ಕನ್ನಡಿ ಮುಂದಿನ ನಗ್ನ ಚಿತ್ರಗಳು

ಪುಸ್ತಕ ಸಂಗಾತಿ

ಕನ್ನಡಿ ಮುಂದಿನ ನಗ್ನ ಚಿತ್ರಗಳು

ನಗ್ನ ಚಿತ್ರಗಳ ಬಿಂಬ ಸೆರೆಹಿಡಿದ ಕವಿ ನೋಟದ ಕನ್ನಡಿ…….

ಸಮಾಜ ವಿಷಮ ಘಟ್ಟದಲ್ಲಿದ್ದಾಗ ಅನೈತಿಕತೆ,ದುರಾಡಳಿತ, ಸ್ವೇಚ್ಛಾಚಾರ,ದಬ್ಬಾಳಿಕೆಯನ್ನು ಖಂಡಿಸಿ ಧ್ಯೇಯ ಆದರ್ಶಗಳನ್ನು ಎತ್ತಿ ಹಿಡಿಯುವಲ್ಲಿ ಯುವಜನರಲ್ಲಿ ಮತ್ತೆ ಅವುಗಳನ್ನು ಮೂಡಿಸುವಲ್ಲಿ ಚಿಂತಕರ, ತತ್ವಜ್ಞಾನಿಗಳ, ಸಾಹಿತಿಗಳ ಪ್ರಯತ್ನ ನಿರಂತರ, ಇಂತಹದೇ ಪ್ರಯತ್ನವಾಗಿ ಇಲ್ಲಿನ ಗಜಲ್ ಗಳನ್ನು ವಿಶ್ಲೇಷಿಸಬಹುದು.

ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕಿನ ದಂಡಳ್ಳಿಯ ಯುವಕ ಶ್ರೀ ಪ್ರಶಾಂತ ಅಂಗಡಿ, ಶ್ವೇತಪ್ರಿಯ ಎಂಬ ಕಾವ್ಯನಾಮದಿಂದ ತಮ್ಮ ಗಜಲ್ ಬರೆಹ ಯಾನದಲ್ಲಿರುವರು. ಇವರ ಈ ಕೃತಿ ಕರ್ನಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಇವರ ಧನ ಸಹಾಯ ಪಡೆದಿದೆ. ಇಲ್ಲಿನ ಗಜಲ್ ಗಳು ಸಾಮಾಜಿಕ ಅಸಮಾನತೆ, ರಾಜಕೀಯ ವಿಡಂಬನೆ, ಕೃಷಿ ಬದುಕಿನ ಒಳನೋಟ, ಹೆತ್ತವರ ಬಗೆಗಿನ ಆಳವಾದ ಪ್ರೇಮ, ಮತ್ತು ಒಲವಿನ ರಂಗೋಲಿಯ ಗೆರೆಗಳನ್ನು ಒಳಗೊಂಡ ಸುಂದರ ಅರವತ್ತು ಗಜಲ್ ಗಳ ಗುಚ್ಚವಾಗಿ ನಮ್ಮ ಕೈಸೇರಿದೆ.

