‘ಸಾವಿಲ್ಲದ ಶರಣರು’ ಮಾಲಿಕೆ “ಶರಣ ಧರ್ಮ ಸಾಧಕ ಕೈವಲ್ಯ ಕಲ್ಪವರಿ  ಕರ್ತ  ಸರ್ಪಭೂಷಣ ಶಿವಯೋಗಿಗಳು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

ಶರಣ ಧರ್ಮ ಉದ್ಧಾರಕರ  ಪರಂಪರೆಯಲ್ಲಿ ಶ್ರೀ ಸರ್ಪಭೂಷಣ ಶಿವಯೋಗಿಗಳು ಒಬ್ಬರು. ಕನ್ನಡ ನಾಡಿನಲ್ಲಿ ಹದಿನೆಂಟನೆ ಶತಮಾನವು ಆಧ್ಯಾತ್ಮಿಕವಾಗಿ ಅವನತಿಯನ್ನು ಹೊಂದಿತ್ತು . ಯುದ್ಧಕಾಲದ ತಂತ್ರ ,ಮೋಸ, ಪಿತೂರಿಗಳಿಂದ ನೀತಿಧರ್ಮಗಳು ಶಿಥಿಲವಾಗಿ ಜನಜೀವನದಲ್ಲಿ ಕಷ್ಟ ನಷ್ಟಗಳನ್ನುಂಟು ಮಾಡಿದ್ಧವು. ಇಂತಹ ಪರಿಸ್ಥಿತಿಯಲ್ಲಿ ಧರ್ಮವನ್ನೂ, ಶಾಂತಿಯನ್ನೂ ಸ್ಥಾಪಿಸಿ, ಜನತೆಗೆ ದಾರಿತೋರಲು ಜನ್ಮತಾಳಿದ ಮಹಾಪುರುಷರೇ ಸರ್ವಭೂಷಣ ಶಿವಯೋಗಿ.

