ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 9483261944, ಇಮೇಲ್ :- sangaatipatrike@gmail.com
ಇತರೆ, ಜೀವನ

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್  

ವಿಶೇಷ ಸಂಗಾತಿ ಕೆ.ಎಂ. ಕಾವ್ಯ ಪ್ರಸಾದ್   “ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ” *”ವಿಧಿಯೇ ನಿನಷ್ಟು ಕ್ರೂರಿ, ಮುಂದೆ ಕನಸುಗಳನ್ನು ತೋರಿಸಿ ಹಿಂದೆ ಇರಿಯುವೆ ಚೂರಿ”* ಎಂಬ ಮಾತು ಕೇಳಿದಾಗ, ಅದು ಕೇವಲ ಒಂದು ಸಾಲು ಎಂದು ಅನಿಸುವುದಿಲ್ಲ. ಜೀವನದಲ್ಲಿ ಅನಿರೀಕ್ಷಿತವಾಗಿ ಕಳೆದುಕೊಂಡವರ ಹೃದಯದ ಮೌನದ ಕಿರುಚಾಟದಂತೆ ಭಾಸವಾಗುತ್ತದೆ. ಆದರೆ ಜೀವನದ ಸತ್ಯ ಇನ್ನೂ ಆಳವಾಗಿದೆ. ವಿಧಿ ಕೆಲವೊಮ್ಮೆ ನಮ್ಮ ಕನಸುಗಳನ್ನು ಮುರಿಯಬಹುದು; ಆದರೆ ನಮ್ಮೊಳಗಿನ ಧೈರ್ಯವನ್ನು ಮುರಿಯಲು ಸಾಧ್ಯವಿಲ್ಲ. ಒಂದು ರೈತನನ್ನು ಕಲ್ಪಿಸಿಕೊಳ್ಳಿ. ಅವನು ಸಾಲ ಮಾಡಿ ಉತ್ತಮ ಬೀಜ ಖರೀದಿಸುತ್ತಾನೆ. ಹೊಲ ಉಳುಮೆ ಮಾಡುತ್ತಾನೆ. ಮಳೆಯ ನಿರೀಕ್ಷೆಯಲ್ಲಿ ಪ್ರತಿದಿನ ಆಕಾಶದತ್ತ ನೋಡುತ್ತಾನೆ. ಆದರೆ ಒಂದು ವರ್ಷ ಬರಗಾಲ ಬರುತ್ತದೆ. ಬೆಳೆ ಹಾಳಾಗುತ್ತದೆ. ಆ ದಿನ ಅವನ ಕನಸುಗಳೂ ಒಣಗಿದಂತೆ ಕಾಣುತ್ತದೆ. ಆದರೂ ಮುಂದಿನ ವರ್ಷ ಮತ್ತೆ ಅದೇ ಹೊಲಕ್ಕೆ ಬೀಜ ಬಿತ್ತುತ್ತಾನೆ. ಏಕೆ? ಏಕೆಂದರೆ ಆಶೆಯನ್ನು ಕಳೆದುಕೊಂಡ ರೈತ ಎಂದಿಗೂ ಬೆಳೆಯನ್ನು ಕಾಣಲಾರನು. ಇದೇ ಬದುಕಿನ ಮೊದಲ ಪಾಠ. ಒಬ್ಬ ವಿದ್ಯಾರ್ಥಿ ವರ್ಷಪೂರ್ತಿ ಶ್ರಮಿಸಿ ಪರೀಕ್ಷೆ ಬರೆಯುತ್ತಾನೆ. ಆದರೆ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲ. ಕೆಲವರು ಅಲ್ಲಿ ನಿಲ್ಲುತ್ತಾರೆ. ಆದರೆ ಇನ್ನೂ ಕೆಲವರು ತಮ್ಮ ತಪ್ಪುಗಳನ್ನು ಅರಿತು ಮತ್ತೊಮ್ಮೆ ಪ್ರಯತ್ನಿಸುತ್ತಾರೆ. ಎರಡನೇ ಪ್ರಯತ್ನದಲ್ಲೇ ಯಶಸ್ಸನ್ನು ಗಳಿಸುತ್ತಾರೆ. ಸೋಲೇ ಅವರ ಅಂತ್ಯವಾಗಿದ್ದರೆ, ಆ ಯಶಸ್ಸು ಹುಟ್ಟುತ್ತಿರಲಿಲ್ಲ. ಒಂದು ಮಣ್ಣಿನ ಕುಂಭವನ್ನು ನೋಡಿ. ಅದು ಸುಂದರವಾಗುವುದಕ್ಕೆ ಮೊದಲು ಕುಂಬಾರನ ಕೈಯಲ್ಲಿ ಅನೇಕ ಬಾರಿ ತಿರುಗುತ್ತದೆ. ನಂತರ ಬೆಂಕಿಯ ಉರಿಯನ್ನು ಸಹಿಸುತ್ತದೆ. ಆ ಕಷ್ಟದ ನಂತರವೇ ಅದು ಎಲ್ಲರ ಮನೆಗೆ ಅಲಂಕಾರವಾಗುತ್ತದೆ. ಕಷ್ಟವನ್ನು ಸಹಿಸದ ಮಣ್ಣು ಎಂದಿಗೂ ಕುಂಭವಾಗುವುದಿಲ್ಲ. ಒಂದು ಮರವನ್ನು ಕಡಿಯಬಹುದು. ಅದರ ಕೊಂಬೆಗಳು ಮುರಿಯಬಹುದು. ಎಲೆಗಳು ಉದುರಬಹುದು. ಆದರೆ ಬೇರು ಜೀವಂತವಾಗಿದ್ದರೆ ಮತ್ತೆ ಚಿಗುರುತ್ತದೆ. ಹಾಗೆಯೇ ಮನುಷ್ಯನ ಮನಸ್ಸಿನಲ್ಲಿರುವ ಭರವಸೆ ಜೀವಂತವಾಗಿದ್ದರೆ, ಜೀವನ ಮತ್ತೆ ಅರಳುತ್ತದೆ. ಇಂದಿನ ಸಮಾಜದಲ್ಲಿ ನಾವು ಒಂದು ಅಪಾಯಕಾರಿ ಬದಲಾವಣೆಯನ್ನು ಕಾಣುತ್ತಿದ್ದೇವೆ. ಜನರು ಮೊಬೈಲ್‌ನಲ್ಲಿ ಸಾವಿರಾರು ಸ್ನೇಹಿತರನ್ನು ಹೊಂದಿದ್ದಾರೆ; ಆದರೆ ಮನಸ್ಸು ಬಿಚ್ಚಿ ಮಾತನಾಡಲು ಒಬ್ಬ ಸ್ನೇಹಿತನೂ ಇಲ್ಲ. ದೊಡ್ಡ ಮನೆಗಳಿವೆ; ಆದರೆ ಮನೆಯಲ್ಲಿ ಮಾತುಗಳಿಲ್ಲ. ಹಣವಿದೆ; ಆದರೆ ನೆಮ್ಮದಿ ಇಲ್ಲ. ಶಿಕ್ಷಣವಿದೆ; ಆದರೆ ಮಾನವೀಯತೆ ಕಡಿಮೆಯಾಗುತ್ತಿದೆ. ಒಮ್ಮೆ ಒಂದು ವೃದ್ಧ ದಂಪತಿ ಆಸ್ಪತ್ರೆಯಲ್ಲಿ ಕುಳಿತಿದ್ದರು. ವೈದ್ಯರು ಔಷಧಿ ಕೊಟ್ಟರು. ಆದರೆ ಅವರನ್ನು ಹೆಚ್ಚು ಸಮಾಧಾನಪಡಿಸಿದ್ದು ಪಕ್ಕದಲ್ಲಿ ಕುಳಿತಿದ್ದ ಅಪರಿಚಿತ ವ್ಯಕ್ತಿಯ ಒಂದು ಮಾತು—”ಚಿಂತಿಸಬೇಡಿ, ಎಲ್ಲವೂ ಒಳ್ಳೆಯದಾಗುತ್ತದೆ.” ಆ ಮಾತು ಔಷಧಿಗಿಂತ ಹೆಚ್ಚು ಧೈರ್ಯ ನೀಡಿತು. ಇದರಿಂದ ತಿಳಿಯುವುದು, ಕೆಲವೊಮ್ಮೆ ಮಾತುಗಳೇ ಔಷಧಿಯಾಗುತ್ತವೆ. ನಾವು ಮಕ್ಕಳಿಗೆ ಉತ್ತಮ ಶಾಲೆ ಕೊಡುತ್ತೇವೆ. ಆದರೆ ಮತ್ತೊಬ್ಬರ ನೋವನ್ನು ಅರ್ಥಮಾಡಿಕೊಳ್ಳುವ ಹೃದಯವನ್ನು ಕಲಿಸುತ್ತೇವೆಯೇ? ಸ್ಪರ್ಧೆಯಲ್ಲಿ ಗೆಲ್ಲಲು ಹೇಳುತ್ತೇವೆ. ಆದರೆ ಸೋತವರನ್ನು ಎಬ್ಬಿಸಲು ಹೇಳುತ್ತೇವೆಯೇ? ಈ ಪ್ರಶ್ನೆಗಳು ಪ್ರತಿಯೊಬ್ಬ ಪೋಷಕ, ಶಿಕ್ಷಕ ಮತ್ತು ಸಮಾಜದ ಮುಂದೆ ನಿಲ್ಲಬೇಕು. ಒಂದು ದೀಪವನ್ನು ಗಮನಿಸಿ. ಅದು ತನ್ನನ್ನು ತಾನೇ ಸುಟ್ಟುಕೊಂಡು ಇತರರಿಗೆ ಬೆಳಕು ನೀಡುತ್ತದೆ. ಒಂದು ನದಿಯನ್ನು ನೋಡಿ. ಅದು ತನ್ನ ನೀರನ್ನು ತಾನೇ ಕುಡಿಯುವುದಿಲ್ಲ; ಬೇರೆಯವರ ದಾಹ ನೀಗಿಸುತ್ತದೆ. ಒಂದು ಮರ ತನ್ನ ಹಣ್ಣುಗಳನ್ನು ತಾನೇ ತಿನ್ನುವುದಿಲ್ಲ; ಇತರರಿಗೆ ನೀಡುತ್ತದೆ. ಪ್ರಕೃತಿಯ ಪ್ರತಿಯೊಂದು ಅಂಶವೂ ತ್ಯಾಗವನ್ನು ಕಲಿಸುತ್ತದೆ. ಮನುಷ್ಯ ಮಾತ್ರ ಸ್ವಾರ್ಥವನ್ನು ಕಲಿಯಬಾರದು. ಇತಿಹಾಸದಲ್ಲಿ ಮಹಾನ್ ವ್ಯಕ್ತಿಗಳು ಸುಖದಲ್ಲಿ ಬೆಳೆದವರಲ್ಲ. ಅನೇಕ ಕಷ್ಟಗಳನ್ನು ಎದುರಿಸಿ ಸಮಾಜಕ್ಕೆ ದಾರಿದೀಪರಾದವರು. ಆದ್ದರಿಂದ ಕಷ್ಟ ಬಂದಾಗ “ಏಕೆ ನನಗೆ?” ಎಂದು ಕೇಳುವುದಕ್ಕಿಂತ, “ಇದರಿಂದ ನಾನು ಏನು ಕಲಿಯಬಹುದು?” ಎಂದು ಕೇಳುವುದು ಬದುಕನ್ನು ಬದಲಾಯಿಸುತ್ತದೆ. *ಕೊನೆಯಲ್ಲಿ ಒಂದು ಸತ್ಯ—* ವಿಧಿ ನಿಮ್ಮ ದಾರಿಯನ್ನು ತಿರುಗಿಸಬಹುದು.ಸಮಯ ನಿಮ್ಮನ್ನು ಪರೀಕ್ಷಿಸಬಹುದು.ಜನರು ನಿಮ್ಮನ್ನು ಅರ್ಥಮಾಡಿಕೊಳ್ಳದೆ ಇರಬಹುದು. *ಆದರೆ ನಿಮ್ಮ ಧೈರ್ಯ, ನಿಮ್ಮ ಪ್ರಾಮಾಣಿಕತೆ ಮತ್ತು ನಿಮ್ಮ ಮಾನವೀಯತೆ ನಿಮ್ಮನ್ನು ಎಂದಿಗೂ ಕೈಬಿಡುವುದಿಲ್ಲ.* *ಮನುಷ್ಯನ ಜೀವನದ ನಿಜವಾದ ಯಶಸ್ಸು ಅವನು ಎಷ್ಟು ಸಂಪಾದಿಸಿದನೆಂಬುದಲ್ಲ; ಎಷ್ಟು ಹೃದಯಗಳಿಗೆ ಧೈರ್ಯ ತುಂಬಿದನೆಂಬುದರಲ್ಲಿ ಇದೆ.* ಕೆ.ಎಂ. ಕಾವ್ಯ ಪ್ರಸಾದ್    

“ನೋವಿನ ನೆರಳಿನಿಂದ ಬೆಳಕಿನ ಬದುಕಿನ ಕಡೆಗೆ”ವಿಶೇಷ ಲೇಖನ-ಕೆ.ಎಂ. ಕಾವ್ಯ ಪ್ರಸಾದ್   Read Post »

ಇತರೆ, ಜೀವನ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ

ಸಮಾಜ ಸಂಗಾತಿ ಪ್ರೊ.ರಾಜೇಶ್ವರಿ ಶೀಲವಂತ ಪುಣೆ “ಭಾರತೀಯ ಮಕ್ಕಳ ಇಂದಿನ ನಡವಳಿಕೆ” ಅಂದಿನ ಭಾರತೀಯ ಮಕ್ಕಳಲ್ಲಿ ಸಂಪ್ರದಾಯ ಮತ್ತು ಸಂಸ್ಕಾರ ಗುಣಗಳು ತುಂಬಿ ತುಳುಕುತ್ತಿದ್ದವು .ಅವರಲ್ಲಿ ತಂದೆ, ತಾಯಿ, ಗುರು ಹಿರಿಯರ ಬಗ್ಗೆ ಆದರದ ಭಾವವಿತ್ತು. ಮನೆಯಲ್ಲಿ ಮಕ್ಕಳು  ಎಲ್ಲರೊಂದಿಗೆ ಪ್ರೀತಿ ಸೌಹಾರ್ದತೆಯ ವಾತಾವರಣದೊಂದಿಗೆ ಸಂಭ್ರಮಿಸುತ್ತಿದ್ದರು.ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ ಮತ್ತು ಸಾಮಾಜಿಕ ಹೊಂದಾಣಿಕೆಯನ್ನು ಲೀಲಾಜಾಲವಾಗಿಕಲಿಯುತ್ತಿದ್ದರು.ಹೆಣ್ಣು ಮಗು ಅಭ್ಯಾಸದ ಜೊತೆ ಮನೆಗೆಲಸ ಕಲಿತರೆ ಗಂಡು ಮಗುಹೊರಗಿನ ವ್ಯವಹಾರ ಜ್ಞಾನ ಬೆಳೆಸಿಕೊಕೊಳ್ಳುತ್ತಿತ್ತು.ಹೀಗಾಗಿ ಮದುವೆಯ ನಂತರವೂ ಅವರಿಗೆ ಮನೆಯ ಜವಾಬ್ದಾರಿ ಹೊಂದಾಣಿಕೆಯಲ್ಲಿ ಚಾತುರ್ಯವಿತ್ತು. ಆಗ ಹೆಣ್ಣು ಮಗಳು  ಮದುವೆ ನಂತರ ಅತ್ತೆ ಮನೆಯಲ್ಲಿ ತನ್ನ ಉದ್ಯೋಗದ ಜೊತೆಗೆ ಸಂಸಾರಿಕ ಜೀವನವನ್ನು ಸಾಮರಸ್ಯದಿಂದ ನಿಭಾಯಿಸುತ್ತಿದ್ದಳು.ಅಂದಿನ  ಪೀಳಿಗೆಯಲ್ಲಿ ಪಾಲಕರು ತಮ್ಮ ಮಕ್ಕಳ  ಶಿಕ್ಷಣದ ಜೊತೆಗೆ ಅವರ ಭಾವನಾತ್ಮಕ ಬೆಳವಣಿಗೆ ಹಾಗೂ ಮಾನಸಿಕ  ಮತ್ತು ದೈಹಿಕ ಆರೋಗ್ಯದ ಕಡೆಗೂ ಗಮನಹರಿಸುತ್ತಿದ್ದರು.  ಅಂದು  ಅಜ್ಜ, ಅಜ್ಜಿ ಮಕ್ಕಳಿಗೆ ಕುಟುಂಬದ ಮೌಲ್ಯಗಳನ್ನ ಮತ್ತು ಸಂಸ್ಕೃತಿಯನ್ನ ಹೇಗೆ ಕಾಪಾಡಬೇಕೆಂದು ತಿಳಿಸುತ್ತಿದ್ದರು. ಹೀಗಾಗಿ ಭಾರತದಲ್ಲಿ ಮಕ್ಕಳು ತಮ್ಮ ಹಿರಿಯರು, ಪೋಷಕರು ಮತ್ತು ಶಿಕ್ಷಕರಿಗೆ ಗೌರವ ನೀಡುತ್ತಿದ್ದರು. ಜಂಟಿ ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದಿಂದಾಗಿ, ಆಗಿನ ಮಕ್ಕಳು ಹಂಚಿಕೊಳ್ಳುವಿಕೆ  ಮತ್ತು ಸಾಮಾಜಿಕ  ಹೊಂದಾಣಿಕೆಗಳನ್ನು ಬೆಳೆಯುತ್ತಲೇ ಕಲಿಯುತ್ತಿದ್ದರು .ಆದರೆ ಈಗ  ಆಧುನಿಕತೆಯ ಹೆಸರಿನಲ್ಲಿ ತಂತ್ರಜ್ಞಾನದ ಬಳಕೆ ಅತಿಯಾಗಿದೆ .ಭಾರತೀಯ ಮಕ್ಕಳ  ಆಧುನಿಕ ತಂತ್ರಜ್ಞಾನದ ಬಳಕೆ ಅವರ  ನಡವಳಿಕೆಯಲ್ಲಿಯ ಮುಖ್ಯ ಅಂಶಗಳಾದ ಕುಟುಂಬದ ಮೌಲ್ಯಗಳು ,ಸಂಸ್ಕೃತಿ, ಹಿರಿಯರು, ಪೋಷಕರು ಮತ್ತು ಶಿಕ್ಷಕರು  ಇವುಗಳ ಪ್ರಾಮುಖ್ಯತೆ ಕಡಿಮೆಯಾಗುತ್ತಿದೆ.  ವಿಭಕ್ತ  ಕುಟುಂಬದ ವ್ಯವಸ್ಥೆ ಅಥವಾ ನಿಕಟ ಕುಟುಂಬದ ಬಾಂಧವ್ಯದ ಅಭಾವದಿಂದಾಗಿ, ಮಕ್ಕಳು ಹಂಚಿಕೊಳ್ಳುವಿಕೆ, ಹೊಂದಾಣಿಕೆಗಳಂತಹ  ಜೀವನಮೌಲ್ಯಗಳನ್ನ ಕಳೆದುಕೊಳ್ಳುತ್ತಿದ್ದಾರೆ. ಅತಿಯಾದ ಮೊಬೈಲ್ ಬಳಕೆಯಿಂದ  ಮಕ್ಕಳು ಆಟಿಕೆಗಳಿಗಿಂತ ಸ್ಮಾರ್ಟ್‌ಫೋನ್, ವಿಡಿಯೋ ಗೇಮ್‌ಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಾರೆ.ಹಠಮಾರಿ ಸ್ವಭಾವ ಹೆಚ್ಚುತ್ತಿದೆ.ತಾವು ಕೇಳಿದ್ದು ಸಿಗದಿದ್ದರೆ ಬೇಗನೆ ಸಿಟ್ಟು ಮಾಡಿಕೊಳ್ಳುವುದು, ಹಠ ಹಿಡಿಯುವುದು ಇಂದಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಸಿಗುತ್ತದೆ.ಏಕಾಗ್ರತೆಯ ಕೊರತೆ ಕಾಣಿಸಿಕೊಳ್ಳುತ್ತಿದೆ.ಒಂದೇ ವಿಷಯದ  ಮೇಲೆ ಹೆಚ್ಚು ಹೊತ್ತು ಗಮನ ಹರಿಸಲು ಕಷ್ಟಪಡುವುದು ಮತ್ತು ಬೇಗನೆ ಬೇಸರಗೊಳ್ಳುವುದು ಹೆಚ್ಚಾಗಿದೆ.ಸಾಮಾಜಿಕ ಹೊಂದಾಣಿಕೆಯ  ಕೌಶಲ್ಯಗಳ ಕೊರತೆಯಿಂದ ಮಕ್ಕಳು  ಹೊರಗಡೆ ಆಟವಾಡುವುದನ್ನ  ಮರೆತು ಮನೆಯಲ್ಲೇ ಕುಳಿತುಕೊಳ್ಳಲು ಇಷ್ಟಪಡುತ್ತಾರೆ. ಇತರರೊಂದಿಗೆ ಬೆರೆಯುವದೂ  ದಿನೇ ದಿನೇ ಕಡಿಮೆಯಾಗುತ್ತಿದೆ.ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯುವುದು, ಸ್ನೇಹಿತರಂತೆ ವರ್ತಿಸುವುದು ,ಅವರ ಮಾನಸಿಕ ಸಮಸ್ಯೆಗಳನ್ನು  ದೂರ  ಮಾಡಬಹುದು.ಅತಿಯಾದ ಟಿವಿ ಅಥವಾ ಮೊಬೈಲ್ ಬಳಕೆಗೆ ಕಡಿವಾಣ ಹಾಕಲು ದೈಹಿಕ ಚಟುವಟಿಕೆಗಳು, ಸೃಜನಶೀಲ ಚಟುವಟಿಕೆಗಳು,ಯೋಗ, ಧ್ಯಾನ ಮುಂತಾದವುಗಳಲ್ಲಿ ಅವರನ್ನು  ತೊಡಗಿಸಬೇಕು. ಅದೇ ರೀತಿ ಮಕ್ಕಳಲ್ಲಿ ಮದುವೆ ಮಕ್ಕಳ ಪ್ರಾಮುಖ್ಯತೆ ಕೂಡ ಕಡಿಮೆಯಾಗುತ್ತಿದೆ. ಜಾಸ್ತಿ ಸಂಪಾದನೆಯ ಅಹಂ ಹೆಚ್ಚಾಗಿ ಗಂಡನ ಜೊತೆ ಕೂಡ ಹೊಂದಾಣಿಕೆ ಕಳೆದುಕೊಂಡು ವಿಚ್ಛೇದನಕ್ಕೆ ಮೊರೆ ಹೋಗುತ್ತಿರುವುದು ಬಹು ದೊಡ್ಡ ವಿಷಾದನೀಯ ಸಂಗತಿ ಕೂಡ.ಹೇಳಿ ಆಧುನಿಕತೆ ವರವೋ ಶಾಪವೋ!! ಪ್ರೊ. ರಾಜೇಶ್ವರಿ ಶೀಲವಂತ ಪುಣೆ

