ಕಾವ್ಯ ಸಂಗಾತಿ
ನಾಗರಾಜ ಬಿ.ನಾಯ್ಕ
ಅನಾಗತ


ಅನಾಗತ ದಿನಗಳ ಕುಣಿತ
ತಲೆಯಲ್ಲಿ ನೂರು ಭಾವ ಭವಿತ
ಮಾತು ಕೃತಿ ನಗು ಅಳು
ಎಲ್ಲವೂ ಸುತ್ತಿದ ಮಿಳಿತ
ಒಂದಿಷ್ಟು ಅನುಭವ ಅನುಭಾವ
ಸೇರಿದರೆ ನಾಲ್ಕು ದಿನಕೆ ಉಳಿಕೆ
ಕಳೆದದ್ದು ಹೆಚ್ಚು ಪಡೆದದ್ದು ಕಡಿಮೆ
ಎಲ್ಲಾ ಮುಗಿದರೆ ನಾಳೆ ಚಿಂತೆ
ಅರ್ಥ ಅನರ್ಥಗಳ ಪ್ರಶ್ನೆ ಉತ್ತರ
ಕೊನೆಗೊಮ್ಮೆ ನಮ್ಮದೇ ಸಾಂತ್ವನ
ಬರಲಿರುವ ದಿನಗಳ ಕುತೂಹಲ
ಏಕೆ ಹೇಗೆ ಎಂದರೂ ನಿರ್ದಿಷ್ಟವಿಲ್ಲ
ಬದುಕೆಂದರೆ ಎಲ್ಲವೂ ಸುಪ್ತ
ಅಂತರಂಗದಿ ಕುಳಿತು ನಗುವ ಭಾವ
ಸರಿಸುಮಾರು ಮಾತು ಜೀವಂತ
ಇರಲು ಇರದಿರಲು ಜೀವದ ಧಾವಂತ
ಸ್ಪಷ್ಟ ಹೆಜ್ಜೆಗೆ ಅದರದೇ ಉತ್ತರ
ಕಾಯುವುದು ಬದುಕಿನ ಕಾತರ
ದಿನ ಕ್ಷಣಗಳ ಉಲ್ಲಸಿತ ಮನ
ಬರಲಿ ಬರವಿಲ್ಲದ ಸಂತಸದ ದಿನ
ನಾಗರಾಜ ಬಿ.ನಾಯ್ಕ

ಬದುಕಿನ ಸೌಂದರ್ಯ ಅಡಗಿರುವುದೇ ನಾಳಿನ ಕೌತುಕತೆಯಲಿ.. ಭಾವನೆಗಳ ಮಿಡಿತ ನಮ್ಮನ್ನ ಖುಷಿಯಲ್ಲಿ ತೇಲಿಸುತ್ತದೆ. ಹತ್ತು ಹಲವು ಪ್ರಶ್ನೆಗಳು ಮನಸ್ಸಿನಲ್ಲಿ.. ಸಂತಸದ ಕ್ಷಣಗಳನ್ನು ಆಶಿಸುತ್ತಾ.. ಉಲ್ಲಾಸ ಗೊಳ್ಳುವುದು ಮನವು. ಆಶಾಸೌಧ ಕಟ್ಟಿಕೊಳ್ಳದೆ ಒಳ್ಳೆಯದನ್ನು ಬಯಸುವ ಕವಿತೆಯ ಸಾರ ವಿಶಿಷ್ಟವಾದುದಾಗಿದೆ.
ನಾನಾ
ಬದುಕು ಬವಣೆಯ ಸುತ್ತ ಸುಳಿವ ಸುಳಿಗಾಳಿ.
ಸುಂದರ ನಿರೂಪಣೆ.