ರಮವನ್ನ ಹಾಕಬೇಕು. ಇನ್ನು ಅವರ ಪಾಲಕರ ಮಾತನ್ನು ಕೂಡ ಕೇಳಬೇಕು… ಅವರು ಹೇಳ್ತಾರೆ ತಮ್ಮ ಮಕ್ಕಳು ಮನೆಯಲ್ಲಿ ಮಾತ್ರ ಗಲಾಟೆ ಮಾಡುತ್ತಾರೆ ಅವರನ್ನು ಹಿಡಿಯೋಕಾಗಲ್ಲ ಅಂತ. ಆದ್ರೆ ಶಾಲೆಯಲ್ಲಿ ಅವರಂತಹ ಒಳ್ಳೆಯವರೇ ಇಲ್ಲ ಅನ್ನೋ ರೀತಿ ಅವರ ವರ್ತನೆ ಇರುತ್ತದೆ.ಇನ್ನು ಈ ಮಕ್ಕಳು ತಮ್ಮ ಹೆತ್ತವರ ಮುಂದೆ ತುಂಬಾ ಮುಗ್ಧರು ಅನ್ನೋ ರೀತಿ ವರ್ತಿಸ್ತಾರೆ ಆದರೆ ಅವರದು ಪ್ರಳಯಾಂತಕ ಬುದ್ಧಿ.ಮನೆಯಿಂದ ಹೊರಗೆ ನಾಲ್ಕು ಜನರ ಮಧ್ಯದಲ್ಲಿ ಓಡಾಡೋದ್ರಿಂದ ಸಮಾಜದಲ್ಲಿ ಒಂದಷ್ಟು ಗೌರವ, ನಮ್ಮ ಮಕ್ಕಳ ಶಿಕ್ಷಕರು ಎಂಬ ಪ್ರೀತಿ,ವಿಶ್ವಾಸ ಇರುತ್ತದೆ. ಆದರೆ ದೇಹಕ್ಕೆ ಮನಸ್ಸಿಗೆ ವಿಶ್ರಾಂತಿ ಎಂಬುದು ಕನಸಿನ ಮಾತು. ಇದಕ್ಕಿಂತ ಸರ್ಕಾರಿ ಶಾಲೆ, ಟೀಚರ್ ಆದ್ರೆ ಒಳ್ಳೆ ಸಂಬಳನೂ ಬರುತ್ತೆ ಯಾವುದೇ ಅಭದ್ರತೆ ಕಾಡೋದಿಲ್ಲ… ಏನು ಮಾಡೋದು ಎಲ್ಲಾನು ಪಡ್ಕೊಂಡು ಬಂದಿರಬೇಕಲ್ವೇ ?ಸರ್ಕಾರಿ ಶಾಲೆ ಶಿಕ್ಷಕಿ….. ಹೌದು ರೀ ಹೇಳೋದಕ್ಕೆ ಸರ್ಕಾರಿ ನೌಕರಿ, ಸರ್ಕಾರಿ ಸಂಬಳ ಎಲ್ಲವೂ ಚೆನ್ನಾಗಿ ಕಾಣಿಸುತ್ತೆ. ಆದರೆ ಸರ್ಕಾರಿ ಕೆಲಸ ಒಂದು ರೀತಿ ಕತ್ತೆ ಚಾಕರಿ ಇದ್ದಹಾಗೆ ಅನ್ನೋದು ಜನರಿಗೆ ಗೊತ್ತಾಗಲ್ಲ. ಏನು ಕೆಲಸ ಮಾಡ್ತೀರಿ ? ಅಂತ ಕೇಳಿದ ಜನ ನಮ್ಮ ಉತ್ತರ ಕೇಳಿ ಗೌರ್ಮೆಂಟ್ ಸ್ಕೂಲ್ ಟೀಚರ್ರಾ, ಬಿಡಿ ಕೆಲಸ ಮಾಡಿದ್ರೂ ಸಂಬಳ ಬರುತ್ತೆ, ಮಾಡದೆ ಇದ್ರೂ ಬರುತ್ತೆ ಎಂದು ಮೂಗು ಮುರಿದಾಗ ಅದೆಷ್ಟು ನೋವಾಗುತ್ತೆ ಗೊತ್ತಾ ? ನಾವು ಶಾಲೆಗಳಲ್ಲಿ ಓದಿಸುವ ಮಕ್ಕಳು ಸಂಪೂರ್ಣ ಶಿಕ್ಷಿತರಲ್ಲದವರ ಮಕ್ಕಳು. ಮಕ್ಕಳಿಗೆ ಶಾಲೆಯಲ್ಲಿ ಪಾಠ ಹೇಳಿಕೊಡುವುದರ ಜೊತೆಗೆ ಮನೆಯಲ್ಲಿ ಮನೆ ಪಾಠವನ್ನು ನಾವು ಕೊಡುತ್ತೇವೆ, ನಿಜ….ಆದರೆ ಅದನ್ನು ಮಾಡಿಸೋರು ಯಾರು ? ಯಾಕೆಂದರೆ ಪಾಲಕರಿಗೆ ಅಯ್ಯೋ! ಅದೆಲ್ಲ ನಮಗೆ ಗೊತ್ತಾಗೋದಿಲ್ಲ ಅಂತ ಕೈ ಒದರೋದು ಮಾತ್ರ ಗೊತ್ತು. ಮಕ್ಕಳಿಗೆ ಒಂಚೂರು ಕಟ್ಟುನಿಟ್ಟು  ಮಾಡಿದಾಗ  ಓಡೋಡಿ ಬಂದು ನಾವೇ ನಮ್ಮ ಮಕ್ಕಳಿಗೆ ಏನೂ ಹೇಳೊಲ್ಲ, ಒಂದೇಟು ಹೊಡೆಯಲ್ಲ… ಅದು ಹೇಗೆ ರೀ ನೀವು ನಮ್ಮ ಮಕ್ಕಳಿಗೆ ಬಯ್ಯೋದು ಅಂತ ನಮ್ಮನ್ನ  ದಬಾಯಿಸ್ತಾರೆ.ತೆಗೆದುಕೊಟ್ಟುಬಿಡಿ ನಮ್ಮ ಮಕ್ಕಳ ಟಿ ಸಿ ನ ಅಂತ ಗುರುಗುಟ್ಟತಾರೆ.ಇನ್ನು ನಮ್ಮ ಸರ್ಕಾರಗಳು ಜನಗಣತಿಯಿಂದ ಹಿಡಿದು ದನಗಣತಿಯವರೆಗೆ ಎಲ್ಲ ಕೆಲಸಕ್ಕೂ ನಮ್ಮನ್ನೇ ಬಳಸಿಕೊಳ್ಳುತ್ತಾರೆ. ರಜಾ ದಿನಗಳಲ್ಲಂತೂ ಸರಿ… ಶಾಲೆ ಇದ್ದಾಗಲೂ ಈ ಕಾರ್ಯ ಮಾಡೋದು ಅಂದ್ರೆ ಮಕ್ಕಳ ಸಿಲಬಸ್ ಹೇಗೆ ಪೂರ್ಣಗೊಳಿಸಬೇಕು ಹೇಳಿ ?ಇದರ ಮೇಲೆ ಬಿಸಿಊಟದ ವ್ಯವಸ್ಥೆ ನಮ್ಮ ನಮ್ಮ ತರಗತಿಯಲ್ಲಿ ಆ ದಿನ ಬಂದಿರುವ ವಿದ್ಯಾರ್ಥಿಗಳ ಸಂಖ್ಯೆ ಹೇಳಬೇಕು, ಹುಡುಗರು ಎಷ್ಟು ಹುಡುಗಿಯರು ಎಷ್ಟು ಯಾರು ಮೊಟ್ಟೆ ತಿಂತಾರೆ ? ಯಾರು ಬಾಳೆಹಣ್ಣು ತಿಂತಾರೆ ಎಂದೆಲ್ಲ ಲೆಕ್ಕ ಕೊಡಬೇಕು. ಅವರಿಗೆ ಮಾಡುವ ಅಡುಗೆ ಪೌಷ್ಟಿಕವಾಗಿದೆಯೇ? ತರಕಾರಿಗಳನ್ನು ಹಾಕಿ ಮಾಡಿದ್ದಾರೆಯೇ? ಹಾಲು ಚೆನ್ನಾಗಿ ಕಾಯಿಸಿದ್ದಾರೆಯೇ ಅನ್ನೋದನ್ನ ನೋಡ್ಕೋಬೇಕು. ಯಾರಿಗೆ ಬೇಕಪ್ಪ ಈ ಸರ್ಕಾರಿ ಶಿಕ್ಷಕರ ಕೆಲಸ. ಚೆನ್ನಾಗಿ ಓದಿ ಇಂಜಿನಿಯರಿಂಗ್ ಮಾಡಿದ್ರೆ ಎಸಿ ರೂಮಲ್ಲಿ ಕುತ್ಕೊಂಡು ಲ್ಯಾಪ್ಟಾಪ್ ಅಲ್ಲಿ ಕುಟ್ತಾ ಜುಮ್ ಅಂತ ನೌಕರಿ ಮಾಡ್ಕೊಂಡು ವೀಕೆಂಡ್ ಗಳಲ್ಲಿ ಫ್ರೆಂಡ್ಸ್ ಜೊತೆ ಪಾರ್ಟಿ, ಪಿಕ್ನಿಕ್ ಅಂತ ಹೋಗಬಹುದಿತ್ತು…. ಎಲ್ಲಾನು ಪಡ್ಕೊಂಡು ಬರೋಕೆ ಹಣೆಲಿ ಬರ್ದಿರ್ಬೇಕಲ್ಲ.ಸಾಫ್ಟ್ ವೇರ್ ಇಂಜಿನಿಯರ್…. ನಿಜ ನಮ್ಮ ಬದುಕು ನೋಡಲು ಅತ್ಯಂತ ಆಕರ್ಷಕ. ಎಸಿ ರೂಮುಗಳಲ್ಲಿ ಬೋರ್ಡ್ ಮೀಟಿಂಗ್ ಗಳಲ್ಲಿ, ಆಕರ್ಷಕವಾದ ವಾತಾವರಣದಲ್ಲಿ ಠಾಕು ಠೀಕಾದ ಬಟ್ಟೆ ಧರಿಸಿ ಅದಕ್ಕೆ ತಕ್ಕಂತೆ ಶೂ ಇಲ್ಲವೇ ಚಪ್ಪಲಿ ಹಾಕಿಕೊಂಡು ಆತ್ಮವಿಶ್ವಾಸದಿಂದ ಎದೆ ಉಬ್ಬಿಸಿ ನಡೆಯುತ್ತಾ ಇದ್ದರೆ ಎಲ್ಲರೂ ನಮ್ಮನ್ನೇ ನೋಡಿ ಬೆಕ್ಕಸ ಬರಗಾಗುವಂತಹ ಬದುಕು ನಮ್ಮದು. ಆದರೆ ದೀಪದ ಅಡಿಯಲ್ಲಿ ಕತ್ತಲು ಎಂಬಂತೆ ಒಂದೇ ಸಮನೆ ಲ್ಯಾಪ್ಟಾಪ್ ನೋಡಿ ಕೆಲಸ ಮಾಡುವ ನಮಗೆ ವಿಪರೀತ ದೈಹಿಕ ತೊಂದರೆಗಳು ಕಾಡುತ್ತವೆ. ಎಲ್ಲರಿಗೂ ನಲವತ್ತಕ್ಕೆ ಕನ್ನಡಕ ಬಂದರೆ ನಮಗೆ ನೌಕರಿ ಸೇರಿದ ಕೆಲವೇ ತಿಂಗಳುಗಳಲ್ಲಿ ಕಣ್ಣಿಗೆ ಕನ್ನಡಕ ಕಡ್ಡಾಯ. ಸದಾ ಕುಳಿತು ಕೆಲಸ ಮಾಡುವುದರಿಂದ ಕಣ್ಣುಗಳು ಡ್ರೈ ಆಗುವ, ಕುತ್ತಿಗೆ ಬೆನ್ನುಗಳಲ್ಲಿ ವಿಪರೀತ ನೋವು ಸಹಜ. ನಮ್ಮ ಒಡನಾಟ ಹೈ ಲೆವೆಲ್ ಕಾರ್ಪೊರೇಟ್ ಜನರೊಂದಿಗೆ ಇರುವುದರಿಂದ ಅಲ್ಲಿಯ ಊಟ ತಿಂಡಿಗೆ ನಮ್ಮನ್ನು ನಾವು ಒಗ್ಗಿಸಿಕೊಳ್ಳುವ ಕಾರಣ ದೇಹದಲ್ಲಿ ಅನವಶ್ಯಕ ಬೊಜ್ಜು ಸೇರಿಕೊಳ್ಳುತ್ತದೆ. ಪರಿಣಾಮವಾಗಿ 60ರ ನನ್ನ ಅಮ್ಮ ಇನ್ನೂ ಚಿರ ಯುವತಿಯಂತೆ ಓಡಾಡಿಕೊಂಡಿದ್ದರೆ ಅವರ ಮುಂದೆ ನಾನು ಸದಾ ಬಂದಿಲ್ಲೊಂದು ನೋವುಗಳನ್ನು ಹೇಳಿಕೊಂಡು ತಿರುಗುತ್ತೇನೆ. ಪ್ರಾರಂಭದ ಒಂದೆರಡು ವರ್ಷ ಜನ ಎಲ್ಲ ನೋಡೋ ಹಾಗೆ ಒಳ್ಳೆ ಕೆಲಸ, ಫ್ರೆಂಡ್ಸು, ವೀಕೆಂಡ್ ಮೋಜು ಮಜಾ ಅಂತ ಕಾಲ ಕಳೆಯಿತು…. ನಂತರ ಅಪ್ಪ-ಅಮ್ಮನ ವರಾತ ಶುರುವಾಗಿ ನನ್ನದೇ ಸಾಫ್ಟ ವೇರ್ ಫೀಲ್ಡಿನ ಯುವಕನೊಂದಿಗೆ ನನ್ನ ಮದುವೆಯೂ ಆಯಿತು. ಯವ್ವನದ ಹಸಿ ಬಿಸಿ ಆಸೆ ಆಕಾಂಕ್ಷೆಗಳ, ಕನಸುಗಳ ಹಂಚಿಕೆಯೂ ಆಗಿ, ಮದುವೆಯ ಹನಿಮೂನ್ ಅವಧಿ ಮುಗಿದು ಕೆಲಸಕ್ಕೆ ಮತ್ತೆ ಜಾಯಿನ್ ಆದದ್ದೇ ಬಂತು. ನಾವು ಪರಸ್ಪರ ಜೊತೆಯಾಗಿ ಇರಲು ಮಾತನಾಡಲು ಕೂಡ ವೀಕೆಂಡ್ಗಳಿಗಾಗಿ ಕಾಯಬೇಕು. ಇನ್ನು ವಿಪರೀತ ಒತ್ತಡದ ಕೆಲಸದ ನಂತರ ಬರುವ ವೀಕೆಂಡ್ ಗಳಲ್ಲಿ ಮನೆಯ ರಾಶಿ ಕೆಲಸಗಳು ಕಾಯುತ್ತಿರುತ್ತವೆ… ಅದೆಲ್ಲವನ್ನು ಹೇಗೋ ಮ್ಯಾನೇಜ್ ಮಾಡಿ ಉಸ್ತಪ್ಪ ಅಂತ ಸೋಫಾದಲ್ಲಿ ಕುಳಿತುಕೊಂಡರೆ ಅರಿವಿಲ್ಲದೆ ನಿದ್ರೆ ಆವರಿಸಿಕೊಳ್ಳುತ್ತದೆ. ನಾವಿಬ್ಬರೂ ಬದುಕಿನ ಪಯಣದಲ್ಲಿ ಕಂಪನಿಯಲ್ಲಿ ನೀಡುವ ಪ್ರಾಜೆಕ್ಟ್ ಗಳನ್ನು ಕಂಪ್ಲೀಟ್ ಮಾಡಲು ಒಂದೇ ಸಮನೆ ಓಡುತ್ತಿದ್ದೇವೆ… ನನಗೆ ಕೊಂಚ ಬಿಡುವ ದೊರೆತಾಗ ನನ್ನವನಿಗೆ ವಿಪರೀತ ಕೆಲಸದ ಒತ್ತಡ, ಮಾತಾಡಿದರೆ ಸಿಡಾರ್ ಎಂದು ಸಿಡುಕಬಹುದು ಎಂಬ ಅಳುಕು… ಕಾರಣ ಕೆಲಸದ ಒತ್ತಡ, ಭದ್ರತೆ ಅವನಂತೆ ನನಗೂ ಇದೆ ಅಲ್ಲವೇ ? ಇದರ ಮಧ್ಯದಲ್ಲಿ ಮಗುವಾದರೆ ಅದರೊಂದಿಗೆ ಎಂಜಾಯ್ ಮಾಡಲು ಕೂಡ ಆಗದೇ ಇರುವಷ್ಟು ಮುಂದಿನ ಬದುಕಿನ ಕುರಿತ ಕಾಳಜಿ. ಐದಾರು ತಿಂಗಳ ಮೆಟರ್ನಿಟಿ ಲೀವ್ ದೊರೆಯುತ್ತದೆ ನಿಜ… ಆದರೆ ನಾಗಾಲೋಟದಲ್ಲಿ ಬದಲಾಗುತ್ತಿರುವ ಐ ಟಿ ಕ್ಷೇತ್ರದ ಅಭಿವೃದ್ಧಿ ಪಥಕ್ಕೆ ನಾನು ಸರಿ ಹೊಂದದೆ ಎಲ್ಲಿ ಹಿಂದೆ ಉಳಿದುಬಿಡುವೆನೋ ಎಂಬ ಆತಂಕ, ಭಯ ನನ್ನನ್ನು ಇನ್ನಿಲ್ಲದಂತೆ ಕಾಡುತ್ತದೆ. ಒಂದು ವೇಳೆ ಹಾಗಾದಾಗ ನನಗೆ ನನ್ನ ಯೋಗ್ಯತೆಗೆ ತಕ್ಕ ಕೆಲಸ ದೊರೆಯದೆ ಹಿಂದುಳಿದು ಬಿಟ್ಟರೆ? ನನ್ನನ್ನು ಕೆಲಸದಿಂದ ತೆಗೆದುಹಾಕಿದರೆ ಎಂಬ ಆತಂಕ…. ಇದರ ಜೊತೆಗೆ ಸಹಜವಾಗಿಯೇ ನನ್ನಮ್ಮ, ಅತ್ತೆಯಂತೆ ನಾನು ಕುಟುಂಬಕ್ಕೆ ನನ್ನ ಸಮಯವನ್ನು ನೀಡುತ್ತಿಲ್ಲ, ಮಕ್ಕಳಿಗೆ ನೀಡಬೇಕಾದ ಅಗತ್ಯ ಕಾಳಜಿಯನ್ನು ವಹಿಸಲಾಗುತ್ತಿಲ್ಲ ಎಂಬ ಭಾವ ನನ್ನನ್ನು ಸದಾ ಹಿಂಡಿ ಹಿಪ್ಪೆ ಮಾಡುತ್ತದೆ. ಅತ್ತ ಕೌಟುಂಬಿಕವಾಗಿ ಎಲ್ಲರನ್ನೂ ಮೆಚ್ಚಿಸಲಾಗದೆ, ಔದ್ಯೋಗಿಕವಾಗಿಯೂ ಎಲ್ಲವನ್ನು ನಿರ್ವಹಿಸಲಾಗದೆ ಎಲ್ಲಿಯೂ ಸಲ್ಲದವರಾಗಿ ಬಿಡುತ್ತೇವೆ ಎಂಬ ಭಯ. ಹೋಗಲಿ ಬಿಡು…, ಇಬ್ಬರಲ್ಲಿ ಒಬ್ಬರು ದುಡಿಯುತ್ತೇವಲ್ಲ ನೌಕರಿ ಬಿಟ್ಟರೆ ಆಯ್ತು ಅಂದುಕೊಳ್ಳಲು ಕಂತಿನಲ್ಲಿ ಖರೀದಿಸಿದ ಕಾರು, ಮನೆಗಳ ಸಾಲಗಳು… ಇನ್ನೂ ನಮ್ಮ ಬಾಕಿ ಇದೆ ಎಂದು ತಟ್ಟಿ ನಮ್ಮನ್ನು ಎಚ್ಚರಿಸುತ್ತವೆ. ಇದೆಲ್ಲಾ ನೋಡಿದರೆ ಹಳ್ಳಿಯಲ್ಲಿ ಆರಾಮಾಗಿ ಇರುವ ನನ್ನಮ್ಮನ ಹಾಗೆ ಬದುಕನ್ನು ಅದು ಇರುವಂತೆ ಸಾಗಿಸಿಕೊಂಡು ಹೋಗುವುದರಲ್ಲಿ ಅದೆಷ್ಟು ಸುಖವಿದೆ ಅಂತ ಅನ್ಸುತ್ತೆ… ಏನು ಮಾಡೋದು ಎಲ್ಲವೂ ನಮ್ಮ ಕೈಯಲ್ಲಿ ಇಲ್ಲ. ಪರಿಸ್ಥಿತಿ ಬಂದ ಹಾಗೆ ನಮ್ಮನ್ನು ನಾವು ಹೊಂದಿಸಿಕೊಂಡು ಹೋಗಬೇಕು ಇಲ್ಲದೆ ಹೋದರೆ ನಮ್ಮನ್ನು ನಾವೇ ಕಳೆದುಕೊಳ್ಳಬೇಕಾಗುತ್ತದೆ. ಹಳ್ಳಿಯಲ್ಲಿರುವ ಅಮ್ಮ…. ಅಯ್ಯೋ ನಮ್ಮದು ಒಂದು ಬದುಕೇ?  ನಾನು ಅಂತ ಇಷ್ಟು ದಿನ ಹೊಂದಿಕೊಂಡು ಹೋದೆ. ನಮ್ಮ ಹಳ್ಳಿಯ ಮನೆಗಳು ಕತ್ತಲ ಗೂಡುಗಳು ಕಣ್ಣು ಮುಚ್ಚಾಲೆ ಆಡೋ ಕರೆಂಟು, ಬಾವಿಯ ನೀರು ಸೇದಿ ಬಳಸಬೇಕು ಇಲ್ಲವೇ ಹಳ್ಳಕ್ಕೆ ಹೋಗಬೇಕು… ಇನ್ನು ಮನೆ ಮನೆಗೆ ನೀರಿನ ವ್ಯವಸ್ಥೆ ನಮ್ಮ ಹಳ್ಳಿಗೆ  ಬಂದಿಲ್ಲ. ಹೊಲದಲ್ಲಿ ಸಾಕಷ್ಟು ಕಟ್ಟಿಗೆ ಇರುತ್ತೆ ಅದನ್ನೇ ಬಳಸುವ ಅಂತ ಯಜಮಾನ್ರು ಹೇಳ್ತಾರೆ ಅದು ನಿಜಾನೆ ಹೌದು. ಆದರೆ ಕಟ್ಟಿಗೆ ಒಲೆಯಲ್ಲಿ ಅಡುಗೆ ಮಾಡಿ, ಅದರ ಹೊಗೆ ಕುಡಿದು ಅಸ್ತಮಾ, ಕೆಮ್ಮು ದಮ್ಮು ಎಂದು ಒದ್ದಾಡೋದು ನನ್ನ ಹಣೆಯಲ್ಲಿ ಬರೆದಿದೆ. ಈಗೀಗ ಎಲ್ಲದಕ್ಕೂ ಗ್ಯಾಸ್ ಒಲೆಯನ್ನೇ ಬಳಸ್ತೀನಿ… ನಾನಾದ್ರೂ ಎಷ್ಟು ಅಂತ ಮಾಡ್ಲಿ.ಈ ಹಿಂದೆ ಮನೆಯಲ್ಲಿ ದನ ಕರು ಅಂತ ಸಾಕಷ್ಟು ಹಾಲು ಹಯಿನಿನ ಸಮೃದ್ಧಿ ಇತ್ತು ನಿಜ… ಆದರೆ ಈಗ ಎಲ್ಲಾ ಕೆಲಸ ನಾವೇ ಮಾಡಿಕೊಳ್ಳಬೇಕು. ಈ ಮುಂಚಿನಂತೆ ಆಳುಗಳು ಸಿಗೋದಿಲ್ಲ, ಅವರು ಕೇಳೋವಷ್ಟು ಸಂಬಳ ಕೊಟ್ಟು ಕೆಲಸ ಮಾಡಿಸಿಕೊಳ್ಳೋದಕ್ಕೆ ನಮಗೆ ಆಗೋದಿಲ್ಲ. ಅದಕ್ಕೆ ನಾವು ತಿನ್ನುವುದಾದರೂ ಎಷ್ಟು ಎಂದು

