ಧಾರಾವಾಹಿ ಸಂಗಾತಿ-36 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್ ಚೇತನ ಅಖಂಡ ಕರ್ನಾಟಕ ಹೋರಾಟ ಅಖಂಡ ಕರ್ನಾಟಕದ ಕನಸಿನ ತುಡಿತ ಹೆಚ್ಚುತಿದ್ದಂತಕನ್ನಡದ ಅಭಿಮಾನಿಗಳು, ಕನ್ನಡದ ಸಾಹಿತಿಗಳು, ಕನ್ನಡಪರ ಸಂಘಟನೆಗಳು ಒಂದಾಗಿ ಎತ್ತಿಕೊಂಡಿದ್ದ ಹೋರಾಟದ ಧ್ವನಿ ನಿಧಾನವಾಗಿ ರಾಜಕೀಯದ ಗಾಳಿಯಲ್ಲಿ ಸಿಲುಕಿ ದಿಕ್ಕು ತಪ್ಪಿದುದನ್ನು ಕಣ್ಣಾರೆ ಕಂಡರೂ, ಅದನ್ನು ತಡೆಯಲಾಗದ ಅಸಹಾಯಕ ಸ್ಥಿತಿಗೆ ಸಾಹಿತಿಗಳು, ಕನ್ನಡ ಸಂಘಟನೆಗಳು ಮತ್ತು ಕನ್ನಡಾಭಿಮಾನಿಗಳು ಬಂದು ತಲುಪಿದ್ದರು. ಅಖಂಡ ಕರ್ನಾಟಕ ಹೋರಾಟವು ಒಂದು ಭೌಗೋಳಿಕ ಪ್ರದೇಶವನ್ನು ಒಂದಾಗಿಸುವುದರ ಜೊತೆಗೆ ಕನ್ನಡಿಗರ ಹೃದಯಗಳನ್ನು ಒಂದಾಗಿಸುವ ಕನಸಾಗಿತ್ತು. ಉತ್ತರ ಕರ್ನಾಟಕದಿಂದ ದಕ್ಷಿಣ ಕರ್ನಾಟಕದವರೆಗೆ, ಕರಾವಳಿಯಿಂದ ಮಲೆನಾಡಿನವರೆಗೆ……ಕನ್ನಡದ ಒಂದೇ ಭಾಷೆ, ಒಂದೇ ಸಂಸ್ಕೃತಿ, ಒಂದೇ ಭಾವನೆ ನಮ್ಮನ್ನು ಒಂದೇ ನಾಡಿನ ಮಕ್ಕಳನ್ನಾಗಿ ಮಾಡಬೇಕು ಎಂಬುದು ಕನ್ನಡಿಗರ ಬಹುದಿನಗಳ ಕನಸಾಗಿತ್ತು….. ಆದರೆ ಅಖಂಡ ಕರ್ನಾಟಕದ ಬದಲಾಗಿ ಕರ್ನಾಟಕವನ್ನು ವಿಭಜಿಸುವ ಮಾತುಗಳು ಬಲ ಪಡೆಯತೊಡಗಿದವು. ಜನರ ಮನದಾಳದಲ್ಲಿ ಬೆಳೆದಿದ್ದ ಏಕೀಕರಣದ ಆಶಯಕ್ಕಿಂತ ರಾಜಕೀಯ ಲೆಕ್ಕಾಚಾರಗಳು ಮೇಲುಗೈ ಸಾಧಿಸಿದವು. ಭಾಷಾವಾರು ರಾಜ್ಯಗಳ ರಚನೆಯ ಪರವಾಗಿ ದೇಶದ ರಾಷ್ಟ್ರೀಯ ನಾಯಕರು ಮುಂದುವರಿದಿದ್ದರೂ, ಕರ್ನಾಟಕ ಒಂದಾಗಬೇಕು ಎಂಬ ಜನಮನದ ಬಯಕೆಯನ್ನು ರಾಜಕೀಯ ನಾಯಕತ್ವ ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ವಿಫಲವಾಯಿತು. ಕೇಂದ್ರ ರಾಜಕಾರಣದ ಒತ್ತಡಗಳಿಗೆ ಕರ್ನಾಟಕದ ಅನೇಕ ರಾಜಕಾರಣಿಗಳು ಮಣಿದರು. ಹಿಂದೆ ಜನರಿಗೆ ನೀಡಿದ್ದ ಭರವಸೆಗಳು, ಆಡಿದ್ದ ಮಾತುಗಳು ಬದಲಾಗತೊಡಗಿದವು. ರಾಜಕೀಯ ಪಕ್ಷಗಳ ಹಿತಾಸಕ್ತಿಗಳು ಕನ್ನಡ ನಾಡಿನ ಒಗ್ಗಟ್ಟಿನ ಕನಸಿಗಿಂತ ದೊಡ್ಡದಾಗಿ ಕಾಣಿಸಿಕೊಂಡವು. ಹೋರಾಟದ ಉತ್ಸಾಹವೂ ಕ್ರಮೇಣ ಕುಗ್ಗತೊಡಗಿತು. ಇದನ್ನೆಲ್ಲ ಕಂಡ ಕನ್ನಡ ಅಭಿಮಾನಿಗಳು, ಕನ್ನಡ ಸಾಹಿತಿಗಳ ಮನಸ್ಸಿನಲ್ಲಿ ನೋವು ಮಡುಗಟ್ಟಿತು. ಕನ್ನಡಕ್ಕಾಗಿ ಎತ್ತಿದ ಧ್ವನಿ ರಾಜಕೀಯದ ಗದ್ದಲದಲ್ಲಿ ಕೇಳಿಸದಂತಾಯಿತು. ಕನ್ನಡಿಗರ ಭಾವೈಕ್ಯತೆಯ ಕನಸು ಕಣ್ಣೆದುರೇ ಮಸುಕಾಗುತ್ತಿರುವುದನ್ನು ಕಂಡರೂ, ಕೈಕಟ್ಟಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಯಿತು. ….. ಎಲ್ಲೆಲ್ಲಿ ಕನ್ನಡದ ನುಡಿ ಕೇಳಿಸುತ್ತದೆಯೋ, ಅಲ್ಲೆಲ್ಲ ಕನ್ನಡಿಗರ ಹೃದಯ ಒಂದೇ ಬಡಿತದಲ್ಲಿ ಮಿಡಿಯಬೇಕು. ಪ್ರಾದೇಶಿಕ ಭಿನ್ನತೆಗಳನ್ನು ಮೀರಿ, ರಾಜಕೀಯ ಗಡಿಗಳನ್ನು ದಾಟಿ, ಕನ್ನಡದ ಹೆಸರಿನಲ್ಲಿ ಎಲ್ಲರೂ ಒಂದಾಗಬೇಕು….ಎನ್ನುವ ಕರೆ ಕೊಟ್ಟರು ಜಯದೇವಿ ತಾಯಿಯವರು ಜನತೆಗೆ ಕರೆಕೊಟ್ಟರು. ಕನ್ನಡದ ನೆಲ-ನುಡಿ-ಸಂಸ್ಕೃತಿಯ ಭಾವೈಕ್ಯತೆಯನ್ನು ಗಟ್ಟಿಗೊಳಿಸುವ ಕೆಲಸ ಮಾಡಬೇಕಾಗಿತ್ತು….ಅಖಂಡ ಕರ್ನಾಟಕವೆಂದರೆ ಒಂದು ನಾಡಿನ ಕೋಟ್ಯಂತರ ಕನ್ನಡಿಗರ ಹೃದಯದ ಕನಸು. ಆ ಕನಸು ಉಳಿಯುವವರೆಗೂ ಕನ್ನಡದ ಏಕತೆಯ ಜ್ಯೋತಿ ಎಂದಿಗೂ ಆರದಂತೆ ಜಯದೇವಿ ತಾಯಿಯವರು ಸತತವಾಗಿ ಹೋರಾಟಕ್ಕಿ ನಿಂತು ಕೊಂಡರು.ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರು ಹೆಜ್ಜೆ ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಮಾಡುವದಾಗಿತ್ತು. ೧೯೫೩ರಲ್ಲಿ ಆರ್ ವಿ ಬೀಡಪ್ಪ ,ಭೀಮಣ್ಣ ಖಂಡ್ರೆ, ಪ್ರಭುರಾಜ ಕಂಬಳಿವಾಲೆ ಮೊದಲಾದವರು ಸೇರಿ *ಪ್ರಜಾ ಸೋಶಿಯಾಲಿಸ್ಟಿಕ*ಪಾರ್ಟಿಯನ್ನು ಸ್ಥಾಪಿಸಿದ್ದರು…… ಜಮದೇವಿ ತಾಯಿಯವರು ಅವರೊಂದಿಗೆ ಪಕ್ಷ ಸಂಘಟನೆ ತೊಡಗಿಕೊಂಡಿದ್ದರು. ಇವರ ಒಡನಾಟದೊಂದಿಗೆ ಲೋಹಿಯಾ, ಜಯಪ್ರಕಾಶ ನಾರಾಯಣ, ಶಾಂತವೇರಿ ಗೋಪಾಲಗೌಡರ ಪ್ರಭಾವಕ್ಕೆ ಒಳಗಾಗಿದ್ದರು. ಈ ಮೂಲಕ ಒಬ್ಬ ಸಮಾಜವಾದಿಯಾಗಿ ಗುರುತಿಸಿಕೊಂಡರು ಮುಂದೆ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ(ಅ.ಕ.ರಾ.ನಿ) ಉಪಾಧ್ಯಕ್ಷವಾಗಿ ಕೆಲಸ ನಿರ್ವಹಿಸಿದರು. ೧೯-೪-೧೯೫೨ರಂದು ಹುಬ್ಬಳ್ಳಿಯ ಪುರಸಭಾ ಭವನದಲ್ಲಿ ನಡೆದ ಕೆಪಿಸಿಸಿ ಕಾರ್ಯಕಾರಿ ಸಭೆಯ ಕಾಂಗ್ರೆಸ್ಸಿನ ಎಲ್ಲ ಮುಖಂಡರು ಪಾಲ್ಗೊಳ್ಳುತ್ತಿದ್ದು ಅಂದೆ ಗಲಭೆಯು ನಡೆಯಿತು ಇದೆ ಹುಬ್ಬಳ್ಳಿಯ ಗಲಭೆ ಎಂದು ಹೆಸರಾಯಿತು. ಆಂಧ್ರದ ಹೋರಾಟಗಾರರಾದ ಪೊಟ್ಟು ಶ್ರೀರಾಮುಲು ಅವರ ಪ್ರೇರಣೆಯಿಂದ…. ಕರ್ನಾಟಕದ ಏಕೀಕರಣ ಆಗಲೇಬೇಕೆಂದು ಶಂಕರ ಗೌಡ ಪಾಟೀಲರು ಆ ಮರಣ ಉಪವಾಸ ಕುಳಿತದ್ದು ಈ ಉಪವಾಸವನ್ನು ನಿಲ್ಲಿಸಿ ಏಕೀಕರಣದ ಆಶಯವನ್ನು ಈಡೇರಿಸುವ ಕನಸು ಕಂಡಿದ್ದ ಜನತೆಗೆ ನಿರಾಸೆಗೊಳಿಸಿದ್ದು ಜಯದೇವಿ ತಾಯಿಯವರು ಮನನೋಯಿತು…. ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ ನಂತರ ಜಯದೇವಿ ತಾಯಿಯವರ ರಾಜಕೀಯ ಬದುಕಿನಲ್ಲಿ ಮಹತ್ವದ ತಿರುವು ಕಾಣಿಸಿಕೊಂಡಿತು. ಕಾಂಗ್ರೆಸಿನ ಸಾಂಪ್ರದಾಯಿಕ ರಾಜಕಾರಣದಿಂದ ಹೊರಬಂದು, ಜನಪರವಾದ ಹಾಗೂ ಸಮಾಜಮುಖಿ ಚಿಂತನೆಗಳಿಗೆ ಅವರು ಹೆಚ್ಚು ಒತ್ತು ನೀಡತೊಡಗಿದರು. ಇದೇ ಸಂದರ್ಭದಲ್ಲಿ ಸೊಲ್ಲಾಪುರ ಸೇರಿದಂತೆ ಕನ್ನಡ ಭಾಷಿಕ ಪ್ರದೇಶಗಳನ್ನು ಒಳಗೊಂಡ ಅಖಂಡ ಕರ್ನಾಟಕ ರಾಜ್ಯದ ನಿರ್ಮಾಣದ ಆಶಯ ಅವರ ರಾಜಕೀಯ ಚಟುವಟಿಕೆಗಳಲ್ಲಿ ಪ್ರಮುಖ ಸ್ಥಾನ ಪಡೆದುಕೊಂಡಿತು.. ಈ ಹೊಸ ರಾಜಕೀಯ ವೇದಿಕೆ ಕಾಂಗ್ರೆಸ್ಗೆ ಪರ್ಯಾಯವಾಗಿ ಜನಪರ ಆಡಳಿತ, ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಆಶಯಗಳನ್ನು ಮುಂದಿಟ್ಟುಕೊಂಡು ಕಾರ್ಯನಿರ್ವಹಿಸಿತು.ಜಯದೇವಿ ತಾಯಿಯವರು ಈ ನಾಯಕರೊಂದಿಗೆ ನಿಕಟವಾಗಿ ಸಂಪರ್ಕ ಬೆಳೆಸಿಕೊಂಡು ಪಕ್ಷ ಸಂಘಟನೆಯ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಕೊಂಡರು. ಗ್ರಾಮೀಣ ಪ್ರದೇಶಗಳ ಜನರು, ಮಹಿಳೆಯರು ಹಾಗೂ ಸಾಮಾನ್ಯ ಕಾರ್ಯಕರ್ತರೊಂದಿಗೆ ಸಂಪರ್ಕ ಸಾಧಿಸಿ ಪಕ್ಷದ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದರು ಸಮಾಜವಾದಿ ನಾಯಕರ ಪ್ರಭಾವಪ್ರಜಾ ಸೋಶಿಯಲಿಸ್ಟ್ ಪಕ್ಷದ ಸಂಘಟನಾ ಕಾರ್ಯದ ಸಂದರ್ಭದಲ್ಲಿ ಜಯದೇವಿ ತಾಯಿಯವರಿಗೆ ದೇಶದ ಪ್ರಮುಖ ಸಮಾಜವಾದಿ ನಾಯಕರ ಚಿಂತನೆಗಳನ್ನು ಹತ್ತಿರದಿಂದ ಅರಿಯುವ ಅವಕಾಶ ದೊರೆಯಿತು.ವಿಶೇಷವಾಗಿ ಡಾ. ರಾಮಮನೋಹರ ಲೋಹಿಯಾ, ಜಯಪ್ರಕಾಶ ನಾರಾಯಣ ಮತ್ತು ಶಾಂತವೇರಿ ಗೋಪಾಲಗೌಡ ಅವರ ವಿಚಾರಗಳು ಅವರ ಮೇಲೆ ಗಾಢವಾದ ಪ್ರಭಾವ ಬೀರಿದವು.ಲೋಹಿಯಾ ಅವರ ಸಾಮಾಜಿಕ ಸಮಾನತೆ, ಹಿಂದುಳಿದ ವರ್ಗಗಳ ಪ್ರಗತಿ ಮತ್ತು ಅಧಿಕಾರದ ಕೇಂದ್ರೀಕರಣದ ವಿರೋಧದ ಚಿಂತನೆಗಳು ಜಯದೇವಿ ತಾಯಿಯವರನ್ನು ಆಕರ್ಷಿಸಿದವು. ಜಯಪ್ರಕಾಶ ನಾರಾಯಣ ಅವರ ಜನಪರ ರಾಜಕಾರಣ ಹಾಗೂ ಪ್ರಜಾಪ್ರಭುತ್ವದ ಮೌಲ್ಯಗಳು ಅವರ ರಾಜಕೀಯ ದೃಷ್ಟಿಕೋನವನ್ನು ಮತ್ತಷ್ಟು ವಿಸ್ತರಿಸಿದವು.ಅದೇ ರೀತಿ ಶಾಂತವೇರಿ ಗೋಪಾಲಗೌಡರ ಸರಳ ಜೀವನ, ರೈತಪರ ನಿಲುವು, ಸಮಾಜವಾದಿ ಬದ್ಧತೆ ಮತ್ತು ಜನರೊಂದಿಗೆ ಬೆರೆತು ಹೋರಾಟ ನಡೆಸುವ ಗುಣಗಳು ಜಯದೇವಿ ತಾಯಿಯವರ ಮೇಲೆ ಪರಿಣಾಮ ಬೀರಿದವು. ಸಮಾಜವಾದಿಯಾಗಿ ರೂಪುಗೊಂಡ ಜಯದೇವಿ ತಾಯಿಯವರು ಸಮಾಜವಾದಿ ನಾಯಕರ ಒಡನಾಟ ಮತ್ತು ಅವರ ವಿಚಾರಧಾರೆಯ ಅಧ್ಯಯನದಿಂದ ಜಯದೇವಿ ತಾಯಿಯವರ ರಾಜಕೀಯ ವ್ಯಕ್ತಿತ್ವ ಹೊಸ ರೂಪ ಪಡೆದುಕೊಂಡಿತು. ರಾಜಕೀಯವೆಂದರೆ ಸಾಮಾನ್ಯ ಜನರ ಬದುಕಿನಲ್ಲಿ ಬದಲಾವಣೆ ತರುವ ಸಾಧನ ಎಂಬ ನಂಬಿಕೆ ಅವರಲ್ಲಿ ಗಟ್ಟಿಯಾಯಿತು. ಸಾಮಾಜಿಕ ಅಸಮಾನತೆ, ಶೋಷಣೆ, ಬಡತನ, ಮಹಿಳೆಯರ ಸಮಸ್ಯೆಗಳು ಮತ್ತು ಹಿಂದುಳಿದ ಜನಸಮುದಾಯಗಳ ಹಕ್ಕುಗಳಂತಹ ವಿಚಾರಗಳ ಬಗ್ಗೆ ಅವರು ಹೆಚ್ಚು ಕಾಳಜಿ ವಹಿಸಿದರು. ಈ ಹಂತದಲ್ಲಿ ಅವರು ಒಬ್ಬ ಬದ್ಧ ಸಮಾಜವಾದಿ ನಾಯಕಿಯಾಗಿ ತಮ್ಮದೇ ಆದ ಗುರುತನ್ನು ರೂಪಿಸಿಕೊಂಡರು.ಅಖಂಡ ಕರ್ನಾಟಕದ ಆಶಯದೊಂದಿಗೆ ಸಮಾಜವಾದಿ ಚಿಂತನೆಜಯದೇವಿ ತಾಯಿಯವರ ರಾಜಕೀಯ ಚಿಂತನೆಗಳಲ್ಲಿ ಸಮಾಜವಾದ ಮತ್ತು ಅಖಂಡ ಕರ್ನಾಟಕದ ಹೋರಾಟ ಪರಸ್ಪರ ಬೆಸೆದುಕೊಂಡಿದ್ದವು. ಕರ್ನಾಟಕದ ವಿವಿಧ ಭಾಗಗಳಲ್ಲಿ ಚದುರಿಹೋಗಿದ್ದ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತಾತ್ಮಕ ಘಟಕವಾಗಿ ಸೇರಬೇಕು ಎಂಬುದು ಅವರ ಪ್ರಮುಖ ಆಶಯವಾಗಿತ್ತು.ಅವರ ದೃಷ್ಟಿಯಲ್ಲಿ ಕರ್ನಾಟಕ ಏಕೀಕರಣವೆಂದರೆ ಕರ್ನಾಟಕದ ಪ್ರತಿಯೊಂದು ಭಾಗದ ಜನರಿಗೂ ಸಮಾನ ಅವಕಾಶ, ಸಾಮಾಜಿಕ ನ್ಯಾಯ ಮತ್ತು ಅಭಿವೃದ್ಧಿ ದೊರೆಯಬೇಕು ಎಂಬುದೂ ಅದರ ಭಾಗವಾಗಿತ್ತು. ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನಲ್ಲಿ ಜವಾಬ್ದಾರಿ ಹಂತದಲ್ಲಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತಿನ (ಅ.ಕ.ರಾ.ನಿ.) ಉಪಾಧ್ಯಕ್ಷೆಯಾಗಿ ಜವಾಬ್ದಾರಿ ವಹಿಸಿಕೊಂಡರು. ಇಂಥ ಸ್ಥಾನವು ಅವರ ರಾಜಕೀಯ ಜೀವನದ ಮಹತ್ವದ ಘಟ್ಟವಾಗಿತ್ತು. ಈ ಹುದ್ದೆಯ ಮೂಲಕ ಅವರು ಅಖಂಡ ಕರ್ನಾಟಕದ ವಿಚಾರವನ್ನು ಜನರ ಮುಂದೆ ನಿರಂತರವಾಗಿ ಪ್ರಸ್ತಾಪಿಸಿದರು. ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣ, ಕನ್ನಡಿಗರ ಹಕ್ಕುಗಳು ಮತ್ತು ಕರ್ನಾಟಕದ ಸಮಗ್ರ ಅಭಿವೃದ್ಧಿಯ ಪರವಾಗಿ ಧ್ವನಿ ಎತ್ತಿದರು. ಹೋರಾಟ ಮತ್ತು ವಿಚಾರಧಾರೆಯ ಸಂಗಮಜಯದೇವಿ ತಾಯಿಯವರ ರಾಜಕೀಯ ಪಯಣವನ್ನು ಗಮನಿಸಿದಾಗ, ಅವರ ಬದುಕಿನಲ್ಲಿ ಕನ್ನಡದ ಮೇಲಿನ ಅಭಿಮಾನ, ಅಖಂಡ ಕರ್ನಾಟಕದ ಕನಸು ಮತ್ತು ಸಮಾಜವಾದಿ ವಿಚಾರಧಾರೆ ಒಂದಕ್ಕೊಂದು ಪೂರಕವಾಗಿ ಬೆಳೆದಿರುವುದು ಕಾಣಿಸುತ್ತದೆ.ಕಾಂಗ್ರೆಸ್ನಿಂದ ಹೊರಬಂದ ನಂತರ ಅವರು ಆಯ್ದುಕೊಂಡ ದಾರಿ ಸುಲಭವಾದದ್ದಾಗಿರಲಿಲ್ಲ. ಆದರೆ ಅಧಿಕಾರದ ರಾಜಕಾರಣಕ್ಕಿಂತ ತತ್ವ, ಜನಪರತೆ ಮತ್ತು ಸಾಮಾಜಿಕ ನ್ಯಾಯಕ್ಕೆ ಆದ್ಯತೆ ನೀಡಿದ ಬದುಕನ್ನು ಅವರು ಕಟ್ಟಿಕೊಂಡರು.ಹೀಗಾಗಿ ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ಕನಸನ್ನು ಹೊತ್ತ ಕನ್ನಡತಿ, ಸಮಾಜವಾದಿ ಚಿಂತನೆಯ ಹೋರಾಟಗಾರ್ತಿ ಮತ್ತು ಜನಪರ ಪ್ರತಿನಿಧಿಯಾಗಿ ಗುರುತಿಸುವುದು ಹೆಚ್ಚು ಸೂಕ್ತವಾಗಿದೆ. ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ-35 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಕರ್ನಾಟಕ ಏಕೀಕರಣ ಭಾಗ-35*ಕರ್ನಾಟಕ ಏಕೀಕರಣ* ಡಾ. ಜಯದೇವಿತಾಯಿಯವರು ಭಾರತದ ಅಖಂಡತೆಯನ್ನು ಸದಾ ಒಪ್ಪಿಕೊಂಡವರು.ಭಾರತವು ವಿವಿಧ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನು ಹೊಂದಿರುವ ವೈವಿಧ್ಯಮಯ ರಾಷ್ಟ್ರ. ಭಾಷೆಗಳು ಬೇರೆಬೇರೆಯಾಗಿದ್ದರೂ, ಅವೆಲ್ಲವೂ ಸೇರಿ ಭಾರತದ ಏಕತೆಯನ್ನು ರೂಪಿಸುತ್ತವೆ ಎಂಬ ನಂಬಿಕೆ ಅವರದ್ದಾಗಿತ್ತು. ಹಾಗೇನೆ ಅವರು ಭಾಷಾವಾರು ಪ್ರಾಂತ ರಚನೆಯನ್ನೂ ಬೆಂಬಲಿಸಿದರು. ಭಾಷಾವಾರು ಪ್ರಾಂತ ಎಂದರೆ ದೇಶವನ್ನು ವಿಭಜಿಸುವುದು ಎಂಬ ಅರ್ಥ ಅವರದ್ದಾಗಿರಲಿಲ್ಲ. ಬದಲಾಗಿ, ಒಂದೇ ಭಾಷೆಯನ್ನು ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಬಂದರೆ, ಆ ಭಾಷೆಯ ಅಭಿವೃದ್ಧಿ, ಸಂರಕ್ಷಣೆ ಮತ್ತು ಬೆಳವಣಿಗೆಗೆ ಹೆಚ್ಚಿನ ಅವಕಾಶ ದೊರೆಯುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು. ಆ ಕಾಲದಲ್ಲಿ ಕನ್ನಡ ಮಾತನಾಡುವ ಜನರು ವಿವಿಧ ಆಡಳಿತ ಪ್ರದೇಶಗಳಲ್ಲಿ ಚದುರಿಹೋಗಿದ್ದರು. ಇದರಿಂದ ಕನ್ನಡ ಭಾಷೆಯ ಶಿಕ್ಷಣ, ಸಾಹಿತ್ಯ, ಸಂಸ್ಕೃತಿ ಮತ್ತು ಆಡಳಿತದಲ್ಲಿ ಕನ್ನಡದ ಬಳಕೆಗೆ ಹಲವು ಅಡಚಣೆಗಳಿದ್ದವು. ಕನ್ನಡಿಗರ ಪ್ರದೇಶಗಳು ಒಂದಾದರೆ ಕನ್ನಡ ಶಾಲೆಗಳು ಬೆಳೆಯಲು, ಕನ್ನಡದಲ್ಲಿ ಶಿಕ್ಷಣ ದೊರೆಯಲು, ಕನ್ನಡ ಸಾಹಿತ್ಯ ಅಭಿವೃದ್ಧಿಯಾಗಲು ಮತ್ತು ಕನ್ನಡ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ ಎಂದು ಅವರು ನಂಬಿದ್ದರು.ಭಾಷೆಯನ್ನು ಉಳಿಸುವ ಉದ್ದೇಶದಿಂದಜಯದೇವಿತಾಯಿಯವರ ಭಾಷಾವಾರು ಪ್ರಾಂತದ ಬೆಂಬಲಿಸಿದರು..ಅಂತೆಯೇ ಅದರ ಹಿಂದೆ ಭಾಷಾಭಿಮಾನವಿತ್ತು…… ಭಾಷೆಯು ಒಂದು ಜನಾಂಗದ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಪರಂಪರೆ, ಜೀವನಶೈಲಿ ಮತ್ತು ಭಾವನೆಗಳ ವಾಹಕ. ಆದ್ದರಿಂದ ಒಂದು ಭಾಷೆಯನ್ನು ಉಳಿಸುವುದು ಎಂದರೆ ಅದರೊಂದಿಗೆ ಬೆಸೆದುಕೊಂಡಿರುವ ಸಂಪೂರ್ಣ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವುದಾಗಿದೆ.ಕನ್ನಡ ಭಾಷಿಕ ಪ್ರದೇಶಗಳು ಒಂದಾಗುವುದರಿಂದ ಕನ್ನಡಿಗರಲ್ಲಿ “ನಾವೆಲ್ಲರೂ ಒಂದೇ” ಎಂಬ ಭಾವನೆ ಬಲವಾಗುತ್ತದೆ. ಕನ್ನಡ ಶಾಲೆಗಳು, ಶಿಕ್ಷಣ ಸಂಸ್ಥೆಗಳು, ಸಾಹಿತ್ಯ ಚಟುವಟಿಕೆಗಳು ಮತ್ತು ಸಾಂಸ್ಕೃತಿಕ ಸಂಘಟನೆಗಳು ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ. ಇದರಿಂದ ಕನ್ನಡ ಭಾಷೆ ಮುಂದಿನ ಪೀಳಿಗೆಗೂ ಸುರಕ್ಷಿತವಾಗಿ ಸಾಗುತ್ತ ಬಂದಿತು ಜಯದೇವಿತಾಯಿಯವರ ವಿಚಾರದಲ್ಲಿ ಕರ್ನಾಟಕದ ಏಕೀಕರಣ ಮತ್ತು ಭಾರತದ ಅಖಂಡತೆ ಪರಸ್ಪರ ವಿರೋಧಿಗಳಲ್ಲ. ಕರ್ನಾಟಕ ಒಂದಾಗುವುದು ಭಾರತದೊಳಗೇ ಒಂದು ರಾಜ್ಯದ ಏಕೀಕರಣವೆಂದರೆ“ನಾಡು ಒಂದಾಗಲಿ, ಭಾಷೆ ಬೆಳೆಯಲಿ.. ಎಂಬ ಭಾವನೆ ಅವರ ಚಿಂತನೆಯಲ್ಲಿತ್ತು. ಅಖಂಡ ಕರ್ನಾಟಕ ಏಕೀಕರಣ ಆಗಷ್ಟೇ ಹುಟ್ಟಿಕೊಂಡಿದ್ದಾಗಿರಲಿಲ್ಲ …ಕೆಲವು ದಶಕಳ ನಿರಂತರ ಹೋರಾಟ ನಡೆದೇಯಿತ್ತು…. ೧೯೧೬,ರಲ್ಲಿ ಮೌಂಟೇಗ್ಯೂ ಚೆಮ್ಸ್ಫರ್ಡ್ ಭಾರತಕ್ಕೆ ಬಂದ ಸಂದರ್ಭದಲ್ಲಿ, ಉತ್ತರ ಕರ್ನಾಟಕದ ಪ್ರಮುಖ ವಿದ್ಯಾಸಂಸ್ಥೆಯಾಗಿದ್ದ *ವಿದ್ಯಾವರ್ಧಕ ಸಂಘವು* ಅವರಿಗೆ ಒಂದು ಬಿನ್ನಹ ಪತ್ರವನ್ನು ಸಲ್ಲಿಸಿತು.ಆ ಬಿನ್ನಹ ಪತ್ರದಲ್ಲಿ ಕನ್ನಡಿಗರ ಪ್ರಮುಖ ಸಮಸ್ಯೆಯನ್ನು ವಿವರಿಸಲಾಗಿತ್ತು. ಆಗ ಕನ್ನಡ ಮಾತನಾಡುವ ಜನರು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಕರ್ನಾಟಕದ ಕನ್ನಡ ಭಾಷಿಕ ಪ್ರದೇಶಗಳು ವಿವಿಧ ಪ್ರಾಂತಗಳು ಮತ್ತು ಸಂಸ್ಥಾನಗಳಲ್ಲಿ ಹಂಚಿಹೋಗಿದ್ದವು. ಇದರಿಂದ ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ ಮತ್ತು ಕನ್ನಡಿಗರ ಅಭಿವೃದ್ಧಿಗೆ ತೊಂದರೆಯಾಗುತ್ತಿತ್ತು. ಆದ್ದರಿಂದ ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸಬೇಕು ಮತ್ತು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ಸೇರಿಸಬೇಕು ಎಂದು ವಿದ್ಯಾವರ್ಧಕ ಸಂಘವು ಮನವಿ ಮಾಡಿತು. ಇದುವೇ ಮುಂದೆ ಕರ್ನಾಟಕ ಏಕೀಕರಣದ ಬೇಡಿಕೆಗೆ ಪ್ರಮುಖ ಬಲ ನೀಡಿತು.ಈ ಸಂದರ್ಭದಲ್ಲಿ ಭಾಷಾವಾರು ಪ್ರಾಂತ ರಚನೆಯ ವಿಚಾರದ ಬಗ್ಗೆ ಚರ್ಚೆ ನಡೆಯಿತು. ೧೯೧೭ರಲಿ ಮಹಾತ್ಮ ಗಾಂಧೀಜಿಯವರಿಗೆ ಮನವಿ ಸಲ್ಲಿಸಲಾಗಿತ್ತು.ಭಾಷೆಯ ಆಧಾರದ ಮೇಲೆ ಪ್ರಾಂತಗಳನ್ನು ರಚಿಸುವುದು ಸೂಕ್ತ ಎಂಬ ಅಭಿಪ್ರಾಯಕ್ಕೆ ಕಾಂಗ್ರೆಸ್ ಒಪ್ಪಿಗೆ ನೀಡಿತು. ಇದರಿಂದ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಪ್ರಾಂತದ ಅಡಿಯಲ್ಲಿ ತರಬೇಕು ಎಂಬ ಆಶಯಕ್ಕೆ ಮತ್ತಷ್ಟು ಬಲ ದೊರೆಯಿತು. ನಂತರ ಕರ್ನಾಟಕ ಏಕೀಕರಣಕ್ಕಾಗಿ ನಡೆದ ವಿವಿಧ ಸಭೆ, ಸಮ್ಮೇಳನ ಮತ್ತು ಮನವಿಗಳ ಮೂಲಕ “ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಬೇಕು” ಎಂಬ ಬೇಡಿಕೆ ನಿರಂತರವಾಗಿ ಮುಂದುವರಿಯಿತು.ಈ ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ *ಕರ್ನಾಟಕ ಏಕೀಕರಣ ಪರಿಷತ್ತು* ಸ್ಥಾಪಿಸಲಾಯಿತು. ಕರ್ನಾಟಕದ ವಿವಿಧ ಭಾಗಗಳ ಕನ್ನಡಿಗರನ್ನು ಒಂದುಗೂಡಿಸಿ, ಏಕೀಕರಣದ ಉದ್ದೇಶವನ್ನು ಜನರಲ್ಲಿ ಬಿತ್ತುವುದು ಮತ್ತು ಸರ್ಕಾರದ ಗಮನವನ್ನು ಸೆಳೆಯುವುದು ಈ ಪರಿಷತ್ತಿನ ಪ್ರಮುಖ ಉದ್ದೇಶವಾಗಿತ್ತು. ಕರ್ನಾಟಕ ಏಕೀಕರಣ ಪರಿಷತ್ತಿನ ಅಧಿವೇಶನಗಳು ಕೈಕೊಳ್ಳಲಾರಂಭಿಸಿದರು. ೧೯೨೪ ಡಿಸೆಂಬರ್ ೨೫ ರಂದು ಬೆಳಗಾವಿಯಲ್ಲಿ ಮೊದಲ ಅಧಿವೇಶನ ನಡೆಯಿತು.ಅಧಿವೇಶನದ ಅಧ್ಯಕ್ಷರು ಸಿದ್ಧಪ್ಪ ಕಂಬಳಿ ಅವರುವಹಿಸಿದ್ದರು….ಈ ಅಧಿವೇಶನದಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸುವ ಅಗತ್ಯದ ಬಗ್ಗೆ ಚರ್ಚಿಸಲಾಯಿತು. ಕನ್ನಡಿಗರಲ್ಲಿ ಏಕತೆಯ ಭಾವನೆ ಮೂಡಿಸುವುದು ಮತ್ತು ಏಕೀಕರಣದ ಹೋರಾಟವನ್ನು ಬಲಪಡಿಸುವ ಬಗ್ಗೆ ಚಿಂತನೆ ನಡೆಯಿತು.೧೯೨೬ರಲಿ ಜರುಗಿದ ಎರಡನೇ ಅಧಿವೇಶನಕ್ಕೆ ಪಟ್ಟಾಭಿ ಸೀತಾರಾಮಯ್ಯ ಅವರು ಅಧ್ಯಕ್ಷತೆ ವಹಿಸಿದ್ದರು.ಈ ಅಧಿವೇಶನದ ಮೂಲಕವೂ ಕನ್ನಡ ಪ್ರದೇಶಗಳ ಏಕೀಕರಣದ ಬೇಡಿಕೆಯನ್ನು ಮತ್ತಷ್ಟು ಬಲವಾಗಿ ಮುಂದಿಡಲಾಯಿತು. ಕರ್ನಾಟಕದ ವಿವಿಧ ಭಾಗಗಳ ನಾಯಕರು ಹಾಗೂ ಹೋರಾಟಗಾರರು ಈ ವಿಚಾರದಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಲು ಮುಂದಾದರು. ೧೯೨೮ರ ಮೂರನೇ ಅಧಿವೇಶನವು ಧಾರವಾಡದಲ್ಲಿ ನಡೆಯಿತು.ಇದಕ್ಕೆ ಫ. ಗು. ಹಳಕಟ್ಟಿಯವರು ಅಧ್ಯಕ್ಷತೆ ವಹಿಸಿದ್ದರು. ಧಾರವಾಡವು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಕೇಂದ್ರವಾಗಿ ಬೆಳೆಯಲು ಈ ರೀತಿಯ ಸಭೆಗಳು ಸಹಾಯ ಮಾಡಿದವು.ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಅದರ ಶಾಖೆಗಳು ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಸ್ಥಾಪನೆಯಾದವು. ಇದರ ಮೂಲಕ ಏಕೀಕರಣದ ಸಂದೇಶವು ಗ್ರಾಮ, ಪಟ್ಟಣ ಮತ್ತು ವಿವಿಧ ಕನ್ನಡ ಪ್ರದೇಶಗಳಿಗೆ ತಲುಪಿತು. ಜನರಲ್ಲಿ “ನಾವೆಲ್ಲರೂ ಕನ್ನಡಿಗರು, ನಮ್ಮ ನಾಡು ಒಂದಾಗಬೇಕು” ಎಂಬ ಭಾವನೆ ಗಟ್ಟಿಯಾಯಿತು.ಈ ಚಳವಳಿಯ ಪ್ರಮುಖ ನಾಯಕರಲ್ಲಿ ಆಲೂರು ವೆಂಕಟರಾಯರು, ಕಡಪ ರಾಘವೇಂದ್ರರಾಯರು, ಮುದವೀಡು ಕೃಷ್ಣರಾಯರು, ನರಗುಂದಾರಾಯಣ ದೇಶಪಾಂಡೆ ಮುಂತಾದವರು ಪ್ರಮುಖರಾಗಿದ್ದರು. ಇವರು ಕನ್ನಡಿಗರನ್ನು ಸಂಘಟಿಸಿ, ಕರ್ನಾಟಕದ ಏಕೀಕರಣಕ್ಕಾಗಿ ನಿರಂತರವಾಗಿ ಶ್ರಮಿಸಿದರು. ವಿದ್ಯಾವರ್ಧಕ ಸಂಘದಂತಹ ಸಂಸ್ಥೆಗಳು, ಕಾಂಗ್ರೆಸ್ನ ಭಾಷಾವಾರು ಪ್ರಾಂತದ ಪರವಾದ ನಿಲುವು, ಕರ್ನಾಟಕ ಏಕೀಕರಣ ಪರಿಷತ್ತು ಮತ್ತು ಕನ್ನಡ ಮಾತೆಯ ಮಕ್ಕಳ ನಿರಂತರ ಪ್ರಯತ್ನಗಳು ಮುಂದೆ ಕರ್ನಾಟಕ ಏಕೀಕರಣಕ್ಕೆ ಭದ್ರವಾದ ಅಡಿಪಾಯವನ್ನು ಹಾಕಿದವು. ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ-34 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದಮಹಾನ್ ಚೇತನ ರಾಷ್ಟ್ರ ಐಕ್ಯತೆ -ಅಖಂಡ ಭಾರತ *ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶವನ್ನು ಭಾಷಾವಾರು ಪ್ರಾಂತಗಳಾಗಿ ಪುನರ್ರಚಿಸುವ ಬೇಡಿಕೆ ಬಲವಾಗಿತ್ತು. ಕನ್ನಡಿಗರು ಕೂಡ ಎಲ್ಲ ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕವನ್ನು ನಿರ್ಮಿಸಬೇಕು ಎಂದು ಹೋರಾಟ ನಡೆಸುತ್ತಿದ್ದರು. ಆದರೆ ಆ ಸಂದರ್ಭದಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಅತ್ಯಂತ ಸೂಕ್ಷ್ಮವಾಗಿತ್ತು. ಒಂದೆಡೆ ಪಾಕಿಸ್ತಾನದ ವಿಭಜನೆಯ ಪರಿಣಾಮಗಳು, ಮತ್ತೊಂದೆಡೆ ಬಂಗಾಳದ ವಿಭಜನೆ ಮತ್ತು ಗಡಿಭಾಗದ ಸಮಸ್ಯೆಗಳು, ಇನ್ನೊಂದೆಡೆ ಗೋವಾ ವಿಮೋಚನೆಗಾಗಿ ಹೋರಾಟ ನಡೆದಿದ್ದವು.ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದ್ದ ರಾಜಕೀಯ ಅಶಾಂತಿ. ಇವೆಲ್ಲವೂ ಭಾರತದ ಏಕತೆಗೆ ಸವಾಲಾಗಿದ್ದವು.ಇಂತಹ ಸಂದರ್ಭಗಳಲ್ಲಿ ಕೇವಲ ಭಾಷೆಯ ಆಧಾರದ ಮೇಲೆ ಪರಸ್ಪರ ಸಂಘರ್ಷ ಮಾಡುವುದು ದೇಶದ ಹಿತಕ್ಕೆ ಮಾರಕವಾಗಬಹುದು ಎಂಬುದು ಜಯದೇವಿ ತಾಯಿಯವರ ಚಿಂತನೆಯಾಗಿತ್ತು .ಭಾರತ ಸ್ವಾತಂತ್ರ್ಯ ಪಡೆದ ನಂತರ ದೇಶದ ಗಡಿಗಳು, ರಾಷ್ಟ್ರೀಯ ಏಕತೆ, ಪ್ರಾದೇಶಿಕ ಸಮಸ್ಯೆಗಳು ಮತ್ತು ಜನರ ಭದ್ರತೆ ಮುಂತಾದ ಅನೇಕ ಪ್ರಶ್ನೆಗಳು ಎದುರಾಗಿದ್ದವು.ಇಂತಹ ಸಮಯದಲ್ಲಿ “ನನ್ನ ಭಾಷೆ ಶ್ರೇಷ್ಠ, ನಿನ್ನ ಭಾಷೆ ಕಡಿಮೆ” ಎಂಬ ರೀತಿಯ ಭಾಷಾ ವೈಷಮ್ಯ ಬೆಳೆಸಿದರೆ, ಅದು ದೇಶದ ಒಗ್ಗಟ್ಟನ್ನು ದುರ್ಬಲಗೊಳಿಸುತ್ತದೆ. ಆದ್ದರಿಂದ ಭಾಷೆ ನಮ್ಮ ಅಭಿಮಾನ ಮತ್ತು ಸಂಸ್ಕೃತಿಯ ಸಂಕೇತವಾಗಿರಬೇಕು….ಸಂಘರ್ಷದ ಕಾರಣವಾಗಬಾರದು ಎಂಬ ಸಂದೇಶವನ್ನು ಅವರು ನೀಡಿದರು.ಭಾಷೆ ಮುಖ್ಯ, ಆದರೆ ದೇಶದ ಏಕತೆ ಇನ್ನೂ ಮುಖ್ಯ ಎಂದರು. ಕನ್ನಡಿಗರಿಗೆ ತಮ್ಮದೇ ಆದ ಏಕೀಕೃತ ಕರ್ನಾಟಕ ಬೇಕು.ಕನ್ನಡ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯವನ್ನು ಉಳಿಸಬೇಕು……ಆದರೆ ಅದಕ್ಕಾಗಿ ಇತರ ಭಾಷೆಯ ಜನರನ್ನು ದ್ವೇಷಿಸಬಾರದು.ಭಾಷೆಯ ಹೆಸರಿನಲ್ಲಿ ಜಗಳ, ದ್ವೇಷ ಮತ್ತು ವಿಭಜನೆ ಉಂಟಾಗಬಾರದು. ಎಲ್ಲಕ್ಕಿಂತ ಮೊದಲು ನಾವು ಭಾರತೀಯರು ಎಂಬ ರಾಷ್ಟ್ರೀಯ ಭಾವನೆ ಇರಬೇಕು.ಅಂದರೆ “ಕನ್ನಡವನ್ನು ಪ್ರೀತಿಸಿ, ಆದರೆ ಇತರ ಭಾಷೆಗಳನ್ನು ದ್ವೇಷಿಸಬೇಡಿ” ಎಂಬ ಉದಾತ್ತ ಚಿಂತನೆ ಅವರ ಮಾತಿನಲ್ಲಿ ಕಾಣಿಸುತ್ತದೆ. “ದೇಶದ ಐಕ್ಯತೆಯ ಅಸ್ಮಿತೆಯನ್ನು ಉಳಿಸಿಕೊಳ್ಳುವುದು ಮುಖ್ಯ” ದೇಶದ ಸ್ವಾಭಿಮಾನ, ರಾಷ್ಟ್ರೀಯ ಏಕತೆ, ಸಾರ್ವಭೌಮತ್ವ ಮತ್ತು ಒಗ್ಗಟ್ಟು.ದೇಶವು ಹೊರಗಿನ ಮತ್ತು ಒಳಗಿನ ಹಲವು ಸವಾಲುಗಳನ್ನು ಎದುರಿಸುತ್ತಿರುವಾಗ, ಜನರು ಸಣ್ಣ-ಪುಟ್ಟ ಭಿನ್ನಾಭಿಪ್ರಾಯಗಳಲ್ಲಿ ಸಿಲುಕಿಕೊಳ್ಳದೆ ರಾಷ್ಟ್ರದ ಹಿತವನ್ನು ಮೊದಲ ಸ್ಥಾನದಲ್ಲಿ ಇಡಬೇಕು ಎಂದು ಅವರು ತಿಳಿಸಿದರು. ಒಂದು ಮನೆಯಲ್ಲಿರುವವರು ಬೇರೆ ಬೇರೆ ಅಭಿಪ್ರಾಯ ಹೊಂದಿದ್ದರೂ ಮನೆ ಒಂದಾಗಿರುವುದು ಮುಖ್ಯ. ಅದೇ ರೀತಿ ಭಾರತದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮರಾಠಿ, ಬಂಗಾಳಿ ಮುಂತಾದ ಅನೇಕ ಭಾಷೆಗಳನ್ನು ಮಾತನಾಡುವ ಜನರಿದ್ದರೂ ಭಾರತ ಎಂಬ ರಾಷ್ಟ್ರದ ಏಕತೆ ಉಳಿಯುವುದು ಅತ್ಯಂತ ಮುಖ್ಯ.”ಎಂದು ತಮ್ಮ ಭಾಷಣದಲ್ಲಿ ಹೇಳುತಿದ್ದರು. ಜಯದೇವಿ ತಾಯಿಯವರ ಚಿಂತನೆ ಇಂದಿಗೂ ಬಹಳ ಪ್ರಸ್ತುತವಾಗಿದೆ. ಭಾಷೆ ನಮ್ಮ ಗುರುತು, ನಮ್ಮ ಸಂಸ್ಕೃತಿ, ನಮ್ಮ ಇತಿಹಾಸ. ಅದನ್ನು ಗೌರವಿಸಬೇಕು ಮತ್ತು ಬೆಳೆಸಬೇಕು. ಆದರೆ ಭಾಷೆಯ ಹೆಸರಿನಲ್ಲಿ ಮತ್ತೊಬ್ಬರನ್ನು ಕೀಳಾಗಿ ಕಾಣುವುದು ಅಥವಾ ದ್ವೇಷಿಸುವುದು ಸರಿಯಲ್ಲ.ಭಾಷಾ ವೈವಿಧ್ಯತೆ ಭಾರತದ ಶಕ್ತಿ….ರಾಷ್ಟ್ರೀಯ ಏಕತೆ ಭಾರತದ ಅಸ್ತಿತ್ವ. “ಭಾಷೆಯನ್ನು ಪ್ರೀತಿಸೋಣ, ಭಾಷಾ ಸಂಸ್ಕೃತಿಯನ್ನು ಉಳಿಸೋಣ…”ಎನ್ನುವರು. ಇದು ಕರ್ನಾಟಕ ಏಕೀಕರಣದ ಹೋರಾಟದಲ್ಲಿದ್ದರೂ ವಿಶಾಲವಾದ ಭಾರತೀಯ ರಾಷ್ಟ್ರೀಯತೆಯನ್ನು ಮರೆಯದ ಜಯದೇವಿ ತಾಯಿಯವರ ದೂರದೃಷ್ಟಿಯನ್ನು ತೋರಿಸುತ್ತದೆ. ಪಾಕಿಸ್ತಾನದವರು ಬಂಗಾಲದ ಅಲ್ಪಸಂಖ್ಯಾತರ ಮೇಲೆ ಎರಡು ತಿಂಗಳ ಕಾಲ ಹವ್ಯಾಹಾತವಾಗಿ ಸತತ ಆಕ್ರಮಣ ಮಾಡಿದರು ಇಂತಹ ಅಮಾನುಷ ಘಟನೆಯನ್ನು ಪ್ರತಿಭಟಿಸಿ ಅಲ್ಲಲ್ಲಿ ಸಭೆಗಳು ನಡೆದವು ಸೊಲ್ಲಾಪುರದಲ್ಲಿಯೂ ಸರ್ವ ಪಕ್ಷಿಯ ಬಹಿರಂಗ ಸಭೆ ನಡೆಯಿತು ಈ ಸಭೆಗೆ ಸ್ತ್ರೀ ಪುರುಷರು ಬಹುಸಂಖ್ಯಾದಲ್ಲಿ ಉಪಸ್ಥಿತರಿದ್ದರು ಜಯದೇವಿ ತಾಯಿಯವರು ಮಾಡಿದ ಭಾಷಣ ಬಹಳ ಪ್ರಭಾವ ಬೀರಿತ್ತು ಎಲ್ಲ ಪತ್ರಿಕೆಗಳಲ್ಲಿ ವರದಿಯಾದವು. ಬಂಗಾಳದಲ್ಲಿ ನಡೆದ ಅಮಾನುಷ ಹಿಂಸಾಚಾರವನ್ನು ಕಂಡು ಅನುಭವಿಸಿದ ಆಘಾತ, ನೋವು, ಆಕ್ರೋಶ ಮತ್ತು ಮಾನವೀಯ ಕಳಕಳಿ ಅತ್ಯಂತ ತೀವ್ರವಾಗಿ ವ್ಯಕ್ತಪಡಿಸಿದ್ದಾರೆ. “ಬೆಂದಿದೆ ಬಂಗಾಲ” ಕವನ ರಚನೆ ಮಾಡಿದರು*“ಬೆಂದಿದೆ ಬಂಗಾಲ”*“ಹಳ್ಳಿ ಪಟ್ಟಣಗಳು ಸುಟ್ಟು ಬೂದಿ ಮಾಡಿದರು,ಹೆಣಗಳ ರಾಶಿಯೊಟ್ಟಿದರು”“ಕಾಮಾಂಧರು ಕೋಮಲಾಂಗಿಯರ ಶೀಲಸೂರೆಗೈದರು”ಏನಿದ್ದ ಹೊಂಗನಾಡು? ಏನಾಯಿತು?”ಭಾರತೀಯರ ಬಂಗಾಳಿಗಳ ನರನಾಡಿಲಿ ಹರಿವರಕ್ತ ನೀರಾಯಿತೇ……….!!! ಈ ಸಾಲುಗಳಲ್ಲಿ ಬಂಗಾಳದಲ್ಲಿ ನಡೆದ ಭೀಕರ ಹಿಂಸಾಚಾರದ ಚಿತ್ರಣವಿದೆ. ಜನರು ನೆಮ್ಮದಿಯಿಂದ ಬದುಕುತ್ತಿದ್ದ ಹಳ್ಳಿಗಳು ಮತ್ತು ಪಟ್ಟಣಗಳು ಬೆಂಕಿಗೆ ಆಹುತಿಯಾಗಿ ನಾಶವಾದವು. ಜೀವಂತ ಜನರ ವಾಸಸ್ಥಳಗಳು ಸುಟ್ಟು ಬೂದಿಯಾದವು. ಎಲ್ಲೆಡೆ ಸಾವು-ನೋವು ತುಂಬಿ, ಹೆಣಗಳ ರಾಶಿ ಕಾಣುವಂತಹ ದಾರುಣ ಪರಿಸ್ಥಿತಿ ನಿರ್ಮಾಣವಾಯಿತು ಎಂದು ಕವಯಿತ್ರಿ ನೋವಿನಿಂದ ಹೇಳುತ್ತಾರೆ.ಹಿಂಸಾಚಾರಕ್ಕೆ ಬಲಿಯಾದ ಮಹಿಳೆಯರ ದುಸ್ಥಿತಿಯನ್ನು ಚಿತ್ರಿಸಿದ್ದಾರೆ. ಯುದ್ಧ, ಕೋಮು ಹಿಂಸೆ ಅಥವಾ ರಾಜಕೀಯ ಸಂಘರ್ಷದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯವು ಅತ್ಯಂತ ಅಮಾನುಷವಾದದ್ದು. ಇಂತಹ ಘಟನೆಗಳು ಅವರ ಮನಸ್ಸನ್ನು ತೀವ್ರವಾಗಿ ಘಾಸಿಗೊಳಿಸಿವೆ. ಮಹಿಳೆಯರ ಗೌರವ ಮತ್ತು ಮಾನವೀಯತೆಯನ್ನೇ ತುಳಿದುಹಾಕಿದ ಕ್ರೌರ್ಯವನ್ನು ಅವರು ಖಂಡಿಸಿದ್ದಾರೆ. ಈ ಪ್ರಶ್ನೆಗಳಲ್ಲಿ ಕವಯಿತ್ರಿಯ ತಳಮಹ, ದುಃಖ ಮತ್ತು ಅಸಹಾಯಕತೆ ವ್ಯಕ್ತವಾಗುತ್ತದೆ. ಒಮ್ಮೆ ಸಮೃದ್ಧಿ, ಸೌಂದರ್ಯ ಮತ್ತು ಸಾಂಸ್ಕೃತಿಕ ವೈಭವದಿಂದ ಕೂಡಿದ್ದ ಬಂಗಾಳವು ಇಂತಹ ರಕ್ತಪಾತದ ನೆಲವಾಗಿ ಹೇಗೆ ಬದಲಾಯಿತು? ಜನರು ಪರಸ್ಪರ ಪ್ರೀತಿ ಮತ್ತು ಸಹಬಾಳ್ವೆಯಿಂದ ಬದುಕುತ್ತಿದ್ದ ನಾಡಿನಲ್ಲಿ ಇಷ್ಟೊಂದು ದ್ವೇಷ ಮತ್ತು ಹಿಂಸೆ ಹೇಗೆ ಹುಟ್ಟಿತು? ಎಂಬ ಪ್ರಶ್ನೆಯ ಕೇಳಿದರು.ಇದು ಕೇವಲ ಬಂಗಾಳದ ದುಃಖವಲ್ಲ ಇಡೀ ಮಾನವ ಸಮಾಜದ ಅಧಃಪತನದ ಬಗ್ಗೆ ಅವರಿಗೆ ಆತಂಕವಿತ್ತು. *ಜಾತಿ ಸೂತಕವಳಿದು ನೀತಿಯೇ ಹಿರಿದೆಂದು ಪ್ರೀತಿಯಿಂದ ಎಲ್ಲರನ್ನು ಕಾಣುತ ಇರಬೇಕುಪತಿತ ಪಾವನ ನೀವು ನಾವಾಗಬೇಕು* ಮತವು ಮನುಷ್ಯನಿಗೆ ನೀತಿ, ದಯೆ, ಪ್ರೀತಿ ಮತ್ತು ಸಹಬಾಳ್ವೆ ಕಲಿಸಬೇಕೇ ಹೊರತು ದ್ವೇಷ ಮತ್ತು ಹಿಂಸೆಯನ್ನು ಕಲಿಸಬಾರದು. ಆದರೆ ಮತದ ಹೆಸರಿನಲ್ಲಿ ಮನುಷ್ಯನೇ ಮನುಷ್ಯನ ಶತ್ರುವಾದಾಗ, ಧರ್ಮದ ನಿಜವಾದ ಉದ್ದೇಶವೇ ನಾಶವಾಗುತ್ತದೆ… ಬಂಗಾಳಿಗಳ ಮೇಲೆ ನಡೆದ ಹತ್ಯಾಕಾಂಡದ ತೀವ್ರತೆಯನ್ನು ವ್ಯಕ್ತಪಡಿಸುತ್ತಾರೆ. “ಬೆಂದಿದೆ ಬಂಗಾಲ” ಪದ್ಯದಲ್ಲಿ ಜಯದೇವಿ ತಾಯಿಯವರು ಮೂರು ಪ್ರಮುಖ ವಿಚಾರಗಳನ್ನು ಅತ್ಯಂತ ಗಾಢವಾಗಿ ವ್ಯಕ್ತಪಡಿಸಿದ್ದಾರೆಹಿಂಸಾಚಾರ ಮತ್ತು ಹತ್ಯಾಕಾಂಡದ ವಿರುದ್ಧದ ತೀವ್ರ ಪ್ರತಿಭಟನೆ ಕೋಮು ದ್ವೇಷದ ವಿರುದ್ಧದ ಎಚ್ಚರಿಕೆ.