ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ”

ಕಾವ್ಯ ಸಂಗಾತಿ ಡಾ. ಹೆಚ್. ನಟರಾಜ್ ಆರ್ಯ “ಕೆಂಪು ಕಾಶ್ಮೀರ” ಹಿಮಾಲಯ ಮಡಿಲಲ್ಲಿಸ್ವರ್ಗ ಮಲಗಿತ್ತು,ಬೆಳ್ಳಿಯ ಹಿಮದ ಹಾಸಿಗೆಯಲ್ಲಿಮೌನ ಮುತ್ತು ಹೊಳೆಯಿತು. ದಾಲ್ ಸರೋವರಸ್ಫಟಿಕ ಕಣ್ಣಾಗಿ,ಆಕಾಶ ತನ್ನ ಮುಖ ನೋಡಿತು;ಶಿಕಾರಾಗಳ ಕನಸು ತೇಲಿತುನೀರಿನ ಎದೆ ಮೇಲೆ, ಮೃದುವಾಗಿ. ಗುಲ್ಮಾರ್ಗ್ ಹಿಮಮಕ್ಕಳ ನಗುವಿನಂತೆ,ಪಹಲ್ಗಾಮ್ ಹುಲ್ಲುತಾಯಿಯ ಮಡಿಲಂತೆ,ಚಿನ್ನಾರ್ ಎಲೆಗಳುಕಾಲದ ಬಣ್ಣ ಹೊತ್ತವು. ಒಂದು ಕ್ಷಣದಲ್ಲಿಸ್ವರ್ಗ ನಡುಗಿತು,ಗುಂಡಿನ ಶಬ್ದಪರ್ವತ ಹೃದಯ ತೂರಿತು,ಹಿಮದ ಬಿಳುಪುರಕ್ತದ ಕೆಂಪು ಕುಡಿದುನೀರಾಗಿ ಹರಿಯಿತು. ಹೂವಲ್ಲ, ಟುಲಿಪ್ ಅಲ್ಲ,ನೆಲ ಮೇಲೆ ಬಿದ್ದಮಾನವ ಉಸಿರಿನ ಗುರುತು. ಪ್ರವಾಸದ ನಗುಮರಣದ ಅಳುವಾಯಿತು,ಗಾಳಿ ಮಾತು ನಿಶ್ಶಬ್ದವಾಗಿ ಕರಗಿತು,ಹೃದಯದ ನೋವುಹಿಮದಲ್ಲಿ ಮಿಶ್ರಿತ. ಕಾಡು ಮೌನವಾಗಿ ತಿಳಿದುಕೊಂಡಿತು,ರಕ್ತದ ಪ್ರತಿಜ್ಞೆಮಣ್ಣಿಗೆ ನೆನೆಸಿತು;ಹೆಜ್ಜೆಗಳ ಶಬ್ದ ಮೌನದಲ್ಲಿ ಹಾರಿತು,ಹೃದಯದ ನೋವು ನದಿಯಲ್ಲಿ ಹರಿಯಿತು. ನದಿಗಳು ಹರಿಯುತ್ತಿವೆ,ಆದರೆ ಹಾಡುತ್ತಿಲ್ಲ,ಹಿಮದ ಶ್ವೇತದಲ್ಲಿ ಕೆಂಪು ನೀರು ಹರಿದು,ಮರುಳು ಹೊಳೆಯುತ್ತದೆ,ನೋವು ಕುಸಿದು,ಆಕ್ರಂದನ ತೇಲಿ. ಕಾಶ್ಮೀರಾ,ನೀನು ಸುಂದರ,ಆದರೆ ನಿನ್ನ ಸೌಂದರ್ಯಸಾವು ನೆರಳಿನಿಂದ ಮಿಶ್ರಿತ. ನಿಲ್ಲಲಿ ಉಗ್ರವಾದ,ಗುಂಡಿಗೆ ಜಾಗ ಬೇಡ;ಹಿಮ ಮತ್ತೆ ಬಿಳಿಯಾಗಲಿ,ನದಿಗಳು ಹಾಡಾಗಲಿ,ಹೃದಯಗಳಲ್ಲಿ ಮರಳಿಮಾನವೀಯತೆ ಆರಾಧನೆಯಾಗಲಿ. ಕೆಂಪು ಅಧ್ಯಾಯಕಣ್ಣೀರಾಗಿ ಒಣಗಿ,ಮಾನವೀಯತೆಇಲ್ಲಿ ಮತ್ತೆಸ್ವರ್ಗವಾಗಲಿ. ಡಾ. ಹೆಚ್. ನಟರಾಜ್ ಆರ್ಯ

ಡಾ. ಹೆಚ್. ನಟರಾಜ್ ಆರ್ಯ ಅವರ “ಕೆಂಪು ಕಾಶ್ಮೀರ” Read Post »