“ಭಾರತೀಯ ಮಕ್ಕಳ ಇಂದಿನ ನಡವಳಿಕೆ”ಪ್ರೊ.ರಾಜೇಶ್ವರಿ ಶೀಲವಂತ ಪುಣೆ Read Post »

ಇತರೆ, ಜೀವನ

“ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ”ಲೇಖನ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ

ಜೀವನ ಸಂಗಾತಿ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ “ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ” ಸಾಂಸಾರಿಕ ತಾಪತ್ರಯಗಳ ಬಿರುಗಾಳಿಗೆ ಸಿಲುಕಿದಾಗ, ಒಂಟಿತನ ಕಾಡುವುದು ಸಹಜ. ಅಂತಹ ಕಠಿಣ ಸಮಯದಲ್ಲಿ ಆತ್ಮೀಯ ಸ್ನೇಹಿತರು ಚಾಚುವ ಸಹಾಯದ ಹಸ್ತ ಮತ್ತು ಅವರು ತೋರುವ ಆತ್ಮೀಯತೆ ಒಬ್ಬ ವ್ಯಕ್ತಿಗೆ ಸಂಜೀವಿನಿಯಂತೆ ಕೆಲಸ ಮಾಡುತ್ತದೆ. ಆದರೆ, ಒಬ್ಬ ಜವಾಬ್ದಾರಿಯುತ ವ್ಯಕ್ತಿ ಆ ಆತ್ಮೀಯತೆಯನ್ನು ಅಹಂಕಾರವಿಲ್ಲದೆ, ಹಾಗೆಯೇ ಅತಿಯಾದ ದೈನ್ಯತೆಯೂ ಇಲ್ಲದೆ ಹೇಗೆ ಗೌರವದಿಂದ ಸ್ವೀಕರಿಸಬೇಕು ಎಂಬುದನ್ನು ಕೆಲವೊಂದಿಷ್ಟು ವಾಕ್ಯಗಳಿಂದ ಅರ್ಥೈಸಿಕೊಳ್ಳಬಹುದು:,,” ಸುಖ-ದುಃಖಗಳನ್ನು ಸಮಾನವಾಗಿ ಸ್ವೀಕರಿಸಬೇಕು” …ಕಷ್ಟಗಳು ಬಂದಾಗ “ನನಗೇ ಯಾಕೆ ಹೀಗಾಯಿತು?” ಎಂದು ಅಳುತ್ತಾ ಕೂರುವುದು ಜವಾಬ್ದಾರಿಯುತ ವ್ಯಕ್ತಿಯ ಲಕ್ಷಣವಲ್ಲ ಎಂದು ಹಿರಿಯರು ಹೇಳುತ್ತಾರೆ ಹಗಲು-ರಾತ್ರಿಗಳು ಹೇಗೆ ಚಕ್ರಾಕಾರವಾಗಿ ಬರುತ್ತವೆಯೋ, ಕಷ್ಟ-ಸುಖಗಳೂ ಹಾಗೆಯೇ ಬರುತ್ತವೆ ಎಂಬುದನ್ನು ಅರಿಯಬೇಕು. ಸುಖಸ್ಯಾನಂತರಂ ದುಃಖಂ ದುಃಖಸ್ಯಾನಂತರಂ ಸುಖಮ್ |ಚಕ್ರವತ್ ಪರಿವರ್ತಂತೇ ದುಃಖಾನಿ ಚ ಸುಖಾನಿ ಚ || ಈ ಶ್ಲೋಕವು ….ಸುಖದ ನಂತರ ದುಃಖ, ದುಃಖದ ನಂತರ ಸುಖ ಬರುವುದು ಪ್ರಕೃತಿಯ ನಿಯಮ. ಗಾಡಿಯ ಚಕ್ರವು ತಿರುಗುವಂತೆ ಸುಖ ಮತ್ತು ದುಃಖಗಳು ಜೀವನದಲ್ಲಿ ಸದಾ ಬದಲಾಗುತ್ತಾ ಇರುತ್ತವೆ. ಎಂಬುದನ್ನು ತಿಳಿಸುತ್ತದೆ.ಆದ್ದರಿಂದ ಕಷ್ಟ ಬಂದಾಗ ಇದು ಶಾಶ್ವತವಲ್ಲ, ಇದೂ ಕೂಡ ಕಳೆದುಹೋಗುತ್ತದೆ ಎಂಬ ದೃಢ ನಂಬಿಕೆ ಇರಬೇಕು. ಈ ಅರಿವು ವ್ಯಕ್ತಿಗೆ ತಾಪತ್ರಯಗಳ ನಡುವೆಯೂ ಶಾಂತವಾಗಿರಲು ನೆರವಾಗುತ್ತದೆ.*. “ಫಲದ ನಿರೀಕ್ಷೆಯಿಲ್ಲದೆ ಕರ್ತವ್ಯ ಮಾಡಬೇಕು “ಸಾಂಸಾರಿಕ ಸಮಸ್ಯೆಗಳು ಎದುರಾದಾಗ ಅನೇಕರು “ನಾನು ಇಷ್ಟೆಲ್ಲಾ ಕಷ್ಟಪಟ್ಟರೂ ಏನೂ ಪ್ರಯೋಜನವಾಗುತ್ತಿಲ್ಲ” ಎಂದು ನಿರಾಶರಾಗುತ್ತಾರೆ. ಆದರೆ, ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ನೀಡಿದ ಸಂದೇಶವೇ ಇದಕ್ಕೆ ಪರಮ ಔಷಧ.ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |ಮಾ ಕರ್ಮಫಲಹೇತುರ್ಭೂಮಾ ತೇ ಸಂಗೋಸ್ತ್ವಕರ್ಮಣಿ ||ಇದು ತಿಳಿಸುವ ವಿಷಯ ಏನಂದರೆ.. ನಿನಗೆ ಕರ್ತವ್ಯವನ್ನು ಮಾಡಲು ಮಾತ್ರ ಅಧಿಕಾರವಿದೆ, ಅದರ ಫಲದ ಮೇಲಲ್ಲ. ಕರ್ಮಫಲಕ್ಕೆ ನೀನು ಕಾರಣನಾಗಬೇಡ, ಹಾಗೆಯೇ ಕರ್ಮವನ್ನು ಮಾಡದೆ ಕೂರಬೇಡ ಎಂದು.ಜವಾಬ್ದಾರಿಯುತ ವ್ಯಕ್ತಿಯಾದವನು ಪರಿಸ್ಥಿತಿ ಎಷ್ಟೇ ಹದಗೆಟ್ಟಿದ್ದರೂ ತನ್ನ ಪಾಲಿನ ಕರ್ತವ್ಯಗಳನ್ನು (ಕುಟುಂಬವನ್ನು ಸಾಕುವುದು, ದುಡಿಯುವುದು) ಪ್ರಾಮಾಣಿಕವಾಗಿ ಮಾಡುತ್ತಾ ಹೋಗಬೇಕು. ಚಿಂತೆ ಮಾಡುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ, ಕರ್ಮ ಮಾಡುವುದರಿಂದ ಮಾತ್ರ ದಾರಿ ಸಿಗುತ್ತದೆ.*. “ಧೈರ್ಯವೇ ಪರಮ ಆಸ್ತಿ”ಎಲ್ಲವೂ ಕೈಬಿಟ್ಟು ಹೋದಾಗಲೂ ಒಬ್ಬ ವ್ಯಕ್ತಿಯನ್ನು ಕೈಹಿಡಿದು ನಡೆಸುವ ಏಕೈಕ ಶಕ್ತಿ ಎಂದರೆ ಆತನ ಒಳಗಿನ ಧೈರ್ಯ ಮತ್ತು ಆತ್ಮವಿಶ್ವಾಸ. ಆಪತ್ತು ಬಂದಾಗ ಧೈರ್ಯ ತಳೆಯುವುದು, ಐಶ್ವರ್ಯ ಬಂದಾಗ ಕ್ಷಮಾ ಗುಣವನ್ನು ಹೊಂದುವುದು, ಸಾಂಸಾರಿಕ ಆಪತ್ತುಗಳು ಬಂದಾಗ ಧೈರ್ಯವಾಗಿ ನಿಲ್ಲುವುದೇ ಒಬ್ಬ ನಿಜವಾದ ಗೃಹಸ್ಥನ ಲಕ್ಷಣ. ಧೈರ್ಯಗೆಟ್ಟರೆ ಬುದ್ಧಿ ಕೆಲಸ ಮಾಡುವುದಿಲ್ಲ. ನಿಶ್ಚಲ ಮನಸ್ಸಿನಿಂದ ಯೋಚಿಸಿದರೆ ಕಠಿಣ ಸಮಸ್ಯೆಗೆ ಸುಲಭ ಪರಿಹಾರ ಸಿಗುತ್ತದೆ.*. ಸಂಕಷ್ಟದ ಸಮಯದಲ್ಲಿ ತಾಳ್ಮೆಯ ಮಹತ್ವಕಷ್ಟದ ಸಮಯದಲ್ಲಿ ಕೋಪ, ಉದ್ವೇಗ ಅಥವಾ ಆತುರದ ನಿರ್ಧಾರಗಳು ಸಾಂಸಾರಿಕ ಬಿಕ್ಕಟ್ಟನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ. ಅಲ್ಲಿ ತಾಳ್ಮೆ ಅತ್ಯಂತ ಅಗತ್ಯ.ಧೃತಿಃ ಕ್ಷಮಾ ದಮೋಸ್ತೇಯಂ ಶೌಚಮಿಂದ್ರಿಯನಿಗ್ರಹಃ |ಧೀರ್ವಿದ್ಯಾ ಸತ್ಯಮಕ್ರೋಧೋ ದಶಕಂ ಧರ್ಮಲಕ್ಷಣಮ್ ||ಅಂದರೆ …ಧೈರ್ಯ (ತಾಳ್ಮೆ), ಕ್ಷಮೆ, ಮನಸ್ಸಿನ ನಿಗ್ರಹ, ಕದಿಯದಿರುವುದು, ಬಾಹ್ಯ-ಅಭ್ಯಂತರದ ಶುದ್ಧಿ, ಇಂದ್ರಿಯ ನಿಗ್ರಹ, ಬುದ್ಧಿವಂತಿಕೆ, ಜ್ಞಾನ, ಸತ್ಯ ಮತ್ತು ಕೋಪ ಮಾಡದಿರುವುದು – ಇವು ಧರ್ಮದ ಹತ್ತು ಲಕ್ಷಣಗಳು.ಇವುಗಳನ್ನು ಅರಿತು,ಸಾಂಸಾರಿಕ ತಾಪತ್ರಯಗಳಿದ್ದಾಗ ಮನೆಯವರ ಮೇಲೆ ಕೋಪಗೊಳ್ಳದೆ, ಪರಿಸ್ಥಿತಿಯನ್ನು ಹತೋಟಿಗೆ ತರಲು ಇಂದ್ರಿಯ ನಿಗ್ರಹ ಮತ್ತು ಬುದ್ಧಿವಂತಿಕೆಯನ್ನು  ಬಳಸಬೇಕು. ಕೋಪವಿಲ್ಲದ ಜಾಗದಲ್ಲಿ ನೆಮ್ಮದಿ ಇರುತ್ತದೆ. ನಿಜವಾದ ಸ್ನೇಹಿತ(ತೆಯ)ನ ಪ್ರೀತಿ ಮತ್ತು ಆತ್ಮೀಯತೆಯ ಸ್ವೀಕಾರ”ಕಷ್ಟಕಾಲದಲ್ಲಿ ನಮ್ಮ ಜೊತೆ ನಿಲ್ಲುವವನೇ ನಿಜವಾದ ಮಿತ್ರ. ಇಂತಹ ಸಂದರ್ಭದಲ್ಲಿ ಸ್ನೇಹಿತರು ತೋರುವ ಪ್ರೀತಿಯನ್ನು “ನನ್ನ ಪರಿಸ್ಥಿತಿ ಹೀಗಾಗಿಬಿಟ್ಟಿತಲ್ಲ” ಎಂದು ಕೀಳರಿಮೆಯಿಂದ ನೋಡದೆ, ಅದನ್ನೊಂದು ದಿವ್ಯ ರಕ್ಷೆಯಾಗಿ ಸ್ವೀಕರಿಸಬೇಕು.ಪಾಪಾನ್ನಿವಾರಯತಿ ಯೋಜಯತೇ ಹಿತಾಯ |ಗುಹ್ಯಂ ಚ ಗೂಹತಿ ಗುಣಾನ್ ಪ್ರಕಟೀಕರೋತಿ ||ಆಪದ್ಗತಂ ಚ ನ ಜಹಾತಿ ದದಾತಿ ಕಾಲೇ |ಸನ್ಮಿತ್ರಲಕ್ಷಣಮಿದಂ ಪ್ರವದಂತಿ ಸಂತ: ||ತಪ್ಪು ದಾರಿಗೆ ಹೋಗದಂತೆ ತಡೆಯುವವನು, ಹಿತವನ್ನು ಬಯಸುವವನು, ರಹಸ್ಯಗಳನ್ನು ಕಾಪಾಡುವವನು, ಗೆಳೆಯನ ಒಳ್ಳೆಯ ಗುಣಗಳನ್ನು ಸಮಾಜದ ಮುಂದೆ ಕೊಂಡಾಡುವವನು, ಆಪತ್ತು ಬಂದಾಗ ಕೈಬಿಡದೆ ಸಮಯಕ್ಕೆ ಸರಿಯಾಗಿ ನೆರವಾಗುವವನು – ಇವನೇ ಸನ್ಮಿತ್ರ (ಆತ್ಮೀಯ ಸ್ನೇಹಿತ/ತೆ) ಎಂದು ಸಜ್ಜನರು ಹೇಳುತ್ತಾರೆ.ಸ್ವೀಕರಿಸುವ ಮಾರ್ಗ: ಸಾಂಸಾರಿಕ ಕಷ್ಟಗಳಲ್ಲಿದ್ದಾಗ ಸನ್ಮಿತ್ರನು ತೋರುವ ಆತ್ಮೀಯತೆ ಮತ್ತು ಕೊಡುವ ಸಲಹೆಗಳನ್ನು ಗೌರವದಿಂದ ಸ್ವೀಕರಿಸಬೇಕು. “ನನ್ನ ಕಷ್ಟವನ್ನು ಹಂಚಿಕೊಳ್ಳಲು ಒಬ್ಬನಿದ್ದಾನೆ” ಎಂಬ ಧೈರ್ಯವೇ ಅರ್ಧದಷ್ಟು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಸ್ನೇಹಿತರ ಮುಂದೆ ಅಹಂಕಾರವನ್ನು ಬದಿಗಿಟ್ಟು ಮನಸ್ಸು ಬಿಚ್ಚಿ ಮಾತನಾಡುವುದು ಬುದ್ಧಿವಂತಿಕೆ.  “ಕೃತಜ್ಞತಾ ಭಾವ ಮತ್ತು ಸಂಬಂಧದ ಪಾವಿತ್ರ್ಯತೆ”ಸ್ನೇಹಿತರು ನೀಡುವ ಆರ್ಥಿಕ ಅಥವಾ ಮಾನಸಿಕ ಬೆಂಬಲವನ್ನು ಕೇವಲ ಸಹಾಯ ಎಂದು ತಿಳಿಯದೆ, ಅವರ ಪ್ರೀತಿಯ ಸಂಕೇತವೆಂದು ಭಾವಿಸಿ ಕೃತಜ್ಞತೆಯಿಂದ ಸ್ವೀಕರಿಸಬೇಕು.ಪ್ರಿಯಂಪ್ರೌಢಂ ಚ ವಚನಂ ಸ್ನೇಹಸೌಹಾರ್ದಲಕ್ಷಣಮ್ |ಸಂಗ್ರಹಶ್ಚ ಯಥಾಶಕ್ತ್ಯಾ ಕೃತಜ್ಞತ್ವಮಲೋಲುಪತಾ || ಮಧುರವಾದ ಮತ್ತು ಪ್ರೌಢವಾದ ಮಾತುಗಳು ಸ್ನೇಹ ಮತ್ತು ಸೌಹಾರ್ದತೆಯ ಲಕ್ಷಣಗಳಾಗಿವೆ. ಕಷ್ಟದಲ್ಲಿದ್ದಾಗ ಶಕ್ತ್ಯಾನುಸಾರ ಸಹಾಯ ಮಾಡುವುದು, ಅದನ್ನು ಕೃತಜ್ಞತೆಯಿಂದ ಸ್ವೀಕರಿಸುವುದು ಮತ್ತು ದುರಾಶೆ ಇಲ್ಲದಿರುವುದು ಉದಾತ್ತ ಸಂಬಂಧದ ಸಂಕೇತ. ಸ್ನೇಹಿತರು ತೋರುವ ಆತ್ಮೀಯತೆಯನ್ನು ಸ್ವೀಕರಿಸುವಾಗ ಮನಸ್ಸಿನಲ್ಲಿ ಸದಾ ಕೃತಜ್ಞತೆ (Gratitude) ಇರಬೇಕು. ಇಂದು ಅವರು ನಮ್ಮನ್ನು ಸಂಕಷ್ಟದಿಂದ ಪಾರು ಮಾಡಲು ಬಂದಿದ್ದಾರೆ ಎಂದರೆ, ಅದು ಅವರ ದೊಡ್ಡ ಗುಣ. ಆ ಸ್ನೇಹದ ಹಸ್ತವನ್ನು ನಮ್ರತೆಯಿಂದ ಹಿಡಿದು, “ಮುಂದೊಂದು ದಿನ ನಾನು ಚೇತರಿಸಿಕೊಂಡಾಗ ಈ ಸ್ನೇಹಕ್ಕೆ ಖಂಡಿತಾ ದ್ರೋಹ ಬಗೆಯುವುದಿಲ್ಲ, ನಾನೂ ಅವರ ಕಷ್ಟಕ್ಕೆ ನಿಲ್ಲುತ್ತೇನೆ” ಎಂಬ ಸಂಕಲ್ಪದೊಂದಿಗೆ ಮುನ್ನಡೆಯಬೇಕು.ಸಂಕ್ಷಿಪ್ತವಾಗಿ ಹೇಳುವುದಾದರೆ: ಸಂಸಾರದ ಕಷ್ಟಗಳು ಸುಡುತ್ತಿರುವಾಗ, ಆತ್ಮೀಯ ಸ್ನೇಹಿತರ ಸೌಹಾರ್ದತೆ ಎಂಬುದು ತಂಪಾದ ನೆರಳಿನಂತೆ. ಜವಾಬ್ದಾರಿಯುತ ವ್ಯಕ್ತಿಯಾದವನು ಆ ನೆರಳನ್ನು ಸಂಕೋಚವಿಲ್ಲದೆ ಸ್ವೀಕರಿಸಿ, ಮಾನಸಿಕ ಶಕ್ತಿಯನ್ನು ಮರಳಿ ಪಡೆದು, ಮತ್ತೆ ಸಂಸಾರದ ಹಾದಿಯಲ್ಲಿ ಧೈರ್ಯವಾಗಿ ಹೆಜ್ಜೆ ಇಡಬೇಕು.ಒಟ್ಟಿನಲ್ಲಿ ಹೇಳಬೇಕೆಂದರೆ…ಸಾಂಸಾರಿಕ ಜೀವನ ಎಂಬುದು ಒಂದು ಸಮುದ್ರವಿದ್ದಂತೆ. ಅದರಲ್ಲಿ ಅಲೆಗಳು ಏಳುವುದು ಸಹಜ. ಜವಾಬ್ದಾರಿಯುತ ವ್ಯಕ್ತಿಯಾದವನು ಅಲೆಗಳನ್ನು ನೋಡಿ ಹೆದರಿ ದೋಣಿಯನ್ನು ಮುಳುಗಿಸುವುದಿಲ್ಲ; ಬದಲಿಗೆ ದೋಣಿಯ ಚುಕ್ಕಾಣಿಯನ್ನು ಗಟ್ಟಿಯಾಗಿ ಹಿಡಿದು ತೀರದ ಕಡೆಗೆ ಮುನ್ನಡೆಸುತ್ತಾನೆ.ಕಷ್ಟಗಳು ನಮ್ಮನ್ನು ಕುಗ್ಗಿಸಲು ಬರುವುದಿಲ್ಲ, ಬದಲಿಗೆ ನಮ್ಮೊಳಗಿನ ನೈಜ ಶಕ್ತಿಯನ್ನು ನಮಗೆ ನೆನಪಿಸಲು ಬರುತ್ತವೆ. ಧರ್ಮ, ಧೈರ್ಯ, ಕರ್ತವ್ಯ ಪ್ರಜ್ಞೆ ಮತ್ತು ಪರಿಶ್ರಮ ಎಂಬ ನಾಲ್ಕು ಚಕ್ರಗಳ ಸಹಾಯದಿಂದ ಸಾಂಸಾರಿಕ ತಾಪತ್ರಯಗಳ ಕಠಿಣ ಹಾದಿಯನ್ನೂ ಸುಲಭವಾಗಿ ದಾಟಬಹುದು ಎಂಬುದೇ ಜ್ಞಾನಿಗಳ ಸಂದೇಶ. ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ

“ಸಂಸಾರದ ತಾಪಕ್ಕೆ ಸ್ನೇಹದ ಸಂಜೀವಿನಿ”ಲೇಖನ ಪೂರ್ಣಿಮಾ ಮಹೇಶ ಮುತ್ನಾಳ ಅಳ್ನಾವರ Read Post »

ಇತರೆ, ಜೀವನ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ

ಜೀವನ ಸಂಗಾತಿ ಜಯಶ್ರೀ.ಜೆ. ಅಬ್ಬಿಗೇರಿ ಇರದುದರ ಬಗೆಗೆ ಧೇನಿಸುವ ಬದಲು?! ಪ್ರತಿಕ್ಷಣ ಬೇರೆಯವರಿಗೆ ನಿಮ್ಮನ್ನು ನೀವು ಹೋಲಿಸಿಕೊಂಡು ಅಯ್ಯೋ! ನಾನು ಅವನ/ಅವಳoತಿಲ್ಲ. ನನ್ನ ಬಳಿ ಅವನ/ಳ ಹಾಗೆ ಉತ್ತಮ ಜಾತಿ ಮತ ಭಾಷೆ ಇಲ್ಲ. ಅವನು ನೀಳವಾಗಿ ಸುಂದರವಾಗಿದ್ದಾನೆ ನಾನು ಕುರೂಪಿಯಾಗಿದ್ದೇನೆ. ಕುಬ್ಜವಾಗಿದ್ದೇನೆ. ಅವಳು ಬಿಳುಪು ಸುರೂಪಿ ನಾನು ಕಪ್ಪು ಕುರೂಪಿ ಎಂದು ಸದಾ ನಿಮ್ಮಲ್ಲಿರುವುದನ್ನು ಬಿಟ್ಟು ಇಲ್ಲದುದರ ಬಗೆಗೆ ಚಿಂತಿಸುತ್ತ ಕುಳಿತರೆಫಲವಿಲ್ಲ. ನಿಮ್ಮ ಹಾಗೆ ಈ ಜಗದಲಿ ಯಾರೂ ಇಲ್ಲ. ನೀವು ಒಬ್ಬ ವಿಶಿಷ್ಟ ವ್ಯಕ್ತಿ. ಎನ್ನುವುದನ್ನು ಮರೆಯದಿರಿ. ನಿಮ್ಮಲ್ಲಿರುವುದನ್ನು ನೀವು ಸದಾ ಅಭಿನಂದಿಸಿಕೊಳ್ಳಬೇಕು. ನೆರೆಮನೆಯರ ಹತ್ತಿರವಿರುವುದು  ಬಂಗಾರದ ಸೂಜಿಯೆಂದು ಅದನ್ನು  ಕಣ್ಣಲ್ಲಿ ಚುಚ್ಚಿಕೊಳ್ಳಲು ಸಾಧ್ಯವೇ? ಹಾಗೆಯೇ ಕಾಲಲ್ಲಿ ಮುಳ್ಳು ಚುಚ್ಚಿಕೊಂಡರೆ  ಕೆಳಗೆ ಬಿದ್ದು ಮುಳ್ಳು ಕಣ್ಣಲ್ಲಿ ಚುಚ್ಚಿಕೊಳ್ಳದಿರುವುದಕ್ಕೆ ಸಂತಸ ಪಡಬೇಕು. ಹಿಂದಿ ಚಿತ್ರ ರಂಗದಲ್ಲಿ ಬಿಗ್ ಬಿ ಎಂದು ಕರೆಸಿಕೊಂಡು ತಮ್ಮ ಇಳಿ ವಯಸ್ಸಿನಲ್ಲೂ ಇಂದಿನ ಯುವ ಪೀಳಿಗೆಯಲ್ಲಿ ಸಂಚಲನ ಮೂಡಿಸಿದ ಇಂಡಿಯನ್ ಐಕಾನ್ ಆಗಿರುವ ಅಮಿತಾಬ್, ನಂಬರ್ ಒನ್ ಆಗಿ ಮೆರೆಯುವ ಮುನ್ನ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಸಬರೊಂದಿಗೆ ತನ್ನನ್ನು ಹೋಲಿಸಿಕೊಂಡು ಟೀಕಿಸಿಕೊಂಡು ಹಿಂದುಳಿಯಲಿಲ್ಲ. ರಾಜಕೀಯ ತನಗೆ ಸರಿ ಹೊಂದದಿದ್ದಾಗ ಅದರ ಬಗ್ಗೆ ಧೇನಿಸುತ್ತ ಕುಳಿತುಕೊಳ್ಳದೇ,  ಕಿರುತೆರೆಯಲ್ಲಿ ಕೌನ್ ಬನೆಗಾ ಕರೋಡ್ ಪತಿ ಎನ್ನುವ ಶೋ ನಡೆಸಲು ಬಂದ ಅವಕಾಶ ಕಡೆಗಣಿಸದೇ ಕನ್ನಡಿಯ ಮುಂದೆ ಮನೆ ಮಂದಿಯ ಮುಂದೆ ವಿಮರ್ಶಕರ ಮುಂದೆ ತಿಂಗಳಾನುಗಟ್ಟಲೇ ತಾಲೀಮು ನಡೆಸಿ ತನ್ನಲ್ಲಿರುವದನ್ನು ಮತ್ತಷ್ಟು ಪೋಷಿಸಿ ಬೆಳೆಸಿ ಬೆಳಕಿಗೆ ಚೆಲ್ಲಿದರು. ಆ ಯಶಸ್ಸು ಮತ್ತೆ ಅವರನ್ನು ಚಲನಚಿತ್ರ ರಂಗ ಕೈ ಬೀಸಿ ಕರೆಯುವಂತೆ ಮಾಡಿತು. ನಿಮ್ಮಲ್ಲಿರುವ ಶಕ್ತಿಯನ್ನು ಗುರುತಿಸಿ ವಿಜಯಶಾಲಿಗಳನ್ನು ಕಂಡು ಅವರೆಷ್ಟು ಬುದ್ಧಿವಂತರು ಅವರಿಗೆ ಕೊಟ್ಟಷ್ಟು ಬುದ್ಧಿವಂತಿಕೆಯನ್ನು ದೇವರು ನಮಗೆ ಕೊಟ್ಟಿಲ್ಲ. ಎಂದು ಕರಬುವುದು ಸರಿಯಲ್ಲ. ಬುದ್ಧಿವಂತಿಕೆಯೆನ್ನುವುದು ಯಾರೊಬ್ಬರ ಸ್ವತ್ತು ಅಲ್ಲ. ಹಣ ಕೊಟ್ಟರೆ ದೊರೆಯುವಂಥ ವಸ್ತುವೂ ಅಲ್ಲ! ಛಲದಿಂದ ಕೂಡಿದ ಪ್ರಯತ್ನವುಳ್ಳವರು ಅದನ್ನು ಪಡೆಯಬಲ್ಲರು. ಸಾಧಕರನ್ನು ನೋಡಿ ಅವರೆಷ್ಟು  ಅದೃಷ್ಟವಂತರು ಎನ್ನುವುದು ಸುಲಭ. ಆದರೆ ಅವರು ಹಗಲು ರಾತ್ರಿ ಕಷ್ಟ ಪಟ್ಟು ಶ್ರಮ ವಹಿಸಿ ಅದೃಷ್ಟ ಗಳಿಸಿದರು ಎಂಬುದನ್ನು ತಿಳಿಯಬೇಕು. ಪ್ರಖ್ಯಾತ ಕ್ರಿಡಾಪಟುವೊಬ್ಬ ಹೇಳುತ್ತಾನೆ. ನಾನು ಎಷ್ಟು ಹೆಚ್ಚು ಪ್ರಾö್ಯಕ್ಟೀಸ್ ಮಾಡುತ್ತೇನೋ ಅಷ್ಟೇ ಹೆಚ್ಚು ನನಗೆ ಅದೃಷ್ಟ ಉಂಟಾಗುತ್ತದೆ ಎಂದು. ಹೀಗೆ ಮತ್ತೊಬ್ಬರಲ್ಲಿಯ ಶಕ್ತಿಗಳನ್ನು ನೋಡಿ ನಮ್ಮಲ್ಲಿಲ್ಲ ಎಂದು ಕೊರಗುತ್ತ ತಲೆಗೆ ಕೈ ಹಚ್ಚಿ ಕುಳಿತುಕೊಳ್ಳುವ ಬಹು ಪಾಲಿನ ಜನರು ತಮ್ಮಲ್ಲಿನ ಶಕ್ತಿಗಳನ್ನು ಗುರುತಿಸುವುದಿಲ್ಲ. ಎದುರು ವ್ಯಕ್ತಿಗಳಲ್ಲಿ ಇಲ್ಲದ ಶಕ್ತಿಗಳನ್ನು ಇರುವುದಾಗಿ ಭ್ರಮಿಸುತ್ತಾರೆ. ಪ್ರತಿ ವ್ಯಕ್ತಿಯಲ್ಲಿ ನಿಗೂಢ ಶಕ್ತಿಗಳು ಇರುತ್ತವೆ. ಅವುಗಳನ್ನು ಗುರುತಿಸಿ ಹೊರತೆಗೆದು ದಿನನಿತ್ಯ ಸಾಣೆ ಹಿಡಿಯಬೇಕು. ಮತ್ತೊಬ್ಬರ ಒತ್ತಾಯಕ್ಕೆ ಅಥವಾ ಯಾರೋ ಏನೋ ಮಾಡುತ್ತಿದ್ದಾರೆಂದು ಅದರಲ್ಲಿ ನೀವು ತೊಡಗಿಕೊಳ್ಳಲು ಅಶಕ್ತರೆಂದು ಕೊರಗಿದಿರಿ. ನಿಮ್ಮ ಆಸಕ್ತಿ ಅಭಿರುಚಿಗಳನ್ನು ಅರಿತು ಮುನ್ನಡೆಯಿರಿ.  ನಿಮಗೆ ತಿಳಿದ ರಂಗದಲ್ಲಿ ನಿಷ್ಣಾತರಾಗಿ ಅದ್ಭುತಗಳನ್ನು ಸೃಷ್ಟಿಸುವ ಅತ್ಯುದ್ಭುತ ಶಕ್ತಿ ನಿಮ್ಮಲ್ಲಿ ಹುದುಗಿದೆ. ಎಂಬುದನ್ನು ನೆನಪಿನಲ್ಲಿಟ್ಟು ಮುನ್ನುಗ್ಗಿ. ನಿಮ್ಮಲ್ಲಿರುವ ದೌರ್ಬಲ್ಯಗಳನ್ನು ಶಕ್ತಿಯಾಗಿ ಪರಿವರ್ತಿಸಿ. ಬಹಳಷ್ಟು ಜನರು ತಮ್ಮಲ್ಲಿನ ದೌರ್ಬಲ್ಯಗಳನ್ನು ಮೇಲಿಂದ ಮೇಲೆ ಸಹಜವಾಗಿ ಹೇಳಿಕೊಳ್ಳುತಿರುತ್ತಾರೆ. ಆದರೆ ಅದರಲ್ಲಿ ಬಹುಪಾಲು ಊಹಿಸಿಕೊಂಡಿರುವುದೇ. ಇಲ್ಲಿ ದೌರ್ಬಲ್ಯಗಳೆಂದರೆ ಕೀಳರಿಮೆ, ಶೀಘ್ರ ನಿರ್ಧಾರ ತೆಗೆದುಕೊಳ್ಳದಿರುವುದು ವಿಫಲತೆಯ ಬಗ್ಗೆ ಆತಂಕ ಗಾಬರಿ ದಾಕ್ಷಿಣ್ಯಗಳೇ ಆಗಿವೆ. ಸಿ ಎನ್ ಎನ್ ಟೆಲಿವಿಸನ್ ಮುಖ್ಯಸ್ಥ  ಟೆಡ್ ಟರ್ನರ್ ಆತ್ಮಹತ್ಯೆ ಮಾಡಿಕೊಂಡಾಗ ಜೂನಿಯರ್ ಟರ್ನರ್ ಆತ್ಮವಿಶ್ವಾಸದಿಂದ ಉನ್ನತ ಸ್ಥಾನಕ್ಕೇರಿ,೨೪ ಗಂಟೆಗಳ ವಾರ್ತೆಗಳನ್ನು ಪ್ರಸಾರ ಮಾಡುತ್ತೇನೆ ಎಂದು ಅದನ್ನು ಸಾಧಿಸಿ ತೋರಿಸಿದರು. ಒಂದು ಸಭೆಯಲ್ಲಿ ಟರ್ನರ್ ಮಾತನಾಡುತ್ತ ಬಡಕುಟುಂಬದಲ್ಲಿ ಹುಟ್ಟುವುದು ನಿರಂತರ ಸಮಸ್ಯೆಗಳನ್ನು ಎದುರಿಸುವುದು ಎದುರೇಟುಗಳು ಬೀಳುವುದು ನನ್ನ ಅದೃಷ್ಟ. ನನ್ನ ತಂದೆ ಉಳ್ಳವನಾಗಿದ್ದು. ನನ್ನನ್ನು ಚೆನ್ನಾಗಿ ಓದಿಸಿದ್ದರೆ ನಾನು ಇಂದು ಈ ಸ್ಥಿತಿಗೆ ಖಂಡಿತ ಬರುತ್ತಿರಲಿಲ್ಲ. ಎಂದಿದ್ದ. ಟರ್ನರ್ ಹೇಳಿಕೆಯನ್ನು ಇಲ್ಲಿ ಉಲ್ಲೇಖಿಸುತ್ತಿರುವುದರ ನನ್ನ ಉದ್ದೇಶವೆಲ್ಲ- ನಿಮ್ಮ ದೌರ್ಬಲ್ಯಗಳನ್ನು ತಿಳಿದು ನೀವೇ ಸ್ವಯಂ ನಿರ್ದಾರ ತೆಗೆದುಕೊಳ್ಳಿ. ಇದು ಸ್ವಯಂ ಪ್ರೇರಣೆಯಿಂದ ಮಾತ್ರ ಸಾಧ್ಯ.  ಮುನ್ನಡೆಯ ಚಿನ್ಹೆಗಳಿಗಾಗಿ ಗಮನಿಸಿ. ಅವು ಎಷ್ಟೇ ಚಿಕ್ಕದಾದರೂ ಸರಿ. ಬೇರೆಯವರು ನಿಮ್ಮ ಬಗ್ಗೆ ಅದೇನು ಯೋಚಿಸುತ್ತಾರೆ  ಎಂಬ ಚಿಂತೆಯೇ ಕೀಳರಿಮೆ. ಆಶ್ಚರ್ಯವೆಂದರೆ ಇಂಥ ಆಲೋಚನೆಗಳಿಗೆ ಬೇರೆಯವರ ಬಳಿ ಸಮಯವೇ ಇರುವುದಿಲ್ಲ. ಮನುಷ್ಯ ದುರ್ಬಲ ಆಲೋಚನೆಗಳನ್ನು ಪರಿತ್ಯಜಿಸಿದರೆ ಆತನ ದೃಢವಾದ ನಿಶ್ಚಯಗಳಿಗೆ ಸಹಾಯಕವಾಗಲು ಎಲ್ಲ ಕಡೆಯಿಂದ ಅವಕಾಶಗಳು ಹುಡುಕಿಕೊಂಡು ಬರುತ್ತವೆ. ಜಾತಿ ಮತ ಬಣ್ಣ ಭಾಷೆ ವಿತಂಡವಾದಗಳ ಹುಚ್ಚನ್ನು ಬೆಂಬಲಿಸುವವರೊoದಿಗೆ ನಿಮಗೆ ಸಂಬoಧಿಸಿದ್ದನ್ನಷ್ಟೇ ಕೇಳಿ ಉಳಿದವುಗಳನ್ನೆಲ್ಲ ಹೊರ ತೂರಿಬಿಡಿ. ಎಲ್ಲರೊಂದಿಗೆ ನಗು ನಗುತ್ತ ಸ್ನೇಹ ಮಾಡಿ.ಅಂತರoಗದ ಮಾತನ್ನು ಕೇಳುತ್ತಿರಿ ಮಾಡಬಾರದ ಕೆಲಸಗಳನ್ನು ಮಾಡಲು ಹೋದಾಗ ನಿಮ್ಮ ಅಂತರoಗ ಬೇಡವೆಂದು ಎಚ್ಚರಿಸುತ್ತದೆ ಅದನ್ನು ಪರಿಗಣಿಸಿ ಮುಂದುವರೆಯಿರಿ. ನಿಮ್ಮಲ್ಲಿರುವ ಬಲಹೀನತೆಗಳನ್ನು ನಿಯಂತ್ರಿಸುವುದಕ್ಕೆ ನೀವು ಪ್ರಾಮಾಣಿಕವಾಗಿ  ಪ್ರಯತ್ನಿಸಿ. ಸ್ವಯಂ ಗೌರವ   ಬೇಕನ್ ಹೇಳುವ ಪ್ರಕಾರ ಆತ್ಮಸಮ್ಮಾನವು ದುರ್ಗಣಗಳನ್ನು ವಶದೊಳಗಿಟ್ಟುಕೊಳ್ಳುವ ಮೊದಲನೆಯ ಕಡಿವಾಣವಾಗಿದೆ. ಮರ್ಯಾದೆ ಇಲ್ಲದ ಮನುಷ್ಯನು ರೆಕ್ಕೆಗಳಿಲ್ಲದ ಹಕ್ಕಿಯಂತೆಯೂ ಒಳ್ಳೆಯ ಬಣ್ಣವಾಗಲಿ  ಸುಗಂಧವಾಗಲಿ ಇಲ್ಲದ ಪುಷ್ಪದಂತೆಯೂ ಆಗುವದುದರಿಂದ ಜನಗಳ ನಡುವೆ ಸರಿಯಾಗಿ ಬಾಳಲಾರನು. ಎಂಬುದು ಜಿ ಕೃಷ್ಣಮೂರ್ತಿಯವರ ಮಾತು. ಬುದ್ಧಿವಂತರೆನಿಸಿಕೊoಡವರೂ ಖುದ್ದಾಗಿ ಏನನ್ನಾದರೂ ಕೈಗೆತ್ತಿಕೊಳ್ಳಬೇಕೆಂದರೆ ಹೆದುರುತ್ತಾರೆ. ಮುಖ್ಯವಾದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗಲೂ ಭಯಗೊಳ್ಳುತ್ತಾರೆ. ಅದಕ್ಕೆ ಕಾರಣ ಅವರು ಬೆಳೆದು ಬಂದ ಪರಿಸರವಾಗಿರಬಹುದು. ಆದರೆ ಈಗ ಅದು ನಿಷ್ಪಯೋಜಕ. ಆತ್ಮ ಗೌರವವನ್ನು ಹೆಚ್ಚಿಸಿಕೊಳ್ಲಲು ನಿಮ್ಮನ್ನು ನೀವು ಸ್ವೀಕರಿಸಿ. ನಿಮ್ಮೊಂದಿಗೆ ಪ್ರಾಮಾಣಿಕವಾಗಿರಿ. ನಿಮ್ಮ ಭಾವನೆಗಳಲ್ಲಿ ನಂಬಿಕೆಯಿಟ್ಟು ಗೌರವಿಸಿ. ದೌರ್ಬಲ್ಯಗಳನ್ನು ಇತರರೊಂದಿಗೆ ಹೋಲಿಸಬೇಡಿ. ನಿಮಗಿಂತ ಮೇಲೇರಿದವರನ್ನು ಕಂಡು ಅಸೂಯೆ ಪಡಬೇಡಿ. ಅವರಿಂದ ಸ್ಪೂರ್ತಿ ಪಡೆಯುವ ಗುಣ ಬೆಳೆಸಿಕೊಳ್ಳಿ. ಸ್ವ ಗೌರವವು ಯಶಸ್ಸನ್ನು ತಂದು ಕೊಡದಿರಬಹುದು ಆದರೆ ಸೋಲಿನ ಸನ್ನಿವೇಶವನ್ನು ಧೈರ್ಯದಿಂದ ಸ್ವೀಕರಿಸುವ ಮನೋಭಾವವನ್ನು ಖಂಡಿತವಾಗಿಯೂ ತಂದು ಕೊಡಬಲ್ಲುದು. ಪ್ರತಿಯೊಂದನ್ನು ಮಾಡಲು ಶಕ್ತಿಯಿದ್ದರೂ ಪರಾವಲಂಬಿಗಳಾಗಬೇಡಿ. ಕಾರಂತರು ಹೇಳಿದಂತೆ ವಿಶ್ವಾಸವಿದ್ದರೆ ಪ್ರೀತಿ, ಪ್ರೀತಿಯಿದ್ದರೆ ಗೌರವ. ಪ್ರಾರ್ಥಿಸಿ ಪ್ರಾರ್ಥನೆಯಲ್ಲಿನ ಅತ್ಯದ್ಭುತ ಶಕ್ತಿ ಅನುಭವಿಸಿದವನಿಗೇ ಗೊತ್ತು ಅಂತೆಯೇ  ಪ್ರಾರ್ಥನೆಯ ಶಕ್ತಿ ಅರಿತ ಹಿರಿಯರು. ಪ್ರಾರ್ಥನೆಯಲ್ಲಿ ಅಗಾಧವಾದ ನಂಬಿಕೆಯಿಟ್ಟ ಗಾಂಧೀಜಿಯವರೇ ಹೇಳಿದಂತೆ ಪ್ರಾರ್ಥನೆ ಬರೀ ನಾಲಿಗೆ ನುಡಿಯಲ್ಲ ಅಂತಃಕರಣದ ಮಹಾರೂಪ. ಪ್ರಾರ್ಥಿಸಿ ನಿಮ್ಮ ಕೀಳರಿಮೆಯ ದಾಕ್ಷಿಣ್ಯದ ವೈಫಲ್ಯತೆಯ ಮನೋಕ್ಲೇಷವನ್ನು ಮಾಯವಾಗಿಸಿ.ಮೆರುಗಿನಿಂದ ಕೂಡಿದ ಅಪ್ಪಟ ಬಂಗಾರದ ಆಭರಣವನ್ನು  ಕೂಡ ಉಪಯೋಗಿಸದೇ ಹೋದರೆ ಅದರ  ಹೊಳಪು ಕಡಿಮೆಯಾಗುತ್ತದೆ.ಅಗತ್ಯವೆನಿಸಿದಾಗ ಮೆರುಗು ಹಾಕಿಸಬೇಕಾಗುತ್ತದೆ. ಹಾಗೆಯೇ ನಮ್ಮಲ್ಲಿರುವ ಬಂಗಾರದ ಮೆರುಗಿನಂಥ ಶಕ್ತಿಗಳನ್ನು ನಾವು ಗುರುತಿಸಿ ಉಪಯೋಗಿಸದೇ ಹೋದರೆ ಬೆಲೆ  ಕಳೆದುಕೊಂಡ ನಾಣ್ಯದಂತಾಗುತ್ತೇವೆ. ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯಗಳ ಬಗ್ಗೆ ಹಕ್ಕಿದೆ. ಆದರೆ ಯಾರಿಗೂ ತನ್ನ ಶಕ್ತಿಗಳ ಬಗೆಗೆ ತಪ್ಪಾಗಿರಲು ಹಕ್ಕಿಲ್ಲ. ಹೀಗಾಗಿ ಇರದುದರ ಬಗೆಗೆ ಧೇನಿಸುವ ಬದಲು ಇರುವುದನು ಪೋಷಿಸಿ ಬೆಳೆಸಿ.ಟಾಗೋರ್ ಹೇಳಿದಂತೆ ಒಮ್ಮೆ ನಿರಾಶೆಯಾದರೆ ಜೀವನ ಸೌಖ್ಯಕ್ಕೆ ತಿಲಾಂಜಲಿ ಕೊಡಬೇಡಿ. ಮೇಣದ ತಲೆಯವರು ಬಿಸಿಲಲ್ಲಿ ಅಲೆಯಬಾರದು ಎಂಬ ಆಂಗ್ಲ ಗಾದೆಯoತಾಗದೇ ಉತ್ತಮವಾದುದನ್ನು ನಿರೀಕ್ಷಿಸಿ, ನಿಮ್ಮ ಪರಿಶ್ರಮದ ಮುಖಾಂತರ ಭಾವನೆಗೆ ತಕ್ಕಂತೆ ಫಲ ಪಡೆಯಿರಿ. ಜಯಶ್ರೀ.ಜೆ. ಅಬ್ಬಿಗೇರಿ

