ಡಾ.ಡೋ.ನಾ.ವೆಂಕಟೇಶ ಕವಿತೆ-ಅನಾಮಿಕನ ಕೀಲಿ ಕೈ

ನನ್ನೊಳಗಿನ ಅನಾಮಿಕ
ಕಣ್ತೆರೆಸಿ ಹೋದ

ಬಾಲ್ಯ ಕೌಮಾರ್ಯ ಯೌವನಗಳ
ಸಂಘರ್ಷಗಳ ಸಂತೃಪ್ತಿಗಳ
ಸುಖ ದುಃಖ ದರ್ದು ಗಳ ಧರ್ಮಗಳ ರಗಳೆಗಳ
ಮೆರವಣಿಗೆ ನಡೆಸಿ ಹೋದ

ಬಾಲ್ಯದಲ್ಲಿ ಕಳೆದು ಹೋಗಿದ್ದ
ಕೀಲಿ ಕೈ ಕೈಗಿಟ್ಟು ನಡೆದ
ಮುಂದಿನ ನಿಲ್ದಾಣದಲ್ಲಿ-

ಅವನೆಲ್ಲೋ ಈಗ
ಬೀಗವೇ ಮೊದಲಿನಂತಿಲ್ಲ!
ಮಿದುಳಿನೊಳಗಣ ಬುದ್ಧಿ ಸ್ರಾವವಾಗಿದೆ
ಹೃದಯದೊಳಗಣ
ರಕ್ತ ಹೆಪ್ಪುಗಟ್ಟಿದೆ
ಮೇಳೈಸಿದೆ ಜೀವನದ
ತಪ್ಪು ಒಪ್ಪುಗಳ ಸಂತೆ!

ಬೀಗಕ್ಕೆ ಬೇಕೀಗ
ನೀತಿ ಪಾಠ ತೈಲದ ಕಂತೆ.
ಕೀಲಿ ಕೈಗೀಗ ಬೇಕು ಹೊಸತಾದ ಹಳೆ ಪಾಠ!

ಮಿಕಗಳಿಗೆ ಬೇಕು
ಅನಾಮಿಕ ಕಮ್ಮಾರನ ಕಾಯ
ಬೀಗವೂ ಅವನೇ
ಬೀಗದ ಕೈಯೂ ಅವನೇ!

ಮರೆತಿದ್ದೆ-
ಸಂಜೆಯಾಗಿ ಮಬ್ಬುಗತ್ತಲು ಕವಿದು
ದೇಹ ಇಲ್ಲವಾಗುವ ಮೊದಲು
ಸುಣ್ಣ ಬಣ್ಣದ ಅಂದ ಚೆಂದದ
ಕನಸು ಕಮರಿ ಹೋಗುವ ಮೊದಲು ನನಸಿನ ಬೆಳಕಲ್ಲೊಮ್ಮೆ
ಕಣ್ತುಂಬಿಸಿ ಕೊಳ್ಳುವಾಸೆ. ಅದಕ್ಕೇ ಮತ್ತೊಮ್ಮೆ ಮಗದೊಮ್ಮೆಪ್ರಾರ್ಥನೆ!

ಈಗ
ಕೀಲಿಗೇ ತುಕ್ಕು!
ಕೈ ಯಿಂದ ತೆರೆಯಲಾಗುತ್ತಿಲ್ಲ
ಬಾಯಿಂದ ಕರೆಯಲಾಗುತ್ತಿಲ್ಲ

ಬಾ ಅನಾಮಿಕ ಬಾ
ಬರದಿರ ಬೇಡ
ಅಂತರ್ಧಾನನಾಗಿ ಬಾ
ಅನಾಮಿಕನಾಗಿಯೇ ಬಾ!!


13 thoughts on “ಡಾ.ಡೋ.ನಾ.ವೆಂಕಟೇಶ ಕವಿತೆ-ಅನಾಮಿಕನ ಕೀಲಿ ಕೈ

  1. ತುಂಬಾ ಒಳ್ಳೆಯ ಕವನ.ಬಹಳ ಅರ್ಥ ಪೂರ್ಣ ಮತ್ತು ಭಾವನಾತ್ಮಕವಾಗಿದೆ

  2. ವೆಂಕಟೇಶ್, ನಮಸ್ಕಾರ. ನಿಮ್ಮ ‘ಅನಾಮಿಕ ಕೈಲಿ ಕೀ” ಕವನ ನನಂಥವರ ಅಂತ್ಯವನ್ನು ಬಡಿದೆಚ್ಚರಿಸುವ ವಿಶಿಷ್ಟ ರಚನೆ! ನನಗೊಬ್ಬನಿಗೋ ಅಥವ ನನ್ನಂಥ ವಯೋವೃದ್ಧರೆಲ್ಲರ ಅದ್ಭುತ ಎಚ್ಚರಿಕೆ.ಘಂಟೆಯೋ…? ನಾನರಿಯೆ. ಅಭಿನಂದನೆಗಳು ನಿಮಗೆ.

    1. ನೀವು ಅರಕಲಗೊಡು ನೀಲಕಂಠಮೂರ್ತಿ ನನ್ನಕ್ಲಾಸ್ ಮೇಟಾ ನಾನು HTನಿರ್ಮಲಾ?

Leave a Reply

Back To Top