ಶಾಂತಿ, ಸಹೋದರತ್ವ ಮತ್ತು ಮಾನವೀಯತೆಯ ಪರವಾದ ದೃಢವಾದ ನಿಲುವು.ಹೀಗಾಗಿ ಈ ಪದ್ಯವನ್ನು ಬಂಗಾಳದ ದುರಂತದ ವರ್ಣನೆ ಆದರೂ ಇದು “ಧರ್ಮ ಮನುಷ್ಯನನ್ನು ಮನುಷ್ಯನಿಂದ ದೂರ ಮಾಡಬಾರದು…. ಮಾನವೀಯತೆಯೇ ಎಲ್ಲಕ್ಕಿಂತ ದೊಡ್ಡ ಧರ್ಮ” ಎಂಬ ಜಯದೇವಿ ತಾಯಿಯವರ ಉದಾತ್ತ ಸಂದೇಶವನ್ನು ಸಾರುವ ಕವನವಾಗಿದೆ. ಇನ್ನೊಂದೆಡೆ ಭಾರತೀಯರ ಮೇಲೆ ಚೀನಿಯರು ಅಕ್ರಮಣ ನಡೆಯಿತು ಆ ಹೊತ್ತಿಗೆ ಈ ದೇಶದಲ್ಲಿ ಹಲವಾರು ಆಂತರಿಕ ಸಮಸ್ಯೆಗಳು ಎದಿದ್ದವು ಅದನ್ನೇ ದೊಡ್ಡದು ಮಾಡದೇ ದೇಶದ ಭದ್ರತೆಯ ಕಡೆಗೆ ಗಮನವಿಡಲು ಕರೆಕೊಟ್ಟರು .ಗಡಿ ವಿವಾದದ ಮಧ್ಯೆ ಭಾಷಾವಾರು ಪ್ರಾಂತದ ಚಳುವಳಿ ಬೇಡವೆಂದು ಜನತೆಗೆ ಮನವಿ ಮಾಡಿದರು. ರಾಜಕಾರಣಿಗಳು ಇಂಥ ಅವಕಾಶವನ್ನು ದುರುಪಯೋಗ ಪಡಿಸಿ ಕೊಳ್ಳಬಾರದು ಎಂದು ಎಚ್ಚರಿಕೆ ಕೊಟ್ಟರು ರಾಜ್ಯಕ್ಕಿಂತ ರಾಷ್ಟ್ರ ಚಿಂತೆ ಮುಖ್ಯ ಪರಸ್ಥಿತಿಯನ್ನು ಕೆಡದಂತೆ ನೋಡಿಕೊಳ್ಳಲು ಮುನ್ನೆಚ್ಚರಿಕೆ ವಹಿಸಲು ಹೇಳಿದರು. ಇನ್ನೊಂದಡೆ ಗೋವಾ ದೀವ ದಮನ ಪ್ರದೇಶಗಳು ಪೋರ್ಚುಗೀಸರ ವಶವಾಗಿದ್ದವು ದೇಶ ಬಾಂಧವರು ಪರಕೀಯರ ಕೈಯಲ್ಲಿ ತೊಳಲಾಡುವುದು ಹೇಳಿದರು ಶಾಂತಿ ರೀತಿಯ ಹೋರಾಟಕ್ಕೆ ಬೆಂಬಲ ಸೂ ಭಾಷಿಕವಾಗಿ ಮತ್ತು ಸಂಸ್ಕೃತಿಕವಾಗಿ ಕರ್ನಾಟಕಕ್ಕೆ ಉಳಿಸಿಕೊಳ್ಳುವುದು ಸೂಕ್ತ ಪ್ರಯತ್ನಗಳು ಸಾಗಬೇಕು ಮುಂದೋರಣೆಯಿಂದ ಕಾರ್ಯಾಚರಣೆ ಚಟುವಟಿಕೆ ತೊಡಗಬೇಕು ಗತ ವ್ಯುಭವದ ಮೈಸೂರು ಮಹಾರಾಷ್ಟ್ರ ಗಡಿ ಸಮಸ್ಯೆಯನ್ನು ನಿರ್ವಹಿಸಿದ ಹೊರತು ಅಧಿಕಾರದಲ್ಲಿ ಮುಂದುವರಿಯಲು ನಮ್ಮ ಮುಖಂಡರಿಗೆ ಯಾವ ನೈತಿಕ ಬಲವೂ ಇಲ್ಲ ತಮ್ಮ ಹೇಳಿಕೆಗಳ ಚಾಟಿ ಏಟಿನಿಂದ ಹೀಗೆ ಖಂಡನೆ ಮೇಲಿಂದ ಮೇಲೆ ಮಾಡುತ್ತಿದ್ದರು. ಮಹಾರಾಷ್ಟ್ರವೂ ಗೋವಾ ತನಗೆ ಬೇಕೆಂದು ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲಿಸಲು ಕೇಳಿ ಕೊಂಡಿತ್ತು.ಕರ್ನಾಟಕವು ತನಗೆ ಬೇಕೆಂದು ಬೇಡಿಕೆ ಮುಂದಿಟ್ಟಿತ್ತು .ಅಖಂಡ ಕರ್ನಾಟಕ ಏಕೀಕರಣ ಸಂಘದ ಉಪಾಧ್ಯಕ್ಷರಾಗಿ ಜಯದೇವಿ, ತಾಯಿಯವರು ಮೈಸೂರು ಗೋವಾ ಸಂಸ್ಕೃತಿಕ ಸಂಬಂಧ ಅಭಿವೃದ್ಧಿ ಸಮಿತಿಯ ಸದಸ್ಯರಾದ ಶ್ರೀ ಎಚ್ಎಫ್ ಕಟ್ಟಿಮನಿ ಮಾಸ್ತರು ,ಎಸ್ ನಿಜಲಿಂಗಪ್ಪ ,ಕೆ ಎಸ್ ಪಾಟೀಲ ಇವರೆಲ್ಲರೂ ಗೋವೆಯನ್ನು ಕರ್ನಾಟಕಕ್ಕೆ ಪಡೆಯುವ ಹೋರಾಟದಲ್ಲಿ ಪಾಲ್ಗೊಂಡಿದ್ದರು. ತಾಯಿಯವರು ಸೊಲ್ಲಾಪುರ ಸಹಿತ ಅಖಂಡ ಕರ್ನಾಟಕ ಏಕೀಕರಣದ ಕನಸನ್ನು ಹೊತ್ತಿದ್ದರು. ಜೊತೆ ಜೊತೆಗೆ ಅವರು ಯಾವಾಗಲೂ ರಾಷ್ಟ್ರದ ಐಕ್ಯತೆ ಮತ್ತು ಅಖಂಡ ಭಾರತದ ಕನಸು ಜಯದೇವಿ ತಾಯಿಯವರ ಹೃದಯದಲ್ಲಿ ಸದಾ ಧಗಧಗಿಸುವ ಜ್ವಾಲೆಯಂತಿತ್ತು. ಜಾತಿ, ಮತ, ಭಾಷೆ, ಪ್ರಾಂತಗಳ ಎಲ್ಲ ಭೇದಭಾವಗಳನ್ನು ಮೀರಿ, “ನಾವು ಭಾರತೀಯರು” ಎಂಬ ಏಕೈಕ ಭಾವನೆಯೇ ರಾಷ್ಟ್ರದ ನಿಜವಾದ ಶಕ್ತಿ ಎಂಬ ಅಚಲ ನಂಬಿಕೆಯಿಂದ ಅವರು ತಮ್ಮ ಬದುಕನ್ನು ರಾಷ್ಟ್ರಸೇವೆಗೆ ಸಮರ್ಪಿಸಿಕೊಂಡರು.ದೇಶದ ಏಕತೆ ಹೃದಯಗಳ ಸಂಗಮ, ಭಾವನೆಗಳ ಸಮನ್ವಯ ಮತ್ತು ರಾಷ್ಟ್ರಪ್ರೇಮದ ಅಖಂಡ ಸಂಕಲ್ಪ ಎಂಬುದನ್ನು ಅವರು ತಮ್ಮ ಕಾರ್ಯದ ಮೂಲಕ ಸಾರಿದರು. ವಿಭಜನೆಯ ವಿಷಬೀಜಗಳು ಮೊಳಕೆಯೊಡೆಯುತ್ತಿದ್ದ ಸಂದರ್ಭದಲ್ಲಿಯೂ, ಜನಮನಗಳಲ್ಲಿ ದೇಶಪ್ರೇಮದ ಕಿಡಿಯನ್ನು ಹೊತ್ತಿಸಿ, ಒಗ್ಗಟ್ಟಿನ ಜ್ಯೋತಿಯನ್ನು ಬೆಳಗಿಸುವಲ್ಲಿ ಅವರು ನಿರಂತರವಾಗಿ ಶ್ರಮಿಸಿದರು. ಜಯದೇವಿ ತಾಯಿಯವರ ಜೀವನ ನಮಗೆ ಸಾರುವ ಸಂದೇಶ ಒಂದೇ….ಭಾರತದ ಅಖಂಡತೆ ನಮ್ಮ ಹೆಮ್ಮೆ, ರಾಷ್ಟ್ರದ ಐಕ್ಯತೆ ನಮ್ಮ ಹೊಣೆ, ದೇಶಪ್ರೇಮ ನಮ್ಮ ಪರಮ ಕರ್ತವ್ಯ. ತಾಯಿನಾಡು ನುಡಿ ನಮ್ಮ ಗೌರವ ಎಂದು ಸಾರಿದರು.ರಾಷ್ಟ್ರಕ್ಕಾಗಿ ಸಮರ್ಪಿತವಾದ ಅವರ ಜೀವನ ಸದಾಕಾಲವೂ ದೇಶಭಕ್ತಿಯ ದಾರಿಯಲ್ಲಿ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಉಳಿಯುತ್ತದೆ. ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯಕೊಡುಗೆ ನೀಡಿದ ಮಹಾನ್ ಚೇತನ ಸೊಲ್ಲಾಪುರದಿಂದ ದೆಹಲಿಯವರೆಗೆ *ಜವಾಹರ ನೆಹರು ಪಂಡಿತರಿಗೆ ನುಡದೇವಅವರವರ ನುಡಿಯಲಿ ರಾಜ್ಯವ, ನಡೆಯಲಿ ಅವಿಭಾಜ್ಯ ಭಾರತಕೆ ಬಲ ಬರಲಿ||*ಡಾ.ಜಯದೇವಿತಾಯಿ ೧೯೫೨ರ ಸಮಯ…… ಸಾರ್ವತ್ರಿಕ ಚುನಾವಣೆಯ ನಂತರ ವರ್ಷದ ಅಂತ್ಯದವರೆಗೂ ಆಂಧ್ರ ಮತ್ತು ಕರ್ನಾಟಕವನ್ನು ಪ್ರತ್ಯೇಕ ಪ್ರಾಂತ್ಯಗಳಾಗಿ ರಚಿಸಬೇಕು ಎಂಬ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿತ್ತು. ಆರಂಭದಲ್ಲಿ ಮನವಿ, ಅರ್ಜಿ ಮತ್ತು ವಿನಂತಿಗಳ ಮೂಲಕ ಬೇಡಿಕೆಯನ್ನು ವ್ಯಕ್ತಪಡಿಸುತ್ತಿದ್ದರೂ, ನಂತರ ಹೋರಾಟ ಮತ್ತು ಪ್ರತಿಭಟನೆಯಂತಹ ಕಾರ್ಯಾಚರಣೆಗಳು ಆರಂಭವಾದವು.ಆಂಧ್ರದ ಪ್ರತ್ಯೇಕ ರಾಜ್ಯಕ್ಕಾಗಿ ಪೊಟ್ಟಿ ಶ್ರೀರಾಮುಲು ಅವರು ಅನಿರ್ದಿಷ್ಟ ಉಪವಾಸ ಸತ್ಯಾಗ್ರಹ ಆರಂಭಿಸಿದರು. ದೀರ್ಘಕಾಲ ೬೮ ದಿನ ಉಪವಾಸ ಮಾಡಿದರು ….೬೮ ನೆ ದಿನ ಅವರು ನಿಧನರಾದರು. ಅವರ ಸಾವಿನಿಂದ ಆಂಧ್ರದಲ್ಲಿ ತೀವ್ರ ಪ್ರತಿಭಟನೆಗಳು ನಡೆದವು. ಇದರಿಂದ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೆಚ್ಚಾಯಿತು.ಹೈದರಾಬಾದನ ನಾನಲ ನಗರದಲ್ಲಿ ನಡೆದ ಅಧಿವೇಶನದಲ್ಲಿ ಅಖಿಲ ಭಾರತ ಕಾಂಗ್ರೆಸ ಸಮಿತಿಯು ಆಂಧ್ರ ಪ್ರಾಂತ್ಯ ರಚನೆಯ ಬೇಡಿಕೆಯನ್ನು ಪರಿಗಣಿಸಿತು. ನಂತರ ಪ್ರಧಾನಿ ನೆಹರು ಸಂಸತ್ತಿನ ಡಿಸೆಂಬರ ಅಧಿವೇಶನದಲ್ಲಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಆದರೆ ಕರ್ನಾಟಕದ ಬಗ್ಗೆ ಯಾವ ಮಾತನ್ನು ಅವರು ಎತ್ತಲಿಲ್ಲ. ಅದರ ಪರಿಣಾಮವಾಗಿ ಮಾರ್ಚ್ನಲ್ಲಿ ಪ್ರತ್ಯೇಕ ಆಂಧ್ರ ಪ್ರಾಂತ್ಯ ರಚನೆಯ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಲಾಯಿತು. ಆದರೆ ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ್ಯ ರಚನೆಯ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.ಇದರಿಂದ ಕನ್ನಡಿಗರಲ್ಲಿ ಅಸಮಾಧಾನ ಮತ್ತು ಆಕ್ರೋಶ ಹೆಚ್ಚಾಯಿತು. ಆಂಧ್ರದ ಬೇಡಿಕೆಗೆ ಸ್ಪಂದಿಸಿ ಪ್ರತ್ಯೇಕ ಆಂಧ್ರ ರಾಜ್ಯ ರಚನೆಗೆ ಮುಂದಾದ ಕೇಂದ್ರ ಸರ್ಕಾರವು, ಕರ್ನಾಟಕ ಏಕೀಕರಣದ ಬೇಡಿಕೆಯನ್ನು ಕಡೆಗಣಿಸುತ್ತಿದೆ ಎಂದು ಕನ್ನಡಿಗರು ಭಾವಿಸಿದರು. ಪರಿಣಾಮವಾಗಿ ಕನ್ನಡಿಗರು ಕಾಂಗ್ರೆಸ ಸರ್ಕಾರದ ವಿರುದ್ಧ ಪ್ರತಿಭಟನೆಗಳನ್ನು ನಡೆಸಿ, ವಿಶಾಲ ಕರ್ನಾಟಕವನ್ನು ರಚಿಸಬೇಕು ಎಂಬ ಬೇಡಿಕೆಯನ್ನು ಇನ್ನಷ್ಟು ಬಲವಾದದ ಆಶಯ ಮುಂದಿಟ್ಟರು. ಈ ಹೋರಾಟವೇ ಮುಂದೆ ಕರ್ನಾಟಕ ಏಕೀಕರಣ ಚಳವಳಿಗೆ ಮತ್ತಷ್ಟು ವೇಗ ನೀಡಿತು.ಈ ಘಟನೆ ಕರ್ನಾಟಕ ಏಕೀಕರಣ ಚಳವಳಿಯ ಅತ್ಯಂತ ಮಹತ್ವದ ಮತ್ತು ಭಾವನಾತ್ಮಕ ಘಟ್ಟವಾಗಿದೆ. ಕನ್ನಡ ಮಾತನಾಡುವ ಪ್ರದೇಶಗಳು ವಿವಿಧ ಆಡಳಿತಗಳ ಅಡಿಯಲ್ಲಿ ಚದುರಿಹೋಗಿದ್ದವು. ಮೈಸೂರು ಸಂಸ್ಥಾನ, ಮುಂಬೈ ಕರ್ನಾಟಕ, ಹೈದರಾಬಾದ ಕರ್ನಾಟಕ, ಮದ್ರಾಸ ಪ್ರಾಂತ್ಯದ ಕನ್ನಡ ಪ್ರದೇಶಗಳು ಹೀಗೆ ಕನ್ನಡಿಗರು ಒಂದೇ ಭಾಷೆ ಮತ್ತು ಸಂಸ್ಕೃತಿಯನ್ನು ಹೊಂದಿದ್ದರೂ ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಆದ್ದರಿಂದ ಎಲ್ಲ ಕನ್ನಡ ಭಾಷಿಕ ಪ್ರದೇಶಗಳನ್ನು ಒಗ್ಗೂಡಿಸಿ ಅಖಂಡ ಕರ್ನಾಟಕ ರಾಜ್ಯ ನಿರ್ಮಿಸಬೇಕು ಎಂಬ ಹಂಬಲ ಜನರಲ್ಲಿ ಬಲವಾಗುತ್ತಿತ್ತು. ನವೆಂಬರ ೧೯೫೨ರ ಅವಧಿಯಲ್ಲಿ ಈ ಬೇಡಿಕೆ ಕೇವಲ ಸಭೆ, ಮನವಿ ಮತ್ತು ನಿರ್ಣಯಗಳಿಗೆ ಸೀಮಿತವಾಗದೆ ತ್ಯಾಗ ಮತ್ತು ಹೋರಾಟದ ಹಂತಕ್ಕೆ ತಲುಪಿತು. ಅದರಗುಂಟೆ ಶಂಕರಗೌಡರು, ದೊಡ್ಡಮೇಟಿ ಅಂದಾನಪ್ಪ, ತಲ್ಲೂರ ರಾಯಣ್ಣಗೌಡರು ಮುಂತಾದ ಏಕೀಕರಣ ಹೋರಾಟಗಾರರು ಅಖಂಡ ಕರ್ನಾಟಕದ ರಚನೆಗಾಗಿ ಮರಣಾಂತ ಉಪವಾಸ ವ್ರತ ಕೈಗೊಂಡರು. ತಮ್ಮ ಜೀವವನ್ನೇ ಪಣಕ್ಕಿಟ್ಟು ಸರ್ಕಾರದ ಗಮನ ಸೆಳೆಯಲು ಅವರು ಮುಂದಾದರು.ಈ ಉಪವಾಸ ಸತ್ಯಾಗ್ರಹವು ಕನ್ನಡಿಗರ ಬಹುದಿನಗಳ ಆಶಯವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರುವ ಒಂದು ಪ್ರಬಲ ಅಹಿಂಸಾತ್ಮಕ ಹೋರಾಟವಾಗಿತ್ತು. ಉಪವಾಸಿಗರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದ್ದಂತೆ ಏಕೀಕರಣ ಹೋರಾಟಗಾರರು ಮತ್ತು ಕನ್ನಡಾಭಿಮಾನಿಗಳಲ್ಲಿ ಆತಂಕ ಹೆಚ್ಚಾಯಿತು. ಇಂಥ ಸಂದರ್ಭದಲ್ಲಿ ಜಯದೇವಿ ತಾಯಿಯವರು ಹೋರಾಟಗಾರರ ಬೆನ್ನಿಗೆ ದೃಢವಾಗಿ ನಿಂತರು. ಹೋರಾಟಗಾರರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಡುತ್ತಿದ್ದಾಗ ಅವರಿಗೆ ಮಾನಸಿಕ ಧೈರ್ಯ ಮತ್ತು ಆತ್ಮವಿಶ್ವಾಸ ನೀಡುವುದು ಅಗತ್ಯವಾಗಿತ್ತು. ಜಯದೇವಿ ತಾಯಿಯವರು* ತಮ್ಮ ರಕ್ತದಿಂದಲೇ ಹಸ್ತಾಕ್ಷರ ಹಾಕಿ ಉಪವಾಸ ಸತ್ಯಾಗ್ರಹಿಗಳಿಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು* ಎಂಬುದು ಅವರ ಹೋರಾಟದ ತೀವ್ರತೆ ಮತ್ತು ಬದ್ಧತೆಯನ್ನು ತೋರಿಸುವ ಅಪೂರ್ವ ಘಟನೆ. ಇದು “ಕರ್ನಾಟಕ ಏಕೀಕರಣಕ್ಕಾಗಿ ನಡೆಯುವ ನಿಮ್ಮ ಹೋರಾಟಕ್ಕೆ ನನ್ನ ಜೀವದ ಕೊನೆಯ ಹನಿಯವರೆಗೂ ಬೆಂಬಲವಿದೆ” ಎಂಬ ಸಂಕಲ್ಪದ ಸಂಕೇತವಾಗಿತ್ತು. ಅವರ ಈ ನಡೆ ಹೋರಾಟಗಾರರಲ್ಲಿ ಹೊಸ ಉತ್ಸಾಹ ಮೂಡಿಸಿತು. ಮಹಿಳೆಯರು ಕೂಡ ಏಕೀಕರಣ ಚಳವಳಿಯಲ್ಲಿ ಮುಂಚೂಣಿಯಲ್ಲಿ ನಿಲ್ಲಬಹುದು, ಅಗತ್ಯವಾದರೆ ವೈಯಕ್ತಿಕ ತ್ಯಾಗಕ್ಕೂ ಸಿದ್ಧರಾಗಬಹುದು ಎಂಬ ಸಂದೇಶವನ್ನು ಅವರು ಸಮಾಜಕ್ಕೆ ನೀಡಿದರು. *ನುಡಿನಾಡ ಮಾಡುವಗ |ಗಡಿನಾಡ ಮರಿಬ್ಯಾಡ್ರಿಬೇಡಿದೆವು ನ್ಯಾಯವ ಕೊಡಿರೆಂತ -ಸರ್ಕಾರಕತೊಡಕ ಇಡಬ್ಯಾಡರಿ ಕಡೆ ತನಕ||*ಎಂದು ಹಾಡುತ್ತಾ ಜಯದೇವಿ ತಾಯಿಯವರು ಸರ್ಕಾರಕ್ಕೆ ಎಚ್ಚರಿಸಲು ಪ್ರಯತ್ನಿಸಿದರು. ಹೋರಾಟದ ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಕೇವಲ ಸ್ಥಳೀಯ ಮಟ್ಟದಲ್ಲಿ ಪ್ರತಿಭಟನೆ ನಡೆಸುವುದರಿಂದ ಪ್ರಯೋಜನವಿಲ್ಲ ಎಂಬ ಅರಿವು ಮೂಡಿತು. ಕರ್ನಾಟಕದ ಏಕೀಕರಣದ ಪ್ರಶ್ನೆಯನ್ನು ನೇರವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ಕೊಂಡೊಯ್ಯಬೇಕಾಗಿತ್ತು. ಆದ್ದರಿಂದ ಜಯದೇವಿ ತಾಯಿಯವರು ತಮ್ಮ ಸಂಗಡಿಗರೊಂದಿಗೆ ಸೊಲ್ಲಾಪುರದಿಂದ ದೆಹಲಿಯವರೆಗೆ ಯಾತ್ರೆ ಕೈಗೊಳ್ಳುವ ನಿರ್ಧಾರ ಮಾಡಿದರು. ಪ್ರವಾಸ ಕನ್ನಡಿಗರ ನೋವು, ಅಸಮಾಧಾನ ಮತ್ತು ಅಖಂಡ ಕರ್ನಾಟಕದ ಆಶಯವನ್ನು ದೇಶದ ರಾಜಧಾನಿಗೆ ಕೊಂಡೊಯ್ಯುವ ಪ್ರತೀಕಾತ್ಮಕ ರಾಜಕೀಯ…ಸಾಮಾಜಿಕ ಯಾತ್ರೆಯಾಗಿತ್ತು. ದಾರಿಯುದ್ದಕ್ಕೂ ಕನ್ನಡಿಗರ ಸಮಸ್ಯೆಗಳನ್ನು ಜನರಿಗೆ ತಿಳಿಸುವುದು, ಕರ್ನಾಟಕ ಏಕೀಕರಣದ ಅಗತ್ಯವನ್ನು ವಿವರಿಸುವುದು ಮತ್ತು ಕೇಂದ್ರ ನಾಯಕರ ಗಮನ ಸೆಳೆಯುವುದು ಈ ಪ್ರಯತ್ನದ ಉದ್ದೇಶವಾಗಿತ್ತು. *ನಾಡೊಂದುಗೂಡಿಸಿ ಕೊಡಿರೆಂದು ಹೊಂದಿಸಿಬೇಡ ಹೋದೆವ ದಿಲ್ಲಿಯ ಸರ್ಕಾರಕನುಡಿದೇವ “ಕನ್ನಡ ನಾಡೊಂದೇ “*ಎಂದು ಹಾಡಿದ ಜಯದೇವಿ ತಾಯಿಯವರು ಸೊಲ್ಲಾಪುರದಿಂದ ದೆಹಲಿಯವರೆಗೆ ಸಾಗಿದ ಈ ಪ್ರಯತ್ನವು ಒಂದು ಮಹತ್ವದ ಸಂದೇಶವನ್ನು ನೀಡಿತು….ಕರ್ನಾಟಕ ಏಕೀಕರಣವು ಕನ್ನಡಿಗರ ಸಾಮೂಹಿಕ ಹಕ್ಕು ಮತ್ತು ಭಾವನೆಯಾಗಿದೆ. ಜಯದೇವಿ ತಾಯಿಯವರಂತಹ ಮಹಿಳಾ ಹೋರಾಟಗಾರ್ತಿಯರು ಈ ಹಂತದಲ್ಲಿ ವಹಿಸಿದ ಪಾತ್ರ ವಿಶೇಷವಾದದ್ದು. ಅವರು ಭಾಷಣಗಳನ್ನು ಮಾಡುತ್ತಾ, ಸಮಾಲೋಚನೆಗಳನ್ನು ಆಯೋಜಿಸುತ್ತಾ … ಅಲ್ಲಲ್ಲಿ ಸಭೆಗಳನ್ನು ನಡೆಸಿ,ಉಪವಾಸ ಸತ್ಯಾಗ್ರಹಿಗಳಿಗೆ ನೈತಿಕ ಬೆಂಬಲ ನೀಡುತ…,, ಜನರಲ್ಲಿ ಜಾಗೃತಿ ಮೂಡಿಸಿದರು ಮತ್ತು ಕೇಂದ್ರದ ಮಟ್ಟದಲ್ಲಿ ಕರ್ನಾಟಕದ ಧ್ವನಿ ಕೇಳಿಸುವಂತೆ ಮಾಡಲು ಪ್ರಯತ್ನಿಸಿದರು.ಈ ಘಟನೆಯು ಜಯದೇವಿ ತಾಯಿಯವರ ಧೈರ್ಯ ಮತ್ತು ಕೆಚ್ಚೆದೆಯ ಮನೋಭಾವಕ್ಕೆ ಸಾಕ್ಷಿಯಾಗಿದೆ. ಜಯದೇವಿ ತಾಯಿಯವರು ಅಖಂಡ ಕರ್ನಾಟಕದ ನಿರ್ಮಾಣಕ್ಕಾಗಿ ನಡೆಸಿದ ಹೋರಾಟವು ಕನ್ನಡಪರ ಚಿಂತಕರೊಂದಿಗೆ ನಿರಂತರವಾಗಿ ಚರ್ಚಿಸಿ, ಒಗ್ಗಟ್ಟಿನಿಂದ ಹೋರಾಟ ನಡೆಸಿದರು. ಸರ್ವಶ್ರೀ ಎಸ್. ನಿಜಲಿಂಗಪ್ಪ, ಎಸ್. ಆರ್. ಕಂಠಿ, ಹಳ್ಳಿಕೇರಿ ರುದ್ರಪ್ಪ, ಬಿ. ಡಿ. ಜತ್ತಿ ಮುಂತಾದ ಪ್ರಮುಖ ನಾಯಕರು ಜಯದೇವಿ ತಾಯಿಯವರೊಂದಿಗೆ ಆಗಾಗ ಸಮಾಲೋಚನೆ ನಡೆಸುತ್ತಿದ್ದರು. ಕನ್ನಡ ಮಾತನಾಡುವ ಪ್ರದೇಶಗಳೆಲ್ಲವೂ ಒಂದಾಗಿ ಅಖಂಡ ಕರ್ನಾಟಕ ರಾಜ್ಯ ನಿರ್ಮಾಣವಾಗಬೇಕು ಎಂಬುದು ಎಲ್ಲರ ಪ್ರಮುಖ ಆಶಯವಾಗಿತ್ತು.