 “ನನ್ನ ಬದುಕಿಗಿಂತ ಅವರದು ವಾಸಿ” ವಿಶೇಷ ಲೇಖನ ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ, ಜೀವನ

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್  

ವಿಶೇಷ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್   “ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ” *”ವಿಧಿಯೇ ನಿನಷ್ಟು ಕ್ರೂರಿ, ಮುಂದೆ ಕನಸುಗಳನ್ನು ತೋರಿಸಿ ಹಿಂದೆ ಇರಿಯುವೆ ಚೂರಿ”* ಎಂಬ ಮಾತು ಕೇಳಿದಾಗ, ಅದು ಕೇವಲ ಒಂದು ಸಾಲು ಎಂದು ಅನಿಸುವುದಿಲ್ಲ. ಜೀವನದಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡವರ ಹೃದಯದ ಮೌನದ ಕಿರುಚಾಟದಂತೆ ಭಾಸವಾಗುತ್ತದೆ. ಆದರೆ ಜೀವನದ ಸತ್ಯ ಇನ್ನೂ ಆಳವಾಗಿದೆ. ವಿಧಿ ಕೆಲವೊಮ್ಮೆ ನಮ್ಮ ಕನಸುಗಳನ್ನು ಮುರಿಯಬಹುದು; ಆದರೆ ನಮ್ಮೊಳಗಿನ ಧೈರ್ಯವನ್ನು ಮುರಿಯಲು ಸಾಧ್ಯವಿಲ್ಲ. ಒಂದು ರೈತನನ್ನು ಕಲ್ಪಿಸಿಕೊಳ್ಳಿ. ಅವನು ಸಾಲ ಮಾಡಿ ಉತ್ತಮ ಬೀಜ ಖರೀದಿಸುತ್ತಾನೆ. ಹೊಲ ಉಳುಮೆ ಮಾಡುತ್ತಾನೆ. ಮಳೆಯ ನಿರೀಕ್ಷೆಯಲ್ಲಿ ಪ್ರತಿದಿನ ಆಕಾಶದತ್ತ ನೋಡುತ್ತಾನೆ. ಆದರೆ ಒಂದು ವರ್ಷ ಬರಗಾಲ ಬರುತ್ತದೆ. ಬೆಳೆ ಹಾಳಾಗುತ್ತದೆ. ಆ ದಿನ ಅವನ ಕನಸುಗಳೂ ಒಣಗಿದಂತೆ ಕಾಣುತ್ತದೆ. ಆದರೂ ಮುಂದಿನ ವರ್ಷ ಮತ್ತೆ ಅದೇ ಹೊಲಕ್ಕೆ ಬೀಜ ಬಿತ್ತುತ್ತಾನೆ. ಏಕೆ? ಏಕೆಂದರೆ ಆಶೆಯನ್ನು ಕಳೆದುಕೊಂಡ ರೈತ ಎಂದಿಗೂ ಬೆಳೆಯನ್ನು ಕಾಣಲಾರನು. ಇದೇ ಬದುಕಿನ ಮೊದಲ ಪಾಠ. ಒಬ್ಬ ವಿದ್ಯಾರ್ಥಿ ವರ್ಷಪೂರ್ತಿ ಶ್ರಮಿಸಿ ಪರೀಕ್ಷೆ ಬರೆಯುತ್ತಾನೆ. ಆದರೆ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲ. ಕೆಲವರು ಅಲ್ಲಿ ನಿಲ್ಲುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ತಪ್ಪುಗಳನ್ನು ಅರಿತು ಮತ್ತೊಮ್ಮೆ ಪ್ರಯತ್ನಿಸುತ್ತಾರೆ. ಎರಡನೇ ಪ್ರಯತ್ನದಲ್ಲೇ ಯಶಸ್ಸನ್ನು ಗಳಿಸುತ್ತಾರೆ. ಸೋಲೇ ಅವರ ಅಂತ್ಯವಾಗಿದ್ದರೆ, ಆ ಯಶಸ್ಸು ಹುಟ್ಟುತ್ತಿರಲಿಲ್ಲ. ಒಂದು ಮಣ್ಣಿನ ಕುಂಭವನ್ನು ನೋಡಿ. ಅದು ಸುಂದರವಾಗುವುದಕ್ಕೆ ಮೊದಲು ಕುಂಬಾರನ ಕೈಯಲ್ಲಿ ಅನೇಕ ಬಾರಿ ತಿರುಗುತ್ತದೆ. ನಂತರ ಬೆಂಕಿಯ ಉರಿಯನ್ನು ಸಹಿಸುತ್ತದೆ. ಆ ಕಷ್ಟದ ನಂತರವೇ ಅದು ಎಲ್ಲರ ಮನೆಗೆ ಅಲಂಕಾರವಾಗುತ್ತದೆ. ಕಷ್ಟವನ್ನು ಸಹಿಸದ ಮಣ್ಣು ಎಂದಿಗೂ ಕುಂಭವಾಗುವುದಿಲ್ಲ. ಒಂದು ಮರವನ್ನು ಕಡಿಯಬಹುದು. ಅದರ ಕೊಂಬೆಗಳು ಮುರಿಯಬಹುದು. ಎಲೆಗಳು ಉದುರಬಹುದು. ಆದರೆ ಬೇರು ಜೀವಂತವಾಗಿದ್ದರೆ ಮತ್ತೆ ಚಿಗುರುತ್ತದೆ. ಹಾಗೆಯೇ ಮನುಷ್ಯನ ಮನಸ್ಸಿನಲ್ಲಿರುವ ಭರವಸೆ ಜೀವಂತವಾಗಿದ್ದರೆ, ಜೀವನ ಮತ್ತೆ ಅರಳುತ್ತದೆ. ಇಂದಿನ ಸಮಾಜದಲ್ಲಿ ನಾವು ಒಂದು ಅಪಾಯಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಜನರು ಮೊಬೈಲ್‌ನಲ್ಲಿ ಸಾವಿರಾರು ಸ್ನೇಹಿತರನ್ನು ಹೊಂದಿದ್ದಾರೆ; ಆದರೆ ಮನಸ್ಸು ಬಿಚ್ಚಿ ಮಾತನಾಡಲು ಒಬ್ಬ ಸ್ನೇಹಿತನೂ ಇಲ್ಲ. ದೊಡ್ಡ ಮನೆಗಳಿವೆ; ಆದರೆ ಮನೆಯಲ್ಲಿ ಮಾತುಗಳಿಲ್ಲ. ಹಣವಿದೆ; ಆದರೆ ನೆಮ್ಮದಿ ಇಲ್ಲ. ಶಿಕ್ಷಣವಿದೆ; ಆದರೆ ಮಾನವೀಯತೆ ಕಡಿಮೆಯಾಗುತ್ತಿದೆ. ಒಮ್ಮೆ ಒಂದು ವೃದ್ಧ ದಂಪತಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ವೈದ್ಯರು ಔಷಧಿ ಕೊಟ್ಟರು. ಆದರೆ ಅವರನ್ನು ಹೆಚ್ಚು ಸಮಾಧಾನಪಡಿಸಿದ್ದು ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯ ಒಂದು ಮಾತು—”ಚಿಂತಿಸಬೇಡಿ, ಎಲ್ಲವೂ ಒಳ್ಳೆಯದಾಗುತ್ತದೆ.” ಆ ಮಾತು ಔಷಧಿಗಿಂತ ಹೆಚ್ಚು ಧೈರ್ಯ ನೀಡಿತು. ಇದರಿಂದ ತಿಳಿಯುವುದು, ಕೆಲವೊಮ್ಮೆ ಮಾತುಗಳೇ ಔಷಧಿಯಾಗುತ್ತವೆ. ನಾವು ಮಕ್ಕಳಿಗೆ ಉತ್ತಮ ಶಾಲೆ ಕೊಡುತ್ತೇವೆ. ಆದರೆ ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಹೃದಯವನ್ನು ಕಲಿಸುತ್ತೇವೆಯೇ? ಸ್ಪರ್ಧೆಯಲ್ಲಿ ಗೆಲ್ಲಲು ಹೇಳುತ್ತೇವೆ. ಆದರೆ ಸೋತವರನ್ನು ಎಬ್ಬಿಸಲು ಹೇಳುತ್ತೇವೆಯೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕ, ಶಿಕ್ಷಕ ಮತ್ತು ಸಮಾಜದ ಮುಂದೆ ನಿಲ್ಲಬೇಕು. ಒಂದು ದೀಪವನ್ನು ಗಮನಿಸಿ. ಅದು ತನ್ನನ್ನು ತಾನೇ ಸುಟ್ಟುಕೊಂಡು ಇತರರಿಗೆ ಬೆಳಕು ನೀಡುತ್ತದೆ. ಒಂದು ನದಿಯನ್ನು ನೋಡಿ. ಅದು ತನ್ನ ನೀರನ್ನು ತಾನೇ ಕುಡಿಯುವುದಿಲ್ಲ; ಬೇರೆಯವರ ದಾಹ ನೀಗಿಸುತ್ತದೆ. ಒಂದು ಮರ ತನ್ನ ಹಣ್ಣುಗಳನ್ನು ತಾನೇ ತಿನ್ನುವುದಿಲ್ಲ; ಇತರರಿಗೆ ನೀಡುತ್ತದೆ. ಪ್ರಕೃತಿಯ ಪ್ರತಿಯೊಂದು ಅಂಶವೂ ತ್ಯಾಗವನ್ನು ಕಲಿಸುತ್ತದೆ. ಮನುಷ್ಯ ಮಾತ್ರ ಸ್ವಾರ್ಥವನ್ನು ಕಲಿಯಬಾರದು. ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳು ಸುಖದಲ್ಲಿ ಬೆಳೆದವರಲ್ಲ. ಅನೇಕ ಕಷ್ಟಗಳನ್ನು ಎದುರಿಸಿ ಸಮಾಜಕ್ಕೆ ದಾರಿದೀಪರಾದವರು. ಆದ್ದರಿಂದ ಕಷ್ಟ ಬಂದಾಗ “ಏಕೆ ನನಗೆ?” ಎಂದು ಕೇಳುವುದಕ್ಕಿಂತ, “ಇದರಿಂದ ನಾನು ಏನು ಕಲಿಯಬಹುದು?” ಎಂದು ಕೇಳುವುದು ಬದುಕನ್ನು ಬದಲಾಯಿಸುತ್ತದೆ. *ಕೊನೆಯಲ್ಲಿ ಒಂದು ಸತ್ಯ—* ವಿಧಿ ನಿಮ್ಮ ದಾರಿಯನ್ನು ತಿರುಗಿಸಬಹುದು.ಸಮಯ ನಿಮ್ಮನ್ನು ಪರೀಕ್ಷಿಸಬಹುದು.ಜನರು ನಿಮ್ಮನ್ನು ಅರ್ಥಮಾಡಿಕೊಳ್ಳದೆ ಇರಬಹುದು. *ಆದರೆ ನಿಮ್ಮ ಧೈರ್ಯ, ನಿಮ್ಮ ಪ್ರಾಮಾಣಿಕತೆ ಮತ್ತು ನಿಮ್ಮ ಮಾನವೀಯತೆ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.* *ಮನುಷ್ಯನ ಜೀವನದ ನಿಜವಾದ ಯಶಸ್ಸು ಅವನು ಎಷ್ಟು ಸಂಪಾದಿಸಿದನೆಂಬುದಲ್ಲ; ಎಷ್ಟು ಹೃದಯಗಳಿಗೆ ಧೈರ್ಯ ತುಂಬಿದನೆಂಬುದರಲ್ಲಿ ಇದೆ.* ಕೆ.ಎಂ. ಕಾವ್ಯ ಪ್ರಸಾದ್    

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್   Read Post »

ಇತರೆ

“ಬರವಣಿಗೆಯ ನಿಜಸ್ವರೂಪ” ವಿಶೇಷ ಲೇಖನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ

