ಸೋಲು

ಕಾವ್ಯ ಸಂಗಾತಿ

ಸೋಲು

ಬಿ.ಶ್ರೀನಿವಾಸ

ಯಾವ ಮಗುವಿನದೋ
ಎನಿತು ಭಾವದುಂಬಿ ಹೊರಬಿದ್ದಿತ್ತೋ
ಬಿರಿದ ತುಟಿಗಳಾಚೆ ಪುಳಕ್ಕನೆ ಜಿಗಿದು ಹೀಗೆ

ಮುಗ್ಧ ನಗುವ ಸುತ್ತಿದ
ತುಂಡು ಬಟ್ಟೆಗೂ ಅಂಟಿದೆ ಅತ್ತರಿನ ಘಮಲು

ಆಚೆ ಯಾರದೋ ಬಿಕ್ಕು ಮತ್ಯಾರದೋ ರಕ್ತ
ಹೆತ್ತವರ ಮುಂದೆಯೇ ಹರಿಯುತಿದೆ ಮಕ್ಕಳ ನೆತ್ತರು!

ಸಾಲಿಗೆ,ಬಜಾರಿಗೆ ಹೋದರೂ ಜೊತೆಯಲಿರಲೇಬೇಕೀಗ ಅಸಹಾಯಕ ದೇವರು!

ಆ ದೇವನಿಗೆ
ಈ ದೇವ
ವಿರುದ್ಧ ಪದವಾದ ದುಃಖ
ಬೆತ್ತಲಾದ ಬಟ್ಟೆಯದೇ ಸುದ್ದಿ ಸದ್ಯದ ಸಂತೆಯಲಿ

ಶರೀಫ
ಸಾಬರನಂತೆ ಹೌದಾ?
ಕೇಳುವನೊಬ್ಬನೀಗ
ಹುಲಗೂರ ಸಂತಿಯಲಿ!

ಹೆತ್ತವರು,
ಮೇಷ್ಟರು,
ಲೋಕದ ಸಾಲಿಯಲಿ ಸೋತ ಸುದ್ದಿಯಿದೆ.


Leave a Reply

Back To Top