*ಅಂಗದಲ್ಲಿ ಆಚಾರವ ತೋರಿದ*
 *ಆ ಆಚಾರವೇ ಲಿಂಗವೆಂದುರುಹಿದ*
 *ಪ್ರಾಣದಲ್ಲಿ ಅರಿವು ನೆಲೆಗೊಳಿಸಿದ*
 *ಆ ಅರಿವೇ ಜಂಗಮವೆಂದು ತೋರಿದ*
 *ಚೆನ್ನಮಲ್ಲಿಕಾರ್ಜುನನ ಹೆತ್ತ* *ಸಂಗನ ಬಸವಣ್ಣನು*
 *ಎನಗೀ ಕ್ರಮವ ಅರುಹಿದನಯ್ಯ* *ಪ್ರಭುವೆ*

12ನೇ ಶತಮಾನದ ಶರಣರ ಸಂಸ್ಕೃತಿಯಲ್ಲಿ ತನ್ನದೇ ಆದ ಒಂದು ಘನತೆ  ಇದೆ ,ಒಂದು ಗೌರವವಿದೆ. ಇಲ್ಲಿ ಅರಿವು ಅಂದರೆ, ತಿಳುವಳಿಕೆ ಜ್ಞಾನ ಎಂದರ್ಥ. ಆಚಾರವೆಂದರೆ ,ಶುದ್ಧನಡತೆಯ ಸಂಸ್ಕಾರದ ನಡೆ .ಇಂತಹ ಶುದ್ಧವಾದ ಅರಿವು ,ಆಚಾರಗಳಿಂದ ನಡೆಯುವುದು ಶರಣರ ಆಶಯವಾಗಿತ್ತು .

ಒಬ್ಬ ವ್ಯಕ್ತಿ ಸಮಾಜದಲ್ಲಿ ಇದ್ದು ಸಮಾಜದ ರೀತಿ ನೀತಿಗೆ ಅನುಗುಣವಾಗಿ ವ್ಯಕ್ತಿಯ ಅರಿವು ಜಾಗೃತಿಗೊಳ್ಳುವುದು .

ಈ ಆಚಾರವೇ ಲಿಂಗವೆಂದು, ಅರಿವನ್ನು ಆಚರಣೆಗೆ ತಂದಾಗ ಮಾತ್ರ ,ಸಮಾಜ ಬೆಳೆಯುವುದು ಸಮುದಾಯ ಅಭಿವೃದ್ಧಿಯಾಗುವದು.

 ನಡೆ ಒಂದು ಪರಿ, ನುಡಿ ಒಂದು ಪರಿ ಆದರೆ ,ಅರಿವು ಆಚರಣೆಗೆ ಬರುವುದಿಲ್ಲ.

ಲಿಂಗವೆಂಬ ನಿರಾಕಾರ ಚೈತನ್ಯ ಸ್ವರೂಪಿ ,ಲಿಂಗ ವಿಲ್ಲದ ಜಾಗವೂ ಇಲ್ಲ, ಅರಿತು ಅದರಂತೆ ನಡೆಯುವುದೇ ಲಿಂಗಾಚಾರ .

ಸತ್ಯ ಹಾಗೂ ಸಜ್ಜನಿಕೆಯ ಆಚಾರವನ್ನು ನಮ್ಮ ಜೀವನದಲ್ಲಿ ರೂಢಿಸಿಕೊಂಡಿದ್ದೆ ಆದರೆ ಅದುವೇ ಸದಾಚಾರ .

ಯಾವುದೇ ಜಾತಿ, ಕುಲ, ಗೋತ್ರ, ವರ್ಣಾಶ್ರಮವನ್ನಿರಿಸದೆ, ಯಾವುದೇ ಭೇದ ಮಾಡದೇ, ಸಹ ಪಂಕ್ತಿಯಲ್ಲಿ ಪ್ರಸಾದ ಸ್ವೀಕರಿಸುವುದೇ ಶಿವಾಚಾರ.

