ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಗವೆಲ್ಲ ಮಲಗಿರಲು ಮುಸುಕೊಳಗೆ
ಮಿಸುಕಾಡುತ್ತೇನೆ
ನನ್ನೊಳಗಿನ ನಾನು
ಕಾನನ ತುಟಿಯೊಳಗಿನ ಮುರಳಿಯೊಳಗೆ
ಸುರುಳಿಯಾಗುವಾಸೆಯಲ್ಲಿ
ನಿದ್ದೆ ಹತ್ತಿರ ಸುಳಿಯುವದಿಲ್ಲ
ಬೆಳ್ದಿಂಗಳೂ ಸುಡುವ ಧಗೆ
ಎದ್ದು ನಡೆಯುತ್ತೇನೆ
ಹುಡುಕಿಕೊಂಡು ಸಾಂತ್ವನಿಸಿ
ತುಸು ತಂಪು ತೋಕುವ ನೆನಪುಗಳಂಗಳಕೆ
ಯಮುನೆಯ ತಟದಲ್ಲೂ ಉರಿಉರಿ
ಅವಳೂ ಬಿಸುಸುಯ್ಯುತ್ತಾಳೆ ಶ್ಯಾಮನ ನೆನೆದು
ಅವನೆಸೆದ ಕಲ್ಲಿಗೆ ತೂತುಬಿದ್ದ ನೀರ್ಗೊಡ
ಕಾಲಿಯಾಗುವ ಹಾಗೇ
ಜಾರುತ್ತಿದೆ ಯೌವನ
ಈ ರಾಧೆ ಕೃಷ್ಣನಿಗೆ ಮಾತ್ರ ಮೀಸಲು
ಕೃಷ್ಣ ಯಾರೊಬ್ಬರಿಗೂ ಮೀಸಲಾಗಲೇ ಇಲ್ಲ
ರಾಧೆಗೋ ರುಕ್ಮಿಣಿಗೋ ಭಾಮೆಗೋ
ನಾನು ಬರಿ ನಿನ್ನವನು ಅಂದಿದ್ದೊಂದೇ ಬಂತು
ಎಂಟೊ ಹದಿನಾರು ಸಾವಿರದೆಂಟೊ
ಒಬ್ಬೊಬ್ಬರನ್ನೂ ಭೃಮೆಯಲ್ಲಿಯೇ
ಬಂಧಿಸಿದವನಿಗೆ ಒಂದಾದವನಿಗೆ
ರಾಧೆಯೇನನ್ಯಾಯ ಮಾಡಿದಳೋ
ಕನಸಿಗೂ ಬಾರದಿದ್ದುದೇಕೋ
ಈ ರಾಧೆಯದು ಪ್ರೇಮ ಕಾಮ ಮೋಹ
ಏನಾದರೂ ಅಂದುಕೊ
ಅದು ನಿನಗಾಗಿಯೇ ಕೃಷ್ಣ ಹೆರವರಿಗಲ್ಲ
ಕಾಯುತ್ತೇನೆ ಹೆರಳು ನೆರೆಯುವ ತನಕ


ಯಮುನೆ ಬತ್ತುವ ತನಕ
ಬಿದ್ದುಹೋದರೂ ಕಾಯ ಸುತ್ತುತ್ತದೆ ಭಾವ
ಗೋಕುಲದ ಗಲ್ಲಿಗಳಲ್ಲಿ ನೀ ಬರುವ ತನಕ
ಕೊಳಲಿಗೆ ಕೊರಳಾದ ಕೊರಳುಲಿಯಾದ
ಕೊಳಲಿಗುಸಿರಾದ
ಬಿದಿರಿಗೆ ಭೂಮಿಯಾದ
ರಾಧೆ

———————————

About The Author

Leave a Reply

You cannot copy content of this page

Scroll to Top