ಹಿಮದೊಡಲ ಬೆಂಕಿ

ಪುಸ್ತಕ ಪರಿಚಯ

ಹಿಮದೊಡಲ ಬೆಂಕಿ

ಹಿಮದೊಡಲ ಬೆಂಕಿ.
ಗಜ಼ಲ್ ಸಂಕಲನ.
ಬೆಲೆ:- 80/-
ಲೇಖಕರು :-
ಅರುಣಾ ನರೇಂದ್ರ
ಸಿದ್ಧಾರ್ಥ ಪ್ರಕಾಶನ ,
ನಂದಿ ನಗರ , ಕೊಪ್ಪಳ.

ಅರುಣಾ ನರೇಂದ್ರ ಅವರ ಹಿಮದೊಡಲ ಬೆಂಕಿ ಗಜ಼ಲ್ ಸಂಕಲನದ ಒಳಗೊಂದು ಸುತ್ತು…

ಅರುಣಾ ನರೇಂದ್ರ ರವರು ಕೊಪ್ಪಳ ಜಿಲ್ಲೆಯವರಾಗಿದ್ದು ಈ ನಾಡಿನ ಹೆಸರಾಂತ ಮಹಿಳಾ ಸಾಹಿತಿಗಳಲ್ಲಿ ಇವರೂ ಒಬ್ಬರು.

ಮುಖತಃ ನೋಡಿಲ್ಲದ, ಮಾತನಾಡಿಲ್ಲದ ಕೇವಲ ವಾಟ್ಸ್ ಆಪ್ ಗ್ರೂಪ್‌ನಿಂದಲೇ ಅಕ್ಷರಗಳ ಮುಖೇನ ಇವರೊಂದಿಗೆ ಅನುಸಂಧಾನ ಮಾಡುತ್ತಿರುವ ನಾನು ಇವರು  ಉದಯೋನ್ಮಖ ಬರಹಗಾರರ ಬರಹಗಳಿಗೆ ಮನಬಿಚ್ಚಿ ಬೆನ್ನುತಟ್ಟುವ ಕಾರ್ಯಕ್ಕೆ  ಮನಸೋತಿರುವೆ. ಸಹೋದರಿ ಸಮಾನರಾದ  ಇವರ ಈ ಹಿಮದೊಡಲ ಬೆಂಕಿ ವಿಭಿನ್ನ ದೃಷ್ಷಿಯ ಆರ್ದ್ರ ಸ್ವರೂಪದ ಗಜ಼ಲ್ ಸಂಕಲನಕ್ಕೆ ಭಾವ ತೀವ್ರತೆಯಿಂದ ನರಳಿಸುತ್ತಾ ಬದುಕು ಅರಳಿಸುವ ಗಜ಼ಲ್ ಗಳು ಎನ್ನುವ ಶಿರೋನಾಮೆಯನ್ನು ಹೊಳಪಿಸಿ ಗಜ಼ಲ್ ನ ಆಕೃತಿ ಮತ್ತು ಆತ್ಮಕ್ಕೆ ಜೀವ ದ್ರವ್ಯ ತುಂಬಿ ಮುನ್ನುಡಿ ಬರೆದ ಬಾಗಲಕೋಟೆ ಜಿಲ್ಲೆಯ ಖ್ಯಾತ ಹಿರಿಯ ಸಾಹಿತಿಗಳಾದ ಅಬ್ಬಾಸ್ ಮೇಲಿನಮನಿಯವರ   ಮುನ್ನುಡಿಯಿಂದ ಗಜ಼ಲ್ ನಾದ ಲೋಕದ ಜೀವ ತಂತಿಯಂತಿರುವ ಅರುಣಾ ನರೇಂದ್ರ  ರವರು ಕನ್ನಡ ಸಾಹಿತ್ಯ ಲೋಕದಲ್ಲಿ ಈಗಾಗಲೇ ರುಬಾಯಿ, ಹಾಯ್ಕು, ಕವನ, ತತ್ವಪದ,ನಾಟಕ ಕಲೆ  ಮುಂತಾದ ಹಲವಾರು ಪ್ರಕಾರಗಳಲ್ಲಿ ಪಳಗಿದ ಕೈ ಎಂಬುದು ತಿಳಿದು ಖುಷಿಯಾಯಿತು ; ಜೊತೆಗೆ ಈ ಸಂಕಲನ ಇವರ ಹದಿಮೂರನೇ ಕೃತಿ. ಇವರು ಕನ್ನಡ ಸಾಹಿತ್ಯದ ಕೃಷಿಯನ್ನು ಹೇಗೆ ಹದಗೊಳಿಸಿದ್ದಾರೆ ಎಂಬುದು ಇದರಿಂದಲೇ ತಿಳಿಯಬಹುದು . ಗಜ಼ಲ್ ಅರಬಿ ಶಬ್ದ ” ಹೆಂಗಸರೊಡನೆ ಮಾತನಾಡುವುದು, ಸಂಭಾಷಿಸುವುದು, ಪ್ರೇಮ, ಮೋಹ ಅನುರಾಗ ವ್ಯಕ್ತಪಡಿಸುವುದೆಂದು ಅರ್ಥ. ಪಾರಿಭಾಷಿಕವಾಗಿ ಹೇಳುವುದಾದರೆ ” ಹೃದಯದ ವೃತ್ತಾಂತ  ಮತ್ತು ಪ್ರೇಮ ಮೋಹಗಳ ವಿದ್ಯ ಮಾನಗಳ ಹೇಳಿಕೆ “

