ಕುಸುರೆಳ್ಳಿನ ಒಡವೆಗಳು..

ನಮ್ಮ ಸನಾತನ ಧರ್ಮವು ನಾಡಿನ ಎಲ್ಲ ಹಬ್ಬಗಳ ಆಚರಣೆಗಳಿಗೆ ಮೂಲಾಧಾರವಾಗಿ ನಿಂತು ಅವುಗಳನ್ನು ಸಂರಕ್ಷಿಸುತ್ತದೆ.ಅವುಗಳ ಮೂಲಕ ಧಾರ್ಮಿಕ, ಸಾಮಾಜಿಕ ಮತ್ತು ವೈಯುಕ್ತಿಕ ಬೆಳವಣಿಗೆಯು ಹೆಚ್ವುವಂತೆ ಮಾಡುತ್ತದೆ.‌.ಜೀವನದ ತತ್ವಗಳನ್ನು, ಧರ್ಮಶಾಸ್ತ್ರವನ್ನು ಮತ್ತು ಅಧ್ಯಾತ್ಮದ ಬೋಧನೆಗಳನ್ನು ಅತ್ಯಂತ ಸುಂದರವಾಗಿ ವಿವರಿಸುತ್ತದೆ..ನಮ್ಮ ಹಿರಿಯರ ಆಚಾರ, ವಿಚಾರ, ನಂಬಿಕೆಗಳನ್ನು ಬಲಪಡಿಸುವುದರೊಂದಿಗೆ ನಮ್ಮ ಉತ್ಸಾಹ ಆಸಕ್ತಿಗಳನ್ನು ಹೆಚ್ಚಿಸಿ ಜೀವನದ ಸೂಕ್ಷ್ಮ ತತ್ವಗಳನ್ನು, ಮೌಲ್ಯ, ಮಹತ್ವಗಳನ್ನು ಅರ್ಥೈಸುತ್ತದೆ..ಈ ಮೂಲಕ ನಮ್ಮ ಅದ್ಭುತ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ಕಾರ್ಯವೂ ಜರುಗುತ್ತದೆ..‌ಈ ಹಿನ್ನೆಲೆಯಲ್ಲಿ ನಾವು ಆಚರಿಸುವ ಹಬ್ಬದ ಆಚರಣೆಯ ಹಿಂದೆ ತನ್ನದೇ ಆದ ಒಂದು ವಿಶೇಷ ಮಹತ್ವವಿದೆ. ತಮ್ಮ ಕುಟುಂಬ, ಬಂಧು ಮಿತ್ರರೊಂದಿಗೆ ಸಂತೋಷದಿಂದ ಸಮಯ ಕಳೆಯಲು ಉತ್ತಮ ಕ್ಷಣಗಳನ್ನು ಅನುವು ಮಾಡಿಕೊಡುವ ಹಬ್ಬಗಳು ಸಾಂಸ್ಕೃತಿಕವಾಗಿ ಮತ್ತು ಪ್ರಾಕೃತಿಕವಾಗಿ ಸಾಕಷ್ಟು ಬದಲಾವಣೆಗಳನ್ನು ತರುತ್ತವೆ.ಈ ಬದಲಾವಣೆಗೆ ಅನುಗುಣವಾಗಿ ಪ್ರತಿ ಪ್ರಾಂತ್ಯದಲ್ಲೂ ತಮ್ಮ ಮೂಲ ಸಂಪದವನ್ನು ನೆನೆಯುತ್ತ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ.

ಮುಂಬಯಿ ‌ಮಹಾನಗರವು ಭಾರತದ ಸಂಸ್ಕೃತಿ ಮತ್ತು ವಿಭಿನ್ನತೆಯ ಕುರುಹಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಪ್ರತಿಬಿಂಬಿಸುವ ಮಾಯಾನಗರಿಯಲ್ಲಿ ದೇಶದ ವಿಭಿನ್ನ ‌ಪ್ರಾಂತ್ಯಗಳಿಂದ ಬಂದು ನೆಲೆಸಿದವರ ಸಂಖ್ಯೆ ಅಧಿಕವಾಗಿ ಇರುವುದರಿಂದ ಇಲ್ಲಿ ಆಚರಿಸಲ್ಪಡುವ ಎಲ್ಲಾ ಹಬ್ಬಗಳು ತಮ್ಮ ‌ಮೂಲರೂಪದೊಂದಿಗೆ ಹೊಸ ಹುರುಪು,ಹೊಸ ಹೊಳಪನ್ನು ಪಡೆದು ಎಲ್ಲರಿಗೂ ಆನಂದವನ್ನು ನೀಡುತ್ತವೆ..
