ಹನಿಬಿಂದು ಅವರ ಜಾಗೃತಿ ಗೀತೆ-ಮುಟ್ಟನು ಮೆಟ್ಟಿ ನಿಲ್ಲೋಣ



ಬನ್ನಿರಿ ನಾರೀ ಶಕ್ತಿ ಮಣಿಗಳೆ
ಮುಟ್ಟಿನ ಗುಟ್ಟನು ಕೇಳೋಣ..
ಕಷ್ಟದ ದಿನಗಳ ಸುಲಭದಿ ಎದುರಿಸೋ
ನೈಸರ್ಗಿಕ ಕ್ರಿಯೆಯ ತಿಳಿಯೋಣ..//ಬನ್ನಿರಿ//

ಹುಡುಗಿಯು ಮಹಿಳೆ ಆಗುವ ಕಾಲಕೆ
ಅಂಡಾಣು ಬಿಡುಗಡೆ ಸಹಜವದು
ರಕುತದ ರೂಪದಿ ದೇಹವ ತ್ಯಜಿಸೆ
ಮೂರು ದಿನಗಳ ಕಾಲವದು..//ಬನ್ನಿರಿ//



ಹಿರಿಯರು ಹೊರಗಡೆ ಕೂರಿಸಿ ಬಿಟ್ಟರು
ದೇಹಕೆ ವಿಶ್ರಾಂತಿ ಸಿಗಲೆಂದು
ಕಾಯದ ಸ್ವಚ್ಛತೆ ಬೇಕದು ಎಂದಿಗೂ
ಬಳಸಿರಿ ಶುದ್ಧ ಬಟ್ಟೆಯನು//ಬನ್ನಿರಿ//

ಹೆದರುತ ಕುಳಿತು ಬೇಸರ ಪಡದಿರಿ
ಸರ್ವ ಹೆಣ್ಣಿಗೂ ಬರುವುದದು
ಮದುವೆಯ ಬಳಿಕ ವೀರ್ಯಾಣು ಸೇರಿ
ಸಂತಾನ ಅಭಿವೃದ್ಧಿ ಆಗುವುದು//ಬನ್ನಿರಿ//



ಮೆನ್ ಸ್ಟುರಲ್ ಕಪ್ಪೋ ನ್ಯಾಪೀ ಪ್ಯಾಡೋ
ಉಪಯೋಗ ನೀ ಕಲಿ ನಿತ್ಯಕ್ಕೆ
ಸ್ವಚ್ಚ ಅಂಗಗಳ ಇಡುತಲಿ ಕಾಪಾಡು
ಆರೋಗ್ಯ ಮುಖ್ಯವು ದೇಹಕ್ಕೆ//ಬನ್ನಿರಿ//

ಹುಡುಗರು ಕೂಡ ತಾಯಿ ಸಹೋದರಿ
ಮನಗಳ ಅರಿತು ಸಹಕರಿಸಿ
ಮುಟ್ಟಿನ ದಿನದಲಿ ಕೆಲಸವ ಹಂಚಿ
ವಿಶ್ರಾಂತಿ ನೀಡಿರಿ ಮನೆಯಲ್ಲಿ..//ಬನ್ನಿರಿ//



ಮುಟ್ಟದೆ ಇರಲು ಕಾರಣವಿಲ್ಲ
ವಿಜ್ಞಾನದ ಪುರಾವೆ ಇದಕ್ಕಿಲ್ಲ
ಕಬ್ಬಿಣದಂಶ ಕಡಿಮೆ ಆಗಲು
ದೇಹವು ಸುಸ್ತಿಗೆ ಜಾರುವುದಲ್ಲ//ಬನ್ನಿರಿ//

ಹೊಟ್ಟೆ ನೋವು ನರಗಳ ಸೆಳೆತ
ನಡೆಯಲು ಕಾಲದು ಎಳೆಯುವುದು
ಪ್ರೀತಿ ಆಪ್ತತೆ ಇರಲು ಮನಸಿಗೆ
ಖುಷಿಯಲಿಎಲ್ಲಾ ಮರೆಯುವುದು//ಬನ್ನಿರಿ//

ಬದುಕಿನ ಒಂದು ಸಹಜ ಪ್ರಕ್ರಿಯೆ
ಹೆದರಲೇ ಬೇಡಿ ಮಹಿಳೆಯರೇ
ತಿಂಗಳಿಗೊಮ್ಮೆ ಬರುವ ಮುಟ್ಟನು
ಮೆಟ್ಟಿ ನಿಲ್ಲೋಣ ಲಲನೆಯರೇ//ಬನ್ನಿರಿ//

—————————

Leave a Reply

Back To Top