ಶಂಕರಾನಂದ ಹೆಬ್ಬಾಳ-ಗಜಲ್

ಕಾವ್ಯ ಸಂಗಾತಿ

ಗಜಲ್

ಶಂಕರಾನಂದ ಹೆಬ್ಬಾಳ

ಹೃದಯ ಸಂದೂಕಕ್ಕೊಂದು ಬೀಗ
ಜಡಿದಿದ್ದೇನೆ ಇಂದು
ಕದನಗೈದು ಕ್ರೋಧವೆಂಬ ವಿಷವ
ಕುಡಿದಿದ್ದೇನೆ ಇಂದು

ತಪ್ತ ಕನಸುಗಳ ಮೂಟೆ ಕಟ್ಟಿ
ಮೂಲೆಗೆಸೆದೆ ಏತಕೆ
ಸುಪ್ತ ಮನಸ್ಸಿನ ಅನುರಾಗಕೆ
ತುಡಿದಿದ್ದೇನೆ ಇಂದು

ಪ್ರೀತಿಯ ಗಲ್ಲಾಪೆಟ್ಟಿಗೆಯು
ಖಾಲಿಯಾಗಿದೆ ನೋಡು
ಭೀತಿಯ ಮೊಳೆಗಳ ಸುತ್ತಲೂ
ಬಡಿದಿದ್ದೇನೆ ಇಂದು

ಗರಿಮುರಿದ ಹಕ್ಕಿಯಂತೆ ಒದ್ದಾಡಿ
ಹೋಗುತಿರುವೆ
ಮುರಿದ ವೀಣೆಯಲಿ ಒಲವ
ಮಿಡಿದಿದ್ದೇನೆ ಇಂದು

ನಡೆವ ದಾರಿಯಲಿ ಮುಳ್ಳುಗಳ
ಹಾಕದಿರು ಅಭಿನವ
ಸೆಡುವ ತೊರೆಯುತ ದುಃಖದಲಿ
ನಡೆದಿದ್ದೇನೆ ಇಂದು


Leave a Reply

Back To Top