ಪುಸ್ತಕ ಸಂಗಾತಿ
ಶಾರದಜೈರಾಂ.ಬಿ
“ವಿಶ್ವ ಪುಸ್ತಕ ದಿನ”

ಏಪ್ರಿಲ್ 23 ವಿಶ್ವ ಪುಸ್ತಕ ದಿನ ಎಂದು ಆಚರಿಸಲಾಗುತ್ತದೆ.ಆರಂಭದಲ್ಲಿ ಅಕ್ಟೋಬರ್ 7ರಂದು ವಿಸೆಂಟ್ ಕ್ಲವೆಲ್ ಆಂಡ್ರೋಯಿ ಅವರ ಜನುಮದಿನದ ಪ್ರಯುಕ್ತ ಆಚರಿಸಲಾಯಿತು.ಅವರು ಮರಣ ಹೊಂದಿದ ಎಪ್ರಿಲ್ 23ರಂದು ಆಯ್ಕೆ ಮಾಡಲಾಯಿತು.1995ರಲ್ಲಿ ಯುನೆಸ್ಕೋ ವಿಶ್ವ ಪುಸ್ತಕ ಮತ್ತು ಕೃತಿ ಸ್ವಾಮ್ಯ ದಿನ ಎಂದು ಅಧಿಕೃತವಾಗಿ ಘೋಷಿಸಿತು,ಅಲ್ಲದೇ ಇದೇ ದಿನ ವಿಲಿಯಂ ಷೇಕ್ಸ್ ಪಿಯರ್ ಜನುಮದಿನ ಈ ಕಾರಣದಿಂದಲೂ, ಬೀಚಿ ಅವರ ಜನುಮದಿನವೂ ಇಂದೇ.
ಜನರಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಮತ್ತು ಕೃತಿಸ್ವಾಮ್ಯದ ಬಗ್ಗೆ ಜಾಗೃತಿ ಮೂಡಿಸಲು ಹಿರಿಯ ಲೇಖಕರಿಗೆ ಗೌರವ ಸಲ್ಲಿಸಲು ಹಾಗೇಯೇ ಹೊಸ ಲೇಖಕರಿಗೆ ಬರೆಯಲು ಸ್ಪೂರ್ತಿಯಾಗಿ ವಿಶ್ವ ಪುಸ್ತಕ ದಿನ ಆಚರಿಸಲಾಗುವುದು.ದೇಶ ಸುತ್ತು ಕೋಶ ಓದು, ಪುಸ್ತಕದಲ್ಲಿರುವುದು ಮಸ್ತಕದಲ್ಲಿರಲಿ ಎಂಬ ನಾಣ್ಣುಡಿ ಪುಸ್ತಕಗಳ ಮಹತ್ವ ಸಾರುತ್ತವೆ.ಪುಸ್ತಕವಿಲ್ಲದ ಕೋಣೆ ಆತ್ಮವಿಲ್ಲದ ಕೋಣೆಯಂತೆ,
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬಹುದೊಡ್ಡ ಪುಸ್ತಕ ಪ್ರೇಮಿ ಹಾಗಾಗಿಯೇ ಅವರ ಜನುಮದಿನವನ್ನು ಜ್ಞಾನದ ದಿನ ಎಂದು ಆಚರಿಸಲಾಗುತ್ತದೆ.ಆವರು ಎಲ್ಲೆ ಹೋದರೂ ಅವರ ಬಳಿ ಒಂದೆರೆಡು ಪುಸ್ತಕ ಇರುತ್ತಿದ್ದವು.ಅವರ ಖಾಸಗಿ ಗ್ರಂಥಾಲಯವಾದ ರಾಜಗೃಹ ಸುಮಾರು 50000 ಪುಸ್ತಕಗಳ ಒಳಗೊಂಡ ವಿಶ್ವದ ಅತಿದೊಡ್ಡ ಗ್ರಂಥಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಅಂಬೇಡ್ಕರ್ ಹೇಳುತ್ತಾರೆ ಎರಡು ರೂಪಾಯಿ ಸಂಪಾದಿಸಿದರೆ ಒಂದು ರೂಪಾಯಿ ಹೊಟ್ಟೆಯ ಹಸಿವ ನೀಗಿಸಲು, ಇನ್ನೋಂದು ರೂಪಾಯಿ ಜ್ಞಾನದ ಹಸಿವ ನೀಗಿಸಲು ಬಳಸು ಎಂದು ನನ್ನ ಓದುವ ಹವ್ಯಾಸ ಕ್ಕೂ ಅವರೇ ಸ್ಪೂರ್ತಿ.