ಇರದುದರ ಬಗೆಗೆ ಧೇನಿಸುವ ಬದಲು?!ವಿಶೇಷ ಲೇಖನ ಜಯಶ್ರೀ.ಜೆ. ಅಬ್ಬಿಗೇರಿ Read Post »

ಇತರೆ, ಜೀವನ

“ಹಳ್ಳಿಗಳಲ್ಲು ಸಂಬಂಧಗಳ ಬಿರುಕು” ವನಜಾ ಮಹಾಲಿಂಗಯ್ಯ

ಕಾವ್ಯ ಸಂಗಾತಿ ವನಜಾ ಮಹಾಲಿಂಗಯ್ಯ “ಹಳ್ಳಿಗಳಲ್ಲು ಸಂಬಂಧಗಳ ಬಿರುಕು” “ಒಂದೇ ಹೊಟ್ಟೆಯಲ್ಲಿ ಹುಟ್ಟಿದರೂ  ಒಂದೇ ಮನಸ್ಥಿತಿಇಲ್ಲ” ಎನ್ನುವ ಮಾತು ಇಂದು ಹಳ್ಳಿಯ ಪ್ರತಿ ಕೇರಿಯಲ್ಲೂ ಕೇಳಿಬರುತ್ತಿದೆ. ಅಣ್ಣ-ತಮ್ಮಂದಿರು ಮುಖ ನೋಡದಂತೆ ಆಗಿದ್ದಾರೆ, ಅಕ್ಕಪಕ್ಕದ ಮನೆಯವರು ಬೇಲಿ ಮೇಲೆ ಜಗಳಕ್ಕೆ ನಿಲ್ಲುತ್ತಾರೆ. ಹಿಂದೆ ಕಷ್ಟ ಬಂದಾಗ ಊರೇ ಒಂದಾಗಿ ನಿಲ್ಲುತ್ತಿದ್ದ ಕಾಲ ಈಗ ಕಥೆಯಾಗಿದೆ. ಯಾಕೆ ಹೀಗಾಯ್ತು? 1. ಹಿಂದಿನ ಹಳ್ಳಿ:  ಒಂದು ಕುಟುಂಬದಂತೆ  50 ವರ್ಷಗಳ ಹಿಂದೆ ಹಳ್ಳಿ ಎಂದರೆ ದೊಡ್ಡ ಅವಿಭಕ್ತ ಕುಟುಂಬ. ಜಮೀನು ಹೆಚ್ಚಿತ್ತು, ಆಸೆ ಕಡಿಮೆ ಇತ್ತು. ಸುಗ್ಗಿ ಬಂತೆಂದರೆ ಎಲ್ಲರೂ ಸೇರಿ ಕೆಲಸ. ಮದುವೆ-ಮುಂಜಿ ಊರ ಹಬ್ಬ. “ನನ್ನದು” ಎನ್ನುವುದಕ್ಕಿಂತ “ನಮ್ಮದು” ಎನ್ನುವ ಭಾವನೆ ಗಟ್ಟಿಯಾಗಿತ್ತು. ಅಣ್ಣ ದೊಡ್ಡವನು, ತಮ್ಮ ಚಿಕ್ಕವನು – ಹಿರಿತನಕ್ಕೆ ಬೆಲೆ ಇತ್ತು. ಮನೆಯಲ್ಲಿ ಸಾಂಬಾರ್ ಮುಗಿದರೆ “ಒಂದು ಲೋಟ ಸಾಂಬಾರ್ ಕೊಡಮ್ಮ”  ಬೆಂಕಿಕಡ್ಡಿ ಖಾಲಿಯಾದರೆ ಒಂದೆರಡು ಬೆಂಕಿಕಡ್ಡಿ ಕೊಡಮ್ಮ ಅಂತ ಪಕ್ಕದ ಮನೆಯಲ್ಲಿ ಕೇಳಲು  ನಾಚಿಕೆ ಇರಲಿಲ್ಲ. ಏಕೆಂದರೆ ನಾಳೆ ಅವರಿಗೂ ಬೇಕಾಗಬಹುದು ಎನ್ನುವ ವಾಸ್ತವ ಅರಿವಿತ್ತು. ಕಷ್ಟ-ಸುಖ ಹಂಚಿಕೊಂಡರೆ ಹಗುರವಾಗುತ್ತದೆ ಎನ್ನುವ ಜೀವನಪಾಠವನ್ನು ಹೆತ್ತವರು ಹೇಳಿಕೊಡುತ್ತಿದ್ದರು. 2. ಬಿರುಕು ಬಿಡಲು ಕಾರಣವೇನು?  ಭೂಮಿ ಸಣ್ಣದಾಯ್ತು, ಆಸೆ ದೊಡ್ಡದಾಯ್ತು  10 ಎಕರೆ 4 ಮಕ್ಕಳಿಗೆ ಹಂಚಿದರೆ ತಲಾ 2.5 ಎಕರೆ. ಈಗ ಅದೇ 2.5 ಎಕರೆ 3 ಮೊಮ್ಮಕ್ಕಳಿಗೆ ಹಂಚಬೇಕು. ಭೂಮಿ ತುಂಡಾದಂತೆ ಮನಸ್ಸುಗಳೂ ತುಂಡಾಗುತ್ತಿವೆ. “ಅವನಿಗೆ ರಸ್ತೆ ಬದಿ ಜಾಗ ಕೊಟ್ಟರು, ನನಗೆ ಬಂಜರು” ಎನ್ನುವ ಲೆಕ್ಕಾಚಾರ ಶುರುವಾಯ್ತು. * ದುಡ್ಡು ಬಂತು, ದುರಹಂಕಾರ ತಂದಿತು  ಒಬ್ಬ ಮಗ ಬೆಂಗಳೂರಲ್ಲಿ ಕೆಲಸಕ್ಕೆ ಸೇರಿ ತಿಂಗಳಿಗೆ ಲಕ್ಷ ಸಂಪಾದಿಸಿದರೆ, ಹಳ್ಳಿಯಲ್ಲಿರುವ ತಮ್ಮನಿಗೆ ಕೀಳರಿಮೆ. “ನಾನು ಮಣ್ಣಲ್ಲಿ ದುಡಿದರೆ ಅವನು ಫ್ಯಾನ್ ಕೆಳಗೆ” ಎನ್ನುವ ಹೊಟ್ಟೆಕಿಚ್ಚು. ಹಬ್ಬಕ್ಕೆ ಬಂದವನು ಕಾರು ತೊಳೆಯುವಾಗ ಅಣ್ಣನ ಟ್ರ್ಯಾಕ್ಟರ್ ಮೂಲೆ ಸೇರುತ್ತದೆ. * ಮೂರನೇ ದನಿ ಜೋರಾಯ್ತು  ಹಿಂದೆ ಮನೆಯ ತೀರ್ಮಾನವನ್ನು ಹಿರಿಯರು ಮಾಡುತ್ತಿದ್ದರು. ಈಗ ಸೊಸೆ-ಅಳಿಯಂದಿರ ಮಾತು ಮನೆಯೊಳಗೆ ಬೆಂಕಿ ಹಚ್ಚುತ್ತದೆ. “ನಿಮ್ಮ ತಮ್ಮನ ಹೆಂಡತಿ ಹಾಗಂದ್ಲು”  ಅತ್ತೆ ಮಾವ ಅವಳನ್ನು ಮಾತ್ರ ಪ್ರೀತಿಯಿಂದ ಮಾತನಾಡಿಸುತ್ತಾರೆ,ಎಂಬ ಒಂದು ಚಾಡಿ ಮಾತು 40 ವರ್ಷದ ಸಂಬಂಧವನ್ನು ಮುರಿಯುತ್ತದೆ. *  ಕಾಲವಿಲ್ಲ, ಕ್ಷಮೆಯೂ ಇಲ್ಲ  ಮೊದಲು ಸಂಜೆ ಎಲ್ಲರೂ ಕಟ್ಟೆಯ ಮೇಲೆ ಸೇರುತ್ತಿದ್ದರು. ಮಾತುಕತೆಯಲ್ಲಿ ತಪ್ಪು ತಿಳುವಳಿಕೆ ಕರಗುತ್ತಿತ್ತು. ಈಗ ಎಲ್ಲರ ಕೈಯಲ್ಲಿ ಮೊಬೈಲ್. ಪಕ್ಕದ ಮನೆಯಲ್ಲಿ ಸಾವು ಆದರೆ ಸ್ಟೇಟಸ್ ಹಾಕಿ ಸುಮ್ಮನಾಗುತ್ತೇವೆ, ಹೆಗಲು ಕೊಡಲು ಸಮಯವಿಲ್ಲ. 3. ಕಳೆದುಕೊಂಡಿದ್ದೇನು?  ನಾವು ಬರೀ ಸಂಬಂಧ ಕಳೆದುಕೊಳ್ಳಲಿಲ್ಲ, ನೆಮ್ಮದಿಯನ್ನೂ ಕಳೆದುಕೊಂಡೆವು. ಕೋರ್ಟ್-ಕಚೇರಿ ಅಲೆದು ದುಡ್ಡು, ಆರೋಗ್ಯ ಎರಡೂ ಹಾಳು. ಮಕ್ಕಳಿಗೆ “ಚಿಕ್ಕಪ್ಪ” ಎಂದರೆ ಕೋರ್ಟ್‌ನಲ್ಲಿ ಕಾಣುವ ಶತ್ರು ಎನ್ನುವ ಚಿತ್ರಣ ಕೊಡುತ್ತಿದ್ದೇವೆ. ಹಬ್ಬ ಬಂದರೂ ಅಡುಗೆ ಮನೆಗೆ 4 ಜನ ಸೇರುವುದಿಲ್ಲ. 4. ಮತ್ತೆ ಒಂದು ಮಾಡುವುದು ಹೇಗೆ?  ಬದಲಾವಣೆ ಸರ್ಕಾರದಿಂದ ಬರಲ್ಲ, ನಮ್ಮ ಮನೆಯ ಒಳಗಿಂದಲೇ ಬರಬೇಕು.   ವಾರಕ್ಕೊಮ್ಮೆ 1 ಗಂಟೆ ಫೋನ್ ದೂರ ಇಟ್ಟು ಮನೆಯವರೆಲ್ಲ ಕೂತು ಮಾತಾಡಿ.   ತಂದೆ-ತಾಯಿ ಇದ್ದಾಗ ಅವರ ಮಾತೇ ಅಂತಿಮವಾಗಿರಬೇಕು. ಅವರು ಹೋದ ಮೇಲೆಅಣ್ಣನ ಸ್ಥಾನ ದೊಡ್ಡದು.  ಪಾರದರ್ಶಕತೆ ಇರಬೇಕು.ಆಸ್ತಿ, ದುಡ್ಡಿನ ವಿಷಯದಲ್ಲಿ ಮುಚ್ಚುಮರೆ ಬೇಡ. ಎಲ್ಲರೂ ಕೂತು ಬರೆದಿಟ್ಟುಕೊಳ್ಳಿ.  ಯಾರಿಂದಲಾದರೂ ತಪ್ಪಾದಾಗ “ಅವನೇ ಮೊದಲು ಬರಲಿ” ಎನ್ನುವ ಅಹಂ ಬಿಡಿ. ನೀವು ಒಂದು ಹೆಜ್ಜೆ ಇಟ್ಟರೆ ಅವನು 2 ಹೆಜ್ಜೆ ಇಡುತ್ತಾನೆ.  ಅಪ್ಪ ಅಮ್ಮಮಕ್ಕಳಿಗೆ ಮಾದರಿ ನಾವು ಅಣ್ಣ-ತಮ್ಮಂದಿರು ಜಗಳವಾಡಿದರೆ ನಾಳೆ ನಮ್ಮ ಮಕ್ಕಳೂ ಹಾಗೇ ಆಗುತ್ತಾರೆ.   ಕೊನೆಯ ಮಾತು  ಹಳ್ಳಿ ಎಂದರೆ ಮಣ್ಣಿನ ವಾಸನೆ ಮಾತ್ರವಲ್ಲ, ಮನುಷ್ಯತ್ವದ ವಾಸನೆಯೂ ಹೌದು. ಬೇಲಿ ಹಾಕಿಕೊಳ್ಳುವುದು ಸುಲಭ, ಪ್ರೀತಿಯ ಸೇತುವೆ ಕಟ್ಟುವುದು ಕಷ್ಟ. ಆದರೆ ಆ ಸೇತುವೆ ಒಮ್ಮೆ ಕಟ್ಟಿದರೆ 7 ತಲೆಮಾರು ನೆಮ್ಮದಿಯಿಂದ ದಾಟಬಹುದು. “ಕೆರೆಗೆ ಹನಿ ನೀರು” ಎನ್ನುವಂತೆ, ಬದಲಾವಣೆ ನಮ್ಮ ಒಂದು ನಗುವಿನಿಂದ, ಒಂದು ಕ್ಷಮೆಯಿಂದ ಶುರುವಾಗಲಿ. ಏಕೆಂದರೆ ಕೊನೆಗೆ ಉಳಿಯುವುದು ಆಸ್ತಿಯಲ್ಲ, ಅನುಬಂಧ. ಅಣ್ಣ-ತಮ್ಮ, ಅಕ್ಕ -ತಂಗಿ, ಅಕ್ಕಪಕ್ಕ – ಇವರೇ ನಮ್ಮ ಮೊದಲ ಮತ್ತು ಕೊನೆಯ ಸಂಬಂಧ. ಅದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ತಾoತ್ರಿಕತೆಯಿಂದ ಸ್ವಲ್ಪ ದೂರವಿರೋಣ.  ವನಜ ಮಹಾಲಿಂಗಯ್ಯ.           

