ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಅಂಕಣ ಸಂಗಾತಿ ಭಾರತದ ಮಹಿಳಾ ಮುಖ್ಯಮಂತ್ರಿಗಳು ಸುರೇಖಾ ರಾಠೋಡ್ ಪಂಜಾಬ್ ನ ಮೊದಲ ಮಹಿಳಾ ಮುಖ್ಯಮಂತ್ರಿ ರಾಜೇಂದ್ರ ಕೌರ್ ಭಟ್ಟಾಲ್(ಅಧಿಕಾರಾವಧಿ 21/11/1996 ರಿಂದ 12/02/1997, 83 ದಿನಗಳು) ಪಂಜಾಬ್ ನ ಮೊದಲ ಮಹಿಳಾ ಮುಖ್ಯಮಂತ್ರಿ ರಾಜೇಂದ್ರ ಕೌರ್ ಭಟ್ಟಾಲ್(ಅಧಿಕಾರಾವಧಿ 21/11/1996 ರಿಂದ 12/02/1997, 83 ದಿನಗಳು) ರಾಜೆಂದ್ರ ಕೌರ್ ಇವರು 30 ಸೆಪ್ಟೆಂಬರ್ 1945 ರಲ್ಲಿ ಪಂಜಾಬ್ ನ ಲಾಹೋರ್ನಲ್ಲಿ ಜನಿಸಿದರು. ಇವರ ತಂದೆ ಹೀರಾಸಿಂಗ್ ಭಟ್ಟಲ್.  ತಾಯಿ ಹರ್ನಾಮ ಕೌರ್. ಇವರು ಸಂಗ್ರೂರ ಜಿಲ್ಲೆಯ ಲೆಹಗ್ರಾ ಗ್ರಾಮದಲ್ಲಿ ಚಂಚಲಿ ವಾಲಾದ ಲಾಲ್ಸಿಂಗ್ ಸಿದ್ದು ಅವರನ್ನು ವಿವಾಹವಾದರು. ಇವರಿಗೆ ಒಂದು ಗಂಡು ಒಂದು ಹೆಣ್ಣು ಮಗು.  ರಾಜೇಂದ್ರ ಕೌರ್ ಅವರು 1994ರಲ್ಲಿ  ಚಂಡಿಘಡದಲ್ಲಿ ರಾಜ್ಯ ಶಿಕ್ಷಣ ಸಚಿವರಾದರು. ಇವರು ಹರ್ಚರಣಸಿಂಗ್ ಅವರ ರಾಜೀನಾಮೆಯ ನಂತರ 21.11.1996 ರಂದು ಪಂಜಾಬ್ ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಇವರು ಮುಖ್ಯಮಂತ್ರಿ ಆಗಿದ್ದಾಗ ಸಣ್ಣ ರೈತರಿಗೆ ಕೊಳವೆಬಾವಿ ನೀರಾವರಿಗೆ ಸಂಬಂಧಿಸಿದ ಉಚಿತ ವಿದ್ಯುತ್ ಅನುದಾನವನ್ನು ಒದಗಿಸುವ ಹಲವು ಯೋಜನೆಗಳನ್ನು ಜಾರಿಗೆ ತಂದರು. ಹಾಗೇಯೆ ಇವರು ತಮ್ಮ ಅಧಿಕಾರ ಅವಧಿಯಲ್ಲಿ ಜನಪರ ಹಲವಾರು ಯೋಜನೆಗಳನ್ನು ಜಾರಿಗೆ ತಂದರು.  1997ರ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಸೋತಿದ್ದಕ್ಕೆ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದರು. ನಂತರ ಮೇ ತಿಂಗಳಲ್ಲಿ ಪಂಜಾಬ್ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ನಂತರ ವಿಧಾನಸಭಾ ಶಾಸನಸಭೆಯಲ್ಲಿ ವಿರೋಧ ಪಕ್ಷದ ನಾಯಕಿಯಾಗಿ 12/02/ 1997 ರಿಂದ 10/10/1998 ವರೆಗೆ ಕಾರ್ಯನಿರ್ವಹಿಸಿದರು. ನಂತರ 6/01/2004 ರಿಂದ 1/03/ 2007 ರವರೆಗೆ ಪಂಜಾಬ್ ನ ಎರಡನೆಯ ಉಪಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದರು. ಇವರು 1992 ರಿಂದ ಲೆಹ್ರಾ ವಿಧಾನಸಭಾ ಕ್ಷೇತ್ರದಿಂದ ಸತತವಾಗಿ ಐದು ಬಾರಿ ಗೆದ್ದಿದ್ದಾರೆ. ಸುರೇಖಾ ರಾಠೋಡ್

Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-23 ಗಲಭೆಗಳು ಬಂದ್ಗಳು ಇತ್ಯಾದಿ ವೃತ್ತಿ ವೃತ್ತಾಂತವೃತ್ತಿ ಬದುಕಿನ ಹಿನ್ನೋಟನೋಟ ~ ೨೩ ನಾವು ವಿಭಾಗಿಯ ಕಚೇರಿಗೆ ವರ್ಗವಾಗಿ ಬಂದ ಸಮಯವೇ ಸರಿ ಇರಲಿಲ್ಲವೋ ಏನೋ ಡಿಸೆಂಬರ್ ೧೯೯೧ಲ್ ರಲ್ಲಿ ಕಾವೇರಿ ವಿವಾದ ಆರಂಭವಾಯಿತು. ಇಡೀ ತಿಂಗಳು ಗಲಭೆ . ಕನ್ನಡ ಚಳುವಳಿಯ ಜನಗಳು ಆಫೀಸಿಗೆ ನುಗ್ಗಿ ಕಚೇರಿಯನ್ನು ಬಂದ್ ಮಾಡಿಸುತ್ತಿದ್ದರು. ಸರಿ ನಂತರ ಅಲ್ಲಿಂದ ಮತ್ತೆ ಮನೆಯ ಕಡೆ ಪಯಣ. ಅಷ್ಟು ಹೊತ್ತಿಗೆ ಬಸ್ ಗಳ ಓಡಾಟ ನಿಂತು ಹೋಗಿರುತ್ತಿತ್ತು .ಆಟೋಗಳು ವಿಪರೀತ ದುಡ್ಡು ಕೇಳುತ್ತಿದ್ದರು. ಆದರೂ ಹೆಚ್ಚು ಜನರನ್ನು ಕೂಡಿಸಿಕೊಂಡು ಹೋಗುತ್ತಿದ್ದುದರಿಂದ ಎಲ್ಲರೂ ಸೇರುವ ಒಂದು ಕಾಮನ್ ಪ್ಲೇಸ್ ತನಕ ಆಟೋದಲ್ಲಿ ಬಂದು ಅಲ್ಲಿಂದ ಮುಂದೆ ನಟರಾಜ ಸರ್ವಿಸ್. ಒಂದು ರೀತಿಯ ಶಿಕ್ಷೆಯೇ ಸರಿ. ಆದರೆ ಆಫೀಸಿಗೆ ಬಂದು ಹಾಜರಾತಿಗೆ ಸಹಿ ಹಾಕದಿದ್ದಲ್ಲಿ ಅಂದು ಬಂದ್ ಇದ್ದರೂ ಸಹ ರಜೆ ಕೊಡಬೇಕಿತ್ತು . ಹೆಚ್ಚು ರಜೆಗಳು ಇರುತ್ತಿರಲ್ಲವಾದ್ದರಿಂದ ಕಷ್ಟಪಟ್ಟು ಹೇಗಾದರೂ ಬಂದು ಆಫೀಸ್ ಬಂದ್ ಆದ ನಂತರ ವಾಪಸ್ ಹೋಗುತ್ತಿದ್ದೆವು. ನಮ್ಮ ವಿಭಾಗೀಯ ಕಚೇರಿ ಹಾಗೂ ಶಾಖೆ ಎರಡು ಎರಡೂ ನಗರದ ಹೃದಯ ಭಾಗದಲ್ಲಿ ಇದ್ದುದರಿಂದ ಯಾವುದೇ ಒಂದು ಗಲಭೆ ಆದರೂ ಶಾಖೆಗಳು ಮುಚ್ಚುತ್ತಿದ್ದುದು ಗ್ಯಾರಂಟಿ. ಮುಖ್ಯವಾಗಿ ಡಿಸೆಂಬರ್ 1991ರಲ್ಲಿ ಮೈಸೂರು ಸೇರಿದಂತೆ ದಕ್ಷಿಣ ಕರ್ನಾಟಕದಾದ್ಯಂತ ತೀವ್ರವಾಗಿ ಭುಗಿಲೆದ್ದವು, ಕಾವೇರಿ ಜಲ ವಿವಾದ ನ್ಯಾಯಮಂಡಳಿಯ ಆದೇಶಗಳ ವಿರುದ್ಧ ನಡೆದ ಪ್ರತಿಭಟನೆಗಳಿಂದ ಪ್ರಾರಂಭವಾಗಿ, ತಮಿಳರ ಮೇಲೆ ಹಿಂಸಾಚಾರ, ಆಸ್ತಿಪಾಸ್ತಿ ಹಾನಿ ಮತ್ತು ತಮಿಳರು ರಾಜ್ಯ ತೊರೆಯುವ ಪರಿಸ್ಥಿತಿಗೆ ಕಾರಣವಾಯಿತು, ಇದು ರಾಜ್ಯದ ಇತಿಹಾಸದ worst riots ಎಂದು ಕರೆಯಲ್ಪಟ್ಟಿತು. ಗಲಾಟೆಗಳಿಗೆ ಕಾರಣ ಕಾವೇರಿ ನ್ಯಾಯಮಂಡಳಿ ಆದೇಶ. ಭಾರತ ಸರ್ಕಾರ ನೇಮಿಸಿದ ಕಾವೇರಿ ಜಲ ವಿವಾದ ನ್ಯಾಯಮಂಡಳಿ ತಮಿಳುನಾಡಿಗೆ ನೀರು ಬಿಡುಗಡೆ ಮಾಡಲು ಆದೇಶಿಸಿತ್ತು, ಇದನ್ನು ವಿರೋಧಿಸಿ ಕರ್ನಾಟಕದಲ್ಲಿ ಪ್ರತಿಭಟನೆಗಳು ತೀವ್ರಗೊಂಡವು.ನ್ಯಾಯಮಂಡಳಿಯ ಆದೇಶದಂತೆ ನೀರು ಬಿಡುಗಡೆ ಮಾಡಲು ಕರ್ನಾಟಕ ಸರ್ಕಾರ ನಿರಾಕರಿಸಿದಾಗ ಪ್ರತಿಭಟನೆಗಳು ಹಿಂಸೆಗೆ ತಿರುಗಿದವು.ಮೈಸೂರು, ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ನಗರಗಳಲ್ಲಿ ತಮಿಳರ ಮೇಲೆ ಗುಂಪುಗಳ ದಾಳಿಗಳು ನಡೆದವು. ತಮಿಳು ಪತ್ರಿಕೆಗಳ ಕಚೇರಿಗಳಿಗೆ ಬೆಂಕಿ ಹಚ್ಚುವುದು ಸೇರಿದಂತೆ ದೊಡ್ಡ ಪ್ರಮಾಣದ ಆಸ್ತಿಪಾಸ್ತಿ ಹಾನಿಯಾಯಿತು.ಸಾವಿರಾರು ತಮಿಳು ಕುಟುಂಬಗಳು ಭಯದಿಂದ ಕರ್ನಾಟಕವನ್ನು ತೊರೆದರು.ಕನ್ನಡಪರ ಸಂಘಟನೆಗಳು ಕರೆ ನೀಡಿದ ಬಂದ್ ಪ್ರತಿಭಟನೆಗಳು ಹಿಂಸಾಚಾರಕ್ಕೆ ಕಾರಣವಾದವು. ಪೊಲೀಸರ ಗುಂಡೇಟು ಸೇರಿದಂತೆ ಹಲವು ಸಾವುಗಳು ಸಂಭವಿಸಿದವು (ಅಂದಾಜು 28 ಜನರು ಮೈಸೂರಿನಲ್ಲಿ).ರಾಜ್ಯಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸುಮಾರು ಒಂದು ತಿಂಗಳ ಕಾಲ ಮುಚ್ಚಬೇಕಾಯಿತು.ಆರ್ಥಿಕ ನಷ್ಟ: ಆಸ್ತಿಪಾಸ್ತಿ ನಷ್ಟ ಅಂದಾಜು 19 ಕೋಟಿ ರೂ. ಇತ್ತು.ಈ ಗಲಾಟೆಗಳು ಕಾವೇರಿ ವಿವಾದದ ಉದ್ವಿಗ್ನತೆಯನ್ನು ಮತ್ತು ಕನ್ನಡಿಗರು ಹಾಗೂ ತಮಿಳರ ನಡುವಿನ ಸಂಬಂಧದಲ್ಲಿ ಉಂಟಾಗಿದ್ದ ಉದ್ವಿಗ್ನತೆಯನ್ನು ತೋರಿಸಿಕೊಟ್ಟವು. ನಮಗೂ ಆ ಡಿಸೆಂಬರ್ ತಿಂಗಳಲ್ಲೇ 6 _ 7 ದಿನ ಕಚೇರಿಗಳನ್ನು ಮುಚ್ಚಿಸಿದ್ದರು. ನಂತರದ 1993 ಡಿಸೆಂಬರ್ ನಲ್ಲಿ ಬಾಬರಿ ಮಸೀದಿ ಪ್ರಕರಣ ಸಂಬಂಧ ಮೈಸೂರಿನಲ್ಲಿ ಕೋಮು ಗಲಭೆಗಳು ಆರಂಭವಾದವು ನಮ್ಮ ಕಚೇರಿಗಳಿದ್ದ ನಜರ್ಬಾದ್ ಏರಿಯಾ ಸೂಕ್ಷ್ಮ ಪ್ರದೇಶ ಎಂಬ ಹೆಸರು ಪಡೆದಿತ್ತು. ಅಲ್ಲಿ ಮುಸ್ಲಿಂ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿ ವಾಸವಾಗಿತ್ತು ಹೆಚ್ಚು ಕಡಿಮೆ 27 ದಿನ ಕರ್ಫ್ಯೂ ಜಾರಿಯಲ್ಲಿತ್ತು. ಕರ್ಫ್ಯೂ ಹಾಕಿದ ವಿಷಯ ಮೊದಲೇ ಗೊತ್ತಿದ್ದ ಸಮಯದಲ್ಲಿ ಶಾಖೆಗೆ ಹೋಗುತ್ತಲೇ ಇರಲಿಲ್ಲ. ಕೆಲವೊಮ್ಮೆ ಕರ್ಫ್ಯೂ ಮುಂದುವರಿಸಿದ ವಿಷಯ ತಿಳಿಯದೆ ನಮ್ಮ ಏರಿಯಾಗಳ ಕಡೆ ಕರ್ಫ್ಯೂ ಜಾರಿಯಲ್ಲಿ ಇಲ್ಲದೆ ಇದ್ದಾಗ ಬಸ್ ಗಳು ಸಹ ಓಡಾಡುತ್ತಿದ್ದುದರಿಂದ ಶಾಖೆಗೆ ಹೋಗುತ್ತಿದ್ದೆವು. ದಾರಿಯಲ್ಲೇ ಪೊಲೀಸರು ತಡೆದು ಬೈದು ವಾಪಸ್ಸು ಕಳಿಸುತ್ತಿದ್ದರು ಅಲ್ಲದೆ ಒಂದು ರೀತಿಯ ಭಯ ಮಿಶ್ರಿತ ವಾತಾವರಣ. ಕೋಮುಗಲಭೆ ಅಂದರೆ ಹಾಗೆಯೇ. ಆಗ ಇಡೀ ಮೈಸೂರು ಪ್ರಕ್ಷುಬ್ಧ. ಹೊರಗೆ ಓಡಾಡಲು ಭಯ ಉಂಟಾಗುವ ಪರಿಸ್ಥಿತಿ. ಆ ಬಾರಿ ಎಂದು  ಅರೆ ಮಿಲಿಟರಿ ಹಾಗೂ ಮಿಲಿಟರಿ ಪಡೆಗಳನ್ನು ಸಹ ಕರೆಸಿಬಿಟ್ಟಿದ್ದರಿಂದ ಓಡಾಡುವ ದಾರಿಯಲ್ಲಿ ಸೈನಿಕರನ್ನು ಕಾಣುವಂತೆ ಆಗಿತ್ತು .ಇದು ಅಪರೂಪದ ಸಂಗತಿ ಆದ್ದರಿಂದ ಅವರ ಕಡೆ ಭಯದಿಂದಲೇ ನೋಡಿಕೊಂಡು ಹೋಗಬೇಕಾಗಿತ್ತು. ನನಗೆ ಇನ್ನೂ ಚೆನ್ನಾಗಿ ನೆನಪಿದೆ ಡಿಸೆಂಬರ್ 6 ನಮ್ಮ ತಾಯಿಯ ಹುಟ್ಟುಹಬ್ಬ .ಅಂದು ಸಂಜೆ ಅದಕ್ಕಾಗಿಯೇ ಜಾಮೂನ್ ಮತ್ತು ಸಿಹಿ ಅಡಿಗೆ ಮಾಡಿದ್ದರು ಟಿವಿ ನೋಡುತ್ತಾ ಊಟ ಮಾಡುವಾಗ ಬಾಬರಿ ಮಸೀದಿ ಧ್ವಂಸದ ದೃಶ್ಯಗಳನ್ನು ನೋಡುತ್ತಾ ಊಟ ಮಾಡಿದೆವು .ಆದರೆ ಮಾರನೆಯ ದಿನದಿಂದ ಮೈಸೂರಿನಲ್ಲಿ ನಡೆದ ಆ ಹಿಂಸಾಚಾರ ಮತ್ತು ಭಯದ ವಾತಾವರಣ ನೆನೆಸಿಕೊಂಡಾಗ ಈಗಲೂ ಮನಸ್ಸಿಗೆ ಒಂದು ರೀತಿಯ ಕಸಿವಿಸಿ ಉಂಟಾಗುತ್ತದೆ. ಆಗ ನಮ್ಮ ಬಳಿ ದ್ವಿಚಕ್ರ ವಾಹನಗಳು ಇಲ್ಲದಿದ್ದರಿಂದ ಬಸ್ ನಲ್ಲಿಯೇ ಓಡಾಟ ಹೋಗುತ್ತಾ ಬಸ್ ಸಿಕ್ಕಿದರು ಬರುವ ವೇಳೆಗೆ ಬಸ್ ಓಡಾಟ ನಿಂತು ಹೋಗಿರುತ್ತಿತ್ತು ಹಾಗಾಗಿ ಹೆಚ್ಚಿನ ಅಂಶ ನಡೆದೆ ಮನೆ ಸೇರುತ್ತಿದ್ದೆವು. ಆ ದಿಕ್ಕಿನಲ್ಲಿ ಹೋಗುವ ಎಲ್ಲರೂ ಒಟ್ಟಾಗಿ ನಡೆಯುವುದು ಅಂದಿನ ದಿನಗಳ ಸಾಮಾನ್ಯ ಪದ್ಧತಿಯಾಗಿ ಹೋಗಿತ್ತು. ಈ ನಡೆಯುವ ಕಷ್ಟಕ್ಕಾಗಿಯೇ ಬಂದಾದರೂ ಕಚೇರಿ ಬಂದ್ ಆಗುವುದು ಬೇಡಪ್ಪ ಎನ್ನಿಸಿ ಬಿಡುತ್ತಿತ್ತು ಮುಂದೆ ನಮ್ಮದೇ ದ್ವಿಚಕ್ರವಾಹನಗಳಲ್ಲಿ ಹೋಗುವಾಗ ರಜೆ ಸಿಕ್ಕಿದ ಖುಷಿ ಇರುತ್ತಿತ್ತು. ಇನ್ನು ಕಚೇರಿಯ ಕೆಲಸದ ವಿಷಯಕ್ಕೆ ಬಂದರೆ ನನ್ನ ಜೊತೆ ಸಹಾಯಕರಾಗಿದ್ದ ರಾಮನ್ ಅವರು ಉನ್ನತ ದರ್ಜೆ ಸಹಾಯಕರಾಗಿ ಪದೋನ್ನತಿ ಹೊಂದಿ ವರ್ಗವಾಗಿ ಹೋದರು ಈ ಹಿಂದೆ ಹೇಳಿದಂತೆ ವಿದ್ಯಾರಣ್ಯ ಅವರು ಹೋದಾಗಿನಿಂದ ನಮ್ಮ ವಿಭಾಗದಲ್ಲಿ ಉನ್ನತ ಶ್ರೇಣಿ ಸಹಾಯಕರು ಇರಲಿಲ್ಲ ಈಗ ಸತ್ಯನಾರಾಯಣ ಎನ್ನುವವರು ಸೋಮವಾರಪೇಟೆಯಿಂದ ವರ್ಗವಾಗಿ ಬಂದರು ಅಲ್ಲದೆ ರಾಮನ್ ಅವರ ಜಾಗಕ್ಕೆ ಸುಧಾ ಎನ್ನುವವರು ಸಿಎ ಬ್ರಾಂಚ್ ನಿಂದ ವರ್ಗವಾಗಿ ಬಂದರು. ಈ ವೇಳೆಗಾಗಲೇ ಎಸ್ಎಂಎಸ್ ಗೋಪಾಲನ್ ಅವರು ನನಗೆ ಒಳ್ಳೆಯ ಮಾರ್ಗದರ್ಶನ ನೀಡಿ ಚೆನ್ನಾಗಿ ತರಬೇತಿ ಕೊಟ್ಟುಬಿಟ್ಟಿದ್ದರು. ಒಳ್ಳೆ ಶಾಲೆಯ ಪರೀಕ್ಷೆಗೆ ಓದುವಂತೆ ಇಲಾಖೆಯ ಸುತ್ತೋಲೆಗಳನ್ನು ಚೆನ್ನಾಗಿ ಮನನ ಮಾಡಿಕೊಂಡಿರುತ್ತಿದ್ದೆ. ಹಾಗೆಲ್ಲ ಹೊಸ ಹೊಸ ಪ್ಲಾನ್ ಗಳು ಬಂದಾಗ ವಲಯ ಕಛೇರಿಯಿಂದ ಸುತ್ತೋಲೆಗಳು ಬರುತ್ತಿದ್ದವು ಹಾಗೆ ವಿಭಾಗಕ್ಕೆ ಸಂಬಂಧಿಸಿದ ಏನಾದರೂ ತಿದ್ದುಪಡಿಗಳು ಬದಲಾವಣೆಗಳು ಸಹ ಸುತ್ತೋಲೆಗಳ ಮೂಲಕವೇ ಬರುತ್ತಿತ್ತು ಇಲ್ಲಿ ಅವುಗಳನ್ನು ನಾವು ಮತ್ತೆ ಟೈಪ್ ಮಾಡಿಸಿ ಸೈಕ್ಲೋ ಸ್ಟೈಲ್ ಮಾಡಿ ಪ್ರತಿಗಳನ್ನು ಮಾಡಿ ಶಾಖಾ ಕಚೇರಿಗಳಿಗೆ ಕಳಿಸಿಕೊಡುತ್ತಿದ್ದೆವು. ವಿಭಾಗಿಯ ಕಚೇರಿಯ ಕ್ರಮ ಸಂಖ್ಯೆಗಳು ಸಹ ಸುತ್ತೋಲೆಗಳಲ್ಲಿ ಇರುತ್ತಿದ್ದವು. ಇವೆಲ್ಲ ಸಂಖ್ಯೆಗಳನ್ನು ನನ್ನ ನೆನಪಿನಲ್ಲಿ ಇಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದೆ. ಯಾರಾದರೂ ಫೋನ್ ಮಾಡಿ ಕೇಳಿದಾಗ ಅಲ್ಲಲ್ಲೇ ಮಾರ್ಗದರ್ಶನ ನೀಡುವಷ್ಟು ಹೊಸ ವ್ಯವಹಾರ ವಿಭಾಗದಲ್ಲಿ ಪಳಗಿ ಬಿಟ್ಟಿದ್ದೆ .ಇದಕ್ಕೆಲ್ಲ ನಮ್ಮ ಆಡಳಿತಾಧಿಕಾರಿಗಳವರೇ ಕಾರಣ. ತಮಗೆ ತಿಳಿದ ಎಲ್ಲಾ ವಿಷಯಗಳು ನಮಗೆ ತಿಳಿಸಿಕೊಟ್ಟು ಸಹಾಯ ಮಾಡುತ್ತಿದ್ದರು. ಸಹಾಯಕ ವಿಭಾಗಾಧಿಕಾರಿಗಳಾಗಿದ್ದ ಆಚಾರ್ಯ ಅವರು ಸಹ ನಿವೃತ್ತಿ ಹೊಂದಿ ವಿ ನರಸಿಂಹನ್ ಎನ್ನುವ ಅಧಿಕಾರಿಗಳು ಆ ಜಾಗಕ್ಕೆ ಬಂದಿದ್ದರು. ಅವರು ಸಹ ಆಗ ಫೆಲೋ ಶಿಪ್ ಮಾಡಿದ ಕೆಲವೇ ಜನಗಳಲ್ಲಿ ಒಬ್ಬರು. ತುಂಬಾ ವಿಷಯ ತಿಳಿದುಕೊಂಡಿದ್ದರು. ಆದರೆ ಮಾತೃ ಭಾಷೆ ತಮಿಳು ಆದ್ದರಿಂದ ಕನ್ನಡದಲ್ಲಿ ವ್ಯವಹರಿಸಲು ಸ್ವಲ್ಪ ತೊಡಕು ಇತ್ತು .ಹಾಗಾಗಿ ಯಾರದೇ ಫೋನ್ಗಳು ಬಂದರೆ ನನ್ನನ್ನು ಅಥವಾ ಆಡಳಿತ ಅಧಿಕಾರಿಗಳನ್ನು ಕರೆಯುತ್ತಾ ಇದ್ದರು. ನಾನು ವಿಭಾಗೀಯ ಕಚೇರಿಗೆ ಬಂದ 3-4 ತಿಂಗಳಲ್ಲಿ ಅಲ್ಲಿನ ಶೀಘ್ರ ಲಿಪಿಕಾರ್ತಿ ಸುವರ್ಣ ಅವರು ಹೆರಿಗೆ ರಜೆಗೆ ಹೋಗಿದ್ದರು ಅಲ್ಪಕಾಲದ ರಜೆ ಆದ್ದರಿಂದ ಅವರ ಜಾಗಕ್ಕೆ ಬೇರೆಯವರನ್ನು ಕೊಟ್ಟಿರಲಿಲ್ಲ ನನಗೆ ಬೆರಳಚ್ಚು ಬರುತ್ತಿದ್ದುದರಿಂದ ನಾನೇ ಆ ಜಾಗದ ಕೆಲಸವನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದೆ. ಉಕ್ತಲೇಖನ ಕೊಡುವ ಪ್ರಮೇಯಗಳು ಅಷ್ಟೇನೂ ಬರುತ್ತಿರಲಿಲ್ಲ. ವಿಷಯ ಹೇಳಿದರೆ ಸಾಕು ನಾನೇ ಪತ್ರಗಳನ್ನು ಡ್ರಾಫ್ಟ್ ಮಾಡಿ ಟೈಪ್ ಮಾಡಿ ಕೊಟ್ಟು ಬಿಡುತ್ತಿದ್ದೆ.  ಆಗ ಸೈಕ್ಲೊ ಸ್ಟೈಲ್ ಅಂದರೆ ಕಲ್ಲಚ್ಚು ಪ್ರತಿಗಳ ಕಾಲ ಈಗಿನ ಹಾಗೆ ಜೆರಾಕ್ಸ್ ಹೆಚ್ಚು ಉಪಯೋಗದಲ್ಲಿ ಇರಲಿಲ್ಲ ಕಾರ್ಬನ್ ಶೀಟ್ ಇರುವ ಸೈಕ್ಲೋ ಸ್ಟೈಲ್ ಶೀಟ್ ಗಳಲ್ಲಿ ಟೈಪ್ ಮಾಡಿ ಕೊಟ್ಟರೆ ಅದನ್ನು ಸಹಿ ಮಾಡಿ ಕೊಟ್ಟ ನಂತರ ಹೆಚ್ಚಿನ ಪ್ರತಿಗಳನ್ನು ಕಲ್ಲಚ್ಚು ಯಂತ್ರದಲ್ಲಿ ತೆಗೆದು ಕೊಡುತ್ತಿದ್ದರು. ಈಗ ಪ್ರತಿಯೊಂದಕ್ಕೂ ಜೆರಾಕ್ಸ್ ಬಂದಿದೆ ಕಾಗದದ ಪ್ರತಿಗಳ ಬಳಕೆಯೂ ಕಡಿಮೆಯಾಗಿದೆ ಎಲ್ಲವೂ ಕಂಪ್ಯೂಟರ್ಗಳಲ್ಲಿಯೇ. ನಾವು ನೋಡ ನೋಡುತ್ತಿದ್ದಂತೆಯೇ ಎಷ್ಟೆಲ್ಲಾ ಬದಲಾವಣೆಗಳಿಗೆ ಸಾಕ್ಷಿಯಾದೆವಲ್ಲ ಎನಿಸುತ್ತದೆ. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗೆ ಪರಿಶೀಲನೆಗೆಂದು ಹೋಗುವುದು ಒಂದು ಕ್ರಮ .ಆಗ ಅದಕ್ಕೆ ಕ್ವಾಲಿಟಿ ಕಂಟ್ರೋಲ್ ಎಂಬ ಪಾರಭಾಷಿಕ ಪದ ಇತ್ತು. ಈಗ ಅದನ್ನು ಕ್ವಾಲಿಟಿ ಮ್ಯಾನೇಜ್ಮೆಂಟ್ ಅನಾಲಿಸಿಸ್ ಎಂಬ ಹೆಸರಿನಿಂದ ಕರೆಯುತ್ತಾರೆ. ಒಬ್ಬರು ಅಧಿಕಾರಿ ಹಾಗೂ ಮತ್ತೊಬ್ಬರು ಉನ್ನತ ದರ್ಜೆ ಸಹಾಯಕರು ಅಥವಾ ಸಹಾಯಕರು ಅವರೊಂದಿಗೆ ಹೋಗುವುದು ವಾಡಿಕೆ. ಈವರೆಗೆ ರಾಮನ್ ಅವರು ಇದುದರಿಂದ ಅವರೇ ಎಲ್ಲಾ ಕಡೆಗೂ ಹೋಗುತ್ತಿದ್ದರು ನನಗೂ ವಿಭಾಗದ ಎಲ್ಲಾ ವಿಷಯಗಳು ಅಷ್ಟು ಚೆನ್ನಾಗಿ ತಿಳಿದಿರಲಿಲ್ಲ ಹಾಗಾಗಿ ನಾನು ಹೋಗಲು ಆಗಿರಲಿಲ್ಲಈಗ ರಾಮನ್ ಅವರು ಹೋದ ಮೇಲೆ ನಾನೇ ಸೀನಿಯರ್ ಆದ್ದರಿಂದ ಅಲ್ಲದೆ ಗೋಪಾಲನ್ ಸರ್ ಅವರಿಗೆ ನನ್ನ ಮೇಲೆ ತುಂಬಾ ನಂಬಿಕೆ ಇರುವುದರಿಂದ ನನ್ನನ್ನು ಅವರೊಂದಿಗೆ ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಬರಲು ಹೇಳುತ್ತಿದ್ದರು ಆದರೆ ತುಂಬಾ ದೂರದ ಕಡೆಗಳಿಗೆ ನನಗೆ ಹೋಗಲು ಆಗುತ್ತಿರಲಿಲ್ಲ ಹಾಗಾಗಿ ಶ್ರೀರಂಗಪಟ್ಟಣ ನಂಜನಗೂಡು, ಮೈಸೂರಿನ ವಿವಿಧ ಶಾಖೆಗಳು ಕೆ ಆರ್ ನಗರ ಹುಣಸೂರು ಹಾಗೂ ಕೊಳ್ಳೇಗಾಲ ಒಂದು ಬಾರಿ ಚಾಮರಾಜನಗರಕ್ಕೂ ಸಹ ಹೋಗಿದ್ದ ನೆನಪು ಈ ರೀತಿ ಅವರೊಂದಿಗೆ ಹೋಗುತ್ತಿದ್ದೆ. ಅಲ್ಲಿ  ಆಯಾಯಾ ಅವಧಿಯಲ್ಲಿ ವಿತರಿಸಿದ ಪಾಲಿಸಿಗಳ ಕಡತಗಳನ್ನು ತರಿಸಿ ಸರಿಯಾದ ರೀತಿಯಲ್ಲಿ ಮಾಡಿದ್ದಾರೆಯೇ ಎಂಬುದನ್ನು ಪರೀಕ್ಷಿಸಬೇಕು. ಏನಾದರೂ ತಪ್ಪುಗಳು ಇದ್ದಲ್ಲಿ ಅವುಗಳನ್ನು ಬರೆದುಕೊಂಡು ಹೋಗುವುದು ಮತ್ತು ಅಲ್ಲಿಯೇ ನಡೆಯುತ್ತಿದ್ದ ಚರ್ಚೆಗಳಲ್ಲಿ ಅವುಗಳನ್ನು ಹೇಳಿ ತಿದ್ದಿಕೊಳ್ಳಲು ಹೇಳುತ್ತಿದ್ದೆವು. ವಾಪಸ್ಸು ಬಂದ ನಂತರ ಅದರ ಬಗ್ಗೆ ಒಂದು ವರದಿಯನ್ನು ತಯಾರಿಸಿ ವಿಭಾಗಿಯ ಅಧಿಕಾರಿಗಳ ಗಮನಕ್ಕೆ ತಂದು ಶಾಖೆಗೆ ಕಳುಹಿಸಿ ಕೊಡುತ್ತಿದ್ದೆವು.ಈ ರೀತಿ ತಿಂಗಳಲ್ಲಿ ನಾಲ್ಕು ಅಥವಾ ಐದು ದಿನಗಳು ಈ ರೀತಿಯ ಕ್ವಾಲಿಟಿ ಕಂಟ್ರೋಲ್ ಟೂರ್ ಗಳಿಗೆ ಹೋಗುತ್ತಿದ್ದು ಮಾಮೂಲಿ ಗಿಂತ ಸ್ವಲ್ಪ ಬೇಗನೆ ಹೊರಡಬೇಕಿತ್ತು ಹಾಗೂ ಬರುವುದು ಸಹ ತಡವಾಗುತ್ತಿತ್ತು ಆದರೆ ಈ ರೀತಿಯ ಟೂರ್ಗಳಿಗೆ ಪ್ರವಾಸ ಭತ್ಯೆ ಕೊಡುತ್ತಿದ್ದರಿಂದ ಅದು ಒಂದು ರೀತಿಯ ಆಕರ್ಷಣೆ .ಬಸ್ ಚಾರ್ಜ್ ಮಾತ್ರ ಖರ್ಚು ಮಾಡಿದರೆ ಬಸ್ ಚಾರ್ಜ್ ನೊಂದಿಗೆ ಒಂದು ದಿನದ ಪ್ರಯಾಣ ಭತ್ಯೆ ಸಿಗುತ್ತಿತ್ತು. ಆಗ ಒಂದು ದಿನಕ್ಕೆ ನೂರು ರೂಪಾಯಿಗಳ ವರೆಗೂ ಪ್ರವಾಸ ಭತ್ಯೆ ಸಿಗುತ್ತಿತ್ತು. ಈ ರೀತಿ ಮನಸ್ಸಿಗೆ ಒಂದು ರೀತಿ ಖುಷಿ ಕೊಡುವ ಕೆಲಸ. ದಿನಗಳು ಉರುಳುತ್ತಿದ್ದದು ಗೊತ್ತಾಗುತ್ತಲೇ ಇರಲಿಲ್ಲ. ಮುಂದಿನ ವಾರ,ಇಲಾಖಾ ಪರೀಕ್ಷೆಗಳು ಸುಜಾತಾ ರವೀಶ್

Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ

ಸಾವಿಲ್ಲದಶರಣರು ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ ಮಹಿಳಾ ಸಾಹಿತ್ಯದ ಚರಿತ್ರೆ ಎಂದರೆ ಮಹಿಳೆಯರು ತಮ್ಮ ಅನುಭವಗಳು, ಸಮಾಜದ ಸ್ಥಿತಿ, ರಾಜಕೀಯ ಅಭಿಪ್ರಾಯಗಳನ್ನು ಸಾಹಿತ್ಯದ ಮೂಲಕ ವ್ಯಕ್ತಪಡಿಸಿದ ಪಯಣವಾಗಿದ್ದು, ಇದು ಪ್ರಾಚೀನ ಕಾಲದಿಂದಲೂ ಇದ್ದು, ಅಮೇರಿಕಾದ ಕ್ರಾಂತಿಯಂತಹ ಸಂದರ್ಭಗಳಲ್ಲಿ ತೀವ್ರಗೊಂಡಿತು; ಇವರು ಮನೆ, ಸಮಾಜ ಮತ್ತು ಪ್ರಕೃತಿಯೊಂದಿಗಿನ ಸಂಬಂಧಗಳನ್ನು ಕಾದಂಬರಿ, ಕವಿತೆಗಳ ಮೂಲಕ ನಿರೂಪಿಸಿ, ಮಹಿಳೆಯರ ಸ್ಥಾನಮಾನದ ಸಮಸ್ಯೆಗಳನ್ನು ಎತ್ತಿ ತೋರಿಸಿದ್ದಾರೆ, ಇದು ಮುಖ್ಯವಾಗಿ ಸ್ತ್ರೀವಾದಿ ಚಿಂತನೆಗಳನ್ನು ಜಗತ್ತಿಗೆ ಪರಿಚಯಿಸಿದೆ.ಮಹಿಳಾಪರ ಚಿಂತನೆ ಆಲೋಚನೆಗಳು ಕಥೆ ಕಾದಂಬರಿ ಕಾವ್ಯ ಸಾಹಿತ್ಯ ರಚನೆಯಲ್ಲಿ ಮುಕ್ತವಾಗಿ ಬರೆಯಲು ಆರಂಭಿಸಿದರು ಕನ್ನಡತಿಯರು. 12 ನೆಯ ಶತಮಾನದ ಶ್ರೇಷ್ಠ ವಚನಕಾರ್ತಿಯರು ವರ್ಗ ವರ್ಣ ಲಿಂಗ ಭೇದ ಆಶ್ರಮ ರಹಿತ ಸಾಂಸ್ಥಿಕರಣವಲ್ಲದ ಸಮಸಮಾಜ ಕಟ್ಟಿದರು.ನವ್ಯ ನವೋದಯ ಪ್ರಗತಿಶೀಲ ಬಂಡಾಯ ದಲಿತ ಸಾಹಿತ್ಯ ಹೀಗೆ ಎಲ್ಲಾ ಘಟ್ಟಗಳಲ್ಲಿವಚನ ಸಾಹಿತ್ಯ ಮತ್ತು ಶರಣೆಯರ ಸಾಹಿತಿಕ ಸಾಂಸ್ಕೃತಿಕ ಸಾಮಾಜಿಕ ಕಾರ್ಯಗಳನ್ನು ಮರೆಯಲಾಗದು. ಕನ್ನಡ ಸಾಹಿತ್ಯದಲ್ಲಿಜಯದೇವಿ ತಾಯಿ ಲಿಗಾಡೆ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಮತ್ತು ಸಮಗ್ರ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅನುಪಮವಾಗಿ ದುಡಿದವರು ಶಾಂತಾದೇವಿ ಮಾಳವಾಡ ಅವರು. ಶಾಂತಾದೇವಿ ಮಾಳವಾಡ ಇವರು 1922 ಡಿಸೆಂಬರ್ 10 ರಂದು ಬೆಳಗಾವಿ ಯಲ್ಲಿ ಜನಿಸಿದರು. ತಾಯಿ ಜಯವಂತಿದೇವಿ; ತಂದೆ ಕರ್ಜಗಿ ಮುರಿಗೆಪ್ಪ ಶೆಟ್ಟರು. ತವರು ಮನೆ ಹೆಸರು ಕರ್ಜಗಿ ದಾನಮ್ಮ. ಎರಡು ವರ್ಷದವಳಿದ್ದಾಗ ತಂದೆಯನ್ನು ಹಾಗು ಹತ್ತು ವರ್ಷದವಳಿದ್ದಾಗ ತಾಯಿಯನ್ನು ಕಳೆದುಕೊಂಡ ದಾನಮ್ಮ ಅಜ್ಜಿಯ ಮಡಿಲಲ್ಲಿ ಬೆಳೆದಳು. ವನಿತಾ ವಿದ್ಯಾಲಯದಲ್ಲಿ ಹೈಸ್ಕೂಲ ಎರಡನೆಯ ತರಗತಿಯವರೆಗೆ ಅಂದರೆ ಒಂಬತ್ತನೆಯ ತರಗತಿ ಕಲಿತು, ವಿದ್ಯಾಭ್ಯಾಸವನ್ನು ನಿಲ್ಲಿಸಬೇಕಾಯಿತು. ಮದುವೆಶಾಂತಾದೇವಿ ಮಾಳವಾಡ ಅವರು ತಮ್ಮ 15 ನೆಯ ವಯಸ್ಸಿನಲ್ಲಿ1937 ನೆಯ ಇಸವಿಯಲ್ಲಿ ಪ್ರೊ. ಸ.ಸ. ಮಾಳವಾಡರ ಜೊತೆ ಮದುವೆ ಆಯಿತು. ಮುಂದೆ ತಮ್ಮ ಪತಿಯ ಒತ್ತಾಸೆಯಿಂದಾಗಿ ಶಾಂತಾದೇವಿಯವರು ಮನೆಯಲ್ಲಿಯೆ ಇಂಗ್ಲೀಷ್,ಹಿಂದಿ, ಪ್ರಾಚೀನ ಕನ್ನಡ ಸಾಹಿತ್ಯ ಹಾಗು ವಚನ ಸಾಹಿತ್ಯದ ಅಧ್ಯಯನ ಮಾಡಿದರು. 1940 ರಲ್ಲಿ ಕನ್ನಡ ಜಾಣ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಪತಿಯ ಪ್ರೋತ್ಸಾಹದಿಂದ 1938ರಲ್ಲಿ ಅಕ್ಕನ ಬಳಗ ವೆಂಬ ಮಹಿಳಾ ಸಂಘಟನೆಯನ್ನು ಹುಟ್ಟು ಹಾಕಿದರು.ಶಾಂತಾದೇವಿ ತಾಯಿಯ ಮಮತೆ ತಂದೆಯ ಪ್ರೀತಿ ಕಾಣದ ಮುಗ್ಧ ಬಾಲಕಿಸುಮಾರು ಹತ್ತು ಸಲ ಅವರಿಗೆ ಗರ್ಭಪಾತವಾಯಿತು.ಮಕ್ಕಳಿಲ್ಲದ ಕೊರಗು ಬಿಟ್ಟು ಸಂಪೂರ್ಣ ಸಾಹಿತ್ಯ ಕ್ಷೇತ್ರದಲ್ಲಿ ಅಪೂರ್ವ ಸಾಧನೆ ಮಾಡಿದರು.ಅರಿವು (ಜ್ಞಾನ, ಅರಿವು), ಆಚಾರ (ಅಭ್ಯಾಸ) ಅನುಭವ (ಆಧ್ಯಾತ್ಮಿಕ ಅನುಭವ), ಕಾಯಕ (ದೈಹಿಕ ದುಡಿಮೆಯಿಂದ ಗಳಿಸುವುದು), ಸತ್ಯ ಮತ್ತು ಪರಿಶುದ್ಧತೆಯನ್ನು ಕಾಪಾಡುವುದು, ದಾಸೋಹ (ಯಾವುದೇ ಅಹಂ’ ಇಲ್ಲದೆ ದುಡಿದವರಿಗೆ ನೀಡುವುದು ಶರಣ ಸಂಸ್ಕೃತಿಯ ತತ್ವಗಳು.ಬಾಲ್ಯದಿಂದಲೂ ಇಂತಹ ಅಪೂರ್ವ ಶರಣ ಸಂಸ್ಕೃತಿ ಮೈಗೂಡಿಸಿಕೊಂಡ ಶಾಂತಾದೇವಿ ಮುಂದೊಂದು ದಿನ ನಾಡಿನ ಅಗ್ರ ಲೇಖಕಿ ಸಾಹಿತಿ ಲೇಖಕಿಯಾಗುತ್ತಾರೆ ಎಂದು ಯಾರೂ ಊಹಿಸಿರಲಿಲ್ಲ. ಸಾರ್ವಜನಿಕ ಸಾಮಾಜಿಕ ಸೇವೆ ಅಕ್ಕನ ಬಳಗ ಸ್ಥಾಪನೆ ( 1940)ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರು (1965)ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿಯ ಸದಸ್ಯರು (1974-1978)ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯರು (1979)ಧಾರವಾಡ ಆಕಾಶವಾಣಿ ಆಡಿಶನ್ ಕಮಿತಿ ಸದಸ್ಯರು(1961-1962)ಗಾಂಧಿ ಶಾಂತಿ ಪ್ರತಿಷ್ಠಾನದ ಮಹಿಳಾವಿಭಾಗದ ಕಾರ್ಯಾಧ್ಯಕ್ಷರು(1967-1970)ಕರ್ನಾಟಕ ವಿದ್ಯಾವರ್ಧಕ ಸಂಘ,ಧಾರವಾಡ ದ ಉಪಾಧ್ಯಕ್ಷರು (1974-1978)ಉತ್ತರ ಕರ್ನಾಟಕ ಲೇಖಕಿಯರ ಸಂಘ (ಹುಬ್ಬಳ್ಳಿ-ಧಾರವಾಡ) ದ ಆಜೀವ ಗೌರವಾಧ್ಯಕ್ಷರು ಸಾಹಿತ್ಯ ಕೃತಿಗಳು ಕಥಾಸಂಕಲನ ಮೊಗ್ಗೆಯ ಮಾಲೆಕುಂಕುಮ ಬಲ ಗದ್ಯ ಸಾಹಿತ್ಯ ಹಚ್ಚೇವು ಕನ್ನಡದ ದೀಪ.ಕನ್ನಡದ ತಾಯಿ.ಮಹಿಳೆಯರ ಅಲಂಕಾರಸೊಬಗಿನ ಮನೆಮಹಿಳೆಯರ ಆತ್ಮಶ್ರೀ.ರಸಾಪಾಕಸಾರ್ವಜನಿಕ ರಂಗದಲ್ಲಿ ಮಹಿಳೆ.ದಾಂಪತ್ಯಯೋಗವಧುವಿಗೆ ಉಡುಗೊರೆ.ಜನನೀ ಜನ್ಮ ಭೂಮಿಶ್ಚ.ಮಹಿಳಾ ಚೇತನ.ಸಮುಚ್ಚಯ. ಕಾದಂಬರಿಬಸವ ಪ್ರಕಾಶ.ದಾನದಾಸೋಹಿ ದಾನಮ್ಮ.ವೀರ ಶೂರರಾಣಿ ಕೆಳದಿ ಚೆನ್ನಮ್ಮ ಮಕ್ಕಳ ಸಾಹಿತ್ಯಬೆಳವಡಿ ಮಲ್ಲಮ್ಮ.ಕೆಳದಿ ಚೆನ್ನಮ್ಮ.ನಾಗಲಾಂಬಿಕೆ.ನೀಲಾಂಬಿಕೆಕುಟುಂಬ.ಬಸವಯುಗದ ಶಿವಶರಣೆಯರುಭಾರತದ ಮಾನಸಪುತ್ರಿಯರುಗಂಗಾಂಬಿಕೆಶಿವಯೋಗಿಣಿಎಣ್ಣೆ ಹೊಳೆಯ ನಂದಾದೀಪಪುರಾತನ ಶರಣರುದಾನದಾಸೋಹಿ ದಾನಮ್ಮ. ಪ್ರಶಸ್ತಿ ಗೌರವಗಳು ಜ.ಚ.ನಿ. ಪೀಠಾರೋಹಣ ಬೆಳ್ಳಿಹಬ್ಬ ‘ ಸಾಹಿತ್ಯಸುಮ ‘ ಬಂಗಾರದ ಪದಕಸಾಹಿತ್ಯ ಅಕಾಡೆಮಿ ಪ್ರಶಸ್ತಿ (1973)ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1983)ಸಾವಿತ್ರಮ್ಮ ದೇ.ಜ.ಗೌ. ಪ್ರಶಸ್ತಿ (1991)ಷಷ್ಟ್ಯಬ್ದಿ ಸಮಾರಂಭ (‘ ಪ್ರಶಾಂತ’ ಆಭಿನಂದನ ಗ್ರಂಥ ಸಮರ್ಪಣೆ:1982) 1999 ರಲ್ಲಿ ಬಾಗಲಕೋಟೆಯಲ್ಲಿ ನಡೆದ 68 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೇಷ್ಠ ಸಾಹಿತಿ ಶಾಂತಾದೇವಿ ಮಾಳವಾಡ ಅವರು 7 ಆಗಸ್ಟ್ 2005 ರಲ್ಲಿ ಬಯಲಲ್ಲಿ ಬಯಲಾದರು.ಸರಳ ಸಜ್ಜನಿಕೆಯ ಸಾಕಾರ ಮೂರ್ತಿ ಸ್ನೇಹ ಪ್ರೀತಿ ಮತ್ತು ಆತ್ಮ ಸ್ಥೈರ್ಯದ ಸಂಕೇತವಾದ ಕನ್ನಡ ಸಾಹಿತ್ಯದ ದಿಗ್ಗಜೆ ಶಾಂತಾದೇವಿ ಮಾಳವಾಡ ಅವರು ಕನ್ನಡ ಭಾಷೆ ಸಾಹಿತ್ಯ ಸಂಸ್ಕೃತಿಗೆ ಕೊಟ್ಟ ಕೊಡುಗೆ ಅಪಾರವಾಗಿದೆ. ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

ಕನ್ನಡ ಸಾಹಿತ್ಯ ದಿಗ್ಗಜೆ ಶಾಂತಾದೇವಿ ಮಾಳವಾಡ Read Post »