ಇತರೆ

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್

ಮಹಿಳಾ ಸಂಗಾತಿ “ವೀಣಾ ಹೇಮಂತ್ ಗೌಡ ಪಾಟೀಲ್ “ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು ಹೆಣ್ಣಿಗೆ ಎಲ್ಲರೂ ಪರಿಚಿತರು ಆದರೆ ಆಕೆಯ ಪರಿಚಯ ಯಾರಿಗೆ ಇದೆ ಅಂತ ಕೇಳಿದರೆ ಬಹುಶಹ ಒಬ್ಬೊಬ್ಬರು ಒಂದೊಂದು ರೀತಿ ಆಕೆಯ ಪರಿಚಯವನ್ನು ಮಾಡಿಕೊಡಬಹುದು. ಸಾಮಾನ್ಯವಾಗಿ ಹೆಣ್ಣು ಎಂದರೆ ತಾಯಿ, ಸಹೋದರಿ, ಪತ್ನಿ, ಮಗಳು ಈ ನಾಲ್ಕು ಹೆಣ್ಣು ಮಕ್ಕಳ ಜೊತೆಗಿನ ನಮ್ಮ ಸಂಬಂಧಗಳು. ಈ ಸಂಬಂಧದ ಹೊರತಾಗಿ ಆಕೆ ಓರ್ವ ಸ್ನೇಹಿತೆಯೂ ಆಗಬಹುದು. ಒಂದು ಹಂತದವರೆಗೆ ಆಕೆಯೊಂದಿಗೆ ನಮ್ಮ ಮನ ಬಿಚ್ಚಿ ನಾವು ಮಾತನಾಡಲು ಸಾಧ್ಯವಾಗುತ್ತದೆ. ಅವರವರು ಕಂಡುಕೊಂಡಂತೆ ಹೆಣ್ಣನ್ನು ಎಲ್ಲರೂ ವರ್ಣಿಸುತ್ತಾರೆ ಹೊರತು ಆಕೆಯ ನಿಜವಾದ ಅಸಲಿಯತ್ತು ಯಾರಿಗೂ ಗೊತ್ತಿಲ್ಲ… ಕೆಲವರಿಗೆ ಹೆಣ್ಣು ಮಾಯೆಯಾದರೆ ಮತ್ತೆ ಕೆಲವರಿಗೆ ಆಕೆ ಮೋಹಿನಿ ಮತ್ತೆ ಕೆಲವರಿಗೆ ಆಕೆ ದೇವತಾ ಸ್ವರೂಪಿಣಿ ಮತ್ತೆ ಕೆಲವರಿಗೆ ಆಕೆ ಜಾರಿಣಿಯು ಆಗಬಹುದು, ಇನ್ನು ಕೆಲವರಿಗೆ ಆಕೆಯ ರಕ್ಕಸಿಯು ಆಗಬಹುದು…. ಅವರವರ ಭಾವಕ್ಕೆ ತಕ್ಕಂತೆ ಅವರು ಹೆಣ್ಣಿನ ಕುರಿತು ಮಾತನಾಡುತ್ತಾರೆಯೇ ಹೊರತು ಖುದ್ದು ಆಕೆ ಯಾರೆಂದು ಅವರಿಗೆ ಗೊತ್ತಿರುವುದಿಲ್ಲ.ಆಕೆ ಯಾರ ಅಂಕೆಗೂ ನಿಲುಕುದ ಸೀಮಾತೀತಳು. ಯಾವ ಉಪಮೆಗೆ ನಿಲುಕದ ಉಪಮಾತೀತಳು.ಹೆಣ್ಣು ಮೌನದಲ್ಲೇ ಸಾವಿರ ಮಾತುಗಳನ್ನು ಹೊತ್ತು ನಡೆಯುವ ಛಾತಿಯುಳ್ಳವಳು.ತನ್ನ ಕರ್ತವ್ಯಕ್ಕೆ ಬದ್ಧಳಾಗಿ ತನ್ನನ್ನು ನಂಬಿದವರನ್ನು ತನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪೊರೆಯುವವಳು. ಯಾರಿಗೂ ಕೇಡನ್ನು ಬಯಸದ ಆಕೆ ಜನರು ತನ್ನನ್ನು ಕೈಬಿಟ್ಟರೂ ದೇವರು ತನ್ನೊಂದಿಗೆ ಇದ್ದಾನೆ ಎಂಬ ನಂಬಿಕೆಯ ಬಲದಿಂದಲೇ ಬದುಕನ್ನು ನಡೆಸುತ್ತಾಳೆ. ಆಕೆಯ ಪ್ರಕಾರ ಬದುಕು ಪ್ರದರ್ಶನವಲ್ಲ ಅದೊಂದು ಪ್ರಯಾಣ… ಈ ಪ್ರಯಾಣದಲ್ಲಿ ಹೆತ್ತವರು, ಶಿಕ್ಷಕರು ಸಂಗಾತಿ ಮಕ್ಕಳು ಎಲ್ಲವೂ ಆಯಾ ಸಮಯಕ್ಕೆ ಆಕೆಯ ಜೊತೆಗೆ ಸಾಗುತ್ತದೆ ಇದೊಂದು ರೀತಿಯಲ್ಲಿ ಬದುಕಿನ ಪ್ರತಿಯೊಂದು ಕ್ಷಣವನ್ನು ಉಸಿರಾಡುವ ಆನಂದಿಸುವ ಪ್ರಭುದ್ಧತೆಯ ಹಾದಿಯಲ್ಲಿ ಸಾಗಿ ಹೋಗುವ ಪಯಣ. ಇನ್ನೂ ಹೇಳಬೇಕೆಂದರೆ ಆಕೆ ಜೀವನದ ಅರ್ಥ ಏನು ಎಂಬ ಪ್ರಶ್ನೆಯನ್ನು ಕೇಳಿಕೊಳ್ಳುವುದಿಲ್ಲ ಬದಲಾಗಿ ತನ್ನ ಮನದ ಆಳದ ಕತ್ತಲೆಯನ್ನು ಆಕೆ ತಳ್ಳಿ ಹಾಕದೆ ಮರೆ ಮಾಡದೆ ಆ ಕತ್ತಲೆಯ ಒಳಗಿರುವ ಬೆಳಕಿನತ್ತ ಮುಖ ಮಾಡುತ್ತಾಳೆ.ಆಕೆಗೆ ಗೊತ್ತು ಆಕೆ ನಡೆಯುತ್ತಿರುವ ಹಾದಿಯಲ್ಲಿ ಆತ್ಮ ವಿಶ್ವಾಸ ಹಾಗೂ ನಿಶಬ್ದ ಶಕ್ತಿ ಮಾತ್ರ ಆಕೆಯೊಂದಿಗೆ ಇರುತ್ತದೆ ಎಂದು. ಆಕೆ ಪ್ರತಿಭಟನೆಯನ್ನು ಒಂದು ಪಾಠವಾಗಿ ಸ್ವೀಕರಿಸುತ್ತಾಳೆ ಪ್ರತಿ ತಪ್ಪು ಹೆಜ್ಜೆಯನ್ನು ಅನುಭವದ ಬೆಳಕಾಗಿ ಮಾರ್ಪಡಿಸಿಕೊಳ್ಳುತ್ತಾಳೆ. ತನ್ನ ಅಂತರಾಳದಲ್ಲಿ ಮತ್ತಷ್ಟು ದೃಢವಾಗಿ ರೂಪುಗೊಳ್ಳುತ್ತಾಳೆ.ಮನೆಯ ಪ್ರತಿಯೊಬ್ಬರ ಆಗುಹೋಗುಗಳನ್ನು ಅನುಸರಿಸಿ ಅದಕ್ಕೆ ತಕ್ಕಂತೆ ತನ್ನ ಬದುಕನ್ನು ರೂಪಿಸಿಕೊಳ್ಳುವ ಆಕೆ ಒಂದೊಮ್ಮೆ ನಿಜವಾಗಿಯೂ ತನ್ನದೇ ಆದ ಬದುಕನ್ನು ನಡೆಸಬೇಕು ಎಂದು ಇಚ್ಛಿಸಿದರೆ ಖಂಡಿತವಾಗಿಯೂ ಈ ಜೀವ ಜಗತ್ತಿನ ಉಳಿದ ಜೀವಿಗಳು ತಲ್ಲಣಗೊಳ್ಳುತ್ತವೆ ಕಾರಣ ಎಲ್ಲರ ಜೀವನದ ದೈನಂದಿನ ಚಟುವಟಿಕೆಗಳ ಕೇಂದ್ರ ಬಿಂದು ಆಕೆಯೇ. ಇವರೆಲ್ಲರ ಚಟುವಟಿಕೆಗಳಿಗೆ ಪೂರಕವಾಗಿ ತನ್ನ ಇಡೀ ಬದುಕನ್ನು ಮುಡಿಪಾಗಿರುವ ಆಕೆಯ ಪಾಲಿಗೆ ಬದುಕು ಎಂದರೆ ಗಮ್ಯ ಸ್ಥಾನಕ್ಕೆ ಓಡುವ ಓಟವಲ್ಲ ಬದಲಾಗಿ ತಾನಿಡುವ ಪ್ರತಿ ಹೆಜ್ಜೆಯಲ್ಲೂ ಅರ್ಥವನ್ನು ಕಂಡುಕೊಳ್ಳುವ ಪಯಣ. ಆಕೆಯ ಅನುಭವಗಳೇ ಆಕೆಯನ್ನು ಇಂದಿನ ವ್ಯಕ್ತಿಯಾಗಿ ರೂಪಿಸುತ್ತದೆ.ಒಂದೊಮ್ಮೆ ಆಕೆಯನ್ನು ದುರ್ಬಲಗೊಳಿಸಿದ ಘಟನೆಗಳು ಇಂದು ಆಕೆಯನ್ನು ಗಟ್ಟಿಗೊಳಿಸಿರುತ್ತವೆ. ಪ್ರತಿ ಘಟನೆಗೂ ಒಂದು ಅರ್ಥವಿದೆ ಎಂಬ ನಂಬಿಕೆಯಿಂದ ಬದುಕುವ ಆಕೆ ಜೀವನದ ನಿಜವಾದ ಗೆಲುವು ಇತರರನ್ನು ಮೀರಿಸುವುದಲ್ಲ ಬದಲಾಗಿ ತನ್ನ ಅಂತರಂಗದ ಕತ್ತಲೆಯನ್ನು ಹೊಡೆದೋಡಿಸುವುದು ಎಂಬ ಅರಿವನ್ನುಹೊಂದಿರುತ್ತಾಳೆ ಅಂತೆಯೇ ಆಕೆ ಎಲ್ಲರನ್ನು ಕ್ಷಮಿಸಬಲ್ಲಳು ಕೂಡ. ಬದುಕಿನ ಪಯಣದಲ್ಲಿ ವಯೋ ಸಹಜವಾಗಿ ಕೆಲವೊಮ್ಮೆ ಆಕೆಯ ನಡಿಗೆ ನಿಧಾನವಾಗಬಹುದು… ಆದರೆ ನಂಬಿಕೆ ಆಕೆಯನ್ನು ಮುನ್ನಡೆಸುತ್ತದೆ.ಇಷ್ಟೆಲ್ಲ ಇದ್ದರೂ ಕೂಡ ಒಮ್ಮೊಮ್ಮೆ ಹೆಣ್ಣು ಮಕ್ಕಳು ಮಾನಸಿಕವಾಗಿ ನೊಂದು ಬೇಯುತ್ತಾರೆ. ಅಸ್ತಿತ್ವ ರಹಿತತೆಯನ್ನು ಅನುಭವಿಸುತ್ತಾರೆ. ಕಳೆದು ಹೋದವರಂತೆ ಭಾವಿಸುತ್ತಾರೆ. ಬದುಕಿನಲ್ಲಿ ಏನನ್ನು ಸಾಧಿಸಲು ಸಾಧ್ಯ ವಾಗಲಿಲ್ಲ ಎಂಬ ಭಾವದಿಂದ ಹತಾಶೆಯನ್ನು ಹೊಂದುತ್ತಾರೆ.ಅಂತಹ ಹೆಣ್ಣು ಮಕ್ಕಳಿಗೆ ಒಂದು ಕಿವಿಮಾತುಕನ್ನಡಿಯ ಮುಂದೆ ನಿಂತು ತನ್ನ ಬಿಂಬವನ್ನೇ ಪರಿಭಾವಿಸುವುದರಿಂದ ಆತ್ಮ ಸಾಕ್ಷಾತ್ಕಾರ ಇಲ್ಲವೇ ಸ್ವಂತಿಕೆ ಒದಗಿ ಬರುವುದಿಲ್ಲ. ನಾನು ಎಲ್ಲವನ್ನು ಪಡೆದುಕೊಂಡಿದ್ದೇನೆ ಎಂದು ಹೇಳುವ ಧೈರ್ಯ ಯಾರಿಗೂ ಇಲ್ಲ ಹಾಗೆ ಪಡೆದುಕೊಂಡವರು ಅದನ್ನು ವಿವರಿಸಲು ಕೂಡ ಸಾಧ್ಯವಿಲ್ಲ ಎಲ್ಲವೂ ಅವರವರ ದೃಷ್ಟಿಕೋನದ ಮೇಲೆ ನಿರ್ಧಾರವಾಗಿರುತ್ತದೆ ….ಆದರೆ ಶಿಕ್ಷಣ ಮತ್ತು ಸಮಾಜದ ಕೆಲಸಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಅಸ್ತಿತ್ವವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ.ಹೆಂಗಸರು ತಮ್ಮಲ್ಲಿರುವ ಸಾಮರ್ಥ್ಯವನ್ನು ಬಳಸಲು ಮುಂದಾಗದಿದ್ದರೆ ತಮ್ಮ ಮಾನವೀಯ ನೆಲೆಗಳನ್ನು ಕಳೆದುಕೊಳ್ಳುತ್ತಾರೆ.ಪ್ರಸ್ತುತ ಬದುಕಿನಲ್ಲಿ ಹೆಣ್ಣು ಮಕ್ಕಳಿಗೆ ಗೊತ್ತು ಗುರಿಗಳಿಲ್ಲ ಆಸೆ ಆಕಾಂಕ್ಷೆಗಳಿಲ್ಲ ನಾಳೆಗಾಗಿ ಹಂಬಲಿಸುವುದಿಲ್ಲ ತನ್ನ ದೇಹ ಸಮರ್ಥವಾಗಿರುವ ಹೊತ್ತಿನಲ್ಲಿಯೇ ಏನನ್ನಾದರೂ ಸಾಧಿಸಬೇಕು ಎಂಬ ಛಲವಿಲ್ಲ ಇದೊಂದು ರೀತಿಯ ಆತ್ಮಹತ್ಯೆಯೇ ಸರಿ. ಮಕ್ಕಳನ್ನು ಹೆತ್ತು, ಹೊತ್ತು ಅವರನ್ನು ಶಾಲೆಗೆ ಕಳುಹಿಸಿದ ಹೊತ್ತಿನಲ್ಲಿ ಸುಮ್ಮನೆ ಕುಳಿತುಕೊಂಡ ಹೆಣ್ಣು ಮಕ್ಕಳು ತಮಗೆ ತಾವೇ ಮಿತಿಗಳನ್ನು ಹಾಕಿಕೊಂಡು ತಮ್ಮ ಅನನ್ಯ ಸಾಮರ್ಥ್ಯಗಳ ಅರಿವನ್ನು ಕಳೆದುಕೊಂಡು ಬಿಡುತ್ತಾರೆ.ಕೇವಲ ಎರಡು ದಶಕಗಳ ಹಿಂದೆ ಗೃಹಿಣಿಯರನ್ನು ಸಂದರ್ಶಿಸಿದ ಮಾಧ್ಯಮ ಒಂದು ಹೆಂಗಸಾಗಿ ಕೆಲಸ ಮಾಡುವಾಗನೀವು ಏನೆಲ್ಲಾ ತಳಮಳವನ್ನು ಎದುರಿಸಿದಿರಿ? ನಿಮ್ಮ ಹಿಂದಿನ ಬದುಕಿನಲ್ಲಿ ಮುಖ್ಯ ಸಂತೃಪ್ತಿ ಮತ್ತು ಮುಖ್ಯ ತಳಮಳ ಯಾವುದು?ನಿಮ್ಮೊಳಗೆ ನೀವು ಹೇಗೆ ಬದಲಾಗಿದ್ದೀರಿ ವಯಸ್ಸಾಗುವುದನ್ನು ನೀವು ಹೀಗೆ ಗ್ರಹಿಸುತ್ತಿದ್ದೀರಿ ಹಾಗೂ ಇದಕ್ಕಿಂತ ಭಿನ್ನವಾಗಿ ಬೇರೇನು ಮಾಡಬೇಕೆಂಬ ಆಸೆ ನಿಮ್ಮಲ್ಲಿತ್ತು ಎಂಬ ಪ್ರಶ್ನೆಗಳನ್ನು ಕೇಳಿದಾಗ ಅವರ ನಿಜ ಸಮಸ್ಯೆಗಳಿಗೆ ಶಿಕ್ಷಣ ಕಾರಣವಲ್ಲ ಎಂಬುದು ಸ್ಪಷ್ಟವಾಯಿತು ಅವರೆಲ್ಲರೂ ಶಿಕ್ಷಣವನ್ನು ತಾವು ಗಂಭೀರವಾಗಿ ಪರಿಗಣಿಸಲಿಲ್ಲ ಹಾಗೂ ಅದನ್ನು ಬಳಸಲು ತಕ್ಕ ಯೋಜನೆ ಮಾಡಿಕೊಳ್ಳಲಿಲ್ಲ ಎಂದು ಬೇಸರದಿಂದ ನುಡಿದಿದ್ದರು.ಮದುವೆಯಾದವರಲ್ಲಿ ಬೆರಳೆಣಿಕೆಯ ಜನರು ವಿಚ್ಛೇದಿತರಾಗಿದ್ದರೂ ಮತ್ತೆ ಶೇಕಡ ೯0 ಜನ ಮಕ್ಕಳಿಗೆ ತಾಯಿಯಾಗಿದ್ದರು ಮತ್ತೆ ಕೆಲವರು ತಮಗೂ ಗೃಹಿಣಿ ಎಂದು ಹೇಳಿಕೊಳ್ಳಲು ಸಂತಸವೇನು ಇಲ್ಲ ಎಂಬ ಭಾವವನ್ನು ಹೊಂದಿದ್ದರು.ಇನ್ನೂ ಕೆಲವರಿಗೆ ತಾವು ಪಡೆದ ಶಿಕ್ಷಣ ತಮ್ಮೊಳಗಿನ ತಳಮಳಕ್ಕೆ ಕಾರಣ ಎಂದು ಅರಿವಾಗಿತ್ತು. ತಮಗೆ ಶಿಕ್ಷಣ ಒದಗಿಸಿದ್ದ ಸ್ವಾಯತ್ತತೆ, ಗುರಿ, ಮೌಲ್ಯ ಹಾಗೂ ಬದ್ಧತೆಗಳನ್ನು ತಾವು ಬಳಸಿಕೊಂಡಿಲ್ಲ ಎಂಬುದು ಅವರ ಬೇಸರಕ್ಕೆ ಕಾರಣವಾಗಿತ್ತು.ಮತ್ತೆ ಕೆಲವರು ಸಮುದಾಯದ ಮಿತಿಯಲ್ಲಿ ತಮ್ಮ ಶೈಕ್ಷಣಿಕ ಅರ್ಹತೆಯನ್ನು ಬಳಸುವ ಮೂಲಕ ತಮ್ಮ ಸ್ವಂತಿಕೆಯನ್ನು ಪುನರ್ನವೀಕರಿಸಿಕೊಂಡು ತಮ್ಮ ಬದುಕಿನಲ್ಲಿ ಹೊಸತನವನ್ನು ಕಂಡುಕೊಂಡರು.ಮುಂದೆ ಕೆಲವು ವರ್ಷಗಳ ನಂತರ ಅವರನ್ನು ಈ ಕುರಿತು ಮತ್ತೊಮ್ಮೆ ಪ್ರಶ್ನೆಸಿದಾಗ ಕೆಲವರ ಮನಸ್ಸಿನಲ್ಲಿ ಗೃಹಿಣಣಿಯರಾಗಿದ್ದ ಕಾರಣ ಕಹಿ ಭಾವನೆ ಇಲ್ಲವೇ ನಿರಾಸೆ ಮತ್ತು ಹತಾಶೆಗಳು ಮನೆ ಮಾಡಿದ್ದವು.ಮತ್ತೆ ಕೆಲವರು ಉದ್ಯೋಗ ಮತ್ತು ತಾಯ್ತನಗಳನ್ನು ಒಗ್ಗೂಡಿಸಿಕೊಂಡಿದ್ದರೆ ಚೆನ್ನಾಗಿತ್ತು ಎಂದು ಹೇಳಿದರು .ಇನ್ನೂ ಕೆಲವರು ನಾನ್ಯಾರು ಎಂಬುದೇ ನನಗೆ ಇನ್ನೂ ಅರ್ಥವಾಗಿಲ್ಲ ನನ್ನದೇ ಆದ ಸೃಜನಶೀಲ ಜೀವನವನ್ನು ಕಟ್ಟಲು ತಕ್ಕ ಯೋಚನೆ ಮಾಡಬೇಕಿತ್ತು ಎಂದು ಈಗ ಅನಿಸುತ್ತಿದೆ ಎಂದು ಬೇಸರ ಪಟ್ಟುಕೊಂಡರು.ಜೀವನಪೂರ್ತಿ ಅವರಿವರ ಕೆಲಸಗಳನ್ನು ಮಾಡುತ್ತಾ ತಮ್ಮನ್ನು ತಾವು ಕಡೆಗಣಿಸಿದ ಪರಿಣಾಮವಾಗಿ ಮಾನಸಿಕವಾಗಿ ಕುಸಿದು ಹೋಗುತ್ತಾ, ಕೀಳರಿಮೆಯಿಂದ ಬಳಲುತ್ತಾ ಹೆಣ್ಣುತನ ಎಂಬ ಕಣ್ಕಟ್ಟಿನಿಂದ ತಮ್ಮಂತಹ ಹೆಣ್ಣು ಮಕ್ಕಳು ಬದುಕಿನ ಕುರಿತು ನೂರೆಂಟು ತೊಂದರೆಗಳನ್ನು, ನೋವುಗಳನ್ನು, ನಕಾರಾತ್ಮಕ ಭಾವಗಳನ್ನು ವ್ಯಕ್ತ ಪಡಿಸುತ್ತಾರೆ. ಗಂಡ ಮನೆ ಮತ್ತು ಮಕ್ಕಳಿಗೆ ಮಾಡಿ ಮಾಡಿ ನಾನು ನನ್ನ ಬದುಕನ್ನೇ ಸವೆಸಿದೆ ಎಂದು ಹೇಳುತ್ತಾರೆ ಮಾಡಿದ ಮನೆ ಕೆಲಸಗಳನ್ನೇ ಮತ್ತೆ ಮತ್ತೆ ಮಾಡುತ್ತಾ ಇನ್ನಷ್ಟು ಮತ್ತಷ್ಟು ಉಜ್ಜುತ್ತಾ ಕಾಲ ಕಳೆದಿರುತ್ತಾಳೆ.ಅದರ ಬದಲಾಗಿ ಮನೆವಾರ್ತೆಯೇ ತಮ್ಮ ಉದ್ಯೋಗ ಎಂದು ನಂಬುವುದನ್ನು ನಿಲ್ಲಿಸಿ ತಮ್ಮ ಮನೆ ವಾರ್ತೆಯ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರೈಸಬೇಕು.. ಮನೆ ಮಕ್ಕಳು ಕುಟುಂಬದ ಹೊರತಾಗಿಯೂ ತಮಗೆ ಒಂದು ಬದುಕಿದೆ ಎಂಬ ಅರಿವನ್ನು ಮೂಡಿಸಿಕೊಂಡು ಹಾಡು ಹೊಲಿಗೆ ಹಸೆ, ಕಂಪ್ಯೂಟರ್ ಕಲಿಕೆ ಚಿತ್ರಕಲೆ ಸಂಗೀತ ಸೌಂದರ್ಯವರ್ಧನ ಚಿಕಿತ್ಸೆಗಳು ಹೀಗೆ ಹತ್ತು ಹಲವು ಕಲಿಕೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ತಮ್ಮ ಬದುಕಿನಲ್ಲಿ ತಮಗಾಗಿ ತಾವೇ ಒಂದು ಸ್ಥಾನವನ್ನು ಕಲ್ಪಿಸಿಕೊಂಡು ಆ ಸ್ಥಾನದಲ್ಲಿ ಪಟ್ಟಾಗಿ ಕುಳಿತುಕೊಳ್ಳುವ ರೀತಿನಲ್ಲಿ ಕಾರ್ಯ ನಿರ್ವಹಿಸಿದ ಹೆಣ್ಣು ಮಕ್ಕಳು ಬದುಕಿನಲ್ಲಿ ಸಾಕಷ್ಟು ವಿಷಯಗಳಲ್ಲಿ ಸಾಧನೆ ಮಾಡಬಹುದು.ಪ್ರತಿ ಹೆಣ್ಣು ಮಗಳು ಕೂಡ ತಾನು ಕೇವಲ ಮಗಳು ಪತ್ನಿ ತಾಯಿ ಮಾತ್ರವಲ್ಲ ಸಾಮಾಜಿಕ ಹೊಣೆಗಾರಿಕೆಯನ್ನು ಹೊಂದಿರುವ ಓರ್ವ ಹೆಣ್ಣುಮಗಳು ಸಮಾಜ ರಚನೆಯ ಭಾಗ ತಾನು ಎಂದು ಅರಿತುಕೊಳ್ಳಬೇಕು.ಪ್ರಸ್ತುತ ವ್ಯವಸ್ಥೆಯು ಹೆಣ್ಣು ಮಕ್ಕಳಿಗೆ ಒಂದು ಹೊರೆ ಎಂಬಂತಾದರೆ ಅದರಿಂದ ಹೊರಬರಲು ಉದ್ಯೋಗವನ್ನು ಜೀವನ ಯೋಜನೆಯ ಭಾಗವಾಗಿಸಿಕೊಂಡು ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ರಾಜಕೀಯ ಮತ್ತು ಮನೋರಂಜನೆಯ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವ ಮೂಲಕ ಸ್ವಾತಂತ್ರ್ಯ, ಸಾಮರ್ಥ್ಯ ಮತ್ತು ಆತ್ಮಸ್ಥೈರ್ಯವನ್ನು ಪಡೆದುಕೊಳ್ಳಬಹುದು.ಕೆಲವು ಹೆಣ್ಣು ಮಕ್ಕಳು ಉದ್ಯೋಗಗಳನ್ನು ಪಡೆದುಕೊಂಡರೂ ಅದಕ್ಕೆ ತಕ್ಕ ಹೊಸ ಜೀವನಯೋಜನೆಯನ್ನು ರೂಪಿಸುವುದಿಲ್ಲ. ಉದ್ಯೋಗಗಳು ತಮ್ಮ ಭವಿಷ್ಯದ ಬಾಗಿಲನ್ನು ತೆರೆದು ತನ್ನ ಉದ್ಯೋಗದ ಗಳಿಗೆ ಕುಟುಂಬದ ವೆಚ್ಚಕ್ಕೆ ನೆರವಾದಾಗ ಮಾತ್ರ ತಾನು ದುಡಿದದ್ದು ಸಾರ್ಥಕ ಎಂಬುದು ಹೆಣ್ಣು ಮಕ್ಕಳ ಮನಸ್ಥಿತಿ. ಯಾವುದೇ ವೃತ್ತಿ ಬಯಸುವ ಬದ್ಧತೆಗೆ ಬೇಕಾದ ಶಿಸ್ತು ಮತ್ತು ಪ್ರಯತ್ನಗಳನ್ನು ನೀಡಬಯಸುವ ಹೆಣ್ಣು ಮಕ್ಕಳು ಹೆಣ್ಣುತನ ಎಂಬ ಕಣ್ಕಟ್ಟನ್ನು ದೂರವಿರಿಸಬೇಕು.. ಆ ಹೆಣ್ಣುತನ ಎಂಬ ಕಣ್ಕಟ್ಟು ಆಕೆಯಲ್ಲಿ ಭಯವನ್ನು ಬಿತ್ತಬಹುದು ಪೂರ್ವಾಗ್ರಹಗಳನ್ನು ಹೇರಬಹುದು ಆಕೆಯಲ್ಲಿ ಹಿಂಜರಿಕೆಯನ್ನು ಉಂಟುಮಾಡಬಹುದು ಧಾರ್ಮಿಕ ಸಾಂಪ್ರದಾಯಿಕತೆಯ ಮುಖವಾಡ ಧರಿಸಿ ಪ್ರತಿರೋಧಗಳನ್ನು ಒಡ್ಡಬಹುದು.ಸಂಪ್ರದಾಯಬದ್ಧರಲ್ಲದ ಹೆಣ್ಣು ಮಕ್ಕಳಿಗೂ ಕೂಡ ಮನೆ ಬಿಟ್ಟು ದುಡಿಯಲು ಹೋಗುವುದೆಂದರೆ, ಗಂಡ ಮಕ್ಕಳನ್ನು ಕಡೆಗಣಿಸಿದಂತೆ ಎಂಬ ಭಾವ ಇರುತ್ತದೆ. ಒಂದು ವೇಳೆ ಮಗುವಿಗೆ ಅನಾರೋಗ್ಯವಾದರೆ, ಗಂಡನಿಗೆ ಆತನದ್ದೆ ಆದ ಸಮಸ್ಯೆಗಳು ಎದುರಾದರೆ ಸಮುದಾಯದಲ್ಲಿ ಆಕೆ ಗಂಡನನ್ನು ಕಡೆಗಣಿಸಿದ್ದೇ ಇದಕ್ಕೆ ಕಾರಣ ಎಂಬ ಭಾವ ಮೂಡುವಂತೆ  ಮಾಡುವ ಈ ಕಣ್ಕಟ್ಟು ಆಕೆಯ ಬೆಳವಣಿಗೆಗೆ ಅಡ್ಡಿ ಆತಂಕವನ್ನು ಉಂಟುಮಾಡುತ್ತದೆ ಎಂಬ ಅರಿವನ್ನು ಹೊಂದಿದ್ದರು.ನಿಜ ಹೆಣ್ಣು ಮಕ್ಕಳು ಹೋರಾಡಲು ಕಲಿಯಬೇಕು ಹೆಂಗಸಿನಂತೆ ಅಲ್ಲ ಬದಲಾಗಿ ಓರ್ವ ಮನುಷ್ಯಳಂತೆ. ಹೆಂಗಸರು ಅಂತಿಮವಾಗಿ ತಾವೇ ತಾವಾಗಿದ್ದಾಗ ಏನಾಗಿರುತ್ತಾರೆ ಎಂಬುದನ್ನು ಯಾರು ಬಲ್ಲರು? ಪ್ರೀತಿಯ ಒತ್ತಾಸೆಯನ್ನು ಕಳೆದುಕೊಳ್ಳದೆ ಅವರ ಬುದ್ಧಿವಂತಿಕೆಯು ಪೋಷಣೆ ಪಡೆದಾಗ ಅದು ಏನೆಲ್ಲಾ ಸಾಧನೆಗಳನ್ನು ಮಾಡುತ್ತದೆ ಎಂಬುದನ್ನು ಅರಿತವರಾರು? ಹೆಣ್ಣು ಮಕ್ಕಳ ಬದುಕು ಬದಲಾಗುತ್ತಿದೆ ಆಕೆ ತನ್ನನ್ನು ತಾನು ಅರಿತಂತೆ ಆಕೆಯಲ್ಲಿನ ಸಾಮರ್ಥ್ಯ ಒತ್ತಾಸೆ ಪ್ರೀತಿಗಳು ವೃದ್ಧಿಗೊಳ್ಳುತ್ತಿವೆ. ಆಕೆ ತನ್ನನ್ನು ಪ್ರೀತಿಸಿದಷ್ಟೇ ಇತರರನ್ನು ಪ್ರೀತಿಸಲು ಸಾಧ್ಯವಾಗುತ್ತಿದೆ. ತನ್ನ ಕೆಲಸವನ್ನು ಹೆಂಗಸಾಗಿ ಆಕೆ ಅನುಭವಿಸುತ್ತಿದ್ದಂತೆಯೇ ಅದರ ಅನುಭವದ ಆಧಾರದ ಮೇಲೆ ಇತರರಿಗೆ ಮಾದರಿಯಾಗುತ್ತಿದ್ದಾಳೆ.ಏನಂತೀರಾ ಸ್ನೇಹಿತರೇ ವೀಣಾ ಹೇಮಂತ್ ಗೌಡ ಪಾಟೀಲ್