“ಹಳ್ಳಿಗಳಲ್ಲು ಸಂಬಂಧಗಳ ಬಿರುಕು” ವನಜಾ ಮಹಾಲಿಂಗಯ್ಯ Read Post »

ಇತರೆ, ಜೀವನ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ

ಸಂಬಂಧಗಳ ಸಂಗಾತಿ ವನಜ ಮಹಾಲಿಂಗಯ್ಯ “ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” *ಬೆಳಗಾಗೆದ್ದು Good Morning ಕಳಿಸೋ ನೂರು ಜನ ಇದಾರೆ. ಆದ್ರೆ ರಾತ್ರಿ ನಿದ್ದೆ ಬರದೇ ಒದ್ದಾಡಿದಾಗ ಮಾತಾಡೋ ಒಬ್ಬನೂ ಇಲ್ಲ.* ಇದೇ ಇವತ್ತಿನ ಸಂಬಂಧಗಳ ಸ್ಥಿತಿ.ಯಾಕೆ ಹೀಗಾಯ್ತು? ಮುಂದೆ ಓದುತ್ತಾ ಹೋಗಿ.ಮೊಬೈಲ್ ಮೊದಲಾಯ್ತು, ಮನುಷ್ಯ ಎರಡನೆಯವನಾದ*ಒಂದೇ ಮನೆಯಲ್ಲಿ ನಾಲ್ಕು ಜನ ಇದ್ರೂ ನಾಲ್ಕು ಮೂಲೆಯಲ್ಲಿ ಕುಳಿತು ನಾಲ್ಕು ಮೊಬೈಲ್ ನೋಡ್ತಾರೆ. ಅಪ್ಪನಿಗೆ ಮಗ ಏನ್ ಓದ್ತಿದ್ದಾನೆ ಗೊತ್ತಿಲ್ಲ. ಮಗನಿಗೆ ಅಮ್ಮನ ಆರೋಗ್ಯದ ಚಿಂತೆ ಇಲ್ಲ. ಊಟದ ಟೇಬಲ್‌ನಲ್ಲಿ ಮಾತಿಗಿಂತ ರೀಲ್ಸ್ ಮುಖ್ಯವಾಯ್ತು. “ಸಂಪರ್ಕ ಇದೆ, ಸಂಬಂಧ ಇಲ್ಲ.”. ಸಲುಗೆ ಸ್ವಾತಂತ್ರ್ಯವಾಯ್ತು ಹೇಗೆ ಅಂದರೆ,“ನನ್ನ ಲೈಫ್, ನನ್ನ ರೂಲ್ಸ್” ಅಂತ ಮಕ್ಕಳು ಅಂದ್ರೆ, “ನಮ್ಮ ಕಾಲದಲ್ಲಿ ಹೀಗಿರಲಿಲ್ಲ” ಅಂತ ಹೆತ್ತವರು ಅಂದ್ರೆ. ಇಬ್ಬರ ಮಧ್ಯೆ ಗೋಡೆ ಬೆಳೆಯುತ್ತೆ. 8-9 ತಿಂಗಳು ಹೊತ್ತು ಹೆತ್ತ ತಾಯಿಯ ಮಾತಿಗಿಂತ 3 ದಿನದ ಹಿಂದೆ Insta ದಲ್ಲಿ ಪರಿಚಯವಾದವನ ಮೆಸೇಜಿಗೆ ಬೆಲೆ ಜಾಸ್ತಿ ಆಯ್ತು. “ಹೆತ್ತವರ ಪ್ರೀತಿ ಹಳೇದಾಯ್ತು, ಅಪರಿಚಿತರ ಮಾತು ಹೊಸದಾಯ್ತು.” ಈಗ ಎಲ್ಲವೂ Instant. ನೂಡಲ್ಸ್ 2 ನಿಮಿಷ, ಪ್ರೀತಿ 2 ದಿನ. ಸಣ್ಣ ಜಗಳಕ್ಕೆ Block, ಸಣ್ಣ ತಪ್ಪಿಗೆ Disconnect. ಸಂಬಂಧ ಕಟ್ಟೋಕೆ ವರ್ಷ ಬೇಕು, ಮುರಿಯೋಕೆ ಒಂದು Status ಸಾಕು. “ಕ್ಷಮಿಸೋ ಮನಸ್ಸು ಸತ್ತು, ಅಹಂ ಬೆಳೆದು ನಿಂತಿದೆ.”“ಹೋಲಿಕೆ ರೋಗ ಇದ್ದಂತೆ”“ಅವನ ಮಗ BMW ತಂದ, ನನ್ನವನು ಯಾಕೆ ತರಲಿಲ್ಲ?” ಅಂತ ಅಪ್ಪ. “ಅವಳ ಗಂಡ ವಿದೇಶಕ್ಕೆ ಕರ್ಕೊಂಡು ಹೋದ, ನೀನು ಯಾಕೆ ಹೋಗಲಿಲ್ಲ?” ಅಂತ ಹೆಂಡತಿ. ಪಕ್ಕದ ಮನೆ ಹುಲ್ಲು ಯಾವಾಗಲೂ ಹಸಿರು. “ನಮ್ಮ ಬಳಿ ಇರೋದರ ಬೆಲೆ ಮರೆತು, ಇಲ್ಲದ್ದಕ್ಕೆ ಹಂಬಲಿಸೋಕೆ ಶುರು ಮಾಡಿದ್ವಿ.”ದುರಂತ ಏನು ಗೊತ್ತಾ?ಮನೆ ತುಂಬಾ ಜನ ಇದ್ದರೂ ಒಂಟಿತನ. ಅಪ್ಪ ಅಮ್ಮ ದುಡಿದು ದುಡಿದು ಮಕ್ಕಳಿಗೆ ಎಲ್ಲಾ ಕೊಟ್ಟರೂ, ಕೊನೆಗೆ ವೃದ್ಧಾಶ್ರಮ. ಮಕ್ಕಳು ಪ್ರೀತಿಗಾಗಿ ಪರದಾಡಿ, ಕೊನೆಗೆ ಮೋಸ ಹೋಗಿ ಜೀವ ಕಳೆದುಕೊಳ್ಳೋದು. *ಗೋಡೆ ಕಟ್ಟೋಕೆ ಗೊತ್ತಿದ್ದ ನಮಗೆ, ಸೇತುವೆ ಕಟ್ಟೋಕೆ ಮರೆತು ಹೋಯ್ತು. ದಿನಾ 15 ನಿಮಿಷ ಮೊಬೈಲ್ ದೂರ ಇಟ್ಟು ಮನೆಯವರ ಜೊತೆ ಕೂತು ಮಾತಾಡಿ. ಊಟ ಒಟ್ಟಿಗೆ ಮಾಡಿ.   ಬುದ್ಧಿ ಹೇಳೋಕಿಂತ ಮೊದಲು, ಮಕ್ಕಳ ಮನಸ್ಸಿನ ಮಾತು ಕೇಳಿ. ಹೆತ್ತವರ ನೋವು ಅರ್ಥ ಮಾಡಿಕೊಳ್ಳಿ.  :ತಪ್ಪು ಮಾಡದ ಮನುಷ್ಯ ಇಲ್ಲ. ಒಂದು ತಪ್ಪಿಗೆ ಸಂಬಂಧವನ್ನೇ ಕಡಿದುಕೊಳ್ಳಬೇಡಿ.  ಸಮಯ ಕೊಡಿ, ದುಡ್ಡು, ಬಟ್ಟೆ, ಬೈಕ್ ಕೊಟ್ರೆ ಸಾಲದು. ನಿಮ್ಮ ಸಮಯ, ನಿಮ್ಮ ಪ್ರೀತಿ ಕೊಡಿ.  ಮೆಚ್ಚುಗೆ ಸೂಚಿಸಿ: “ಥ್ಯಾಂಕ್ಸ್ ಕಣೋ”, “ಚೆನ್ನಾಗಿ ಮಾಡಿದ್ದೀಯ” ಅನ್ನೋ ಎರಡು ಮಾತು ಸಂಬಂಧ ಗಟ್ಟಿ ಮಾಡುತ್ತೆ. ಕೊನೆಯ ಮಾತು:ಸಂಬಂಧ ಅಂದ್ರೆ AC ರೂಮಲ್ಲಿಡೋ ಹೂವಿನ ಹಾಗಲ್ಲ. ಬಿಸಿಲು, ಮಳೆ, ಗಾಳಿ ಎಲ್ಲಾ ತಾಗಬೇಕು. ಜಗಳ ಬರಬೇಕು, ಮುನಿಸು ಬರಬೇಕು, ಆದ್ರೆ ಬಿಟ್ಟು ಹೋಗೋ ಯೋಚನೆ ಬರಬಾರದು.*ಮೊಬೈಲ್‌ನಲ್ಲಿ ಸಾವಿರ Friend Request ಇರಬಹುದು. ಆದ್ರೆ ಕಷ್ಟ ಅಂದಾಗ ಹೆಗಲು ಕೊಡೋದು ರಕ್ತ ಸಂಬಂಧ, ಮನಸ್ಸಿನ ಸಂಬಂಧ ಮಾತ್ರ.*ಸಂಬಂಧಗಳು ಸರಿಯಿಲ್ಲ ಅಂದ್ರೆ, ಸರಿ ಮಾಡೋಕೆ ಶುರು ಮಾಡೋಣ. ಇವತ್ತಿಂದ, ಈಗಿಂದ, ನಮ್ಮಿಂದಲೇ. ವನಜಾ ಮಹಾಲಿಂಗಯ್ಯ

“ಸಂಬಂಧಗಳ ಬಿರುಕು – ನಮ್ಮಿಂದಲೇ ಸರಿಪಡಿಸೋಣ” ವನಜ ಮಹಾಲಿಂಗಯ್ಯ ಮಾದಾಪುರ Read Post »

