ಅಂಕಣ ಬರಹ

ಸಾಧಕಿಯರ ಯಶೋಗಾಥೆ’ ಮಾಲಿಕೆಯನ್ನು ಸಂಗಾತಿ ಓದುಗರಿಗಾಗಿ ಸರಣಿ ರೂಪದಲ್ಲಿ ಪ್ರಕಟಿಸಲಿದೆ. ಈ ಸರಣಿ ಮಾಲಿಕೆಯನ್ನು ಲೇಖಕಿ ಡಾ. ಸುರೇಖಾ ಜಿ ರಾಠೋಡ ಪ್ರತಿವಾರ ಬರೆಯಲಿದ್ದಾರೆ‌.

ಸಾಧಕಿಯರ ಯಶೋಗಾಥೆ

ಸ್ವಾತಂತ್ರ್ಯ ಹೋರಾಟಗಾರ್ತಿ

ನೆಲ್ಲಿಸೆನ್ ಗುಪ್ತಾ (1886-1973)

ನೆಲ್ಲಿಸೆನ್ ಗುಪ್ತಾ ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿರುವರು. 1933 ರಲ್ಲಿ ಕಲ್ಕಾತ್ತಾದಲ್ಲಿ ನಡೆದ 47ನೇ ವಾರ್ಷಿಕ ಅಧಿವೇಶನದಲ್ಲಿ ಇವರು ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಅಧ್ಯಕ್ಷರಾಗಿ  ಆಯ್ಕೆಯಾಗಿದ್ದರು.
ನೆಲ್ಲಿಸೆನ್ ಗುಪ್ತಾ ಮೊದಲು ಎಡಿತ್ ಎಲ್ಲೆನ್ ಗ್ರೇ ಆಗಿದ್ದರು. ಇವರ ತಂದೆ ಫೆಡ್ರಿಕ್ ಮತ್ತು ತಾಯಿ ಹೆನ್ರಿಯ ಗ್ರೇ. ಇವರ ಜನನ 1886. ಇವರು ಹುಟ್ಟಿ ಬೆಳೆದಿದ್ದು ಕ್ರೇಂಬಿಡ್ಜ್‍ನಲ್ಲಿ. ಕ್ರೇಂಬಿಡ್ಜ್‍ನಲ್ಲಿ ನೆಲ್ಲಿ ಅವರ ತಂದೆ ಕ್ಲಬ್‍ನಲ್ಲಿ ಕೆಲಸ ಮಾಡುತ್ತಿದ್ದರು. ನೆಲ್ಲಿಯವರು ಚಿಕ್ಕವರಿದ್ದಾಗ ಜಿತೇಂದ್ರ ಮೋಹನ ಸೇನ್ ಗುಪ್ತಾ ಅವರನ್ನು ಪ್ರೀತಿಸಿದರು. ಬಂಗಾಳಿ ಮೂಲದ ಯುವಕನಾಗಿದ್ದ ಜಿತೇಂದ್ರ ಮೋಹನ ಸೇನ್ ಗುಪ್ತಾ ಅವರು ವಿದ್ಯಾಭ್ಯಾಸಕ್ಕಾಗಿ ಡೌನಿಂಗ್ ಕಾಲೇಜಿನಲ್ಲಿ ಓದುತ್ತಿದ್ದರು. ಅಲ್ಲಿಯೇ ಇವರ ಪ್ರೀತಿಯು ಬೆಳೆಯಿತು. ನೆಲ್ಲಿಯ ಕುಟುಂಬದವರು ಇವರ ಪ್ರೀತಿಯನ್ನು ಒಪ್ಪಿಕೊಳ್ಳಲಿಲ್ಲ. ಕುಟುಂಬದ  ವಿರೋಧದ ನಡುವೆಯೂ ನೆಲ್ಲಿಯವರು ಜಿತೇಂದ್ರ ಮೋಹನ ಸೇನ್ ಗುಪ್ತಾರೊಂದಿಗೆ ವಿವಾಹವಾದರು. ನಂತರ ಜಿತೇಂದ್ರರೊಂದಿಗೆ ಕಲ್ಕಾತ್ತಾಗೆ ಬಂದರು. ನೆಲ್ಲಿಯವರಿಗೆ ಸಿಶಿರ್ ಮತ್ತು ಅನಿಲ್ ಎಂಬ ಇಬ್ಬರು ಗಂಡು ಮಕ್ಕಳು ಜನಿಸಿದರು.

ಭಾರತಕ್ಕೆ ಮರಳಿ ಬಂದ ನೆಲ್ಲಿಯವರು ಪತಿಯೊಂದಿಗೆ ಅಸಹಕಾರ ಚಳುವಳಿಯಲ್ಲಿ ಭಾಗವಹಿಸಿದರು. ಜಿತೇಂದ್ರರವರು ಕಲ್ಕತ್ತಾದಲ್ಲಿ ವಕೀಲರಾಗಿ ಅತ್ಯಂತ ಯಶಸ್ವಿ ವೃತ್ತಿ ಜೀವನವನ್ನು ನಡೆಸುತ್ತಿದ್ದರು. ಬಂಗಾಳದಲ್ಲಿ ನಡೆದ ಚಳುವಳಿಗೆ ಮಹಾತ್ಮಗಾಂಧಿಜಿಯವರ ಬಲಗೈ ವೈಕ್ತಿಯಾಗಿದ್ದರು. ಜಿತೇಂದ್ರರವರು ಮೂರು ಅವಧಿಯವರೆಗೆ ಕಲ್ಕಾತ್ತಾದ ಮೇಯರ ಆಗಿದ್ದರು. ಹಾಗೇಯೆ ಅವರು ವಿಧಾನಸಭೆಯ ಮುಖ್ಯಸ್ಥರು ಕೂಡ ಆಗಿದ್ದರು. 1920 ರಲ್ಲಿ ಗಂಡನೊಂದಿಗೆ ಅಸಹಕಾರ ಚಳುವಳಿಯಲ್ಲಿ ಪೂರ್ತಿಯಾಗಿ ತೊಡಗಿಸಿಕೊಂಡರು. ಅಸ್ಸಾಂ-ಬಂಗಾಳ ರೈಲ್ವೆ ಕಾರ್ಮಿಕರ ಮುಷ್ಕರದಲ್ಲಿ ಜಿತೇಂದ್ರರವರು ಜೈಲಿಗೆ ಸೇರಿದರು. ನೆಲ್ಲಿಯವರು ಜಿಲ್ಲಾಧಿಕಾರಿಗಳ ಸಭೆ ನಿಷೇದ ಹೇರಿರುವುದನ್ನು ವಿರೋಧಿಸಿ, ಸಾಮೂಹಿಕ ಸಭೆಗಳನ್ನು ಉದ್ದೇಶಿಸಿ ಮಾತಾಡುತ್ತಿರುವಾಗ ಬಂಧನಕ್ಕೆ ಒಳಗಾದರು. ಅನಂತರ ನೆಲ್ಲಿಯವರು ಖಾದಿ ಬಟ್ಟೆಗಳನ್ನು ಮನೆ ಮನೆಗೆ ಮಾರಾಟ ಮಾಡುವ ಮೂಲಕ ಬ್ರಿಟೀಷ್ ಕಾನೂನನ್ನು ದಿಕ್ಕರಿಸಿದ್ದಕ್ಕೆ, 1931 ರಲ್ಲಿ ನೆಲ್ಲಿಯವರು ದೆಹಲಿಯಲ್ಲಿ ನಾಲ್ಕು ತಿಂಗಳ ಜೈಲುವಾಸವನ್ನು ಅನುಭವಿಸಿದರು.
ಉಪ್ಪಿನ ಸತ್ಯಾಗ್ರಹದ ಸಮಯದಲ್ಲಿ ಕಾಂಗ್ರೇಸಿನ ಅನೇಕ ಹಿರಿಯ ನಾಯಕರು ಜೈಲು ಸೇರಿದ್ದರು. 1933ರ ಕಲ್ಕತ್ತಾದಲ್ಲಿ ನಡೆಯುವ ಅಧಿವೇಶನಕ್ಕೆ ಮದನಮೋಹನ ಮಾಲ್ವಿಯಾ ಅವರನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅವರು ಕೂಡ ಜೈಲು ಸೇರಿದರು. ಹಾಗಾಗಿ ಆ ಸಮಯದಲ್ಲಿ ನೆಲ್ಲಿ ಸೇನ್ ಗುಪ್ತಾರವರು ಕಲ್ಕತ್ತಾ ಕಾಂಗ್ರೇಸ್ ಅಧಿವೇಶನಕ್ಕೆ ಅಧ್ಯಕ್ಷರಾಗಿ ಆಯ್ಕೆಯಾದರು. ಇವರು ಪಕ್ಷಕ್ಕೆ ನೀಡಿದ ಕೊಡುಗೆಗಾಗಿ ಇವರನ್ನು ಅಧ್ಯಕ್ಷರಾಗಿ ಆಯ್ಕೆಮಾಡಿದರು. ನೆಲ್ಲಿಸೇನರವರು ಕಾಂಗ್ರೇಸಿನ ಅಧಿವೇಶನದ ಅಧ್ಯಕ್ಷರಾಗಿದ್ದ ಮೂರನೆ ಮಹಿಳೆ ಮತ್ತು ಯುರೋಪಿನ ಎರಡನೆ ಮಹಿಳೆಯಾಗಿದ್ದಾರೆ.
