ವ್ಯಾಲಂಟೈನ್ ವಿಶೇಷ

ಯಾವ ಪ್ರೇಮಿಗಳೂ ಬಾರದಿರಲಿ..

ಬಿ.ಶ್ರೀನಿವಾಸ

ಪ್ರೇಮಿಗಳು ಆಗೋದು ಎಂದರೆ…
ರಾಮ
ಏಸು
ಅಲ್ಲಾ..
ಪರಸ್ಪರ ಬೀಗರಾಗೋದಷ್ಟೇ ಅಲ್ಲ
ಮನುಷ್ಯರಾಗೋದು

ತೇಲುವ ಅಲೆಗಳ
ಅವಳ ಕಣ್ಣರೆಪ್ಪೆಗಳ ಮಾತು,
ಬೆಂದ ಅಡಿಗೆಯ
ಅವಳ ಬೇಯುವ ದುಃಖ ಕೇಳುವುದು

ಒಂದು ಹೂ..
ಒಂದು ಶಾಲು
ಒಂದು ಹಿಜಾಬು,
ನಿರ್ಧರಿಸುವಂತಿದ್ದರೆ..
ಆಗುತ್ತಿತ್ತು
ಸರಕಾರದ ಸರಕು

ಮಂದಿರ
ಮಸೀದಿ
ಚರ್ಚು
ನಿರ್ಧರಿಸಿದರೂ
ಆಗುತ್ತಿತ್ತು ಸಜಾ ಬಂದಿ

ಸರಕಾಗದ
ಬಂದಿಯಾಗದ
ಪ್ರೇಮಿಗಳ ಪಯಣಕೆ
ಅವಧಿ ಕಡಿಮೆ
ನೆನಪು ಅಪಾರ

ಪ್ರೇಮಿಗಳ ಈ ದಿನ…
ಪಾರ್ಕಿನ ಮೂಲೆಯ ಕಲ್ಲು ಬೆಂಚೂ ಬಿಕ್ಕುತಿದೆ

ಪಿಸುಮಾತುಗಳಿಗೂ ಅರಳುವ ಹೂಗಳು
ಏಕೋ ಮೌನವಾಗಿವೆ

ಯಾವ ಪ್ರೇಮಿಗಳೂ ಬಾರದಿರಲಿ
ಕೋರ್ಟಿಗೆ ಈ ದಿನ
ಹಾರೈಸುತ್ತಿದೆ ಮನ


Leave a Reply

Back To Top