ವಿಶೇಷ ಸಂಗಾತಿ ಡಾ. ಮಲ್ಲಿನಾಥ ಎಸ್. ತಳವಾರ “ಬರವಣಿಗೆಯ ನಿಜಸ್ವರೂಪ” ಬರವಣಿಗೆಯ ನಿಜಸ್ವರೂಪ        ಇತ್ತೀಚಿನ ಸಾರಸ್ವತ ಲೋಕದಲ್ಲಿ ಹೆಚ್ಚು ಬಳಕೆಯಾಗುತ್ತಿರುವ ಪದಗಳಲ್ಲಿ ವಿಮರ್ಶೆ, ಸಂಶೋಧನೆ, ಕೃತಿ ಪರಿಚಯ ಮತ್ತು ಕೃತಿ ವಿಶ್ಲೇಷಣೆ ಪ್ರಮುಖವಾಗಿವೆ. ಆದರೆ ಈ ಪದಗಳು ಹೆಚ್ಚು ಬಳಕೆಯಾಗುತ್ತಿರುವಷ್ಟೇ ಅವುಗಳ ಮೂಲ ಅರ್ಥ ಮತ್ತು ಪರಿಕಲ್ಪನೆಗಳು ಮಸುಕಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಒಂದು ಪುಸ್ತಕದ ಕುರಿತು ಎರಡು ಪುಟಗಳ ಪರಿಚಯ ಬರೆದರೂ ಅದನ್ನು ವಿಮರ್ಶೆ ಎಂದು ಕರೆಯಲಾಗುತ್ತಿದೆ; ಕಥಾಸಾರವನ್ನು ಹೇಳಿದರೂ ಅದನ್ನೇ ವಿಶ್ಲೇಷಣೆ ಎಂದು ಭಾವಿಸಲಾಗುತ್ತಿದೆ; ವೈಯಕ್ತಿಕ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರೂ ಅದನ್ನು ವಿಮರ್ಶೆ ಎಂದು ಪರಿಗಣಿಸಲಾಗುತ್ತಿದೆ; ಕೆಲವು ಉಲ್ಲೇಖಗಳನ್ನು ಸೇರಿಸಿದ ಮಾತ್ರಕ್ಕೆ ಅದೇ ಸಂಶೋಧನೆ ಎಂಬ ತಪ್ಪು ಕಲ್ಪನೆಯೂ ಬೆಳೆಯುತ್ತಿದೆ. ಈ ಪರಿಕಲ್ಪನಾತ್ಮಕ ಗೊಂದಲವು ಕೇವಲ ಪದಗಳ ಬಳಕೆಯ ಸಮಸ್ಯೆಯಲ್ಲ; ಅದು ಸಾಹಿತ್ಯಿಕ ಮೌಲ್ಯಮಾಪನದ ಗುಣಮಟ್ಟ, ಸಂಶೋಧನೆಯ ವಿಶ್ವಾಸಾರ್ಹತೆ ಮತ್ತು ಬರವಣಿಗೆಯ ಶೈಕ್ಷಣಿಕ ಘನತೆಯ ಮೇಲೂ ನೇರ ಪರಿಣಾಮ ಬೀರುತ್ತಿದೆ.      ವಾಸ್ತವವಾಗಿ ಬರವಣಿಗೆಯ ಪ್ರತಿಯೊಂದು ಪ್ರಕಾರಕ್ಕೂ ತನ್ನದೇ ಆದ ಉದ್ದೇಶ, ವಿಧಾನ, ವ್ಯಾಪ್ತಿ ಮತ್ತು ಮಿತಿ ಇವೆ. ಕೃತಿ ಪರಿಚಯವು ಮಾಹಿತಿ ನೀಡುವ ಉದ್ದೇಶವನ್ನು ಹೊಂದಿದ್ದರೆ, ಕೃತಿ ವಿಶ್ಲೇಷಣೆಯು ಕೃತಿಯ ಅಂತರಂಗವನ್ನು ತೆರೆದಿಡುತ್ತದೆ. ಇನ್ನೂ ವಿಮರ್ಶೆಯು ಕೃತಿಯ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವ ಪ್ರಕ್ರಿಯೆಯಾಗಿದ್ದರೆ, ಸಂಶೋಧನೆಯು ಹೊಸ ಜ್ಞಾನವನ್ನು ಅನ್ವೇಷಿಸುವ ವೈಜ್ಞಾನಿಕ ಅಧ್ಯಯನವಾಗಿದೆ. ಇವುಗಳಲ್ಲಿ ಯಾವುದೂ ಮತ್ತೊಂದರ ಪರ್ಯಾಯವಲ್ಲ; ಅವು ಪರಸ್ಪರ ಸಂಬಂಧ ಹೊಂದಿದ್ದರೂ ತಮ್ಮದೇ ಆದ ಸ್ವತಂತ್ರ ಸ್ವರೂಪವನ್ನು ಉಳಿಸಿಕೊಂಡಿವೆ. ಆದ್ದರಿಂದ ಈ ಬರವಣಿಗೆಯ ಪ್ರಕಾರಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟವಾಗಿ ಅರಿತುಕೊಳ್ಳುವುದು ಸಾಹಿತ್ಯ ಮತ್ತು ಶೈಕ್ಷಣಿಕ ವಲಯದ ಮೂಲಭೂತ ಅಗತ್ಯವಾಗಿದೆ.       ವಿಮರ್ಶೆಯು ಸಾಹಿತ್ಯ, ಕಲೆ ಅಥವಾ ಯಾವುದೇ ಸೃಜನಾತ್ಮಕ ಕೃತಿಯ ಸ್ವರೂಪ, ಆಶಯ, ರಚನಾ ವೈಶಿಷ್ಟ್ಯ, ಭಾಷೆ, ಶೈಲಿ, ಸೌಂದರ್ಯಾತ್ಮಕ ಅಂಶಗಳು ಹಾಗೂ ಸಾಮಾಜಿಕ-ಸಾಂಸ್ಕೃತಿಕ ಹಿನ್ನೆಲೆಯನ್ನು ವಿವೇಚನಾತ್ಮಕವಾಗಿ ಪರಿಶೀಲಿಸಿ ಅದರ ಸಾಹಿತ್ಯಿಕ ಮೌಲ್ಯವನ್ನು ನಿರ್ಣಯಿಸುವ ಪ್ರಕ್ರಿಯೆಯಾಗಿದೆ. ವಿಮರ್ಶೆಯ ಉದ್ದೇಶ ಪ್ರಶಂಸೆ ಅಥವಾ ಟೀಕೆ ಮಾಡುವುದಲ್ಲ; ಕೃತಿಯ ಗುಣ-ದೋಷಗಳನ್ನು ಸಮತೋಲನದಿಂದ ವಿಶ್ಲೇಷಿಸಿ ಅದರ ಸ್ಥಾನವನ್ನು ನಿರ್ಧರಿಸುವುದಾಗಿದೆ. ಆದ್ದರಿಂದ ವಿಶ್ಲೇಷಣೆಯು ವಿಮರ್ಶೆಯ ಒಂದು ಹಂತವಾಗಿದ್ದರೂ, ವಿಶ್ಲೇಷಣೆ ಮಾತ್ರವೇ ವಿಮರ್ಶೆಯಾಗುವುದಿಲ್ಲ. ವಿಮರ್ಶೆಯು ಅಂತಿಮವಾಗಿ ಮೌಲ್ಯನಿರ್ಣಯವನ್ನು ಒಳಗೊಂಡಿರಬೇಕು. ಇದೇ ವಿಮರ್ಶೆಯ ವಿಶಿಷ್ಟತೆ.      ಸಂಶೋಧನಾ ಬರವಣಿಗೆಯು ಇದಕ್ಕಿಂತ ಭಿನ್ನವಾದ ಸ್ವರೂಪವನ್ನು ಹೊಂದಿದೆ. ಅದು ಹೊಸ ಜ್ಞಾನ, ಹೊಸ ಸತ್ಯ ಅಥವಾ ಹೊಸ ವ್ಯಾಖ್ಯಾನವನ್ನು ಸಾಕ್ಷ್ಯಾಧಾರಿತ ಮತ್ತು ವೈಜ್ಞಾನಿಕ ವಿಧಾನದಲ್ಲಿ ಅನ್ವೇಷಿಸುವ ಪ್ರಕ್ರಿಯೆಯಾಗಿದೆ. ಸಮಸ್ಯೆಯ ನಿರೂಪಣೆ, ಸಾಹಿತ್ಯ ಸಮೀಕ್ಷೆ, ಅಧ್ಯಯನ ವಿಧಾನ, ಮಾಹಿತಿ ಸಂಗ್ರಹ, ವಿಶ್ಲೇಷಣೆ ಮತ್ತು ತೀರ್ಮಾನಗಳ ಮೂಲಕ ಸಂಶೋಧನೆಯು ತನ್ನ ವಿಶ್ವಾಸಾರ್ಹತೆಯನ್ನು ಸಾಧಿಸುತ್ತದೆ. ವೈಯಕ್ತಿಕ ಅಭಿಪ್ರಾಯಕ್ಕಿಂತ ಸಾಕ್ಷ್ಯ, ಉಲ್ಲೇಖ ಮತ್ತು ತಾರ್ಕಿಕ ನಿರೂಪಣೆಗೆ ಇಲ್ಲಿ ಹೆಚ್ಚಿನ ಮಹತ್ವವಿರುತ್ತದೆ. ಹೀಗಾಗಿ ವಿಮರ್ಶೆ ಮತ್ತು ಸಂಶೋಧನೆ ಒಂದೇ ಅಲ್ಲ; ಅವು ಪರಸ್ಪರ ಪೂರಕವಾಗಿದ್ದರೂ ವಿಭಿನ್ನ ಶೈಕ್ಷಣಿಕ ಪ್ರಕ್ರಿಯೆಗಳಾಗಿವೆ.        ಕೃತಿ ಪರಿಚಯವು ಓದುಗರಿಗೆ ಒಂದು ಪುಸ್ತಕದ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ನೀಡುವ ಬರವಣಿಗೆಯಾಗಿದೆ. ಪ್ರಕಟಣೆ-ಪ್ರಕಾಶನದ ವಿವರಗಳು, ಲೇಖಕರ ಪರಿಚಯ, ಕೃತಿಯ ವಿಷಯವಸ್ತು, ಉದ್ದೇಶ ಮತ್ತು ವೈಶಿಷ್ಟ್ಯಗಳನ್ನು ಸಂಕ್ಷಿಪ್ತವಾಗಿ ಪರಿಚಯಿಸುವ ಮೂಲಕ ಓದುಗರಲ್ಲಿ ಆಸಕ್ತಿ ಮೂಡಿಸುವುದು ಇದರ ಗುರಿಯಾಗಿದೆ. ಇದರಲ್ಲಿ ಮೌಲ್ಯನಿರ್ಣಯಕ್ಕೆ ಹೆಚ್ಚಿನ ಅವಕಾಶ ಇರುವುದಿಲ್ಲ. ಅದೇ ರೀತಿ ಕೃತಿ ವಿಶ್ಲೇಷಣೆಯು ಕೃತಿಯನ್ನು ಅದರ ವಿವಿಧ ಅಂಶಗಳಾಗಿ ವಿಭಜಿಸಿ ಕಥಾವಸ್ತು, ಪಾತ್ರಚಿತ್ರಣ, ಭಾಷೆ, ಶೈಲಿ, ಸಂಕೇತಗಳು, ಪ್ರತಿಮೆಗಳು ಹಾಗೂ ರಚನಾ ತಂತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವ ಅಧ್ಯಯನ ವಿಧಾನವಾಗಿದೆ. ಆದರೆ ಅದು ಅಂತಿಮವಾಗಿ ಕೃತಿಯ ಮೌಲ್ಯವನ್ನು ನಿರ್ಣಯಿಸುವುದಿಲ್ಲ. ಈ ಕಾರಣಕ್ಕಾಗಿಯೇ ವಿಶ್ಲೇಷಣೆಯು ವಿಮರ್ಶೆಗೆ ಪೂರಕವಾಗಬಹುದು; ಆದರೆ ವಿಶ್ಲೇಷಣೆಯೇ ವಿಮರ್ಶೆ ಎಂದು ಹೇಳುವುದು ಸರಿಯಲ್ಲ.       ಉಪನ್ಯಾಸ ರೂಪದ ಬರವಣಿಗೆಯೂ ತನ್ನದೇ ಆದ ವೈಶಿಷ್ಟ್ಯವನ್ನು ಹೊಂದಿದೆ. ಒಂದು ನಿರ್ದಿಷ್ಟ ವಿಷಯವನ್ನು ಶ್ರೋತೃಗಳು ಅಥವಾ ಓದುಗರು ಸುಲಭವಾಗಿ ಅರ್ಥಮಾಡಿಕೊಳ್ಳುವಂತೆ ಕ್ರಮಬದ್ಧವಾಗಿ, ಉದಾಹರಣೆಗಳು ಮತ್ತು ವಿವರಣೆಗಳೊಂದಿಗೆ ನಿರೂಪಿಸುವುದು ಇದರ ಉದ್ದೇಶವಾಗಿದೆ. ಇದು ಜ್ಞಾನವನ್ನು ಪರಿಣಾಮಕಾರಿಯಾಗಿ ಹಂಚುವ ಮಾಧ್ಯಮವಾಗಿದ್ದು, ಸಂಶೋಧನಾ ಬರವಣಿಗೆ ಅಥವಾ ವಿಮರ್ಶೆಯ ಪರ್ಯಾಯವಲ್ಲ.       ಇಂದು ಸಾಹಿತ್ಯಲೋಕದಲ್ಲಿ ಕಂಡುಬರುವ ದೊಡ್ಡ ಸಮಸ್ಯೆಯೆಂದರೆ, ಬರವಣಿಗೆಯ ವಿವಿಧ ಪ್ರಕಾರಗಳ ನಡುವಿನ ಗಡಿಗಳು ಅಸ್ಪಷ್ಟವಾಗುತ್ತಿರುವುದು. ಪರಿಚಯವನ್ನು ವಿಮರ್ಶೆ ಎಂದು, ವಿಶ್ಲೇಷಣೆಯನ್ನು ಸಂಶೋಧನೆ ಎಂದು, ಅಭಿಪ್ರಾಯವನ್ನು ಮೌಲ್ಯನಿರ್ಣಯ ಎಂದು, ಪ್ರಚಾರವನ್ನು ಸಾಹಿತ್ಯ ಚರ್ಚೆ ಎಂದು ಕರೆಯುವ ಪ್ರವೃತ್ತಿ ಬೆಳೆಯುತ್ತಿದೆ. ಈ ಗೊಂದಲವನ್ನು ನಿವಾರಿಸದೆ ಸಾಹಿತ್ಯಿಕ ಶಿಸ್ತು ಮತ್ತು ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡಲು ಸಾಧ್ಯವಿಲ್ಲ. ಆದ್ದರಿಂದ ಬರಹಗಾರರು, ವಿಮರ್ಶಕರು, ಸಂಶೋಧಕರು, ವಿದ್ಯಾರ್ಥಿಗಳು ಮತ್ತು ಓದುಗರು ಬರವಣಿಗೆಯ ಪ್ರತಿಯೊಂದು ಪ್ರಕಾರದ ಉದ್ದೇಶ, ವಿಧಾನ ಮತ್ತು ಮಿತಿಯನ್ನು ಸ್ಪಷ್ಟವಾಗಿ ಅರಿತುಕೊಳ್ಳಬೇಕಾಗಿದೆ. ಪರಿಚಯವನ್ನು ಪರಿಚಯವೆಂದು, ವಿಶ್ಲೇಷಣೆಯನ್ನು ವಿಶ್ಲೇಷಣೆಯೆಂದು, ವಿಮರ್ಶೆಯನ್ನು ವಿಮರ್ಶೆಯೆಂದು ಮತ್ತು ಸಂಶೋಧನೆಯನ್ನು ಸಂಶೋಧನೆಯೆಂದು ಗುರುತಿಸುವ ಸಾಹಿತ್ಯಿಕ ಪ್ರಾಮಾಣಿಕತೆ ಬೆಳೆದಾಗ ಮಾತ್ರ ಆರೋಗ್ಯಕರ ವಿಮರ್ಶಾ ಸಂಸ್ಕೃತಿ, ಮೌಲಿಕ ಸಂಶೋಧನೆ ಮತ್ತು ಗುಣಮಟ್ಟದ ಸಾಹಿತ್ಯ ನಿರ್ಮಾಣ ಸಾಧ್ಯವಾಗುತ್ತದೆ. –ಡಾ. ಮಲ್ಲಿನಾಥ ಎಸ್. ತಳವಾರಮುಖ್ಯಸ್ಥರು ಹಾಗೂ ಸಹಾಯಕ ಪ್ರಾಧ್ಯಾಪಕರುಕನ್ನಡ ವಿಭಾಗ,ನೂತನ ವಿದ್ಯಾಲಯ ಪದವಿ ಮಹಾವಿದ್ಯಾಲಯ,ಕಲಬುರಗಿ ೫೮೫ ೧೦೩