“ಹತ್ತುಸಲ ಮರಣಯಾತನೆಯನ್ನು ಅನುಭವಿಸಬೇಕಾಗಿ ಬಂದರು ನನ್ನ ನಡತೆಯನ್ನೇನು ಬದಲಾಯಿಸಲಾಯಿಸುವದಿಲ್ಲ ಎಂಬುದನ್ನು ಮಾತ್ರ ತಿಳಿಯಿರಿ” ಎನ್ನುತ್ತಾನೆ ಗ್ರೀಸ್ ನ ತತ್ವಜ್ಞಾನಿ ಸಾಕ್ರೆಟಿಸ್.ಜೈಲಿನ ಸೇವಕ ಕೊಟ್ಟ “ಹೇಮ್ಲಾಕ್” ವಿಷ ಸೇವನೆಗೂ ಮುನ್ನ ಅವನ ತಪ್ಪೊಪ್ಪಿಗೆ ಹೇಳಿಕೆಗೆ ಆಗ್ರಹಿಸುವ ಜೈಲಿನ ಅಧಿಕಾರಿಗೆ ಹೇಳಿದ ಕೊನೆಯ ಮಾತಿದು. ಇಂತಹ ದಾಷ್ಟ್ಯತನ ಸಮಾಜ ಸುಧಾರಕ, ಲೋಕ ಚಿಂತಕ, ಲೋಕದ ಹಿತೈಷಿಗಳಿಗಲ್ಲದೆ ಭ್ರಷ್ಟ ಮನಸ್ಥಿತಿಯಲ್ಲಿ ಲೋಕ ದೇಳ್ಗೆ ಯ ವಿಚಾರಗಳು ಮೂಡಲಾರವು ಇಲ್ಲಿ ಇಂತಹದ್ದೇ ಪದಾಕ್ರೋಶ.

ಇಲ್ಲಿನ ಬಹುತೇಕ ಗಜಲ್ ಗಳು ಭಾವಗೀತಾತ್ಮಕವಾದ ಮಧುರ ಬಂಧದಲ್ಲಿ ಕಟ್ಟಿ ಕೊಟ್ಟಿದ್ದರೂ ಅಭಿವ್ಯಕ್ತಿಯ ಸಿಡಿಲಾಗಿ ಕೋರೈಸುವ ಶೇರ್ ಗಳೇ ಹೆಚ್ಚಾಗಿವೆ. ತನ್ನ ಸುತ್ತ ಮುತ್ತಲಿನಲ್ಲಿ ನೋಡಿದ,ಅನುಭವಿಸಿದ ಕಷ್ಟ,ದಾರಿದ್ರ್ಯ,ತಾರತಮ್ಯ,ಬಡವರ ಬವಣೆ, ಆಡಳಿತಗಾರರ ಭ್ರಷ್ಟತೆ, ಜಾತಿ ಓಲೈಕೆ, ಒಡೆದಾಳುವ ಸಂಚು ಎಲ್ಲವನ್ನೂ ಕವಿ ಬಹು ನಿರ್ಭಿಡೆಯಿಂದ ತನ್ನ ಗಜಲ್ ಗಳಲ್ಲಿ ಉಲ್ಲೇಖಿಸಿ ಜಾಡಿಸಿದ್ದಾನೆ, ಖಟು ಪದಗಳಲ್ಲಿ ರೂಪಕಗಳಲ್ಲಿ ವಿಡಂಬಿಸಿ ಲೇವಡಿಯಾಡಿದ್ದಾನೆ.ಇಂತಹ ಒಂದಷ್ಟು ಶೇರ್ ಗಳನು ಉದಾಹರಣೆಗೆ ನೀಡುವುದಾದರೆ….

