ಕಾವ್ಯ ಸಂಗಾತಿ
ಎಸ್ ವಿ ಹೆಗಡೆ
ಬಲಿ

ವಾಮನನ ಕಾಲಡಿಯಲ್ಲಿ
ಎಲ್ಲವನೂ ಕಳೆದ ಬಲಿಯ ಕಥೆ
ಯುಗಗಳೇ ಕಳೆದು ಹೋದರೂ
ನಿಂತಿಲ್ಲ ಯಾರದೋ ತುಳಿತಕ್ಕೆ
ಹಿಡಿತಕ್ಕೆ ಉರುಳಿ ಪಾತಾಳಕ್ಕೆ
ಇಳಿಯುತ್ತಲೇ ಇರುತ್ತಾರೆ
ಯುದ್ಧದಲಿ ಸೈನಿಕರ ಕೊಚ್ಚಿ ಬಲಿ
ನೀಡಿ ಸಾಮ್ರಾಟರಾದವರ
ನೆನಪಿಗಾಗಿ ಮಹಲು ಕಟ್ಟಿ
ಕೆಲಸಗಾರರ ಬೆರಳು ಕತ್ತರಿಸಿದವರ
ಪುಸ್ತಕ ಓದಿ ಪರೀಕ್ಷೆಯಲ್ಲಿ
ಉತ್ತೀರ್ಣರಾಗುತ್ತೇವೆ.
ಸಾವಿರ ಕೈ ಗಳು ದುಡಿಯುತ್ತ
ಬೆವರು ಆವಿಯಾಗುವದು
ಕಣ್ಣಿಗೆ ಕಾಣದೆ ಮೋಡವಾಗಿ
ಕಣ್ಣೀರು ಹರಿಯುತ್ತಲೆ ಇರುತ್ತದೆ
ಮಾಲಿಕರ ಬಚ್ಚಿಟ್ಟ ಸಂಪತ್ತು
ಬಹಿರಂಗವಾದ ಸುದ್ದಿಯ ನಾಟಕ
ನಡೆಯುತ್ತಲೇ ಇರುತ್ತದೆ
ಹಸಿರು ಹುಲ್ಲ ಉಣ್ಣಿಸಿ ಬೆಳೆಸಿದ
ಕುರಿಗಳು ಬಲಿಯಾಗಿ ದೇವರ
ಪ್ರೀತಿಯನ್ನು ಎತ್ತಿ ಹಿಡಿ ಯುತ್ತಾರೆ
ದ್ವೇಷ ಈರ್ಶೆ ಮೋಸ ಸಂಚು
ಹೊಂಚಿಗೆ ಹಾಕಿದ ಬಲಿಗಳು
ಮೂರು ರಸ್ತೆಗಳು ಕೂಡುವಲ್ಲಿ
ಚೆಲ್ಲಾ ಪಿಲ್ಲಿಯಾಗಿರುತ್ತವೆ.
ಎಸ್ ವಿ ಹೆಗಡೆ

ಮನುಷ್ಯ ಮಾತ್ರ ಬಲಿ ಕೊಡುತ್ತಾನೆ. ಬೇರಾವ ಪ್ರಾಣಿಗಳಲ್ಲಿ ಈ ನೀಚತನ ಇಲ್ಲ.
ಒಳ್ಳೆ ಪದ್ಯ.