ಈ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಭಾಗಗಳಲ್ಲಿ ಹೋರಾಟವನ್ನು ಹೇಗೆ ಸಂಘಟಿಸಬೇಕು, ಜನರಲ್ಲಿ ಕನ್ನಡ ನಾಡಿನ ಏಕೀಕರಣದ ಬಗ್ಗೆ ಜಾಗೃತಿ ಹೇಗೆ ಮೂಡಿಸಬೇಕು, ಸರ್ಕಾರದ ಮೇಲೆ ಒತ್ತಡ ಹೇಗೆ ತರಬೇಕು, ಕನ್ನಡ ಭಾಷಿಕ ಪ್ರದೇಶಗಳ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಗಮನಕ್ಕೆ ಹೇಗೆ ತರಬೇಕು ಎಂಬುದರ ಕುರಿತು ತಾಯಿಯವರು ಮತ್ತು ನಾಯಕರು ಸುದೀರ್ಘವಾಗಿ ಚರ್ಚಿಸುತ್ತಿದ್ದರು. ಜನಜಾಗೃತಿ ಹಾಗೂ ವಿವಿಧ ಹೋರಾಟಗಳ ಮೂಲಕ ಕನ್ನಡಿಗರ ಒಗ್ಗಟ್ಟಿನ ಧ್ವನಿಯನ್ನು ಬಲಪಡಿಸುವ ರೂಪುರೇಷೆಗಳನ್ನು ಸಿದ್ಧಪಡಿಸಲಾಗುತ್ತಿತ್ತು.ಇದೇ ಅವಧಿಯಲ್ಲಿ ಭಾರತ ಸರ್ಕಾರವು ಫಜಲ ಅಲಿ ಅವರ ನೇತೃತ್ವದಲ್ಲಿ ರಾಜ್ಯ ಪುನರ ರಚನಾ ಆಯೋಗವನ್ನು ರಚಿಸಿತು. ಭಾಷಾವಾರು ರಾಜ್ಯಗಳ ರಚನೆಯ ಹಿನ್ನೆಲೆಯಲ್ಲಿ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳನ್ನು ಯಾವ ರೀತಿಯಲ್ಲಿ ಪುನರ್ವ್ಯವಸ್ಥೆಗೊಳಿಸಬೇಕು ಎಂಬ ಪ್ರಶ್ನೆ ಅತ್ಯಂತ ಮಹತ್ವದ್ದಾಗಿತ್ತು.ಈ ಸಂದರ್ಭದಲ್ಲಿ ಜಯದೇವಿ ತಾಯಿಯವರು ತಮ್ಮ ನಿಲುವನ್ನು ಸ್ಪಷ್ಟವಾಗಿ ಮಂಡಿಸುವುದರ ಜೊತೆಗೆ, ಕರ್ನಾಟಕದ ಏಕೀಕರಣಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳವಾಗಿ ಅಧ್ಯಯನ ಮಾಡಿದರು. ರಾಜ್ಯ ಪುನರ ರಚನಾ ಆಯೋಗದ ಸದಸ್ಯರಾಗಿದ್ದ ಶ್ರೀ ಕೆ. ಎಂ. ಫಣಿಕ್ಕರ ಅವರೊಂದಿಗೆ ಜಯದೇವಿ ತಾಯಿಯವರು ಹಲವು ಬಾರಿ ಸುದೀರ್ಘವಾಗಿ ಚರ್ಚಿಸಿದರು. ಕನ್ನಡಿಗರು ಯಾವ ಯಾವ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಆ ಪ್ರದೇಶಗಳ ಭಾಷಾ-ಸಾಂಸ್ಕೃತಿಕ ಸಂಬಂಧಗಳು ಹೇಗಿವೆ, ಕನ್ನಡ ಭಾಷಿಕ ಪ್ರದೇಶಗಳನ್ನು ಒಂದೇ ಆಡಳಿತದ ಅಡಿಯಲ್ಲಿ ತರಬೇಕಾದ ಅಗತ್ಯವೇನು, ಜನರ ಆಶಯವೇನು ಎಂಬುದರ ಕುರಿತು ಅವರು ತಮ್ಮ ವಿಚಾರಗಳನ್ನು ಮಂಡಿಸುತ್ತಿದ್ದರು. ಕರ್ನಾಟಕದ ಏಕೀಕರಣವು ಆಡಳಿತಾತ್ಮಕ ಬದಲಾವಣೆಯ ಜೊತೆ ಜೊತೆಯಾಗಿ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ ಮತ್ತು ಕನ್ನಡಿಗರ ಭಾವನಾತ್ಮಕ ಏಕತೆಯ ಪ್ರಶ್ನೆ ಎಂಬುದನ್ನು ತಾಯಿಯವರು ಹೇಳುತ್ತಿದ್ದರು.ಹೀಗೆ ಹಿರಿಯ ನಾಯಕರೊಂದಿಗೆ ನಿರಂತರ ಚರ್ಚೆ, ಜನಜಾಗೃತಿ, ಹೋರಾಟ ಮತ್ತು ರಾಜ್ಯ ರಚನಾ ಆಯೋಗದೊಂದಿಗೆ ವಿಚಾರ ವಿನಿಮಯ ನಡೆಸುವ ಮೂಲಕ ಜಯದೇವಿ ತಾಯಿಯವರು ಅಖಂಡ ಕರ್ನಾಟಕ ನಿರ್ಮಾಣದ ಮಹತ್ವದ ಹೋರಾಟದಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದರು. ಅವರ ಪ್ರಯತ್ನ ಚದುರಿಹೋಗಿದ್ದ ಕನ್ನಡಿಗರೆಲ್ಲರೂ ಒಂದೇ ನಾಡಿನ ಅಡಿಯಲ್ಲಿ ಒಂದಾಗಿ, ಕನ್ನಡ ಭಾಷೆ ಮತ್ತು ಸಂಸ್ಕೃತಿಗೆ ಗೌರವ ದೊರೆಯಬೇಕು ಎಂಬ ಗಾಢವಾದ ಕನ್ನಡಾಭಿಮಾನವಿತ್ತು. ಇಂತಹ ಅನೇಕ ಹೋರಾಟಗಾರರ ನಿರಂತರ ಪ್ರಯತ್ನಗಳ ಫಲವಾಗಿಯೇ ಮುಂದೆ ಕನ್ನಡ ಭಾಷಿಕ ಪ್ರದೇಶಗಳ ಏಕೀಕರಣದ ಕನಸು ನನಸಾಗುವ ದಾರಿ ಸುಗಮವಾಯಿತು.(ಮುಂದುವರೆಯಲಿದೆ) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ-32 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ಕನ್ನಡನಾಡಿನ ಸೇವೆ ನಡುನಾಡಿನ ಅಣ್ಣಂದಿರೆ| ಗಡಿಭಾಗದವರಿಗ ಕಡಿಗಣ್ಣಲ್ಲಿ ನೋಡಬ್ಯಾಡಿರಿ- ನಾವೆಲ್ಲಒಡ ಹುಟ್ಟಿದ ಕನ್ನಡ ಮಕ್ಕಳು||-ಡಾ.ಜಯದೇವಿತಾಯಿ ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ದೇಶದ ರಾಜಕೀಯ ನಕ್ಷೆ ಇಂದಿನಂತಿರಲಿಲ್ಲ. ಬ್ರಿಟಿಷರ ಆಡಳಿತ ಪ್ರದೇಶಗಳ ಜೊತೆಗೆ ಅನೇಕ ಸಂಸ್ಥಾನಗಳು ಅಸ್ತಿತ್ವದಲ್ಲಿದ್ದವು. ಭಾಷಾವಾರು ಪ್ರಾಂತಗಳ ರಚನೆ, ಕನ್ನಡ ಮಾತನಾಡುವ ಜನರನ್ನು ಒಂದೇ ಆಡಳಿತದ ಅಡಿಯಲ್ಲಿ ತರುವ ಆಶಯ ಮತ್ತು ಕನ್ನಡ ನಾಡಿನ ಸಮಗ್ರತೆಯ ಕನಸು ಆ ಕಾಲದಲ್ಲಿ ಪ್ರಬಲವಾಗುತ್ತಿತ್ತು. ಇದೇ ಹಿನ್ನೆಲೆಯಲ್ಲಿಯೇ ಕರ್ನಾಟಕ ಏಕೀಕರಣ ಚಳವಳಿ ಬಲ ಪಡೆದುಕೊಂಡಿತು.. ೨೭-೪-೧೯೪೮ರಂದು ಮುಂಬೈನ ಜಹಂಗೀರ್ ಹಾಲ್ನಲ್ಲಿ ಕೆ.ಆರ್. ಕಾರಂತರ ಅಧ್ಯಕ್ಷತೆಯಲ್ಲಿ,ನಡೆದ ಕನ್ನಡ ಹೋರಾಟದಲ್ಲಿ ಜೊತೆಯಾಗಿದ್ದ ಡಾ.ಜಯದೇವಿ ತಾಯಿ ಅವರು೧೯೫೬ರವರೆಗೆ ಏಕೀಕರಣದ ಹೋರಾಟದಲ್ಲಿ ಸಕ್ರಿಯರಾಗಿದ್ದರು. ೧೯೫೩ರಲ್ಲಿ ಅಧ್ಯಕ್ಷರಾದ ಕೆ.ಆರ್. ಕಾರಂತರು,ಸದಸ್ಯರಾದ ಹೊಸಮನಿ ಸಿದ್ದಪ್ಪ, ಬಿಎಂ ಕಕ್ಕೆಬಾಯಿ ,ಎನ್ ಎ ಉಪಾಧ್ಯಾಯ, ಸರದಾರ ಶರಣಗೌಡ್ರು, ನಾಗಪ್ಪ ಆಳ್ವಾ, ಭಾಸ್ಕರ್ ರೈ, ಶ್ರೀಕಂಠಪ್ಪ ಶಿವಾನಂದ ಸ್ವಾಮಿ, ಗೋಪಾಲ ಗೌಡ್ರ, ನಾರಾಯಣಸ್ವಾಮಿ ರೆಡ್ಡಿವರನ್ನು ಒಳಗೊಂಡು ಸಮಯದಲ್ಲಿ ಸಂಘದ 12 ಜನರನ್ನು ಬಂಧಿಸಿದ್ದರು. ಅದನ್ನು ಪ್ರತಿಪಟಿಸಿ ಪ್ರತಿಬಂಧಕಾಜ್ಞೆಯನ್ನು ಹಿಂತೆಗೆದುಕೊಳ್ಳಬೇಕು ಇಲ್ಲವೇ ಸತ್ಯಾಗ್ರಹ ಮಾಡುವೆವು ಎಂದು ನಿರ್ಮಿಸಿದ್ದರು. ಅವರು ತಮ್ಮ ಸದಸ್ಯರಿಗೆ ಕರೆ ಕೊಟ್ಟಿದ್ದರು. ಇದರ ಹಿನ್ನೆಲೆಯಲ್ಲಿ ಆಗಸ್ಟ್ ೧೫ರಂದು ಕಪ್ಪು ಧ್ವಜ ಹಾರಿಸಲು… ಅದಕ್ಕೆ ಜಯದೇವಿ ತಾಯಿಯವರನ್ನು ಕರೆಸಿದ್ದರು ಅವರು ಪರಿಷತ್ತಿನ ಗೊತ್ತುವಳಿ ನನಗೆ ಹಿಡಿಸಲಿಲ್ಲ ಅದನ್ನು ಪುನಃ ವಿಮರ್ಷಿಸಬೇಕು ಎಂದು ತಂತಿ ಕಳಿಸಿದ್ದರು( ೯-೮-೧೯೫೩ರ ಸಂಯುಕ್ತ ಕರ್ನಾಟಕದ ವರದಿ) ಆ ಸಮಯದಲಿ ನಡೆದ ಏಕೀಕರಣ ಪರಿಷತ್ತು ಹೋರಾಟದ ಮಹತ್ವದ ಘಟ್ಟಗಳಲ್ಲಿ ಒಂದಾಗಿತ್ತು. ಸ್ವಾತಂತ್ರ್ಯಪೂರ್ವ ಕಾಲದಲ್ಲಿಯೇ ಕನ್ನಡಿಗರ ಭೌಗೋಳಿಕ ಮತ್ತು ಸಾಂಸ್ಕೃತಿಕ ಏಕತೆಯ ಅಗತ್ಯವನ್ನು ಚರ್ಚಿಸಿದ ಈ ರೀತಿಯ ಪರಿಷತ್ತುಗಳು ಮುಂದೆ ಏಕೀಕರಣ ಚಳವಳಿಗೆ ಹೊಸ ಉತ್ಸಾಹ ನೀಡಿದವು. ಏಕೀಕರಣದ ಮಹಾ ಚಳವಳಿಯಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯಲ್ಲಿ ದುಡಿದವರು ಡಾ. ಜಯದೇವಿತಾಯಿ. ೧೯೪೮ರಿಂದ ೧೯೫೬ರವರೆಗೆ ನಡೆದ ಈ ಹೋರಾಟದ ಅವಧಿಯಲಿ ಕನ್ನಡಿಗರ ನೋವು, ಆತಂಕ, ಹಕ್ಕು ಮತ್ತು ಭವಿಷ್ಯವನ್ನು ತಮ್ಮದೇ ಹೋರಾಟವೆಂದು ಸ್ವೀಕರಿಸಿ, ಜನರನ್ನು ಸಂಘಟಿಸಿ, ಏಕೀಕರಣದ ಪರವಾಗಿ ಜನಾಭಿಪ್ರಾಯ ರೂಪಿಸುವ ಕಾರ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು.ಆ ಕಾಲದಲ್ಲಿ ಕನ್ನಡ ಭಾಷಿಕ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಲಿಲ್ಲ. ಮೈಸೂರು ಸಂಸ್ಥಾನ, ಹೈದರಾಬಾದ್ ಸಂಸ್ಥಾನ, ಮುಂಬೈ ಪ್ರಾಂತ ಮತ್ತು ಇತರ ಆಡಳಿತ ಪ್ರದೇಶಗಳಲ್ಲಿ ಕನ್ನಡಿಗರು ಹರಡಿಕೊಂಡಿದ್ದರು. ಆಡಳಿತ ಬೇರೆಬೇರೆ ಆಗಿದ್ದರೂ ಭಾಷೆ ಒಂದೇ, ಸಂಸ್ಕೃತಿ ಒಂದೇ, ಸಾಹಿತ್ಯ ಪರಂಪರೆ ಒಂದೇ, ನೆಲದೊಂದಿಗೆ ಇರುವ ಭಾವನಾತ್ಮಕ ಸಂಬಂಧ ಒಂದೇ. ಹೀಗಾಗಿ ಕನ್ನಡ ಮಾತನಾಡುವ ಎಲ್ಲ ಪ್ರದೇಶಗಳು ಒಂದಾಗಿ, ಸಮಗ್ರ ಕರ್ನಾಟಕ ನಿರ್ಮಾಣವಾಗಬೇಕು ಎಂಬುದು ಏಕೀಕರಣವಾದಿಗಳ ಆಶಯವಾಗಿತ್ತು.ಆದರೆ ಈ ಕನಸಿನ ಮುಂದೆ ಹಲವಾರು ಸವಾಲುಗಳಿದ್ದವು. ವಿಶೇಷವಾಗಿ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ಮಿರಜ್, ಜಮಖಂಡಿ, ಗಡಿಂಗ್ಲಸ್ ಮತ್ತು ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರಲ್ಲಿ ಭವಿಷ್ಯದ ಬಗ್ಗೆ ಆತಂಕವಿತ್ತು. ಆಡಳಿತಾತ್ಮಕ ಗಡಿಗಳ ಪುನರ್ವ್ಯವಸ್ಥೆಯಲ್ಲಿ ತಮ್ಮ ಪ್ರದೇಶಗಳು ಯಾವ ರಾಜ್ಯಕ್ಕೆ ಸೇರುತ್ತವೆ? ತಮ್ಮ ಭಾಷೆ ಮತ್ತು ಸಂಸ್ಕೃತಿಗೆ ಯಾವ ಸ್ಥಾನ ದೊರೆಯುತ್ತದೆ? ಕನ್ನಡ ಶಾಲೆಗಳು ಉಳಿಯುತ್ತವೆಯೇ? ಕನ್ನಡಿಗರ ಹಕ್ಕುಗಳು ರಕ್ಷಿಸಲ್ಪಡುತ್ತವೆಯೇ? ಎಂಬ ಪ್ರಶ್ನೆಗಳು ಅವರ ಮನಸ್ಸಿನಲ್ಲಿ ಮೂಡಿದ್ದವು. ಆತಂಕದ ಸಂದರ್ಭದಲ್ಲಿ ಜನರಲ್ಲಿ ಧೈರ್ಯ ತುಂಬುವುದು, ಕನ್ನಡಿಗರನ್ನು ಸಂಘಟಿಸುವುದು ಮತ್ತು ಏಕೀಕರಣದ ಆಶಯವನ್ನು ಜನಮನದಲ್ಲಿ ಗಟ್ಟಿಗೊಳಿಸುವುದು ಅತ್ಯಂತ ಅಗತ್ಯವಾಗಿತ್ತು. ಸೊಲ್ಲಾಪುರವು ಇಂಥ ಜಟಿಲ ಹೋರಾಟದಲ್ಲಿ ವಿಶೇಷ ಮಹತ್ವ ಪಡೆದ ಪ್ರದೇಶ. ಅಲ್ಲಿನ ಕನ್ನಡಿಗರ ಭಾವನೆಗಳನ್ನು ಒಗ್ಗೂಡಿಸಿ, ಕರ್ನಾಟಕ ಏಕೀಕರಣದ ಪರವಾದ ಚಳವಳಿಗೆ ಬಲ ತುಂಬುವಲ್ಲಿ ಜಯದೇವಿತಾಯಿಯವರ ಪಾತ್ರ ಗಮನಾರ್ಹವಾಗಿತ್ತು. ಏಕೀಕರಣವು ಕನ್ನಡಿಗರ ಅಸ್ಮಿತೆ, ಭಾಷೆ, ಸಂಸ್ಕೃತಿ, ಸ್ವಾಭಿಮಾನ ಮತ್ತು ಭವಿಷ್ಯದ ಪ್ರಶ್ನೆ ಎಂದು ಎಲ್ಲ ಭಾಷಣಗಳನ್ನು ಹೇಳುತ್ತಿದ್ದರು ಹಾಗೆ ಅವರು ಅರ್ಥಮಾಡಿಕೊಂಡಿದ್ದರು.ಅವರ ಹೋರಾಟದ ವಿಶೇಷತೆ ಎಂದರೆ, ಏಕೀಕರಣದ ವಿಚಾರವನ್ನು ಮುಖಂಡರನ್ನು ಒಳಗೊಂಡು ಸಾಮಾನ್ಯ ಕನ್ನಡಿಗರ ಮನಸ್ಸಿನ ವಿಚಾರವನ್ನಾಗಿ ಮಾಡುವ ಪ್ರಯತ್ನ. ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರ ಒಗ್ಗಟ್ಟನ್ನು ಬಲಪಡಿಸುವುದು, ಏಕೀಕರಣದ ಅಗತ್ಯವನ್ನು ಮನವರಿಕೆ ಮಾಡುವುದು ಮತ್ತು ಗಡಿ ಪ್ರದೇಶಗಳ ಕನ್ನಡಿಗರ ಧ್ವನಿಯನ್ನು ಪ್ರಬಲಗೊಳಿಸುವುದು ಅವರ ಕಾರ್ಯದ ಪ್ರಮುಖ ಭಾಗವಾಗಿತ್ತು. ಅಂದು ಸಂವಹನದ ವ್ಯವಸ್ಥೆಯು ಇಂದಿನಂತಹ ಸುಲಭ ವ್ಯವಸ್ಥೆಗಳಿರಲಿಲ್ಲ. ಇಂದಿನಂತೆ ಸಾಮಾಜಿಕ ಮಾಧ್ಯಮ, ದೂರದರ್ಶನ, ಮೊಬೈಲ್ ಫೋನ್ ಅಥವಾ ಕ್ಷಣಾರ್ಧದಲ್ಲಿ ಮಾಹಿತಿಯನ್ನು ತಲುಪಿಸುವ ವ್ಯವಸ್ಥೆ ಇರಲಿಲ್ಲ. ಒಂದು ಊರಿನಿಂದ ಮತ್ತೊಂದು ಊರಿಗೆ ಹೋಗುವುದು, ಜನರನ್ನು ಭೇಟಿ ಮಾಡುವುದು, ಸಭೆಗಳನ್ನು ನಡೆಸುವುದು, ವಿಚಾರವನ್ನು ವಿವರಿಸುವುದು ಮತ್ತು ಜನರನ್ನು ಸಂಘಟಿಸುವುದು ದೊಡ್ಡ ಪರಿಶ್ರಮದ ಕೆಲಸವಾಗಿತ್ತು.ಆದರೂ ಇಂತಹ ಕಷ್ಟಗಳಿಗೆ ಜಯದೇವಿತಾಯಿ ಹಿಂದೆ ಸರಿಯಲಿಲ್ಲ.ಅವರ ಪಾಲಿಗೆ ಏಕೀಕರಣ ಒಂದು ದಿನದ ರಾಜಕೀಯ ಕಾರ್ಯಕ್ರಮವಲ್ಲ ಅದು ಜೀವನದ ಧ್ಯೇಯವಾಗಿತ್ತು. ಗಡಿ ಪ್ರದೇಶಗಳಲ್ಲಿದ್ದ ಕನ್ನಡಿಗರು ತಮ್ಮ ಭಾಷೆ ಮತ್ತು ಸಂಸ್ಕೃತಿಯ ಕುರಿತು ಹೊಂದಿದ್ದ ಆತಂಕವನ್ನು ಅವರು ಅರ್ಥಮಾಡಿಕೊಂಡರು. ಕನ್ನಡಿಗರು ಎಲ್ಲಿದ್ದರೂ ಅವರ ಭಾಷಾ ಹಕ್ಕುಗಳು ಮತ್ತು ಸಾಂಸ್ಕೃತಿಕ ಅಸ್ತಿತ್ವ ಉಳಿಯಬೇಕು ಎಂಬ ಭಾವನೆಯೊಂದಿಗೆ ಹೋರಾಟ ನಡೆಸಿದರು. ಕನ್ನಡಿಗರ ನಡುವೆ ಒಗ್ಗಟ್ಟಿನ ಭಾವನೆ ಮೂಡಿಸುವುದಕ್ಕೆ ಅವರು ಶ್ರಮಿಸಿದರು.೧೯೪೮ರಿಂದ ೧೯೫೬ರವರೆಗಿನ ಅವಧಿ ಅವರ ಜೀವನದ ಮಹತ್ವದ ಹೋರಾಟದ ಕಾಲಘಟ್ಟವಾಗಿತ್ತು. ದೇಶ ಸ್ವತಂತ್ರವಾದ ನಂತರವೂ ಕರ್ನಾಟಕ ಏಕೀಕರಣದ ಕನಸು ತಕ್ಷಣ ನನಸಾಗಲಿಲ್ಲ. ಭಾಷಾವಾರು ರಾಜ್ಯಗಳ ರಚನೆಯ ಕುರಿತು ದೇಶದಾದ್ಯಂತ ಚರ್ಚೆ ನಡೆಯುತ್ತಿತ್ತು. ಸಮಿತಿಗಳು, ಆಯೋಗಗಳು, ರಾಜಕೀಯ ಚರ್ಚೆಗಳು, ಜನಾಭಿಪ್ರಾಯ ಮತ್ತು ಚಳವಳಿಗಳು ಇವೆಲ್ಲದರ ನಡುವೆ ಕನ್ನಡಿಗರ ಬೇಡಿಕೆಯನ್ನು ನಿರಂತರವಾಗಿ ಜೀವಂತವಾಗಿಡಬೇಕಾಗಿತ್ತು. ಜಯದೇವಿತಾಯಿಯವರಂತಹ ಕಾರ್ಯಕರ್ತರ ಶ್ರಮ ಬಹಳ ಮುಖ್ಯವಾಗಿತ್ತು.ಅವರು ಏಕೀಕರಣವನ್ನು ಅಂದರೆ “ಗಡಿ ಸೇರ್ಪಡೆ” ಜೊತೆಗೆ ಕನ್ನಡ ನಾಡಿನ ಸಾಂಸ್ಕೃತಿಕ ಪುನರ್ಸಂಘಟನೆಯಾಗಿ ಕಂಡರು. ಕನ್ನಡ ಭಾಷೆ, ಕನ್ನಡ ಸಾಹಿತ್ಯ, ಕನ್ನಡ ಸಂಸ್ಕೃತಿ ಮತ್ತು ಕನ್ನಡಿಗರ ಸ್ವಾಭಿಮಾನ ಒಂದೇ ಭೌಗೋಳಿಕ ಅಸ್ತಿತ್ವದಲ್ಲಿ ಅರಳಬೇಕು ಎಂಬುದು ಅವರ ಆಶಯವಾಗಿತ್ತು.ಅದರಲ್ಲಿಯೂ ಸೊಲ್ಲಾಪುರದ ಕನ್ನಡಿಗರಿಗಾಗಿ ಅವರು ವಹಿಸಿದ ನಾಯಕತ್ವ ವಿಶೇಷವಾಗಿ ಉಲ್ಲೇಖನೀಯ. ಗಡಿ ಪ್ರದೇಶದ ಜನರಲ್ಲಿ ಉಂಟಾಗಿದ್ದ ಗೊಂದಲ ಮತ್ತು ಆತಂಕದ ನಡುವೆ, ಅವರಲ್ಲಿ ಕನ್ನಡದ ಬಗ್ಗೆ ಆತ್ಮವಿಶ್ವಾಸ ಮೂಡಿಸುವುದು ಸುಲಭದ ಕೆಲಸವಾಗಿರಲಿಲ್ಲ. ಆದರೆ ಜಯದೇವಿತಾಯಿ ತಮ್ಮ ಮಾತು, ಸಂಘಟನೆ ಮತ್ತು ನಿರಂತರ ಪ್ರಯತ್ನಗಳ ಮೂಲಕ ಜನರನ್ನು ಏಕೀಕರಣದ ಆಶಯದ ಸುತ್ತ ಒಗ್ಗೂಡಿಸಲು ಶ್ರಮಿಸಿದರು.ಏಕೀಕರಣ ಚಳವಳಿಯ ಹೋರಾಟದಲ್ಲಿ ಮಹಿಳೆಯರ ಪಾತ್ರವೂ ಮಹತ್ವದ್ದಾಗಿತ್ತು. ಆ ಕಾಲದಲ್ಲಿ ಮಹಿಳೆಯೊಬ್ಬರು ಸಾರ್ವಜನಿಕ ಜೀವನದಲ್ಲಿ ಸಕ್ರಿಯವಾಗಿ ತೊಡಗಿ, ಜನರನ್ನು ಸಂಘಟಿಸಿ, ರಾಜಕೀಯ-ಸಾಮಾಜಿಕ ವಿಚಾರಗಳಲ್ಲಿ ಮುಂಚೂಣಿಯಲ್ಲಿನಿಂತರು.ಅವರ ಹೋರಾಟದಲ್ಲಿ ವೈಯಕ್ತಿಕ ಲಾಭದ ಆಸೆಗಿಂತ ನಾಡಿನ ಹಿತ ಮತ್ತು ಕನ್ನಡಿಗರ ಭವಿಷ್ಯ ಮುಖ್ಯವಾಗಿತ್ತು.ಕರ್ನಾಟಕ ಏಕೀಕರಣಕ್ಕಾಗಿ ದುಡಿಯುವುದು ಎಂದರೆ ಸಭೆ-ಸಮಾರಂಭಗಳನ್ನು ಆಯೋಜಿಸುವ ಜೊತೆ ಜೊತೆಗೆ…. ಪ್ರವಾಸ, ಜನಸಂಪರ್ಕ, ಸಂಘಟನೆ, ಮನವೊಲಿಕೆ ಮತ್ತು ತ್ಯಾಗ ಇತ್ತು. ಈ ಎಲ್ಲವನ್ನೂ ಅವರು ತಮ್ಮ ಜೀವನದ ಒಂದು ಭಾಗವನ್ನಾಗಿ ಮಾಡಿಕೊಂಡರು.ಅನೇಕ ವರ್ಷಗಳ ನಿರಂತರ ಪರಿಶ್ರಮವಾಗಿತ್ತು. ಅಂತಿಮವಾಗಿ ೧೯೫೬ರಲ್ಲಿ ಭಾಷಾವಾರು ರಾಜ್ಯಗಳ ಪುನರ್ರಚನೆಯ ಮೂಲಕ ಕರ್ನಾಟಕದ ವಿವಿಧ ಕನ್ನಡ ಭಾಷಿಕ ಪ್ರದೇಶಗಳು ಒಂದೇ ರಾಜ್ಯದ ಅಡಿಯಲ್ಲಿ ಬರುವ ಐತಿಹಾಸಿಕ ಘಟ್ಟ ನಿರ್ಮಾಣವಾಯಿತು. ಕನ್ನಡಿಗರ ಬಹುಕಾಲದ ಕನಸಿಗೆ ಒಂದು ಮಹತ್ವದ ರೂಪ ದೊರೆಯಿತು.ಆದರೆ ಈ ವಿಜಯವು ಹಳ್ಳಿ-ಹಳ್ಳಿಗಳಲ್ಲಿ, ಗಡಿ ಪ್ರದೇಶಗಳಲ್ಲಿ, ನಗರಗಳಲ್ಲಿ, ಸಂಘಟನೆಗಳಲ್ಲಿ, ಸಭೆಗಳಲ್ಲಿ ಮತ್ತು ಜನರ ನಡುವೆ ನಿರಂತರವಾಗಿ ದುಡಿದ ಅನೇಕ ಹೋರಾಟಗಾರರ ಬೆವರು ಮತ್ತು ತ್ಯಾಗವಿತ್ತು. ಅಂತಹ ಹೋರಾಟಗಾರ್ತಿಯರಲ್ಲಿ ಡಾ. ಜಯದೇವಿತಾಯಿಯವರ ಹೆಸರು ಗೌರವದಿಂದ ಸ್ಮರಿಸಬೇಕಾಗಿದೆ. ಅವರ ಏಕೀಕರಣ ಹೋರಾಟವನ್ನು ನೆನಪಿಸಿಕೊಳ್ಳುವಾಗ ನಮಗೆ ಒಂದು ಮಹತ್ವದ ಸತ್ಯ ಅರಿವಾಗುತ್ತದೆ ನಾಡು ನಿರ್ಮಾಣವಾಗುವುದು ಗಡಿಗಳ ಹಂಚಿಕೆ ಜೊತೆ ಜನರ ಮನಸ್ಸುಗಳನ್ನು ಒಂದುಗೂಡಿಸುವದಾಗಿತ್ತು. ಕನ್ನಡಿಗರ ಮನಸ್ಸುಗಳನ್ನು ಒಂದುಗೂಡಿಸುವ ಕಾರ್ಯ ಮಾಡಿದರು. ಅವರ ಬದುಕನ್ನು ನೋಡಿದಾಗ “ಏಕೀಕರಣಕ್ಕಾಗಿ ಇಡೀ ಜೀವನವನ್ನು ಮುಡಿಪಾಗಿಟ್ಟವರು” ಎಂಬ ಮಾತು ಕೇಳಿ ಬರುವದು….ಅವರ ಕಾರ್ಯ, ಹೋರಾಟ ಮತ್ತು ನಿರಂತರ ಸಾಮಾಜಿಕ ಬದ್ಧತೆಯನ್ನು ಗಮನಿಸಿದಾಗ ಅದು ಅವರ ಜೀವನದ ಧ್ಯೇಯದ ಪ್ರತಿಬಿಂಬವಾಗಿ ಕಾಣುತ್ತದೆ. ಕರ್ನಾಟಕ ಏಕೀಕರಣದ ಇತಿಹಾಸವು ೧೯೫೬ರಲ್ಲಿ ಮುಕ್ತಾಯವಾದ ಒಂದು ಅಧ್ಯಾಯ ಎಂದೆನಿಸಿದರು. ಅದು ಕನ್ನಡಿಗರ ಭಾಷಾ ಸ್ವಾಭಿಮಾನ, ಸಾಂಸ್ಕೃತಿಕ ಏಕತೆ ಮತ್ತು ನಾಡಿನ ಅಸ್ಮಿತೆಯ ನಿರಂತರ ಪಯಣ. ಆ ಪಯಣದಲ್ಲಿ ತಮ್ಮದೇ ಆದ ಹೆಜ್ಜೆ ಗುರುತು ಮೂಡಿಸಿದ ಡಾ. ಜಯದೇವಿತಾಯಿಯವರ ಕೊಡುಗೆ ಸ್ಮರಣೀಯ. ಬಿಚ್ಚಿ ಎನ್ನದೆಯಲಿ |ಬಚ್ಚಿಟ್ಟುಕೊಳ್ಳಲೇನುಬಚ್ಚ ಬರಿಯ ನಿತ್ಯ- ನುಡಿಗನ್ನಡಅಚ್ಚೊತ್ತಿಕೊಳ್ಳಲೇನ ಅಖಂಡ||ಎಂದು ಕನ್ನಡ ನುಡಿಗಾಗಿ ಹಾಡಿ ಹರಿಸಿದರು.ನಾಡಪ್ರೇಮ, ಕನ್ನಡಾಭಿಮಾನ ಮತ್ತು ತ್ಯಾಗದ ಪ್ರತೀಕವಾಗಿ ಡಾ. ಜಯದೇವಿತಾಯಿಯವರ ಏಕೀಕರಣ ಹೋರಾಟವು ಮುಂದಿನ ಪೀಳಿಗೆಗಳಿಗೂ ಸ್ಫೂರ್ತಿಯಾಗಲಿ.
