
ಅಂಕಣ ಸಂಗಾತಿ-06
ನೆಲದ ನಿಜ
ಭಾರತಿ ಕೇದಾರಿ ನಲವಡೆ
ಮನಸ್ಥಿತಿ Vs ಪರಿಸ್ಥಿತಿ

ಮನೆಯ ಕೆಲಸ ಮುಗಿಸಿ ಮಧ್ಯಾಹ್ನದ ಊಟದ ಡಬ್ಬಿಯೊಂದಿಗೆ ಆಫೀಸಿಗೆ ಹೊರಡಲನುವಾದ ಭಾಗ್ಯಳಿಗೆ ಪ್ರತಿದಿನ ಬಸ್ಟ್ಯಾಂಡ್ ವರೆಗೆ ಡ್ರಾಪ್ ಕೊಡುವ ಪತಿಮಹಾಶಯ “ಇದೇನು ನಿನ್ನ ಖಾತೆಯಲ್ಲಿ ಇಷ್ಟೊಂದು ಕಡಿಮೆ ಬ್ಯಾಲೆನ್ಸ್, ಹೀಗಾದರೆ ನಮ್ಮ ಮುಂದಿನ ಕನಸಾದ ಮನೆಯನ್ನು ಕಟ್ಟಿದಂತೆಯೇ”ಎಂದು ರೇಗಿದ ಅಪಸ್ವರ ಅವಳ ಸ್ವಾಭಿಮಾನಕ್ಕೆ ಕೊಡಲಿ ಏಟನ್ನು ಕೊಟ್ಟಂತಾಯ್ತು. ಮನೆಯ ಕೆಲಸವನ್ನು ಕೂಡ ಓರಣವಾಗಿ ಮಾಡಿ, ತನ್ನ ಸಂಬಳ ಎಷ್ಟೆಂದು ತಿಳಿಯದ, ಎಟಿಎಂ ನೊಂದಿಗೆ ಪಾಸ್ಬುಕ್ ಅನ್ನು ಕೂಡ ಅರ್ಪಿಸಿ ಹಣಕಾಸಿನ ವ್ಯವಹಾರದ ಗಂಧ ಗಾಳಿಗೆ ಅವಕಾಶ ನೀಡದ ಪತಿಯ ಮಾತು ಎದೆಗೆ ಚುಚ್ಚಿದಂತಾಯಿತು. ಈ ರೀತಿ ಸಂಕಟಪಡುವ ಸಂಸಾರ ನೌಕೆಗೆ ಸಹಚಾರಿಣಿಯಾದ ಮಹಿಳೆಯ ಮನಸ್ಥಿತಿ ಹೇಳಲಸದಳವಾಗಿದೆ.
ನಿಜ ಹೇಳಬೇಕೆಂದರೆ ಆರ್ಥಿಕವಾಗಿ ಸ್ವಾಭಿಮಾನಿಯಾದ ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯ ವಿರುವದು ಕಡಿಮೆ. ಎಲ್ಲಿ ಹೇಳಿದರೆ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ಇತ್ತ ನುಂಗಲಾರದ ಅತ್ತ ಉಗುಳಲಾರದ ಪರಿಸ್ಥಿತಿ.
ಬಾಲ್ಯದ ಕನಸಿಗೆ ಸೆಣಸಿ ಉದ್ಯೋಗವನ್ನುಗಿಟ್ಟಿಸಿಕೊಂಡ ಯಶೋಗಾಥೆಯು ಮದುವೆಯ ನಂತರ ಅವಳನ್ನು ಅರಿತು ಅವಳ ಅಸ್ಮಿತೆಯನು ಬೆಂಬಲಿಸುವ ಪತಿಯ ಭಾಗ್ಯ ದೊರೆತರೆ ಅದು ಅವಳ ಪಾಲಿಗೆ ಮಹಾಸೌಭಾಗ್ಯ. ಇಲ್ಲದಿರೆ ಮುಖವಾಡದ ಬದುಕು ಸಹಜ.