ಗಜಲ್  01

ಬೆದರುಗೊಂಬೆಗೆ ನೆದರು ಬಿದ್ದಿದೆ ನೆರಳು ಗದರಿ ನಿಲ್ಲುವಂತೆ

ಹೆಜ್ಜೆ ಹೆಜ್ಜೆಗೂ ಜಾತಿಯ ಗಡಿ ರೇಖೆಗಳಿವೆ ಏನು ಮಾಡಲಿ

ಹೊಲದಲ್ಲಿ ಹಕ್ಕಿ ಪಕ್ಷಿಗಳನ್ನು ಮೋಸಗೊಳಿಸಲು ತನ್ನ ಬೇಳೆ ಕಾಯ್ದುಕೊಳ್ಳಲು ರೈತಾಪಿ ಜನ ಮನುಷ್ಯನೊಬ್ಬ ಅಲ್ಲಿ ಸದಾ ಕಾವಲಿರುವಂತೆ ಕಾಣುವ ಬೆದರು ಬೊಂಬೆಯನ್ನು ಹೊಲದಲ್ಲಿ ನೆಡಾಕಿರುತ್ತಾರೆ ಅದರ ನೆರಳು ಕೂಡ ನಡುಗುವಂತೆ,ಅಂದರೆ ಜೀವವಿಲ್ಲದ ಬೊಂಬೆ ಮತ್ತದರ ನೆರಳು ಎಂಥ ರೂಪಕವಿದು ಈ ನೆರಳು ಹೆದರುವಂತೆ ಹೆಜ್ಜೆ ಹೆಜ್ಜೆಗೂ ಎಲ್ಲರಲ್ಲಿಯೂ, ಎಲ್ಲೆಂದರಲ್ಲಿ ಜಾತಿಯ ಗಡಿರೇಖೆಗಳನ್ನು ಎಳೆದು ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಇಂದಿನ ವಿದ್ಯಮಾನದ ಕುರಿತು  ಅಸಮಾಧಾನವಿದೆ.

ಗಜಲ್  4

ಹುಟ್ಟು ಸಾವಿನ ಮಧ್ಯ ಮನುಷ್ಯತ್ವ ಹುಟ್ಟಲಿ ಅದುವೇ ಜೀವನ

ಸತ್ತ ಹೃದಯ ಮೌನತಾಳಿ ಸೋಲುವದೇನು ಹೊಸತಲ್ಲ ಬಿಡು

ಅಪಘಾತದಲ್ಲಿಯೋ, ದುರಂತದಲ್ಲಿಯೋ, ಜೀವಗಳು ನರಳುತ್ತಿದ್ದರೆ ಅವರನ್ನು ರಕ್ಷಿಸದೆ,ಉಪಚರಿಸದೆ ಅದನ್ನು ಚಿತ್ರಿಸಿ ಜಾಲತಾಣಗಳಿಗೆ ರವಾನಿಸುವ ಇಂದಿನ ಆಧುನಿಕರ ಸಂವೇದನಾಹೀನ ಮನ ಕಂಡು ಹುಟ್ಟು ಸಾವಿನ ನಡುವಲ್ಲಿ ಒಮ್ಮೆಯಾದರೂ ಅವರಲ್ಲಿ ಮನುಷ್ಯತ್ವ ಜಾಗೃತವಾಗಲಿ ಹೃದಯ ಒಳ್ಳೆಯದನ್ನು ಆಚರಿಸಲು ಮಿಡಿಯಲಿ ಅದುವೇ ಜೀವನ,ಆಗಲೇ ಬದುಕು ಗೆಲ್ಲುವುದು ಇಲ್ಲದಿದ್ದರೆ ಮಾನವನ ಬದುಕು ಸೋಲುವುದು ನಿಶ್ಚಿತ ಅದಾಗದಿದ್ದರೆ ಅದು ಸತ್ತ ಹೃದಯ ಅದು ಮೌನತಾಳುವುದು ಸಹಜ ಎನ್ನುವ ಅಂಬೋಣ.

ಗಜಲ್  8

ಉಸಿರಿಗೆ ಬೆಲೆ ಕಟ್ಟಿ ಹರಾಜು ಕೂಗಿದ್ದಾರೆ

ಅವನ ಗಜಲಿಗೆ ಬೆಲೆ ಇನ್ನೂ ನಿಗದಿಯಾಗಿಲ್ಲ

“ರವಿ ಕಾಣದ್ದನ್ನು ಕವಿ ಕಾಣ್ವ”  ಎನ್ನುವ ಮಾತಿದೆ ಇಂಥಹ ಕವಿಗೆ ಬೆಲೆ ಕಟ್ಟಿ ಅವನ ಬದುಕನ್ನು ಹಣ ಅಂತಸ್ತಿನಿಂದ ಅಳೆದು ಹರಾಜು ಕೂಗಿದ್ದಾರೆ ಆದರೆ