ಧಾರಾವಾಹಿ ಸಂಗಾತಿ-31 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ರಾಜಕೀಯಕ್ಕೆ ಪೂರ್ಣವಿರಾಮ ಅತ್ಯಂತ ಧೀಮಂತ ವ್ಯಕ್ತಿತ್ವ, ಪ್ರಖರ ವಾಗ್ಮಿತೆ ಮತ್ತು ಜನಮನ ಸೆಳೆಯುವ ಮಾತಿನ ಶೈಲಿಯನ್ನು ಹೊಂದಿದ್ದ ಜಯದೇವಿತಾಯಿಯವರು ರಾಜಕೀಯ ಕ್ಷೇತ್ರದಲ್ಲಿ ಅಪಾರ ಗೌರವವನ್ನು ಗಳಿಸಿದ್ದರು. ಅವರ ಒಂದು ಭಾಷಣವೇ ಸಾವಿರಾರು ಜನರ ಮನಸ್ಸಿನಲ್ಲಿ ಹೊಸ ಚೈತನ್ಯವನ್ನು ಮೂಡಿಸುವ ಶಕ್ತಿಯನ್ನು ಹೊಂದಿತ್ತು. ಅವರ ಮಾತುಗಳಲ್ಲಿ ಸತ್ಯದ ಕಿಡಿ, ಸಮಾಜದ ಕಳಕಳಿ ಮತ್ತು ಕನ್ನಡ ನಾಡಿನ ಬಗ್ಗೆ ಅಚಲವಾದ ಪ್ರೀತಿ ಪ್ರತಿಧ್ವನಿಸುತ್ತಿತ್ತು. ರಾಜಕೀಯ ಪಕ್ಷದ ಅಭ್ಯರ್ಥಿಯಾಗಲಿ, ಚುನಾವಣಾ ಕಣಕ್ಕಿಳಿದಾಗ ಪ್ರಚಾರ ನಡೆಸಲು ಜಯದೇವಿತಾಯಿಯವರನ್ನು ಆಹ್ವಾನಿಸುತ್ತಿದ್ದರು. ಅವರು ವೇದಿಕೆಯಲ್ಲಿ ನಿಂತು ಮಾತನಾಡಿದರೆ ಜನಸಾಗರವೇ ಒಂದು ಸೂಜಿ ಬಿದ್ದರೂ ಅದರ ಶಬ್ದ ಕೇಳುವಷ್ಟು ಶಾಂತಿ ಆವರಿಸುತ್ತಿತ್ತು. ಅವರ ಮಾತುಗಳು….ಸಮಾಜದ ಜಾಗೃತಿ, ನ್ಯಾಯ ಮತ್ತು ಜನಸೇವೆಯ ಸಂದೇಶವನ್ನು ಸಾರುತ್ತಿದ್ದವು.ಜಯದೇವಿತಾಯಿಯವರ ಪ್ರಭಾವ ಎಷ್ಟಿತ್ತೆಂದರೆ, ಅವರು ಪ್ರಚಾರ ನಡೆಸಿದ ಕ್ಷೇತ್ರಗಳಲ್ಲಿ ಜನರು ಅಭ್ಯರ್ಥಿಗಿಂತಲೂ ಅವರ ವಿಚಾರಧಾರೆ ಮತ್ತು ವ್ಯಕ್ತಿತ್ವಕ್ಕೆ ಹೆಚ್ಚು ಮನ್ನಣೆ ನೀಡುತ್ತಿದ್ದರು. ಅವರ ಸತ್ಯನಿಷ್ಠೆ, ನಿರ್ಭೀತ ನಿಲುವು ಮತ್ತು ಜನಪರ ಕಾಳಜಿಯಿಂದ ಪಕ್ಷಗಳ ನಾಯಕರೂ ಅವರನ್ನು ಅಪಾರ ಗೌರವದಿಂದ ಕಾಣುತ್ತಿದ್ದರು. ಜಯದೇವಿತಾಯಿಯವರನ್ನು ಕರೆಸಿಕೊಳ್ಳುವುದು ಅಭ್ಯರ್ಥಿಗಳಿಗೆ ಹೆಮ್ಮೆಯ ವಿಷಯವಾಗಿತ್ತು. ೧೯೫೧ರ ಚುನಾವಣೆಯ ಅಭ್ಯರ್ಥಿಗಳು ಸಹಾಯ ಕೇಳಿ ಅವರನ್ನು ಕರೆದವರು…..ಲೋಕಸಭೆಯ ಅಭ್ಯರ್ಥಿಗಳಾಗಿದ್ದ ಶಿವಮೂರ್ತಿ ಸ್ವಾಮಿ, ವೀರಭದ್ರಪ್ಪ ಶಿರೂರ, ಮಹಾದೇವಮ್ಮ ಪಾಟೀಲ,ಶಂಕರ ಥಣಿ ಮುಂತಾದವರು ಸ್ವತಂತ್ರ ಪಕ್ಷದ ಅಭ್ಯರ್ಥಿಗಳಾಗಿದ್ದರು ಅವರು ಕರೆದಾಗ ಅಲ್ಲಿಯೂ ಕೂಡ ತಾಯಿಯವರು ಹೋಗುತ್ತಿದ್ದರು. ಜನತೆ ಅವರನ್ನು ಹರ್ಷಉಲ್ಲಾಸದಿಂದ ಸ್ವಾಗತಿಸುತ್ತಿದ್ದರು. ಅವರ ಭಾಷಣಕ್ಕೆ ಮಂತ್ರಮುಗ್ಧರಾಗುತ್ತಿದ್ದರು.ಒಂದು ಭಾಷಣ ಸಾವಿರಾರು ಜನರನ್ನು ಆಲೋಚನೆಗೆ ಹಚ್ಚುವ ಶಕ್ತಿಯನ್ನು ಹೊಂದಿತ್ತು. ಜಯದೇವಿತಾಯಿಯವರು ವೇದಿಕೆಗೆ ಏರಿದಾಗ ಅಭ್ಯರ್ಥಿಯ ಗೆಲುವಿಗಿಂತ ಸಮಾಜದ ಗೆಲುವಿನ ಬಗ್ಗೆ ಮಾತನಾಡುತ್ತಿದ್ದರು. ಅವರ ಭಾಷಣದ ಕೇಂದ್ರಬಿಂದು ಕನ್ನಡ ಭಾಷೆಯ ಅಭಿಮಾನ, ಕನ್ನಡ ನಾಡಿನ ಹಿತ, ಅಸ್ಪೃಶ್ಯರ ಉದ್ಧಾರ, ಮಹಿಳೆಯರ ಸ್ವಾಭಿಮಾನ, ಶಿಕ್ಷಣದ ಮಹತ್ವ ಮತ್ತು ಸಮಾಜದಲ್ಲಿ ಸಮಾನತೆಯ ಸ್ಥಾಪನೆ ಆಗಿತ್ತು. ಅವರು ಯಾವುದೇ ಪಕ್ಷದ ಹೊಗಳಿಕೆಯಲ್ಲಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ. ಬದಲಾಗಿ ಜನರಿಗೆ ತಮ್ಮ ಹಕ್ಕುಗಳ ಅರಿವು ಮೂಡಿಸಿ, ಸಮಾಜಮುಖಿ ಚಿಂತನೆ ಬೆಳೆಸುವ ಕೆಲಸ ಮಾಡುತ್ತಿದ್ದರು. ತಮ್ಮ ಭಾಷಣದಲ್ಲಿ ಅವರು ಹೀಗೆ ಹೇಳುತ್ತಿದ್ದರು..*”ನಾನು ಇಲ್ಲಿ ಯಾವುದೇ ಅಭ್ಯರ್ಥಿಯ ಪರವಾಗಿ ಮತ ಕೇಳಲು ಬಂದಿಲ್ಲ. ನಾನು ಚುನಾವಣೆಗೆ ನಿಂತಿಲ್ಲ. ನಿಮ್ಮ ಬದುಕು ಹೇಗಿದೆ, ನಿಮ್ಮ ನೋವು ಏನು, ನಿಮ್ಮ ಮಕ್ಕಳ ಭವಿಷ್ಯ ಹೇಗಿರಬೇಕು ಎಂಬುದನ್ನು ಅರಿಯಲು ಬಂದಿದ್ದೇನೆ. ಒಬ್ಬ ಅಭ್ಯರ್ಥಿ ಗೆದ್ದರೆ ಮತ್ತೊಬ್ಬ ಅಭ್ಯರ್ಥಿ ಸೋಲುವುದು ಸಹಜ. ಸತ್ಯ, ನ್ಯಾಯ ಮತ್ತು ನಿಮ್ಮ ಭವಿಷ್ಯ ನಿಮ್ಮ ಹಕ್ಕಾಗಿರಬೇಕು. ಆದ್ದರಿಂದ ಪಕ್ಷವನ್ನು ನೋಡಿ ಮತ ಹಾಕಬೇಡಿ…ಒಳ್ಳೆಯ ವ್ಯಕ್ತಿಯನ್ನು ನೋಡಿ ಮತ ನೀಡಿ.”*ಈ ಮಾತುಗಳು ಜನರ ಮನಸ್ಸಿನ ಮೇಲೆ ಅಪಾರ ಪ್ರಭಾವ ಬೀರಿದವು. ರಾಜಕೀಯಕ್ಕಿಂತ ಜನಸೇವೆ ಮುಖ್ಯ ಎಂಬ ಸಂದೇಶವನ್ನು ಅವರು ಎಲ್ಲೆಡೆ ಸಾರಿದರು* ಅವರ ವ್ಯಕ್ತಿತ್ವವೇ ಜನರಲ್ಲಿ ವಿಶ್ವಾಸವನ್ನು ಮೂಡಿಸುತ್ತಿತ್ತು. ಜನರು ಅವರನ್ನು ಸಮಾಜ ಸುಧಾರಕಿಯಾಗಿ ಕಾಣುತ್ತಿದ್ದರು.ಒಮ್ಮೆ ನಡೆದ ಚುನಾವಣೆಯಲ್ಲಿ ಅವರ ಉಪಸ್ಥಿತಿ ಮತ್ತು ಭಾಷಣಗಳು ಸ್ವತಂತ್ರ ಅಭ್ಯರ್ಥಿಗಳ ಪರವಾಗಿ ಜನಾಭಿಪ್ರಾಯವನ್ನು ತಿರುಗಿಸಿದವು ಎಂದು ಹೇಳಲಾಗುತ್ತದೆ. ಆ ಚುನಾವಣೆಯಲ್ಲಿ ಸ್ವತಂತ್ರ ಪಕ್ಷ ಉತ್ತಮ ಸಾಧನೆ ಮಾಡಿತು ಮತ್ತು ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಯಿತು ಎನ್ನುವ ಮಾತು ಜನರಲ್ಲಿ ಪ್ರಚಲಿತವಾಯಿತು. *ಜಯದೇವಿತಾಯಿಯವರು ಜಯವನ್ನು ತಮ್ಮ ಸಾಧನೆ ಎಂದು ಎಂದಿಗೂ ಹೇಳಿಕೊಳ್ಳಲಿಲ್ಲ. “ಗೆಲ್ಲಬೇಕಾದದ್ದು ಒಬ್ಬ ವ್ಯಕ್ತಿಯ ಸತ್ಯ ಮತ್ತು ಸಮಾಜದ ಹಿತ” ಎಂಬುದೇ ಅವರ ನಿಲುವಾಗಿತ್ತು.*ಆದರೂ ಚುನಾವಣೆಯ ನಂತರ ಅವರು ರಾಜಕೀಯ ಪ್ರಚಾರದಿಂದ ಸಂಪೂರ್ಣವಾಗಿ ದೂರ ಉಳಿದರು. ಚುನಾವಣಾ ವೇದಿಕೆಗಳು ತಮ್ಮ ಆದರ್ಶಗಳಿಗೆ ಸೂಕ್ತವಾದ ಸ್ಥಳವಲ್ಲ ಎಂಬ ಅರಿವು ಅವರಿಗೆ ಮೂಡಲಾರಂಭಿಸಿತು. ಸ್ವಾತಂತ್ರ್ಯ ಹೋರಾಟದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ದೇಶಭಕ್ತರ ತ್ಯಾಗ, ಬಲಿದಾನ, ನಿಸ್ವಾರ್ಥ ಸೇವೆ ಮತ್ತು ಗಾಂಧೀಜಿಯವರ ಆದರ್ಶಗಳ ಪ್ರತೀಕವಾಗಿತ್ತು. ಜಯದೇವಿತಾಯಿಯವರೂ ಇದೇ ಆದರ್ಶಗಳಿಂದ ಪ್ರೇರಿತರಾಗಿ ಕಾಂಗ್ರೆಸ್ನೊಂದಿಗೆ ಗುರುತಿಸಿಕೊಂಡಿದ್ದರು. . ಸ್ವಾತಂತ್ರ್ಯಾನಂತರದ ರಾಜಕೀಯ ವಾತಾವರಣ ನಿಧಾನವಾಗಿ ಬದಲಾಗತೊಡಗಿತು. ತ್ಯಾಗ ಮತ್ತು ಸೇವೆಯ ಸ್ಥಾನದಲ್ಲಿ ಅಧಿಕಾರದ ಹಂಬಲ, ಸ್ವಾರ್ಥ ರಾಜಕಾರಣ ಮತ್ತು ಗುಂಪುಗಾರಿಕೆ ತಲೆ ಎತ್ತುತ್ತಿರುವುದನ್ನು ಜಯದೇವಿತಾಯಿಯವರು ನೋವಿನಿಂದ ಗಮನಿಸಿದರು.ಗಾಂಧೀಜಿಯವರು ಬೋಧಿಸಿದ ಸತ್ಯ, ಅಹಿಂಸೆ, ಸರಳತೆ, ನೈತಿಕತೆ ಮತ್ತು ಬಡವರ ಪರವಾದ ರಾಜಕಾರಣ ಕ್ರಮೇಣ ಮರೆಯಾಗುತ್ತಿರುವಂತೆ ಅವರಿಗೆ ಭಾಸವಾಯಿತು.ಒಮ್ಮೆ ಆದರ್ಶಗಳಿಗಾಗಿ ಬದುಕಿದ್ದ ಪಕ್ಷದಲ್ಲಿ ಈಗ ಆ ಆದರ್ಶಗಳು ಕೇವಲ ಭಾಷಣಗಳಲ್ಲಷ್ಟೇ ಕೇಳಿಬರುತ್ತಿದ್ದವು…..ಆದರೆ ಆಚರಣೆಯಲ್ಲಿ ಅವುಗಳ ಪ್ರತಿಫಲನ ಕಾಣುತ್ತಿರಲಿಲ್ಲ. ಮಾತು ಮತ್ತು ಕೃತಿಯ ನಡುವೆ ಹೆಚ್ಚುತ್ತಿರುವ ಅಂತರ ಅವರನ್ನು ತೀವ್ರವಾಗಿ ಕಾಡಿತು. ಅಧಿಕಾರಕ್ಕಾಗಿ ನಡೆಯುತ್ತಿದ್ದ ರಾಜಕೀಯ ಅವರ ಅಂತರಂಗವನ್ನು ನೋಯಿಸಿತು. ಜನಸೇವೆಯೇ ರಾಜಕಾರಣದ ಆತ್ಮವಾಗಿರಬೇಕು ಎಂಬ ಅವರ ನಂಬಿಕೆಗೆ ಬೆಳವಣಿಗೆಗಳು ವಿರುದ್ಧವಾಗಿದ್ದವು. ಅಂತಹ ಸಂದರ್ಭದಲ್ಲಿ ಆಗಿನ ಹೈದರಾಬಾದ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಬಿ. ಕೃಷ್ಣರಾವ ಅವರು, ಕಾಂಗ್ರೆಸ ಪ್ರಭಾವಿ ಸದಸ್ಯೆಯಾಗಿದ್ದ ಜಯದೇವಿತಾಯಿಯವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರಕ್ಕೆ ಬರಲೇಬೇಕು ಎಂದು ವಿಶೇಷವಾಗಿ ಒತ್ತಾಯಿಸಿದರು. ಅವರ ಜನಪ್ರಿಯತೆ, ವಾಗ್ಮಿತೆ ಮತ್ತು ಜನರ ಮೇಲಿನ ಪ್ರಭಾವವನ್ನು ಕಾಂಗ್ರೆಸ್ ಬಳಸಿಕೊಳ್ಳಲು ಬಯಸಿತು.ಆದರೆ ಜಯದೇವಿತಾಯಿಯವರ ಮನಸ್ಸಿನಲ್ಲಿ ಆಗಲೇ ತೀವ್ರವಾದ ಆತ್ಮಸಂಘರ್ಷ ನಡೆಯುತ್ತಿತ್ತು. ಅಂತಹ ವಾತಾವರಣದಲ್ಲಿ ಮುಂದುವರಿಯುವುದು ತಮ್ಮ ಅಂತರಾತ್ಮಕ್ಕೆ ವಿರುದ್ಧ ಎಂದು ಸ್ಪಷ್ಟವಾಗಿ ಅರಿತುಕೊಂಡರು.ಅವರು ದೃಢವಾಗಿ ಹೇಳಿದರು…..“ಗಾಂಧೀಜಿಯವರ ಆದರ್ಶಗಳಿಗೆ ವಿರುದ್ಧವಾಗಿ ಸಾಗುತ್ತಿರುವ ಪಕ್ಷದಲ್ಲಿ ನನ್ನ ಅಂತರಾತ್ಮ ಜನಸೇವೆ ಮಾಡಲು ಒಪ್ಪುವುದಿಲ್ಲ. ರಾಜಕಾರಣವು ಅಧಿಕಾರದ ದಾಹವೆ ಆಗಿದೆ…. ಜನರ ಉದ್ಧಾರಕ್ಕಾಗಿ ಇರಬೇಕು. ಆದರ್ಶಗಳಿಲ್ಲದ ರಾಜಕೀಯದಲ್ಲಿ ನನಗೆ ಸ್ಥಾನವಿಲ್ಲ.ಈ ನಿರ್ಧಾರವು ಕ್ಷಣಿಕ ಭಾವೋದ್ವೇಗದಿಂದ ಬಂದದ್ದಲ್ಲ. ಅದು ದೀರ್ಘ ಆತ್ಮಪರಿಶೀಲನೆಯ ಫಲವಾಗಿತ್ತು. ಅಧಿಕಾರ, ಹುದ್ದೆ ಅಥವಾ ರಾಜಕೀಯ ಭವಿಷ್ಯಕ್ಕಿಂತ ತಮ್ಮ ಆತ್ಮಸಾಕ್ಷಿಯ ವಿರುದ್ಧ ನಾನು ಹೋಗಲಾರೆ” ಎಂದು ಘೋಷಿಸಿದರು. ಜಯದೇವಿತಾಯಿಯವರು ಕಾಂಗ್ರೆಸ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಸಕ್ರಿಯ ರಾಜಕೀಯದಿಂದ ಸಂಪೂರ್ಣವಾಗಿ ದೂರ ಸರಿದರು. ಅಧಿಕಾರದ ಹಾದಿಯನ್ನು ತೊರೆದು ಸಮಾಜಸೇವೆಯ ಹಾದಿಯನ್ನು ಆರಿಸಿಕೊಂಡರು. ನಂತರ ತಮ್ಮ ಜೀವನವನ್ನು ಕನ್ನಡ ಭಾಷೆಯ ಅಭಿವೃದ್ದಿ, ಮಹಿಳಾ ಸಬಲೀಕರಣ, ಅಸ್ಪೃಶ್ಯರ ಉದ್ಧಾರ, ಶಿಕ್ಷಣದ ಪ್ರಸಾರ ಮತ್ತು ಸಮಾಜದ ಶೋಷಿತ ವರ್ಗಗಳ ಕಲ್ಯಾಣಕ್ಕೆ ಸಮರ್ಪಿಸಿದರು.ಜಯದೇವಿತಾಯಿಯವರ ಈ ನಿರ್ಧಾರವು ತತ್ವಕ್ಕಾಗಿ ಅಧಿಕಾರವನ್ನು ತ್ಯಜಿಸಿದ ಅಪರೂಪದ ವ್ಯಕ್ತಿತ್ವದ ಘೋಷಣೆಯಾಗಿತ್ತು. ಅವರ ಈ ನಿಲುವು ಒಂದು ಸತ್ಯವನ್ನು ಸಾರಿತು…..ಹುದ್ದೆಗಿಂತ ಮೌಲ್ಯಗಳು ಶ್ರೇಷ್ಠ, ಅಧಿಕಾರಕ್ಕಿಂತ ಅಂತರಾತ್ಮ ದೊಡ್ಡದು, ರಾಜಕಾರಣಕ್ಕಿಂತ ಜನಸೇವೆ ಪವಿತ್ರವಾದುದೆಂದು. ಸಮಾಜ ಸೇವೆ, ಶಿಕ್ಷಣ, ಕನ್ನಡ ಭಾಷೆಯ ಉಳಿವು ಮತ್ತು ಶೋಷಿತ ವರ್ಗಗಳ ಅಭಿವೃದ್ಧಿಯೇ ತಮ್ಮ ಜೀವನದ ನಿಜವಾದ ಧ್ಯೇಯ ಎಂದು ಅವರು ನಿಶ್ಚಯಿಸಿದರು. ಹೀಗಾಗಿ ಅವರು ಚುನಾವಣಾ ಪ್ರಚಾರಕ್ಕೆ ಹೋದದ್ದು ಅದೇ ಮೊದಲೂ, ಅದೇ ಕೊನೆಯೂ ಆಯಿತು. ನಂತರ ತಮ್ಮ ಸಂಪೂರ್ಣ ಜೀವನವನ್ನು ಜನಸೇವೆ, ಕನ್ನಡದ ಸೇವೆ ಮತ್ತು ಸಾಮಾಜಿಕ ಪುನರುತ್ಥಾನಕ್ಕೆ ಸಮರ್ಪಿಸಿ, ಆದರ್ಶ ಸಮಾಜ ಸುಧಾರಕಿಯಾಗಿ ಚಿರಸ್ಥಾಯಿಯಾಗಿ ಉಳಿದರು. (ಮುಂದುವರಿಯುವುದು) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ ರಾಜಕೀಯ ಜೀವನ ಭಾರತದ ಮೊದಲ ಸಾರ್ವತ್ರಿಕ ಚುನಾವಣೆಯು ೧೯೫೧ ಅಕ್ಟೋಬರ್ 25ರಿಂದ ೧೯೫೨ರ ಫೆಬ್ರವರಿ 21ರವರೆಗೆ ನಡೆಯಿತು. ಇದು ಸ್ವಾತಂತ್ರ್ಯಾನಂತರದ ಮೊದಲ ರಾಷ್ಟ್ರೀಯ ಚುನಾವಣೆಯಾಗಿದ್ದು… ರಾಷ್ಟ್ರೀಯ ಕಾಂಗ್ರೆಸ್ ಭರ್ಜರಿ ಜಯದ ತಯಾರಾಯಲ್ಲಿ ಇತ್ತು. ಸ್ವಾತಂತ್ರ ಭಾರತದ ಪ್ರಥಮ ಸಾರ್ವತ್ರಿಕ ಚುನಾವಣೆ ನಡೆದಾಗ ದೇಶದಾದ್ಯಂತ ರಾಜಕೀಯ ಚಟುವಟಿಕೆಗಳು ಅತಿಯಾಗಿ ಚುರುಕುಗೊಂಡಿದ್ದವು. ಆ ಸಂದರ್ಭದಲ್ಲಿ ಜಯದೇವಿ ತಾಯಿಯವರು ಕೂಡ ಅನೇಕ ರಾಷ್ಟ್ರೀಯ ನಾಯಕರಂತೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಪಕ್ಷದ ಕಾರ್ಯಕರ್ತೆಯಾಗಿ,…. ಪ್ರಮುಖ ನಾಯಕರು ಮತ್ತು ಜನರ ನಡುವಿನ ಕೊಂಡಿಯಾಗಿ ಸೇವೆ ಸಲ್ಲಿಸಿದರು. ಸಂಘಟನಾ ಸಾಮರ್ಥ್ಯ, ಪ್ರಾಮಾಣಿಕತೆ ಮತ್ತು ಜನಪರ ಕಾಳಜಿಯಿಂದಾಗಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿಶ್ವಾಸವನ್ನು ಗಳಿಸಿದ್ದರು. ಆ ಸಮಯದಲ್ಲಿ ಮಹಾರಾಷ್ಟ್ರ ಪ್ರಾಂತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಹಿರಿಯ ನಾಯಕರು ಜಯದೇವಿ ತಾಯಿಯವರ ಕಾರ್ಯಕ್ಷಮತೆಯನ್ನು ಗಮನಿಸಿ, ಅವರನ್ನು ಚುನಾವಣೆಗೆ ಸ್ಪರ್ಧಿಸಲು ಆಹ್ವಾನಿಸಿದರು. ರಾಜಕೀಯವಾಗಿ ಉಜ್ವಲ ಭವಿಷ್ಯ ಮತ್ತು ಮಂತ್ರಿ ಸ್ಥಾನವೂ ಅವರಿಗೆ ಸುಲಭವಾಗಿ ದೊರೆಯಬಹುದಾಗಿತ್ತು.ಅಂದಿನ ಕೆಲವು ನಾಯಕರು, ಕರ್ನಾಟಕದ ಪರವಾಗಿ ಅವರು ನಡೆಸುತ್ತಿದ್ದ ಹೋರಾಟವನ್ನು ಮೃದುಗೊಳಿಸಲು ಹಾಗೂ ಅವರನ್ನು ತಮ್ಮ ಮಂತ್ರಿಮಂಡಲದಲ್ಲಿ ಸೇರಿಸಿಕೊಳ್ಳುವ ಯೋಚನೆಯನ್ನೂ ಮಾಡಿಕೊಂಡಿದ್ದರು ಎನ್ನಲಾಗುತ್ತದೆ. ಜಯದೇವಿ ತಾಯಿಯವರು ಅಧಿಕಾರದ ಆಸೆಗೆ ಮಣಿಯುವ ವ್ಯಕ್ತಿತ್ವ ಹೊಂದಿರಲಿಲ್ಲ. ಅವರ ದೃಷ್ಟಿಯಲ್ಲಿ ಹುದ್ದೆ, ಅಧಿಕಾರ ಮತ್ತು ವೈಯಕ್ತಿಕ ಗೌರವಕ್ಕಿಂತ ನಾಡು-ನುಡಿ ಮತ್ತು ಜನರ ಹಿತವೇ ಶ್ರೇಷ್ಠವಾಗಿತ್ತು. ಆದ್ದರಿಂದ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿದಾಗ ಅವರು ನೀಡಿದ ಉತ್ತರ ಅವರ ವ್ಯಕ್ತಿತ್ವದ ಎತ್ತರವನ್ನು ತೋರಿಸುತ್ತದೆ.