ಬಾಲ್ಯ

ಶ್ರೀ ಸರ್ಪಭೂಷಣ ಶಿವಯೋಗಿಗಳು ಬೆಂಗಳೂರು ನಗರದ ಸಮೀಪದಲ್ಲಿರುವ ಚಿಕ್ಕಬಾಣಾವರ ಎಂಬ ಗ್ರಾಮದಲ್ಲಿ ಲಿಂಗಾಯತ ಬಣಜಿಗ ಮತಸ್ಥರಾದ ಮಲ್ಲಿಕಾರ್ಜುನಪ್ಪ ಮತ್ತು ಚೆನ್ನಮ್ಮ ಎಂಬ ದಂಪತಿಗಳಿದ್ದರು.ಇವರು ವೃತ್ತಿಯಲ್ಲಿ  ವ್ಯಾಪಾರಿಗಳು. ಚಿಕ್ಕಬಾಣಾವರದಲ್ಲಿ ವ್ಯಾಪಾರಕ್ಕೆ ಸಾಕಾದಷ್ಟು ಅವಕಾಶವಿಲ್ಲದ್ದರಿಂದ ಬೆಂಗಳೂರಿಗೆ  ಆಲಿಸಿ ಬಂದು ನೆಲೆಸಿ, ಮಾಮೂಲ್‌ಪೇಟೆಯಲ್ಲಿ ಒಂದು ಅಡಿಕೆ ಅಂಗಡಿಯನ್ನು ಪ್ರಾರಂಭಿಸಿದರು. ಇವರಿಗೆ ಐದು ಜನ ಗಂಡು ಮಕ್ಕಳು ಮತ್ತು ಒಬ್ಬಳು ಹೆಣ್ಣುಮಗಳು. ಗಂಡು ಮಕ್ಕಳಲ್ಲಿ ಕೊನೆಯವರೇ ಸರ್ಪಭೂಷಣ ಶಿವಯೋಗಿ, ಇವರು ಕ್ರಿ.ಶ.1795 ರಲ್ಲಿ ಜನಿಸಿದರು. ಮಗುವಿಗೆ ಸಪ್ಪಣ್ಣನೆಂದು ನಾಮಕರಣ ಮಾಡಿದರು. ಎಳೆಗೂಸಿಗೆ ಸರ್ಪಭೂಷಣ ಎಂದು ಹೆಸರು ಬರಲು ಕಾರಣ ಏನೆಂಬುದು ತಿಳಿದುಕೊಳ್ಳೋಣ –  ಒಂದು  ವರುಷದ ಕೂಸು ಆಡುತ್ತ ಗೋಡೆಗೆ ಒರಗಿ ಕುಳಿತ್ತಿದ್ದಾಗ ನಗರ ಹಾವೊಂದು ಇವರ ಕೊರಳಲ್ಲಿ ಸುತ್ತಿಕೊಂಡು ಹೆಡೆಯೆತ್ತಿ ಆಡುತ್ತ ಇರುವುದನ್ನು   ನೋಡಿ  ಅವರಿಗೆ ಸರ್ಪಭೂಷಣ ಎಂದು ನಾಮಕರಣ ಮಾಡಿದರಂತೆ .
            ಮಲ್ಲಿಕಾರ್ಜುನಪ್ಪನವರು ಸತ್ಯ ಮತ್ತು ನಿಷ್ಠೆಯಿಂದ ವ್ಯಾಪಾರ ಮಾಡುತ್ತಾ ಚರಮೂರ್ತಿ ಗುರುಸಿದ್ದ ಸ್ವಾಮಿಗಳ ದರ್ಶನಕ್ಕೋಸ್ಕರ ಅಲ್ಲೇ ಸ್ಥಾಪಿಸಲಾಗಿದ್ದ ತಿಪ್ಪಶೆಟ್ಟರಮಠಕ್ಕೆ ಹೋಗಿಬರುತ್ತಿದ್ದರು. ಇತ್ತ ಸಪ್ಪಣ್ಣನು ತುಂಟತನ ಮಾಡುತ್ತಾ ಶಾಲೆಗೆ ಹೋಗದೆ, ಓದು ಬರಹಗಳನ್ನು ಕಲಿಯದೆ, ಸಿಕ್ಕಿದವರೊಡನೆ ಜಗಳವಾಡುತ್ತಲಿದ್ದನು. ಇಷ್ಟರಲ್ಲೇ ಸಪ್ಪಣ್ಣನಿಗೆ ಸುಯೋಗ ಒದಗಿಬಂತು. ಮಲ್ಲಿಕಾರ್ಜುನಪ್ಪನವರು ಸ್ವಾಮಿಯವರನ್ನು ಮನೆಗೆ ದಯಮಾಡಬೇಕೆಂದು ಬೇಡಿಕೊಂಡರು. ಸಮ್ಮತಿಸಿದ ಸ್ವಾಮಿಗಳು ಒಂದು ದಿನ ಕರುಣಿಸಿ,ದರ್ಶನಭಾಗ್ಯವನ್ನಿತ್ತರು. ಎಂದಿನಂತೆ ಆಟವಾಡುತ್ತಿದ್ದ ಸಪ್ಪಣ್ಣನನ್ನು ನೋಡಿ ಬಾಲಕನ ತೇಜಸ್ಸಿನಿಂದ ಆಕರ್ಷಿತರಾಗಿ, ಅವರೊಡನೆ ಕಳುಹಿಸಿಕೊಡಬೇಕೆಂದು ಕೇಳಲು, ತಂದೆ ತಾಯಿಯರು ಸಂತೋಷಪಟ್ಟು ಮಗನನ್ನು ಅವರೊಡನೆ ಕಳುಹಿಸಿದರು.