ಅವನ ಗಜಲಿಗೆ ಇನ್ನೂ ಬೆಲೆ ನಿಗದಿಯಾಗಿಲ್ಲ, ಲೋಕ ಚಿಂತಕರ ವಿಚಾರಗಳನ್ನೂ, ಕಾಣಿಸಿದ ದಾರಿಯನು ಅನುಸರಿಸಬಹುದು, ಅಳವಡಿಸಿಕೊಳ್ಳಬಹುದೇ ಹೊರತು ಅಳಿಸಲು ನೋಡುವುದು ಬೆಲೆ ನಿಗದಿಮಾಡುವುದು ಮೂರ್ಖತನ .

ಗಜಲ್  9

ಚರ್ಚು ಮಸೀದಿ ಗುಡಿಗಳಲ್ಲಿ ಬೆತ್ತಲಾಗಿ ಮಲಗಿದ್ದಾನೆ ಹೆಸರಿಡಬೇಡ

ಅವನು ಗಜಲಿನ ನಶೆಗೆ ಮಧುಶಾಲೆಗೆ ಹೋದವನು ಹೇಗೆ ತಡೆಯಲಿ

ಧರ್ಮಗಳ ಕಾರ್ಯಸ್ತಾನ ಅದರ ಪವಿತ್ರ ತಾಣಗಳು, ಅಲ್ಲಿಯೇ ಕವಿ ಇಂತಹ ಧರ್ಮದಿಂದ ಬಂದಿದ್ದಾನೆ ಎಂದು ತೋರುವ ಧರ್ಮದ ಬಟ್ಟೆ , ಲಾಂಛನ ಮೇಲು ವಸ್ತ್ರದ ಹಂಗು ತೊರೆದು ಬೆತ್ತಲಾಗಿದ್ದಾನೆ ಅಲ್ಲದೆ ಅವನು ಗಜಲ್ ನ ನಶೆಗಾಗಿ ಮಧುಶಾಲೆಗೆ ಹೋಗಿದ್ದಾನೆ ಅವನನ್ನು ನಾನು ತಡೆಯಲಾರೆ ಆಕ್ಷೇಪಿಸಲಾರೆ ಇದು ನಡೆಯ ಬೇಕಾದ ನಡೆ ಎನ್ನುತ್ತದೆ. ಮಧುಶಾಲೆ ಚಿಂತನಾ ಕೂಟವಾಗಿ ಗಜಲ್ ಅಲ್ಲಿಂದ ಹೊಮ್ಮಿದ ಪಾಕ ಪರಿಮಳ,ಈ ಶೇರ್ ಮನುಜ ಮತ ಸಾಗಬೇಕಾದ ಹಾದಿಯ ದಿಕ್ಸೂಚಿಯಾಗಿದೆ.

 ಗಜಲ್  15

ವ್ಯವಸಾಯಿಕ ಅಪ್ಪನ ಜೀವನವನ್ನು ವ್ಯವಸಾಯದ ಪರಿಕರ ಮತ್ತು ಪರಿಸ್ಥಿತಿಯ ಸಾದೃಶ್ಯಗಳೊಂದಿಗೆ ಹೋಲಿಸಿ ಬರೆದ ಮನಮಿಡಿಯುವ ಗಜಲ್ ಆಗಿದೆ