ಅವರು ಸ್ಪಷ್ಟವಾಗಿ ಹೀಗೆ ಹೇಳಿದರು…. “ರಾಜ್ಯಸಭೆಯಲ್ಲಿ ಸೋಲ್ಲಾಪುರ ಕರ್ನಾಟಕದ ಭಾಗವಾಗಲೇಬೇಕು ಎಂದು ಧೈರ್ಯವಾಗಿ ಹೇಳುವ ಸಂಪೂರ್ಣ ಸ್ವಾತಂತ್ರ್ಯ ಮತ್ತು ಅನುಮತಿ ನನಗೆ ಇದ್ದರೆ ಮಾತ್ರ ನಾನು ಚುನಾವಣೆಗೆ ಸಹಕರಿಸಲು ಸಿದ್ಧ.”ಈ ಮಾತುಗಳು ಜಯದೇವಿ ತಾಯಿಯವರ ಅಚಲ ನಿಲುವಿಗೆ ಸಾಕ್ಷಿಯಾಗಿವೆ. ಅವರಿಗೆ ಚುನಾವಣೆಯಲ್ಲಿ ಗೆಲ್ಲುವುದು ಅಥವಾ ಮಂತ್ರಿಯಾಗುವುದು ಮುಖ್ಯವಲ್ಲ……ಗಡಿ ಭಾಗದ ಕನ್ನಡಿಗರ ನ್ಯಾಯಸಮ್ಮತ ಹಕ್ಕುಗಳ ಪರವಾಗಿ ಸಂಸತ್ತಿನಲ್ಲಿಯೂ ಧ್ವನಿ ಎತ್ತಲು ಅವಕಾಶ ದೊರೆಯಬೇಕೆಂಬುದು ಅವರ ಏಕೈಕ ಆಶಯವಾಗಿತ್ತು.ಜಯದೇವಿ ತಾಯಿಯವರು ಅಧಿಕಾರಕ್ಕಾಗಿ ತಮ್ಮ ತತ್ವಗಳನ್ನು ಎಂದಿಗೂ ಬಿಟ್ಟುಕೊಡದ ನಾಯಕಿಯಾದರು. ಅವರ ರಾಜಕೀಯ ಚಟುವಟಿಕೆಯಲ್ಲಿ ತೊಡಗಿಕೊಂಡಿರುವ ಮುಖ್ಯ ಕಾರಣವೆಂದರೆ ಗಡಿ ಭಾಗದ ಕನ್ನಡಿಗರ ಹಕ್ಕುಗಳ ರಕ್ಷಣೆ… ಕನ್ನಡಿಗರ ಆಸ್ತಿ ತ್ವದ ರಕ್ಷಣೆ ಆಗಬೇಕು ಅಖಂಡ ಕರ್ನಾಟಕದ ನಿರ್ಮಾಣ ಮಾಡುವ ಉದ್ದೇಶವಾಗಿತ್ತು. ಕರ್ನಾಟಕದವರ ಪರವಹಿಸಿ ಮಾತನಾಡುತ್ತಿದ್ದ ಜಯದೇವಿತಾಯಿಯವರನ್ನು ಶಾಂತಗೊಳಿಸಲು ಆಗಿನ ಎಂಪಿ ಸಿಸಿ ಅಧ್ಯಕ್ಷರಾಗಿದ್ದ ಹಿರೇಯವರು ಚುನಾವಣೆಯಲ್ಲಿ ನಿಲ್ಲಲು ಜಯದೇವಿ ತಾಯಿಯವರಿಗೆ ಕೇಳಿದರು. ಜಯದೇವಿತಾಯಿಯವರು ಸ್ಪರ್ಧಿಸಿಸಲು ಒಪ್ಪದಿದ್ದಾಗ ಹೀರೆಯವರು..”ತಾಯಾಯವರೆ ನೀವು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು, ನೀವು ಚುನಾವಣೆಯಲ್ಲಿ ಸ್ಪರ್ಧಿಸಲು ಇಚ್ಛಿಸದಿದ್ದರೆ, ನಿಮ್ಮ ಅಭಿಪ್ರಾಯದಂತೆ ಜನಸೇವೆಗೆ ಸಮರ್ಥರಾಗಿರುವ ವ್ಯಕ್ತಿಯೊಬ್ಬರನ್ನು ಸೂಚಿಸಿ” ಎಂದು ಕೇಳಿದರು. ಆಗ ಜಯದೇವಿ ತಾಯಿಯವರು ಯಾವುದೇ ವೈಯಕ್ತಿಕ ಲಾಭ ಅಥವಾ ರಾಜಕೀಯ ಲೆಕ್ಕಾಚಾರವಿಲ್ಲದೆ *ಮಹಾರಾಣಿ ನಿರ್ಮಲಾರಾಜೆ ಭೋಸಲೆ ಅವರ ಹೆಸರನ್ನು ಶಿಫಾರಸು ಮಾಡಿದರು.ನಿರ್ಮಲಾರಾಜೆ ಭೋಸಲೆ *ಅವರು ಅಕ್ಕಲಕೋಟೆ ಸಂಸ್ಥಾನದ ಮಹಾರಾಣಿಯಾಗಿದ್ದರು. ಅರಮನೆಯ ವೈಭವದ ಜೀವನದಲ್ಲಿದ್ದವರು…. ಅವರಲ್ಲಿದ್ದ ನಾಯಕತ್ವತೆ,ಸಂವೇದನಾ ಶೀಲತೆ ಮತ್ತು ಸೇವಾ ಮನೋಭಾವವು ಸಮಾಜದ ಅಭಿವೃದ್ಧಿಗೆ ಬಳಕೆಯಾಗಬೇಕೆಂದು ಜಯದೇವಿ ತಾಯಿಯವರು ನಿರ್ಮಲಾ ರಾಜಯೆವರಿಗೆ ಹೇಳಿದರು “ಅರಮನೆಯ ನಾಲ್ಕು ಗೋಡೆಗಳೊಳಗೆ ಜೀವನವನ್ನು ಸೀಮಿತಗೊಳಿಸದೆ, ಜನರ ನಡುವೆ ಬೆರೆತು ಅವರ ಕಷ್ಟ-ಸುಖಗಳನ್ನು ಅರಿಯಬೇಕು” ಎಂದು ಅವರು ನಿರ್ಮಲಾ ರಾಜೆಯವರನ್ನು ಪ್ರೇರೇಪಿಸಿದರು.ಜಯದೇವಿ ತಾಯಿಯವರ ಪ್ರೋತ್ಸಾಹದಿಂದ ನಿರ್ಮಲಾ ರಾಜೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ ಶಿಕ್ಷಣ, ಮಹಿಳಾ ಕಲ್ಯಾಣ, ಸಾರ್ವಜನಿಕ ಸೇವೆ ಮತ್ತು ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಸಮಾಜಸೇವೆಯ ಅನುಭವವು ಅವರಿಗೆ ಜನಜೀವನದ ನೈಜ ಸಮಸ್ಯೆಗಳ ಪರಿಚಯವನ್ನು ನೀಡಿತು. ಈ ಸಾಮಾಜಿಕ ಸೇವೆಯ ಪಯಣವೇ ಮುಂದೆ ಅವರನ್ನು ರಾಜಕೀಯ ಕ್ಷೇತ್ರಕ್ಕೂ ಕೊಂಡೊಯ್ದಿತು. ಜನಸೇವೆಯನ್ನು ಇನ್ನಷ್ಟು ವ್ಯಾಪಕವಾಗಿ ಮಾಡಲು ರಾಜಕೀಯವೂ ಒಂದು ಸಾಧನ ಎಂಬ ಅರಿತಿದ್ದ ಜಯದೇವಿ ತಾಯಿಯವರು ನಿರ್ಮಲಾರಾಜೆ ಭೋಸಲೆ ಅವರ ನಾಯಕತ್ವದ ವಿಶಿಷ್ಟ ಗುಣ ಔದಾರ್ಯವೆಂದು ತೋರಿಸಿಕೊಟ್ಟರು. ಸಮಾಜಕ್ಕೆ ಉತ್ತಮ ನಾಯಕತ್ವ ನೀಡಬಲ್ಲ ವ್ಯಕ್ತಿಗಳನ್ನು ಗುರುತಿಸಿ, ಅವರನ್ನು ಬೆಳೆಸುವ ಮಹತ್ತರ ಕಾರ್ಯವನ್ನು ಮಾಡಿದರು. ನಿಜವಾದ ನಾಯಕ ಎಂದರೆ ಸ್ವತಃ ಮುಂದೆ ನಿಲ್ಲದೇ ಮತ್ತೊಬ್ಬ ನಾಯಕನನ್ನು ರೂಪಿಸುವ ಸಾಮರ್ಥ್ಯವೂ ಹೊಂದಿರಬೇಕು ಎಂಬುದಕ್ಕೆ ಜಯದೇವಿ ತಾಯಿಯವರ ಜೀವನವೇ ಅತ್ಯುತ್ತಮ ಉದಾಹರಣೆಯಾಗಿದೆ. ಕನ್ನಡ ನಾಡಿನ ಗಡಿಭಾಗಗಳ ಬಗ್ಗೆ ಅವರಿಗೆ ಅಪಾರವಾದ ಕಾಳಜಿ. ಅಕ್ಕಲಕೋಟ, ಸೊಲ್ಲಾಪುರ ಸೇರಿದಂತೆ ಕನ್ನಡಿಗರ ಬದುಕು, ಭಾಷೆ ಮತ್ತು ಸಂಸ್ಕೃತಿಯೊಂದಿಗೆ ಬೆಸೆದುಕೊಂಡಿದ್ದ ಪ್ರದೇಶಗಳು ಕರ್ನಾಟಕದೊಂದಿಗೆ ಉಳಿಯಬೇಕು ಎಂಬುದು ಅವರ ಆಂತರಿಕ ಬಯಕೆಯಾಗಿತ್ತು. ಅಕ್ಕಲಕೋಟ ಮತ್ತು ಸೊಲ್ಲಾಪುರ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಗೊತ್ತುವಳಿ ತರಲು ನಿರ್ಮಲ ರಾಜಯೆಅವರು ಕಾರಣರಾದರು ಎಂಬ ಸುದ್ದಿ ಜಯದೇವಿ ತಾಯಿಯವರ ಕಿವಿಗೆ ಬಿದ್ದಾಗ, ಅದು ಅವರ ಮನಸ್ಸಿನ ಮೇಲೆ ಬಿದ್ದ ದೊಡ್ಡ ಹೊಡೆತವಾಗಿತ್ತು.ಯಾಕೆಂದರೆ, ತಾವು ನಂಬಿ ಬೆಳೆಸಿದ ವ್ಯಕ್ತಿಯೇ ತಮ್ಮ ಮನಸ್ಸಿಗೆ ವಿರುದ್ಧವಾದ ನಿಲುವು ತೆಗೆದುಕೊಂಡಿದ್ದಾರೆ ಎಂಬ ನೋವು ಒಂದು ಕಡೆಯಾಯಿತು. “ನಾವು ಯಾರಿಗಾಗಿ ಹೋರಾಡಿದೆವು?ಯಾರನ್ನು ನಂಬಿ ಮುಂದೆ ಕಳುಹಿಸಿದೆವು?ನಮ್ಮ ನಾಡಿನ ನೋವನ್ನು ಹೇಳಬೇಕಾದವರೇ ನಮ್ಮ ನಾಡಿನ ಗಡಿಯನ್ನು ಬೇರೆಯವರ ಪಾಲಾಗಿಸುವ ಮಾತಿಗೆ ಹೇಗೆ ಕೈಜೋಡಿಸಿದರು?”ಎಂದರು .ಜಯದೇವಿ ತಾಯಿಯವರಿಗೆ ಸಾಮಾನ್ಯ ರಾಜಕೀಯ ಭಿನ್ನಾಭಿಪ್ರಾಯವಾಗಿರಲಿಲ್ಲ.ಅಕ್ಕಲಕೋಟ, ಸೊಲ್ಲಾಪುರ ಕೇವಲ ಭೂಪಟದ ಮೇಲಿನ ಪ್ರದೇಶಗಳಾಗಿರದೆ…..ಅಲ್ಲಿ ಕನ್ನಡದ ಉಸಿರಿತ್ತು. ಕನ್ನಡಿಗರ ಬದುಕಿತ್ತು. ತಲೆಮಾರುಗಳಿಂದ ಬೆಳೆದು ಬಂದ ಭಾಷೆ, ಸಂಸ್ಕೃತಿ, ನೆನಪುಗಳು, ಸಂಬಂಧಗಳು ಇದ್ದವು.ಆ ನೆಲದ ಬಗ್ಗೆ ಅವರಿಗಿದ್ದ ಭಾವನೆ ತಾಯಿಗೆ ತನ್ನ ಮಗುವಿನ ಮೇಲಿರುವ ಮಮತೆಯಂತಿತ್ತು. ತಾವು ಪ್ರೀತಿಸಿದ ನಾಡಿಗಾಗಿ ಹೋರಾಡುವವರನ್ನು ಹುಡುಕಿ, ಅವರನ್ನು ಮುಂದೆ ತಂದು, ಅವರ ಮೇಲೆ ವಿಶ್ವಾಸವಿಟ್ಟು ಜವಾಬ್ದಾರಿ ನೀಡಿದ ಒಬ್ಬ ಹಿರಿಯ ಹೋರಾಟಗಾರ್ತಿಯ ಮನಸ್ಸಿಗೆ ಇದು ಎಷ್ಟು ದೊಡ್ಡ ಆಘಾತವಾಯಿತು. ಜಯದೇವಿ ತಾಯಿಯವರ ರಾಜಕೀಯ ಜೀವನದಲ್ಲಿ ಒಂದು ಕಹಿ ಅಧ್ಯಾಯವಾಗಿದ್ದರೂ, ಅದು ಅವರ ಕನ್ನಡಾಭಿಮಾನವನ್ನು ಕುಗ್ಗಿಸಲಿಲ್ಲ.ಬದಲಿಗೆ ಅವರ ಮನಸ್ಸಿನಲ್ಲಿ ಇನ್ನಷ್ಟು ಗಟ್ಟಿಯಾದ ಸಂಕಲ್ಪ ಮೂಡಿಸಿತು….ಗಡಿ ಕಳೆದುಕೊಂಡರೂ ಕನ್ನಡ ಕಳೆದುಕೊಳ್ಳಬಾರದು.ಭೂಭಾಗದ ಮೇಲೆ ಹಕ್ಕು ಕಳೆದುಕೊಂಡರೂ ಭಾಷೆಯ ಮೇಲಿನ ಪ್ರೀತಿ ಕಳೆದುಕೊಳ್ಳಬಾರದು.ರಾಜಕೀಯದಲ್ಲಿ ಸೋಲು ಬಂದರೂ ನಾಡಿನ ಪರವಾದ ಹೋರಾಟದಲ್ಲಿ ಹಿಂದೆ ಸರಿಯಬಾರದೆಂದ ತಮ್ಮ ಹೊರಾಟ ಮುಂದುವರಿಸಿದರು. ಅವರ ಜೀವನ ನಮಗೆ ಹೇಳುವ ಸಂದೇಶ ಒಂದೇ“ಪದವಿ ಬದಲಾಗಬಹುದು…ರಾಜಕೀಯದವರು ಬದಲಾಗಬಹುದು…ಆದರೆ ಹೆತ್ತ ತಾಯಿಯ ಮೇಲಿನ ಪ್ರೀತಿ, ನಾಡಿನ ಮೇಲಿನ ಅಭಿಮಾನ ಮತ್ತು ನುಡಿಯ ಮೇಲಿನ ನಿಷ್ಠೆ ಬದಲಾಗಬಾರದು.”ಸೊಲ್ಲಾಪುರ ಮತ್ತು ಅಕ್ಕಲಕೋಟ,ಜತ್ತದ ನೆಲದ ಮೇಲೆ ಕನ್ನಡದ ಹೆಜ್ಜೆಗುರುತು ಉಳಿಯಬೇಕು ಎಂಬ ಅವರ ಕನಸನ್ನು ತಮ್ಮ ಹೃದಯದಿಂದ ಎಂದಿಗೂ ಅಳಿಸಿರಲಿಲ್ಲ.ಅದೇಷ್ಟೋ ಬಾರಿ ಕಣ್ಣೀರಿನು ಹಾಕಿದರುಅದು ತನ್ನ ನಾಡು ತನ್ನ ಕೈಯಿಂದ ಜಾರಿಹೋಗುತ್ತಿರುವುದನ್ನು ಕಂಡ ಕನ್ನಡ ತಾಯಿಯ ಹೃದಯದ ನೊಂದಿತ್ತು. *ಕನ್ನಡ ತಾಯಿಗಾಗಿ |ಕಣ್ಣೀರ ಸುರಿದಾವಉನ್ನತ ನಾಡು ಒಂದು ಗೂಡಿಸಲು- ಸಿದ್ದರಾಮಅನ್ನ ನೀರಿನ ಪರಿವೆ ಹರಿಸಿದಿರಿ||* ಅದಕ್ಕಾಗಿಯೇ ಜಯದೇವಿ ತಾಯಿಯವರು ಇಂದಿಗೂ ನಿಸ್ವಾರ್ಥ ಸೇವೆ, ಕನ್ನಡಾಭಿಮಾನ ಮತ್ತು ತತ್ವನಿಷ್ಠ ರಾಜಕೀಯದ ಪ್ರತೀಕವಾಗಿ ಸ್ಮರಿಸಲ್ಪಡುತ್ತಾರೆ. (ಮುಂದುವರೆಯುವುದು) ಸವಿತಾ ದೇಶಮುಖ .
ಧಾರಾವಾಹಿ ಸಂಗಾತಿ-29 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ಸಲ್ಲಿಸಿದ ಮಹಾನ್ ಚೇತನ ಕನ್ನಡ ಕೋಟಿ ಪ್ರಕಾಶನ ನಿರ್ಮಾಣ ಗಡಿನಾಡ ಸೊಲ್ಲಾಪುರದಲಿ ಕನ್ನಡ ಕೋಟಿ ಪ್ರಕಾಶನ ಸ್ಥಾಪನೆ ಸ್ವಾತಂತ್ರ್ಯಾನಂತರ ಭಾರತದ ರಾಜ್ಯಗಳ ಪುನರ್ರಚನೆಗೆ ಭಾಷೆಯನ್ನು ಪ್ರಮುಖ ಆಧಾರವನ್ನಾಗಿ ಪರಿಗಣಿಸುವ ಚರ್ಚೆ ಆರಂಭವಾಯಿತು. ಇದೇ ಸಂದರ್ಭದಲ್ಲಿ ಗಡಿ ಪ್ರದೇಶಗಳಾದ ಸೊಲ್ಲಾಪುರ, ಅಕ್ಕಲಕೋಟೆ, ಜತ್ತ, ನಿಪ್ಪಾಣಿ, ಬೀದರ ಮೊದಲಾದ ಭಾಗಗಳಲ್ಲಿ ಭಾಷಾ ಆಧಾರಿತ ಗುರುತಿನ ಪ್ರಶ್ನೆ ತೀವ್ರ ಸ್ವರೂಪ ಪಡೆದಿತು.ಕೇಂದ್ರ ಸರ್ಕಾರದ ಬೆಂಬಲದೊಂದಿಗೆ ಸೊಲ್ಲಾಪುರವನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಆತಂಕ ಕನ್ನಡಿಗರಲ್ಲಿ ಮೂಡಿತ್ತು. ಕನ್ನಡಿಗರಲ್ಲಿದ್ದ ಅಜಾಗರೂಕತೆ ಹಾಗೂ ಸಂಘಟನೆಯ ಕೊರತೆಯನ್ನು ಕೆಲವರು ದುರುಪಯೋಗಪಡಿಸಿಕೊಳ್ಳಲು ಪ್ರಯತ್ನಿಸಿದರು.ಆ ಸಮಯದಲ್ಲಿ ದೇಶದಾದ್ಯಂತ ಜನಗಣತಿ ಕಾರ್ಯ ಆರಂಭವಾಗಿತ್ತು. ಜನಗಣತಿಯಲ್ಲಿ ಜನರು ತಮ್ಮ ಮಾತೃಭಾಷೆಯನ್ನು ಯಾವ ಭಾಷೆಯೆಂದು ದಾಖಲಿಸುತ್ತಾರೋ, ಅದರ ಆಧಾರದ ಮೇಲೆಯೇ ಮುಂದಿನ ಭಾಷಾವಾರು ರಾಜ್ಯಗಳ ರಚನೆಗೆ ಮಹತ್ವದ ಆಧಾರ ಸಿಗುವ ಸಾಧ್ಯತೆ ಇತ್ತು. ಹೀಗಾಗಿ ಗಡಿನಾಡಿನ ಕನ್ನಡಿಗರಲ್ಲಿ ಕನ್ನಡ ಭಾಷೆಯ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯಗತ್ಯವಾಗಿತ್ತು. ಒಳನಾಡಿನ ಕನ್ನಡಿಗರಿಗಿಂತ ಗಡಿನಾಡಿನ ಕನ್ನಡಿಗರು ಹೆಚ್ಚಿನ ಎಚ್ಚರಿಕೆ ವಹಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು.ಇಂಥ ಸಂದರ್ಭದಲ್ಲಿ ಕೆಲವು ಮಹಾರಾಷ್ಟ್ರ ಪರ ಸಂಘಟನೆಗಳು ಮುಗ್ಧ ಹಾಗೂ ಅಶಿಕ್ಷಿತ ಜನರನ್ನು ತಪ್ಪು ದಾರಿಗೆಳೆಯುವ ಪ್ರಯತ್ನ ನಡೆಸಿದವು. ಮರಾಠಿಯನ್ನು ಮಾತೃಭಾಷೆಯಾಗಿ ದಾಖಲಿಸಿದರೆ ಹೆಚ್ಚಿನ ಸೌಲಭ್ಯಗಳು ದೊರೆಯುತ್ತವೆ ಎಂಬ ಸುಳ್ಳು ಪ್ರಚಾರ ಮಾಡಲಾಯಿತು. ಇದರಿಂದ ಕನ್ನಡಿಗರ ಅಸ್ತಿತ್ವಕ್ಕೆ ಧಕ್ಕೆಯಾಗುವ ಅಪಾಯ ಎದುರಾಯಿತು.ಇಂಥ ಗಂಭೀರ ಪರಿಸ್ಥಿತಿಯನ್ನು ಅರಿತ ಜಯದೇವಿ ತಾಯಿಯವರು ತಮ್ಮ ಸ್ವಂತ ಖರ್ಚಿನಲ್ಲಿ ಕನ್ನಡ ಕೋಟಿ ಎನ್ನುವ ಪ್ರಕಾಶನವನ್ನು ಪ್ರಾರಂಭಿಸಿದರು.ಅವರ ಜೊತೆ ಕನ್ನಡ ಪರ ಹೋರಾಟಗಾರರು ಮತ್ತು ಸಮಾಜಮುಖಂಡರು ಜನರಲ್ಲಿ ಕನ್ನಡಾಭಿಮಾನ ಬೆಳೆಸಲು ಮುಂದಾದರು. ಜನರಿಗೆ ಕನ್ನಡದ ಇತಿಹಾಸ, ಸಂಸ್ಕೃತಿ, ಸಾಹಿತ್ಯ ಹಾಗೂ ಭಾಷೆಯ ಮಹತ್ವವನ್ನು ಮನವರಿಕೆ ಮಾಡಿಕೊಟ್ಟರು. ಮನೆ ಮನೆಗೆ ತೆರಳಿ, ಸಭೆ-ಸಮಾರಂಭಗಳನ್ನು ಆಯೋಜಿಸಿ, ಕನ್ನಡವೇ ತಮ್ಮ ಮಾತೃಭಾಷೆ ಎಂದು ಜನಗಣತಿಯಲ್ಲಿ ದಾಖಲಿಸಿಕೊಳ್ಳುವಂತೆ ಮನವಿ ಮಾಡಿದರು.ಈ ಜಾಗೃತಿ ಅಭಿಯಾನದ ಪ್ರಮುಖ ಭಾಗವಾಗಿ ಸೊಲ್ಲಾಪುರದಲ್ಲಿ “ಕನ್ನಡ ಕೋಟಿ” ಎಂಬ ಪ್ರಕಾಶನ ಸ್ಥಾಪಿಸಲಾಯಿತು. ಇದರ ಉದ್ದೇಶ ಗಡಿಭಾಗದ ಕನ್ನಡಿಗರನ್ನು ಒಗ್ಗೂಡಿಸುವುದು, ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸುವುದು, ಮರಾಠೀಕರಣದ ಪ್ರಯತ್ನಗಳನ್ನು ಪ್ರಜಾಸತ್ತಾತ್ಮಕವಾಗಿ ಎದುರಿಸುವುದು ಹಾಗೂ ಕನ್ನಡಿಗರಲ್ಲಿ ಆತ್ಮವಿಶ್ವಾಸ ಮೂಡಿಸುವುದಾಗಿತ್ತು.ಕನ್ನಡ ಕೋಟಿಯ ಮೂಲಕ ಕನ್ನಡ ಶಾಲೆಗಳ ರಕ್ಷಣೆ, ಕನ್ನಡ ಸಾಹಿತ್ಯ ಕಾರ್ಯಕ್ರಮಗಳು, ಸಾಂಸ್ಕೃತಿಕ ಉತ್ಸವಗಳು, ಸಾರ್ವಜನಿಕ ಸಭೆಗಳು ಮತ್ತು ಜಾಗೃತಿ ಬರಹಗಳನ್ನು ಹೊರತಂದರು….ಜನಗಣತಿಯಲ್ಲಿ ಕನ್ನಡವನ್ನೇ ತಮ್ಮ ಮಾತೃಭಾಷೆಯಾಗಿ ದಾಖಲಿಸಿಕೊಳ್ಳುವಂತೆ ವ್ಯಾಪಕ ಪ್ರಚಾರ ನಡೆಸು ಪ್ಲಾಮಪ್ಲೇಟ್ಸ್ಗಳನ್ನು, ಬುಕ್ಲಿಟ್ಸ್ ಗಳನ್ನು ಪ್ರಕಟಿಸಲಾಯಿತು. ಹಳ್ಳಿ ಹಳ್ಳಿಗೆ ಹೋಗಿ ಹಂಚಲಾಯಿತು. ಗಡಿಭಾಗದ ಕನ್ನಡಿಗರಲ್ಲಿ ಹೊಸ ಚೈತನ್ಯ ಮೂಡಿಸಿ, ಕನ್ನಡ ಭಾಷೆ ಗಡಿಭಾಗದ ಜನರಲ್ಲಿ ಬಲವಾದ ಅಡಿಪಾಯ ಹಾಕಿದವು. ಹೀಗೆ ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನವು ಗಡಿನಾಡಿನ ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಹಾಗೂ ಸ್ವಾಭಿಮಾನವನ್ನು ಕಾಪಾಡುವ ಮಹತ್ವದ ಚಳವಳಿಯಾಗಿ ರೂಪುಕೊಡುವಲ್ಲಿ, ಭಾಷಾವಾರು ರಾಜ್ಯಗಳ ರಚನೆಯ ಇತಿಹಾಸದಲ್ಲಿ ಗಡಿನಾಡಿನ ಕನ್ನಡ ಜಾಗೃತಿಗೆ ಕೊಟ್ಟ ಕೊಡುಗೆ ಸ್ಮರಣೀಯವಾಗಿದೆ. “ಸುಲಭ ಕನ್ನಡದೊಳು | ಸಲ್ಲಲಿತ ವಚನಾದಿ |ಸಲ್ಲಿಸಿದರು ಅನುಭವ ದಾಸೋಹ – ನಮ್ಮವರು ಕಲಿಸಿದರು ಸರಳ ಶೈಲಿಯನು ||”ಎನ್ನು ತ ಜಯದೇವಿ ತಾಯಿಯವರು ಕನ್ನಡ ಸಾಹಿತ್ಯದ ಶರಣರು ಮತ್ತು ದಾಸರು ಕನ್ನಡ ಭಾಷೆಗೆ ನೀಡಿದ ಅಪೂರ್ವ ಕೊಡುಗೆ”ಸುಲಭ ಕನ್ನಡದೊಳು” ಎಂದರೆ ಎಲ್ಲ ಸಾಮಾನ್ಯ ಜನರಿಗೆ ಅರ್ಥವಾಗುವ ಸರಳ ಕನ್ನಡದಲ್ಲಿ.ಸುಂದರವಾದ, ಲಲಿತವಾದ ವಚನಗಳು ಹಾಗೂ ಇತರ ಸಾಹಿತ್ಯ ಕೃತಿಗಳನ್ನು ಶರಣರು ತಮ್ಮ ಆಧ್ಯಾತ್ಮಿಕ ಅನುಭವಗಳನ್ನು ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಜನರಿಗೆ ಹಂಚಿದರು. ಅದೇ ಅವರ ಅನುಭವ ದಾಸೋಹ.“ನಮ್ಮವರು ಕಲಿಸಿದರು ಸರಳ ಶೈಲಿಯನು” ನಮ್ಮ ಕನ್ನಡದ ಶರಣರು, ದಾಸರು ಮತ್ತು ಕವಿಗಳು ಅಲಂಕಾರಿಕ, ಕಠಿಣ ಭಾಷೆಯ ಬದಲು ಸರಳ, ಸುಲಭ ಮತ್ತು ಜನಸಾಮಾನ್ಯರಿಗೆ ಅರ್ಥವಾಗುವ ಶೈಲಿಯಲ್ಲಿ ಸಾಹಿತ್ಯ ರಚಿಸುವ ಪರಂಪರೆಯನ್ನು ಬೆಳೆಸಿದರು. ಕನ್ನಡದ ಶರಣರು ಮತ್ತು ದಾಸರು ಸರಳ ಕನ್ನಡದಲ್ಲಿ ವಚನಗಳು ಹಾಗೂ ಭಕ್ತಿಸಾಹಿತ್ಯವನ್ನು ರಚಿಸಿ, ತಮ್ಮ ಜೀವನಾನುಭವಗಳನ್ನು ಜನರೊಂದಿಗೆ ಹಂಚಿಕೊಂಡು, ಕನ್ನಡ ಸಾಹಿತ್ಯವನ್ನು ಜನಸಾಮಾನ್ಯರ ಭಾಷೆಯನ್ನಾಗಿ ರೂಪಿಸಿದ ಮಹತ್ವದ ಸೇವೆಯನ್ನು ಕೊಂಡಾಡುತ…. ಜನಸಾಮಾನ್ಯರಿಗೆ ತಲುಪಬೇಕಾದರೆ ಸರಳ ಕನ್ನಡ ಭಾಷೆಯಲ್ಲಿ ಸಾಹಿತ್ಯವನ್ನು ನಿರ್ಮಿಸಿ ಜನರಿಗೆ ಹಂಚುವ ಕಾರ್ಯಕ್ಕಾಗಿ….. ೧೯೫೦ ರಲ್ಲಿ ಕನ್ನಡ ಕೋಟಿ ಪ್ರಕಾಶನ ಪ್ರಾರಂಭಿಸಿದರು ಅದಕ್ಕೆ ಅಧ್ಯಕ್ಷರಾಗಿ ಡಾ. ಶಂಕರ ಮೂಗಿ ಅವರು ಸುಪ್ರೀಂ ಕೋರ್ಟಿನ ನ್ಯಾಯವಾದಿಗಳು(ನನ್ನ ತಂದೆ) ನಿರ್ವಹಿಸಿದರು. ಭಾಷಾ ಜಾಗೃತಿಯ ಕ್ರಾಂತಿಕಾರಿ ಹೆಜ್ಜೆ೧೯೫೦ನೇ ವರ್ಷ ಗಡಿಭಾಗದ ಕನ್ನಡಿಗರ ಪಾಲಿಗೆ ಅತ್ಯಂತ ಮಹತ್ವದ ತಿರುವಿನ ವರ್ಷವಾಗಿತ್ತು. ಭಾಷಾವಾರು ರಾಜ್ಯಗಳ ರಚನೆಯ ಚರ್ಚೆ ದೇಶಾದ್ಯಂತ ನಡೆಯುತ್ತಿದ್ದ ಸಂದರ್ಭದಲ್ಲಿ ಗಡಿಭಾಗಗಳಲ್ಲಿ ಕನ್ನಡ ಭಾಷೆಯ ಅಸ್ತಿತ್ವವೇ ಪ್ರಶ್ನಾರ್ಥಕವಾಗಿತ್ತು.