ಇತರೆ, ಜೀವನ

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷಲೇಖನ ಕವಿತಾ ಶ್ರೀನಿವಾಸ್‌ ನಾಯಕ್ “ವಿದಾಯ “ವಿದಾಯ” ಇದು ಬೆಳೆಯುವ ಹಾದಿಯ ಅನಿವಾರ್ಯ ಮೈಲುಗಲ್ಲು.​’ವಿದಾಯ’ ಎಂದರೆ ಕೇವಲ ಅಗಲುವಿಕೆ ಅಥವಾ ಅಂತ್ಯವಲ್ಲ; ಅದು ಒಂದು ಹಂತದಿಂದ ಮತ್ತೊಂದು ಹಂತಕ್ಕೆ ದಾಟಲು ನಾವು ಇಡುವ ಪಾದಾರ್ಪಣೆ. ನಮಗೆ ತಿಳಿಯದೆಯೇ ನಾವು ಪ್ರತಿದಿನ ಯಾವುದಕ್ಕೋ ಒಂದಕ್ಕೆ ವಿದಾಯ ಹೇಳುತ್ತಲೇ ಬೆಳೆಯುತ್ತಿದ್ದೇವೆ. ಹುಟ್ಟಿದ ಮಗುವಿನಿಂದ ಹಿರಿಯ ಜೀವದವರೆಗೆ, ಜೀವನವು ವಿದಾಯಗಳ ಸರಪಳಿಯೇ ಸರಿ.​ಬಾಲ್ಯಕ್ಕೆ ವಿದಾಯ: ಮುಗ್ಧತೆಯ ಸಂಭ್ರಮದ ಅಂತ್ಯ​ನಮ್ಮ ಬದುಕಿನ ಮೊದಲ ದೊಡ್ಡ ವಿದಾಯ ಎಂದರೆ ಅದು ನಮ್ಮ ಬಾಲ್ಯಕ್ಕೆ ಹೇಳುವ ವಿದಾಯ. ತೊದಲು ನುಡಿಯ ಮಗು ಸ್ವಲ್ಪ ದೊಡ್ಡದಾದಾಗ, ಅದು ತನ್ನ ಆಟಿಕೆಗಳಿಗೆ, ತನ್ನ ಅಮ್ಮನ ಮಡಿಲಿನ ಬೆಚ್ಚನೆಯ ಆರಾಮಕ್ಕೆ, ಮತ್ತು ಹೊಣೆಗಾರಿಕೆ ಇಲ್ಲದ ಆ ಮುಗ್ಧ ಆಟದ ದಿನಗಳಿಗೆ ನಿಧಾನವಾಗಿ ವಿದಾಯ ಹೇಳುತ್ತದೆ. ಶಾಲೆಯ ಹೊಸ್ತಿಲು ತುಳಿದಾಗ, ಮನೆಯ ಚೌಕಟ್ಟಿನಿಂದ ಹೊರಬಂದು ಜಗತ್ತಿನ ವಿಶಾಲತೆಯನ್ನು ಅರಿಯುವಾಗ ಬಾಲ್ಯದ ಹಕ್ಕಿ ಹಾರಿಹೋಗಿರುತ್ತದೆ. ಅದು ನೋವಿನ ವಿದಾಯವಲ್ಲ, ಆದರೆ ಬದಲಾವಣೆಯ ಮೊದಲ ಪಾಠ.​ಹದಿಹರೆಯಕ್ಕೆ ವಿದಾಯ: ಕನಸುಗಳ ಚಿಗುರು​ನಂತರ ಬರುವುದು ಹದಿಹರೆಯದ ಮಧುರ ವಿದಾಯ. ಕಿಶೋರಾವಸ್ಥೆಯ ಕನಸುಗಳು, ಗೆಳೆಯರೊಂದಿಗೆ ಕಳೆದ ಆ ಸಾಹಸಮಯ ದಿನಗಳು, ಶಾಲೆ-ಕಾಲೇಜಿನ ಆ ಸವಿ ನೆನಪುಗಳು – ಇವೆಲ್ಲವೂ ವೃತ್ತಿ ಬದುಕಿನ ಅನಿವಾರ್ಯತೆಗಳ ಮುಂದೆ ಬಿದ್ದು ಹೋಗುತ್ತವೆ. ಜವಾಬ್ದಾರಿಗಳ ಹೆಗಲೇರಿದಾಗ, ಆ ನಿರ್ಭೀತ ಹುಡುಗಾಟದ ದಿನಗಳಿಗೆ ವಿದಾಯ ಹೇಳಲೇಬೇಕಾಗುತ್ತದೆ. ಇಲ್ಲಿ ನಾವು ಬರಿಯ ವಯಸ್ಸನ್ನು ಕಳೆದುಕೊಳ್ಳುವುದಿಲ್ಲ, ಬದಲಾಗಿ ನಮ್ಮೊಳಗಿನ ಮಗುವಿನ ಅಮಾಯಕತೆಯನ್ನು ಸಮಾಜದ ಪಾಠಗಳಿಗಾಗಿ ಬಲಿ ಕೊಡುತ್ತೇವೆ.​ಯೌವನ ಮತ್ತು ಪ್ರಬುದ್ಧತೆ: ನಿರಂತರ ವಿದಾಯಗಳ ಪಯಣ​ಜೀವನವು ಮುಂದುವರೆದಂತೆ, ನಾವು ಹಳೆಯ ಮನೆಗೆ, ಹಳೆಯ ಊರಿಗೆ, ಹಳೆಯ ಗೆಳೆಯರಿಗೆ, ಕೆಲವೊಮ್ಮೆ ನಮ್ಮ ಹಳೆಯ ಆಲೋಚನೆಗಳಿಗೆ ವಿದಾಯ ಹೇಳುತ್ತಲೇ ಇರುತ್ತೇವೆ. ಕೆಲಸದ ನಿಮಿತ್ತ ಊರು ಬಿಡುವಾಗ ಬರುವ ವಿದಾಯ ಇರಬಹುದು ಅಥವಾ ನಮ್ಮ ಹಳೆಯ ತಪ್ಪುಗಳಿಗೆ ವಿದಾಯ ಹೇಳಿ ಹೊಸ ವ್ಯಕ್ತಿಯಾಗಿ ಬದಲಾಗುವ ಕ್ಷಣ ಇರಬಹುದು—ಇವೆಲ್ಲವೂ ನಮ್ಮ ಬೆಳವಣಿಗೆಯ ಸಂಕೇತಗಳೇ.​ಏಕೆ ಈ ವಿದಾಯ ಅನಿವಾರ್ಯ?​ನಿಸರ್ಗದ ನಿಯಮದಂತೆ, ಹಳೆಯ ಎಲೆ ಉದುರದ ಹೊರತು ಹೊಸ ಚಿಗುರು ಬರಲು ಸಾಧ್ಯವಿಲ್ಲ. ನಾವು ಒಂದೊಂದಕ್ಕೂ ವಿದಾಯ ಹೇಳುತ್ತಾ ಹೋದರೆ ಮಾತ್ರವೇ ಬದುಕಿನ ಹೊಸ ಆಯಾಮಗಳು ನಮಗೆ ತೆರೆದುಕೊಳ್ಳುವುದು. ಬಾಲ್ಯಕ್ಕೆ ವಿದಾಯ ಹೇಳದಿದ್ದರೆ ಪ್ರೌಢಿಮೆ ಬರುವುದಿಲ್ಲ, ಹಳೆಯದಕ್ಕೆ ವಿದಾಯ ಹೇಳದಿದ್ದರೆ ಹೊಸದನ್ನು ಸ್ವೀಕರಿಸಲು ಸಾಧ್ಯವಿಲ್ಲ.​ಕೊನೆಯ ಮಾತು:ವಿದಾಯಗಳು ಕಣ್ಣೀರಿನ ಮಳೆಯಾಗಿರಬೇಕಿಲ್ಲ; ಅವು ಕೃತಜ್ಞತೆಯ ನಗುಗಳಾಗಿರಲಿ. ಕಳೆದುಕೊಂಡದ್ದರ ಬಗ್ಗೆ ಕೊರಗುವ ಬದಲು, ಆ ಹಂತ ನಮಗೆ ಕೊಟ್ಟ ಅನುಭವಗಳಿಗೆ ಧನ್ಯವಾದ ಅರ್ಪಿಸಿ ಮುಂದೆ ಸಾಗುವುದು ಬದುಕಿನ ಜಾಣತನ. ಅಂತಿಮವಾಗಿ, ನಾವು ಹೇಳುವ ಪ್ರತಿಯೊಂದು ವಿದಾಯವೂ ನಮ್ಮನ್ನು ನಾವು ಮತ್ತಷ್ಟು ಅರಿಯುವ, ರೂಪಿಸುವ ಒಂದು ಸುಂದರ ಪ್ರಯತ್ನ. ಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ, ಉಡುಪಿ ಜಿಲ್ಲೆ.

“ವಿದಾಯ” ಕವಿತಾ ಶ್ರೀನಿವಾಸ್‌ ನಾಯಕ್ Read Post »

ಇತರೆ, ಜೀವನ

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್

ವಿಶೇಷ ಲೇಖನ ವೀಣಾ ಹೇಮಂತ್ ಗೌಡ ಪಾಟೀಲ್ “ಹಿರಿಯ ಮಗುವಿಗೆ…. ಹೊರೆಯಾಗದಿರಲಿ ಭ್ರಾತೃತ್ವ” ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಕುಟುಂಬದ ಹಿರಿಯ ಮಗನನ್ನು ತಂದೆ ಸಮಾನ ಮತ್ತು ಅತ್ತಿಗೆ ತಾಯಿ ಎಂಬಂತೆ ಭಾವಿಸುತ್ತಾರೆ. ತಂದೆ ತಾಯಿಯ ನಂತರದ ಸ್ಥಾನವನ್ನು ಪಡೆದ ಹಿರಿಯ  ಮಕ್ಕಳು ಕೌಟುಂಬಿಕ ದೃಷ್ಟಿಯಿಂದ ಎಲ್ಲರನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಗುತ್ತದೆ. ಮತ್ತೆ ಎಷ್ಟೋ ಬಾರಿ ಹಿರಿಯ ಮಕ್ಕಳು ತಮ್ಮ ತಂದೆಯ ಮರಣ ನಂತರ ಕುಟುಂಬದ ಪರಿಪಾಲನೆಗೆ ತಮ್ಮ ವೈಯುಕ್ತಿಕ ಸುಖ ಭೋಗಗಳನ್ನು ಮರೆತು ಕರ್ತವ್ಯ ಬದ್ಧರಾಗಿ ಕೌಟುಂಬಿಕ ನಿರ್ವಹಣೆಯನ್ನು ಮಾಡುತ್ತಾರೆ ಕೂಡ.ಪಾಲಕರಿಗೆ ತಮ್ಮ ಕಿರಿಯ ಮಕ್ಕಳ ಮೇಲೆ ಸಹಜವಾಗಿಯೇ ತುಸು ಕಾಳಜಿ ಹೆಚ್ಚು ಮತ್ತು ತಮ್ಮ ಹಿರಿಯ ಮಕ್ಕಳನ್ನು ತಮ್ಮ ಮುಂದಿನ ಎಲ್ಲ ಜವಾಬ್ದಾರಿಗಳನ್ನು ನಿರ್ವಹಿಸುವ ನಿಟ್ಟಿನಲ್ಲಿ ಬೆಳೆಸುತ್ತಾರೆ. ಹೀಗಾಗಿ ಸಹಜವಾಗಿಯೇ ಹಿರಿಯ ಮಕ್ಕಳು ತುಸು ಸೂಕ್ಷ್ಮಪ್ರಜ್ಞೆಯವರಾಗಿರುತ್ತಾರೆ. ಆದರೆ ಕಾಲಘಟ್ಟ ಯಾವುದೇ ಇರಲಿ  ಹಿಂದಿನ ಒಡಹುಟ್ಟಿದವರಾಗಲೀ ಇಂದಿನ ಪೀಳಿಗೆಯೇ ಇರಲಿ ಸಾಮಾನ್ಯವಾಗಿ ನಾವು ನೋಡುವ ಕೆಲ ವಿಪರ್ಯಾಸಗಳು ಹೀಗಿರುತ್ತವೆ. ತಮ್ಮ ಮಕ್ಕಳನ್ನು ಬೇರೆಯವರಿಗೆ ಪರಿಚಯಿಸುವ ಪಾಲಕರು ತಮ್ಮ ದೊಡ್ಡ ಮಗುವನ್ನು ನಿಧಾನ ಎಂದು ಚಿಕ್ಕ ಮಗುವನ್ನು ದೊಡ್ಡವರಿಗೆ ಹೋಲಿಸಿ ತುಂಬಾ ಜಾಣ ಎಲ್ಲವನ್ನು ಬೇಗನೆ ತಿಳಿದುಕೊಳ್ಳುತ್ತಾನೆ ದೊಡ್ಡವನಂತೆ ಸುಮ್ಮನೆ ಕುಳಿತುಕೊಳ್ಳುವುದಿಲ್ಲ ಎಲ್ಲದರಲ್ಲೂ ಆಸಕ್ತಿ ಮತ್ತು ಎಲ್ಲದರಲ್ಲೂ ಮುಂದೆ ಇದ್ದಾನೆ ಎಂದು ಹೊಗಳುತ್ತಾರೆ. ಇದಕ್ಕೆ ಕಾರಣ ಹತ್ತು ಹಲವು…. ಎರಡನೇ ಮಗು ಹೊಟ್ಟೆಯಲ್ಲಿರುವಾಗಲೇ ದೊಡ್ಡ ಮಗುವಿಗೆ ತಮ್ಮ ಇಲ್ಲವೇ ತಂಗಿ ತಾಯಿಯ ಹೊಟ್ಟೆಯಲ್ಲಿದ್ದು ಇನ್ನೂ ಕೆಲವೇ ದಿನಗಳಲ್ಲಿ ಅದು ತನ್ನೊಂದಿಗೆ ಆಟವಾಡಲು ದೊರೆಯುತ್ತದೆ ಮತ್ತು ಅದರೊಂದಿಗೆ ತಾನು ಅತ್ಯಂತ ಪ್ರೀತಿಪೂರ್ವಕವಾಗಿ ನಡೆದುಕೊಳ್ಳಬೇಕು ಎಂದು ಕಲಿಸಲಾಗುತ್ತದೆ. ಸಮಾಧಾನ ತಾಳ್ಮೆಯಿಂದ ವರ್ತಿಸಬೇಕು ಎಂದು ಪದೇಪದೇ ಹೇಳಿಕೊಡಲಾಗುತ್ತದೆ.ಖಂಡಿತವಾಗಿಯೂ ಇದು ತಪ್ಪಲ್ಲ. ಆದರೆ ಹಾಗೆ ಹೇಳುವ ಭರದಲ್ಲಿ, ಮಗು ಹುಟ್ಟಿದ ನಂತರ ಎಲ್ಲಾ ವಿಷಯಗಳಲ್ಲಿಯೂ ದೊಡ್ಡ ಮಗುವೆ ಸಮಾಧಾನದಿಂದ ಇರಲು ಸೂಚಿಸಲಾಗುತ್ತದೆ. ಸಹಜವಾಗಿಯೇ ಪಾಲಕರ ಮಾತನ್ನು ಒಪ್ಪಿಕೊಳ್ಳುವ ಮಗು ತನಗಿಂತ ಕಿರಿಯ ಮಗುವಿನ ಕಾಳಜಿ ವಹಿಸುತ್ತಾ ತಾನು ಹಿಂದೆ ಉಳಿಯುತ್ತದೆ. ಚಿಕ್ಕವರಿದ್ದಾಗ ತನಗಿಂತ ಚಿಕ್ಕವರಾದ ಒಡಹುಟ್ಟಿದವರೊಂದಿಗೆ ಪ್ರೀತಿ ಮತ್ತು ಸೌಹಾರ್ದತೆಯಿಂದ ಇರುವ ಮಗು ಮುಂದೆ ಪಾಲಕರ ಹೋಲಿಕೆಯಿಂದ ನಿರಾಶನಾಗಿ ಬೇಸರಗೊಳ್ಳಬಹುದು, ಮಾನಸಿಕವಾಗಿ ಮುದುಡಬಹುದು,  ಸಿಡಿದೇಳಬಹುದು.ಓದಿನಲ್ಲಿ ಹಿಂದೆ ಬೀಳಬಹುದು, ಆಸಕ್ತಿ ಕಡಿಮೆಯಾಗಬಹುದು.ಇದುವರೆಗೂ ಮನೆಯವರೆಲ್ಲರ ಅಚ್ಚುಮೆಚ್ಚಿದ ಮಗು ಒಮ್ಮಿಂದೊಮ್ಮೆಲೆ ತನ್ನ ಮೇಲಿದ್ದ ಗಮನಿಸುವಿಕೆಯ ಸ್ಪಾಟ್ ಲೈಟ್ ತನ್ನ ಸಹೋದರ ಅಥವಾ ಸಹೋದರಿಯ ಮೇಲೆ ಬಿದ್ದಾಗ ಪುಟ್ಟ ಮಗುವಿನ ಮನದಲ್ಲಿ ಆತಂಕದ ಸುಳಿಗಳು ಎದ್ದು ಮಗು ಆ ಸುಳಿಯಲ್ಲಿ ಸಿಲುಕುತ್ತದೆ.