ಅಂಕಣ ಸಂಗಾತಿ, ಭಾರತದಮಹಿಳಾ ಮುಖ್ಯಮಂತ್ರಿಗಳು

ಭಾರತದ ಮಹಿಳಾ ಮುಖ್ಯಮಂತ್ರಿಗಳು,ಸುರೇಖಾ ರಾಾಠೋಡ್

ಅಂಕಣ ಸಂಗಾತಿ ಭಾರತದ ಮಹಿಳಾ ಮುಖ್ಯಮಂತ್ರಿಗಳು, ಸುರೇಖಾ ರಾಾಠೋಡ್ ಮಾಯಾವತಿ ಭಾರತದ ಮೊದಲ ಮಹಿಳಾದಲಿತ ಮಂತ್ರಿ ಮಾಯಾವತಿ(ಆಡಳಿತ ಅವಧಿ ೭ ವರ್ಷ ೫ದಿನಗಳು) ಇವರು ಜನವರಿ ೧೫, ೧೯೫೬ ರಂದು ನವದೆಹಲಿಯಲ್ಲಿ ಜನಿಸಿದರು. ಇವರ ತಂದೆ ಪ್ರಭು ದಾಸ. ತಂದೆ ಅಂಚೆ ಕಛೇರಿ ಉದ್ಯೋಗಿಯಾಗಿದ್ದರು. ಇವರ ಕುಟುಂಬದಲ್ಲಿ ಗಂಡು ಮಕ್ಕಳಿಗೆ ಖಾಸಗಿ ಶಾಲೆಗಳಿಗೆ ಕಳುಹಿಸಿದರೆ ಹೆಣ್ಣುಮಕ್ಕಳಿಗೆ ಸರ್ಕಾರಿ ಶಾಲೆಗೆ ಕಳುಹಿಸುತ್ತಾರೆ. ಮಾಯಾವತಿಯವರು ೧೯೭೫ರಲ್ಲಿ ದೆಹಲಿ ವಿಶ್ವವಿದ್ಯಾಲಯದಿಂದ ಕಾನೂನು ವಿಭಾಗದಿಂದ ಎಲ್‌ಎಲ್‌ಬಿ ಪದವಿ ಪಡೆದರು. ವಿಎಂಎಲ್‌ಜಿ ಕಾಲೇಜಿನಿಂದ ಬಿಎಡ್ ಪದವಿಯನ್ನು ಪಡೆದರು. ನಂತರ ಇವರು ಕೆಲ ದಿನಗಳವರೆ ಶಿಕ್ಷಕಿಯಾಗಿ ಕೆಲಸ ಮಾಡಿದರು. ಹಾಗೆಯೆ ಐಎಎಸ್ ಪರೀಕ್ಷೆ ತಯಾರಿ ನಡೆಸುವಾಗ ೧೯೭೭ರಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ಜಾತಿಗಳ ರಾಜಕಾರಣಿಯಾದ ಕಾನ್ಶಿರಾಮ್ ಅವರು ಇವರ ಕುಟುಂಬಕ್ಕೆ ಭೇಟಿ ನೀಡಿದರು. ಅಜಯ್ ಬೋಸ್ ಅವರ ಬಯೋಗ್ರಾಫಿಯಲ್ಲಿ ಮಾಯಾವತಿಯವರಿಗೆ ರಾಮ್ ಅವರು ಒಂದು ಮಾತನ್ನು ಹೇಳುತ್ತಾರೆ ‘ನಾನು ನಿಮಗೆ ಒಂದು ದಿನ ಇಷ್ಟು ದೊಡ್ಡ ನಾಯಕಿಯಾನ್ನಾಗಿ ಮಾಡುತ್ತೇನೆಂದರೆ ನಿಮ್ಮ ಆದೇಶಗಳಿಗಾಗಿ ಒಂದಲ್ಲ ಸಾಲುಗಟ್ಟಲೇ ಐಎಎಸ್ ಅಧಿಕಾರಿಗಳು ಕಾಯುತ್ತಾರೆಂದು’. ೧೯೮೪ರಲ್ಲಿ ಕಾನ್ಶಿರಾಮ್ ಅವರು ಬಹುಜನ ಸಮಾಜ ಪಕ್ಷವನ್ನು ಸ್ಥಾಪಿಸಿದಾಗ ಮಾಯಾವತಿಯವರಿಗೆ ಸದಸ್ಯರನ್ನಾಗಿ ಸೇರಿಸಿಕೊಂಡರು. ಹೀಗೆ ಮಾಯಾವತಿಯವರು ರಾಜಕಿಯವನ್ನು ಪ್ರವೇಶ ಪಡೆದರು. ಇವರು ಮೊದಲ ಬಾರಿಗೆ ೧೯೮೯ರಲ್ಲಿ ಸಂಸತ್ತಿಗೆ ಆಯ್ಕೆಯಾದರು. ಮಾಯಾವತಿಯವರು ಡಾ. ಬಾಬಾ ಸಾಹೇಬ್ ಅಂಬೆಡ್ಕರ್ ಅವರ ವಿಚಾರಧಾರೆಗಳಿಂದ ತುಂಬಾ ಪ್ರಭಾವಿತರಾಗಿದ್ದವರು. ಇವರು ತಮ್ಮ ಅಧಿಕಾರವಧಿಯಲ್ಲಿ ದಲಿತರ ಪರವಾಗಿ ದಮನಿತರ ಪರವಾಗಿ ಅನೇಕ ಕೆಲಸಗಳನ್ನು ಮಾಡಿದರು. ಜನರು ಇವರನ್ನು ಸಹೋದರಿ(ಬೆಹೆನಜಿ) ಎಂದು ಕರೆಯುತ್ತಿದ್ದರು. ‘ಬೆಹೆನಜಿ ತುಮ್ ಸಂಘರ್ಷ ಕರೋ, ಹಮ್ ತುಮಾರೇ ಸಾಥ್ ಹೈ”(ಸಹೋದರಿ ನಿಮ್ಮ ಹೋರಾಟಗೊಂದಿಗೆ ಮುಂದುವರೆಯಿರಿ, ನಾವು ನಿಮ್ಮೊಂದಿಗೆ ಇದ್ದೇವೆ) ಎಂದು ಹೇಳುತ್ತಿದ್ದರು. ೧೯೮೪ರಲ್ಲಿ ನಡೆದ ತನ್ನ ಮೊದಲ ಚುನಾವಣಾ ಪ್ರಚಾರದಲ್ಲಿ ಬಿಎಸ್‌ಪಿ ಮಾಯಾವತಿಯವರನ್ನು ಮುಜಫರ್ ನಗರ ಜಿಲ್ಲೆಯ ಕೈರಾನಾ ಲೋಕಸಭಾ ಸ್ಥಾನಕ್ಕೆ, ೧೯೮೫ರಲ್ಲಿ ಬಿಜ್ನೋರ್‌ನಿಂದ ಮತ್ತು ೧೯೮೭ರಲ್ಲಿ ಹರಿದ್ವಾರದಿಂದ ಕಣಕ್ಕಿಳಿಸದರು. ಇವರು ೧೯೮೯ರಲ್ಲಿ ಬಿಜ್ನೋರ್‌ನಿಂದ ಪ್ರತಿನಿಧಿಯಾಗಿ ಆಯ್ಕೆಯಾದರು.ಮಾಯಾವತಿಯವರು ಮೊದಲ ಬಾರಿಗೆ ೧೯೯೪ರಲ್ಲಿ ಉತ್ತರ ಪ್ರದೇಶದ ರಾಜ್ಯಸಭೆಗೆ ಆಯ್ಕೆಯಾದರು. ೧೯೯೫ರಲ್ಲಿ ಇವರು ತಮ್ಮ ಪಕ್ಷದ ಮುಖ್ಯಸ್ಥರಾಗಿ, ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಯಾದರು. ಇವರು ಅತ್ಯಂತ ಕಿರಿಯ ಮತ್ತು ಭಾರತದ ಮೊದಲ ಮಹಿಳಾ ದಲಿತ ಮುಖ್ಯಮಂತ್ರಿಯಾದರು. ೧೯೯೬ರಲ್ಲಿ ಅವರು ಎರಡು ವಿಭಿನ್ನ ಕ್ಷೇತ್ರಗಳಲ್ಲಿ ಲೋಕಸಭೆ ಚುನಾವಣೆಯಲ್ಲಿ ಗೆದ್ದರು. ೧೯೯೭ರಲ್ಲಿ ಎರಡನೆ ಮತ್ತು ಮೂರನೇ ಅವಧಿಗೆ ೨೦೦೨ ರಿಂದ ೨೦೦೩ವರೆಗೆ ಭಾರತೀಯ ಜನತಾ ಪಕ್ಷದೊಂದಿಗಿನ ಒಕ್ಕೂಟದಲ್ಲಿ ಮತ್ತೆ ಮುಖ್ಯ ಮಂತ್ರಿಯಾದರು. ಮತ್ತೆ ೨೦೦೭ರ ಮೇ ೧೩ರಂದು ನಾಲ್ಕನೇ ಬಾರಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.೨೦೦೧ರಲ್ಲಿ ರಾಮ್ ಅವರು ಪಕ್ಷದ ನಾಯಕತ್ವದ ಉತ್ತರಾಧಿಕಾರಿಯಾಗಿ ಇವರನ್ನು ಘೋಷಿಸಿದರು. ೨೦೦೩ ರಂದು ಇವರು ಮೊದಲ ಬಾರಿಗೆ ಬಿಎಸ್‌ಪಿಗೆ ರಾಷ್ಟಿçÃಯ ಅಧ್ಯಕ್ಷರಾಗಿ ಆಯ್ಕೆಯಾದರು. ೨೦೦೬ರಲ್ಲಿ ಮತ್ತೆ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೨೦೧೪ ರಲ್ಲಿ ಮೂರನೇ ಬಾರಿ ಮತ್ತು ೨೦೧೯ರಲ್ಲಿ ನಾಲ್ಕನೇ ಬಾರಿ ಅವಿರೋಧವಾಗಿ ಆಯ್ಕೆಯಾದರು. ೧೯೯೯ ರಿಂದ ೨೦೦೨ ೧೩ನೇ ಲೋಕಸಭೆಯಲ್ಲಿ ಅಕ್ಬರ್‌ಪುರದಿಂದ ಸಂಸದ ಸದಸ್ಯರಾದರು. ೨೦೦೭ ರಿಂದ ೨೦೧೨ವರೆಗೆ ಉತ್ತರ ಪ್ರದೇಶ ವಿಧಾನ ಪರಿಷತ್ತಿನ ಎಂಎಲ್‌ಸಿಯಾಗಿ ಕಾರ್ಯನಿರ್ವಹಿಸಿದರು. ೨೦೧೨ ರಿಂದ ೨೦೧೭ರ ವರೆಗೆ ಉತ್ತರ ಪ್ರದೇಶದಿಂದ ರಾಜ್ಯಸಭೆಯ ಸಂಸತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದರು. ಇವರ ಕುರಿತು ಸಾಹಿತ್ಯ ಕೂಡ ರಚನೆಯಾಗಿವೆ. ಅವುಗಳೆಂದರೆ ‘ಐರನ್ ಲೇಡಿ’, ‘ಮೇರೆ ಸಂಘರ್ಷಮೈ ಜೀವನ ಏವಂ ಬಹುಜನ ಚಳುವಳಿ ಕಾ ಸಫರ್ನಾಮಾ’, ‘ಬೆಹೆಂಜಿ’. ಇವರಿಗೆ ಅನೇಕ ಪ್ರಶಸ್ತಿಗಳು ದೊರತಿವೆ. ಅವುಗಳೆಂದರೆ ೨೦೦೩ರಲ್ಲಿ ಯುನಿಸ್ಕೋ, ವಿಶ್ವ ಆರೋಗ್ಯ ಸಂಸ್ಥೆ ಮತ್ತು ರೋಟರಿ ಇಂಟರ್ನ್ಯಾಷನಲ್ ಪಾಲ್ ಹ್ಯಾರಿಸ್ ಫೆಲೋ ಪ್ರಶಸ್ತಿಯನ್ನು ನೀಡಿತು. ರಾಜರ್ಷಿ ಶಾಹು ಸ್ಮಾರಕ ಟ್ರಸ್ಟ್ನಿಂದ ರಾಜರ್ಷಿ ಶಾಹು ಪ್ರಶಸ್ತಿಯನ್ನು ನೀಡಿದೆ. ೨೦೦೮ರಲ್ಲಿ ಪೋರ್ಬ್ಸ್ ವಿಶ್ವದ ೧೦೦ ಅತ್ಯಂತ ಶಕ್ತಿಶಾಲಿ ಮಹಿಳೆಯರ ಪಟ್ಟಿಯಲ್ಲಿ ಮಾಯಾವತಿಯವರು ೫೯ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ೨೦೦೭ರಲ್ಲಿ ನ್ಯೂಸ್‌ವೀಕ್‌ನ ಉನ್ನತ ಮಹಿಳಾ ಸಾಧಕರ ಪಟ್ಟಿಯಲ್ಲಿ ಕೂಡ ಇವರು ಸ್ಥಾನ ಪಡೆದರು. ೨೦೦೭ರಲ್ಲಿ ಟೈಮ್ ನಿಯತಕಾಲಿಕೆಯು ಮಾಯಾವತಿಯವರನ್ನು ಭಾರತದ ೧೫ ಅತ್ಯಂತ ಪ್ರಭಾವಶಾಲಿ ಪಟ್ಟಿಯಲ್ಲಿ ಹೆಸರಿಸಿತು. ಸುರೇಖಾ ರಾಠೋಡ್

ಭಾರತದ ಮಹಿಳಾ ಮುಖ್ಯಮಂತ್ರಿಗಳು,ಸುರೇಖಾ ರಾಾಠೋಡ್ Read Post »

ಅಂಕಣ ಸಂಗಾತಿ, ಸಾವಿಲ್ಲದ ಶರಣರು

“ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ-ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ

ಶರಣ ಸಂಗಾತಿ ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ “ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ- ಹೈದ್ರಾಬಾದ   ಕರ್ನಾಟಕದ ಶ್ರೇಷ್ಠ ಶಿವಯೋಗ ಸಾಧಕ ಭಾಲ್ಕಿ ಡಾ ಡಾ ಶ್ರೀ ಚೆನ್ನಬಸವ ಸ್ವಾಮೀಜಿ .ರಜಾಕಾರ ಮತ್ತು ಮುಸ್ಲಿಮರ ಹಾವಳಿಗೆ ಕನ್ನಡ ಶಿಕ್ಷಣ ತತ್ತರಿಸಿ ಹೋಗಿತ್ತು ಹೊರಗೆ ಉರ್ದು ಬೋರ್ಡ್ ಹಾಕಿ ಒಳಗೆ ಕನ್ನಡವನ್ನು ಕಲಿಸುವ ದಿಟ್ಟತನವನ್ನು ಪರಮ ಪೂಜ್ಯ ಡಾ ಭಾಲ್ಕಿ ಡಾ ಚೆನ್ನ ಬಸವ ಸ್ವಾಮೀಜಿಯವರು ಕೈಗೊಂಡರು ಹಿರೇಮಠ ಸಂಸ್ಥಾನ ಕನ್ನಡದ ಮಠ, ಬಸವ ತತ್ವದ ಮಠ, ಇದು ಜನತೆಯ ಮಠ, ನಮ್ಮೆಲ್ಲರ ಮಠ. ಬಸವಣ್ಣನವರನ್ನು ಹಾಸಿಕೊಂಡು, ಹೊದ್ದುಕೊಂಡಿರುವಂಥ ಮಠ. ಇವನಾರು, ಇವನಾರು? ಎಂದು  ಕೇಳದೆ ಎಲ್ಲರೂ ನಮ್ಮವರೆನ್ನುವ ಮಠ. ಬಡವರಿಗೆ, ದೀನರಿಗೆ, ದಲಿತರಿಗೆ, ಅಂಗವಿಕಲರಿಗೆ, ಅಬಲೆಯರಿಗೆ, ವಿಧವೆಯರಿಗೆ, ಅನಾಥರಿಗೆ, ಕಲಾವಿದಾರಿಗೆ ಆಶ್ರಯ ನೀಡಿರುವಂಥ ಮಠ. ಖ್ಯಾತ ಸಂಶೋಧಕರಾದ ಎಂ. ಎಂ. ಕಲಬುರ್ಗಿಯವರು “ ನಾಡಿನ ಗುರುಸ್ಥಲ ಮಠಗಳಿಗೆ  ಭಾಲ್ಕಿ ಮಠ ಮಾದರಿ ಹಾಗೂ ನಾಡಿನ ವಿರಕ್ತ ಮಠಗಳಿಗೆ ಇಳಕಲ ಮಠ ಮಾದರಿ” ಎಂದು ಬರೆದಿರುವುದು ಇಲ್ಲಿ ಸ್ಮರಿಸಬಹುದು. ಲಿಂಗೈಕ್ಯ ಡಾ|| ಚೆನ್ನಬಸವ ಪಟ್ಟದೇವರು ಹಿಂದಿನಿಂದಲೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಕಲ್ಯಾಣ (ಹೈದ್ರಾಬಾದ) ಕರ್ನಾಟಕವು ಪರಕೀಯ ಆಳ್ವಿಕೆ. ಸ್ಠಳೀಯರ ಅಭಿಮಾನ ಶೂನ್ಯತೆ ಜನಮಾನಸದ ಅಸಹಕಾರ ಶೋಷಣೆಗೆ ಒಳಗಾದ ಜನಸಮುದಾಯಕ್ಕೆ ನೆರವಾಗಿ ಬಂದವರು ಡಾ.ಚೆನ್ನಬಸವ ಪಟ್ಟದೇವರು. ಬಾಲ್ಯ ಮತ್ತು ಶಿಕ್ಷಣಇವರ ಮೊದಲ ಹೆಸರು ಮಹಾರುದ್ರಪ್ಪ. ಬೀದರ ಜಿಲ್ಲೆಯ ಔರಾದ ತಾಲೂಕಿನ ಕಮಲನಗರದಲ್ಲಿ ಬುಳ್ಳಾ ಎಂಬ ವ್ಯಾಪಾರಸ್ಥ  ಮನೆತನದಲ್ಲಿ ತಂದೆ ರಾಜಪ್ಪ- ತಾಯಿ ಸಂಗಮ್ಮಎಂಬ ದಂಪತಿಗಳಿಗೆ  22 ಡಿಸೆಂಬರ್ 1890 ರಂದು  ಮಗುವಾಗಿ ಹುಟ್ಟಿದ ಇವರು ಐದು ವರ್ಷ ತುಂಬುವಾಗಲೇ ತಂದೆ-ತಾಯಿಗಳನ್ನು ಕಳೆದುಕೊಂಡು ಮಹಾ ಅನಾಥರಾದರು. ಬಾಲ್ಯದ 8 ರಿಂದ 10 ವರ್ಷಗಳವರೆಗೆ  ಭಾಲ್ಕಿ ಹಿರೇಮಠ ಶಾಖಾ ಮಠದ ಕಮಲನಗರದಲ್ಲಿ ಅನಾಥ ಬಾಲಕನಾಗಿ ಕಂತಿ ಭಿಕ್ಷೆ ಎತ್ತಿದರು. ಮಠಗಳ ದನ ಕಾಯ್ದು ಬದುಕು ಸವೆಸುತ್ತಿರುವಾಗ, ಭಾಲ್ಕಿ ಹಿರೇಮಠದ ಶ್ರೀ ಸಿದ್ಧ ಬಸವ ಸ್ವಾಮಿಗಳು ದೀಕ್ಷೆ ನೀಡಿ ಸಂಸ್ಕಾರ ಬೋಧಿಸಿ, “ ಚನ್ನಬಸವ” ನೆಂಬ ಹೆಸರಿಟ್ಟು ಸಮೀಪದ ಮುಧೋಳ ಶಿವಲಿಂಗ ಸ್ವಾಮಿಗಳ ಸೇವೆಗೆ ಕಳುಹಿಸಿದರು. ಈ ಹೊತ್ತಿಗಾಗಲೆ “ಚೆನ್ನಬಸವ” ಅಕ್ಷರ ಜ್ಜಾನ ಪಡೆದು ಮರಾಠಿ- ಕನ್ನಡ ಕಲಿಯುತ್ತಿದ್ದರು. ವಿಶೇಷವೆಂದರೇ ಕನ್ನಡ ಭಾಷೆಯನ್ನು ಮೊಡಿ ಲಿಪಿಯಲ್ಲಿ ಬರೆಯುತ್ತಿದ್ದರು ಇವರ ಅಕ್ಷರ ಪ್ರೀತಿಯನ್ನು ಕಂಡ ಶಿವಲಿಂಗ ಮಹಾಸ್ವಾಮಿಗಳು ಔರಾದ (ಬಿ) ದಲ್ಲಿನ ಕೇದಾರಗಳಂಗಳಪ್ಪನವರ ಕನ್ನಡ ಶಾಲೆಗೆ (ಜಿಲ್ಲೆಯಲ್ಲಿ ಇವರೊಬ್ಬರೆ ಕನ್ನಡ ಕಲಿಸುವವರಿದ್ದರು) ಕಳುಹಿಸಿದರು. ಚೆನ್ನಬಸವ ಇಲ್ಲಿಯೇ ಕನ್ನಡದ ಪ್ರಮುಖ ಕಾವ್ಯಗಳಾದ “ರಾಜಶೇಖರ ವಿಳಾಸ, ಶಬರಶಂಕರ ವಿಳಾಸ, ಕರ್ನಾಟಕ ಶಬ್ದ ಮಂಜರಿ, ಬಸವರಾಜ, ವಿಜಯ” ಅಭ್ಯಾಸ ಮಾಡಿದರು. ಪ್ರಸಾದ (ಊಟ)ಕ್ಕಾಗಿ ವಾರದ ಮನೆ ನಿಗದಿಗೊಂಡಿದ್ದು , ದಾಸೋಹ ಮನೆಗೆ ಮನೆಗೆ ಕಂತಿ ಭಿಕ್ಷೆ ತರಬೇಕಾಗುತ್ತಿತ್ತು. ಓದುವ ಗೀಳು ಹೊಂದಿದ್ದ ಚೆನ್ನಬಸವ ಮೈಸೂರಿನಿಂದ ಬರುತ್ತಿದ್ದ ಕನ್ನಡ ಪತ್ರಿಕೆ “ಮೈಸೂರು ಸ್ಟಾರ್” ಓದುತ್ತಿದ್ದರು. ಅದರಲ್ಲಿ ಶಿವಯೋಗ ಮಂದಿರದ ವಿಷಯಗಳು ಓದಿ ಅಲ್ಲಿಗೆ ಹೋಗುವ ಹಂಬಲವಾದರೂ ಅದಮಿಟ್ಟುಕೊಂಡರು. ಇತ್ತ  ಭಾಲ್ಕಿ ಹಿರೇಮಠಕ್ಕೆ ಹೊಸ ಪಟ್ಟಾಧ್ಯಕ್ಷರು ಬೇಕಾಗಿದ್ದರು. ಕಾಶಿರಾಯ ದೇಶಮುಖ, ಶಿವಲಿಂಗಪ್ಪ ಖಂಡ್ರೆ ಇದಕ್ಕಾಗಿ ಯೋಗ್ಯರನ್ನು, ಹುಡುಕುತ್ತಿರುವಾಗ ನಿಷ್ಠೆ, ಕರುಣೆ, ಸಚ್ಚಾರಿತ್ರ್ಯ ಮೈಗೂಡಿಸಿಕೊಂಡು ತಿಳಿವಳಿಕೆಯಿಂದ ಜ್ಜಾನಿಯಾಗಿದ್ದ ಕ್ರಿಯಾಶೀಲ ಚೆನ್ನಬಸವ ಜನಾನುರಾಗಿಯಾಗಿ ಬೆಳೆಯುತ್ತಿರುವುದನ್ನು ದೇಶಮುಖರು ಗಮನಿಸಿ ತರಬೇತಿಗಾಗಿ ಶಿವಯೋಗ ಮಂದಿರಕ್ಕೆ ಕಳುಹಿಸಿದ್ದರು. ಶಿವಯೋಗ ಮಂದಿರದಲ್ಲಿ ಹಾನಗಲ್ ಕುಮಾರ್ ಸ್ವಾಮಿಗಳ ಪ್ರೀತಿಯ ಶಿಷ್ಯನಾಗಿ, ಕನ್ನಡ ಭಾಷೆ-ಸಾಹಿತ್ಯ ವಚನಗಳ ಅಧ್ಯಯನದೊಂದಿಗೆ ಬದುಕಿನಲ್ಲಿ ಶರಣ ತತ್ವಗಳನ್ನು ರೂಢಿಸಿಕೊಂಡರು. ಇವೆಲ್ಲದರ ಮಧ್ಯ ಲೌಕಿಕ ಬದುಕಿನ ಬಗ್ಗೆ ಆಸಕ್ತಿಯೇ ತೋರಲಿಲ್ಲ. ಆದ್ದರಿಂದ ಅವರ ಬದುಕಿನ ಸ್ಥಾಯಿ “ವಿರಕ್ತ”ವಾಯಿತು ಕಾಯಕ ದಾಸೋಹ ಅವರ ಜೀವನವಾದರೆ ಲೋಕಸೇವೆ ಜೀವನದ ಗುರಿಯಾಯಿತು. ಹೀಗೆ ಶಿವಯೋಗ ಮಂದಿರ ಬದುಕಿನ ಬೆಳಕಾಯಿತು. ಗುರು ಲಿಂಗ ಜಂಗಮ ತತ್ವಗಳನ್ನು ನಾಡಿನ ತುಂಬೆಲ್ಲಾ ಪ್ರಸಾರ ಮಾಡಿ 22 ಏಪ್ರಿಲ್ 1999 ರಂದು ತಮ್ಮ ನೂರಾ ಒಂಬತ್ತನೆಯ ವಯಸ್ಸಿನಲ್ಲಿ ಬಯಲಲ್ಲಿ ಬಯಲಾದರು __________ ಡಾ ಶಶಿಕಾಂತ ಪಟ್ಟಣ ರಾಮದುರ್ಗ ಪುಣೆ