ಬದುಕು
——————————–
ಮಾನವನನ್ನು ದೇವರನ್ನಾಗಿ ಮಾಡಿಸಬಲ್ಲ ಸಂಸ್ಕೃತಿಯ ಪ್ರಭಾವದ ಬೆಳಕಿನಲ್ಲಿ, ಕಿಡಿಗೇಡಿಯಾದ ಸಪ್ಪಣ್ಣನು ಶಾರಣಿಕ ಶಿವಯೋಗಿಯಾಗಲು ಅನುವಾಯಿತು. ಚತುರತಸ, ತೀಕ್ಷಣಬುದ್ದಿ, ಅಪಾರವಾದ ಮೇಧಾಶಕ್ತಿ ಇವುಗಳಿಂದ ಕೂಡಿ ಸಪ್ಪಣ್ಣನು ಮುಂದುವರಿಯುತ್ತಿದ್ದನು. ಸಂಗೀತ ಶಾಸ್ತ್ರದಲ್ಲಿ ಪಾರಂಗತನಾದನು. ಇದನ್ನು ಗಮನಿಸಿ ಸಂತೋಷಭರಿತರಾದ ಗುರುಗಳು ಉಭಯಭಾಷೆಯಲ್ಲಿ ತಮಗಿದ್ದ ಪಾಂಡಿತ್ಯವನ್ನು ಲೋಕೋದ್ಧಾರಕ್ಕಾಗಿ ಸಪ್ಪಣ್ಣನವರಿಗೆ ಧಾರೆ ಎರೆದರು. ಸಹಜ ವೈರಾಗ್ಯಶೀಲರೂ, ತೇಜಸ್ವಿಗಳೂ, ಉಭಯಭಾಷಾ ಪಂಡಿತರೂ ಆದ ಸರ್ಪಭೂಷಣರು, ಗುರುಸಿದ್ಧ, ಗುರುವರೇಣ್ಯರಿಂದ ವಿರಕ್ತಾಶ್ರಮವನ್ನು ಪಡೆದು ದೇಶಾಟನೆಗೆ ಹೊರಟರು. ಅಲ್ಲಲ್ಲೇ ವಿದ್ವತ್ಸಭೆಗಳಲ್ಲಿ ನಡೆದ ವಾದಗಳಲ್ಲಿ ಜಯಶಾಲಿಗಳಾದರು. ಎಲ್ಲೆಡೆಯಲ್ಲೂ ಇವರ ವಿಧ್ಯೆ, ವಿನಯ, ವಿರಕ್ತಾಶ್ರಮಕ್ಕೆ ತಕ್ಕ ಲಕ್ಷ್ಮಣ, ಆ ಲಕ್ಷ್ಮಣ ಕ್ಕೆ ತಕ್ಕ ನಡತೆ, ಸಂಗೀತ ಸಾಹಿತ್ಯಗಳೆರಡಲ್ಲೂ ಇದ್ಧ ನಿಪುಣತೆ ಇವುಗಳನ್ನು ನೋಡಿ ಜನತೆಯು ಆಕರ್ಷಿತರಾಗುತ್ತಿದ್ದರು. ಸೊನ್ನಲಿಗೆಯ ಶ್ರೀಸಿದ್ಧರಾಮ ಕ್ಷೇತ್ರ, ಬಸವನ ಬಾಗೇವಾಡಿ, ಕೂಡಲಸಂಗಮಕ್ಷೇತ್ರ ಇವುಗಳನ್ನು ಸಂದರ್ಶಿಸಿ, ಉರುಗಾದ್ರಿ ಮಹಾಸಂಸ್ಥಾನದ ಗವಿಮಠಕ್ಕೆ ಬಂದರು. ಮಹಾಪ್ರತಿಭಾನ್ವಿತರಾದ  ಕರಿಬಸವಪ್ಪ ಮಹಾಸ್ವಾಮಿಗಳನ್ನು ಕಂಡರು.ಪರಸ್ಪರ ಆನಂದಪರವಶರಾಗಿ ಕರಿಬಸವಪ್ಪ ಸ್ವಾಮಿಗಳು ಸರ್ಪಭೂಷಣ ವಿದ್ಯಾಪ್ರೌಢಿಮೆಗೂ, ವ್ಯವಹಾರ ಕೌಶಲಕ್ಕೂ ಮೆಚ್ಚಿ ಅವರ ಬಳಿ ಯಲ್ಲಿರಿಸಿಕೊಂಡು,ಶಿವಯೋಗ ಅನುಷ್ಠಾನಕ್ಕೂ ಏಕಾಂತ ವಾಸಕ್ಕೂ ಅನುಕೂಲವಾಗುವಂತೆ ಗವಿಮಠದ ಹತ್ತಿರ ಒಂದು ಚಿಕ್ಕಮಠವನ್ನು ಪ್ರತ್ಯೇಕವಾಗಿ ಕಟ್ಟಿಸಿಕೊಂಡರು. ಇಂದಿಗೂ ಇದನ್ನು ‘ಸಪ್ಪಣ್ಣರ್ಯರ ಗವಿ’ ಎನ್ನುತಾರೆ. ಸರ್ಪಭೂಷಣರು ಎಲ್ಲರಿಗೂ ಉಪಯೋಗವಾಗುವಂತೆ,’ವಿದ್ಯಾನಿಧಿ’ ಎಂಬ ಪುಸ್ತಕ ಭಂಡಾರವನ್ನು ಸ್ಥಾಪಿಸಿ, ಆನೇಕ ಕೈಬರಹದ  ತಾಡೋಲೆಗಳನ್ನು ಪ್ರಾಚೀನ ಗ್ರಂಥಗಳನ್ನು ಸಂಗ್ರಹಿಸಿದರು.