“ಹೆಣ್ತನ ಎಂಬ ಚೌಕಟ್ಟು ಹಾಗೂ ಮಿತಿಯಾಚೆಗಿನ ಬದುಕು”ವೀಣಾ ಹೇಮಂತ್ ಗೌಡ ಪಾಟೀಲ್ Read Post »

ಇತರೆ

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್

ಮಹಿಳಾ ಸಂಗಾತಿ ಪ್ರೇಮಾ ಟಿ ಎಂ ಆರ್ ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ ಮಹಿಳಾ ದಿನಾಚರಣೆ ಹತ್ತಿರ ಬಂದಂತೆ ಎದೆ ಮಿಸುಗುತ್ತದೆ.. ಒಂದಷ್ಟು ಭಾಷಣ ಗಾಯನ ನರ್ತನ ಪಾರ್ಟಿಗಳಲ್ಲಿಯೇ  ಮುಗಿದು ಹೋಗುವ ದಿನವೇಕೋ ನೆಮ್ಮದಿ ಕೆಡಿಸುತ್ತದೆ. ಹೆಣ್ಣು ಸುಖವಾಗಿ ಬದುಕುತ್ತಿದ್ದಾಳೆ, ಯಂತ್ರಗಳ ಬಳಕೆಯಿಂದ ಅವಳ ಶ್ರಮ ಕಡಿಮೆಯಾಗಿದೆ, ಹಾಗೆ ಹೀಗೆ ಅಂತ ಉರುಹೊಡೆದ ಭಾಷಣ ಬಿಗಿವ ನಾವುಗಳು ನೋಡುವದು ನಮ್ಮ ಕಣ್ಣಳತೆಯಲ್ಲಿ ನಡೆವುದನ್ನಷ್ಟೇ .ನಿಜ ಅರ್ಬನ್  ಏರಿಯಾಗಳಲ್ಲಿ ಹೆಣ್ಣು ಆಜಾಶಕ್ಕೆ ಕೈಚಾಚಿ ಪೈಲಟ್ ಆಗಿ ಬಾಹ್ಯಾಕಾಶದಲ್ಲಿಯೂ ತನ್ನ ಕೌಶಲ್ಯ ಮೆರೆಯುವ ಮಟ್ಟಿಗೆ ಬೆಳೆದದ್ದು ಒಪ್ಪಿಕೊಳ್ಳಬೇಕಾದ ವಿಷಯವಾದರೂ, ಎಷ್ಟು ಪ್ರತಿಶತ ಎನ್ನುವದಿಲ್ಲಿ ಪ್ರಶ್ನೆ .ಇರಲಿಬಿಡಿ, ತೀರ ಹಿಂದುಳಿದ ಹಳ್ಳಿಗಳಲ್ಲಿ ಇಂದಿಗೂ ನೀ ಹೆಣ್ಣು ,ಇರುವಾಂಗೇ ಇರು, ಹೆಂಗಿರ್ಬೇಕೋ ಹಾಂಗೇ ಇರು ಎನ್ನುವ ಚೂಪು ಮೊನೆಯ ಮಾತುಗಳು ಅವಳೆದೆಯ ಚುಚ್ಚುವದು ಮಾಮೂಲು .ಹತ್ತು ದಾಟುವದೇ ತಡ ಎದೆಯ ಒಳ ಉಡುಪು ಬಿಗಿಗೊಳ್ಳತೊಡಗುತ್ತವೆ .ಬೆನ್ನು ಬಾಗಿಸಿ ಎದೆ ಹುದುಗಿಸಿ ನಡೆವಂತೆ ಮತ್ತೆ ಮತ್ತೆ ಕತ್ತಿ ಅಲುಗಿನ ಮಾತುಗಳನ್ನು ಎಳೆಕಂದಮ್ಮಗಳು ಸಹಿಸಬೇಕು .ಹೆಣ್ಣು ಬೆಳೆದಂತೆ ಅವಳು ಮನೆಯ ಮರ್ಯಾದೆಯಾಗಿ ಬದಲಾಗುವದು ವಿಪರ್ಯಾಸ . ಹೆಣ್ಣು ಕಂದಮ್ಮಗಳು ಲೈಂಗಿಕ ದೌರ್ಜನ್ಯಕ್ಕೆ, ಅತ್ಯಾಚಾರಕ್ಕೆ ಒಳಗಾದರೂ ಕೂಡ ಅದು ಸುದ್ದಿಯಾಗದಂತೆ ಹೆತ್ತವರೇ ಮುಖ ಮೈಮನಸ್ಸುಗಳ ಮೊಟಕಿ ಬಾಯಿ ಮುಚ್ಚಿಸುವ ಕೆಲಸವನ್ನು ಮಾಡುತ್ತಾರೆ. “ಮನೆ ಮರ್ಯಾದೆ ಕಳೆದೆಯಲ್ಲೇ ಯಾಕೆ ಹುಟ್ಟಿದೆ ನಮ್ಮ ಹೊಟ್ಟೆಯಲ್ಲಿ ” ಎಂದು ಯಾರದೋ ತಪ್ಪಿಗೆ ಅವಳ ಹುಟ್ಟನ್ನು ಹಳಿಯಲಾಗುತ್ತದೆ. ಒಳಗೊಳಗೇ ಹುದುಗಿ ಹೋಗುವ ಅಂಥ ಹೆಣ್ಣುಗಳ ಅಂತರಾತ್ಮದ ಗಾಯದ  ನೋವು  ಆಗದ ವೈರಿಗೂ ಬೇಡ. ಹತ್ತು ಕಳೆಯಿತೋ ಬಾಲ್ಯದ ಚೇಷ್ಟೆಗಳೆಲ್ಲ ಕಳೆದು ಹೆಣ್ಣು ಕಂದಮ್ಮಗಳು ಕಿರಿಕಿರಿ ಸಂಕೋಚ ವಿಸ್ಮಯ  ಆತಂಕದ ಜೊತೆಗೆ  ಒಳಹೊರಗೂ ವಿಲಕ್ಷಣ ಅನುಭವಗಳೊಂದಿಗೆ ತಮಗೆ ತಾವೇ ಅಪರಿಚಿತ ಲೋಕಕ್ಕೆ ಜಿಗಿದು ನಿಂತಂತೇ ಗಲಿಬಿಲಿಗೊಳ್ಳುವ ಹೊತ್ತು. ಎದೆ ಚಿಗುರತೊಡಗುತ್ತದೆ. ಮೊದಲಮುಟ್ಟು ಕಾಡಿದಷ್ಟು ಬೇರಾವುದೂ ಅವಳನ್ನು ಕಾಡಲಿಕ್ಕಿಲ್ಲ . ಇಂಥ ಹೊತ್ತಲ್ಲಿ ಹೆತ್ತವರ ಹಿತವಾದ ಆರೈಕೆ ಒಂದಷ್ಟು ಸಾಂತ್ವನ ತಿಳುವಳಿಕೆ ವಿಶ್ವಾಸವನ್ನು ತುಂಬುವದು ಅತ್ಯವಶ್ಯ . ಇಲ್ಲದಿದ್ದರೆ ತನ್ನದೇ ಮನೆಯಲ್ಲಿ ಅವಳು ಪರಿತ್ಯಕ್ತೆಯಾಗಿ ನಿಲ್ಲುತ್ತಾಳೆ.     ಜಗತ್ತಿನ ಬಹುತೇಕ ರಾಷ್ಟ್ರಗಳ ಹಳ್ಳಿಗಾಡುಗಳಲ್ಲಿ ಬದುಕುವ ಜನಾಂಗಗಳಲ್ಲಿ, ಕಾಮುಕರೆಂಬ ಕೆಟ್ಟ ಕ್ರಿಮಿಗಳು ಹುಟ್ಟಿಕೊಳ್ಳುವದಕ್ಕೆ, ಹೆಣ್ಣಿನ ಋತುಮತಿಯಾಗುವ ಕ್ರಿಯೆ ಹಾಗೂ ಬೆಳೆಯುವ ಎದೆಯೇ ಕಾರಣವೆಂದು ನಂಬಲಾಗುತ್ತದೆ . ದಕ್ಷಿಣ ಆಫ್ರಿಕಾದ ಕೆಮರೂನ್ ನಲ್ಲಿ, ಕಿಶೋರಿಯರ ಮುಟ್ಟು ಮುಚ್ಚಿಡುವದಕ್ಕಾಗಿಯೇ ಹೆಣ್ಣುಗಳು ಮೈನೆರೆವ ಮೊದಲು, ಅಥವಾ ಮೈನೆರೆದ ತಕ್ಷಣ ಬ್ರೀಸ್ಟ್ ಫ್ಲಾಟನಿಂಗ್ ಅಥವಾ ಬ್ರೀಸ್ಟ್ ಐರನಿಂಗ್ ಎನ್ನುವ ಅಸಾಧ್ಯ ನೋವು ಕೊಡುವ ಅಮಾನುಷ ಪದ್ಧತಿಯಿಂದ, ಅವರ ಚಿಗುರುವ ಎದೆಯನ್ನ ವಿರೂಪಗೊಳಿಸುವ ಪದ್ಧತಿಯೊಂದು ಇಂದಿಗೂ ಜಾರಿಯಲ್ಲಿದೆ ಅಂದರೆ ನೀವು ನಂಬಲೇಬೇಕು. ಯುನೈಟೆಡ್ ನೇಶನ್ಸ್ ಯಾವುದನ್ನು ಫೈವ್ ಫೊರಗೊಟನ್ ಕ್ರೈಮ್ಸ ಎಂದು ಕರೆಯುತ್ತದೆಯೋ ಅದರಲ್ಲಿಯೇ ಒಂದಾದ ಈ ಬ್ರೀಸ್ಟ ಐರನಿಂಗ್ ಗೆ ಪ್ರತಿ ನಾಲ್ಕರಲ್ಲಿ ಒಬ್ಬರಂತೆ ಅಲ್ಲಿ ಶಿಖಾರಿಗಳಾಗುತ್ತಿದ್ದಾರೆ. ಈ ಪದ್ಧತಿ ನಶಿಸುವದರ ಬದಲು ವೃದ್ಧಿಯಾಗುತ್ತಲೇ ಇದೆ. ಪುಟ್ಟಹೆಣ್ಣುಗಳ ದೈಹಿಕ ಹಾಗೂ ಮಾನಸಿಕ ಆರೋಗ್ಯದಮೇಲೆ ಈ ಕ್ರಿಯೆ ಅತ್ಯಂತ ಗಂಬೀರ ಪರಿಣಾಮವನ್ನು ಉಂಟುಮಾಡುತ್ತದೆ. ಒಬಿಯಾಮಾ ಮರ್ಸಿ ಎಂಬ ನೈಜೀರಿಯಾದ ಯುವ ವೈದೈ ಹೇಳುತ್ತಾಳೆ, “ಕೆಮರೂನ್ ನಲ್ಲಿ ಅದೆಷ್ಟೋ ಹುಡುಗಿಯರು ಈ ಎದೆ ಸಪಾಟು ಮಾಡುವ ಕ್ರಿಯೆಯ ಅಡ್ಡ ಪರಿಣಾಮಗಳಿಂದ ಬಳಲುತ್ತಿರುತ್ತಾರೆ . ಬರೀ ತಾತ್ಕಾಲಿಕವಾಗಲ್ಲ, ಕೆಲವೊಂದು ಪ್ರಕರಣಗಳಲ್ಲಿ  ಇದು ಶಾಶ್ವತವಾದ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ. ಎಷ್ಟೋ ಹುಡುಗಿಯರ ಸ್ಥನಗಳು ಸಂಪೂರ್ಣ ನಾಶವಾಗಿ ಮುಂದೆ ಅವರು ಹುಟ್ಟುವ ಮಕ್ಕಳಿಗೆ ಎದೆಯೂಡಲಾಗದೇ ಹಳಹಳಿಸುತ್ತಾರೆ .ಎದೆಯ ಜೀವಕೋಶಗಳು ಸುಟ್ಟು ವಿಕಲತೆಯನ್ನುಂಟುಮಾಡುತ್ತದೆ. ಕೆಲವರು ಖಿನ್ನತೆಗೆ ಒಳಗಾದರೆ ಇನ್ನು ಕೆಲವರು ಶಾಶ್ವತವಾಗಿ ಮಾನಸಿಕ ರೋಗಿಗಳಾಗಿಯೇ ಇದ್ದುಹೋಗುತ್ತಾರೆ .ಇನ್ನು ಕೆಲವು ಸಂದರ್ಭಗಲ್ಲಿ ಎದೆ ಬಾತು ಕೊಳೆತುಹೋದ ಉದಾಹರಣೆಗಳಿಗೂ ಕೊರತೆಯಿಲ್ಲ.  ಎದೆ ಸಪಾಟುಮಾಡುವಾಗ ಪೈಪಿನಂಥ ಉದ್ದದ ಕಲ್ಲುಗಳನ್ನು ಕಾಯಿಸಿ ಹೆಣ್ಣುಗಳ ಸ್ಥನಗಳನ್ನು ಜಜ್ಜಲಾಗುತ್ತದೆ ಅಥವಾ ಮೆರೆಯಲಾಗುತ್ತದೆ. ಕೆಲವೊಮ್ಮೆ ಕಟ್ಟಿಗೆ ಅಥವಾ ಕಬ್ಬಿಣದ ತುಂಡುಗಳನ್ನು ಬೆಂಕಿಗಿಟ್ಟು ಅದರಿಂದ ಸುಡಲಾಗುತ್ತದೆ. ಕೆಲವೊಮ್ಮೆ ಬಿಸಿ ಕೆಂಡಗಳು ಸುಟ್ಟತೆಂಗಿನ ಚಿಪ್ಪು ಸುಟ್ಟ ಸಾಣೆಕಲ್ಲುಗಳನ್ನು ಬಳಸಲಾಗುತ್ತದೆ.” ಎಂದು   “ಅದರಿಂದ ಅನುಭವಿಸುವ ನೋವು ಅಸಾಧ್ಯ. ಮಾತಿಗೆ  ನಿಲುಕುವದಿಲ್ಲ ಆ ನೋವು. ಅದರ ಜೊತೆಗೆ ನಮ್ಮನ್ನು ನಾವು ನೋಡಿಕೊಂಡರೆ ನಮಗೇ ಹೇಸಿಗೆ ಹುಟ್ಟುವಂತಿರುತ್ತವೆ ನಮ್ಮೆದೆಗಳು” ಎಂದು ಕೆಮರೂನಿನ ಎದೆ ಸಪಾಟು ಮಾಡಿಸಿಕೊಂಡ ಎಳೆಯ ಹೆಣ್ಣುಮಕ್ಕಳು ಅತೀವ ಸಂಕಟದಿಂದ ನುಡಿಯುತ್ತಾರೆ .ಒಂದು ದು:ಖ್ಖದಾಯಕ ವಿಷಯವೆಂದರೆ ಸ್ವತಹ ಹೆತ್ತ ತಾಯಂದಿರೇ ತಮ್ಮ ಮಕ್ಕಳ ಎದೆ ಸಪಾಟು ಮಾಡುವ ಕ್ರಿಯೆಗೆ ಸಂಪೂರ್ಣ ಸಹಮತ ತೋರಿ, ಅವರೇ ಮುಂದೆನಿಂತು ಮಕ್ಕಳ ಎದೆಯನ್ನು ಸುಡಿಸಿ ಮೆರೆಯಿಸಿ ಜಜ್ಜಿಸಿ ಆವರೆದೆಗಳನ್ನು ನಾಶಪಡಿಸುತ್ತಾರೆ. ನ್ಯೂಲೆ ಬ್ಲೆಸ್ಸಿಂಗ್ ಎಂಬ ಕೆಮರೂನಿನ ತಾಯಿಯೊಬ್ಬಳು ಹೇಳುವದೇನು ಗೊತ್ತಾ? “ಹೌದು, ನಾನು ನನ್ನ ಮಗಳಿಗೆ ಅದನ್ನು ಮಾಡಿದೆ .ನನಗೆ ನನ್ನದೇ ಕಾರಣಗಳಿದ್ದವು. ನನ್ನ ಸಮಾಜದಲ್ಲಿ ಹೆಣ್ಣುಮಕ್ಕಳನ್ನು ಹಸಿಮಾಂಸದ ಥರ ನೋಡುತ್ತಾರೆ .ಅವಳೆದೆ ಒಂಚೂರು ಆಕಾರಗೊಳ್ಳುವದೇ ತಡ ಗಂಡಸರು ,ಪುಂಡ ಹುಡುಗರು ಹಸಿದ ತೋಳಗಳಂತೆ ಅವರ ಸುತ್ತ ಸುತ್ತುತ್ತಾರೆ. ಅವರನ್ನು ಹೊರಗೆ ಕಳಿಸುವದಕ್ಕೇ ಭಯವಾಗುತ್ತದೆ. ನನ್ನ ಮಗಳಿಗೆ ತಾನು ಓದಬೇಕು ವಿದ್ಯಾವಂತಳಾಗಬೇಕೆಂಬ ಆಸೆ. ಈಗವಳು ಭಯವಿಲ್ಲದೇ  ಅವಳ ಗುರಿ ಮುಟ್ಟಬಹುದು” ಎನ್ನುತ್ತ ತನ್ನ ಮಗಳ ಸಪಾಟಾದ ಎದೆಯನ್ನು ತೋರುತ್ತಾಳೆ. ಮತ್ತವಳು ಕಣ್ಣಲ್ಲಿ ನೀರು ತುಂಬಿಕೊಂಡು ನುಡಿಯುತ್ತಾಳೆ, “ಆದರೆ ಅದಕ್ಕಾಗಿ ನಾನು ನನ್ನ ಮಗಳ ದೈಹಿಕ ಆರೋಗ್ಯ ಹಾಗೂ ಸೌಂದರ್ಯವನ್ನು ಹಾಳುಗೆಡಹುವ ಒಪ್ಪಂದವನ್ನು ಮಾಡಿಕೊಂಡೆ. ಈಗ ನೋಡಿ ಅವಳು ಅಂದಗೆಟ್ಟಿದ್ದಾಳೆ .ಅದರರ್ಥ ಅವಳೀಗ ಸುರಕ್ಷಿತ .ಹೆಣ್ಣುಮಕ್ಕಳು ಅಸಾಧ್ಯ ನೋವಿಗೆ ವಿಲಗುಡುತ್ತ ತಮ್ಮೆದೆಯ ಅಸಹ್ಯ ಬದಲಾವಣೆಗೆ ಬೇಯುತ್ತ ತಮ್ಮ ತಾಯಂದಿರನ್ನು ಪ್ರಶ್ನಿಸಿದರೆ ಬರುವ ಉತ್ತರವೇನು ಗೊತ್ತಾ?”ನೀವು ಲೈಂಗಿಕ ದೌರ್ಜನ್ಯಕ್ಕೆ ಅತ್ಯಾಚಾರಕ್ಕೆ ಒಳಗಾಗದಿರಲೆಂದು ನಾವು ಇದನ್ನು ಮಾಡಬೇಕಾಗಿದೆ .ಹಾಗೇನಾದರೂ ನೀನು ಬಸುರಿಯಾದರೆ ಇಡೀ ಕುಟುಂಬದ ಘನತೆ ಕೀರ್ತಿ ಮಣ್ಣುಪಾಲಾಗಿ ಹೋಗುತ್ತದೆ”.  ಓ ದೇವ್ರೇ ಇದಕ್ಕಿಂತಲೂ ಎಚ್ಚಿನ ನರಕದರ್ಶನ ಬೇರೊಂದಿರಬಹುದೇ…    ಒಂದು ನೆನಪಿರಲಿ, ಈ ಎದೆ ಸಪಾಟು ಮಾಡುವ ಪದ್ಧತಿಯಲ್ಲಿ ಬಳಕೆಯಾಗುವದು ನುರಿತ ಸರ್ಜನ್ ಗಳ ವೈದ್ಯಕೀಯ ಕಿಟ್ ಗಳಲ್ಲ, ನೋವು ನಿವಾರಕ ಇಂಜಕ್ಷನ್ ಗಳಿಲ್ಲ , ಎಲ್ಲವೂ ಹಸಿಹಸಿ ಜೀವ ಸುಡುವ ಗಾಂವ್ಟಿ ಪದ್ಧತಿಗಳು. ಸಹಿಸುವ ಪುಟ್ಟ ಹೆಣ್ಣುಗಳ ಮನಸ್ಥಿತಿ ದೇಹಸ್ಥಿತಿಗಳನ್ನು ಊಹಿಸಬಲ್ಲಿರಾ?     ಭೂಮಿಯಮೇಲೆ ಹೆಣ್ಣುಗಳು ಕುಟುಂಬದ ಗೌರವ ಘನತೆ ಮರ್ಯಾದೆಗಳನ್ನು ಗುತ್ತಿಗೆ ಪಡೆದೇ ಹುಟ್ಟುತ್ತಾರೆ. ಅದನ್ನು ಹೊತ್ತುಕೊಂಡೇ ಬದುಕುತ್ತಾರೆ. ನಮ್ಮಲ್ಲೇನು ಕಡಿಮೆಯಿಲ್ಲ….‌ ಆಯುಧಗಳನ್ನು ಬಳಸೋದಿಲ್ಲ ಅಷ್ಟೇ… ಅದೆಂತ ಹಾಗೆ ಎದೆ ಮೀರಿಸ್ಕೊಂಡು ನಡ್ದಾಡ್ತೆ, ಅದೆಂತಕೆ ಹಾಂಗೆ ಗಲಗಲ ಅಲುಗಸ್ತಾ ತಿರ್ಗಾಡ್ತೆ ಎಡ್ನಾಡಿ, ಅದ್ನ ಸರಿ ಬಿಗ್ದು ಕಟ್ಕೊಂಬುಕೆ ಏನ್ ಧಾಡಿ,  ಆಯುಧಗಳಿಗಿಂತ ಹರಿತ ಮಾತುಗಳು ಚಿಗುರುವ ಎದೆಯನ್ನು ಜಜ್ಜಿ ಬಿಡುತ್ತವೆ. “ದೇವ್ರೆ ನನ್ನನ್ನು ಈ ನೆಲ ನುಂಗಬಾರದೇ..?” ಎಂದು ಅಮಾಯಕ ಜೀವಗಳು ನರಳುತ್ತವೆ.. ಹೊರುವ ಹೆರುವ ಮೈಯೊಳಗೆರಡು ಊಡುವ ಅಪ್ಪಿ ಎದೆಗೊತ್ತಿಕೊಳ್ಳುವ ವಾತ್ಸಲ್ಯದ ವೇದಗಳು.. ಆದರೆ ಅದನ್ನೋದುವ  ನೋಟ ಕೊಳಕು ಕೆಡುಕು ಕೊಂಕು ಕೆಣಕು ಕೀಸು ಅಣುಕು ಹುಳುಕು. ಅಯ್ಯೋ ಎಲ್ಲವೂ ಸೂಜಿ ಚುಚ್ಚಿದ ನೋವುಗಳು. ಎದೆ ಭಾವದಲ್ಲಿ ಸಾವಿರ ಸುಟ್ಟ ಬೊಬ್ಬೆಗಳು.. ಬೆಂದ ಹುಣ್ಣುಗಳು.. ಒಂದು ಹನಿ ಕಣ್ಣೀರು ಸಾಕೇ? ಒಂದು ದಿನದ ಆಚರಣೆ ತಂಪು ತಂದೀತೇ..? ಹಾಂ, ಲೋಕದ ಕಣ್ಣಿಗೆ ಹೆಣ್ಣು ಮಾಧುರ್ಯವೇ  ಇರಬಹುದು, ನಿಜದ ಕಣ್ಣಿಗೆ ಅವಳು ನೋವು ತುಂಬಿಕೊಳ್ಳಲೆಂದೇ ಹುಟ್ಟುವ ಪಾತ್ರೆಗಳು  ಅಥವಾ ಪಾತ್ರಗಳೇ… ? ಬಿಟ್ಟುಬಿಡು ದೇವರೇ….. ಮತ್ತೆ ಹುಟ್ಟಿಸಬೇಡ ಎನಬೇಡಿ. ನಮ್ಮ ಮೊರೆ ಮುಟ್ಟುವದಿಲ್ಲ ಅಲ್ಲಿಗೆ… ಮುಟ್ಟಿದರೆ ಈ ನೆಲ  ಸುಟ್ಟು ಬೂದಿಯಾಗಿಬಿಡಬಹುದು..‌ ಪಟವಾಗಿ ಪೂಜೆಗೊಳ್ಳುವ ಹೆಣ್ಣು ನಿತ್ಯ ಉಸಿರಿಗೆ ಮಿಸುಗುತ್ತಲೇ ಇದ್ದಾಳೆ. ಊದಿನಕಡ್ಡಿ ಕರ್ಪೂರದ ಆರತಿ ಬೇಡ. ನಮಗೂ ನೋವಾಗುತ್ತದೆ.. ಬದುಕಲು ಬಿಟ್ಟುಬಿಡಿ, ಅಷ್ಟು ಸಾಕು ಎಂಬ ಆಶಯಗಳೊಂದಿಗೆ……… ನಿಮ್ಮ ಪ್ರೇಮಾ ಟಿ ಎಂ ಆರ್                         ಪ್ರೇಮಾ ಟಿ ಎಮ್ ಆರ್