ಇವುಗಳಲ್ಲಿ ಇಂಗ್ಲಿಷ್ ಕ್ಯಾಲೆಂಡರ್ ವರ್ಷದ ಮೊದಲನೆಯ ಹಬ್ಬವಾದ ಮಕರಸಂಕ್ರಾಂತಿ ಅತ್ಯಂತ ವಿಶೇಷವಾದದ್ದು ಎನ್ನಬಹುದು.. ದೇಶದಾದ್ಯಂತ ವಿಭಿನ್ನವಾದ ಹೆಸರುಗಳಿಂದ,ವಿಭಿನ್ನ ರೀತಿಯಲ್ಲಿ, ಪ್ರತಿವರ್ಷವೂ ನಿರ್ದಿಷ್ಟ ದಿನದಂದು ಆಚರಿಸಲ್ಪಡುವ ಏಕೈಕ ಹಬ್ಬವೇ “ಮಕರ ಸಂಕ್ರಾಂತಿ”..

ಮಹಾರಾಷ್ಟ್ರ ,ಮುಂಬಯಿನಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಹಲವು ಭಾಗಗಳಾಗಿ ವಿಂಗಡಿಸಿ ಸಂಭ್ರಮದಿಂದ ಆಚರಿಸುವ ಪದ್ಧತಿ ಇದೆ..
ಧನುರ್ಮಾಸದ ಕೊನೆಯ ದಿನದಿಂದ ಆರಂಭಿಸಿ ರಥ ಸಪ್ತಮಿ‌‍ಯವರೆಗೂ ಬೇರೆ ಬೇರೆ ರೀತಿಯಲ್ಲಿ ಹಬ್ಬ ಆಚರಿಸಿ ಆನಂದಿಸುತ್ತಾರೆ..
ಭೋಗಿ ಹಬ್ಬವು ಮಕರ ಸಂಕ್ರಾಂತಿ ಆಚರಣೆಯ ಮೊದಲ ಭಾಗವಾಗಿದೆ. ಭೂಮಿಗೆ ಸುಭಿಕ್ಷ ಬರಲಿ ಎಂದು ಭಗವಂತನನ್ನು ಪ್ರಾರ್ಥಿಸುತ್ತ ಈ ಹಬ್ಬವನ್ನು ಆಚರಿಸುತ್ತಾರೆ. ಈ ದಿನ ಮನೆಯನ್ನು ಸ್ವಚ್ಛಗೊಳಿಸಿ, ತಳಿರು ತೋರಣದಿಂದ ಅಲಂಕಾರ ಮಾಡಿ, ಹಲವು ಪ್ರಕಾರದ ಹಸಿ ಕಾಳು,ಸೊಪ್ಪು, ತರಕಾರಿಗಳನ್ನು ಕೂಡಿಸಿ,ಎಳ್ಳು, ಕೊಬ್ಬರಿ, ಶೇಂಗಾ ಪುಡಿಗಳನ್ನು ಸೇರಿಸಿ ವಿಶೇಷವಾದ, ರುಚಿಕಟ್ಟಾದ ಪಲ್ಯವನ್ನು ತಯಾರಿಸುತ್ತಾರೆ.ಇದಕ್ಕೆ ಭೋಗಿ ಪಲ್ಯ (ಭೋಗಿಚಿ ಭಾಜಿ) ಎಂದೇ‌ ಹೆಸರು.
ಇದರೊಡನೆ ಕರಿ ಎಳ್ಳನ್ನು ಹಚ್ಚಿದ ಸಜ್ಜೆ ರೊಟ್ಟಿ, ಮಸಾಲಾ ಭಾತ್, ಗೆಜ್ಜರಿ ಹಲ್ವಾ ತಯಾರಿಸಿ ದೇವರಿಗೆ ನೈವೇದ್ಯ ಮಾಡುತ್ತಾರೆ..ಸ್ನೇಹಿತರು, ಬಂಧು ಬಳಗದವರೆಲ್ಲ ಒಂದೆಡೆ ಸೇರಿ ಉಣ್ಣುತ್ತಾರೆ..ಇತ್ತೀಚಿಗೆ ವಾರಾಂತ್ಯದಲ್ಲಿ ಇಂತಹ ಔತಣ ಕೂಟಗಳನ್ನು ಮುಂಬಯಿನ ಗದ್ದಲದಿಂದ ದೂರವಿರುವ ರೆಸಾರ್ಟ್,ಅಥವಾ ಹೊಲಗಳಲ್ಲಿ ಏರ್ಪಡಿಸುವ ವಾಡಿಕೆ ಆರಂಭವಾಗಿದೆ..