ಇಂತಹ ಸಮಯದಲ್ಲಿ ದೊಡ್ಡ ಮಗುವಿನಿಂದ ಪುಟ್ಟ  ಮಗುವಿಗೆ ದೈಹಿಕವಾಗಿ ಏನಾದರೂ ಹಾನಿಯಾಗಬಹುದು ಎಂಬ ಕಾರಣದಿಂದ ಪಾಲಕರು ತಮಗರಿವಿಲ್ಲದೆ ಪುಟ್ಟ ಮಗುವನ್ನು ಮುಚ್ಚಟೆಯಿಂದ ಸಾಕಿ ಬೆಳೆಸಿ ದೊಡ್ಡ ಮಗುವಿನೊಂದಿಗೆ ತುಸು ಅಂತರವನ್ನು ಕಾಯುತ್ತಾರೆ… ಇದು ಅಗೋತರವಾಗಿ ಅವರಿಬ್ಬರ ನಡುವೆ ಒಂದು ಪುಟ್ಟ ಕಂದರವನ್ನು ಸೃಷ್ಟಿಮಾಡುತ್ತದೆ ಮತ್ತು ಬೆಳೆಯುತ್ತಾ ಹೋದಂತೆ ಈ ಕಂದರ ಹೆಚ್ಚು ಅಗಲವಾಗುತ್ತಾ ಹೋಗುತ್ತದೆ…ಆದ್ದರಿಂದ ಎರಡನೆಯ ಮಗುವನ್ನು ಹೊಂದಿರುವ ಪಾಲಕರು ತಮ್ಮ ಎರಡು ಮಕ್ಕಳ ನಡುವೆ ಜೈವಿಕ ಸಂಬಂಧಕ್ಕೆ ಮಿಗಿಲಾದ ಆತ್ಮೀಯತೆ ಪ್ರೀತಿ ವಿಶ್ವಾಸ ಮತ್ತು ಸ್ನೇಹ ಭಾವಗಳನ್ನು ತುಂಬಲು ಈ ರೀತಿ ಪ್ರಯತ್ನಿಸಬಹುದು.ನಿಮ್ಮ ಮಕ್ಕಳು ನಿಮಗೆ ಎರಡು ಕಣ್ಣುಗಳಿದ್ದಂತೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣವನ್ನು ಹಚ್ಚುವ ರೀತಿಯಲ್ಲಿ ನಿಮ್ಮ ವರ್ತನೆ ಇರಬಾರದು. ನಿಮ್ಮ ಮಾತನ್ನು ಕೇಳುವ ಮಗುವನ್ನು ಪ್ರೀತಿಸುವ ಮತ್ತು ಕೇಳದೆ ಹೋಗುವ ಮಗುವಿನ ಮೇಲೆ ತುಸು ಸಿಟ್ಟು ಸಹಜವಾಗಿ ನಿಮಗೆ ಬರಬಹುದು. ಆದರೆ ಮಗು ನಿಮ್ಮ ಮಾತನ್ನು ಏಕೆ ಕೇಳುತ್ತಿಲ್ಲ ಎಂಬುದರ ಹಿಂದಿನ ಮರ್ಮವನ್ನು ಮಗುವನ್ನು ಅನುನಯಿಸಿ ಒಲಿಸಿಕೊಳ್ಳುವ ಮೂಲಕ ಆ ಮಗುವಿನ ಮನಸ್ಸಿಗೆ ಸಮಾಧಾನವಾಗುವ ರೀತಿಯಲ್ಲಿ ವರ್ತಿಸುವ ಮೂಲಕ ಮಗುವನ್ನು ತಿದ್ದಬಹುದೇ ಹೊರತು ವಿನಾಕಾರಣ ಮಗುವನ್ನು ಶಿಕ್ಷೆಗೆ ಗುರಿಪಡಿಸಿ ಇಲ್ಲವೇ ಬಿರುಸು ಮಾತುಗಳಿಂದ ದಂಡಿಸಿ ಅಲ್ಲ.ಮಕ್ಕಳು ಪರಸ್ಪರ ಎದುರಾಳಿಗಳಲ್ಲ ಒಬ್ಬರ ಮೇಲೆ ಮತ್ತೊಬ್ಬರ ಕುರಿತು ದೂರು ಹೇಳುವ, ಹಂಗಿಸುವ ರೀತಿಯಲ್ಲಿ ಪಾಲಕರು ಮಕ್ಕಳನ್ನು ಕುರಿತು ಎಂದೂ ಮಾತನಾಡಬಾರದು. ಮಕ್ಕಳ ನಡುವಿನ ಜಗಳಗಳಲ್ಲಿ ಯಾರು ಸರಿ ಮತ್ತು ಯಾರೂ ತಪ್ಪು ಎಂಬುದನ್ನು ಎಣಿಸದೆ, ಎಲ್ಲಿ ಮತ್ತು ಏಕೆ ತಪ್ಪಾಗಿದೆ ಮತ್ತು ಅದನ್ನು ಹೇಗೆ ತಿದ್ದಿಕೊಳ್ಳಬೇಕು ಎಂಬುದನ್ನು ಸೂಕ್ಷ್ಮವಾಗಿ ಮಕ್ಕಳಿಗೆ ಮನದಟ್ಟು ಮಾಡಿಸಬೇಕು.ಒಂದು ಮಗುವಿನ ಕುರಿತು ಮತ್ತೊಂದು ಮಗುವಿನ ಮುಂದೆ ಅಥವಾ ಹಿಂದೆ ಅವಹೇಳನಕಾರಿಯಾಗಿ ಮಾತನಾಡಬಾರದು.ಇದು ಮಕ್ಕಳಲ್ಲಿ ಮಾನಸಿಕ ಅಭದ್ರತೆ ಮತ್ತು ನೋವಿಗೆ ಕಾರಣವಾಗುತ್ತದೆ.ಪಾಲಕರು ತಮ್ಮ ಒಂದು ಮಗುವನ್ನು ಚಿನ್ನ ರನ್ನ ಎಂದು ಮತ್ತೊಂದು ಮಗುವನ್ನು ಹರಕೆಯ ಕುರಿ ಎಂಬಂತೆ  ಭಾವಿಸಬಾರದು.ಎರಡನೇ ಮಗುವನ್ನು ಪಾಲಿಸಲಿ ಎಂದು ಆಶಿಸುವ ಪಾಲಕರು ಮಗುವಿನ ಮೇಲೆ ಎಲ್ಲ ರೀತಿಯ ಭಾವನಾತ್ಮಕ ಹೊರೆಯನ್ನು ಹೊರಿಸುತ್ತಾರೆ… ಇದು ಖಂಡಿತವಾಗಿಯೂ ತಪ್ಪು. ಮಗುವಿನ ಎಳೆಯ ಹೆಗಲಿಗೆ ಅದಕ್ಕೂ ಮುಖ್ಯವಾಗಿ ಮನಸ್ಸಿಗೆ ಇದು ಖಂಡಿತವಾಗಿಯೂ ಬೆಟ್ಟವನ್ನು ಹೊತ್ತಂತಹ ಭಾವವನ್ನು ಸೃಷ್ಟಿಸಿ ಮೊದಮೊದಲು ಮಾನಸಿಕವಾಗಿ ನಲುಗುವ ಮಗು ಮುಂದೆ ಹೋಲಿಕೆಗಳಿಂದ ಬೇಸತ್ತು ಹೋಗುತ್ತದೆ. ಅದರ ಸುಪ್ತ ಮನಸ್ಸು ಮೊದಮೊದಲು ಹಿಂಜರಿದರೂ ನಂತರ ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯೆಸುತ್ತದೆ. ನಾನೇ ಮಾಡಬೇಕು ಎಂಬುದರಿಂದ ನೊಂದು ನಾನೇಕೆ ಮಾಡಬೇಕು ಎಂದು ಸಿಡಿದು ನಿಲ್ಲುವ ಮಟ್ಟಿಗೆ ಅದರ ಪಯಣ ಸಾಗುತ್ತದೆ. ಇದು ಖಂಡಿತವಾಗಿಯೂ ಪಾಲಕರು ಎಚ್ಚರಗೊಳ್ಳಬೇಕಾದ ವಿಷಯವೇ ಸರಿ.ಸಹೋದರರು ದಾಯಾದಿಗಳಾಗಿ ಬದಲಾಗುವುದರಲ್ಲಿ ಪಾಲಕರ ಪಾತ್ರ ಬಹುಮುಖ್ಯವಾಗಿರುತ್ತದೆ ಅರಿತೋ ಅರಿಯದೆಯೋ ಪಾಲಕರು ಮಾತನಾಡುವ ಪ್ರತಿಯೊಂದು ಮಾತು ಕ್ರಿಯೆಗಳು ಮಕ್ಕಳ ಮೇಲೆ ಅಪಾರ ಪರಿಣಾಮವನ್ನು ಬೀರುತ್ತವೆ.. ಒಡಹುಟ್ಟಿದವರಲ್ಲಿ ಉಂಟಾಗುವ ಗೊಂದಲ ಆತಂಕ, ಅಸಹನೆ ಮತ್ತು  ಅಶಂಕೆಗಳಿಗೆ ಮೂಲ ಬೇರು ಪಾಲಕರೇ ಆಗಿರುತ್ತಾರೆ. ಮಕ್ಕಳನ್ನು ಬೆಳೆಸುವಾಗ ಪಾಲಕರ ಮತ್ತು ಕುಟುಂಬದ ಇತರ ಸದಸ್ಯರ ವರ್ತನೆ, ಮನೆಯಲ್ಲಿನ ವಾತಾವರಣ ಮಕ್ಕಳಲ್ಲಿ ಈ ಭಾವನೆಗಳು ಬೇರೂರಲು ಕಾರಣವಾಗಿರುತ್ತವೆ.ಎಲ್ಲ ಮನೆಗಳಲ್ಲಿಯೂ ಹೀಗೆಯೇ ಆಗಬೇಕು ಎಂದಿಲ್ಲ ಮತ್ತು ಆಗುತ್ತದೆ ಎಂದು ಭಾವಿಸುವಂತಿಲ್ಲ. ಆಗಬಹುದು ಎಂಬ ಕಾರಣಗಳನ್ನು ಹೀಗೆ ಪಟ್ಟಿ ಮಾಡಲಾಗಿದ್ದು ಈ ಕುರಿತು ಪಾಲಕರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ,ಆದರೆ ಖಂಡಿತವಾಗಿಯೂ ಮಕ್ಕಳ ನಡುವೆ ಭಿನ್ನಾಭಿಪ್ರಾಯಗಳು ಬಾರದಂತೆ ಅವರನ್ನು ಪಾಲಿಸುವ ಬೆಳೆಸುವ ಜವಾಬ್ದಾರಿ ಮಾತ್ರ ಪಾಲಕರದ್ದೇ. ಸಂತ ಸೂಕ್ಷ್ಮ ಮನಸ್ಥಿತಿಯ ಮಕ್ಕಳು ಪ್ರತಿಯೊಂದಕ್ಕೂ ವಿಪರೀತವಾಗಿ ಪ್ರತಿಕ್ರಿಯಿಸಿದರೆ ಕೆಲ ಗಟ್ಟಿ ವ್ಯಕ್ತಿತ್ವದ ಮಕ್ಕಳು ಇಲ್ಲದ ಅಹಂಭಾವವನ್ನು ತೋರುತ್ತ ಎದೆ ಸೆಟೆಸಿ ತಾವು ಮಾಡಿದ್ದೇ ಸರಿ ಎಂಬಂತೆ ವರ್ತಿಸುತ್ತಾರೆ.ಒಡಹುಟ್ಟಿದವರಲ್ಲಿ ಇದು ಸಾಮಾನ್ಯ ಎಂದು ತೋರಿದರೂ ವಿಪರೀತಕ್ಕೆ ಇಟ್ಟುಕೊಳ್ಳದಂತೆ ಇದನ್ನು ನಿರ್ವಹಿಸುವ ಜವಾಬ್ದಾರಿ ಖಂಡಿತವಾಗಿಯೂ ಪಾಲಕರದ್ದು.ಈ ಹಿಂದೆ ಮಕ್ಕಳಾಗಿ ಒಡಹುಟ್ಟಿದವರಾಗಿ ತಮ್ಮ ಸಹೋದರರೊಂದಿಗಿನ ಭಿನ್ನಾಭಿಪ್ರಾಯಗಳನ್ನು ಹಿರಿಯರಾದ ಹೊತ್ತಿನಲ್ಲಿ ನೆನೆದು ನಗುವ ಜನರಿರುವಂತೆಯೇ, ತಮ್ಮ ಬದುಕಿನ ಎಲ್ಲಾ ಅವಘಡಗಳಿಗೂ ತಮ್ಮ ಪಾಲಕರು ಮತ್ತು ಒಡಹುಟ್ಟಿದವರೇ ಕಾರಣ ಎಂದೂ, ಬಾಲ್ಯದಲ್ಲಿ ತಮ್ಮನ್ನು ಪರಿಗಣಿಸದೆ ಹೋದ ಕಾರಣ ತಾವು ಹೀಗಿರುವುದು ಎಂದು ಮತ್ತೆ ಕೆಲವರು ಹೇಳಬಹುದು. ಯಾವ ರೀತಿ ಎಲ್ಲಾ ಬೆರಳುಗಳು ಒಂದೇ ಸಮನೆ ಇರುವುದಿಲ್ಲವೋ ಅದೇ ರೀತಿ ಎಲ್ಲರ ಮನಸ್ಥಿತಿಯೂ ಒಂದೇ ಸಮನಾಗಿ ಇರುವುದಿಲ್ಲ… ಅವರವರ ಬುದ್ಧಿಗೆ, ಗ್ರಹಿಕೆಗೆ ಮತ್ತು ಭಾವಕ್ಕೆ ತಕ್ಕಂತೆ ಮನುಷ್ಯನ ವರ್ತನೆ ಇರುತ್ತದೆ.ಪಾಲಕರಾಗಿ ಇದನ್ನು ನಾವು ಖಂಡಿತವಾಗಿಯೂ ತಿಳಿದುಕೊಳ್ಳಬೇಕು.ಮತ್ತೆ ಕೆಲವರು ವಾಸ್ತವ ಪರಿಸ್ಥಿತಿಯನ್ನು ಕುರಿತು ಪ್ರಬುದ್ಧವಾಗಿ ಯೋಚಿಸಿ ತಾವು ಅನುಭವಿಸಿದ ತೊಂದರೆಗಳು ತಮ್ಮ ಮಕ್ಕಳ ಬಾಳಿನಲ್ಲಿ ಬರದೇ ಇರಲಿ ಎಂದು ಆಶಿಸುತ್ತಾರೆ ಮತ್ತು ಆ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳನ್ನು ಯೋಚಿಸಿ ಅಂತೆಯೇ ನಡೆದುಕೊಳ್ಳುತ್ತಾರೆ. ಸಾಮಾಜಿಕವಾಗಿ ನಡೆದು ಬಂದ ಕೆಲ ತಪ್ಪು ತಿಳುವಳಿಕೆಗಳ ಸರಪಳಿಯನ್ನು ತುಂಡರಿಸಿ ಹೊಸ ಬೆಸುಗೆಯನ್ನು ಹಾಕುತ್ತಾರೆ. ತಮ್ಮದೇ ಮಕ್ಕಳಲ್ಲಿ ಅತ್ಯುತ್ತಮ ಸ್ನೇಹ,, ಬಾಂಧವ್ಯ ಪ್ರೀತಿ ವಿಶ್ವಾಸಗಳ ಅನುಬಂಧವನ್ನು  ಉಳಿಸುವ ನಿಟ್ಟಿನಲ್ಲಿ ತಮ್ಮ ಪಾಲಿನ ಎಲ್ಲ ಪ್ರಯತ್ನಗಳನ್ನು ಮಾಡುತ್ತಾರೆ.ಎಲ್ಲ ಮಕ್ಕಳನ್ನು ಸಮಾನಸ್ಥಾಯಿ ಭಾವದಲ್ಲಿ ನೋಡುವ, ಸುರಕ್ಷತಾ ಭಾವವನ್ನು ಕೊಡುವ ಮತ್ತು ಯಾವುದೇ ರೀತಿಯ ಶರತ್ತು ಬದ್ಧತೆಗಳನ್ನು ಹೊಂದಿರದ ಏಕರೂಪದ ಪ್ರೀತಿಯನ್ನು ಕೊಡ ಮಾಡುತ್ತಾರೆ. ಅದುವೇ ಪಾಲಕತ್ವದ ನಿಜವಾದ ಗುರಿ. ವೀಣಾ ಹೇಮಂತ್ ಗೌಡ ಪಾಟೀಲ್