“ಬಿಟ್ಟುಬಿಡಿ ಬದುಕಿಕೊಳ್ಳುತ್ತೇವೆ”ಮಹಿಳೆಯರ ಬಗ್ಗೆ ವಿಶೇಷ ಬರಹ, ಪ್ರೇಮಾ ಟಿ‌ ಎಂ ಆರ್ Read Post »

ನಿಮ್ಮೊಂದಿಗೆ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ ಶಕ್ತಿಯ ಪ್ರತಿರೂಪ ಹೆಣ್ಣು ಮಹಿಳೆಯರು ಕುಟುಂಬದ ಆಧಾರ ಸ್ಥಂಭವಾಗಿದ್ದು ಸಮಾಜದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಾರೆ ಆದರೆ ಹಿಂದೂ ಅನೇಕ ಸಾಮಾಜಿಕ ಅಡೆತಡೆಗಳನ್ನು ಎದುರಿಸುತ್ತಿರುವುದು ದುಃಖಕರ. ಕುಟುಂಬದ ನಿರ್ವಹಣೆಯಿಂದ ಹಿಡಿದು ಬಾಹ್ಯಾಕಾಶದ ವರೆಗೂ ಮಹಿಳೆ ಪುರುಷನಿಗೆ ಸಮಾನವಾಗಿ ಸಾಧನೆ ಮಾಡುತ್ತಿದ್ದರು ಲಿಂಗ ಸಮಾನತೆ ಮತ್ತು ಶಿಕ್ಷಣ ಭದ್ರತೆಯ ವಿಷಯದಲ್ಲಿ ಇಂದಿಗೂ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾಳೆ. “*ಯತ್ರ ನಾರಿಸ್ತು ಪೂಜಂತೆ ರಮಂತು ತಂತ್ರ ದೇವತಾ*” ಎಂಬ ವೇದವಾಕ್ಯದಂತೆಎಲ್ಲಿ ನಾರಿಯನ್ನು ಪೂಜಿಸುತ್ತಾರೆ ಅಲ್ಲಿ ದೇವರುಗಳು ನೆಲೆಸಿರುತ್ತಾರೆ ಎನ್ನುವಂತೆ ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸುವುದು ಅಷ್ಟೇ ಮುಖ್ಯ. ಹಾಗೂ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಾನಮಾನವೂ ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಬಂದಿದೆ. ಮಹಿಳಾ ಸಬಲೀಕರಣವು ಸಮಾನ ಅವಕಾಶಗಳನ್ನುಒದಗಿಸುವ ಮೂಲಕ ಸಮೃದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗಿದೆ. ಆದರೂ ಕೂಡ ಹೆಣ್ಣು ಪ್ರತಿಯೊಂದು ಕ್ಷೇತ್ರದಲ್ಲಿ ತನ್ನದೇ ಆದ ಉತ್ತಮ ಸಾಧನೆ ಮಾಡುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಇಂದು ಹೆಣ್ಣು ಮಕ್ಕಳು ಶಿಕ್ಷಣದಲ್ಲಿ ಮುಂಚೂಣಿಯಲ್ಲಿದ್ದಾರೆ ಹಾಗೂ ವಿಜ್ಞಾನ, ತಂತ್ರಜ್ಞಾನ ,ರಾಜಕೀಯ ಮತ್ತು ಕಾರ್ಪೊರೇಟ್ ವಲಯಗಳಲ್ಲಿ ಮಹಿಳೆಯರು  ಸಾಧನೆ ಮಾಡುತ್ತಿದ್ದಾರೆ. ಸಮಾಜದ ಮತ್ತೊಂದು ದುಃಖಕರ ಸಂಗತಿ ಎಂದರೆ ಈಗಲೂ ಕೂಡ ಹೆಣ್ಣಿನ ಮೇಲೆ ದೌರ್ಜನ್ಯಗಳು ಕಿರುಕುಳ ಬ್ರೂಣ ಹತ್ಯೆ ಗಳು ದೊಡ್ಡ ಪಿಡುಗುಗಳಾಗಿವೆ. ಮಹಿಳೆಯರ ಸಬಲೀಕರಣ ಎಂದರೆ ಕೇವಲ ಉದ್ಯೋಗವಲ್ಲ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡುವುದು ಇಡೀ ಕುಟುಂಬಕ್ಕೆ ಶಿಕ್ಷಣ ನೀಡಿದಂತೆ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಸುರಕ್ಷಿತ ವಾತಾವರಣ ಮತ್ತು ಪುರುಷರ ಮನೋಭಾವನೆಯಲ್ಲಿ ಬದಲಾವಣೆ ತರುವುದು ಅತಿ ಮುಖ್ಯವಾಗಿದೆ. ಹಾಗೂ ಮಹಿಳೆಯರು ಬಲಿಷ್ಠವಾದಾಗ ಮಾತ್ರ ಸಮಾಜವು ಬಲಿಷ್ಠ ವಾಗುತ್ತದೆ. ಎನ್ನುವಂತೆ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಸಮಾನತೆಯತ್ತ ಧನಾತ್ಮಕ ಹೆಜ್ಜೆ ಇಡುತ್ತಿದ್ದು ನಿಜವಾದ ಪ್ರಗತಿಯನ್ನು ಸಾಧಿಸಲು ಕಾರಣವಾಗುತ್ತಿದೆ. ಸ್ವ ಸಹಾಯ ಗುಂಪುಗಳ ಮೂಲಕ ಉದ್ಯೋಗಾವಕಾಶಗಳು ಮತ್ತು ಆಸ್ತಿ ಹಕ್ಕು ಮಹಿಳೆಯರಿಗೆ ಆರ್ಥಿಕ ಸ್ವಾತಂತ್ರ್ಯವನ್ನು ನೀಡಿವೆ. ತಾಳ್ಮೆಯ ಗುಣವೇ ಹೆಣ್ಣಿನ ಗೆಲುವಿಗೆ ಕಾರಣ ಎನ್ನುವಂತೆ ಮಹಿಳೆ ತನ್ನ ತಾಳ್ಮೆಯಿಂದ ಎಲ್ಲರನ್ನು ಗೆಲ್ಲುವ ಸಾಮರ್ಥ್ಯವನ್ನು ಹೊಂದಿದ್ದಾಳೆ. *ಹೆಣ್ಣು ಸಂಸಾರದ ಕಣ್ಣು*  ಎನ್ನುವಂತೆ ಕುಟುಂಬದಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸುತ್ತಾ ಎಲ್ಲರ ಮನಸ್ಸನ್ನು ಗೆಲ್ಲುವ ಮನೆ ಬೆಳಗುವ ಮಹಾಲಕ್ಷ್ಮಿಯಂತೆ ಎಲ್ಲರನ್ನ ಸಂತೈಸಿ ಮನಸನ್ನ ಗೆಲ್ಲುವ ಪ್ರತಿಭೆ ಇವಳು. ಮಗಳಾಗಿ, ಹೆಂಡತಿಯಾಗಿ, ತಾಯಿಯಾಗಿ ಪ್ರತಿಯೊಂದು ಹಂತದಲ್ಲೂ ತನ್ನದೇ ಆದ ಜವಾಬ್ದಾರಿ ಯೊಂದಿಗೆ ಸಂಸಾರವನ್ನು ನಡೆಸುವಲ್ಲಿ ಯಶಸ್ಸನ್ನು ಕಾಣುವ ನಗೆಯ ಚಿಲುಮೆ . ಸ್ವಾತಂತ್ರ್ಯ ಹೋರಾಟದಲ್ಲಿ ಕೂಡ ಮಹಿಳೆ ತನ್ನ ಅಪ್ರತಿಮ ಸಾಧನೆಯನ್ನು ಮಾಡಿದ್ದಾಳೆ.ಉದಾಹರಣೆ:  ಕಿತ್ತೂರಾಣಿ ಚೆನ್ನಮ್ಮ, ಜಾನ್ಸಿ ರಾಣಿ ಲಕ್ಷ್ಮೀಬಾಯಿ ,ಒನಕೆ ಓಬವ್ವ, ರಾಣಿ ಅಬ್ಬಕ್ಕ, ಇನ್ನು ಹಲವಾರು ಮಹಿಳೆಯರು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಆದರೂ ಇಂದಿನ ಆಧುನಿಕ ಸಮಾಜದಲ್ಲಿ ಮಹಿಳೆ ಒತ್ತಡದ ಬದುಕಿನಲ್ಲಿ ಹಲವಾರು ಸಮಸ್ಯೆಗಳನ್ನ ಎದುರಿಸಿ ಮೆಟ್ಟಿ ನಿಲ್ಲುವ ಧೈರ್ಯವಂತೆ ಹೆಣ್ಣು. ಪ್ರತಿ ವರ್ಷವೂ ಕೂಡ ಮಾರ್ಚ್ 8 ರಂದು ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಾರೆ ಹಾಗೂ ಅಂದು ಹಲವಾರು ಸಾಧನೆ ಮಾಡಿದ ಮಹಿಳೆಯರನ್ನು ಗುರುತಿಸಿ ಗೌರವಿಸಿ ಸನ್ಮಾನಿಸುತ್ತಾರೆ.  ವಿಶೇಷವಾಗಿ ಕಾರ್ಮಿಕ ಚಳುವಳಿಗಳ ಭಾಗವಾಗಿ ಈ ಆಚರಣೆ ಪ್ರಾರಂಭವಾಯಿತು. 1975ರಲ್ಲಿ ಯುನೈಟೆಡ್  ನೇಷನ್ ಅಧಿಕೃತವಾಗಿ ಮಾರ್ಚ್ 8 ಅನ್ನು ಅಂತಾರಾಷ್ಟ್ರೀಯ ಮಹಿಳಾ ದಿನವಾಗಿ ಘೋಷಿಸಿತು. ಉದ್ದೇಶವೇನೆಂದರೆ ಮಹಿಳೆಯರ ಮೇಲಿನ ದೌರ್ಜನ್ಯ ತಡೆ , ಸಮಾನ ವೇತನ, ರಾಜಕೀಯ ಸಾಮಾಜಿಕ  ಪ್ರಾತಿನಿಧ್ಯ ಮತ್ತು ಲಿಂಗ ತಾರತಮ್ಯ ತೊಡೆದು ಹಾಕುವುದು. ಆದರೂ ಹೆಣ್ಣಿನ ಬಗ್ಗೆ ಹೇಳುವುದಾದರೆ ಪದಗಳೇ ಸಾಲದು ಪ್ರತಿಯೊಬ್ಬರೂ ಕೂಡ ಹೆಣ್ಣನ್ನು ಗೌರವಿಸಿದಾಗ ಮಾತ್ರ ಸಮಾಜದ ಏಳಿಗೆ ಸಾಧ್ಯ. ನಾಗರತ್ನ ಎಚ್ ಗಂಗಾವತಿ