“ಬರವಣಿಗೆಯ ನಿಜಸ್ವರೂಪ” ವಿಶೇಷ ಲೇಖನ ಡಾ. ಮಲ್ಲಿನಾಥ ಎಸ್. ತಳವಾರ ಅವರಿಂದ Read Post »

ಇತರೆ, ಜೀವನ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ

ಸಮಾಜ ಸಂಗಾತಿ ಪ್ರೊ.ರಾಜೇಶ್ವರಿ ಶೀಲವಂತ ಪುಣೆ “ಭಾರತೀಯ ಮಕ್ಕಳ ಇಂದಿನ ನಡವಳಿಕೆ” ಅಂದಿನ ಭಾರತೀಯ ಮಕ್ಕಳಲ್ಲಿ ಸಂಪ್ರದಾಯ ಮತ್ತು ಸಂಸ್ಕಾರ ಗುಣಗಳು ತುಂಬಿ ತುಳುಕುತ್ತಿದ್ದವು .ಅವರಲ್ಲಿ ತಂದೆ, ತಾಯಿ, ಗುರು ಹಿರಿಯರ ಬಗ್ಗೆ ಆದರದ ಭಾವವಿತ್ತು. ಮನೆಯಲ್ಲಿ ಮಕ್ಕಳು  ಎಲ್ಲರೊಂದಿಗೆ ಪ್ರೀತಿ ಸೌಹಾರ್ದತೆಯ ವಾತಾವರಣದೊಂದಿಗೆ ಸಂಭ್ರಮಿಸುತ್ತಿದ್ದರು.ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಲೀಲಾಜಾಲವಾಗಿಕಲಿಯುತ್ತಿದ್ದರು.ಹೆಣ್ಣು ಮಗು ಅಭ್ಯಾಸದ ಜೊತೆ ಮನೆಗೆಲಸ ಕಲಿತರೆ ಗಂಡು ಮಗುಹೊರಗಿನ ವ್ಯವಹಾರ ಜ್ಞಾನ ಬೆಳೆಸಿಕೊಕೊಳ್ಳುತ್ತಿತ್ತು.ಹೀಗಾಗಿ ಮದುವೆಯ ನಂತರವೂ ಅವರಿಗೆ ಮನೆಯ ಜವಾಬ್ದಾರಿ ಹೊಂದಾಣಿಕೆಯಲ್ಲಿ ಚಾತುರ್ಯವಿತ್ತು. ಆಗ ಹೆಣ್ಣು ಮಗಳು  ಮದುವೆ ನಂತರ ಅತ್ತೆ ಮನೆಯಲ್ಲಿ ತನ್ನ ಉದ್ಯೋಗದ ಜೊತೆಗೆ ಸಂಸಾರಿಕ ಜೀವನವನ್ನು ಸಾಮರಸ್ಯದಿಂದ ನಿಭಾಯಿಸುತ್ತಿದ್ದಳು.ಅಂದಿನ  ಪೀಳಿಗೆಯಲ್ಲಿ ಪಾಲಕರು ತಮ್ಮ ಮಕ್ಕಳ  ಶಿಕ್ಷಣದ ಜೊತೆಗೆ ಅವರ ಭಾವನಾತ್ಮಕ ಬೆಳವಣಿಗೆ ಹಾಗೂ ಮಾನಸಿಕ  ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನಹರಿಸುತ್ತಿದ್ದರು.  ಅಂದು  ಅಜ್ಜ, ಅಜ್ಜಿ ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನ ಮತ್ತು ಸಂಸ್ಕೃತಿಯನ್ನ ಹೇಗೆ ಕಾಪಾಡಬೇಕೆಂದು ತಿಳಿಸುತ್ತಿದ್ದರು. ಹೀಗಾಗಿ ಭಾರತದಲ್ಲಿ ಮಕ್ಕಳು ತಮ್ಮ ಹಿರಿಯರು, ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ಜಂಟಿ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಆಗಿನ ಮಕ್ಕಳು ಹಂಚಿಕೊಳ್ಳುವಿಕೆ  ಮತ್ತು ಸಾಮಾಜಿಕ  ಹೊಂದಾಣಿಕೆಗಳನ್ನು ಬೆಳೆಯುತ್ತಲೇ ಕಲಿಯುತ್ತಿದ್ದರು .ಆದರೆ ಈಗ  ಆಧುನಿಕತೆಯ ಹೆಸರಿನಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ .ಭಾರತೀಯ ಮಕ್ಕಳ  ಆಧುನಿಕ ತಂತ್ರಜ್ಞಾನದ ಬಳಕೆ ಅವರ  ನಡವಳಿಕೆಯಲ್ಲಿಯ ಮುಖ್ಯ ಅಂಶಗಳಾದ ಕುಟುಂಬದ ಮೌಲ್ಯಗಳು ,ಸಂಸ್ಕೃತಿ, ಹಿರಿಯರು, ಪೋಷಕರು ಮತ್ತು ಶಿಕ್ಷಕರು  ಇವುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ.  ವಿಭಕ್ತ  ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದ ಅಭಾವದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ, ಹೊಂದಾಣಿಕೆಗಳಂತಹ  ಜೀವನಮೌಲ್ಯಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ  ಮಕ್ಕಳು ಆಟಿಕೆಗಳಿಗಿಂತ ಸ್ಮಾರ್ಟ್‌ಫೋನ್, ವಿಡಿಯೋ ಗೇಮ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.ಹಠಮಾರಿ ಸ್ವಭಾವ ಹೆಚ್ಚುತ್ತಿದೆ.ತಾವು ಕೇಳಿದ್ದು ಸಿಗದಿದ್ದರೆ ಬೇಗನೆ ಸಿಟ್ಟು ಮಾಡಿಕೊಳ್ಳುವುದು, ಹಠ ಹಿಡಿಯುವುದು ಇಂದಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತಿದೆ.ಒಂದೇ ವಿಷಯದ  ಮೇಲೆ ಹೆಚ್ಚು ಹೊತ್ತು ಗಮನ ಹರಿಸಲು ಕಷ್ಟಪಡುವುದು ಮತ್ತು ಬೇಗನೆ ಬೇಸರಗೊಳ್ಳುವುದು ಹೆಚ್ಚಾಗಿದೆ.ಸಾಮಾಜಿಕ ಹೊಂದಾಣಿಕೆಯ  ಕೌಶಲ್ಯಗಳ ಕೊರತೆಯಿಂದ ಮಕ್ಕಳು  ಹೊರಗಡೆ ಆಟವಾಡುವುದನ್ನ  ಮರೆತು ಮನೆಯಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇತರರೊಂದಿಗೆ ಬೆರೆಯುವದೂ  ದಿನೇ ದಿನೇ ಕಡಿಮೆಯಾಗುತ್ತಿದೆ.ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು, ಸ್ನೇಹಿತರಂತೆ ವರ್ತಿಸುವುದು ,ಅವರ ಮಾನಸಿಕ ಸಮಸ್ಯೆಗಳನ್ನು  ದೂರ  ಮಾಡಬಹುದು.ಅತಿಯಾದ ಟಿವಿ ಅಥವಾ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ದೈಹಿಕ ಚಟುವಟಿಕೆಗಳು, ಸೃಜನಶೀಲ ಚಟುವಟಿಕೆಗಳು,ಯೋಗ, ಧ್ಯಾನ ಮುಂತಾದವುಗಳಲ್ಲಿ ಅವರನ್ನು  ತೊಡಗಿಸಬೇಕು. ಅದೇ ರೀತಿ ಮಕ್ಕಳಲ್ಲಿ ಮದುವೆ ಮಕ್ಕಳ ಪ್ರಾಮುಖ್ಯತೆ ಕೂಡ ಕಡಿಮೆಯಾಗುತ್ತಿದೆ. ಜಾಸ್ತಿ ಸಂಪಾದನೆಯ ಅಹಂ ಹೆಚ್ಚಾಗಿ ಗಂಡನ ಜೊತೆ ಕೂಡ ಹೊಂದಾಣಿಕೆ ಕಳೆದುಕೊಂಡು ವಿಚ್ಛೇದನಕ್ಕೆ ಮೊರೆ ಹೋಗುತ್ತಿರುವುದು ಬಹು ದೊಡ್ಡ ವಿಷಾದನೀಯ ಸಂಗತಿ ಕೂಡ.ಹೇಳಿ ಆಧುನಿಕತೆ ವರವೋ ಶಾಪವೋ!! ಪ್ರೊ. ರಾಜೇಶ್ವರಿ ಶೀಲವಂತ ಪುಣೆ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ Read Post »

ಇತರೆ

ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ(ಒಂದು ಶ್ರದ್ಧಾಂಜಲಿ )ವೀಣಾ ಹೇಮಂತ್‌ ಗೌಡ ಪಾಟೀಲ