ನಮ್ಮದು ಪುರುಷಪ್ರಧಾನ ಸಮಾಜ. ಹೆಣ್ಣು ಎಷ್ಟೇ ಸಾಧನೆ ಮಾಡಿದ್ದರೂ ಎಷ್ಟೇ ಉನ್ನತ ಸ್ಥಾನದಲ್ಲಿ ಇದ್ದರೂ ಅವಳ ಯಶಸ್ಸಿಗೆ ಪತಿಯ ಸಹಕಾರವೇ ಮುಖ್ಯ. ಸಹಕಾರದೊಂದಿಗೆ ನಿಸ್ವಾರ್ಥ ಮಮಕಾರವಿದ್ದರೇ.. ಬಾಳು ಸುಂದರಕಾಂಡ. ಮದುವೆಯಾದ ಮೇಲೆ ಪತಿರಾಯ ತನ್ನ ಪತ್ನಿಯು ಒಬ್ಬಳು ಉದ್ಯೋಗಸ್ಥೆ ಎಂಬುದ ಅರಿತು ಅವಳ ಮನೆ ಕೆಲಸದಲಿ ನೆರವಾಗುತ್ತ ನಲಿವ ಆದರ್ಶ ಪುರುಷರು ಕೂಡ ಇಲ್ಲವೆಂದಿಲ್ಲ. ಜೀವನ ಹಾಲು ಜೇನಿನ ಕಡಲಾಗಬೇಕು ಎಂಬುದು ಸತ್ಯ. ತಮ್ಮಷ್ಟೇ ಜವಾಬ್ದಾರಿಯ ಕೆಲಸ ನಿರ್ವಹಿಸಿದರೂ ಮಹಿಳೆಯನ್ನು ತಮಗಿಂತ ತುಸು ಕಡಿಮೆ ಸ್ಥಾನದಲ್ಲಿ ನೋಡುವ ದೃಷ್ಟಿ ಕೋನವನ್ನು ಸಹ ಮರೆಮಾಚಲಾಗದು. ದುಡಿಯುವ ಮಹಿಳೆ ಕೂಡ ತನ್ನ ಸಿಬ್ಬಂದಿಯವರಂತೆ ಕೆಲವೊಮ್ಮೆ ಸಿಬ್ಬಂದಿಯ ಕುಟುಂಬದ ಕಾರ್ಯಕ್ರಮಕ್ಕೆ ಹೋಗಲೇ ಬೇಕಾಗುತ್ತದೆ ಅವರ ಅಂತಸ್ತಿಗೆ ತಕ್ಕಂತೆ ಎಲ್ಲರೂ ಸೇರಿ ಉಡುಗೊರೆಯನ್ನು ನೀಡಬೇಕಾಗುತ್ತೆ. ಅಲ್ಲದೇ ಅವರೊಂದಿಗೆ ಬೆರೆತಾಗ ಉಪಹಾರಕ್ಕಾಗಿಯೋ ಅಥವಾ ಯಾವುದೇ ವಸ್ತುಗಳ ಖರೀದಿಗೆ ಹಣವನ್ನು ಖರ್ಚುಮಾಡುವ ಪ್ರಸಂಗ ಬಂದೇ ಬರುತ್ತದೆ. ಆಗ ಅವರು ಫೋನ್ ಪೇ ಮೂಲಕ ಅಥವಾ ನಗದು ನೀಡಿದಾಗ ಅದನ್ನು ಕೂಡ ಗಂಭೀರವಾಗಿ ಪರಿಗಣಿಸುವ ಪರಿಪಾಟ ಕೂಡ ಇದೆ. ಹಾಗಾದರೆ ಹೊರನೋಟಕೆ ಉತ್ತಮ ಬಾಂಧವ್ಯದ ತೋರಿಕೆ ಬದುಕಿನ ಲ್ಲಿ ಅವಳ ಸಂಬಳವನ್ನೇ ಬಳಸಿ ಅವಳು