ಮಹಿಳಾದಿನದ ವಿಶೇಷ, ನಾಗರತ್ನ ಎಚ್ ಗಂಗಾವತಿ Read Post »

ಇತರೆ

ಮಹಿಳಾದಿನದ ವಿಶೇಷ, ಲತಾ ಎ ಆರ್‌ ಬಾಳೆಹೊನ್ನೂರು

ಮಹಿಳಾದಿನದ ವಿಶೇಷ ಲತಾ ಎ ಆರ್‌ ಬಾಳೆಹೊನ್ನೂರು ದಿಟ್ಟ ಮಹಿಳೆ ತಂದೆ ತಾಯಿಯರ ಮುದ್ದಿನ ಮಗಳಿವಳುಅಣ್ಣಾ ಅಕ್ಕಾ ರ ಮುದ್ದಿನ ತಂಗಿಯಿವಳುಎಲ್ಲರ ಜೊತೆ ಸಮನಾಗಿ ಬೆರೆತವಳುಸಂತಸದ ಸೆಲೆ ಕುಟುಂಬಕ್ಕೆ ಕೊಟ್ಟವಳು ವಿದ್ಯೆಯನು ಚಂದದಿ ಶಾಲೆಯಲಿ ಕಲಿತವಳುಬದುಕಿಗೆ ಬಾಳಿನ ಬೆಳಕು ತಂದುಕೊಂಡವಳುದಿಟ್ಟ ಮಹಿಳೆಯಾಗಿ ಬದುಕು ಕಟ್ಟಿದವಳುಸಮಾಜಕ್ಕೆ ಸುಖದ ಹೊನಲು ಹರಿಸಿದವಳು ಏಳು ಬೀಳುಗಳ ಜೊತೆ ಸಾಗಿದವಳುಸುಖ ಸಂಸಾರದ ಸವಿ ಕಂಡವಳುಬಂದ ನೋವುಗಳ ಮೌನದಿ ಸಹಿಸಿದವಳುಮನೆ ಬೆಳಗುವ ಸಾತ್ವಿಕ ಮನದವಳು ಎಲ್ಲಾ ರಂಗದಲಿ ಸೈ ಎನಿಸಿದವಳುಲೋಕದ ಸೃಷ್ಟಿಗೆ ಕಾರಣ ಆದವಳುಎಲ್ಲರ ಮನ ಗೆದ್ದ ವಿನಯವಂತಳುಸೌಹೃದಯದ ಕರುಣಾಳು ಸಾಹಸಿ ಗುಣದವಳು ಡಾ.ಲತಾ ಎ.ಆರ್ ಬಾಳೆಹೊನ್ನೂರು

ಮಹಿಳಾದಿನದ ವಿಶೇಷ, ಲತಾ ಎ ಆರ್‌ ಬಾಳೆಹೊನ್ನೂರು Read Post »

ಇತರೆ

ಮಹಿಳಾದಿನದ ವಿಶೇಷ,ಜಯಶ್ರೀ ಭ. ಭಂಡಾರಿ 

ಮಹಿಳಾದಿನದ ವಿಶೇಷ ಜಯಶ್ರೀ ಭ. ಭಂಡಾರಿ  ವಿಶ್ವ ಮಹಿಳಾ ದಿನಾಚರಣೆ ವಿಶೇಷತೆ. ನಾರಿ ಹಿ ಸಾರಿ ಕಿ ಹೈ.ಸಾರಿ‌ ಹಿ ನಾರಿ ಕಿ ಹೈ.“ಎಲ್ಲವೂ ನಾರಿಯೇ. ನಾರಿಯೇ ಎಲ್ಲಾ’” ಮಾತೃದೇವೋ ಭವ ಪೂಜ್ಯತೆ ಪಡೆದವಳು. ಎಲ್ಲ ಕಡೆ ತಾನಿರಲಾಗುವುದಿಲ್ಲವೆಂದೇ ಪ್ರತಿ ಮನೆಯಲಿ ಒಬ್ಬ ತಾಯಿಯನ್ನು ದೇವರು ಸೃಷ್ಟಿ ಮಾಡಿದನಂತೆ. ತಾಯಿಯ ಎದೆ ಹಾಲೆಂಬ ಬಿಳಿ ಮಸಿ  ಮಗುವಿನ  ಭವಿಷ್ಯ ರೂಪಿಸುತ್ತದೆ. ಕಾರಣ‌ ತಾಯಿ ಹಾಲೂಡಿಸುವಾಗ ” ಈ‌ ನನ್ನ ಕಂದ ಜಗತ್ತನ್ನೇ ಗೆಲ್ಲುವ ಬಲಶಾಲಿಯಾಗಲಿ ” ಎಂದು ಮಮತೆ ತುಂಬಿ ಹಾರೈಸಿ ಹರಸುವಳು. “ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ  ಗರಿಯಸಿ”  ಎಂದರೆ ಹೆತ್ತ‌ ತಾಯಿ,ಹೊತ್ತ ಭೂಮಿ ಇವೆರಡೂ ಸ್ವರ್ಗಕ್ಕಿಂತಲೂ ಮಿಗಿಲು. ಇವರಿಬ್ಬರ ಋಣ ತೀರಿಸಲಾಗದು. ತಾಯಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ತಾಯಿಯೆಂಬ ಮಹಿಳೆಗೂ ಒಂದು ದಿನವಿದೆ. ಅದೆಂದರೆ ” ವಿಶ್ವ ಮಹಿಳಾ ದಿನಾಚರಣೆ”. ವಿಶ್ವದೆಲ್ಲೆಡೆ ಸಂಭ್ರಮದಿಂದ. ಆಚರಿಸಲಾಗುತ್ತದೆ   1910ರ ಆಗಸ್ಟ್‌ನಲ್ಲಿ ಡೆನ್ಮಾರ್ಕ್‌ನ ಕೋಪೆನ್‌ಹೇಗನ್‌ನಲ್ಲಿ ಎರಡನೆಯ ಅಂತರರಾಷ್ಟ್ರೀಯ ಸೋಷಿಯಲಿಸ್ಟ್ ಮಹಿಳಾ ಸಮ್ಮೇಳನ ನಡೆಯಿತು. ಅಲ್ಲಿನ ಕಾರ್ಮಿಕರ ಪ್ರತಿನಿಧಿ ಸಭೆಯ ಸಭಾಂಗಣದಲ್ಲಿ 17 ದೇಶಗಳ ಪ್ರತಿನಿಧಿಗಳು ಸೇರಿದ್ದರು. ಅಮೆರಿಕೆಯ ಹಲವಾರು ಕಾರ್ಮಿಕ ಸಂಘಟನೆಗಳ ನಾಯಕಿಯರು ಬಂದಿದ್ದರು. ಈ ಸಮ್ಮೇಳನಕ್ಕೆ ಅಂತರರಾಷ್ಟ್ರೀಯ ಮಹಿಳಾ ಸೆಕ್ರೆಟೇರಿಯೆಟ್‌ನ ಮುಖ್ಯಸ್ಥೆಯಾಗಿದ್ದ ಕ್ಲಾರಾ ಜೆಟ್‌ಕಿನ್ ಅಧ್ಯಕ್ಷೆಯಾಗಿದ್ದಳು. ಈ ಸಮ್ಮೇಳನದಲ್ಲಿ ಚರ್ಚಿತವಾದ ಎರಡು ವಿಷಯಗಳೆಂದರೆ ಸಾರ್ವತ್ರಿಕ ಮತದಾನದ ಹಕ್ಕು ಮತ್ತು ಮಹಿಳೆಯರ ಹೆರಿಗೆ ಭತ್ಯೆ ಮತ್ತು ಇತರ ಸೌಕರ್ಯಗಳು. ಕ್ಲಾರಾ ಜೆಟ್‌ಕಿನ್ ಈ ಸಮ್ಮೇಳನದಲ್ಲಿ ಮಾರ್ಚ್ 8ನ್ನು ಮಹಿಳಾ ದಿನವನ್ನಾಗಿ ಆಚರಿಸಬೇಕೆಂದು ೧೯೧೧ರಲ್ಲಿ ನಿರ್ಣಯ ಮಂಡಿಸಿದರು. ಅಲ್ಲಿ ನೆರೆದಿದ್ದ ವಿವಿಧ ರಾಷ್ಟ್ರಗಳ ಸದಸ್ಯ ಪ್ರತಿನಿಧಿಗಳು ಸರ್ವಾನುಮತದಿಂದ ಸಮ್ಮತಿಸಿದರು. ಈ ಸಮ್ಮೇಳನದಲ್ಲಿ ಫಿನ್ಲೆಂಡ್‌ನಲ್ಲಿ ಆಗಷ್ಟೇ ಚುನಾಯಿತರಾಗಿದ್ದ ಮೂವರು ಮಹಿಳೆಯರಿದ್ದು, ಅವರು ಜೆಟ್‌ಕಿನ್‌ ಸಲಹೆಯನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು. ಹೀಗೆ ಅಂತರರಾಷ್ಟ್ರೀಯ ಮಹಿಳಾ ದಿನವೆನ್ನುವುದು ಪ್ರತಿಭಟನೆ ಮತ್ತು ರಾಜಕೀಯ ಕ್ರಿಯಾಶೀಲತೆಯ ದಿನವಾಗಿ ಅಸ್ತಿತ್ವಕ್ಕೆ ಬಂದಿತು.  ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಥವಾ ವಿಶ್ವ ಮಹಿಳೆಯರ ದಿನ ಪ್ರತಿ ವರ್ಷ ಮಾರ್ಚ್ ೮ ರಂದು ವಿಶ್ವದೆಲ್ಲೆಡೆ ಆಚರಿಸಲಾಗುತ್ತದೆ. ಈ ದಿನದಂದು ಮಹಿಳೆಯರ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಸಾಧನೆಗಳನ್ನು ನೆನೆಯಲಾಗುತ್ತದೆ. ತಮ್ಮ ಹಕ್ಕುಗಳನ್ನು  ಬೇಡಿಕೆಯಾಗಿಟ್ಟುಕೊಂಡು ಮೊದಲ ಬಾರಿ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಲಾಯಿತು. ಇದಕ್ಕೂ ಮೊದಲು 1903ರಲ್ಲಿ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಹೋರಾಟ ನಡೆಸಿದ್ದ ಮಹಿಳಾ ಕಾರ್ಮಿಕ ಸಂಘಟನೆಗಳು ‘ಮಹಿಳೆಯರ ಟ್ರೇಡ್ ಯೂನಿಯನ್ ಲೀಗ್’ ಸ್ಥಾಪಿಸಿ ರಾಜಕೀಯ ಮತ್ತು ಆರ್ಥಿಕ ಕಲ್ಯಾಣವನ್ನು ತಮ್ಮ ಸಂಘಟನೆಯ ಮುಖ್ಯ ಧ್ಯೇಯವನ್ನಾಗಿಸಿಕೊಂಡವು. 1908ರ ಫೆಬ್ರುವರಿ ಕೊನೆಯ ಭಾನುವಾರ ಅಮೆರಿಕೆಯಲ್ಲಿ ಮತದಾನದ ಹಕ್ಕಿಗಾಗಿ ಬೃಹತ್ ಪ್ರತಿಭಟನಾ ಪ್ರದರ್ಶನಗಳು ನಡೆದಿದ್ದವು. ನಂತರ 1909ರಲ್ಲಿ ಸಿದ್ಧ ಉಡುಪುಗಳ ಕಾರ್ಖಾನೆಗಳಲ್ಲಿ 20,000ದಿಂದ 30,000ದಷ್ಟು ಮಹಿಳೆಯರು ಚಳಿಗಾಲದಲ್ಲಿ 13 ವಾರಗಳ ಕಾಲ ಮುಷ್ಕರ ನಡೆಸಿ ದಸ್ತಗಿರಿಯಾದರು. ಮಹಿಳೆಯರ ಟ್ರೇಡ್ ಯೂನಿ ಯನ್ ಲೀಗ್‌ನವರು ಜಾಮೀನು ನೀಡಿ ಬಂಧಿತ ಕೆಲಸ ಗಾರರನ್ನು ಬಿಡಿಸಿಕೊಂಡರು. ಈ ಅಮೆರಿಕದ ಮಹಿಳೆಯರ ಹೋರಾಟದಿಂದ ಸ್ಫೂರ್ತಿಗೊಂಡ ಕ್ಲಾರಾ ಜೆಟ್‌ಕಿನ್ ಸೋಷಿಯಲಿಸ್ಟ್ ಮಹಿಳೆಯರ ಸಮ್ಮೇಳನದಲ್ಲಿ ವರ್ಷಕ್ಕೊಮ್ಮೆ ದಿನವನ್ನು ನಿಗದಿಪಡಿಸಿ ಮಹಿಳೆಯರು ತಮ್ಮ ಬೇಡಿಕೆಗಳನ್ನು ಒತ್ತಾಯಿಸಲು ಅನುವಾಗುವಂತಹ ವ್ಯವಸ್ಥೆಗಾಗಿ ಸಲಹೆ ನೀಡಿ ಕಾರ್ಯರೂಪಕ್ಕೆ ತರಲು ಶ್ರಮಿಸಿದಳು. ಸಬಲತೆ ಅಥವಾ ಸಶಕ್ತತೆ ಎಂಬ ಪರಿಕಲ್ಪನೆಯು ಅಧಿಕಾರ ಹೊಂದುವುದು ಮತ್ತು ಶಕ್ತಿಯುತರಾಗುವುದುನ್ನು ಸೂಚಿಸುತ್ತದೆ. ಸಬಲತೆ ಎನ್ನುವುದು ಸ್ತ್ರೀ-ಪುರು‍ಷರಿಬ್ಬರಿಗೂ ಸಮಾಜದಲ್ಲಿ ಬದುಕಲು ಬೇಕಾದ ಶಕ್ತಿ. ಒಬ್ಬ ಮಹಿಳೆಯು ಶಕ್ತಿವಂತಳಾಗಿ, ಸ್ವತಂತ್ರವಾಗಿ ತನ್ನ ಇಚ್ಛೆಯಂತೆ ಸ್ವಾಲಂಬಿಯಾಗಿ ಬಾಳುವ ಸ್ಥಿಯನ್ನು ಸಾಮಾನ್ಯ ಅದನ್ನು ಸಬಲತೆ ಎನ್ನಬಹುದು. ಒಬ್ಬ ಮಹಿಳೆ ತನ್ನ ಜೀವನದ ಬಗ್ಗೆ ಪರಿಪೊರ್ಣ ಜ್ಞಾನವನ್ನು ಹೊಂದುವುದು, ತನ್ನ ಜೀವನದಬಗ್ಗೆ ನಿರ್ಣಯ ಹಾಗೂ ತೀರ್ಮಾನಗಳನ್ನು ಕೈಗೊಲಳ್ಳುವ ಸ್ವಾತಂತ್ರ್ಯ ಹೊಂದುವುದು, ಅಧಿಕಾರ ಹಾಗೂ ಸಂಪನ್ಮೂಲಗಳನ್ನು ಬಳಸಿಕೂಳ್ಳುವ ಅವಕಾಶಗಳನ್ನು ಹೊಂದುವುದು. ಯಾವುದೇರೀತಿಯ ಅಸಮಾನತೆ,ಶೋಷಣೆಗಳಿಗೆ ಒಳಗಾಗದೆ ಶಿಕಣ, ಉದ್ಯೋಗ, ವಿವಾಹ, ಜೀವನ, ಸಂತಾನೋತ್ಪತ್ತಿ ಆರೋಗ್ಯ ಮತ್ತು ಹಕ್ಕುಗಳನ್ನು ಹೊಂದುವುದು. ಸಾಮಾಜಿಕ ಚಾಲನೆ, ರಾಜಕೀಯ ಮತ್ತು ಆಡಳಿತದಲ್ಲಿ ಪಾಲ್ಗೋಳ್ಳುವಿಕೆ ಇಂತಹ ಅಂಶಗಳ ಬಗ್ಗೆ ಸ್ವತಂತ್ರ್ಯ ಹೊಂದಿ ಸ್ವಾಭಿಮಾನಿಯಾಗಿ ಅತ್ಮ ವಿಸ್ವಾಸದಿಂದ ಬಾಳುವಶಕ್ತಿಯೇ ಮಹಿಳಾ ಸಬಲತೆ. ಮಹಿಳಾ ಸಬಲತೆಯು ಮೂಲಭೂತವಾಗಿ ಮಹಿಳೆಯರ ಮಾನಸಿಕ ಸಬಲತೆಯೂಗಿದ್ದು ಅವರು ಪ್ರಜ್ನಾಪೂರ್ವಕವಾಗಿ ಶಕ್ತಿ ವಂತರಾಗುವ ಸ್ಥಿತಿ. ಮಹಿಳೆಯರ ಯೋಚನೆ, ಶಕ್ತಿ,ಸಾಮರ್ಥ್ಯ, ಅರಿವು, ಅಭಿವ್ಯಕ್ತಿ, ಆರೋಗ್ಯ, ನಿರ್ಣಯ, ಆತ್ಮವಿಶ್ವಾಸ,ಪಾಲ್ಗೊಳ್ಳುವಿಕೆ ಮತ್ತು ಸಾಮಾಜಿಕ ಚಾಲನೆಗಳಿಂದ ಹಂತ ಹಂತವಾಗಿ ಶಕ್ತಿವಂತಳಾಗಿ, ಸ್ವಾಲಂಬಿಯಾಗಿ ವಿಕಾಸವಾಗುವ ಕ್ರಿಯೆಯೇ ಸಬಲತೆ. ಮಹಿಳಾ ಸಬಲತೆಯು ಬಹು ಆಯಾಮಗಳ ಪ್ರಕ್ರಿಯೆಯಾಗಿದ್ದು ವ್ಯಕ್ತಿಗತವಾಗಿ ಹಾಗೂ ಸಾಮಾಜಿಕ ಹಿನ್ನಲೆಯಲ್ಲಿ ಮೂಡಿಬರುವಂತಹದ್ದು. ವ್ಯಕ್ತಿತ್ವದೂದಿಂಗೆ ಮಹಿಳೆಯು ತನ್ನನ್ನು ಗುರುತಿಸಿಕೂಳ್ಳುವುದು, ತನ್ನ ಜೀವನದ ಬಗ್ಗೆ ಪೂರ್ಣ ಅಧಿಕಾರ ಹೊಂದುವ ಸ್ಥಿತಿ. ಪುರುಷರಿಗೆ ಸರಿಸಮಾನವಾಗಿ ಸ್ಥಾನ ಮಾನ, ವ್ಯಕ್ತಿಗೌರವ ಮತ್ತು ಘನತೆ ಹೊಂದುವುದು. ಸಾಮಾಜಿಕ ಚಾಲನೆ,ಆರ್ಥಿಕ ಸ್ವಾವಲಂಬನೆ, ಹಕ್ಕುಗಳ ಬಗ್ಗೆ ಅರಿವು, ಆರೋಗ್ಯಸೇವೆಗಳು ಮತ್ತು ಸಂಪನ್ಮೂಲಗಳ ಮೇಲಿನ ಒಡೆತನ, ಆರ್ಥಿಕ ಚಟುವಟಿಕೆಗಳು ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಪಾಲ್ಗೊಳ್ಳುವಿಕೆಯಿಂದ ಆತ್ಮವಿಶ್ವಾಸದಿಂದ ಸಶಕ್ತವಾಗಿ ಬಾಳಬಹುದು.     ಮಹಿಳಾ ಸಬಲೀಕರಣದ ಉದ್ದೇಶಗಳು. ೧. ಸಮಾಜದಲ್ಲಿ ಆಚರಣೆಯಲ್ಲಿರುವ ಲಿಂಗ ತಾರತಮ್ಯವನ್ನು ತೊಡೆದುಹಾಕಿಮಹಿಳೆಯರ ಘನತೆ, ಗೌರವ ಹಾಗೂ ಸಾಮಾಜಿಕಸ್ಥಾನ ಮಾನಗಳನ್ನು ಉನ್ನತಿಗೊಳಿಸುವುದು. ೨. ಮಹಿಳೆಯರಲ್ಲಿ ಸುಪ್ತವಾಗಿರುವ ಅಪೂರ್ವ ಸಾಮರ್ಥ್ಯಗಳನ್ನು ಗುರ್ತಿಸಿ ವೃದ್ಥಿಗೂಳಿಸಿ ಅವರು ಬದಲಾವಣೆಯ ನಿಯೋಗಿಗಳಾಗಿ ರೂಪುಗೊಳ್ಳುವಂತೆ ಆತ್ಮವಿಶ್ವಾಸ ಮೂಡಿಸುವುದು. ೩. ಮಹಿಳೆಯರು ತಮ್ಮ್ ಅಭಿವೃದ್ಧಿಗೆ ಅವಕಾಶಗಳನ್ನು ಗುರುತಿಸಿಕೊಂಡು ಅಭಿವೃದ್ಧಿಯಾಗಲು ಪ್ರೋತ್ಸಾಹ ನೀಡುವುದು. ೪. ಮನೆ ಹಾಗು ಸಮುದಾಯದಲ್ಲಿ ಲಭ್ಯವಿರುವ ವಿವಿಧ ರೀತಿಯ ಸಂಪನ್ಮೂಲಗಳ ಮೇಲೆ ಅಧಿಕರ ಹೊಂದುವುದು ಹಾಗೂ ಅವುಗಳನ್ನು ಬಳಸಿಕೊಳ್ಳು ತಿಳಿವಳಿಕೆಮತ್ತು ತಂತ್ರಗಳನ್ನ್ನು ಬೆಳೆಸುವುದು. ೫. ಮಹಿಳೆಯರ ಸಂತಾನೋತ್ಪತಿ ಆರೋಗ್ಯ, ಶಿಶು ಜನನ ಮತ್ತು ಮಕ್ಕಳ ಪಾಲನೆಗಳ ಬಗ್ಗೆ ಅರಿವು ನೀಡುವುದು. ೬. ಅಸಮಾನತೆ, ಹಸಿವು, ಶೋಷಣೆ, ಹಿಂಸೆ ಹಾಗೂ ನಿಂದನೆಗಳ ವಿರುದ್ದ ಜಾಗೃತರಾಗಿ ಸಮಾನತೆಗಾಗಿ ಹಾಗೂ ಅಭಿವೃದ್ಧಿಗಾಗಿ ಸಂಘಟನಾತ್ಮಕ ಹೋರಾಟ ಮಾಡುವ ಆತ್ಮವಿಶ್ವಾಸ ಬೆಳೆಸುವುದು . ೭. ಹಕ್ಕುಗಳು ಹಾಗೂ ಅಭಿವೃದ್ಧಿಯ ಅವಕಾಶಗಳ ಬಗ್ಗೆ ಅರಿವು ಮೂಡಿಸುವುದು. ೮. ಮಹಿಳೆಯರಲ್ಲಿ ವ್ಯಕ್ತಿತ್ವ ವಿಕಾಸದೂಂದಿಗೆ ನಾಯಕತ್ವದ ಗುಣಗಳನ್ನು ಬೆಳೆಸುವುದು. ೯. ಮಹಿಳೆಯರಲ್ಲಿ ತನ್ನ ಹಾಗೂ ಕುಟುಂಬದ ಶೈಕ್ಷಣಿಕ, ಆರೋಗ್ಯ, ಆರ್ಥಿಕ ವಿಷಯಗಳಲ್ಲಿ ಸ್ವತಂತ್ರವಾಗಿ ಯೋಚಿಸುವ ಸಾಮರ್ಥ್ಯ, ಜವಾಬ್ದಾರಿ ಹೊರುವ ಹಾಗೂ ನಿರ್ಣಯ ತೆಗೆದುಕೊಳ್ಳುವ ಶಕ್ತಿಯನ್ನು ಬೆಳೆಸುವುದು. ಆದರೆ ಇಂದು ಸಮಾಜದಲ್ಲಿ ಮಹಿಳೆಯ ಮೇಲಿನ ಅತ್ಯಾಚಾರ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಾ ಸಾಗಿವೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಯಾವ ದೇಶದಲ್ಲಿ ಸ್ತ್ರೀಯರಿಗೆ ಅತ್ಯುನ್ನತ ಸ್ಥಾನ,ಮಾನ ಗೌರವ ಇರುವುದೊ ಆ ದೇಶ ಮುಂದುವರಿದ ದೇಶವಾಗಿರುತ್ತದೆ. “ಭೇಟಿ ಬಚಾವೋ ,ಭೇಟಿ ಪಡಾವೋ”ಸದಾ ಎಲ್ಲರ ಮನದಲ್ಲಿ ಅನುರಣಿಸಲಿ. ಜೋಗುಳ ಹಾಡಿ ಬೆಳೆಸಿದ ತಾಯಿಯನ್ನು ಸದಾ ಸ್ಮರಿಸೋಣ. ಇಳೆಯ ಕಳೆ ಹೆಚ್ಚಿಸುವ ಮಹಿಳೆ ಸದಾ ಸಂತಸದಿಂದ ಬದುಕಲಿ.  ಅವಳ ನೆರಳಿನಲ್ಲಿ ನಾವೆಲ್ಲ ಅನುಗಾಲ ಸುಖವಾಗಿರೋಣ.  ಜಯಶ್ರೀ ಭ. ಭಂಡಾರಿ  

