ಸಂಸ್ಕೃತಿ ಸಂಗಾತಿ ಪ್ರೊ .ರಾಜೇಶ್ವರಿ ಶೀಲವಂತ ಪುಣೆ “ಹಬ್ಬಗಳ ಆಚರಣೆ ಅಂದು ಇಂದು…” ಹಿಂದೂ ಧಾರ್ಮಿಕತೆ ಸಂಕ್ರಾಂತಿ, ಹೋಳಿ,ಯುಗಾದಿ,ಗಣೇಶ ಚತುರ್ಥಿ, ದಸರಾ,ದೀಪಾವಳಿ ಮುಂತಾದ ಹಬ್ಬಗಳನ್ನೊಳಗೊಂಡಿದೆ. ಈ ಎಲ್ಲ ಹಬ್ಬಗಳಲ್ಲಿ ಮೊದಲ ಆಚರಣೆ ಸಂಕ್ರಾಂತಿ. ಅದನ್ನು ಸ್ವಲ್ಪ ವಿವರವಾಗಿ ನೋಡೋಣ.ಸಂಕ್ರಾತಿ ಹಬ್ಬ ಕರ್ನಾಟಕ, ಮಹಾರಾಷ್ಟ್ರ, ಗುಜರಾತ್, ಕೇರಳ, ತಮಿಳ್ನಾಡು ಮುಂತಾದ ಕಡೆಗಳಲ್ಲಿ ಮುಖ್ಯ ಹಬ್ಬವಾಗಿ ಆಚರಿಸಲಾಗುತ್ತದೆ.ರೈತರು ಪೈರು ತೆಗೆಯುವ ಸಂದರ್ಭದಲ್ಲಿ ಆಚರಿಸಲ್ಪಡುವದರಿಂದ ಇದು ಸಮೃದ್ಧಿಯ ಸಂಕೇತ. ಸಂಕ್ರಾಂತಿ ಹಬ್ಬವನ್ನು ಎಲ್ಲ ಪ್ರದೇಶಗಳಲ್ಲಿ ವಿಭಿನ್ನ ರೀತಿಯಲ್ಲಿ ಆಚರಿಸಲಾಗುತ್ತದೆ. ಉದಾಹರಣೆಗೆ , ಬೆಳೆ ಪೂಜೆ, ಸೂರ್ಯ ಪೂಜೆ,ನೃತ್ಯ, ಗಾಳಿಪಟ ಹಾರಿಸುವುದು, ನದಿ ಸ್ನಾನ ,ಮುಂತಾದುವುಗಳು. ಪುಷ್ಯ ಮಾಸದಲ್ಲಿ ಬರುವ ಮಕರ ಸಂಕ್ರಾಂತಿಯನ್ನು ಉತ್ತರಾಯಣ ಪುಣ್ಯಕಾಲ ಎನ್ನುತ್ತಾರೆ. ಈ ಹಬ್ಬದ ದಿನದಿಂದ ಹಗಲು ಜಾಸ್ತಿಯಾಗಿ ರಾತ್ರಿ ಕಡಿಮೆಯಾಗುವುದು.ಅದೇರೀತಿ ಬಿಸಿಲಿನ ತಾಪಮಾನ ಕೂಡ ಜಾಸ್ತಿಯಾಗುತ್ತಾ ಹೋಗುತ್ತದೆ. ಈ ಸಂಕ್ರಾಂತಿ ಹಬ್ಬ ಕರ್ನಾಟಕದಲ್ಲಿ ಮಕರ ಸಂಕ್ರಾಂತಿ ಎಂದು ಆಚರಿಸಲಾಗುವುದು.ಇದು ರೈತರ ಪಾಲಿಗೆ ಸುಗ್ಗಿ ಹಬ್ಬ.