ತನಗಾಗಿ ಬಳಸಿದಾಗ ತಕರಾರು ಮಾಡುವ ಜಾಯಮಾನ ಮನಸಿಗೆ ಘಾಸಿಯನ್ನುಂಟು ಮಾಡುತ್ತದೆ. ವಿದ್ಯಾವಂತನಾದ ಪುರುಷ ಮದುವೆಯಾದ ತನ್ನ ಪತ್ನಿಯ ಬೇಕು ಬೇಡಿಕೆಗಳಿಗೂ ಮನ್ನಣೆ ನೀಡಬೇಕಾಗುತ್ತದೆ. “ಹಣವೆಂದರೆ ಹೆಣ ಬಾಯಿ ಬಿಡುತ್ತದೆ”ಎಂಬ ಮಾತಿನಂತೆ ಅವಳ ವೃತ್ತಿ ಗೌರವದ ಜೊತೆಗೆ ಅವಳು ಕುಟುಂಬಕ್ಕೆ ನೀಡುವ ಸಮಯವನ್ನು ಪ್ರೀತಿಯಿಂದ ಆದರಿಸಬೇಕು. ಮನೆಗೆ ಬಂದಾಗ ಪ್ರೀತಿ ವಿಶ್ವಾಸದಿಂದ ಮಾತನಾಡಿಸಿದ ಒಂದು ನಗು ಮೊಗದಲ್ಲಿ ಮತ್ತೆ ಕಾಂತಿಯನ್ನು ಹೊಮ್ಮಿಸುತ್ತದೆ. ಅವಳ ಆರೋಗ್ಯದ ಬಗ್ಗೆ ಕಾಳಜಿ ಮಕ್ಕಳ ಬಗ್ಗೆ ಅವಳು ತೋರುವ ಮಮಕಾರ ಮನೆಗೆ ಬಂದ ಸಂಬಂಧಿಕರ ಒಡನಾಟ ಒತ್ತಡದ ಬದುಕಲು ಒಲವ ಗಂಧವನು ಪೂಸುವ ತಂಗಾಳಿಯಂತ ಸೊಗವ ನೀಡುತ್ತದೆ.
ಸನಾತನ ಸಂಸ್ಕ್ರತಿಯಲಿ ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ. ಹೆಣ್ಣು ಸಬಲತೆಯೆಡೆ ಸಾಗುವಲ್ಲಿ ಇರುವ ತೊಡಕುಗಳು ಇಂದಿಗೂ ಸಂಪೂರ್ಣವಾಗಿ ತೊಡೆದಿಲ್ಲ. ಅವಳಿಗೆ ಇಲ್ಲಿಯವರೆಗೆ ದೊರೆತಿರುವದು ಎರಡನೇ ಸ್ಥಾನ. ಸಂಬಂಧಗಳ ಬಾಂಧವ್ಯಗಳ ಮೌಲ್ಯಗಳನು ಅರಿತವರು ಗೌರವಿಸಿದರೆ ಅರಿಯದ ಜಾಣ ಕುರುಡರು ಇಂದಿಗೂ ಅವಳ ಸ್ಥಿತಿಗೆ ಕಾರಣೀಭೂತರಾಗಿದ್ದಾರೆ. ದುಡಿದು ದಣಿದು ಬಂದ ಸಂಗಾತಿಯ ದಣಿವರಿಯದ ಪತಿರಾಯ ಇನ್ನೂ ಚಹ ಮಾಡಿಲ್ವಾ ಎಂದು ಪ್ರಶ್ನಿಸುವಾಗ ಅವಳುಈಗ ತಾನೆ ಆಫೀಸಿನಿಂದ ಬಂದವಳು ತನ್ನಂತೆ ತನಗಿಂತ ಹೆಚ್ಚಿನ ಜವಾಬ್ದಾರಿ ನಿರ್ವಹಿಸುತ್ತಿರುವುದು ಗೊತ್ತಿದ್ದರೂ ಅವಳಿಗೂ ತನ್ನಂತೆ ತುಸು ವಿಶ್ರಾಂತಿ ಬೇಕೆಂಬ ವಿವೇಚನೆ ಏಕಿಲ್ಲ?