ಸುರೇಶ್ ಕಲಾಪ್ರಿಯಾ ಅವರ ಕವಿತೆ- ಬೆಳಕು

ಮಾನವತೆಯ ಮಹಾಬೇರು
ಬಾಬಾಸಾಹೇಬ ಎಂಬ ಜ್ಞಾನದ ಮೇರು
ಪದವಿಗಳ ಪಟ್ಟಿ ಅಕ್ಷರಗಳಿಗೆ ನಿಲುಕದು
ಸದ್ಗುಣಗಳ ಗಣಿ ನೀವು ಪದಗಳಿಗೆ ಸಿಗದು

ಉಳ್ಳವರೂ ಸೋಲಬೇಕಾಯಿತು ಒಳ್ಳೆಯತನಕೆ
ಸಾಧನೆಗೆ ಗಟ್ಟಿಮನಸು ಬೇಕೆಂದು ಸಾರಿದೆ ಜಗಕೆ
ಕರ್ಣಕಠೋರ ಸ್ಥಿತಿಯನೂ ಬದಲಾಯಿಸಿದ ಧೀರ
ದೀನ ದಮನಿತರ ಪಾಲಿಗೆ ಬೆಳಕಾಗಿ ಬಂದ ವೀರ

ಮನೆಯ ಇಕ್ಕಟ್ಟು ಬಿಕ್ಕಟ್ಟಾಗಲು ಬಿಡಲೇ ಇಲ್ಲ
ಅಂಜಿಕೆಯ ಮಾತುಗಳಿಗೆ ಬೆನ್ನು ತೋರಲಿಲ್ಲ
ದೊಡ್ಡವರ ತಪ್ಪುದಾರಿಗೆ ಗುಂಡಿಗೆಯೊಡ್ಡಿ ನಿಂತೆ
ಅವರೇ ಆಶ್ಚರ್ಯ ಪಡುವಂತೆ ಬೆಳೆದು ನಿಂತೆ

ಜಗ ತಿರುಗಿ ನೋಡುವ ಸಂವಿಧಾನ ಬರೆದೆ
ಇಲ್ಲದವರಿಗೂ ಸಮಾನತೆಯ ರಹದಾರಿ ತೋರಿದೆ
ಅಕ್ಷರದ ಬೆಳಕನು ಆರದ ಜ್ಯೋತಿಯಾಗಿಸಬೇಕೆಂದೆ
ದೀನ ದಲಿತರ ಪಾಲಿಗೆ ನಿಜ ಬೆಳಕಾದೆ

ನೆನೆಯಬೇಕಿದೆ ನಿನ್ನ ಅನವರತ ಬಾಬ
ಎಂದಿಗೂ ನಿರೀಕ್ಷಿಸದಂತೆ ಯಾವುದೇ ಲಾಭ
ನಿನ್ನ ಹೆಸರು ಸದಾ ಶಕ್ತಿಯಾಗಿ ಬೆಳಗಬೇಕಿದೆ ಇಲ್ಲಿ
ಘೋಷಣೆಯಾಗಷ್ಟೇ ಉಳಿಯಬಾರದು ಜನ್ಮದಿನದಲ್ಲಿ

Leave a Reply

Back To Top