ಶ್ರದ್ಧಾಂಜಲಿ ಸಂಗಾತಿ ವೀಣಾ ಹೇಮಂತ್‌ ಗೌಡ ಪಾಟೀಲ ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ (ಒಂದು ಶ್ರದ್ಧಾಂಜಲಿ ) ಜಾನಕಿ ಅಮ್ಮ…. ಚಿಕ್ಕಂದಿನಲ್ಲಿ ನಾವು ರೇಡಿಯೋದಲ್ಲಿ ಕೇಳುತ್ತಿರುವಾಗ ಬಾಯಿ ಪಾಠವಾದ ನಿಮ್ಮ ಹೆಸರು ಇಂದಿಗೂ ನಮ್ಮ ಕಿವಿಗಳಲ್ಲಿ ಅನುರಣಿಸುತ್ತದೆ . ಚಲನಚಿತ್ರದ ಹಾಡಿನ ಗಾಯಕರು ಎಂದೊಡನೆ ನಾವು ಕೂಡ ನಿಮ್ಮ ಹೆಸರನ್ನು ಉದ್ಘೋಷಕರ ಜೊತೆಗೆ ಅದೆಷ್ಟು ಆತ್ಮವಿಶ್ವಾಸದಿಂದ ಹೇಳುತ್ತಿದ್ದೆವು ಗೊತ್ತೇ?.ಹಾಗೆ ನಿಮ್ಮ ಸುಶಾವ್ಯವಾದ ಕಂಠಸಿರಿ, ಅತ್ಯಪರೂಪದ ಪ್ರತಿಭೆ, ಭಾವಪೂರ್ಣ ಗಾಯನಗಳಿಂದ ಇಡೀ ಭಾರತ ದೇಶದ ಹೆಮ್ಮೆಯ ಹಿನ್ನೆಲೆ ಗಾಯಕಿಯಾಗಿ ಗಾನ ಸರಸ್ವತಿಯಾದವರು ನೀವಲ್ಲವೇ? ಬಹುಶಹ ಅಂದಿನಿಂದ ಇಂದಿನವರೆಗೂ ನಿಮ್ಮದೇ ಹಾಡುಗಳನ್ನು ಕೇಳುತ್ತಲೇ  ಹುಟ್ಟಿ ಬೆಳೆದು ಅರಳಿ ದೊಡ್ಡವರಾಗಿ ಮಧ್ಯ ವಯಸ್ಸನ್ನು ತಲುಪಿದ್ದೇವೆ. ಪ್ರಸ್ತುತ ನೀವು ನಮ್ಮೊಂದಿಗಿಲ್ಲ, ನಿಜ….ಆದರೆ ನಿಮ್ಮ ಹಾಡುಗಳು…. ಎಂದೆಂದಿಗೂ  ಅಮರ… ಅತ್ಯಂತ ಸುಮಧುರ.1938ರ ಏಪ್ರಿಲ್ 23ರಂದು ನೀವು ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯ ಪಲ್ಲಪಟ್ಟಣ ಗ್ರಾಮದಲ್ಲಿ ಜನಿಸಿದಿರಿ. ಶಾಸ್ತ್ರೀಯವಾಗಿ ಗಾಯನವನ್ನು ಕಲಿಯದೆ ಹೋದರೂ ಕೂಡ ನಿಮ್ಮ ಆಸಕ್ತಿ, ಶ್ರದ್ದೆ ಹಾಗೂ ನಿರಂತರ ಪರಿಶ್ರಮದ ಫಲವಾಗಿ 1957ರಲ್ಲಿ ಮೊತ್ತ ಮೊದಲ ಬಾರಿಗೆ ತೆಲುಗು ಚಿತ್ರರಂಗದ ಮೂಲಕ ಗಾಯನ ಪ್ರಪಂಚಕ್ಕೆ ಕಾಲಿಟ್ಟಿರಿ. ಮುಂದೆ ನಡೆದದ್ದು ಇತಿಹಾಸ. ಕನ್ನಡ ತೆಲುಗು ತಮಿಳು ಮಲಯಾಳಂ ಹಿಂದಿಯಂತಹ ದೇಶಿ ಭಾಷೆಗಳಲ್ಲಿ, ಇಂಗ್ಲೀಷ್ ಜಪಾನಿ ಜರ್ಮನಿ, ಸಿಂಹಳೀಹಾಗೂ ಫ್ರೆಂಚ್ ಭಾಷೆಗಳನ್ನು ಸೇರಿದಂತೆ  ಸುಮಾರು 17 ಭಾಷೆಗಳಲ್ಲಿ ನೀವು ಹಾಡಿದಿರಿ…. ಆ ದೇವಗಂಗೆ ನಿರಂತರವಾಗಿ ಪುಣ್ಯ ಸಲಿಲವನ್ನು  ಹೊತ್ತು ಹರಿದರೆ  ನೀವು ನಿರಂತರವಾಗಿ ಹಾಡುಗಳ ಗಾಯನದ ಶರೀರವನ್ನು ಹೊತ್ತು ನಡೆದಿರಿ ಅಂತೆಯೇ ನೀವು…. ಗಾಯನ ಗಂಗೆ. ಭಕ್ತಿ ಗೀತೆಗಳು ಭಾವಗೀತೆಗಳು ವಿರಹ ಗೀತೆಗಳು ಪ್ರೀತಿ ಪ್ರೇಮ ಸರಸ ಸಲ್ಲಾಪ ಚೆಲ್ಲಾಟ ಹೀಗೆ ಹತ್ತು ಹಲವು ಭಾವಗಳನ್ನು ಸೂಸಿ ಹಾಡುವ ನಿಮ್ಮ ಗಾಯನ ಪ್ರತಿಭೆ ಅದ್ಭುತವಾದದ್ದು. ಭಾಷೆ ಯಾವುದೇ ಇರಲಿ ಭಾವಪೂರ್ಣವಾಗಿ ಹಾಡುವ ನಿಮ್ಮ ಕಲೆಗೆ ನೀವೇ ಸಾಟಿ… ಆದ್ದರಿಂದಲೇ ನೀವು ದಕ್ಷಿಣ ಭಾರತದ ಗಾನ ಸರಸ್ವತಿ ಎಂದರೆ ತಪ್ಪಿಲ್ಲ ಅಲ್ವೇ ಅಮ್ಮನೂರಾರು ಚಲನಚಿತ್ರಗಳಲ್ಲಿ ಸಾವಿರಾರು ಗೀತೆಗಳನ್ನು ಹಾಡಿ ನಮ್ಮೆಲ್ಲರ ಮನೆ ಮನೆಗಳಲ್ಲಿ ನಿಮ್ಮದೇ ಆದ ಪ್ರೀತಿಯ ನೆಲೆಯನ್ನು ಕಂಡುಕೊಂಡಿರುವ ನೀವು ಹಾಡಿದ ಹಾಡುಗಳ ವಿನ: ನಮ್ಮ ಮುಂಜಾನೆಗಳು ಆರಂಭವಾಗುವುದಿಲ್ಲ ರಾತ್ರಿಗಳು ಕೊನೆಗೊಳ್ಳುವುದಿಲ್ಲ. ಯಾವುದೋ ಒಂದು ರೀತಿಯಲ್ಲಿ ನಿಮ್ಮ ದನಿ ನಮಗೆ ಕೇಳಿಸುತ್ತಲೇ ಇರುತ್ತದೆ. ಸರಿಸುಮಾರು ಆರು ದಶಕಗಳ ಕಾಲ ಒಟ್ಟು 48 ಸಾವಿರಕ್ಕೂ ಹೆಚ್ಚು ಹಾಡುಗಳನ್ನು ಹಾಡಿದವರು ನೀವಲ್ಲವೇ ಅಮ್ಮ ? ವಿವಿಧ ರಾಜ್ಯಗಳ ಒಟ್ಟು 33 ರಾಜ್ಯ ಪ್ರಶಸ್ತಿಗಳು,. ನಾಲ್ಕು ಬಾರಿ ಭಾರತ ದೇಶದ ರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ನೀವು ಜೀವಮಾನ ಸಾಧನೆಯ ಪ್ರಶಸ್ತಿಯನ್ನು ಕೂಡ ನಿಮ್ಮ ಯಶಸ್ಸಿನ ಮುಕುಟದ ಗರಿಗೆ ಸಿಕ್ಕಿಸಿಕೊಂಡವರು. ಮೈಸೂರು ವಿಶ್ವವಿದ್ಯಾಲಯದ ಡಾಕ್ಟರೇಟ್ ಗೌರವವನ್ನು ಪಡೆದುಕೊಂಡವರು ನೀವು. ತಮಿಳುನಾಡಿನ ಕಲೈಮಾಮಣಿ ಪ್ರಶಸ್ತಿಯನ್ನು ಹಾಗೂ ಕರ್ನಾಟಕದ ಅತ್ಯುನ್ನತ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದವರು ಕೂಡ ನೀವೇ ಅಲ್ಲವೇ ಕನ್ನಡದಲ್ಲಿ ಚಲನಚಿತ್ರದ ಹಿನ್ನೆಲೆ ಗಾಯನಕ್ಕೆ ಪ್ರಶಸ್ತಿಯನ್ನು ನೀಡದೆ ಇರುವುದನ್ನು ವಿರೋಧಿಸಿ ಸರ್ಕಾರವನ್ನು ನಿಷ್ಟುರವಾಗಿ ಖಂಡಿಸಿದವರು. ಆದರೆ ಒಂದೊಮ್ಮೆ ನಿಮ್ಮ ನಿಷ್ಟುರತೆಯ ಹಿಂದಿರುವ ಕಳಕಳಿಯನ್ನು ಅರ್ಥ ಮಾಡಿಕೊಂಡ ರಾಜ್ಯ ಸರ್ಕಾರ ಪ್ರಶಸ್ತಿಯನ್ನು ನೀಡಲು ಆರಂಭಿಸಿದಾಗ ಅತಿ ಹೆಚ್ಚು ಸಂತಸ ಪಟ್ಟವರು ಕೂಡ ನೀವೇ ಅಲ್ಲವೇ ಅಮ್ಮ.?ಸಂಗೀತಕ್ಕೆ ಭಾಷೆಯ ಹಂಗಿಲ್ಲ. ಭಾಷೆಗಳಿಗೆ ಇರುವುದು ಕೂಡ ಒಂದೇ ಭಾವ ಅದು ಮನದ ಭಾವ. ದೇಶ ಭಾಷೆ ಗಡಿಗಳನ್ನು ದಾಟಿ ಸಂಗೀತವು ಎಲ್ಲರ ಮನಗಳನ್ನು ತಲುಪುತ್ತದೆ ಎಂದು ನೀವು ಹೇಳಿರುವುದು ಅದೆಷ್ಟು ಸತ್ಯ ಅಲ್ಲವೇ ಅಮ್ಮ ? ಪೂಜಿಸಲೆಂದೇ ಹೂಗಳ ತಂದೆ ದರುಶನ ಕೋರಿ ನಾನಿಂದೇ ಎಂದು ನೀವು ಹೇಳಿದಾಗ ಖುದ್ದು ನಮ್ಮ ಅಮ್ಮನೇ ಹಾಡುತ್ತಿರುವಳೇನು ಎಂಬ ಭಾವ. ನನ್ನೆದೆ ಕೋಗಿಲೆಯ ಒಲವಿನ ಪಲ್ಲವಿಯ ವಿನೂತನ ಜೀವಭಾವ ಎಂದು ನೀವು ಹಾಡಿದಾಗ ಹರೆಯದ ಹೆಣ್ಣು ಮಕ್ಕಳ ಮನದಲ್ಲಿ ಉಲ್ಲಾಸವನ್ನು ಕಾಣಬಹುದು ಅಲ್ಲವೇ ಅಮ್ಮ. ಎಳೆಯ ಬಾಲಕಿಯ ಧ್ವನಿಯಿಂದ ಹಿಡಿದು ಮುಪ್ಪಾನ ಮುದುಕಿಯವರೆಗೆ ಎಲ್ಲ ವಯೋಮಾನಕ್ಕೆ ಹೊಂದುವಂತೆ ನಿಮ್ಮ ಕಂಠ ಸಿರಿಯನ್ನು ಬದಲಿಸಿ ಹಾಡುವ ಕೌಶಲ್ಯ ನಿಮ್ಮದಾಗಿತ್ತು. ಇದರ ಸಂಪೂರ್ಣ ಲಾಭವನ್ನು ಪಡೆದ ನೀವು ಕಳೆದ ಹಲವಾರು ದಶಕಗಳಿಂದ ನಿಮ್ಮ ಹಾಡುಗಾರಿಕೆಯಿಂದ ನಮ್ಮನ್ನು ತಣಿಸುತ್ತಲೇ ಬಂದಿರುವಿರಿ. ನಿಮ್ಮ ಇಂಪಾದ ದನಿಯು ಬದುಕಿನಲ್ಲಿ ನೊಂದವರಿಗೆ ಸಮಾಧಾನ ಹೇಳುವ ಸ್ನೇಹಿತೆಯ ದನಿಯಾಗಿ ಬೆಂದವರಿಗೆ ಆಶಾ ದೀಪವಾಗಿಯೂ, ಪ್ರೇಮಿಗೆ ತನ್ನ ಪ್ರೀತಿಯ ದ್ಯೋತಕವಾಗಿಯೂ ತಾಯಿಗೆ ತನ್ನ ಅಕ್ಕರೆಯ ಪ್ರತೀಕವಾಗಿ ಮಗುವಿಗೆ ತನ್ನ ಅಮ್ಮನ ಮಮತೆಯ ಮಹಾಪೂರದಂತೆ ಭಾಸವಾಗುತ್ತದೆ. ಅಮ್ಮ ನಿಮ್ಮ ಭಕ್ತಿ ಗೀತೆಗಳು ನಮ್ಮನ್ನು ಭಾವ ಪರವಶರನ್ನಾಗಿಸಿದರೆ, ಪ್ರೇಮಗೀತೆಗಳು ಮನವನ್ನು  ಬೆಚ್ಚಗಾಗಿಸುತ್ತದೆ. ತುಂಟಾಟದ ಗೀತೆಗಳು ಆಪ್ತವೆನಿಸಿದರೆ ಭಾವಗೀತೆಗಳು ನಮ್ಮ ಎದೆಯಾಳದ ಭಾವಗಳನ್ನು ಬಗೆದು ತೋರುತ್ತವೆ. ನಮ್ಮ ಬದುಕಿನ ಮುಂಜಾನೆಯಿಂದ ಸಂಜೆಯವರೆಗಿನ ಪ್ರತಿ ಗಳಿಗೆಯಲ್ಲೂ, ನಮ್ಮೆದೆಯ ಜೀವ ಭಾವಗಳಲ್ಲಿ ನೀವು ನಿಮ್ಮ ಸಂಗೀತದ ಪ್ರತಿಭೆಯ ಮೂಲಕ ಹಾಡುಗಳ ಮೂಲಕ ಮಧುರ ಭಾವಗಳನ್ನು ತುಂಬಿರುವಿರಿ…… ಮುಂದೆಯೂ ಕೂಡ ಶತಶತಮಾನಗಳ ಕಾಲ ನಿಮ್ಮನ್ನು ನಾವು ಕೇಳುತ್ತೇವೆ. ನೀವಿಲ್ಲದ ಈ ಜಗತ್ತಿನಲ್ಲಿ ಕೂಡ ನೀವು ಅಜರಾಮರರಾಗಿರುವುದು ನಿಮ್ಮ ಸುಶ್ರಾವ್ಯ ಕಂಠದಿಂದ… ಅದರ ಸಿರಿಯ ಗರಿಮೆಯಿಂದ. ಹೋಗಿ ಬನ್ನಿ ಅಮ್ಮ ನಿಮ್ಮನ್ನು ನಾವು ಮರೆಯಲು ಸಾಧ್ಯವಿಲ್ಲ…. ಎಂದೆಂದಿಗೂ ನಿಮ್ಮ ಆರಾಧಕರಾಗಿ ನಾವು ಇದ್ದೇ ಇರುತ್ತೇವೆ…. ಮತ್ತೆ ನೀವು ಹುಟ್ಟಿ ಬರಲಿ ಎಂಬ ಆಶಯವನ್ನು ಹೊತ್ತು.  ವೀಣಾ ಹೇಮಂತ್ ಗೌಡ ಪಾಟೀಲ್

