ಪ್ರೊ. ಸಿದ್ದು ಸಾವಳಸಂಗ ಕವಿತೆ-ಬೇಸಿಗೆಯಲ್ಲಿ ತಂಪಾದ ಸೂರ್ಯ…!

ವರುಷದಿಂದ ವರುಷಕ್ಕೆ
ಹೆಚ್ಚಾಯ್ತು ಬಿಸಿಲು ನೋಡಿ !
ಇದನ್ನೆಲ್ಲ ಅನುಭವಿಸುವ
ಮಾನವ ಜನ್ಮ ಅದೆಷ್ಟು ಖೋಡಿ !!

ಮೈಯೆಲ್ಲ ಬೆವರು
ಮುಂಜಾನೆಯೆ ರಣಬಿಸಿಲು !
ಕುಳಿತಲ್ಲಿ ಕುಳಿತರೆ
ಸಮಾಧಾನವಿಲ್ಲದಾಯ್ತು !!

ಮನೆಯ ಒಳಗೂ ಹೊರಗೂ
ನೆಮ್ಮದಿಯಿಲ್ಲದಾಯ್ತು !
ಮೈಯೆಲ್ಲ ಬೆವರುಗುಳ್ಳೆಗಳು
ಯಾವ ಸೋಪು ಹಚ್ಚಿದರೂ ಹೋಗದಾಯ್ತು !!

ಕುಡಿವ ನೀರಿಗೆ ಎಲ್ಲೆಡೆ
ಎದ್ದಿತು ಬಲು ಹಾಹಾಕಾರ !
ಕರುಣೆಯಿಲ್ಲದ ರವಿಗೆ
ಎಲ್ಲಿದೆ ನಮ್ಮ ಮೇಲೆ ಮಮಕಾರ !!

ಸುಡುಸುಡುವ ಬಿಸಿನೀರು
ಕುಡಿದು ಹೊಟ್ಟೆ ತುಂಬಿಹೋಯ್ತು !
ಊಟ ಮಾಡಲು ನಮಗೆ
ಮನಸ್ಸೇ ಬಾರದಾಯ್ತು !!

ಉರಿವ ಸೂರ್ಯ ಹೀಗೆಯೇ
ಉರಿದರೆ ಜನ ಸಾಯುವರು !
ಈಗ ಮತ್ಯಾರು ಬಂದು
ನಮ್ಮನ್ನು ಕಾಪಾಡುವರು !!

ಮರಗಿಡಗಳ ಕಡಿದು ಕಾಡು
ನಾಶಮಾಡಿದ ದುರಾಸೆಯ ಮಾನವ !
ಬಿಸಿಲು ಹೆಚ್ಚಾಗಿ ಬಸವಳಿದು
ಕೈಚೆಲ್ಲಿ ಕುಳಿತನು ಈ ದಾನವ !!

ಈಗಲಾದರೂ ಎಚ್ಚೆತ್ತುಕೊಂಡು
ಉಳಿಸಿ ಇದು ನಮ್ಮದೇ ಪರಿಸರ !
ಸಾಲು ಸಾಲು ಮರವ ಹಚ್ಚಿ ಆಗಲಾದರೂ
ನೋಡಬಹುದು ಬೇಸಿಗೆಯಲ್ಲಿ ತಂಪಾದ ಸೂರ್ಯ !!

Leave a Reply

Back To Top