ಉಮಾಳದು ಮತ್ತೊಂದು ರೀತಿಯ ಕಥೆ.ಒಬ್ಬಂಟಿಯಾಗಿ ರೂಂ ಮಾಡಿಕೊಂಡು ಪ್ರೌಢಶಾಲೆ ಶಿಕ್ಷಕಿಯಾಗಿ ಕೆಲಸ ಮಾಡುತಿದ್ದವಳನ್ನು ಒಂದು ದಿನವೂ ಕಷ್ಟ ಸುಖ ವಿಚಾರಿಸದ ಕರಿಮಣಿಮಾಲಿಕ ತಿಂಗಳಿಗೊಮ್ಮೆಯೂ ಅವಳಿದ್ದಲ್ಲಿ ಒಂದು ದಿನವೂ ವಾಸ್ತವ್ಯ ಮಾಡದವ ಒಂದನೇ ತಾರೀಖಿನ ಸಂಬಳದ ಗಂಟೆ ಹೊಡೆದಂತೆ ಬ್ಯಾಂಕ್ ಬ್ಯಾಲನ್ಸ್ ಕೇಳುವ ಪತಿ ಯಾವ ಪುರುಷಾರ್ಥಕ್ಕಾಗಿ ಇರಬೇಕು? ಎಂದು ನೊಂದುಕೊಳ್ಳುವಾಗ ಮದುವೆ ಅನಿವಾರ್ಯತೆ ಎಂದು ಅನಿಸಿದರೂ ಹೆತ್ತವರ ಕರ್ತವ್ಯ ಮುಂದಿನ ಭವಿತವ್ಯದ ಅವಕಾಶಗಳ ಅವಧಿಯ ಚಣಗಳು ಕೌತುಕದಂತೆ ಮುನ್ನೋಟದ ಝಲಕುಗಳು ರೀಲಿನಂತೆ ಹಾದುಹೋಗುತ್ತದೆ. ಮದುವೆಯಾದವಳು ತನ್ನ ಸಹಧರ್ಮಿಣಿ, ಸಪ್ತಪದಿತುಳಿದು ತನ್ನ ಬಾಳ ಬೆಳಗಬಂದವಳೆಂಬ ಸ್ಥಿತಪ್ರಜ್ಞೆ ಕಿಂಚಿತ್ತೂ ಇಲ್ಲದ ಮನವು ಕೇವಲ ತನ್ಕ ಆಸೆ ಪೂರೈ ಸಲೆಂದೆ ಹೆಂಡತಿ ಎಂಬ ಸೇವಕಿಯ ಪಾತ್ರ ಜೀವನದ ಸೂತ್ರಧಾರಿಯಾಗಿ ತನ್ನ ಬೆರಳಲೀ ಕುಣಿಸುವ ಮಂಗಳಸೂತ್ರದಿ ಬಂಧಿಸುವದು ಒಂದು ತೆರನಾದರೆ ನಿಂದಿಸುವದೇ ಅವರ ಧರ್ಮವಲ್ಲ, ಪ್ರೀತಿ ವಿಶ್ವಾಸದಿ ಜೊತೆಜೊತೆಯಾಗಿ ನಗುತ ಉಸಿರಲಿ ಉಸಿರಾಗಿ ಬೆರೆತಾಗ ಬದುಕದುಅನುರಾಗ ಬಂಧನವಾಗುವದು.