ಗಜಲ್  17

ಕಲ್ಹೊಡೆದ ಕೈಗಳ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು

ಚೂರು ಸೂರಿಗೆ ಬೆಟ್ಟ ಗುಡ್ಡಗಳೇ ನೀರಾಗಿದೆ ಸಾಕಿ

ಕಲ್ಲು ಹೊಡೆಯುವ ಕಲ್ಲು ಕುಟಿಕರ ಕೈಯಲ್ಲಿ ಎದ್ದ ಬೊಬ್ಬೆಯ ಅಳಲಿಗೆ ಕಿವಿಗೊಡಬೇಕಿತ್ತು ಅವರ ಸಣ್ಣ ಸೂರಿನ  ಅಗತ್ಯತೆಗಳಿಗಾಗಿ ಬೆಟ್ಟ ಗುಡ್ಡಗಳು ಕೂಡ ಮಿದಿಡಿವೆ ಎನ್ನುವ ವಾಚ್ಛಾರ್ಥ ಕಂಡರೂ ಕಲ್ಲು ಎಸೆಯುವ ಸಮಾಜ ಘಾತುಕರಿಗಳಿಗು ಕಿವಿಗೊಡೋಣ ಅವರ ಸಣ್ಣ ಅತೃಪ್ತಿಗಾಗಿ ದೊಡ್ಡ ಬೆಟ್ಟವನ್ನೆ ಕರಗಿಸುತ್ತಾರೆ ಎನ್ನುವ ಎಚ್ಚರಿಕೆಯ ಮಾತು ಇಲ್ಲಿ ಅರ್ಥೈಸಬಹುದು.

ಗಜಲ್  21

ಸರ್ವಜ್ಞ ಬಗ್ಗೆ ಗಜಲ್ ಗೋ ರಿಗೆ ಇರುವ ಅಭಿಮಾನ ಗಜಲ್ ಆಗಿ ಕಳೆಗಟ್ಟಿದೆ.

ಗಜಲ್ 33 ಕರೋನಾದ ಭೀಕರತೆ,ಕಾರಣ ವಿವರಿಸುವ ಗಜಲ್ ಆಗಿದೆ.

ಗಜಲ್ 29

ಸತ್ಯದ ಮುಖ ಹುಡುಕದಿರು ನಿನ್ನುಸಿರ ಕಪ್ಪ ಕೇಳುತ್ತಾರೆ

ಅವುಡುಗಚ್ಚಿದ ನಾಲಿಗೆಗಿಂದು ಕದನದ ಆಪತ್ತು ಒದಗಿದೆ

ಸತ್ಯವನ್ನು ಆಚರಿಸುವುದು ಅದನ್ನು ಹುಡುಕಾಡುವಂತ ಸ್ಥಿತಿ ಈಗ ನಿರ್ಮಾಣವಾಗಿದೆ, ಒಂದುವೇಳೆ ಹುಡುಕಲು ಹೋದರು ಅದಕ್ಕಾಗಿ ಪ್ರಾಣವನ್ನೇ ತೆರಿಗೆಯಾಗಿ ಕಟ್ಟಬೇಕಾದ ಪರಿಸ್ಥಿತಿ ಒದಗಿದೆ ಅಲ್ಲದೆ ಇದೆಲ್ಲವನ್ನೂ ಬಾಯಿ ಮುಚ್ಚಿ ಸಹಿಸಿದರೂ ಎಂದಾದರೂ ಒಮ್ಮೆ ಇದು ತಮಗೆ ತಿರುಗುಬಾಣವಾಗುವ ಭಯದಿಂದ ಸಾಮಾನ್ಯರ ನಾಲಿಗೆಗೂ ಸಂಚಕಾರ ತರುವರು ಎನ್ನುವ ದ್ರೋಹಿಗಳ ಹುನ್ನಾರದ ವಾಸ್ತವ.