1933 ಮತ್ತು 1936 ರಲ್ಲಿ ಕಲ್ಕತ್ತಾ ಕಾರ್ಪೋರೇಶನ್‍ಗೆ ಆಲ್ಡರ್ ಮ್ಯಾನ್ ಆಗಿ ಆಯ್ಕೆಯಾದರು. 1940 ಮತ್ತು 1946 ರಲ್ಲಿ ಬಂಗಾಳ ವಿಧಾನಸಭೆಗೆ ಕಾಂಗ್ರೇಸ್ ಅಭ್ಯರ್ಥಿಯಾಗಿ ಆಯ್ಕೆಯಾದರು. ಹಾಗೆಯೇ ಎರಡನೆ ಮಹಾಯುದ್ಧದ ಸಮಯದಲ್ಲಿ ವಿದೇಶಿ ಪಡೆಗಳ ದುರ್ವತನೆಯ ಬಗ್ಗೆ ಖಂಡಿಸಿದರು.
ಸ್ವಾತಂತ್ರ್ಯ ನಂತರ ತಮ್ಮ ಪತಿಯ ತವರೂರಾದ ಚಿತ್ತಾಗಾಂಗನಲ್ಲಿ ಪೂರ್ವ ಪಾಕಿಸ್ಥಾನದಲ್ಲಿ ಬದುಕನ್ನು ಪ್ರಾರಂಭಿದರು. ಅಂದಿನ ಭಾರತದ ಪ್ರಧಾನ ಮಂತ್ರಿಯಾಗಿದ್ದ ಜವಾಹರಲಾಲ್ ನೆಹರು ಅವರ ಕೋರಿಕರಯ ಮೇರೆಗೆ ಪೂರ್ವ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದ ಹಿಂದೂ ಅಲ್ಪಸಂಖ್ಯಾತರ ಹಿತಾಸಕ್ತಿಗಳನ್ನು ನೋಡಿಕೊಳ್ಳುವಂತೆ ಕೋರಿದರು. ನೆಲ್ಲಿಸೇನ ಗುಪ್ತರವರು ಅಲ್ಪಸಂಖ್ಯಾತ ಮಂಡಳಿಯ ಸದಸ್ಯರಾಗಿ ಮತ್ತು ಸಕ್ರಿಯ ಸಾಮಾಜಿಕ ಕಾರ್ಯಕರ್ತೆಯಾಗಿ ಕೆಲಸ ಮಾಡಿದರು.
1972 ರಲ್ಲಿ ನೆಲ್ಲಿಯವರು ಬಿದ್ದು ಸೊಂಟ ಮುರಿದುಕೊಂಡಾಗ ಇಂದಿರಾಗಾಂಧಿಯವರ ಹಸ್ತಕ್ಷೇಪದ ಮೂಲಕ ಕಲ್ಕತ್ತಾ ಆಸ್ಪತ್ರೆಯಲ್ಲಿ ಸೇರಿಸಿದರು. ಆಸ್ಪತ್ರೆಯ ಖರ್ಚುವೆಚ್ಚಗಳನ್ನು ಭಾರತ ಸರಕಾರವೇ ಭರಿಸಿತು. 87 ವರ್ಷದ ನೆಲ್ಲಿಯವರು 1973ರಲ್ಲಿ ಕಲ್ಕತ್ತಾದಲ್ಲಿ ನಿಧನರಾದರು. ಇವರು ಭಾರತದ ಸ್ವತಂತ್ರ್ಯ ಹೋರಾಟದಲ್ಲಿ ನೀಡಿದ ಕೊಡುಗೆ ಅಪಾರವಾಗಿದೆ. ನೆಲ್ಲಿ ಸೇನ ಗುಪ್ತರವರಿಗೆ 1973 ರಲ್ಲಿ ಪದ್ಮವಿಭೂಷಣ ಪ್ರಶಸ್ತಿ ಲಭಿಸಿತ್ತು.


ಡಾ.ಸುರೇಖಾ ರಾಠೋಡ್

ಸುರೇಖಾ ರಾಠೋಡ್  ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು:  ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿದೆ

Leave a Reply

Back To Top