ಮಹಿಳಾದಿನದ ವಿಶೇಷ,ಜಯಶ್ರೀ ಭ. ಭಂಡಾರಿ  Read Post »

ಇತರೆ

ಮಹಿಳಾದಿನದ ವಿಶೇಷ, ಶ್ರೀದೇವಿ. ಮ. ಗುಮ್ಮಗೋಳ

ಮಹಿಳಾದಿನದ ವಿಶೇಷ ಶ್ರೀದೇವಿ. ಮ. ಗುಮ್ಮಗೋಳ ಮಾನಿನಿಯ ಮನ ಮಾರಿಯೆಂದರುಮಾಯಾಂಗನಿ ಎಂದು ಮೊದಲಿಸಿದರೂ….ಅರಿವಿಲ್ಲದೆ ಅದೇ ಮಾಯಾಜಾಲದಲಿಬಂದಿಯಾದರೂ ಆ ಚಕ್ರವ್ಯೂಹ ಭೇದಿಸಿದಳು ನೀನು… ಬಾಯಬಡಿಕಿ ಎಂದರುಎಲ್ಲ ತಿಳಿದ ಮಳ್ಳಿ ಎಂದರೂ….ಹೊರ ಪ್ರಪಂಚದಲ್ಲಿದ್ದುಏನೂ ಅರಿದ ಕಪ್ಪೆಯಂತಿದ್ದವಳು….ಸಂಸಾರವೆಂಬ ಬಾವಿಯೊಳಗೆಎಲ್ಲವ ಅರಿತು ಮೌನವಾದವಳು ನೀನು… ಬುದ್ದಿ ಮೊನಕಾಲ ಕೆಳಗೆಂದರುಮತಿಹೀನಳೆಂದರೂ…ದೇಶದ ಚುಕ್ಕಾಣಿ ಹಿಡಿದವಳು ನೀನು…ದೇಶದ ಚಿತ್ತ ಹರಿಸಿ ವಿತ್ತ ಓದಿದವಳು ನೀನು….. ಬಜಾರಿ ಎಂದರೂಹೆಮ್ಮಾರಿ ಎಂದರೂ…..ಕಟ್ಟಳೆಗಳ ಗೆರೆ ಎಳೆದರೂ…ಇನಿಯನ ಬರುವಿಗಾಗಿ ಶಬರಿಯಂತೆ ಕಾದವಳು ನೀನು….ದೇಶಭಕ್ತಿ, ದೈವಭಕ್ತಿ ಪ್ರೇಮಭಕ್ತಿಯ ಮೆರೆದು‌ ಸ್ಪುಟವಾದವಳು ನೀನು….ಆಟ, ಓಟ, ಪಾಠ ಎಲ್ಲಂದರಲ್ಲೂ ಸೈ ಎನಸಿಇತಿಹಾಸ ಪುಟವಾದವಳು ನೀನು… ಮನೆಗೆ ಭಾರವೆಂದರೂ…ಇದಿಯಾದವಳೆಂದರೂ…ಪ್ರೀತಿ ಅಕ್ಕರೆಯ ತೋರಿ ಸಾಕಿ ಸಲುಹಿದಮಗನೇ ಬೆನ್ನು ತಿರುಗಿಸಿದಾಗಹೆತ್ತವರನ್ನೆ ದೂಡಿ ಬಿಸಾಕಿದಾಗಹೆಗಲು ಕೊಟ್ಟವಳು ನೀನು…ಅಕ್ಕರೆಯಿಂದ ಆಸರೆಯಾಗಿ ಸಲುಹಿದವಳು ನೀನು..ಕಡೆಗೆ ಸತ್ತಾಗ ಅದೇ ಜೀವಗಳಿಗೆ ಅಳುತಹಿಡಿ ಮಣ್ಣು ಹಾಕಿದವಳು ನೀನು.. ಅಬಲೆಯೆಂದರೂ‌‌….ಮೂಲ ಹುಡಕಬೇಡವೆಂದರೂ…ಮಾನಿನಿ ನಿನ್ನ ಬಾಳಲ್ಲಿಮಾಗಿ ಹಣ್ಣಾದವಳು ನೀನು…ಬಾಗಿ ಸಣ್ಣಾದವಳು ನೀನು…ತೂಗಿ ಹೊನ್ನಾದವಳು ನೀನು…ತನ್ನತನವ ತೊರೆದುಇತರರಿಗಾಗಿ ಬಾಳಿದವಳು ನೀನು…ಕೊನೆಗೆ ನಿನ್ನ ಅಸ್ತಿತ್ವ ನೀನೆ ಹುಡುಕುತಮಣ್ಣಾದವಳು ನೀನು…. ಶ್ರೀದೇವಿ. ಮ. ಗುಮ್ಮಗೋಳ   ಶ್ರೀದೇವಿ. ಮ. ಗುಮ್ಮಗೋಳ

ಮಹಿಳಾದಿನದ ವಿಶೇಷ, ಶ್ರೀದೇವಿ. ಮ. ಗುಮ್ಮಗೋಳ Read Post »

ಇತರೆ

ಮಹಿಳಾದಿನದ ವಿಶೇಷ,ಕಲ್ಪನಾ ಎಸ್ ಪಾಟೀಲ

ಮಹಿಳಾ ದಿನದ ವಿಶೇಷ ಕಲ್ಪನಾ ಎಸ್ ಪಾಟೀಲ ನಾವೇಕೆ ಹೀಗೆ.!? ಸಂಬಂಧಗಳನೆಲ್ಲ ಅಳೆದುತೂಗುವದಿಲ್ಲ, ಎಲ್ಲರೂನನ್ನವರೇ ಎನ್ನುವೆವಲ್ಲ, ನಾವೇಕೆ ಹೀಗೆ.?! ವೈಯಕ್ತಿಕ ಆಸೆ, ಕನಸುಗಳನೆಲ್ಲಹತ್ತಿಕ್ಕಿ ಬದುಕ ನಡೆಸಿದೆವಲ್ಲತಮಗಾಗಿ ಬದುಕಲಿಲ್ಲ, ನಾವೇಕೆ ಹೀಗೆ.!? ತವರುಮನೆಯ ತೊರೆಯಬೇಕುಗಂಡನಮನೆಯಲಿ ಬೆರೆಯಬೇಕುಇಲ್ಲಿಯೂ ನಮಗಾಗಿ ಅಲ್ಲ, ನಾವೇಕೆ ಹೀಗೆ.!? ಸಣ್ಣ ಸಣ್ಣ ಕ್ಷಣಗಳ ಆನಂದಿಸುವಳುಅಡುಗೆ ಮನೆಯೇ ತನ್ನದೆನ್ನುವಳುನಮಗೆಲ್ಲಾ‌ ಅದ್ಯಾಕ ಎನ್ನುವಳು ಅವಳೇಕೆ ಹೀಗೆ.?! ಮಾತಿಗೆ ಮೊದಲೇ ಸಹನಾಮೂರ್ತಿಯಾಗಿಹಳುಸಿಟ್ಟು ಕೋಪವ ಒಳಗೊಳಗೆ ನುಂಗುವಳುತನ್ನ ರಕ್ತವ ಸುಟ್ಟುಕೊಳ್ಳುವಳು ಇವಳೇಕೆ ಹೋಗೆ.?! ಗಂಡ ಗದರಿದರೂ ಮರಳಿ ಗದರಿಸದವಳುಮಕ್ಕಳು ಹೆದರಿಸಿದರೂ ಹೆದರುವಳುಮನಕೆ ಘಾಸಿಯಾದರೂ ಸಹಿಸುವಳು ಇವಳೇಕೆ ಹೀಗೆ.!? ಇಂದು ಮಹಿಳಾ ದಿನಾಚರಣೆಯಂತೆಒಂದಿನಕೆ ಆಚರಣೆಗಾದರೆನಿತ್ಯಕೆ ಅದಾವ/ರ ಆಚರಣೆ.!? ಕಲ್ಪನಾ ಎಸ್ ಪಾಟೀಲ