ತಾನು ಹೇಳಿದ್ದೇ ನಡೆಯಬೇಕೆಂಬ ಹಟವು ಮನಗಳಲಿ ವೈಮನಸ್ಸಿನ ಕಂದಕವನ್ನು ಸೃಷ್ಟಿಸುತ್ತದೆ. ಕುಟುಂಬದ ಯಜಮಾನ ತಾನು ತೆಗೆದುಕೊಂಡ ನಿರ್ಣಯವೇ ಅಂತಿಮ ಎಂಬ ಮನೋಧೋರಣೆ ಕೂಡ “ತಾನು ಕೇವಲ ದುಡಿಯುವ ಹಾಗೂ ಮಕ್ಕಳನು ಹೆರುವ ಯಂತ್ರ “ಎಂಬ ಒಳಬೇಗುದಿ ಮನದಲ್ಲಿ ಇದಕ್ಕೇನಾ ಇಷ್ಟು ಕಷ್ಟ ಪಟ್ಟು ನೌಕರಿ ಹಿಡಿದದ್ದು, ನನ್ನದು ಒಂದು ಜನ್ಮಾನಾ ಎಂದು ಮನದ ಆಂದೋಳನವ ಅರ್ಥೈಸಿ ಹೇಳುವ ಸಂದರ್ಭಕ್ಕೆ ಜಾತಕ ಪಕ್ಷಿಯಂತೆ ಕಾಯ್ದು ಒಂದು ಮಾತನಾಡಿದರೆ ಹತ್ತು ಮಾತನಾಡಿ ಬೆದರಿಸುವ ತಂತ್ರ ಮರ್ಯಾದೆಯ ಮಹಲ್ ಕುಸಿಯದಂತೆ ಮಾತನು ಮೊಟಕುಗೊಳಿಸಿ ಮತ್ತೆ ಕಾರ್ಯ ತತ್ಪರರಾಗುವ ತಾಳ್ಮೆಯ ಮೂರ್ತಿ ಕುಟುಂಬದ ಕೀರ್ತಿಯ ಕಳಶವಾಗುವ ಸಬಲೆಯರಿಗೆ ಅರಿವು ಬಂದ ಮೇಲೆ ಮಕ್ಕಳೇ ಬುದ್ಧಿ ಕಲಿಸುತ್ತಾರೆ ಎಂಬ ಸ್ವ ಸಾಂತ್ವನ ಆಗಾಗ ಕಣ್ಣೀರ ಧಾರೆಯಾಗಿ ಮಾನಸಿಕ ದಣಿವಿಗೆ ತಣಿವಾಗುತ್ತದೆ. ಅವಳಿಗೂ ಮನಸಿದೆ, ಕುಟುಂಬದ ಬಗ್ಗೆ, ಮಕ್ಕಳ ಭವಿಷ್ಯದ ಕನಸಿದೆ ಯಾಕೆ? ನಾವಿಬ್ಬರೂ ಪರಸ್ಪರ ಸಮಾಲೋಚನೆ ಮಾಡಿ ನಮ್ಮ ಬದುಕಿನ ನಿರ್ಧಾರ ತಳೆಯಬಾರದು, ಇದರಿಂದ ಪತಿಯ ಪುರುಷಾರ್ಥಕ್ಕೇನು ಧಕ್ಕೆ ಇಲ್ಲವಲ್ಲ, ಅಥವಾ ಅವಳೇಷ್ಟೇ ಓದಿ, ನೌಕರಿ ಮಾಡುತಿದ್ದರೂ ಕೇವಲ ಅವಳು ಹೆಣ್ಣು ಚರಣದಾಸಿ ಎಂಬ ಸಾಂಪ್ರದಾಯಿಕ ಭಾವನೆ, ಕಟ್ಟಳೆಗಳನು ಗಾಳಿಗೆ ತೂರಬೇಕಿದೆ.”