ವೀಣಾರಾವ್ ಅವರ ಚೊಚ್ಚಲ ಕಾದಂಬರಿ ಮಧುರ ಮುರಳಿ ಒಂದು ಅವಲೋಕನ ಎ.ಎನ್.ರಮೇಶ್. ಗುಬ್ಬಿ

ಗೋಮಿನಿ ಪ್ರಕಾಶನದಿಂದ ಉದಯೋನ್ಮುಖ ಲೇಖಕಿ ಶ್ರೀಮತಿ ವೀಣರಾವ್ ಅವರ ಚೊಚ್ಚಲ ಕಾದಂಬರಿ “ಮಧುರ ಮುರಳಿ” ಶೀಘ್ರದಲ್ಲೇ ಬಿಡುಗಡೆಯಾಗುತ್ತಿದೆ. ’ಗೋಮಿನಿ’ ಯ ಗುಬ್ಬಚ್ಚಿ ಸತೀಶ್ ನಿನ್ನೆಯ ದಿನ “ಮಧುರ ಮುರಳಿ”ಯ ಮುಖಪುಟ ಬಿಡುಗಡೆ ಮಾಡಿದ್ದಾರೆ. ಶ್ರೀ ಸಂತೋಷ್ ಮಧುರ ಕಾದಂಬರಿಗೆ ಸುಂದರ ಮುಖಪುಟ ವಿನ್ಯಾಸ ಮಾಡಿದ್ದಾರೆ.

ಈ ಕೃತಿಯನ್ನು ನನ್ನಿಂದ ಓದಿಸಿ, ಹಾರೈಕೆಯ ಬೆನ್ನುಡಿ ಬರೆಸಿದ್ದಾರೆ. ಗುಬ್ಬಚ್ಚಿ ಸತೀಶ್ ಹಾಗೂ ಶ್ರೀಮತಿ ವೀಣಾ ಅವರ ಅಕ್ಕರೆ-ಅಂತಃಕರಣಕ್ಕೆ ಸೋತು, ನಾಲ್ಕು ಹೃದ್ಯನುಡಿಗಳಿಂದ ಕೃತಿಯನ್ನು ಹಾರೈಸಿದ್ದೇನೆ. ನಿಮ್ಮ ಓದಿನ ಅವಗಾಹನೆಗಾಗಿ ಅದನ್ನು ಟೈಪಿಸಿ ಕೆಳಗೆ ಪ್ರಕಟಿಸಿದ್ದೇನೆ. ಶೀಘ್ರದಲ್ಲೇ ಕಾದಂಬರಿ ಬಿಡುಗಡೆಯಾಗಲಿದೆ. ಕೊಂಡು ಓದಿ ಹರಸಿ, ಹಾರೈಸಿ. ಲೇಖಕಿ ಶ್ರೀಮತಿ ವೀಣಾರಾವ್ ಹಾಗೂ ’ಗೋಮಿನ’ ಗೆ ನಿಮ್ಮದೊಂದು ಅಭಿನಂದನೆ ಹಾಗೂ ಶುಭಾಶಯಗಳಿರಲಿ. – ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.
(ಕಾದಂಬರಿಯ ಮುಖಪುಟ ಮೇಲೆ ಲಗತ್ತಿಸಲಾಗಿದೆ)

NOW OVER TO “ಮಧುರ ಮುರಳಿ”…

ಕನ್ನಡ ಕಾದಂಬರಿಲೋಕಕ್ಕೆ ‘ಮಧುರ ಮುರಳಿ’ಯೊಂದಿಗೆ ಚೊಚ್ಚಲ ಅಡಿಯಿಡುತ್ತಿರುವ ಶ್ರೀಮತಿ ವೀಣಾ ರಾವ್, ಕರುನಾಡಿನ ಸಾರಸ್ವತಲೋಕದಲ್ಲಿ ತಮ್ಮ ಕವನ ಸಂಕಲನ, ಕಥಾ ಸಂಕಲನಗಳ ಮೂಲಕ ಉದಯೋನ್ಮುಖ ಲೇಖಕಿಯೆಂದು ಗುರುತಿಸಿಕೊಂಡವರು. ಅದರಲ್ಲೂ ವಿಶೇಷವಾಗಿ ತಮ್ಮ ವಿಭಿನ್ನ ಕಥಾಕೌಶಲ್ಯದಿಂದ, ತಮ್ಮದೇ ಆದ ವಿಶಿಷ್ಟವಾದ ಛಾಪು ಮೂಡಿಸಿದ್ದಾರೆ.