ಈ ಕೂಟದಲ್ಲಿ ವಿಶೇಷ ಹಳ್ಳಿಗಾಡಿನ ತಿನಿಸೊಂದನ್ನು ತಯಾರಿಸಲಾಗುತ್ತದೆ..
ಅತ್ಯಂತ ಪ್ರಸಿದ್ಧಿ, ಜನಪ್ರಿಯತೆ ಪಡೆದು,ಎಲ್ಲರಿಗೂ ಪ್ರಿಯವಾದ ಈ ತಿನಿಸಿನ ಹೆಸರು “ಪೋಪಟಿ”.ದೊಡ್ಡ ಮಣ್ಣಿನ ಗಡಿಗೆಯ ಹೊರಭಾಗಕ್ಕೆ ಹಸಿ ಮಣ್ಣನ್ನು ಹಚ್ಚಿ, ಒಳಭಾಗದ ತಳದಲ್ಲಿ ಕೆಲವು ವಿಶೇಷ ಸೊಪ್ಪನ್ನು ಹರಡಲಾಗುತ್ತದೆ..ಅದರ ಮೇಲೆ ಉಪ್ಪು, ಹಸಿ ಖಾರ, ಅರಶಿನ, ಮಸಾಲೆ, ಸ್ವಲ್ಪ ಎಣ್ಣೆ ಹಚ್ಚಿದ ಅವರೆಕಾಯಿ, ಚಪ್ಪರದವರೆಕಾಯಿ, ಬಟಾಣಿ ಕಾಯಿ (ಗ್ರೀನ್ ಪೀಸ್),
ಆಲೂಗೆಡ್ಡೆ, ಗೆಣಸು, ಸುಲಿದ ಶೇಂಗಾ ಕಾಳು ಇವಿಷ್ಟನ್ನು ತುಂಬಿ ಮೇಲೆ ಸೊಪ್ಪಿನಿಂದ ಮುಚ್ಚಲಾಗುತ್ತದೆ. ನಂತರ ನೆಲದಲ್ಲಿ ಸ್ವಲ್ಪ ಗುಂಡಿ ತೋಡಿ ಅಲ್ಲಿ ತರಕಾರಿ ತುಂಬಿದ ಗಡಿಗೆಯನ್ನು ಇಟ್ಟು ಅದರ ಮೇಲೆ ಸಣ್ಣ ಕಟ್ಟಿಗೆಗಳನ್ನು ಏರಿಸಿ ಬೆಂಕಿ ಹಚ್ಚಲಾಗುತ್ತದೆ..ರಾತ್ರಿಯ ಚಳಿಯಲ್ಲಿ ಆ ಬೆಂಕಿಯ ಮುಂದೆ ಕುಳಿತು ಕೆಲವರು ಮೈ ಕಾಸಿಕೊಂಡರೆ, ಕೆಲವರು ಬೆಂಕಿಯ ಸುತ್ತ ಹಾಡಿ ಕುಣಿಯುತ್ತಾರೆ..ಅರ್ಧ ಮುಕ್ಕಾಲು ಗಂಟೆ ನಂತರ ಬೆಂಕಿ ಆರಿಸಿ ಗಡಿಗೆ ಹೊರತೆಗೆದು ಒಳಗಿನ ತರಕಾರಿಗಳನ್ನು ಬಾಳೆ ಎಲೆಯ ಮೇಲೆ ಹಾಕಿಕೊಂಡು ತಿನ್ನುತ್ತಾರೆ.. ಅಬ್ಬಾ..!! ಇದರ ರುಚಿ ಅದೆಂಥ ಅದ್ಭುತ ಗೊತ್ತೇ..ಜೀವನದಲ್ಲಿ ಒಮ್ಮೆಯಾದರೂ ಇದರ ಸ್ವಾದವನ್ನು ಸವಿಯಲೇಬೇಕು..

ಮಹಾರಾಷ್ಟ್ರದಲ್ಲಿ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಆಚರಿಸಲ್ಪಡುವ “ಹಳದಿ ಕುಂಕು “(ಅರಿಶಿನ ಕುಂಕುಮ) ಹೆಸರಿನ ಕಾರ್ಯಕ್ರಮ ಅತ್ಯಂತ ಜನಪ್ರಿಯವಾಗಿದೆ..
