ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬೇಸಿಗೆ ವಿಶೇಷ

ವರ್ಷನಾಟ್ಯವ ಮಾಡು ತಡವೇತಕೆ

ವತ್ಸಲಾ ಶ್ರೀಶ ಕೊಡಗು

.

ಇಳೆಯ ಮೈ ಸುಡುತಿಹುದು ಚಿಗುರಿಲ್ಲ ಹಸಿರಿಲ್ಲ
ಬಸವಳಿದ ತನುವ ನೀ ತಂಪಾಗಿಸು|
ನಳನಳಿಪ ತಿಳಿ ಹಸಿರ ದಾವಣಿಯ ತೊಡಿಸಿಬಿಡು
ಸಿರಿಗೌರಿಯಾಗುವಳು ಧರಣಿ ಮುದದಿ||

ಗಗನದೂರಲಿ ಮೋಡ ಹುಸಿಮುನಿಸ ತೋರುತಿರೆ
ಪವನ ನೀ ರಮಿಸೆ ಒಲುಮೆಯ ತೋಳ ಚಾಚು|
ಬಿರುಬಿಸಿಲ ಚಾದರವ ಮಡಚಿ ಸೂರಿನಲಿರಿಸಿ
ಇಳೆಯ ಸೆರಗಲಿ ಹನಿಯ ಕುಸುರಿ ಬಿಡಿಸು||

ಮುಗಿಲ ಹಾಳೆಯ ಮೇಲೆ ಕೋಲ್ಮಿಂಚ ಚಿತ್ತಾರ
ಬರೆಯೆ ಮರೆತಿಹೆಯೇನು ಮೇಘರಾಜ|
ಏಕೆ ಆಲಸ್ಯವಿದು ಇನ್ನೇಕೆ ಮೌನವಿದು
ಓ ನಭದ ಬಾಂಧವನೆ ಗರ್ಜಿಸುತ ಬಾ||

ಜಗದ ಪ್ರಾರ್ಥನೆ ಕೇಳು ಭುವಿಯ ಓಲೆಯ ಓದು
ಚುಂಬನದಿ ತಣಿಸು ನೀ ನೆಲದ ಬೇಗೆ|
ಮಳೆಮುತ್ತ ನೂಪುರವ ಧರಿಸಿ ನೀ ಧರೆಗಿಳಿದು
ವರ್ಷನಾಟ್ಯವ ಮಾಡು ತಡವೇತಕೆ||


About The Author

9 thoughts on “”

    1. ಲೋಕನಾಥ್ ಅಮಚೂರು

      ಮಳೆಯ ಸಿಂಚನದ ಕವಿತೆ ಬಹಳ ಉತ್ತಮ ವಾಗಿ ಮೂಡಿಬಂದಿದೆ. ಧನ್ಯವಾದಗಳು ಮೇಡಮ್.

  1. ಕವನ ಅರ್ಥಗರ್ಭಿತವಾಗಿದೆ ಮತ್ತು ಸಾಂದರ್ಭಿಕವಾಗಿದೆ.

Leave a Reply

You cannot copy content of this page

Scroll to Top