ನನ್ನ ತಂದೆ ಉತ್ತಮ ಓದುಗರಾದ ಕಾರಣ ನನಗೆ ಹವ್ಯಾಸವಾಗಿ ಹೋಯಿತು.ಓದಿದ ಪುಸ್ತಕಗಳ ಸಾಧಕ ಬಾಧಕಗಳ ಬಗ್ಗೆ ಇಬ್ಬರೂ ಚರ್ಚಿಸುತ್ತಿದ್ದೇವು ಹಾಗಾಗಿ ಒಂದು ಕೃತಿಯ ಬಗ್ಗೆ ವಿಮರ್ಶೆ ಮಾಡಲು, ಪುಸ್ತಕ ಪರಿಚಯ ಮಾಡಲು ಆಸಕ್ತಿ. ಪುಸ್ತಕಗಳು ಅಂತ ಬಂದಾಗ ಇಹವ ಮರೆಸಿ ತನ್ನ ಲೋಕದಲ್ಲಿ ಎಳೆದುಕೊಳ್ಳುವ ಶಕ್ತಿ ಇದೆ.ಕುಳಿತಲ್ಲಿಯೇ ಕಂಡಿರದ ಸ್ಥಳ, ದೇಶಗಳನ್ನು ಓದುವ ಮೂಲಕ ನೋಡಿದಂತೆ ಆಗುವುದು,ದೇಶದ ಇತಿಹಾಸ, ಸಾಂಸ್ಕೃತಿಕ ಪರಂಪರೆ ಸಾರುವ ಕೊಂಡಿಗಳು.ಪುಸ್ತಕಗಳ ಓದು ನಮ್ಮ ಭಾಷಾಭಂಡಾರ ಹೆಚ್ಚಿಸುವುದರೊಂದಿಗೆ ಸಂವಹನ ಕೌಶಲ್ಯ ವೃದ್ಧಿಸುವವು.ಏಕಾಂಗಿತನದ ಅನುಭವ ಆಗುವುದಿಲ್ಲ ಒಂದು ಉತ್ತಮ ಪುಸ್ತಕ ಸಾವಿರ ಗೆಳೆಯರಿಗೆ ಸಮ ಎಂದು ಅಬ್ದುಲ್ ಕಲಾಂ ಅವರು ಹೇಳಿರುವುದು ಪುಸ್ತಕದ ಮಹತ್ವ ತಿಳಿದೆ.ಅಮೆರಿಕಾದ ಕ್ಯಾಲಿಫೋರ್ನಿಯಾ ರಾಜ್ಯದ ಒಹಾಯ್ ನಗರದಲ್ಲಿ ಸಾಲು ಸಾಲು ಪುಸ್ತಕದ ತೆರೆದು ಕಪಾಟುಗಳು ರಸ್ತೆಯ ಬದಿ ಇರಿಸಿರುತ್ತಾರೆ.ಓಡಾಡುವವರಿಗೆ ಆಸಕ್ತಿಯ ಪುಸ್ತಕ ಕಂಡರೆ ಅಂಗಡಿಯ ಒಳಗೆ ಹೋಗಿ ಹಣ ಪಾವತಿಸಿ ಪಡೆಯಬಹುದು.ಜರ್ಮನಿಯ ಯೂಲಿಶ್ ನಗರದಲ್ಲೂ ಸಹ ಪುಸ್ತಕ ದ ತೆರೆದ ಕಪಾಟು ಕಂಡುಬರುತ್ತವೆ.
ನಿಮಗೂ ಈ ಅನುಭವ ಆಗಿರಬಹುದು ನನಗೂ ಆಗಿದೆ ಓದಲೆಂದು ಪುಸ್ತಕ ತೆಗೆದುಕೊಂಡವರು ಮರಳಿಸುವುದೇ ಇಲ್ಲ ಆಗ ತುಂಬಾ ಸಂಕಟವಾಗುತ್ತದೆ.
ಓದುವ ಎಲ್ಲಾ ಪುಸ್ತಕಗಳು ಮಾತನಾಡುತ್ತವೆ ಆದರೆ ಒಂದು ಉತ್ತಮ ಪುಸ್ತಕ ಕೇಳಿಸಿಕೊಳ್ಳುತ್ತದೆ ಹಾಗೇಯೇ ನಿಮ್ಮೋಂದಿಗೆ ಸಂವಾದಿಸುತ್ತದೆ, ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡುತ್ತದೆ.ಮತ್ತೆ ಮತ್ತೆ ಓದಬೇಕೇನ್ನಿಸುವ ಪುಸ್ತಕಗಳೆಲ್ಲಾ ಹೊಸತೇ.