ಮಕರ ಸಂಕ್ರಾಂತಿ ಹಬ್ಬದ ದಿನದಿಂದ ರಥಸಪ್ತಮಿಯ ದಿನದವರೆಗೂ ತಮ್ಮ ಅನುಕೂಲಕ್ಕೆ ತಕ್ಕಂತೆ ಹೆಂಗೆಳೆಯರು ತಮ್ಮ ತಮ್ಮ ಮನೆಗಳಲ್ಲಿ ಅರಿಶಿನ ಕುಂಕುಮ ಕಾರ್ಯಕ್ರಮವನ್ನು ಏರ್ಪಡಿಸುತ್ತಾರೆ..
ಅಕ್ಕಪಕ್ಕದಲ್ಲಿನ, ಸಂಬಂಧಿಕರಲ್ಲಿನ
ಮುತ್ತೈದೆಯರನ್ನು ಕರೆದು ಅವರಿಗೆ ತಿನಿಸಿ,ಉಣಿಸಿ,ಉಡಿ ತುಂಬಿ ಉಡುಗೊರೆ ಕೊಟ್ಟು ಖುಷಿ ಪಡಿಸುವುದೇ ಇದರ ಮುಖ್ಯ ಉದ್ದೇಶ..ಎಲೆ,ಅಡಿಕೆ, ಅರಿಶಿನ ಕುಂಕುಮ ಪ್ಯಾಕೆಟ್, ಎಳ್ಳು ಬೆಲ್ಲದ ಉಂಡೆ, ಕುಸುರೆಳ್ಳು, ಕಬ್ಬು, ಗೆಜ್ಜರಿ, ಕಡಲೆ ಕಾಳು ಮತ್ತು ಉಡುಗೊರೆಯ ವಸ್ತು, ಇವೆಲ್ಲವನ್ನೂ ಒಂದು ಪುಟ್ಟ ಗಡಿಗೆಯಲ್ಲಿ ಹಾಕಿ ಮನೆಗೆ ಆಗಮಿಸಿದ ಮುತ್ತೈದೆಯರಿಗೆ ಉಡಿ ತುಂಬುತ್ತಾರೆ. ಈ ತಿಂಗಳು ಪೂರ್ತಿ ಹೆಣ್ಣುಮಕ್ಕಳ ಸಂಭ್ರಮವೇ ಸಂಭ್ರಮ.. ಹೊಸ ಸೀರೆ, ಒಡವೆ, ಹೂಗಳಿಂದ ಅಲಂಕೃತರಾದ ಹೆಂಗೆಳೆಯರೆಲ್ಲರ ಮನದಲ್ಲಿ ತಾನು ಎಲ್ಲರಿಗಿಂತ ಚಂದ ಕಾಣಬೇಕು ಮತ್ತು ಎಲ್ಲರಿಗಿಂತ ಭಿನ್ನವಾದ ವಿಶೇಷವಾದ ಉಡುಗೊರೆಯನ್ನು ಕೊಡಬೇಕು ಎಂಬ ಒಂದೇ ಆಸೆ ತುಂಬಿರುತ್ತದೆ..ಮೊದಲೆಲ್ಲ ಅಡುಗೆ ಮನೆಯಲ್ಲಿ ಬಳಸುವ ಚಿಕ್ಕ ಪುಟ್ಟ ಸ್ಟೀಲ್ ಸಾಮಾನುಗಳನ್ನು ಉಡುಗೊರೆ ಕೊಡುತ್ತಿದ್ದರು..
ಈಗಿನವರು ವಾಸ್ತವಿಕತೆ ಬಗ್ಗೆ ವಿಚಾರ ಮಾಡಿ ಮನೆಯಲ್ಲಿ ದಿನ ನಿತ್ಯ ಬಳಸುವ ವಸ್ತುಗಳನ್ನು ತಮ್ಮ ಬಡ್ಜೆಟ್ ಗೆ ತಕ್ಕಂತೆ ನೀಡುತ್ತಾರೆ..
ಉದಾಹರಣೆಗೆ ಪಾತ್ರೆ ತೊಳೆಯಲು ಬಳಸುವ ವಿಮ್ ಬಾರ್ ಅಥವಾ ಲಿಕ್ವಿಡ್, ಡೆಟಾಲ್ ಹ್ಯಾಂಡ್ ವಾಷ್, ಪೌಡರ್ ಡಬ್ಬಿ, ಪರ್ಸ್, ವಿವಿಧ ರೀತಿಯ ಕೈ ಚೀಲಗಳು, ೧ ಕಿಲೋ ಶೇಂಗಾ, ೧ ಕಿಲೋ ಬೆಲ್ಲ, ಹೀಗೆ ಏನು ಕೊಟ್ಟರೂ ಸರಿ, ಅದನ್ನು ಅವರು ಉಪಯೋಗಿಸಬೇಕು ಎಂಬ ಭಾವನೆ ಇವರಲ್ಲಿ ತುಂಬಿರುತ್ತದೆ….