ಮಹಿಳಾದಿನದ ವಿಶೇಷ,ಕಲ್ಪನಾ ಎಸ್ ಪಾಟೀಲ Read Post »

ಅಂಕಣ ಸಂಗಾತಿ, ವೃತ್ತಿ ವೃತ್ತಾಂತ

ಅಂಕಣ ಸಂಗಾತಿ ವೃತ್ತಿ ವೃತ್ತಾಂತ ಸುಜಾತಾ ರವೀಶ್ ವೃತ್ತಿ ಬದುಕಿನ ಹಿನ್ನೋಟ-31 ಈ ಮನೆಯ ಬಾಲ್ಕನಿಯಲ್ಲಿ ನಿಂತರೆ ಇಡೀ ಸಂತೆಯೇ ಕಾಣುತ್ತಿತ್ತು ಗುರುವಾರದ ದಿನ ಬಂತು ಬೆಳಗ್ಗೆ 6 ಗಂಟೆಯಿಂದಲೇ ಜನಗಳ ಗಾಡಿಗಳ ಓಡಾಟ ಮತ್ತೆ ಸಂಜೆಯವರೆಗೂ ಇದೇ ರೀತಿ ರಸ್ತೆ ಬ್ಯುಸಿ ಇರುತ್ತಿತ್ತು. ಸಂಜೆ ಸಂತೆ ಕೆ ಬಂದ ಕೆಲವು ಸಹೋದ್ಯೋಗಿಗಳು ಮನೆಗೆ ಬರುತ್ತಿದ್ದರು ಹಳೆಯ ಮನೆಯ ಬಳಿಯಿದ್ದ ಪರಿಚಿತರು ಬರುತ್ತಿದ್ದರು ಹಾಗಾಗಿ ಗುರುವಾರ ನಾವು ಸಂಜೆ ತುಂಬಾ ಬ್ಯುಸಿ ಆಗಿಬಿಡುತ್ತಿದ್ದೆವು. ಅದೇ ರಸ್ತೆಯ ಕೊನೆಯಲ್ಲಿ ಬಸ್ ಡಿಪೋ ಇದುದರಿಂದ ಬಹಳಷ್ಟು ಬಸ್ ಓಡಾಟ ಸದಾ ಇರುತ್ತಿತ್ತು .ಹೀಗಾಗಿ ಬಾಲ್ಕನಿ ಸದಾ ಧೂಳಾಗಿಯೇ ಇರುತ್ತಿತ್ತು . ಆಗ ಪುಟ್ಟ ಮಗುವಾಗಿದ್ದ ನನ್ನ ತಂಗಿಯ ಮಗ ನಿಶ್ಚಯ್ ಗಂತೂ ಓಡಾಡುತ್ತಿದ್ದ ಆ ಕೆಂಪು ಬಸ್ ಗಳನ್ನು ನೋಡುವುದೇ ಒಂದು ಖುಷಿ.ಈ ಮನೆಯಲ್ಲಿ ಇದ್ದಾಗಲೇ ನಮ್ಮ ಅತ್ತೆ ಮಾವ ಸಹ ಬಂದು ಒಂದು ವಾರ ಇದ್ದರು ನಮ್ಮ ಅತ್ತೆಯ ತಾಯಿಯ ಮನೆ ಸಕಲೇಶಪುರದ ಹತ್ತಿರದ ಊರೇ ಆದ್ದರಿಂದ ಅಲ್ಲಿಗೂ ಒಮ್ಮೆ ಹೋಗಿ ಬಂದರು. ನನ್ನ ಮೈದುನ ಹಾಗೂ ಓರಗಿತ್ತಿ ಸಹ ಒಮ್ಮೆ ಇಲ್ಲಿಗೆ ಬಂದಿದ್ದರು. ಅವರೊಂದಿಗೆ ನಾವು ಹೊರನಾಡು ಹೋಗಿ ದೇವಿ ದರ್ಶನ ಮಾಡಿ ಬಂದೆವು ದಿನವೇ ಐ ಆರ್ ಡಿ ಎ ಬಿಲ್ ಸಹ ಮಂಡಿಸಲ್ಪಟ್ಟು ಇದ್ದಕ್ಕಿದ್ದಂತೆ ಆ ದಿನ ಸ್ಟ್ರೈಕ್ ಕೊಟ್ಟಿದ್ದರು ಹಾಗಾಗಿ ರಜೆಯ ಬದಲು ಸ್ಟ್ರೈಕ್ ನಲ್ಲಿ ಭಾಗವಹಿಸುವ ಹಾಗೆ ಆಯಿತು. ಏನಿದು ಐಆರ್‌ಡಿಎ ಬಿಲ್? ಇದುವರೆಗೆ ಏಕಸ್ವಾಮ್ಯವಾಗಿ ಇದ್ದ ಭಾರತೀಯ ಜೀವವೀಮನಿಗಮ ಮತ್ತು ವಿಮಾ ವಲಯ ಈಗ ಒಂದು ಪ್ರಾಧಿಕಾರದ ಮಿತಿಗೆ ಒಳಪಟ್ಟು ಹೊರಗಿನ ಸಂಸ್ಥೆಗಳು ಸಹ ಜೀವವಿಮ ವಹಿವಾಟು ನಡೆಸಲು ಅರ್ಹವಾಗುತ್ತಿದ್ದವು. ಭಾರತೀಯ ಜೀವ ವಿಮಾ ನಿಗಮದ ಸಾರ್ವಭೌಮತ್ವಕ್ಕೆ ಉಂಟಾಯಿತು. IRDAI ಎನ್ನುವುದು ಭಾರತ ಸರ್ಕಾರದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸ್ವಾಯತ್ತ ಮತ್ತು ಶಾಸನಬದ್ಧ ಸಂಸ್ಥೆಯಾಗಿದೆ. ಇದು ಭಾರತದಲ್ಲಿ ವಿಮಾ ಕ್ಷೇತ್ರವನ್ನು (Insurance Sector) ನಿಯಂತ್ರಿಸುವ ಮತ್ತು ಅಭಿವೃದ್ಧಿಪಡಿಸುವ ಸರ್ವೋಚ್ಚ ಸಂಸ್ಥೆಯಾಗಿದೆ.​ಇದನ್ನು 1999 ರಲ್ಲಿ ‘IRDA ಕಾಯ್ದೆ’ಯ ಅಡಿಯಲ್ಲಿ ರಚಿಸಲಾಯಿತು.ಮಲ್ಹೋತ್ರಾ ಸಮಿತಿಯ ಶಿಫಾರಸಿನ ಮೇರೆಗೆ IRDAI ಅಸ್ತಿತ್ವಕ್ಕೆ ಬಂದಿತು.​ಕೇಂದ್ರ ಕಚೇರಿ ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿದೆ. ​IRDAI ಸ್ಥಾಪನೆಯ ಹಿಂದೆ ಪ್ರಮುಖವಾಗಿ ಮೂರು ಉದ್ದೇಶಗಳಿವೆ:​ವಿಮಾದಾರರ ಹಿತರಕ್ಷಣೆ: ವಿಮೆ ಮಾಡಿಸಿದ ಗ್ರಾಹಕರಿಗೆ ಯಾವುದೇ ಅನ್ಯಾಯವಾಗದಂತೆ ನೋಡುವುದು.​ಕ್ಷೇತ್ರದ ನಿಯಂತ್ರಣ: ವಿಮಾ ಕಂಪನಿಗಳು ಸರಿಯಾದ ನಿಯಮಗಳನ್ನು ಪಾಲಿಸುತ್ತಿವೆಯೇ ಎಂದು ಮೇಲ್ವಿಚಾರಣೆ ಮಾಡುವುದು.​ಅಭಿವೃದ್ಧಿ: ವಿಮಾ ಕ್ಷೇತ್ರವು ವ್ಯವಸ್ಥಿತವಾಗಿ ಬೆಳೆಯಲು ಪೂರಕವಾದ ವಾತಾವರಣ ನಿರ್ಮಿಸುವುದು.​IRDAI ಈ ಕೆಳಗಿನ ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತದೆ:​ಪರವಾನಗಿ ನೀಡುವುದು: ಹೊಸ ವಿಮಾ ಕಂಪನಿಗಳಿಗೆ ವ್ಯವಹಾರ ನಡೆಸಲು ಪರವಾನಗಿ (License) ನೀಡುವುದು ಮತ್ತು ಅದನ್ನು ನವೀಕರಿಸುವುದು.​ನಿಯಮಗಳ ರೂಪಣೆ: ವಿಮಾ ಪಾಲಿಸಿಗಳು ಹೇಗೆ ಇರಬೇಕು, ಪ್ರೀಮಿಯಂ ದರಗಳು ಮತ್ತು ಕ್ಲೈಮ್ (Claim) ಇತ್ಯರ್ಥದ ಬಗ್ಗೆ ನಿಯಮಗಳನ್ನು ರೂಪಿಸುವುದು.​ದೂರುಗಳ ಪರಿಹಾರ: ವಿಮಾ ಕಂಪನಿ ಮತ್ತು ಗ್ರಾಹಕರ ನಡುವೆ ವಿವಾದ ಉಂಟಾದಾಗ ಅದನ್ನು ಬಗೆಹರಿಸಲು ವೇದಿಕೆ ಕಲ್ಪಿಸುವುದು.​ಬಂಡವಾಳದ ಮೇಲ್ವಿಚಾರಣೆ: ವಿಮಾ ಕಂಪನಿಗಳು ಗ್ರಾಹಕರ ಹಣವನ್ನು ಹಿಂತಿರುಗಿಸಲು ಬೇಕಾದಷ್ಟು ಆರ್ಥಿಕ ಸಾಮರ್ಥ್ಯ ಹೊಂದಿವೆಯೇ ಎಂದು ಪರಿಶೀಲಿಸುವುದು.​ತರಬೇತಿ ಮತ್ತು ಶಿಕ್ಷಣ: ವಿಮಾ ಏಜೆಂಟ್‌ಗಳಿಗೆ ಬೇಕಾದ ಅರ್ಹತೆ ಮತ್ತು ತರಬೇತಿಯ ಮಾನದಂಡಗಳನ್ನು ನಿಗದಿಪಡಿಸುವುದು. ಅಂದಿನ ದಿನಗಳಲ್ಲಿ ಈ ವಿದ್ಯಮಾನಗಳು ತುಂಬಾ ಆತಂಕವನ್ನು ಹುಟ್ಟಿಸಿದ್ದು ಮುಂದಿನ ದಿನಗಳು ಹೇಗೋ ಏನೋ ಎಂಬ ದಿಗಿಲು ಸಹ ಉಂಟಾಗಿತ್ತು. ಆದರೆ ಜೀವ ವಿಮಾನ ನಿಗಮ ತನ್ನ ಸಮರ್ಥ ಆರ್ಥಿಕ ನೀತಿ ಹಾಗೂ ದಕ್ಷ ಆಡಳಿತ ವಿಧಾನಗಳಿಂದ ಈ ಹೊರಗಿನ ಸ್ಪರ್ಧೆಯನ್ನು ಸಮರ್ಪಕವಾಗಿ ನಿರ್ವಹಿಸುತ್ತಾ ಬಂದಿದೆ ಎಂದು ಹೆಮ್ಮೆಯಿಂದ ಹೇಳಬಹುದು. ಜೂನ್ 1999ರಲ್ಲಿ ನನ್ನ ತಂಗಿ ಪ್ರಯಾಣ ವಿವಾಹ ಆಯಿತು. 15 ದಿನಗಳ ಕಾಲ ರಜೆ ತೆಗೆದುಕೊಂಡು ಹೋಗಿ ಮದುವೆ ಮುಗಿಸಿ ಬಂದಾಯಿತು. ಮದುವೆ ತಿಂಡಿಗಳನ್ನು ಇಟ್ಟಿದ್ದ ಬ್ಯಾಗ್ ಸಕಲೇಶಪುರಕ್ಕೆ ಬರುವಾಗ ಮರೆತು ಬಂದಿದ್ದೆವು. ರವೀಶ್ ಸಹ ಅಂದು ನನ್ನ ಜೊತೆಗೆ ಬಂದುಬಿಟ್ಟಿದ್ದರು ಇನ್ನು ತಿಂಡಿಗಳು ಮಿಸ್ ಆಗುತ್ತದೆ ಎಂದು ಅಷ್ಟು ಆಯಾಸವಾಗಿದ್ದರು ಸಹ ಮಧ್ಯಾಹ್ನವೇ ನಮ್ಮ ತಂದೆ ಅದನ್ನೆಲ್ಲ ತೆಗೆದುಕೊಂಡು ಸಕಲೇಶಪುರಕ್ಕೆ ಬಂದಿದ್ದರು. ಅದನ್ನು ನೆನೆಸಿಕೊಂಡರೆ ಈಗಲೂ ಕಣ್ಣು ತುಂಬಿ ಬರುತ್ತದೆ ಆ ಪ್ರೀತಿಗೆ ಯಾವುದು ತಾನೇ ಸಾಟಿಯಾದೀತು?ಅಣ್ಣ ಅಲ್ಲಿದ್ದಾಗಲೇ ನವ ವಿವಾಹಿತ ಜೋಡಿಯು ಸಹ ಸಕಲೇಶಪುರಕ್ಕೆ ಬಂದಿದ್ದರು ಅಲ್ಲಿ ಸುತ್ತ ಮುತ್ತಲಿನ ಹಾರ್ಲೆ ಎಸ್ಟೇಟ್ ಟೀ ಫ್ಯಾಕ್ಟರಿ ಅವೆಲ್ಲವನ್ನು ಆಗ ಹೋಗಿ ನೋಡಿಕೊಂಡು ಬಂದೆವು. ಸುಲೋಚನಾ ಸಹ ನಮ್ಮೊಂದಿಗೆ ಆಗ ಬಂದಿದ್ದರು.ಮದ್ದೂರಿನಲ್ಲಿ ಸಹಾಯಕ ಆಡಳಿತ ಅಧಿಕಾರಿಯಾಗಿ ಇದ್ದ ನನ್ನ ತಂಗಿ ಔಅಯಳಿಗೆ ಮದುವೆಯ ನಂತರ ಹುಣಸೂರಿಗೆ ವರ್ಗ ಆಯಿತು. ಅವಳ ಪತಿ ಪ್ರಸನ್ನ ಅವರು ಸಹ ಜೀವವಿಮನಿಗಮದಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕೆಆರ್ ನಗರಕ್ಕೆ ಸೇರಿದಂತಿದ್ದ ಬೆಟ್ಟದ ಪುರದಲ್ಲಿ ಇದ್ದರು. ಅವರು ನಮಗೆ ಬ್ಯಾಚ್ ನ ಹಿಂದಿನ ಮೊದಲ ಲಿಸ್ಟ್ ನಲ್ಲಿ ಆಯ್ಕೆಯಾದ ಅಭ್ಯರ್ಥಿ ಸಹಾಯಕರಾಗಿ ಆಯ್ಕೆಯಾದವರು ನಂತರ ಅಭಿವೃದ್ಧಿ ಅಧಿಕಾರಿಯಾಗಿ ಬದಲಾವಣೆ ತೆಗೆದುಕೊಂಡಿದ್ದರು .ಇಬ್ಬರಿಗೂ ಮಧ್ಯದ ಜಾಗವಾದ ಪಿರಿಯಾಪಟ್ಟಣದಲ್ಲಿ ಮನೆ ಮಾಡಿದ್ದರು.ಅಲ್ಲಿ ಕಚೇರಿ ಸೇವಾ ವಿಭಾಗಕ್ಕೆ ನನಗೆ ಬದಲಾವಣೆ ಸಿಕ್ಕಿತು ಆಗ ಹಿಂದಿ ದಿನಾಚರಣೆಯ ಸಂದರ್ಭ ಬಂದಿತ್ತು. ಆಗ ಸುಮಾರು ಸ್ಪರ್ಧೆಗಳನ್ನು ಏರ್ಪಡಿಸಿ ಎಲ್ಲರೂ ಭಾಗವಹಿಸಲು ಅನುಕೂಲವಾಗುವ ಹಾಗೆ ಒಂದು ಅಂತ್ಯಾಕ್ಷರಿ ಸ್ಪರ್ಧೆಯನ್ನು ಸಹ ಏರ್ಪಡಿಸಿದೆವು ನಾನು ಮತ್ತು ಸುಲೋಚನಾ ಸೇರಿ ಅದನ್ನು ನಡೆಸಿಕೊಟ್ಟವು ಅಲ್ಲಿ ಎಲ್ಲರಿಗೂ ಅದು ತುಂಬಾ ಇಷ್ಟವಾಗಿತ್ತು. ಹೀಗೆ ಒಂದು ಕನ್ನಡದ ಅಂತ್ಯಾಕ್ಷರಿ ಮಾಡಿ ಎಂದು ಹೇಳಿ ಅಲ್ಲಿನ ಅಭಿವೃದ್ಧಿ ಅಧಿಕಾರಿಗಳು ಬಹುಮಾನದ ಪ್ರಾಯೋಜಕತ್ವ ವಹಿಸಿಕೊಂಡರು. ಆಗೊಮ್ಮೆ ಕನ್ನಡ ಅಂತ್ಯಾಕ್ಷರಿಯನ್ನು ಸಹ ನಡೆಸಿಕೊಟ್ಟಿದ್ದೆವು. ವಿವಿಧ ಸ್ಪರ್ಧೆಗಳನ್ನು ಏರ್ಪಡಿಸುವುದು ಅವುಗಳಿಗೆ ಬಹುಮಾನಗಳನ್ನು ಆರಿಸಿ ತರುವುದು ಇವೆಲ್ಲವೂ ತುಂಬಾ ಖುಷಿ ಕೊಟ್ಟ ಕೆಲಸ. ನನಗೆ ಸಹಾಯಕ ಆಗಿದ್ದ ರಘು ಅವರು ಅಲ್ಲಿನ ಅಂಗಡಿಗಳ ಮಾಲೀಕರನ್ನು ಚೆನ್ನಾಗಿ ಬಲ್ಲವರಾದ್ದರಿಂದ ಒಳ್ಳೆಯ ಚೌಕಾಸಿ ನಡೆಸಿ ಗುಣಮಟ್ಟದ ಸಾಮಾನುಗಳನ್ನು ಆದಷ್ಟು ರಿಯಾಯಿತಿಯಲ್ಲಿ ಕೊಂಡು ಬರುತ್ತಿದ್ದೆವು.ನಾವು ಹೋಗಿದ್ದಾಗ ಉಮೇಶ್ ಭಟ್ ಎನ್ನುವವರು ಅಲ್ಲಿನ ಉಪ ಶಾಖಾಧಿಕಾರಿಗಳಾಗಿದ್ದವು ಅವರು ನಟಿ ವಿನಯ ಭಟ್ ಅವರ ಕುಟುಂಬ ಸ್ನೇಹಿತರು ಒಮ್ಮೆ ಸಕಲೇಶಪುರದ ಬಳಿ ಶೂಟಿಂಗ್ ಗೆ ಬಂದಿದ್ದ ವಿನಯ ಭಟ್ ಅವರು ಅವರ ಮನೆಗೆ ಬಂದಿದ್ದರಂತೆ. ಆಗ ನಮ್ಮ ಶಾಖೆಯ ಎಲ್ಲರೂ ಅವರ ಮನೆಗೆ ಹೋಗಿ ಆಕೆಯನ್ನು ಮಾತನಾಡಿಸಿಕೊಂಡು ಬಂದರಂತೆ ನಾನು ಸುಲೋಚನಾ ಆಗ ರಜೆ ಹಾಕಿ ಮೈಸೂರಿಗೆ ಬಂದು ಬಿಟ್ಟಿದ್ದೆವು. ಹಾಗಾಗಿ ನಮಗೆ ಆ ಭೇಟಿ ಸಾಧ್ಯವಾಗಲಿಲ್ಲ ನಮಗೆ ಪುಸ್ತಕದ ಮೇಲಿನ ಪ್ರೀತಿ ನೋಡಿ ಉಮೇಶ್ ಭಟ್ ಅವರು ಹಸ್ತ ಸಾಮುದ್ರಿಕೆಯ ಬಗ್ಗೆ ಇದ್ದ ಒಂದು ಇಂಗ್ಲಿಷ್ ಪುಸ್ತಕವನ್ನು ನಮಗೆ ಅವರು ವರ್ಗವಾಗಿ ಹೋಗುವಾಗ ಉಡುಗೊರೆಯಾಗಿ ಕೊಟ್ಟಿದ್ದರು. ಅವರು ಹೋದ ನಂತರ ಮೈಸೂರಿನ ಬ್ರಾಂಚ್ ಒಂದರಲ್ಲಿ ಅಭಿವೃದ್ಧಿ ಅಧಿಕಾರಿಯಾಗಿದ್ದ ರಾಜೇಂದ್ರ ಪ್ರಸಾದ್ ಎನ್ನುವವರು ಉಪಶಾಖಾಧಿಕಾರಿಗಳಾಗಿ ಬಂದಿದ್ದರು. ನಾವು ವಾಪಸ್ ಮನೆ ಶಿಫ್ಟ್ ಮಾಡುವ ಸಂದರ್ಭದಲ್ಲಿ ರವೀಶ್ ಅವರನ್ನು ಕರೆದುಕೊಂಡು ಹೋಗಿ ಸಕಲೇಶಪುರದ ವಿಶೇಷವಾದ ಕಾಫಿ ಬೊಡ್ಡೆಯ ಅಲಂಕಾರಿಕ ಸಾಮಗ್ರಿಗಳನ್ನು ಕೊಳ್ಳಲು ಸಹಾಯ ಮಾಡಿದ್ದರು. ಅವುಗಳಲ್ಲಿ ಒಂದು ಈಗಲೂ ನಮ್ಮ ಮನೆಯಲ್ಲಿ ಇದೆ ಸಕಲೇಶಪುರದಲ್ಲಿ ಕೆಲಸ ಮಾಡಿದ ದಿನಗಳ ನೆನಪಿನ ಕುರುಹಾಗಿ. ಛಾಯಾ ಮತ್ತು ಪ್ರಸನ್ನ ನಿರ್ಮಲ ಟ್ರಾವೆಲ್ಸ್ ನ ಮಧ್ಯ ಇಂಡಿಯಾ ಪ್ರವಾಸಕ್ಕೆ ಹೋಗಲು ಯೋಜನೆ ಮಾಡಿದರು. ನಮ್ಮ ತಂದೆ ತಾಯಿ ಹಾಗೂ ಪ್ರಸನ್ನ ಅವರ ತಂದೆ ತಾಯಿ ಅವರುಗಳನ್ನು ಜೊತೆಯಲ್ಲಿ ಕರೆದುಕೊಂಡು ಹೋಗುವ ಉದ್ದೇಶ ಇತ್ತು ನಮಗೂ ಹೇಗೂ ಎಲ್ ಟಿ ಸಿ ದೊರೆಯುತ್ತಿದ್ದರಿಂದ ನಾನು ಮತ್ತು ರವೀಶ್ ಸಹ ಹೊರಡಲು ನಿಶ್ಚಯಿಸಿದೆವು. ಭಾರತೀಯ ಜೀವವಿಮಾನ ನಿಗಮದಲ್ಲೇ ಅಭಿವೃದ್ಧಿ ಅಧಿಕಾರಿಯಾಗಿರುವ ಪ್ರಸನ್ನ ಅವರ ಅಣ್ಣ ಪ್ರಭಾಕರ್ ಹಾಗೂ ಅವರ ಪತ್ನಿ ಶಾಮಲಾ ಮತ್ತು ಮಗಳು ಪ್ರೇರಣಾ ಸಹ ನಮ್ಮ ಜೊತೆಗೆ ಸೇರಿಕೊಂಡರು. ಹೀಗೆ ಹನ್ನೆರಡು ಜನಗಳ ನಮ್ಮ ಗುಂಪು ಮಂಗಳೂರಿನಿಂದ ಹೊರಟ ಆ ಪ್ರವಾಸದಲ್ಲಿ ಸೇರಿದೆವು ತುಂಬಾ ಚೆನ್ನಾಗಿ ನಡೆದ ಪ್ರವಾಸ ಈಗಲೂ ಒಂದು ಸವಿ ನೆನಪು. ನಾವು ಸಕಲೇಶಪುರದಿಂದಲೇ ಮಂಗಳೂರಿಗೆ ಹೋಗಿದ್ದೆವು ಮತ್ತು ಮಂಗಳೂರಿನಿಂದಲೇ ಮತ್ತೆ ವಾಪಸ್ಸಾದೆವು. ಅವರೆಲ್ಲ ಹೊರಡುವಾಗ ಮಂಗಳೂರಿಗೆ ಬಂದಿದ್ದರು. ವಾಪಸ್ ಆಗುವಾಗ ಹುಬ್ಬಳ್ಳಿಯಿಂದಲೇ ಮೈಸೂರಿಗೆ ವಾಪಸ್ ಹೋದರು. ನನ್ನ ಕಡೆಯ ತಂಗಿ ವೈಶಾಲಿ ಮತ್ತು ಮುರಳಿ ಮಗು ಚಿಕ್ಕವನಿದ್ದುದರಿಂದ ಬರಿ ಮಂಗಳೂರು ಪ್ರವಾಸಕ್ಕೆ ಮಾತ್ರ ಜೊತೆಯಾಗಿ ನಂತರ ಮೈಸೂರಿಗೆ ವಾಪಸ್ ಆದರು. ಹಾಗೆ ಹೀಗೆ ಎನ್ನುವಂತೆ ದಿನಗಳು ಕಳೆದು ಮುಂದಿನ ಪದೋನ್ನತಿಗಳ ಸಮಯ ಬಂದೇ ಬಿಟ್ಟಿತು. ಆ ಬಾರಿ ಅದು ತಡವಾಗಿ ಮಾರ್ಚ್ ತಿಂಗಳ ತನಕ ಎಳೆದುಕೊಂಡು ಹೋಗಿದ್ದು. ಬಹಳ ಕಾಲದಿಂದ ನಿರೀಕ್ಷೆ ಇದ್ದ ವರ್ಗಾವಣೆ ಪಟ್ಟಿ ಪ್ರಕಟವಾಗಿತ್ತು ನನಗೆ ನಂಜನಗೂಡಿಗೆ ಸಿಕ್ಕಿತ್ತು ಸ್ವಲ್ಪವೇ ಅಂತರದಿಂದ ಸುಲೋಚನಾ ಅವರಿಗೆ ನಂಜನಗೂಡು ತಪ್ಪಿ ಹೋಗಿ ಚಾಮರಾಜನಗರಕ್ಕೆ ವರ್ಗಾವಣೆ ಸಿಕ್ಕಿತು. ಓಡಾಡಬಹುದಾಗಿತ್ತು ಅವರ ಮನೆ ನಂಜನಗೂಡಿನಲ್ಲಿ ಇದ್ದುದರಿಂದ. ಸ್ವಲ್ಪ ಸಮಾಧಾನ ಅಷ್ಟೇ. ಆದರೆ ಮತ್ತೊಂದು ಸಮಸ್ಯೆ ಎದುರಾಗಿತ್ತು.ನಾವಿದ್ದ ಮನೆಯ ಮಾಲೀಕ ತುಂಬಾ ಸಾಲದ ಸುಳಿಗಳಿಗೆ ಸಿಕ್ಕಿಕೊಂಡು ಮನೆ ಕೋರ್ಟ್ ಆದೇಶದಲ್ಲಿ ಇತ್ತು. ನಾವು ಕೊಟ್ಟಿದ್ದ ಮುಂಗಡ ಹಣ 15000 ವಾಪಸ್ ಮಾಡುವ ಸ್ಥಿತಿಯಲ್ಲಿ ಆತ ಇರಲಿಲ್ಲ .ಆದರೆ ನಾವು ಮನೆಯನ್ನು ಬಿಡಲೇಬೇಕಿತ್ತು.‌ ಕೆಲವರು ಕೊಟ್ಟ ಸಲಹೆಯಂತೆ ಒಂದೆರಡು ಹಳೆಯ ಸಾಮಾನುಗಳನ್ನು ಅಲ್ಲಿಯೇ ಬಿಟ್ಟು ಮನೆಯ ಬೀಗವನ್ನು ಸಕಲೇಶಪುರದಲ್ಲೇ ಇದ್ದ ರವೀಶ್ ಅವರ ಊರಿನವರೇ ಆದ ಸತ್ಯ ಮತ್ತು ಮೋಹನ್ ಅವರಿಗೆ ಕೊಟ್ಟು ಬಂದೆವು. ಆ ಕಾಲಕ್ಕೆ ೧೫೦೦೦ ಸಣ್ಣ ಮೊತ್ತವೇನಲ್ಲ. ವಾಪಸ್ಸು ಬಾರದಿದ್ದರೆ ಹೇಗಪ್ಪಾ ಅಂತಲೂ ಚಿಂತೆ. ಆದರೆ ನಮ್ಮ ತಂದೆ ಮಾತ್ರ ಭರವಸೆ ಇಟ್ಟುಕೊಂಡು ಹೇಳುತ್ತಿದ್ದರು ಕಷ್ಟಪಟ್ಟು ದುಡಿದ ಹಣ ಖಂಡಿತ ವಾಪಸ್ ಬಂದೆ ಬರುತ್ತದೆ ಎಂದು ಅವರ ಆಶೀರ್ವಾದದಂತೆ ಒಂದೆರಡು ತಿಂಗಳ ಬಳಿಕ ಆ ಮನೆಯನ್ನು ಬೇರೊಬ್ಬರು ಕೊಂಡುಕೊಂಡು ಮುಂಗಡ ಹಣ ವಾಪಸ್ ಕೊಟ್ಟು ಕೀ ಪಡೆದುಕೊಂಡರಂತೆ. ಫೋನ್ ಮಾಡಿ ತಿಳಿಸಿದ ಮೇಲೆ ರವೀಶ್ ಅವರು ಹೋಗಿ ಹಣ ತೆಗೆದುಕೊಂಡು ಬಂದರು ಮನಸ್ಸಿಗೆ ಸ್ವಲ್ಪ ನಿರಾಳವಾಯಿತು. ಮೊದಲು ನಾವಿದ್ದ ಮನೆ ಕಟ್ಟಿದ್ದಾಗ ವಾರ್ಡ್ರೋಬ್ ಕೆಲಸಗಳನ್ನು ಮಾಡಿರಲಿಲ್ಲ ಹೀಗಾಗಿ ನಾವು ವಾಪಸ್ ಬರುವಾಗ ಮತ್ತೆ ಮನೆಗೆ ಪೇಂಟ್ ಮಾಡಿಸಿ ವಾರ್ಡ್ರೋಬ್ ಗಳನ್ನು ಮಾಡಿಸಿಕೊಂಡು ಬಂದೆವು..(ಮುಂದಿನವಾರಕ್ಕೆ) ಸುಜಾತಾ ರವೀಶ್