ಶಿವಯೋಗ ಸಾಧನೆ
—————————–
ಇವರು ಸಂಚರಿಸಿದೆಡೆಯಲ್ಲೆಲ್ಲಾ ತತ್ವಬೋಧಯನ್ನು ಮಾಡುತ್ತಾ, ಮಹಾಪುರುಷರನ್ನು ಸಂದರ್ಶಿಸಿ ಅನುಭವವನ್ನು ಪಡೆಯುತ್ತಿದ್ದರು. ಮೃದು ಮಧುರವಾದ ಸಂಗೀತದೊಡಗೂಡಿದ ಸರಳವಾದ ಸಾಹಿತ್ಯದ ಮೂಲಕ ತತ್ವ ಪ್ರಚಾರ ಮಾಡುತ್ತಿದ್ದುದರಿಂದ, ಜನತೆಯ ಮೇಲೆ ಪ್ರಭಾವವಾಗಿ ಜನತೆಯ ಮನೋವಿಕಾಸಕ್ಕೆ ಸಹಕಾರಿಯಾಯಿತು.,ಹೀಗೆ ಕ್ರಿ.ಶ.1815 ರಲ್ಲಿ ದೇಶ ಸಂಚಾರಕ್ಕೆ ಹೊರಟರು. ದೇಶಾಟನೆಯನ್ನು ಮುಗಿಸಿ 1828 ರಲ್ಲಿ ಬೆಂಗಳೂರಿಗೆ ಮರಳಿದರು. ಅವರು ಬಂದ ಕೆಲವು ದಿವಸಗಳಲ್ಲೆಇವರ  ಗುರುಗಳು ಲಿಂಗೈಕ್ಯರಾದರು. ಆ ಮಠಾಧಿಕಾರವನ್ನು ವಹಿಸಿಕೊಳ್ಳಲು ಭಕ್ತರು ಅರಿಕೆ ಮಾಡಿಕೊಂಡರು ಒಪ್ಪದೇ ಚಿಕ್ಕ ಗುರುಸಿದ್ಧ ಸ್ವಾಮಿಗಳಿಗೆ ಮಠಾಧಿಕಾರವನ್ನು ವಹಿಸಿ, ಗ್ರಂಥವಲೋಕನದಲ್ಲಿ ಮಗ್ನರಾದರು. ತಮ್ಮ ಅನುಭವದಿಂದ ರಚಿಸಿದ ಗೀತೆಗಳನ್ನು ಹಾಡುತ್ತಾ ಎಲ್ಲರನ್ನು ಆಕರ್ಷಿಸಿದರು. ಭಕ್ತರೆಲ್ಲರೂ ಸೇರಿ ಬೆಂಗಳೂರಿನಲ್ಲಿ ಅವರಿಗೆ ಒಂದು ಪ್ರತ್ಯೇಕವಾಗದ ಮಠವನ್ನು ಕಟ್ಟಬೇಕೆಂದು ಆಲೋಚಿಸಿದರು.ಈಗಿರುವ ಸರ್ಪಭೂಷಣ ಮಠದೊಡನೆ ಓಂಕಾರೇಶ್ವರ ದೇವಾಲಯದ ಕಟ್ಟಡವೂ ಆರಂಭವಾಗಿ ಕೈವಲ್ಯ ಕಲ್ಪವಲ್ಲರಿಯ ಹಾಡುಗಳನ್ನು ಕೇಳಿ, ನಿಜಗುಣರು ಮತ್ತೆ ಈ ರೂಪದಲ್ಲಿ ಅವತರಿಸಿದ್ದಾರೆಂದು ಮೆಚ್ಚುಗೆಯಿಂದ ಸರ್ಪಭೂಷಣರನ್ನು ಕೊಂಡಾಡುತ್ತಿದ್ದರು. ಒಂದೊಂದು ತತ್ವವನ್ನು ಪ್ರತಿಪಾದಿಸಲು ಸರಳವೂ ಸುಂದರವೂ ಆದ ಭಾಷೆಯಲ್ಲಿ ಒಂದೊಂದು ಹಾಡುಗಳನ್ನು ಹಾಡುತ್ತಿದ್ದರು. ತ್ರಿಕಾಲಜ್ಞಾನಿಗಳಾದ ಸರ್ಪಭೂಷಣರು ತಮ್ಮ ಅಂತ್ಯಕಾಲವನ್ನು ಪೂರ್ವಭಾವಿಯಾಗಿ ಅರಿತಿದ್ದರು. ಪ್ರಾತಃಕಾಲದ ನಿತ್ಯಕ್ರಿಯಾದಿಗಳನ್ನು ಮುಗಿಸಿ, ಸಂಜೆ ಪ್ರದೋಷ ಸಮಯದಲ್ಲಿ ಲಿಂಗಪೂಜೆ ಕುಳಿತು ಲಿಂಗಪೂಜಾಯೋಗದಲ್ಲಿಯೇ ಲಿಂಗೈಕ್ಯರಾದರು. ಕ್ರಿ.ಶ.1839 ರಲ್ಲಿ ಅವರ ಭೌತಿಕ ದೇಹವು ಅಳಿಯಿತು. ಆದರೆ ಅವರು ಕೀರ್ತಿಯು ಅಚ್ಚಳಿಯದೆ ಗ್ರಂಥಗಳಾದ ಕೈವಲ್ಯ ಕಲ್ಪವಲ್ಲರಿ, ಜ್ಞಾನ ಶತಕಗಳ ಮೂಲಕ ಅಮರವಾಗಿದೆ. ಕೇವಲ ನಲವತ್ತನಾಲ್ಕು  ವರ್ಷಗಳ ಬಾಳಿದರೂ, ಕನ್ನಡ ನಾಡಿನಲ್ಲಿ ಆಧ್ಯಾತ್ಮ ತತ್ವಗಳನ್ನು ಬಿತ್ತಿ ತನ್ಮೂಲಕ ಜನತೆಯನ್ನು ಉದ್ಧರಿಸಿದರು.