ಗಜಲ್ 30

ಅದೆಷ್ಟೋ ಬಾರಿ ಹಸಿದ ಹೊಟ್ಟೆಗೆ ಬಹಿಷ್ಕಾರ ಹಾಕಿದ್ದಳು ನನ್ನವ್ವ

ಪಾದದ ಧೂಳಿಗೆ ಗಡಿಪಾರು ಹಾಕಲು ನನ್ನಪ್ಪನ ದುಬ್ಬ ಸೋತಿತ್ತು

ಈ ಶೇರ್ ಅಪ್ಪ ಅವ್ವ ಸವೆಸುವ ಬದುಕಿನ ಹಾದಿಯ ಧಾರುಣತೆಯನ್ನು ತೋರುಗಾಣಿಸಿದಂತೆ ಕಂಡರೂ ಸ್ವತಂತ್ರ ಭಾರತದ ಬಹುಪಾಲು ಜನ ಅನ್ನವಿಲ್ಲದೆ ,ಸೂರಿಲ್ಲದೆ ಆಸರೆಯ ಬಲವಿಲ್ಲದೆ ಬದುಕುತ್ತಿರುವ ಬದುಕಿಗೆ ಸಾಕ್ಷಿಯಾಗಿ ಶೇರ್ ದಾಖಲಾಗಿದೆ.

ಗಜಲ್  35

ಎಲುಬಿಲ್ಲದ ನಾಲಿಗೆ ದೇಶವಿರೋಧಿ ಜೈಕಾರ ಹಾಕಿದೆ ಸುಟ್ಟುಬಿಡುಶ್ವೇತಪ್ರಿಯ

ಸಾವು ಬಯಸಿದರೆ ಮಸಣದ ಮೆಟ್ಟಿಲು ತಿರಸ್ಕರಿಸಿ ಹಾರೈಸುವಂತೆ ಇರಬೇಕು

ಈ ಶೇರ್ ಕವಿಯ ದೇಶಪ್ರೇಮವನ್ನು  ಸಾರುತ್ತಿದೆ ದೇಶವಿರೋಧಿ ಜೈಕಾರ  ಹಾಕುವ ಎಲುಬಿಲ್ಲದ ನಾಲಿಗೆಯನ್ನು ಸುಟ್ಟುಬಿಡು ಅಲ್ಲದೆ ಮಸಣದ ಮೆಟ್ಟಿಲು ಕೂಡ ನಿನ್ನ ಸಾವನ್ನು ತಿರಸ್ಕರಿಸುವಂತೆ ಅಲ್ಲಿಯೇ ಬದುಕಿಬಿಡು ಎಂದು ಹೇಳುವ ಉತ್ಕಟ ದೇಶಪ್ರೇಮವಿದು ಅಪ್ಪಟ ದೇಶ ಭಕ್ತನ ಮನದಾಳದ ಹೆಬ್ಬಯಕೆಯಿದೆ ಇಲ್ಲಿ.

ಗಜಲ್ 56

ಆರಿಂಚಿನ ಎದೆ ಬಂಜರೆಂದು ತಿಳಿಯದೆ ಬೀಜ ಬಿತ್ತಿದ್ದಾನೆ ಶ್ವೇತಪ್ರಿಯ

ತೆರಿಗೆಯ ಮಳೆ ಸುರಿದರೂ ಬರಗಾಲದ ವೈರಸ್ ಒಕ್ಕರಿಸಿ ಬಿಕ್ಕಳಿಸಿದೆ

ಬಂಜರಿನಲ್ಲಿಯು ಕೂಡ ಬಿತ್ತನೆ ಮಾಡಿ,ತೆರಿಗೆಯ ಮಳೆ ಸುರಿದರೂ, ಬರಗಾಲದ ವೈರಸ್ ಆ ಬೆಳೆಯನ್ನು ನಾಶಪಡಿಸುತ್ತಿದೆ ಫಸಲಿಗಾಗಿ ಕಾಯುತ್ತ ಕೂತಿರುವ ರೈತನ ಪರಿಸ್ಥಿತಿಯ ಅರ್ಥದೊಂದಿಗೆ  ಎದೆ ಬಂಜರು ಬಿತ್ತಬಾರದಾಗಿತ್ತು ತಾನು ನಂಬಬಾರದ್ದಲ್ಲಿ ನಂಬಿದ್ದನ್ನು ಅದು ಆಗಬಾರದ ಕೇಡಾಗಿ ಘಟಿಸಿದ್ದರ ವಿಷಾದ ಧ್ವನಿಸುತ್ತದೆ. ಆರಿಂಚಿನ ಇದೆ ಇನ್ನೊಂದು ವಾಸ್ತವಿಕವಾದ ಸಧ್ಯದ ಮತ್ತೊಂದು ಹೊಳವನ್ನು ನೀಡುತ್ತಿದೆ.