Read Post »

ಇತರೆ

ಮಹಿಳಾದಿನದ ವಿಶೇಷ, ವಿಮಲಾರುಣ ಪಡ್ಡoಬೈಲು

ಮಹಿಳಾ ದಿನದ ವಿಶೇಷ ವಿಮಲಾರುಣ ಪಡ್ಡoಬೈಲು ಅವಳದೇ ಧ್ಯಾನ ಅವಳ ನೆನಪುಗಳೇ ಹಾಗೆಎಳೆದಷ್ಟು ತುದಿ ದಕ್ಕುವುದಿಲ್ಲಅಳೆದಷ್ಟು ತಾಳ್ಮೆ ಬರಿದಾಗುತ್ತಿರಲಿಲ್ಲಮೌನದಲ್ಲಿ ಬದುಕಿನ ಸೂತ್ರ ಹೆಣೆದಿದ್ದಳು. ಕೋಪ ತಾಪದ ಧಗೆ ಎಂದೂ ಹಚ್ಚಲಿಲ್ಲನಾಜೂಕಲ್ಲಿ ತಯಾರಿಸುತ್ತಿದ್ದಳುಸೌದೆ ಒಲೆಯಲಿ ರುಚಿಯಾದ ಅಡುಗೆಆ ಪರಿಮಳವೆಂದೂ ಅಳಿಯದಂತೆಇರಿಸಿ ಹೋದಳು ಮೂಗಿನೊರಳಲಿ. ಕರುಳ ಬಳ್ಳಿಗಳ ಕುಳ್ಳಿರಿಸಿಬಿಸಿ ಆರುವ ಮುನ್ನ ನಲ್ಮೆಯಿಂದತುತ್ತು  ಬಡಿಸಿಕಥೆ ಹೆಣೆಯುತಿದ್ದಳುಮಾಸಲಿಲ್ಲ ಇಂದಿಗೂ ಆ ಧ್ಯಾನ. ಚಿಮಿಣಿ ದೀಪ ಮನೆ ಮನದ ಆಶ್ರಯಸಹಭಾಗಿತ್ವದ  ಪಾಠ ಕಲಿಸಿದ್ದಳುತನ್ನ ತಾನೇ ಸುಟ್ಟುಕೊಂಡ  ಸೊಡರುಹಣೆಬರಹವ ತಿದ್ದಿ ತೀಡುತಾಬದುಕಿನ ಸಾರ್ಥಕತೆ  ಸಾರಿತು. ಆದರಿಂದು ಅದೆಲ್ಲ  ಮರೆಯಾದವುಅವಿಶ್ರಾಂತದ  ಹಿಂದಿನ ಬದುಕಿನಆ ಶಕ್ತಿ ಆ ಪ್ರೀತಿ  ಬಹು ದೂರ ಸಾಗಿದವೇಹಳೆಯ ಜೀವನಾಡಿಗಳೆಲ್ಲ ಮೂಲೆ ಸೇರಿದವೇಆಧುನಿಕತೆಯ ಅಬ್ಬರದಲ್ಲಿ ಒಲವು ಕೂಡ  ಕಲಬೆರಕೆಯಾಯಿತೇ… ? ವಿಮಲಾರುಣ ಪಡ್ಡoಬೈಲು         

ಮಹಿಳಾದಿನದ ವಿಶೇಷ, ವಿಮಲಾರುಣ ಪಡ್ಡoಬೈಲು Read Post »

You cannot copy content of this page

Scroll to Top