ಗ್ರಂಥ ರಚನೆ
————————-

ಕೈವಲ್ಯ ಕಲ್ಪವಲ್ಲರಿಯು ಕನ್ನಡ ಭಾಷೆಯಲ್ಲಿದ್ದು, ಪಾರಮಾರ್ಥಿಕ ಬೋಧನೆಗಳಿಂದ ಕೂಡಿವೆ. ಇವಕ್ಕೆ’ಅಧ್ಯಾತ್ಮ ಸುಖ ಪ್ರಬೋಧ ಪ್ರಕರಣ’ ವೆಂದು ಹೆಸರು. ಇದ್ದದ್ದು ಕಂಡುಬರುತ್ತದೆ. ಅದರಲ್ಲಿ 177 ಹಾಡುಗಳಿವೆ ಗ್ರಂಥವು ಶಿವಕಾರುಣ್ಯಪ್ರಾರ್ಥನೆ, ಜೀವಸಂಬೋಧನೆ, ನೀತಿ ಕ್ರಿಯಾ ಚರ್ಯೆ, ಯೋಗ ಪ್ರತಿಪಾದನೆ, ಜ್ಞಾನ ಪ್ರತಿಪಾದನೆ ಎಂಬುದಾಗಿ ಐದು ಭಾಗಗಳಾಗಿವೆ. ಮೊದಲನೆಯ ಭಾಗದಲ್ಲಿ ಪರಶಿವನ ಕಟಾಕ್ಷವನ್ನು ಪಡೆಯಲೋಸುಗ ಶಿವನನ್ನು, ಪಾರ್ವತಿಯನ್ನು ಸುತ್ತಿಸುವ ಹಾಡುಗಳಿಂದ ಕೂಡಿವೆ. ಇದಲ್ಲದೆ ವೀರಶೈವ ವಂಶೋದ್ಧಾರಕರಾದ ಬಸವ, ಅಲ್ಲಮ ಮೊದಲಾದ ಶರಣರನ್ನು ಸ್ಮರಿಸುವ ಹಾಡುಗಳು ಇವೆ. ಎರಡನೆಯ ಭಾಗದಲ್ಲಿ ಸಂಸಾರವು ಮಿಥೈಯೆಂದೂ, ಹೊನ್ನು, ಹೆಣ್ಣು ಮಣ್ಣು ಗಳು ನಿಸ್ಸಾರವೆಂದು, ಶರೀರವು ನಶ್ವರವೆಂದೂ ಹೇಳಿರುವ ಹಾಡುಗಳಿಂದ ಕೂಡಿದೆ. “ಹೆಣ್ಣಿಗಿಚ್ಚಿಸುವರೇ ಮೂಢಾ ಇದನ್ನು ಕಣ್ಣು ಕಿವಿ ನೆನಪುಗಳು ಸೋಂಕಲೇಬೇಡ’ ಎಂದಿದ್ದಾರೆ. ಮೂರನೆಯ ಭಾಗದಲ್ಲಿ ಕರ್ಮದ ಅವಶ್ಯಕತೆ ಮತ್ತು ಅದರ ನಿಜಸ್ವರೂಪವನ್ನು ತಿಳಿಸುವ ಹಾಡು ಗಳಿವೆ.