ಗಜ಼ಲ್ ಕಾವ್ಯಕ್ಕೆ ಇಂತಹುದೇ ವಿಷಯ ಎಂಬುದಿಲ್ಲ . ಪ್ರಾರಂಭದಲ್ಲಿ ಇದೊಂದು ಸಾಂಪ್ರದಾಯಿಕ ಕಾವ್ಯವಾಗಿತ್ತು. ಆದರೆ ಇತ್ತಿಗೆ ಎಲ್ಲಾ ವಿಷಯ ವಸ್ತುಗಳ ಮೇಲೂ,  ಸಾಮಾಜಿಕ ತಲ್ಲಣಗಳ ಮೇಲೂ,  ಪ್ರಕೃತಿ, ಆಧ್ಯಾತ್ಮಿಕ ,ಸ್ವಾತಂತ್ರ್ಯ ದ ಮೇಲೂ ಗಜ಼ಲ್ ರಚಿತವಾಗಿ ಜನ ಮನವನ್ನು ಹೆಚ್ಚು ಹೆಚ್ಚು ತಲುಪಿಸುವ ಕಾರ್ಯವಾಗುತ್ತಿದೆ. ಈ ಸಂಕಲನದಲ್ಲಿ ಒಟ್ಟು ೬೧ ಗಜ಼ಲ್ ಗಳಿವೆ.

ಕಾವ್ಯ ಲೋಕದ ಅನುಭವಗಳಿಂದ ಪಕ್ವಗೊಂಡ ಜೀವ ಸಂವೇದನೆಗಳನ್ನು ಒಡಲೊಳಗೆ ಹುದುಗಿಸಿಕೊಂಡು ಮನುಷ್ಯ ಸಂಬಂಧಕ್ಕಾಗಿ ತುಡಿಯುವ ,ಮಾನವೀಯತೆಯ ಅಭಿವ್ಯಕ್ತಿಗೆ  ಧಾವಂತ ತೋರಿ ಆತ್ಮದ ಶೋಧನೆಗೆ ತೊಡಗಿಸಿಕೊಂಡ ಅನುಭಾವದ ನಿಜ ನೆಲೆಯನ್ನು ದರ್ಶಿಸುವ ವ್ಯಕ್ತಿ ಎಂದು ಈ ಗಜ಼ಲ್ಗಳ ಮಿಸ್ರಗಳಿಂದ ತಿಳಿಯಬಹುದು…

ಮೇಲೆ ಚರ್ಮದ ಹೊದಿಕೆ , ದೇಹ ಎಲುಬಿನ ಗೂಡು ಬರಿ ಅಸ್ಥಿಪಂಜರ

ನರಳಿ ನರಳಿ ಮಣ್ಣನಪ್ಪುವ ಮುನ್ನ ಎದೆಗೊಮ್ಮೆ ಬಂದು ಒದೆದು ಹೋಗು. ಗ.೧೧

ಬರಲಿ ಬೇನೆ ಬೇಸರಿಕೆಗಳ ಮಹಾಪೂರ ನಶ್ವರ ಸುಖ ನನಗೆ ಬೇಕಾಗಿಲ್ಲ

ಕೈ ಸೋಲುವವರೆಗೂ ಹುಟ್ಟು ಹಾಕಿ ಬಾಳ ನೌಕೆಯೊಂದಿಗೆ ರಾಜಿಯಾಗುತ್ತೇನೆ… ಗ.೧೪

ಮನುಜರೆದೆಯ ಗಾಯಗಳಿಗೆ ಮುಲಾಮು ಹಚ್ಚುತ್ತೇನೆ ಉಸಿರಿರುವವರೆಗೆ

ಸತ್ತ ಮೇಲೆ ಅರುಣಾಳ ಶವದ ಮುಂದೆ ಕಣ್ಣೀರನು ಹಾಕಬೇಡಿ… ಗ.೧೭

ಶುದ್ಧ ನಿರಾಕಾರ ಬಹ್ಮ ತಾನೆಂದು ತಿಳಿದಾಗ ಆತ್ಮ ಪರಮಾತ್ಮನೊಡಗೂಡಿ ಮಾತು ಮೌನವಾಗುತ್ತದೆ ..ಗ.೫೫.

ಬಾಳ ಬನದಲಿ ಬೆಳೆದ ಅವಗುಣದ ಕಳೆ ತೆಗೆದು ಹುಲುಸಾಗಬೇಕು

ಮನದ ಬಯಲಲಿ ಅಷ್ಟಮದಗಳ ಕಳೆದು ಹಸನಾಗಬೇಕು ಬದುಕು. ಗ.೩೬.

ಈ ಗಜ಼ಲ್ ತನ್ನನ್ನೇ ತಾನು ಓರೆಗಚ್ಚಿಕೊಂಡು ಆತ್ಮ ಸಾಕ್ಷಾತ್ಕಾರ ಹೊಂದುವ ಹಾದಿಗೆ ಜಾರಿದಂತೆ  ಕಂಡು ಬಂತು.

ತಮ್ಮ ಸುದೀರ್ಘ ಸಾಹಿತ್ಯದ ಪಯಣದಲ್ಲಿ ಬದುಕಿನ ನಿಜ ಅರ್ಥ ತಿಳಿದ ಇವರು ಸಮಾಜದ ಅಂಧಕಾರಗಳಿಗೆ ಬೇಸತ್ತು ಕೈ ಚೆಲ್ಲಿದ ಹಲವಾರು ಸಂಕಟಗಳು, ಮನೋವ್ಯತೆಗಳು ಎದೆಗಾನಿಸಿ ಕಂಬನಿ ಮಿಡಿದು ಸೆಟೆದು ನಿಲ್ಲುವಂತೆ  ಇಲ್ಲಿ ಸುಳಿಯುತ್ತವೆ…

ಗುಡಿಸಲಿನ ಜನರು ಕಂಡ  ಕನಸುಗಳು ಮಹಡಿಯಲಿ ಕೊಳೆತು ಹೋಗುತ್ತವೆ

ಬಲಾತ್ಕಾರಕ್ಕೆ ಒಳಗಾದ ಹೆಣ್ಣು ಮಕ್ಕಳು ಗೋರಿಯಲಿ ನರಳುತ್ತಾರೆ ಈ ಲೋಕದಲ್ಲಿ..ಗ. ೩೫.  ಈ ಮಿಸ್ರಗಳು ಕೆಲವು ಉಲ್ಲೇಖಗಳಷ್ಟೇ…..