ಇಂತಹ ಸಂಕಷ್ಟದ ಸಂದರ್ಭದಲ್ಲಿ ನಾಡು, ನುಡಿ ಮತ್ತು ಕನ್ನಡಿಗರ ಸ್ವಾಭಿಮಾನವನ್ನು ಉಳಿಸುವ ದೃಢ ಸಂಕಲ್ಪದೊಂದಿಗೆ ಡಾ. ಜಯದೇವಿ ತಾಯಿಯವರು ಮುಂಚೂಣಿಗೆ ಬಂದರು. ಜಯದೇವಿ ತಾಯಿಯವರಿಗೆ ಕನ್ನಡವೆಂದರೆ ಸಂಸ್ಕೃತಿ ಮತ್ತು ಆತ್ಮಗೌರವದ ಪ್ರತೀಕವಾಗಿತ್ತು. ಭಾಷೆ ಉಳಿದರೆ ಸಂಸ್ಕೃತಿ ಉಳಿಯುತ್ತದೆ, ಸಂಸ್ಕೃತಿ ಉಳಿದರೆ ಜನಾಂಗ ಉಳಿಯುತ್ತದೆ ಎಂಬ ದೃಢ ನಂಬಿಕೆಯನ್ನು ಅವರು ಹೊಂದಿದ್ದರು. ಗಡಿಭಾಗದ ಕನ್ನಡಿಗರಲ್ಲಿ ಭಾಷಾಭಿಮಾನ ಬೆಳೆಸುವ ಉದ್ದೇಶದಿಂದ ಸೊಲ್ಲಾಪುರದಲ್ಲಿ ತಮ್ಮ ಸ್ವಂತ ಹಣದಿಂದ “ಕನ್ನಡ ಕೋಟಿ” ಪ್ರಕಾಶನ ಸ್ಥಾಪಿಸಿದರು. ಆ ಕಾಲದಲ್ಲಿ ಯಾವುದೇ ದೊಡ್ಡ ಆರ್ಥಿಕ ನೆರವು ಅಥವಾ ಸರ್ಕಾರಿ ಬೆಂಬಲವಿಲ್ಲದೆ ಇಂತಹ ಸಂಘಟನೆಯನ್ನು ಕಟ್ಟುವುದು ಅತ್ಯಂತ ಸಾಹಸದ ಕೆಲಸವಾಗಿತ್ತು. ಆದರೆ ಜಯದೇವಿ ತಾಯಿಯವರ ಅಚಲ ಸಂಕಲ್ಪದ ಮುಂದೆ ಆರ್ಥಿಕ ಅಡೆತಡೆಗಳು ಅಡ್ಡಿಯಾಗಲಿಲ್ಲ.ಕನ್ನಡ ಕೋಟಿಯ ಮುಖ್ಯ ಉದ್ದೇಶ ಕನ್ನಡ ಭಾಷೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವುದು, ಕನ್ನಡಿಗರನ್ನು ಸಂಘಟಿಸುವುದು ಹಾಗೂ ಗಡಿಭಾಗದಲ್ಲಿ ಕನ್ನಡದ ಅಸ್ತಿತ್ವವನ್ನು ದೃಢಪಡಿಸುವುದಾಗಿತ್ತು. ಗ್ರಾಮದಿಂದ ಗ್ರಾಮಕ್ಕೆ ತೆರಳಿ ಕನ್ನಡದ ಮಹತ್ವವನ್ನು ವಿವರಿಸುವುದು, ಸಭೆ-ಸಮಾರಂಭಗಳನ್ನು ಆಯೋಜಿಸುವುದು, ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಬಗ್ಗೆ ಜನರಲ್ಲಿ ಅಭಿಮಾನ ಬೆಳೆಸುವುದು, ಯುವಕರನ್ನು ಕನ್ನಡ ಚಳವಳಿಯಲ್ಲಿ ತೊಡಗಿಸಿಕೊಳ್ಳುವುದು ಈ ಸಂಸ್ಥೆಯ ಪ್ರಮುಖ ಕಾರ್ಯಗಳಾಗಿದ್ದವು. ಜನಗಣತಿ ಸಂದರ್ಭದಲ್ಲಿ ಜನರು ತಮ್ಮ ಮಾತೃಭಾಷೆಯಾಗಿ ಕನ್ನಡವನ್ನೇ ದಾಖಲಿಸಿಕೊಳ್ಳುವಂತೆ ವ್ಯಾಪಕ ಜಾಗೃತಿ ಮೂಡಿಸಲಾಯಿತು. ಕನ್ನಡವನ್ನು ಮರೆತು ಬೇರೆ ಭಾಷೆಯನ್ನು ದಾಖಲಿಸಿಕೊಳ್ಳುವುದು ತಮ್ಮ ಸ್ವಂತ ಗುರುತನ್ನು ಕಳೆದುಕೊಳ್ಳುವುದಕ್ಕೆ ಸಮಾನ ಎಂಬ ಅರಿವನ್ನು ಜನರಲ್ಲಿ ಮೂಡಿಸುವಲ್ಲಿ ಕನ್ನಡ ಕೋಟಿ ಪ್ರಮುಖ ಪಾತ್ರವಹಿಸಿತು.ಜಯದೇವಿ ತಾಯಿಯವರು ನಡೆಸಿದ ಈ ಭಾಷಾ ಉತ್ತೇಜಕ ಪ್ರಯೋಗವು ಗಡಿನಾಡಿನ ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಬೆಳೆಸಿದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಳವಳಿಯಾಗಿತ್ತು. ಕನ್ನಡದ ಮೇಲಿನ ಅಭಿಮಾನವನ್ನು ಜನಮನಗಳಲ್ಲಿ ಪುನರುಜ್ಜೀವನಗೊಳಿಸಿದ ಈ ಪ್ರಯತ್ನ ಮುಂದಿನ ಕನ್ನಡ ಹೋರಾಟಗಳಿಗೆ ಭದ್ರ ಬುನಾದಿಯಾಯಿತು. ಹೀಗೆ, ಸೊಲ್ಲಾಪುರದಲ್ಲಿ ಸ್ಥಾಪನೆಯಾದ ಕನ್ನಡ ಕೋಟಿ ಪ್ರಕಾಶನ ಸಂಸ್ಥೆ ಜಯದೇವಿ ತಾಯಿಯವರ ದೂರದೃಷ್ಟಿ, ಧೈರ್ಯ ಮತ್ತು ಕನ್ನಡಪ್ರೇಮದ ಜೀವಂತ ಸಂಕೇತವಾಗಿ ತಮ್ಮ ವೈಯಕ್ತಿಕ ಸಂಪತ್ತನ್ನು ಸಮಾಜದ ಹಿತಕ್ಕಾಗಿ ಮೀಸಲಿಟ್ಟು ಕನ್ನಡ ಭಾಷೆಯ ಉಳಿವಿಗಾಗಿ ಅವರು ಮಾಡಿದ ಈ ಕಾರ್ಯ ಕನ್ನಡ ಇತಿಹಾಸದಲ್ಲಿ ಅಕ್ಷರಶಃ ಚಿರಸ್ಥಾಯಿಯಾಗಿ ಉಳಿದಿದೆ. “ನನ್ನಿಯಿದು ಕಂಡದ್ದು ನುಡಿ | ತಾನಾಗಿ ಬಂದದ್ದು |ಜೇನು ಸವಿದಂತೆ ತುಂಬಿದ – ಪದಗಳದನಿ ದನಿಗೂಡಿಸಿ ಹಾಡುವೆನು || ಎನ್ನುತ ಜಯದೇವಿ ತಾಯಿಯವರುಈ ತ್ರಿಪದಿಯಲ್ಲಿ ತನ್ನ ಮನಸ್ಸಿನಲ್ಲಿ ಸಹಜವಾಗಿ ಮೂಡಿದ ಭಾವನೆಗಳು ಕನ್ನಡದಲ್ಲಿಯೇ…. ಅವು ಯಾರ ಒತ್ತಾಯದಿಂದಲೂ ಬಂದದ್ದಲ್ಲ.. ಸ್ವಯಂಸ್ಫೂರ್ತಿಯಿಂದ ಉದಿಸಿದವು. ಆ ಭಾವನೆಗಳು ಜೇನಿನ ಸವಿಯಂತೆ ಮಧುರವಾಗಿದ್ದು, ಪದಗಳ ರೂಪದಲ್ಲಿ ಹೊರಹೊಮ್ಮಿವೆ. ಆ ಮಧುರ ಪದಗಳಿಗೆ ಧ್ವನಿಯನ್ನು ಸೇರಿಸಿ ಹಾಡುವ ಮೂಲಕ ತಮ್ಮ ಸಂತೋಷ, ಕೃತಜ್ಞತೆ ಹಾಗೂ ಭಾವನೆಗಳನ್ನು ಲೋಕಕ್ಕೆ ಹಂಚಿಕೊಳ್ಳುವ ಸಂಕಲ್ಪವನ್ನು ತಾಯಿಯ ವರು ವ್ಯಕ್ತಪಡಿಸುತ್ತಾರೆ.(ಮುಂದುವರೆಯುವುದು) ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಹೈದರಾಬಾದ ಕರ್ನಾಟಕ ವಿಮೋಚನಾ ಸಂಘಟನೆ ರಜಾಕಾರರ ದೌರ್ಜನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದಂತೆ, ಹೈದರಾಬಾದ ಕರ್ನಾಟಕ ಭಾಗದ ಜನರು ತಮ್ಮ ಜೀವ ಮತ್ತು ಮಾನವನ್ನು ಉಳಿಸಿಕೊಳ್ಳಲು ರಾಜ್ಯದ ವಿವಿಧ ಭಾಗಗಳಿಗೆ ವಲಸೆ ಹೋಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇಂಥ ಸಂದರ್ಭದಲ್ಲಿ *ಹೈದರಾಬಾದ ಕರ್ನಾಟಕ ವಿಮೋಚನಾ* ಹೋರಾಟವನ್ನು ಸಂಘಟಿತವಾಗಿ ಮುಂದುವರಿಸುವ ಉದ್ದೇಶದಿಂದ ರಾಜ್ಯದಾದ್ಯಂತ ಗಡಿ ಶಿಬಿರಗಳನ್ನು ಸ್ಥಾಪಿಸಲಾಯಿತು. ಈ ಶಿಬಿರಗಳು ಕೇವಲ ಆಶ್ರಯ ಕೇಂದ್ರಗಳಾಗಿರದೆ, ಸ್ವಾತಂತ್ರ್ಯ ಹೋರಾಟಗಾರರಿಗೆ ತರಬೇತಿ, ಸಂಘಟನೆ ಮತ್ತು ಜನಜಾಗೃತಿಯ ಕೇಂದ್ರಗಳಾಗಿ ಕಾರ್ಯನಿರ್ವಹಿಸಿದವು. ಬೀದರ ಜಿಲ್ಲೆ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದ ಈ ಗಡಿ ಶಿಬಿರಗಳಲ್ಲಿ ಆರ. ವಿ. ಬಿಡಪ್ಪ, ಭೀಮಣ್ಣ ಕಂಡ್ರೆ, ಕಿಸಾನ್ ರಾವ ಚಿಡುಗುಪ್ಕರ, ಪ್ರಭುರಾವ ಕಂಬಳಿವಾಲೆ, ಸಂಗ್ರಾಮಪ್ಪ ಶಟಗಾರ ಮೊದಲಾದ ಧೀಮಂತ ನಾಯಕರು ಪ್ರಮುಖ ಪಾತ್ರ ವಹಿಸಿದರು. ಅವರ ದೇಶಭಕ್ತಿ, ತ್ಯಾಗ ಮತ್ತು ಸಂಘಟನಾ ಸಾಮರ್ಥ್ಯ ಹೋರಾಟಕ್ಕೆ ಹೊಸ ಚೈತನ್ಯ ತುಂಬಿತು. ಈ ನಾಯಕರಿಗೆ ಜಯದೇವಿ ತಾಯಿಯವರು ಪ್ರೇರಣೆಯಾಗಿದ್ದರು. ಹೈದರಾಬಾದ ವಿಮೋಚನ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಲು ಮುಂದಾದರು. ಗಡಿ ಶಿಬಿರಗಳಲ್ಲಿ ನಡೆಯುತ್ತಿದ್ದ ಸಭೆಗಳು, ತರಬೇತಿಗಳು ಮತ್ತು ಸ್ವಾತಂತ್ರ್ಯದ ಸಂದೇಶಗಳು ಅವರಲ್ಲಿ ದೇಶಪ್ರೇಮದ ಕಿಚ್ಚನ್ನು ಇನ್ನಷ್ಟು ಪ್ರಜ್ವಲಿಸಿದವು. ಹೋರಾಟವು ಪುರುಷರಿಗೆ ಮಾತ್ರ ಸೀಮಿತವಲ್ಲ, ಮಹಿಳೆಯರೂ ಸಮಾನವಾಗಿ ರಾಷ್ಟ್ರಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂಬ ದೃಢ ಸಂಕಲ್ಪ ಅವರಲ್ಲಿ ಮೂಡಿತು. ಹೀಗಾಗಿ, ರಜಾಕಾರರ ದೌರ್ಜನ್ಯದಿಂದ ಉದ್ಭವಿಸಿದ ಸಂಕಷ್ಟದ ಪರಿಸ್ಥಿತಿಯೇ ಗಡಿ ಶಿಬಿರಗಳ ಸ್ಥಾಪನೆಗೆ ಕಾರಣವಾದರೆ, ಶಿಬಿರಗಳಲ್ಲಿ ನಡೆದ ಸಂಘಟನೆ ಮತ್ತು ನಾಯಕರ ಮಾರ್ಗದರ್ಶನವೇ ಜಯದೇವಿ ತಾಯಿಯವರನ್ನು ಹೈದರಾಬಾದ ವಿಮೋಚನ ಹೋರಾಟದ ಸಕ್ರಿಯ ಹೋರಾಟಗಾರ್ತಿಯನ್ನಾಗಿ ರೂಪಿಸಿತು. ಕರ್ನಾಟಕದ ಏಕೀಕರಣಕ್ಕೆ ನಾಂದಿ ಹಾಡಿತು. ವಿ.ಎನ. ಪಾಟೀಲ, ಸಿಧ್ಧಲಿಂಗಪ್ಪ ಕಾಕನಾಳೆ, ಮಹದೇವಪ್ಪ ಮೀಸೆ, ಮೊದಲಾದವರು ಸೇರಿ ಜಿಲ್ಲಾಮಟ್ಟದಲ್ಲಿ *ಕರ್ನಾಟಕ ಏಕೀಕರಣ ಸಮಿತಿಯ ಘಟಕವನ್ನು* ಹುಟ್ಟುಹಾಕಿದರು ಮುಂದೆ ಜಿಲ್ಲಾ ಸಮಿತಿಯು ತಾಲೂಕ ಸಮಿತಿಯ ರಚನೆಯ ಪ್ರಕ್ರಿಯೆ ಯಾಗಿ ಪ್ರಾರಂಭಿಸಿತು .ಜಯದೇವಿ ತಾಯಿಯವರು ಈ ಸಮಿತಿಯ ಕಾರ್ಯಗಳನ್ನು ನಿರಂತರವಾಗಿ ಭಾಗವಹಿಸುತ್ತಿದ್ದರು. ಜಯದೇವಿ ತಾಯಿಯವರ ನೇತೃತ್ವದಲ್ಲಿ ಕರ್ನಾಟಕ ಏಕೀಕರಣ ಸಮಿತಿಯ ಸಭೆಯನ್ನು ಕರೆಯಲಾಯಿತು.*ಕನ್ನಡ ಮಕ್ಕಳು ಕನವರಿಸಿ ಕರೆದಾಗಇನ್ನಾವ ನೆವ ಹೇಳದೆ ನನ ಮನತನ್ನಿಂದ ತಾನೇ ಎಳದಿತ್ತ* ಎಂದೆನ್ನುತ ಜಯದೇವಿತಾಯಿ ಅವರುಕನ್ನಡದ ಮಕ್ಕಳು, ಕನ್ನಡ ನಾಡು ಹಾಗೂ ಕನ್ನಡದ ಹಿತಕ್ಕಾಗಿ ಹೋರಾಟಕ್ಕೆ ಕರೆ ನೀಡಿದಾಗ, ಯಾವುದೇ ಕಾರಣ ಅಥವಾ ನೆಪ ಹೇಳದೆ ಅವರ ಮನಸ್ಸು ಸ್ವಯಂಪ್ರೇರಿತವಾಗಿ ಹೋರಾಟದಲ್ಲಿ ಭಾಗವಹಿಸಲು ಮುಂದಾರು ಎನ್ನುತ್ತಾರೆ. ಇದು ಕನ್ನಡದ ಮೇಲಿನ ಅವರ ಅಪಾರ ಅಭಿಮಾನ, ನಾಡಿನ ಬಗ್ಗೆ ಇರುವ ಜವಾಬ್ದಾರಿ ಮತ್ತು ಮನೋಭಾವವನ್ನು ಪ್ರತಿಬಿಂಬಿಸುತ್ತದೆ.ಜಯದೇವಿ ತಾಯಿಯವರು ಕನ್ನಡ ಭಾಷೆ, ಗಡಿಭಾಗ ಹಾಗೂ ಕನ್ನಡಿಗರ ಹಕ್ಕುಗಳಿಗಾಗಿ ನಡೆದ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಹೋರಾಟದ ಸಮಯದಲ್ಲಿ ಕನ್ನಡಿಗರ ನೋವು, ಅವರ ಆಶಯಗಳು ಮತ್ತು ಏಕತೆಯ ಕರೆಗೆ ಸ್ಪಂದಿಸಿದ ಅವರು ದೇಶಪ್ರೇಮ, ಕನ್ನಡಾಭಿಮಾನ ಮತ್ತು ನಿಸ್ವಾರ್ಥ ಸೇವೆಯ ಸಂಕೇತವಾಗಿವೆ. ಕನ್ನಡಿಗರ ಕರೆಯ ಮುಂದೆ ಯಾವುದೇ ವೈಯಕ್ತಿಕ ನೆಪಕ್ಕೂ ಅವಕಾಶ ನೀಡದೆ, ಕನ್ನಡ ನಾಡಿನ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡ ಜಯದೇವಿ ತಾಯಿಯವರ ಹೋರಾಟದ ಮನೋಭಾವವನ್ನು ವ್ಯಕ್ತಪಡಿಸುತ್ತವೆ. ಸ್ವಾತಂತ್ರ್ಯಾನಂತರವೂ ಹೈದರಾಬಾದ ಸಂಸ್ಥಾನದ ಆಡಳಿತದ ಅವಶೇಷಗಳು ಅನೇಕ ಪ್ರದೇಶಗಳ ಜನರ ಬದುಕಿನ ಮೇಲೆ ತಮ್ಮ ಪ್ರಭಾವವನ್ನು ಬೀರಿದ್ದವು. ಅದರಲ್ಲೂ ಕನ್ನಡ ಭಾಷಿಕರೇ ಹೆಚ್ಚಾಗಿ ವಾಸಿಸುತ್ತಿದ್ದ ಬೀದರ ಜಿಲ್ಲೆಯ ಭಾಲ್ಕಿ ಮತ್ತು ಉದಗೀರ ತಾಲೂಕಿನ ಜೆವರಗಿ ಪ್ರದೇಶಗಳ ರೈತರು ಅತ್ಯಂತ ಸಂಕಷ್ಟವನ್ನು ಅನುಭವಿಸಿದರು. ಕನ್ನಡ ಪ್ರದೇಶದ ಜನರ ಮೇಲೆ ಸೇಡು ತೀರಿಸುವ ಕ್ರಮವೆಂಬಂತೆ, ಈ ಭಾಗದ ಜಾಗೀರು ಜಮೀನುಗಳ ಮೇಲೆ ಒಂದಕ್ಕೆ ಮೂರು ಪಟ್ಟು ಹೆಚ್ಚುವರಿ ತೆರಿಗೆಯನ್ನು ವಿಧಿಸಲಾಯಿತು. ಈಗಾಗಲೇ ಆರ್ಥಿಕವಾಗಿ ಸಂಕಷ್ಟದಲ್ಲಿದ್ದ ರೈತರಿಗೆ ಈ ಭಾರೀ ತೆರಿಗೆ ಜೀವನಾಡಿಯನ್ನೇ ಕಸಿದುಕೊಳ್ಳುವಂತಾಯಿತು. ಸಾಲದ ಹೊರೆಯಲ್ಲಿ ಸಿಲುಕಿದ ರೈತರು ತಮ್ಮ ಕುಟುಂಬಗಳನ್ನು ಸಾಕುವುದು, ಕೃಷಿ ನಡೆಸುವುದು ಕೂಡ ಕಷ್ಟಕರವಾಯಿತು.ಈ ಸಂದರ್ಭದಲ್ಲಿ ಜನರ ಆಶಾಕಿರಣವಾಗಿ ಮುಂದೆ ಬಂದವರು ಜಯದೇವಿ ತಾಯಿ. ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ, ಸಮಾಜಸೇವಕಿಯಾಗಿ ಮತ್ತು ಜನಪರ ನಾಯಕಿಯಾಗಿ ಗುರುತಿಸಿಕೊಂಡಿದ್ದ ಅವರ ಮೇಲೆ ಜನರಿಗೆ ಅಪಾರ ವಿಶ್ವಾಸವಿತ್ತು. ತಮ್ಮ ಸಂಕಷ್ಟವನ್ನು ಪರಿಹರಿಸಬಲ್ಲ ನಾಯಕತ್ವ ಅವರಲ್ಲಿದೆ ಎಂಬ ನಂಬಿಕೆಯಿಂದ ಭಾಲ್ಕಿ ಮತ್ತು ಉದಗೀರ ಭಾಗದ ರೈತರು ಜಯದೇವಿ ತಾಯಿಯವರನ್ನು ಸಂಪರ್ಕಿಸಿ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡಿದರು.ಜನರ ನೋವನ್ನು ತಮ್ಮದೇ ನೋವೆಂದು ಭಾವಿಸಿದ ಜಯದೇವಿ ತಾಯಿ ಸಮಸ್ಯೆಯನ್ನು ವೈಯಕ್ತಿಕ ಮನವಿಯಾಗಿ ಪರಿಗಣಿಸಿ…. ಮೊದಲು ದೊಡ್ಡ ಸಾರ್ವಜನಿಕ ಸಭೆಯನ್ನು ಕರೆದು ರೈತರ ಸವಾಲುಗಳನ್ನು ಆಲಿಸಿದರು. ತೆರಿಗೆಯಿಂದ ಉಂಟಾದ ಅನ್ಯಾಯ, ರೈತರ ಆರ್ಥಿಕ ಪರಿಸ್ಥಿತಿ ಮತ್ತು ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಿದರು. ನಂತರ ಜನರು ಒಮ್ಮತವನ್ನು ಪಡೆದು ಸರ್ಕಾರಕ್ಕೆ ಮನವಿ ಸಲ್ಲಿಸುವ ನಿರ್ಧಾರ ಕೈಗೊಂಡರು. ಜನರಿಂದ ಸಹಿಗಳನ್ನು ಸಂಗ್ರಹಿಸಿ, ತೆರಿಗೆ ಕಡಿತಕ್ಕೆ ಸಂಬಂಧಿಸಿದ ಮನವಿಯನ್ನು ಸಿದ್ಧಪಡಿಸಿ ಸರ್ಕಾರದ ಮುಂದೆ ಮಂಡಿಸಲು ಮುಂದಾದರು.ಆ ಸಂದರ್ಭದಲ್ಲಿ ಹೈದರಾಬಾದ ರಾಜ್ಯದ *ಮುಖ್ಯಮಂತ್ರಿಯಾಗಿದ್ದ ಶ್ರೀ ಎಂ. ಕೆ. ವೆಲ್ಲೋಡಿ* ಅವರನ್ನು ಜಯದೇವಿ ತಾಯಿ ಭೇಟಿ ಮಾಡಿದರು. ರೈತರ ಪರವಾಗಿ ಅತ್ಯಂತ ಸಮರ್ಥವಾಗಿ ವಾದ ಮಂಡಿಸಿ, ಹೆಚ್ಚುವರಿ ತೆರಿಗೆ ವಿಧಿಸಿರುವುದು ನ್ಯಾಯಸಮ್ಮತವಲ್ಲ ಎಂದು ವಿವರಿಸಿದರು. ಕನ್ನಡ ಪ್ರದೇಶದ ರೈತರು ಎದುರಿಸುತ್ತಿದ್ದ ಸಂಕಷ್ಟವನ್ನು ಅಂಕಿ-ಅಂಶಗಳೊಂದಿಗೆ ಸರ್ಕಾರದ ಗಮನಕ್ಕೆ ತಂದರು. ಅವರ ಪ್ರಾಮಾಣಿಕತೆ, ಧೈರ್ಯ ಮತ್ತು ಜನಪರ ನಿಲುವಿನಿಂದ ಪ್ರಭಾವಿತರಾದ ವೆಲ್ಲೋಡಿ ಅವರು ತೆರಿಗೆಯನ್ನು ಶೇಕಡಾ 25ರಷ್ಟು ಕಡಿಮೆ ಮಾಡುವ ಭರವಸೆಯನ್ನು ನೀಡಿದರು. ಈ ಆಶ್ವಾಸನೆ ರೈತರಿಗೆ ದೊಡ್ಡ ನಿರಾಳತೆಯನ್ನು ತಂದಿತು. ಜಯದೇವಿ ತಾಯಿಯವರ ಪ್ರಯತ್ನದಿಂದ ಸಾವಿರಾರು ರೈತ ಕುಟುಂಬಗಳಿಗೆ ಆರ್ಥಿಕ ಹೊರೆಯು ಸ್ವಲ್ಪ ಮಟ್ಟಿಗೆ ಕಡಿಮೆಯಾಯಿತು. ಹರಕರಬಿ ಮೈಮ್ಯಾಲ |ಗಾಳಿ ಬಿಸಿಲು ಮಳಿಅರ ಹೊಟ್ಟೀಲಿ ಉಂಡು ದುಡಿತಾನ- ನೆಲದವ್ವ ಮರಮರ ಮರಗ್ಯಾಳ ಮನದಾಗ|| ರೈತನು ಗಾಳಿ, ಬಿಸಿಲು, ಮಳೆ ಎಂಬ ಪ್ರಕೃತಿಯ ಎಲ್ಲ ಕಷ್ಟಗಳನ್ನು ಸಹಿಸಿಕೊಂಡು, ಅರ್ಧ ಹೊಟ್ಟೆ ಊಟ ಮಾಡಿಕೊಂಡೇ ಹೊಲದಲ್ಲಿ ದುಡಿಯುವ ಸ್ಥಿತಿಯನ್ನು ಬಿಂಬಿಸಿದ್ದಾರೆ.. ರೈತನು ತನ್ನ ಬದುಕನ್ನೇ ಭೂಮಿಗೆ ಅರ್ಪಿಸಿದರೂ, ಬೆಳೆ ಹಾಳಾದರೂ, ಸಾಲದ ಹೊರೆ, ಬೆಲೆಯ ಕೊರತೆ ಮುಂತಾದ ಸಮಸ್ಯೆಗಳಿದ್ದರೂ ದುಡಿಯುತ್ತಲೇ ಇರುತ್ತಾನೆ. ಅವನ ನಿರಂತರವಾದ ಸಮಸ್ಯೆಗಳನ್ನು ನೋಡುತ್ತಿದ್ದ ಭೂತಾಯಿಯೇ ಮರ ಮರ ಮರುವುಳೆಂದು ವರ್ಣಿಸುತ್ತಾರೆ. ಕೆಸರಾಯ್ತು ಕೈಯ|ಬಾಯಿಯೂ ಕೆಸರಾಯ್ತು ಮೊಸರು ಕಡಿತ ಸಿಗಲಿಲ್ಲ -ರೈತಣ್ಣಉಸ್ಸೆಂದಾನ ತನ್ನ ಬಾಳೇಕ|| ರೈತನ ಶ್ರಮ, ತ್ಯಾಗ, ನೋವು ಮತ್ತು ಸಂಕಷ್ಟಮಯ ಜೀವನವನ್ನು ಮನಮುಟ್ಟುವ ರೀತಿಯಲ್ಲಿ ಚಿತ್ರಿಸಿತ ಹೇಳತಾರೆ. ಹಾಗೆ ಅವರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಅವರ ಮೇಲೆ ಹೇರಿದ ಕೇರಿಗೆಯನ್ನು ಆದಷ್ಟು ಕಡಿಮೆ ಮಾಡಿಕೊಟ್ಟು ಹಿಂದಿರುಗುತ್ತಾರೆ. ಜಯದೇವಿ ತಾಯಿಯವರ ಈ ಹೋರಾಟದಲ್ಲಿ ಮಹಾತ್ಮ ಗಾಂಧೀಜಿಯವರ ಅಹಿಂಸಾ ತತ್ವದ ಪ್ರಭಾವ ಸ್ಪಷ್ಟವಾಗಿ ಗೋಚರಿಸುತ್ತದೆ. ಅವರು ಯಾವುದೇ ಹಿಂಸಾತ್ಮಕ ಮಾರ್ಗವನ್ನು ಅನುಸರಿಸಲಿಲ್ಲ. ಮನವಿ, ಸಾರ್ವಜನಿಕ ಸಭೆಗಳು, ಜನಜಾಗೃತಿ ಮತ್ತು ಸಂವಾದದ ಮೂಲಕವೇ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದರು.ಸತ್ಯ, ಅಹಿಂಸೆ ಮತ್ತು ನ್ಯಾಯ ಎಂಬ ಗಾಂಧೀಜಿ ಬೋಧಿಸಿದ ಮೌಲ್ಯಗಳನ್ನು ತಮ್ಮ ಸಾರ್ವಜನಿಕ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಸರ್ಕಾರದ ವಿರುದ್ಧ ದ್ವೇಷ ಅಥವಾ ಪ್ರತೀಕಾರದ ಮನೋಭಾವವಿಲ್ಲದೆ, ನ್ಯಾಯಯುತ ಬೇಡಿಕೆಗಳನ್ನು ಶಾಂತಿಯುತವಾಗಿ ಮಂಡಿಸಿ ಜನರ ಹಕ್ಕುಗಳನ್ನು ಕಾಪಾಡಿದರು. ಜಯದೇವಿ ತಾಯಿಯವರು ಸ್ವಾತಂತ್ರ್ಯ ಹೋರಾಟಗಾರ್ತಿಯಾಗಿ ಹೋರಾಡಿದರೆ.. ಸ್ವಾತಂತ್ರ್ಯಾನಂತರವೂ ಜನರ ಸಂಕಷ್ಟಗಳಿಗೆ ಸ್ಪಂದಿಸಿ ಅವರ ಹಕ್ಕುಗಳಿಗಾಗಿ ನಿರಂತರವಾಗಿ ಹೋರಾಡಿದ ಜನನಾಯಕಿ ಆಗಿದ್ದರು, ಎಂಬುವದ ಸಾಬೀತುಪಡಿಸುತ್ತದೆ. ರೈತರ ಪರವಾಗಿ ನಿಂತು, ಅವರ ಸಮಸ್ಯೆಯನ್ನು ಸರ್ಕಾರದ ಮಟ್ಟಕ್ಕೆ ತೆಗೆದುಕೊಂಡು ಹೋಗಿ ಪರಿಹಾರ ದೊರಕಿಸಿಕೊಟ್ಟ ಅವರ ನಾಯಕತ್ವ, ಸಾಮಾಜಿಕ ಬದ್ಧತೆ ಮತ್ತು ಅಹಿಂಸಾ ಮಾರ್ಗದ ಮೇಲಿನ ನಂಬಿಕೆ ಇಂದಿಗೂ ಜನಸೇವೆಗೆ ಆದರ್ಶವಾಗಿದೆ. ಸವಿತಾ ದೇಶಮುಖ