“ಸಾವಿಲ್ಲದ ಶರಣರು” ಮಾಲಿಕೆ, ಕಲ್ಯಾಣದ ಮೇರು ಲಿಂಗಸಾಧಕ ಭಾಲ್ಕಿ  ಡಾ ಶ್ರೀ ಚೆನ್ನಬಸವ ಸ್ವಾಮೀಜಿ-ಡಾ.ಶಶಿಕಾಂತ್‌ ಪಟ್ಟಣ ರಾಮದುರ್ಗ ಪುಣೆ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟನೋಟ ~ ೨೦ ಮೊಗೆದಷ್ಟೂ ನೆನಪುಗಳು. ಹೀಗೆ ಸ್ನೇಹಿತರೊಂದಿಗೆ ಜಾಲಿಯಾಗಿ ಪ್ರಯಾಣ ಮಾಡುತ್ತಾ ಆಫೀಸಿನಲ್ಲಿ ಹೊಸ ವ್ಯವಹಾರ ವಿಭಾಗದಲ್ಲಿ ಕೆಲಸ ಕಲಿಯುತ್ತಾ ದಿನಗಳು ಬಹಳ ಬೇಗನೆ ಓಡಿ ಹೋದ ಹಾಗೆ ಅನಿಸುತ್ತಿತ್ತು. ಆಗ ಬಹಳ ಜನ ಅವಿವಾಹಿತ ಸಹೋದ್ಯೋಗಿಗಳು ಇದ್ದುದರಿಂದ ಅವರ ಮದುವೆ ಸಮಾರಂಭಗಳು ಆಗಾಗ ಆಗುತ್ತಿದ್ದವು. ಅಲ್ಲದೆ ಅವರ ಸೋದರ ಸೋದರಿಯರ ಮದುವೆಗಳು ನಡೆಯುತ್ತಿದ್ದವು .ಹಾಗೆ ನಂಜನಗೂಡಿನಲ್ಲಿ ಇದ್ದಾಗ ಹೋದ ಮದುವೆ ಸಮಾರಂಭಗಳಲ್ಲಿ ಮೊದಲನೆಯದು ಗಾಯತ್ರಿ ದೇವಿ ಅವರ ಅಕ್ಕನ ಮದುವೆ. ಅಂದು ಭಾನುವಾರವಾಗಿದ್ದರಿಂದ ಎಲ್ಲರೂ ಮಾತನಾಡಿಕೊಂಡು ಕೇಂದ್ರ ಬಸ್ ನಿಲ್ದಾಣದಲ್ಲಿ ಸೇರಿ ಅಲ್ಲಿಂದ ಮತ್ತೊಂದು ಬಸ್ನಲ್ಲಿ ಹೋಗಿ ಮದುವೆ ಸಮಾರಂಭ ಮುಗಿಸಿ ಬಂದಿದ್ದೆವು. ಈ ಮೊದಲೇ ಹೇಳಿದ ಹಾಗೆ ಮಂಡ್ಯದಲ್ಲಿ ಸಹೋದ್ಯೋಗಿಯಾಗಿದ್ದು ಈಗ ನಂಜನಗೂಡಿಗೆ ಬಂದಿದ್ದ ಮಂಜುಳಾ ಅವರ ಮದುವೆ ನಮ್ಮದೇ ಶಾಖೆಯ ರೇವಣ್ಣ ಅವರೊಂದಿಗೆ ನಿಶ್ಚಯವಾಗಿದ್ದು ಮೈಸೂರಿನಲ್ಲಿ ಮದುವೆ ಇತ್ತು. ಅದು ಜುಲೈ ಒಂದರಂದು. ನಮಗೆ ಆಗ ಸಾಂದರ್ಭಿಕ ರಜೆ, ಜುಲೈನಿಂದ ಆರಂಭವಾಗಿ ಜೂನ್ ಗೆ ಕೊನೆಗೊಳ್ಳುತ್ತಿತ್ತು ಹಾಗಾಗಿ ಆ ರಜೆ ವರ್ಷದ ಮೊದಲ ದಿನವೇ ರಜೆ ಹಾಕಲು ಯಾರಿಗೂ ಇಷ್ಟ ಇರಲಿಲ್ಲ. ಬೆಳಿಗ್ಗೆ ಬೇಗ ಹೋಗಿ ಮದುವೆ ಮಂಟಪಕ್ಕೆ ಹಾಜರಾತಿ ಹಾಕಿ 11:30ಗೆ ಶಾಖೆಗೆ ವಾಪಸ್ ಆಗಿದ್ದೆವು. ಹಾಗೆಯೇ ಗೆಳತಿ  ಸರಸ್ವತಿಯ ಮದುವೆಯು ಒಂದು ವಾರ ಬಿಟ್ಟು ಜುಲೈ 8ಕ್ಕೆ ಇದುದರಿಂದ ಅವಳ ಮದುವೆಗೆ ಸಹ ಹಾಗೆಯೇ ಬೆಳಿಗ್ಗೆಯೇ ಹೋಗಿ ಆಫೀಸಿಗೆ ಬಂದಿದ್ದೆವು. 11:30ಗೆ ಬಂದೆವು ಎಂದು ಹೇಳಿದೆನಲ್ಲ ಅದರ ವಿವರ ಹೇಳುತ್ತೇನೆ ಕೇಳಿ. ನಮ್ಮ ಉದ್ಯೋಗಿಗಳ ನಿಯಮಾವಳಿ Staff Regulation ಅನುಸಾರ ತಿಂಗಳಿನಲ್ಲಿ ಎರಡು ಬಾರಿ ಬೆಳಗ್ಗಿನ ಹೊತ್ತು ಒಂದು ಗಂಟೆ ಕಾಲ ಪರ್ಮಿಷನ್ ಹಾಗೂ ಸಂಜೆಯ ಹೊತ್ತು ಒಂದು ಗಂಟೆಕಾಲ ಪರ್ಮಿಷನ್ ತೆಗೆದುಕೊಳ್ಳಲು ಅವಕಾಶವಿದೆ .ಅಂದರೆ ತಿಂಗಳಲ್ಲಿ ಎರಡು ಬಾರಿ ಬೆಳಿಗ್ಗೆ 11:30ಗೆ ಬರಬಹುದು ಹಾಗೂ ಎರಡು ಬಾರಿ ನಾಲ್ಕು ವರೆಗೆ ಹೋಗಬಹುದು ಹಾಗೆ ಹೋಗಿದ್ದನ್ನು ಹಾಜರಾತಿ ಪುಸ್ತಕದಲ್ಲಿ ಬರೆಯುತ್ತಾರೆ ಏನಾದರೂ ಅನಿವಾರ್ಯ ತುರ್ತಿನ ಪರಿಸ್ಥಿತಿ ಇದ್ದಲ್ಲಿ ಆ ರೀತಿಯ ಅವಕಾಶವನ್ನು ಬಳಸಿಕೊಳ್ಳಬಹುದು. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಮೈಸೂರಿಗೆ ಬರುವ ಮತ್ತು  ವಾಪಸು ಹೋಗುವ ಸಂದರ್ಭದಲ್ಲಿ ಈ ಸೌಲಭ್ಯವನ್ನು ಬಳಸಿಕೊಳ್ಳುತಿದ್ದೆ. ನಂಜನಗೂಡಿಗೆ ರೈಲಿನಲ್ಲಿ ಹೋಗಿ ಬರುತ್ತಿದ್ದುದರಿಂದ ಆ ಸಮಯ ಈ ರೀತಿಯ ಅರ್ಲಿ ಪರ್ಮಿಷನ್ ಮತ್ತು ಲೇಟ್ ಪರ್ಮಿಷನ್ ಗಳಿಗೆ ಹೊಂದದೆ ಇದ್ದದರಿಂದ ಅಲ್ಲಿ ಹೆಚ್ಚು ಈ ಸೌಲಭ್ಯವನ್ನು ಬಳಸಿಕೊಳ್ಳುತ್ತಿರಲಿಲ್ಲ ಒಮ್ಮೊಮ್ಮೆ ದೇವಸ್ಥಾನಕ್ಕೆ ಹೋಗುವಾಗ ಬಳಕೆಯಾಗುತ್ತಿತ್ತು ಅಷ್ಟೇ. ಮತ್ತೊಂದು ಸಮಾರಂಭದ ನೆನಪು ಎಂದರೆ ಸಹೋದ್ಯೋಗಿ ಪ್ರಕಾಶ್ ಅವರ ಮನೆಯ ಗೃಹಪ್ರವೇಶದ ಸಂದರ್ಭ ಅವರ ಮನೆ ಶ್ರೀ ರಾಮಪುರದ ಮಧುವನ ಲೇಔಟ್ ನಲ್ಲಿ ಕಟ್ಟಿದ್ದರು. ಅರ್ಧ ದಿನ ರಜೆ ಹಾಕಿ ನಾವು ಎಂಟು ಹತ್ತು ಜನದ ಗುಂಪು ಆ ಸಮಾರಂಭಕ್ಕೆ ಬಂದಿದ್ದೆವು. ವಾಪಸ್ ಹೋಗುವಾಗ ಅಲ್ಲಿಂದ ವಿವೇಕಾನಂದ ನಗರಕ್ಕೆ ಬಂದು ಅಲ್ಲಿಂದ ಬಸ್ ಹಿಡಿದು ಹೋಗಿದ್ದು.  ಬರೀ ಬಯಲೇ ಕಾಣುತ್ತಿದ್ದ ಆ ಜಾಗ ಈಗ ಅದೆಷ್ಟು ಬ್ಯುಸಿ ಆಗಿದೆ ಎಂದರೆ ನಂಬಲು ಅಸಾಧ್ಯ. ಈ ಮಧ್ಯೆ ಗೆಳತಿ ಕೃಪಾಳ ಮದುವೆ ನಿಶ್ಚಯವಾಗಿ ನಿಶ್ಚಿತಾರ್ಥವು ಸಹ ನಡೆಯಿತು. ಅವರ ಮನೆಯಲ್ಲೇ ನಡೆದ ನಿಶ್ಚಿತಾರ್ಥಕ್ಕೆ ನಾನು ಮತ್ತು ಶೈಲಾ ಹೋಗಿದ್ದೆವು. ನಗದು ಗುಮಾಸ್ತೆಯಾಗಿ ಕೆಲಸ ಮಾಡಿದ್ದು ಸಹ ನಂಜನಗೂಡು ಶಾಖೆಯಲ್ಲಿ ಪ್ರಪ್ರಥಮ ಬಾರಿಗೆ. ಸಾಮಾನ್ಯವಾಗಿ ನಿಗಮದ ಎಲ್ಲಾ ಶಾಖೆಗಳಲ್ಲೂ ಕಾಯಂ ಆದ ಕ್ಯಾಶಿಯರ್ ನಗದು ಗುಮಾಸ್ತೆ ಇರುತ್ತಾರೆ. ಅವರು ರಜೆ ಹೋದಾಗ ಮಿಕ್ಕ ಸಹಾಯಕ ಹುದ್ದೆಯಲ್ಲಿರುವ ಉದ್ಯೋಗಿಗಳನ್ನು ಅವರ ಸೀನಿಯಾರಿಟಿ ಪ್ರಕಾರ ಪಟ್ಟಿ ಮಾಡಿ ಒಬ್ಬರಾದ ನಂತರ ಒಬ್ಬರ ಪಾಳಿ ಬರುವಂತೆ ಮಾಡಿರುತ್ತಾರೆ. ಚಿಕ್ಕಬಳ್ಳಾಪುರದಲ್ಲಿ ಇದ್ದಾಗ ಖಾಯಂ ಕ್ಯಾಶಿಯರ್ ಹೆಚ್ಚು ರಜೆ ಹೋಗುತ್ತಿರಲಿಲ್ಲ. ಅಲ್ಲದೆ ಮೊದಲ ಆರು ತಿಂಗಳು ನಮ್ಮನ್ನು ಕ್ಯಾಶಿಯರ್ ಹುದ್ದೆಯಲ್ಲಿ ಕೂಡಿಸುತ್ತಿರಲಿಲ್ಲ. ಹಾಗಾಗಿ ನನಗೆ ಒಂದು ದಿನವೂ ನಗದುಗುಮಾಸ್ತೆಯಾಗಿ ಕೆಲಸ ಮಾಡುವ ಅವಕಾಶ ಸಿಕ್ಕಿರಲಿಲ್ಲ. ನಂಜನಗೂಡಿನಲ್ಲಿ ಆಗ ವೇಣುಗೋಪಾಲ್ ಎನ್ನುವವರು ಕ್ಯಾಶಿಯರ್ ಆಗಿದ್ದರು. ಅವರ ವೈಯುಕ್ತಿಕ ಕಾರಣಗಳಿಂದಾಗಿ ಅವರು ದೀರ್ಘ ರಜೆ ಹೋಗಿದ್ದರಿಂದ ನಮ್ಮೆಲ್ಲರಿಗೂ ನಗದು ಗುಮಾಸ್ತೆಯ ಸರದಿ ಬಂದಿತ್ತು. ನನಗೋ ನೋಟುಗಳನ್ನು ಕೈಯಲ್ಲಿ ಸರಿಯಾಗಿ ಹಿಡಿಯಲು ಸಹ ಬರುತ್ತಿರಲಿಲ್ಲ. ಅಲ್ಲದೆ ಒಂದು ರೀತಿಯ ಅಂಜಿಕೆ ಬೇರೆ ಆದರೆ ನನ್ನ ಸಹೋದ್ಯೋಗಿಗಳು ತುಂಬಾ ಸಹಕಾರ ನೀಡಿ ನನಗೆ ರಶೀದಿ ಬರೆಯುವ ಕೆಲಸ ಮಾತ್ರ ಬಿಟ್ಟು ರೂಢಿಯಾಗುವವರೆಗೆ ಬೇರೆಯವರೇ ಒಬ್ಬರಾದ ನಂತರ ಒಬ್ಬರು ಬಂದು ಹಣ ಎಣಿಸಿಕೊಳ್ಳುತ್ತಿದ್ದರು. ಇಲ್ಲಿನ ಅನುಭವದ ಮೇಲೆ ಇತ್ತೀಚೆಗೆ ಸಾಹಿತ್ಯ ರಂಗಕ್ಕೆ ಬಂದ ನಂತರ ಒಂದು ಕಥೆ ಬರೆದಿದ್ದೆ. ಕ್ಯಾಶ್ ಕೌಂಟರ್ ಎಂದಾಗ ಮತ್ತೊಂದು ಘಟನೆ ನೆನಪಿಗೆ ಬರುತ್ತದೆ. ಆಗ ಕ್ಯಾಶ್ ಕೌಂಟರ್ ಗಳಲ್ಲಿ ನಗದು ಗುಮಾಸ್ತೆಯ ಜೊತೆಗೆ ಒಬ್ಬರು ಉನ್ನತ ಶ್ರೇಣಿ ಸಹಾಯಕರು ಸಹ ಇರುತ್ತಿದ್ದರು. ರಶೀದಿಗಳಿಗೆ ಸಹಿ ಹಾಕುತ್ತಿದ್ದು ಅವರೇ. ನಾವು ನಂಜನಗೂಡಿನಲ್ಲಿ ಇದ್ದಾಗ ಮಲಿಕ್ ಅನ್ನುವವರು ಕ್ಯಾಷ್ ಕೌಂಟರಿನ ಉನ್ನತ ಶ್ರೇಣಿ ಸಹಾಯಕರು. ಬೆಂಗಳೂರಿನವರನ್ನು ನಂಜನಗೂಡಿಗೆ ಪೋಸ್ಟ್ ಮಾಡಿದ್ದರು. ಅದು ಮೈಸೂರು ಬೆಂಗಳೂರು ವಿಭಾಗಗಳು ಪ್ರತ್ಯೇಕವಾಗುವ ಮೊದಲು. ಈಗ ಅವರು ಬೆಂಗಳೂರಿಗೆ ವರ್ಗಾವಣೆ ಕೇಳಿದ್ದರು. ಆದರೆ ವಿಭಾಗಗಳು ಬದಲಾಗಿದ್ದರಿಂದ ಸ್ವಲ್ಪ ತಡವಾಗಿತ್ತು. ಅವರು  ಪ್ರತಿ ಶನಿವಾರ ಮಧ್ಯಾಹ್ನ  ಬೆಂಗಳೂರಿಗೆ ತೆರಳಿ ಸೋಮವಾರ ಬೆಳಿಗ್ಗೆ ಬೆಂಗಳೂರಿನಿಂದ ನಂಜನಗೂಡಿಗೆ ಬರುತ್ತಿದ್ದರು. ಹೀಗೆ ಒಮ್ಮೆ ಬರುವಾಗ ಅವರ ಬಳಿ ಇದ್ದ ಕ್ಯಾಶ್ ಬಾಕ್ಸ್ ನ ಕೀ ಕಳೆದುಕೊಂಡು ಬಿಟ್ಟಿದ್ದರು. ಅದಕ್ಕೆ ತಗಲುವ ವೆಚ್ಚ ಅವರಿಂದ ವಸೂಲು ಮಾಡಿದ್ದು ಅಲ್ಲದೆ ಶಿಸ್ತಿನ ಕ್ರಮ ತೆಗೆದುಕೊಂಡು ಆಗ ಅವರಿಗೆ ಎರಡು ಇಂಕ್ರಿಮೆಂಟ್ ಗಳನ್ನು ಕಡಿತ ಮಾಡಲಾಗಿತ್ತು. ಜವಾಬ್ದಾರಿಯಿಂದ ಕೆಲಸ ಮಾಡಬೇಕು ಎನ್ನುವ ಎಚ್ಚರಿಕೆಯನ್ನು ನಾವು ಕಲಿತದ್ದೇ ಆಗ. ಈಗಲೂ ಕ್ಯಾಶ್ ಕೀ ನನ್ನ ಬಳಿ ಇರುವಾಗ ತುಂಬಾನೇ ಜಾಗ್ರತೆ ವಹಿಸುತ್ತೇನೆ. ಆ ಘಟನೆ ಮನಸ್ಸಿನಿಂದ ಮಾಸಿಯೇ ಇಲ್ಲ. ಹಾಗೆ ಹೀಗೆ ನೋಡನೋಡುತ್ತಲೇ ನಂಜನಗೂಡಿಗೆ ಬಂದು ಒಂದು ವರ್ಷ ಕಳೆದೇ ಬಿಟ್ಟಿತು.1991 ಅಕ್ಟೋಬರ್  ಒಂದು ವರ್ಗಾವಣೆ ಪಟ್ಟಿ ಬಿಡುಗಡೆಯಾಗಿ ಕೆಲವು ಜನರಿಗೆ ಮೈಸೂರು ನಗರದ ಶಾಖೆಗಳಿಗೆ ವರ್ಗಾವಣೆ ಸಿಕ್ಕಿತು. ಮಧ್ಯೆ ಮಂಡ್ಯಗೆ ಹೋಗಿ ಬಂದಿದ್ದರಿಂದ ನಾನು ಒಂದು ತಿಂಗಳು ತಡವಾಗಿ ನಂಜನಗೂಡಿಗೆ ಬಂದಿದ್ದೆ. ಹಾಗಾಗಿ ನನಗೆ ಆ ಪಟ್ಟಿಯಲ್ಲಿ ಮೈಸೂರಿಗೆ ವರ್ಗಾವಣೆ ಸಿಕ್ಕಿರಲಿಲ್ಲ. ಮತ್ತೊಂದು ವರ್ಷ ಕಾಯಬೇಕಾಗಿತ್ತು. ಆದರೆ ನಂಜನಗೂಡು ಓಡಾಟ ಹೋಗಿದ್ದರಿಂದ ಅಷ್ಟೇನೂ ಬೇಸರ ಆಗಲಿಲ್ಲ. ಈ ಮಧ್ಯೆ ಗೆಳತಿ ಶೈಲಾಳಿಗೆ ವಿವಾಹವಾಗಿ ಮೈಸೂರಿಗೆ ವರ್ಗಾವಣೆ ಸಿಕ್ಕಿತು. ನಿಗಮದ ನೀತಿಯ ಪ್ರಕಾರ ಕೆಲಸ ಸಿಕ್ಕ ನಂತರ ಮದುವೆಯಾದರೆ ಪತಿ ಇರುವ ಜಾಗಕ್ಕೆ ಆದಷ್ಟು ಬೇಗ ವರ್ಗಾವಣೆ ಸಿಗುತ್ತದೆ. ಹಾಗಾಗಿ ಅವಳ ಪತಿ ಮೈಸೂರಿನಲ್ಲಿ ಇದ್ದಿದ್ದರಿಂದ ತಕ್ಷಣವೇ ಅವಳಿಗೆ ವರ್ಗಾವಣೆ ಸಿಕ್ಕಿತ್ತು. ಹಾಗೆಯೇ ಗೆಳತಿ ಸರಸ್ವತಿಯೂ ಸಹ ವಿವಾಹವಾದ ಒಂದೆರಡು ತಿಂಗಳಲ್ಲಿಯೇ ಮೈಸೂರಿಗೆ ವರ್ಗಾವಣೆ ಹೊಂದಿ ಹೋಗಿದ್ದಳು. ವಿಭಾಗಿಯ ಕಚೇರಿಗಳಿಂದ ಶಾಖಾ ಕಚೇರಿಗಳಿಗೆ ವರಿಷ್ಠರು ಬಂದು ಇಲ್ಲಿನ ಕೆಲಸ ಕಾರ್ಯಗಳು ಹೇಗೆ ನಡೆಯುತ್ತಿದೆ ಎನ್ನುವುದನ್ನು ಪರಿಶೀಲಿಸುತ್ತಾರೆ. ಏನಾದರೂ ಮಾರ್ಗದರ್ಶನ ಬೇಕಾದರೆ ಕೊಡುತ್ತಾರೆ. ಹಾಗೆ ನಾನು ಹೊಸ ವ್ಯವಹಾರ ವಿಭಾಗದಲ್ಲಿ ಇದ್ದಾಗ ಆಗ ಅಲ್ಲಿನ ಮ್ಯಾನೇಜರ್ ಆಗಿದ್ದ ಆಚಾರ್ಯ ಎನ್ನುವವರು ಮತ್ತು ಆಡಳಿತ ಅಧಿಕಾರಿ ಆಗಿದ್ದ ಎಸ್ಎಂಎಸ್ ಗೋಪಾಲನ್ ಅವರು ಕಚೇರಿಗೆ ಬಂದಿದ್ದರು. ಕೆಲವೊಂದು ಕೆಲಸಗಳು ಮಾಡದೆ ಪೆಂಡಿಂಗ್ ಉಳಿದಿದ್ದನ್ನು ನನಗೆ ಹೇಗೆ ಮಾಡಬೇಕೆಂದು ಹೇಳಿಕೊಟ್ಟು ಮುಗಿಸಲು ಹೇಳಿದ್ದರು. ಹಾಗೆಯೇ ನಾನು ಮಾಡಿ ಮುಗಿಸಿದ್ದೆ ಮತ್ತೆ ಅದಕ್ಕಾಗಿ ಶಾಖಾಧಿಕಾರಿಗಳ ಕೋಣೆಗೆ ಫೋನ್ ಮಾಡಿ ಕರೆಸಿ, ಒಳ್ಳೆಯ ಪ್ರೋತ್ಸಾಹದ ನುಡಿಗಳನ್ನು ಆಡಿದ್ದರು ನಮ್ಮ ನಿಗಮದಲ್ಲಿ ಯಾವುದೇ ವರ್ಗದಲ್ಲೂ ಬೇರೆ  ಹೊಸಬರು ವರ್ಗಾವಣೆಯಾಗಿ ಬಂದಾಗ ಮೊದಲಿನಿಂದ ಶಾಖೆಯಲ್ಲೇ ಇರುವವರಿಗೆ ವಿಭಾಗಗಳಲ್ಲಿ ಬದಲಾವಣೆ ಬೇಕಾಗಿದ್ದರೆ ಮೊದಲ ಆದ್ಯತೆ ಕೊಡುತ್ತಾರೆ. ಹಾಗಾಗಿ ನಾನು ಹೊಸ ವ್ಯವಹಾರ ವಿಭಾಗವನ್ನು ಬಿಟ್ಟು ಪಾಲಿಸಿ ಸೇವೆ ವಿಭಾಗಕ್ಕೆ ಬದಲಾವಣೆ ಕೋರಿಕೊಂಡೆ. ಪಾಲಿಸಿಗಳ ಪುನರುಜ್ಜೀವನ‌ revival ಮಾಡುವ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು. ಮೊದಲಿನಿಂದ ನನಗೆ ಪಾಲಿಸಿ ಸೇವಾ ವಿಭಾಗ ಎಂದರೆ ಒಂದು ರೀತಿಯ ಆಕರ್ಷಣೆ ಆದರೆ ಮಂಡ್ಯದಲ್ಲಿ ಅವಕಾಶ ಸಿಕ್ಕಿದ್ದರೂ ಹೆಚ್ಚು ದಿನ ಆ ವಿಭಾಗದಲ್ಲಿ ಕೆಲಸ ಮಾಡಲು ಆಗಿರಲಿಲ್ಲ ಈಗ ನನ್ನಿಷ್ಟದ ವಿಭಾಗ ಸಿಕ್ಕಿತು ಎಂಬ ಖುಷಿಯಿಂದ ಹೊಸ ಕೆಲಸ ಕಲಿಯಲು ಆರಂಭಿಸಿದೆ. ಪಾಲಿಸಿಗಳ ಪ್ರೀಮಿಯಂ ಕಟ್ಟದೆ 6 ತಿಂಗಳುಗಳ ಕಾಲ ಆಗಿ ಹೋದರೆ ಪಾಲಿಸಿಗಳು ಲ್ಯಾಬ್ಸ್ ಆಗುತ್ತದೆ ಹಾಗೆ ಲ್ಯಾಪ್ಸ್ ಆದ ಪಾಲಿಸಿಗಳನ್ನು ಗೊಳಿಸಲು ಅವರ ಆರೋಗ್ಯದ ಬಗ್ಗೆ ಒಂದು ಡಿಕ್ಲರೇಷನ್ ಅದರಲ್ಲಿ ಏನಾದರೂ ಋಣಾತ್ಮಕ ಸಂಗತಿಗಳು ಇದ್ದರೆ ಅದಕ್ಕೆ ಸಂಬಂಧಿಸಿದ ಮೆಡಿಕಲ್ ರಿಪೋರ್ಟ್ ಇವೆಲ್ಲವನ್ನು ತೆಗೆದುಕೊಂಡು ಮತ್ತೆ ಪ್ರೀಮಿಯಂ ಪಡೆದುಕೊಳ್ಳಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ನಂತರ ಪ್ರೀಮಿಯಂ ಕಟ್ಟಿ ಅದನ್ನು ಚಾಲ್ತಿಗೆ ತರಬೇಕು. ಹಾಗೆ ಪರಿಶೀಲಿಸುವ ಕೆಲಸ ನನ್ನದು. ಮತ್ತೆ ಕೆಲವೊಮ್ಮೆ ಚೆಕ್ ಮುಖಾಂತರ ಅಥವಾ ಪೋಸ್ಟ್ ನಲ್ಲಿ ಕಳಿಸಿದ ಚೆಕ್ಗಳ ಮೊತ್ತಗಳು ತಾಳೆ ಯಾಗದೆ ಅವುಗಳನ್ನು ಪ್ರೀಮಿಯಂಗೆ ಸರಿದೂಗಿಸಲು ಆಗುವುದಿಲ್ಲ ಕೆಲವೊಮ್ಮೆ ಹಣ ಹೆಚ್ಚಾಗಿ ಅದನ್ನು ಡಿಪಾಸಿಟ್ ಎಂದು ಪರಿಗಣಿಸಿ ಇಡಲಾಗುತ್ತದೆ ಆ ತರಹದ ಕೇಸುಗಳನ್ನು ಪರಿಶೀಲಿಸಿ ಮುಂದಿನ ಪ್ರೀಮಿಯಂ ಗಳಿಗೆ ಅಡ್ಜಸ್ಟ್ ಮಾಡುವುದು ಅಥವಾ ಪಾಲಿಸಿದಾರರಿಗೆ ಹಣ ಹಿಂತಿರುಗಿಸುವುದು ಎಂಬುದನ್ನು ನಿರ್ಧರಿಸಿ ಹಾಗೆ ಮಾಡಬೇಕಿತ್ತು ಹಾಗೆಲ್ಲ ಮೊತ್ತಗಳು ಬಹಳ ಕಡಿಮೆ ಇದ್ದುದರಿಂದ ಮನಿ ಆರ್ಡರ್ ಮೂಲಕವೇ ಪಾಲಿಸಿದಾರರಿಗೆ ಹೆಚ್ಚಿನ ಹಣ ಇದ್ದಲ್ಲಿ ಹಿಂದಿರುಗಿಸಲಾಗುತ್ತಿತ್ತು.  8/10 ರೂಪಾಯಿಗಳನ್ನು ಸಹ ಆಗ ಮನಿ ಆರ್ಡರ್ ಮಾಡುತ್ತಿದ್ದೆವು. 40 ಗಳಿಗಿಂತ ಹೆಚ್ಚಾಗಿ ಇದ್ದರೆ ಚೆಕ್ ಮೂಲಕ ವಾಪಸ್ ಮಾಡಲಾಗುತ್ತಿತ್ತು. ಹೊಸ ವಿಭಾಗಕ್ಕೆ ಬಂದು 15 ದಿನ ಆಗಿತ್ತು ಅಷ್ಟೇ ಒಂದು ದಿನ ಪ್ರಸಾದ್ ಅವರು ಶಾಖೆಗೆ ಬಂದು ಮತ್ತೊಂದು ಪಟ್ಟಿ ಸಹಾಯಕರ ವರ್ಗಾವಣೆಗೆ ಸಿದ್ಧವಾಗುತ್ತಿದೆ ಆ ಪಟ್ಟಿಯಲ್ಲಿ ನನಗೂ ಮೈಸೂರಿಗೆ ವರ್ಗಾವಣೆ ಸಿಕ್ಕಬಹುದು ಎಂಬ ವಿಷಯ ತಿಳಿಸಿದರು ಇದು ತುಂಬಾ ಅನಿರೀಕ್ಷಿತವೇ ಆಗಿತ್ತು ಆದರೆ ಹೆಚ್ಚಿನ ಖುಷಿ ಸಹ ತಂದಿತ್ತು. ಅಂತೆಯೇ ಪಟ್ಟಿ ಬಿಡುಗಡೆಯಾಗಿತ್ತು. ನನಗೆ ಮೈಸೂರಿನ ವಿಭಾಗ ಕಚೇರಿಯ ಹೊಸ ವ್ಯವಹಾರ ವಿಭಾಗದ ಸಹಾಯಕಳಾಗಿ ವರ್ಗಾವಣೆ ಸಿಕ್ಕಿತು .ನಂತರ ತಿಳಿದ ವಿಷಯ ನನ್ನ ಕಾರ್ಯ ವೈಖರಿ ನೋಡಿದ ಮ್ಯಾನೇಜರ್ ಹಾಗೂ ಆಡಳಿತ ಅಧಿಕಾರಿ ಅವರು ನನ್ನ ಹೆಸರನ್ನು ಅವರ ವಿಭಾಗಕ್ಕೆ ಸೂಚಿಸಿದ್ದರು ಎಂದು. ಕೃಪಾಳಿಗೆ ಮೈಸೂರು ಶಾಖೆ 4 ಸಿಕ್ಕಿತ್ತು ನನ್ನ ತಂಗಿ ಛಾಯಾಳಿಗೆ ಮೈಸೂರು ಶಾಖೆ ಎರಡಕ್ಕೆ ವರ್ಗಾವಣೆ ಸಿಕ್ಕಿತು. ಒಂದು ರೀತಿಯ ನೆಮ್ಮದಿಯ ಭಾವ. ಒಟ್ಟು ನಾವು ಎಂಟು ಜನ ನಂಜನಗೂಡಿನಿಂದ ವರ್ಗಾವಣೆಯಾಗಿ ಮೈಸೂರಿಗೆ ಬಂದದ್ದು. ನಮ್ಮದೇ ಬ್ಯಾಚ್ನ ಪ್ರಕಾಶ್ ಶ್ರೀಹರಿ ಸುಬ್ರಮಣ್ಯ ನಾನು ಎಲ್ಲಾ ಮೈಸೂರಿಗೆ ವರ್ಗಾವಣೆ ಕೋರಿದ್ದರೂ ಪ್ರಸಾದ್ ಒಬ್ಬರು ಮಾತ್ರ ವರ್ಗಾವಣೆ ಬಯಸದೆ ನಂಜನಗೂಡಿನಲ್ಲಿಯೇ ಉಳಿದುಕೊಂಡಿದ್ದರು. ಮೊದಲಿನಿಂದ ಬಂದ ಅಭ್ಯಾಸದಂತೆ

Read Post »

You cannot copy content of this page

Scroll to Top