 ಗಟ್ಟಿ ಧ್ವನಿಯಿಂದ ಶಿವಾಚಾರದ ನಿಂದೆಯನ್ನು ಕೇಳದಿರುವುದೇ ಗಣಾಚಾರ .

ಎನಗಿಂತ ಕಿರಿಯರಿಲ್ಲ, ಶರಣರೆಲ್ಲರೂ ಹಿರಿಯರು  ಎಂಬ ಭಾವ  ತಾಳುವುದು ಭ್ರತ್ಯಾಚಾರ.

 ಲಿಂಗವು ಸರ್ವ ವ್ಯಾಪಕವಾದದ್ದು, ಪ್ರತಿಯೊಬ್ಬ ಲಿಂಗಾಯತ ಧರ್ಮಿ, ಇಷ್ಟ ಲಿಂಗ ದೀಕ್ಷೆ ಪಡೆದ ಬಳಿಕ ಅನೇಕ ಆಚರಣೆಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಬದಲಾಗಬೇಕು .

ಬಸವಣ್ಣನವರು ಹೇಳಿದ  ಕಳಬೇಡ ,ಕೊಲಬೇಡ ,ಹುಸಿಯ ನುಡಿಯಲು ಬೇಡ, ಇದಿರು ಹಳಿಯಲು ಬೇಡ ತನ್ನ ಬಣ್ಣಿಸಬೇಡ .ಎಂದು ಹೇಗೆ ಹೇಳಿರುವರೋ ಹಾಗೆ ಅಕ್ಕಮಹಾದೇವಿಯವರು ,

ಎನ್ನ ಅಂಗದಲ್ಲಿ  ಅಂದರೆ ಈ ದೇಹದಲ್ಲಿ ಎನಗೆ ಆಚಾರ ತೋರಿಸಿದ ಪರಮಜ್ಞಾನಿ ಬಸವಣ್ಣನವರು ಎನ್ನುವರು.

 ಆ ಆಚಾರವೇ ಲಿಂಗವೆಂದು ಅರುಹಿದೆ .ಆಚಾರದಲ್ಲಿ ವ್ಯಕ್ತಿ ಪರಸ್ತ್ರೀ ,ಪರಧನಕ್ಕೆ ಆಸೆ ಪಡೆದಿರುವುದು ,ಸಕಲ ಜೀವಿಗಳಲ್ಲಿ ಹಿತ ಬಯಸುವುದು , ಜಂಗಮದಲ್ಲಿ ಕುಲವ ನರಿಸದಿರುವುದು ಹೀಗೆ ನಮ್ಮ ನಮ್ಮ ಆಂತರಿಕ ಹಾಗೂ ಬಾಹ್ಯ ಕ್ರಿಯೆಗಳನ್ನು, ಶುದ್ಧಗೊಳಿಸಿ ಪಂಚಾಚಾರದ ನೆಲೆಯಲ್ಲಿ,
ದೇವರನ್ನು ಕಾಣುವ ,ತಾನೇ ದೇವರಾಗುವ ಬಗೆ .

ಹೀಗೆ ಐವತ್ತು ಆಚಾರ, ಪಂಚಾಚಾರ, ಸಪ್ತಾಚಾರ, ಮತ್ತು ತ್ರಿವಿಧ ಆಚಾರಗಳನ್ನು ಅಳವಡಿಸಿಕೊಂಡವರು ಲಿಂಗದೇಹಿಗಳು ಆಗುವವರು.

 ಇಲ್ಲಿ ಅಂತರಂಗದ ಕ್ರಿಯೆಗಳೆಲ್ಲವನ್ನು ಶುದ್ಧಗೊಳಿಸುವುದು ಸಪ್ತಾಚಾರ.

 ಲಿಂಗ, ಜಂಗಮ, ಗುರು ಆರಾಧನೆ ಮಾಡುವುದು ಕ್ರಿಯಾಚಾರ.

 ಅನೇಕ ಶರಣರ ಮಾತುಗಳ ವಚನದ ಅನುಭವವನ್ನು ಅರಿತು ಆಚರಿಸುವುದು ಜ್ಞಾನಾಚಾರ.