ಶೋಷಿತರ ಧ್ವನಿಗೆ ಕಿವಿಯಾಗಿ ಎದೆಯ ಆಲಯದಲಿ ಆಸರೆ ನೀಡುವ ಬಹುತೇಕ ಗಜ಼ಲ್ ಗಳು ಒಂದಕ್ಕಿಂತ ಒಂದು ವಿಭಿನ್ನ ಅರ್ಥ ಕಲ್ಲಿಸುವ ಬರಹ  ಈ ಸಂಕಲನದಲ್ಲಿ ಮನೆ ಮಾಡಿದೆ ಆದರೆ ನಾನು ಇಲ್ಲಿ ಇದನ್ನು ಮಾತ್ರ ಉದಾಹರಿಸಿರುವೆ…

ತುಳಿತಕ್ಕೆ ಒಳಗಾದ ಜನರೆಲ್ಲ ಮೇಲೆದ್ದು ಕಟಿಬದ್ದರಾಗಲು ಹರಸು

ಉಂಡ ಕಹಿ ನೋವಿನ ನೆತ್ತರದ ಹಾಳೆಯಲಿ ಅರುಣಾಳ ಹೊಸ ಇತಿಹಾಸವನ್ನೇ ಬರೆಸು ಸಾಕಿ..ಗ. ೪೭.

ಚಿಂದಿ ಆಯ್ದ ಕೈಗೆ ಪೆನ್ನು ಪುಸ್ತಕವಿತ್ತು ಅಕ್ಷರದ ಜಾತ್ರೆಗೆ ಅವರನ್ನು ಕಳಿಸು ಸಾಕಿ.

ದ್ವೇಶ , ಅಸೂಯೆ, ವಂಚನೆ, ಮತ್ಸರ, ಹೊಡದಾಟ, ಹಾರಾಟ ,ಸ್ವಾರ್ಥ ಏಕೆ ಬೇಕು ಜೀವನ ಮೂರು ದಿನದ ಸಂತೆ  ಜನರೆಲ್ಲರನ್ನು ಪ್ರೀತಿಯಿಂದ ಕಾಣು ಮಾನವತೆಯಿಂದ ಮಹಾ ಮಾನವನಾಗು ಎನ್ನವ ಸಂದೇಶ ನೀಡಿ  , ಆ ಹಾದಿಯಲ್ಲಿ ಬದುಕು ಸವೆಸಲು  ಹೆಣಗುತ್ತಿರಬಹುದು ಎಂದೆನಿಸದಿರದು.

ಹೀಗೆ ಓದುತ್ತಾ ಸಾಗಿದಂತೆ ಲೌಕಿಕ ಜಗತ್ತಿನ ಜಂಜಡಗಳಿಂದ ಅಲೌಕಿಕ , (ಅಧ್ಯಾತ್ಮ)ದತ್ತ

ಹೊರಳಿಸುವ ಇವರ ಬರಹಗಳು ಜೀವಕ್ಕೆ ಸಂಜೀವನಿಯನ್ನು ಹರಿಸಿ  ಹೊಸ ಚೈತನ್ಯವನ್ನು ತಂದುಕೊಡುತ್ತದೆ. ಈ ಸಂಕಲನದ ಜೊತೆಗೆ ಇನ್ನಷ್ಟು ಮತ್ತಷ್ಟು ಸಂಕಲನಗಳು ಹೊರ ತಂದು ಸಮಾಜದ ಅಂಕು ಡೊಂಕಿನ ಕವಲು ದಾರಿಗಳನ್ನು ಸಮಸಮಾಜವಾಗಿಸುವಲ್ಲಿ ಇವರ ಸಾಹಿತ್ಯ ಧ್ವನಿಸಲಿ ಎಂದು ಈ ಸಂದರ್ಭದಲ್ಲಿ ಶುಭಹಾರೈಸುತ್ತಾ ಇವರ ನೆರಳಿನಲ್ಲಿ  ಹೊಸ ತಲೆಮಾರಿನ ಉದಯೋನ್ಮುಖ ಬರಹಗಾರರು ಸಾಹಿತ್ಯದ ಸವಿ ಉಂಡು ಬೆಳಕಿಗೆ ಬರಲೆಂದು ಆಶಿಸುತ್ತೇನೆ.

************************

ಅಶೋಕ ಬಾಬು ಟೇಕಲ್ಷ

2 thoughts on “ಹಿಮದೊಡಲ ಬೆಂಕಿ

  1. ಅಶೋಕ ಅವರೆ ಪುಸ್ತಕ ಪರಿಚಯ ಸೊಗಸಾಗಿ ಮಾಡಿದ್ದೀರಿ ನಿಮಗೂ ಅರುಣಾ ರಿಗೂ ಅಭಿನಂದನೆಗಳು

Leave a Reply

Back To Top