ನಗರದ ಪ್ರತಿ ಸೊಸೈಟಿಗಳಲ್ಲಿ, ಚಿಕ್ಕ ದೊಡ್ಡ ಮಹಿಳಾ ಮಂಡಳಗಳಲ್ಲಿ ಸಾಮೂಹಿಕ ಹಳದಿ ಕುಂಕುಮದ ಸುಂದರ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ.. ಒಟ್ಟಾರೆ ಈ ಹಳದಿ ಕುಂಕುಮ ಕಾರ್ಯಕ್ರಮಗಳು ಜಾತಿ ಮತ ಬೇಧಗಳಿಲ್ಲದಂತಹ, ಮಹಿಳೆಯರಲ್ಲಿ ಸ್ನೇಹ ಸೌಹಾರ್ದಗಳನ್ನು ಬೆಳೆಸುವಂತಹ ಉತ್ತಮ ಕಾರ್ಯಗಳಾಗಿವೆ.
ಮುಂಬಯಿನಲ್ಲಿ ‌ಮರಾಠೇತರ ಜನರೂ ಸಹ ಈ ಹಳದಿ ಕುಂಕುಮ ಕಾರ್ಯಕ್ರಮವನ್ನು ಸಂತಸದಿಂದ ಆಚರಿಸುತ್ತಾರೆ..

ಮಕರಸಂಕ್ರಾಂತಿ ಸಮಯದಲ್ಲಿ ಮರಾಠಿಗರು “ಬೋರನ್ಹಾಣ್” ಎಂಬ ಸುಂದರವಾದ ಸಾಂಪ್ರದಾಯಿಕ ‌ಕಾರ್ಯಕ್ರಮವನ್ನು ಆಚರಿಸುತ್ತಾರೆ.
೫ ವರ್ಷದೊಳಗಿನ ಮಕ್ಕಳು, ಋತುಮತಿಯಾದ ಹೆಣ್ಣು,‌ ನವ ವಧು ಮತ್ತು ಮೊದಲ ಗರ್ಭಿಣಿ, ಇವರಿಗಾಗಿಯೇ ವಿಶೇಷವಾಗಿ ಏರ್ಪಡಿಸುವ ಈ ಸಾಂಪ್ರದಾಯಿಕ ಕಾರ್ಯಕ್ರಮ ತುಂಬಾ ಜನಪ್ರಿಯತೆ ಗಳಿಸಿದೆ..ಈ ಸಮಯದಲ್ಲಿ ಕಪ್ಪು ಬಣ್ಣದ ಉಡುಗೆ ತೊಡುಗೆಗಳಿಗೆ ಅತ್ಯಂತ ‌ಮಹತ್ವವಿದೆ..
ಕಪ್ಪು ಸೀರೆಯನುಟ್ಟು, ಕಪ್ಪು ಬಳೆ ತೊಟ್ಟು, ಕುಸುರೆಳ್ಳಿನಿಂದ ತಯಾರಿಸಿದ ಬಿಳಿ ಬಣ್ಣದ ಒಡವೆಗಳನ್ನು ಧರಿಸಿ ಅಲಂಕರಿಸಿಕೊಂಡು ಅತ್ತಿತ್ತ ಓಡಾಡುವ ನೀರೆ ನೋಡಿದವರ ಕಣ್ಮನ ಸೆಳೆಯುತ್ತಾಳೆ.‌‌.
ಬೋರೆಹಣ್ಣು, ಕಬ್ಬು, ಕಡಲೆ, ಚಾಕೊಲೇಟ್ ಗಳು, ಮತ್ತು ಮಂಡಕ್ಕಿ ಎಲ್ಲವನ್ನೂ ಒಂದೆಡೆ ಸೇರಿಸಿ ೫ ವರ್ಷದೊಳಗಿನ ‌ಮಕ್ಕಳಿಗೆ ತಲೆಯ ಮೇಲಿಂದ ಎರೆಯುತ್ತಾರೆ…
ಒಟ್ಟಾರೆ ಮಕರ ಸಂಕ್ರಾಂತಿಯಿಂದ ರಥಸಪ್ತಮಿ ದಿನದವರೆಗೂ ಈ ಸಂಭ್ರಮ ನಡೆಯುತ್ತದೆ..

ಇದು ನಾನು ಇಷ್ಟು ವರ್ಷಗಳಲ್ಲಿ ‌ಹತ್ತಿರದಿಂದ ಕಂಡು, ಅನುಭವಿಸಿ, ಆನಂದಿಸಿದ ವಿಷಯಗಳು.


Leave a Reply

Back To Top