‘ಮಧುರ-ಮುರಳಿ’ಯನ್ನು ಓದುತ್ತಿದ್ದರೆ.. ಎಲ್ಲಿಯೂ ಇದು ವೀಣ ಅವರ ಪ್ರಪ್ರಥಮ ಕಾದಂಬರಿಯೆಂದು ಅನಿಸುವುದೇ ಇಲ್ಲ. ಅಷ್ಟು ಸರಾಗವಾಗಿ, ಸ್ವಾರಸ್ಯಕರವಾಗಿ ನುರಿತ ಕಾದಂಬರಿಗಾರ್ಥಿಯಂತೆ ಈ ಕೃತಿಯನ್ನು ಕಟ್ಟಿಕೊಟ್ಟಿದ್ದಾರೆ. ಕಥಾ ಹಂದರ, ಕಾದಂಬರಿಯ ಸನ್ನಿವೇಶಗಳು ಹಾಗು ಪ್ರತಿ ಪಾತ್ರವೂ ಲೇಖಕಿಯ ಅನನ್ಯ ಸೃಜನಶೀಲತೆಗೆ ಹಿಡಿದ ಕೈಗನ್ನಡಿ. ಪಾತ್ರಪೆÇೀಶಣೆ, ನಡೆ-ನುಡಿ, ಸಂಭಾಷಣೆ, ಸಂಘರ್ಷಣೆ, ಭಾವೋತ್ಕರ್ಷಣೆ ವೀಣಾರವರ ಅದ್ಭುತ ಸಂವೇದನಾಶೀಲತೆಗೆ ನಿಚ್ಚಳ ನಿದರ್ಶನ. ಈ ಕಾದಂಬರಿಯನ್ನು ನೀವು ಓದಬೇಕಿಲ್ಲ. ಕೊಂಡು ಒಮ್ಮೆ ಕರಗಳಲ್ಲಿ ಹಿಡಿದುಕೊಂಡರೆ ಸಾಕು, ಪುಟಗಳಲೊಮ್ಮೆ ಕಣ್ಣು ಹಾಯಿಸಿದರೆ ಸಾಕು.. ಮುಂದೆ ಅದು ತಂತಾನೇ ನಿಮ್ಮನ್ನು ಓದಿಸಿಕೊಳ್ಳುತ್ತಾ, ಆವರಿಸಿಕೊಳ್ಳುತ್ತಾ ಹೋಗುತ್ತದೆ.

ಮಧುರ, ಮುರಳಿ, ಮಹಾಬಲ, ಶಿವರಂಜನಿ, ಸುಮಂತ್ ನಿಮ್ಮ ಮನೋಭೂಮಿಕೆಯಲ್ಲಿ ಮೈದಳೆದು, ಕಾದಂಬರಿಯೊಂದಿಗೆ ನಿಮ್ಮನ್ನು ಮೇಳೈಸಿಬಿಡುತ್ತಾರೆ.ನಿಧಾನವಾಗಿ ನಿಮ್ಮನ್ನು ಆಕ್ರಮಿಸುವ ಕಥೆ, ಪುಟಪುಟಕು ಕುತೂಹಲ, ಕೌತುಕತೆಗಳಿಂದ ಅಂತಿಮ ಪುಟದವರೆಗೆ ಕರೆದೊಯ್ದುಬಿಡುತ್ತದೆ. ಓದು ಮುಗಿದು ಕಾದಂಬರಿ ಕೆಳಗಿಟ್ಟ ಮೇಲೂ ಪಾತ್ರಗಳು ಕಾಡಲಾರಂಭಿಸಿ, ರೂಪಕ, ಪ್ರತಿಮೆ, ರಸಾನುಭಾವಗಳು ಚಿತ್ತದಂಬರದೊಳಗೆ ಚಿತ್ತಾರ ಮೂಡಿಸುತ್ತಾ ಚಿಂತನೆಗೆ ಒರೆ ಹಚ್ಚುತ್ತವೆ. ಇದು ಈ ಕಾದಂಬರಿಯ ವೈವಿಧ್ಯತೆಯೂ ಹೌದು. ವೈಶಿಷ್ಟ್ಯತೆಯೂ ಹೌದು.

ಚೊಚ್ಚಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ ಶ್ರೀಮತಿ ವೀಣಾ ರಾವ್ ಅವರನ್ನು ಅಭಿನಂದಿಸುತ್ತಾ, ಮತ್ತಷ್ಟು ಮಹೋನ್ನತ ಕೃತಿಗಳು ಅವರ ಲೇಖನಿಯಿಂದ ಮೂಡಿಬಂದು ಕನ್ನಡ ಕಾದಂಬರಿಲೋಕವನ್ನು ಶ್ರೀಮಂತಗೊಳಿಸಲೆಂದು ಹೃನ್ಮನದುಂಬಿ ಹಾರೈಸುತ್ತೇನೆ. ಕರುನಾಡಿನ ಓದುಗದೊರೆ ಈ ಕೃತಿಯನ್ನು ಕೊಂಡು ಓದಿ, ಮೆಚ್ಚಿ, ಮುದದಿಂದ ಲೇಖಕಿಯನ್ನು, ಪ್ರಕಾಶಕರನ್ನು ಹರಸಿ, ಇನ್ನಷ್ಟು ಕೃತಿಗಳಿಗೆ ಪ್ರೇರೇಪಿಸಲೆಂದು ಆಶಿಸುತ್ತೇನೆ.


Leave a Reply

Back To Top