“ಹಿರಿಯ ಮಗುವಿಗೆ….ಹೊರೆಯಾಗದಿರಲಿ ಭ್ರಾತೃತ್ವ”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ, ಜೀವನ

“ಒಂದು ನಿರ್ಧಾರದ ಸುತ್ತಾ”‌ ಡಾ.ಭಾರತಿ ಅಶೋಕ್

ವಿಶೇಷ ಸಂಗಾತಿ ಡಾ.ಭಾರತಿ ಅಶೋಕ್ “ಒಂದು ನಿರ್ಧಾರದ ಸುತ್ತಾ”‌  ಯಾವುದಾದರೂ ಒಂದು ವಿಷಯದ ಬಗೆಗೆ ಆಳವಾಗಿ ಯೋಚಿಸದೇ ಅದರ  ಹರವಿನ ಬಗೆಗೆ ತಿಳಿಯದೇ  ದಿಡೀರ್ ಎಂದು ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಹಾಗೆ ತೆಗೆದುಕೊಂಡ ನಿರ್ಧಾರದಿಂದ ತುಂಬಾ ನಷ್ಟವನ್ನು ಅನುಭವಿಸಬೇಕಾಗುತ್ತದೆ, ಮತ್ತು ಕೆಲವೊಮ್ಮೆ ಈ ನಿರ್ಧಾರಗಳು ಕೌಟುಂಬಿಕ, ಸಾಂಸ್ಥಿಕವಾಗಿರಬಹುದು, ಸಾಮಾಜಿಕವಾಗಿರಬಹುದು. ಈ ಯಾವ ನೆಲೆಯಲ್ಲೂ ಅದು ಒಳ್ಳೆಯದಲ್ಲ. ಕೆಲವು ಸಲ ಅವುಗಳಿಂದ  ಅನಾಹುತ ಸಂಭವಿಸಬಹುದು. ಆದ್ದರಿಂದ ನಿರ್ಧಾರ ತೆಗೆದುಕೊಳ್ಳಲು ಹತ್ತಾರು ಬಾರಿ ಯೋಚಿಸಿಬೇಕು. ಆ ನಿರ್ಧಾರದ ಸುತ್ತಲೂ  ಧನಾತ್ಮಕ, ಋಣಾತ್ಮಕ ಫಲಿತಾಂಶದ ಬಗೆಗೆ ತಿಳುವಳಿಕೆ ಇರಬೇಕು. ಒಂದು ವೇಳೆ ಧನಾತ್ಮಕ ಪರಿಣಾಮವಾದರೆ ತೆಗೆದುಕೊಂಡ ನಿರ್ಧಾರಕ್ಕೆ ಬೆಲೆ ಇರುತ್ತದೆ. ಅದು ಸರ್ವಕಾಲಿಕ ಸತ್ಯವಾಗಿದ್ದು, ಮತ್ತು ಅದು ಅನುಸರಿಸರಣೀಯವಾಗಿರುತ್ತದೆ.             ತೆಗೆದುಕೊಂಡ ನಿರ್ಧಾರದಿಂದ ವ್ಯತಿರಿಕ್ತ ಪರಿಣಾಮಗಳಾದರೆ  ಅದು ಕ್ಷಣಿಕ ನಿರ್ಧಾರ, ಚಿಂತನೆ ಇಲ್ಲದೇ ತೆಗೆದುಕೊಂಡುದರ ಪರಿಣಾಮವಾಗಿದ್ದು, ಅದು ಸಾರ್ವತ್ರಿಕವಾಗಿರದೆ, ಸರ್ವಕಾಲಿಕವೂ ಆಗಿರದೇ ಅಪಾಯಗಳಿಂದ ಕೂಡಿರುತ್ತದೆ. ಆದ್ದರಿಂದ ವ್ಯಕ್ತಿಗೆ, ಸಮಷ್ಟಿಗೆ ತತ್ ಕ್ಷಣವೇ ತೆಗೆದುಕೊಂಡ ನಿರ್ಧಾರದ ಪರಿಣಾಮವಾಗಿ ಆಗುವ ಅನಾಹುತಕ್ಕೆ ಉದಾಹರಣೆಯಾಗುತ್ತದೆ, ಆಗ ಅಂತಹ ನಿರ್ಧಾರವು ವರ್ಜಿಸಲ್ಪಡುತ್ತದೆ.             ನಿರ್ಧಾರ ವೈಯುಕ್ತಿಕ ನೆಲೆಯಲ್ಲಿದ್ದರೆ ಅದಕ್ಕೆ ಉದಾಹರಣೆಯಾಗಿ : ಇಂದಿನ ಯುವ ಜನಾಂಗ ಮಾಡಿಕೊಳ್ಳುವ ಅನಾಹುತಗಳು ಒಂದೆ ಎರಡೇ… ನೋಡಿದಾಕ್ಷಣ ಆಕ಼ರ್ಷಣೆಗೆ ಒಳಗಾಗಿ ತಮ್ಮ ಬದುಕನ್ನು ಸಂಪೂರ್ಣವಾಗಿ ನಾಶ ಮಾಡಿಕೋಳ್ಳುವುದು ಹೀಗೆಯೇ. ಯುವಕ ಯುವತಿಯರು  ಆಕರ್ಷಿತರಾಗುತ್ತಿದ್ದಂತೆಯೇ ಅದನ್ನು ಪ್ರೀತಿ ಎಂದು ನಂಬಿ ಸಮಾಜದ ಒಪ್ಪಿಗೆ ಎಂಬಂತೆ ವಿವಾಹ ಬಂಧನಕ್ಕೆ ಒಳಗಾಗುವುದು ನಿಜಕ್ಕೂ ಅದು ಪ್ರೀತಿನಾ ಅದು ಕೊನೆಯವರೆಗೂ ಉಳಿಯುತ್ತಾ ಎಂದು ಯೋಚಿಸಲು ಸಹ ಅವಕಾಶವಿಲ್ಲದಂತೆ ತಮ್ಮನ್ನು ತಾವು ಬದುಕಿನ/ಪ್ರೀತಿಯ ಪರೀಕ್ಷೆಗೆ ಒಡ್ಡಿ ಕೊಳ್ಳುತ್ತಾರೆ. ಆಕರ್ಷಣೆ ಮುಗಿಯುತ್ತಿದ್ದಂತೆ ಬದುಕು ಅಸಹನೀಯವಾಗುತ್ತದೆ ಯಾಕೆಂದರೆ ಅವರದು ವಯೋ ಸಹಜ ಆಕರ್ಷಣೆ. ಬದುಕಿಗೆ ಪ್ರೀತಿ ಬೇಕು ಪ್ರೀತಿಯೊಂದೆ ಬದುಕಲ್ಲ ಎನ್ನುವುದರ ಅರಿವು ಇರುವುದಿಲ್ಲ. ಬದುಕಲು ಹಣ ಬೇಕು, ಹಣ ಬೇಕೆಂದರೆ ದುಡಿಯಬೇಕು, ದುಡಿಯುವ ಮಾರ್ಗವೇ ತಿಳಿದಿಲ್ಲ ಆಗಲೇ ಬದುಕು ಕಟ್ಟಿಕೊಳ್ಳುತ್ತೇವೆ ಜೊತೆಯಾಗಿ ಎಂದರೆ ಸಾಧ್ಯವಾಗದು. ತಾವು ಜೊತೆಯಾಗುತ್ತೇವೆ ಎಂದುಕೊಂಡು ಮನೆಯಿಂದ ಪೋಷಕರಿಂದ ದೂರ ಹೋಗುವಾಗ ಮನೆಯಿಂದ ಕೊಂಡ್ಯೊಯ್ದ ಪುಡಿಗಾಸು ಮುಗಿಯುತ್ತಿದ್ದಂತೆ. ಬದುಕು ಇಷ್ಟೇ ಎನ್ನಿಸಿಬಿಡುತ್ತದೆ. ಪ್ರೀತಿ ಎಂದುಕೊಂಡದ್ದುಅಸಹನೀಯವಾಗುತ್ತದೆ.  ಕಾರಣ ಬದುಕಿನ ಬಗೆಗೆ ಕಲ್ಪನೆಯೇ ಇಲ್ಲ. ಅದು ಪ್ರೀತಿ ಅಲ್ಲ ಕೇವಲ ಆಕರ್ಷಣೆ ಎಂದು ಅರ್ಥ ಮಾಡಿಕೊಳ್ಳುವ ಹೊತ್ತಿಗೆ ಎಲ್ಲವೂ ಮುಗಿದೇ ಹೋಯ್ತು ಎನ್ನುವಂತಹ ಅನುಭವವಾಗುವುದು. ಆಗ ಆ ಬಂಧ(ನ)ದಿಂದ ಮುಕ್ತಿಗಾಗಿ ವಿಚ್ಛೇದನ, ಆತ್ಮ ಹತ್ಯೆಯಂತಹ ಗಂಭೀರ ಸ್ವರೂಪದ ನಿರ್ಧಾರಕ್ಕೆ ಬರುತ್ತಾರೆ. “ಬದುಕು ಬದುಕಲಾರದಷ್ಟು ಭೀಕರವಲ್ಲ, ಅಂದುಕೊಂಡಷ್ಟು ಸರಳವೂ ಅಲ್ಲ” ಎನ್ನುವ ಸತ್ಯದ ಅರಿವಾಗಬೇಕು ಅಂಥ ಅರಿವನ್ನು ಮೂಡಿಸುವ ಕೆಲಸ ಆಗಬೇಕಿದೆ.  ಹೌದು ವಿವಾಹ ಅದರ ನಂತರದ ಬದುಕು ಅವುಗಳ ಬಗೆಗೆ ನಮ್ಮ ಯುವ ಜನಾಂಗಕ್ಕೆ ಸರಿಯಾದ ತಿಳುವಳಿಕೆ ಇಲ್ಲದಿರುವುದು ನಮ್ಮಂಥ ಸಾಂಪ್ರದಾಯಿಕ ಸಮಾಜದಲ್ಲಿ ನಿರೀಕ್ಷೆಯೂ ಸರಿಯಲ್ಲ. ಇಷ್ಟು ಮಾತ್ರವಲ್ಲದೇ ಅವರ ನಿರ್ಧಾರಗಳಿಗೆ ಇಂಬು ದೊರೆಯಲು ಅವರ ಆರ್ಥಿಕ ಭದ್ರತೆಯೂ ಪೂರಕವಾಗಿರಬೇಕು. ಅದು ಸರಿಯಾಗಿದ್ದರೆ  ಕಷ್ಟದಲ್ಲೂ ಸೈರಿಣೆಯಿಂದ ಬದುಕುವ ಸಾಧ್ಯತೆಗಳನ್ನು ಒದಗಿಸಿದಂತಾಗುತ್ತದೆ. ಹಾಗಿದ್ದಾಗಲೂ ನಿರ್ಧಾರಗಳು ಚಿಂತನೆಯನ್ನು ನಿರೀಕ್ಷಿಸುತ್ತವೆ.             ಇಂಥ ಕ್ಷಣಿಕ ನಿರ್ಧಾರಗಳನ್ನು ನಮ್ಮ ಯುವ ಜನತೆ ಮಾತ್ರ ತೆಗೆದುಕೊಳ್ಳುತ್ತದೆ ಎಂದು ಭಾವಿಸುವುದು ಸಹ ನಮ್ಮ ಕ್ಷಣಿಕ ನಿರ್ಧಾರವಾದೀತು. ಏಕೆಂದರೆ ನಮಗೆ ಇತಿಹಾಸವಿದೆ. ಅದರ ಪರಿಪಾಠ ನಮ್ಮಲ್ಲೂ ಮೈಗೂಡಿದೆ. ‘ನಭೂತೋ ನಭವಿಷ್ಯತೆ” ಎನ್ನುವಂತೆ ನಮ್ಮ ಭೂತ ನಮ್ಮನ್ನು ಬೆನ್ನಟ್ಟಿ ಭವಿಷ್ಯದಲ್ಲೂ ಜೊತೆಗಿರುತ್ತದೆ.  ಹೇಗೆ ಎನ್ನುವುದನ್ನು ನೋಡೋಣ ನಮ್ಮ ಬಾದಷಹ “ಮೊಹಮ್ಮದ್ ಬೀನ್ ತುಘಲಕ್” ತೆಗೆದುಕೊಳ್ಳುತ್ತಿದ್ದ ತತ್ ಕ್ಷಣದ ನಿರ್ಧಾರಗಳಿಂದ ಜನತೆ ಎದುರಿಸಿದ ಸಮಸ್ಯೆಗಳು ಒಂದೆರಡಲ್ಲ. ರಾಜಧಾನಿಯನ್ನು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ(ದೆಹಲಿಯಿಂದ ದೇವಗಿರಿಗೆ, ದೇವಗಿರಿಯಿಂದ ದೆಹಲಿಗೆ)ಸ್ಥಳಾಂತರಿಸಿದಾಗ ಜನ, ದನ, ಪಶು, ಪಕ್ಷಿಗಳು ಅನುಭವಿಸಿದ ನೋವಿನ ತೀವ್ರತೆಯನ್ನು ಹೇಳಿದರೆ ಪರಿಮಕಾರಿಯಾಗಿರುವುದಿಲ್ಲ. ಅನುಭವಿಸಿದವರೇ ಬಲ್ಲರು. ಸುಲ್ತಾನನಿಗೆ ಬುದ್ಧಿ ಇರಲಿಲ್ಲ ಎಂದುಕೊಂಡರೆ ಅದು ನಮ್ಮ ಮೂರ್ಖತನವಾದೀತು. ಆತನೋ ಭಯಂಕರ ಮೇಧಾವಿ. ಪರ್ಷಿಯನ್ ಅರೇಬಿಕ್ ಭಾಷೆಗಳಲ್ಲಿ ಪಂಡಿತ. ಸಾಹಿತ್ಯ ಧರ್ಮ ಖಗೋಳ ಶಾಸ್ತ್ರ ತರ್ಕಶಾಸ್ತ್ರ,ತತ್ವಶಾಸ್ತ್ರ ಗಣಿತಶಾಸ್ತ್ರಗಳಲ್ಲಿ ಆಳವಾದ ಜ್ಞಾನವನ್ನು ಪಡೆದಿದ್ದನು. ಆತನ ಜ್ಞಾನ ನಾಲ್ಕು ಐದು ಶತಮಾನದಷ್ಟು ಮುಂದಿತ್ತು ಎಂದರು ಸರಿಯೆ. ಅಂಥಹ ಚಾಣಾಕ್ಷ.       ಯಾಕೆ ನಾನು ಇತಿಹಾಸದಿಂದ ಇಂಥ ಮೇಧಾವಿಯನ್ನು ಉದಾಹರಿಸಿದೆ ಎಂದರೆ ಆತನ ನಿರ್ಧಾರಗಳು, ಯೋಜನೆಗಳನ್ನು ಜಾರಿಗೊಳಿಸುವ ಕ್ರಮ, ಅಂದಿನ ಪರಿಸ್ಥಿತಿಯ ಕುರಿತು ಕುಳಿತು ಸರಿಯಾದ ರೀತಿಯಲ್ಲಿ ಚಿಂತನೆ ಮಾಡಿ ನಿರ್ಧಾರ ತೆಗೆದುಕೊಳ್ಳುವ ತಾಳ್ಮೆ  ಆತನಲ್ಲಿ ಇರಲಿಲ್ಲ. ಬುದ್ಧಿವಂತಿಕೆ ವ್ಯವಹಾರ ನೈಪುಣ್ಯತೆಯ ಕೊರತೆಯಿಂದಾಗಿ  ಏಕಾಏಕೀ ನಿರ್ಧಾರ ಕೈಕೊಳ್ಳುತ್ತಿದ್ದುದರ ಪರಿಣಾಮವಾಗಿತ್ತು. ಅದರೆ ಅಂದಿನ ರಾಜಕೀಯ ಸ್ಥಿತಿಗತಿಗಳಿಗೆ  ಅದು ಅನಿವಾರ್ಯವಾಗಿತ್ರು, ಬದಲಾವಣೆ ಪೂರ್ವನಿರ್ಧಾರಿತವಾಗಿದ್ದರೆ,ವ್ಯವಸ್ಥಿತವಾಗಿದ್ದರೆ..‌..ಉತ್ತಮ ಆಡಳಿತ ವ್ಯವಸ್ಥೆಯನ್ನು ಕೊಟ್ಟ ಕೀರ್ತಿ ಆತನದಾಗಿರುತ್ತಿತ್ತು      ಅಂದರೆ ಒಂದು ನಿರ್ಧಾರ ಅದು ಬಹುಮುಖ ಚಿಂತನೆಯಿಂದಕೂಡಿರಬೇಕು. ಅದರಿಂದ ವಿರುದ್ಧ ಪರಿಣಾಮಗಳಾದರೂ ಅವು ಆಶಾಶ್ವತವಾಗಿದ್ದು ವೈರುದ್ಯಗಳಿಗೂ ಶಾಶ್ವತ ಪರಿಹಾರಗಳನ್ನು ಕಂಡುಕೊಳ್ಳುವಂತಹ ನಿರ್ಧಾರಗಳನ್ನು ಮೊದಲೆ  ಮಾಡಿಕೊಂಡರೆ ಅದು ಯಶಸ್ವಿಯಾಗುತ್ತದೆ. ಹಾಗೆ ಅದರ  ಬಗೆಗೆ ವಿವರವಾದ ಆಲೋಚನೆಗಳು  ವಿಭಿನ್ನ ಆಯಾಮಗಳಿಂದ ನಡೆದು ಅದಕ್ಕೆ ತಕ್ಕುದಾದ ಅನುಸರಣೀಯ  ಮಾರ್ಗೋಪಾಯಗಳನ್ನು ಕಂಡುಕೊಂಡೇ  ನಿರ್ಧಾರ ಕೈಕೊಂಡರೆ, ಅಂದರೆ , ಒಂದು ನಿರ್ಧಾರದ ಹಿಂದೆ ಅದರ ಒಳಿತು ಕೆಡುಕುಗಳನ್ನು ನಾವು ಸ್ವೀಕರಿಸುವ  ಪರಿಸ್ಥಿತಿಯನ್ನು ಸಹ ಅರಿತುಕೊಂಡು  ನಿರ್ಧರಿಸಿದಾಗ  ಅದು ಸಹಜವಾದ ನಿರ್ಧಾರವಾಗುತ್ತದೆ. ಪರಿಣಾಮ ಯಾವಾಗಲೂ ಒಳ್ಳೆಯವೆ ಆಗಿರುತ್ತವೆ.  ಯೋಚಿಸಿ ಕೈಕೊಂಡಿದ್ದರಿಂದ ಅದಕ್ಕೆ  ಅಗತ್ಯವಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿರುತ್ತದೆ, ಇದು ಕಷ್ಟವೆನಿಸದು. ಇನ್ನು ರಾಜಕೀಯ ಕ್ಷೇತ್ರದಲ್ಲಂತು ಇದು ಅತ್ಯಂತ ಮಹತ್ವದ ಪಾತ್ರವಹಿಸುತ್ತದೆ.             ಇಂದಿನ ತಾಂತ್ರಿಕ ಯುಗದಲ್ಲಿ ಇದು ತುಂಬ ಅತ್ಯಗತ್ಯ.. ಕಾರಣ  ನಿರ್ಧಾರಗಳು ಸಾರ್ವತ್ರಿಕವಾಗಿರುವುದರಿಂದ  ಅದರ ಪರಿಣಾಮಗಳು ಇನ್ನು ಭೀಕರವಾಗಿರುವುದರಿಂದ  ನಿರ್ಧಾರದ ಹಿಂದಿನ ಪರಿಣಾಮಗಳ ಆಳವಾದ ಜ್ಞಾನ  ಚಿಂತನೆ ಅಗತ್ಯ. ಡಾ. ಭಾರತಿ ಅಶೋಕ್

“ಒಂದು ನಿರ್ಧಾರದ ಸುತ್ತಾ”‌ ಡಾ.ಭಾರತಿ ಅಶೋಕ್ Read Post »

ಇತರೆ, ಜೀವನ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್

ವಿಶೇಷ ಸಂಗಾತಿ ಕವಿತಾ ಶ್ರೀನಿವಾಸ್‌ ನಾಯಕ್ “ಬೂದಿ ಮುಚ್ಚಿದ ಕೆಂಡ” ನಿಮ್ಮೊಳಗಿನ ಸುಪ್ತ ಚೈತನ್ಯದ ಅನ್ವೇಷಣೆ​”ಬೂದಿ ಮುಚ್ಚಿದ ಕೆಂಡ” ಎಂಬುದು ಕೇವಲ ಒಂದು ಗಾದೆಯಲ್ಲ, ಅದು ಮನುಷ್ಯನ ವ್ಯಕ್ತಿತ್ವದ ಆಳವನ್ನು ಅಳೆಯುವ ಒಂದು ಸುಂದರ ರೂಪಕ.​ಕೆಂಡವು ಬೂದಿಯ ಅಡಿಯಲ್ಲಿ ಅಡಗಿದ್ದರೂ ತನ್ನ ಶಾಖವನ್ನು ಕಳೆದುಕೊಂಡಿರುವುದಿಲ್ಲ. ಹಾಗೆಯೇ, ಪ್ರತಿಯೊಬ್ಬ ಮನುಷ್ಯನಲ್ಲೂ ಜನ್ಮಜಾತವಾದ ಒಂದು ಪ್ರತಿಭೆ ಅಥವಾ ಕೌಶಲ ಇರುತ್ತದೆ. ಕೆಲಸದ ಒತ್ತಡ, ಕೌಟುಂಬಿಕ ಜವಾಬ್ದಾರಿ ಅಥವಾ ಆತ್ಮವಿಶ್ವಾಸದ ಕೊರತೆಯಿಂದಾಗಿ ಆ ಪ್ರತಿಭೆಯ ಮೇಲೆ ‘ಬೂದಿ’ ಮುಚ್ಚಿರುತ್ತದೆ. ನಮ್ಮನ್ನು ನಾವು ಅರಿತುಕೊಂಡಾಗ ಮಾತ್ರ ಆ ಕೆಂಡವನ್ನು ಮತ್ತೆ ಪ್ರಜ್ವಲಿಸಲು ಸಾಧ್ಯ.​ವ್ಯಕ್ತಿತ್ವ ವಿಕಸನದಲ್ಲಿ ‘ಮೌನ’ಕ್ಕೆ ದೊಡ್ಡ ಸ್ಥಾನವಿದೆ. ಬೂದಿ ಮುಚ್ಚಿದ ಕೆಂಡದಂತೆ ಇರುವ ವ್ಯಕ್ತಿ ಅತಿ ಹೆಚ್ಚು ಪ್ರಚಾರ ಬಯಸುವುದಿಲ್ಲ.ಅವರು ಸದ್ದಿಲ್ಲದೆ ತಮ್ಮ ಗುರಿಯತ್ತ ಕೆಲಸ ಮಾಡುತ್ತಾರೆ.ಅತಿಯಾಗಿ ಮಾತನಾಡಿ ಶಕ್ತಿಯನ್ನು ವ್ಯರ್ಥ ಮಾಡುವ ಬದಲು, ಆ ಶಕ್ತಿಯನ್ನು ಒಳಗಡೆ ಶೇಖರಿಸಿಟ್ಟುಕೊಂಡು ಸರಿಯಾದ ಸಮಯ ಬಂದಾಗ ತಮ್ಮ ಸಾಧನೆಯ ಮೂಲಕ ಉತ್ತರ ನೀಡುತ್ತಾರೆ.​ಪರಿಸ್ಥಿತಿಗಳೇ ಬೂದಿಯಿದ್ದಂತೆ​ಜೀವನದಲ್ಲಿ ಬರುವ ಸೋಲುಗಳು, ಅವಮಾನಗಳು ಅಥವಾ ಟೀಕೆಗಳು ನಮ್ಮ ವ್ಯಕ್ತಿತ್ವದ ಮೇಲೆ ಬೂದಿಯಂತೆ ಬಂದು ಬೀಳುತ್ತವೆ. ಆಗ ನಾವು ನಿಸ್ತೇಜರಾದಂತೆ ಕಾಣಬಹುದು.ಆದರೆ ನೆನಪಿಡಿ, ಬೂದಿ ಕೆಂಡವನ್ನು ತಾತ್ಕಾಲಿಕವಾಗಿ ಮುಚ್ಚಬಹುದೇ ಹೊರತು ಆರಿಸಲು ಸಾಧ್ಯವಿಲ್ಲ. ಒಳಗೆ ಹಂಬಲದ ಕಿಚ್ಚು ಜೀವಂತವಾಗಿದ್ದರೆ,ಎಂತಹ ಕಠಿಣ ಪರಿಸ್ಥಿತಿಯನ್ನೂ ಮೆಟ್ಟಿ ನಿಂತು ಮತ್ತೆ ಪುಟಿದೇಳಬಹುದು.​ಕೆಂಡ ಹೊರಬರಬೇಕಾದರೆ ಗಾಳಿಯ ಅವಶ್ಯಕತೆ ಇದೆ.ವ್ಯಕ್ತಿತ್ವ ವಿಕಸನದಲ್ಲಿ ಆ ಗಾಳಿಯೇ ‘ನಿರಂತರ ಪ್ರಯತ್ನ’.​ನಿಮ್ಮ ಒಳಗೆ ಸಾಧನೆಯ ಕಿಚ್ಚಿದೆ. ಸಂದರ್ಭಗಳು ಅದನ್ನು ಮುಚ್ಚಿರಬಹುದು.ಆದರೆ ನಿಮ್ಮ ಪ್ರತಿಭೆಯನ್ನು ನೀವು ನಂಬಿ,ಶ್ರಮದ ಗಾಳಿಯನ್ನು ಬೀಸಿದರೆ ಖಂಡಿತವಾಗಿಯೂ ನೀವು ಜಗತ್ತು ಬೆರಗಾಗುವಂತೆ ಪ್ರಕಾಶಿಸುತ್ತೀರಿ. ನಿಮ್ಮ ಅಸ್ತಿತ್ವ ಬೂದಿಯಂತಿರಲಿ, ಆದರೆ ನಿಮ್ಮ ವ್ಯಕ್ತಿತ್ವ ಕೆಂಡದಂತೆ ಪ್ರಖರವಾಗಿರಲಿಕವಿತಾ ಶ್ರೀನಿವಾಸ್ ನಾಯಕ್ ಕಾರ್ಕಳ,ಉಡುಪಿ ಜಿಲ್ಲೆ

“ಬೂದಿ ಮುಚ್ಚಿದ ಕೆಂಡ” ವಿಶೇಷ ಲೇಖನ ಕವಿತಾ ಶ್ರೀನಿವಾಸ್‌ ನಾಯಕ್ Read Post »

You cannot copy content of this page

Scroll to Top