 ನಮ್ಮ ಭಾವ ಭಾವನೆಯಲ್ಲಿರುವ ಕಾಮ,ಕ್ರೋಧ, ಲೋಭ, ಮೋಹ, ಮದ, ಮತ್ಸರಾದಿ ದೂರಾಗಿ ಬದುಕುವುದು ಭಾವಚಾರ .

ಕೊಟ್ಟ ಭಾಷೆಯಂತೆ ನಡೆಯುವುದು ಸತ್ಯಾಚಾರ.

 ಪಾಲಿಗೆ ಬಂದ ಪ್ರಸಾದದಲ್ಲಿ ಸುಖಿಸುವುದು ನಿತ್ಯಾಚಾರ.

 ಭಕ್ತಿಯಿಂದ ಕೂಡಿರುವುದು ಧರ್ಮಾಚಾರ .

 ಹೀಗೆ ತ್ರಿವಿಧ ಆಚಾರ, ಪಂಚಾಚಾರ, ತನ್ನ ಅಂಗದಲ್ಲಿ ಅಳವಳಿಸಿಕೊಂಡವರು ಲಿಂಗದೇಹಿಗಳು ಆಗುತ್ತಾರೆ.

 ಪ್ರಾಣದಲ್ಲಿ ನೆಲೆಗೊಂಡ ಅರಿವು ಜ್ಞಾನ. ಈ ಜ್ಞಾನವೇ ಜಂಗಮ ಲಿಂಗ ದರ್ಶನ ಮಾಡಿಸುತ್ತದೆ. ನಾವೆಲ್ಲರೂ ಒಂದೇ ಎಂಬ ಜಂಗಮದ ಅರಿವು. ಸಕಲವೂ ಒಳಗೊಂಡದ್ದು ಇಷ್ಟಲಿಂಗ ಮತ್ತು ಜಂಗಮ ಲಿಂಗವೆಂಬ ಉಭಯವ ಅರಿವನ್ನು ಬಸವಣ್ಣನವರಿಂದ ನಾನು ಪಡೆದೆ ,ಎನ್ನ ಪ್ರಾಣದಲ್ಲಿ ನೆಲೆಗೊಳಿಸಿದವರು ವಿಶ್ವ ಗುರು ಬಸವಣ್ಣನವರು ಎಂದು ಅಕ್ಕ ಈ ಒಂದು ವಚನದಲ್ಲಿ ತಿಳಿಯಪಡಿಸಿದ್ದಾರೆ.
ಎನ್ನ ಪ್ರಾಣದ ಅರಿವಿನ ಕುರುಹು ಆದ ಚೆನ್ನಮಲ್ಲಿಕಾರ್ಜುನನನ್ನು ಹೆತ್ತ ತಂದೆ ಸಂಗನ ಬಸವಣ್ಣನವರು .
ನನಗೆ ಈ ಕ್ರಮವನ್ನು ತಿಳಿಯಪಡಿಸಿದ್ದೂ ಕೂಡಾ ಬಸವಣ್ಣನವರು ಎನ್ನುವರು  ಅಕ್ಕ.

ಒಟ್ಟಿನಲ್ಲಿ ನಿರಾಕಾರ, ನಿರ್ಮಲ ಮನದ ಅಂಗದಲ್ಲಿ ಲಿಂಗಧಾರಿಯಾಗಿ ,ಜಂಗಮ ಚೈತನ್ಯದ ಅರಿವನ್ನು  ನಮ್ಮ ನಮ್ಮ ಪ್ರಾಣಗಳಲ್ಲಿ ನೆಲೆಗೊಳಿಸಿಕೊಳ್ಳುವ ಪರಿ . ಇಂಥಹ ಕ್ರಮವನ್ನು ಈ ಸಮಾಜದಲ್ಲಿ ಇರುವ ಎಲ್ಲರಿಗೂ ದಯಪಾಲಿಸಿದ ಬಸವಣ್ಣನವರ ಪಾದಕ್ಕೆ ಭಕ್ತಿಯ ಶರಣು ಶರಣೆನ್ನುವೆ .
__________________————————–

Leave a Reply

Back To Top