ರಾಜು ಪವಾರ್ ಅವರ ಕವಿತೆ-ಭಾಗ್ಯವಿಧಾತಾ •••

ಆನು-ತಾನು, ನಾನು-ನೀನು ಯಾರು ಭಾಗ್ಯ ವಿಧಾತಾ !?
ಮಣ್ಣಿನ ವಾಸನೆ ಮೂಗಿಗೆ ತಾಗಿದೊಡೆ
ಮಣ್ಣು ಹದಗೊಳಿಸಿ ಭೂಮಿ ಬಿತ್ತನೆಗೆ ಅಣಿ ಯಾಗುವಾತ !

ಅಲ್ಲಿ-ಇಲ್ಲಿ, ಮೇಲೆ-ಕೆಳಗೆ
ಯಾರು ಭಾಗ್ಯ ವಿಧಾತಾ!?
ಬರಡು ನೆಲ ನಂಬಿ ಭವಿಷ್ಯ ಕಂಡುಕೊಳ್ಳುವಾತ !

ಒಳಗೆ-ಹೊರಗೆ, ಸಂದಿ-ಗೊಂದಿಯಲ್ಲಿ
ಯಾರು ಭಾಗ್ಯ ವಿಧಾತಾ!?
ಬರಿ ಮುಗಿಲಿಗೆ ಮುಖಮಾಡಿ ದಾಹ ಇಂಗಿಸಿಕೊಂಡು
ಭುವಿಯ ಹಸಿರು ಕನಸು ಕಾಣುವಾತ!

ನೌಕರ-ಚಾಕರ, ಸಾಹೇಬ-ಸಾಹುಕಾರ
ಯಾರು ಭಾಗ್ಯ ವಿಧಾತಾ!?
ಜಗದ ಜನರಿಗೆ ಸಿರಿತನ ಸುರಿಯುವಾತ!

ಋಷಿ-ಮುನಿ, ಜ್ಞಾನಿ-ವಿಜ್ಞಾನಿ
ಯಾರು ಭಾಗ್ಯ ವಿಧಾತಾ!?
ಮುಖ-ಹಸ್ತ ನೋಡದೆ ಜಗದ ಜಾತಕ ಬರೆಯುವ ರೈತ!

ಆ ದೇಶ, ಈ ದೇಶ
ಆ ಖಂಡ-ಈ ಖಂಡ,
ಯಾರು ಭಾಗ್ಯ ವಿಧಾತಾ!?
ಖಂಡ, ಖಂಡಗಳನ್ನು ಅಖಂಡ ಮಾಡುವಾತ!

ಆತ-ಈತ, ಸುತ್ತ-ಮುತ್ತ
ಯಾರು ಭಾಗ್ಯ ವಿಧಾತಾ!?
ಅರೆ ಹೊಟ್ಟೆಯಲ್ಲಿದ್ದು ಜಗದ ಹಸಿವು ನೀಗಿಸುವ ರೈತ ! ಜಗದ ಭಾಗ್ಯ ವಿಧಾತ!!


Leave a Reply

Back To Top