ಗಾಯನ ಗಂಗೆ….. ಎಸ್ ಜಾನಕಿ ಅಮ್ಮನಿಗೆ…. ಅಭಿಮಾನಿಯ ಪತ್ರ(ಒಂದು ಶ್ರದ್ಧಾಂಜಲಿ )ವೀಣಾ ಹೇಮಂತ್‌ ಗೌಡ ಪಾಟೀಲ Read Post »

ಇತರೆ

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು”

ಸ್ಪೂರ್ತಿ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ. “ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” ಒಂದು ಪಕ್ಷಿ ಜೇನು ಹುಳುವನ್ನು ಕೇಳಿತು”ತುಂಬಾ ಕಷ್ಟ ಪಟ್ಟು ನೀನು ಜೇನಿನ ಗೂಡನ್ನು ಕಟ್ಟುತ್ತಿಯಾ, ಆದರೆ ಈ ಜನರು ನೀನು ಕಷ್ಟಪಟ್ಟು ಕಟ್ಟಿದ ಜೇನನ್ನು ಕದಿಯುತ್ತಾರೆ. ನಿನಗೆ ಅದರಿಂದ ಬೇಸರ ಆಗುವುದಿಲ್ಲವೇ?” ಜೇನು ಹುಳು ಹೇಳಿತು: ‘ಇಲ್ಲ ಜನರು ನನ್ನ ಜೇನನ್ನು ಕದಿಯಬಹುದು, ಆದರೆ ಯಾರೊಬ್ಬರೂ ನಾನು ಜೇನು ತಯಾರಿಸುವ ಕಲೆಯನ್ನು ಕಲಿಯಲು ಸಾಧ್ಯವಿಲ್ಲ.’  ಇದರ ಅರ್ಥ ಇಷ್ಟೇ ಸ್ವಾರ್ಥಿಯಾಗಿ ಬದುಕುವುದು ಜೀವನದ ಭಾಗ; ಬೇರೆಯವರಿಗಾಗಿ ಬದುಕುವುದು ಜೀವನದ ಕಲೆ” ಪೂರ್ವ ವೈಭವ ಮೊದಲೆಲ್ಲ ನಮ್ಮ ತಾತ ಮುತ್ತಾಂದಿರು ನೂರು ವರ್ಷಗಳ ತುಂಬು ಜೀವನ ಸಂತೃಪ್ತಿಯಿoದ ಬಾಳಿ ಬದುಕುತ್ತಿದ್ದರು. ಎಲ್ಲಿಯೋ ಹುಟ್ಟಿ ಎಲ್ಲಿಯೋ ಬೆಳೆದು ಮನೆ ಮನವನ್ನು ಬೆಳಗುವ ಜ್ಯೋತಿಯಾಗುತ್ತಿದ್ದರು. ಹೆಣ್ಣಾದರೆ ತವರು ಮನೆಯ ಕೀರ್ತಿಯನ್ನು ಬೆಳಗುವ ಸದಾಶಯದೊಂದಿಗೆ ಸದಾ ಜೀವವನ್ನು ಸವೆಸುತ್ತಿದ್ದಳು. ಬದುಕಿನ ಪಯಣದಲ್ಲಿ ಬರುವ ಎಲ್ಲ ನೋವನ್ನು ನುಂಗಿಕೊoಡು ಕುಟುಂಬಕ್ಕಾಗಿ ಜೀವ ತೇಯುತ್ತಿದ್ದಳು. ಗಂಡಾದರೆ ಹೊಲದ ಕೃಷಿ ಕೆಲಸಗಳಲ್ಲಿ ವೃತ್ತಿ ವ್ಯಾಪಾರ ಕರ್ತವ್ಯದಲ್ಲಿ ಶ್ರಮವಹಿಸುತ್ತಿದ್ದರು. ಬದುಕು ಹೋರಾಟ ಎರಡೂ ಬೇರೆ ಬೇರೆ ಅಲ್ಲ ಎನ್ನುವ ತಲೆಮಾರಿಗೆ ಸೇರಿದವರಾಗಿದ್ದರು. ಅನನ್ಯ ಜೀವನದ ಅನುಭವವನ್ನು ಪಡೆಯುತ್ತಿದ್ದರು. ಬಹುಶಃ ಆ ತಲೆಮಾರಿನ ಕೊನೆಯ ಕೊಂಡಿಗಳು ಕಳಚಿ ಹೋಗಿವೆ. ನಮ್ಮ ಹಿರಿಯರ ಬದುಕು ನಮಗೆ ಜೀವನದ ವಿಶಿಷ್ಟ ಹೊಳಹುಗಳನ್ನು ನೀಡುತ್ತದೆ. .ಪೂರ್ವಜರ ಬದುಕು ಅವರ  ಪಾರಂಪರಿಕ ಜ್ಞಾನ ವಿಜ್ಞಾನವನ್ನು ಪರಿಚಯಿಸುತ್ತದೆ. ಜನಪದ ಸಾಹಿತ್ಯ ಅವರ ಅಗಾಧ ಜ್ಞಾನಕ್ಕೆ ತೋರುಬೆರಳಿನಂತಿದೆ. ಬದಲಾದ ಕಾಲ ಈಗ ಕಾಲ ಬದಲಾಗಿದೆ. ಮನುಷ್ಯನ ಜೀವನಶೈಲಿ ಅಗಾಧವೆನಿಸುವಷ್ಟು ಬದಲಾಗಿದೆ. ವ್ಯಕ್ತಿತ್ವದ ವಕ್ರತೆಯನ್ನು ತಿದ್ದಿಕೊಳ್ಳುವ ಮನಸ್ಥಿತಿ ಕಡಿಮೆಯಾಗಿದೆ. ಒತ್ತಡ ದಾವಂತ ಹೆಚ್ಚಿದೆ. ಹೀಗಾಗಿ ನೂರು ವಸಂತಗಳನ್ನು ಸಂತಸದಿoದ  ಕಳೆಯುವುದು ದುರ್ಭರವಾಗಿದೆ. ಐಶಾರಾಮಿ ಬದುಕಿನ ಆಕರ್ಷಣೆಗೆ ಒಳಗಾಗಿ ಮೋಸ ವಂಚನೆ ದರೋಡೆ ಸುಲಿಗೆ ಭ್ರಷ್ಟಾಚಾರ ಹೆಚ್ಚುತ್ತಿದೆ. ಸರಳ ಜೀವನವೇ ಸುಖೀ ಜೀವನವೆಂಬ ಕಲೆಯನ್ನು ಕಲಿತರೆ ಎತ್ರರವು ವಿಸಾರವೂ ಆಗಿರುವ ಅಮೂಲ್ಯ ಬದುಕನ್ನು ಸವಿಯಬಹುದು. ಜೀವನವೆಂದರೆ.. ಜೀವನಕ್ಕೆ ಒಂದೇ ಮುಖವಿಲ್ಲ.  ಹಲವಾರು ಮುಖಗಳಿವೆ. ಇದೊಂದು ಜೈವಿಕ ಜಗತ್ತಿನ ವ್ಯಾಪಾರ.ಜೀವನವೆಂಬುದು ಒಂದು ಸಾಗರವಿದ್ದಂತೆ ಅದನ್ನು ಈಜುವುದು ಬಹಳ ಕಷ್ಟ. ಅದಕ್ಕೆ ದಾಸರು ‘ಈಸಬೇಕು ಇದ್ದು ಜಯಿಸಬೇಕು.’ ಎಂದು ಹೇಳಿದರು. ಈಸುವುದು ಬಲು ಕಠಿಣ. ಈಜಿ ದಡ ಸೇರುವುದೇ ಜೀವನ. ದಾರ್ಶನಿಕರು ಶರಣರು ಸಾಧು ಸಂತರು ತತ್ವಜ್ಞಾನಿಗಳು ಮೇದಾವಿಗಳು ತಾವು ಕಂಡoತೆ ಅದನ್ನು ವ್ಯಾಖ್ಯಾನಿಸಿದರು ಕೆಲವರು ಹೋರಾಟವೆಂದರು. ಇನ್ನೂ ಕೆಲವರು ಒಂದು ಆಟವೆಂದರು ನಾಟಕವೆಂದರು ಸವಾಲೆಂದರು. ಇದನ್ನು ಸಂಕ್ಷಿಪ್ತದಲ್ಲಿ ಹೇಳುವುದಾದರೆ ಹುಟ್ಟು ಮತ್ತು ಸಾವಿನ ನಡುವಿನ ಅವಧಿ ಎನ್ನಬಹುದುಅನುಭವಿಸುವಂಥದ್ದುಜೀವನವೆoದರೆ ಅರ್ಥ ಮಾಡಿಕೊಳ್ಳುವಂಥದ್ದಲ್ಲ. ಅನುಭವಿಸುವಂತದ್ದು. ಸೋಲು ಗೆಲುವು ಅಳುವು ನಗುವು ಜೀವನದ ಅವಿಭಾಜ್ಯ ಅಂಗಗಳು. ಸುಖ ದುಃಖಗಳು ಇದರ ಭಾಗಗಳು. ಅವು ಒಂದರ ನಂತರ ಒಂದು ಬರುತ್ತವೆ. ಸುಖ ದುಃಖಗಳನ್ನುಸಮಾನವಾಗಿ ಸ್ವೀಕರಿಸುವುದು  ಸಮಾಧಾನದಿಂದ ಇರುವುದೇ ಕಷ್ಟಗಳಿಗೆ ಮದ್ದು. ಬಲ್ಲವರು ಹೇಳಿದ ಮಾತಿನಂತೆ ’ಸೋಲಿನ ಪಾಠ ಚಂದ. ಹಸಿವಿನ ಊಟ ಚೆಂದ ಪ್ರೀತಿಯ ಕೋಪ ಚೆಂದ ಜೀವನದಲ್ಲಿ ಎಲ್ಲ ಸ್ವೀಕರಿಸುವ ಮನಸ್ಸಿದ್ದರೆ ನಮ್ಮ ಬದುಕೇ ಆನಂದ.’