ಧಾರಾವಾಹಿ ಸಂಗಾತಿ–27 ಸವಿತಾ ದೇಶಮುಖ ಜಯದೇವಿತಾಯಿ ಲಿಗಾಡೆ ಜೀವನಗಾಥೆ ಕರ್ನಾಟಕ ಏಕೀಕರಣ ಮತ್ತು ಕನ್ನಡ ಸಾಹಿತ್ಯಕ್ಕೆ ಗಣನೀಯ ಕೊಡುಗೆ ನೀಡಿದ ಮಹಾನ್ ಚೇತನ *ನಿಜಾಂ ಪ್ರಾಂತಿಕ ಪರಿಷತ್ತಿನ ಸ್ಥಾಪನೆ ಮತ್ತು ಕನ್ನಡವಚನ ಸಾಹಿತ್ಯದ ಜಾಗೃತಿ* ಹನ್ನೆರಡನೇ ಶತಮಾನದ ಶರಣರ ವಚನಗಳು ಸಾಮಾಜಿಕ ನ್ಯಾಯದ ಸಂದೇಶವನ್ನು ಸಾರಿದವು. ಈ ವಚನಗಳ ಪ್ರಭಾವವು ಇಂದಿನ ಕಲ್ಯಾಣ ಕರ್ನಾಟಕ ಹೈದರಾಬಾದ ಕರ್ನಾಟಕ ಪ್ರದೇಶದ ಗಡಿಭಾಗಗಳಲ್ಲಿಯೂ ಆಳವಾಗಿ ಬೇರೂರಿತ್ತು.ನಿಜಾಂ ಆಡಳಿತದ ಕಾಲದಲ್ಲಿ ಕನ್ನಡ ಭಾಷೆ ಮತ್ತು ವಚನ ಸಾಹಿತ್ಯಕ್ಕೆ ಸೂಕ್ತ ಪ್ರೋತ್ಸಾಹ ದೊರೆಯದಿದ್ದರೂ, ಕನ್ನಡಾಭಿಮಾನಿಗಳು ಮತ್ತು ಶರಣ ತತ್ವದ ಅನುಯಾಯಿಗಳು ಈ ಪರಂಪರೆಯನ್ನು ಜೀವಂತವಾಗಿಡಲು ನಿರಂತರವಾಗಿ ಶ್ರಮಿಸಿದರು. ಅದೇ ಸಮಯದಲ್ಲಿ ೧೯೩೪ ರಲ್ಲಿ ಹರಡೇಕರ್ ಮಂಜಪ್ಪನವರು ವಚನ ಧರ್ಮ ಗ್ರಂಥವೆಂದು ವಚನ ಸಪ್ತಾಹವನ್ನು ಪ್ರಾರಂಭಿಸಿದ್ದರು.ಬೀದರ ಜಿಲ್ಲೆಯಲ್ಲಿ ಬಸವ ತತ್ವ ಪ್ರಚಾರ ತುಂಬಾ ವ್ಯಾಪಕವಾಗಿತ್ತು.ಪ್ರಭುರಾಜ ಕಂಬಳಿ ಬಾಬಾ, ಸಂಗ್ರಾಮಪ್ಪ ವಕೀಲ ಹಾಗೂ ಜಯದೇವಿ ತಾಯಿಯವರು ಒಂದಾಗಿ “ನಿಜಾಂ ಪ್ರಾಂತಿಕ ಪರಿಷತ” ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. *ಕತ್ತಲೆಯೆಂಬ ಅಜ್ಞಾನ |ಭ್ರಾಂತಿಎಂಬೋ ಭೂತರಾತರಿ ಹಗಲು ಕುಣಿದಿತ್ತು- ಲೋಕದಪ್ರೇತಗಳೆಲ್ಲ ಭೂತಾಗಿ ಕೂಣಿದಿತ||* ಎನ್ನುವಂತೆ…. ಜಗದಿ ಅಜ್ಞಾನವೆಂಬುವುದು ಭೂತ ಪ್ರೇತವಾಗಿ ಕುಣಿಯುವ ಸಮಯದಲ್ಲಿ ವಚನಗಳನ್ನು ಶರಣರು ನಮ್ಮ ಕೈಯಲ್ಲಿ ಇಟ್ಟರು. ಇಂಥ ಅಮೂಲ್ಯವಾದ ಜ್ಞಾನವನು ಉಳಿಸಿಕೊಂಡು ಬೆಳೆಸಿಕೊಂಡು ಹೋಗುವದುಕ್ಕೆ ಕರೆ ನೀಡಿದರು….ಜಯದೇವಿತಾಯಿಯವರು . ಪರಿಷತ್ತಿನ ಪ್ರಮುಖ ಧ್ಯೇಯ ಕನ್ನಡ ಭಾಷೆ, ಶರಣರ ವಚನ ಸಾಹಿತ್ಯ ಮತ್ತು ಬಸವ ತತ್ವಗಳನ್ನು ಜನಸಾಮಾನ್ಯರಲ್ಲಿ ಹರಡುವುದಾಗಿತ್ತು.ಪರಿಷತ್ತಿನ ಆಶ್ರಯದಲ್ಲಿ ಒಂದು ವಾಚನಾಲಯ ಸ್ಥಾಪಿಸಲಾಯಿತು. ಅಲ್ಲಿ ಬಸವ ಸಾಹಿತ್ಯ, ವಚನ ಸಂಕಲನಗಳು ಹಾಗೂ ಕನ್ನಡದ ಅಮೂಲ್ಯ ಕೃತಿಗಳನ್ನು ಸಾರ್ವಜನಿಕರ ಓದಿಗಾಗಿ ಲಭ್ಯವಾಗುವಂತೆ ಮಾಡಲಾಯಿತು. ಸಾಹಿತ್ಯದ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ಕೆ ಈ ವಾಚನಾಲಯ ಪ್ರಮುಖ ಕೇಂದ್ರವಾಯಿತು.ಅಷ್ಟೇ ಅಲ್ಲದೆ, ಜಗಜ್ಯೋತಿ ಬಸವೇಶ್ವರ, ಅಕ್ಕ ಮಹಾದೇವಿ, ಚೆನ್ನಬಸವಣ್ಣ ಮೊದಲಾದ ಶರಣ ಮಹಾತ್ಮರ ಜಯಂತಿಗಳನ್ನು ಪ್ರತಿವರ್ಷ ಅರ್ಥಪೂರ್ಣವಾಗಿ ಆಚರಿಸುವ ಸಂಪ್ರದಾಯವನ್ನು ಆರಂಭಿಸಲಾಯಿತು.ಜಯಂತಿ ಕಾರ್ಯಕ್ರಮಗಳಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಶರಣರ ಆದರ್ಶಗಳನ್ನು ಜನರಿಗೆ ಪರಿಚಯಿಸಲಾಯಿತು.ಈ ರೀತಿಯಾಗಿ ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆಯ ಉಳಿವು, ವಚನ ಸಾಹಿತ್ಯದ ಪ್ರಸಾರ ಮತ್ತು ಶರಣ ಸಂಸ್ಕೃತಿಯ ಪುನರುಜ್ಜೀವನಗೊಳಿಸುವಲ್ಲಿ ಮಹತ್ವದ ಪಾತ್ರ ವಹಿಸಿತು. *ಅಪರೂಪವಾದ |ಅಪರಮಿತ ಜ್ಞಾನವಿಪರೀತ ಅಜ್ಞಾನದ ಮಾಯೆ ನುಂಗಿದವುವಚನಗಳು, ರೂಪಿಸಿ ಶರಣರ ಲೋಕವ || *ಎಂದು ಸಾರುತ….. ಜಯದೇವಿ ತಾಯಿಯವರ ನೇತೃತ್ವ ಮತ್ತು ಸಹೋದ್ಯೋಗಿಗಳ ಸೇವಾಭಾವದಿಂದ ಈ ಸಂಸ್ಥೆ ಕಲ್ಯಾಣ ಕರ್ನಾಟಕದಲ್ಲಿ ಕನ್ನಡ ಮತ್ತು ವಚನ ಚಳವಳಿಗೆ ಹೊಸ ಚೈತನ್ಯವನ್ನು ನೀಡಿತು. ನಿಜಾಂ ಪ್ರಾಂತಿಕ ಪರಿಷತ್ತು ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಬಸವತತ್ವದ ಪ್ರಸಾರಕ್ಕಾಗಿ ನಿರಂತರವಾಗಿ ಶ್ರಮಿಸಿತು…..ಇಂಥ ಉದ್ದೇಶಕ್ಕಾಗಿ ಮೈಸೂರು ಮತ್ತು ಬೆಂಗಳೂರಿನಂತಹ ಕನ್ನಡದ ಸಾಂಸ್ಕೃತಿಕ ಕೇಂದ್ರಗಳಿಂದ ಖ್ಯಾತ ಸಾಹಿತಿಗಳು, ಚಿಂತಕರು ಮತ್ತು ಉಪನ್ಯಾಸಕರನ್ನು ಆಹ್ವಾನಿಸಿ ಸಾರ್ವಜನಿಕ ಉಪನ್ಯಾಸಗಳನ್ನು ಏರ್ಪಡಿಸಲಾಗುತ್ತಿತ್ತು.ಅಂತಹ ಪ್ರಮುಖ ಅತಿಥಿಗಳಲ್ಲಿ…. ತಾ.ರಾ.ಸು. ಮತ್ತು ಅ.ನಾ.ಕೃ ಮೊದಲಾದ ಪ್ರಸಿದ್ಧ ಸಾಹಿತಿಗಳೂ ಭಾಗವಹಿಸಿ, ಕನ್ನಡ ಸಾಹಿತ್ಯ, ಶರಣರ ವಚನಗಳು ಮತ್ತು ಬಸವ ತತ್ವಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಈ ಸಂಘಟನೆಯ ಕಾರ್ಯಗಳು ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ, ಸಮಾಜದ ಕಷ್ಟ ಸುಖಗಳಿಗೆ ಸ್ಪಂದಿಸುವ ಜನಪರ ಚಳವಳಿಯಾಗಿದ್ದವು. ಕಾರ್ಯಕರ್ತರು ಹಳ್ಳಿಹಳ್ಳಿಗೆ ತೆರಳಿ ಬಸವತತ್ವದ ಸಮಾನತೆ, ಕಾಯಕ, ದಾಸೋಹ, ಜಾತ್ಯಾತೀತತೆ ಹಾಗೂ ಮಾನವೀಯ ಮೌಲ್ಯಗಳನ್ನು ಜನರಿಗೆ ತಿಳಿಸುತ್ತಿದ್ದರು. ಸಮಾಜದಲ್ಲಿ ಅಸಮಾನತೆ, ಅಜ್ಞಾನ ಮತ್ತು ಸಾಮಾಜಿಕ ಬೇಧಭಾವವನ್ನು ನಿವಾರಿಸಿ, ಸಮಾನತೆಯ ಸಮಾಜ ನಿರ್ಮಾಣವೇ ಅವರ ಪ್ರಮುಖ ಧ್ಯೇಯವಾಗಿತ್ತು. *ನೆಲದ ಸತ್ವದ ಮೇಲೆ |ಹೊಲ ಬೆಳೆಯುವಂತೆಮೂಲ ತನ್ನ ಅರುವಿನ ಬೀಜ- ಬೆಳೆದಿತ್ತುಸಕಲ ಶರಣ ತತ್ವ ಪ್ರಪಂಚ ವಿಸ್ತಾರ||* ತನ್ನರಿವನ್ನೇ ಗುರುವನ್ನಾಗಿಸಿ ದೇಹವನ್ನೇ ದೇಗುಲುಮಾಡಿ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಕರೆ ಕೊಡುವ ವಚನಗಳನ್ನು ಪ್ರಚಾರಗೊಳಿಸುವ ಕಾರ್ಯಗಳನ್ನು ಹಮ್ಮಿಕೊಳ್ಳುತ್ತಿದ್ದರು. ಈ ರೀತಿಯ ಕಾರ್ಯಕ್ರಮಗಳಿಗೆ ನಿಜಾಂ ಸರ್ಕಾರದಿಂದ ಹಲವು ರೀತಿಯ ಪ್ರತಿರೋಧ ಮತ್ತು ನಿರ್ಬಂಧಗಳು ಎದುರಾದರೂ, ಪರಿಷತ್ತಿನ ಕಾರ್ಯಕರ್ತರು ಹಿಂದೆ ಸರಿಯಲಿಲ್ಲ.ಪ್ರತಿವರ್ಷ ಶ್ರಾವಣ ಮಾಸದಲ್ಲಿ ವಚನ ಸಪ್ತಾಹವನ್ನು ಅತ್ಯಂತ ಅರ್ಥಪೂರ್ಣವಾಗಿ ಆಯೋಜಿಸುತ್ತಿದ್ದರು. ಈ ಸಪ್ತಾಹದಲ್ಲಿ ವಚನ ಪಾರಾಯಣ, ಉಪನ್ಯಾಸಗಳು, ಚಿಂತನ ಗೋಷ್ಠಿಗಳು, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ ಶರಣರ ಆದರ್ಶಗಳ ಕುರಿತು ವಿಶೇಷ ಪ್ರವಚನಗಳನ್ನು ನಡೆಸಲಾಗುತ್ತಿತ್ತು. ಈ ಕಾರ್ಯಕ್ರಮಗಳ ಮೂಲಕ ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆದು, ಕನ್ನಡ ಭಾಷೆ, ಶರಣ ಸಂಸ್ಕೃತಿ ಮತ್ತು ಶರಣ ಸಂದೇಶವನ್ನು ಗ್ರಾಮೀಣ ಪ್ರದೇಶಗಳಿಗೂ ಯಶಸ್ವಿಯಾಗಿ ತಲುಪಿಸಲಾಯಿತು. ವಚನ ಸಪ್ತಾಹ ಮತ್ತು ಕನ್ನಡ ಜಾಗೃತಿಯ ಕಾರ್ಯಕ್ರಮಗಳು ಪರಿಷತ್ತಿನ ಆಶ್ರಯದಲ್ಲಿ ನಡೆಯುತ್ತಿದ್ದ ವಚನ ಸಪ್ತಾಹವು ಕೇವಲ ಧಾರ್ಮಿಕ ಕಾರ್ಯಕ್ರಮವಾಗಿರದೆ, ಕನ್ನಡ ಭಾಷೆ, ವಚನ ಸಾಹಿತ್ಯ ಮತ್ತು ಸಾಮಾಜಿಕ ಜಾಗೃತಿಯ ಮಹೋತ್ಸವವಾಗಿತ್ತು. *ನಿಮ್ಮಅಡಿಗಳು ದೊರೆತು|ಹಮ್ಮು ಜರಿದು ಹೋಯ್ತು ನೆಮ್ಮದಿಯಿತು ಎನ ಮನಕ್ಕೆ -ಬಸವಣ್ಣ ಒಮ್ಮನವಾಯಿತು ನಿಮ್ಮಲ್ಲಿ||*ಎಂದು ಬಸವಣ್ಣನನು ಹಾಡಿ ಹೊಗಳುತ್ತಾ ತತ್ವಗಳನ್ನು ಪ್ರಚಾರ ಮಾಡಲಾರಂಭಿಸಿದರು. ಈ ಸಂದರ್ಭದಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಅನೇಕ ಖ್ಯಾತ ವಿದ್ವಾಂಸರು, ಧಾರ್ಮಿಕ ಮುಖಂಡರು, ಸಾಹಿತಿಗಳು ಹಾಗೂ ಸಮಾಜ ಸುಧಾರಕರು ಆಗಮಿಸಿ ಜನರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದರು.ಈ ಕಾರ್ಯಕ್ರಮಗಳಲ್ಲಿ ತರಳಬಾಳು ಸ್ವಾಮಿಗಳು, ಎಸ್ ನಿಜಲಿಂಗಪ್ಪ, ಎಂ.ಆರ್ ಶ್ರೀನಿವಾಸ್ ಮೂರ್ತಿ, ಸ್ವಾಮಿ ರಮಾನಂದ ತೀರ್ಥರು, ಮಾನ್ವಿ ನರಸಿಂಹರಾಯರು, ಸಿದ್ದಯ್ಯ ಪುರಾಣಕ, ಬಾಮಣಗಾವ್ಕರ್ ಅಮರಾವತಿ ,ಬಸಪ್ಪ ಮಂಡಗಿ ವಕೀಲರು ,ಚನ್ನಬಸವ ಪಟ್ಟದೇವರು, ವಿಶ್ವನಾಥ್ ರೆಡ್ಡಿ ಮುದನ್ನಾಳ, ವಿದ್ಯಾಧರ್ ಗುರೂಜಿ, ಬಿ. ಮಹದೇವಪ್ಪ, ಭೀಮಣ್ಣ ಖಂಡ್ರೆ ಮೊದಲಾದ ದಿಗ್ಗಜರನ್ನು ಕರೆಯಿಸಿ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತಿತ್ತು ಹಾಗೂ ಸಮಾಜದ ಗಣ್ಯರು ಭಾಗವಹಿಸುತಿದ್ದರು. ಶರಣರ ಆದರ್ಶಗಳನ್ನು ಜನಸಾಮಾನ್ಯರಿಗೆ ತಲುಪಿಸಲಾಗುತ್ತಿತ್ತು. ಜೊತೆಗೆ, ಗ್ರಾಮೀಣ ಪ್ರದೇಶಗಳಲ್ಲಿ ಸಂಗ್ರಾಮ ವಾಚನಾಲಯಗಳ ಸ್ಥಾಪನೆ, ಕನ್ನಡ ಶಾಲೆಗಳ ಆರಂಭ ಹಾಗೂ ಕನ್ನಡ ಶಿಕ್ಷಣದ ವಿಸ್ತರಣೆಗೆ ವಿಶೇಷ ಆದ್ಯತೆ ನೀಡಲಾಗುತ್ತಿತ್ತು.ಈ ಎಲ್ಲಾ ಚಟುವಟಿಕೆಗಳ ಮೂಲ ಉದ್ದೇಶ ಕನ್ನಡ ಭಾಷೆಯನ್ನು ಬೆಳೆಸುವುದು, ವಚನ ಸಾಹಿತ್ಯವನ್ನು ಜನಜೀವನದೊಂದಿಗೆ ಬೆಸೆಯುವುದು ಮತ್ತು ಬಸವಣ್ಣನವರ ಸಮಾನತೆ, ಕಾಯಕ ಹಾಗೂ ದಾಸೋಹದ ತತ್ವಗಳ ಆಧಾರದ ಮೇಲೆ ಜಾತಿ–ಧರ್ಮ ಭೇದವಿಲ್ಲದ, ಪ್ರಗತಿಪರ ಸಮಾಜವನ್ನು ನಿರ್ಮಿಸುವುದಾಗಿತ್ತು.ನಿಜಾಂ ಆಡಳಿತದ ಪರಿಸ್ಥಿತಿಯಲ್ಲಿಯೂ ಈ ಕಾರ್ಯಗಳು ಕನ್ನಡದ ಸಾಂಸ್ಕೃತಿಕ ಪುನರುಜ್ಜೀವನಕ್ಕೆ ಮಹತ್ತರ ಕೊಡುಗೆಯನ್ನು ನೀಡಿದವು. ಸೋಲಾಪುರ ಗಡಿಭಾಗ, ಕನ್ನಡಿಗರ ಆಶಯ ಮತ್ತು ಕರ್ನಾಟಕ ಸೇರ್ಪಡೆಗೆ ನಡೆದ ಚಳವಳಿ ೧೯೪೯ರ ಸಮಯ….ಸೋಲಾಪುರ ಪ್ರದೇಶವು ಭಾಷೆ, ಸಂಸ್ಕೃತಿ ಮತ್ತು ಆಡಳಿತದ ದೃಷ್ಟಿಯಿಂದ ಪ್ರಮುಖ ಚರ್ಚೆಯ ಕೇಂದ್ರವಾಗಿತ್ತು.ಆ ಕಾಲದಲ್ಲಿ ಸೋಲಾಪುರ ತಾಲೂಕನ್ನು ಆಡಳಿತಾತ್ಮಕ ಅನುಕೂಲಕ್ಕಾಗಿ ದಕ್ಷಿಣ ಸೋಲಾಪುರ ಮತ್ತು ಉತ್ತರ ಸೋಲಾಪುರ ಎಂದು ವಿಭಜಿಸಲಾಯಿತು. ವಿಭಜನೆಯು ಆಡಳಿತಾತ್ಮಕವಾಗಿದ್ದರೂ, ಆ ಭಾಗದಲ್ಲಿ ವಾಸಿಸುತ್ತಿದ್ದ ವಿವಿಧ ಭಾಷಿಕ ಸಮುದಾಯಗಳ ಆಶಯಗಳಿಗೆ ಹೊಸ ಚರ್ಚೆಗೆ ದಾರಿ ಮಾಡಿಕೊಟ್ಟಿತು.ಅದೇ ಅವಧಿಯಲ್ಲಿ ರಾಷ್ಟ್ರೀಯ ಸ್ವಾತಂತ್ರ್ಯ ಚಳವಳಿಯನ್ನು ಬಲಪಡಿಸುವ ಉದ್ದೇಶದಿಂದ ಕಾಂಗ್ರೆಸ್ ಸಂಘಟನೆಯನ್ನು ಯುವಜನರ ಮಟ್ಟದಲ್ಲಿ ವಿಸ್ತರಿಸುವ ಪ್ರಯತ್ನಗಳು ನಡೆಯುತ್ತಿದ್ದವು.೧೯೪೯ರಲಿ ಜವಹರಲಾಲ್ ನೆಹರು ಸೋಲಾಪುರಕ್ಕೆ ಭೇಟಿ ನೀಡಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಸ್ವಾತಂತ್ರ್ಯ ಹೋರಾಟದಲ್ಲಿ ಯುವಜನರ ಪಾತ್ರ, ರಾಷ್ಟ್ರೀಯ ಏಕತೆ ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳ ಕುರಿತು ಅವರು ಕರೆ ನೀಡಿದರು. ಈ ಪ್ರದೇಶದ ಕನ್ನಡಿಗರು ತಮ್ಮ ಭಾಷೆ, ಸಂಸ್ಕೃತಿ ಮತ್ತು ಶೈಕ್ಷಣಿಕ ಹಕ್ಕುಗಳ ರಕ್ಷಣೆಗೆ ಸೂಕ್ತ ಆಡಳಿತ ವ್ಯವಸ್ಥೆಯ ಅಗತ್ಯವಿದೆ ಎಂದು ಪ್ರತಿಪಾದಿಸಿದರು.ಕನ್ನಡ ಭಾಷೆಗೆ ಆಡಳಿತದಲ್ಲಿ, ಶಿಕ್ಷಣದಲ್ಲಿ ಹಾಗೂ ಸಾರ್ವಜನಿಕ ಬದುಕಿನಲ್ಲಿ ಸಮರ್ಪಕ ಸ್ಥಾನಮಾನ ದೊರೆಯಬೇಕೆಂಬ ಬೇಡಿಕೆಯನ್ನು ಅವರು ರಾಷ್ಟ್ರೀಯ ನಾಯಕರ ಮುಂದಿಟ್ಟರು. ಸೋಲಾಪುರ ಮತ್ತು ಅದರ ಸುತ್ತಮುತ್ತಲಿನ ಗಡಿಭಾಗಗಳಲ್ಲಿ ಕನ್ನಡಿಗರ ಜೊತೆಗೆ ಮರಾಠಿ ಭಾಷಿಕರೂ ಗಣನೀಯ ಸಂಖ್ಯೆಯಲ್ಲಿ ವಾಸಿಸುತ್ತಿದ್ದರು. ಇಲ್ಲಿ ಕನ್ನಡ ಮಾತನಾಡುವ ಜನ ೪೮% ಇದ್ದರೆ ೩೪% ಅಷ್ಟು ಜನ ಮರಾಠಿ ಮಾತನಾಡುವರು ಹಾಗೂವಿಜಯಪುರ ಅಂದಿನ ಬಿಜಾಪುರ ಮತ್ತು ಅಕ್ಕಲಕೋಟಿನ ಜನ ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ನಂಟು ಹೊಂದಿದ್ದ ಅನೇಕ ಗಡಿಭಾಗಗಳ ಜನರು ತಮ್ಮ ಪ್ರದೇಶವು ಕರ್ನಾಟಕದೊಂದಿಗೆ ಸೇರಬೇಕು ಎಂಬ ಆಶಯವನ್ನು ವ್ಯಕ್ತಪಡಿಸುತ್ತಿದ್ದರು. ಭಾಷಾವಾರು ರಾಜ್ಯಗಳ ಪರಿಕಲ್ಪನೆ ಬಲವಾಗುತ್ತಿದ್ದ ಸಂದರ್ಭದಲ್ಲಿ, ಕನ್ನಡ ಮಾತನಾಡುವ ಪ್ರದೇಶಗಳು ಒಂದೇ ಆಡಳಿತದ ಅಡಿಯಲ್ಲಿ ಇರಬೇಕು ಎಂಬ ಅಭಿಪ್ರಾಯವೂ ಬೆಳೆಯತೊಡಗಿತು.ಇಂಥ ಚಳವಳಿಗಳು ನಂತರ ಭಾಷಾವಾರು ರಾಜ್ಯಗಳ ಪುನರ್ರಚನೆ ಕುರಿತ ರಾಷ್ಟ್ರೀಯ ಚರ್ಚೆಗೆ ಪೂರಕವಾದವು. ಕನ್ನಡಿಗರ ಭಾಷಾ ಹಕ್ಕು, ಸಾಂಸ್ಕೃತಿಕ ಅಸ್ತಿತ್ವ ಮತ್ತು ಆಡಳಿತಾತ್ಮಕ ನ್ಯಾಯಕ್ಕಾಗಿ ನಡೆದ ಈ ಪ್ರಯತ್ನಗಳು ಕರ್ನಾಟಕ ಏಕೀಕರಣ ಚಳವಳಿಯ ಪ್ರಮುಖ ಹಿನ್ನೆಲೆಯಾಗಿ ಪರಿಣಮಿಸಿದವು. (ಮುಂದುವರೆಯುವುದು) ಸವಿತಾ ದೇಶಮುಖ

