ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಮಣ್ಣಲಿ ಬಿದ್ದ
ಕೆಸರು ಗೊಬ್ಬರವಾಗಿಸಿ
ಹಣ್ಣು ಹಂಪಲು ಕೊಟ್ಟರೂ
ಹರಿತ ಕೊಡಲಿಯ ಕಾವಿಗೆ
ಸಿಕ್ಕು ಕಡಿಯಲ್ಪಡುವದಕ್ಕೆ
ರೋಷ ಹೋಗಿದೆ ನನಗೆ
ಮರವಾಗಲಾರೆ ನಾನು

ಹರಿದರೂ ಮುರಿದರೂ
ಮೇಜು ಮಂಚವಾಗಿ
ಆಸರೆಯ ನೀಡಿದರೂ
ಮನೆಯಮಾಳಿಗೆಗೆ
ನಾಗೊಂದಿ ಮೇಲುಗಂಬವಾದರೂ
ಇಡೀ ಭಾರವ ಹೊತ್ತು
ಯುಗಮಾನಕಳೆದರೂ.
ಕಡೆಗೊಂದು ದಿನ
ಹಳತಾದೆನೆಂದು ಉರುವಲಾಗುವದು
ಸಾಕಾಗಿದೆ
ಮರವಾಗಲಾರೆ ನಾನು

ಕೂಸಿರುವಾಗಲೆ ತೊಟ್ಟಿಲಾಗಿ
ಅವ್ವನ ಜೋಗುಳಪದದ
ಲಾಲಿಯಾದರೂ
ಕಡೆಯವರೆಗೂ ಕಾದು
ಕೊನೆಗಾಲದಲೂ ನಾನೇ ಹೊತ್ತು ನಡೆದರೂ
ತಾ ಕೂತ ಕುರ್ಚಿಯನೆ ಮುರಿದು
ಮಾರುವ ಮರ್ಕಟ ಬುದ್ದಿಗೆ ಆಹುತಿಯಾಗಲಾರೆ
ಮರವಾಗಲಾರೆ ನಾನು

ಇದ್ದರೂ ಅವನ ಮನೆಯ
ಮನವ ಅಂದಗೊಳಿಸಿದರೂ
ಸತ್ತರೂ ಸುಟ್ಟು ಬೂದಿ ಗೊಬ್ಬರವಾದರೂ
ಉಸಿರು ಉಸಿರಲು
ಹೆಸರು ಬಯಸುವ ಅವನ‌ಮನೆಗೆ
ವಿಳಾಸದ ಗೋಡೆಯಾಗಲಾರೆ
ಸಾಕಾಗಿದೆ ನನಗೆ
ಅಂತೂ…

ಮರವವಾಗಲಾರೆ…ನಾನು


About The Author

Leave a Reply

You cannot copy content of this page

Scroll to Top