ಜೀವಿಸುವುದು ಮುಖ್ಯವಲ್ಲಜೀವನದಲ್ಲಿ ಕೇವಲ ಜೀವಿಸುವುದು ಮುಖ್ಯವಲ್ಲ. ಯಾವ ರೀತಿ ಜೀವಿಸುತ್ತೇವೆ ಎನ್ನುವುದು ಮುಖ್ಯ. ನಮಗಾಗಿ ಜೀವಿಸುವುದಕ್ಕಿಂತ ನಮ್ಮವರಿಗಾಗಿ ಮತ್ತು ಬೇರೆಯವರಿಗಾಗಿ ಜೀವಿಸುವುದು ಹೆಚ್ಚು ಬೆಲೆಯನ್ನು ತರುತ್ತದೆ. ಬದುಕನ್ನು ಒಂದು ಕ್ಷಣದಲ್ಲಿ ಬದಲಿಸಲು ಸಾಧ್ಯವಿಲ್ಲ. ಆದರೆ, ಆ ಒಂದು ಕ್ಷಣದಲ್ಲಿ ತೆಗೆದುಕೊಂಡ ನಿರ್ಧಾರ ಬದುಕನ್ನು ಬದಲಿಸಬಲ್ಲದು. ಐದು ಸಂಗತಿಗಳು  ಹೇಳಿದ ವಿಷಯವನ್ನು ಬಿಟ್ಟು ಸಂಬoಧವೇ ಇಲ್ಲದ ಬೇರೆ ವಿಷಯದ ಬಗ್ಗೆ ಮಾತನಾಡುವುದು, ಮಾಡಿದ ಕೆಲಸವು ಸಮರ್ಪಕವಾಗಿದ್ದರೂ ಕಾರಣವಿಲ್ಲದೇ ದ್ವೇಷಿಸುವುದು, ಅವಶ್ಯವಾಗಿ ಇರಬೇಕಾದ ಸ್ಥಳದಲ್ಲಿ ಇಲ್ಲದೇ ಇರುವುದು, ತಮ್ಮ ಸಂಶಯ ನಿವಾರಣೆಗೆ ಯಾರೇ ಯಾವುದೋ ಒಂದು ಪ್ರಶ್ನೆ ಮಾಡಿದಾಗ ಉತ್ತರಿಸದೇ ಇರುವುದು ಮತ್ತು ಪ್ರೀತಿಯಿಂದ ಆಮಂತ್ರಣ ಕೊಟ್ಟಾಗ ಉಪೇಕ್ಷಾ ಭಾವದಿಂದ ಅಲ್ಲಿಗೆ ಹೋಗದೇ ಇರುವುದು ಈ ಐದು ಸಂಗತಿಗಳು ಗುಣರಹಿತನ ಲಕ್ಷಣಗಳಾಗಿವೆ.ಇವುಗಳ ಬಗ್ಗೆ ಅಲಕ್ಷö್ಯ ಮಾಡದೇ ಸದ್ಗುಣವಂತನಾಗಲು ಪ್ರಯತ್ನಿಸಬೇಕು ಅಪರಮಿತ ತ್ಯಾಗ ಮಾಡಿದ ಬದುಕಿಗೆ ಬೆಲೆಯನ್ನು ಕಟ್ಟಲಾಗುವುದಿಲ್ಲ. ಹಿಡಿ ಪ್ರೀತಿ ಮಾತಿಲ್ಲದಿದ್ದರೆ ಜೀವನವೇ ಮೂಕವಾಗುತ್ತದೆ. ಕೊಂಕು ಮಾತುಗಳು ಹೆಚ್ಚಾದರೆ ಮೂಕರೋಧನವನ್ನು ಅನುಭವಿಸಬೇಕಾಗುತ್ತದೆ. ಯಾರೇ ಆಗಲಿ ಬಯಸುವುದು ಒಂದು ಹಿಡಿ ಪ್ರೀತಿಯನ್ನು. ಮಾತೆಯ ಮಮತೆಯನ್ನು ಧಾರೆಯೆರೆಯುವ ಹೃದಯ ನಮ್ಮದಾಗಬೇಕು. ಪ್ರತಿಯೊಬ್ಬರೊಂದಿಗೂ ಪ್ರೀತಿ ವಿಶ್ವಾಸ ವಾತ್ಸಲ್ಯದೊಂದಿಗೆ ನಡೆದುಕೊಳ್ಳಬೇಕು. ಒಪ್ಪ ಓರಣ ಶಿಸ್ತು ಸಹನೆ ಕಲಿಯಬೇಕು. “ತಿಳಿಯದೇ ಕಳೆಯುವ ಬಾಲ್ಯ, ಗೊತ್ತಿಲ್ಲದೆ ಜಾರುವ ಹರೆಯ, ಕರೆಯದೆ ಬರುವ ಮುದಿತನ,”ಎಲ್ಲವನ್ನೂ ಅನುಭವಿಸುತ್ತ ಬಾಳುವುದೇ ಬದುಕು. ಕೈಯಲ್ಲಿ ಅಧಿಕಾರವಿರುವಾಗ ಸ್ಥಾನದ ಮಹತ್ವವನ್ನು ಅರಿಯದೆ, ತುಚ್ಛವಾಗಿ ಮಾತನಾಡುವುದು ಶೋಭೆ ತರುವುದಿಲ್ಲ. ಅಧಿಕಾರವಿರುವಾಗ ಅರಿತು ನಡೆದುಕೊಳ್ಳಬೇಕು. ಹಣವಿದೆ ಆಸ್ತಿಯಿದೆ ಎಂಬ ಕಾರಣಕ್ಕೆ ಅಸಭ್ಯವಾಗಿ ವರ್ತಿಸುವುದು ಉಚಿತವಲ್ಲ. ಜಗಕೆ ಮಾದರಿಯಾಗಿ ಬಾಳಬೇಕು. ಸಭ್ಯ ಸಂಸ್ಕೃತಿಯ ಹರಿಕಾರರಾಗಬೇಕು. ಪ್ರತಿಯೊಬ್ಬರ ಅಭಿರುಚಿ ಆಸಕ್ತಿ ಹವ್ಯಾಸಗಳು ವಿಭಿನ್ನ.ಆದ್ದರಿಂದ ತಿಳಿದು ನಡೆಯಬೇಕು. ಸವಾಲುಗಳು ಸವಾಲುಗಳು ಏಕಾಏಕಿ ಹರಡಿಕೊಳ್ಳುತ್ತವೆ. ಇನ್ನೇನು ಜೀವನ ಮುಗಿದು ಹೋಯಿತಲ್ಲ ಎನ್ನುವಷ್ಟರಲ್ಲಿ ಭರವಸೆಯ ಬೆಳಕಿನ ಕಿರಣವೊಂದು ಮೂಡುತ್ತದೆ. ಬದುಕಿನ ಏರಿಳಿತಗಳು ಇತ್ತೀಚಿಗೆ ಮೈ ತಾಳಿದ ವಿದ್ಯಮಾನಗಳಲ್ಲ. ಅನಾದಿಕಾಲದಿಂದಲೂ ಈ ಜೀವನ ಇರುವುದೇ ಹೀಗೆ. ಸುಖ ದುಃಖಗಳು ಪ್ರತಿ ಕ್ಷಣವನ್ನು ವರ್ಣಮಯವಾಗಿಸುತ್ತದೆ. ಬದುಕು ನಮಗೆ ಬದುಕುವುದನ್ನು ಕಲಿಸುತ್ತದೆಯೇ? ಎಂಬ ಪ್ರಶ್ನೆ ಕೇಳಬಹುದು. ಬದುಕೇ ಅದಕ್ಕೆ ಉತ್ತರ ನೀಡುತ್ತದೆ. ಜೀವನದಲ್ಲಿ ಬಗೆಬಗೆಯ ಪಾಠಗಳಿವೆ.ಅವುಗಳ ಪಟ್ಟಿ  ನಮ್ಮ ಪದಕೋಶದಲ್ಲೇ ಇಲ್ಲ. ಸ್ವಾಮಿ ವಿವೇಕಾನಂದರು ಹೇಳಿದಂತೆ ‘ಜೀವನದಲ್ಲಿ ಕಹಿ ಅನುಭವಾದಾಗಲೇ ಆ ವ್ಯಕ್ತಿಗೆ ಹೊಸ ಜೀವನ ಶುರು ಆದಂತೆ.  ಹೇಗೆಂದರೆ ಇಲ್ಲಿ ಯಾರಿಗೆ ಯಾರೂ ಇಲ್ಲ. ನಮಗೆ ನಾವೇ ಎಲ್ಲ ಅನ್ನೋ ಸತ್ಯ ಆಗಲೇ ಸ್ಪಷ್ಟವಾಗಿ ಅರ್ಥವಾಗೋದು.’ ಜೀವನದ ಅಂತ್ಯದವರೆಗೂ ಕಲಿಯುವುದು ಬೆಟ್ಟದಷ್ಟಿದೆ. ಎನ್ನುವುದೇ ಬದುಕು ಕಲಿಸುವ ಪಾಠ. ಅರ್ಥ ಮಾಡಿಕೊಳ್ಳುವ ಮನಸ್ಸು, ಕೈ ಜೋಡಿಸುವ ಸ್ನೇಹ, ನಮ್ಮ ಜೀವನದ ನಿಜವಾದ ಆಸ್ತಿಗಳು. ಮುಳ್ಳಿನ ಗಿಡವಾಗುವುದಕ್ಕಿಂತ, ನೆರಳು ನೀಡುವ  ಫಲಭರಿತ ವೃಕ್ಷವಾಗಬೇಕು. ಕೊನೆ ಹನಿ ನಿನ್ನೆಯದನ್ನು ಚಿಂತಿಸಬಾರದು. ನಾಳೆ ಏನಾಗುತ್ತದೆಂದು ಅತಿಯಾಗಿ ಯೋಚಿಸಬಾರದು. ಇಂದಿನ ಬದುಕನ್ನು ವ್ಯಥೆಗೆ ದೂಡಿ ವ್ಯರ್ಥವಾಗಿ ಮಾಡಿಕೊಳ್ಳಬಾರದು. ವರ್ತಮಾನವೆಂಬುದು ಭಗವಂತನ ಮೌಲಿಕ ಕಾಣಿಕೆಯೆಂದು ಬಾಳಬೇಕು. ಇದೇ ಮಾತನ್ನು ಸುಭಾಷಿತವೊಂದು ಹೀಗೆ ಹೇಳುತ್ತದೆ. ‘ಚಿಂತೆಗಳು ತಲೆಯ ಸುತ್ತ ಹಾರಾಡುವ ಹಕ್ಕಿಗಳಿದ್ದಂತೆ ಹಾರಾಡಲಿ ಬಿಡಿ. ಆದರೆ, ಅಲ್ಲೇ ಗೂಡು ಕಟ್ಟಲು ಅವಕಾಶ ನೀಡಬೇಡಿ.’ ಜೀವನವೆಂಬುದು, ಹೆಮ್ಮರದ ತುದಿಯಲ್ಲಿ ಕಟ್ಟಿದ ಜೇನುಗೂಡುಗಳಿಂದ ತುಪ್ಪವನ್ನು ತೆಗೆಯುವಂತಿದೆ. ಆ ಕುಶಲತೆಯನ್ನು ಕಲಿತುಕೊಂಡರೆ ಜೀವನದ ಸವಿಜೇನು ಚಪ್ಪರಿಸಬಹುದು. ಜಯಶ್ರೀ.ಜೆ. ಅಬ್ಬಿಗೇರಿ.

“ಕುಶಲತೆ ಕಲಿತರೆ ಜೀವನದ ಸವಿಜೇನು ಚಪ್ಪರಿಸಬಹುದು” Read Post »

You cannot copy content of this page

Scroll to Top