ಮುಮುಕ್ಷುವಾದವನು ತ್ರಿಕರಣದಲ್ಲಿಯೂ ಶುದ್ಧವಾಗಿರಬೇಕು. ಒಳ್ಳೆಯ ಗುಣಗಳನ್ನು ಸಂಗ್ರಹಿಸಿ ಕೊಳ್ಳಬೇಕು ಎಂದಿದ್ದಾರೆ. ನಾಲ್ಕನೆಯ ಭಾಗದಲ್ಲಿ ಯೋಗದ ರಹಸ್ಯವನ್ನು, ಅದರಲ್ಲೂ ಶಿವಯೋಗದ ಮರ್ಮವನ್ನು ವಿವರಿಸಿ, ಅದನ್ನು ವೀರಶೈವ ಧರ್ಮದರೀತ್ಯಾ ಇಷ್ಟ ಪ್ರಾಣ ಲಿಂಗಗಳ ಮೂಲಕವಾಗಿ ಸಾಧಿಸುವ ಕ್ರಮವನ್ನು ತಿಳಿಸುವ ಹಾಡುಗಳಿವೆ. ಐದನೆಯ ಭಾಗದಲ್ಲಿ ಜ್ಞಾನವನ್ನು ಪ್ರತಿಪಾದಿಸಲಾಗಿದೆ. ಅಧ್ಯಾಯ, ಮಾಯೆ, ಬ್ರಹ್ಮ, ಮುಕ್ತಿ. ಕರ್ಮ ಈ ಪದಗಳ ಅರ್ಥವನ್ನು ಸರಳ ಮತ್ತು ಸುಂದರವಾದ ಭಾಷೆಯಲ್ಲಿ ಹಾಡುಗಳ ಮೂಲಕ ತಿಳಿಸಲಾಗಿದೆ. ಒಟ್ಟಿನಲ್ಲಿ  ಕೈವಲ್ಯ ಕಲ್ಪವಲ್ಲರಿಯು  ಕನ್ನಡ ಭಾಷೆಯ ಶೈಲಿಯು ಲಲಿತಾ ರಮ್ಯವೂ ಆಗಿದೆ. ಅಲ್ಲಲ್ಲೆ ಕೆಲವು ಸಂಸ್ಕೃತ ಪದಗಳೂ ಪ್ರಯೋಗದಲ್ಲಿರುವುದನ್ನು ಕಾಣಬಹುದು. ಈ ಗ್ರಂಥದಲ್ಲಿ ನಲವತ್ತಕ್ಕೂ ಮೇಲ್ಪಟ್ಟು ರಾಗಗಳನ್ನು ಬಳಸಿದ್ದಾರೆ. ಅಲ್ಲದೆ, ಭೋಗಪರಿವರ್ಧಿನಿ, ವಾರ್ಧಿಕಕಷಟ್ಟದಿಗಳನ್ನು, ಮೂರು, ನಾಲ್ಕು, ಐದು, ಮಾತ್ರೆಗಳ ಗಣಗಳನ್ನು ಹೊಂದಿಸಿದ್ದಾರೆ. ಸಂಸ್ಕೃತ ಶ್ಲೋಕ ಗಳಿಂದ ಕೂಡಿದ ‘ಜ್ಞಾನ ಶತಕ ‘ ಇವರ ಇನ್ನೊಂದು ಗ್ರಂಥ.

ಉಲ್ಲೇಖಗಳು

10 thoughts on “‘ಸಾವಿಲ್ಲದ ಶರಣರು’ ಮಾಲಿಕೆ “ಶರಣ ಧರ್ಮ ಸಾಧಕ ಕೈವಲ್ಯ ಕಲ್ಪವರಿ  ಕರ್ತ  ಸರ್ಪಭೂಷಣ ಶಿವಯೋಗಿಗಳು” ಡಾ.ಶಶಿಕಾಂತ್ ಪಟ್ಟಣ ರಾಮದುರ್ಗ

  1. ಸುಧೀರ್ಘ ಲೇಖನದಲ್ಲಿ ಶ್ರೀ ಸರ್ಪ ಭೂಷಣ ಶಿವಯೋಗಿಗಳು ಅವರ ಆಶಯ ಜೀವನ ಚರಿತ್ರೆ ಕಟ್ಟಿ ಕೊಟ್ಟಿರುವ ಅಪೂರ್ವ ವೈಚಾರಿಕ ಕಾರ್ಯ

  2. ಸರ್ಪಭೂಷಣ ಶಿವಯೋಗಿಗಳ ಜೀವನಗಾಥೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದೀರಿ ಸರ್

    ಸುತೇಜ

Leave a Reply

Back To Top