ಪ್ರೇಮ, ವಿರಸ ,ದಾಂಪತ್ಯ ಸವಿಯ ಅನೇಕ ಗಜಲ್ ಗಳು ಇದ್ದರೂ ಸಮಕಾಲೀನ ವಿಷಯಗಳಲ್ಲಿನ ಸಂದಿಗ್ಧತೆ ಸೂಚಿಸುವ ಗಜಲ್ ಗಳ ಸದ್ದೆ ಇಲ್ಲಿ ಹೆಚ್ಚು ಕೇಳಿಬರುತ್ತದೆ. ಇಲ್ಲಿನ ಗಜಲ್ ಗಳು ಹತ್ತು ಹಲವಾರು ವಿಷಯಗಳನ್ನು ಧ್ವನಿಸಿದರು ಅದನ್ನೇ ಇನ್ನೂ ನಯವಾಗಿ,ಸೂಚ್ಯವಾಗಿ ತಿಳಿಸುವ ಉಮೇದು ಇದ್ದಂತಿಲ್ಲ ಹೊಸೆದ ಸಾಲು ಆಕಾಶಕ್ಕೆ ಗುರಿಯಾಗಿರಬೇಕು ಅದು ಸೂರ್ಯನಿಗೋ, ಚಂದ್ರನಿಗೊ,ನಕ್ಷತ್ರಗಳಿಗೋ ಇತ್ಯಾದಿ ಕಲ್ಪನೆ ಹೊಸ ಹೊಳವು ನೋಡುಗ, ಓದುಗರಲ್ಲಿ ಮೂಡಿಸಿದಾಗಲೇ ಕವಿತೆಗೆ ಸಮಾಧಾನ ಮುಂದೆ ಈ  ಪ್ರಯತ್ನವಿರಲಿ. ಒತ್ತಕ್ಷರವಿರುವ ಪದಗಳನ್ನು ಕಡಿಮೆ ಗೊಳಿಸಿ ಇನ್ನೂ ಸರಳ ವಿರಳ ಪದಗಳ ಬಳಕೆಯಿಂದ ಗಜಲ್ ಇನ್ನೂ ಲಾಲಿತ್ಯಪೂರ್ಣ ವಾಗಿಸಬಹುದಿತ್ತು ಎನ್ನುವ ಅಂಬೋಣ ಮುಂದಿನ ಗಜಲ್ ಗಳಲ್ಲಿ ಕವಿ ಇದನ್ನು ಗಮನಿಸಲಿ. ಸಧ್ಯದ ಕಾಲದ ತಲ್ಲಣಗಳಿಗೆ ಧ್ವನಿಯಾಗಿ ಮೂಡಿಬಂದ ಈ ಗಜಲ್ ಆಲದ ಮರದ ಕೆಳಗೆ ಕುಳಿತು ನೀವು ಒಮ್ಮೆ ಇಲ್ಲಿನ ವಿಚಾರಗಳಿಗೆ ಕಿವಿಯಾಗಿ.

ಪುಸ್ತಕ ಬೇಕಾದವರು ಸಂಪರ್ಕಿಸಿ

ಶ್ರೀ.ಪ್ರಕಾಶ ಅಂಗಡಿ

ಫೋನ್ ಸಂಖ್ಯೆ: 81474 03964


ಜ್ಯೋತಿ ಬಿ ದೇವಣಗಾವ

Leave a Reply

Back To Top