ಅಂದರೆ ಅರಿಶಿಣ, ಕಬ್ಬು,ಗೋಧಿ,ಜೋಳ, ಭತ್ತ ಮುಂತಾದ ಭೂಮಿಯ ಮೇಲೆ ಬೆಳೆದ ಇವುಗಳಿಗೆ ಜೀವ ಶಕ್ತಿ ತುಂಬಿದ ಆ ಸೂರ್ಯ ದೇವನಿಗೆ ಪೂಜೆ ಹಾಗು ನೈವೇದ್ಯದ ಮೂಲಕ ಕೃತಜ್ಞತೆ ಸಮರ್ಪಿಸುವರು. ಕರ್ನಾಟಕದ ಸಂಕ್ರಾಂತಿಯ ಖಾದ್ಯಗಳು ಎಂತವರಿಗೂ ಬಾಯಲ್ಲಿ ನೀರೂರಿಸುತ್ತವೆ ಹಾಗು ಚಳಿಗಾಲದ ಚಳಿಯಿಂದ ತಣ್ಣಗಾದ ದೇಹವನ್ನು ಬೆಚ್ಚ ಗಿಡಲು ವೈಜ್ಞಾನಿಕ ರೀತಿಯಲ್ಲಿ ಸಹಾಯ ಮಾಡುತ್ತವೆ. ನೈಸರ್ಗಿಕವಾಗಿ ದೇಹಕ್ಕೆ ಉಷ್ಣತೆ ನೀಡುವ ಎಳ್ಳು ಹಚ್ಚಿದ ಸಜ್ಜೆ ರೊಟ್ಟಿ, ಶೇಂಗಾ ಮತ್ತು ಎಳ್ಳು ಮಿಶ್ರಣದ ಹೋಳಿಗೆ, ಹೂರಣ ಹೋಳಿಗೆ, ಮಾದಲಿ, ಕಫ ನಿವಾರಿಸುವ ಬದನೆಕಾಯಿ ಭರಿತ ,ಶೇಂಗಾ ಚಟ್ನಿ, ಅಗಸೆ ಚಟ್ನಿ, ಬೆಣ್ಣೆ,ಮೊಸರು, ಜುಣಕದ ವಡಿ, ಮಡಿಕೆ ಕಾಳು ಉಸುಳಿ,ಗಜಿಬಿಜಿ ಪಲ್ಯ,ಪಚಡಿ, ಹುಳಿಬಾನ, ಹೀಗೆ ಹತ್ತು ಹಲವಾರು ಖಾದ್ಯಗಳು.ಇವೆಲ್ಲವನ್ನೂ ಒಬ್ಬರ ಮನೆಯಿಂದ ಇನ್ನೊಬ್ಬರ ಮನೆಗೆ ಹಂಚುವುದರ ಮೂಲಕ ಬಾಂಧವ್ಯ ಬೆಸೆಯಲಾಗುವುದು. ಸಾಯಂಕಾಲ ಹೊಸ ಬಟ್ಟೆ ತೊಟ್ಟು , ಹಿರಿಯರಿಗೆ ಎಳ್ಳು ಬೆಲ್ಲದ ವಿನಿಮಯದೊಂದಿಗೆ ನಮಸ್ಕಾರ. ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತಾಡಿ, ಎಳ್ಳು ಬೆಲ್ಲ ತೊಗೊಂಡು ಎಳ್ಳು ಬೆಳ್ಳದಂಗಿರೋಣ ಅಂತ ಹೇಳುವುದು. ಶಾಂತಿ ,ಪ್ರೀತಿ ಮತ್ತು ಸೌಹಾರ್ದತೆಯ ಸಂಕೇತವೇ ಈ ಮಕರ ಸಂಕ್ರಾಂತಿಯಾಗಿತ್ತು ಅಂದು. ಇನ್ನು ಹೋಳಿ ಹಬ್ಬ ,ನಾಡಿನಾದ್ಯಂತ ವಸಂತ ಕಾಲದ ಆಗಮನವೆಂದು ಪರಿಗಣಿಸಲಾಗಿದೆ. ವಿವಿಧ ಬಣ್ಣದ ಓಕುಳಿ ಆಟ ,ಹಲಗೆ ಬರಿಸುವುದು, ಕಾಮ ದಹನ, ಇವೆಲ್ಲವನ್ನೊಳಗೊಂಡಿದೆ. ಅದೇ ರೀತಿ ಯುಗಾದಿ ಹಬ್ಬವನ್ನು ಹಿಂದೂಗಳ ಹೊಸ ವರುಷವೆಂದು ಪರಿಗಣಿಸುತ್ತೇವೆ. ಇದನ್ನು ದೇವರ ಪೂಜೆ, ಹಿರಿಯರ ಪೂಜೆ, ಅಂಗಡಿ ಪೂಜೆಯೊಂದಿಗೆ ಆಚರಿಸಲಾಗುವುದು. ಅಂಗಡಿಕಾರರು ಹೊಸ ಲೆಕ್ಕ ಪತ್ರ ಪ್ರಾರಂಭಿಸುವರು. ಜೀವನದ ಸಿಹಿ ಕಹಿ ಸಮನಾಗಿ ಕಾಣೋಣ ಅಂತ ಬೇವು ಬೆಲ್ಲ ನೈವೇದ್ಯ ಮಾಡಿ ಎಲ್ಲರೂ ಸೇವಿಸುವರು. ಗಣೇಶ್ ಚತುರ್ಥಿಯನ್ನು ನಾಡಿನಾದ್ಯಂತ ಎಲ್ಲೆಡೆ ಆಚರಿಸುವರು. ಮಹಾರಾಷ್ಟ್ರದಲ್ಲಿ ಈ ಹಬ್ಬವನ್ನು ತುಂಬಾ ವಿಜೃಂಭಣೆಯಿಂದ ಆಚರಿಸುತ್ತಾರೆ. ವಿಘ್ನ ನಾಶಕನಾದ ವಿನಾಯಕನಿಗೆ ಧೂಪ, ದೀಪ , ನೈವೇದ್ಯಗಳನ್ನು ಭಕ್ತಿಯಿಂದ ಸಮರ್ಪಿಸುವರು. ಇನ್ನು ನಾಡ ಹಬ್ಬ ಎಂದು ಕರೆಯುವ ದಸರಾ ಹಬ್ಬವನ್ನು ಹಲವಾರು ದೇಶಗಳಲ್ಲಿ ವಿಭಿನ್ನವಾಗಿ ಆಚರಿಸುವರು.ಕರ್ನಾಟಕದ ಮೈಸೂರಿನ ದಸರಾ ಆಚರಣೆ ತುಂಬಾ ವಿಜೃಂಭಣೆಯಿಂದ ನಡೆಯುತ್ತದೆ. ಹಲವೆಡೆ ನವರಾತ್ರಿಯ ಆಚರಣೆಯ ಮೂಲಕ ದುರ್ಗಾದೇವಿಯ ಒಂಬತ್ತು ರೂಪಗಳನ್ನು ಆರಾಧಿಸಲಾಗುವದು. ಹತ್ತನೇ ದಿವಸ ರಾವಣನ ಪ್ರತಿಮೆ ದಹನ ಮಾಡುವುದರ ಮೂಲಕ ಶ್ರೀರಾಮನ ವಿಜಯೋತ್ಸವವನ್ನು ಮೆರೆಯಲಾಗುವುದು. ವರ್ಷದ ಕೊನೆಯ ಹಬ್ಬವಾಗಿ ದೀಪಾವಳಿಯನ್ನು ಜಗದಾದ್ಯಂತ ಬೆಳಕಿನ ಹಬ್ಬವೆಂದು ಸಂಬ್ರಮಿಸಲಾಗುವದು. ಐದು ದಿನಗಳ ಹಬ್ಬವಾದ ದೀಪಾವಳಿಯ ಮೊದಲ ದಿನ ನೀರು ತುಂಬುವ ಹಬ್ಬ, ಎರಡನೇ ದಿನ ನರಕಚತುರ್ದಶಿ, ಮೂರನೇ ದಿನ ದೀಪಾವಳಿ ಅಮವಾಸ್ಯೆ, ನಾಲ್ಕನೇ ದಿನ ಬಲಿ ಪಾಡ್ಯ ಹಾಗೂ ಐದನೇ ದಿನ ಕಡೆ ಪಾಡ್ಯ . ಒಂದೊಂದು ದಿನಕ್ಕೂ ತನ್ನದೇ ಆದ ಮಹತ್ವ ಇದೆ. ಬಣ್ಣ ಬಣ್ಣದ ರಂಗೋಲಿ, ಹೂವುಗಳ ಅಲಂಕಾರ, ಪೂಜೆ, ಹೊಸ ಬಟ್ಟೆ, ಸಿಹಿ ತಿಂಡಿಗಳ ವಿನಿಮಯ ನವ ವಿವಾಹಿತರಿಗೆ ಪ್ರಾಧಾನ್ಯ. ಮುಂತಾದುವುಗಳನ್ನು ಇಲ್ಲಿ ಕಾಣಬಹುದು. ಆದರೆ ವಿಷಾಧದ ಸಂಗಾತಿ ಎಂದರೆ ಆಧುನಿಕತೆಯ ಹೆಸರಿನಲ್ಲಿ ಇಂದು ಹಬ್ಬಗಳ ಪ್ರಾಧಾನ್ಯತೆ ಕಡಿಮೆಯಾಗಿದೆ. ನೌಕರಿಯ ಒತ್ತಡದಲ್ಲಿ, ಸಮಯದ ಅಭಾವದಲ್ಲಿ ಹಬ್ಬಗಳ ಆಚರಣೆಯ ಹುರುಪು ಉಳಿದಿಲ್ಲ. ಅವಿಭಕ್ತ ಕುಟುಂಬದಲ್ಲಿ ಎಲ್ಲ ಖಾದ್ಯಗಳನ್ನು ತಯಾರಿಸುತ್ತಿದ್ದರು. ಎಲ್ಲ ಸಂಪ್ರದಾಯಗಳನ್ನು ಸಂಭ್ರಮಿಸುತ್ತಿದ್ದರು.ಈಗಿನ ವಿಭಕ್ತ ಕುಟುಂಬಕ್ಕೆ ಮಾಡುವುದು ತಿನ್ನುವುದು ಎರಡೂ ಗೊತ್ತಿಲ್ಲ. ಸ್ವಿಗ್ಗಿ, ಜೋಮಾಟೋಗಳಿಂದ ಪಿಜ್ಜಾ,ಬರ್ಗರ್, ಮ್ಯಾಗಿಗಳ ರುಚಿ ಕಂಡೋರಿಗೆ ಮೇಲಿನ ಅಡುಗೆಗಳ ಬೆಲೆಯೇ ಗೊತ್ತಿಲ್ಲ. ಹಬ್ಬದ ಸಿಹಿ ತಿಂಡಿಗಳು ಕೂಡಾ ಆನ್ಲೈನ್ನಲ್ಲಿಯೇ ತರಿಸುವರು .ಸಂಕ್ರಾಂತಿಯ ಎಳ್ಳು ಬೆಲ್ಲದ ವಿನಿಮಯದಿಂದ ಹಿಡಿದು ದೀಪಾವಳಿಯ ಸಿಹಿ ತಿಂಡಿಗಳು ಕೂಡಾ ವಾಟ್ಸಾಪ್ನಲ್ಲಿಯೇ ಹಂಚಲಾಗುವುದು. ಹಿರಿಯರ ನಮಸ್ಕಾರ , ಆಶೀರ್ವಾದವಂತೂ ತುಂಬಾ ದೂರದ ಮಾತು. ಯಾರಿಗೂ ಉತ್ಸಾಹನೂ ಇಲ್ಲ , ಆಸಕ್ತಿನೂ ಇಲ್ಲ. ಯುವ ಜನಾಂಗದ ಸೌಹಾರ್ಧ ಭಾವ ಮೆರೆಯುವ ಎಲ್ಲ ಸಂಸ್ಕಾರ ಮತ್ತು ಸಂಪ್ರದಾಯಗಳೂ ದಿನೇ ದಿನೇ ಮರೆಯಾಗುತ್ತಿವೆ. ಪ್ರೊ .ರಾಜೇಶ್ವರಿ ಶೀಲವಂತ ಪುಣೆ