ಹೃದಯವನ್ನು ಘಾಸಿಗೊಳಿಸಿ ಹಿಂಡಬೇಕು ಅಂತಹ ಪುಸ್ತಕಗಳನ್ನು ಓದಬೇಕು ಎನ್ನುತ್ತಾನೆ ಕಾಫ್ಕ.
ಪುಸ್ತಕ ಓದುವುದರಿಂದ ಆಯುಸ್ಸು ಹೆಚ್ಚಾಗುವುದು ಎಂದು ಯೇಲ್ ವಿಶ್ವವಿದ್ಯಾಲಯ ಸಂಶೋಧನೆಯಿಂದ ಬಹಿರಂಗವಾಗಿದೆ.ವಾರಕ್ಕೆ 3ರಿಂದ 5 ಗಂಟೆ ಓದುವುದರಿಂದ ಮನಃಶಾಂತಿ,ಮೆದುಳಿನ ವ್ಯಾಯಾಮ ಆಗುವುದು.ಮರೆವಿನ ಕಾಯಿಲೆಗೆ ಓದೆ ಉತ್ತಮ ಔಷಧಿ.ಓದುವುದರಿಂದ ಸ್ಮರಣಾಶಕ್ತಿ ಹೆಚ್ಚಾಗುವುದು.
ದೇವನೂರು ಮಹಾದೇವ ಅವರ ಎದೆಗೆ ಬಿದ್ದ ಅಕ್ಷರ, ಭೂಮಿಗೆ ಬಿದ್ದ ಬೀಜ ಫಲ ಕೊಟ್ಟೆ ಕೊಡುವುದು ಎಂಬಂತೆ ಪುಸ್ತಕದ ಓದು ಇಂದಲ್ಲ ನಾಳೆ ಕೈಹಿಡಿಯುವುದು. ಜ್ಞಾನ ಮಾರ್ಗ ಎಂದಿಗೂ ಸೋಲಲು ಬಿಡುವುದಿಲ್ಲ ಆದರೆ ನಮ್ಮ ಓದು ನಿರಂತರವಾಗಿರಬೇಕು.
ಬಾಲ್ಯದಲ್ಲಿ ಅಮ್ಮ ಪುಸ್ತಕಗಳ ಖರೀದಿಸಲು ತನ್ನ ಕೂಡಿಟ್ಟ ಹಣವನ್ನೇ ನೀಡುತ್ತಿದ್ದಳು.ಗ್ರಂಥಾಲಯದಲ್ಲಿ ಹೋಗಿ ಓದಲು ಕುಳಿತರೆ ಸಮಯದ ಪರಿವೆಯೇ ಇರುತ್ತಿರಲಿಲ್ಲ ಆ ಒಂದು ತನ್ಮಯತೆ ಮೂಡಿಸುವುದು ಪುಸ್ತಕಗಳ ಹೆಗ್ಗಳಿಕೆ.
ಕೊನೆಯದಾಗಿ ಹೇಳುವುದಾದರೆ ಪುಸ್ತಕಗಳು ನನ್ನ ಬಾಳಿನ ಸಂಗಾತಿಗಳು ಅವು ಅಳಿಸಿವೆ,ನಗಿಸಿವೆ,ಬಾಳಿನ ಅರ್ಥ ಹುಡುಕುವಂತೆ ಮಾಡಿವೆ.ದಿಕ್ಕೆಟ್ಟಾಗ ದಾರಿದೀಪವಾಗಿವೆ,ಉತ್ತರವಿರದ ಪ್ರಶ್ನೆಗೂ ಉತ್ತರವಾಗಿವೆ.ಸೋತಾಗ ಭರವಸೆ ತುಂಬಿವೆ.ಪುಸ್ತಕದ ಮಡಿಲು ತಾಯಿಮಡಿಲಂತೆ ತಂಪೆರೆದಿವೆ,ಬದುಕಿನ ಕೊನೆ ಕ್ಷಣದವರೆಗೂ ಭರವಸೆಯ ಪ್ರತೀಕ ಪುಸ್ತಕಗಳು.ತೆರೆದ ಕಿಟಕಿ ಮನೆಯ ಬೆಳಕಿಗೆ,ತೆರೆದ ಪುಸ್ತಕ ಮನದ ಬೆಳಕಿಗೆ ಎನ್ನುವ ಡಿವಿಜಿ ನುಡಿ ಎಷ್ಟು ಪ್ರಸ್ತುತವಾಗಿದೆ ಅಲ್ವಾ.ಕನಿಷ್ಠನನ್ನು ಶ್ರೇಷ್ಠವಾಗಿಸುವ ಶಕ್ತಿ ಪುಸ್ತಕಕ್ಕಿದೆ
———————
ಶಾರದಜೈರಾಂ.ಬಿ
Suuuuuuuuuper