ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮೂಡಣದಿ ಮುಂಜಾನೆ ಮೂಡಿದ ಸೂರ್ಯ
ಚೆಲ್ಲಿದ ಬಾನಂಗಳದಿ ಕೆಂಪು ಓಕುಳಿಯ

ಏರುತ ನಭದಲಿ ಬೆಳಕಿನ ಸಿರಿ ತೇರ
ಉದಯಿಸಿದ ಜಗಕೆ ಮನಮೋಹಕ ನೇಸರ

ಮಂಜಿನ ಮುಸುಕಿಗೆ ಇಕ್ಕುತ ಕಚಗುಳಿ
ಸಾಗುವ ಸಾಲು ಹಕ್ಕಿಗಳ ಚಿಲಿಪಿಲಿ

ಮೇಘ ರಾಶಿಗೆ ಎರಚಿದ ಬಣ್ಣದ ಚಿತ್ತಾರ
ಮಬ್ಬನು ಭೇದಿಸಿ ಪ್ರಕಟಿಸಿದ ಬೆಳಕಿನ ಸರದಾರ

ಪಶ್ಚಿಮದಿ ಮುಸ್ಸಂಜೆ ಮತ್ತೆ ರಂಗನು ಚೆಲ್ಲಿ
ತರತರದ ವಿನ್ಯಾಸಗಳು ಮುಗಿಲೊಡಲಲ್ಲಿ

ಮತ್ತೆ ವಿಹಗಗಳ ಸಾಲು ಕಲರವದಿ ಹಾರಿ
ತಂಗಾಳಿ ದಣಿದ ಮೈಮನಗಳ ಸವರಿ

ಸೋತ ಮನಗಳಿಗೆ ಸಾಂತ್ವಾನ ಹೇಳಿದಂತೆ
ಖುಷಿಯ ಮನಸುಗಳಿಗೆ ಆನಂದ ತಂದಂತೆ

ಒಡಲ ಕಣ್ಣಿಗೆ ಸವಿಯೂಟ ಉಣಿಸಿದ
ಸೌಂದರ್ಯ ರಾಶಿಯ  ಆಗಸದಿ ಮೂಡಿಸಿದ

ಮೇಲೇರುತ  ದಿನಕರನ ಜ್ವಾಲೆ ಪ್ರಖರ
ಹೊಂಬಿಸಿಲು ಕೆಂಬಿಸಲಾಯ್ತು ಅಗ್ನಿಯ ಪ್ರಕಾರ

ತಡೆಯಲಾರೆವು ನಾವು ಬೆಂಕಿಯ ಅಬ್ಬರ
ಭುಗಿಲೆದ್ದಿತು ಎಲ್ಲೆಲ್ಲೂ ಬೇಗುದಿಯ ಹಾಹಾಕಾರ

ಸುಡು ಬೇಸಿಗೆಗೆ ಬದುಕು ಬರ್ಬರ
ಜಲ ಕ್ಷಾಮಕ್ಕೆ ಜನ ಜೀವನ ತತ್ತರ

ನಗುತಿಹನು ಅಟ್ಟಹಾಸದಿ ದಿವಾಕರ
ಕೊಡುತಿಹನು ಮನುಜನ ಸ್ವಾರ್ಥಕ್ಕೆ ಉತ್ತರ

ಕೆನ್ನಾಲಿಗೆಯ ಚಾಚಿ ಸುಡುತಿಹನು ಪ್ರಭಾಕರ
ದಾಹದಿ ದಣಿದುಹುದು ಜೀವ ಸಂಕುಲ ತೀರ

ಹುಟ್ಟಲು ತಂಪು ಇಳಿಯಲು ಸೊಂಪು ಬೀರಿ
ಮೇಲೇರಲು ದರ್ಪದ ಜೊಂಪೆಂಬ ಸಂದೇಶ ಸಾರಿ

ಬರುವನೇ ಮತ್ತೆಂದೂ ಭರವಸೆಯ ಭಾಸ್ಕರ
ತಂಪಾಗಿ ಸೊಂಪಾಗಿ ಬೆಳಕಿನ ಮಹಾಪೂರ
ತರುವನೆ ಇಳೆಯ ಮೈ ತುಂಬುವ ಐಸಿರ
ಸೃಷ್ಟಿಯ ಉಸಿರನು ಮಾಡುವನೆ ಉದ್ಧಾರ


ಶಾಲಿನಿ ಕೆಮ್ಮಣ್ಣು

About The Author

1 thought on “ಶಾಲಿನಿ ಕೆಮ್ಮಣ್ಣುಕವಿತೆ-ಭರವಸೆಯ ಭಾಸ್ಕರ”

Leave a Reply

You cannot copy content of this page

Scroll to Top