ಮನೆಮನೆಗೆ ದೀಪ ಮುಡಿಸಿ ಹೊತ್ತು ಹೊತ್ತಿಗೆ ಅನ್ನ ಉಣಿಸಿ ತಂದೆ ಮಗನ ತಬ್ಬಿದಾಕೆ ನಿನಗೆ ಬೇರೆ ಹೆಸರು ಬೇಕೆ? ಸ್ತ್ರೀ ಎಂದರೆ ಅಷ್ಷೇ ಸಾಕೇ..”ಎಂಬ ಕವಿವರ್ಯ ಜಿ. ಎಸ್. ಶಿವರುದ್ರಪ್ಪ ನವರ ಮಹಿಳಾ ಪರವಾದ ಹೆಮ್ಮೆಯ ಮಿಡಿತದಲೊಂದು ಕ್ರಿಯಾಶೀಲತೆಯ ತುಡಿತವಿದೆ.ಮನಸ್ಥಿತಿಯ ಅರಿತು ತುಸು ಪ್ರೀತಿ, ಕರುಣೆ, ಸಾಂತ್ವನದಿ ಸ್ಪಂದಿಸುತ ಪರಿಸ್ಥಿತಿಯನು ತಿಳಿಯಾಗಿಸುತ ಬಾಳ ಬುತ್ತಿಯಲಿ ಸವಿನೆನಪುಗಳನು ಹಿಡಿದಿಟ್ಟು ಬದುಕಬವಣೆಯನು ನಗುತ ನಲಿಯುತ ಎದುರಿಸಿ ಬಾಳ ಹಾದಿಯ ಸವೆಸುವ ಜಗದ ನಿಯಮವದು ಸೂಕ್ತ.
ಮನದಿಂದ ಮನಕೆ ಪಾರ್ವುದು ಬಾಳಿನುರಿಯ ಕಿಡಿ/
ಮನೆಯಿಂದ ಮನೆಗಲೆವ ಗಾಳಿ ಹೊಗೆಯಂತೆ//
ಮನುಜರ ಪರಸ್ಪರೋದ್ರೇಕ ಜಗದ ವಿಲಾಸ /
ಮನವೇ ಪರಮಾದ್ಭುತವೋ-ಮಂಕುತಿಮ್ಮ //
ಎಂಬಂತೆ ಮನುಷ್ಯ ಸಂಘಜೀವಿಯಾಗಿದ್ದು ಅವನ ಒಡನಾಟದಲಿ ಬರುವವರೊಂದಿಗೆ ಪರಸ್ಪರ ಸಂಪರ್ಕಕೆ ಬರಬೇಕಾಗುತ್ತದೆ. ಈ ಸಂಪರ್ಕವಾಗುವಾಗ ಕೆಲವೊಮ್ಮೆ ಸ್ನೇಹವಾಗಬಹುದು ಕೆಲವೊಮ್ಮೆ ಘರ್ಷಣೆಯಾಗಬಹುದು. ಸಂಘ ಜೀವನದಲ್ಲಿ ಈ ಭಾವನೆಗಳು ಪರಸ್ಪರರನ್ನು ಪ್ರೇಮದಲಿ ಬಂಧಿಸಬಹುದು ಇಲ್ಲವೇ ದ್ವೇಷದಲಿ ಒಡೆಯಬಹುದು. ದ್ವೇಷವನ್ನು ಈ ಕಗ್ಗದಲಿ ಬಾಳಿನ ಉರಿಯ ಕಿಡಿ ಎಂದುವರ್ಣಿಸುತ್ತಮನಸ್ಥಿತಿಯು ಒಂದು ಪರಮ ಅದ್ಭುತ ಎಂದಿದ್ದಾರೆ.
ಪರಿಸ್ಥಿತಿಯ ತಿಳಿಯಾಗಿಸುವ, ಹೊಂದಾಣಿಕೆಯ ಮನಸ್ಥಿತಿಯೇ ಜಸದ ಮೂಲವೆಂಬುದನರಿತು ಬಾಳ ಪಯಣ ಸಾಗುತಲಿರಲಿ ಅಲ್ಲವೇ?
ಭಾರತಿ ನಲವಡೆ

One thought on “”